Showing posts with label ಷಟ್ಪದಿ. Show all posts
Showing posts with label ಷಟ್ಪದಿ. Show all posts

Thursday, December 22, 2011

ಕಲಾಂ-ತಾಯಿಗೆ ನಮನ

(ಭಾಮಿನಿ ಷಟ್ಪದಿಯಲ್ಲಿ ಬರೆಯಲೊಂದು ಪ್ರಯತ್ನ)

ಜನನಿ ನಮಿಸುವೆ ಗುಣಿಯ ಬೆಳೆಸಿದೆ
ಮನವ ಒಲಿಸುತ ಶಾಂತಿ ಬಿತ್ತಿದೆ
ಮನುಜ ಜನ್ಮದಿ ತಾಯ ಜನ್ಮವೆ ಹಿರಿದು ಎನ್ನುತಲಿ |
ಪಣತ ಖಾಲಿಯೆ ಆದರಳುಕದೆ
ಮನದ ಕುಡಿಯನು ಹಸಿರೆ ಇರಿಸಲು
ಇನಿತು ಮರುಗದೆ ಎಷ್ಟೊ ಕಷ್ಟವ ಬಿಡದ ನಗುಹಿಂದೆ||

ಮಗನು ಬೆಳೆದನು ಓದಿ ಎತ್ತರ
ಗಗನ ಚಿಮ್ಮೋ ಕ್ಷಿಪಣಿ ಎಂಬುವ
ನೆಗೆತ ವಿಷಯದಿ ನುರಿತ ಅವರಿಗೆ  ನೀಡಿ ಗೌರವವ|
ನಗುವ ಮೊಗದಲಿ ಶರಣು ಎಂದರು
ಜಗದ ಕಿವಿಗಳ ಸೆಳೆದ ಶಕ್ತಿಯ
ಅಗಲ ಹೊಗಳಲು ಪದವು ಸಾಲದೆ ಶಿರವ ನಮಿಸೆಂದೆ||
(ಮಾಜಿ ರಾಷ್ಟ್ರಪತಿ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರ ಮನೆಯಲ್ಲಿ ಬಡತನ. ಅವರ ತಾಯಿ ಆಸೀಯಮ್ಮ ಮಾಡಿದ ರೊಟ್ಟಿಯನ್ನು ಕಲಾಂಗೆ ಮತ್ತಿತರ ಮಕ್ಕಳಿಗೆ ಹಾಕುತ್ತಿದ್ದರಂತೆ. ಕಲಾಂ ತಿನ್ನುತ್ತಾ ಇದ್ದರಂತೆ. ಹೀಗೆ ಕಲಾಂ ಮೈಮರೆತು ತಿನ್ನುತ್ತಿದ್ದಾಗ ಒಂದು ದಿನ ಅವರ ಅಣ್ಣ ಎಳೆಯ ಕಲಾಂ ಅವರನ್ನು ಎಚ್ಚರಿಸಿದರಂತೆ. "ಏ ಕಲಾಂ, ತಾಯಿ ತನ್ನ ರೊಟ್ಟಿಯನ್ನೂ ನಿನಗೇ ಹಾಕುತ್ತಿದ್ದಾಳೆ ಎಂಬುದು ಗೊತ್ತಿದೆಯಾ? " ಎಂದು. ಕಲಾಂರಿಗೆ ಆಗ ಜ್ಞಾನೋದಯವಾದಂತಾಯಿತಂತೆ ಮತ್ತು ತಾಯಿಯ ಮೇಲೆ ಮೊದಲೇ ಇದ್ದ ಪ್ರೀತಿ ಉಕ್ಕಿ ಹರಿಯಿತು. ಆಮೇಲೆ ಅವರು ತಮ್ಮ ಅಪರಿಮಿತ ಪರಿಶ್ರಮದಿಂದ ದೇಶದ ಕ್ಷಿಪಣಿ ತಂತ್ರಜ್ಞಾನದ ಪಿತಾಮಹರೆನಿಸಿದರೆಂಬುದು ಇತಿಹಾಸ.. ಅವರೆಲ್ಲರಿಗೂ ಮತ್ತೊಂದು ಸಲಾಂ. .
ಮೇಲಿನ ಪ್ರಸಂಗವನ್ನು ಕಲಾಂರ ಆತ್ಮಕತೆ "ಅಗ್ನಿಯ ರೆಕ್ಕೆಗಳು" ನಲ್ಲಿ ಅವರೇ ಉಲ್ಲೇಖಿಸಿದ್ದಾರೆ ಎಂದು ಓದಿದ ನೆನಪು)

Thursday, December 8, 2011

ಗಂಗಾವತರಣ

(ಭಾಮಿನಿ ಷಟ್ಪದಿಯಲ್ಲಿ ಬರೆಯಲೊಂದು ಪ್ರಯತ್ನ)..

ಹರಿಯ ಪಾದವ ತೊಳೆವ ಗಂಗೆಯ
ಧರೆಗೆ ಇಳಿಸಲು ನೃಪನು ಬೇಡಲು
ಭರವ ತಾಳಲು ಹರನ ಕೇಳಲು ಹೇಳಿದಾ ಬ್ರಹ್ಮಾ|
ಹರನ ಭಜಿಸಲು ಅವನ ಪೂಜಿಸಿ
ಶಿರಕೆ ಧುಮುಕಲು ಗಂಗೆ ಜಂಬದಿ
ಹೊರಗೆ ಬಾರದೆ ಅಲ್ಲೆ ಸಿಲುಕಲು ಮತ್ತೆ ಬೇಡಿದನೋ|೧|

ಇಳೆಗೆ ಇಳಿಸಲು ಹರಸಿ ಪರಶಿವ
ಹಲವು ಧಾರೆಗಳಾಗಿ ಒಡೆದಳು
ತೊಳೆವ ಬದಲಿಗೆ ಜಹ್ನು ಆಶ್ರಮ ಕೊಚ್ಚಿ ಒಯ್ದಿಹಳೋ|
ಎಲೇ ಸೊಕ್ಕೇ ಎಂದು ಅವಳನು
ಬಲಿಯ ಪಡೆದನು ಮುನಿಯು ಮುನಿಯುತ
ಹಲವು ಋಷಿಗಳು ನೃಪನು ಬೇಡಲು ಹರಿಸಿ ಕಿವಿಯಿಂದಾ|೨|

ಸ್ನಾನ ಮಾತ್ರದಿ ಪಾಪ ಕಳೆವಳು
ಮೌನದಿಂದಲೆ  ಇಳೆಗೆ ಇಳಿದಳೊ
ಮಾನವನ ಈ ಶ್ರಮದ ಗೆಲುವಿಗೆ ಮತ್ತೆ ಮೆಚ್ಚುತಲೀ|
ಪ್ರಾಣತೊರೆದಿಹ ಪಿತರ ಭಸ್ಮವ
ಲೀನವಾಗಿಸಿ ಮೋಕ್ಷವಿತ್ತಳು
ತನ್ನ ಧ್ಯೇಯವ ಬಿಡದೆ ನಡೆದಿಹ ಧನ್ಯ ತಾ ನರನೋ|೩|

(ಮೊದಲ ಸಲ ಬರೆದಾಗ ಆದಿ ಪ್ರಾಸ ತಪ್ಪಿದ್ದಾಗ ತಿದ್ದಿದ ಕಿರಣಣ್ಣ, ಹರೀಶಣ್ಣರ ತಿದ್ದುಪಡಿಗಳನ್ನು ಕೆಳಗೆ ಹಾಕಿದ್ದೇನೆ.. ಇನ್ನೂ ಓದುವ/ಬರೆವ ಪ್ರಯತ್ನದಲ್ಲಿ )
ಚಿತ್ರಕೃಪೆ: Divinebrahmanda.com