Saturday, May 13, 2017

ಯಲಹಂಕ ಕರಗ

Yelahanka Karaga
ಬೆಂಗಳೂರು ಕರಗ ನೋಡಬೇಕಂತ ತುಂಬಾ ವರ್ಷಗಳಿಂದ ಇದ್ದ ಆಸೆ ಈ ವರ್ಷವೂ ನೆರವೇರಿರದಿದ್ದ ಕಾರಣ ಯಲಹಂಕದವರಾದ ರಾಜ್ ಕುಮಾರ್ ಯಲಹಂಕ ಕರಗದ ಬಗ್ಗೆ ಹೇಳಿದಾಗ ಕಿಮಿ ನಿಮಿರಿತ್ತು. ಯಲಹಂಕದಲ್ಲೂ ಕರಗ ನಡೆಯುತ್ತಾ ಅಂತ ಕೇಳಿ, ನಾನೂ ನೋಡಬೇಕಂತಿದ್ದೇನೆ ಎಂದೆ. ಸರಿ, ನಮ್ಮನೆಗೇ ಬನ್ನಿ ಅಂತ ಕರದ್ರು ರಾಜ್. ಸರಿ ಅಂತ ಕರಗ ನೋಡೋಕೆ ಹೋಗೋ ಪ್ಲಾನ್ ರೆಡಿಯಾಯ್ತು. ಕರಗ ಶುರುವಾಗೋದು ರಾತ್ರೆ ೧೨:೩೦ ಕ್ಕೆ. ಸಂಜೆಯೇ ಹೋಗಿ ಯಲಹಂಕದಲ್ಲಿರೋ ಕೆಂಪೇಗೌಡರ ಕಾಲದ ವೇಣುಗೋಪಾಲ ಸ್ವಾಮಿ ದೇವಸ್ಥಾನ ಮುಂತಾದ ದೇವಸ್ಥಾನಗಳನ್ನು, ಕರಗಕ್ಕೆ ಬರೋ ಉಳಿದ ಉತ್ಸವ ಮೂರ್ತಿಗಳ ಅಲಂಕಾರಗಳನ್ನು ನೋಡೋದಂತ ತೀರ್ಮಾನವಾಗಿತ್ತು.  ಆದರೆ ಅವತ್ತೇ ಆಫೀಸಲ್ಲಿ ಏನೋ ಅವಾಂತರವಾಗಿ ಆಫೀಸಿಂದ ಹೊರಡೋದೇ ಏಳಾಗಿತ್ತು. ಆಫೀಸತ್ರ ಮಳೆಯಿಲ್ಲ ಅಂತ ರಾಜ್. ನಮ್ಮನೆ ಹತ್ರ ಫುಲ್ ಮಳೆ ಗುರೂ ಅಂತ ನಾನು. ಅಂತೂ ರಾಜ್ ನಮ್ಮ ಏರಿಯಾಕ್ಕೆ ಬಂದು ಮಳೆಯಲ್ಲಿ ಸಿಕ್ಕಾಕಿಕೊಂಡು ನಾವು ಆ ಮಳೆಯಲ್ಲೇ ಅವರ ಮನೆಗೆ ಹೊರಡುವ ಹಾಗಾಯ್ತು. ಛತ್ರಿಯಿದ್ದರಿಂದ ನಿಧಾನವಾಗಿ ಹೋಗ್ತಾ ಮಳೆಯಲ್ಲಿ ಚೂರಾದ್ರೂ ಎಸ್ಕೇಪಾಗೋ ಪ್ರಯತ್ನ ನಡೆಸುತ್ತಾ ಕೆ.ಆರ್ ಪುರಂ ದಾಟೋದ್ರೊಳಗೆ ಮಳೆ ಕಮ್ಮಿ ಆಯ್ತು ಅಂತಾಯ್ತು. ಅಂತೂ ಇಂತು ರಾಜ್ ಮನೆ ಮುಟ್ಟಿದ್ವಿ. ಅಲ್ಲಿಂದ ಮುಂದೆ ಕಂಡು, ಕೇಳಿದ ಕರಗದ ಕತೆಗಳು,ಇತಿಹಾಸ ನಿಮ್ಮ ಮುಂದೆ.

ಕರಗವೆನ್ನೋ ಜನ ಜಾತ್ರೆ:
ನಾನು ಫೋಟೋದಲ್ಲಿ ನೋಡಿದ್ದಂತೆ, ಪೇಪರಿನಲ್ಲಿ ಓದಿದ್ದಂತೆ ಕರಗವೆಂದರೆ ಹೂವಿನ ಉದ್ದನೆಯ, ಟೋಪಿಯಂತದ್ದನ್ನು ಹೊತ್ತ ದೇಗುಲದ ಪ್ರಧಾನ ಅರ್ಚಕರು ಅದನ್ನು ಹೊತ್ತು ಊರಿನ ಪ್ರಮುಖ ಬೀದಿಗಳಲ್ಲೆಲ್ಲಾ ಸಂಚರಿಸುತ್ತಾರೆ. ರಾತ್ರೆ ಶುರುವಾಗೋ ಆಚರಣೆ ಬೆಳಗಿನ ಸೂರ್ಯೋದಯದವರೆಗೂ ನಡೆಯುತ್ತೆ ಅಂತ. ಆದರೆ ಕರಗಕ್ಕೆ ಬಂದಾಗ ಕಂಡ ದೃಶ್ಯಾವಳಿಗಳೇ ಬೇರೆ .ಆ ದಿನ ಊರ ತುಂಬೆಲ್ಲಾ ಲೈಟ ಸರಗಳು. ಮೂರು ದಿನ ನಡೆಯೋ ಆ ಸಂಭ್ರಮದಲ್ಲಿ ಹಿಂದಿನ ದಿನ ಹಸಿ ಅರಗ ಅಂತ ನಡೆಯುತ್ತಂತೆ. ಕೊನೆಯ ದಿನ ನಡೆಯೋದು ಮುಖ್ಯ ಕರಗ. ಅವತ್ತು ಸಂಜೆಯಿಂದಲೇ ಊರಲ್ಲೊಂದು ಕಡೆ ರಸಮಂಜರಿ, ನೃತ್ಯದ ಕಾರ್ಯಕ್ರಮ ನಡೀತಿದ್ದರೆ ಇನ್ನೊಂದು ಕಡೆ ಪ್ರಸಾದ ವಿನಿಯೋಗ ನಡೆಯುತ್ತಿತ್ತು. ಪೈಪೋಟಿಗೆ ಬಿದ್ದವರಂತೆ ಒಂದೊಂದು ಬೀದಿಯವರದ್ದೂ ಭರ್ಜರಿ ಡೆಕೊರೇಷನ್ನು. ರಜಾ ಸಮಯವಾದ್ದರಿಂದ ಎಲ್ಲಾ ಬೀದಿಗಳಲ್ಲೂ  ಒಟ್ಟು ಸೇರಿದ ಮಕ್ಕಳಿಂದ ಕ್ರಿಕೆಟ್ಟು, ಲಗೋರಿ, ಶಟಲ್ಲುಗು ರಾತ್ರಿ ಹತ್ತಾದರೂ ನಡೆಯುತ್ತಿತ್ತು. ಅಲ್ಲಲ್ಲಿ ಪಟಾಕಿ ಸದ್ದು. ರೇಷ್ಮೇ ಸೀರೆ, ಜರಿ ಚೂಡೀದಾರ, ಲಂಗ ಧಾವಣಿ ಧರಿಸಿದ ಹೆಣ್ಣುಮಕ್ಕಳು, ಹೊಸಬಟ್ಟೆಯುಟ್ಟ ಮಕ್ಕಳು ಎಲ್ಲೆಲ್ಲೂ ಕಣ್ಣಿಗೆ ಬೀಳುತ್ತಿದ್ದರು. ಮುಖ್ಯ ಬೀದಿಗಳಲ್ಲೆಲ್ಲಾ ಮಂಡಕ್ಕಿ,ಸಿಹಿ, ಬಲೂನು, ಆಟಿಕೆ ಮಾರೋರ ಅಂಗಡಿಗಳೇ ಅಂಗಡಿಗಳು. ಸಾಮಾನ್ಯ ಅಂಗಡಿಗಳಾದ ಬಟ್ಟೆಯಂಗಡಿ, ಕುಂಕುಮದಂಗಡಿಯವರೂ ರಾತ್ರಿಯಿಡೀ ಬಾಗಿಲು ತೆಗೆದು ಸಂಭ್ರಮಿಸುತ್ತಿದ್ದುದು ಒಂಥರಾ ಆಶ್ಚರ್ಯವೆನಿಸಿದ್ದು ಸುಳ್ಳಲ್ಲ. ಬಾಗಿಲು ಹಾಕಿದ ಒಂದು ಶಿವಾಲಯವನ್ನು ನೋಡಿ ಅದರ ಪಕ್ಕದಲ್ಲೇ "ಚೌಕ" ಚಿತ್ರದ ಅಲ್ಲಾಡಸ್ ಅಲ್ಲಾಡ್ಸ್ ಅಲ್ಲಾಡ್ಸು ಹಾಡಿಗೆ ನೃತ್ಯ ಮಾಡುತ್ತಿದ್ದವರ ನೃತ್ಯ, ಹಾಡಿಗೆ ತಲೆಯಾಡಿಸುತ್ತಾ ಮುಂದೆ ಬಂದೆವು.

ಮಹೇಶ್ವರಮ್ಮ ದೇವಾಲಯ:
ಯಲಹಂಕ, ಅದರಲ್ಲೂ ಯಲಹಂಕ ಓಲ್ಡ್ ಟೌನ್ ಅನ್ನೋದು ಒಂಥರಾ ದೇಗುಲಗಳ ನಗರಿಯಂತೆ, ಪೇಟೆಯೊಳಗಿನ ಹಳ್ಳಿಯಂತೆ ಕಾಣುತ್ತದೆ. ಯಾವ ಬೀದಿಗೆ ಹೋದರೂ ಅದು ಕೊನೆಯಾಗೋದ್ರೊಳಗೊಂದು ದೇವಸ್ಥಾನ ಸಿಕ್ಕುವಷ್ಟು ದೇಗುಲಗಳಿವೆ ಅಲ್ಲಿ. ಅದರಲ್ಲಿ ಮೊದಲು ನೋಡಿದ್ದು ಮಹೇಶ್ವರಮ್ಮ ದೇವಸ್ಥಾನ. ಯಲಹಂಕದ ಪ್ರಸಿದ್ಧ ಕರಗ ಶುರುವಾಗೋದು ಇಲ್ಲಿಂದಲೇ. ಇಲ್ಲಿರುವ ವಹ್ನಿಕುಲ ಎನ್ನುವ ಜನಾಂಗದವರೇ ಕರಗವನ್ನು ನಡೆಸೋದು. ಅವರಿಗೆ ಸಾಥಿಯಾಗಿ ಬರುವ ಕ್ಷತ್ರಿಯ(ತಿಗಳರು) ಖಡ್ಗಗಳನ್ನು ಹಿಡಿದು ಕರಗ ಸಾಗುವ ಅರ್ಚಕರ ಮುಂದೆ ದಾರಿಯಾಗುತ್ತಾರೆ. ಕರಗ ದೇಗುಲದಿಂದ ಹೊರಬೀಳೋದು ೧೨:೩೦ ಮೇಲೆ ಆದರೂ ಇವರು ಸಂಜೆ ಒಂಭತ್ತೂವರೆ, ಹತ್ತರ ಹೊತ್ತಿಗೇ ಗೋವಿಂದ, ಗೋವಿಂದ ಅನ್ನುತ್ತಾ ಕೈಯಲ್ಲಿ ಖಡ್ಗ ಹಿಡಿದು, ವೆಂಕಟರಮಣನ ನಾಮ ಬಡಿದು ಮಹೇಶ್ವರಮ್ಮನ ದೇಗುಲವನ್ನು ಪ್ರವೇಶಿಸುತ್ತಾರೆ. ಈ ದೇಗುಲವನ್ನು ನೋಡಿದ ನಂತರ ಮುಂದಿನ ದೇಗುಲಗಳನ್ನು ನೋಡೋಕೆ ಹೊರಟೆವು.

ಯಲಹಂಕದ ಉತ್ಸವ/ಕರಗ ಬೀದಿ:
ಯಲಹಂಕದ ಪಾಂಡುರಂಗ ವಿಠಲ ದೇವಸ್ಥಾನದಿಂದ ಶುರುವಾಗಿ, ಶನಿ ದೇವಸ್ಥಾನದ ಪಕ್ಕದಿಂದ ಸಾಗಿ ಮತ್ತೊಂದು ದೇಗುಲದೆದುರು ಸಾಗೋ ಡಾಂಬರ್ ರಸ್ತೆಯಲ್ಲಿಯೇ ಈ ಕರಗದ ದಿನ ಬರುವ ಸುತ್ತಲಿನ ಎಲ್ಲಾ ದೇವಸ್ಥಾನಗಳ ಉತ್ಸವ ಮೂರ್ತಿಗಳನ್ನು ತಂದಿರುತ್ತಾರೆ. ಇಲ್ಲಿ ಉತ್ಸವ ಮೂರ್ತಿಗಳನ್ನು ಕೂರಿಸೋ ಪಲ್ಲಕ್ಕಿಗಳ ಡೆಕೊರೇಶನ್ನುಗಳು ಒಂದಕ್ಕಿಂತ ಒಂದು ಚೆನ್ನಾಗಿರುತ್ತದೆ. ಅಯ್ಯಪ್ಪ ದೇವಸ್ಥಾನ, ಶ್ರೀ ಸತ್ಯನಾರಾಯಣ ದೇವಸ್ಥಾನ, ಪ್ಲೇಗಮ್ಮ ದೇವತೆ, ಹನುಮಂತ ದೇವಸ್ಥಾನ, ಶ್ರೀ ವೇಣುಗೋಪಾಲ ಸ್ವಾಮಿ ಹೀಗೆ ಹಲವಾರು ದೇವಸ್ಥಾನಗಳ ಪಲ್ಲಕ್ಕಿಗಳು ರಥಬೀದಿಯಲ್ಲಿ ತಯಾರಾಗಿ, ಇನ್ನೂ ಚೆಂದಗೊಳ್ಳುತ್ತಾ ನಿಂತಿದ್ದವು. ನಾವು ಮನೆಯಿಂದ ಊಟ ಮಾಡಿಕೊಂಡು, ಮಹೇಶ್ವರಮ್ಮನ ದೇಗುಲ ದರ್ಶನ ಮುಗಿಸಿ ಬರೋ ಹೊತ್ತಿಗೆ ರಾತ್ರಿ ಹತ್ತೂಕಾಲಾಗುತ್ತಾ ಬಂದಿತ್ತು. ಮುಖ್ಯ ದೇಗುಲಗಳಿಂದ ಮಹೇಶ್ವರಮ್ಮನ ಸನ್ನಿಧಿಗೆ ತಂದು ಅಲ್ಲಿ ಆರತಿ ಮಾಡಿ ನಂತರ ರಥಬೀದಿಯ ಪಲ್ಲಕ್ಕಿಗಳಿಗೆ ತುಂಬಿಸೋ ಸಂಪ್ರದಾಯವೂ ಇರೋದರಿಂದ ಕೆಲವು ಉತ್ಸವ ಮೂರ್ತಿಗಳನ್ನು ಮಹೇಶ್ವರಮ್ಮನ ಸನ್ನಿಧಿಯಲ್ಲೇ ನೋಡಾಗಿತ್ತು. ಈ ಉತ್ಸವದ ಸಮಯದಲ್ಲಿ ಮಹೇಶ್ವರಮ್ಮನ ಸನ್ನಿಧಿಗೆ ತಿಗಳರನ್ನು ಬಿಟ್ರೆ ಬೇರ್ಯಾರನ್ನೂ ಬಿಡೋಲ್ಲವೆಂದಿದ್ದರಿಂದ, ದೇವಸ್ಥಾನದಲಿ ವಿಪರೀತ ರಶ್ಶೂ ಇದ್ದರಿಂದ ಅಲ್ಲೇ ಹೊರಗಿನಿಂದ ನೋಡಿ ವಾಪಾಸಾಗಿದ್ವಿ. ರಥಬೀದಿಗೆ ಬಂದಾಗ ಅಲ್ಲಿದ್ದ ಪಲ್ಲಕ್ಕಿಗಳಲ್ಲಿ ಕೆಲವು ಪಲ್ಲಕ್ಕಿಗಳಲ್ಲಿ ದೇವರುಗಳನ್ನು ಕೂರಿಸಾಗಿದ್ದರೆ ಇನ್ನು ಕೆಲವು ದೇವರ ಆಗಮನದ ನಿರೀಕ್ಷೆಯಲ್ಲಿದ್ದೆವು.

ಯಲಹಂಕದ ದೇಗುಲಗಳು:
ರಥಬೀದಿಯಿಂದ ಮುಂದೆ ಬಂದ ನಮಗೆ ಸಿಕ್ಕಿದ್ದು ಪಾಂಡುರಂಗ, ರುಕ್ಮಿಣಿಯರು ಇದ್ದ ದೇಗುಲ. ಅದಕ್ಕೊಂದು ನಮಸ್ಕಾರ ಹಾಕಿ ಪಕ್ಕದಲ್ಲಿದ್ದ ಆಂಜನೇಯ ದೇವಸ್ಥಾನದ ಪಕ್ಕ ಮುಂದೆ ಬಂದೆವು. ಕೋಟೆ ಆಂಜನೇಯ ಅಥವಾ ರಥಬೀದಿ ಆಂಜನೇಯ ಅಂತ ಕರೆಯೋ ಆ ಆಂಜನೇಯನ ಗುಡಿ ಸಣ್ಣದಾಗಿದ್ದರೂ ಅಲ್ಲಿ ನೀಡೋ ಪ್ರಸಾದ ಸಖತ್ ರುಚಿಯಾಗಿರುತ್ತಂತೆ. ಅದಕ್ಕಾಗಿ ಸಖತ್ ಕ್ಯೂ ಇರುತ್ತೆ ಅಂತ ಸ್ಥಳೀಯ ನಿವಾಸಿ ಚೈತ್ರ ರಾಜ್ ಕುಮಾರ್ ಹೇಳುತ್ತಿದ್ದರು. ಬಾಗಿಲು ಹಾಕಿದ್ದ ಆ ದೇಗುಲದ ಪಕ್ಕದಿಂದ ವೇಣುಗೋಪಾಲ ಸ್ವಾಮಿ ದೇಗುಲಕ್ಕೆ ಬಂದೆವು. ಅದು ಯಲಹಂಕದ ಅತೀ ಪುರಾತನ ದೇಗುಲ. ಇಲ್ಲಿನ ಸಂಕೀರ್ಣದ ಮಧ್ಯದಲ್ಲಿ ವೈಷ್ಣವರ ವೇಣುಗೋಪಾಲ ಸ್ವಾಮಿ ದೇಗುಲವಿದ್ದರೆ, ಪಕ್ಕದಲ್ಲೇ ವಿಶ್ವನಾಥನ ಗುಡಿಯಿದೆ.  ಈ ವಿಶ್ವನಾಥನ ಗುಡಿಯೂ ಪುರಾತನವಾಗಿದ್ದು ೧೦-೦೩-೧೯೮೯ರಲ್ಲಿ ಜೀರ್ಣೋದ್ದಾರಗೊಂಡಿತು ಎಂಬುದನ್ನು ಇಲ್ಲಿರೋ ಫಲಕವೊಂದು ತಿಳಿಸುತ್ತದೆ. ಇಲ್ಲಿರುವ ಚಪ್ಪೆರಾಯ, ವಿಷ್ಣುವಿನ ಮತ್ಯಾವತಾರ ಮುಂತಾದ ಕೆತ್ತನೆಗಳನ್ನು ಹೊಂದಿರೋ ಕಂಬ, ಜಯ, ವಿಜಯರಿರಬಹುದೇನೋ ಎನ್ನಿಸೋ ದ್ವಾರಪಾಲಕರು ಮುಂತಾದ ಸಂರಕ್ಷಿಸಲೇ ಬೇಕಾದ ಸ್ಮಾರಕಗಳಿದ್ದರೂ ಈ ದೇಗುಲಕ್ಕೆ ಸಂರಕ್ಷಿತ ಸ್ಮಾರಕದ ಸ್ಥಾನಮಾನ ಸಿಕ್ಕಿಲ್ಲದಿರೋದು ಆಶ್ಚರ್ಯಕರ. ಅಲ್ಲಿಂದ ವಾಪಾಸ್ ಬರುತ್ತಾ ಬೆಸ್ತರ ಬೀದಿಯಲಿರೋ ಸತ್ಯನಾರಾಯಣ ಸ್ವಾಮಿ ದೇವಸ್ಥಾನ, ಮುಂದೆ ಬಂದಾಗ ಸಿಗೋ ಗಣೇಶ ದೇವಸ್ಥಾನಗಳನ್ನು ನೋಡಿದೆವು. ಅಲ್ಲಿಂದ ಹಾಗೇ ಮುಂದೆ ಬಂದು ಪಾಂಡುರಂಗನ ಗುಡಿಯ ಪಕ್ಕದಲ್ಲಿರುವ ಶನೈಶ್ಚರನ ಗುಡಿಯ ಬಳಿ ಬರುವಾಗ ಹಿಂದಿನಿಂದ ಆರತಿಯ ಪಲ್ಲಕ್ಕಿಯೊಂದು ಬರೋದು ಖಂಡಿತು. ಈ ಆಚರಣೆ ಸಾಮಾನ್ಯ ಎರಡನೇ ದಿನ ಇರುತ್ತೆ ಅಂತ ರಾಜ್ ಕುಮಾರ್ ಹೇಳ್ತಿದ್ರು. ಹಾಗೇ ಮುಂದೆ ಬಂದ ಆರತಿಯವರು ತಲೆಯ ಮೇಲೆ ಹಿಡಿದಿದ್ದ ವಿಭೂತಿಯಂತಹ ಗಂಟಿನೊಂದಿಗೆ ಪಲ್ಲಕ್ಕಿಯೊಂದಕ್ಕೆ ಮೂರು ಸಲ ಪ್ರದಕ್ಷಿಣೆ ಹಾಕಿ ಶನಿದೇಗುಲ ಹೊಕ್ಕರು.  ಇಲ್ಲಿ ಆರತಿಯೇ ಬರಲಿ, ಪಲ್ಲಕ್ಕಿಯ ಬಳಿ ಉತ್ಸವ ಮೂರ್ತಿಯೇ ಬರಲಿ, ಅದಕ್ಕೆ ತಮಟೆಯ ಮುಮ್ಮೇಳವಿಲ್ಲದೇ ಇಲ್ಲ. ಕರಗ ಹೊರಬರುವಾಗ, ಉತ್ಸವ ಮೂರ್ತಿ ಹೊರಬರುವಾಗ ಅದಕ್ಕೆ ಕಹಳೆಗಳ ಸಾತೂ ಇರುತ್ತೆ. ಹಾಗೆಯೇ ಮುಂದೆ ಬಂದಾಗ ಸಿಕ್ಕಿದ್ದು ಪ್ಲೇಗಮ್ಮ ದೇಗುಲ. ಹಿಂದೆಲ್ಲಾ ಪ್ಲೇಗು ಬಂದರೆ ಊರಿಗೆ ಊರೇ ನಾಶವಾಗಿ ಹೋಗುತ್ತಿತ್ತಂತೆ. ಅಂತಹ ಭಯಂಕರ ಸಮಯದಲ್ಲಿ ಊರನ್ನು ರಕ್ಷಿಸಿದ ದೇವಿಗೆ ಕಟ್ಟಿಸಿದ ದೇಗುಲವಿರಬೇಕಿದು. ಇಲ್ಲಿ ಪ್ಲೇಗಮ್ಮನಲ್ಲದೇ ಮುನೇಶ್ವರ ಮುಂತಾದ ದೇವತೆಗಳ ವಿಗ್ರಹಗಳೂ ಇದೆ. ಅಲ್ಲಿ ಉತ್ಸವ ಮೂರ್ತಿ ಹೊರಡೋಕೆ ಸಿದ್ದವಾಗಿತ್ತು ನಾವು ಹೋಗೋ ಹೊತ್ತಿಗೆ. ಆ ತಮಟೆ, ಕಹಳೆಗಳ ಸಂಭ್ರಮ ನೋಡುತ್ತಾ ಮನೆ ಹಾದಿ ಹಿಡಿದೆವು.

ಕರಗದ ಸುತ್ತಮುತ್ತಲ ಕತೆಗಳು:
ಪೇಟೆಬೀದಿಗಳನ್ನೆಲ್ಲಾ ಸುತ್ತಿ, ದೇಗುಲ ದರ್ಶನ ಮುಗಿಸಿ ಮನೆಗೆ ಬರೋ ಹೊತ್ತಿಗೆ ಹನ್ನೊಂದೂವರೆಯಾಗಿತ್ತು. ಇನ್ನೊಂದು ಘಂಟೆಯ ಕಾಲಕ್ಕೆ ಮನೆಗೆ ಬರೋ ಬದಲು ಅಲ್ಲೇ ಇರಬಹುದಿತ್ತೇನೋ. ಆದರೆ ಇರೋದಾದ್ರೂ ಎಲ್ಲಿ ? ಪೇಟೆಯಲ್ಲೆಲ್ಲಾ ಎಲ್ಲಿ ನಿಂತರೂ ಹಿಂದೋ, ಮುಂದೋ ತಳ್ಳೋ ಜನ. ತಿರು ತಿರುಗಿ ನೋಯುತ್ತಿದ್ದ ಕಾಲುಗಳು ಬೇರೆ. ಮನೆಗೆ ಬಂದು ಒಂದಿಷ್ಟು ನೀರು ಕುಡಿದು ಸುಧಾರಿಸಿಕೊಳ್ಳೋಣ ಅಂತ ಕೂತಾಗ ಚೈತ್ರ ರಾಜ್ಕುಮಾರ್ (ರಾಜಕುಮಾರರ ಶ್ರೀಮತಿ) ಕರಗದ ಕತೆ ಹೇಳೋಕೆ ಶುರು ಮಾಡಿದ್ರು. ಮುಂಚೆಯೆಲ್ಲಾ ಬೆಂಗಳೂರಿನ ಕರಗ ಮತ್ತು ಇಲ್ಲಿನ ಕರಗಗಳು ಸರಿ ಸುಮಾರು ಒಂದೇ ಸಮಯಕ್ಕೆ ನಡೆಯುತ್ತಿದ್ದವಂತೆ. ಅಲ್ಲಿ ಕರಗ ನಡೆಸೋರು ಇಲ್ಲಿ ಬಂದು, ಇಲ್ಲಿನವರು ಅಲ್ಲಿ ಹೋಗಿ ಮಾಡುತ್ತಿದ್ದರಂತೆ. ಕಾಲಕ್ರಮೇಣ ಕೆಲ ಮನಸ್ತಾಪಗಳಿಂದ ಅಲ್ಲಿನವರೇ ಬೇರೆ, ಇಲ್ಲಿನವರೇ ಬೇರೆಯದಾಗಿ ಕರಗ ನಡೆಸೋಕೆ ಶುರು ಮಾಡಿದರಂತೆ. ಈಗಿನ ಕರಗ ನಡೆಸೋರಿಗಿಂತ ಮುಂಚೆ ಕರಗ ಕೃಷ್ಣಪ್ಪ ಅಂತಲೇ ಪ್ರಸಿದ್ದರಾದೋರೊಬ್ಬರು ಕರಗ ಹೊರುತ್ತಿದ್ದರಂತೆ. ಅವರಿಂದ ಈಗ ಕರಗ ನಡೆಸುತ್ತಿರುವವರ ಕುಟುಂಬಕ್ಕೆ ಬಂದಿದೆಯಂತೆ. ಈ ಕುಟುಂಬದವರು ಜೋಡಿ ಕುಟುಂಬದಲ್ಲೇ ಇರುವುದರಿಂದ ಒಂದೊಂದು ವರ್ಷ ಒಬ್ಬರೆಂದು ಅಣ್ಣತಮ್ಮಂದಿರು ಹೊರುತ್ತಿದ್ದಾರಂತೆ. ಅದರಲ್ಲೂ ಕರಗ ಹೊರುವ ವ್ಯಕ್ತಿಗೆ ಎಂಟತ್ತು ದಿನ ಮುತ್ತೈದೆಗೆ ಮಾಡುವ ಎಲ್ಲಾ ಶಾಸ್ತ್ರಗಳನ್ನೂ ಮಾಡಿ ಅವರ ಪತ್ನಿಯನ್ನು ಆ ಎಂಟತ್ತು ದಿನ ವಿಧವೆಯಂತೆ ಇಟ್ಟಿರುತ್ತಾರಂತೆ.ಸೂರ್ಯನ ಬೆಳಕೂ ಸೋಕದಂತೆ ಅವರನ್ನು ಇಟ್ಟಿರೋ ಆಚರಣೆಗಳ ಬಗ್ಗೆ ಬರೆದರೆ ವಿಚಿತ್ರವೆನಿಸಬಹುದೆಂದು ಅದರ ಬಗ್ಗೆ ಬರೆಯದೇ ಮುಂದುವರೆಯುತ್ತಿದ್ದೇನೆ. ಅದೇ ರೀತಿ ಕತ್ತಿ ಹಿಡಿದು ಬರುವ ತಿಗಳಾರಿ ಯುವಕ, ಮುದುಕರ ಆಯ್ಕೆಗೂ ಹಲವು ವಿಧಾನಗಳಿವೆಯಂತೆ. ಮಕ್ಕಳಿಂದ ಐವತ್ತೈದು ವರ್ಷದವರೆಗೂ ಹಿಡಿಯಬಹುದಾದ ವ್ಯಕ್ತಿಗಳ ಆಯ್ಕೆಗಾಗಿ ಅವರ ಬಾಯಿಗೆ ಸಲಾಖೆ ಚುಚ್ಚಿ, ಕೈಗೆ ಕರ್ಪೂರವಿಟ್ಟು ಪರೀಕ್ಷೆ ಮಾಡಲಾಗುತ್ತದೆಯಂತೆ. ಆ ಪರೀಕ್ಷೆಯಲ್ಲಿ ಆತ ಉತ್ತೀರ್ಣನಾದರೆ ಮಾತ್ರ ಆತನಿಗೆ ಕತ್ತಿ ಹಿಡಿಯೋ ಯೋಗ್ಯತೆ. ಆತನ ಮರಣದ ತನಕ ಆತ ಪ್ರತೀ ವರ್ಷವೂ ಕರಗಕ್ಕೆ ಕತ್ತಿ ಹಿಡಿಯಲೇ ಬೇಕು, ಮಧ್ಯದಲ್ಲಿ ಸ್ವಂತ ತಂದೆ ತಾಯಿ ಸತ್ತರೂ ಆತ ಸಂಸ್ಕಾರ ಮಾಡುವಂತಿಲ್ಲ, ಆತನ ಬದಲು ಬೇರೆಯವರೇ ಮಾಡಬೇಕು, ಆತ ಸಂಪ್ರದಾಯ ಬಿಡಬೇಕೆಂದರೆ ಮನೆಯಲ್ಲಿನ ಬೇರೊಬ್ಬ ಪುರುಷನಿಗೆ ಅದನ್ನು ವಹಿಸಬೇಕು ಅಂತೆಲ್ಲಾ ಸುಮಾರಷ್ಟು ನಿಯಮಗಳಿವೆ. ಇಷ್ಟೆಲ್ಲಾ ನಿಯಮಗಳಿದ್ದರೂ ಇಲ್ಲಿನವರಿಗೆ ಅದನ್ನೆಲ್ಲಾ ಪಾಲಿಸೋದ್ರಲ್ಲಿ ವಿಶೇಷ ಆಸ್ತೆ.ಹಾಗಾಗಿ ಏಳೆಂಟು ವರ್ಷದವರಿಂದ ಹಣ್ಣಣ್ಣು ಮುದುಕರವರೆಗೆ ಸುಮಾರಷ್ಟು ಖಡ್ಗಧಾರಿಗಳು ನಮಗೆ ಸಿಕ್ಕಿದ್ದರು. "ಓ ಧೀ, ಧೀ, ಧೀ, ಧಿಕ್ ತೆ, ಧಿಕ್ ತೆ,ಧಿಕ್ ತೆ.." ಅಂತ ಖಡ್ಗದಿಂದ ಮೈಮೇಲೆ ಹೊಡೆದುಕೊಳ್ಳೋ ಚಿಕ್ಕ ಮಕ್ಕಳನ್ನು ಕಂಡಾಗ ಮೈಜುಮ್ಮೆನ್ನುತ್ತೆ. ಅವರ ಮೈಮೇಲಿನ ಹೂವ ಹಾರಗಳು ತುಂಡಾಗಿ ಬಿದ್ದರೂ ಅವರಿಗೇನೂ ಆಗಿರುವುದಿಲ್ಲ ! ಅವರಿಗೆಂದೇ ೨೦-೨೫ ದಿನ ಪಾಲಿಸಬೇಕಾದ ನಿಯಮಗಳನ್ನು ಪಾಲಿಸಿದರೆ ಏನೂ ಆಗೋದಿಲ್ಲ. ಇಲ್ಲವೆಂದರೆ ಮೈಮೇಲೆ ಕತ್ತಿಯ ಕಚ್ಚು ಬಿದ್ದು ಆಸ್ಪತ್ರೆಗೆ ಸೇರಿಸಿದ ಉದಾಹರಣೆಗಳೂ ಇದೆ ಅಂತ ಚೈತ್ರ ಹೇಳಿದ್ದನ್ನು ಕೇಳುತ್ತಾ ಈ ಖಡ್ಗಧಾರಿಗಳನ್ನು ನೋಡುತ್ತಿದ್ದರೆ ಒಮ್ಮೊಮ್ಮೆ ಭಯ, ರೋಮಾಂಚನ ಎರಡೂ ಆಗುತ್ತೆ. ಜನರನ್ನೆಲ್ಲಾ ದೂರ ಸರಿಸಿ ಇವರು ಎಚ್ಚರಿಕೆ ವಹಿಸಿದರೂ ಸುತ್ತಲಿದ್ದ ನಮಗೆ ಹೆದರಿಕೆ, ಎಲ್ಲಾದ್ರೂ ಖಡ್ಗ ಕೈತಪ್ಪಿ ಬಂದರೆ ಅಂತ !

ಅಂತೂ ಕರಗದ ದರ್ಶನವಾದಾಗ:
ಹನ್ನೆರಡೂವರೆಗೆ ಹೊರಬರಬೇಕಾದ ಕರಗ ಹೊರಬಂದು ರಥಬೀದಿಗೆ ಬರೋ ಹೊತ್ತಿಗೆ ೧:೫೦ ಆಗ್ತಾ ಬಂದಿತ್ತು.ಅದರ ಫೋಟೋ ತೆಗೆಯಬೇಕು, ವಿಡಿಯೋ ಮಾಡಬೇಕು ಅಂತ ಅಂದ್ಕೊಳ್ಳೋದೆಲ್ಲ್ ಅಂದುಕೊಳ್ಳುವಿಕೆ ಅಷ್ಟೆ. ಬರ್ತಿದ್ದ ಹಾಗೇ ಮೇಲಿನ ಕಟ್ಟಡಗಳ ಮೇಲಿದ್ದೋರು ಪುಷ್ಪವೃಷ್ಠಿ ಶುರು ಮಾಡ್ತಾರೆ. ಎಷ್ಟೇ ಪೋಲೀಸರಿದ್ರೂ , ಮೂಲೆಯಲ್ಲಿದ್ದವರನ್ನೂ ಜನ ಇನ್ನಷ್ಟು ಮೂಲೆಗೆ ತಳ್ತಾರೆ. ಬೆಂಗಳೂರು ಕರಗದಲ್ಲಿ ಕರಗಧಾರಿಯ ಸುತ್ತ ಫೋಟೋ ತೆಗೆಯೋರೇ ತುಂಬಿದ್ರೂ ಇಲ್ಲೊಂದಿಷ್ಟು ಜನ ವಿಡಿಯೋ ತೆಗಿಬೇಡಿ ಅಂತ ಕೂಗ್ತಿದ್ರು. ಬೆಳಗ್ಗೆ ನಾವಿದ್ದ ಬೀದಿಗೆ ಬಂದಾಗ್ಲೂ ಅದೇ ತರವಾಯ್ತು. ಹಾಗಾಗಿ ಕಣ್ತುಂಬಾ ನೋಡಲಾಯ್ತಾದ್ರೂ ಫೋಟೋಗೆ ಸಿಕ್ಕಿದ್ದು ಬ್ಲರ್ ಫೋಟೋಗಳೇ. ಒಂದೆರಡು ನಿಮಿಷದ ಅವಧಿಯಲ್ಲಿ ಘಟಿಸಿಹೋಗೋ ಈ ದೃಶ್ಯಾವಳಿಗಳಿಂದ ಚೇತರಿಸಿಕೊಳ್ಳೋ ಹೊತ್ತಿಗೆ ಕರಗ ಒಂದು ಪ್ರದಕ್ಶಿಣೆ ಮುಗಿಸಿ ಮತ್ತೊಂದು ಸುತ್ತು ಬಂದಿರುತ್ತೆ. ಮಧ್ಯ ಮಧ್ಯ ನೃತ್ಯವನ್ನೂ ಮಾಡೋ ಕರಗಧಾರಿಯ ನೃತ್ಯಕ್ಕೆ ನೆರೆದಿದ್ದವರ ಅಭಿಮಾನದ ಶಿಳ್ಳೆಗಳು ಮುಗಿಲುಮುಟ್ಟುತ್ತೆ. ಮೂರು ಬಾರಿ ಕರಗದವರ ದರ್ಶನವಾದ ನಂತರ ನಾವು ಮನೆಯತ್ತ ಹೊರಟೆವು. ಘಂಟೆ ಎರಡಾಗ್ತಾ ಬಂದು, ಮಾರನೆಯ ದಿನ ಆಫೀಸಿಗೆ ಹೋಗೋ ನಿರೀಕ್ಷೆಯಲ್ಲಿದ್ದರೂ ಅಲ್ಲಿದ್ದ ಜನ ಜಾತ್ರೆ ಹಾಗೇ ಇತ್ತು. ಮೊದಲಿಗಿಂತ ಕೊಂಚ ಕಮ್ಮಿಯಾಗಿದ್ದರೂ ಪೂರ್ತಿಯಾಗೇನೂ ಕರಗಿರಲಿಲ್ಲ.

ಕರಗದ ಪುರ ಸಂಚಾರ:

ರಥಬೀದಿಯಲ್ಲಿ ಮೂರು ಪ್ರದಕ್ಷಿಣೆ ಹಾಕಿದ ಕರಗ ನಂತರದಲ್ಲಿ ನಗರದ ಬೀದಿಗಳಲ್ಲಿ ಪ್ರದಕ್ಷಿಣೆ ಹಾಕುತ್ತದೆ. ನಾವಿದ್ದ ಬೀದಿಗೆ ಮೂರೂವರೆಗೆ ಬರುತ್ತೆ ಅಂದಿದ್ದರು. ಸರಿ, ಬಂದಾಗ ಎಬ್ಬಿಸಿ ಅಂತ ನಾವು ಮಲಗಿದ್ವಿ. ಅದು ಬರುವ ಹೊತ್ತಿಗೆ ಘಂಟೆ ಐದಾಗಿತ್ತು. ಗಾಢ ನಿದ್ರೆಯಲ್ಲಿದ್ದ ನಮಗೆ ಮನೆಯವರು ಬಾಗಿಲು ಬಡಿದಾಗಲೇ ಎಚ್ಚರ. ತಕ್ಷಣ ಎದ್ದು ಮುಖ ತೊಳೆದು ಹೋಗುವ ಹೊತ್ತಿಗೆ ಕರಗ ಮುಂದಿನ ಬೀದಿಯಿಂದ ನಮ್ಮ ಬೀದಿಯ ಕಡೆಗೆ ಬರುತ್ತಾ ಇತ್ತು. ಮೊದಲೇ ಲೇಟಾಗಿದ್ದ ಕಾರಣ ಈ ಬಾರಿ ಗಡಿಬಿಡಿಯಿಂದ ಹೊರಟಿದ್ದರಂತೆ. ಹಾಗಾಗಿ ಆರತಿ ಮಾಡೋಕಾಗಲಿ ಅಥವಾ ಕಣ್ತುಂಬಿಕೊಳ್ಳೋಕಾಗಲಿ ಅವಕಾಶವಿರಲಿಲ್ಲ. ಬರುತ್ತಿದ್ದ ಹಾಗೆಯೇ ಹೊರಟು ಹೋದ ಕರಗವನ್ನು ಕಣ್ತುಂಬಿಕೊಳ್ಳೋಕೆ ನಮಗೆ ಹತ್ತು ಹದಿನೈದು ಸೆಕೆಂಡುಗಳ ಅವಕಾಶವಿದ್ದಿರಬಹುದಷ್ಟೇ.ಅದರಲ್ಲೂ ಕ್ಯಾಮೆರಾ ಕಂಡೊಡನೆಯೇ ವಿಡಿಯೋ ಮಾಡುವಂತಿಲ್ಲವೆಂದ ಖಡ್ಗಧಾರಿಗಳ ಮಾತು ಕೇಳಿದ ನಾನು ಕ್ಯಾಮೆರಾ ಬದಿಗಿಟ್ಟು ಅಲ್ಲಿನ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳುವುದರಲ್ಲಿ ಮಗ್ನನಾಗಿದ್ದರಿಂದ ಕರಗದ ಮತ್ಯಾವ ಕ್ಲೋಸಪ್ ದೃಶ್ಯಗಳೂ ದಕ್ಕಲಿಲ್ಲ. ಮತ್ತೆ ಮೈಮರೆತು ಹತ್ತಿದ ನಿದ್ದೆಗೆ ಎಚ್ಚರಾಗಿದ್ದು ಬೆಳಗ್ಗೆ ಎಂಟಕ್ಕೇ. ಅಲ್ಲಿಯವರೆಗೆ ಅಮ್ಮ ಎರಡೆರಡು ಸಲ ಫೋನ್ ಮಾಡಿದ್ದೂ ಗೊತ್ತಿಲ್ಲ. ನಂತರ ಎದ್ದು ರೆಡಿಯಾಗಿ ರಾಜ್ ಕುಮಾರರ ಅತ್ತೆ ಮಾಡಿಕೊಟ್ಟ ಸಖತ್ ಉಪ್ಪಿಟ್ಟು ತಿಂದು ಆಫೀಸಿಗೆ ಹೊರಟ್ವಿ. ಅದು ಕಳೆದು ಈಗ ಮತ್ತೊಂದು ವೀಕೆಂಡ್ ಬಂದ್ರೂ ಅವರ ಮನೆ, ಅತ್ತೆ ಮಾವ, ಅಪ್ಪ, ಅಂದೇ ಹುಟ್ಟು ಹಬ್ಬವಿದ್ದ ಪುಟಾಣಿ ರೋಹನ್ ಕೃಷ್ಣ ಮತ್ತು ಉಳಿದ ಪುಟಾಣಿಗಳು, ತುಂಬಿದ ಸಂಸಾರ, ಅದ್ಭುತ ಕರಗ ಆಚರಣೆಗಳು ಮತ್ತು ಅದರ ಸುತ್ತಣ ಕತೆಗಳು ಈಗಷ್ಟೇ ಕಂಡು, ಕೇಳಿದಂತಿದೆ, ಕಣ್ಣೆದುರು ಹಾಯುವಂತಿದೆ. ಮತ್ತೊಂದು ಇಂತದ್ದೇ ಆಚರಣೆಯಲ್ಲಿ ಭೇಟಿಯೋಗೋ ನಿರೀಕ್ಷೆಯಲ್ಲಿ, ಅದ್ಭುತ ನೆನಪುಗಳಿಗೆ ಆಸರೆಯಾದ ರಾಜ್ ಕುಮಾರ್ ಮತ್ತು ಅವರ ಅತ್ತೆಯವರ ಮನೆಯವರಿಗೆ ಕೃತಜ್ಞತೆ ತಿಳಿಸುತ್ತಾ ಸದ್ಯಕ್ಕೊಂದು ವಿರಾಮ.

Thursday, May 11, 2017

ಟಾಪ್ ಸ್ಟೇಷನ್ ಟ್ರೆಕ್

View of Kurangani hill range from Munthal
ಬೋಧಿನಾಯಕ್ಕನೂರಿನಿಂದ ೧೬ ಕಿ.ಮೀ ಇರೋ ಕುರಂಗನಿ ಎಂಬ ಊರಿಗೆ ಬರಲು ಮುಂತಾಲ್(munthal) ಮುಂತಾದ ಹಳ್ಳಿಗಳನ್ನು ದಾಟಿ ಬರುವಷ್ಟರಲ್ಲಿ ೭:೫೦ ಆಗಿತ್ತು. ಕುರಂಗನಿಯ ಶುರುವಾತಿನಲ್ಲೇ ನಮಗೊಂದು ಅಚ್ಚರಿ ಮತ್ತು ಬೇಸರ ಕಾದಿತ್ತು. ಅಲ್ಲಿ ಸಿಕ್ಕ ಸತೀಷ್ ಎಂಬಾತ ೧೫೦೦ ಕೊಟ್ಟರೆ ತಾನೇ ಗೈಡುಗಳನ್ನು ಕೊಟ್ಟು ಕ್ಯಾಂಪ್ ಹಾಕಲೂ ವ್ಯವಸ್ಥೆ ಮಾಡುತ್ತೇನೆ ಎಂದ. ಇಲ್ಲೇ ಟೆಂಟುಗಳು ಸಿಗುತ್ತೆ ಅಂತ ಗೊತ್ತಿದ್ದರೆ ಮೊದಲನೆ ದಿನವೇ ಇಲ್ಲಿಗೆ ಬರಬಹುದಾಗಿತ್ತು ! ಅಲ್ಲೇ ಮುಂದೆ ಬಂದಾಗ ಫ್ರೆಷ್ ಆಗಲೂ ಜಾಗವಿತ್ತು. ನಮಗೆ ಟೆಂಟ್ ಬೇಡ ಗೈಡ್ ಮಾತ್ರ ಬೇಕು ಅಂತ ಏಳು ಜನರಿದ್ದರೂ  ೧೦೦೦ ಕೊಟ್ಟು  ಶಿವ ಅನ್ನೋ ಗೈಡನ್ನು ತಗೊಂಡು ಮುನ್ನಡೆದೆವು. ಅಲ್ಲಿಂದ ಸುತ್ತುಬಳಸು ರಸ್ತೆಯಲ್ಲಿ ಸುಮಾರು ಒಂದು ಕಿ.ಮೀ ಸಾಗಿದರೆ ಕುರಂಗನಿಯಿಂದ ಟಾಪ್ ಸ್ಟೇಷನ್ನಿಗೆ ಸಾಗೋ ದಾರಿ, ಅದಕ್ಕಾಗಿ ಟಿಕೇಟ್ ತಗೊಳ್ಳೋ ಕೌಂಟರ್ ಸಿಗುತ್ತೆ.
Entry ticket details for Top station trek
 ನಾವು ಅಲ್ಲಿ ಬೆಳಗ್ಗಿನ ೮:೨೦ ಕ್ಕೇ ಬಂದಿದ್ದರಿಂದ ಅಲ್ಯಾರೂ ಇರಲಿಲ್ಲ. ಅವರೆಲ್ಲಾ ೯:೦೦ ಕ್ಕೆ ಬರುತ್ತಾರೆ , ನೀವು ಬರುವ ವೇಳೆ ಟಿಕೇಟ್ ತಗೊಂಡಿರುತ್ತೇನೆ ಅಂತ ಅಲ್ಲಿದ ರೇಟಾದ ತಲಾ ೨೦೦ ತಗೊಂಡು , ಆ ಗೈಡಿನ ಜೊತೆ ಮಾಡಿ ಸತೀಷ ಮಾಯವಾದ.
Our Group(From Left: Balu, Pramod, Tejas, Sandesh, Varun, Nagaraj , Guide Shiva and me)

ಕೆಲವೊಂದು ಕಡೆ ಸರಿಯಾದ ಮಾರ್ಗಗಳಿಲ್ಲದಿದ್ದರೂ ಬುಡದಿಂದ ಮೇಲೊರೆಗೋ ತಪ್ಪಲೇ ಆಗದಂತಹ ಕಲ್ಲ ದಾರಿ. ಹಾಗಾಗಿ ಗೈಡಿಲ್ಲದಿದ್ದರೂ ನಾವು ಮೇಲೆ ತಲುಪುತ್ತಿದ್ದೆವೇನೋ.ಆದರೆ ಇಂತಲ್ಲಿ ನೀರಿದೆ ಅಂತ ಮಿಡಲ್ ಸ್ಟೇಷನ್ ಬರುವ ಮೊದಲೇ ಹೇಳಿ ನಮ್ಮ ಟ್ರೆಕ್ಕನ್ನು ದಡ ಸೇರಿಸಿದ್ದಕ್ಕಾಗಿ ಗೈಡನ್ನು ತಗೊಂಡಿದ್ದು ವೇಸ್ಟೇನೂ ಆಗಲಿಲ್ಲವೆಂಬ ಭಾವ ಕೊನೆಗೆ ಮೂಡುತ್ತಿತ್ತು.
Trekking trail for Top station, Middle station
ಕುಡುಕುಮಲೈಯಾ ಟಾಪ್ ಸ್ಟೇಷನ್ನಾ ?
ಕುರಂಗನಿ ಎಂಬ ಊರಿನ ಸುತ್ತಮುತ್ತ ಹಲವು ಬೆಟ್ಟಗಳಿವೆ. ಅವುಗಳಲ್ಲಿ ಮುಖ್ಯವಾದವು ಕುಡುಕುಮಲೈ ಮತ್ತು ಟಾಪ್ ಸ್ಟೇಷನ್ನುಗಳು. ಚಳಿಗಾಲ ಇವೆರಡಕ್ಕೂ ಟ್ರೆಕ್ಕಿಂಗ್ ಹೋಗೋಕೆ ಫೇಮಸ್ಸಂತೆ. ವರ್ಷವಿಡೀ ಇಲ್ಲಿಗೆ ಹೋಗಬಹುದಾದರೂ ಮಳೆಗಾಲದಲ್ಲಿ ಹೋಗೋದು ಸ್ವಲ್ಪ ಒದ್ದಾಟವೇ. ಮಳೆ, ಚಳಿಯಲ್ಲಿ ಸಿಕ್ಕಾಕಿಕೊಂಡು ಒದ್ದಾಡಿದ ಕತೆಯನ್ನ ಆಮೇಲೆ ಹೇಳ್ತೀನಿ.
Few paths/short cuts where you may get lost if you are coming  without any guide

ಕುಡುಕುಮಲೈಗೆ ೧೪ ಕಿ.ಮೀ ಟ್ರೆಕ್ ಮಾಡಿ ಅಲ್ಲೇ ಟೆಂಟ್ ಹಾಕಿ ಉಳಿಯಬೇಕಾದರೆ(ಅಷ್ಟೆಲ್ಲಾ ಟ್ರೆಕ್ ಮಾಡಿದ ಮೇಲೆ ಅಂದೇ ವಾಪಾಸ್ ಬರೋ ಮನಸ್ಸು ಇರೋಲ್ಲವಾದ್ದರಿಂದ), ಟಾಪ್ ಸ್ಟೇಷನ್ ಟ್ರೆಕ್ಕಿಗೆ ಹಲವಾರು ಆಯ್ಕೆಗಳಿವೆ. ಕೆಲವು ಬ್ಲಾಗುಗಳಲ್ಲಿ ಟಾಪ್ ಸ್ಟೇಷನ್ನಿಗೆ ೯ ಕಿ.ಮೀ ಅಂತಿದ್ದರೆ ಗೈಡ್ ೧೪ ಅಂತಿದ್ದ. ನಾವು ಮೂರೂವರೆ ಘಂಟೆಯಲ್ಲಿ ಟಾಪ್ ಸ್ಟೇಷನ್ನಿನ ತುದಿ ತಲುಪಿದ್ದರಿಂದ ಅದಕ್ಕೆ ೧೪ ಕಿ.ಮೀ ಇರಲಾರದೇನೋ,೯ ರಿಂದ ೧೪ ರ ಮಧ್ಯ ಎಷ್ಟೋ ಇರಬೇಕು ಅಂತನಿಸುತ್ತೆ. ಟಾಪ್ ಸ್ಟೇಷನ್ನಿನ ಹತ್ತಿರ ಕುರುಂಗನಿ ಊರಲ್ಲೇ ಸಿಗೋ ಟೆಂಟ್ ತಗೊಂಡು ಕ್ಯಾಂಪ್ ಮಾಡಬಹುದು. ಇಲ್ಲಾ ಟಾಪ್ ಸ್ಟೇಷನ್ನಿನ ಮೇಲಿರುವ ಲಾಡ್ಜುಗಳಲ್ಲಿ ರೂಮಿಗೆ ೧೬೦೦ ಕೊಟ್ಟು ಅಲ್ಲೇ ಉಳಿಯಬಹುದು. ೧೬೦೦ ಕೊಟ್ಟು ಅಲ್ಲೇ ಉಳಿದ ಕೆಲವು ಟ್ರೆಕ್ಕರ್ರುಗಳು ನಮಗೆ ಕೆಳಗಿಳಿಯುತ್ತಾ ಸಿಕ್ಕಿದ್ದರಿಂದ ಇವೆಲ್ಲಾ ಮಾಹಿತಿ ಸಿಕ್ಕಿದ್ದರೂ ಇವೆಲ್ಲಾ ಮುಂಚೆ ಸಿಕ್ಕಿದ್ದರೆ ಏನಾಗ್ತಿತ್ತು ಅನ್ನೋ ಬೇಸರ ಕಾಡಿತ್ತು.  ಗೈಡಿನ, ಟೆಂಟವನ, ಲಾಡ್ಜಿನವರ ನಂಬರುಗಳನ್ನೆಲ್ಲಾ ಈ ಪೋಸ್ಟಿನ ಕೊನೆಯಲ್ಲಿ ಕೊಡೋಣವೆನ್ನುತ್ತಾ ನಮ್ಮ ಟ್ರೆಕ್ಕಿಂಗಿನ ಕತೆಗೆ ವಾಪಾಸ್ಸಾಗೋಣ.

ಹಸಿರ ಕಾನನದ ಮಧ್ಯೆಯೊಂದು ಜಲಧಾರೆ
ಟಾಪ್ ಸ್ಟೇಷನ್ನಲ್ಲಿ ಹಸಿರಿರತ್ತೆ ಅಂದ್ರೂ ತೇಜಸ್ ತಮಿಳುನಾಡಿಗೆ ಬರೋಕೆ ಮೊದಲು ಮನಸ್ಸು ಮಾಡಿರಲಿಲ್ಲ. ಅಲ್ಲಿ ಸೆಖೆಗೆ ಬೆಂದೆದ್ದು ಹೋಗ್ತೀವಿ ಅನ್ನೋ ಅವನ ಮಾತು ಮೊದಲರ್ಧ ದಿನ ಮತ್ತು ಎರಡನೇ ದಿನದರ್ಧ ನಿಜವೂ ಆಗಿತ್ತೆನ್ನಿ. ಆದರೆ ಕೊನೆಗೂ ಆತ ಇಲ್ಲಿಗೆ ಬರಲೊಪ್ಪುವಂತೆ ಮಾಡಿದ್ದು ಇಲ್ಲಿನ ಹಸಿರ ಸಿರಿಯ ಚಿತ್ರಗಳೇ.  ಬೇಸ್ ಕ್ಯಾಂಪಿನಿಂದ ಸುಮಾರು ೧೫-೨೦ ನಿಮಿಷ ಸಾಗುವಷ್ಟರಲ್ಲೇ ಒಂದು ಜಲಪಾತದ ಸದ್ದು ಎದುರಾಗುತ್ತೆ.
Views of the Kurangani hills during the trek to topstation

ಜಲಪಾತದ ಬುಡಕ್ಕೆ ಸಾಗೋದು ಸಾಧ್ಯವಾಗದಿದ್ದರೂ ಜಲಪಾತವಾಗಿ ಧುಮುಕಿದ ನೀರು ನಂತರ ಮುಂದೆ ಸಾಗುವಲ್ಲಿ ಆಟವಾಡಬಹುದು.
One of the multi stepped waterfalls on the the Top station trek
ಇಲ್ಲೇ ನೀರಾಡುತ್ತಾ ನಿಂತರೆ ನಮ್ಮ ಟ್ರೆಕ್ಕಿಂಗ್ ಇವತ್ತಿಗೆ ಆಗೋಲ್ಲ. ಬರುವಾಗ ಆಡಿದರಾಯಿತು ಅಂತ ಮುಂದೆ ಸಾಗಿದೆವು. ನಿಧಾನವಾಗಿ ಮೇಲೆ ಹತ್ತುತ್ತಿದ್ದಂತೆ ವಾತಾವರಣ ತಂಪೆನಿಸುತ್ತಿತ್ತು. ಆದರೂ ಹತ್ತೋ ಶ್ರಮಕ್ಕೆ, ಅಲ್ಲಿದ್ದ ವಾತಾವರಣಕ್ಕೆ ಬೆವರ ಧಾರೆ. ತಲಾ ಎರಡೆರಡು ಬಾಟಲ್ ನೀರು ತರಲು ಹೇಳಿದ್ದು ನೆರವಾಗಿತ್ತು.
One more waterfalls on the top station trek

ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಅಲ್ಲಿ ಧುಮುಕುತ್ತಿದ್ದ ಮತ್ತೊಂದು ಜಲಪಾತ ಸಿಕ್ಕಿತು. ಕೆಲವೊಂದು ಬ್ಲಾಗುಗಳಲ್ಲಿ ಈ ಎರಡು ಜಲಪಾತಗಳಲ್ಲಿ ಒಂದನ್ನು ಹತ್ತಿ ಮೇಲಕ್ಕೆ ಸಾಗಬೇಕು ಅಂತಿದೆ. ಆದರೆ ಅಷ್ಟೆಲ್ಲಾ ರಿಸ್ಕ್ ತಗೊಳ್ಳೋ ಅನಿವಾರ್ಯತೆಯಿಲ್ಲ. ಇವುಗಳು ಕಂಡರೂ ಸ್ವಲ್ಪ ದೂರದಿಂದ ಹೊಗೋ ಸುರಕ್ಷಿತವಾದ ದಾರಿಯಿರೋದ್ರಿಂದ ನಮ್ಮ ಗೈಡ್ ದಾರಿಯಲ್ಲೇ ನಮ್ಮನ್ನು ಕೊಂಡೊಯ್ದ.


ಮಿಡಲ್ ಸ್ಟೇಷನ್:
ಸುಸ್ತಾದವರನ್ನು ಅಲ್ಲಲ್ಲಿ ಕೂರಿಸುತ್ತಾ, ಸುತ್ತ ಸಿಗುತ್ತಿದ್ದ ಹೆಸರು ಗೊತ್ತಿಲ್ಲದ ಅದೆಷ್ಟೋ ಜೀವರಾಶಿಗಳ ಸೌಂದರ್ಯವನ್ನು ಆಸ್ವಾದಿಸುತ್ತಾ  ಮುಂದೆ ಸಾಗುವ ಹೊತ್ತಿಗೆ ಇನ್ನು ಸ್ವಲ್ಪ ದೂರದಲ್ಲಿ ಮಿಡಲ್ ಸ್ಟೇಷನ್ ಬರುತ್ತೆ ಅಂದ ಗೈಡು.


One of the views during top station trek
 ೧೦ ಘಂಟೆಯ ಸುಮಾರಿಗೆ ನಾವು ಬಂದು ತಲುಪಿದ ಇಲ್ಲಿ ಒಂದು ಕಟ್ಟೆಯ ಮೇಲೆ ನಾಗರ ಕಲ್ಲುಗಳನ್ನು ಪ್ರತಿಷ್ಟಾಪಿಸಲಾಗಿದ್ದು ಪಕ್ಕದಲ್ಲೇ ಒಂದು ಸಣ್ಣ ಗುಡಿಯಿದೆ.
Naga Idols at the middle station
  ಬರೀ ಇವಿಷ್ಟೇ ಆಗಿದ್ದರೆ ಇದಕ್ಕೆ ಇಷ್ಟು ಪ್ರಾಮುಖ್ಯತೆಯಿರುತ್ತಿರಲಿಲ್ಲವೇನೋ. ಇಲ್ಲಿ ಮೇಲಿನ ನೀರ ಒರತೆಯಿಂದ ಕೆಳಗೆ ನೀರು ತರುವ ನಲ್ಲಿಯೊಂದಿದೆ. ಹಾಗಾಗಿ ಖಾಲಿಯಾದ ಬಾಟಲ್ಲುಗಳನ್ನೆಲ್ಲಾ ತುಂಬಿಸಿಕೊಳ್ಳಲು, ತಂದ ಬಿಸ್ಕೇಟು, ಹಣ್ಣುಗಳಲ್ಲಿ ಒಂದಿಷ್ಟು ತಿಂದು, ಮತ್ತೊಂದಿಷ್ಟು ಫೋಟೋ ತೆಗೆದುಕೊಳ್ಳೋಕೆ ಪ್ರಶಸ್ತವಾದ ಜಾಗವಿದು
Small temple at the middle station
A watersource at middle station
Our group resting near the watersource and temple in middle station
ಬರೀ ಗುಡಿಯಿರೋ ಜಾಗಕ್ಕೆ ಮಿಡಲ್ ಸ್ಟೇಷನ್ನೆಂಬ ಹೆಸರಲ್ಲ. ಹಾಗೇ ಮೇಲೆ ಹತ್ತಿದರೆ ಒಂದೂರೂ ಸಿಗುತ್ತೆ. ಪೋಸ್ಟಾಪೀಸಿನ ಡಬ್ಬಿಯೂ ಇರೋ ಈ ಗುಡ್ಡದ ಮೇಲಿನ ಊರಲ್ಲಿ ಅಂಗಡಿಯೂ ಒಂದಿದೆ. ಮುಂಚೆಯೇ ಬುಕ್ಕಿಂಗ್ ಮಾಡ್ಕೊಂಡ್ರೆ ಇಲ್ಲೂ ಉಳಿಯಬಹುದೇನೋ. ಆದರೆ ಉಳಿಯುವ ಹೆಚ್ಚಿನವರೆಲ್ಲಾ ಮೇಲ್ಗಣ ಸ್ಟೇಷನ್ನಿನಲ್ಲೇ ಉಳಿಯುತ್ತಾರೆ.

ಕುಡುಕು ಮಲೈಯ ಸರ್ಪದಾರಿ:
ಚಿಕ್ಕಮಗಳೂರಿಗೆ ಹೋದವರಿಗೆ ಅಲ್ಲಿನ ಟ್ರೆಕ್ಕಿಂಗಿನ ಸಮಯದಲ್ಲಿ ಸಿಕ್ಕ ಸರ್ಪದಾರಿ ನೆನಪಿರಬಹುದು. ಅಂತದ್ದೇ , ಅದಕ್ಕಿಂತಾ ಹೆಚ್ಚಿನ ತಿರುವುಗಳಿರುವ ದಾರಿಯೊಂದು ಕುಡುಕು ಮಲೈಯಲ್ಲಿದೆ. ಮಿಡಲ್ ಸ್ಟೇಷನ್ನಿನಿಂದ ಕಾಣೋ ಆ ಸರ್ಪದಾರಿಯ ದೃಶ್ಯ ಅಲ್ಲಿನ ಮೋಡ ಮುಸುಕಿದ ಬೆಟ್ಟಗಳಿಗೆ, ಹಸಿರ ಸಿರಿಗೆ ಮುಕುಟಪ್ರಾಯವಾಗಿದೆ.
Views of Kudukumalai from Middle station
Rotate left to see the Snake curves in Kudukumalai

ಮಿಡಲ್ ಸ್ಟೇಷನ್ನಿನ ಮಗಧೀರ: 
ಹತ್ತೂಕಾಲಿಗೆ ಮಿಡಲ್ ಸ್ಟೇಷನ್ನಿನ ಗುಡಿಯಿಂದ ಹೊರಟಿದ್ದ ನಾವು ಮುಂದಿನ ಕಲ್ಲ ದಾರಿ ಹಿಡಿದೆವು. ಕುರಂಗನಿಯವರೆಗೂ ಟಾರು ರಸ್ತೆಯಿದ್ದರೂ ಅಲ್ಲಿಂದ ಮಿಡಲ್ ಸ್ಟೇಷನ್ನಿಗೆ ಬರಬೇಕೆಂದರೆ ಈ ಕಲ್ಲಿನ ರಸ್ತೆಯಲ್ಲೇ ಬರಬೇಕು. ಆ ರಸ್ತೆಯಲ್ಲೇ ಟಾಪ್ ಸ್ಟೇಷನ್ನಿನಿಂದ ಕುರಂಗನಿಯವರೆಗೂ ಇಲ್ಲಿನ ಗ್ರಾಮಸ್ಥರು ಹತ್ತಿಳಿಯುತ್ತಾರಂತೆ. ಟಾಪ್ ಸ್ಟೇಷನ್ನಿಗೆ ಕೇರಳದ ಮುನ್ನಾರಿನಿಂದ ಟಾರ್ ರಸ್ತೆಯನ್ನೇ ಮಾಡಿದ್ದರೂ ಆ ಕಡೆಯಿಂದ ಬರೋಕೆ ೯೪ ಕಿ.ಮೀ ಅಂತೆ. ಅಷ್ಟೆಲ್ಲಾ ಸುತ್ತಾಡಿ ಬರೋ ಬದಲು ನಡೆಯೋದೇ ವಾಸಿ ಗುರೂ ಅಂತ ಅಲ್ಲಿನವರು ಅಂದುಕೊಂಡಿರಬೇಕು.
Views along the trekking path of Top station

one of the grasslands on the way to top station
This are the views which make you forget all other things
 ಮಿಡಲ್ ಸ್ಟೇಷನ್ನಿನಲ್ಲಿ ಒಂದು ಪೋಸ್ಟಾಪೀಸಿನ ಡಬ್ಬವಿದೆ ಅಂದಿದ್ದೆ. ಇದ್ದರೇನಂತೆ. ಇಲ್ಲಿಗೆ ಬರೋ ಪೋಸ್ಟ್ ಮ್ಯಾನ್ ಯಾರಪ್ಪ ಅಂತ ಯೋಚನೆ ಮಾಡುವಷ್ಟರಲ್ಲೇ ನಮ್ಮ ಹಿಂದಿಂದ ಕುದುರೆಯ ಖರಪುಟ ಕೇಳಿಸ್ತು. ನೋಡಿದ್ರೆ ಒಬ್ಬ ಮಗಧೀರನಂತೆ ಕುದುರೆಯೇರಿ ಬರ್ತಿದ್ದ. ಆತನ ಕೈಯಲ್ಲೊಂದಿಷ್ಟು ಗಂಟುಗಳು. ಸಾಮಾನ್ಯ ಅಂಚೆ ಬಿಡಿ, ನಾಪ್ಟಾಲಿನಂತಹ ಆನ್ ಲೈನ್ ಶಾಪಿಂಗಿನ ವಸ್ತುಗಳನ್ನೂ ಆತ ಮಿಡಲ್ ಸ್ಟೇಷನ್ನಿಗೆ ತಲುಪಿಸುತ್ತಿದ್ದ ! ಆತನಿಗೂ, ಆತನ ಕುದುರೆಗೂ ಸೈಯೆನ್ನದೇ ಇರಲಾಗಲಿಲ್ಲ. 



ಬೆಳಕ ನುಂಗೋ ಸಸ್ಯರಾಶಿಯ ಮಧ್ಯೆ:

ನಿಧಾನವಾಗಿ ಹಸಿರು ಗಾಡವಾಗತೊಡಗಿತ್ತು. ಮಧ್ಯ ಮಧ್ಯ ಬೆಟ್ಟದ ಒರಬಂದು ಸೂರ್ಯನಿಗೆ ಎದುರಾಗುತ್ತಿದ್ದರೂ ಮತ್ತೆ ಗಾಡ ಕಾಡೊಳಗೇ ಹೊಕ್ಕುತ್ತಿದ್ದವು. ಮರೆಯಾಗುತ್ತಿದ್ದ ಮಿಡಲ್ ಸ್ಟೇಷನ್ನಿನ ದೃಶ್ಯಗಳು ಊರು ಹೋಗನ್ನುತ್ತಿತ್ತು, ಕಾಡು ಬಾಯೆನ್ನುತ್ತಿತ್ತು ಅನ್ನುವ ಗಾದೆಯನ್ನು ಮತ್ತೊಂದು ತರದಲ್ಲಿ ಅರ್ಥೈಸಿತ್ತು. ಇಲ್ಲೊಂದಿಷ್ಟು ಶಾರ್ಟ್ ಕಟ್ಟುಗಳು ಸಿಕ್ಕರೂ ಗೈಡಿಲ್ಲದೇ ಹೋದರೆ ಅವುಗಳಲ್ಲಿ ಹೋಗೋ ಬದಲು ಕಲ್ಲ ರಸ್ತೆಯಲ್ಲಿ ಹೋಗೋದೇ ಮೇಲು.
One of the dense forest paths during the trek
An unknown beauty
Time for some beats and steps

ಟಾಪ್ ಸ್ಟೇಷನ್ ಬಂತಪ್ಪ:
ಗುಂಪಿನಲ್ಲಿರೋ ಅತ್ಯಂತ ಮೂರ್ಖ ವ್ಯಕ್ತಿಯೆಂದರೆ ಫೋಟೋಗ್ರಾಫರ್ ಅಂತ ಗೆಳೆಯರತ್ರ ಹೇಳುತ್ತಿದ್ದೆ.ಯಾಕಂದ್ರೆ ಫೋಟೋ ತೆಗೀತಾ ಇರೋನನ್ನ ಹಾಗೇ ಬಿಟ್ಟು ಹೋಗಿಬಿಡ್ತಾರೆ. ಬಿಟ್ಟೋದ್ರಲ್ಲ ಅಂತ ಅವರನ್ನ ಹಿಡಿಯೋಕೆ ಅಂತ ಮುಂದೆ ಮುಂದೆ ಓಡಬೇಕು. ಮತ್ತೆ ಬಿಟ್ಟೋಗದಿರಲಿ ಅಂತ ಮುಂದೆ ಸೇರ್ಕೊಳ್ಳಬೇಕು. ಮುಂದಿನಿಂದ ಮಧ್ಯವಾಗುತ್ತಾ, ಮಧ್ಯದಿಂದ ಹಿಂದಾಗುತ್ತಾ, ಗುಂಪಿನಿಂದ ಹೊರಗುಳಿಯುತ್ತಾ ಮತ್ತೆ ಓಡುತ್ತಾ ಮುಂದೆ ಬರುವಷ್ಟರಲ್ಲಿ ಇದ್ದ ಬದ್ದ ಶಕ್ತಿಯೆನ್ನೆಲ್ಲಾ ಖರ್ಚು ಮಾಡೋ ಅವನಿಗೆ ಮೂರ್ಖನೆನ್ನದೇ ಇನ್ನೇನನ್ನಬೇಕು ಎನ್ನೋ ವಿಚಾರ ಟ್ರಿಪ್ಪಿನಲ್ಲಿ ಹಲವು ಬಾರಿ ನಿಜವಾಗಿತ್ತು. ಗೊತ್ತಿಲ್ಲದ ಸಸ್ಯಗಳ ಒಂದು ಫೋಟೋನೂ ತಗೊಂಡು ಬಂದಿಲ್ಲ ಅಂದ್ರೆ ಹೇಗೆ ಅನ್ನೋ ವಿಚಾರದಲ್ಲಿ, ಪ್ರಮೋದ ಅಥವಾ ವರುಣ ಹಾಕುತ್ತಿದ್ದ ಹಾಡುಗಳಿಗೆ ತಲೆದೂಗುತ್ತಾ, ಕೆಲವು ಕಡೆ ಸ್ಟೆಪ್ಪಾಕುತ್ತಾ ಬರುವಷ್ಟರಲ್ಲಿ ಮತ್ತೊಂದಿಷ್ಟು ಮನೆಗಳು ಕಾಣತೊಡಗಿದ್ವು. ಅಲ್ಲಿ ಮೇಲೆ ಕಾಣ್ತಿದೆಯಲ್ಲ, ಅದೇ ಟಾಪ್ ಸ್ಟೇಷನ್ನು ಅಂದ ಗೈಡು. ಮನೆಯೆಂದರೆ ಅವೆಲ್ಲಾ ಮನೆ ಕಂ ಕಾಟೇಜು ಕಂ ರೆಸಾರ್ಟುಗಳು . ಒಂದು ಕಾಟೇಜಲ್ಲಿ ಕೆಟ್ಟ ಜೀಪೊಂದು ನಿಂತಿತ್ತು.
A jungle resort marking our arrival to top station !
ಇಲ್ಲಿ ಜೀಪು ಹೇಗೆ ಬರೋಕೆ ಸಾಧ್ಯವೆನ್ನುವಷ್ಟರಲ್ಲಿ ಗೈಡು ಕೇರಳದ ಕಡೆಯಿಂದ ಬರೋ ಟಾರ್ ರಸ್ತೆ ತೋರಿಸಿದ ! ಮೇಲೆ ಹೋದಾಗ ಆರಾಮಾಗಿ ಟಿಟಿಯಲ್ಲೋ, ಕಾರಲ್ಲೋ ಬಂದು ಒಂದೂ ಬೆವರ ಹನಿಯಿಲ್ಲದೆ ಅಲ್ಲಿನ ಬೆಟ್ಟಗಳೆದುರು ಪೋಸ್ ಕೊಡುತ್ತಿದ್ದ ಲಲನೆಯರು ಕಂಡಾಗ ಇಷ್ಟೇನಾ ಟಾಪ್ ಸ್ಟೇಷನ್ ಅನಿಸಿಬಿಡ್ತೊಂದು ಸಲ.
View of top station view point from the bottom villages
ಹೊಟ್ಟೆ ಉರಿಸೋಕೆ ಅಂತ ಅಲ್ಲಿ ಲಾಡ್ಜೂ ಇತ್ತು. ಆದರೆ ಸುಲಿಗೆಯ ಪರಮಾವಧಿಯೆನಿಸಿದ್ದ ಅಲ್ಲಿ ಟಾಯ್ಲೇಟಿಗೂ ೧೦ ರೂ ಅಂತ ಬೋರ್ಡಿತ್ತು :-) ಎಂಟೂವರೆ ಸುಮಾರಿಗೆ ಟ್ರೆಕ್ ಶುರುಮಾಡಿದ್ದ ನಾವು ಹನ್ನೆರಡರ ಹೊತ್ತಿಗೆ ಟಾಪ್ ಸ್ಟೇಷನ್ನಿನಲ್ಲಿದ ಚರ್ಚು ಮತ್ತು ಅಭಿ ಹೋಟೇಲ್ ಎದುರಲ್ಲಿದ್ವಿ. ಸಾಮಾನ್ಯವಾಗಿ ನಾಲ್ಕರಿಂದ ಐದು ಘಂಟೆಯ ಹಾದಿ ಅಂತ ಗೈಡ್ ಹೇಳಿದ್ದ ಹಾದಿಯನ್ನ ಮೂರೂವರೆ ಘಂಟೆಯಲ್ಲಿ ಕ್ರಮಿಸಿದ್ವಿ ನಾವು. ಹಿಂಗೆ ಅಂತ ಗೊತ್ತಿದ್ರೆ ಮೊದಲನೇ ದಿನವೇ ಬಂದುಬಿಡಬಹುದಿತ್ತಲ್ಲ ಅನ್ನೋ ಭಾವ ಮತ್ತೆ ಕಾಡಿತು.

Lodges and Restaurant at top station


ಟಾಪ್ ಸ್ಟೇಷನ್ನಿನ ವೀವ್ ಪಾಯಿಂಟು ಮತ್ತು ಸುರಂಗದ ಹಾದಿ: 
ಇಲ್ಲಿ ತಲಾ ೧೦ ರೂ ಕೊಟ್ಟು ನೋಡುವಂತಹ ವೀವ್ ಪಾಯಿಂಟೊಂದಿದೆ. ಅದಕ್ಕೆ ಸಾಗೋ ಮೊದಲು ಒಂದಿಷ್ಟು ಅಂಗಡಿಗಳ ಸಾಲು. ಇಲ್ಲಿ ನೀರು ಸಿಗುತ್ತೆ ಅಂತ ಗೈಡ್ ಹೇಳಿದ್ದು ಬಾಟಲಿಯಲ್ಲಿ ಕೊಳ್ಳಬೇಕಾದ ನೀರು. ಇಲ್ಲಿ ಮಾವಿನಹಣ್ಣು, ಜೋಳಗಳೆಲ್ಲಾ ಇದ್ದರೂ ನಾವು ತಂದಿದ್ದ ಇಡ್ಲಿ, ಸಾಂಬಾರ್, ಚಟ್ನಿಗಳು ಒಂದಿಷ್ಟು ಹೊಟ್ಟೆಗೆ ನೆರವಾದವು
Top station view point
TATA property at TOP station . Path leading to view point resides here !. Proud to be part of the family
Top station streets. Tejas and Bala are in some discussion ;-)
Top station plantations
Ya. Its the view from top station viewpoint !
One more view from the view point
Time for a group pic at top station
ವೀವ್ ಪಾಯಿಂಟಿಗೆ ಹತ್ತಿ ಅಲ್ಲೊಂದಿಷ್ಟು ಫೋಟೋ ತೆಗೆದು, ಅಲ್ಲಿಂದ ಕೆಳಗಿದ್ದ ಸುರಂಗಕ್ಕೆ ಹೋಗೋದಿನ್ನೇನು ಅಂತ ವಾಪಾಸ್ಸಾದ್ವಿ. 
Time to say goodbye to Abi cafe and Top station church
ಘೋರ ಮಳೆಯಲ್ಲಿ, ಮಿಡಲ್ ಸ್ಟೇಷನ್ ಮಧ್ಯದಲ್ಲಿ
ಟಾಪ್ ಸ್ಟೇಷನ್ನಿನ ಮೇಲಿನ ದೃಶ್ಯಗಳಿಗಿಂತ ಹತ್ತೋ ದಾರಿಯೇ ಸುಂದರವೆನ್ನುತ್ತಾ ಒಂದೂಕಾಲಿಗೆ ಅಲ್ಲಿಂದ ಇಳಿಯೋಕೆ ಶುರು ಮಾಡಿದ್ವಿ. ಬೇಗ ಬೇಗ ಇಳಿದ್ರೆ ಜಲಪಾತಕ್ಕೆ ಹೋಗಬಹುದು. ಇಲ್ಲದಿದ್ದರೆ ಇಲ್ಲ ಅಂತ ಹೇಳಿದ್ದರಿಂದ ,ಬೇಗ ಇಳಿದರೆ ಬೆಂಗಳೂರಿಗೆ ಬೇಗ ಹೊರಡಬಹುದೆನ್ನುವ ಐಡಿಯಾದಿಂದ ನಾವೆಲ್ಲಾ ಬೇಗ ಬೇಗ ಇಳಿಯೋಕೆ ಶುರು ಮಾಡಿದ್ವಿ. ಆದರೂ ಮಧ್ಯ ಪ್ರಮೋದನಿಗೆ ಕಾಲು ನೋವು ಶುರುವಾದ್ದರಿಂದ ಇಳಿಯೋದು ಸ್ವಲ್ಪ ನಿಧಾನವಾಯ್ತು. ಬಾಲುವಿನ ಪುರಾಣಗಳು ಬೇರೆ.ಇನ್ನೇನು ಮಿಡಲ್ ಸ್ಟೇಷನ್ ತಲುಪೇ ಬಿಟ್ಟೆವು ಅನ್ನುವ ಹೊತ್ತಿಗೆ ಮಳೆ ಹನಿಯಲು ಶುರುವಾಯ್ತು ನೋಡಿ. ಮೊದಲು ಹಗುರವಾಗಿದ್ದ ಮಳೆ, ಇದ್ದಕ್ಕಿದ್ದಂತೆ ಧಾರಾಕಾರವಾಯ್ತು. ಹಿಂದುಳಿದಿದ್ದವರು, ಹಿಂದೇ ಇದ್ದರು. ಬಿಟ್ಟು ಹೋಗೋದೇನು ಅಂತ ಅಲ್ಲೇ ಇದ್ದ ಅಂಗಡಿಯೊಂದರ ಛಾವಣಿಯಲ್ಲಿ ಕೂತೆವು. ಪ್ರಮೋದ್, ಬಾಲು, ಸಂದೇಶ್ ಗಾಗಿ ಕಾಯ್ತಾ ಕಾಯ್ತಾ ಸಮಯ ಐದಾಯ್ತು, ಹತ್ತಾಯ್ತು. ಅವರ ಸುಳಿವಿಲ್ಲ. ವಾಪಾಸ್ ಹೋಗಿ ನೋಡೋಣವೆಂದರೆ ವಿಪರೀತ ಮಳೆ. ಬರೀ ಮಳೆಯಷ್ಟೇ ಆಗಿದ್ರೆ ಪರವಾಗಿರಲಿಲ್ಲ. ಮರಗಳನ್ನೇ ಬಗ್ಗಿಸುವಷ್ಟು ಜೋರಾದ ಗಾಳಿ. ಗುಡುಗು, ಸಿಡಿಲು. ಈ ಮಳೆಗೆ ಮುಂದೆ ಬರಲಾರದೇ ಯಾವುದೋ ಮನೆಯ ಬಳಿ ನಿಂತಿರಬೇಕು ಅಂದ್ಕೊಂಡ್ವಿ. ಸುಮಾರು ಇಪ್ಪತ್ತು ನಿಮಿಷವಾದ ಮೇಲೆ ಅವರೇ ಆ ಮಳೆಯಲ್ಲಿ ಬಂದ್ರು. ಎಲ್ಲಾ ಬಂದ್ರು ಅಂತ ಮುಂದೆ ಹೊರಡೋಕಾಗುತ್ತಾ ? ಗೈಡಿಗೆ ಕೇಳಿದ್ರೆ ದಿನಾ ಈ ತರದ ಮಳೆ ಬರ್ತಿದೆ ಈಗ ಅಂತಿದ್ದಾನೆ. ಎಷ್ಟೊತ್ತು ಸುರಿಯುತ್ತೆ ಅಂದ್ರೆ ಸಂಜೆಯಾಗಬಹುದು, ರಾತ್ರಿಯೂ ಆಗಬಹುದು ಅಂತಿದ್ದ ಅವ ! ಅದೃಷ್ಟದ ಪರೀಕ್ಷೆ ಅಂತ ಇನ್ನೊಂದು ಸ್ವಲ್ಪ ಹೊತ್ತು ಇಲ್ಲಿ ಕಾಯಲೇಬೇಕು ಅಂದುಕೊಳ್ಳುತ್ತಾ ಅಂಗಡಿಯಲ್ಲಿ ಬೆಚ್ಚಗೆ ಏನಾದ್ರೂ ಸಿಗಬಹುದಾ ಅಂತ ಕಣ್ಣಾಡಿಸತೊಡಗಿದೆವು. ಅಂಗಡಿಯ ಎದುರೇ ಟೈಗರ್ ಬ್ರಾಂಡಿನ ಪುನರ್ಪುಳಿ(ಕೋಕಂ) ಜ್ಯೂಸಿನ ಮಿಕ್ಸಿತ್ತು. ಆದರೆ ಈ ಚಳಿಯಲ್ಲಿ ಪುನರ್ಪುಳಿ ಕುಡಿಯೋರ್ಯಾರು ? ! ಟೀ ಸಿಗುತ್ತಾ ಅಂದರು ಕೆಲವರು.ಅಂಗಡಿಯಾಂಟಿ ಬಿಸಿ ಬಿಸಿ ಬ್ಲಾಕ್ ಟೀ ಮಾಡಿಕೊಂಡು ತಂದು ಕೊಟ್ರು. ಡಾರ್ಜಿಲಿಂಗ್, ಸಿಕ್ಕಿಂನಲ್ಲಿದ್ದಷ್ಟು ದಿನವೂ ಗ್ರೀನ್ ಟೀ, ಬ್ಲಾಕ್ ಟೀಗಳನ್ನೇ ಕುಡಿದು ಬೇಸತ್ತಿದ್ದ ನಾನು ಬ್ಲಾಕ್ ಟೀ ಬೇಡವೆಂದೆ. ಅಲ್ಲಿ ೫ ರೂಗೆ ಒಂದು ಕಪ್ ಟೀ, ೩ ರೂಗೆ ಒಂದು ಸಣ್ಣ ಪ್ಯಾಕೆಟ್ ಕುರುಕುರೆ ಚಿಪ್ಸ್ ! ಎಲ್ಲಾ ಸೇರಿ ಬಿಲ್ಲಾಗಿದ್ದು ೩೯ ರೂ. ಯಾರಿಗುಂಟು ಯಾರಿಗಿಲ್ಲಾ ಗುರೂ ? ಚಳಿಗಾಳಿಗೆ ನಡುಗುತ್ತಿದ್ದ ಹುಡುಗರೆಲ್ಲಾ ಆ ಅಂಗಡಿಯಲ್ಲಿದ್ದ ಏಳೆಂಟು ವರ್ಷದ ಹುಡುಗ ಒಂಚೂರೂ ನಡುಗದ್ದನ್ನು ಕಂಡು ಅದೇಗಪ್ಪಾ ಹಂಗಿರ್ತೀಯ, ಎಲ್ಲಿ ಶಾಲೆಗೆ ಹೋಗ್ತೀಯ ಅಂತೆಲ್ಲಾ ಪ್ರಶ್ನಿಸತೊಡಗಿದ್ರು. ಆತ ಅಲ್ಲೇ ಗುಡ್ಡದ ಶಾಲೆಗೆ ಹೋಗ್ತೀನಂತ್ಲೂ ಈಗ ಎರಡನೇ ಕ್ಲಾಸಂತ್ಲೂ ಹೇಳಿದ್ದಷ್ಟೇ ಅರ್ಥವಾಯ್ತು. ಅಲ್ಲಿದ್ದ ನಾಯಿಯ ಕುಯ್ಗುಟ್ಟುವಿಕೆ, ಕಾಲು ನೆಕ್ಕುವಿಕೆಗೆ ಮನಸೋತಿದ್ದ ವರುಣನಲ್ಲಿದ್ದ ಪ್ರಾಣಿ ಪ್ರೇಮ ಜಾಗೃತವಾಗಿ ಆತ ನಾಯಿಗೇ ಅಂತ್ಲೇ ಬಿಸ್ಕೇಟು ತಗೊಂಡು ಹಾಕುವಷ್ಟರಲ್ಲಿ ನಮ್ಮೊಟ್ಟಿಗೇ ಬಂದಿದ್ದ ಅಜ್ಜನೊಬ್ಬ ತನ್ನ ಪ್ಲಾಸ್ಟಿಕ್ ಕವರ್ ತೆಗೆದ. ಅದರ ತುಂಬೆಲ್ಲಾ ನೂರರ ಅದೆಷ್ಟೋ ನೋಟುಗಳು !ಮನೆಯಲ್ಲಿ ಯಾವುದೋ ಕಾರ್ಯಕ್ರಮಕ್ಕೆ ಹಂಚೋಕೆಂತ ತಂದ ಹತ್ತರ, ಐದರ ನೋಟುಗಳನ್ನು ನೋಡುವಷ್ಟೇ ಸಹಜವಾಗಿ ಆ ಅಜ್ಜ ತನ್ನ ನೂರರ ಬಂಡಲಲ್ಲಿದ್ದ ನೋಟುಗಳನ್ನ ನೋಡುತ್ತಿದ್ದುದನ್ನು ನೋಡಿ ಒಮ್ಮೆ ಗಾಬರಿಯಾಯ್ತು. ಎರಡು ಚಕ್ರದ ಒಂದು ಗಾಡಿಯೂ ಬರಲಾಗದ ಆ ಊರಿನಲ್ಲಿ ಈ ರೇಂಜಿನ ದುಡ್ಡಿನೊಂದಿಗೆ ಸಾಮಾನ್ಯದಲ್ಲೇ ಸಾಮಾನ್ಯ ವೇಷಭೂಷಣಗಳೊಂದಿಗೆ ಓಡಾಡುತ್ತಿದ್ದ ಆ ಅಜ್ಜನನ್ನು ಕಂಡಿದ್ದು ಎಲ್ಲಿಂದಲೂ ಬಂದ ಮಳೆಯಲ್ಲಿ ಸಿಕ್ಕಷ್ಟೇ ಆಶ್ಚರ್ಯವಾಗಿತ್ತು.  ಆ ಅಂಗಡಿಯವರೊಂದಿಗೆ ಏನೋ ಡೀಲ್ ಮಾಡ್ತಿದ್ದ ಅಜ್ಜ ನಮಗೆ ನಡೆದಾಡೋ ಗುಡ್ಡದ ಭೂತದಂತೆ ಕಾಣದಿದ್ದರೂ, ಸಂಚಾರಿ ಏಟಿಎಂ ನಂತೆ ಖಂಡಿತಾ ಕಂಡ !

ಮಿಸ್ಸಾದ ಡ್ರೈವರಿಗಾಗಿ ಶಾರ್ಟ್ ಕಟ್
ಒಂದು ಘಂಟೆಯಾದರೂ ಮಳೆ ನಿಲ್ಲಲಿಲ್ಲ. ನಿಲ್ಲೋ ಲಕ್ಷಣಗಳೂ ಕಾಣದಿದ್ದಾಗ ಅದೇ ಮಳೆಯಲ್ಲಿ ಮುಂದೆ ಹೊರಟೆವು. ಸ್ವಲ್ಪ ದೂರ ಹೋಗುತ್ತಿದ್ದಂತೆ ಕಮ್ಮಿಯಾದ ಮಳೆಗೆ ಖುಷಿಪಟ್ಟು ಇನ್ನೂ ಚುರುಕಾಗಿ ಹೆಜ್ಜೆ ಹಾಕಿದೆವು. ನಮ್ಮ ಚುರುಕು ಹೆಜ್ಜೆಗಳಿಂದ ಹೊಟ್ಟೆಕಿಚ್ಚಾಯಿತೋ ಎಂಬಂತೆ ಮಳೆ ಉಧೋ ಎಂದು ಮತ್ತೆ ಶುರುವಾಯ್ತು. ಹಿಂದಿದ್ದ ಸಂದೇಶ, ಪ್ರಮೋದ, ಬಾಲು, ವರುಣ, ಹೆಗ್ಡೆ,  ಮತ್ಯಾವುದೋ ಕಲ್ಲ ಬಂಡೆಯ ಹಿಂದೆ ನಿಂತರೂ ನಾವು, ಇಲ್ಲಿ ನಿಂತು ಉಪಯೋಗವಿಲ್ಲವೆಂದು ಮುಂದೆ ಸಾಗಿದೆವು. ಅಲ್ಲಿನ ಮುಸಲಧಾರೆಯೆದುರು ಯಾವ ಕಲ್ಲ ಕೆಳಗೆ ನಿಂತರೂ ಒದ್ದೆಯಾಗೋದೇನು ತಪ್ಪುತ್ತಿರಲಿಲ್ಲ. ಸ್ವಲ್ಪ ಮುಂದೆ ಹೋಗಿ  ಸ್ವಲ್ಪ ಹೊತ್ತು ಕಾಯ್ತಿದ್ವಿ. ಅವರು ಮುಂದೆ ಬಾರದಿದ್ದರೂ ವರುಣ್, ಸಂದೇಶ್ ಮುಂದಾದ್ರು. ಮತ್ತೆ ಹಿಂದುಳಿದ ಮೂವರಿಗೆ ಸ್ವಲ್ಪ ಹೊತ್ತು ಕಾದರೂ ಅವರು ಬಾರದಿದ್ದಾಗ ಜಲಪಾತದವರೆಗೆ ಹೋಗಿ ಅಲ್ಲಿ ಕಾಯೋದೆಂದು ನಿಶ್ಚಯಿಸಿ ಮುಂದಡಿಯಿಡೋಕೆ ಶುರು ಮಾಡಿದ್ವಿ. ಅಲ್ಲಿ ಹಾಕಿದ್ದ ಕಲ್ಲುಗಳು ಮತ್ತು ಮುಂಭಾಗ ವಾಟರ್ ಪ್ರೂಫಾಗಿದ್ದ ನನ್ನ ಶೂವಿನ ಕಾರಣದಿಂದ ಆ ಮಳೆಗೂ ದಾರಿಯಲ್ಲಿ ಎಲ್ಲೂ ಜಾರಲಿಲ್ಲ. ಹಾಗೇ ನಡೆ ನಡೆದು ಫಾಲ್ಸೇನೋ ಸಿಕ್ಕಿತು. ಆದರೆ ಅದರ ಬುಡಕ್ಕೆ ಸಾಗೋದು ಕಷ್ಟವಾಗಿತ್ತು. ವರುಣ , ಸಂದೇಶ್ ಸ್ವಲ್ಪ ಪ್ರಯತ್ನ ಪಟ್ಟರೂ ಮುಂದೆ ಅಪಾಯವೆಂದು ಅವರನ್ನು ವಾಪಾಸ್ ಕರೆದ್ವು. ಅಲ್ಲೇ ಬಂಡೆಯ ಮೇಲಿದ್ದ ರಾಮನ ಪಾದ ಮುಂತಾದ ಕೆತ್ತನೆಗಳನ್ನು ನೋಡುತ್ತಾ ಸೊಂಟದವರೆಗೂ ಬರುತ್ತಿದ್ದ ನೀರಲ್ಲಿ ಆಡುತ್ತಿದ್ದಾಗ ಉಳಿದವರೂ ಬಂದು ಸೇರಿಕೊಂಡರು. ಮಳೆಯಲ್ಲಿ ಒದ್ದೆಯಾಗಿದ್ದರೂ ನೀರಲ್ಲಾಡದೇ ಇರೋ ಮನಸ್ಸು ಯಾರಿಗೂ ಇರಲಿಲ್ಲ. ಅಲ್ಲೊಂದು ಸ್ವಲ್ಪ ಹೊತ್ತು ಆಡಿ ಮತ್ತೆ ಮೇಲೆದ್ದು ಕೆಳಗಿನ ಜಾಗದತ್ತ ತೆರಳಿದೆವು. ಐದರ ಹೊತ್ತಿಗೆ ಕೆಳಗಿಂದ ನಾವು ಟಿಕೇಟ್ ತಗೊಂಡ ಜಾಗಕ್ಕೆ ಬಂದು ನೋಡಿದ್ರೆ ಅಲ್ಲಿ ನಮ್ಮ ಗಾಡಿಯೂ ಇಲ್ಲ. ಡ್ರೈವರನೂ ಇಲ್ಲ. ಇಲ್ಲಿಂದ ಕೆಳಗೆ ಬರೀ ಐದು ನಿಮಿಷದ ಶಾರ್ಟ್ ಕಟ್ಟಿದೆ ಅಂತ ಗೈಡ್ ಹೇಳ್ತಿದ್ರೂ ಇನ್ನೂ ಮೇಲೇ ಇದ್ದ ಉಳಿದವರಿಗೆ ಕಾಯದೇ ವಿಧಿಯಿಲ್ಲ. ಅವರು ಬರೋ ಹೊತ್ತಿಗೆ ಮತ್ತೆ ೨೦ ನಿಮಿಷ ಆಗಿತ್ತು. ಅಷ್ಟರೊಳಗೆ ಅದೇ ರಸ್ತೆಯಲ್ಲಿ ಮೇಲಿಂದ(ಮೇಲೆ ಹಾಗೇ ಹೋದರೆ ಆದಿಯಾಸಿಗಳ ತಾಂಡಾವೊಂದಿದೆಯಂತೆ. ಅಲ್ಲಿಗೆ ಅರಣ್ಯ ಇಲಾಖೆಯ ಅನುಮತಿ ಪಡೆದು ಹೋಗಬಹುದಂತೆ) ಬರುತ್ತಿದ್ದ ಗಾಡಿಯವರತ್ರ ನಮ್ಮ ಇನ್ನೋವ ಮೇಲೆಲ್ಲೂ ಸಿಗದ ಬಗ್ಗೆ ಖಾತ್ರಿ ಮಾಡಿಕೊಂಡು ಕೆಳಗೆ ಸಿಗೋ ಕೆ.ಎ. ೦೫ ರಿಜಿಸ್ಟ್ರೇಷನ್ನಿನ ಇನ್ನೋವಕ್ಕೆ ಮೇಲೆ ಬರೋಕೆ ಹೇಳಿ ಅಂತ ಹೇಳಿದ್ವಿ ! ಹೀಗೆ ಎರಡು ಮೂರು ಗಾಡಿಗಳವರತ್ರ ಹೇಳಿದ್ರೂ ನಮ್ಮ ಗಾಡಿ ಮೇಲೆ ಬರಲಿಲ್ಲ.  ಮೇಲಿನವ್ರು ಕೆಳಗೆ ಬಂದ ತಕ್ಷಣ ಇನ್ನು ಇಲ್ಲಿ ಕಾದು ಉಪಯೋಗವಿಲ್ಲವೆಂದು ಅವನು ತೋರಿಸಿದ ದಾರಿಯಲ್ಲಿ ಕೆಳಗಿಳಿಯತೊಡಗಿದ್ವಿ. ಕೆಳಗಿಳಿಯುತ್ತಿದ್ರೂ ಅವ ಅಪ್ಪಿ ತಪ್ಪಿ ಮೇಲೆ ಹೋಗಿ ಬಿಟ್ರೆ ಅಂತ ಅನುಮಾನ ! ಎರಡು ಮೂರು ಸಲ ಮುಖ್ಯ ರಸ್ತೆಗೆ ತಾಗಿ ಮತ್ತೆ ತೋಟದೊಳಗೆ ಇಳಿಯುತ್ತಿದ್ದ ಆ ಕಾಡಹಾದಿಯಲ್ಲಿ ಒಮ್ಮೆ ಇಲ್ಲೇ ನೋಡೋಣ ಸ್ವಲ್ಪ ಹೊತ್ತು ಅಂದೆನಿಸಿ ಗೈಡಿಗೆ ಎರಡು ನಿಮಿಷ ತಡಿ ಅಂದೆ. ಹಿಂದಿದ್ದವರು ಅಲ್ಲಿಗೆ ಬಂದು ಸ್ವಲ್ಪ ಸುಧಾರಿಸಿಕೊಳ್ಳೋಕೂ ಕೆಳಗಿಂದ ನಮ್ಮ ಇನ್ನೋವ ಅಲ್ಲಿಗೆ ಬರೋಕೂ ಸರಿಯಾಯ್ತು ! ಇದಕ್ಕೆ ಆರನೆಯ ಇಂದ್ರಿಯ ಅನ್ನಬೇಕೋ, ಕಾಕತಾಳೀಯ ಅನ್ನಬೇಕೋ ಗೊತ್ತಿಲ್ಲ. ಒಟ್ನಲ್ಲಿ ಗಾಡಿ ಸಿಕ್ಕಿತು. ಗೈಡಿಗೆ ಅವನ ದುಡ್ಡು ಕೊಟ್ಟು, ಅವನೂರಾದ ಕುರಂಗನಿಯವರೆಗೂ ಬಿಟ್ಟು ಬೋಧಿಯ ಹಾದಿ ಹಿಡಿಯೋ ಹೊತ್ತಿಗೆ ಘಂಟೆ ಐದೂಮುಕ್ಕಾಲಾಗುತ್ತಾ ಬಂದಿತ್ತು .

ಮುಗಿಸೋ ಮುನ್ನ:
ಮುಂದಿನ ಬಾರಿ ಈ ಡ್ರೈವರಿಲ್ಲದೇ ಬರಬೇಕು. ಕುಡುಕುಮಲೈ ಕವರ್ ಮಾಡಿ ಇಲ್ಲಿನ ಹತ್ತಿರದ ಇನ್ಯಾವುದಾದರೂ ಜಾಗ ನೋಡಬೇಕು ಅನ್ನೋ ನಿರ್ಣಯ ಮಾಡಿ ಕುರಂಗನಿಯಿಂದ ಹೊರಟು ಬೋದಿಗೆ ಬಂದ್ವಿ. ಅಲ್ಲಿ ಹತ್ತೇ ನಿಮಿಷದಲ್ಲಿ ಚೆಕ್ ಔಟ್ ಮಾಡಿ ಮುಂದೆ ಸಾಗಿದ್ರೂ ನಮಗೆ ಮಳೆಯ ಕಾಟ ತಪ್ಪಿರಲಿಲ್ಲ. ಥೇನಿ ದಾಟುವಷ್ಟರಲ್ಲಿ ಧಾರಾಕಾರ ಆಲಿಕಲ್ಲಿನ ಮಳೆ ಶುರುವಾಯ್ತು. ಎದುರಿಗಿನ ದಾರಿ ಏನೂ ಕಾಣದಷ್ಟು ಧಾರಾಕಾರ ಮಳೆ. ಇವತ್ತು ಊಟವೇ ಇಲ್ಲವೇನೋ ಅಂತ ಸುಮಾರು ಒಂದು ತಾಸು ರಸ್ತೆಬದಿ ಗಾಡಿ ನಿಲ್ಲಿಸಿಕೊಂಡು ಕೂತಿದ್ದ ಮೇಲೆ ಮಳೆ ಸ್ವಲ್ಪ ಕಡಿಮೆಯಾಯ್ತು. ಅದರಲ್ಲೇ ಮುಂದೆ ಸಾಗಿ ಎದುರಿಗೆ ಸಿಕ್ಕ ಡಾಬಾವೊಂದನ್ನು ಹೊಕ್ಕೋ ಹೊತ್ತಿಗೆ ಘಂಟೆ ಎಂಟು ದಾಟಿತ್ತು. ಆ ಡಾಬಾವೋ ಕೆಂಪು ನೀರಿನ ಮಧ್ಯದ ಗಡ್ಡೆಯಂತೆ ಕಾಣುತ್ತಿತ್ತು. ಅಲ್ಲೊಂದಿಷ್ಟು ಹೊತ್ತು ಕಾದು, ಅರ್ಜೆಂಟಾದವರ ಕೆಲಸಗಳನ್ನ ಮುಗಿಸಿಕೊಂಡು, ಊಟವನ್ನೂ ಮುಗಿಸಿ ಹೊರಟಾಗ ಘಂಟೆ ಒಂಭತ್ತು. ಮೊದಲ ಭಾಗದಲ್ಲೇ ಹೇಳಿದಂತೆ ಡ್ರೈವರನ ಗಲಾಟೆಯಿಂದ, ದುಡ್ಡಿರದ ಏಟಿಮಂಗಳಿಂದ ನಾವು ಮೂರಕ್ಕೆ ಬೆಂಗಳೂರು ತಲುಪಿದರೂ ಡ್ರೈವರನ್ನ ಕಳಿಸಿ ಮನೆ ತಲುಪೋ ಹೊತ್ತಿಗೆ ನಾಲ್ಕಾಗಿತ್ತು. ಆನ್ ಲೈನ್ ಟ್ರಾನ್ಸ್ ಫರಿಗೆ ಡ್ರೈವರನ, ಟ್ರಾವೆಲ್ ಏಜಂಟನ ಒಪ್ಪಿಸೋಕಿಂತ ಅವರ ಸುಲಿಗೆಗಳಿಂದ ಹೊರಬರೋದು ಹೇಗನ್ನೋ ಗಲಾಟೆಗಳೇ ಜಾಸ್ತಿಯಾಗಿತ್ತು. ಮೂರು ದಿನಗಳ ಪ್ರವಾಸದಲ್ಲಿ ಅಂದುಕೊಂಡ ಜಾಗಗಳನ್ನೆಲ್ಲಾ ನೋಡಲಾಗದಿದ್ದರೂ ಮುಂದಿನ ಟ್ರಿಪ್ಪು ಹೇಗೆ ಮಾಡಬಾರದು, ಮಾಡಬೇಕೆನ್ನೋ ಒಳ್ಳೊಳ್ಳೆಯ ಪಾಟಗಳು ಸಿಕ್ಕಿದ್ವು.


ಮುಂದಿನ ಬಾರಿ ಇಲ್ಲಿಗೆ ಟ್ರಿಪ್ ಹೋಗೋರ ನೆರವಿಗಾಗಿ
ಟಾಪ್ ಸ್ಟೇಷನ್  ಗೈಡ್, ಸದ್ಯಕ್ಕೆ ಐಟಿಐ ಓದುತ್ತಿರೋ, ರಜೆಯಲ್ಲಿ ಗೈಡಾಗಿರೋ ಶಿವ: ೯೦೮೭೮೨೪೦೬೫
ಟಾಪ್ ಸ್ಟೇಷನ್ನಿನ ಟೆಂಟು ಮುಂತಾದ ವ್ಯವಸ್ಥೆ ಮಾಡೋ ಸತೀಶ್ : ೮೭೫೪೮೦೮೦೮೧
ಟ್ರಿಪ್ಪ ತುಂಬಾ ಸೆಖೆ, ರೋದನೆ ಕೊಟ್ಟು, ಇನ್ಮೇಲೆ ಇವನ ಜೊತೆ ಯಾವತ್ತೂ ಬರಬಾರದು ಅಂತ ತೀರ್ಮಾನ ಕೈಗೊಳ್ಳುವಂತೆ ಮಾಡಿದ ಡ್ರೈವರ್ ಮಹೇಶ್ :೯೯೪೫೭೪೭೫೩೪
ಡ್ರೈವರ್ ಈ ರೇಂಜಿಗೆ ರೋದನೆ ಕೊಟ್ರೂ ಒಂಚೂರೂ ಸಹಾಯ ಮಾಡದ, ನೀವು ನೀವೇ ಸೆಟ್ಲ್ ಮಾಡ್ಕೊಳ್ರಿ ಅಂತ ನಡುನೀರಲ್ಲಿ ಕೈಬಿಟ್ಟ ಟ್ರಾವೆಲ್ ಏಜೆಂಟ್ ಸ್ವಾಮಿ: ೯೯೦೦೧೪೭೫೪೭

Tuesday, May 9, 2017

ಭೋದಿಯಲ್ಲಿನ ಜ್ಞಾನೋದಯ ಮತ್ತು ಟಾಪ್ ಸ್ಟೇಷನ್

ಬೇಸಿಗೆಯ ಬೆಂಗಳೂರಿಂದ ಬಿರುಬೇಸಿಗೆಯ ಪಳನಿಗೆ ಕಾಲಿಟ್ಟು, ಕೊಡೈಯಲ್ಲೊಂದಿಷ್ಟು ಕೂಲಾಗಿ ಮತ್ತೆ ಬೋದೀನಾಯಕ್ಕನೂರಲ್ಲಿ ಸೆಖೆಗೊಡ್ಡಿಕೊಂಡಲ್ಲಿವರೆಗಿನ ಕತೆಯನ್ನು ಇಲ್ಲಿಯವರೆಗಿನ ಭಾಗಗಳಲ್ಲಿ ಓದಿದ್ದೆವು. ತಮಿಳುನಾಡಲ್ಲಿ ಹೇಗಿರಬೇಕು, ಹೇಗಿರಬಾರದು ಎಂಬುದರ ಬಗ್ಗೆ ನಮಗಾಗಬೇಕಾದ ಜ್ಞಾನೋದಯಗಳಿಗೆ ಕೊರತೆಯಿರಲಿಲ್ಲ. ಕಲಿಯಬೇಕಾದ ಪಾಠಗಳು ಬೋಧಿಯಲ್ಲೂ ಮುಂದುವರೆದಿದ್ದವು. ಮೊದಲನೆಯದಾಗಿ  ಬೋಧಿಯಲ್ಲಿನ ಎಸ್.ಪಿ.ಎ ಲಾಡ್ಜೆಂಬುದು ಅಸಲಿಗೆ ಲಾಡ್ಜಾಗಿರಲಿಲ್ಲ. ೧೯೭೭ರಲ್ಲಿ ಏಲಕ್ಕಿ ಬೋರ್ಡಿನವರು ಉದ್ಘಾಟಿಸಿದ ಕಟ್ಟಡವಾಗಿತ್ತದು. ಎಲ್ಲಿಯ ಸೆಖೆನಾಡು ಎಲ್ಲಿಯ ಏಲಕ್ಕಿ ಅಂದಿರಾ ? ತೇಜಸ್ವಿಯವರ ಚಿದಂಬರ ರಹಸ್ಯದಲ್ಲಿ ಬರುವಂತೆ ಒಂದೊಮ್ಮೆ ಏಲಕ್ಕಿಯ ಬೀಡಾಗಿದ್ದ ಬೋಧಿನಾಯಕ್ಕನೂರು ಕಾಲಕ್ರಮೇಣ ಆಧುನಿಕತೆಗೆ ಸಿಕ್ಕಿ ,ಮರಗಳೆಲ್ಲವನ್ನೂ ಕಳೆದುಕೊಂಡು ಬೋಳಾಯಿತಾ ಅಥವಾ ಸುತ್ತಲೆಲ್ಲೋ ಇರುವ ಹಳ್ಳಿಗಳ ಬದಲು ಪಟ್ಟಣವೆಂದು ಇಲ್ಲಿ ಏಲಕ್ಕಿ ಬೋರ್ಡ್ ಮಾಡಿದರಾ ಅಥವಾ ಚಿಕ್ಕಮಗಳೂರಿನ ಏಲಕ್ಕಿಗೆ ಬಯಲುಸೀಮೆಯಲ್ಲೆಲ್ಲೋ ಜಾಗ ಸಿಕ್ಕಿತೆಂದು ಬೋರ್ಡಿನ ಜಾಗ ಕಟ್ಟುವಂತೆ ಇಲ್ಲಿ ಕಟ್ಟಿದರಾ ? ಗೊತ್ತಿಲ್ಲ. ಒಟ್ಟಿನಲಿ ಒಂದಾನೊಂದು ಕಾಲದಲ್ಲಿ ಏನೋ ಆಗಿದ್ದು ಈಗೊಂದು ಲಾಡ್ಜಾಗಿತ್ತಷ್ಟೆ.

ಇನ್ನಿಲ್ಲಿಯ ಊಟವೋ ? ಇಡ್ಲಿ ದೋಸೆಗಳಲ್ಲಿ ಯಾರು ಹಿತವರು ನಿನಗೆ ಎಂದು ಹುಡುಕಬೇಕಾದ ಪರಿಸ್ಥಿತಿ. ಗೋಬಿ ಮಂಚೂರಿ ಅಂತ ಮೆನುವಿನಲ್ಲಿದ್ದರೂ ಆರ್ಡರ್ ಮಾಡಿದ ನಮಗೆ ಸಿಕ್ಕಿದ್ದು ಒಣ ಗೋಬಿಯನ್ನು ಈರುಳ್ಳಿ ಪಕೋಡದಂತೆ ಹುರಿದುಕೊಟ್ಟ ಮಂಚೂರಿ ! ಅದಕ್ಕೆ ಗೋಬಿ ಮಂಚೂರಿಯೆನ್ನದೇ ಗೋಬಿ ಪಕೋಡ ಅಂದಿದ್ದರೂ ಚೆನ್ನಿತ್ತೇನೋ. ಅದರ ಕತೆಗೆ ಆಮೇಲೆ ಬರೋಣಂತೆ.  ಚೆನ್ನಾಗಿ ಸಿಕ್ಕಿದ್ದೆಂದರೆ ರಸ್ತೆ ಬದಿಯಲ್ಲಿ ಮಾರುತ್ತಿದ್ದ ಹಲ್ವಾಗಳಷ್ಟೆ. ಮುಂಚೆಯೆಲ್ಲಾ ಶಬರಿಮಲೈಗೆ ಹೋದವರು ಮರೆಯದೇ ತರುತ್ತಿದ್ದ ಕೆಂಪು, ಹಳದಿ ಹಲ್ವಾಗಳ ನೆನಪು ತಂದ ಗೋಡಂಬಿ, ಪಿಸ್ತಾ , ಡ್ರೈ ಫ್ರೂಟ್ ಹಲ್ವಾಗಳ ಸವಿಯುತ್ತಾ ಬೋಧಿಯಲ್ಲಿನ ಬೀದಿಗಳ ತಿರುಗುತ್ತಿದ್ದೆವು. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಅಂಗಡಿಗಳ ಬಿಟ್ಟರೆ ಫೋಟೋ ತೆಗೆದು ನೆನಪಿಡಬೇಕಾದಂತಹ ಚಿತ್ರಣವೇನಿಲ್ಲವಿಲ್ಲಿ. ಹೋಗಿ ಬರಬೇಕಾದಂತಹ ಎರಡು ದೇಗುಲಗಳಿವೆ. ಒಂದು ಶಹರದ ಮಧ್ಯದಲ್ಲಿಯೇ ಇರುವ ಕಾಳಿಯಮ್ಮನ್ ದೇಗುಲ ಮತ್ತು ಸುಬ್ರಹ್ಮಣ್ಯ ದೇಗುಲ. ಮುರುಗನ್ ದೇಗುಲ ಎಂದೂ ಕರೆಯಲ್ಪಡುವ ಎರಡನೆಯ ದೇಗುಲ ರಾತ್ರೆ ಒಂಭತ್ತರವರೆಗೂ ತೆಗೆದಿದ್ದು ಅದನ್ನು ದೇಗುಲವೆಂದು ಕರೆಯೋ ಬದಲು ದೇಗುಲಗಳ ಸಂಕೀರ್ಣವೆಂದು ಕರೆಯಬಹುದು. ನಾವು ಹೋಗಿ ಬರುವಷ್ಟರಲ್ಲಿ ಬಾಗಿಲು ಹಾಕಿದ ಇನ್ನೊಂದು ದೇಗುಲದ ಪಕ್ಕದಲ್ಲೇ ಇರುವ ಈ ದೇಗುಲದಲ್ಲಿ ಸುಬ್ರಹ್ಮಣ್ಯ ಅಲ್ಲದೇ ಪಾರ್ವತಿ, ಗಣೇಶ, ನವಗ್ರಹಗಳು, ನಾಯನಾರ್ಗಳು(ತಮಿಳಿನ ೬೩ ಶೈವ ಯತಿಗಳು) ಮುಂತಾದ ಮೂರ್ತಿಗಳಿರೋ ಈ ದೇಗುಲದಲ್ಲಿ ಎಂಟು ಎಂಟೂವರೆಯ ಮೇಲೆ ರಷ್ಯು ಕಮ್ಮಿಯಿರೋದ್ರಿಂದ ಬರ್ಮುಡ ಹಾಕಿಕೊಂಡು ಹೋದರೂ ಒಳಪ್ರವೇಶಿಸದಂತೆ ಯಾರೂ ನಮ್ಮನ್ನು ತಡೆಯಲಿಲ್ಲ.

ನೀರು ದೋಸೆ ಹೋಗಿ ಘೀ ರೋಸ್ಟಾಗಿದ್ದು
ದೇಗುಲ ಬಾಗಿಲು ಹಾಕುವಷ್ಟರಲ್ಲಿ ಹೊರಬಂದ ನಮ್ಮ ಹೊಟ್ಟೆ ತಾಳಹಾಕುತ್ತಿತ್ತು. ಇಲ್ಲಿದ್ದ ವೆಜ್ ಹೋಟೆಲ್ಗಳೆಂದರೆ ಬಾಲಾಜಿ ಭವನ ಮತ್ತು ರಾಜ್ ಭವನಗಳಷ್ಟೆ. ಬಾಲಾಜಿ ಭವನದ ಬಗ್ಗೆ ನಮ್ಮ ಲಾಡ್ಜಿನವರು ಹೈಪ್ ಕೊಟ್ಟಿದ್ರಿಂದ ಅತ್ತ ತಿರುಗಿದ್ವಿ. ಅಲ್ಲಿಯೋ ಅನ್ನದ ಯಾವ ಐಟಂಗಳೂ ಇಲ್ಲ. ಅವ ದೋಸೆಯ ವೆರೈಟಿಗಳ ಬಗ್ಗೆ ಹೇಳಿದ್ದು ಸಂದೇಶಿಗೆ ನೀರು ದೋಸೆ ಅನ್ನುವಂತೆ ಕೇಳಿಸಿ ನೀರು ದೋಸೆ ಕೊಡಿ ಅಂದ. ತಮಿಳುನಾಡಲ್ಲಿ  ನೀರು ದೋಸೆಯಾ ? ಸರಿ ಅಂತ ಎಲ್ಲರೂ ಅದನ್ನೇ ಹೇಳಿದೆವು. ಸ್ವಲ್ಪ ಹೊತ್ತಾದ ಮೇಲೆ ಬಂದದ್ದು ನೋಡಿದರೆ ಮಾರುದ್ದದ ದೋಸೆ. ಏನಪ್ಪಾ ಇದು ಅಂದ್ರೆ ಘೀ ರೋಸ್ಟ್ ಅಂದ ಅವ ! ಮೇಜಿನ ಮೇಲಿಟ್ಟರೆ ನಮ್ಮ ಪ್ಲೇಟು ದಾಟಿ ಪಕ್ಕದ ಪ್ಲೇಟನ್ನೂ ಅರ್ಧ ಆಕ್ರಮಿಸೋ ಆ ದೋಸೆಯನ್ನ ಹೆಂಗಪ್ಪಾ ತಿನ್ನೋದು ಅನ್ನುವಷ್ಟರಲ್ಲಿ ಅವನೇ ಅರ್ಧವಾಗಿ ಮಡಚಿ ಕೊಟ್ಟ. ದೋಸೆಯ ಹೊಗಳುತ್ತಾ ತಿಂದರೂ ಹೊಟ್ಟೆ ತುಂಬಲಿಲ್ಲ. ಆಮೇಲಿನ ಗೋಬಿ ಮಂಚೂರಿ, ಅಲ್ಲಲ್ಲ ಗೋಬಿ ಪಕೋಡದಿಂದಲೂ ಹೊಟ್ಟೆ ತುಂಬಲಿಲ್ಲ. ಇನ್ನೇನಾದ್ರೂ ತಗೋಳ್ಳೋಣ ಅಂದ್ರೆ ಉಳಿದವರೆಲ್ಲಾ ಹೊಟ್ಟೆ ತುಂಬಿದೆ, ನನಗೇನೋ ಬೇಡ ಅಂತ. ಸರಿ, ಇನ್ನೇನು ಮಾಡೋದು ಅಂತ ಮನಸ್ಸಿಲ್ಲದ ಮನಸ್ಸಿಂದ , ರೂಮಿನಲ್ಲಿದ್ದವರಿಗೆ ಚಪಾತಿ, ಕುರ್ಮ ಪಾರ್ಸೆಲ್ ತಗೊಂಡು ಹೊರಟ್ವಿ.

ಹಸಿವೋ, ಹುಚ್ಚೋ ?
ನಾವು ಹೋಟೇಲಿಂದ ಹೊರಬಂದು ಎಲ್ಲಾದ್ರೂ ಮಿಲ್ಕ್ ಶೇಕ್ ಕುಡಿಯೋಣ ಅಂತ ಹುಡುಕುತ್ತಾ ಹೊರಟ್ವಿ. ನಾವು ಹೊರಬರುತ್ತಿದ್ದಂತೆಯೇ ಒಬ್ಬ ಕುಡುಕ ನಮ್ಮ ಹಿಂದೆ ಬಿದ್ದಿದ್ದ. ದುಡ್ಡು ಕೊಡಿ ಅಂತ. ಅವನಿಂದ ಎಸ್ಕೇಪಾಗಿ ಒಂದು ಜ್ಯೂಸಂಗಡಿ ದಾಟಿ ಬಂದಿದ್ರೂ ನಮ್ಮನ್ನೇ ಹಿಂಬಾಲಿಸುತ್ತಿದ್ದ. ಪ್ರಮೋದಿಗೆ ಸ್ವಲ್ಪ ಜಾಸ್ತಿಯೇ ಕಾಡಿಸುತ್ತಿದ್ದ ಅವನತ್ರ ಪ್ರಮೋದ ಸಿಕ್ಕಾಕಿಕೊಂಡಿದ್ದನ್ನು ನೋಡಿ ನಮಗೆಲ್ಲಾ ನಗೆ. ದುಡ್ಡು ದುಡ್ಡು ಅಂತಿದ್ದವ ಹಿಂದಿನಿಂದ ಸಡನ್ನಾಗಿ ಓಡಿ ಬಂದು ಪ್ರಮೋದನ ಕೈಯಲ್ಲಿದ್ದ ಊಟದ ಬ್ಯಾಗಿಗೆ ಕೈ ಹಾಕೋದೇ ? ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆ ಕುಡುಕನ ಪ್ರಯತ್ನದ ಮುಂದೆ ಪ್ರಮೋದ್ ಕವರ್ ಕೈ ಬಿಡಲೇ ಬೇಕಾಯಿತು. ಸಡನ್ನಾಗಿ ಕೈಮೀರಿದ ಪ್ರಸಂಗ ನೋಡಿ ನಮಗೆಲ್ಲಾ ಶಾಕ್. ತಕ್ಷಣ ಕೆಲವರಿಗೆ ಪಿತ್ತ ನೆತ್ತಿಗೇರಿ ಆ ಹುಚ್ಚನಿಗೆ ಹೊಡೆದು ಅವನ ಕೈಯಲ್ಲಿನ ಪಾರ್ಸಲ್ ಬಿಡಿಸಿಕೊಳ್ಳಲು ಹೋದರೆ ಅವ ಆ ಕವರಿನೊಂದಿಗೆ ಓಡಿಹೋದ. ಪಕ್ಕದಲ್ಲೇ ಇದ್ದ ಪೋಲೀಸ್ ಚೌಕಿಯ ಪೋಲೀಸಪ್ಪ ಇಷ್ಟೆಲ್ಲಾ ನೋಡಿದರೂ ಏನೂ ಆಗದಂತೆ, ತುಟಿ ಪಿಟಕ್ಕೆನ್ನದೆ ತೆಪ್ಪಗಿದ್ದ ! ಹೋಗಿ ಬಿಡು ಗುರೂ. ಊಟ ತಾನೇ ? ಊಟ ಸಿಗದೇ ಎಷ್ಟು ದಿನವಾಗಿತ್ತೋ ಏನೋ  ? ಪಾಪ ತಿಂದುಕೊಂಡು ತಣ್ಣಗಿರಲಿ ಬಿಡು ಅಂತ ಸಮಾಧಾನ ಮಾಡಿಕೊಳ್ಳುತ್ತಾ ಮುಂದೆ ಬರುತ್ತಿದ್ದರೆ ಆ ಹುಚ್ಚ ನಮ್ಮ ಹಿಂದೆಯೇ ಓಡಿಬಂದ. ಕವರ್ ತನಗೆ ಬೇಡವೆನ್ನುವಂತೆ ನಟಿಸುತ್ತಾ ವಾಪಾಸ್ ಕೊಡಲು ಬರುತ್ತಿದ್ದ. ನಿಜವಾಗಲೂ ಅವನಲ್ಲಿ ಪಾಪಪ್ರಜ್ಞೆ ಕಾಡಿತ್ತೋ ಅಥವಾ ಅಲ್ಲಿದ್ದ ಅಂಗಡಿಯವರೆಲ್ಲಾ ಸೇರಿ ತನಗೆ ಚೆಚ್ಚಿದರೆ ಅನ್ನೋ ಭಯವೋ ಗೊತ್ತಿಲ್ಲ. ತಗಂಡಿದ್ದು ತಗಂಡಾಯ್ತಲ್ಲ, ಇನ್ನು ಹೋಗತ್ಲಗೆ, ತಗೊಂಡೋಗು ಅಂತ ಅವನನ್ನ ಅತ್ಲಾಗೆ ಕಳಿಸಿ ನಮ್ಮ ಮಿಲ್ಕ್ ಶೇಖಿನ ಹುಡುಕಾಟ ಮುಂದುವರೆಸಿದ್ವಿ

ಮಿಲ್ಕ್ ಶೇಖೋ ಪೌಡರ್ ಶೇಖೋ:
ಬರೀ ದೋಸೆ , ಗೋಬಿ ಪಕೋಡ ತಿಂದ್ಕೊಂಡು ಮಲ್ಕೊಂಡ್ರೆ ಹೆಂಗೆ ? ಹಾಲೋ ಮೊಸರೋ ಇಲ್ಲದೇ ಊಟವಾದ ಸಮಾಧಾನವಾದ್ರೂ ಹೆಂಗೆ ? ಏನಿಲ್ಲ ಅಂದ್ರೆ ಒಂದು ಜ್ಯೂಸಾದ್ರೂ ಇರಬೇಕಪ್ಪಾ ಈ ಉರಿನಾಡಲ್ಲಿ ಅಂತ ಜ್ಯೂಸಂಗಡಿ ಹುಡುಕಾಟ ಮುಂದುವರೆಸಿದ್ವಿ. ಅಂತೂ ಮತ್ತೊಂದು ಜ್ಯೂಸಂಗಡಿ ಸಿಕ್ತು. ಅಲ್ಲೊಂದು ದಾಳಿಂಬೆ ಮಿಲ್ಕ್ ಶೇಖ್ ಹೇಳಿದ್ವಿ ಅಂತಾಯ್ತು. ದಾಳಿಂಬೆ ಜ್ಯೂಸ್ ಚೆನ್ನಾಗಿರತ್ತೆ. ಮಾರನೇ ದಿನ ಟ್ರೆಕ್ಕಿಂಗೆಗೆ ಶಕ್ತಿ ಬೇಕಲ್ಲ, ಮಿಲ್ಕ್ ಶೇಖಾದ್ರೆ ಇನ್ನೂ ಒಳ್ಳೇದು ಅಂತ ಮಿಲ್ಕ್ ಶೇಖ್ ಹೇಳಿದ್ವಿ. ನಮ್ಮ ಕಾಸ್ಮೋಸಿನ ಆಸುಪಾಸಿನ ಸಖತ್ ಮಿಲ್ಕ್ ಶೇಖಂಗಡಿಗಳಿಗೆ ಇದನ್ನು ಹೋಲಿಸಿದ್ರೆ ಇದು ಅದಕ್ಕಿಂತಾ ಚೆನ್ನಾಗಿರ್ಬೋದಾ , ಈ ಸೆಖೆಯಲ್ಲಿ ಸೂಪರ್ರಾಗಿರ್ಬೋದಾ ಅನ್ನೋ ನಿರೀಕ್ಷೆಯಲ್ಲಿದ್ದಾಗ ಅವ ದಾಳಿಂಬೆಯಿಂದ ಕಾಳುಗಳ ಬಿಡಿಸೋ ಶೈಲಿ ನೋಡಿ ಏನೋ ಖುಷಿಯಾಯ್ತು. ಆದ್ರೆ ಪಿಂಕ್ ಕಲರಿನ ಬದಲು ಕಂದು ಬಣ್ಣವಿದ್ದ ಮಿಲ್ಕ್ ಶೇಖಿಗೆ ಬಾಯಿಟ್ಟಿದ್ದೇ ತಡ ಇದ್ದ ನಿರೀಕ್ಷೆಗಳೆಲ್ಲಾ ಕಮರಿ ಹೋಯ್ತು. ಪುಣ್ಯಾತ್ಮ ಮಿಲ್ಕ್ ಶೇಖಿಗೆ ಮಿಲ್ಕ್ ಪೌಡರ್ ಹಾಕಿದ್ದ. ದಾಳಿಂಬೆ ಹಣ್ಣಿನ ಕಾಳುಗಳ ಜೊತೆಗೆ, ಸಿಪ್ಪೆ ಪಪ್ಪೆ ಎಲ್ಲಾ ಹಾಕಿ ಜೈ ಅನ್ಸಿರಬೇಕು ! ಜೀವಮಾನದಲ್ಲಿ ಇಷ್ಟು ಕರಾಬ್ ಮಿಲ್ಕ್ ಶೇಖ್ ಇಲ್ಲಿಯವರೆಗೂ ಕುಡಿದಿರಲಿಲ್ಲ :-( ಮಾರನೆಯ ದಿನದ ಟ್ರೆಕ್ಕಿಂಗಿಗೆ ಅಂತ ಅಲ್ಲಿ ಆರಿಸಿ ಆರಿಸಿ ತಗೊಂಡ ಕಿತ್ತಳೆ ಹಣ್ಣು ಕೂಡ ಟಾಪ್ ಸ್ಟೇಷನ್ ತಲುಪೋದಿರಲಿ, ಮಿಡಲ್ ಸ್ಟೇಷನ್ ತಲುಪೋ ಹೊತ್ತಿಗೇ ಅರ್ದರ್ಧ ಕೊಳೆತೋಗಿದ್ವು :-( ಇಲ್ಲಿನ್ನು ಆಗೋದಲ್ಲ ಹೋಗೋದಲ್ಲ ಅಂತಂದ್ಕಂಡು ಮುಂದೊಂದಂಗಡಿಯಲ್ಲಿ ಫ್ರೈಡ್ ರೈಸ್ ತಗೊಂಡು ವಾಪಾಸಾದ್ವಿ.

ಟಾಪ್ ಸ್ಟೇಷನ್ನಿಗೆ ಮುನ್ನ:
ಬೋಧಿಯಲ್ಲಿದ್ದ ಸುಖ ಅಂದ್ರೆ ಅಲ್ಲಿದ್ದ ರೂಮು ಮತ್ತು ಗೊತ್ತು ಗುರಿಯಿಲ್ಲದ ಅಲ್ಲಿನ ಬೀದಿಗಳಲ್ಲಿನ ಅಲೆದಾಟಗಳಷ್ಟೆ. ಹಾಸಿಗೆ ಮೇಲೆ ಹಾಕಿದ್ದ ಬೆಡ್ ಶೀಟ್ ಬಿಟ್ರೆ ಬೇರೆ ಬೆಡ್ ಶೀಟ್ ಕೊಟ್ಟಿರಲಿಲ್ಲ ಅಲ್ಲಿ ಒಂಚೂರು ಕನ್ನಡ ಬರುತ್ತಿದ್ದ ಕೇರ್ ಟೇಕರ್ ಅಜ್ಜ. ಕೊಡ್ರಿ ಅಂದ್ರೆ ನಿಮಗೆ ಬೇಕಾದ್ರೆ ನನ್ನನ್ನ ಎಬ್ಬಿಸಿ ಕೇಳಿ, ಗ್ಯಾರಂಟಿ ಕೊಡ್ತೀನಿ ಅಂದಿದ್ದ. ಅಲ್ಲಿನ ಸೆಖೆಗೆ ಫ್ಯಾನು ಹಾಕಿಯೂ ಶರ್ಟು ತೆಗೆದು ಮಲಗೋ ಪರಿಸ್ಥಿತಿ. ಅಂತದ್ರಲ್ಲಿ ಬೆಡ್ ಶೀಟ್ಯಾಕೆ ಅಂತನ್ನೋ ಅವನ ಲಾಜಿಕ್ಕು ರಾತ್ರಿ ಅರ್ಥ ಆಯ್ತು ನಮಗೆ. ಚಿಲಕವಿಲ್ಲದ ಬಾತ್ರೂಮುಗಳು, ಏಸಿಯಿಲ್ಲದ ರೂಮುಗಳಲ್ಲಿದ್ದರೂ ಬೆಳಗ್ಗೆ ಐದೂವರೆಗೆ ಎದ್ದು ರೆಡಿಯಾಗುತ್ತೇವೆಂದ ಗೆಳೆಯರ್ಯಾರೂ ಎದ್ದಿರಲಿಲ್ಲ. ಸುಖನಿದ್ದೆಯಲ್ಲಿದ್ದ ಅವರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಎಬ್ಬಿಸೋ ಹೊತ್ತಿಗೆ ೫:೪೦. ತಿಂಡಿ ಪಾರ್ಸೆಲ್ ಮಾಡಿಸ್ಕೊಂಡು ಹೊರಟು ಬಿಡೋಣ ಅಂದ್ರೆ ಅಲ್ಲಿನ ಯಾವ ಹೋಟೇಲಲ್ಲೂ ತಿಂಡಿಯಿಲ್ಲವೇ ? ಬಾಲಾಜಿ ಭವನದವ ೭:೩೦ ಮೇಲೇ ತಿಂಡಿ ಅಂತ ಖಡಕ್ಕಾಗಿ ಹೇಳಿ ಬಿಟ್ಟಿದ್ದ. ರಾಜ ಭವನಕ್ಕೆ ಮುಂಚೆಯೇ ಹೋಗಿ ಡೀಲ್ ಮಾಡಿದ್ರಿಂದ ೬:೩೦ ಕ್ಕೆ ತಿಂಡಿ ಕೊಡ್ತೀವಂತ ಹೇಳಿದ್ದ. ಅಂತೂ ೬:೪೫ಕ್ಕೆ ನಮ್ಮಿಂದಲೇ ತಿಂಡಿಯ ಬೋಣಿಯಾಗಿತ್ತು. ಎಲ್ಲರದ್ದೂ ತಿಂಡಿಯಾಗಿ, ಮಧ್ಯಾಹ್ನದ ಊಟಕ್ಕೂ ಇರಲಿ ಅಂತ ತಲಾ ನಾಲ್ಕು ಇಡ್ಲಿ ಕಟ್ಟಿಸ್ಕೊಂಡು ಬೋಧಿನಾಯಕ್ಕನೂರಿನಿಂದ ಹೊರಡುವಷ್ಟರಲ್ಲಿ ಘಂಟೆ ಏಳೂಕಾಲಾಗ್ತಾ ಬಂದಿತ್ತು .

Friday, May 5, 2017

ಕೊಡೈಕೆನಾಲ್ ಪ್ರವಾಸ:

ಕೊಡೈಕೆನಾಲಿಗೆ ಹೋಗಬೇಕಂತ ಸುಮಾರು ದಿನದಿಂದ ಇದ್ರೂ ಮುಹೂರ್ತ ಕೂಡಿಬಂದಿರಲಿಲ್ಲ. ಅಲ್ಲಿಗೆ ಹೋಗಿ ಬರೋ ಸುದ್ದಿ ಹೇಳಿದಾಗ ಟ್ರಾವೆಲ್ ಏಜೆಂಟ್ ಅಲ್ಲೇನು ಇಲ್ಲ ಸಾರ್. ಬರೀ  ೬ ಕಿ.ಮೀ ಗಳ ಜಾಗಕ್ಕೇ ಬೇರೆ ಬೇರೆ ಹೆಸರುಗಳಿಂದ ಕರೀತಾರೆ ಅಂದಿದ್ದ. ಗೂಗಲ್ಲಲ್ಲಿ ನೋಡಿದ್ರೆ ಎಲ್ಲಾ ಸ್ಥಳಗಳನ್ನ ನೋಡೋಕೆ ೭೮ ಕಿ.ಮೀ ಆಗ್ತಿತ್ತು. ಏನಾದರಾಗಲಿ, ಹೋಗಿ ಬರೋದೇ ಸೈ ಒಂದು ದಿನಕ್ಕೆ ಅಂತ ಪಳನಿಯಿಂದ ಕೊಡೈಕೆನಾಲಿಗೆ ಹೊರಟ್ವಿ.

ಪಳನಿಯಿಂದ ಹೊರಟು ಕೊಡೈಕೆನಾಲಿಗೆ ಬರೋಕೆ ೬೫ ಕಿ.ಮೀ ಆದರೂ ಘಾಟಿಯ ದಾರಿಯಾದ್ದರಿಂದ ಏನಿಲ್ಲವೆಂದರೂ ಎರಡೂವರೆ ಘಂಟೆ ಬೇಕಿತ್ತು.  ಪಳನಿಯ ಉರಿಬಿಸಿಲಿನಿಂದ ಕೊಡೈಕೆನಾಲಿನ ಅರಣ್ಯ ಪ್ರದೇಶದ ಹತ್ತಿರತ್ತರ ಬರುತ್ತಿದ್ದಂತೆಲ್ಲಾ ಗಾಳಿ ತಣ್ಣಗಾಗುತ್ತಿದ್ದರಿಂದ ಆ ಎರಡೂವರೆ ಘಂಟೆ ಕಷ್ಟದ ಹಾದಿ ಎನಿಸಲಿಲ್ಲ. ದಾರಿಯಲ್ಲಿ ಸಿಕ್ಕ ಗಿರಿಕಂದರಗಳು, ಅರೆ ತುಂಬಿದ ಹಳ್ಳಗಳು, ಮುಳುಗುತ್ತಿರುವ ಸೂರ್ಯ ಬೆಟ್ಟದಾಚೀಚೆ ಮೂಡಿಸುತ್ತಿದ್ದ ರಂಗುಗಳ ಗಮನಿಸುತ್ತಾ, ತಣ್ಣನೆಯ ಗಾಳಿಗೆ ತಲೆಯೊಡ್ಡಿ, ಫೋಟೋ ಬಯಕೆಯಲ್ಲಿದ್ದ ಕ್ಯಾಮೆರಾವೊಡ್ಡಿ ಮುಂದೆ ಸಾಗಿದೆವು. ಮಧ್ಯದಲ್ಲೊಬ್ಬ ಜೇನು ಮಾರುವವ ಸಿಕ್ಕಿದ. ನಮ್ಮ ಕಡೆ ಎಮ್ಮೇಟಿಯಲ್ಲಿ ಬರೋ ಮೀನವನಂತೆ ಇಲ್ಲಿ ತನ್ನ ಎಮ್ಮೇಟಿಯ ಹಿಂಬದಿಗೆ ಜೇನು ತತ್ತಿಯ ಕಟ್ಟಿ ಹೊರಟಿದ್ದ ಜೇನವ ಇವ. ನಮ್ಮಲ್ಲೆಲ್ಲಾ ಎಲ್ಲೋ ಕಾಡಲ್ಲಿ ಕಟ್ಟಿದ್ದ ಜೇನಿಗೆ ಹೊಗೆ ಹಾಕಿ ಹಿಡಿದೋ, ತೋಟದಲ್ಲಿಟ್ಟಿದ್ದ  ಜೇನುಪೆಟ್ಟಿಗೆಯಲ್ಲಿದ್ದ ಜೇನನ್ನು ಹಿಂಡಿಯೋ ಒಂದೆರಡು ಬಾಟಲಿ ಜೇನು ತೆಗೆದು ಅದನ್ನು ಅಪರೂಪಕ್ಕೆ ವ್ಯಾಪಾರ ಮಾಡೋದನ್ನ ನೋಡಿದ್ದೆ. ಆದರೆ ಇಲ್ಲಿ ಜೇನಿನ ಸಂಸಾರವನ್ನೇ ಸರ್ವನಾಶ ಮಾಡುವವನಂತೆ ಬುಟ್ಟಿಗಟ್ಟಲೇ ಜೇನುಗೂಡು ಹಿಡಿದು ಹೊರಟವನ ಕಂಡು ಒಂಥರಾ ಆಯ್ತು. ಹೇಗಿದ್ರೂ ಎದುರಿಗಿದ್ದ ಜಲಧಾರೆಯ ಫೋಟೋ ತೆಗೆಯಲೆಂದು ನಿಲ್ಲಿಸಾಗಿತ್ತು. ಪೋಸು ಕೊಡುತ್ತಿದ್ದ ನಮ್ಮತ್ತ ಬಂದವ ತಮಿಳಾ, ಹಿಂದಿಯಾ ಅಂದ. ನಮ್ಮ ಮುಖ ನೋಡಿ ಇವರು ಹೊರಗಿನವರು ಅನ್ನಿಸಿರಬೇಕು. ಹಿಂದಿ ಅಂದೆವು. ಒಂದು ಲೀಟರ್ ಬಾಟಲಿಗೆ ಐನೂರರಿಂದ ಸಾವೈರದೈನೂರರ ವರೆಗೆ ಹೇಳುತ್ತಿದ್ದ ಅವ ! ಶುದ್ದ ಜೇನುತುಪ್ಪ ಸಾರ್ ಅಂದರೂ ನಮಗೆ ಅನುಮಾನ. ಜೇನುತತ್ತಿಯನ್ನು ಹಿಡಿದು ಹೊರಟಿದ್ದರೂ ಅವ ಮಾರಹೊರಟಿದ್ದು ಶುದ್ಧ ತುಪ್ಪವೋ, ಸಕ್ಕರೆಪಾಕವೋ ಯಾರಿಗೆ ಗೊತ್ತು ? !  ಎಲ್ಲರೂ ಒಂಚೂರ್ಚೂರು ಟೇಸ್ಟ್ ನೋಡಿದರು. ನನಗೆ ಜೇನುತುಪ್ಪ ಕೊಳ್ಳೋ ಉಮೇದಿರದಿದ್ದರಿಂದ, ಅದಕ್ಕಿಂತ ಸುತ್ತಣ ಪ್ರಕೃತಿ ಸವಿಯೋದೇ ಮುಖ್ಯವಾಗಿದ್ದರಿಂದ ನಾನು ಟೇಸ್ಟ್ ನೋಡೋ ಗೋಜಿಗೆ ಹೋಗಿರಲಿಲ್ಲ. ಶಿರಸಿಯವನಾದ ಹೆಗಡೆಗೆ ಅದರಲ್ಲೇನೋ ಮೋಸ ಖಂಡಿತ್ತೇನೋ. ಇದು ಒರಿಜನಲ್ ಅಲ್ಲ ಕಣ್ರೋ ಅಂದ. ಉಳಿದವರಿಗೂ ಆ ದುಬಾರಿ ತುಪ್ಪದವನಿಂದ ಪಾರಾಗಲು ಒಂದು ಕಾರಣ ಬೇಕಾಗಿತ್ತೇನೋ. ಈ ಬೇಡ , ಬೇಡ ಅಂತ ಗಾಡಿ ಹತ್ತಿದ್ರು. ನಾನು ಫೋಕಸ್ ಮಾಡಿದ್ದ ೭೦-೩೦೦ ಲೆನ್ಸ್ ಒಳಗಿಟ್ಟು ೧೮-೫೫ ಲೆನ್ಸ್ ಜೋಡಿಸುತ್ತಾ ಗಾಡಿಯ ಒಳಸೇರಿದೆ. ಕತ್ತಲಾಗೋದ್ರೊಳಗೆ ಊರು ಸೇರೋ ಗಡಿಬಿಡಿಯಲ್ಲಿದ್ದ ನಮ್ಮ ಡ್ರೈವರ್ರು ಆ ಘಾಟಿಯಲ್ಲಿ ಗಾಡಿ ಭರ್ರೆನಿಸಿದ. ಒಂದೆರೆಡು ಸೆಕೆಂಡ್ ಜೇನವನ ಬುಲಾವು ಕೇಳುತ್ತಿತ್ತು.

ಸಿಲ್ವರ್ ಕಾಸ್ಕೇಡ್ ಪಾರ್ಕು ಮತ್ತು ಜಲಪಾತ:
ಕೊಡೈಕೆನಾಲಿಂದ ೧೨ ಕಿ.ಮೀ ಮುಂಚೆ ಪೆರುಮಾಳ್ ಎಂಬ ಊರು ಸಿಗುತ್ತೆ. ಅದಕ್ಕಿಂತ ಮೂರ್ನಾಲ್ಕು ಕಿ.ಮೀ ಮುಂಚೆ ಕೊಡೈಕೆನಾಲಿನ ಟೋಲ್ ಗೇಟ್ ಸಿಗುತ್ತೆ. ದಿನಕ್ಕೆ ೫೦ರಂತೆ ಟೋಲ್ ಕೊಟ್ಟು ಒಳಸೇರಿದ್ವಿ. ಟೋಲಿಂದ ಸ್ವಲ್ಪ ಮುಂದೆ ಬರುತ್ತಿದ್ದಂತೆಯೇ ರಸ್ತೆಯ ಪಕ್ಕದಲ್ಲೊಂದು ಜಲಪಾತ ಕಾಣುತ್ತೆ. ಅದೇ ಸಿಲ್ವರ್ ಕಾಸ್ಕೇಡ್ ಜಲಪಾತ. ಸದಾ ಪ್ರವಾಸಿಗರಿಂದ ಗಿಜಿಗಿಜಿಗುಡೋ ಈ ಜಲಪಾತದ ಬುಡದವರೆಗೂ ಹೋಗಲಾಗದಿದ್ದರೂ ದೂರದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲಡ್ಡಿಯಿಲ್ಲ. ಸೂರ್ಯಾಸ್ತವಾಗುತ್ತಿದ್ದ ಸಮಯದಲ್ಲಿ ಇಲ್ಲಿಗೆ ಬಂದದ್ದರಿಂದ ಜಲಪಾತದ ತಲೆಯಿಂದ ನೀರ ಜೊತೆಗೆ ಸೂರ್ಯರಶ್ಮಿಗಳೂ ಕೆಳಧುಮುಕುತ್ತಿದ್ದವೋ ಎನಿಸುತ್ತಿತ್ತು. ಎದುರು ನಿಂತು ಒಂದಿಷ್ಟು ಫೋಟೋ ತೆಗೆಸಿಕೊಳ್ಳುವಷ್ಟರಲ್ಲೇ ಕತ್ತಲಾಗಿಹೋಯ್ತು. ಅಲ್ಲೇ ನಿಂತು ಜೋಳ ತಿನ್ನುತ್ತ, ಸುತ್ತ ನಿಂತು ಗುಳ್ಳೆಗಳ ಹಾರಿಸುತ್ತಿದ್ದ ಚಿಣ್ಣರ, ಹುಡುಗ-ಹುಡುಗಿಯರ ಗುಂಪು ನೋಡ ನೋಡುತ್ತಲೇ ಫೋಟೋದಲ್ಲಿ ಜಲಪಾತ ಕಂಡರೆ ಮುಖ ಕಾಣದ, ಮುಖ ಕಂಡರೆ ಜಲಪಾತ ಕಾಣದಂತ ಪರಿಸ್ಥಿತಿಯಾಗೋಯ್ತು. ಅಲ್ಲಿನ ವಾತಾವರಣವನ್ನು ಸವಿಯುತ್ತಾ , ಜೋಳ ತಿನ್ನುತ್ತಾ ೨೦-೨೫ ನಿಮಿಷ ಅಲ್ಲೇ ಇದ್ದೆವು. ಪೂರ್ಣ ಕತ್ತಲಾಗಿ, ಅಲ್ಲಿನ ದೀಪಗಳು ಮಿನುಗೋ ಹೊತ್ತಿಗೆ ಮತ್ತೆ ಕೊಡೈಕೆನಾಲಿನ ಹಾದಿ ಹಿಡಿದೆವು.

ಪೆರುಮಾಳ್ ಆಂಟಿ ಮತ್ತು ಇಲ್ಲದ ಪೀಕು
ಇಲ್ಲಿಗೆ ಬರೋ ಹೊತ್ತಿಗೆ ಅಸ್ತಂಗತನಾಗಿದ್ದ ಸೂರ್ಯ ಆಗಸದಲ್ಲಿ ಬಿಡಿಸಿದ್ದ ಬಗೆ ಬಗೆ ಚಿತ್ತಾರಗಳು ಕಾಣತೊಡಗಿದ್ದವು. ಒಂದಿಷ್ಟು ಪಿಂಕು, ಒಂದಿಷ್ಟು ಕೇಸರಿಯ ರೇಖೆಗಳು ತಮ್ಮವೇ ಕಲ್ಪನೆಗಳನ್ನು ತರುತ್ತಿದ್ದವು. ಒಂದಿಷ್ಟು ಜನ ಇಲ್ಲೊಂದು ಟೀ ಕುಡಿಯೋಣವೆಂದು ನಿಂತರೆ ನಾನು "ಸಿಕ್ಕೀತೆ ಮುಂದಿನ ದಾರಿ, ನನ್ನೆಲ್ಲಾ ಕಲ್ಪನೆ ಮೀರಿ.." ಅಂತ ಕಿರಿಕ್ ಪಾರ್ಟಿಯ ಹಾಡನ್ನು ನನ್ನದೇ ಅವತರಣಿಕೆಯಲ್ಲಿ ಗುನುಗುತ್ತಾ  ಮೋಡಗಳ ಚಿತ್ತಾರದಲ್ಲಡಗಿರಬಹುದಾದ ಅನಂತ ಸಾಧ್ಯತೆಗಳಲ್ಲಿ ಒಂದಿಷ್ಟಾದರೂ ದಕ್ಕಿಸಿಕೊಳ್ಳೋ ಪ್ರಯತ್ನದಲ್ಲಿದ್ದೆ. ಅಲ್ಲೇ ಬಂದಿದ್ದು ನಮ್ಮ ಮಾರನೆಯ ದಿನ ಹಾಳು ಮಾಡಿದ ಆಂಟಿ ! ಇಲ್ಲೇ ಅರ್ಧ ಕಿ.ಮೀ ಹೋದ್ರೆ ಪೆರುಮಾಳ್ ಪೀಕ್ ಅಂತ ಇದೆ. ಅಲ್ಲಿಂದ ಐದು ಕಿ.ಮೀ ಹೋದ್ರೆ ಸಖತ್ತಾದ ಜಾಗವಿದೆ ಅಂದ್ರು. ಗೂಗಲ್ಲಲ್ಲೂ ಆ ತರದ್ದೊಂದು ಜಾಗ, ಅಲ್ಲಿನ ಚಿತ್ರಗಳೆಲ್ಲಾ ಇದ್ದಿದ್ರಿಂದ, holidayIQ, tripadvisor ಲೂ ಅದರ ಬಗ್ಗೆ ಇದ್ದಿದ್ರಿಂದ ನಾವೂ ಹೌದಿರಬೇಕು ಅಂದ್ಕೊಂಡೆವು. ಕೊಡೈಕೆನಾಲಿಂದ ಬರೀ ೧೨ ಕಿ.ಮೀ. ಹಾಗಾದ್ರೆ ನಾಳೆಯ ಮೊದಲ ಸ್ಥಳ ಇದೇ ಅಂತ ಡಿಸೈಡ್ ಮಾಡಿದ್ವಿ. ಆದ್ರೆ ಅಲ್ಲಿ ಆ ತರದ ಪೀಕಿದ್ರೂ ಗೂಗಲ್ ಮ್ಯಾಪು ಇನ್ನೂ ೮ ಕಿ.ಮೀ ಮುಂದೆ ತೋರ್ಸತ್ತೆ. ತೋರ್ಸಿದ ಜಾಗದಲ್ಲಿ ಯಾವ ಪೀಕೂ ಇಲ್ಲವೆಂದೂ, ಪೆರುಮಾಳಿನ ಪಕ್ಕದಲ್ಲಿ ಇರುವ ಪೀಕಿಗೆ ಅರಣ ಇಲಾಖೆಯವರು ಈಗ ಹೋಗೋಕೆ ಬಿಡೋಲ್ಲವೆಂದು ನಮಗೆ ಗೊತ್ತಿರಲಿಲ್ಲ. ಮಾರನೆಯ ದಿನ ಒಂಭತ್ತೂವರೆಗೆ ಹೊರಟವರು ಟ್ರಾಫಿಕ್ಕಿನಲ್ಲಿ ಒದ್ದಾಡುತ್ತಾ ಇಲ್ಲಿಗೆ ಬರುವಾಗಲೇ ಹನ್ನೆರಡು ಘಂಟೆ ಮಾಡಿಕೊಂಡಾಗಲೂ ಗೊತ್ತಾಗಿರಲಿಲ್ಲ. ಇವತ್ತು ಸಂಜೆಯೇ ವಾಪಾಸ್ ಹೊರಡಬೇಕೆಂದು ಡ್ರೈವರ್ ವರಾತ ತೆಗೆದು, ಟ್ರಾವೆಲ್ ಏಜೆಂಟನ ಜೊತೆಗೆ ಅದರ ಬಗ್ಗೆ ಗಲಾಟೆ, ಸಂಧಾನಗಳನ್ನು ನಡೆಸಿದಾಗಲೂ ಗೊತ್ತಾಗಿರಲಿಲ್ಲ.   ಕೊಡೈಕೆನಾಲ್ ಲೇಕಿಗಾದರೂ ಹೋಗೋಣವೆಂದು ಮತ್ತೆ ವಾಪಾಸ್ ತಿರುಗಿಸಿ ಅಲ್ಲೂ ಟ್ರಾಫಿಕ್ ಕಂಡು ತಲೆಕೆಟ್ಟು ಮೂರನೆಯ ದಿನದ ಪ್ಲಾನಾದ  ಥೇನಿಯತ್ತ  ಹೊರಟಾಗಲೂ ಗೊತ್ತಾಗಿರಲಿಲ್ಲ. ಕೊಡೈಕೆನಾಲಿನ ಬೆಟ್ಟಗಳ ನೋಡೋದು, ಅಲ್ಲಿನ ರಸ್ತೆಗಳಲ್ಲಿ ನಡೆಯೋದರಲ್ಲೇ ಎರಡನೆಯ ಮಧ್ಯಾಹ್ನದವರೆಗೆ ಕಳೆದಿದ್ದ ನಾವು ಮತ್ತೆ ಪೆರುಮಾಳಿಗೆ ವಾಪಾಸ್ ಬಂದು ಅಲ್ಲಿಂದ ಮಧುರೈಯ ರಸ್ತೆಯಲ್ಲಿ ಮುಂದೆ ಹೊರಟವರು ಯಾಕೋ ಸ್ವಲ್ಪ ಮುಂದೆ ಬಂದಾಗ ರಸ್ತೆ ಖಚಿತಪಡಿಸಿಕೊಳ್ಳಲು ಒಬ್ಬನ್ನ ಕೇಳೋಣ ಅಂತ ನಿಲ್ಲಿಸಿದ್ವಿ. ಆಗ ಏನಕ್ಕೂ ಇರಲಿ ಅಂತ ಅಲ್ಲೊಬ್ಬನನ್ನು ಇಲ್ಲಿ ಪೆರುಮಾಳ್ ಪೀಕ್ ಎಲ್ಲಿದೆ ಎಂದೆ. ಪೀಕ್ ಇಲ್ಲೇ ಸ್ವಲ್ಪ ಮುಂದಿದೆ. ಆದ್ರೆ ಈಗ ಅರಣ್ಯ ಇಲಾಖೆಯವರು ಅಲ್ಲಿಗೆ ಬಿಡುತ್ತಿಲ್ಲ ಅಂದ.ಅಯ್ಯೋ ಶಿವನೇ. ನೀನು ನಿನ್ನೆಯೇ ಸಿಕ್ಕಿದ್ರೆ ಏನಾಗಿತ್ತು. ಬೆಳಗ್ಗೆಯಾದರೂ ಸಿಕ್ಕಿದ್ರೆ ಏನಾಗ್ತಿತ್ತು ಅಂತ ತಪ್ಪು ಮಾಹಿತಿ ಕೊಟ್ಟ ಎಲ್ಲರಿಗೂ ಶಾಪ ಹಾಕುತ್ತಾ ಮುಂದೆ ಸಾಗಿದ್ವಿ. ಬೆಳಗ್ಗಿಂದ ಪೋಲೀಸಿಂದ ಹಿಡಿದು ಅಲ್ಲಿ ಬೈಕ್ ಹಿಡಿದು ಸುತ್ತುತ್ತಿದ್ದ ಹುಡುಗರವರೆಗೆ ಅದೆಷ್ಟು ಜನಕ್ಕೆ ಕೇಳಿದ್ವೋ? ಊಹೂಂ, ಒಬ್ರಿಗೂ ಗೊತ್ತಿರಲಿಲ್ಲ ಇಲ್ಲಾ, ಅಲ್ಲಂತೆ, ಇಲ್ಲಂತೆ , ಸರಿಯಾಗಿ ಗೊತ್ತಿಲ್ಲ ಅನ್ನೋರೇ ! ನೂರಿನ್ನೂರು ಕಿ.ಮೀ ದೂರದಲ್ಲಿರೋದಲ್ಲಪ್ಪ, ಪಕ್ಕದೂರಲ್ಲಿ ಇರೋ , ಸದ್ಯಕ್ಕೆ ಬಂದಾಗಿರೋ ಜಾಗದ ಬಗ್ಗೆಯಾದರೂ ಮಾಹಿತಿ ಬೇಡವಾ ?


ತಮಿಳೆಂದರೆ ಸುಲಿಗೆಯಾ ಗುರು ?
ತಮಿಳುನಾಡಿನ ಗಾಡಿಯಲ್ಲ ಅಂತ ಗೊತ್ತಾದ ತಕ್ಷಣ ಫೀ ಪಾರ್ಕಿಂಗಿದ್ದರೂ ಪಾರ್ಕಿಂಗ್ ಫೀ ಕೇಳಲು ಬರುತ್ತಿದ್ದ ಪಳನಿಯ ಜನ, ೫೦ ರೂ ಚೀಟಿಯಿದ್ದರೂ ೬೦ ರೂ ತಗೊಳ್ಳುತ್ತಿದ್ದವ, ಪಳನಿಯ ದೇವಸ್ಥಾನದಲ್ಲಿ ದೇವರಿಗೆ ಹಾಕುತ್ತೀವಿ ಅಂತ ಕ್ಯೂನಲ್ಲಿ ನಿಂತ ಜನರಿಂದ ದುಡ್ಡು ವಸೂಲು ಮಾಡುತ್ತಿದ್ದ ಅರ್ಚಕರು.. ಹೀಗೆ ತಮಿಳುನಾಡೆಂದರೆ ಒಂಥರಾ ಬೇಸರ ಹುಟ್ಟಿಹೋಗಿತ್ತು. ಜೊತೆಗೆ ಎರಡನೆಯ ದಿನದ ಅರ್ಧ ದಿನ ಹಾಳು ಮಾಡಿದ್ದೂ ಸೇರಿದಂತೆ ಸಖತ್ ಸಿಟ್ಟು ಬಂದಿತ್ತು ಇಲ್ಲಿನ ಸುಲಿಗೆಕೋರ ವ್ಯವಸ್ಥೆಯ ಬಗ್ಗೆ. ಪೆರುಮಾಳ್ ದಾಟಿ ಅಂತೂ ಇಂತೂ ಕೊಡೈಕೆನಾಲಿಗೆ ಬಂದ್ವಿ. ಬಂದಾದ ನಂತರ ಎಲ್ಲುಳಿಯೋದು ? ಹಾದಿಯಲ್ಲಿ ಉಳಿಯೋದು ಅಂತ ಅಂತ್ಕೊಂಡಿದ್ದ ಹೋಟೇಲೀಗೆ ಫೋನ್ ಮಾಡಿದರೆ ರೂಮಿಲ್ಲ. ಇರೋದೆಲ್ಲಾ ೮-೧೦ ಸಾವಿರ ಹೇಳುತ್ತಿದ್ದ. ಪಳನಿಯಲ್ಲಿ ಆದಂತೆ ಆಗೋದು ಬೇಡ ಅಂತ ಒಬ್ಬೊಬ್ಬರು ಒಂದೊಂದು ಕಡೆ ರೂಮು ಹುಡುಕೋಕೆ ಹೋದ್ವಿ.  ರೂಬಿ ಅಂತೊಂದು ಸಿಗ್ತು. ಅಲ್ಲಿ ೨ ರೂಮಿಗೆ ೫ ಸಾವಿರ ಹೇಳಿದ್ದ. ಅಂತೂ ನಾಲ್ಕಕ್ಕೆ ಬುಕ್ ಮಾಡಿ, ನಂಬರ್ ತಗೊಂಡು ಬಂದಿದ್ರು ಇಬ್ರು. ಪದ್ಮಾ ಅಂತೊಂದು ಲಾಡ್ಜ್ ನೋಡೋಕೆ ಹೋದೋರು ಅಲ್ಲಿ ಮೂರು ಸಾವಿರದ ರೂಮಿದ್ದರೂ ಅಲ್ಲಿ ೭ ಜನ ಇರೋಕಾಗಲ್ಲ. ಬೇರೆ ರೂಮುಗಳು ಖಾಲಿ ಇದ್ರೂ ಕೊಡ್ತಿಲ್ಲ ಅವ ಅಂದ್ರು. ಅಷ್ಟರಲ್ಲಿ ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿದ್ದರೂ ಇದು ನಮ್ಮ ಜಾಗ, ಇಲ್ಯಾಕೆ ನಿಲ್ಲಿಸಿದ್ದೀಯ ಅಂತ ತಮಿಳು ಗಾಡಿಯವನೊಬ್ಬ ಜಗಳಕ್ಕೆ ಬಂದ. ಅವನಿಗೆ ಸಮಾಧಾನ ಮಾಡಿ ಗೂಗಲ್ಲಲ್ಲಿ ಸಿಕ್ತಿದ್ದ, ತಮಿಳು ಟೂರಿಸಂ ವೆಬ್ ಸೈಟಲ್ಲಿ ಸಿಕ್ಕಿದ್ದ ಹೋಟೇಲ್ ರೂಮುಗಳಿಗೆಲ್ಲಾ ಫೋನ್ ಮಾಡಿದ್ರೂ ಯಾವುದ್ರಲ್ಲೂ ರೂಮು ಸಿಕ್ತಿರಲಿಲ್ಲ. ಎಲ್ಲಾ ಒಂದು ರೂಮಿಗೆ ೮-೧೦ ಸಾವಿರ ಹೇಳುತ್ತಿದ್ದರೂ ಇಲ್ಲಾ ಖಾಲಿ ಅನ್ನುತ್ತಿದ್ದರು. ಅಷ್ಟರಲ್ಲಿ ೫ ಸಾವಿರಕ್ಕೆ ರೂಮು ಕೊಡಿಸ್ತೇವೆ. ರೂಮಿಗೆ ೫ ಸಾವಿರ ಅಂತ ಒಂದಿಷ್ಟು ಜನ ಮುಂದೆ ಬಂದ್ರು. ಆದರೆ ಅವರೆಲ್ಲಾ ರೂಮು ಅಲ್ಲಿದೆ, ಇಲ್ಲಿದೆ ಅಂತ ಹೇಳುತ್ತಿದ್ದರೇ ಹೊರತು ೩೫೦೦ ಕ್ಕಿಂತ ಕೆಳಗಿಳಿಯಲು ಒಪ್ಪುತ್ತಿರಲಿಲ್ಲ. ಬಸ್ಟಾಂಡತ್ರ ಹೋಗಿ, ಅಲ್ಲಿ ಸುಮಾರು ರೂಮಿರತ್ತೆ ಅಂದ ಒಬ್ಬ. ಸರಿಯಂತ ಬಸ್ಟಾಂಡಿಗೆ ಬರೋ ಹೊತ್ತಿಗೆ ಘಂಟೆ ಏಳೂಮುಕ್ಕಾಲಾಗುತ್ತಾ ಬರುತ್ತಿತ್ತು. ಹೊಟ್ಟೆ ಚುರುಗುಟ್ಟುತ್ತಿತ್ತು.ಮೊದಲು ಊಟ ಮಾಡ್ಕೊಂಡು ರೂಂ ಹುಡುಕೋಣ ಅಂದೆ ನಾನು. ಇಲ್ಲ. ಮೊದಲು ರೂಂ ಅಂದ್ರು ಕೆಲವರು.ಸರಿ ಅಂತ ಮೂರು ಗುಂಪು ಮಾಡ್ಕೊಂಡು ಮೂರು ದಿಕ್ಕಲ್ಲಿ ಹೊರಟ್ವಿ. ನಾನು, ವರುಣ, ಪ್ರಮೋದ್ ಹೋದ ದಿಕ್ಕಲ್ಲಿ ಒಂದಿಷ್ಟು ಲಾಡ್ಜುಗಳೇನೋ ಸಿಕ್ತು. ಆದ್ರೆ ಅವುಗಳಲ್ಲೆಲ್ಲೂ ರೂಮಿರಲಿಲ್ಲ. ಕೆಲವು ಕಡೆ ಓಯೋ ರೂಂಗಳೂ ಕಾಣ್ತು. ಬೇರ್ಬೇರೆ ಬುಕಿಂಗ್ ಆಪ್ಗಳಲ್ಲಿ ರೂಂ ಕಂಡರೂ ಅವು ೮ರೊಳಗೆ ಇರಲಿಲ್ಲ. ಕೆಲವರು ರೂಂ ನೋಡಿ ಆಮೇಲೆ ಮಾತಾಡಿ ಅನ್ನುತ್ತಿದ್ದರೂ ನಾವು ಮೊದಲು ರೇಟ್ ಹೇಳಿ, ಬಜೆಟ್ ಹೊಂದಿಕೆಯಾದ್ರೆ ಮಾತ್ರ ನೋಡ್ತೇವೆ ಅನ್ನುತ್ತಿದ್ವಿ. ನಡೆದು ನಡೆದು ಕೊಡೈಕೆನಾಲಿನ coakers walk ಅನ್ನೋ ಸ್ಥಳದವರೆಗೂ ಬಂದ್ವಿ. ಆ ಜಾಗ ಬಂದಾಗುತ್ತಿತ್ತು. ರೂಮುಗಳಿರಲಿಲ್ಲ. ಅಲ್ಲೇ ಇದ್ದ ಚರ್ಚಿನ ಪಕ್ಕದ ಹಾದಿ ಹಿಡಿದು ಕೊಡೈಕೆನಾಲಿನ ಶಾಪಿಂಗ್ ರಸ್ತೆಗಳಲ್ಲಿ ನೇತಾಕಿದ್ದ ಸ್ವೆಟರು, ಮಫ್ಲರುಗಳನ್ನೆಲ್ಲಾ ನೋಡುತ್ತಾ ಹಾಗೇ ಮುಂದೆ ಬಂದೆವು. ಲೈಟಾಗಿ ಚಳಿ ಕಾಡುತ್ತಿದ್ದರೂ ನಡೆಯುತ್ತಿದ್ದರಿಂದ ಸ್ವೆಟರಿನ ಅಗತ್ಯ ಕಾಣಲಿಲ್ಲ. ಹಾಗೇ ಮುಂದೆ ಬಂದು ಕೊಡೈಕೆನಾಲ್ ಆಸ್ಪತ್ರೆಯವರೆಗೂ ಬಂದೆವು. ಎಲ್ಲೂ ರೂಮಿಲ್ಲ. ಅಲ್ಲಲ್ಲಿ ನಿಲ್ಲಿಸಿದ್ದ ಟಿ.ಟಿಗಳು ಕಾಣುತ್ತಿದ್ದರಿಂದ ಇಲ್ಲಿ ರೂಮಿರಬಹುದಾ, ಇನ್ನು ಹತ್ತು ಹೆಜ್ಜೆ ಮುಂದಿರಬಹುದಾ ಅನ್ನೋ ಆಸೆ ಜಾಗೃತವಾಗುತ್ತಿತ್ತು. ಆದರೆ ಆ ಆಸೆ ನೀರ ಮೇಲಿನ ಗುಳ್ಳೆಯಂತೆ ಕೆಲ ಹೊತ್ತಲ್ಲೇ ಒಡೆಯುತ್ತಿತ್ತು. ಕಾಫಿ ಬೋರ್ಡ್, ಮ್ಯೂಸಿಯಂ ಎಲ್ಲಾ ಸಿಕ್ತು. ಆದ್ರೆ ರೂಂ, ಕಾಟೇಜ್ ಮಾತ್ರ ಸಿಗಲೇ ಇಲ್ಲ.  ಬೀದಿಯಲ್ಲಿದ್ದ ಲೈಟುಗಳ ಬೆಳಕು ಕೊಂಚ ಕೊಂಚವೇ ಕಮ್ಮಿಯಾಗುತ್ತಿತ್ತು.  ಇನ್ನು ಇಲ್ಲಿ ನಡೆದು ಉಪಯೋಗವಿಲ್ಲವೆಂದು ವಾಪಾಸ್ ನಡೆದೆವು.

ವಾಪಾಸ್ಬರುತ್ತಿದ್ದ ಹಾದಿಯಲ್ಲಿ ೪ ಸಾವಿರಕ್ಕೆ ಕೊಡೋಕೆ ರೆಡಿಯಾದ ರೂಬಿಗೇ ಹೋದರೆ ಹೇಗೆ ಅನಿಸಿತು. ಸರಿ, ಅಲ್ಲೇ ಹೋಗೋಣ ಅಂತ ಹುಡುಕುತ್ತಿದ್ದ ಉಳಿದವರಿಗೆ ಫೋನ್ ಮಾಡ್ದೆ. ಅವರಿಗೂ ಎಲ್ಲೂ ಸಿಕ್ಕಿರಲಿಲ್ಲ. ಎಲ್ಲಾ ಗಾಡಿಯಿಟ್ಟಲ್ಲಿಗೆ ಬನ್ನಿ. ರೂಬಿಗೇ ಹೋಗೋಣ ಅಂದೆ. ಅವರಿಗೂ ಅದೇ ಸರಿಯೆನ್ನಿಸಿತೋ, ಇನ್ನು ಈತರ ಹುಡುಕಿ ಪ್ರಯೋಜನವಿಲ್ಲವೆನಿಸಿತೋ ಗೊತ್ತಿಲ್ಲ. ಎಲ್ಲಾ ಸ್ವಲ್ಪ ಹೊತ್ತಲ್ಲೇ ಗಾಡಿಯತ್ರ ಬಂದಿದ್ರು

ಧಿಮಾಕಂದ್ರೆ ಹಿಂಗಿರಬೇಕು:
ರೂಂ ಹುಡುಕಹೋದ ಒಬ್ಬೊಬ್ಬರದು ಒಂದೊಂದು ಕತೆಯಾಗಿತ್ತು. ಎಂತೆಂತೋ ರೂಂಗೆ ಅಡತಾಕಿದ ಹೆಗಡೆ, ತೇಜಸ್ಸಿಗೆ ಒಬ್ಬ ಧಡಿಯ ಸಿಕ್ಕಿದ್ದನಂತೆ. ಹಿಂದಿಯಲ್ಲಿ ಕೇಳಿದ್ದಕ್ಕೆ "ಮುಜೆ ಹಿಂದಿ ನಹೀ ಆತ.ತಮಿಳ್ ಮೇ ಬೋಲೋ" ಅಂದಿದ್ನಂತೆ. "ನಹಿ ಆತಾ" ಅನ್ನೋಕೆ ಬರುತ್ತೆ. ಕೇಳಿದ್ದಕ್ಕೆ ಹೇಳೋಕೆ ಬರಲ್ವಾ ? ಬರೀ ಇಲ್ಲಿ ಅಂತಲ್ಲ. ತಮಿಳುನಾಡಿನ ಸುಮಾರು ಕಡೆ ಈ ಅನುಭವವಾಗಿದ್ದುಂಟು. ರಸ್ತೆ ಬದಿಯಲ್ಲಿ ನಿಂತ ಜನರು ಬಿಡಿ ಪೋಲೀಸರನ್ನ ಕೇಳಿದ್ರೂ ಅವರು ಮಾತಾಡೋದು ತಮಿಳಲ್ಲೇ ! ಭಾಷಾಪ್ರೇಮ ಇರಲಿ ಗುರು . ಆದ್ರೆ ಈ ರೇಂಜಿಗಾ ? ಎಲ್ಲಾ ಬಂದಾದ ಮೇಲೆ ರೂಬಿಗೆ ಫೋನ್ ಮಾಡಿದ್ವಿ. ಆದ್ರೆ ಅವನು ರೂಂ ಇಲ್ವೇ ಇಲ್ಲ ಅನ್ನಬೇಕಾ ? ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ಕೇಳ್ಕೊಂಡು ಬಂದಿದ್ವಿ. ಈಗ ನೋಡಿದ್ರೆ ಈ ಕತೆ. ಅದೇ ತರ ಇಲ್ಲ ಅಂದ ಕೆಲವು ಲಾಡ್ಜವರು ಮತ್ತೆ ಫೋನ್ ಮಾಡಿ ಇದೆ ಅನ್ನೋದು, ಇನ್ನೊಂದಿಷ್ಟು ರೇಟೇರಿಸೋದು ನಡೆಯುತ್ತಿರುವಾಗ ನಾವು ಬಂದ ದಾರಿಯಲ್ಲೇ ಹೋಗೋಣ. ರೂಬಿಯಲ್ಲದಿದ್ದರೆ ಅದರ ಪಕ್ಕದಲ್ಲಿ ಯಾವುದಾದ್ರೂ ಸಿಕ್ಕೀತು ಅಂತ ವಾಪಾಸ್ ಹೊರಡೋಕೆ ಹೊರಟ್ವಿ.

ಕೊನೆಗೂ ಸಿಕ್ತೊಂದು ಬಂಗಾರದ ರೂಮು !
ಎಲ್ಲೂ ಸಿಗಲಿಲ್ಲ ಅಂದ್ರೆ ಕೊನೆಗೆ ಗಾಡಿಯಲ್ಲೇ ಮಲಗೋದು ಅಂತ ಕೆಲವರು. ಆದ್ರೆ ನಿನ್ನೆಯೂ ನಿದ್ರೆಯಾಗಿಲ್ಲ. ಪಳನಿಯ ಬಿಸಿಲಲ್ಲಿ ಸುಟ್ಟು ಹೈರಾಣಾಗಿ ಇಲ್ಲಿಗೆ ಬಂದಿದ್ದೀವಿ. ಇವತ್ತೂ ಮಲಗದಿದ್ದರೆ ಮೂರನೇ ದಿನದ ಟ್ರೆಕ್ಕಿಂಗ್ ಹೊಗೆ ಹಾಕಿಸ್ಕೊಳ್ಳತ್ತೆ. ಏನಾದ್ರಾಗಲಿ ರೂಂ ಹುಡುಕಲೇಬೇಕು ಅಂತ ನಾನು. ಹಾಗೇ ಸ್ವಲ್ಪ ದೂರ ಬರುವಷ್ಟರಲ್ಲಿ ದಾರಿ ತಪ್ಪಿಸ್ಕೊಂಡಿದ್ದು ಗೊತ್ತಾಯ್ತು. ಸರಿ,ಇದ್ರಲ್ಲೇ ಮುಂದೆ ಹೋಗೋಣ, ಯಾವುದಾದ್ರೂ ಹೋಟೇಲ್ ಸಿಗಬಹುದು ಅಂತ ಬರುತ್ತಿದ್ದಾಗ ಗೋಲ್ಡನ್ ಪಾಮ್ ಲಾಡ್ಜ್ ಅಂತೊಂದು ಲಾಡ್ಜ್ ಕಾಣುಸ್ತು. ಅಲ್ಲಿ ರೂಮುಗಳಿವೆ ಅಂತ ಕಂಡ ಬೋರ್ಡ್ ನೋಡಿ ನಾನು ಇಲ್ಲಿ ನೋಡಿ ಬರ್ತೇನೆ ಅಂತ ನಾನು, ಪ್ರಮೋದ ಅಲ್ಲಿಗೆ ಬಂದ್ವಿ. ಅದೃಷ್ಟಕ್ಕೆ ಅವನಿಗೆ ಸ್ವಲ್ಪ ಸ್ವಲ್ಪ ಹಿಂದಿ ಬರುತ್ತಿತ್ತು. ಒಂದು ರೂಮಿದೆ. ೫ ಸಾವಿರ ಅಂದ. ಅಂತೂ ಇಂತೂ ಚೌಕಾಸಿ ಮಾಡಿ ಚಾರ್ ಹಜಾರ್ ಅಂದ. ಪ್ರಮೋದ್ ನಾಲ್ಕೂವರೆಗೆ ಕೇಳೋಣ ಕಣೋ ಅಂತಿದ್ದ. ಗುರೂ, ಅವನು ಕೇಳ್ತಿರೋದೇ ನಾಲ್ಕು ಸಾವಿರಕ್ಕೆ. ಸ್ವಲ್ಪ ಸುಮ್ನಿರು ಅಂತ ರೂಂ ನೋಡ್ಬೋದಾ ಅಂದೆ. ಸರಿ ಅಂತ ರೂಂ ಬಾಯನ್ನ ಜೊತೆಮಾಡಿ ಕಳಿಸಿದ. ರೂಂ ನಂ ೨೦೪. ವಿಶಾಲವಾದ ೨ ಬೆಡ್ ಗಳಿದ್ದವು. ಒಂದೊಂದರಲ್ಲೂ ೩ ಜನ ಆರಾಮವಾಗಿ ಮಲಗಬಹುದಿತ್ತು. ಆದ್ರೆ ನಾವಿದ್ದಿದ್ದು ೭ ಜನ. ಎಕ್ಸಟ್ರಾ ಬೆಡ್ಡಿಗೆ ಎಷ್ಟಪ್ಪಾ ಅಂದೆ. ಮತ್ತೆ ೩೦೦ ಆಗುತ್ತೆ ಅಂದ ಅವ. ಹೋಟೇಲಿನವನ ಹತ್ರ ಚೌಕಾಶಿ ಮಾಡೋಣ ಅಂದ್ರೆ ೩೫೦೦ ಅಂತೆಲ್ಲಾ ಅನ್ನೋದಾದ್ರೆ ಹೋಗ್ಬುಡಿ. ನಾನು ಕೊಡೋದೇ ಇಲ್ಲ ಅಂತ ಖಡಾಖಂಡಿತವಾಗಿ ಹೇಳಿಬಿಟ್ಟಿದ್ದ ಅವ. ಕೊನೆಗೂ ಅವನತ್ರ ೪೦೦೦ ಕ್ಕೆ ಒಂದು ಎಕ್ಸಟ್ರಾ ಬೆಡ್ಡನ್ನೂ ಡೀಲ್ ಮಾಡಾಯ್ತು. ಸರಿ, ಹೊರಗಡೆ ನನ್ನ ಫ್ರೆಂಡ್ಸ್ ಇದ್ದಾರೆ. ಕರ್ಕೊಂಡು ಬರ್ತೀನಿ ಅಂದ್ರೆ ನೀವು ಇಲ್ಲಿ ಇರೋವರೆಗೆ ಮಾತ್ರ ಆಫರ್. ಹೊರಗೆ ಹೋದ್ರೆ ಮತ್ತೆ ಈ ರೂಮಿರೋಲ್ಲ ಅಂದ ಹೋಟೇಲ್ಲವ! ಎಲ್ಲಂದ್ರೂ ಇಷ್ಟು ಕೊಡ್ಲೇಬೇಕು ಇವತ್ತು. ಇಲ್ಲೇ ಇದ್ಬಿಡೋಣ ಉಳ್ದವ್ರನ್ನ ಕರ್ಕೊಂಡು ಬಾ ಅಂತ ಪ್ರಮೋದಿಗೆ ಹೇಳಿ ನಾನಲ್ಲೇ ನಿಂತೆ. ಉಳಿದವ್ರು ಬಂದ್ರೂ ಪ್ರಮೋದ್ ವರುಣ ಎಲ್ಲೋ ಮಾಯವಾಗಿದ್ರು. ರೂಮಿಗೆ ಬಂದು ಬ್ಯಾಗಿಡುವಷ್ಟರಲ್ಲಿ ವರುಣನ ಫೋನು. ಇಲ್ಲೊಬ್ಬ ೨೦೦೦ ಕ್ಕೆ ೨ಬಿಹೆಚ್ಕೆ ಮನೆ ಬಿಟ್ಟುಕೊಡೋಕೆ ರೆಡಿ ಇದ್ದಾನೆ ಒಂದು ರಾತ್ರಿಗೆ ಅಂತ. ! ತತ್ತೆರೀಕೆ. ದುಡ್ಕೊಟ್ಟಾಗೋಯ್ತಲ್ಲ. ಇನ್ನೇನು ಮಾಡೋದು?ಇಲ್ಲೇ ಬನ್ನಿ ಅಂತ ಅವರನ್ನು ಕರೆದಾಯ್ತು. ಆ ಮನೆಯವ್ನೂ ಮನೆಯೆಲ್ಲಿದೆ ಅಂತ ಸರಿಯಾಗಿ ಹೇಳ್ತಿರಲಿಲ್ಲವಂತೆ. ಅಲ್ಲಿದೆ,ಇಲ್ಲಿದೆ ಅಂತ ಕತೆ ಹೇಳೋನೆ. ಅವನಿನ್ನು ಎಲ್ಲೆಲ್ಲಿ ಸುತ್ತಿಸಿ ಟೋಪಿ ಹಾಕ್ತಿದ್ನೋ ,ಎಂತಾ ದುಸ್ಥಿತಿಯ ಮನೆ ತೋರುಸ್ತಿದ್ನೋ ಯಾವನಿಗೆ ಗೊತ್ತು ಅಂದುಕೊಳ್ತಾ ಗೋಲ್ಡನ್ ಪಾಮಿನ ಒಳಗಡಿಯಿಟ್ವಿ.

ಊಟವೆಂದ್ರೆ ಇಡ್ಲಿ ದೋಸೆ ಇಲ್ಲಾ ಬಿರಿಯಾನಿ !
ಸರಿ, ಬ್ಯಾಗಿಟ್ಟಾಯ್ತು. ಇನ್ನು ಹೊಟ್ಟೆಯ ಕತೆ ನೋಡ್ಕೋಳ್ಳೋಣ ಅಂತ ಅಲೆದ್ವಿ ಅಲೆದ್ವಿ. ಎಲ್ಲಿ ನೋಡಿದ್ರೂ ಬಿರಿಯಾನಿ ಕಾರ್ನರ್ರುಗಳೇ. ಒಂದು ಕಡೆ ರಸ್ತೆಬದಿ ಅಂಗಡಿ ಕಂಡರೂ ಅಲ್ಲಿ ಸಿಗ್ತಿದ್ದದು ಬರೀ ಇಡ್ಲಿ ದೋಸೆ ಮಾತ್ರವೇ. ಪೇಟೆಯ ಮಧ್ಯದಲ್ಲಿ ಲಾಡ್ಜುಗಳಿಗೆ ಅಲೆಯುತ್ತಿದ್ದಾಗ ಒಂದೆರಡು ಸಸ್ಯಾಹಾರಿ ಹೋಟೇಲುಗಳು ಕಂಡಿದ್ರೂ ನಾವಿದ್ದ ಏರಿಯಾದಲ್ಲಿ ಯಾವ್ದೂ ಕಾಣುತ್ತಿರಲಿಲ್ಲ. ಅಂತೂ ಅಲೆಯುತ್ತಿರುವಾಗ ಕೊಡಾಯಿ ಹೋಟೆಲ್ ಮತ್ತು ಅದರ ಪಕ್ಕದಲ್ಲಿ ಲಿಂಬ್ರಾ ಅಂತ ದೋಸೆ, ಪಲಾವಿನ ಚಿತ್ರವಿದ್ದ ಹೋಟೇಲೊಂದು ಖಂಡಿತು. ತಮಿಳುನಾಡಲ್ಲೇ ಹುಟ್ಟಿ ಬೆಳೆದಿದ್ರೂ, ತಂದೆ ಆಂಧ್ರದವನಾದ, ಹಿಂದಿ ಬರುತ್ತಿದ್ದವನೊಬ್ಬ ಇದ್ದ ಆ ಹೋಟೇಲಲ್ಲಿ ಫ್ರೈಡ್ ರೈಸ್, ವೆಜ್ ಬಿರಿಯಾನಿ, ದೋಸೆ ಸಿಕ್ದಾಗ ಕೊನೆಗೂ ಇಷ್ಟೆಲ್ಲಾ ಅಲೆದಿದ್ದು ಸಾರ್ಥಕ ಆಯ್ತು ಅಂದ್ಕೊಂಡ್ವಿ. ಮಾರನೆಯ ದಿನದ ತಿಂಡಿಯೂ ಅಲ್ಲಿಯೇ ಆಗಿತ್ತು. ತೀರಾ ಚೆನ್ನಾಗಿರದಿದ್ದರೂsomething is better than nothing ಎಂಬ ಭಾವ.

ಸುಲಿಗೆ continues..:
ಡ್ರೈವರು, ಲಾಂಗ್ ವೀಕೆಂಡಿನ ಟ್ರಾಫಿಕ್ಕು, ಇಕ್ಕಟ್ಟಾದ ರೋಡುಗಳು, ದಾರಿ ತಪ್ಪಿಸಿದ ಗೂಗಲ್ಲು, ಟ್ರಿಪ್ ಅಡ್ವೈಸರು, ಸ್ಥಳೀಯರು ಎಲ್ಲಾ ಸೇರಿ ಎರಡನೆಯ ದಿನದ ಅರ್ಧ ದಿನ ಹಾಳಾದ ಬಗ್ಗೆ ಆಗಲೇ ಬರೆದಿದ್ದೇನೆ. ಅದರ ಬಗ್ಗೆ ಮತ್ತೆ ಬರೆದು ನಿಮ್ಮ ಸಮಯವನ್ನೂ ಹಾಳು ಮಾಡೋ ಬದಲು ಮುಂದೆ ಹೋಗುತ್ತೇನೆ. ಪೆರುಮಾಳ್ ದಾಟಿ ಹಾಗೇ ಮುಂದೆ ಬರುತ್ತಿದ್ದಂತೆ ಮತ್ತೆ ಸೆಖೆ ಶುರುವಾಗಲಾರಂಭಿಸಿತ್ತು. ಹೊಟ್ಟೆ ಹಸೀತಿತ್ತು. ಮಧ್ಯ ಒಂದು  ವೀವ್ ಪಾಯಿಂಟಲ್ಲಿ ನಿಲ್ಲಿಸಿದೆವು. ದೂರದಿಂದ ನೋಡಿದರೆ ಅದೊಂದು ಡ್ಯಾಮಂತೆ ಕಂಡರೂ ಅದು ಡ್ಯಾಮಾಗಿರಲಿಲ್ಲ. ಯಾವುದೋ ಊರ ಕೆರೆಯಷ್ಟೆ. ಅದಕ್ಕೆ ಕಟ್ಟಿದ ವೀವ್ ಪಾಯಿಂಟು ಈಗಲೋ ಆಗಲೋ ಅನ್ನುವ ಸ್ಥಿತಿಯಲ್ಲಿದ್ದರೂ ತಮಿಳು ಟೂರಿಸಂ ಅತ್ತ ಗಮನಹರಿಸಿರಲಿಲ್ಲ. ಅಲ್ಲಿನ ಸುಲಿಗೆ ಯಾವ ಪರಿ ಎಂದರೆ ಸಾಧಾರಣ ಎಳನೀರಿಗೆ ೪೦ ರೂ ಅನ್ನುತ್ತಿದ್ದ ಅಲ್ಲಿದ್ದ ವ್ಯಾಪಾರಿ. ನೀರಿರೋದು ಕೊಡು ಅಂದ್ರೂ ನುಸಿರೋಗ ಬಂದಂತಹ ಸಣ್ಣದು ಕೊಡ್ತಿದ್ದ ಅಂತ ವರುಣನಿಗೆ ಮೊದಲೇ ಬೇಜಾರಾಗಿತ್ತು. ಅಲ್ಲೇ ಪಕ್ಕದಲ್ಲಿದ್ದವ ೩೦ರೂ ಮಾರುತ್ತಿದ್ದರೆ ಇವನದು ೪೦ ! ಇಲ್ಲಿಯವರೆಗೆ ಹೇಳಿದ್ದಷ್ಟೆಲ್ಲ ಕೇಳಿ ಕೊಟ್ಟು ಬಂದಿದ್ದ ಹುಡುಗರಿಗೆ ಪಿತ್ತ ನೆತ್ತಿಗೇರಿತ್ತು. ಆವನತ್ರ ಜಗಳ ಕಿತ್ತು ಎಳನೀರಿಗೆ ಮೂವತ್ತೇ ಕೊಟ್ಟು ಬಂದರು !

ವೈಗಾಯಿ ಡ್ಯಾಂ:
ಹಂಗೇ ಮುಂದೆ ಬಂದು ಥೇನಿ ಹೈವೇ ಹಿಡಿದ್ವಿ. ಅಲ್ಲಿ ಹಾದಿಬದಿಯಲ್ಲಿ ಸುಮಾರು ಡಾಬಾದಂತಹ ಹೋಟೇಲುಗಳಿದ್ದವು. ಅಲ್ಲೊಬ್ಬ ಆಂಧ್ರದವನ ಹೋಟೇಲ್ ಸಿಕ್ತು ! ಹೊರಗಿಟ್ಟಿದ್ದ  ಕೈತೊಳೆಯುವ ನೀರೂ ಬಿಸಿಲಿಗೆ ಕುದಿನೀರಾಗಿದ್ದಂತಹ ಪರಿಸ್ಥಿತಿಯಲ್ಲಿ ಹೊಟ್ಟೆತುಂಬಾ ಊಟ ಬಡಿಸಿದ ಆತನ ಹೊಟ್ಟೆ ತಣ್ಣಗಿರಲೆಂದು ಈಗಲೂ ಅಂದುಕೊಳ್ಳುತ್ತೇನೆ. ಆತನೇ ಮುಂದೆ ವೈಗಾಯಿ ಡ್ಯಾಂ ಅಂತ ಇದೆ. ಅದನ್ನು ನೋಡಿ ಹೋಗಿ ಅಂತ ಹೇಳಿದ್ದು.  ಹಾಗೇ ಮುಂದೆ ಹೋಗುತ್ತಿದ್ದಂತೆ ರಸ್ತೆಯಲ್ಲಿ ಎರಡು ಡ್ಯಾಂಗಳ ಬೋರ್ಡ್ ಸಿಗುತ್ತೆ. ಬಲಕ್ಕೆ ೧೦ ಕಿ.ಮೀ ಹೋದರೆ ಕೊತ್ತನೂರು ಡ್ಯಾಂ. ಎಡಕ್ಕೆ ೧೬ ಕಿ.ಮೀ ಹೋದರೆ ವೈಗಾಯಿ ಡ್ಯಾಂ. ಅಲ್ಲಿನ ಸ್ಥಳೀಯರನ್ನು ಕೇಳಿದಾಗಲೂ ಅವರು ವೈಗಾಯಿ ಡ್ಯಾಮೇ ಚೆನ್ನಾಗಿದೆ ಅಂದಿದ್ದರಿಂದ ಅತ್ತ ತಿರುಗಿದ್ವಿ. ಮಧ್ಯ ಸಿಕ್ಕ ಟಾಟಾ ಟೀ ಫ್ಯಾಕ್ಟರಿಯನ್ನು ನೋಡಿ ಒಮ್ಮೆ ಹೆಮ್ಮೆಯಾಯ್ತು . ಎಲ್ಲಿಯ ನನ್ನ ಕಂಪೆನಿ.ಇನ್ನೆಲ್ಲಿಯ ಟೀ ಫ್ಯಾಕ್ಟರಿ.ಆದರೂ, ಹೆಸರಲ್ಲೇನೋ ಇದೆ ಅಂತಾರಲ್ಲ.ಹಾಗೆ :-) ತಲಾ ಐದು ರೂ ಟಿಕೇಟ್ ಮತ್ತು ಕ್ಯಾಮೆರಾಕ್ಕೆ ೨೦ , ಪಾರ್ಕಿಂಗಿಗೆ ೨೦ ಅಂತ ಕೊಟ್ಟು ಒಳಸೇರಿದ್ವಿ. ಯಾವುದಕ್ಕೂ ಟಿಕೇಟ್ ಇಲ್ಲ !

ಡ್ಯಾಮೆಂದರೆ ಭರಪೂರ ನೀರಿರುವ ಡ್ಯಾಮಲ್ಲ. ಆದ್ರೂ ಸಂಜೆಯ ಸೂರ್ಯಾಸ್ತ ಸವಿಯೋಕೆ ಒಳ್ಳೆಯ ಜಾಗ. ನೀರ ಕೆಳಗಿನವರೆಗೂ ಇಳಿಯುವ ಹಾದಿಯಿರುವುದರಿಂದ ಅಲ್ಲೇ ಒಂದಿಷ್ಟು ಹರಟುತ್ತಾ, ನೀರಿಗೆ ಕಲ್ಲೆಸೆದು ಯಾರ ಕಲ್ಲು ಹೆಚ್ಚು ಬಾರಿ ಪುಟಿಯುತ್ತೆ ಅಂತ ಪಂದ್ಯ ಕಟ್ಟುತ್ತಾ, ಫೋಟೋ ತೆಗೆಯುತ್ತಾ ಸಂದ್ಯೆಯ ಸಮಯ ಕಳೆದವು. ಇಲ್ಲೊಂದಿಷ್ಟು ಪ್ಲೈನ್ ಟೈಗರ್ ಜಾತಿಯ ಚಿಟ್ಟೆಗಳು ಸಿಕ್ಕರೂ ಅವ್ಯಾವೂ ಪೋಸುಕೊಡೋ ಮೂಡಲ್ಲಿರಲಿಲ್ಲ. ಅಲ್ಲಿಂದ ಸೂರ್ಯ ಮುಳುಗೋ ಹೊತ್ತಲ್ಲಿ ಹೊರಟು ನಮ್ಮ ಕೊನೆಯ ದಿನದ ಪ್ಲಾನಾದ ಕುರಂಜಿನಿ ಹಳ್ಳಿಯಿಂದ ೧೬ ಕಿ.ಮೀ ದೂರವಿರುವ ಬೋದಿ ಅಥವಾ ಬೋದಿನಾಯಕ್ಕನೂರು ತಲುಪಿದೆವು.

ಬೋದಿಯಲ್ಲಿ ಬಂಪರ್ ಲಾಟರಿ:
ಬೋದಿಯಲಿ ಎರಡು ಮೂರು ಲಾಡ್ಜ್ ಕೇಳಿದ್ರೂ ಖಾಲಿಯಾಗಿತ್ತು. ಹಾಗೇ ಮುಂದೆ ಬರುತ್ತಿದ್ದಾಗ ಅಲ್ಲಿದ್ದ ಹೋಟೇಲ್ ಬಾಲಾಜಿ ಭವನವೆಂಬ ಸಸ್ಯಾಹಾರಿ ಹೋಟೇಲ್ ಎದುರು ಎಸ್.ಪಿ.ಎಸ್ ಲಾಡ್ಜ್ ಎಂಬ ಬೋರ್ಡ್ ಕಾಣಿಸ್ತು. ಅಲ್ಲಿನವನಿಗೂ ಸ್ವಲ್ಪ ಸ್ವಲ್ಪ ಹಿಂದಿ, ಇಂಗ್ಲೀಷ್ ಬರ್ತಿತ್ತು. ಎರಡು ಜನರ ಎರಡು ರೂಮಿದೆ. ರೂಮಿಗೆ ೩೦೦ ಅಂದ. ನಮಗೋ ಸ್ಗರ್ಗವೇ ಧರೆಗಿಳಿದು ಬಂದ ಭಾವ ! ಸರಿ, ರೂಂ ನೋಡೋಣ ಅಂತ ಹೋದರೆ ಅಲ್ಲಿ ಎರಡು ಬೆಡ್ಡಿನ ಮಧ್ಯ ಅರ್ಧ ಬೆಡ್ ಹಾಕಲಷ್ಟೇ ಜಾಗವಿದ್ದಿದ್ದು ! ಒಬ್ಬರು ಕೆಳಗೆ ಮಲಗಬಹುದು ಅಂದರೂ ಕಷ್ಟವೇ. ಸರಿ ,ಮೂರು ರೂಂ ತಗೊಳ್ಳೋಣ ಅಂದರೆ ಕೆಳಗೆ ಮಲಗುವ ಒಬ್ಬ ಯಾರು  ಅನ್ನುವ ಯೋಚನೆಯಲ್ಲಿದ್ದಾಗ ಸಿಂಗಲ್ ರೂಮೂ ಇದೆ , ಅದಕ್ಕೆ ಇನ್ನೂರು ಅಂದ ಅವ. ಕೊನೆಗೆ ನಾಲ್ಕೂ ರೂಂ ಸೇರಿ ೧೦೦೦ ಕ್ಕೆ ಬುಕ್ ಮಾಡಿದ್ವಿ. ಎಲ್ಲಿಯ ೪೦೦೦ ಕ್ಕೆ ಒಂದು ರೂಂ ಮತ್ತು ಎಲ್ಲಿಯ ೧೦೦೦ಕ್ಕೆ ನಾಲ್ಕು ರೂಂ ಶಿವಾ ? !! ಅಲ್ಲೊಂದಿಷ್ಟು ಹೊತ್ತು ರೆಸ್ಟ್ ಮಾಡಿ ೭:೩೦ ಕ್ಕೆ ಹೊರಗೆ ಸುತ್ತಾಡೋಕೆ, ಊಟಕ್ಕೆ ಹೊರಡೋಣ ಅಂತಾಯ್ತು. ಹಾಗೇ ಹರಟುತ್ತಾ ಮಲಗಿದ್ವಿ.

ಮುಂದಿನ ಭಾಗದಲ್ಲಿ: ಬೋದಿಯಲ್ಲಿ ಜ್ಞಾನೋದಯ ಮತ್ತು ಟಾಪ್ ಸ್ಟೇಷನ್

Wednesday, May 3, 2017

ಪಳನಿ ಪ್ರವಾಸ

ಹೋಗೋದು ಹೇಗೆ ?
ಬೆಂಗಳೂರು > ಹೊಸೂರು > ಕೃಷ್ಣಗಿರಿ > ಸೇಲಂ > ಪಳನಿ.
ದೂರ = ೪೦೦ ಕಿ.ಮೀ
ತೆಗೆದುಕೊಂಡ ಸಮಯ : ಎಂಟೂವರೆ ಘಂಟೆ
ನೋಡಿದ ಜಾಗಗಳು: ಪಳನಿ ಮುರುಗನ್ ದೇವಾಲಯ, ಪಳನಿ ಬೆಟ್ಟದಲ್ಲಿರುವ ೨೦ಕ್ಕೂ ಹೆಚ್ಚಿನ ವಿಚಿತ್ರ ದೇಗುಲಗಳು, ಪಳನಿ ಪೆರುಮಾಳ್ ದೇಗುಲ

ಒಂಭತ್ತಂದರೆ ಹನ್ನೊಂದೂವರೆ ಗುರೂ !
ಪಳನಿಗೆ ಹೋದ್ವಿ, ಬಿಸಿಲಲ್ಲಿ ಬೆಂಡೆದ್ದು, ಒಂದಿಷ್ಟು ದೇವರ ದರ್ಶನ ಪಡೆದು ಬಂದ್ವಿ ಅಂದ್ರೆ ಅದೊಂದು ಪ್ರವಾಸವಲ್ಲ. ಅದನ್ನು ಅದೆಷ್ಟು ಅದ್ವಾನವಾಗಿಸ್ಬೇಕೋ ಅಷ್ಟು ಅದ್ವಾನವಾಗಿಸೋಕೆ ಪ್ರಯತ್ನ ಪಟ್ಟ ಸಾರಥಿಯ ಬಗ್ಗೆ, ಆ ಸಾರಥಿಯನ್ನು ಕೊಟ್ಟ ಟ್ರಾವೆಲ್ ಏಜೆಂಟಿನ ಬಗ್ಗೆ ಬರೀದೆ ಹೋದ್ರೆ ನಮ್ಮ ಪ್ರವಾಸದ ಕಥೆ ಪೂರ್ಣವಾಗೋಲ್ಲ. ನಾವು ಹತ್ತೋ ಜಾಗದಿಂದ ಕಿ.ಮೀ ಶುರುವಾಗುತ್ತೆ, ನಾವಿಳಿಯೋ ಜಾಗದಿಂದ ಕಿ.ಮೀ ಕೊನೆಯಾಗುತ್ತೆ , ಉಳಿದ ಮೂರು ದಿನದಲ್ಲಿ ಮೂರು ಜಾಗ ನೋಡ್ತೀವಿ ಅಂತ ಮಾತಾಡಾಗಿತ್ತು. ನಮ್ಮನ್ನು ಹತ್ತಿಸಿಕೊಂಡ ರಾತ್ರಿಯ ಬಾಟ ಮತ್ತು ನಮ್ಮನ್ನು ಕರೆದುಕೊಂಡು ಬರೋ ರಾತ್ರಿಯ ಬಾಟ ಸೇರಿ ಒಟ್ಟು ೫ ಬಾಟ ಕೊಡೋದಂತಲೂ ಒಪ್ಪಾಗಿತ್ತು. ಕಿ.ಮೀ ೧೨ರ ಇನ್ನೋವ ಸಿಕ್ತಾ ಇದೆ, ಆಲ್ ಈಸ್ ವೆಲ್ ಅಂತಿದ್ದ ನಮಗೆ ಆದ ಅನುಭವವೇ ಬೇರೆ. ಲಾಂಗ್ ವೀಕೆಂಡ್ ಆದ್ದರಿಂದ ಶುಕ್ರವಾರ ರಾತ್ರೆ ೯ಕ್ಕೇ ಬರೋಕೆ ಹೇಳಿದ್ದಿವಿ ಡ್ರೈವರನಿಗೆ. ಕೊನೆಗೆ ಅವರು ನಮಗೆ ಕೊಟ್ಟ ಲೆಕ್ಕಾಚಾರ ಹೀಗಿತ್ತು. ಮೂರು ದಿನ ಅಂತಂದ್ರೆ ಬುಕ್ ಮಾಡಿದ ಶುಕ್ರವಾರ ರಾತ್ರಿ, ಶನಿವಾರ ಮತ್ತು ಭಾನುವಾರ !! ಭಾನುವಾರ ಮಧ್ಯಾಹ್ನ ನಮಗೆ ಜಾಗ ತೋರಿಸೋದ್ರೊಳಗೇ ಡ್ರೈವರು ಇವತ್ತಿಗೆ ಮೂರು ದಿನ ಆಯ್ತು, ನಾನು ಹೊರಡಬೇಕು ಅಂತನ್ನೋಕೆ ಶುರು ಮಾಡಿದ್ದ ! ಶನಿವಾರ, ಭಾನುವಾರ, ಸೋಮವಾರ ಮೂರು ದಿನಗಳಿಗೆ ಅಂತ ಒಪ್ಕೊಂಡಿದ್ದ ಟ್ರಾವೆಲ್ ಏಜಂಟನೂ ಉಲ್ಟಾ ಹೊಡೆಯೋಕೆ ಶುರುಮಾಡಿದ್ದ. ಅಂತೂ ಇಂತೂ ಒಂದೂವರೆ ಘಂಟೆ ಅದ್ರಲ್ಲೇ ವೇಸ್ಟ್ ಮಾಡಿ ಭಾನುವಾರದ ಟ್ರಿಪ್ಪಿಗೆ ಅದೇ ಡ್ರೈವರನ್ನ ಇಟ್ಕೊಂಡು ಸೋಮವಾರವೂ ಅವನ ಗೊಣಗಾಟದ ಮದ್ಯೆ ಓಡಾಡಿ ಸೋಮವಾರ ಸಂಜೆ ವಾಪಾಸ್ ಬರ್ತಿದ್ದರೆ ವಿಪರೀತ ಮಳೆ. ಆಲಿಕಲ್ಲು ಮಳೆಗೆ ನಿಂತು ಹೋದ ವೈಪರನ್ನ ಸರಿ ಮಾಡೋದು ಹೇಗಂತಾಗಲೀ , ಮಳೆಯಲ್ಲಿ ಗಾಡಿ ಓಡಿಸೋದು ಹೇಗಂತ್ಲೂ ಗೊತ್ತಿಲ್ಲದ ಪುಣ್ಯಾತ್ಮ ನಮ್ಮ ಡ್ರೈವರು. ಸೋಮವಾರ ಸಂಜೆ ಇರಬೇಕಾದ ಜಾಗದಲ್ಲಿಲ್ಲದೇ ಎಲ್ಲೋ ಹೋಗಿದ್ದು, ಮಳೆಯಲ್ಲಿ ಸಿಕ್ಕಾಕ್ಕೊಂಡಿದ್ದು ಎಲ್ಲಾ ಆಗಿ ನಮ್ಮನ್ನು ಅವನು ಬೆಂಗ್ಳೂರು ತಲುಪಿಸೋ ಹೊತ್ತಿಗೆ ಮಂಗಳವಾರದ ಮೂರು ಘಂಟೆ. ಬಿಡೋ ಹೊತ್ತಿಗೆ ಹೊಸ ವರಾತ ಶುರುವಾಗಿತ್ತು ಅವನದ್ದು. ಪಿಕಪ್ ಮಾಡಿದ ಜಾಗಕ್ಕೆ ೨೫ ಮತ್ತು ಬಿಟ್ಟ ಜಾಗದಿಂದ ೨೫ ಅಂತ ಒಟ್ಟು ೫೦ ಕಿ.ಮೀ ಹೆಚ್ಚಿಗೆ ಕೊಡಬೇಕು ಅಂತ. ಆ ತರ ಮಾತಾಡೇ ಇಲ್ಲ ಟ್ರಾವೆಲ್ ಏಜೆಂಟ್ ಹತ್ರ ಅಂದ್ರೆ ಐದು ದಿನದ ಬಾಡಿಗೆ ಕೊಡಿ  ಅಂತ ಹೊಸ ವರಾತ ತೆಗೆದ. ಶುಕ್ರವಾರ ರಾತ್ರೆ ಒಂಭತ್ತಕ್ಕೆ ಬರಬೇಕಾದವನು ಹನ್ನೊಂದೂವರೆಗೆ ಬಂದು ಬೆಳಬೆಳಗ್ಗೆ ಟ್ರೆಕ್ಕಿಂಗ್ ಶುರು ಮಾಡೋ ನಮ್ಮ ಪ್ಲಾನೇ ಹಾಳು ಮಾಡಿದ್ರೂ ಒಂಚೂರೂ ಬೇಸರವಿಲ್ಲದಂತೆ ನಮ್ಮ ಮೇಲೇ ಸುಲಿಗೆ. ಶುಕ್ರವಾರ ರಾತ್ರಿ, ಶನಿವಾರ, ಭಾನುವಾರ, ಸೋಮವಾರ, ಮಂಗಳವಾರ ಬೆಳಿಗ್ಗೆ ಮೂರರದ್ದು ಅಂತ ಒಟ್ಟು ಐದು ದಿನ ಆಗಿದೆ ಅಂತ ಅವನ ಲೆಕ್ಕಾಚಾರ. ದಿನಕ್ಕೆ ೩೦೦ ರಂತೆ ಐದು ದಿನಕ್ಕೆ ೧೫೦೦ ರ ಬಾಡಿಗೆ + ೫೦ + ೭ ಬಾಟ ಕೊಡಬೇಕು ಅನ್ನೋದು ಅವನ ಲೆಕ್ಕಾಚಾರ. ಟ್ರಾವೆಲ್ ಏಜೆಂಟಿಗೆ ಫೋನ್ ಮಾಡಿದ್ರೆ ೧೫-೨೦ ಸಲ ಫೋನ್ ಮಾಡಿದ್ರೂ ಎತ್ತೋದೇ ಇಲ್ಲ ಅವ. ಸಿಲ್ಕ್ ಬೋರ್ಡಿಂದ ಫೋನ್ ಮಾಡೋಕೆ ಹಿಡಿದ್ರೂ ನೈಟ್ ಶಿಫ್ಟಲ್ಲೇ ಇದ್ದ್ದ ಅವನು ಎತ್ತೋ ಹೊತ್ತಿಗೆ ಕುಂದಲಹಳ್ಳಿ ಗೇಟ್ ಬಂದಿತ್ತು. ೫೦ ಕಿ.ಮೀ ಹೆಚ್ಚು ಕೊಡೋದು ಬೇಡ ಅಂತ ಸಮಜಾಯಿಷಿ ಕೊಟ್ರೂ ೫ ದಿನದ ಬಗ್ಗೆ ಏನೂ ಹೇಳದ ಅವ ನೀವು ಅಷ್ಟೇ ಕೊಡಬೇಕಾಗುತ್ತೆ . ಬೇಕಾದ್ರೆ ನೀವು ನೀವೇ ಸೆಟಲ್ ಮಾಡ್ಕೊಳ್ಳಿ ಅಂತ ಸಾಗಿ ಹಾಕೋ ಪ್ರಯತ್ನದಲ್ಲಿದ್ದ.

೫೦ ಕಿ.ಮೀ ಉಳಿಯತ್ತೆ ಅಂತ ಸಾವಿರಗಟ್ಟಲೆ ದಂಡ ತೆತ್ತಿದ ಕತೆ:
ಈ ಟ್ರಾವೆಲ್ ಏಜೆಂಟ್ ಮಾಡಿದ ಕಿತಾಪತಿ ಒಂದಲ್ಲ, ಎರಡಲ್ಲ. ಶುಕ್ರವಾರ ರಾತ್ರೆ ಹೊರಡಬೇಕು.ಶುಕ್ರವಾರ ಬೆಳಿಗ್ಗೆಯವರೆಗೂ ಬರೋ ಡ್ರೈವರನ ನಂಬರ್ ಕಳಿಸಿರಲಿಲ್ಲ. ಬೆಳಗ್ಗಿಂದ ಫೋನ್ ಮಾಡಿ,ಮೆಸೇಜ್ ಮಾಡಿದ ಮೇಲೆ ಹನ್ನೆರಡೂವರೆಗೆ ಫೋನೆತ್ತಿದವ ಇನ್ನೊಂದು ಸ್ವಲ್ಪ ಹೊತ್ತಿಗೆ ಕಳಿಸ್ತೀನಿ ಅಂದ. ಸಂಜೆ ಐದೂವರೆಯಾದರೂ ಪತ್ತೆಯಿಲ್ಲ. ಮತ್ತೆ ಪೋನ್ ಮಾಡಿದರೆ ಇನ್ನೊಂದು ಸ್ವಲ್ಪ ಹೊತ್ತಿಗೆ ಕಳಿಸ್ತೀನಿ ಅಂದ. ಆರೂವರೆಯಾಯ್ತು. ಸುದ್ದಿಯಿಲ್ಲ.ಫೋನ್ ಮಾಡಿದರೆ ಡ್ರೈವರ್ ಸ್ನೋ ಸಿಟಿಗೆ ಹೋಗಿದ್ದಾರೆ ಸಾರ್.ನಾಲ್ಕೂವರೆಗೇ ಅಲ್ಲಿಂದ ಹೊರಡಬೇಕಿತ್ತು, ಈಗ ಹೊರಟಿದ್ದಾರೆ , ನಿಮ್ಮ ಟೈಂಗೆ ಬರ್ತಾರೆ ಬಿಡಿ ಸಾರ್ ಅಂದ, ನಂಬರ್ ಕೊಡಲಿಲ್ಲ. ಎಂಟೂವರೆಯಾದರೂ ಸುದ್ದಿಯಿಲ್ಲದ್ದ ಕಂಡು ಮತ್ತೆ ಫೋನ್ ಮಾಡಿದ್ರೆ ಏಳೂವರೆಗೇ ಓಕುಳಿಪುರಂ ಹತ್ರದಿಂದ ಹೊರಟಿದ್ದಾರೆ, ಬರ್ತಾರೆ ಸಾರ್ ಅಂತ ನಂಬರ್ ಕಳಿಸಿದ. ಆ ನಂಬರಿಗೆ ಫೋನ್ ಮಾಡಿದ್ರೆ ನಾನು ಮೈಸೂರು ರೋಡಲ್ಲಿದ್ದೀನಿ ಸಾರ್ ಅಂತಿದ್ದಾನೆ ಡ್ರೈವರ್ ! ಎಲ್ಲಿಯ ಓಕುಳಿಪುರಂ ಎಲ್ಲಿಯ ಮೈಸೂರು ರೋಡ್ ! ಏನಿಲ್ಲ ಅಂದ್ರೂ ಇಲ್ಲಿಗೆ ಬರೋಕೆ ಎರಡು ಘಂಟೆ ಆಗುತ್ತೆ. ಏನ್ರಿ ನಿಮ್ಮದು ಅಂದ್ರೆ ಮಳೆ ಬರ್ತಿತ್ತು ಸಾರ್, ಇಲ್ಲಿ ಸಿಕ್ಕಾಕ್ಕೊಂಡಿದ್ದ್ರೆ, ಬೇಗ ಬರ್ತೀನಿ ಸಾರ್ ಅಂದ. ಸುಳ್ಳಿನ ಮೇಲೆ ಸುಳ್ಳು! ಸರಿ, ಬಾ ಅಂತೇಳಿ ಬರ್ತಾ ಜೇಪಿ ನಗರದಲ್ಲಿದ್ದ ಹೆಗ್ಡೆಯನ್ನ ಕರ್ಕೊಂಡು ಬಾ ಅಂದ್ವಿ. ಮೊದಲ ಪ್ಲಾನಿನ ಪ್ರಕಾರ ಜೇಪಿ ನಗರದ್ದು ಕೊನೆಯ ಪಿಕಪ್ ಆಗಿತ್ತು ಮತ್ತು ಕಾಸ್ಮೋಸಿಗೆ ಬಂದು ಹೋಗೋ ಕಿಲೋಮೀಟರಾದ್ರೂ ಉಳೀತಿತ್ತು. ಮೊದಲ ಪಿಕಪ್ಪೇ ಜೇಪಿನಗರವಾದ್ದರಿಂದ ಕಿ.ಮೀ ಜಾಸ್ತಿ ಮಾಡಿದ್ದಲ್ದೇ ನಮ್ಮಲ್ಲಿಗೆ ಬರೋ ಹೊತ್ತಿಗೆ ಹನ್ನೊಂದೂವರೆ ಮಾಡಿ ನಮ್ಮ ಪ್ಲಾನಿನ ಎರಡೂವರೆ ಘಂಟೆನೂ ವೇಸ್ಟ್ ಮಾಡಿದ್ದ. ಈ ರೋಡಲ್ಲಿ ಸಖತ್ ಸಲ ಓಡಾಡಿದ್ದೀನಿ ಸಾರ್ ಅನ್ನೋ ಅವನಿಗೆ ವರ್ತೂರಿನ ಮೇಲೆ ಹೊಸೂರಿಗೆ ಹೋಗೋ ರಸ್ತೆ ಗೊತ್ತಿರಲಿಲ್ಲ ! ಸರಿಯಪ್ಪ ಅಂತ ಗೂಗಲ್ ಮ್ಯಾಪ್ ಹಾಕ್ಕೊಟ್ಟು ಹೊಸೂರಿನ ತಂಕ ನಾವೇ ಕರ್ಕೊಂಡು ಹೋದ್ವಿ ಅಂತಾಯ್ತು. ಅಲ್ಯಾವ್ದೋ ಎರಡು ಪೋಲೀಸರು ಬ್ಯಾರಿಕೇಡ್ ಹಾಕ್ಕೊಂಡು ಕೂತಿದ್ರು ಅಂತ ಅವರತ್ರ ಗಾಡಿ ತಗೊಂಡೋಗಿ ನಿಲ್ಸಿ ಇಲ್ಲಿ ಪರ್ಮಿಟ್ ಎಲ್ಲಿ ಸಿಗುತ್ತೆ ಅಂತ ಕೇಳೋದಾ ? ಅವರೋ ಆ ರಸ್ತೇಲಿ ಯಾರೂ ನಿಲ್ಲಿಸದೇ ಮುಂದೆ ಹೋಗ್ತಿದ್ದರಿಂದ ಒಂದಿಷ್ಟು ಬಕರಾಗಳ ನಿರೀಕ್ಷೆಯಲ್ಲಿದ್ರು. ಸಿಕ್ಕಿದ್ದೇ ಚಾನ್ಸು ಅಂತ ಅವನತ್ರ ಇದ್ದ ರೆಕಾರ್ಡುಗಳನ್ನೆಲ್ಲಾ ಪರಿಶೀಲಿಸತೊಡಗಿದ್ರು. ಅಂತೂ ಇಂತೂ ಬಿಡ್ತಾರೆ ಅಂದ್ಕೊಂಡ್ರೆ ನಮ್ಮ ಬ್ಯಾಗುಗಳ ಚೆಕಿಂಗ್, ಗಾಡಿ ಚೆಕಿಂಗ್ ಶುರು ಆಯ್ತು. ಬ್ಯಾಗಲ್ಲಿದ್ದ ಗ್ಲೂಕೋಸ್ ಪ್ಯಾಕೇಟ್,ಬ್ಯಾಟರಿ, ಬಟ್ಟೆ, ನೀರಿನ ಬಾಟಲ್ಲೂ ಬಿಡದೇ ಎಲ್ಲಾ ತೆಗೆದು ತಡಕಾಡಿದ ಮೇಲೂ ಏನೂ ಸಿಗದ ಮೇಲೆ ಹ್ಯಾಪು ಮೋರೆ ಹಾಕ್ಕೊಂಡು ನಮ್ಮನ್ನು ಮುಂದೆ ಕಳಿಸಿದ್ರು ಆ ತಮಿಳುನಾಡು ಪೋಲೀಸವ್ರು. ಅದೇ ರಸ್ತೇಲಿ ಓಡಾಡೋರಿಗೆ ಪರ್ಮಿಟ್ ಕೊಡೋದು ಎಲ್ಲಿ ಅಂತ ಗೊತ್ತಿರಲ್ವಾ ? ಅಂತೂ ಇಂತೂ ಗೂಗಲ್ ಮ್ಯಾಪ್ ಹಾಕ್ಕೊಂಡು ಮುಂದೆ ಹೋದ್ವಿ ಅನ್ನೋ ಹೊತ್ತಿಗೆ ಪರ್ಮಿಟ್ ಕೊಡೋ ಜಾಗ ಬಂತು. ಪರ್ಮಿಟ್ಟಿಗೆ ಅಂತ ಸಾವಿರ ಇಸ್ಕೊಂಡು ಹೋಗಿದ್ದ. ಗಾಡಿ ಒಳಗೆ ಕೂತು ಕೂತು ಬೇಜಾರಾಯ್ತು, ಪರ್ಮಿಟ್ ತರೋಕೆ ಹೋದೋನು ಇಷ್ಟೊತ್ತಾದರೂ ಬರ್ಲಿಲ್ವಲ್ಲ ಅಂತ ಸಂದೇಶ ನೋಡೋಕೆ ಹೋದ. ಅಷ್ಟೊತ್ತಿಗೆ ಡ್ರೈವರ್ ಓಡೋಡಿ ಬಂದ ಗಾಡಿಯತ್ರ. ಸಾರ್ ಇನ್ನೊಂದೈನೂರು ಕೊಡಿ ಅಂದ. ಯಾಕಪ್ಪಾ ಅಂದ್ರೆ ನೀವೆಲ್ಲಾ ಪರ್ಮಿಟ್ ಕೊಡುವಲ್ಲಿಗೆ ಬರಬಾರ್ದು, ಬಂದಿದ್ದಕ್ಕೆ ಮತ್ತೆ ಐನೂರು ಕೇಳ್ತಿದ್ದಾರೆ ಅಂದ ! ಟ್ರಿಪ್ಪಿಗೆ ಅಂತ ಬಂದಾಗಿದೆ. ಮುಂದೆ ಹೋಗದೇ ವಿಧಿಯಿಲ್ಲ.ಸರಿ ಅಂತ ಐನೂರು ಕೊಟ್ಟೂ ಕಾದ್ವಿ, ಕಾದ್ವಿ, ಕಾದ್ವಿ. ಸುಮಾರು ಒಂದು ಘಂಟೆ ಕಾದ್ವಿ. ಡ್ರೈವರು ಬಾಲ ಸುಟ್ಟ ಬೆಕ್ಕಿನ ತರ ಅಲ್ಲೇ ಹೊರಗೆ ಓಡಾಡಿಕೊಂಡಿದ್ನೇ ಹೊರತು ಪರ್ಮಿಟ್ ಕೊಡ್ತಿದ್ದವರ ಹತ್ರ ಹೋಗಿರಲಿಲ್ಲ ! ಅದೇ ರೋಡಲ್ಲಿ ಅದೆಷ್ಟೋ ಸಲ ಹೋಗಿ ಅಭ್ಯಾಸವಿದ್ದವನ ರೀತಿ ಅದು. ಸುಳ್ಳಿನ ಮೇಲೆ ಸುಳ್ಳಿನ ಮೇಲೆ ಸುಳ್ಳು ! ಮೊದಲೇ ಲೇಟಾಗಿದ್ದೋರು ಇನ್ನೊಂದಿಷ್ಟು ಲೇಟು ಮಾಡಿಸಿಕೊಳ್ಳುತ್ತಾ , ದರಿದ್ರ ಲಂಚ ವ್ಯವಸ್ಥೆಗೆ, ಡ್ರೈವರಿಗೆ, ಇವನನ್ನು ತಗುಲಾಕಿದ ಟ್ರಾವೆಲ್ ಏಜೆಂಟಿಗೆ ಶಾಪ ಹಾಕುತ್ತಾ , ಸೆಕೆಯಲ್ಲಿ ಬೇಯುತ್ತಾ, ಕಿಟಕಿ ತೆಗೆದರೆ ಕಚ್ಚುತ್ತಿದ್ದ ಸೊಳ್ಳೆಗಳಿಗೆ ರಕ್ತದಾನ ಮಾಡುತ್ತಾ ಕುಳಿತಿದ್ದೆವು. ಮುಂಚೆ ನಿಲ್ಲಿಸಿದ ಪೋಲೀಸ್ ಚೆಕ್ ಪೋಸ್ಟಲ್ಲಿ ಏನೂ ದುಡ್ಡು ಕೇಳದ್ದು ನಮ್ಮ ಪುಣ್ಯವಿರಬೇಕು ! ನಮ್ಮ ಪ್ಲಾನಿದ್ದಿದು ೪೯೦ಕಿ.ಮೀ ಇದ್ದ ಥೇನಿ ಜಿಲ್ಲೆಯಲ್ಲಿರೋ ಟಾಪ್ ಸ್ಟೇಷನ್ನಿಗೆ ಹೋಗಿ ಅಲ್ಲಿ ಬೆಳಗ್ಗೆ ಚಾರಣ ಶುರು ಮಾಡಿ ಸಂಜೆಯ ಹೊತ್ತಿಗೆ ಕೆಳಗಿಳಿಯುವುದು ಅಂತ. ಆದರೆ ಈ ಪುಣ್ಯಾತ್ಮರಿಂದ ನಾವು ಅಲ್ಲಿಗೆ ಹೋಗೋದೇ ಮಧ್ಯಾಹ್ನವಾಗೋ ಎಲ್ಲಾ ಲಕ್ಷಣಗಳೂ ಗೋಚರಿಸಿದ್ವು. ಅದಕ್ಕೇ ಅಂತ ಪ್ಲಾನ್ ಬದಲಾಯಿಸಿ ಕೊನೆಯ ದಿನವಿದ್ದ ಪಳನಿಗೆ ಮೊದಲ ದಿನ ಹೋಗೋದು ಅಂತ ಮಾಡಿದೆವು.

ಪಳನಿಯತ್ತಲ ಪಯಣ:
ನಾಲ್ಕೈದು ಲೈನಿನ ತುಮಕೂರು ಟೋಲುಗಳಲ್ಲೇ ತಲೆ ಕೆಟ್ಟು ಹೋಗುತ್ತಿದ್ದ ನಮಗೆ ಒಂದು ಕಡೆ ಎರಡು ಲೇನಿದ್ದ ತಮಿಳುನಾಡು ಹೈವೆಯ ಬಗ್ಗೆ ಏನು ಹೇಳೋದೋ ಗೊತ್ತಾಗುತ್ತಿರಲಿಲ್ಲ. ಗಾಡಿಗೆ ತಾಗದಿದ್ದರೂ ಎಲ್ಲೋ ಅಡ್ಡಬಂದ ಅಂತ ಜಗಳ ತೆಗೆದು ಕಚ್ಚಾಡೋರು, ಕರ್ನಾಟಕದ ಗಾಡಿಗಳಿಗೆ ಜಾಗ ಕೊಡಬಾರದೆಂದು(ನಮ್ಮ ಡ್ರೈವರ್ ಹೇಳುತ್ತಿದ್ದಂತೆ) ಅಡ್ಡಾ ದಿಡ್ಡಿ ತಿರುಗಿಸುತ್ತಿದ್ದ ತಮಿಳುನಾಡಿನ ಬಸ್ಸುಗಳಿಂದ ಟೋಲಿನ ಹಿಂದೆ ನಿಂತಿದ್ದ ನಮ್ಮ ಇನ್ನೋವ ಒಂದಿಚೂ ಮುಂದೆ ಹೋಗದೆ ಟೋಲ್ ದಾಟೋದ್ರೊಳಗೇ ಬೆಳಗಾಗುತ್ತೇನೋ ಅನಿಸುತ್ತಿತ್ತು. ಅಂತೂ ಇಂತೂ ಅರ್ಧ -ಮುಕ್ಕಾಲು ಘಂಟೆ ದಾಟಿದ ಮೇಲೆ ಟೋಲ್ ದಾಟಿದ್ವಿ ಅಂತಿಟ್ಕೊಳ್ಳಿ. ಆ ಡ್ರೈವರ್ ನಿದ್ದೆ ಬರಬಾರದು ಅಂತ ಒಂದರ ಮೇಲೊಂದು ಸುಳ್ಳಿನ ಕತೆ ಕಟ್ಟುತ್ತಿದ್ನೋ ಅಥವಾ ಅವನ ಅಭ್ಯಾಸವೇ ಹಾಗೋ ಗೊತ್ತಿರಲಿಲ್ಲ.ಊಟಿಗೆ ಹೋಗ್ಬೇಕಾದ್ರೆ ೧೦೦೦ ರೂಪಾಯಿ ಕಟ್ಬೇಕು ಸಾರ್ ಆದ್ರೆ ಅಲ್ಲಿನ ಫಾರೆಸ್ಟಾಫೀಸರುಗಳು ಪರಿಚಯವಿದ್ರೆ ೫೦-೬೦ ರೂಪಾಯಿಗಳಲ್ಲಿ ಕೆಲಸವಾಗುತ್ತೆ ಅನ್ನುತ್ತಿದ್ದ ! ಕೃಷ್ಣಗಿರಿ ಬಂದ ತಕ್ಷಣ ಅಲ್ಲಿನ ಮಾವಿನ ಹಣ್ಣುಗಳ ಬಗ್ಗೆ ಹೇಳೋಕೆ ಶುರು ಮಾಡಿದ.ಇಲ್ಲಿ ನಲವತ್ತೈವತ್ತಕ್ಕೆ ಕೇಜಿ ಸಿಗುತ್ತೆ , ಒಳ್ಳೆಯ ಮಾವು ಅಂದ. ನಮ್ಮೂರಲ್ಲಿ ಬೆಳೆದ ಮಾವನ್ನು ವ್ಯಾಪಾರದವರು ೨೫-೩೦ಕ್ಕೆ ಕೊಳ್ಳೋದು ಗೊತ್ತಿದ್ದರೂ ಪೇಟೆಯಲ್ಲಿ ಮಾವನ್ನು ೪೦ ರೂ ಕೇಜಿಯಂತೆ ಕೊಂಡು ಯಾವುದೋ ಕಾಲವಾಗಿತ್ತು. ಗಾಡಿಯಲ್ಲಿ ಕೂತು ಕೂತು ಎಷ್ಟೋ ಕಾಲವಾಯ್ತು ಅಂತ ಕಾಲು ನೋವು ಬಂದಿದ್ದೋರೆಲ್ಲಾ ಕೆಳಗಿಳಿದು ರಸ್ತೆ ಬದಿಯಲ್ಲಿದ್ದ ಮಾವಿನ ದರ ಕೇಳಿದ್ರೆ ಯಾವುದೂ ೪೦-೫೦ರಲ್ಲಿಲ್ಲ. ನಮ್ಮೂರಲ್ಲಿ ಹೊಳೆದಡದಲ್ಲಿ ಸಿಗೋ ಹುಳಿ ಮಾವಿನಕಾಯಿಯಂತಹ ಸಣ್ಣ ಹಣ್ಣುಗಳಿಗೆ ೫೦-೬೦ ಇದ್ದಿದ್ದು ಬಿಟ್ರೆ ಉಳಿದಿದ್ದೆಲ್ಲಾ ೧೦೦ ರ ಮೇಲೇ. ಈ ರೀತಿಯ ಹೈಪ್ ಬೇಕಿತ್ತಾ ಇದಕ್ಕೆ ಅಂತೆನಿಸಿ ಮತ್ತೆ ಗಾಡಿ ಹತ್ತಿದ್ವಿ. ಅಂತೂ ಇಂತೂ ಗೂಗಲ್ ಮ್ಯಾಪಲ್ಲಿ ಹುಡುಕುತ್ತಾ, ಕೊನೆಗೆ ಕನಫ್ಯೂಸಾದಲ್ಲಿ ಸಿಕ್ಕ ಊರವರನ್ನ ಕೇಳುತ್ತಾ ಪಳನಿ ತಲುಪೋ ಹೊತ್ತಿಗೆ ಬೆಳಗು ಹರಿದು ೭:೩೦ ಆಗಿತ್ತು. ನಮ್ಮ ಜಾಗದಿಂದ ೪೦೦ ಕಿ.ಮೀ ಇದ್ದ ಪಳನಿ ತಲುಪೋ ಹೊತ್ತಿಗೆ ೭:೩೦ ಆಗಿತ್ತು ಅಂದ್ರೆ ೪೯೦ ಆಗುತ್ತಿದ್ದ ಟಾಪ್ ಸ್ಟೇಷನ್ ತಲುಪೋ ಹೊತ್ತಿಗೆ ನಮ್ಮ ಕತೆ ಏನಾಗಬಹುದಿತ್ತು ಲೆಕ್ಕ ಹಾಕಿ !

ತೀರ್ಥ ಸ್ಥಳದಲ್ಲೊಂದು ರೂಮು ಹುಡುಕಿ:
ಪಳನಿ ಸಖತ್ ಫೇಮಸ್ಸಾದ ಸ್ಥಳವಾಗಿದ್ದರಿಂದ ಲಾಡ್ಜುಗಳಿಗೇನೂ ಕಮ್ಮಿಯಿರಲಿಲ್ಲ. ಆದ್ರೆ ಕೇರಳದ ವಯನಾಡ ಪ್ರವಾಸದಲ್ಲಿ ಸಿಕ್ಕಂತೆ ಇಲ್ಲಿ ಬರೀ ಒಂದೆರಡು ಘಂಟೆಗೆ ಅಥವಾ ಫ್ರೆಷ್ ಅಪ್ ಆಗಲು ರೂಮು ಸಿಗುತ್ತಿರಲಿಲ್ಲ. ಯಾರು ಕೇಳಿದ್ರೂ ರೂಮಿಗೆ ೬೦೦,ಇಬ್ಬರೇ ರೂಮಿಗೆ ಅನ್ನೋರು. ಅಂತೂ ಇಂತೂ ಭಗವತೀ ಲಾಡ್ಜ್ ಅಂತನ್ನೋ ಬಸ್ಟಾಂಡ ಪಕ್ಕದಲ್ಲಿದ್ದ, ಸರವಣ ಭವನದ ಮಗ್ಗುಲಲ್ಲಿದ್ದ ಲಾಡ್ಜಲ್ಲಿ ೯೦೦ ಕ್ಕೆ ರೂಮೊಂದು ಸಿಕ್ಕಿತು. ರೂಮು ತೀರಾ ಚಿಕ್ಕದಾಗಿದ್ದರೂ ರೂಮು ಹುಡುಕೋದ್ರಲ್ಲೇ ಹೆಚ್ಚು ಸಮಯ ಕಳೆಯುವಂತಿರಲಿಲ್ಲ. ಇದ್ದೊಂದು ಬಾತ್ರೂಮಲ್ಲೇ ೭ ಜನ ನಿತ್ಯ ಕರ್ಮಗಳನ್ನ ಮುಗಿಸಿ , ತಿಂಡಿ ಪೂರೈಸುವಷ್ಟರಲ್ಲಿ ಘಂಟೆ ಹತ್ತಾಗುತ್ತಾ ಬಂದಿತ್ತು.ಹಿಂದಿನ ದಿನದೆಲ್ಲಾ ಗೋಳು, ಪಳನಿಯ ಸೆಖೆಯ ಮಧ್ಯೆಯೂ ಸರವಣ ಭವನ ಸಿಕ್ಕಿದ್ದು ಬರಗಾಲದಲ್ಲಿ ಓಯಸಿಸ್ ಸಿಕ್ಕಂತಾಗಿತ್ತು ನಮಗೆ. ಮಸ್ತಾದ ತಿಂಡಿಯ ಜೊತೆಗೆ ಮಧ್ಯಾಹ್ನದ ಭೂರೀ ಭೋಜನ ಪಳನಿಯ ಮಧುರ ನೆನಪಗಳಲ್ಲೊಂದು

ಪಳನಿ ರೈಲ ಕ್ಯೂನಲ್ಲಿ:
ಪಳನಿಯಲ್ಲಿ ಪ್ರಸಿದ್ದವಾಗಿರೋದು ಪಳನಿ ಮುರುಗನ್ ದೇವಸ್ಥಾನ. ಬೆಟ್ಟದ ಮೇಲಿರೋ ಆ ದೇವಸ್ಥಾನಕ್ಕೆ ರೈಲ ಮೂಲಕ ಮತ್ತು ರೋಪ್ ವೇ ಮೂಲಕ ಹೋಗಬಹುದು ಅಂತ ಕೇಳಿದ್ವಿ. ಟರ್ಬೈನುಗಳ ಮೂಲಕ ಬೆಟ್ಟದ ಕೆಳಗಿಂದ ಮೇಲೆಳೆಯುವ ರೈಲಲ್ಲಿ ಹೋಗೋದೇ ಒಂದು ಮಜಾ. ಮಿಸ್ ಮಾಡ್ಬೇಡಿ ಅಂತ ಅಲ್ಲಿಗೆ ಹೋಗಿ ಬಂದವರ ಹತ್ರವೆಲ್ಲಾ ಕೇಳಿದ್ದ ನಾವು ಅದ್ರಲ್ಲೇ ದೇವಸ್ಥಾನಕ್ಕೆ ಹೋಗೋಕೆ ನಿರ್ಧರಿಸಿದ್ವಿ. ಸರಿ ಅಂತ ಹೋಗಿ ಟಿಕೇಟ್ ಕೌಂಟರತ್ರ ಹೋದ್ವಿ. ಅಲ್ಲಿ ೧೦ರೂನ, ೫೦ರೂ ನ ಎರಡು ಸಾಲುಗಳಿದ್ವು. ೧೦ ರೂನ ಸಾಲಲ್ಲಿ ೨೦ ನಿಮಿಷ ನಿಂತಿದ್ರೂ ಒಂಚೂರೂ ಮುಂದೆ ಹೋಗ್ತಿರಲಿಲ್ಲ. ಪಕ್ಕದ ೫೦ ರೂನ ಕ್ಯೂ ಮುಂದೆ ಹೋಗ್ತಿತ್ತು. ಪಕ್ಕದಲ್ಲಿದ್ದ ಅಂಕಲ್ ಒಬ್ಬರು ೫೦ ರೂ ಕ್ಯೂಗೆ ಹೋಗಿ. ಬೇಗ ಹೋಗುತ್ತೆ ಅಂದ್ರು. ಸರಿ ಅಂತ ಪಕ್ಕದ ಕ್ಯೂಗೆ ಹೋದ್ರೆ ಹತ್ತು ರೂ ಕ್ಯೂ ಮುಂದೆ ಹೋಗ್ಬೇಕಾ ? ! ಹತ್ತು ಹದಿನೈದು ನಿಮಿಷಕ್ಕೆ ಒಂಚೂರು ಮುಂದೋಗ್ತಿದ್ದ ಕ್ಯೂನಲ್ಲಿ ಹತ್ತತ್ರ ಒಂದೂವರೆ ಘಂಟೆ ವೇಸ್ತಾಯ್ತು. ಅದ್ರ ಮಧ್ಯೆ ತಮಿಳುನಾಡಿನಲ್ಲಿ ನಮ್ಮಲ್ಲಿನ ಪೂರ್ಣ ಕುಂಭ ಸ್ವಾಗತದಂತೆ ತಲೆಯ ಮೇಲೆ ಸಿಂಗರಿಸಿದ ಪೂರ್ಣ ಕುಂಭ ಹೊತ್ತು ಬೀದಿಯಲ್ಲಿ ನಡೆಯುತ್ತಿದ್ದ ಹೆಂಗಳೆಯರು ಸಿಕ್ಕಿದ್ರು. ಅವರೆದುರು ತಮಟೆ ಬಡಿಯುತ್ತಿದ್ದ ಒಂದಿಷ್ಟು ಜನ. ಆ ತಮಟೆ ಬೀಟಿಗೆ ಕುಣಿಯುತ್ತಿದ್ದ ಮುದುಕರು, ಹುಡುಗರು. ಮೊದಲ ಬಾರಿಗೆ ಹುಡುಗಿಯರೂ ತಮಟೆ ಬೀಟಿಗೆ ಕುಣಿಯೋದ ನೋಡಿದೆ. ಅವರಲ್ಲಿ ಕುಣಿಯುತ್ತಿದ್ರೆ ಸರಳುಗಳ ಈಚೆಗಿದ್ದ ನಮಗೆ ಹುಚ್ಚೆದ್ದು ಕುಣಿಯುವಂತಾಗುತ್ತಿತ್ತು. ಆದ್ರೇನು ಮಾಡೋದು? ಸರಳುಗಳ ಆಚೆಯಿಂದ ಅವರ ಸಂಭ್ರಮ ರೆಕಾರ್ಡ್ ಮಾಡೋದು ಬಿಟ್ಟು ಬೇರೇನೂ ಮಾಡೋಕಾಗುತ್ತಿರಲಿಲ್ಲ. ಅಂತೂ ಇಂತೂ ಟಿಕೇಟ್ ತಗೊಂಡು ಒಳಗೋದ್ವಿ ಅಂತಾಯ್ತು. ಅಲ್ಲಿ ಮತ್ತೆ ರೈಲಿಗಾಗಿ ಕ್ಯೂ. ಮೊದಲು ಬಂದ  ನಮ್ಮನ್ನು ಕೋಣೆಯೊಂದರ ಮುಂದೆ ಕಳಿಸಿದ. ರೈಲಿಗೆ ಜನರನ್ನು ಬಿಡುತ್ತಿದ್ದ ಗೇಟು ಮತ್ತೊಂದು ತುದಿಯಲ್ಲಿತ್ತು. ಹಾಗಾಗಿ ರೈಲು ಬಂದ್ರೂ ಕೊನೆಗೆ ಬಂದ ಜನರೇ ಅದರಲ್ಲಿ ಹತ್ತಿ ಮೊದಲೇ ಬಂದಿದ್ದ ನಮಗೆ ಹತ್ತಲಾಗಲಿಲ್ಲ ! ಪಕ್ಕದಲ್ಲಿ ಮತ್ತೊಂದು ರೈಲು ಬಂದು ನಿಂತ್ರೂ ಮೊದಲು ಬಂದ ನಮಗೆ ಜಾಗ ಮಾಡಿಕೊಡೋ ಬದಲು ಇನ್ನೊಂದಿಷ್ಟು ಹೊಸಬರಿಗೆ ಆ ರೈಲಿಗೆ ಹತ್ತಿಸಿದ್ರು ! ಏಳು ಜನ ಒಂದೇ ಸಲ ರೈಲಿಗೆ ಹೋಗಬೇಕು ಅನ್ನೋ ಆಸೆ ಈಡೇರದೇ ಜಾಗ ಸಿಕ್ಕ ಇಬ್ಬರು ಮಾತ್ರ ಈ ರೈಲಲ್ಲಿ ಹೋಗ್ಬೇಕಾಯ್ತು. ಒಳ್ಳೇ ಕತೆಯಾಯ್ತಲ್ಲ ಇದು ಅಂದ್ಕೊಂಡು ಪಕ್ಕದಲ್ಲಿದ್ದ ಮತ್ತೊಂದು ರೈಲಿನತ್ರ ಹೋದ್ವಿ. ಅಲ್ಲಿದ್ದೋರೆಲ್ಲ ನಾವು ಮೊದಲು ನಾವು ಮೊದಲು ಅಂತಿದ್ರು ಹಿಂದಿ, ಇಂಗ್ಲೀಷಲ್ಲಿ . ತಡೀ ಗುರೂ, ನಾವು ಹತ್ತೂವರೆಯಿಂದ ಕಾಯ್ತಿದೀವಿ ಅಂದೆ ನಾನು ಇಂಗ್ಲೀಷಲ್ಲಿ. i think you have not paid anything ಅಂದ್ರು ಅಲ್ಲಿದ್ದ ಹಿರಿಯರೊಬ್ರು. ಅವರು ಅವರ ಕುಟುಂಬಾನಾ ಬೇಗ ಒಳಬಿಡೋಕೆ ೪೦೦  ಕೊಟ್ಟಿದ್ರಂತೆ ! ಇಲ್ಲಿ ತಳ್ಳಾಡದಿದ್ರೆ ಉಳಿಗಾಲವಿಲ್ಲ ಅಂತ ರೈಲು ಬಂದ ತಕ್ಷಣಾನೇ ತಳ್ಳಾಡುತ್ತಾ ರೈಲೊಳಗೆ ನುಗ್ಗಿದ್ವಿ. ಅಂತೂ ಉಳಿದ ಐವರಾದ ನಾನು, ಸಂದೇಶ್, ಪ್ರಮೋದ್, ವರುಣನಿಗೆ ಒಂದು ಕಡೆಯೂ, ಬಾಲನಿಗೆ ಇನ್ನೊಂದು ಕಡೆಯೂ ಜಾಗ ಸಿಕ್ತು.

ಟರ್ಬೈನೆಂಬ ಅದ್ಭುತ:
ಉರಿ ಉರಿ ಬಿಸಿಲು. ಕಾದ ಹಂಚ ಕೆಳಗೆ ಕೂತ ಅನುಭವ. ನಿಧಾನವಾಗಿ ರೈಲು ಮೇಲೆ ಸಾಗ್ತಾ ಇದ್ರೆ ಅದು ಹೇಗೆ ಮೇಲೆ ಸಾಗುತ್ತೆ ಅನ್ನೋ ಕುತೂಹಲ. ಟ್ರೈನಿಗೆ ಕಬ್ಬಿಣದ ಹಗ್ಗಗಳನ್ನು ಕಟ್ಟಿ, ಅದರ ಮೇಲೆ ರೈಲು ಜಾರದಂತೆ, ಗ್ರಿಪ್ಪಿಗೆ ಸನ್ನಿಗಳನ್ನು ಹಾಕಿ ಮೇಲೆ ಎಳೆಯುತ್ತಿದ್ರು. ಆ ತರ ಅಲ್ಲಿದ್ದ ಮೂರು ರೈಲಗಳನ್ನು ಮೇಲಕ್ಕೆ ಎಳೆಯುತ್ತಿದ್ದುದು ಅಲ್ಲಿದ್ದ ಮೂರು ಟರ್ಬೈನುಗಳು. ಅದೇ ತರ ಕೆಳಗಿಳಿಸೋಕೂ ಆ ಟರ್ಬೈನುಗಳೇ ಆಧಾರ. ಅಲ್ಲಿ ಪೋಟೋ ತೆಗೆಯಬೇಡಿ ಅಂತ ರೈಲಿನವ್ರು ವಿನಂತಿಸುತ್ತಿದ್ದರಿಂದ ಅಲ್ಲಿನ ಫೋಟೋಗಳನ್ನಾಗಲೀ, ವಿಡಿಯೋಗಳನ್ನಾಗಲೀ ಇಲ್ಲಿ ಹಾಕುತ್ತಿಲ್ಲ. ಸುಮಾರು ೪೫ ಡಿಗ್ರಿ ಇರುವ ಆ ಬೆಟ್ಟದ ಮೇಲೆ ನಿಧಾನವಾಗಿ ರೈಲಲ್ಲಿ ಸಾಗುವಾಗ ಬದಲಾಗೋ ಸುತ್ತಲ ಪ್ರಕೃತಿಯನ್ನೋ ಆನಂದಿಸೋದೇ ಒಂದು ಮಜ. ಆರೂವರೆ ನಿಮಿಷದ ಆ ಪಯಣದಲ್ಲಿ ಬೆವರ ಹೊಳೆಯೇ ಹರಿದು ಹೋದ್ರೂ ಅದೊಂದು ನೆನಪಲ್ಲುಳಿಯೋ ಪಯಣವಾಗಿತ್ತು.

ಮುರುಗನ್ ದೇಗುಲ:
ಅಂತೂ ಮುರುಗನ್ ದೇಗುಲ ತಲುಪೋ ಹೊತ್ತಿಗೆ ಮಧ್ಯಾಹ್ನ ಹನ್ನೆರಡೂ ಮುಕ್ಕಾಲಾಗ್ತಾ ಬಂದಿತ್ತು. ಅಲ್ಲಿ ದರ್ಶನಕ್ಕೆ ಮತ್ತೆ ಕ್ಯೂ. ಉಚಿತ ದರ್ಶನಕ್ಕೆ ಕೂತ್ರೆ ಇವತ್ತಿಗೆ ದರ್ಶನವಾಗೋಲ್ಲ ಅಂತ ೧೦ ರೂ ದರ್ಶನಕ್ಕೆ ಹೋದ್ವಿ. ಅಲ್ಲಿ ಜನ ಕಾದು ಕಾದು ಸುಸ್ತಾಗಿ ಕೂತೇ ಬಿಟ್ಟಿದ್ರು. ಹತ್ತು ರೂ ದರ್ಶನಕ್ಕೆ ಟಿಕೇಟ್ ತಗೊಳ್ಳೋಕೂ ಮತ್ತೆ ಕಾದ್ವಿ.ಅಂತೂ ಇಂತೂ ದೇವಸ್ಥಾನದ ಆವರಣಕ್ಕೆ ಬಂದ್ವಿ ಅನ್ನೋ ಹೊತ್ತಿಗೆ ದೇವರ ಸನ್ನಿಧಿಗೇ ಬಂದು ನಿಂತಿದ್ವಿ. ದೇವರೆದುರು ನಾಲ್ಕೈದು ಸೆಕೆಂಡೂ ನಿಲ್ಲೋಕೆ ಬಿಡಲಿಲ್ಲ ಅಲ್ಲಿದ್ದ ಪೋಲೀಸರು . ಇಡೀ ದಿನ ಒದ್ದಾಡಿಕೊಂಡು ಬಂದಿದ್ರೂ ದೇವರೆದುರು ಒಂದ್ನಿಮಿಷ ನಿಲ್ಲಲಾಗಲಿಲ್ಲವಲ್ಲಾ ಅಂತ ಬೇಜಾರಾದ್ರೂ ಎಲ್ಲಾ ದೊಡ್ಡ ದೇಗುಲದಲ್ಲೂ ಹೀಗೇ ಬಿಡು ಅಂತ ಸಮಾಧಾನ ಮಾಡಿಕೊಳ್ಳಬೇಕಾಯ್ತು. ಅಲ್ಲಿನ ಪ್ರಸಾದ ತಗೊಂಡು ಹೊರಬರೋ ಹೊತ್ತಿಗೆ ಎರಡಾಗ್ತಾ ಬಂದಿತ್ತು .ರೈಲಲ್ಲಿ ಬರೋಣ ಅಂದ್ರೆ ಸಖತ್ ರಷ್ಯು. ಮೆಟ್ಟಿಲಲ್ಲಿ ಬರೋಣ ಅಂತ ಬಂದ್ವಪ್ಪ. ಯಾವ ೧೦ಕೆ ಓಟದಲ್ಲೂ ಆ ರೇಂಜಿಗೆ ಓಡಿರಲಿಲ್ವೇನೋ. ಆ ರೇಂಜಿಗೆ ಓಡಬೇಕಾಯ್ತು. ಎಲ್ಲಾ ಸಿಮೆಂಟಿನ ಮೆಟ್ಟಿಲುಗಳು. ಮಧ್ಯಾಹ್ನದ ಉರಿಬಿಸಿಲಿಗೆ ಕಾದು ಕೆಂಡದಂತಾಗಿದ್ವು. ಹೆಜ್ಜೆಯಿಡುತ್ತಿದ್ದಂಗೇ ಚುರುಕ್ಕೆನ್ನುತ್ತಿದ್ದವು. ಅಂತಹ ೧೫-೨೦ ಮೆಟ್ಟಿಲು ಇಳಿದ್ರೆ ಸ್ವಲ್ಪ ನೆರಳಿನ ಜಾಗ ಸಿಗ್ತಿತ್ತು. ಮತ್ತೆ ಇದೇ ಓಟ. ಹಿಂಗೇ ಓಡಿ ಓಡಿ ಕೆಳಗೆ ತಲುಪಿದ್ರೆ ಚಪ್ಪಲಿ ಇಡೋ ಜಾಗಕ್ಕೆ ಮತ್ತೆ ಸುಮಾರು ಒಂದು ಐನೂರು ಮೀಟರ್ ದೂರ. ಫುಲ್ ಸಿಮೆಂಟ್ ಅಥವಾ ಟಾರ್ ರೋಡ್. ಎದ್ನೋ ಬಿದ್ನೋ ಅಂತ ಓಡುತ್ತಿದ್ವಿ. ಎಲ್ಲಾದ್ರೂ ಅಂಗಡಿ ನೆರಳು ಸಿಕ್ಕಲ್ಲಿ, ಕಾರು ಪಾರ್ಕಿಂಗ್ ನೆರಳು ಸಿಕ್ಕಲ್ಲಿ ನಿಂತ್ವಿ. ಹಿಂಗೆ ಆದ್ರೆ ಆಗಲ್ಲ ಅಂದ್ಕೊಂಡು ಒಂದೇ ಉಸಿರಿಗೆ ಓಡಿ ಬಿಟ್ಟೆ ಚಪ್ಪಲಿ ಇಡುವಲ್ಲಿಗೆ. ಅಂತೂ ಚಪ್ಪಲಿ ಸಿಕ್ಕು ಹಾಕ್ಕಂಡಾಗ ಸ್ವರ್ಗ ಸಿಕ್ಕ ಭಾವ. ಬಾಲ ಸುಟ್ಟ ಬೆಕ್ಕಂತೆ ಆಡೋದು ಅನ್ನೋದ್ರ ಬದ್ಲು ಕಾದ ಡಾಂಬರ್ ರಸ್ತೆಯ ಮೇಲೆ ಬರಿಗಾಲಲ್ಲಿ ಓಡೋನು ಅಂತ್ಲೂ ಹೇಳಬಹುದಾಗಿತ್ತೇನೋ ಅನಿಸ್ತು. ಅಂತೂ ಇಂತೂ ವಾಪಾಸ್ ಬಂದು ಸರವಣ ಭವನದಲ್ಲಿ ಗಡದ್ದಾಗೊಂದು ಊಟ ಹೊಡೆದು ಭಗವತಿಯ ತಣ್ಣೀರಲ್ಲಿ ಮಿಂದೆದ್ದು ಕೊಡೈಕೆನಾಲಿನ ಹಾದಿ ಹಿಡಿದ್ವಿ

ಮುಂದಿನ ಭಾಗದಲ್ಲಿ: ಕೊಡೈ ಕಹಾನಿ