Showing posts with label ಪ್ರವಾಸ. Show all posts
Showing posts with label ಪ್ರವಾಸ. Show all posts

Monday, January 20, 2025

ಮ್ಯಾಮೋತ್ ಕೇವ್ ನ್ಯಾಷನಲ್ ಪಾರ್ಕ್ ಚಾರಣ

ನಾನೂರು ಮೈಲು ದೊಡ್ಡ ಗುಹೆ!

Mammoth Cave Historic Tour Entrance
ತುಮಕೂರಿನ ಸಿದ್ದರ ಬೆಟ್ಟ, ಕೋಲಾರದ ಅಂತರಗಂಗೆ , ಉತ್ತರ ಕನ್ನಡದ ಯಾಣ, ಬಾದಾಮಿಯ ಗುಹಾಂತರ ದೇಗುಲಗಳು , ಎಲಿಫೆಂಟಾ ಗುಹೆಗಳನ್ನು ನೋಡಿದ್ದ ನಮಗೆ ಗುಹೆ ನೋಡೋದು ಅಂದರೆ ಒಂದೋ ಎರಡೋ ಘಂಟೆಗಳಲ್ಲಿ ಮುಗಿಯೋ ಕಾರ್ಯಕ್ರಮ ಅನ್ನೋ ಕಲ್ಪನೆ. ಆದರೆ ಗುಹೆ ಅಂದರೆ ಅದು ೪೦೦ ಮೈಲುಗಳಷ್ಟು ದೊಡ್ಡದಿರುತ್ತೆ, ಇಡೀ ದಿನ ಇದ್ದರೂ ಅದರ ಎರಡು ಭಾಗದ ಟೂರ್ ಮಾಡಬಹುದಷ್ಟೇ ಅಂತ ಗ್ಯಾರಂಟಿ ಅಂದುಕೊಂಡಿರಲಿಲ್ಲ. ಆ ಬೃಹತ್ ಗುಹೆಯೇ ಹೆಸರಿಗೆ ತಕ್ಕನಾಗಿರೋ ಮ್ಯಾಮೋತ್ ಕೇವ್. ಅಮೇರಿಕಾದಲಿರೋ ೬೩ ನ್ಯಾಷನಲ್ ಪಾರ್ಕುಗಳಲ್ಲಿ ಒಂದಾಗಿರೋ ಇದು ಅಮೇರಿಕಾದ ಕೆಂಟುಕಿ ರಾಜ್ಯದಲ್ಲಿದೆ.

ಇಲ್ಲಿರೋ ಗುಹೆಗಳ ಬಗ್ಗೆ ಗೊತ್ತಾಗಿದ್ದು ಹೇಗೆ ?
ಈ ಗುಹೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದರೂ ಇವು ಮುಂಚೆ ಪ್ರವಾಸಿ ತಾಣವಾಗಿರಲಿಲ್ಲ.  ಅಮೇರಿಕಾದ ಮೂಲ ನಿವಾಸಿಗಳು ಗಣಿಗಾರಿಕೆ ಮಾಡುತ್ತಿದ್ದ ಮ್ಯಾಮೋತ್ ಗುಹೆ ಸುಮಾರು ೧೮೦೦ ರ ಹೊತ್ತಿಗೆ ಇಲ್ಲಿಗೆ ಬಂದ ಯುರೋಪಿಯನ್ ವಸಾಹತುಗಾರರ ಗಮನ ಸೆಳೆಯೋಕೆ ಶುರುವಾಯಿತು. ಮೊದಲಿಗೆ ಗಣಿಗಾರಿಕೆಯ ದುಡ್ಡಿಗಾಗಿ ಇಲ್ಲಿಗೆ ಬಂದ ಜನರಿಗೆ ಗಣಿಗಾರಿಕೆಯ ರಿಸ್ಕು ಮತ್ತು ಬರೋ ಕಡಿಮೆ ದುಡ್ಡಿಗಿಂತ ಇದನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಹೆಚ್ಚು ಲಾಭ ಅನ್ನಿಸಿರಬೇಕು. ಈ ಪ್ರದೇಶದಲ್ಲಿದ್ದ ದೊಡ್ಡ ಗುಹೆಯೇ ಮ್ಯಾಮೋತ್ ಕೇವ್. ಇದಕ್ಕೆ ಬರೋ ಜನರನ್ನು ನೋಡಿ ಗುಹೆಯೊಳಗೆ ಜನರನ್ನು ಕರೆದುಕೊಂಡು ಹೋಗೋ ಗೈಡುಗಳಿಗೆ, ಗುಹೆಗಳ ಒಳಗೆ ಹೊಸ ದಾರಿಗಳನ್ನು ಕಂಡುಹಿಡಿಯೋರಿಗೆ, ಒಳಗಿಳಿಯಲು ಮತ್ತು ಮೇಲೆ ಸರಾಗವಾಗಿ ವಾಪಾಸ್ ಬರಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ಮಾಡೋರಿಗೆ, ಇಲ್ಲಿನ ಪ್ರವಾಸಿಗರಿಗೆ ಬೇಕಾದ ಹೋಟೇಲ್ ಉದ್ಯಮದಲ್ಲಿರೋರಿಗೆ ಅಂತ ಈ ಜಾಗ ಹೊಸ ದುಡ್ಡಿನ ಖಜಾನೆಯಾಗಹೊರಟಿತ್ತು. ಕೆಂಟುಕಿಯ ನಿಯಮದ ಪ್ರಕಾರ ನೀವು ಭೂಮಿಯ ಒಡೆಯರಾದರೆ ಅದರ ಕೆಳಗಿರೋದೆಲ್ಲ ನಿಮ್ಮದೇ ಸ್ವತ್ತು.  ಹಾಗಾಗಿ ಕಾಲ ಕಳೆದಂತೆ ಪ್ರವಾಸಿಗರನ್ನ ತಮ್ಮ ಜಾಗದಲ್ಲಿರೋ ಗುಹೆಗೇ ಕರೆತಂದು ದುಡ್ಡು ಮಾಡಬೇಕು ಅಂತ ತಮ್ಮ ಒಡೆತನದ ಭೂಮಿಯ ಕೆಳಗೆ ಗುಹೆ ಹುಡುಕುವವರ ಸಂಖ್ಯೆ ಹೆಚ್ಚಾಯ್ತು. ಆ ತರದ ಹೊಸ ಗುಹೆಗಳು ಸಿಕ್ಕಂತೆ ಇಲ್ಲಿನ ಭೂಮಾಲೀಕರಲ್ಲಿ ಮ್ಯಾಮೋತ್ ಗುಹೆಗೆ ಬರೋ ಪ್ರವಾಸಿಗರನ್ನು ತಮ್ಮ ಹೊಸ ಗುಹೆಗೆ ಸೆಳೆಯೋಕೆ ಗಲಾಟೆಗಳು ನಡೆಯೋಕೆ ಶುರುವಾಯ್ತು. ೧೯೨೦ರ ಹೊತ್ತಿಗೆ ಇಲ್ಲಿ ಇಪ್ಪತ್ತಕ್ಕಿಂತ ಹೆಚ್ಚು ಭೂಮಾಲೀಕರ ವಿವಿಧ ಗುಹೆಗಳ ಟೂರುಗಳಿತ್ತು ಎನ್ನುತ್ತೆ ಇತಿಹಾಸ. ಕೊನೆಗೆ ಇವರನ್ನೆಲ್ಲಾ ಒಂದುಗೂಡಿಸಿ ಮ್ಯಾಮೋತ್ ಕೇವ್ ನ್ಯಾಷನಲ್ ಪಾರ್ಕ್ ಎಂದು ಮಾಡಿ ೧೯೪೧ರ ಸುಮಾರಿಗೆ ಸಾರ್ವಜನಿಕರ ಪ್ರವೇಶಕ್ಕೆ ಬಿಡಲಾಯಿತು.

ಟೈಮ್ ಜೋನ್ ಚೇಂಜಿನ ಮಜಾ:
 ನಾವಿದ್ದ ಜಾಗದಿಂದ ಮ್ಯಾಮೋತ್ ಕೇವಿಗೆ ಹೋಗೋಕೆ ಸುಮಾರು ಮೂರು ತಾಸು ಬೇಕು. ಆದರೂ ನಾವು ಹನ್ನೊಂದೂವರೆಗೆ ಹೊರಟು ಎರಡೂವರೆಗೆ ಅಲ್ಲಿಗೆ ತಲುಪಿದೆವು. ಅದೇಗೆ ಅಂದ್ರಾ ? ಅದೇ ಟೈಂ ಜೋನಿನ ಮಜಾ. ಅಮೇರಿಕಾದ ನಾವಿರೋ ಜಾಗದ ಸಮಯಕ್ಕೆ ಇ.ಎಸ್.ಟಿ(ಈಸ್ಟರ್ನ್ ಸ್ಟಾಂಡರ್ಡ್ ಟೈಂ) ಅನ್ನುತ್ತಾರೆ. ಮ್ಯಾಮೋತ್ ಕೇವ್ ಇರೋದು ಸಿ.ಎಸ್.ಟಿ(ಸೆಂಟ್ರಲ್ ಸ್ಟಾಂಡರ್ಡ್ ಟೈಂ)ನಲ್ಲಿ. ಇವೆರಡಕ್ಕೂ ಒಂದು ತಾಸಿನ ವ್ಯತ್ಯಾಸ. ಹಾಗಾಗಿ ಹನ್ನೊಂದುವರೆ ಈಸ್ಟರ್ನ್ ಟೈಂನಲ್ಲಿ ಹೊರಟ ನಾವು ಒಂದೂವರೆ ಸೆಂಟ್ರಲ್ ಟೈಂನಲ್ಲಿ ಆ ತಾಣಕ್ಕೆ ತಲುಪಿದೆವು ! ಒಂದು ತಾಸು ಎಲ್ಲೋಯ್ತು ಅಂದ್ರಾ ?  ಹೋಗ್ತಾ ಒಂದು ತಾಸು ಲಾಭವಾಗಿರುತ್ತಲ್ಲ. ಆ ಒಂದು ತಾಸು ವಾಪಾಸ್ ಬರ್ತಾ ಕಳೆದುಹೋಗುತ್ತೆ ಅಷ್ಟೆ

ಈ ಪಾರ್ಕಿನ ಪ್ರವೇಶ ಶುಲ್ಕ ಎಷ್ಟು?
ಈ ಪಾರ್ಕಿನೊಳಗೆ ಪ್ರವೇಶಿಸೋಕೆ ದುಡ್ಡು ಕೊಡಬೇಕಿಲ್ಲ.ಈ ಪಾರ್ಕು ಶುರುವಾದದ್ದು ಹೇಗೆ ಎಂಬಿತ್ಯಾದಿ ಮಾಹಿತಿ ಇರೋ ಮಾಹಿತಿ ಕೇಂದ್ರ, ಸುತ್ತಮುತ್ತಲಿರೋ ಗಿಫ್ಟ್ ಶಾಪುಗಳು, ಹೋಟೇಲುಗಳ ಪ್ರವೇಶಕ್ಕೆ, ಇಲ್ಲಿನ ಮೊದಲ ಟೂರ್ ಶುರುವಾದ ಚಾರಿತ್ರಿಕ ಮ್ಯಾಮೋತ್ ಕೇವಿನ ದ್ವಾರದವರೆಗೆ , ಸುತ್ತಮುತ್ತಲ ಕಾಡಿನಲ್ಲಿರುವ ಚಾರಣದ ಹಾದಿಗಳಲ್ಲಿ ಓಡಾಡೋಕೂ ಯಾವುದೇ ಶುಲ್ಕವಿಲ್ಲ. ಆದರೆ ಈ ಪಾರ್ಕಿನಲ್ಲಿ ಕ್ಯಾಂಪಿಂಗ್ ಮಾಡಬೇಕೆಂದರೆ ಅಥವಾ ಈ ಗುಹೆಗಳ ಟೂರ್ ಮಾಡಬೇಕೆಂದರೆ ಆಯಾ ಟೂರುಗಳ ಪ್ರವೇಶ ಶುಲ್ಕ ಕೊಡಬೇಕಾಗುತ್ತದೆ. ಉದಾಹರಣೆಗೆ ಇಲ್ಲಿನ ವೈಲ್ಡ್ ಕೇವ್ ಟೂರ್ ಎಂಬ ಸುಮಾರು ಆರು ಘಂಟೆಗಳ ಕಾಲ ನಡೆಯುವ ಟೂರಿಗೆ ತಲಾ ೭೯ ಡಾಲರ್ ಪ್ರವೇಶ ಶುಲ್ಕ. ಈ ಟೂರಿನಲ್ಲಿ ಸುಮಾರು ಭಾಗ ತೆವಳುತ್ತಲೇ ಸಾಗಬೇಕು. ಜೊತೆಗೆ ಈ ತರದ್ದೇ ಶೂ ಧರಿಸಬೇಕು, ೪೨ ಇಂಚುಗಳಿಗಿಂತ ಕಮ್ಮಿಯಿರಬೇಕು ಮುಂತಾದ ಕಠಿಣ ನಿಯಮಗಳಿವೆ. ನಮ್ಮ ಸಣ್ಣ ಮಗನೊಂದಿಗೆ ಹೋಗಿದ್ದ ಕಾರಣ ಈ ಸಾಹಸಕ್ಕೆ ಕೈಹಾಕದೇ ಉಳಿದ ಜನಪ್ರಿಯ ಟೂರಾದ ಡೋಮ್ಸ್ ಅಂಡ್ ಡ್ರಿಪ್ ಸ್ಟೋನ್ಸ್ ಎಂಬ ಟೂರಿಗೆ ತಲಾ ಇಪ್ಪತ್ತು ಡಾಲರುಗಳ ಪ್ರವೇಶ ಶುಲ್ಕ ಕೊಟ್ಟು ಹೋಗೋಕೆ ನಿರ್ಧರಿಸಿದೆವು.


ಡೋಮ್ಸ್ ಮತ್ತು ಡ್ರಿಪ್ ಸ್ಟೋನ್ಸ್ ಟೂರ್:
ಇಲ್ಲಿನ ಚೆಂದದ ಟೂರುಗಳ ಟಿಕೆಟುಗಳು ಬಹಳ ಬೇಗನೆ ಖಾಲಿಯಾಗುತ್ತದೆ. ಇದೂ ಅಂತಹದ್ದರಲ್ಲಿ ಒಂದಾಗಿದ್ದರಿಂದ ನಾವು ಮುಂಚೆಯೇ ಆನ್ ಲೈನಿನಲ್ಲಿ ಬುಕ್ ಮಾಡಿಕೊಂಡು ಬಂದಿದ್ದವು. ಸುಮಾರು ಎರಡು ಘಂಟೆ ಹಿಡಿಯೋ ಈ ಟೂರಿನಲ್ಲಿ ಗುಹೆಯ ಪ್ರವೇಶ ದ್ವಾರದವರೆಗೆ ಸುಮಾರು ಹತ್ತು ನಿಮಿಷದ ಪಾರ್ಕಿನ ಬಸ್ಸಿನ ಪಯಣ.   ಅಲ್ಲಿಂದ ನಮ್ಮ ಗೈಡುಗಳ ಜೊತೆಗೆ ಗುಹೆಯ ಒಳಗೆ ಅಲ್ಲಿರೋ ಮೆಟ್ಟಿಲಲ್ಲಿ ಕೆಳಗೆ ಇಳಿಯಬೇಕು.ಇಲ್ಲಿ ಒಂದು ಸಿಂಕ್ ಹೋಲ್ ಅಂತ ಇದೆ. ಇಲ್ಲಿ ಕೂತಿದ್ದ ಭೂಮಾಲೀಕನ ಮಗ ಅಲ್ಲಿದ್ದ ಸಣ್ಣ ಕಲ್ಲಿನ ಸಂದಿಯಿಂದ ತಂಪಾದ ಗಾಳಿ ಬರುತ್ತಿದ್ದಿದ್ದನ್ನು ಗಮನಿಸಿದ್ದನಂತೆ. ಇಲ್ಲೊಂದು ಗುಹೆ ಇರಬಹುದು ಅಂತ ಆ ಜಾಗವನ್ನು ಡೈನಾಮೈಟ್ ಇಟ್ಟು ಒಡೆದಾಗ ಅಲ್ಲಿಂದ ಕೆಳಗೆ ಇಳಿಯೋ ದಾರಿ ಕಂಡಿತ್ತಂತೆ. ಆ ಜಾಗವನ್ನೇ ಅಭಿವೃದ್ಧಿಪಡಿಸಿ ಸದ್ಯದ ಹಂತಕ್ಕೆ ತರಲಾಗಿದೆಯಂತೆ.

ಮ್ಯಾಮೋತ್ ಕೇವೆಂಬ ಕಲ್ಪವೃಕ್ಷ:
ಈ ಬೆಟ್ಟದ ಮೇಲೆ ಬಿದ್ದ ಮಳೆನೀರು ಕೆಳಗೆ ಇಂಗುತ್ತಾ ಅಕ್ವೀಫರ್ಸ್ ಎಂಬ ಕಲ್ಲುಗಳ ಮೂಲಕ ಅಂತರ್ಜಲ ಮರುಪೂರಣಕ್ಕೆ ಸಹಾಯವಾಗುತ್ತಂತೆ. ಐವತ್ತೈದು ಸಾವಿರ ಎಕರೆಗಳಿರುವ ಮ್ಯಾಮೋತ್ ಕೇವಿನ ಈ ಕಲ್ಲುಗಳು ಅಮೇರಿಕಾದ ಸುಮಾರು ೪೦% ಜನಕ್ಕೆ ಶುದ್ಧ ಕುಡಿಯುವ ನೀರು ಒದಗಿಸುತ್ತೆ ಎಂಬ ಒಂದು ಅಂದಾಜಿದೆ.  ಇಲ್ಲಿಂದ ಕೆಳಗಿಳಿಯೋ ನೀರು  ಗುಹೆಯ ಚಾರಣದ ಸಮಯದಲ್ಲಿ  ಕೆಲವು ಸಣ್ಣ ಸಣ್ಣ ಜಲಪಾತಗಳಾಗಿ , ತೊರೆಗಳಾಗಿ, ನಮ್ಮ ತಲೆ ಮೇಲೇ ಬೀಳುವ ಹನಿಗಳಾಗೂ ಕಾಣಸಿಗುತ್ತೆ. ಗುಹೆಯ ಕೆಲವು ಭಾಗಗಳಲ್ಲಿ ಇದು ಸ್ಟಾಲಕ್ಟೈಟ್ಸ್ ಮತ್ತು ಸಾಲಗ್ಮೈಟ್ ಎಂಬ ರಚನೆಗಳಾಗಿಯೂ ಕಾಣುತ್ತೆ. ಗುಹೆಯ ಮೇಲ್ಭಾಗದಿಂದ ಕೆಳಗಿಳಿವ ನೀರು ಹಾಗೇ ಹೆಪ್ಪುಗಟ್ಟಿ ಹಲವು ಆಕಾರಗಳಾಗಿ ಮೇಲಿಂದ ನೇತಾಡತೊಡಗುತ್ತೆ. ಆ ರಚನೆಗಳೇ ಸ್ಟಾಲಕ್ಟೈಕ್ಟ್ಸ್. ಗುಹೆಯ ಮೇಲಿಂದ ನೆಲಕ್ಕೆ ಬಿದ್ದ ವಸ್ತುಗಳಿಂದ ನೆಲದ ಮೇಲೆ ಹಾವಿನ ಹುತ್ತದಂತಹ ಎತ್ತರೆತ್ತರದ ರಚನೆಗಳು ಮೇಲೇಳೋಕೆ ಶುರುವಾಗುತ್ತೆ. ಅವೇ ಸ್ಟಾಲಗ್ಮೈಟ್ಸ್

ಕಗ್ಗತ್ತಲಲ್ಲಿ ಇಳಿದಷ್ಟೂ ಮುಗಿಯದ ಮೆಟ್ಟಿಲುಗಳ ಹಾದಿ
ಸಿಂಕ್ ಹೋಲಿನಿಂದ ಗುಹೆಯ ಟೂರಿಗೆ ಸುಮಾರು ೬೪೦ ಮೆಟ್ಟಿಲುಗಳನ್ನು ಇಳಿದು ಹತ್ತಬೇಕು. ಪ್ರತೀ ಗ್ರೂಪಿನಲ್ಲೂ ಸುಮಾರು ನೂರು ಜನರನ್ನು ಒಳಗೆ ಬಿಡುತ್ತಾರೆ. ಕೆಲವೊಂದು ಕಡೆ ಮಾತ್ರ ಕೈ ಕೈ ಹಿಡಿದುಕೊಂಡು ಇಬ್ಬರು ಇಳಿಯುವಷ್ಟು ಅಥವಾ ನಡೆಯುವಷ್ಟು ಜಾಗವಿದ್ದರೆ ಹೆಚ್ಚಿನ ಜಾಗಗಳಲ್ಲಿ ಒಬ್ಬರಷ್ಟೇ ಇಳಿಯಬಹುದಾದಷ್ಟು ಸಣ್ಣ ಕಬ್ಬಿಣದ ಮೆಟ್ಟಿಲುಗಳು ! ಕಗ್ಗತ್ತಲಲ್ಲಿ ಲೈಟುಗಳ ಬೆಳಕಿನಲ್ಲಿ ಇಲ್ಲಿನ ಸುಣ್ಣದ ಕಲ್ಲುಗಳ ಗುಹಾ ರಚನೆಗಳನ್ನು, ಮಿನಿ ಜಲಪಾತಗಳನ್ನು ನೋಡೋದೆ ಒಂದು ವಿಸ್ಮಯ. ಮೆಟ್ಟಿಲುಗಳ ಆಚೆ ನೋಡಿದರೆ ಪ್ರಪಾತ. ಒಂದೊಂದೆಡೆ ತಲೆಗೆ ಹೊಡೆಯೋ ಗುಹೆಯ ರಚನೆಗಳು. ಕೆಲವೊಂದು ಕಡೆ ಸ್ವಲ್ಪ ವಿಶ್ರಾಂತಿ ಪಡೆಯುವಷ್ಟು ಸಮತಟ್ಟಾದ ಜಾಗವಿದೆಯಾದರೂ ಬಹುತೇಕ ಕಡೆ ಇಳಿದಷ್ಟೂ ಮುಗಿಯದ ಪ್ರಪಾತದ ಕಡೆಗಿನ ಮೆಟ್ಟಿಲುಗಳು ! ಹೆಸರೇ ಹೇಳುವಂತೆ  ಟೂರಿನ ಮೊದಲ ಭಾಗವಾದ ಇಲ್ಲಿ ಸುಮಾರು ವಿಶಾಲವಾದ ಡೋಮ್ಸ್ (ಕಮಾನುಗಳು) ಸಿಗುತ್ತೆ. ಇದರಲ್ಲಿ ಪ್ರಸಿದ್ಧವಾದದ್ದು ಅಮೇರಿಕಾದ ಅಧ್ಯಕ್ಷರಾಗಿದ್ದ ಥಿಯೋಡರ್ ರೂಸ್ವೆಲ್ಟ್ ಅವರ ಹೆಸರಿನಲ್ಲಿರುವ ರೂಸ್ವೆಲ್ಟ್ ಡೋಮ್. ಇದು ಸುಮಾರು ೧೩೦ ಅಡಿ ಎತ್ತರವಿದೆ. ಅದೇ ತರಹ ಸಿಲೋ ಪಿಟ್ ಎಂಬ ಹೆಸರಿನ ಸುಮಾರು ೧೬೦ ಅಡಿ ಆಳದ ಕುಳಿಯೂ ಈ ಹಾದಿಯಲ್ಲಿ ಸಿಗುತ್ತದೆ. ಇಲ್ಲಿನ ಗುಹೆಗಳ ಮೂಲಕ ಇಳಿಯೋ ನೀರಿಂದ ಈ ರೀತಿಯ ರಚನೆಗಳಾಗಿವೆ ಎನ್ನುತ್ತಾರೆ.


ಮುನ್ನೂರಡಿ ಕೆಳಗೊಂದು ಸ್ಟೇಷನ್ನು!:
ಈ ಅದ್ಭುತ ನೈಸರ್ಗಿಕ ರಚನೆಗಳನ್ನು ನೋಡುತ್ತಾ ಅಲ್ಲಲ್ಲಿ ಬಗ್ಗುತ್ತಾ ತಲೆ ಮೇಲೆ ಹೊಡೆಯೋ ಗುಹೆಯ ಭಾಗಗಳಿಂದ ಸರಿಯುತ್ತಾ ಈ ಮೆಟ್ಟಿಲುಗಳನ್ನಿಳಿದು ಉಸ್ಸಪ್ಪಾ ಅನ್ನುವಷ್ಟರಲ್ಲಿ ಅಲ್ಲೊಂದು ವಿಶಾಲವಾದ ಬಯಲು ! ಆ ಬಯಲಿಗೆ ಸಾಗೋ ಹಾದಿಯನ್ನು ನ್ಯೂಯಾರ್ಕ್ ಸಬ್ವೇ ಎನ್ನುತ್ತಾರೆ. ನಂತರ ಸಿಗುವ ಬಯಲಿಗೆ ನ್ಯೂಯಾರ್ಕಿಯ ಅತೀ ದೊಡ್ಡ ಸಬ್ವೇ ಮೆಟ್ರೋ ಸ್ಟೇಷನ್ನಿನ ಹೆಸರಾದ ಗ್ರಾಂಡ್ ಸೆಂಟ್ರಲ್ ಸ್ಟೇಷನ್ ಎಂದು ಹೆಸರಿಡಲಾಗಿದೆ. ಅಲ್ಲಿ ನಮಗೆಲ್ಲಾ ಕೂರೂಕೆ ಬೇಕಾದಷ್ಟು ಮರದ/ಕಲ್ಲಿನ ಬೆಂಚುಗಳು ! ನೂರು ಜನ ಕೂತರೂ ಇನ್ನೂ ಹೆಚ್ಚಿನ ಜನಕ್ಕೆ ಸಾಕಾದಷ್ಟು ಜಾಗ ಅಲ್ಲಿ. ಭೂಮಿಯಿಂದ ಸುಮಾರು ೩೦೦ ಅಡಿ ಕೆಳಗಿರುವ ಇಲ್ಲಿ  ನಮ್ಮನ್ನೆಲ್ಲಾ ಕೂರಿಸಿದ ಪಾರ್ಕಿನ ರೇಂಜರ್ ಈ ಜಾಗವನ್ನು ೧೯೨೦ರ ಸುಮಾರಿಗೆ ಕಂಡು ಹಿಡಿದ ಬಗ್ಗೆ ಮತ್ತು ಇಲ್ಲಿನ ಕಲ್ಲುಗಳ ಕತೆ ಹೇಳಿದರು.


Exit from Grand Central Station
ಬಿಗ್ ಬ್ರೇಕ್ ಮತ್ತು ಫೈರಿ ಸೀಲಿಂಗ್:
ಮುಂಚೆ ಗ್ರಾಂಡ್ ಸೆಂಟ್ರಲ್ಲಿಗೆ ಬಂದ ಜನ ಹಾಗೇ ವಾಪಾಸ್ ಹತ್ತಬೇಕಿತ್ತಂತೆ. ಆಗ ಅಲ್ಲಿನ ಮೇಲಿಂದ ಕಲ್ಲುಗಳ ಮೂಲಕ ಟೂರಿನ ಗೈಡುಗಳ ದೀಪದ ಹೊಗೆ ಮೇಲೆ ಹೋಗೋದನ್ನು ನೋಡಿದ ಗೈಡುಗಳು ಅಲ್ಲಿಂದ ಮೇಲೆ ಹತ್ತೋಕೆ ಬೇರೆ ದಾರಿಯಿರಬಹುದೇನೋ ಎಂದು ಗ್ರಹಿಸಿದರಂತೆ. ಆಗ ಡೈನಮೇಟುಗಳನ್ನು ಇಟ್ಟು ಒಡೆದಾಗ ಮೇಲೆ ವಾಪಾಸ್ ಹೋಗೋಕೆ ಹೊಸ ಹಾದಿ ಕಂಡಿತಂತೆ. ಮೇಲೆ ಹತ್ತುವ ಈ ಸುಲಭದ ಹಾದಿ ಶುರುವಾದ ಹಾದಿಯೇ ಬಿಗ್ ಬ್ರೇಕ್. ಇಲ್ಲಿಂದ ಸ್ವಲ್ಪ ಮೇಲೆ ಹತ್ತಿದ ನಂತರ ಮತ್ತೊಂದು ವಿಶಾಲವಾದ ಛಾವಣಿ ಸಿಗುತ್ತದೆ. ಅದನ್ನು ಫೈರಿ ಸೀಲಿಂಗ್ ಎಂದು ಕರೆಯುತ್ತಾರೆ. ಇಲ್ಲಿಂದ ಇಲ್ಲಿನ ಶಿಲಾ ರಚನೆಗಳ ಬಗ್ಗೆ, ಇಲ್ಲಿನ ಝರಿಗಳ ಬಗ್ಗೆ, ಬಾವಲಿಗಳ ಬಗ್ಗೆ ಗೈಡು ಮತ್ತೊಮ್ಮೆ ಲೆಕ್ಚರ್ ಕೊಟ್ಟರು

ಫ್ಲಾಟ್ ಸೀಲಿಂಗ್:
ಫೈರಿ ಸೀಲಿಂಗಿನ ನಂತರ ಸುಮಾರು ದೂರ ಸಮತಟ್ಟಾದ ಹಾದಿಯಲ್ಲಿ ನಡೆಯಬಹುದು. ಇದನ್ನು ಫ್ಲಾಟ್ ಸೀಲಿಂಗ್ ಎನ್ನುತ್ತಾರೆ. ಇಲ್ಲಿಂದ ಮುಂದೆ ಸುಮಾರು ಮೂವತ್ತು ಅಡಿ ಎತ್ತರದ ಕಲ್ಲಿನ ರಚನೆ ಲವರ್ಸ್ ಫೈತ್ ಮತ್ತು ಬಣ್ಣ ಬಣ್ಣದ ರಚನೆಗಳಿರುವ ಥ್ಯಾಂಕ್ಸ್ ಗೀವಿಂಗ್ ಹಾಲ್ ಸಿಗುತ್ತೆ. ಅದಾದ ನಂತರ ಸಿಗೋದೇ ಟೂರಿನ ಮತ್ತೊಂದು ಆಕರ್ಷಣೆಯಾದ ಫ್ರೋಜನ್ ನಯಾಗರ

ಫ್ರೋಜನ್ ನಯಾಗರ ಎಂಬ ವಿಸ್ಮಯ:
Frozen Niagara in Mammoth Cave
ಸುಮಾರು ನೂರು ವರ್ಷಗಳಿಂದ ಪ್ರಖ್ಯಾತವಾಗಿರುವ ಈ ಟೂರಿನಲ್ಲಿ ಸ್ಟಾಲಕ್ಟೈಕ್ಟ್ಸ್ ಮತ್ತು ಸ್ಟಾಲಗ್ಮೈಟ್ಸ್ ಎರಡು ರಚನೆಗಳನ್ನು ನೋಡಬಹುದಾದ ಜಾಗ ಇದು. ದೂರದಿಂದ ಇದು ಹೆಪ್ಪುಗಟ್ಟಿರುವ ನಯಾಗರ ಜಲಪಾತದಂತೆ ಕಾಣೋದರಿಂದ ಅದಕ್ಕೆ ಈ ಹೆಸರು. ಹೊಳೆಯುವ ಹಲವು ಬಣ್ಣದ ಲೈಟುಗಳ ಬೆಳಕಿನಲ್ಲಿ ಇದನ್ನು ನೋಡೋದೇ ಒಂದು ಅದ್ಭುತ. ಆ ಬೆಳಕಿನ ಜಗಮಗದಲ್ಲಿ ಈ ಚಿತ್ರವಿಚಿತ್ರ ರಚನೆಗಳು ಯಾರದೋ ಮುಖದಂತೆ, ಯಾವುದೋ ಪ್ರಾಣಿ ಪಕ್ಷಿಗಳಂತೆ, ಮೇಲಿಂದ ಇಳಿಬಿಟ್ಟ ಶಾಂಡೆಲಿಯರ್ನಂತೆ,  ಬೆಟ್ಟ ಗುಡ್ಡಗಳಂತೆ ನಮ್ಮ ಕಲ್ಪನೆಗಳನ್ನು ಹಲವು ತರದಲ್ಲಿ ತೆರೆದು ತಮ್ಮದೇ ಲೋಕಕ್ಕೆ ಕರೆದೊಯ್ಯುತ್ತೆ.  ಇಲ್ಲಿಗೆ ಮುಗಿಯೋ ಈ ಟೂರಿನ ಹೊರ ಬಾಗಿಲಿಗೆ ಭಾರದ ಮನಸ್ಸಿನೊಂದಿಗೆ, ಅದೆಷ್ಟೋ ಅದ್ಭುತ ಅನುಭವಗಳೊಂದಿಗೆ ಹೊರಬಂದೆವು. ಅಲ್ಲಿಂದ ಮತ್ತೆ ಬಸ್ಸಿನಲ್ಲಿ ವಿಸಿಟರ್ ಸೆಂಟರಿಗೆ ಬಂದು ಅಲ್ಲಿಂದ ನಮ್ಮ ಕಾರಿನಲ್ಲಿ ಮನೆಯತ್ತ ಹೊರಟೆವು. ಹಾದಿಯುದ್ದಕ್ಕೂ ಮ್ಯಾಮೋತ್ ಕೇವಿನ ಹಲವು ರಚನೆಗಳು, ಅದ್ಭುತ ಕತೆಗಳ ನೆನಪು ನಮ್ಮನ್ನು ರಂಜಿಸುತ್ತಿದ್ದವು.

ಈ ಲೇಖನ ಡಿಸೆಂಬರ್ ೨೨,2024 ರಂದು ವಿ.ಕ ದಲ್ಲಿ ಪ್ರಕಟವಾಗಿದೆ

Monday, August 31, 2020

ಕವಲೇದುರ್ಗ / ಭುವನಗಿರಿ ದುರ್ಗ ಚಾರಣ

Kavaledurga Trek
At the beginning of Kavaledurga Trek

 ಯಾವ ಟಿವಿ ನ್ಯೂಸ್ ಹಾಕಿದ್ರೂ ಕರೋನಾದ್ದೆ ಸುದ್ದಿ ನೋಡಿ ನೋಡಿ ಬೇಸರ ಮೂಡಿ ಫೇಸ್ಬುಕ್ಕಿಗೆ ಬಂದ್ರೆ ಇಲ್ಲಿ ಎಡಬಲದ ಜಗಳಗಳು, ಅವೆಷ್ಟು ಕೊಟ್ರು, ಇವ್ರೆಷ್ಟು ಕೊಟ್ರು ಅನ್ನೋ ವಾಗ್ವಾದಗಳು. ಪತ್ರಿಕೆಗಳಲ್ಲೂ ಇವರ ಟ್ವಿಟರ್ ಅಕೌಂಟಿನಲ್ಲಿ ಹಿಂಗದ್ರಂತೆ, ಅವ್ರ ಇನ್ಟಾದಲ್ಲಿ ಹಂಗಂದ್ರಂತೆ ಅನ್ನೋದೇ ಸುದ್ದಿ ! ಕರೋನಾ ಅಂತ ತಣ್ಣಗೆ ಮನೇಲೆ ಕೂತು ಐದು ತಿಂಗಳಾಯ್ತು ಯಾರಾದ್ರ ಮನೆಗೆ ಹೋದ್ರೂ ಇದೇ ಸುದ್ದಿ ! ಏಕತಾನತೆಯಿಂದ ಹೊರಬರಲು, ಮಲೆನಾಡಲ್ಲಿದ್ರೂ ಈ ವರ್ಷ ಹೋಗಲಾಗದಿದ್ದ ತಾಣಗಳ ಸುತ್ತಾಡಲು ಮನಸು ಕಾತೊರೆಯುತ್ತಿತ್ತು. ಆ ಸಮಯದಲ್ಲಿ ಕಣ್ಣಿಗೆ ಬಿದ್ದಿದ್ದು ಗಿರೀಶ್ ಸರ್ ಹಾಕಿದ್ದ ಕವಲೇದುರ್ಗದ ವೀಡಿಯೋ ಮತ್ತು ಅನಿಲ್ ಹಾಕಿದ್ದ ಹುಲಿಕಲ್ ಫಾಲ್ಸ್ ಫೋಟೋ. ಹೆಂಗಿದ್ರು ಮಾಸ್ಕ್ ಹಾಕ್ಕೊಂಡು , ಸಾಮಾಜಿಕ ಅಂತರ ಕಾಪಾಡ್ಕೊಂಡು ಇಲ್ಲಿಗೆ ಹೋಗ್ಬರಬಹುದಂತೆ, ಸರೀನಾ ಅನ್ನೋ ಹೊತ್ತಿಗೇ ರೆಡಿಯಾಗಿದ್ದು ನಮ್ಮನೆಯವ್ರು. ಕವಲೇದುರ್ಗದವರೆಗೆ ಹೋಗಿ ಲಾಕ್ಡೌನಲ್ಲಿ ಲಾಕಾಗಿದ್ದ ಅದನ್ನ ನೋಡಿ ವಾಪಾಸ್ ಬಂದಿದ್ದ ಕೃಷ್ಣನೂ ಪ್ಲಾನ್ ಹೇಳ್ತಿದ್ದಂಗೆನೇ ಸರಿಯೆಂದಿದ್ದ. 


ಕವಲೇದುರ್ಗದ ಇತಿಹಾಸ :

೯ನೇ ಶತಮಾನದಲ್ಲಿ ಕಟ್ಟಿದ ಕವಲೇದುರ್ಗ ಕೋಟೆಯನ್ನು ೧೪ನೇ ಶತಮಾನದಲ್ಲಿ ಬೆಳಗುತ್ತಿಯ ರಾಜ ಚೆಲುವರಂಗಪ್ಪನೂ ೧೬ನೇ ಶತಮಾನದಲ್ಲಿ ಕೆಳದಿಯರಸ ಹಿರಿಯ ವೆಂಕಟಪ್ಪನಾಯಕ (1586–1629) ಅಭಿವೃದ್ಧಿಪಡಿಸಿದರು ಎನ್ನುತ್ತದೆ ಇತಿಹಾಸ. ವೆಂಕಟಪ್ಪನಾಯಕನಿಗಿಂತಲೂ ಮುಂಚೆ ಇದು ತೋಲಾಯ್ತಮ ರಾಜ ಮತ್ತು ಮುಂಡಿಗೆ ರಾಜ ಎಂಬ ರಾಜ ಸಹೋದರರ ಅಧೀನದಲ್ಲಿತ್ತಂತೆ. ಕೌಲಿ ಎಂಬ ಊರಿಗೆ ಹತ್ತಿರವಿದ್ದರಿಂದ ಇದಕ್ಕೆ ಕವಲೇದುರ್ಗವೆಂದು ಹೆಸರಿತ್ತರೆನ್ನುತ್ತೆ ಒಂದು ಎಳೆ.  ಕವಲೇದುರ್ಗಕ್ಕೆ ಅಂದು ಭುವನಗಿರಿಯೆಂಬ ಹೆಸರನ್ನಿತ್ತಿದ್ದೂ  ಹಿರಿಯ ವೆಂಕಟಪ್ಪನಾಯಕ . 

<script async src="https://pagead2.googlesyndication.com/pagead/js/adsbygoogle.js"></script>
<ins class="adsbygoogle"
     style="display:block"
     data-ad-format="fluid"
     data-ad-layout-key="-gq-2e-1k-1g+qa"
     data-ad-client="ca-pub-5071889101438500"
     data-ad-slot="7647446493"></ins>
<script>
     (adsbygoogle = window.adsbygoogle || []).push({});
</script>

ಈ ಇತಿಹಾಸ ಅನ್ನೋದೊಂದು ಸ್ವಾರಸ್ಯಕರ ಕಥಾಹಂದರ. ಒಂದು ಎಳೆಯನ್ನು ಹುಡುಕಿ ಹೊರಟರೆ ಮತ್ತೇನೋ ಕಾಲಿಗೆ ತೊಡರಿಕೊಳ್ಳುತ್ತೆ. ಅದೇನಂತಹ ನೋಡಹೊರಟಲ್ಲಿ ಮತ್ತೆಲ್ಲೋ ತಿರುಗಿ ಹೊರಳಿ ಮೊದಲಿದ್ದ ಎಳೆ ಮತ್ತೆ ಪ್ರತ್ಯಕ್ಷವಾಗುತ್ತೆ ! ಕೆಳದಿಯ ಬಳಿಯ ಪಳ್ಳಿಬೈಲು(ಈಗಿನ ಹಳ್ಳಿಬೈಲು) ವಿನಲ್ಲಿದ್ದ ಚೌಡಪ್ಪನಾಯಕ (1499–1530) ಮಲೆನಾಡಿನ ಭಾಗದ, ಈಗಿನ ಶಿವಮೊಗ್ಗ ಜಿಲ್ಲೆಯ ಮೊದಲ ಸಂಸ್ಥಾನವನ್ನು ಸ್ಥಾಪಿಸಿದ್ದ. ಆಗ ಉಚ್ಛ್ರಾಯಸ್ಥಿತಿಯಲ್ಲಿದ್ದ ವಿಜಯನಗರ ಸಾಮ್ರಾಜ್ಯದ ಸಾಮಂತರೆಂದು ಘೋಷಿಸಿಕೊಂಡರಿವರು. ೨೩ ಜನವರಿ ೧೫೬೫ರಲ್ಲಿ ತಾಳೀಕೋಟೆಯಲ್ಲಿ  ರಕ್ಕಸತಂಗಡಿ ಯುದ್ದದಲ್ಲಿ ಪಂಚ ಸುಲ್ತಾನರು(ಬಿಜಾಪುರ, ಬೀದರ್, ಬೇರರ್, ಅಹಮದಾನಗರ್, ಗೋಲ್ಕಂಡ) ಮತ್ತು ವಿಜಾಪುರದ ಅಳಿಯ ರಾಮ ರಾಯನ ನಡುವೆ ನಡೆಯುತ್ತೆ.  ಇಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದ ವಿಜಯನಗರ ಸೇನೆ ವಿಜಯನಗರ ಸೇನೆಯಲ್ಲಿದ್ದ ಗಿಲಾನಿ ಸಹೋದರರೆಂಬ ದಳಪತಿಗಳ ವಿಶ್ವಾಸಘಾತುಕತನದಿಂದ ಸೋತಿತೆಂಬ ಉಲ್ಲೇಖಗಳಿವೆ. ತದನಂತರ ಅದ್ಭುತ ಹಂಪೆ ಹಾಳುಹಂಪೆಯಾದದ್ದು ಇತಿಹಾಸ. ರಾಬರ್ಟ್ ಸೆಹೆಲ್ಲಿನ  ಫರ್ಘಾಟನ್ ಎಂಪೈರ್ ನೋಡಬಹುದು. ಕನ್ನಡವೇ ಪ್ರಧಾನ ಭಾಷೆಯಾಗಿದ್ದಾಗ ತೆಲುಗಿನ ಅಭಿವೃದ್ಧಿಗೆ ಪ್ರಾಮುಖ್ಯತೆ ಕೊಟ್ಟಿದ್ದು ವಿಜಯನಗರದ ಶ್ರೀಕೃಷ್ಣದೇವರಾಯ. ತಾಳಿಕೋಟೆಯ ಸೋಲು ಮತ್ತು ಹಂಪೆಯ ನಾಶದ ನಂತರ ರಾಮರಾಯನ ನಂತರದ ವಿಜಯನಗರದ ಅರಸರು ಆಂದ್ರದ ಅನಂತಪುರಂನಲ್ಲಿನ ಪೆನುಕೊಂಡವನ್ನು ತಮ್ಮ ರಾಜಧಾನಿಯಾಗಿಸಿಕೊಂಡರು !


ಕೆಳದಿಯವರು ವಿಜಯನಗರದ ಸಾಮಂತರಾಗಿದ್ದರು ಸರಿ. ವಿಜಯನಗರವನ್ನು ಸೋಲಿಸಿದವರಲ್ಲಿ ಬಿಜಾಪುರದ ರಾಜರಿದ್ದರು ಅದೂ ಸರಿ. ಅದಕ್ಕೂ ಇಂದಿನ ಕವಲೇದುರ್ಗಕ್ಕೂ ಏನು ಸಂಬಂಧ ಅನ್ನುತ್ತೀರಾ ? ಬಂದೆ ಅಲ್ಲಿಗೆ. ಕೆಳದಿಯ ನಾಲ್ಕನೆಯ ಅರಸ ಚಿಕ್ಕ ಸಂಕಪ್ಪ ನಾಯಕ(1570–1580) ತಾಳಿಕೋಟೆಯ ಯುದ್ದದ ನಂತರ ಉತ್ತರಕನ್ನಡದ ಕೆಲ ಪ್ರದೇಶಗಳನ್ನು ಗೆದ್ದು ಕೆಳದಿ ಸಂಸ್ಥಾನಕ್ಕೆ ಸೇರಿಸಿಕೊಂಡರು. ೧೫೮೬ರಿಂದ ರಾಜ್ಯವಾಳಿದ ಕೆಳದಿ ಸಂಸ್ಥಾನದ ಆರನೇ ರಾಜರೇ ಹಿರಿಯ ವೆಂಕಟಪ್ಪ ನಾಯಕ ! ಪೆನುಕೊಂಡದಲ್ಲಿ ವಿಜಯನಗರ ಅರಸರಿಂದ ಸ್ವಾತಂತ್ರ್ಯ ಘೋಷಿಸಿಕೊಂಡ ವೆಂಕಟಪ್ಪನಾಯಕ ಕೆಳದಿ ಸಂಸ್ಥಾನವನ್ನು ಮಲೆನಾಡು ದಾಟಿ ಕರಾವಳಿಯವರೆಗೂ ವಿಸ್ತರಿಸೋಕೆ ಕಾರಣವಾದರು. ಬಿಜಾಪುರದ ಆದಿಲ್ ಶಾಹಿಗಳನ್ನೂ ಸೋಲಿಸಿ ಕರಾವಳಿಯಲ್ಲಿ ಪೋರ್ಚುಗೀಸರನ್ನೂ ಸೋಲಿಸಿದ(೧೬೧೮-೧೯) ಸೋಲಿಸಿ ಸಾಮ್ರಾಜ್ಯ ವಿಸ್ತರಿಸಿದ ಕೀರ್ತಿ ಇವರದು.  

Trek in Kavaledurga Fort 

ಗೆಳೆಯ ಕೃಷ್ಣ ಕಾಸರಗೋಡಿನ ಬೇಕಲ್ ಕೋಟೆಯಲ್ಲೂ ಕೆಳದಿಯ ೮ನೇ ಅರಸ ಶಿವಪ್ಪನಾಯಕನ(1645–1660) ಹೆಸರಿದೆ ಎಂದು ನೆನಪು ಮಾಡುತ್ತಿದ್ದ. ಕಾಸರಗೋಡಿನ ಕರಾವಳಿಯಲ್ಲಿನ ಬೇಕಲ್ ಪ್ರಾಂತ್ಯದಲ್ಲಿನ ರಕ್ಷಣೆ ಮತ್ತು ಆ ಮೂಲಕ ವಿದೇಶಿಗರು ತಮ್ಮ ಸಂಸ್ಥಾನದೊಳಗೆ ನುಗ್ಗೋದನ್ನು ತಡೆಯೋಕೆ ಕೋಟೆಯ ನಿರ್ಮಾಣ ಶುರುಮಾಡಿದ್ದು ಹಿರಿಯ ವೆಂಕಟಪ್ಪನಾಯಕ. ಅದನ್ನು ಮುಗಿಸಿದ್ದು ಶಿವಪ್ಪನಾಯಕ ! ಈ ಶಿಪಪ್ಪನಾಯಕ ಬಿಜಾಪುರದ ಸುಲ್ತಾನರು, ಮೈಸೂರರಸರು, ಪೋರ್ಚುಗೀಸರನ್ನು ಸೋಲಿಸಿ ಪಶ್ಚಿಮಘಟ್ಟಗಳ ಮತ್ತು ಈಗಿನ ಕರ್ನಾಟಕದ ಬಹುಭಾಗವನ್ನು ಕೆಳದಿ ಸಂಸ್ಥಾನದ ಭಾಗವನ್ನಾಗಿಸಿದ್ದ. ಸುಮಾರು ೪೦ ಎಕರೆಗಳಷ್ಟು ವಿಸ್ತಾರ ಹೊಂದಿದ ಬೇಕಲ್ ಕೋಟೆ ಕೇರಳದ ಅತೀ ದೊಡ್ಡ ಕೋಟೆ !

ಇತಿಹಾಸ ಅಂದ ಮೇಲೆ ಯುದ್ದಗಳು, ಮೇಲು ಬೀಳುಗಳು ಸಾಮಾನ್ಯ. ಕೆಳದಿಯ ಕೊನೆಯ ರಾಣಿ ವೀರಮ್ಮಾಜಿ(1757–1763)ಯನ್ನು ಹೈದರಾಲಿ ಸೋಲಿಸಿದ ನಂತರ ಕೆಳದಿ ಸಂಸ್ಥಾನ ಮೈಸೂರು ಸಂಸ್ಥಾನದ ಭಾಗವಾಯ್ತು. ಈ ಮೂಲಕ ಕೆಳದಿ ಸಂಸ್ಥಾನದ ಭಾಗಗಳಾಗಿದ್ದ ಬೇಕಲ್ ಕೋಟೆ ಮತ್ತು ಕವಲೇದುರ್ಗ ಕೋಟೆಗಳ ೧೭೬೩ರಲ್ಲಿ ಮೈಸೂರು ಸಂಸ್ಥಾನದ ಭಾಗವಾಯ್ತು ! ಹೈದರಾಲಿ ಮರಳುವಾಗ ಇಲ್ಲಿ ಕೆಲವು ಕಾವಲುಗಾರರನ್ನು ಬಿಟ್ಟಿದ್ದನಂತೆ. ಇದಕ್ಕೇ ಕಾವಲುಗಾರರ ದುರ್ಗವೆಂದೂ, ತದನಂತರದಲ್ಲಿ ಕವಲೇ ದುರ್ಗವೆಂದೂ ಹೆಸರಾಯಿತು ಎನ್ನುತ್ತೆ ಇತಿಹಾಸದ ಮತ್ತೊಂದು ಎಳೆ. 

ಕವಲೇದುರ್ಗದ ಇತಿಹಾಸದ ಬಗ್ಗೆಯೇ ಇನ್ನೂ ಹಿಂದೆ ಹೋಗಬೇಕೆಂದರೆ ಕೃತಯುಗದಲ್ಲಿ ಇದು ಪರಶುರಾಮ ಕ್ಷೇತ್ರವಾಗಿತ್ತೆಂದೂ, ತ್ರೇತಾಯುಗದಲ್ಲಿ ಅಗಸ್ತ್ಯ , ಗೌತಮರು ಇಲ್ಲಿಗೆ ಬಂದಿದ್ದರೆಂದೂ, ದ್ವಾಪರದಲ್ಲಿ ಪಾಂಡವರು ಇಲ್ಲಿಗೆ ಬಂದಿದ್ದರೆಂದೂ ದಂತಕತೆಗಳಿವೆ. ಪಾಂಡವರ ಕಾಲದಲ್ಲಿ ಇದಕ್ಕೆ ಕಾವ್ಯವನ, ಕಪಿಲವನಗಳೆಂಬ ಹೆಸರೂ ಇತ್ತಂತೆ. ಇಲ್ಲಿಗೆ ಬಂದಾಗ ದ್ರೌಪದಿಗೆ ನೀರಡಿಕೆಯಾಗಲು ಭೀಮ ತನ್ನ ಗದೆಯಿಂದ ಗುದ್ದಿ ನೀರ ಕೊಳವೊಂದನ್ನು ನಿರ್ಮಿಸಿದನೆಂದೂ ಅದೇ ಇಲ್ಲಿನ ಗದಾತೀರ್ಥವೆಂದೂ ಹೇಳುತ್ತಾರೆ. ಕತೆಗಳು, ಸತ್ಯಾಸತ್ಯಗಳು ಏನೇ ಇದ್ದರೂ ಇಲ್ಲೊಂದು ಗುಹೆಯಂತಹ ರಚನೆಯೂ, ಬಂಡೆಯ ಮಧ್ಯೆ ಅಚ್ಚರಿಯೆನ್ನಿಸುವಂತೆ ನೀರ ಚಿಲುಮೆಯಿರುವುದೆಂತೂ ಸತ್ಯ !


ಈ ರೀತಿ ಅಧಿಕಾರದ ಕೇಂದ್ರವಾಗಿದ್ದ ಈ ಕೋಟೆ ಮತ್ತು ಊರು ೧೮೮೨ರ ತನಕ ತಾಲ್ಲೂಕು ಕೇಂದ್ರವಾಗಿತ್ತಂತೆ. ನಂತರ ತೀರ್ಥರಾಜಪುರ(ಈಗಿನ ತೀರ್ಥಹಳ್ಳಿ) ತಾಲ್ಲೂಕು ಕೇಂದ್ರವಾಯಿತು ಎನ್ನುತ್ತಾರೆ. ವಿಪರ್ಯಾಸವೆಂದರೆ ರಾಜರ, ಬ್ರಿಟಿಷರ ಕಾಲದಲ್ಲಿ ತಾಲ್ಲೂಕು ಕೇಂದ್ರವಾಗಿರಬಹುದಾದ ಸ್ಥಳದಲ್ಲಿರುವಂತಹ ಅಗಲವಾದ ರಸ್ತೆಗಳು, ಕಟ್ಟಡಗಳು ಮುಂತಾದ ಯಾವ ಗತವೈಭವಗಳೂ ಇಲ್ಲೀಗ ಉಳಿದಿಲ್ಲ ! ಖುಷಿಯ ಸಂಗತಿಯೆಂದರೆ ಕೆಲ ವರ್ಷಗಳ ಹಿಂದೆ ನಮ್ಮೊಳಗೊಬ್ಬ ಬಾಲು ಸರ್ ಅವರೊಂದಿಗೆ ಕವಲೇದುರ್ಗಕ್ಕೆ ಹೋದಾಗಿದ್ದ ಮೂರು ಕಿ.ಮೀ ಜಲ್ಲಿ ರಸ್ತೆ ಈಗ ಟಾರ ರಸ್ತೆಯಾಗಿದೆ ಮತ್ತು, ಪುರಾತತ್ವ ಇಲಾಖೆಯ ರಕ್ಷಣೆ ಸಿಕ್ಕಿದೆ ಕವಲೇದುರ್ಗ ಕೋಟೆಗೆ. 


ಕೋಟೆಯಲ್ಲಿ ನೋಡಲೇನೇನಿದೆ ? 

Kashi Vishwanatha temple

ಮೂರು ಸುತ್ತಿನ ಈ ಕೋಟೆ ಸಿಗೋದು ಕವಲೇದುರ್ಗವೆಂಬ ಈಗಿನ ಊರು ದಾಟಿದ ನಂತರ. ಊರ ಬಸ್ ಸ್ಟಾಪು, ಪುರಾತತ್ವ ಇಲಾಖೆಯ ಬೋರ್ಡು, ಗದ್ದೆಬಯಲುಗಳ ದಾಟಿದರೆ ಕವಲೇದುರ್ಗದ ಕೋಟೆಗೆ ಹತ್ತುವ ಮೆಟ್ಟಿಲುಗಳು ಸಿಗುತ್ತೆ. ಇಲ್ಲಿರೋ ಇತಿಹಾಸ ಫಲಕದ ಪ್ರಕಾರ ಆನೆ ಕುದುರೆಗಳೆಲ್ಲಾ ಕೋಟೆಯ ಮೇಲೆ ಆನೆ ಕುದುರೆಗಳ ಲಾಯಗಳಿತ್ತಂತೆ. ಕೋಟೆಗೆ ಹತ್ತೋ ದಾರಿಯೂ ಆನೆ, ಕುದುರೆಗಳು ಹತ್ತುವಷ್ಟೇ ವಿಶಾಲವಾಗಿದೆ ! ಪ್ರತೀ ಸುತ್ತಿನ ದ್ವಾರದ ಬಳಿಯೂ ಕಾವಲುಗಾರರಿಗೆ ತಂಗಲನುವಾಗುವಂತೆ ಕೊಠಡಿಗಳಂತಹ ರಚನೆಗಳಿವೆ. ಎರಡು ಸುತ್ತಿನ ಕೋಟೆಗಳನ್ನು ದಾಟಿದ ನಂತರ ಮೊದಲು ಸಿಗೋದು ಕಾಶಿ ವಿಶ್ವನಾಥ ದೇಗುಲ. ಶೃಂಗೇರಿ ಶಂಕರ ಮಠವೆಂದೂ ಕರೆಯಲ್ಪಡೋ ಈ ದೇಗುಲದ ಎದುರಿಗಿರೋ ಎರಡು ಕಂಬಗಳು ಬೆಟ್ಟದ ಮೇಲಿನಿಂದಲೂ ಕಣ್ಣಿಗೆ ಬಿದ್ದು ಈ ದೇಗುಲಕ್ಕೊಂದು ಸೌಂದರ್ಯವನ್ನು ಕೊಡುತ್ತದೆ. ಈ ದೇಗುಲದ ಎದುರು ಭಾಗದಲ್ಲಿ ಇಂಡೋ ಇಸ್ಲಾಮಿಕ್ ಶೈಲಿಯ ಕೆತ್ತನೆಗಳಿವೆ. ಕೆಲವರ ಪ್ರಕಾರ ಈ ಕೆತ್ತನೆಗಳನ್ನು ಹೈದರಾಲಿಯ ದಾಳಿಯ ನಂತರ ಮೂಡಿಸಿದ್ದು . ಇನ್ನು ಕೆಲವರ ಪ್ರಕಾರ ಇದೇ ಸಮಯದಲ್ಲಿ ಕೆಳದಿಯರಸರು ನಿರ್ಮಿಸಿದ ಇಕ್ಕೇರಿ ದೇಗುಲದ ನಂದಿ ಮಂಟಪವೂ ಇಂಡೋ ಇಸ್ಲಾಮಿಕ್ ಶೈಲಿಯಲ್ಲಿದ್ದು ಆ ಸಮಯದ ಕಲಾ ಸಂಗಮವೂ ಆಗಿರಬಹುದು.   

Kashi Vishwanatha Temple

ಕಾಶೀ ವಿಶ್ವನಾಥ ದೇಗುಲದ ಪಕ್ಕದಲ್ಲೊಂದು ಕಲ್ಯಾಣಿಯಿದೆ. ಅದರ ಎದುರಿಗಿರೋ ದೊಡ್ಡ ಕಲ್ಲುಗುಡ್ಡದ ಮೇಲೆ ಶ್ರೀ ಲಕ್ಷ್ಮೀ ನಾರಾಯಣ ದೇಗುಲವಿದೆ.  ಕುದುರೆ ದಾರಿ, ನಡೆದು ಹೋಗುವ ಹಾದಿ ಹೀಗೆ ಕಲ್ಲಲ್ಲೇ ಕಟ್ಟಿದ ಹಲವು ದಾರಿಗಳು ಇಲ್ಲಿರೋದು ವಿಶೇಷ. ಈ ದೇಗುಲಕ್ಕೆ ಹತ್ತೋ ಹಾದಿಯಲ್ಲಿ ಧಾನ್ಯ ಸಂಗ್ರಹಾರವನ್ನೂ ನೋಡಬಹುದು. ಶ್ರೀ ಲಕ್ಷ್ಮೀ ನಾರಾಯಣ ದೇಗುಲಕ್ಕೆ ಹತ್ತೋ ಜಾಗದಲ್ಲೋ ಇರೋ ಬುರುಜಿಂದ ಸುತ್ತಲ ಸ್ಥಳಗಳ ವಿಹಂಗಮ ದೃಶ್ಯವನ್ನೂ ಸವಿಯಬಹುದು. ಇಲ್ಲಿ ತುಪಾಕಿಗಳನ್ನು, ಪಿರಂಗಿಗಳನ್ನು ಇಡಬಹುದಾದ ಜಾಗವೂ ಇದ್ದು, ಇದಕ್ಕೆ ತುಪಾಕಿ ಬುರುಜೂ ಎನ್ನುತ್ತಾರಂತೆ. 

Lakshmi Narayana Temple

ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಸಾಗುವ ಹಾದಿಯಲ್ಲಿ ಮುಂದೆ ಸಾಗಿದರೆ ಅರಮನೆಯ ಪಳೆಯುಳಿಕೆಗಳು ಕಾಣುತ್ತದೆ. ಆಗಿನ ರಾಣಿಯರ ಸ್ನಾನದ ಕೋಣೆಗಳು, ದರ್ಬಾರ್ ಹಾಲ್, ಕೊಳ , ಕಲ್ಲಿನ ನೀರ ಬಾನಿಗಳು, ಅರಮನೆಯ ಕೋಣೆಗಳು ಕಾಣುತ್ತದೆ. ಈ ಕಲ್ಲು ಗುಡ್ಡದ ಮೇಲೆ ಬಾವಿ ಕೊರೆದದ್ದು ಆಶ್ಚರ್ಯವೇ ಸರಿ. ಅದಕ್ಕೆ ಕಲ್ಲುಗಳನ್ನು ಮರೆ ಮಾಡಿ ಜನ ಬೀಳದಂತೆ ನೋಡಿಕೊಂಡಿರೋ ಸ್ಥಳೀಯರ ಕಾಳಜಿಯೂ ಪ್ರಶಂಸನೀಯ. 

Neera Baani


ಅರಮನೆಯ ಪಳೆಯುಳಿಕೆಗಳ ಪಕ್ಕದಲ್ಲಿ ಕೋಟೆಯ ಮೇಲಕ್ಕೆ ಹತ್ತುವ ಮೆಟ್ಟಿಲುಗಳು ಕಾಣುತ್ತದೆ. ಆ ಮೆಟ್ಟಿಲುಗಳು ಮುಂದೆ ಮುಚ್ಚಿ ಹೋಗಿದ್ದರೂ ಅರಮನೆಯ ಬಲ ಪಕ್ಕದಲ್ಲಿ ಮೇಲೆ ಹತ್ತುವ ದಾರಿ ಕಾಣುತ್ತದೆ. ಅಲ್ಲೇ ಸ್ವಲ್ಪ ನಡೆಯುವ ಹೊತ್ತಿಗೆ ಮತ್ತೆ ಮೆಟ್ಟಿಲುಗಳು ಕಾಣುತ್ತವೆ. ಅಲ್ಲೇ ಮೇಲೆ ಹತ್ತುವ ಹೊತ್ತಿಗೆ ಮೂರನೆಯ ಸುತ್ತಿನ ಕೋಟೆಯ ಬಾಗಿಲು ಕಾಣುತ್ತದೆ. ಅದನ್ನು ದಾಟಿ ಒಳ ಸಾಗಿದರೆ ಕೋಟೆಯ ಮೇಲ್ಭಾಗದತ್ತ ಸಾಗುತ್ತೇವೆ. 

ಇಲ್ಲಿಂದ ಕಾಣುವ ವಾರಾಹಿ ಮತ್ತು ಚಕ್ರಾನದಿಗಳ ಹಿನ್ನೀರಿನ ದೃಶ್ಯ ನಯನಮನೋಹರ. ಮಳೆಗಾಲದಲ್ಲಿ ಇಲ್ಲಿನ ಕೋಟೆಗೋಡೆಗಳ ಹಸಿರು ಮತ್ತು ಇಲ್ಲಿ ಕಾಣಸಿಗೋ ಹಲವು ಹಕ್ಕಿಗಳು ಫೋಟೋಗ್ರಾಫಿ ಪ್ರಿಯರಿಗೂ ಹೇಳಿ ಮಾಡಿಸಿದಂತಿವೆ.

ಕೋಟೆಯ ತುತ್ತತುದಿಗೆ ಸಾಗುತ್ತಿದ್ದಂತೆ  ಅಲ್ಲಿರೋ ದೊಡ್ಡ ಬಂಡೆಯೊಂದರ ಮೇಲೆ ಶಿಖರೇಶ್ವರ ಅಥವಾ ಮೈಲಾರೇಶ್ವರ  ಅಥವಾ ಶ್ರೀಕಂಠೇಶ್ವರ ದೇಗುಲವಿದೆ. ಇಲ್ಲಿಂದಲೂ ಪಕ್ಕ ಸಾಗಿದರೆ ಮುಂಚೆ ಹೇಳಿದ ಗದಾ ತೀರ್ಥದ ಬಳಿ ಸಾಗಬಹುದು.

Srikanteshwara Temple


ಮತ್ತದೇ ಬೇಸರ:

ಇಲ್ಲಿನ ಚಾರಣಕ್ಕೂ ಮೊದಲು ಪುರಾತತ್ವ ಇಲಾಖೆಯವರು ಬ್ಯಾಗಿದ್ಯಾ ಎಂದು ಔಪಚಾರಿಕವಾಗಿ ಕೇಳುತ್ತಾರಷ್ಟೆ. ಅವರು ಎಷ್ಟೇ ಚೆಕ್ ಮಾಡಿದರೂ, ತಿಳಿ ಹೇಳಿದರೂ ಇಲ್ಲಿಗೆ ಬರೋ ಅವಿವೇಕಿ ಪ್ರವಾಸಿಗರು ಶಿಖರೇಶ್ವರ ದೇಗುಲದ ಬಂಡೆಯ ಕೆಳಗೆ, ಕೆಲವು ಕೆರೆ, ಬಾವಿಗಳ ಒಳಗೆ ಪ್ಲಾಸ್ಟಿಕ್ ಕವರುಗಳನ್ನ, ಬಾಟಲಿಗಳನ್ನು ಎಸೆದಿರುವುದು ದುರಂತ ! ಕೇರಳದ ವಯನಾಡ್ ಮುಂತಾದ ಪ್ರದೇಶಗಳಲ್ಲಿ ಮಾಡಿದಂತ ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ ನಿರ್ಬಂಧದ ನಿಯಮಗಳನ್ನು ಇಲ್ಲೂ ತರಬೇಕಾಗಿದೆ. ನಾವು ಹೋದ ದಿನ ಸುಮಾರು ಕಾರುಗಳನ್ನ ನೋಡಿ ದಂಗಾಗಿದ್ವಿ. ಮೇಲೆಲ್ಲಾ ಮಾಸ್ಕ್ ಬಳಸಬೇಕು ಅಂತ ಪುರಾತತ್ವ ಇಲಾಖೆಯವರು ಹೇಳಿದ್ದನ್ನು ನಾವೇನೋ ಪಾಲಿಸಿದ್ವಿ. ಆದರೆ ನಮಗೆ ದಾರಿಯಲ್ಲಿ ಸಿಕ್ಕ ಜನರಲ್ಲಿ ಮುಕ್ಕಾಲು ಭಾಗ ಜನರ ಬಳಿ ಮಾಸ್ಕಿದ್ದರೂ  ಹಾಕ್ಕೊಂಡಿರಲಿಲ್ಲ, ಗುಂಪುಗೂಡಿ ಸಾಮಾಜಿಕ ಅಂತರವನ್ನೂ ಪಾಲಿಸುತ್ತಿರಲಿಲ್ಲ! ಅಂದ ಹಾಗೆ ನಾವು ಹೋಗಿದ್ದ ದಿನ ಅಲ್ಲಿ ಸೇರಿದ್ದವರು ೯೦೦ಕ್ಕೂ ಹೆಚ್ಚು. ಹಿಂದಿನ ವಾರ ಅದು ಸಾವಿರ ಮೀರಿತ್ತಂತೆ ! ವಾರಾಂತ್ಯ ಬಿಡಿ, ವಾರದ ದಿನವೂ ನೂರೈವತ್ತರ ಮೇಲೆ ಜನ ಸೇರುತ್ತಾರಂತೆ ಇಲ್ಲಿ ! ಹಿಂದಿನ ವಾರ ಜೋಗಕ್ಕೆ ಹೋದಾಗಲೂ ಅಲ್ಲಿನ ಸೀತಾಕಟ್ಟೆ ಸರ್ಕಲ್ಲಿನವರೆಗೂ ಕ್ಯೂ ಇತ್ತು. ಅಂದು ಸಂಗ್ರಹವಾದ ಪ್ರವಾಸಿಗರ ಪ್ರವೇಶ ಶುಲ್ಕವೇ ೪ ಲಕ್ಷ ! ಇದನ್ನೆಲ್ಲಾ ನೋಡಿದಾಗ ಈ ಕರೋನಾ ಅನ್ನೋದು ಟೀವಿ, ಪತ್ರಿಕೆಗಳಲ್ಲಿ ಮಾತ್ರವೇ ಇರೋದಾ ಅನಿಸುತ್ತೆ !


Saturday, January 19, 2019

ಶಿವಗಂಗೆ ಟ್ರಿಪ್ಪು

We at Shivagange
ನಮ್ಮ ಮೂರನೇ ಚಾರಣವಾದ ಸಾವನದುರ್ಗದ ನಂತರ ಎಲ್ಲಿಗೆ ಹೋಗೋದು ಅಂತ ಪ್ಲಾನ್ ಮಾಡ್ತಿದ್ದೆ. ನವದುರ್ಗಗಳಲ್ಲಿ ಮುಂದಿನ ದುರ್ಗವಾದ ಹುತ್ರಿದುರ್ಗಕ್ಕೋ, ಹುಲಿಯೂರು ದುರ್ಗಕ್ಕೋ ಹೋಗಿ ಬರೋಣ ಅಂತ ಪ್ಲಾನ್ ಹಾಕಿದ್ರೂ ಹೆಚ್ಚಿನ ಜನ ಸಿಗದೇ ಅದು ನೆರವೇರಲಿಲ್ಲ. ಸರಿ, ಶಿವಗಂಗೆಗೆ ಹೋಗಿ ಅಲ್ಲೇ ಹತ್ತಿರದಲ್ಲಿರೋ ದೇವರಾಯನದುರ್ಗಕ್ಕಾದರೂ ಹೋಗಿ ಬರೋಣ ಅಂದ್ಕೊಂಡ್ವಿ. ಆದರೆ ಒಮ್ಮೆ ಶಿವಗಂಗೆಯನ್ನು ಹೊಕ್ಕಾಗ ಅಲ್ಲಿರೋ ಅಷ್ಟ ಲಿಂಗಗಳು, ಅಷ್ಟ ವೃಷಭಗಳು, ಒಳಕಲ್ಲು ತೀರ್ಥ, ಪಾತಾಳಗಂಗೆ, ಗಂಗಾಧರೇಶ್ವರ, ಹೊನ್ನಮ್ಮ ದೇವಿಯ ಗುಡಿಗಳನ್ನು ನೋಡೋದರಲ್ಲೇ ಸಂಜೆಯಾಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ಅದೆಷ್ಟೋ ಕಡೆ , ಬಂಡೆಗಳ ಮೇಲೆಲ್ಲಾ ನಂದಿ, ಕೆತ್ತನೆಗಳು, ಹಳಗನ್ನಡದ ಲಿಪಿಗಳು ನಮ್ಮನ್ನು ಕಾಲದಲೆಯಲ್ಲಿ ಹಿಂದಿಂದೆ ಕೊಚ್ಚಿಕೊಂಡು ಹೋದಂತನಿಸುತ್ತಿತ್ತು.
Entrance to the Old city of Shivagange 

ಅಷ್ಟ ಲಿಂಗಗಳು: 
ಶಿವಗಂಗೆಗೆ ಹೋದವರಿಗೆ ಅಲ್ಲಿನ ಗಂಗಾಧರೇಶ್ವರ ಗುಡಿಯ ಬಗ್ಗೆ ಗೊತ್ತಿರುತ್ತೆ. ಆದರೆ ಅದರ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಸ್ವರ್ಣಾಂಭ, ಶಾಂತೇಶ್ವರ, ಓಂಕಾರೇಶ್ವರ, ರೇವಣ ಸಿದ್ದೇಶ್ವರ, ಕುಂಭೇಶ್ವರ, ಸೋಮೇಶ್ವರ, ಮುದ್ದು ವೀರೇಶ್ವರ ಎಂಬ ಅಷ್ಟ ಲಿಂಗಗಳಿವೆ ಅಂತ ಗೊತ್ತಿರೋಲ್ಲ.ಈಗ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರ ಎಂಬ ಹೆಸರಲ್ಲಿ ಇನ್ನೂ ಹನ್ನೆರಡು ಲಿಂಗಗಳನ್ನು ಸ್ಥಾಪಿಸಲಾಗಿದೆಯಿಲ್ಲಿ
one of the less known rock in Shivagange with a Nandi 


ಅಷ್ಟ ವೃಷಭಗಳು/ಎಂಟು ಬಸವಗಳು: 
ಈ ಬೆಟ್ಟದ ಮೇಲೆ ನಂದಿ ವೃಷಭ/ಬಸವ, ಮಕರ ಬಸವ, ಎಮ್ಮ ಬಸವ/ಮಹಿಷ ಬಸವ, ಗಾರೇ ಬಸವ, ದೊಡ್ಡ ಬಸವ, ಕಡಲೆ ಬಸವ, ಗಿರಿ ಬಸವ ಮತ್ತು ಕೋಡುಗಲ್ಲು ಬಸವ ಎಂಬ ಎಂಟು ಬಸವನ ಮೂರ್ತಿಗಳಿವೆ.
One of the less known Nandi Mantapa in Shivagange 

ಅಷ್ಟ ತೀರ್ಥಗಳು: 
ಇಲ್ಲಿ ಅಗಸ್ತ್ಯ ತೀರ್ಥ, ಶಂಕರ ತೀರ್ಥ, ಕಣ್ವ ತೀರ್ಥ, ಕದಂಬ ತೀರ್ಥ, ಮೈಥಲ ತೀರ್ಥ, ಪಾತಾಳ ಗಂಗೆ, ಒಳಕಲ್ಲು ತೀರ್ಥ ಮತ್ತು ಕಪಿಲ ತೀರ್ಥಗಳೆಂಬ ಎಂಟು ತೀರ್ಥಗಳೂ ಇವೆಯಂತೆ. ಆದರೆ ಪಾತಾಳಗಂಗೆ ಮತ್ತು ಒಳಕಲ್ಲು ತೀರ್ಥಗಳನ್ನು ಬಿಟ್ಟು ಬೇರೆ ಯಾವುದಕ್ಕೂ ಬೋರ್ಡುಗಳಿಲ್ಲದಿರುವುದರಿಂದ ಇವುಗಳ ಬಗ್ಗೆ ತಿಳಿದವರನ್ನು ಕರೆದುಕೊಂಡು ಹೋಗದಿದ್ದರೆ ಇವೇ ಇವು ಅಂತ ಗೊತ್ತಾಗೋದು ಕಷ್ಟ.
One of the less known Theertha

One more Less Known Theertha



ಇತಿಹಾಸ, ದಂತಕತೆಗಳು ಮತ್ತು ಇಲ್ಲಿನ ವಿಶಿಷ್ಟ ಆಚರಣೆಗಳು: 
ಇಷ್ಟೆಲ್ಲಾ ವಿಶೇಷಗಳಿವೆಯಾ ಇಲ್ಲಿ ಅಂದ್ರಾ ? ಇಲ್ಲಿನ ಇತಿಹಾಸ, ದಂತಕತೆಗಳು ಬಹಳವೇ ಇದೆ. ಅದರಲ್ಲಿ ಮುಖ್ಯವಾದದ್ದು ಗಂಗಾಧರೇಶ್ವರ ಮತ್ತು ಹೊನ್ನಮ್ಮ ದೇವಿ ದೇಗುಲಗಳದ್ದು. ಇವನ್ನು  ಚೋಳರ ಕಾಲದಲ್ಲೇ ಕಟ್ಟಲಾಯಿತಂತೆ. ನಂತರ ಹೊಯ್ಸಳ ವಿಷ್ಣುವರ್ಧನ ಮತ್ತು ಕೆಂಪೇಗೌಡನ ಕಾಲದಲ್ಲಿಇವುಗಳನ್ನು  ಜೀರ್ಣೋದ್ದಾರ ಮಾಡಲಾಯಿತು.
Near the Gangadhareshwara temple at the base

ಮೇಲ್ಗಡೆ ಇರುವ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದಲ್ಲೇ ಹೊಯ್ಸಳ ರಾಣಿ ಶಾಂತಲಾ ಜಿಗಿದು ಪ್ರಾಣ ತ್ಯಾಗ ಮಾಡಿದಳೆಂದು ಹೇಳಲಾದ ಜಾಗವೂ ಇದೆ. ಅವಳು ಕೆಳಗೆ ಹಾರುವಾಗ ಸೆರಗಲ್ಲಿ ಅರಳೀ ಬೀಜ ಕಟ್ಟಿಕೊಂಡು ಜಿಗಿದಳು. ಅಲ್ಲಿ ಕಾಣುವ ಅರಳೀ ಬೀಜಗಳು ಈಗಲೂ ಚಿಗುರುತ್ತವೆ. ಅವನ್ನು ತಂದು ಬೇಯಿಸಿದರೆ ರಕ್ತದ ತರ ಆಗುತ್ತೆ ಅಂತ ಸ್ಥಳೀಯರು ನಂಬುತ್ತಾರೆ. ಇಲ್ಲಿರುವ ಹೊನ್ನಮ್ಮ ದೇವಿಯ ದೇಗುಲದ ಬಗೆಯೂ ದಂತಕತೆಯೊಂದಿದೆ. ಈ ಬೆಟ್ಟದ ಮೇಲಿದ್ದ ಹೊನ್ನಮ್ಮ ದೇವಿಯು ಬಸರಿ ಹೆಂಗಸರನ್ನು ಬಲಿ ತೆಗೆದುಕೊಳ್ಳುತ್ತಿದ್ದಳಂತೆ. ಈ ಸರತಿಯಂತೆ ಕೋಟೆಯ ಕಾವಲುಗೈವ ನಾಯಕನ ಹೆಂಡತಿಯೂ ಹೋಗಬೇಕಾಗಿ ಬಂತಂತೆ. ಅವಳು ಕಣ್ಣೀರು ಹಾಕಿಕೊಳ್ಳುತ್ತಾ ಬಂದಾಗ ಎದುರು ಬಂದ ದೇವಿ ನೀನು ಕಣ್ಣೀರು ಹಾಕಿಕೊಂಡು ಬಂದ್ರೆ ಶ್ರೇಯಸ್ಸಲ್ಲ. ನಿನ್ನ ಗಂಡನ ಕೈಯಲ್ಲಿ ಮೂರು ಕವಲೊಡೆದಿರುವ ಬಸರೀ ಮರ ತಂದು ನೆಡೆಸಿ ಬೆಳಿಗ್ಗೆ , ಸಾಯಂಕಾಲ ಪೂಜೆ ಮಾಡಂಗಿದ್ರೆ ನಾನು ಇನ್ಮೇಲೆ ನರಬಲಿ ತಗೊಳ್ಳಲ್ಲ ಅಂತ ವಾಗ್ದಾನ ತಗೊಂಡ್ಲಂತೆ. ನಾಯಕರು ದೇವಿ ದೇವಸ್ಥಾನದ ಕಾವಲುಗಾರರಾಗಿದ್ದವರು, ಬಸರೀ ಮರ ತಂದು ನೆಟ್ಟು ಪೂಜೆ ಮಾಡತೊಡಗಿದರಂತೆ. ಆ ನೆನಪಿಗೆ  ಈಗಲೂ ಪ್ರತೀ ವರ್ಷದ ಯುಗಾದಿ ಆದ ನಂತರ ಬರುವ ಮಂಗಳವಾರದಂದು ದೇಗುಲಕ್ಕೆ ಏರುವಲ್ಲಿ ಸಿಗುವ ಚೌಕದಲ್ಲಿ ಬಸರೀ ಮರ ಇಟ್ಟು ಬೆಳಗ್ಗೆ, ಸಂಜೆಯ ಪೂಜೆಯನ್ನು ಮಾಡಲಾಗುತ್ತದೆ. ಪೂಜೆ ಮಾಡಿದಾಗ ನಮ್ಮ ಮುಖದಲ್ಲಿ ಹೇಗೆ ಬೆವರು ಸುರಿಯುತ್ತಿರುತ್ತೋ ಅದೇ ರೀತಿ ಹೊನ್ನ ದೇವಿ ದೇಗುಲದಲ್ಲಿ ನೀರು ಜಿನುಗುತ್ತಿರುತ್ತಂತೆ. ಹದಿನೈದು ದಿನ. ಅದನ್ನು ಉಗ್ರರೂಪ ಎನ್ನುತ್ತಾರೆ.  ಅದಾದ ನಂತರ ಹೊನ್ನಾ ದೇವಿ(ಹೊನ್ನಮ್ಮ ದೇವಿ/ಸ್ವರ್ಣಾಂಭ ದೇವಿ)ಗೆ ಹದಿನಾರು ಸೇರು ಆರತಿ, ಗಂಗಾಧರೇಶ್ವರನಿಗೆ ಐದು ಸೇರು ಆರತಿ, ಬೆಟ್ಟದ ಸುತ್ತಮುತ್ತ ಎಷ್ಟು ದೇವರಿದ್ದಾರೋ ಅವರಿಗೆಲ್ಲಾ ಒಂದೊಂದು ಸೇರು ಆರತಿ ಮಾಡಿ, ಅಡಿಕೆ ಹೊಂಬಾಳೆಯನ್ನು ತಗೊಂಡು ಹೋಗಿ ಬಸರಿ ಮರಕ್ಕೆ ಕೊಡ್ತಾರೆ. ಅದು ಐದು ದಿನಕ್ಕೆ ಹೊಸ ಗಿಡ ಚಿಗುರಿದಂತೆ ಚಿಗುರಿರುತ್ತೆ. ಅದನ್ನ ಬುಧವಾರ ದಿನ ಕಿತ್ತು ಕೆಳಗಿರೋ ಕಲ್ಯಾಣಿಗೆ ಬಿಡುತ್ತಾರೆ. ಗುರುವಾರದಿಂದ ಹೊನ್ನಾ ದೇವಿಗೆ ಹೊಸ ಕಾಯಿ, ಗಂಗೆ, ಗೌರಿಗಳನ್ನ ಕೊಡೋದು, ಗಂಗಾಧರೇಶ್ವರನಿಗೆ ವಾಹನ, ತೇರು, ತೆಪ್ಪೋತ್ಸವಗಳನ್ನು ನಡೆಸಲಾಗುತ್ತೆ. ಯುಗಾದಿ ಆದ ಮೇಲೆ ಬರುವ ಮಂಗಳವಾರದಂದು ಕಂಬ ಹಾಕೋದು.ಅದಾಗಿ ಹದಿನೈದು ದಿನಕ್ಕೆ ಹೊನ್ನಾದೇವಿಗೆ ಮಡೆ ಆರತಿ. ಬೆಟ್ಟದ ಮೇಲೆ ಗಂಗಾಧರೇಶ್ವರ, ವೀರಭದ್ರ ಸ್ವಾಮಿ ಗುಡಿಗಳ ಎದುರಿರೋ ಬಂಡೆಗಳ ಮೇಲೆ ಎರಡು ಕಂಬಗಳಿವೆ. ಬಾಂಡಲಿ ತರ ಇರೋ ಕಂಬದ ಮೇಲೆ ಪ್ರತೀ ಹುಣ್ಣಿಮೆಗೆ ದೀಪ ಹಚ್ಚುತ್ತಾರೆ. ಮತ್ತೊಂದು ಕಂಬಕ್ಕೆ ಉರಿಗಂಬ ಎಂದು ಹೆಸರು. ಸಂಕ್ರಾಂತಿ ಬರುವ ಜನವರಿಯ ಹದಿನಾರನೇ ತಾರೀಖು ಈ ಉರಿಗಂಬ/ಹುರಿಗಂಬ/ಹುಲಿಗಂಬ ದಲ್ಲಿ ಹಾಲು ಬರುತ್ತೆ ಅಂತ ನಂಬುತ್ತಾರೆ. ಆಗ ಗಂಗೆ, ಗೌರಿ, ಗಂಗಾಧರೇಶ್ವರನಿಗೆ ಧಾರೆ ಮುಹೂರ್ತವನ್ನು ನಿಶ್ವಯಿಸುತ್ತಾರೆ. ತೇರೇನು ಇರೋಲ್ಲ. ಅದರ ಮುಂಚಿನ ಹದಿನಾಲ್ಕರ ರಾತ್ರೆ ಹನ್ನೆರಡಕ್ಕೇ ಈ ಹುಲಿಗಂಬದಲ್ಲಿ ಒಸರೋ ತೀರ್ಥವನ್ನು ನೋಡೋಕೆ ಅಲ್ಲಿ ಜನ ಸೇರಿರುತ್ತಾರೆ. 


ಹೋಗೋದು ಹೇಗೆ ? 
ಬೆಂಗಳೂರಿನಿಂದ ತುಮಕೂರಿಗೆ ಹೋಗೋ ರಸ್ತೆಯಲ್ಲಿ ಸಾಗಿ, ಡಾಬಸ್ ಪೇಟೆಗಿಂತ ಮುಂಚೆ ಸಿಗೋ ಎಡಕ್ಕೆ ಸಾಗೋ ತಿರುವಿನಲ್ಲಿ ಆರೂವರೆ ಕಿ.ಮೀ ಸಾಗಿದರೆ ಶಿವಗಂಗೆ ಸಿಗುತ್ತೆ. ಡಾಬಸ್ ಪೇಟೆಯಿಂದ ರಾಮನಗರಕ್ಕೆ ಹೋಗೋ ಹೈವೆಗೆ ಬೆಂಗಳೂರು-ತುಮಕೂರು ಹೈವೇಯಿಂದ ಹೊರಬರುವ ನಾವು ಸೇರುವ ಜಾಗದಿಂದ ಒಂದು ಕಿ.ಮೀ ಒಳಗೆ ಹೋದರೆ ಶಿವಗಂಗೆ ಬೆಟ್ಟ ಸಿಗುತ್ತೆ. ಅಲ್ಲಿ ರಸ್ತೆಯನ್ನು ಅಡ್ಡ ಹಾಕುವ ಜನರಿಂದ ೨೦ ರೂ ಟಿಕೇಟ್ ಪಡೆದು ಒಳಹೋಗಬೇಕು. ದೇಗುಲದ ಎದುರು ಪಾರ್ಕಿಂಗಿಗೆ ಟಿಕೇಟ್ ಕೊಡೋಕೆ ಬರೋ ಜನರಿಗೆ ಮುಂಚೆ ತಗೊಂಡ ಟಿಕೇಟ್ ತೋರಿಸಿದ್ರೆ ನಡೆಯುತ್ತೆ. ಬೇರೆ ಟಿಕೇಟ್ ತಗೊಳ್ಳೋ ಅವಶ್ಯಕತೆಯಿಲ್ಲ. ದೇಗುಲದ ಎದುರಿಗೇ ಚಪ್ಪಲಿ ಬಿಟ್ಟು ಮೇಲೆ ಹತ್ತಬಹುದು. ಬೆಟ್ಟದ ತುದಿಯವರೆಗೂ ಹೋಗೋದಾದರೆ ಚಪ್ಪಲಿ/ಶೂ ಹಾಕಿಕೊಂಡೇ ಮೇಲೆ ಹತ್ತಬಹುದು. ಸ್ವಲ್ಪ ಮೇಲೆ ಹತ್ತಿದ ಮೇಲೆ ಬಲಕ್ಕೆ ಹೋದರೆ ಹೊನ್ನಮ್ಮ ದೇವಿ, ಗಂಗಾಧರೇಶ್ವರ ದೇಗುಲಕ್ಕೆ ಸಾಗುತ್ತೆ. ಎಡಕ್ಕೆ ಹೋದರೆ ಬೆಟ್ಟದ ಮೇಲೆ ಸಾಗುತ್ತೆ. ಬಲಕ್ಕೆ ಹೋದರೆ ಹೊನ್ನಮ್ಮ ದೇವಿಯ ದೇಗುಲದ ಬಳಿ ಚಪ್ಪಲಿ ಬಿಡೋಕೆ ಮತ್ತೆ ಅವಕಾಶವಿದೆ. ಸೀದಾ ಮೇಲೆ ಹೋದರೆ ಗಂಗಾಧರೇಶ್ವರ ದೇಗುಲದ ಉತ್ತರ ದ್ವಾರದ ಬಳಿಯಿಂದ ಬಂದು ಅಲ್ಲಿನ ಶಿಲ್ಪಕಲೆಯನ್ನು ನೋಡಬಹುದಾದರೂ ದೇಗುಲವನ್ನು ಪ್ರವೇಶಿಸಲು ಹೊನ್ನಮ್ಮ ದೇವಿಯ ಗುಡಿಯ ಪಕ್ಕದಲ್ಲಿರುವ ದಾರಕ್ಕೇ ಬರಬೇಕಾಗಿರುವುದರಿಂದ ದೇವಸ್ಥಾನಕ್ಕೆ ಹೋಗ್ತಾ ಚಪ್ಪಲಿ ಏನ್ಮಾಡೋದಪ್ಪ ಅನ್ನೋ ತಲೆಬಿಸಿಯಿಲ್ಲ. ಬೆಟ್ಟ ಏರುವಾಗ ಅಲ್ಲಿನ ಕಲ್ಲುಬಂಡೆಗಳ ಮೇಲೆ ಕಾಲು ಸುಡೋದರಿಂದ ಚಪ್ಪಲಿ/ಶೂ ಹಾಕ್ಕೊಂಡೇ ಹೋಗೋದು ಉತ್ತಮ ಅಂತ ನಮ್ಮ ಅನಿಸಿಕೆ


ಎಮ್ಮ ಬಸವ: 
ಊರ ಪ್ರವೇಶದ್ವಾರವ ದಾಟಿ, ಬೆಟ್ಟದ ಪ್ರವೇಶದ್ವಾರದ ಮೆಟ್ಟಿಲುಗಳನ್ನು ಹತ್ತುತ್ತಾ ಬಲಕ್ಕೆ ಸಿಕ್ಕ ದೇಗುಲಗಳತ್ತ ಹೊರಳದೇ ಎಡಕ್ಕೆ ತಿರುಗಿದ್ರೆ ದೊಡ್ಡ ನಂದಿಯೊಂದು ಎದುರಾಗುತ್ತೆ. ಅದಕ್ಕೆ ಎಮ್ಮ ಬಸವ/ಮಹಿಷ ಬಸವ ಅಂತ ಹೆಸರು. ಅದರ ಪಕ್ಕದಲ್ಲೇ ಶೌಚಾಲಯವೊಂದು, ಮೇಲಕ್ಕೆ ಹತ್ತೋ ಮೆಟ್ಟಿಲುಗಳು ಸಿಗುತ್ತೆ. ಇಡೀ ಬೆಟ್ಟದ ಆವರಣದಲ್ಲಿ ಸಿಗೋ ಶೌಚಾಲಯ ಇದೊಂದೇ. ಎಮ್ಮ ಬಸವನ ಬಳಿ ಫೋಟೋ ತೆಗೆಸಿಕೊಂಡು ಮುಂದೆ ಸಾಗಿದ್ವಿ.
Infront of Emma Basava

 ಕೆಂಪೇಗೌಡನ ಹಜಾರ:
ಇಲ್ಲಿನ ದೇಗುಲಗಳನ್ನು ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ದಾರ ಮಾಡಲಾಯಿತು ಅಂತ ಮೇಲೆ ಹೇಳಿದ್ದೆನಲ್ಲ. ಆ ಕಾಲದಲ್ಲಿ ಕಟ್ಟಿದ ಮಂಟಪವೊಂದು ಸಿಗುತ್ತೆ ಮೇಲೆ ಹತ್ತುವಾಗ. ಕೆಂಪೇಗೌಡನ ಹಜಾರ ಎಂದು ಕರೆಯಲ್ಪಡುವ ಇಲ್ಲಿ ಕುಳಿತು ಇಲ್ಲಿನ ಶಿಲ್ಪಗಳನ್ನು , ಸುತ್ತಲ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಪಕ್ಕದಲ್ಲೇ ಧ್ವಜಸ್ಥಂಭ, ಇನ್ನೆರಡು ನಂದಿ ಮಂಟಪಗಳೂ ಕಾಣುತ್ತೆ. ಅಲ್ಲಿ ಬಲಕ್ಕೆ ಕೋಟೆಯ ಕುರುಹುಗಳೂ, ಗಂಗಾಧರೇಶ್ವರ ದೇಗುಲದ ಉತ್ತರ ದ್ವಾರಗಳೂ ಕಾಣುತ್ತೆ. ಅತ್ತ ಸಾಗದೇ ಸೀದಾ ಮೇಲಕ್ಕೆ ಹತ್ತಿದರೆ ಮತ್ತೊಂದು ನಂದಿ ದ್ವಾರದ ಮೂಲಕ ಬೆಟ್ಟ ಹತ್ತೋಕೆ ಶುರು ಮಾಡುತ್ತೀವಿ. ಇಲ್ಲೂ ಬಲಕ್ಕೆ ನಂದಿ ಮಂಟಪವೊಂದು ಕಾಣುತ್ತೆ.
At KempeGowdana Hajara

Remains of the Fort and one more Nandi mantapa at the Backdrop
Remains of the Fort

Ascending the hill











View of the Kalyani and One more Nandi Mantapa as seen from the top
 ಒಳಕಲ್ಲು ತೀರ್ಥ: 
ಸ್ವಲ್ಪ ಬೆಟ್ಟ ಹತ್ತೋ ಹೊತ್ತಿಗೆ ಒಳಕಲ್ಲು ತೀರ್ಥಕ್ಕೆ ದಾರಿ ಅಂತ ಬೋರ್ಡೊಂದು ಕಾಣುತ್ತೆ. ಅದರಲ್ಲಿ ಬಲಕ್ಕೆ ಇರೋ ಮುಖ್ಯ ದಾರಿಯಲ್ಲಿ ಎಲ್ಲರೂ ಸಾಗುತ್ತಾರೆ. ಅದರ ಬದಲು ಎಡಕ್ಕಿರೋ ದಾರಿಯಲ್ಲಿ ಸಾಗಿದರೆ ಮತ್ತೊಂದು ನಂದಿ ಮಂಟಪ ಸಿಗುತ್ತೆ. ಅಲ್ಲಿನ ಮಂಟಪ ಮತ್ತು ಮೂರ್ತಿಗಳನ್ನು ನೋಡಿಕೊಂಡು ಒಳಕಲ್ಲು ತೀರ್ಥಕ್ಕೆ ಸಾಗಬಹುದು.

One more Nandi Mantapa Near Olakallu Teertha
ಇಲ್ಲಿ ಹೆಸರೇ ಹೇಳುವಂತೆ ಒರಳ ರೀತಿಯಿರುವ ಕಲ್ಲೊಂದಿದೆ. ಅದರ ಒಳಗೆ ನೀರಿರುತ್ತೆ. ಅದರಲ್ಲಿ ಕೈ ಹಾಕಿದಾಗ ನೀರು ಸಿಕ್ಕಿದ್ರೆ ಪುಣ್ಯ ಮಾಡಿದ್ದೀವಿ ಅಂತ. ಇಲ್ಲಾಂದ್ರೆ ತಪ್ಪಾಗಿದೆಯಪ್ಪಾ ದೇವ್ರೆ, ಮುಂದಿನ ಸಲ ಬಂದಾಗಲಾದ್ರೂ ನೀರು ಸಿಗೋ ಹಾಗೆ ಮಾಡು ಅಂತ ಬೇಡ್ಕೋಬೇಕು ಅಂತ ಇಲ್ಲಿನವರ ನಂಬಿಕೆ.



ಹಿಂದಿನ ಸಲ ಗೆಳೆಯರೊಂದಿಗೆ ಬಂದಾಗ್ಲೂ ಸಿಕ್ಕಿತ್ತು ನನಗೆ. ಈ ಸಲ ಅಕ್ಷತಾಳೊಂದಿಗೆ ಬಂದಾಗ್ಲೂ ನೀರು ಸಿಕ್ಕಿತು ನಂಗೆ. ಹಿಂದಿನ ಸಲಕ್ಕಿಂತಲೂ ಮೇಲೇ ಇದೆಯೇನೋ ಈ ಬಾರಿ ಅನಿಸಿದ್ದು ಸುಳ್ಳಲ್ಲ ! ಆಳಕ್ಕೆ ಕೈ ಹಾಕಿದ್ರೆ ಸಿಗುತ್ತೆ ಅಂತ ಕೆಲವರೂ , ಪಾಪ ಪುಣ್ಯಗಳ ಆಧಾರದ ಮೇಲೆ ಕೆಲವರೂ ವಾದಿಸುತ್ತಾ ಇದ್ದಾಗ ನಮ್ಮ ಮುಂಚೆ ಹೋದವರಿಗೆ ನೀರು ಸಿಕ್ಕದ್ದು ಕಂಡು ಒಂದು ಬೊಗಸೆ ನೀರು ತೆಗೆದು ಮತ್ತೆ ಅದೇ ತೀರ್ಥಕ್ಕೆ ಹಾಕಿ , ಪಕ್ಕದ ವೀರಭದ್ರ ಸ್ವಾಮಿಗೆ ನಮಸ್ಕರಿಸಿ, ಅದರೆದುಗಿರೋ ಹಳೆಗನ್ನಡ ಶಾಸನಗಳ ಓದೋ ಪ್ರಯತ್ನದಲ್ಲಿ ಮುಂದೆ ಬಂದ್ವಿ. ಹಳೆಗನ್ನಡ ಶಾಸನಗಳ ಅಧ್ಯಯನ ಮಾಡೋ ಆಸಕ್ತಿಯಿರೋರು ಇಲ್ಲಿಗೊಮ್ಮೆ ಭೇಟಿ ಕೊಡಬಹುದು. ಇಲ್ಲಿ ಒಳಹೋಗೋಕೆ ೫ ರೂಗಳ ಟಿಕೇಟ್


ದ್ವಾದಶ ಜ್ಯೋತಿರ್ಲಿಂಗಗಳು: 
ಹನ್ನೆರಡು ಜ್ಯೋತಿರ್ಲಿಂಗಗಳನ್ನು ನೋಡೋಕೆ ಭಾರತದಾದ್ಯಂತ ತಿರುಗೋಕಾಗಲ್ಲ, ಅದರ ಬದಲು ಇಲ್ಲೇ ದರ್ಶನ ಮಾಡಬಹುದು ಎಂಬ ಉದ್ದೇಶದಿಂದ ಇಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆಯಂತೆ ! ನಂಬಿಕೆಗಳೇನೇ ಇದ್ರೂ ಸುಡೋ ಬಿಸಿಲಲ್ಲಿ ನೆರಳೀವ ಈ ಜಾಗ, ಇಲ್ಲಿರೋ ಶಿವ ಪಾರ್ವತಿ, ನಂದಿಗಳ ಹಿನ್ನೆಲೆಯಲ್ಲಿ ಕಾಣೋ ಶಿವಗಂಗಾ ಶಿಖರ, ಕೆಳಗೆ ಮನಸೆಳೆವ ಪ್ರಕೃತಿಗಳು ಖುಷಿಕೊಡುತ್ತೆ.
Near Dwadasha Jyotirlinga


ಬೆಟ್ಟದ ಹಾದಿ: 
ಈ ಲಿಂಗಗಳ ದಾಟಿ ಮುನ್ನಡೆದ ಮೇಲೆ ಮುಂದಿನ ಹಾದಿ ಕಷ್ಟವಾಗುತ್ತೆ. ಮೊದಲು ಸಿಗೋ ಮೆಟ್ಟಿಲುಗಳು, ನಂತರ ಸಿಗೋ ಗುಹೆ, ಗುಹೆಯಾದ ಮೇಲೆ ಸಿಗೋ ಬಂಡೆಗಳ ಮೇಲೆ ಮೇಲೆ ಹತ್ತಲು ಮಾಡಿರೋ ಗುರುತುಗಳಿಂದ ಹತ್ತೋದು ಒಂಥರಾ ಮಜವೆನಿಸುತ್ತೆ. ಸಾವನದುರ್ಗದ ರೀತಿಯ ಇಳಿಜಾರಿನ ಬಂಡೆಗಳು ಇರದಿದ್ದರೂ ಇಲ್ಲಿ ಸ್ವಲ್ಪ ಎಚ್ಚರವಹಿಸೋದು ಅಗತ್ಯ

Steep Steps starting towards the top of the hill
 ಬೆಟ್ಟದ ಮೇಲಿನ ನಂದಿ: 
ಬೆಟ್ಟದ ಮೇಲೆ ಸಾಗುತ್ತಿದ್ದಂತೆ ಹಾದಿ ಇನ್ನೂ ಕಠಿಣವಾಗುತ್ತಾ ಸಾಗುತ್ತೆ. ಬ್ಯಾಗಿಗೆ ಕೈ ಹಾಕೋಕೆ ಬರೋ ಮಂಗಗಳು, ಬೀಸೋ ಗಾಳಿ, ಕಡಿದಾದ ಮೆಟ್ಟಿಲು, ಮತ್ತೊಂದೆಡೆ ನೋಡಿದರೆ ಭಯ ಹುಟ್ಟಿಸೋ ಪ್ರಪಾತ ಕೆಲವು ಸ್ಥಳಗಳಲ್ಲಿ ಭಯ ಹುಟ್ಟಿಸಬಹುದೇನೋ. ಆದರೆ ಇಲ್ಲಿರೋ ಕಂಬಿಗಳನ್ನು ಹಿಡಿದುಕೊಂಡು ಅಗಲವಾದ ಮೆಟ್ಟಿಲುಗಳು ಇರುವ ಕಡೆ ಬಂದರೆ ಯಾವ ಅಪಾಯವೂ ಇಲ್ಲವಿಲ್ಲಿ. ಬೆಟ್ಟ ಹತ್ತಿ ಮುಗಿದ ಮೇಲೆ ಕಾಣೋ ಸಣ್ಣ ಬಂಡೆಯ ಮೇಲೆ ನಂದಿಯಿದ್ದಾನೆ. ಅಲ್ಲಿಗೆ ಸಾಗೋ ಹಾದಿಯಲ್ಲೂ ಸ್ವಲ್ಪ ಎಚ್ಚರವಹಿಸಬೇಕು.

Path to reach towards Nandi
ನಂದಿಯ ಸುತ್ತಲೂ ಪ್ರದಕ್ಷಿಣೆ ಹಾಕಲು ಕಬ್ಬಿಣದ ಕಂಬಿಗಳನ್ನು ಕಟ್ಟಿ ಕೆಳಗೆ ಬೀಳದಂತೆ ರಾಡುಗಳನ್ನು ಕಟ್ಟಿದ್ದರೂ ಅಲ್ಲಿ ಕೂತಿರೋ ಮಂಗಗಳಿಂದ ಸ್ವಲ್ಪ ಎಚ್ಚರವಹಿಸಬೇಕು . ಕೈಯಲ್ಲೊಂದು ಸಣ್ಣ ಕೋಲನ್ನು ಹಿಡಿದುಕೊಂಡೋ, ಕೈಯಲ್ಲಿದ್ದ ಬ್ಯಾಗನ್ನು ಕೆಳಗಿರುವವರ ಬಳಿ ಕೊಟ್ಟೋ ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ.
We at the top spot near the Nandi
View Seen from Nandi
 ಗಂಗಾಧರೇಶ್ವರ ಮತ್ತು ವೀರಭದ್ರ ಗುಡಿಗಳು: 
ನಂದಿಯನ್ನು ನೋಡಾದ ಮೇಲೆ ಪಕ್ಕದಲ್ಲಿರೋ ಹಾದಿಯಲ್ಲಿ ಸಾಗಿದರೆ ಮತ್ತೆರಡು ಗುಡಿಗಳು ಕಾಣುತ್ತೆ. ನಾವು ಹೋದಾಗ ಬಾಗಿಲು ಹಾಕಿತ್ತಾದರೂ ಹನ್ನೆರಡು ಘಂಟೆಯ ಹೊತ್ತಿಗೆ ಮತ್ತೆ ತೆಗೆದರು.
Gangadhareshwara temple. Veerabhadra temple is at its left 

ಅದರ ಹಿಂದೆಯೇ ಹೊಯ್ಸಳ ರಾಣಿ ಶಾಂತಲೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಜಾಗವೂ ಇದೆ. ಆದರೆ ಈ ಬಗ್ಗೆ ಇಲ್ಲಿ ಯಾವುದೇ ಬೋರ್ಡಿರದೇ ಇರುವುದರಿದ ಸುಮಾರು ಜನ ಅದನ್ನು ನೋಡದೇ ಮುಂದೆ ಹೋಗುತ್ತಾರೆ. ಹಿಂದೆ ಹೊದರೆ ಈಗ ಹಾಕಿರೋ ಕಂಬಿಯ ಬಳಿಯೇ ಆಕೆ ಧುಮುಕಿದ್ದು ಎಂದು ಜನ ಹೇಳುತ್ತಾರೆ !  ಅದನ್ನು ದಾಟಿ ಬಲಕ್ಕಿರುವ ಮತ್ತೊಂದು ಬಂಡೆಗೆ ಬಂದರೆ ಅಲ್ಲಿ ಎಣ್ಣೆಗಂಬ ಮತ್ತು ಉರಿಗಂಬಗಳನ್ನು ಕಾಣಬಹುದು. ಆ ಕಂಬಗಳ ವೈಶಿಷ್ಟ್ಯವನ್ನು ಆಗಲೇ ಓದಿದ್ದೆವು.
Near Urigamba and Enne Kamba

ಪಾತಾಳಗಂಗೆ: 

ಮೇಲಿನ ಜಾಗಗಳನ್ನೆಲ್ಲಾ ನೋಡಿ ಕೆಳಗೆ ಬರೋ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಮೇಲಿನವರೆಗೂ ಹೋದರೂ ಇಲ್ಲಿಗೆ ಹೋದಾಗ ನೋಡಲೇಬೇಕು ಎಂದುಕೊಂಡಿದ್ದ ಪಾತಾಳಗಂಗೆ ಸಿಕ್ಕಿರಲಿಲ್ಲ ! ಹಾಗಾಗಿ ಸಿಕ್ಕ ಅಂಗಡಿಗಳಲ್ಲೆಲ್ಲಾ ಪಾತಾಳಗಂಗೆ ಎಲ್ಲಿ ಅಂತ ಕೇಳಿಕೊಳ್ಳುತ್ತಲೇ ಕೆಳಗಿಳಿದೆವು . ಎಲ್ಲರೂ ಇನ್ನೂ ಕೆಳಗಿದೆ ಅನ್ನೋರೆ.  ಕೊನೆಗೆ ಹೊನ್ನಮ್ಮ ದೇವಿಯ ಗುಡಿಯ ಬಳಿ ಬಂದಾಗ ಅಲ್ಲೇ ಬಲಗಡೆ ಪಾತಾಳಗಂಗೆ ಅಂತ ಇದ್ದ ಬೋರ್ಡು ಕಂಡಿತು ! ಇಲ್ಲಿ ಬಂಡೆಗಳ ನಡುವೆ ಇರೋ ನೀರಿಗೇ ಪಾತಾಳಗಂಗೆ ಅಂತ ಕರೆದು ಪೂಜಿಸಲಾಗುತ್ತದೆ. ಇದಕ್ಕೆ ಹತ್ತು ರೂಗಳ ಟಿಕೇಟ್.
Near Patalagange 
ಮುಂಚೆಯೆಲ್ಲಾ ನೀರಿಗೆ ಹೂಗಳನ್ನು ತೇಲಿಬಿಟ್ಟು ನೀರನ್ನು ಹಾಳು ಮಾಡುತ್ತಿದ್ದರಿಂದ ಈಗ ನೀರಿಗೆ ಏನನ್ನೂ ಹಾಕುವಂತಿಲ್ಲ. ಇಲ್ಲಿನ ಬಂಡೆಗಳ ನಡುವಿನ ನೀರಲ್ಲದೇ ಬಂಡೆಯ ಮೇಲೆ ಕೆತ್ತಿರುವ ದೊಡ್ಡ ಗಾತ್ರದ ವೀರಭದ್ರನನ್ನು ನೋಡೋದೇ ಒಂದು ಚೆಂದ. ಇಲ್ಲಿಂದ ಕೋಟೆಯ ಪಳೆಯುಳಿಕೆಗಳು, ಪಾಳುಬಿದ್ದ ಪುಷ್ಕರಿಣಿ, ದೇಗುಲಗಳ ಕುರುಹುಗಳನ್ನೂ ಕಾಣಬಹುದು. ಇಲ್ಲಿ ಮಗು ತೇಲಿಬಿಟ್ಟು ಕಳ್ಕೊಂಡೋರೊಬ್ರಿಗೆ ಇಲ್ಲಿಂದ ಹದಿನೇಳು ಕಿ.ಮೀ ದೂರವಿರೋ ಕುದೂರು ಎಂಬಲ್ಲಿ ಸಿಕ್ಕಿತ್ತಂತೆ. ಹಾಗಾಗಿ ಈ ಪಾತಾಳಗಂಗೆ ಅಲ್ಲಿಗೆ ಹೋಗಿ ಸೇರುತ್ತಾಳೆ ಎಂದು ಹೇಳುತ್ತಾರೆ. ಅಲ್ಲೂ ಒಂದು ಪುರಾತನ ಗುಡಿಯಿದೆ ಎಂದು ತಿಳಿದು ಬಂತು.
Patala Gange
ಕೆಳಗಿನ ಗುಡಿಗಳು:
ಗಂಗಾಧರೇಶ್ವರ, ಸ್ವರ್ಣಾಂಭ ದೇವಸ್ಥಾನಗಳು  ಹೇಗಿದ್ರೂ ಬಾಗಿಲು ಹಾಕಿದ್ವು . ತೆಗೆಯೋದು ಐದು ಘಂಟೆಗೆ ಅಂತ ತಿಳಿದ ನಾವು ಇದನ್ನಾದರೂ ನೋಡಿಕೊಂಡು ಹೋಗೊಣ ಅಂತ ಪಾತಾಳಗಂಗೆಗೆ ಬಂದಿದ್ವಿ. ಆದರೆ ಪಾತಾಳಗಂಗೆಯನ್ನು ನೋಡಿ ಹೊರಬರೋ ಹೊತ್ತಿಗೇ ಘಂಟೆ ಮೂರೂಮುಕ್ಕಾಲಾಗುತ್ತಾ ಬಂದಿತ್ತು.  ಇಲ್ಲಿಯವರೆಗೆ ಬಂದದ್ದು ಬಂದಾಗಿದೆ , ಇಲ್ಲೇ ಊಟ ಮಾಡ್ಕೊಂಡು ಇವೆರಡನ್ನೂ ನೊಡ್ಕೊಂಡೇ ಹೋಗೋಣ ಅಂದ್ಕೊಂಡ್ವಿ. ಕೆಳಗಡೆ ಅನ್ನಸಂತರ್ಪಣೆ ನಡೀತಾ ಇರ್ಬೋದು ಇನ್ನೂ ಅಂದ್ರು ಅಲ್ಲೇ ಯಾರೋ. ಅಲ್ಲಿಗೆ ಹೋಗುವ ಹೊತ್ತಿಗೆ ಅದು ಮುಗಿದ್ರೂ ಇನ್ನೂ ಕೆಳಗಿಳಿದು ಕೆಳಗಿದ್ದ ಹೋಟೆಲ್ ಸ್ವರ್ಣಾಂಭದಲ್ಲಿ ಅನ್ನ ಸಾಂಬಾರ್, ಮತ್ತು ಸೂಪರ್ರಾಗಿದ್ದ ಫ್ರೈಡ್ ರೈಸ್ ತಿಂದು ಮತ್ತೆ ಮೇಲೆ ಬರುವ ಹೊತ್ತಿಗೆ(ನಾಲ್ಕೂವರೆಗೇ) ಗಂಗಾಧರೇಶ್ವರ ದೇಗುಲ ತೆಗೆದಿತ್ತು. ಅದರೊಳಗಿರುವ ಮೂರ್ತಿಗಳು, ನಂದಿ ಮಂಟಪ, ಹೊಯ್ಸಳ ಶಿಲ್ಪಗಳು ಮುಂತಾದವನ್ನು ನೋಡಿಕೊಂಡು ಹೊರಬರುವ ಹೊತ್ತಿಗೆ ಸ್ವರ್ಣಾಂಭಾ ದೇಗುಲವೂ ತೆಗೆದಿತ್ತು. ಬೆಟ್ಟದ ಬಂಡೆಗಳ ಕೆಳಗಿನ ಗುಡಿಯದು. ಅಲ್ಲೂ ನಮಸ್ಕರಿಸಿ ಹೊರಬಂದ ನಾವು ಸೀದಾ ಮನೆಯ ಹಾದಿ ಹಿಡಿದೆವು.
Sculptures at Gangadhareshwara temple

Architecture of Gangadhareshwara temple at the base of the hill


Friday, January 18, 2019

ಕುಮಾರ ಪರ್ವತ ಚಾರಣ-೧


Our Group on the way to KP Trek 
ನಾವೂ ನಮ್ಮ ಟ್ರೆಕ್ಕಿಂಗು:
ಮದ್ವೆಯಾದ ಮೇಲೆ ಹೊರಟ ಟ್ರಿಪ್ಪುಗಳಲ್ಲಿ ಕೆಲವಾದರೂ ದೇವಸ್ಥಾನದ ಫೋಟೋಗಳಿರ್ತಿದ್ದನ್ನ ನೋಡಿದ ಗೆಳೆಯರು ನಮಗೆ ತೀರ್ಥಯಾತ್ರೆ ಅಂತ ಅಣಕಿಸ್ತಿದ್ರು. ಚಂಪಕಧಾಮ, ಮೇರಿತಿ ಬೆಟ್ಟ, ಸಾವನದುರ್ಗ, ಶಿವಗಂಗೆಗಳಿಗೆ ಟ್ರೆಕ್ಕಿಂಗಿಗೆ ಹೋಗಿದ್ರೂ ಅಲ್ಲಲ್ಲಿ ಕಂಡ ನಂದಿಯೋ, ಧ್ವಜವೋ, ಕಲ್ಲಮಂಟಪವೋ ಕಂಡ ಗೆಳೆಯರು ಅದೂ ತೀರ್ಥಯಾತ್ರೆ ಅಂತ ಅಂದ್ಕೋತಿದ್ರು ! ಯಾರೋ ಏನೋ ಅಂದ್ಕೋತಾರೆ ಅನ್ನೋದಕ್ಕಿಂತಲೂ ನಡೆಯೋಕೆ ಎಂದೂ ಬೇಸರಿಸದ ಅರ್ಧಾಂಗಿಯನ್ನ ಇನ್ನೂ ಉತ್ತಮ ಜಾಗಗಳಿಗೆ ಕರ್ಕೊಂಡು ಹೋಗ್ಬೇಕು, ಸುಮ್ನೆ ಮೂರ್ನಾಲ್ಕು ಕಿ.ಮೀಗಳ ಚಾರಣಕ್ಕೆ ಟ್ರೆಕ್ಕಿಂಗು ಅನ್ನದೇ ಸರಿಯಾದ ಟ್ರೆಕ್ಕಿಂಗುಗಳಿಗೆ ಕರ್ಕೊಂಡೋಗ್ಬೇಕು ಈ ಹೊಸ ವರ್ಷದಲ್ಲಾದರೂ  ಅನ್ನೋ ಆಸೆ ಉದಯಿಸ್ತಿತ್ತು. ಅದಕ್ಕೆ ನೆರವಾಗಿದ್ದು ೩ಕೆ ಬಳಗದಿಂದ ಪರಿಚಯವಾದ ಪ್ರಮೋದ್ ಶ್ರೀನಿವಾಸ್.   ಬಂಡಾಜೆ, ಅರ್ಬಿ ಜಲಪಾತದ ಚಾರಣಕ್ಕೆ ಬರ್ತೀಯ ಅಂತ ಮೊದಲ ಬಾರಿ ಚಾರಣವೊಂದಕ್ಕೆ ಅವರು ಕರೆದಾಗ ಹೋಗಲಾಗದೇ ಇದ್ರೂ ಈ ಸಲ ಕರೆದಾಗ ಹೆಚ್ಚೇನೂ ಯೋಚಿಸದೇ  ಹೂಂ ಅಂದಿದ್ದೆ. ಆಮೇಲೆ ಹೋಗಕ್ಕಾಗತ್ತೆ, ಆಗಲ್ಲ ಅಂತ ಹಲವು ಪರಿಸ್ಥಿತಿಗಳು ನನ್ನ ನಿರ್ಧಾರವನ್ನು ತೂಗುಯ್ಯಾಲೆಯಲ್ಲಿಟ್ರೂ ಅವರು ಕರೆದ ಕುಮಾರ ಪರ್ವತ ಚಾರಣಕ್ಕೆ ಹೋಗಿ ಬರೋಕಾಗಿದ್ದು ನನ್ನ ಪುಣ್ಯ ಅನಿಸುತ್ತೆ. 

ಏನಿದು ಕುಮಾರ ಪರ್ವತ, ಎಲ್ಲಿದೆ ಇದು ಅಂದ್ರಾ ? 
ದಕ್ಷಿಣ ಕನ್ನಡದ ಸುಳ್ಯದಲ್ಲಿರೋ ಕುಕ್ಕೆ ಸುಬ್ರಹ್ಮಣ್ಯ ಮತ್ತು ಕೊಡಗಿನ ಸೋಮವಾರಪೇಟೆಗಳ ನಡುವೆ ಹಾಸಿಹೋಗಿರೋ ಬೆಟ್ಟವೇ ಕುಮಾರ ಪರ್ವತ.  ಕರ್ನಾಟಕದಲ್ಲಿನ ಕಷ್ಟದ ಟ್ರೆಕ್ಕಿಂಗುಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಡೋ ಈ ಕುಮಾರ ಪರ್ವತ ಅಥವಾ KP ಯ ಎತ್ತರ, ನಡೆಯಬೇಕಾದ ದೂರಗಳ ಬಗ್ಗೆ ಹಲವು ಊಹಾ ಪೋಹಗಳಿವೆ. ಕೊಡಗಿನ ಸೋಮವಾರಪೇಟೆಯ ಕಡೆಯಿಂದ ಹತ್ತಿ ಪರ್ವತದ ತುದಿ ತಲುಪಿ ಗಿರಿಗದ್ದೆ ಭಟ್ಟರ ಮನೆ ಕಡೆಯಿಂದ ಇಳಿಯೋದು ಒಂದು ಮಾರ್ಗ. ಕುಕ್ಕೆ ಸುಬ್ರಹ್ಮಣ್ಯದಿಂದ ಶುರು ಮಾಡಿ, ಗಿರಿ ಗದ್ದೆ ಭಟ್ಟರ ಮನೆ/ಕ್ಯಾಂಪಿನ ಮೂಲಕ ಸಾಗಿ ಮಂಟಪ, ಶೇಷ ಪರ್ವತಗಳ ಮೂಲಕ ಸಾಗಿ ಬೆಟ್ಟದ ಮೇಲಕ್ಕೆ ಹತ್ತಿ ಅದೇ ದಾರಿಯಲ್ಲಿ ಇಳಿಯೋದು ಮತ್ತೊಂದು ಹಾದಿ. ನಾವು ಐದಾರು ವರ್ಷಗಳ ಹಿಂದೆ ಹೋದಾಗ ಮೊದಲ ಮಾರ್ಗದಲ್ಲಿ ಮಲ್ಲಳ್ಳಿ ಫಾಲ್ಸಿಗೆ ಹೋಗಿ, ಅಲ್ಲಿಂದ ಪುಷ್ಪಗಿರಿ ಮಲ್ಲಿಕಾರ್ಜುನ ದೇವಸ್ಥಾನ, ಚೆಕ್ ಪೋಸ್ಟ್ ದಾಟಿ ಮೇಲೆ ಹತ್ತಿ ಬೆಟ್ಟದ ಮೇಲಿರುವ ಶಾಂತಮಲ್ಲಿಕಾರ್ಜುನ ದೇಗುಲದ ಹತ್ತಿರ (ಈಗಿರೋ ಧ್ವಜ ಸ್ತಂಭ ಆಗಿರಲಿಲ್ಲ) ಟಂಟ್ ಹಾಕಿ ರಾತ್ರಿ ತಂಗಿದ್ವಿ. ಈಗ ಬೆಟ್ಟದ ಮೇಲೆ ಟೆಂಟ್ ಹಾಕಲು ಬಿಡದ ಕಾರಣ ಭಟ್ಟರ ಮನೆ ಬಳಿಯಿರುವ ಅರಣ್ಯ ಇಲಾಖೆಯ ಕಛೇರಿ ಬಳಿ ತಂಗಬೇಕಷ್ಟೆ. ಇಲ್ಲಿಗೆ ಟ್ರೆಕ್ಕಿಂಗಿಗೆ ಮತ್ತು ಕ್ಯಾಂಪಿಂಗಿಗೆ ಬರೋ ಹೆಚ್ಚಿನ ಜನರು ಅರಣ್ಯ ಇಲಾಖೆಯ ಬಳಿಯಿರುವ ಸಣ್ಣ ಕೆರೆಯ ಬಳಿ ಟೆಂಟ್ ಹಾಕಿ ತಮ್ಮ ಬ್ಯಾಗುಗಳನ್ನು ಅಲ್ಲೇ ಇಟ್ಟು ಬೆಟ್ಟ ಹತ್ತುತ್ತಾರೆ. ವಾಪಾಸ್ ಬರುವಾಗ ತಮ್ಮ ಟೆಂಟಲ್ಲಿರೋ ಬ್ಯಾಗುಗಳನ್ನು ತೆಗೆದುಕೊಂಡು ವಾಪಾಸ್ ಹೋಗುತ್ತಾರೆ. ಬೆಳಗ್ಗೆ ಮುಂಚೆ ಶುರು ಮಾರಿ ಬೆಟ್ಟ ಹತ್ತಿ ಅದೇ ದಿನ ಸಂಜೆಯ ಹೊತ್ತಿಗೆ ವಾಪಾಸ್ ಹೋಗುವವರೂ ಉಂಟು. ಕುಕ್ಕೆಯ ಕಡೆಯಿಂದ ಶುರು ಮಾಡೋದಾದರೆ ಸಾಗರ ಮಟ್ಟದಿಂದ ೭೭ ಮೀಟರ್ ಎತ್ತರಕ್ಕೆ ಶುರುವಾಗೋ ನಮ್ಮ ಚಾರಣ ತುದಿ ಮುಟ್ಟುವ ಹೊತ್ತಿಗೆ ೧೭೫೦ ಮೀಟರ್ ಮುಟ್ಟಿರುತ್ತದೆ ! ಸುಮಾರು ಹನ್ನೊಂದು ಕಿ.ಮೀ ಇರುವ ಈ ಹಾದಿಯಲ್ಲಿ ಮೊದಲೈದು ಕಿ.ಮೀ ಸಾಗಿದರೆ ಸಿಗೋದು ಭಟ್ಟರ ಮನೆ. ಅಲ್ಲಿಂದ ಐನೂರು ಮೀಟರಿಗೆ ಫಾರೆಸ್ಟ್ ಚೆಕ್ಪೋಸ್ಟು. ಭಟ್ಟರ ಮನೆಯಿಂದ ಸುಮಾರು ಆರು ಕಿ.ಮೀ ದೂರಕ್ಕೆ ಸಿಗೋದೇ ಬೆಟ್ಟದ ತುದಿಯ ವೀಕ್ಷಣಾ ತಾಣಗಳು. ಸೋಮವಾರ ಪೇಟೆಯ ಕಡೆಯಿಂದ ಹೋಗೋದಾದ್ರೆ ಸುಮಾರು ೮.೫ , ಒಂಭತ್ತು ಕಿ.ಮೀಗಳಿಗೆ ಬೆಟ್ಟದ ತುದಿ ತಲುಪಬಹುದು. ಆದರೆ ಆ ದಾರಿ ಸ್ವಲ್ಪ ಕಡಿದಾಗಿದೆ. ನಾವು ಹಿಂದಿನ ಸಲ ಆ ದಾರಿಯಲ್ಲಿ ಬಂದ ಕಥೆಯನ್ನ ನನ್ನ ಹಳೆಯ ಪೋಸ್ಟಲ್ಲಿ ನೋಡಬಹುದು
Our Group Infront of Kukke Subramanya Temple before the start of Trek

ಹೋಗಿದ್ದೇಗೆ?
ಟ್ರಿಪ್ಪಿನ ದಿನ ನಾವು ಮೆಜೆಸ್ಟಿಕ್ಕಿಗೆ ಬಸ್ ಹತ್ತೋಕೆ ಬರೋವರೆಗೂ ಹದಿನಾರು ಜನರ ನಮ್ಮ ಗುಂಪಲ್ಲಿ ನಂಗೆ ಪರಿಚಯವಿದ್ದ ಮೂರನೆಯ ವ್ಯಕ್ತಿ ಅಂದ್ರೆ ಪ್ರಮೋದ್ ಅಷ್ಟೆ. ನಂತರ ಪರಿಚಯದ ವಿನಯ್ ಬೆಳೆಯೂರು ಸಿಕ್ಕಿದ್ರು. ನೀವೇನಾ ಟ್ರಿಪ್ಪಿಗೆ ಬರ್ತೀರೋ ವಿನಯ್ ಅನ್ನೋ ಹೊತ್ತಿಗೆ ಅದು ನಾನಲ್ಲ, ಬೇರೆ ವಿನಯ್ ಅಂತ ಅವರು ವಿನಯ್ ರಾವ್ ಅವರನ್ನು, ಮತ್ತೊಬ್ಬ ವಿನಯ್ ಅನ್ನೂ ಪರಿಚಯಿಸಿದ್ರು. ಅಷ್ಟರಲ್ಲೇ ತೇಜಸ್ವಿ, ಲೋಹಿತ್,  ರವಿಶಂಕರ್, ಸುಧೀರ್ ಸಾಗರ್,  ಸುಧಾಕ್ಕ ಎಂಟ್ರಿ ಕೊಟ್ರು. ದೆಹಲಿಯ ಆರತಿ ಮತ್ತು ವಿಜಯಲಕ್ಷ್ಮಿ ಅವರನ್ನು ಕಂಡಾಗ ಅಕ್ಷತಾಗೆ ಸ್ವಲ್ಪ ಖುಷಿ ಆಯ್ತು . ನಂತರ ಪರಿಚಯವಾಗಿದ್ದು ಸುಧಾಮ ಮತ್ತು ಮನಮೋಹನ್, ವಿನಯ್. ಸುಮಾರು ಟ್ರೆಕ್ಕುಗಳಿಗೆ ಹೋದ ಪ್ರಮೋದಣ್ಣನ ಗ್ಯಾಂಗಿನ ಕತೆ ಕೇಳ್ತಾ ನಾವು ಒಂಭತ್ತೂಮುಕ್ಕಾಲಿಗೆ ಬರಬೇಕಾದ ನಮ್ಮ ಬಸ್ಸಿಗೆ ಪ್ಲಾಟ್ ಫಾರಂ ೨ ಎ/ ೩ರಲ್ಲಿ ಕಾಯ್ತಾ ಇದ್ವಿ. ಕೂರೋಕೂ ಜಾಗವಿಲ್ಲದ ಬಸ್ಟಾಂಡಲ್ಲಿ ಬಸ್ಸು ಎಷ್ಟೊತ್ತಿಗೆ ಬರತ್ತೆ ಅನ್ನೋ ನಿರೀಕ್ಷೆಯೂ ಇಲ್ಲದೇ ಕಾಯ್ತಾ ಇದ್ರೆ ನಮಗೆ ಪುಕ್ಸಟ್ಟೆ ಮನೋರಂಜನೆ ಒದಗಿಸೋಕೆ ಉತ್ತರದ ಕಾಲೇಜು ಗ್ಯಾಂಗೊಂದು ರೆಡಿಯಾದಂಗಿತ್ತು ! ನಾವು ನಿಂತು ನೋಡುವಾಗಲೇ ಒಬ್ಬಳು ಹುಡುಗಿಯನ್ನ ನಾಲ್ಕೈದು ಜನ ಹುಡುಗ್ರು ಕರ್ಕೊಂಡು ಬಂದು ಕೂರಿಸಿದ್ರು. ಜೊತೆಗೆ ಅಯ್ಯೋ ಅನ್ನೋ ಮತ್ತೊಬ್ಬ ಹುಡುಗಿ. ಏನೋ ಆಗಿರ್ಬೇಕು ಅಂತ ಪಕ್ಕದ ಬೆಂಚ ಮೇಲಿದ್ದ ಜನ ಜಾಗ ಬಿಟ್ರು. ಬಸ್ಟಾಂಡಿಗೆ ಬರುವಾಗ ಎಲ್ಲೋ ಬಿದ್ದಿದ್ಲಂತೆ. ಬಿದ್ದ ರಭಸಕ್ಕೆ ಕಾಲು ಸ್ವಲ್ಪ ತರಚಿತ್ತಷ್ಟೆ. ಆ ತರಚಿಗೆ ಉಪಚರಿಸ್ತಿದ್ದ ಜನರನ್ನ ನೋಡಿ ಏನಪ್ಪಾ ಇದು ಅನ್ನಿಸ್ತು ಒಮ್ಮೆ. ಗಾಯವನ್ನು ಹತ್ತಿಯಿಂದ ಒರೆಸುವವ ಒಬ್ಬ, ಬ್ಯಾಗಲ್ಲಿ ಟಿಂಚರ್ರೋ ಇನ್ನೇನೋ ಇದ್ಯಾ ಅಂತ ಕೇಳ್ತಾ ಹುಡುಕುವವ ಮತ್ತೊಬ್ಬ,ಗಾಯಕ್ಕೆ ಬ್ಯಾಂಡೇಡ್ ಅಂಟಿಸುವವ ಮಗದೊಬ್ಬ, ಏನೂ ಆಗಿಲ್ಲ ಅಂತ ಸಮಾಧಾನ ಮಾಡುವವ ಇನ್ನೊಬ್ಬ. ಇವ್ರಿಷ್ಟು ಜನ ಸಾಲೋಲ್ಲ ಅಂತ ಇವಳ ಜೊತೆಗೆ ಮುಂಚೆ ಇದ್ದು, ಈಗೆಲ್ಲೋ ಮರೆಯಾಗಿದ್ದ ಹುಡುಗಿ ಮತ್ತೊಂದಿಷ್ಟು ಜನರನ್ನ ಕರ್ಕೊಂಡು ಬಂದ್ಳು. ಅವ್ರು ಏನಾಯ್ತು ಅಂತ ಕೇಳೋದ ನೋಡಿದ ಬಸ್ಸು ಕಾಯ್ತಿದ್ದ ಎಲ್ಲರೂ ಇವರನ್ನೇ ನೋಡೋಕೆ ಹತ್ತಿದ್ರು. ಏನು ರಾಜಮರ್ಯಾದೆಯಪ್ಪಾ ಇವ್ಳಿಗೆ , ಇಂಥಾ ಗೆಳೆಯರು ಸಿಕ್ಕೋಕೆ ಪುಣ್ಯ ಮಾಡಿರ್ಬೇಕು ಅಂತ ಒಂದ್ಕಡೆ ಅನ್ನಿಸ್ತಿದ್ರೆ ಆ ಹುಡುಗರು ಆಡೋ ರೀತಿ ನೋಡಿ ನಗು ಬರ್ತಿತ್ತು. ಆದ್ರೆ ಒಂದು ಲೀಟರ್ ನೀರನ್ನ ಬರೀ ಕೈ ತೊಳೆಯೋಕೆ ಅಂತ ಉಪಯೋಗಿಸ್ಕೊಂಡು ಉಳಿದ ನೀರನ್ನು, ಬಾಟಲಿಯನ್ನು ಅಲ್ಲೇ ಇದ್ದ ಡಸ್ಟ್ ಬಿನ್ನಿನ ಬಳಿ ಎಸೆದು ಹೋದ ಅವರ ಧೋರಣೆ ಕಂಡು ಉರಿದೂ ಹೋಯ್ತು  !   ಬರಬೇಕಾದ ಬಸ್ಸು ಮತ್ತಷ್ಟು ಸತಾಯಿಸಿ ಒಂದು ತಾಸಿಗಿಂತಲೂ ಹೆಚ್ಚು ಲೇಟಾಗಿ ಬಂದಿದ್ರಿಂದ ನಮ್ಮಗಳ ಪರಸ್ಪರ ಪರಿಚಯಕ್ಕೆ ಅನುಕೂಲವಾಗಿತ್ತು. ಹೊರಟ ಬಸ್ಸಿನಲ್ಲಿ ವಾಣಿ ಮತ್ತು  ಲಕ್ಷ್ಮಿಯವರನ್ನು ಹತ್ತಿಸಿಕೊಂಡು ಬೆಂಗಳೂರು ದಾಟೋ ಹೊತ್ತಿಗೆ ರಾತ್ರಿ ಕಳೆದಿತ್ತು. 


ಕುಕ್ಕೆಯಲ್ಲೊಂದು ಬೆಳಗು: 
View of Adi Kukke Temple from the Lodge

ಬೆಂಗಳೂರ ಚುಮು ಚುಮು ಬೆಳಗಿಂದ ದೂರ ಸಾಗಿದ್ದ ನಮ್ಮನ್ನ ಸ್ವಾಗತಿಸಿದ್ದು ಕುಕ್ಕೆಯ ಬೆಚ್ಚಗಿನ  ಹವೆ. ಬೆಳಗ್ಗೆ ಆರರ ಹೊತ್ತಿಗೆ ಬಸ್ಟಾಂಡು ತಲುಪಿದ್ದ ನಾವು ನಮ್ಮ ಟ್ರೆಕ್ಕಿಂಗು ಬ್ಯಾಗುಗಳ ಹೊತ್ತು ಕುಕ್ಕೆಯ ಟಾರ ಬೀದಿಗಳಲ್ಲಿ ಸಾಗುತ್ತಿದ್ರೆ ನಿದ್ರಾ ದೇವಿ ಕೈ ಬೀಸಿ ಕರೆಯುತ್ತಿದ್ದಳು. ಆಟೋ ಬೇಕಾ ಸಾರ್ ಆಟೋ ಎಂದು ಮೈಮೇಲೆ ಬೀಳುವ ಜನರಿಲ್ಲ, ಟ್ಯಾಕ್ಸಿ ಟ್ಯಾಕ್ಸಿ ಅಂತ ನಮ್ಮ ಬ್ಯಾಗುಗಳ ಸೆಳೆದೊಯ್ಯೋ ಧಾವಂತವಿಲ್ಲ, ಪೂಜೆ ಮಾಡುಸ್ತೀರಾ ಸಾರ್ ಅಂತ ತಲೆತಿನ್ನೋ ಏಜೆಂಟರೂ ಇಲ್ಲವಿಲ್ಲಿ. ಪ್ಲಾಸ್ಟಿಕ್ ಬ್ಯಾಗುಗಳ ಎಲ್ಲೆಂದರಲ್ಲಿ ಕಚ್ಚೆಳೆಯೋ ನಾಯಿಗಳೂ, ಕಸದ ರಾಶಿಯಲ್ಲಿ ಬಿದ್ದೊರಳೋ ಹಂದಿಗಳೂ ಇಲ್ಲದ ಪ್ರಶಾಂತ ಬೆಳಗಲ್ಲಿ ಸೂರ್ಯ ತನ್ನ ಪಾಡಿಗೆ ತಾನುದಯಿಸುತ್ತಿದ್ದರೆ ಸೂರ್ಯನೊಂದಿಗೆ ಸೆಲ್ಪಿ ತೆಗೆದುಕೊಳ್ಳೋ ಉಮೇದಿನಲ್ಲೂ ಜನರಿರಲಿಲ್ಲ. ಸಾವಧಾನದ ಜಗತ್ತಿನಲ್ಲಿ, ಗಡಿಬಿಡಿ, ಗಿಜಿಗಿಜಿಯಿಲ್ಲದ ಬೀದಿಗಳಲ್ಲಿ  ಆಗ ತಾನೇ ತೆಗೆಯುತ್ತಿದ್ದ ಪೂಜೆಯ ಸಾಮಾನುಗಳ ಮಾರೋ ಅಂಗಡಿಗಳು, ಸಣ್ಣ ಸಣ್ಣ ಹೋಟೇಲ್ಲುಗಳ ನಡುವೆ ನಮ್ಮ ಪಯಣ ಸಾಗುತ್ತಿದ್ದರೆ ಬೆಳಗಾಗೆದ್ದು ತಣ್ಣೀರಲ್ಲಿ ಸ್ನಾನಗೈದು ನಡುಗುತ್ತಾ ಬರುತ್ತಿದ್ದ ಶಬರಿ ಮಲೆ ಭಕ್ತರು ಎದುರಾದರು. ಆದಿ ಶೇಷ ದೇಗುಲದಲ್ಲಿ ಮುಡಿ ಕೊಡೋಕೆ ಬರೋರು, ಸರ್ಪ ಸಂಸ್ಕಾರ ಮಾಡಿಸೋಕೆ ಬರೋರು , ಕುಕ್ಕೆ ಸುಬ್ರಹ್ಮಣ್ಯನ ಬೆಳಗಿನ ದರ್ಶನಕ್ಕೆ ಹೊರಟೋರೂ ಸಿಕ್ಕಿದ್ರು . ಶಬರಿಮಲೆಯ ಕಪ್ಪು, ಕೇಸರಿ, ನೀಲಿ ಮಡಿಗಳ ನಡುವೆ, ದೇಗುಲಕ್ಕೆ ಬರೋ ಹಲ ಭಕ್ತರ ಬಿಳಿ ಪಂಚೆಗಳ ನಡುವೆ ಜೀನ್ಸು, ಚೆಡ್ಡಿಗಳ ನಮ್ಮ ಪಯಣ ಬರಿಗಾಲು, ಚಪ್ಪಲಿಗಳ ನಡುವಿನ ನಮ್ಮ ಶೂಗಳ ಓಡಾಟ ಹೊಸ ಹಳೆಯ ಆಚಾರಗಳ ಸಂಗಮದಂತೆ ಒಂಥರಾ ವಿಭಿನ್ನವೆನಿಸುತ್ತಿತ್ತು. ಸ್ವಲ್ಪ ದೂರ ಬರೋ ಹೊತ್ತಿಗೆ ಆಚೆಗಿನ ಹಸಿರು ಮಲೆಗಳ ದರ್ಶನವಾಯ್ತು. ಅವುಗಳ ಮೇಲಿನ ಆಗಸಕ್ಕೆಲ್ಲಾ ಕೆಂಪ ಬಣ್ಣವ ಬಳಿದ ಕಲೆಗಾರನ ನೋಡುತ್ತಾ ನಾವು ರೆಡಿಯಾಗಬೇಕಿದ್ದ ಅಭಯ ವಸತಿಗೃಹವನ್ನು ತಲುಪಿದ್ವಿ. ಅಲ್ಲಿ ರೆಡಿಯಾಗಿ ದೇಗುಲದ ಬಳಿಯಿರೋ ಕುಮಾರ ಕೃಪದಲ್ಲಿ ತಿಂಡಿ ತಿಂದ ನಮ್ಮ ತಂಡ ಕುಕ್ಕೆಯತ್ತ ಪಯಣ ಬೆಳೆಸೋ ಹೊತ್ತಿಗೆ ಘಂಟೆ ಒಂಭತ್ತೂವರೆ ದಾಟಿತ್ತು
Time for breakfast

ಚಾಮುಂಡಿಗೆ ನಮಸ್ಕರಿಸಿ ಗಿರಿಗದ್ದೆಯತ್ತಲ ಪಯಣ :
ಔಷಧೀಯ ಸಸ್ಯ ಸಂರಕ್ಷಣಾ ಪ್ರದೇಶ, ಸುಬ್ರಹ್ಮಣ್ಯ ಎಂಬ ಬೋರ್ಡನ್ನು ದಾಟಿ ಕುಕ್ಕೆ ಪಟ್ಟಣದಿಂದ ಸುಮಾರು ಮುಕ್ಕಾಲು ಕಿ.ಮೀ ಮುಂದೆ ಬರೋ ನಮಗೆ ಸಣ್ಣ ಚಾಮುಂಡಿ ಗುಡಿಯೊಂದು ಸಿಗುತ್ತದೆ. ಅದರ ಪಕ್ಕದಲ್ಲಿರೋ ದಾರಿಯಲ್ಲೇ ಕುಕ್ಕೆಗೆ ಒಳಕ್ಕೆ ಸಾಗಬೇಕು. ಇಲ್ಲಿ ನಮ್ಮನ್ನೆಲ್ಲಾ ಒಟ್ಟುಗೂಡಿಸಿದ ಆಯೋಜಕರಾದ ಸುಧೀರ್ ಸಾಗರ್ ಅವರು ಟ್ರಿಪ್ಪಲ್ಲಿ ಹೇಗಿರಬೇಕು, ಹೇಗಿರಬಾರದು, ಏನೆಲ್ಲಾ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದೆಲ್ಲಾ ವಿವರಿಸಿದ್ರು. ನಂತರ ಒಬ್ಬೊಬ್ಬರಾಗಿ ಕಾಡೊಳಗೆ ಹೊರಟ್ವಿ. 
Entering int other Kukke Trek

ಕಾಡಂದ್ರೆ ಒಂದೆಡೆಯೂ ಸೂರ್ಯರಶ್ಮಿ ಬೀಳಲಾಗದಂತಹ ಗಾಢ ಕಾಡಲ್ಲವದು. ಆದರೂ ಬಿಸಿಲಿಂದ ಮೈಕೈ ಸುಡದಷ್ಟು ಮರಗಳ ಹೊದಿಕೆಯಿರೋ ಪ್ರದೇಶ. ಸುಮಾರು ಮೂರು ತಾಸು ನಡೆದ ಮೇಲೆ ಭಟ್ಟರ ಮನೆ ಸಿಗುತ್ತೆ ಅಂತ ಹೇಳಿದ್ರಿಂದ ಆರಾಮಾಗಿ ನಡೀತ ಇದ್ವಿ.  
During our Trek
ಹತ್ತಿದ್ದು, ಹತಿದ್ದು, ಸುಸ್ತಾದಾಗ ಸ್ವಲ್ಪವೇ ನೀರು ಕುಡಿದಿದ್ದು , ಒಂದಿಷ್ಟು ಫೋಟೋ ತೆಗೆದಿದ್ದು ಬಿಟ್ಟರೆ ಮತ್ತೆ ಹತ್ತಿದ್ದೇ ಹತ್ತಿದ್ದು ಇಲ್ಲಿ ! ಮರದ ಪೊಟರೆಗಳು, ಬೀಳಲುಗಳ ವಿಚಿತ್ರ ಆಕಾರಗಳು ಇಷ್ಟು ದೂರದ ಟ್ರೆಕ್ಕಿಂಗಿಗೆ ಮೊದಲ ಬಾರಿ ಬಂದಿದ್ದ ಅಕ್ಷತಾಳ ಮನ ಸೆಳೆಯುತ್ತಿತ್ತು. 

ನಮ್ಮ ಜೊತೆಗೇ ಇದ್ದ ವಿನಯ್, ಲೋಹಿತ್, ಸುಧಾಕ್ಕ ಮುಂದೆ ಸಾಗಿದ್ರೆ ನಿಧಾನವಾಗಿ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದ ನಾವುಗಳು ಸ್ವಲ್ಪ ಹಿಂದೆ ಬಿದ್ವಿ. ಹಾಗೇ ಮುಂದೆ ಬರುತ್ತಿದ್ದ ಹಾಗೆ ಒಂದು ದೊಡ್ಡ ಬಂಡೆಯೊಂದು ಕಾಣಿಸ್ತು. ಅಲ್ಲೊಂದಿಷ್ಟು ಜನ ವಿಶ್ರಾಂತಿ ತೆಗೆದುಕೊಳ್ತಿದ್ರು. ಹಾಗೇ ಮುಂದೆ ಸಾಗಿದ್ವಿ. ಒಂದಿಷ್ಟು ಕಡೆ ಸ್ವಲ್ಪ ಚಿಟ್ಟೆಗಳು ಕಂಡ್ರೂ ಫೋಟೋ ತೆಗೆಯೋಕೆ ಸಿಗದ ಅವುಗಳ ಕಂಡು , ದೂರದಲ್ಲೆಲ್ಲೋ ಕೂತಿರುವವ ಕಂಡು ನನ್ನ ಡಿಎಸೆಲ್ಲಾರ್ ತಂದಿದ್ರೆ ಚೆನ್ನಾಗಿರ್ತಿತ್ತಲ್ವಾ ಅನಿಸ್ತು ಒಮ್ಮೆ. ಆದ್ರೆ ಈಗಿರೋ ವಜೆಯ ಜೊತೆ ಅದು ಬೇರೆ ! ತರ್ದಿದ್ದಿದ್ದು ಒಳ್ಳೇದೇ ಆಯ್ತು ಅಂತ ಸಮಾಧಾನವೂ ಆಯ್ತು. ನನ್ನ ಬಟ್ಟೆಗಳ ಜೊತೆಗೆ, ಅಕ್ಷತಾನ ಸ್ಲೀಪಿಂಗ್ ಬ್ಯಾಗು, ಮಾರನೇ ದಿನ ತಿನ್ನೋಕೆ ಬೇಕಾಗುತ್ತೆ ಅಂತ ತಂದ ಚುಡುವ, ಮಾರನೇ ದಿನಕ್ಕೆ ಅಂತ ಗ್ರೂಪವ್ರು ಕೊಟ್ಟ ಹಣ್ಣು, ಬಿಸ್ಕತ್ತುಗಳ ಎರಡು ಪೊಟ್ಟಣಗಳು ಸೇರಿ ಬ್ಯಾಗ ಭಾರವೇ ಇತ್ತು.  ಮಧ್ಯ ಎಲ್ಲೋ ನೀರು ಸಿಗುತ್ತೆ ಅಂತ ಸುಧೀರಣ್ಣ ಹೇಳಿದ ನೆನಪಿತ್ತಾದ್ರೂ ಆ ನೀರು ಎಲ್ಲೂ ಸಿಗಲಿಲ್ಲ. ಆದ್ರೆ ಚೂರು ಚೂರೇ ನೀರು ಕುಡಿದಿದ್ದ ಕಾರಣ ನಮಗೆ ಅದರ ಅಗತ್ಯವೂ ಕಾಣಲಿಲ್ಲ. ಸುಮಾರು ನಾಲ್ಕು ಕಿ.ಮೀ ಸಾಗಿದ ಮೇಲೆ ಕಾಡಿಂದ ಹೊರಬಂದು ಒಂದು ಹುಲ್ಲುಗಾವಲನ್ನು ಹೊಕ್ಕಿದ್ವಿ.  ಅಷ್ಟರಲ್ಲೇ ಭಟ್ಟರ ಮನೆಗೆ ಹಾಲು ತಂದು ಕೊಡುವ ಹುಡುಗನೊಬ್ಬ ಸಿಕ್ಕಿದ. ಇನ್ನೊಂದು ಸ್ವಲ್ಪ ದೂರದಲ್ಲಿ ಭಟ್ಟರ ಮನೆ ಅಂತ ಅವ ಹೇಳೋ ಹೊತ್ತಿಗೆ ಸೂರ್ಯ ಸುಡೋಕೆ ಶುರುವಾಗಿದ್ದ. 

 


ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ: 
ಬೆಳಗ್ಗೆ ಟಾರ ದಾರಿಯಲ್ಲಿ ನಡೆದಿದ್ದು ಬಿಟ್ಟರೆ ನಂತರ ಸಿಕ್ಕ ದಾರಿಯಲ್ಲೆಲ್ಲಾ ಹತ್ತುತ್ತಲೇ ಸಾಗಿದ್ದ ಮನೆಯವಳಿಗೆ ಇನ್ನೊಂದು ಸ್ವಲ್ಪ ದಾರಿ ಆದ್ಮೇಲೆ ಚಪ್ಪಟೆ ಹಾದಿ ಸಿಗುತ್ತೆ ಅಂತ ಸಮಾಧಾನ ಮಾಡುತ್ಲೇ ಸಾಗಿದ್ದೆ. ಎಷ್ಟೇ ಫ್ಲಾಟ್ ಅಂದ್ರೂ ಏರೇ ಇರುತ್ತಿದ್ದ ಹಾದಿಯಲ್ಲಿ ಬರುತ್ತಿದ್ದ ನಮಗೆ ಈ ಹುಲ್ಲುಗಾವಲು ಸಿಕ್ಕಾಗ ಸ್ವಲ್ಪ ಸಮಾಧಾನವಾಯ್ತು.


ಎದುರಿಗೆ ಬೆಟ್ಟಗಳು ಕಾಣೋಕೆ ಶುರುವಾದಾಗ ನಮ್ಮ ಗಮ್ಯವ ಕಂಡು ಅವಳಿಗೂ ಮತ್ತೆ ಉತ್ಸಾಹ ಬಂತು. ಬೆಟ್ಟಗಳು ಗುಂಡುಗುಂಡಗೆ ಕಂಡ್ರು ಏರೋ ಹಾದಿ ಮಾತ್ರ ಕಠಿಣ ಅಂತ ಒದ್ದಾಡುತ್ತಿದ್ದ, ಸುಧಾರಿಸಿಕೊಳ್ಳುತ್ತಿದ್ದ ಬೇರೆ ಗ್ರೂಪವ್ರನ್ನ ನೋಡಿ ನಾವೇ ಪರ್ವಾಗಿಲ್ಲ ಅಂತ ಖುಷಿಯೂ ಆಗುತ್ತಿತ್ತು. ದಾರಿಯಲ್ಲಿ ಸಿಕ್ಕ ಕಾಡ ಕೆಂಪೆಲೆಗಳು, ಬಣ್ಣ ಬಣ್ಣದ ಬಳ್ಳಿಗಳು, ಹಸಿರ ಹುಲ್ಲ ಹಾಸು ಒಂದೇ ಬಣ್ಣದ ಕಡುಗಪ್ಪು ಕಾಡಲ್ಲಿ ನಡೆದು ಬೇಸರಿಸಿದ್ದ ನಮಗೆ ಉಲ್ಲಾಸವೀಯುವಂತಿತ್ತು. 

ಹಾಗೇ ಮುಂದೆ ಸಾಗುತ್ತಿದ್ದಾಗ ಕುಮಾರ ಪರ್ವತ ೭ ಕಿ.ಮೀ ಎಂಬ ಅರಣ್ಯ ಇಲಾಖೆಯ ಬೋರ್ಡೂ ಮತ್ತು ಗಡಿಕಲ್ಲುಗಳೂ ಸಿಕ್ಕಿದವು. 

ಅಲ್ಲೊಂದಿಷ್ಟು ಸುಧಾರಿಸಿಕೊಂಡು ಭಟ್ಟರ ಮನೆಯತ್ತ ಸಾಗಿದೆವು.ಹಾಗೇ ಸಾಗಿದ ನಾವು ೧೨:೧೦ರ ಹೊತ್ತಿಗೆ ಗಿರಿಗದ್ದೆ ಭಟ್ಟರ ಮನೆ ತಲುಪಿದ್ವಿ.


ಗಿರಿಗದ್ದೆ ಕ್ಯಾಂಪು ಮತ್ತು ಮಹಾಲಿಂಗೇಶ್ವರ ಭಟ್ಟರ ಮನೆ:
ಕುಮಾರ ಪರ್ವತಕ್ಕೆ ಸಾಗೋ ಹಾದಿಯಲ್ಲಿ ಸಡನ್ನಾಗಿ ಒಂದೆಡೆ ಅಡಿಕೆ ತೋಟವೊಂದು ಕಾಣುತ್ತೆ. ಅಲ್ಲಿ ಕಾಡ ಮಧ್ಯೆದಲ್ಲಿ ಇರೋ ಮಣ್ಣಿನ ಮನೆಯೇ ಮಹಾಲಿಂಗೇಶ್ವರ ಭಟ್ಟರ ಮನೆ. ೧೯೭೦ರ ಸುಮಾರಿಗೆ ಇಲ್ಲಿಗೆ ಬಂದ ಭಟ್ಟರ ಜೊತೆ ಈಗ ಅವರ ತಮ್ಮಂದಿರಾದ ಗಣೇಶ್ ಭಟ್ ಮತ್ತು ವಿಷ್ಣು ಭಟ್ ಅವರು ವಾಸವಿದ್ದಾರೆ. ಬೆಟ್ಟಕ್ಕೆ ಬರೋ ಚಾರಣಿಗರಿಗೆ ಬೆಳಗ್ಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯೂಟಗಳ ಒದಗಿಸೋ ಭಟ್ಟರ ಮನೆಯೆಂದ್ರೆ ಎಲ್ಲರಿಗೂ ಅಚ್ಚುಮೆಚ್ಚು. ನಾವು ತಲುಪೋ ಹೊತ್ತಿಗೆ ಮಧ್ಯಾಹ್ನದೂಟದ ಮಜ್ಜಿಗೆ, ಅನ್ನ, ಸಾಂಬಾರು, ಚಿತ್ರಾನ್ನಗಳು ರೆಡಿಯಾಗಿದ್ದವು ! ಐದು ಕಿಲೋ ಬೆಟ್ಟದ ಮೇಲಿರುವ ಇಲ್ಲಿಗೆ ಬೇಕಾದ ಎಲ್ಲಾ ಸಾಮಾನುಗಳನ್ನೂ ಕೆಳಗಿನ ಸುಬ್ರಹ್ಮಣ್ಯದಿಂದ ತಲೆಯ ಮೇಲೆ ಹೊತ್ತೇ ಸಾಗಿಸಬೇಕಾದಾದರೂ ಇಲ್ಲಿನ ಊಟವೊಂದಕ್ಕೆ ೧೨೦ ರೂ, ಟೆಂಟಲ್ಲಿ ಒಬ್ಬರಿಗೆ ೨೦೦ ರೂ ಚಾರ್ಜು ಮಾಡೋದು ವಿಶೇಷವೆನಿಸುತ್ತೆ. ವಾರಾಂತ್ಯದ ಸಮಯದಲ್ಲೆಂತೂ ಇಲ್ಲಿ ಜನಜಾತ್ರೆ ! ಮೊದಲೇ ಸಾಗಿದ್ದ ಲೋಹಿತ್, ವಿನಯ್, ಸುಧಾಕ್ಕ ಎಲ್ಲೂ ಕಾಣದಿದ್ದ ಕಾರಣ ನಾನು, ಅಕ್ಷತಾ ಕೈಕಾಲು ತೊಳೆದು, ಮನೆಯೊಳಗಿನ ಚಾರ್ಚರ್ ಬಳಿ ಮೊಬೈಲ್ ಚಾರ್ಜಿಗೆ ಹಾಕಿ ಕಾಯುತ್ತಾ ಕೂತ್ವಿ. 
We Infront of the Girigadde Bhattara Mane

ಕಾಯೋದ್ರಲ್ಲಿರೋ ಕಷ್ಟ: 
ಹನ್ನೆರಡೂವರೆಯಾದ್ರೂ ಅವರ ಸುಳಿವಿಲ್ಲದೇ ಹೋಗಿದ್ರಿಂದ ಅವ್ರು ಎಲ್ಲೋದ್ರಪ ಅಂತ ಒಮ್ಮೆ. ನಾವೇ ದಾರಿ ತಪ್ಪಸ್ಕೊಂಡಿದೀವೇನೋ ಅನ್ನೋಕೆ ಭಟ್ಟರ ಮನೆಗೆ ಸರಿಯಾಗೇ ತಲುಪಿದ್ದೀವಿ. ಬೇರೆ ಭಟ್ಟರ ಮನೆಗೆ ಹೋಗಿದೀವೇನೋ ಅನ್ನೋಕೆ ಇಲ್ಲಿರೋದು ಒಂದೇ ಮನೆ ! ಕೆಳಗೆಲ್ಲಾದ್ರೂ ಇರಬಹುದೇನೋ ಅಂತ ಕೆಳಗೆ ಹೋಗಿ ನೋಡಿದ್ರೆ ಅವ್ರೆಲ್ಲಾ ಮನೆಯ ಕೆಳಗಿರೋ ಮರದ ನೆರಳಲ್ಲಿ ಕೂತಿದ್ರು. ವಿನಯ್ ಹನ್ನೊಂದು ಮುಕ್ಕಾಲಿಗೇ ಬಂದಿದ್ರಂತೆ. ಉಳಿದವ್ರೂ ಹನ್ನೆರಡರ ಸುಮಾರಿಗೆ ಬಂದ್ವಿ ಅಂದ್ರು. ಉಳಿದವ್ರೆಲ್ಲಾ ಬರ್ಲಿ, ಊಟ ಮಾಡೋಣ ಅಂದ್ರು ಅವ್ರು. ಸರಿ, ಅಂತ ವಾಪಾಸ್ ಬಂದೆ. ಮತ್ತೆ ಕಾಲು ಘಂಟೆಗೆ ಹೊಟ್ಟೆ ತಾಳ ಹಾಕತೊಡಗಿತ್ತು. ವಾಪಾಸ್ ಹೋದೆ , ಊಟ ಮಾಡೋಣ್ವಾ ಅಂತ ಕೇಳೋಕೆ. ಅಷ್ಟೊತ್ತಿಗೆ ವಾಣಿಶ್ರೀ, ಲಕ್ಶ್ಮೀ, ಆರ್ತಿ, ವಿಜಯಲಕ್ಶ್ಮೀ ಅವರೂ ಬಂದಾಗಿತ್ತು. ಆದ್ರೆ ಅವ್ರಿಗೂ ಉಳಿದವರು ಬರೋವರೆಗೆ ಕಾಯೋಣ ಅಂತ. ಸರಿ ಅಂತ ಮತ್ತೆ ಕಾದ್ವಿ. ಎಲ್ಲ ಬಂದು ಊಟ ಮಾಡ್ಕೊಂಡು ಹೋಗ್ತಾ ಇದ್ರು. ಅಲ್ಲಿನ ಸಾಂಬಾರಿನ ಘಮ ನಮ್ಮ ಹೊಟ್ಟೆಯನ್ನು ಕೆಣಕ್ತಾ ಇತ್ತು ! ಒಂದಾಯ್ತು, ಒಂದೂಕಾಲಾಯ್ತು. ಯಾರ ಸುಳಿವೂ ಇಲ್ಲ. ಸಖತ್ ಹಸಿವಾಗ್ತಿದ್ದ ನಮಗೆ ಅಲ್ಲಿದ್ದ ಹದ ಮಜ್ಜಿಗೆಯನ್ನ ಕಂಡು ತಡ್ಯೋಕಾಗ್ಲಿಲ್ಲ. ಸರಿ ಅಂತ ಒಂದು ನಾಲ್ಕು ಲೋಟ ಮಜ್ಜಿಗೆ ಇಳ್ಸಿದ ಮೇಲೆ ಸ್ವಲ್ಪ ಸಮಾಧಾನವಾಯ್ತು. ಇನ್ನು ಉಳಿದವ್ರು ಎಷ್ಟೊತ್ತಿಗಾದ್ರೂ ಬರ್ಲಿ, ಕಾಯೋಣ ಅಂತ ಮತ್ತೆ ಕಾಯೋಕೆ ಶುರು ಮಾಡಿದ್ವಿ 

ಭರ್ಜರಿ ಭೊಜನ: 
ಘಂಟೆ ಎರಡಾಯ್ತು. ಯಾರ ಸುಳಿವೂ ಇಲ್ಲ ! ನಮ್ಮ ಹಾಗೇ ಹೊಟ್ಟೆ ಹಸಿವು ತಾಳಲಾರದ ಉಳಿದವ್ರೂ ಈಗ ಭಟ್ಟರ ಮನೆಯತ್ರ ಬಂದ್ರು. ನಾವು ಊಟ ಮಾಡೋಣ. ಅವ್ರು ನಿಧಾನ ಬರ್ಲಿ ಅಂತ ತೀರ್ಮಾನವಾಯ್ತು. ಸರಿ ಅಂತ ಊಟ ಮಾಡೋಕೆ ಶುರು ಮಾಡೋ ಹೊತ್ತಿಗೆ ಒಬ್ಬೊಬ್ಬರಾಗಿ ಉಳಿದವ್ರು ಬರೋಕೆ ಶುರು ಮಾಡಿದ್ರು. ನಾವು ಮಿಸ್ ಮಾಡ್ಕೊಂಡಿದ್ದ ನೀರ ತಾಣದ ಬಳಿ ಒಂದಿಷ್ಟು ಹೊತ್ತು ಕಳೆದ ಅವರು ಬರೋ ಹೊತ್ತಿಗೆ ಇಷ್ಟೊತ್ತಾಗಿತ್ತು ! ಹೋದ ಜಾಗದ ಬಗ್ಗೆ ಬೇಸರವಿಲ್ಲ, ವಾಪಾಸ್ ಹೋಗ್ತಾ ನೋಡಿದ್ರಾಯ್ತು ಅಂತ ಸಮಾಧಾನ ಮಾಡ್ಕೊಂಡ ನಾವು ಊಟವಾದ ನಂತರ  ಅಲ್ಲೇ ಜಾಗ ಮಾಡಿಕೊಟ್ಟ ಭಟ್ಟರಿಗೆ ಧನ್ಯವಾದ ಹೇಳುತ್ತಾ ನಮ್ಮ ಬ್ಯಾಗುಗಳನ್ನೆಲ್ಲಾ ಅಲ್ಲೇ ಇಟ್ಟು ಸ್ವಲ್ಪ ವಿಶ್ರಾಂತಿಗೆ ಅಂತ ಮಲಗಿದ್ವಿ. ನಿದ್ದೆ ಬರ್ತಿಲ್ಲ ಅಂತ ಅಂದ್ಕೊಂಡ್ರೂ ಯಾವ ಮಾಯದಲ್ಲಿ ನಿದ್ರಾದೇವಿ ನಮ್ಮನ್ನ ಆವರಿಸಿದ್ಲೋ ಗೊತ್ತಿಲ್ಲ. ಸುತ್ತಲೂ ಕತ್ತಲಾಗುತ್ತಿತ್ತು. ಗಡಿಯಾರ ನೋಡಿದ್ರೆ ನಾಲ್ಕೂಮುಕ್ಕಾಲು !

ಒಂದಿಷ್ಟು ಕನ್ ಫ್ಯೂಷನ್ನು: 
ಮಲಗೆದ್ದ ಮೇಲೆ ನೋಡಿದ್ರೆ ನಮ್ಮ ಎದುರಿಗೆ ಮಲಗಿದ್ದ ಪ್ರಮೋದಣ್ಣ ಇಲ್ಲ ! ಬದಲಿಗೆ ವಿನಯ್ ಮಲ್ಗಿದಾರೆ ! ಐದರ ಸುಮಾರಿಗೆ ಹೊರಗೆ ಸೂರ್ಯಾಸ್ತ ನೋಡೋಣ ಅಂತ ಹೇಳಿದವ್ರು ನಮ್ಮನ್ನ ಬಿಟ್ಟು ಹೋಗ್ಬಿಟ್ಟಿದ್ದಾರಾ ಅಂತ ಸಂದೇಹ ಶುರುವಾಯ್ತು. ಅವಾಗ ಯಾರೋ ಬಂದಿದ್ರು. ಪ್ರಮೋದಣ್ಣನ್ನ ಎಬ್ಸಿ ಕರ್ಕೊಂಡೋದ್ರು ಅಂತ ಒಬ್ರು , ಮೇಲೆ ಸೂರ್ಯಾಸ್ತ ನೋಡೋ ಪಾಯಿಂಟ್ ಒಂದಿದೆ. ಆದ್ರೆ ಅಲ್ಲಿಂದ ಎಲ್ಲೋಗಿದ್ದಾರೆ ಗೊತ್ತಿಲ್ಲ ಅಂತ ಮತ್ತೊಬ್ರೂ ಹೇಳೋಕೆ ಶುರು ಮಾಡಿದ್ರು ! ಏನಾದ್ರಾಗ್ಲಿ, ನಮ್ಮ ಪಾಡಿಗೆ ನಾವು ನೋಡೋಣ ಸೂರ್ಯಾಸ್ತ ಅಂತ ಮಾತುಕತೆ ನಡೀತಿದ್ದಾಗ ಎಚ್ಚರವಾದ ಉಳಿದವ್ರೂ ರೆಡಿಯಾಗಿ ಸೂರ್ಯಾಸ್ತ ನೋಡೋಕೆ ಹೊರಟು ನಿಂತ್ರು ! ಕಣ್ಣುಜ್ಜಿಕೊಳ್ತಿದ್ದವರು ರೆಡಿಯಾಗಿ ಹೊರಟು, ಭಟ್ಟರ ಮನೆ ದಾಟಿ ಸೂರ್ಯಾಸ್ತದ ಪಾಯಿಂಟ್ ತಲುಪಿದ್ರೂ ಉಳಿದವರ ಸುಳಿವಿಲ್ಲ ! ಎಲ್ಲೋದ್ರಪ್ಪ ಇವ್ರು ನಮ್ಮನ್ನ ಬಿಟ್ಟು ಅಂತ ಬೇಸರ. ಇನ್ನೂ ಐದೂಕಾಲಾಗಿದ್ದರಿಂದ ಅಲ್ಲಿನ ಸುತ್ತಮುತ್ತಲ ಹೂಗಳು, ಹಾಳಾದ ಟೆಲಿಫೋನ್ ಟವರ್ ಮುಂತಾದ ಜಾಗಗಳಲ್ಲೆಲ್ಲಾ ಫೋಟೋ ಶೂಟ್ ಮಾಡೋ ಹೊತ್ತಿಗೆ ಎದುರಿಗಿನ ಬೆಟ್ಟದ ಮೇಲೊಂದು ಕಲ್ಲುಗಳ ರಾಶಿಯಿಟ್ಟಿರೋದು, ಅಲ್ಲೊಂದಿಷ್ಟು ಜನ ನಿಂತಿರೋದು ಕಾಣಿಸ್ತು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಭಟ್ಟರ ಮನೆಯವ್ರನ್ನ ಕೇಳಿದ್ರೆ ಸೂರ್ಯಾಸ್ತದ ಪಾಯಿಂಟ್ ಇದೇ. ಅಲ್ಲಿಂದ ಸುಬ್ರಹ್ಮಣ್ಯ ಕಾಣ್ಸುತ್ತೆ ಅಷ್ಟೆ ಅಂದ್ರು . ಬೆಂಚುಗಳ ಮೇಲೆ ಕೂತು ಇಲ್ಲಿ ಸೂರ್ಯಾಸ್ತ ನೋಡೋದಕ್ಕಿಂತ ಎದುರಿಗಿನ ಬೆಟ್ಟದ ಮೇಲಣ ಸೂರ್ಯಾಸ್ತ ಇನ್ನೂ ಚೆನ್ನಾಗಿರ್ಬೋದಾ ಅನ್ನಿಸ್ತು. ಎದ್ರಿಗೆ ಕಾಣಿಸ್ತಿರೋರು ನಮ್ಮವ್ರಾ ಅಂತಲೂ ಅನ್ನಿಸ್ತು. ಅತ್ತಲೇ ಸಾಗಿದ್ವಿ. ಯಾರಿಗೆ ಫೋನ್ ಮಾಡಿದ್ರೂ ಅವ್ರ ಫೋನ್ ಸ್ವಿಚ್ಛಾಫ್ ಬರ್ತಿದ್ರಿಂದ ಕಾಯೋದೋ, ಗೆಸ್ ಮಾಡೋದು ಬಿಟ್ಟು ಬೇರೆ ದಾರಿಯಿರಲಿಲ್ಲ ! 

At the Backdrop of KP near Sunset View point 


ಸುಂದರ ಸೂರ್ಯಾಸ್ತ: 
ಬಾಂದ್ ಕಲ್ಲು ಅಥವಾ ಗಡಿಕಲ್ಲು ಅಂತ ಕರೆಯೋ ಕಲ್ಲಿತ್ತು ಇಲ್ಲಿ. ಊರುಗಳ, ತಾಲ್ಲೂಕುಗಳ, ಜಿಲ್ಲೆಗಳ ಗಡಿಯನ್ನು ಗುರುತಿಸೋಕೆ ನೆರವಾಗೋ ಈ ಕಲ್ಲುಗಳು ಇಲ್ಲಿ ಸೂರ್ಯಾಸ್ತದ ಜಾಗವನ್ನೂ ತೋರಿಸುತ್ತಿದ್ದವು ! ಪ್ರಿಯಕರನ ಕಾಯಿಸಿ ಕಾಯಿಸಿ ಕೊನೆಗೂ ಬೇಸತ್ತು ಎದುರಾಗೋ ಪ್ರಿಯೆಯಂತೆ ಸುಮಾರು ಹೊತ್ತಿಂದ ನಮ್ಮನ್ನು ಕಾಯಿಸುತ್ತಿದ್ದ ಸೂರ್ಯ ಕೊನೆಗೂ ಮುಳುಗತೊಡಗಿದ. ಬೆಟ್ಟ ಹತ್ತಿ ಬಂದ ನಮಗೆ ಭಟ್ಟರ ಮನೆಯಲ್ಲಿ ಸ್ವಲ್ಪ ದಣಿವಾರಿದ್ದರೂ ಜಗವೆಲ್ಲಾ ಸುತ್ತಿದ್ದ ದಿನಕರನಿಗೆ ದಿನದ ಜಂಜಡಗಳಿಂದ ಸುಸ್ತಾಗಿತ್ತೇನೋ. ಒಂದಿಷ್ಟು ಫೋಟೋಗಳಿಗೆ ಪೋಸ್ ಕೊಟ್ಟ ಆತ ಕೊನೆಗೆ ಮನೆಗೆ ಹೊರಡೋ ಗಡಿಬಿಡಿಯಲ್ಲಿದ್ದಂತೆ ಕಂಡಿತು. ಕೆಲವೇ ನಿಮಿಷಗಳ ಹಿಂದೆ ಮೇಲಿದ್ದ ಸೂರ್ಯ ನೋಡನೋಡುತ್ತಿದ್ದಂತೆಯೇ ಬೆಟ್ಟಗಳ ಮರೆಯಲ್ಲಿ ಅಡಗತೊಡಗಿದ. ಫೋಟೋಗಳ ಮರೆತು , ಕಣ್ಣುಗಳಲ್ಲೇ ಸೂರ್ಯನ ಸೊಬಗನ್ನು ಸವಿಯೋಣ ಎಂದೆನಿಸಿ ಕಣ್ಣ ಮುಚ್ಚಿದರೆ ಮೊಗ, ಮನದಲ್ಲೆಲ್ಲಾ ಸೂರ್ಯನ ಬಂಗಾರದ ಬಣ್ಣವೇ ತುಂಬಿಕೊಂಡ ಭಾವ. ಸೂರ್ಯರಶ್ಮಿಯ ಕೊನೆಯ ಕಿರಣುಗಳು ಮೈಸೋಕುವ, ನಿಧಾನಕ್ಕೆ ಶುರುವಾಗೋ ಚಳಿ ನಮ್ಮನ್ನು ಸುತ್ತಿಕೊಳ್ಳುವ ಕ್ಷಣದ ಆಹ್ಲಾದಕತೆಯೇ ಅದ್ಭುತ. ಎದುರಿಗೆ ಕಾಣುತ್ತಿದ್ದ ಶೇಷ ಪರ್ವತ, ಬೆಳಗ್ಗೆ ನಮ್ಮನ್ನು ಸ್ವಾಗತಿಸಿದ್ದ ಸುಬ್ರಹ್ಮಣ್ಯಗಳ ನಡುವೆ ಅರ್ಧ ದಾರಿ ಕ್ರಮಿಸಿ ನಿಂತಿದ್ದ ನಮ್ಮ ಮನಸ್ಸು ಮುಂಬರುವ ಸವಾಲುಗಳಿಗೆ, ಖುಷಿಗಳಿಗೆ ಸಿದ್ಧವಾಗುತ್ತಿರುವಾಗಲೇ ಹೊತ್ತು ಕಂದಿತ್ತು. ಫೋನಿಗೆ ಸಿಕ್ಕವರು ಎದುರಿನ ಸನ್ ಸೆಟ್ ಪಾಯಿಂಟ್ ಬಳಿ ಇದ್ದಾರೆ ಎಂದು ಗೊತ್ತಾದ ಖುಷಿಯಲ್ಲಿ  ಭಟ್ಟರ ಮನೆಯತ್ತ ಹೆಜ್ಜೆ ಹಾಕಿದೆವು .

((ಮುಂದುವರೆಯಲಿದೆ...)