Showing posts with label kalam. Show all posts
Showing posts with label kalam. Show all posts

Thursday, December 22, 2011

ಕಲಾಂ-ತಾಯಿಗೆ ನಮನ

(ಭಾಮಿನಿ ಷಟ್ಪದಿಯಲ್ಲಿ ಬರೆಯಲೊಂದು ಪ್ರಯತ್ನ)

ಜನನಿ ನಮಿಸುವೆ ಗುಣಿಯ ಬೆಳೆಸಿದೆ
ಮನವ ಒಲಿಸುತ ಶಾಂತಿ ಬಿತ್ತಿದೆ
ಮನುಜ ಜನ್ಮದಿ ತಾಯ ಜನ್ಮವೆ ಹಿರಿದು ಎನ್ನುತಲಿ |
ಪಣತ ಖಾಲಿಯೆ ಆದರಳುಕದೆ
ಮನದ ಕುಡಿಯನು ಹಸಿರೆ ಇರಿಸಲು
ಇನಿತು ಮರುಗದೆ ಎಷ್ಟೊ ಕಷ್ಟವ ಬಿಡದ ನಗುಹಿಂದೆ||

ಮಗನು ಬೆಳೆದನು ಓದಿ ಎತ್ತರ
ಗಗನ ಚಿಮ್ಮೋ ಕ್ಷಿಪಣಿ ಎಂಬುವ
ನೆಗೆತ ವಿಷಯದಿ ನುರಿತ ಅವರಿಗೆ  ನೀಡಿ ಗೌರವವ|
ನಗುವ ಮೊಗದಲಿ ಶರಣು ಎಂದರು
ಜಗದ ಕಿವಿಗಳ ಸೆಳೆದ ಶಕ್ತಿಯ
ಅಗಲ ಹೊಗಳಲು ಪದವು ಸಾಲದೆ ಶಿರವ ನಮಿಸೆಂದೆ||
(ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರ ಮನೆಯಲ್ಲಿ ಬಡತನ. ಅವರ ತಾಯಿ ಆಸೀಯಮ್ಮ ಮಾಡಿದ ರೊಟ್ಟಿಯನ್ನು ಕಲಾಂಗೆ ಮತ್ತಿತರ ಮಕ್ಕಳಿಗೆ ಹಾಕುತ್ತಿದ್ದರಂತೆ. ಕಲಾಂ ತಿನ್ನುತ್ತಾ ಇದ್ದರಂತೆ. ಹೀಗೆ ಕಲಾಂ ಮೈಮರೆತು ತಿನ್ನುತ್ತಿದ್ದಾಗ ಒಂದು ದಿನ ಅವರ ಅಣ್ಣ ಎಳೆಯ ಕಲಾಂ ಅವರನ್ನು ಎಚ್ಚರಿಸಿದರಂತೆ. "ಏ ಕಲಾಂ, ತಾಯಿ ತನ್ನ ರೊಟ್ಟಿಯನ್ನೂ ನಿನಗೇ ಹಾಕುತ್ತಿದ್ದಾಳೆ ಎಂಬುದು ಗೊತ್ತಿದೆಯಾ? " ಎಂದು. ಕಲಾಂರಿಗೆ ಆಗ ಜ್ಞಾನೋದಯವಾದಂತಾಯಿತಂತೆ ಮತ್ತು ತಾಯಿಯ ಮೇಲೆ ಮೊದಲೇ ಇದ್ದ ಪ್ರೀತಿ ಉಕ್ಕಿ ಹರಿಯಿತು. ಆಮೇಲೆ ಅವರು ತಮ್ಮ ಅಪರಿಮಿತ ಪರಿಶ್ರಮದಿಂದ ದೇಶದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹರೆನಿಸಿದರೆಂಬುದು ಇತಿಹಾಸ.. ಅವರೆಲ್ಲರಿಗೂ ಮತ್ತೊಂದು ಸಲಾಂ. .
ಮೇಲಿನ ಪ್ರಸಂಗವನ್ನು ಕಲಾಂರ ಆತ್ಮಕತೆ "ಅಗ್ನಿಯ ರೆಕ್ಕೆಗಳು" ನಲ್ಲಿ ಅವರೇ ಉಲ್ಲೇಖಿಸಿದ್ದಾರೆ ಎಂದು ಓದಿದ ನೆನಪು)

Monday, November 14, 2011

ಡಾ|| ಕಲಾಂರೊಂದಿಗಿನ ಕ್ಷಣಗಳು

ಕಲಾಂರನ್ನು ಭೇಟಿ ಮಾಡಿದ್ದು

ಮೊದಲೇ ಹೇಳಿ ಬಿಡುತ್ತೇನೆ. ಚಿತ್ರಗಳ್ಯಾವುದೂ ನಕಲಿಯಲ್ಲ. ಅವೆಲ್ಲಾ ೬/೬/೦೬ ಅಂದರೆ ನಾನು ಕಲಾಂರನ್ನು ಭೇಟಿ ಮಾಡಿದ ದಿನ ತೆಗೆದ ಚಿತ್ರಗಳು.ಕಲಾಂರನ್ನು ಏಕೆ, ಹೇಗೆ ಭೇಟಿ ಆದೆ ಅನ್ನೋ ಕುತೂಹಲವೇ? ಹಾಗಾದರೆ ಓದಿ..

ನಾನು ಆಯ್ಕೆ ಆಗಿದ್ದು
   ೨೦೦೬ನೇ ಇಸವಿ ಮೇ ತಿಂಗಳ ಕೊನೆ ಆಗಿತ್ತು ಅನಿಸುತ್ತೆ. **ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಶ್ವಪರಿಸರ ದಿನದ ಪ್ರಯುಕ್ತ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಇರುವ ಬಗ್ಗೆ ಪ್ರಕಟಣೆ ಬಂದಿತ್ತು. ನಾನಾಗ ಪ್ರಥಮ ಪಿಯುಸಿ ಮುಗಿಸಿ ದ್ವಿತೀಯ ಪಿಯುಸಿಗೆ ಕಾಲಿಡುವವನಿದ್ದೆ. ಹೇಗಿದ್ದರೂ ಸಮಯವಿದೆಯಲ್ಲ, ಯಾಕೆ ಬರೆಯಬಾರದು ಅನ್ನಿಸಿತು. ಅವರು "ಮರುಭೂಮಿ, ಮರುಭೂಮೀಕರಣ ಮತ್ತು ತಡೆಗಟ್ಟುವಿಕೆ" ಎಂಬ ವಿಷಯ ಕೊಟ್ಟಿದ್ದರು. ಸರಿ ಎಂದು ಆ ವಿಷಯದ ಬಗ್ಗೆ ವಿಷಯ ಸಂಗ್ರಹಿಸಿ ಬರೆದು ಕಳುಹಿಸಿದೆ. ಪ್ರಶಸ್ತಿ ಬರಲಿ ಅಂತ ಅಲ್ಲ, ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸೋ ಅವಕಾಶ ಸಿಕ್ಕಿದೆಯಲ್ಲ ಅಂತ. ಅಷ್ಟರೊಳಗೆ "ಪ್ರತಿಭಾ ಕಾರಂಜಿ" ಅನ್ನೋ ಸ್ಪರ್ಧೆಯಲ್ಲಿ ಎರಡು ವರ್ಷವೂ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿತ್ತಷ್ಟೇ :-)



    ನಾನು ಕಳಿಸಿದ್ದು ಕಳಿಸಲು ನೀಡಿದ್ದ ಕೊನೆಯ ದಿನ ಬೇರೆ. ಅದೂ ಕೊನೇ ಕ್ಷಣದಲ್ಲಿ.. ಮನೆಯಿಂದ ಹೊರಡುವಾಗಲೇ ಸಂಜೆ ಐದು ಘಂಟೆ ಆಗಿತ್ತು. ಹೇಗೋ ಪೋಸ್ಟಾಫೀಸಿನ ಡಬ್ಬ ಐದೂವರೆಗೆ ಬಾಗಿಲು ಹಾಕೋದ್ರೊಳಗೆ ಹೋಗಿ ಪೋಸ್ಟ ಮಾಡಿದ್ದು !!  :-). ಹೆಚ್ಚಿಗೆ ನಿರೀಕ್ಷೆಯೇನಿರಲಿಲ್ಲ. ಒಂದಿನ ಇದ್ದಕ್ಕಿಂದಂತೆ ಅಮ್ಮನಿಗೆ ಫೋನು ಬಂತು ಬೆಂಗಳೂರಿಂದ. ಪ್ರಶಸ್ತಿಯ ಮನೇನಾ ಕೇಳಿದ್ರಂತೆ. ಹೂ ಅಂತ ಅಮ್ಮ ನಂಗೇ ಕೊಟ್ರು ಫೋನು. ಪರಿಸರ ದಿನಕ್ಕೆ ಪ್ರಬಂಧ ಬರ್ದಿದ್ಯಾ ಅಂದ್ರು. ಹೂಂ ಅಂದೆ. ಅದರಲ್ಲಿ ನಿಂಗೆ ಮೊದಲನೇ ಬಹುಮಾನ ಬಂದಿದೆ. ಬೆಂಗಳೂರಿಗೆ ಬರಬೇಕು ನೀನು ೬ನೇ ತಾರೀಕಿಗೆ, ಜೊತೆಗೆ ಒಬ್ಬರು ಬರಬಹುದು ಅಂದ್ರು. ನಾನು ಅದುವರೆಗೂ ಬೆಂಗಳೂರಿಗೆ ಹೋದವನೇ ಅಲ್ಲ.ಹೇಗಪ್ಪಾ ಕಥೆ? ಬರದಿದ್ದರೆ ಮನೆಗೆ ಕಳುಹಿಸುತ್ತೀರಾ ಅಂದರು ಅನಿಸುತ್ತೆ ಅಮ್ಮ. ಹೇ , ಸನ್ಮಾನ್ಯ ರಾಷ್ರ‍ಪತಿ ಕಲಾಂ ಅವರು ಬರ್ತಿದ್ದಾರೆ ಕಣ್ರಿ ಪ್ರಶಸ್ತಿ ಕೊಡೋಕೆ, ಇಂಥಾ ಚಾನ್ಸು ಮಿಸ್ ಮಾಡ್ಕೋತೀರಾ ಅಂತ ಕೇಳಿದ್ರು!!..


     ಒಂದು ಸಲ ಕಿವಿ ನೆಟ್ಟಗಾಯ್ತು. ಏನೋ ಪುಣ್ಯ ಅನ್ನಿಸುತ್ತೆ. ದೇಶದ ರಾಷ್ಟ್ರಪತಿಗಳ್ನ ಭೇಟಿ ಮಾಡೋ ಅವಕಾಶ ಕಳ್ಕೊಳಕಾಗತ್ತಾ ಅನ್ಸೋಕೆ ಶುರು ಆಯ್ತು. ಅಷ್ಟರಲ್ಲಿ ಅವರೇ ಹೇಳಿದರು(ಮೀರಾ ಕುಮಾರಿ ಅಂತ ಅವರ ಹೆಸರು ಅನಿಸುತ್ತೆ). ಅಲ್ಲಿ ಭಾರೀ ಭದ್ರತಾ ವ್ಯವಸ್ಥೆ ಇರತ್ತೆ. ಆಮಂತ್ರಣ ಪತ್ರಿಕೆ ಇಲ್ದೇ ಒಳಗೆ ಬಿಡಲ್ಲ. ಒಂದು ಪತ್ರಿಕೇಲಿ ಇಬ್ಬರು ಹೋಗಬಹುದು ಅಂತ. ಸರಿ ನಾವು ನಿಮಗೆ ಪೋಸ್ಟ ಮಾಡ್ತೀವಿ. ಎಂತಕ್ಕೂ ಈ ನಂಬರ್ ಇಟ್ಕಂಡಿರಿ ಅಂತ ಹೇಳಿದ್ರು. ಅವತ್ತು ಶುಕ್ರವಾರ(೧ನೇ ತಾರೀಕು) ಅನ್ಸತ್ತೆ..

ಶನಿವಾರ, ಸೋಮವಾರ ಆಯ್ತು.ಮಂಗಳವಾರ ಬೆಳಗಾಯ್ತು. ಪೋಸ್ಟ ಪತ್ತೇನೆ ಇಲ್ಲ. ಸಿಕ್ಕಾಪಟ್ಟೆ ಗಾಬರಿ ಶುರು ಆಯ್ತು. ಆ ಪತ್ರಿಕೆ ಸಿಗಲಿಲ್ಲ ಅಂದರೆ ಕೈಗೆ ಬಂದ ತುತ್ತು ಬಾಯಿಗೆ ಬರದ ಹಾಗೆ ಆಗಿ ಬಿಡತ್ತಲ್ಲ ಅಂತ.. ಮೀರಾ ಮೇಡಮ್ಮಿಗೆ ಫೋನ್ ಮಾಡಾಯ್ತು. ಸಂಜೆವರೆಗೂ ನೋಡಿ, ಬರಬೋದು , ಬರ್ಲಿಲ್ಲ ಅಂದ್ರೆ ಆಮೇಲೆ ಫೋನು ಮಾಡಿ ಏನಾರೂ ಮಾಡ್ಬೋದಾ ನೋಡ್ತೀನಿ ಅಂದ್ರು. ನಮ್ಗೆ ಒಳಗೊಳಗೇ ಭಯ. ಪೋಸ್ಟ್ ಆಫೀಸಿಗೇ ಹೋಗಿ ಕಾದಿದ್ದೇ ಕಾದಿದ್ದು.. ಯಾರ್ಯಾರಿಗೋ ಕೇಳಿ ಕೇಳಿ ಅಂತೂ ಮಧ್ಯಾಹ್ನ ೩ ಘಂಟೆ ಹೊತ್ತಿಗೆ ಸಿಕ್ಕಿತು ಆ ಪತ್ರಿಕೆ.!!!

ಕಲಾಂರ ಭೇಟಿ
ಅಬ್ಬಾ. ಜೀವ ಬಂದಂಗಾಯ್ತು:-) ಕೊನೆಗೆ ಶಿವಮೊಗ್ಗಕ್ಕೆ ಹೋಗಿ, ಅಲ್ಲಿಂದ ಅಜ್ಜನ್ನ ಕರ್ಕಂಡು ಬೆಂಗಳೂರಿಗೆ ಹೋದೆ ನಾನು.ಅದರ ಮಾರನೇ ದಿನ ಕಲಾಂರನ್ನು ಭೇಟಿ ಆಗೋ ಸುವರ್ಣ ಕ್ಷಣ. ಅವರು ಬರೋದು ನಾಲ್ಕು ಘಂಟೆ ಹೊತ್ಗೆ ಅಂತ ನಿಗದಿಯಾಗಿತ್ತು.ನಮ್ಗೆಲ್ಲಾ ೨ ಘಂಟೆಗೇ ಅಲ್ಲಿರಕ್ಕೆ ಹೇಳಿದ್ರು.. ನಾವು ಉಳಿದುಕೊಂಡ ನೆಂಟರ ಮನೆಯಿಂದ ಬೆಳಗ್ಗೆನೇ ಹೊರಟು ದಾರಿಯಲ್ಲಿ ಊಟ ಮಾಡ್ಕಂಡು "ಜ್ಞಾನ ಜ್ಯೋತಿ ಸಭಾಂಗಣ" ಕ್ಕೆ ಹೋದೆವು. ಕಾರ್ಯಕ್ರಮ ಇದ್ದದ್ದು ಅಲ್ಲೇ. ಭಯಂಕರ ಭದ್ರತೆ ಅಲ್ಲಿ. ಮೊಬೈಲು ಜಾಮರಿಂದ ಹಿಡಿದು ತರಹೇವಾರಿ ತಪಾಸಣೆ. ಗೇಟಲ್ಲೇ ಸ್ವಲ್ಪ ಹೊತ್ತು ಕಾಯಿಸಿದರು. ಕೊನೆಗೆ ಎಲ್ಲಾ ತಪಾಸಣೆ ಮುಗಿಸಿ ಒಳಹೋಗಲು ಸುಮಾರು ಒಂದು ಘಂಟೆ ಹಿಡಿಯಿತು. ಅಂತೂ ಒಳಗೆ ಹೋದರೆ, ಆಗಲೇ ಸಭಾಂಗಣ ಭರ್ತಿ ಆಗತೊಡಗಿತ್ತು. ಡಾ. ಕಲಾಂರಿಗೆ ವಿದ್ಯಾರ್ಥಿಗಳ ಜೊತೆ ಸಂಭಾಷಿಸೋದು ಅಂದ್ರೆ ಬಹಳ ಇಷ್ಟ. ಹಾಗಾಗಿ ಚಿಣ್ಣರು, ಹೈಸ್ಕೂಲು ಹುಡುಗ , ಹುಡುಗಿಯರು ತುಂಬಿ ಹೋಗಿದ್ದರು.



ಅಲ್ಲಿ ಹೋಗಿ ನಮ್ಮ ಆಮಂತ್ರಣ ಪತ್ರಿಕೆ ತೋರಿಸಿ ಎಲ್ಲಾ ಮಾಹಿತಿ ನೀಡಿದ ಮೇಲೆ ನಮಗೆ ಅಂತ ನಿಗದಿಯಾದ ನಂಬರಿನ ಖುರ್ಚಿಗೆ ಕರೆದೊಯ್ದರು. ಮುಂದೆ ಮೂರು ಪತ್ರಕರ್ತರು, ವಿಐಪಿ ಗಳ ಸಾಲು ಆಗಿತ್ತು.ಅದರ ನಂತರದ ಸಾಲಲ್ಲಿ ನಮಗೆ ಕುಳ್ಳಿರಿಸಿದ್ದರು. ಅಂತೂ ಹೇಳಿದ ಸಮಯಕ್ಕೇ ಕಲಾಂ ಬಂದರು. ಅವರು ಸಮಯ ಪಾಲನೆಯಲ್ಲಿ ಎತ್ತಿದ ಕೈ. ಕಾರ್ಯಕ್ರಮ ಶುರು ಆಯಿತು. ಬಹುಮಾನ ವಿತರಣೆ, ಕೊನೆಗೆ ವಿದ್ಯಾರ್ಥಿಗಳೊಡನೆ ಸಂವಾದ ಅಂತ ನಿಗದಿಯಾಗಿತ್ತು.
ಅಂದು ಪ್ರಬಂಧ ಸ್ಪರ್ಧೆಯೊಂದೇ ಇರಲಿಲ್ಲ. ಇಂಗ್ಲೀಷ ಪ್ರಬಂಧ, ಚಿತ್ರಕಲೆ ಸ್ಪರ್ಧೇನೂ ಇತ್ತಂತೆ. ಅದರಲ್ಲಿ ವಿವಿಧ ವಿಭಾಗದ ವಿಜೇತರು ಬಂದಿದ್ದರು. ಮೊದಲ ಬಹುಮಾನ ಬಂದವರಿಗೆ ಕಲಾಂರಿಂದ ಬಹುಮಾನ ವಿತರಣೆ ಅಂತ ಘೋಷಿಸಿದ್ರು. ನನ್ನ ಹೆಸ್ರೂ ಬಂತು. ಮೈಯೆಲ್ಲಾ ರೋಮಾಂಚನ ಎದ್ದು ಹೋಗ್ಬೇಕಾದ್ರೆ. ಎಲ್ಲಾ ಕಡೆ ಚಪ್ಪಾಳೆ. (ಈಗ್ಲೂ ಅದ್ನ ನೆನಸ್ಕಂಡ್ರೆ .. ಸಿಕ್ಕಾಪಟ್ಟೆ ಖುಶಿ ಆಗುತ್ತೆ). ಪ್ರಶಸ್ತಿ ಅಂದ್ರು. ಎದ್ದುಹೋದೆ. ಇಂಗ್ಲೀಷಿನಲ್ಲಿ ಬರದ್ರೆ ನನ್ನೆಸ್ರು ಹೇಳಕ್ಕೆ ಬರದೆ ಸುಮಾರು ಜನ ತಪ್ಪು ಓದ್ತಾರೆ. ಪುಣ್ಯಕ್ಕೆ ನಿರೂಪಕಿ ಮೊದಲೇ ನನ್ನ ಕೇಳಿ ಉಚ್ಚಾರಣೆ ಕೇಳಿಕೊಂದಿದ್ರು :-) ಕಲಾಂರು ಕೈ ಕುಲುಕಿದ್ರು. ಪ್ರಶಸ್ತಿ ಪ್ರಧಾನ ಮತ್ತು ಫೋಟೋ ತೆಗೆಯುವ ಸಂದರ್ಭದಲ್ಲಿ ನಮ್ಮ ನಡುವೆ ನಡೆದ ಮಾತುಕತೆ..


Kalam: Where are you From?
Me: I am from a sagar, Shimoga District Sir
Kalam: Ok, Congratulations, What was the Topic?
Me: It Was in Kannada Sir, which means "Desert, Desertification and Its prevention"






ಅಷ್ಟು ಕೇಳಿದ ಕಲಾಂ ಶುಭ ಹಾರೈಸಿ ಬೀಳ್ಕೊಟ್ಟರು. ಆ ಸಂದರ್ಭದಲ್ಲಿ ವೇದಿಕೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆಯುಕ್ತರು, ಪೋಲಿಸ್ ಆಯುಕ್ತರು, ಸಚಿವರಾದ ಚೆನ್ನಿಗಪ್ಪನವರು(ಮೂರನೇ ಚಿತ್ರ) ಇದ್ದರು. ಅವರಿಗೆಲ್ಲಾ ಅಲ್ಲಿಂದಲೇ ವಂದಿಸಿ ವೇದಿಕೆಯಿಳಿದೆ.



ಅವತ್ತು ಟೀವಿಯಲ್ಲಿ ಬಂದಿತ್ತಂತೆ ನನ್ನ ಚಿತ್ರ. ವಿಜಯಕರ್ನಾಟಕ, Deccan herald, Indian Express, Times Of India,Vijaya Times, ಕನ್ನಡ ಪ್ರಭ ಹೀಗೆ ಸುಮಾರು ಪೇಪರಲ್ಲಿ ಬಂದಿತ್ತು ನನ್ನ ಚಿತ್ರ. ವಿಜಯ ಕರ್ನಾಟಕದಲ್ಲಿ " ’ಪ್ರಶಸ್ತಿ’ಗೆ ಪ್ರಶಸ್ತಿ" ಅಂತ ಶಿರೋನಾಮೆಯಲ್ಲಿ ಕಲಾಂರಿಂದ ಪ್ರಶಸ್ತಿ ಪಡೆಯುತ್ತಿರುವ ಸಾಗರದ ಪ್ರಶಸ್ತಿ ಅಂತ ಒಳಪುಟದಲ್ಲಿ ಬರೆದಿದ್ರು. ಸುಮಾರು ದಿನದವರೆಗೆ ಆ ಖುಶಿ ಇತ್ತು. ನಮ್ಮ ಕಾಲೇಜಿಗೆ ಆ ಶೀಲ್ಡ ತಗಂಡುಬರೋಕೆ ಹೇಳಿದ್ರು. ಪ್ರಾಂಶುಪಾಲರಾದಿಯಾಗಿ ಎಲ್ಲಾ ಅಭಿನಂದಿಸಿದ್ರು. ನನ್ನ ಗೆಳೆಯರೆಲ್ಲಾ ಅವತ್ತು ರೇಗಿಸಿದ್ದೇ ರೇಗಿಸಿದ್ದು. "ಕೈ ಕೊಡೋ ಮಾರಾಯ.. ಎಂಥಕಾ? ನೀನು ಕಲಾಂಗೆ ಕೈಕೊಟ್ಟಿದೀಯ. ನಾವು ನಿಂಗೆ ಕೊಟ್ರೆ ಅವ್ರಿಗೆ ಕೊಟ್ಟಂಗಾಗತ್ತೆ.. " ಅಂತ.. ಈಗ್ಲೂ ಆ ಫೋಟೋ ನೋಡಿದ ಸ್ನೇಹಿತರು ಹಂಗೇ ತಮಾಷೆ ಮಾಡ್ತಿರ್ತಾರೆ :-) :-)

ನನ್ನ ಬಗ್ಗೆ ಕೊಚ್ಕಳಕೆ ಇದನ್ನ ಬರದೆ ಅಂತ ದಯವಿಟ್ಟು ಅಂದ್ಕೋಬೇಡಿ.ನಾನಿನ್ನೂ ಬರೆಯೋದಕ್ಕೆ ಕಲೀತಿರೋ ನಿಮ್ಮಂಗೆ ಒಬ್ಬ ಹವ್ಯಾಸಿ ಅಷ್ಟೆ.. "ಏ, ಈ ಬಗ್ಗೆ ಗೊತ್ತಿರದಿಲ್ಲ, ಬರಿ" ಅಂತ ಹೇಳ್ತಿದ್ದ ಗೆಳೆಯ ಆದಿ. .ನಿನ್ನೆ ಕಲಾಂರಿಗೆ ಅಮೇರಿಕಾದಲ್ಲಿ ಅವಮಾನ ಮಾಡಿದ ಸುದ್ದಿ ಕೇಳಿ ಬೇಜಾರಾಯ್ತು. ಅದಕ್ಕೆ ಬರೀಬೇಕು ಅನುಸ್ತು. ಬರದೆ..
ಇದ್ರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲ. ಅನುಮಾನ ಇದ್ದರೆ ಆ ಹಳೆಯ ಪೇಪರ್ ಕಟಿಂಗನ್ನೂ ಹಾಕುತ್ತೇನೆ..
ಇಂತಿ ನಿಮ್ಮವ, ಅದೇ ಹಳೇ, ಸಾಮಾನ್ಯ ಪ್ರಶಸ್ತಿ :-)

* ಜುಲೈ ಆರಕ್ಕೆ "ವಿಶ್ವ ಪರಿಸರ ದಿನ". ಆ ಸಂಬಂಧ ಅರಣ್ಯ ಇಲಾಖೆಯಿಂದ ಹಲವು ಸ್ಪರ್ಧೆಗಳು ನಡಿಯುತ್ತಾ ಇರುತ್ತೆ. ಆ ಬಗ್ಗೆ ತಮಗೆಲ್ಲಾ ಗೊತ್ತೇ ಇರಬಹುದು. ಅದೇ ರೀತಿ ೨೦೦೬ ರಲ್ಲಿ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ ರಾಜ್ಯಮಟ್ಟದ ಸ್ಪರ್ಧೆಗಳನ್ನ ಏರ್ಪಡಿಸಿದ್ದರು

ಮುಕ್ತಾಯ

ಕ್ಷಮಿಸಿರವರ ಕಲಾಂ

ಕಲಾಂರ ಕೋಟನ್ನೇ ಎರಡೆರಡು ಬಾರಿ
ಬಿಚ್ಚಿ ನಿಲ್ಲಿಸುವಂತ ಕಾಲ ಬಂತೆ?ದೊಡ್ಡಣ್ಣನೆಂದಿವಗೆ ಕೋಡು ಬಂತೆ?ತುಂಬಿದ ಕೊಡವದು, ತುಟಿ ಪಿಟಕ್ಕೆಂದಿಲ್ಲ
ಅವರ ತಲೆಯಲ್ಲಿಹುದರೊಂದಂಶ ಪಡೆಯ
ಲರ್ಹತೆಯು ಇಲ್ಲದಿರೂ ಧಾಷ್ಟ್ರತೆಯೆ ಎಲ್ಲ

(ಕಲಾಂರೊಂದಿಗೆ ನಾನು: ಹಳೆಯ ನೆನಪು)