Welcome to Prashantavanam

Sunday, April 28, 2013

ಮುದಿ ಮನದ ಮಾತುಗಳು..

ಕಾದು ಸೋತೆನು ನಾನು
ಚೌಕಿಯಾ ಹಾದಿಯಲಿ
ದಕ್ಕೀತೆ ಹನಿ ಪ್ರೀತಿ ಭಿಕ್ಷೆಯಂತೆ ?
ಸಿಡಿದು ದೂರಾದವರು
ಹಿಡಿದು ತಮಗೊಂದಾದಿ
ಬರುವ ಹಾದಿಯ ಕಾವ ಹಕ್ಕಿಯಂತೆ

ಎಲ್ಲ ನನ್ನವರೆಂದೆ ನಲಿವಿನಾ ದಿನಗಳಲಿ
ಮೆರೆದಿದ್ದು ಉರಿವಂತೆ ನೆರೆಕೆರೆಯ ಜನರು
ಸೋಲಲ್ಲಿ ಅವರಿಲ್ಲ, ಧನವಿಲ್ಲ, ನನಗೆಂದು
ಕಣ್ಣೀರು ಕಾಣಿಸದ ಜಾಣತನ, ಮರೆವು

ಬೇಸತ್ತ ಮುದಿಕತ್ತೆಯಂತಿಹುದು ಬಾಳಿಂದು
ಮರೆತಿಹರು ಹೊತ್ತಿದ್ದ ಸಂಸಾರ ಭಾರ
ಕೈಲಾಗದಿಂದೆಂದು ಹೊರದಬ್ಬಿ ಬೀದಿಗೆ
ತುತ್ತೂಟಕೂ ನಾಸ್ತಿ, ಬಾಳೆಲ್ಲ ತಿಮಿರ

ಕಾದಿಹೆನು ‍ಚೌಕಿಯಲಿ ಭಿಕ್ಷೆಗೆಂದು
ಕರುಳಬಳ್ಳಿಯ ಪೊರೆದ ಶಿಕ್ಷೆಗೆಂದು !
ಮೆರೆವಾಗ ತೊರೆದಿದ್ದ , ಬೆದರಿದ್ದ ಗೆಳೆಯರಲೆ
ಒಬ್ಬನಾದರೂ ಸಿಗುವ ಇಚ್ಚೆಯಿಂದ
ಕೋಪ, ಏಟೇ ಮೇಲು
ಸಹಿಸೆನೀ ತಾತ್ಸಾರ
ಮುಗಿಸಿಬಿಡಿ, ಕೃಶದೇಹಿ ಎನ್ನಲೆಂದು
ಶಾಪವಾದರು ಬೇಡೆ ಪ್ರೀತಿಯಿಂದ

http://prashasti-prashantavanam.blogspot.in/2013/04/blog-post_24.html
ನ ಮುಂದುವರೆದ ಭಾಗದಂತಾದರೂ ಇದನ್ನು ತೆಗೆದುಕೊಳ್ಳಬಹುದು..

ಇದು ಜೀವನದ ಸಂಜೆಯಲ್ಲಿ ಕರುಳಬಳ್ಳಿಗಳಿಂದ ತಿರಸ್ಕೃತಗೊಂಡ ಮುದಿ ಜೀವಗಳ ಬಗ್ಗೆ ಬರೆವ ಯೋಚನೆಯಲ್ಲಿ ಮೂಡಿದ್ದು.. ಹಾಗಾಗಿ ಇದು ಚಿತ್ರಕ್ಕಿಂತ ಹೊರಬಂದು ಬೇರೆಯದೇ ಹಾದಿಯಲ್ಲಿ ಸಾಗಿದಂತೆನಿದರೆ ಕ್ಷಮಿಸಿ..
ಸ್ಪೂರ್ತಿಯೆಂತೂ ಮತ್ತದೇ ಶ್ರೀವತ್ಸ ಕಂಚೀಮನೆಯವರ ಚಿತ್ರ..

Wednesday, April 24, 2013

ಗೆಳೆಯ ಶ್ರೀವತ್ಸ ಕಂಚೀಮನೆಯವರ ಮೇಲಿನ ಚಿತ್ರ ನೋಡಿ ನನಗೆ ತಕ್ಷಣಕ್ಕೆ ದಕ್ಕಿದ ಸಾಲುಗಳು..

ಈ ಬಗ್ಗೆ ಮತ್ತೆ ಬರೀಲಿಕ್ಕೆ ಆಗಿರ್ಲಿಲ್ಲ..
ಇವತ್ತು ಇನ್ನೊಂಚೂರು ಸಾಲುಗಳು :-)

ಸುರಿವ ಸೂರಿನ ಮನೆಯು
ಹರಿವ ಸೀರೆಯ ನಾನು
ತುಂಬದಿಹ ಜೋಳಿಗೆಯ ಬಾಳಿನಲ್ಲಿ
ಹೊತ್ತು, ತುತ್ತಿಕಿದೀ ಕೈಗಳನೆ ಮರೆತಿರುವ
ತುಂಬುಹೊಟ್ಟೆಯ ಅಣಕು ಗೋಳಿನಲ್ಲಿ
ಬತ್ತುತಿಹ ಕಂಗಳಲಿ, ಸುಕ್ಕಾದ ಕಾಯದಲಿ
ಯಾವ ಹಾದಿಯ ಕಾವ ಭಕ್ತೆ ನಾನು ?!
ವಿಶ್ವಾಸಿಗಳೆ ನಾಮ, ಬರುವನೇ ಆ ರಾಮ
ಬಾಳೆಂಬ ಒಣಕಾಡ ಹಾದಿಯಲ್ಲಿ (26/4/2012)

ಕಾದು ಸೋತೆನು ನಾನು ಮುಸ್ಸಂಜೆ ಹಾದಿಯಲಿ
ದಕ್ಕದಿಹ ಸೊಕ್ಕ ಮನೆ ಹೊಕ್ಕ ಸುತಗೆ
ಯಾರಿಲ್ಲ ಅಂಗಡಿಗೆ, ಒಣಗಿದೀ ಮನದಂತೆ
ಬರಿ ಧೂಳೆ ತಿನ್ನುತಿದೆ ಗಲ್ಲಾ ಪೆಟ್ಟಿಗೆ
ಆದರೂ ಕಾದಿರುವೆ , ಗ್ರಾಹಕರ ಹಾದಿಯಲಿ
ಜೀವಿಸಲು ಬೇಕಲ್ಲಾ ರೊಕ್ಕ, ಹೊದಿಕೆ
ಸತ್ತರೂ ಕೇಳದಿಹ ಸಂಬಂಧಿಗಳ ನಡುವೆ
ಚಳಿ, ಮಳೆಯ ಕಾಯಲಿದೊಂದೆ ಸೂರು
ನಿರ್ಗತಿಕಳಾಗಿರುವೆ, ಆದರೂ ಬಿಡಲೊಲ್ಲೆ
ಜೀವಿಸುವ ಆತ್ಮಬಲ ಇನ್ನು ಚೂರು

ಕವಿತೆಗೆ ಶೀರ್ಷಿಕೆ ಕೊಡಲು ಇನ್ನೂ ಭಾವಗಳು ಪಕ್ವವಾಗದ ಅನುಭವ ಏಕೋ.. ಚಿತ್ರಕ್ಕೆ ಇನ್ನೂ ಹೆಚ್ಚು ನ್ಯಾಯ ದೊರಕಿಸೋ ಪ್ರಯತ್ನದಲ್ಲಿ.. ಪ್ರಯತ್ನ ಸಫಲವಾದಾಗ ಶೀರ್ಷಿಕೆಯೂ ದೊರಕೀತೆಂಬ ವಿಶ್ವಾಸ..

ಕಳೆದುಹೋದ ಕವಿತೆ

ಎಲ್ಲಿ ಹೋಯಿತೋ ಕವಿತೆ,ಸಿಕ್ಕದಂತೆ
ಹೂವಿನಲ್ಲೆ, ನೋವಿನಲ್ಲೆ, ಸಾವಿನಲ್ಲೆ ?
ಜೀವ ಬೇಡೋ ಹೊತ್ತಾ ತುತ್ತಿನಲ್ಲೆ ?
ಕಳೆದುಹೋಯಿತೇ ಕವಿತೆ, ದಕ್ಕದಂತೆ..

ಒಲವಿರದ ಸಾಲುಗಳಿಂತ
ಬರವಿರದ ಅಕ್ಷರ ಲೇಸು
ಮನಸಿರದ ಮಾತುಗಳಿಂತ
ಇಂಕಿಲ್ಲದ ಲೇಖನಿ ಲೇಸು
ಶೂನ್ಯವನೇ ಮಾನ್ಯ ಮಾಡುತಾ
ಮೌನದಲ್ಲಿ ಸಾಥಿ ಹುಡುಕುತ
ತಾತ್ಸಾರದ ಸವಾರಿಯಲ್ಲಿ
ಗುರಿಯು ಎಲ್ಲಿ, ನೋವೇ ಇಲ್ಲಿ

ಮನವೇ, ಬರಸಿಡಿಲೇ ಇದು ?
ಕುಗ್ಗದಿರು.
ಉದುರೋ ಎಲೆ, ಹೊಸತನಕೆಂದೇ
ಬಿಕ್ಕದಿರು.
ಬರಲಿದೆ ವಸಂತ , ಶಿಶಿರವಲ್ಲವೋ
ಶಾಶ್ವತ
ಸಾಗಲಿ ನಿನ್ನಯ ಪಯಣವು ಹೀಗೇ
ಅನವರತ

Wednesday, April 10, 2013

ಯುಗಾದಿ ಶುಭಾಶಯ!

ಆಫೀಸಲ್ಲಿ ಯುಗಾದಿ ಆಚರಣೆ !!!

ಸ್ವಾಗತದ್ವಾರದಲ್ಲಿ ಸ್ವಾಗತಕಾರಿಣಿಯಿಂದ ಬೇವು ಬೆಲ್ಲ ವಿತರಣೆ ! ಯುಗಾದಿ ಹಿಂದಿನ ದಿನ ಹಬ್ಬದೂಟ. ಹೋಳಿಗೆ, ಕೋಸಂಬ್ರಿ, ಚಿತ್ರಾನ್ನ, ಮೊಸರನ್ನ, ಅಂಬೊಡೆ, ಚಟ್ನಿ, ಹಪ್ಪಳ..
"ಹಬ್ಬ ತಪ್ಪಿದ್ರೂ ಹೋಳಿಗೆ ತಪ್ತಲ್ಲೆ.." ಅಂತ ಅಪ್ಪ ಹೇಳ್ತಿದ್ದು ನೆನಪಾಗ್ತಿದೆ. ಬರಲಿರೋ ವಿಜಯ ಸಂವತ್ಸರಕ್ಕೊಂದು ಜೈ ಹೋ :-) ಹಾಂ.. ನಿಮ್ಮೆಲ್ಲರಿಗೂ ಕೂಡ ಹೊಸ ವರ್ಷದ ಶುಭಾಶಯಗಳು :-) ಹೊಸ ವರ್ಷ ಹೊಸ ಹರ್ಷೋಲ್ಲಾಸಗಳನ್ನು ತರಲಿ :-)


ಪ್ರತೀ ಹಬ್ಬ ಬಂದಾಗ್ಲೂ ಏನೋ ಒಂತರಾ ಖುಷಿ. ..
ಎಲ್ಲೆಲ್ಲೋ ಮಿಸ್ಸಾದ, ಸಮಯದಲೇಲಿ ಕಳೆದೋದ ಗೆಳೆಯರಿಗೆ ಒಂದು ಮೆಸೇಜೋ, ಕಾಲೋ, ಎಫ್ಬೀಲೋ ವಿಷ್ ಮಾಡೋದು. ಈ ಹಾರೈಕೆ ಪ್ರತಿ ಹಾರೈಕೆಗಳ ನಡುವೇನೆ ಮತ್ತೆ ಗೆಳೆಯ, ಬಂಧುಗಳೆಲ್ಲಾ ನೆನ್ಪಾಗೋದು. ಕೆಲಸ ಕಾರ್ಯಗಳ ನಡುವೆ ಎಷ್ಟೇ ಕೆಳೆದುಹೋದ್ರೂ, ಸಮಯನೇ ಇಲ್ಲ ಅಂತ ಎಷ್ಟೇ ಬಡ್ಕೊಂಡ್ರೂ, ಸ್ವಂತದ ಕಷ್ಟ ನೋವುಗಳೇನೇ ಇದ್ರೂ ಹಬ್ಬದ ನೆಪದಲ್ಲಾದ್ರೂ ಈ ರೀತಿ ಮಾತಾಡ್ತಾ ಮತ್ತೊಂದ್ಸಲ ಖುಷಿಯ ಅಲೆ ಏಳುತ್ತೆ, ಬಾಂಧವ್ಯಗಳೂ ಉಳ್ಯತ್ತೆ .. ಈ ರೀತಿ ಹಬ್ಬಗಳು ಬರ್ತಿರ್ಬೇಕು ಕಣ್ರಿ :-)

ಎಂತಕೆ ಈ ವಿಷ್ಯ ಬಂತಪಾ ಅಂದ್ರೆ..
ಒಬ್ರಿಗೆ ಹಿಂಗೇ ಒಂದು ಹಬ್ಬಕ್ಕೆ ಅಂತ ಒಬ್ರಿಗೆ ವಿಷ್ ಮಾಡಿದಿ.
ಚಾಟ್ ಹಿಸ್ಟರಿ ನೋಡಿದಾಗ ಹಿಂದಿನ ಮೆಸೇಜ್ ಕಳ್ಸಿದ್ದು ಹಿಂದಿನ ವರ್ಷ ಹೊಸವರ್ಷಕ್ಕೆ !! ಅಂದ್ರೆ ಒಂದು ವರ್ಷ ಆದ್ರೂ ಸುದ್ದೀನೆ ಇರ್ಲೆ. ಹಿಂಗೇ ಒಂದೂವರೆ ವರ್ಷ ಆದ್ಮೇಲೆ ಸಿಕ್ಕವ್ರೂ ಇದ್ದ. ಅಲ್ಲಿವರೆಗೆ ಅವ್ರು ಎಲ್ಲೋದ , ಎಂತ ಕತೆ ಏನೂ ಸುದ್ದಿ ಇರ್ಲೆ.. ಎಲ್ಲಾ ಎಫ್ಬಿಲಿ ಸಿಕ್ತ ಹೇಳ್ತ.. ಆದ್ರೂ ಇದು ನಿಜ !!
ಒಬ್ರಿಗೆ ಹಿಂಗೇ ಒಂದು ಹಬ್ಬಕ್ಕೆ ಅಂತ ವಿಷ್ ಮಾಡಿದಿ.
ಚಾಟ್ ಹಿಸ್ಟರಿ ನೋಡಿದಾಗ ಹಿಂದಿನ ಮೆಸೇಜ್ ಕಳ್ಸಿದ್ದು ಹಿಂದಿನ ವರ್ಷ ಹೊಸವರ್ಷಕ್ಕೆ !! ಅಂದ್ರೆ ಒಂದು ವರ್ಷ ಆದ್ರೂ ಸುದ್ದೀನೆ ಇರ್ಲೆ. ಹಿಂಗೇ ಒಂದೂವರೆ ವರ್ಷ ಆದ್ಮೇಲೆ ಸಿಕ್ಕವ್ರೂ ಇದ್ದ. ಅಲ್ಲಿವರೆಗೆ ಅವ್ರು ಎಲ್ಲೋದ , ಎಂತ ಕತೆ ಏನೂ ಸುದ್ದಿ ಇರ್ಲೆ.. ಎಲ್ಲಾ ಎಫ್ಬಿಲಿ ಸಿಕ್ತ ಹೇಳ್ತ.. ಆದ್ರೂ ಇದು ನಿಜ !!


ಮತ್ತೊಂದ್ಸಲ ಎಲ್ರಿಗೂ ಯುಗಾದಿಯ, ಬರಲಿರೋ ವಿಜಯನಾಮ ಸಂವತ್ಸರದ ಶುಭಾಶಯಗಳು :-)
ಸಂವತ್ಸರಗಳೆಲ್ಲಾ ಮರ್ತೋಗಿರೋರ ಹೆಲ್ಪಿಗೆ ಹೇಳೊಂದು ಸಂವತ್ಸರಗಳ ಲಿಂಕು
http://groups.yahoo.com/group/satvargas/message/4952

Monday, April 8, 2013

ಮೇಲುಕೋಟೆಯ ಮೇಲೇರುತ್ತಾ..

ಆಗ್ಬೇಕಂದಿದ್ದು ಆಗೇ ಆಗುತ್ತೆ ಅಂತಾರೆ. ಹಿಂದಿನ ವಾರ ಮೇಲುಕೋಟೆಗೆ ಹೋಗೋಣ ಅಂತಿದ್ವಿ. ಆಮೇಲೆ ಅದೇಕೋ ಆಗ್ಲಿಲ್ಲ. ಈ ವಾರವೂ ಮೇಲುಕೋಟೆಗೆ ಹೋಗ್ಬೇಕಂದಿದ್ದ ಹಿಂದಿನ ದಿನ ವರುಣನ ಭರ್ಜರಿ ಆರ್ಭಟ. ಕೊನೆಗೆ ಕ್ಯಾನ್ಸಲ್ ಮಾಡ್ಬೇಕೂಂತಿದ್ದೇ ಕ್ಯಾನ್ಸಲ್ ಆಗಿ ರಾತ್ರೆ ಹನ್ನೊಂದೂವರೆಗೆ ಟ್ರಿಪ್ಪು ಫಿಕ್ಸು! ನಮ್ಮ ಗ್ಯಾಂಗೇ ಹಾಗೆ :-) ಹೊರಡಬೇಕಂದ್ರೆ ಹೊರಟ್ಬಿಡೇಕು ಅಷ್ಟೆ :-)

ಬೆಳಿಗ್ಗೆ ೭:೩೦ ಕ್ಕೆ ಬೆಂಗಳೂರು -ಮೈಸೂರು ಟ್ರೈನು ಹತ್ತಿದ ನಾವು ಮಂಡ್ಯ ತಲುಪೋ ಹೊತ್ತಿಗೆ ೯:೩೦. ಅಲ್ಲಿಂದ ಮೇಲುಕೋಟೆಗೆ ಹತ್ತಕ್ಕೆ ಬಸ್ಸು. ಅದರಲ್ಲಿ ಮೇಲುಕೋಟೆ ತಲುಪೋ ಹೊತ್ತಿಗೆ ೧೧:೧೫. ಮೇಲುಕೋಟೆ ಹತ್ತಿರ ಬರ್ತಿದ್ದ ಹಾಗೆ ಕಿಟಕಿಯಲ್ಲಿ ಕಾಣುತ್ತಿದ್ದ ಮೇಲುಕೋಟೆ ನಾರಾಯಣಪರ್ವತದ ದೃಶ್ಯ ಮತ್ತು ಮೇಲುಕೋಟೆ ಬಗ್ಗೆ ಬಸ್ಸಿನ ಹಿರಿಯರೊಬ್ಬರು ಹೇಳುತ್ತಿದ್ದ ವಿವರಣೆಗಳು ಕುತೂಹಲ ಮೂಡಿಸೋಕೆ ಶುರು ಮಾಡಿದವು.  ಮೇಲುಕೋಟೆ ದೇವಸ್ಥಾನಗಳು ೧ ಘಂಟೆಗೆ ಬಾಗಿಲು ಅಂತಲೂ, ಅಲ್ಲಿನ ಪುಳಿಯೋಗರೆ ಸೂಪರೂ ಅಂತಲೂ ಸ್ವಲ್ಪ ಓದ್ಕೊಂಡಿದ್ದ ನಾವು ಬಸ್ಸಿಳಿದು  ಸ್ವಲ್ಪ ಮುಂದಕ್ಕೆ ಬರ್ತಿದ್ದ ಹಾಗೆಯೇ ಬೆಟ್ಟಕ್ಕೆ ದಾರಿ ಎಂಬೋ ಬೋರ್ಡು.


ಅದೇ ದಾರಿಯಲ್ಲಿ ಎಡಕ್ಕೆ ಹೊರಳಿದಾಗ ದೂರದಲ್ಲಿ ನಾರಾಯಣ ಪರ್ವತದ ಮೇಲಿರುವ ಯೋಗನರಸಿಂಹ ದೇಗುಲ ಸ್ವಾಗತ ಕೋರುತ್ತಿದ್ದಂತೆ ಕಂಡಿತು. ಹಾಗೇ ಮುಂದೆ ಬಂದಾಗ ಬಲಕ್ಕೆ ಕಲ್ಯಾಣಿ ಮತ್ತು ಸೀದಾ ಮೇಲೆ ಹೋದರೆ ಯೋಗ ನರಸಿಂಹ ದೇಗುಲ. ಮುಡಿ ಕೊಡುವವರು ಮೊದಲು ಕಲ್ಯಾಣಿಯಲ್ಲಿ ಸ್ನಾನ ಮಾಡಿ, ಮುಡಿ ಕೊಟ್ಟು ಮೇಲುಕೋಟೆಯ ದರ್ಶನ ಶುರು ಮಾಡುತ್ತಾರಂತೆ. ನಮಗೆ ಮುಡಿ ಕೊಡುವ ಇರಾದೆಯೇನೂ ಇಲ್ಲದ್ದರಿಂದ ಬೆಟ್ಟದತ್ತ ಹೆಜ್ಜೆ ಹಾಕಿದೆವು.




ಬೆಟ್ಟ ಹತ್ತೋ ಮೊದಲೇ ಏಕಶಿಲಾ ಗಣಪತಿ ಮತ್ತು ಸ್ವಾಮಿ ಪಾದ ಅಂತೇನೋ ಬೋರ್ಡು ಕಂಡಂತಾಗಿ ಎಡಗಡೆ ಹೆಜ್ಜೆ ಹಾಕಿದೆವು. ಅಲ್ಲಿ ಕಂಡದ್ದು ಯೋಗನರಸಿಂಹ ಸ್ವಾಮಿಯ ಪಾದದ ಸಣ್ಣ ಗುಡಿ ಮತ್ತು ಒಂದೇ ಕಲ್ಲಲ್ಲಿ ಕೆತ್ತಿರೋ ಸುಂದರ ಗಣಪ. ಗಣಪನ ಪಕ್ಕದಲ್ಲೇ ಒಂದು ಪುಟ್ಟ ಕಲ್ಯಾಣಿ.







 ಅಲ್ಲೇ ಪಕ್ಕದಲ್ಲಿ ಎತ್ತಲೋ ಸಾಗೋ ಮೆಟ್ಟಿಲು ದಾರಿ. ಗಣಪನಿಗೆ ನಮಸ್ಕರಿಸುತ್ತಿರುವಾಗಲೇ ಆ ದಾರಿಯಲ್ಲೇ ಬಂದ ಇಬ್ಬರು  ಹೆಂಗಸರು ಕಂಡರು . ಆ ದಾರಿ  ಎಲ್ಲಿಗೆ ಸಾಗುತ್ತೆ ಅಂತ ವಿಚಾರಿಸೋ ಮೊದಲೇ ಅವರು ಮೊದಲು ಚಲುವ ನಾರಾಯಣ ದೇವಸ್ಥಾನಕ್ಕೆ ಹೋಗಿ, ಅಲ್ಲಿ ಹನ್ನೆರಡೂವರೆಗೆ ಬಾಗಿಲು. ಆಮೇಲೆ ಇಲ್ಲಿ ಬಂದು ಬೆಟ್ಟ ಹತ್ತಿ, ಇಲ್ಲಿ ೨ ಘಂಟೆವರೆಗೂ ಇರುತ್ತೆ ಅಂತ ದಾರಿ ತೋರಿಸುವುದೇ ! ಕಲ್ಯಾಣಿಯ ಹಿಂದೆ ಹೋಗಿ ಅಂತಲೂ ತೋರಿಸಿದ್ರು. ಸರಿ ಅಂತ ಅಲೆಮಾರಿಗಳ ಪಯಣ ಕಲ್ಯಾಣಿಯತ್ತ ಸಾಗಿತು

Eka shila ganapati



ಕಲ್ಯಾಣಿಯೆಂದರೆ ಬರೀ ಕೆರೆಯಲ್ಲ. ಅಲ್ಲಿರೋ ಮಂಟಪಗಳಲ್ಲಿನ ಪ್ರತೀ ಕಂಬವೂ ಇದು ದೇಗುಲವಾ, ಕಲ್ಯಾಣಿಯ ಮೇಲಿನ ಕಟ್ಟೆಯಾ ಅಂತ ಅನುಮಾನ ಮೂಡಿಸುವಷ್ಟು ಸುಂದರವಾಗಿದೆ.













ಚಪ್ಪಲಿಯಲ್ಲೇ ಬಂದಿದ್ದ ನಾವು ಕಲ್ಯಾಣಿಯನ್ನು ಬಳಸಿ ಆಚೆ ಸಾಗಲು ಮನಸ್ಸಾಗದೇ ರಸ್ತೆಯಲ್ಲಿ ಹೋಗೋ ಮನಸ್ಸು ಮಾಡಿದೆವು. ಮೇಲುಕೋಟೆಯಲ್ಲಿ ನಮ್ಮ ಅಲೆದಾಟ ಮತ್ತೆ ಶುರುವಾಗಿದ್ದೇ ಇಲ್ಲಿ :-)



ಮೇಲುಕೋಟೆಯಲ್ಲಿ ಕಾಲಿಡುತ್ತಿದ್ದಂತೆಯೇ ಕಣ್ಸೆಳೆದಿದ್ದು ಅಲ್ಲಿ ಎಲ್ಲೆಡೆ ಕಾಣುವ ಜೇಡಿ(ಕಡುಕೆಂಪು)- ಬಿಳಿಯ ನಾಮಗಳು. ಮಾರು ಮಾರಿಗೊಂದರಂತೆ ದೇವಸ್ಥಾನವೋ, ಮನೆಯೋ ಗೊತ್ತಾಗದಂತೆ ನಾಮಗಳು ! ಇವುಗಳ ನೋಡುತ್ತಾ ಗೊತ್ತು ಗುರಿ ಇಲ್ಲದಂತೆ ಹೆಜ್ಜೆ ಹಾಕುತಿದ್ದ ನಮಗೆ ಹೂ ಮಾರೋ ಹೆಂಗಸರಿಂದ ಮೊದಲ ನಾಮ !


Melukote Kalyani



ಚಪ್ಪಲಿ ಹಾಕ್ಕೊಂಡು ಬೆಟ್ಟ ಹತ್ತೋ ಹಾಗಿಲ್ಲ, ಇಲ್ಲೇ ಬಿಡಿ ಅಂದ್ರು . ಹೂಂ ಅಂದ್ವಿ. ಬ್ಯಾಗೂ ಇಲ್ಲೇ ಇಡಿ ಅಂದ್ರೂ ಯಾಕೋ ಮನ್ಸು ಒಪ್ಲಿಲ್ಲ.ಚಪ್ಪಲಿ ಬಿಟ್ಟ ತಪ್ಪಿಗೆ ೩೦ ರೂಗೆ ಮೊಳ ತುಳಸಿ ಹಾರ, ಪೂಜೆ ಸಾಮಾನು ಕೊಂಡ್ಕೊಂಡು ಮೇಲುಕೋಟೆ ಮೇಲುಕೋಟೆ ಚೆಲುವನಾರಾಯಣನ ಗುಡಿಯತ್ತ ಸಾಗಿದೆವು.






ಮೊದಲು ಸಿಕ್ಕಿದ್ದು ಸತ್ಯನಾರಾಯಣ ಸ್ವಾಮಿ ದೇವಸ್ಥಾನ. ಬಿರು ಬೇಸಿಗೆಯಾದ ಕಾರಣ ಅಲ್ಲಿ ಬಂದವರಿಗೆಲ್ಲಾ ವೃದ್ಧ ದಂಪತಿಯ ತಣ್ಣೀರು ಸೇವೆ ನಡೆಯುತ್ತಾ ಇತ್ತು. ದೇವರಿಗೆ ನಮಸ್ಕರಿಸೋದ್ರ ಜೊತೆಗೆ ಅವರಿಗೂ ಒಳ್ಳೇದಾಗ್ಲಿ ಅಂತ ಬೇಡಿ ಮುಂದೆ ಸಾಗಿದೆವು.

Oora madyada mattondu kere

ಕಲ್ಯಾಣಿಯ ಮತ್ತೊಂದು ಬದಿಗೆ ಸಾಗುತ್ತಿದ್ದಂತೆಯೇ ಮತ್ತೆ ಕಂಡಿದ್ದು ಕಲ್ಯಾಣಿ ಕಂಬಗಳ ಸೌಂದರ್ಯ. ಜೊತೆಗೆ ಮೇಲುಕೋಟೆ ಸ್ಪೆಷಲ್ ಪುಳಿಯೋಗರೆ ಸವಿಯುತ್ತಿದ್ದ ಭಕ್ತಾದಿಗಳು. ಹಾಗೆಯೇ ಮುಂದೆ ಬಂದಂತೆ ಕಂಡಿದ್ದು ಶ್ರೀನಿವಾಸ ದೇವಸ್ಥಾನ. ಇಲ್ಲಿಂದ ಮುಂದೆ ಮತ್ತೆ ದೇಗುಲಗಳ ಸಾಲು. ರಸ್ತೆಬದಿ, ಕಮಾನು ಎಲ್ಲೆಲ್ಲೂ ಶಿಲ್ಪಕಲೆ. ದೇಗುಲಗಳ ನಗರಿಯಲ್ಲೆಲ್ಲೋ ಹಾದಿ ತಪ್ಪಿ ಅಲೆಯುತ್ತಿರುವಂತಹ ಅನುಭವ.  ಇದನ್ನೆಲ್ಲಾ ಪದಗಳಲ್ಲಿ ಹೇಳೋ ಬದಲು ಚಿತ್ರಗಳಲ್ಲೆ ಹಾಕೋ ಪ್ರಯತ್ನ ಮಾಡುತ್ತೇನೆ.

One of the dwajastamba one the way 
















ಹಾಗೇ ಮಂದೆ ಬರುತ್ತಿದ್ದಾಗ ಘೋರ ಬಿಸಿಲು. ಕಾದ ಟಾರು ರಸ್ತೆಯ ಮೇಲೆ ಬರಿಗಾಲಲ್ಲಿ ನಡಿಗೆ. ಪಕ್ಕದಲ್ಲೇ ಚಪ್ಪಲಿ ಹಾಕ್ಕೊಂಡು ಹೋಗ್ತಿದ್ದೋರನ್ನ ನೋಡಿ, ಚುರುಗುಡುತ್ತಿದ್ದ ಕಾಲುಗಳು ಇನ್ನೂ ಸುಟ್ಟಂತೆ !ಏನು ಮಾಡೋಣ, ಮೋಸ ಹೋಗಿ ಆಗಿದೆ. ದೇವ ನಾಮ ಸ್ಮರಣೆ ಮಾಡುತ್ತಾ ದಾಪುಗಾಲು ಹಾಕುತ್ತಿದ್ದಂತೆ ಮೇಲುಕೋಟೆ ಚೆಲುವನಾರಾಯಣ ದೇಗುಲ ಸಿಕ್ಕಿತು.


 ಅಲ್ಲಿ ಕಂಸಾಳೆ ತಾತಯ್ಯ, ಕಹಳೆ, ಶಂಖ, ಜಾಗಟೆ ದಾಸಯ್ಯನಂತಹ ಅನೇಕ ನಶಿಸಿ ಹೋಗುತ್ತಿರುವ ಕಲೆಗಳು ಸಿಕ್ಕವು!







ಅಲ್ಲಿನ ಶಿಲ್ಪಕಲೆ ನಿಜಕ್ಕೂ ಅಮೋಘ. ಚೆಲುವನಾರಾಯಣನ ಮೂಲ ವಿಗ್ರಹ, ಚೆಲುವರಾಯನ ವಿಗ್ರಹ, ಸುದರ್ಶನ ಆಳ್ವಾರ್,ಲಕ್ಷ್ಮಿ ಗುಡಿ.. ಹೀಗೆ ಅಲ್ಲೊಂದು ದೇಗುಲಗಳ ಸಮೂಹವೇ ಇದೆ ! ಅಲ್ಲಿ ಛಾಯಾಗ್ರಹಣ ನಿಷಿದ್ದವಾದ್ದರಿಂದ ಯಾವ ಚಿತ್ರವನ್ನೂ ತೆಗೆಯಲಾಗಿಲ್ಲ. ಕಂಬಗಳಲ್ಲಿ ಕೆತ್ತನೆ ಎಲ್ಲೆಡೆ ಕಾಣುತ್ತೇವೆ. ಆದರೆ ಕಂಬಗಳಲ್ಲಿ ಎರಡು ಸ್ಥರದ ಕೆತ್ತನೆ ನೋಡಿದ್ದು ಇಲ್ಲೇ ಮೊದಲು.

Melukote Cheluvanarayana temple

ಅಲ್ಲಿಂದ ವಾಪಾಸು ಬಂದು ಸುಡುತ್ತಿರೋ ಕಾಲುಗಳಲ್ಲೇ ಮತ್ತೆ ಬೆಟ್ಟ ಹತ್ತಿ ಯೋಗನಾರಾಯಣನ ದರ್ಶನ ಪಡೆದೆವು.



ಬೆಟ್ಟದ ಮೇಲಿಂದ ಕೆಳಗಿನ ಪ್ರಕೃತಿಯ ಸೌಂದರ್ಯವನ್ನು ಆನಂದಿಸಬಹುದು. ಬೆಟ್ಟ ಹತ್ತುವಾಗೆಲ್ಲಾ ಅನೇಕ ಮುರುಕು ಗುಡಿಗಳು, ಒಂದಾನೊಂದು ಕಾಲದಲ್ಲಿ ಇನ್ನೂ ಹೆಚ್ಚಿದ್ದಿರಬಹುದಾದ ಸೌಂದರ್ಯದ ಲಕ್ಷಣದಂತೆ ಕಾಣುತ್ತಿದ್ದವು.




ದೇವರ ದರ್ಶನವಾದ ಮೊದಲು ನೆನಪಾಗಿದ್ದು ಹಸಿಯುತ್ತಿದ್ದ ಹೊಟ್ಟೆ ಮತ್ತೆ ಉರಿಯುತ್ತಿದ್ದ ಕಾಲು. ಊಟಕ್ಕೆ ಮತ್ತೆ ಕಲ್ಯಾಣಿ ಬೀದಿಯ ಕಡೆಗೇ ಹೋಗಬೇಕು. ಹಾಗಾಗಿ ಚಪ್ಪಲಿ ಪಡೆದು ಹೋದ ದಾರಿಯಲ್ಲೇ ಮತ್ತೆ ಹೆಜ್ಜೆ ಹಾಕಿದೆವು. ಅಲ್ಲೇ ಕಂಡ ಪುಳಿಯೋಗರೆ ಸವಿಗೆ ಮಾರುಹೋದೆವು.

ಅಲ್ಲೇ ಮೇಲುಕೋಟೆಯಲ್ಲಿ ನೋಡಲುಳಿದ ಸ್ಥಳಗಳ ಬಗ್ಗೆ ಮಾಹಿತಿ ಪಡೆದೆವು. ಊಟವಾದ ನಂತರ ಸಾಗಿದ್ದು ಅಕ್ಕತಂಗಿಯ ಕೊಳದತ್ತ. ಚೆಲುವನಾರಾಯಣ ದೇಗುಲದ ಬಲಭಾಗದಲ್ಲಿ ಸ್ವಲ್ಪ ಮುಂದೆ ಸಾಗಿದರೆ ಸಿಗುವ ಈ ಕೊಳಗಳಿಗೆ ಸಾವಿರ ವರ್ಷಗಳ ಇತಿಹಾಸವಿದೆಯಂತೆ.
Akka tangi kola


ಅಲ್ಲಿಂದ ಹಾಗೆಯೇ ಪಕ್ಕದಲ್ಲಿ ಕಾಣುತ್ತಿದ್ದ ರಾಯಗೋಪುರಕ್ಕೆ ಬಂದೆವು. ಇಲ್ಲಿ ಹಲವಾರು ಚಿತ್ರಗಳ ಶೂಟಿಂಗ್ ನಡೆಯುತ್ತದೆ. ನಾವು ಹೋದಾಗ ಯಾವ ಚಿತ್ರಗಳ ಶೂಟಿಂಗೂ ನಡೆಯದ ಕಾರಣ ನಮ್ಮದೇ ಫೋಟೋ ಶೂಟ್.


ಅಲ್ಲಿಂದ ಹಾಗೆಯೇ ೨ ಕಿ.ಮೀ ಮುಂದಿರುವ ಧನುಷ್ಕೋಟಿ ಎಂಬಲ್ಲಿಗೆ ಹೊರಟೆವು. ಸುಡುವ ಉರಿ ಬಿಸಿಲಿಗೆ ಮಧ್ಯೆ ಸಿಕ್ಕೊಂದು ದೈವೀ ವನದ ನೆರಳೇ ಗತಿ.


ರಾಮ ಬಾಣ ಬಿಟ್ಟ ಬಾಣದಿಂದ ಧನುಷ್ಕೋಟಿಗೆ ಈ ಹೆಸರಂತೆ. ಅಲ್ಲಿ ಮಾತು ಬರದ ಮೂಕ ತಾಯೊಬ್ಬಳ ಪೂಜೆ.


ಅಲ್ಲಿನ ದರ್ಶನ ಪಡೆದ ನಂತರ ಹಾಗೆಯೇ ಬರುತ್ತಾ ಮೇರು ಕವಿ ಪು.ತಿ.ನ ರ ಸಾಂಸ್ಕೃತಿಕ ಮನೆಯನ್ನು ಹೊಕ್ಕೆವು. ದೇವಗಿರಿ ಅಥವಾ ಮೇಲುಕೋಟೆಯವರಾದ ಪುರೋಹಿತ ತಿರು ನರಸಿಂಹಾಚಾರ್ ಅವರ ಮನೆಯನ್ನು ಹೊಕ್ಕಾಗ ಸ್ವಲ್ಪ ಹೊತ್ತು ಯಾವುದೋ ಕಾಲದಲ್ಲಿ ಕಳೆದು ಹೋದಂತ ಅನುಭವ..



ಮೇಲುಕೋಟೆಗೆ ಬಂದವರೆಲ್ಲರೂ ಧನುಷ್ಕೋಟಿ ಮತ್ತು ಪು.ತಿ.ನ ಸಾಂಸ್ಕೃತಿಕ ಮನೆಯನ್ನು ಬಿಡುತ್ತಾರೆ. ಇದರ ಬಗ್ಗೆ ಹೆಚ್ಚಿನ ಜನರಿಗೆ ಗೊತ್ತಿಲ್ಲದೇ ಇರುವುದೂ ಒಂದು ಕಾರಣವಾಗಿರಬಹುದು. ಮುಂದಿನ ಬಾರಿ ಮೇಲುಕೋಟೆಗೆ ಬಂದಾಗ ನೀವು ಇಲ್ಲಿಗೆ ಬರಬಹುದು(ಅದು ತೆಗೆದಿರೋ ಸಮಯ ಬೆಳಿಗ್ಗೆ ೧೦-೨,ಮಧ್ಯಾಹ್ನ ೩-೫) ಪುತಿನ ಮನೆಯಿಂದ ಹೊರಬಂದು ಹಾಗೇ ಮುಂದೆ ಸಾಗಿದಾಗ ಮತ್ತದೇ ಕಲ್ಯಾಣಿಯ ಬುಡಕ್ಕೆ ತಲುಪಿದೆವು. ಮೇಲುಕೋಟೆಯ  ಪ್ರದಕ್ಷಿಣೆಯ ಖುಷಿಯಲ್ಲಿರುವಾಗಲೇ ಸಮಯ ನಾಲ್ಕೂವರೆ ದಾಟುತ್ತಾ ಬಂದಿತ್ತು. 

ಹಾಗೆಯೇ ಸಿಕ್ಕ ಬಸ್ಸಲ್ಲಿ ಮತ್ತೆ ಮಂಡ್ಯಕ್ಕೆ ತಲುಪುವವರೆಗೂ ಮೇಲುಕೋಟೆ ಸುತ್ತಾಟದ ಸುಸ್ತಲ್ಲಿ ಭರಪೂರ ನಿದ್ರೆ:-) ಸುಂದರ ದೃಶ್ಯಗಳ, ಲೋಟಗಟ್ಟಲೇ ಕುಡಿದ ಮಸಾಲೆ ಮಜ್ಜಿಗೆಯ ಮೆಲುಕು :-)