Welcome to Prashantavanam

Monday, June 10, 2013

ಬೋಳು ಮರದ ಕೆಳಗೆ

ಮೊನ್ನೆ ಒಂದು ಮೆಸೇಜು.."ಹೂ ಈಸ್ ದಿಸ್".. ಹೆಸರಿರದ ಆ ನಂಬರಿನಿಂದ ಬಂದ ಮೊದಲ ಮೆಸೇಜು. ಅದೇ "ಹೂ ಈಸ್ ದಿಸ್ ಇಂದ ಪರಿಚಯವಾದ ನಿನ್ನ ನೆನಪನ್ನದು ಕೆಣಕಿದ್ದಂತೂ ನಿಜ ಗೆಳತಿ..ನೀನಿಲ್ಲದ ಬಾಳಿಂದು ಮಳೆಯಿಲ್ಲದೇ ಬರಗೆಟ್ಟ ನಾಡಂತೆ. ನೆಟ್ಟ ಸಸಿಗಳು ಕಣ್ಣೆದುರೇ ಒಣಗಿ ಸಾಯುತ್ತಿರೋ ಬಾಳೆಯ ತೋಟದಂತೆ. ನೀನಿತ್ತ ಪ್ರೀತಿಯ ಬಿಂದುಗಳಿಲ್ಲದೇ ಬಾಳಸಸಿಗಳು ಒಣಗುತ್ತಿವೆ ಗೆಳತಿ. ಮರೆಯಾದ ನಿನ್ನ ನೆನಪಲ್ಲೇ ಕೆಲವು ಸಾಲುಗಳು


ಮುಂಜಾನೆಯ ಮಂಜಿನಂತಾ
ಶೀತಲತೆ ನಿನ್ನ ಸ್ಪರ್ಶ
ಮಳೆಕಾಡ ಮುಂಗಾರಂತೆ
ಹನಿಬಿಡದ ನಿನ್ನ ಮಾತು
ನೀರವತೆಯ ರಾತ್ರಿಯನೇಕೆ ನುಂಗಿಹಾಕಿತು ?
ಹಗಲೆಂಬ ಹಾಳೆಯ ತುಂಬಾ ಮಸಿಯ ಚೆಲ್ಲಿತೊ

ನೋವುಗಳ ರಾತ್ರಿಯೆದುರು
ಬಾಹುಗಳ ಕೆಣಕೊ ನೆನಪು
ಬರಸೆಳೆಯೋ ಬೇಸರದೆದುರು
ಕಂಡಂತೆ ರಮಿಸೊ ಮುನಿಸು
ಓರೆ ನೋಟ, ಸಂಜ್ನೆಗಳಲ್ಲೂ ಮೌನ ಕಾಡಿತು.


ಹೇಳಲಾರದ ಮಾತು ಗೀತೆಯಾಯಿತು
ನಿನ್ನ, ಕೇಳಲಾಗದ ಮಾತು ಮೂಕವಾಯಿತು
ನೀನಿಲ್ಲದ ಬಾಳಿಂದು ಹೋಳಾಗಿ ಗೋಳಿಂದ
ಭಾವನೆಗಳ ಮರದೆಲೆಯುದುರಿ ಬೋಳಾಯಿತು.

ನಿನ್ನ ಬರವ ಬಾಳಿನಲ್ಲಿ
ಕಾದು ಕೂತ ಭೂಪ ನಾನು
ಹಗಲು ಇರುಳು ಕೆಲಸದಲ್ಲೂ
ಕನಸಿನಲ್ಲೂ ನೀನು ನಾನು
ಎಂಬ ಆಸೆ, ಭಾವಕ್ಕೆಲ್ಲಾ  ವಿಧಿಯು ಕಾಡಿತು
ಭಾರ್ಯೆಯಾಗೆ ಕಾದ ನಿನಗೆ ಸಾವು ನೀಡಿತು




4 comments:

  1. ಭಾವ ತೀವ್ರತೆ... ಬೆಟ್ಟದ ಬುಡದಲ್ಲೋ, ತುತ್ತ ತುದಿಯಲ್ಲೋ ಹುಟ್ಟುವ ನೀರಿನ ಒರತೆಯ ಹಾಗೆ.. ಒಂದು ಸಣ್ಣ ಪದಗಳಿಂದ ಶುರುವಾದ ನಂಟು ಕವಿತೆಯ ಲಹರಿಯನ್ನೇ ಹರಿಯ ಬಿಡಲು ಅನು ಮಾಡಿಕೊಟ್ಟಿದೆ. ಸೂಪರ್ ಪ್ರಶಸ್ತಿ ಪ್ರತಿಯೊಂದು ಪದ, ಸಾಲು ನೇಯ್ದು ಬಿಡಿಸಿದ ರೇಷ್ಮೆ ಸೀರೆಯಂತೆ ಅಚ್ಚುಕಟ್ಟಾಗಿದೆ. ಸೂಪರ್

    ReplyDelete
  2. ಪ್ರೇಮಿಗಳ ಘೋಷ ಗೀತೆಯಂತಿದೆ ಈ ಗೀತೆ. ಸಾಲು ಸಾಲುಗಳ ಪೂರಾ ಅವಳದೇ ಭಾವ.

    ReplyDelete
  3. ಪ್ರತಿಯ ಸಾಲೂ ಅದೆಷ್ಟೋ ಭಾವಗಳನ್ನ ತನ್ನಲ್ಲಡಗಿಸಿಕೊಂಡಿದೆ ...
    ಪ್ರತಿಯ ಸಾಲೂ ಹತ್ತಿರ ಹತ್ತಿರ ಅನಿಸಿತು
    ನೀರವತೆಯ ರಾತ್ರಿಗಳ ಇಲ್ಲವಾಗಿಸೋ ಅವಳು ಸಿಗಲೆಂದು ಆಶಿಸಿ :)
    ಕೊನೆಗೂ ನಿಮ್ಮಿಂದೊಂದು ಪ್ರೇಮ ಗೀತೆ ಹೊರಟಿದ್ದು ಖುಷಿ ಆಯ್ತು :)
    ಬರೀತಾ ಇರಿ

    ReplyDelete
  4. "ನಿನ್ನ ಬರವ ಬಾಳಿನಲ್ಲಿ
    ಕಾದು ಕೂತ ಭೂಪ ನಾನು
    ಹಗಲು ಇರುಳು ಕೆಲಸದಲ್ಲೂ
    ಕನಸಿನಲ್ಲೂ ನೀನು ನಾನು"

    wow!

    ಹೀಗೊಂದು ಕವನ ಓದಿದರೆ ಕಾಮೆಂಟ್ ಮಾಡೋದು ಕಷ್ಟ, ಓದಿ ಖುಷಿ ಆಯ್ತು ಅಂದ್ರೆ ಭಾರ ಆದ ಮನಸಿಗೆ ಮೋಸ ಮಾಡಿದ ಹಾಗೆ, ಬೇಜಾರಾಯ್ತು ಅಂದ್ರೆ ಖುಷಿ ಪಟ್ಟ ಕವಿಮನಸ್ಸಿಗೆ ಸುಳ್ಳು ಹೇಳ್ಕೊಂಡ್ ಹಾಗೆ. ಈ ಗೊಂದಲದಲ್ಲಿ ಕೆಡಗಿದ ಉತ್ತಮ ಕವಿತೆ .

    ಬರೀತಾ ಇರು ಅಂತ ಹೇಳವು ಹೇಳಿ ಇಲ್ಲೇ ಅಂದಕತ್ತೆ :) ಮಸ್ತ್ ಇದ್ದು :)

    ReplyDelete