Sunday, December 1, 2019

ಹೋಳಿ

ಕಾಮನ ಹುಣ್ಣಿಮೆಗೆ ಒಂದು ವಾರ ಮುಂಚೆಯೇ ರಸ್ತೆಯಲ್ಲಿ ಬರೋ ವಾಹನಗಳನ್ನ ಅಡ್ಡ ಹಾಕಿ "ಕಾಮಣ್ಣನ ಸುಂಕ ಕೊಡಲೇ ಬೇಕುಭೀಮಣ್ಣ ಬೀಡಿ ಸೇದಲೇ ಬೇಕು" ಅಂತ ಕೂಗೋ ಒಂದೂರ ಮಕ್ಕಳ ಗ್ಯಾಂಗಿನ ನಾಯಕ ನಮ್ಮೀ ಮನೋಜ. ಒಂದಿಷ್ಟು ಜನ ಗಾಡಿ ಅಡ್ಡ ಹಾಕಿದ್ದಕ್ಕೆ ಬೈದ್ರೂ ಇನ್ನೊಂದಿಷ್ಟು ಜನ ಒಂದ್ರುಪಾಯೋಐದ್ರೂಪಾಯೋ ಕೊಡ್ತಿದ್ರಲ್ಲ ಅದೇ ಥ್ರಿಲ್ಲು,ಮುಂದಿನ ಕೂಗಿಗೆ ಸ್ಪೂರ್ತಿ! ಪ್ರತೀ ಊರಲ್ಲೂ ಹಿಂಗೆ ವಾಹನಗಳ ಅಡ್ಡಾಕಿಅಡ್ಡಾಕಿದ ಎಲ್ಲ ಕಡೆ ವಾಹನದವ್ರು ದುಡ್ಕೊಡದಿದ್ರೂ  ಇವರ ಕಲೆಕ್ಷನ್ನು ಬೆಳೆಯೋದೊಂದು ವಿಸ್ಮಯ ! ಹುಣ್ಣಿಮೆ ತನಕ ಇದೇ ತರ ಸಂಗ್ರಹವಾಗೋ ದುಡ್ಡನ್ನ ಕೂಡಾಕಿ ಒಂದಿಷ್ಟು ಸಿಹಿ, ಬಣ್ಣ ತರೋರು. ಹಳೇ ಪ್ಯಾಂಟುಶರ್ಟುಗಳ ಒಂದು ಕೋಲಿಗೆ ಮನುಷ್ಯನಿಗೆ ತೊಡಿಸಿದಂತೆ ತೊಡಿಸಿಅದಕ್ಕೆ ಹುಲ್ಲು ತೂರಿಸಿಅದ್ರಲ್ಲೊಂದು ಬೆರ್ಚಪ್ಪನ್ನ ಮಾಡಿ,ಮಡಿಕೆಯ ತಲೆ ಮಾಡಿ ಬಿಟ್ರೆ ಅಂದಿನ ರಾತ್ರಿಗೆ ಸುಡೋ ಕಾಮಣ್ಣ ರೆಡಿ ! ಅವನ ಮುಖಕ್ಕೊಂದು ಆಕಾರ ಮಾಡೋದುಸುಡೋ ಸಮಯಕ್ಕೆ ಬೇಕಾದ ಪಟಾಕಿ ತರೋದೆಲ್ಲಾ ಸಂಜೆಯ ಇನ್ನಿತರ ಸಂಭ್ರಮಗಳಾಗಿತ್ತು.  ರಾತ್ರಿಯಾದ್ಮೇಲೆ ಕಾಮಣ್ಣನ ಸುಡೋದು ನೋಡೋಕೆ ಊರೋರೆಲ್ಲಾ ಸೇರೋರು. ಅಲ್ಲಿ ಕಾಮಣ್ಣಂಗೆ ಬೆಂಕಿ ಕೊಡೋದು ಯಾರಾದ್ರೂ ದೊಡ್ಡೋರಾದ್ರೂ ಈ ಸಲ ಕಾಮಣ್ಣನ ಚೆನ್ನಾಗಿ ಮಾಡಿದೀರಲ್ರೋ ಅಂದ್ರೆ ಮನೋಜ ಮತ್ತು ಗ್ಯಾಂಗಿಗೆ ಪ್ರಸಾದ ಅಂತ ಹಂಚ್ತಿದ್ದ ಸಿಹಿ ಇನ್ನೂ ಸಿಹಿಯಾದಂಗೆ ಅನ್ನಿಸ್ತಿತ್ತುಪ್ರಪಂಚವನ್ನೇ ಗೆದ್ದಂಗನಿಸ್ತಿತ್ತು.

ಹಿಂಗಿಪ್ಪ ಸಂಭ್ರಮದ ಹುಣ್ಣಿಮೆ ಕಳೆದು ಹೋಳಿ ಬಂದಿತ್ತು. ಬೆಳಗ್ಗೆಯೇ ಎದ್ದು ಬಣ್ಣಗಳ ಪ್ಯಾಕೇಟೆತ್ತಿ ಹೋಳಿಯಾಡಲು ಓಡಿದ್ದ ಮನೋಜ. ತಿಂಡಿ ತಿಂದ್ಕಂಡು ಹೋಗೋ ಅನ್ನೋ ಅಮ್ಮನ ಮಾತನ್ನು ಕೇಳದೇ ಹ್ಯಾಪಿ ಹೋಳಿ ಅಮ್ಮ ಅಂತ ಬಣ್ಣ ಹಚ್ಚಿದ್ದ. ಹೋಳಿಯಾಡೋಕೆ ಹೋದ್ರೆ ಬರೋದು ಮಧ್ಯಾಹ್ನವಾಗುತ್ತೋ. ಏನಾರು ತಿಂದ್ಕೊಂಡೋಗೋ ಅನ್ನೋಕೆ ಬಂದ ಅಪ್ಪನ ಮುಖಕ್ಕೂ ಬಣ್ಣ ಹಚ್ಚಿ ಅವ್ರು ಮುಸಿ ನಗೋ ಹೊತ್ತಿಗೆ ಗೇಟು ದಾಟಿದ್ದ ! ಮನೆಯಿಂದ ಮುಂದೋಡೋ ಹೊತ್ತಿಗೆ ಕಣ್ಣು ಹುಷಾರಿ ಅಂತ ಅಪ್ಪ ಅಂದಂಗಾಯ್ತು. ಆದ್ರೆ ಅಪ್ಪ ಏನು ಹೇಳ್ತಿದಾರೆ  ಅಂತ ಕೇಳೋ ವ್ಯವಧಾನವಿಲ್ಲದ ಮನೋಜ ಮುಂದೋಡಾಗಿತ್ತು.

ಗೆಳೆಯರನ್ನೆಲ್ಲಾ ಮನೆಯಿಂದ ಕರೆದು ಬಣ್ಣ ಹಾಕಾಯ್ತು. ಬರೋಲ್ಲ ಅಂದವರನ್ನೂ ಪುಸಲಾಯಿಸಿ ಕರೆದು ಬಣ್ಣ ಹಚ್ಚಾಯ್ತು. ನೀರಿಗಿಳಿದ ಮೇಲೇ ಚಳಿ ಬಿಡೋದು ಅಂದಂಗೆ ಒಂದ್ಸಲ ಬಣ್ಣ ಹಚ್ಚಿಸಿಕೊಂಡೋರು ನಾಚಿಕೆ ಬಿಟ್ಟುಖುಷಿ ಪಟ್ಟು ಬೇರೆಯವ್ರಿಗೆ ಬಣ್ಣ ಹಚ್ಚೋಕೆ ಬರೋರು. ಬಣ್ಣ ಖಾಲಿ ಆಗ್ತಾ ಬಂತು ಅನ್ನೋ ಹೊತ್ತಿಗೆ ಯಾರೋ ಹಿರಿಯರುಬಣ್ಣ ಖಾಲಿ ಆಯ್ತೇನ್ರೋ ಹುಡುಗ್ರಾತಗಳ್ರಿ ಬಣ್ಣನ ಅಂತೆ ತಮ್ಮ ಮನೇಲಿ ಇವ್ರಿಗೆ ಅಂತನೇ ತಂದಿಟ್ಟಿದ್ದ ಬಣ್ಣ ಕೊಡೋರು. ಪ್ರತೀ ವರ್ಷ ಈ ಹುಡುಗರು ಬಂದು ಹ್ಯಾಪಿ ಹೋಳಿ ಅಣ್ಣಾ/ಮಾವ/ಅಜ್ಜ ಅಂತ ಹಚ್ಚಿ ಹೋಗೋದು ಅವ್ರಿಗೆ ಹೆಂಗಿದ್ರೂ ಪರಿಚಯವಾಗಿತ್ತಲ್ಲ. ಬಣ್ಣವಾಡೋ ಹುಡುಗರು ಇನ್ನೂ ಬರ್ಲಿಲ್ಲ ಅಂದ್ರೇನೆ ಏನೋ ಚಡಪಡಿಕೆ ಕೆಲ ಹಿರೀಕರಿಗೆ. ಬಣ್ಣ ಕೊಡೋ ಹಿರೀಕರೆಲ್ಲಾ ಕಣ್ಣು ಹುಷಾರಿ ಅನ್ನೋರು. ಆದ್ರೆ ಮನೋಜ ಮತ್ತವನ ಪಟಾಲಮ್ಮಿಗೆ ಅದ್ರ ಮೇಲೆ ಗಮನವಿದ್ರೆ ತಾನೇ ?

ಹಿಂಗೇ ಬಣ್ಣವಾಡುತ್ತಾ ಹೊತ್ತು ಹೋಗಿದ್ದೇ ತಿಳೀಲಿಲ್ಲ. ಮಧ್ಯಾಹ್ನವಾಗುತ್ತಾ ಬಂದಿತ್ತು. ಹೊಟ್ಟೆ ಬೇರೆ ಹಸಿಯುತ್ತಿತ್ತು. ಆಟವಾಡ್ತಾ ಆಡ್ತಾ ಮನೆಯಿಂದ ಸುಮಾರು ದೂರ ಬಂದಾಗಿದೆ. ಇನ್ನು ಮನೆಗೆ ವಾಪಾಸು ಹೋಗೋ ಬದ್ಲು ಇಲ್ಲೇ ನಡೀತಿರೋ ಜವರಯ್ಯನ ಜಾತ್ರೆಗೆ ಹೋಗಿ ಏನಾದ್ರೂ ತಿಂದ್ಕೊಂಡು ಆಮೇಲೆ ಮನೆಗೆ ಹೋಗೋಣ್ವಾ ಅಂದ ಮನೋಜ. ಹಿಂದಿನ ದಿನ ಕಾಮಣ್ಣನ ಕಲೆಕ್ಷನ್ನಲ್ಲಿ ಸ್ವಲ್ಪ ದುಡ್ಡನ್ನ ಜಾತ್ರೆಗೆ ಅಂತ್ಲೇ ಉಳಿಸಿ ಇವತ್ತು ತಂದ ಮನೋಜನ ಬುದ್ದಿವಂತಿಕೆಗೆ ಮೆಚ್ಚುತ್ತಾ ಎಲ್ರೂ ಜಾತ್ರೆಯತ್ತ ಹೆಜ್ಜೆ ಹಾಕಿದ್ರು. ಅಲ್ಲೂ ಬಣ್ಣಗಳದ್ದೇ ಜಾತ್ರೆಯವತ್ತ್ಯು. ಜಾತ್ರೆಯ ದಾರಿಯಲ್ಲಿ ಯಾರೋ ಬಣ್ಣಗಳ ಪ್ಯಾಕೆಟ್ಟನ್ನ ಬೀಳಿಸಿಕೊಂಡಿದ್ರು ಅನ್ಸುತ್ತೆ. ಜಾತ್ರೆಗೆ ತಿನ್ನೋಕೆ ಅಂತ ಬಂದಿದ್ರೂ ಬಣ್ಣಗಳ ನೋಡಿದ ಮೇಲೆ ಹುಡುಗರಿಗೆ ಬಂದ ಕೆಲಸವೇ ಮರ್ತೋಯ್ತು. ಬಣ್ಣವಾಡೋ ಹುಚ್ಚಲ್ಲಿ ಅಲ್ಲಿ ಸಿಕ್ಕಿದ ದನನಾಯಿಮಂಗಗಳ ಮೇಲೂ ಬಣ್ಣವೆರಚೋಕೆ ಶುರು ಮಾಡಿದ್ರು. ಆ ಗಲಾಟೇಲಿ ಸುಮಾರಷ್ಟು ಪ್ರಾಣಿಗಳ ಕಣ್ಣುಮೂಗುಗಳಲ್ಲೆಲ್ಲಾ ಬಣ್ಣ ಹೋಗಿ ಅವು ಒದ್ದಾಡೋಕೆ ಶುರು ಮಾಡಿದ್ರೆ ಈ ಹುಡುಗರಿಗೆ ಏನೋ ಒಂತರ ಖುಷಿ ! ಈ ಖುಷಿಯ ಮಧ್ಯೆಯೇ ಏ ಮನೋಜಹುಷಾರು ಅಂತ ಯಾರೋ ಕೂಗಿದಂಗಾತ್ಯು. ಏನು ಅಂತ ತಿರುಗೋ ಹೊತ್ತಿಗೆ ಮಂಗವೊಂದು ಮನೋಜನ ಮೇಲೆ ನೆಗೆಯುತ್ತಿತ್ತು. ನನ್ನ ಕಣ್ಣಿಗೆ ಬಣ್ಣ ಹಾಕಿದೆಯಲ್ಲಾನೀನೂ ಅನುಭವಿಸು ಅಂತ ಮಂಗವೊಂದು ಬಯ್ಯುತ್ತಾ ಇವನಿಗೆ ಹೊಡೆಯೋಕೆ ಬಂದಾಗಾಯ್ತು. ಅದ್ರ ನೆಗೆತದಿಂದ ತಪ್ಪಿಸಿಕೊಳ್ಳೋಕೆ ಅಂತ ಹಿಂದೆ ಬಗ್ಗಿದ್ದೊಂದೇ ಗೊತ್ತು. ಆಯ ತಪ್ಪಿಹಿಂದೆ ಬಿದ್ದಂತೆತಲೆ ಯಾವುದಕ್ಕೋ ಹೊಡೆದಂತೆ !

ಮನೋಜ ಕಣ್ಣು ಬಿಟ್ಟು ನೋಡಿದರೆ ಬಣ್ಣದ ಬಟ್ಟೆಗಳಲ್ಲಿ ಓಡಾಡೋ ಜನರ ಜಾತ್ರೆಯಲ್ಲಿದ್ದಾನೆ. ಆದರೆ ಅವನ ಸಾಥಿಗಳ್ಯಾರೂ ಕಾಣ್ತಿಲ್ಲ ! ಹಸಿಯುತ್ತಿರೋ ಹೊಟ್ಟೆಗೆ ಏನಾದ್ರೂ ತಿನ್ನೋಣ ಅಂತ ನೋಡಿದ್ರೆ ಚೆಡ್ಡಿಯಲ್ಲಿ ದುಡ್ಡಿಲ್ಲ. ಅರೇಚೆಡ್ಡಿಯೇ ಇಲ್ಲ! ಮೈತುಂಬಾ ಕೂದಲು.  ಹಿಂದೊಂದು ಬಾಲಕೈ ಕಾಲು ಮೇಲೆಲ್ಲಾ ರೋಮ ಮಂಗನಂತೆ. ಕಣ್ಣೇನೋ ಉರಿಯುತ್ತಿದೆಯಲ್ಲಾ ಅಂತ ನೊಡಿದ್ರೆ ಮುಖದ ಮೇಲೆ ಯಾರೋ ಸೋಕಿರೋ ಬಣ್ಣ! ಬಣ್ಣವಾಡ್ತಿದ್ದ ತನಗೇನಾಯ್ತು ?  ಮನೋಜ ಮಂಗನೇಗಾದೆ?  ಮನೆಗೆ ಹೋಗೋದೇಗೆ?  ಮೊದಲಿನಂತೆ ಆಗೋದೇಗೆ ಅನ್ನೋ ಹಲವು ಚಿಂತೆಗಳಲ್ಲಿ ಮುಳುಗಿರೋ ಮನೋಜನಿಂದು ದುಃಖಾಕ್ರಾಂತನಾಗಿದ್ದಾನೆ, ಹಸಿದು ಬಳಲಿದ್ದಾನೆ. ಜಾತ್ರೆಲಿ ಸಿಗೋ ಯಾರಾದ್ರೂ ತನಗೆ ಸಹಾಯ ಮಾಡ್ಬೋದೇನೋ ಎನ್ನೋ ನಿರೀಕ್ಷೆಯಲ್ಲಿ ಎಲ್ಲರ ಮುಖಗಳನ್ನು ನೋಡ್ತಾ ಇದ್ದಾನೆ.

Monday, September 16, 2019

ಪ್ರೀತಿಯೆಂಬ ಹಾಯಿದೋಣಿ

ಬೆಳದಿಂಗಳ ಇರುಳಿನಲ್ಲಿ ಶಶಿಗೆದುರಿರೋ ಮೋಡದಂತೆ
ಸುಖನಿದ್ರೆಯ ರಾತ್ರಿಯಲ್ಲಿ ಬೆವರಿಳಿಸೋ ಕನಸಿನಂತೆ
ನನ್ನೊಲುಮೆಯ ಬಾಳಿನಲ್ಲಿ ಬೇಸರಿಸೋ ಕ್ಷಣಗಳಂತೆ
ಸುಖವೆಂಬೋ ದಿಂಬಿನಲ್ಲಿ ಚುಚ್ಚೋ ನಾರು ನಿನ್ನೆಯಂತೆ
ಒಲುಮೆಯಿರುವ ಬದುಕಿನಲ್ಲಿ ಹುಳಿ ಹಿಂಡೋ ಅಹಮಿನಂತೆ
ನಮ್ಮ ನಗುವ ಇಂದಿನಲ್ಲಿ ಅಳುವಿರದಿರಲೆನ್ನೆ ಪ್ರಿಯೆ
ನಂಬುಗೆಯೇ ಜೀವನವು ಎನುತ ಬಾಳಲೆನ್ನ ಪ್ರಿಯೆ|೧

ಬಾಳ ದೋಣಿ ದಡವ ಬಿಟ್ಟು ಹಾದಿ ಹುಡುಕಿ ಸಾಗಲು
ಅನುದಿನವೂ ಹಲವು ಕಷ್ಟದಲೆಗಳಿದರ ನೂಕಲು
ಪ್ರೀತಿಯೊಲುಮೆ ಹರಿಗೋಲಲೆ ದೋಣಿ ಮುಂದೆ ಸಾಗಿದೆ
ಸಿಟ್ಟ ಸಿಡುಕು, ದುಡುಕ ಒಡಕು ಮೂಡದಂತೆ ಕಾದಿದೆ.
ಅನುಮಾನದ ಸಣ್ಣ ರಂಧ್ರ ಸಾಕು ದೋಣಿ ಮುಳುಗಲು
ನಂಬಿಕೆಗಳ ಗೋಂದೆ ಸಾಕು ದೋಣಿ ಭದ್ರ ಪಡಿಸಲು.
ನೀ ಜೊತೆಗಿರೆ ಭಯವು ಏಕೆ ಎದುರು ಬರುವ ಬಂಡೆಗೆ
ಪ್ರೀತಿ ಚಿಲುಮೆ ಜಿನುಗುತಿರಲು ಕಾಡೋ ಅಹಮ ಬೆಂಕಿಗೆ|೨

ಎಷ್ಟು ಬೇಡವೆಂದರೂನೂ ಕಾಣೋ ಚೌತಿ ಚಂದಿರ
ಮನದೆನ್ನೆಯ ಮೊಗಕೆ ನಾಚಿ ಮೋಡ ಹುಡುಕಿ ಅಡಗಿದೆ.
ಎದುರಾಗೋ ಕಠಿಣ ಹಾದಿ ಸುಲಭವೆನಿಸಿ ಬಾಳಲಿ
ಬಾಳಬೆಳಕು ಜೊತೆಯಾಗಲು ಕಾರಿರುಳೂ ಕಳೆದಿದೆ.
ಹರಿವ ನದಿಯ ಕಾಲದಾಟ ದಾಟಿ ಮುಂದೆ ಸಾಗುತ
ಸಿಡಿಲು, ಗುಡುಗು , ಮಳೆ ಕಾಟವ ಸಹಿಸಿ ಇಂದು ಕಳೆಯುತ
ಸಾಗುತಿಹುದು ಬಾಳ ದೋಣಿ ಕನಸ ಕಡಲನರೆಸುತ
ಬದುಕೆಂಬೋ ಪಯಣದಲ್ಲಿ ಹೊಸತು ಹೊಸತ ಅರಸುತ|೩

Thursday, August 22, 2019

ಅನಿತಾ, ವನಿತಾ ಮತ್ತು ಚೆಂಗು ಮರಿ

ಒಂದು ಕಾಡಲ್ಲಿ ಅನಿತಾ ಅನ್ನೋ ಆನೆ ಮತ್ತು ಮತ್ತು ವನಿತಾ ಅನ್ನೋ ಹುಲಿ ಇದ್ವಂತೆ. ಆ ಕಾಡಲ್ಲಿದ್ದ ನವನೀತ ಅನ್ನೋ ಸಿಂಹ ಕಾಡು ಬಿಟ್ಟೋದ್ರೆ ಕಾಡಿನ ರಾಜ ತಾವೇ ಆಗ್ಬೇಕು ಅಂತ ಅವೆರಡಕ್ಕೂ ಆಸೆ ಇತ್ತಂತೆ. ಮುಂದಿನ ರಾಜ/ರಾಣಿ ತಾವೇ ಆಗ್ಬೇಕು ಅನ್ನೋ ಆಸೇಲಿ ಅವ್ರು ಮತ್ತೊಬ್ರನ್ನ ಕೆಳಗೆ ತಳ್ಳೋದು ಹೇಗೆ ಅಂತ್ಲೇ ಯೋಚ್ನೆ ಮಾಡ್ತಿದ್ರಂತೆ. ಈ ಕಾಡಲ್ಲೇ ಅಲ್ಲ, ಪ್ರಪಂಚದಲ್ಲೇ ತಮ್ಮಷ್ಟು ಕೆಲ್ಸ ಮಾಡೋರು ಬೇರ್ಯಾರೂ ಇಲ್ಲ ಅನ್ನೋ ಭಾವ ಇಬ್ಬರಿಗೂ. ಜಗದ ಬೆಳಕಾಗೋದೇ ತಮ್ಮಿಂದ ಅನ್ನೋ ಭಾವವೂ ಇಬ್ರಿಗೂ. ಎಲ್ಲರಿಗೂ ಉಪಕಾರ ಮಾಡುವರಂತೆ ನಟಿಸುತ್ತಿದ್ದರೂ ಇವರು ಯಾವಾಗ ಮೈಮೇಲೆ ಬೀಳ್ತಾರೋ ಗೊತ್ತಿಲ್ಲದ ಉಳಿದವರು ಇವರು ಬಂದಾಗ ಇವರ ಪರಮ ಸ್ನೇಹಿತಂತೆಯೂ, ಎದುರಿಗಿಲ್ಲದಿದ್ದಾಗ ಇವರ ದುರ್ಗುಣಗಳ ದೂರುತ್ತಲೂ ಇದ್ದರು. ಇಂತಿಪ್ಪ ಕತರ್ನಾಕ್ ಕಾಡಿಗೆ ಚೆಂಗು ಮರಿ ಎಂಬ ಜಿಂಕೆಯ ಆಗಮನವಾಯ್ತು.

ಜಿಂಕೆಯೋ ಮಹಾ ಚುರುಕು. ಮೃಗಾಲಯದ ಅದೇ ಏಕತಾನತೆಯಿಂದ ತಪ್ಪಿಸಿಕೊಂಡು ಕಾಡಿಗೆ ಬಂದಿದ್ದ ಚೆಂಗುಮರಿಗೆ ಕಾಡಿನ ಸ್ವಾತಂತ್ರ್ಯ ಹೊಸತು. ಅದಕ್ಕೆ ಕೂತಲ್ಲಿ ಕೂರಲಾಗದ ಕುತೂಹಲ. ಅದಕ್ಕೆ ಜೊತೆ ಸಿಕ್ಕಿದ್ದು ಕೊಂಗೂಸ್ ಎಂಬ ಕರಡಿ. ಅದು ಜೂವಿನಿಂದ ಬರದೇ ಇದ್ರು ಆಹಾರ ಹುಡುಕಿಕೊಂಡು ಬೇರೆ ಕಾಡಿಂದ ಕತರ್ನಾಕ್ ಕಾಡಿಗೆ ಬಂದಿತ್ತು. ಕಾಡಲ್ಲಿ ಆರಾಮವಾಗಿ ಅಲೆಯುತ್ತಿದ್ದ ಇವುಗಳ ಕಣ್ಣಿಗೆ ಬಿದ್ದಿದ್ದು ಅಮಿತ ಎಂಬ ಕೋತಿ. ಆ ಕೋತಿಗೋ ಹೆಸರಿಗೆ ತಕ್ಕಂತೆ ಎಷ್ಟಿದ್ದರೂ ಸಮಾಧಾನವಿಲ್ಲದ ಭಾವ. ಈ ಚೆಂಗು, ಕೊಂಗೂಸ್ಗಳು ತನ್ನ ಹಣ್ಣಿಗೆ ಕೈ ಹಾಕದಿದ್ದರೂ ಅದಕ್ಕೆ ಏನೋ ಆತಂತ. ಅದೇ ತರ ಕಾಡಲ್ಲಿದ್ದ ಭೈರ ಅನ್ನೋ ಜಿರಾಫೆಯೂ ಈ ಹೊಸ ಮೃಗಗಳ ಆಗಮನವನ್ನು ಗಮನಿಸಿತ್ತು. ಈ ಕಾಡಿಗೆ ಹೊಸಬರು ಬರೋದೇನು ಹೊಸತಾ ? ಬಂದ್ರೆ ಎಷ್ಟು ದಿನ ಇರ್ತಾರೆ ಇಲ್ಲಿ, ಈ ಅನಿತಾ , ವನಿತಾನ ಸುದ್ದಿ ಇವಕ್ಕೆ ಇನ್ನೂ ಗೊತ್ತಿಲ್ಲ , ಅಲ್ಲಿವರೆಗೆ ಆರಾಮಾಗಿರ್ಲಿ ಅಂತ ಅಂದ್ಕೋತಿತ್ತು.

ಕಾಡಿಗೆ ಬಂದ ಹೊಸತರಲ್ಲಿ ಕೊಂಗೂಸನ್ನ ಕಂಡರೆ ಗಾಬರಿಪಡುತ್ತಿದ್ದ ಚೆಂಗುಮರಿಗೆ ಕ್ರಮೇಣ ಅದರೊಂದಿಗೆ ಸ್ನೇಹ ಬೆಳೆಯಿತು. ಚುರುಕಾಗಿ ಓಡೋ ಅದು ಎಲ್ಲಾದ್ರೂ ಹಣ್ಣು ಸಿಕ್ರೆ ಕೊಂಗೂಸಿಗೆ ತೋರುಸ್ತಿತ್ತು. ಮರ ಹತ್ತಿ ಜೇನು ಕೀಳೋ ಕೊಂಗೂಸ್ ಚೆಂಗು ಮರಿಗೂ ಸ್ವಲ್ಪ ಕೊಡ್ತಿತ್ತು. ಕಾಡೇ ತಮ್ಮದೆಂಬಂತೆ ಸ್ವೇಚ್ಛೆಯಿಂದಿದ್ದ ಚೆಂಗು ಮರಿಯನ್ನು ಕಂಡು ಅಮಿತನಿಗ್ಯಾಕೋ ಹೊಟ್ಟೆಯುರಿ ಶುರುವಾಯ್ತು. ಅವ ತನಗೆ ಚೆನ್ಣಾಗಿದ್ದ ಅನಿತಾ, ವನಿತಾರೊಂದಿಗೆ ಚೆಂಗುಮರಿ ಬಗ್ಗೆ ಸುಳ್ಳೇ ಪಳ್ಳೇ ಕತೆ ಕಟ್ಟಿದ !

ತಮ್ಮ ರಾಜ್ಯಕ್ಕೆ ಬೇರ್ಯಾರೋ ಬರೋದು ಅಂದ್ರೆ ಏನು ? ಬಂದ್ರೂ ತಮ್ಮಪ್ಪಣೆ ಇಲ್ದೇ ಹುಲ್ಲು ತಿನ್ನೋದು ಅಂದ್ರೆ ಏನು ಅಂತ ಇಬ್ಬರಿಗೂ ಉರಿದೋಯ್ತು. ಇಬ್ರೂ ಹೋಗಿ ಕಾಡಿನ ರಾಜ ನವನೀತನಿಗೆ ದೂರು ಕೊಟ್ವು. ನವನೀತನೋ ಹೆಸರಿಗೆ ತಕ್ಕಂತೆ ಸ್ವಲ್ಪ ಬಿಸಿಗೆ ಕರಗೋನು, ಗಾಳಿ ಹಾಕಿದ್ರೆ ಬೇಕಾದ ಆಕಾರಕ್ಕೆ ತಿರುಗೋನು. ಸ್ವಂತ ಬುದ್ಧಿಗಿಂತ ಸಿಟ್ಟಿಗೇ ಜಾಸ್ತಿ ಬೆಲೆ ಕೊಡೋನು. ತಾನೊಮ್ಮೆ ಘರ್ಜಿಸಿದ್ರೆ ಕಾಡೇ ಗಡ ಗಡ ಅನ್ನಬೇಕು ಅಂತ ಬಯಸೋನು. ತನ್ನ ಕಾಡಿಗೆ ಬಂದ ಯಾರೋ ಸ್ವಚ್ಛಂದವಾಗಿ ತಿರುಗೋದು ಅಂದ್ರೆ ಏನು? ಅದ್ರಲ್ಲೂ ಈ ಕಾಡಲ್ಲಿ ಇಷ್ಟು ವರ್ಷಗಳಿಂದ ಇರೋ ಅನಿತಾ , ವನಿತಾರು ಸುಳ್ಲೇಳಕ್ಕೆ ಆಗುತ್ತಾ ಅನಿಸ್ತು. ಚೆಂಗುಮರಿಯನ್ನ ಕರೆದು , ಕಾಡಿಂದ ಹೊರಗಾಕೋದು ಹೆಂಗೆ ಅಂತ ಯೋಚನೆ ಮಾಡೋಕೆ ಶುರು ಮಾಡಿದ.

ತಾವು ಆ ಕಾಡಿಗೆ ಬೇರೆ ಕಡೆಯಿಂದಲೇ ಬಂದಿದ್ವಿ ಅನ್ನೋದು ಅನಿತಾ, ವನಿತಾರಿಗೂ ನೆನಪಿರ್ಲಿಲ್ಲ. ನವನೀತನಿಗೂ ನೆನಪಾಗ್ಲಿಲ್ಲ. ಕೊಂಗೂಸ್, ಚೆಂಗು ಮರಿ ನಿಂತಿದ್ದು ತಪ್ಪು, ಕುಂತಿದ್ದು ತಪ್ಪು, ಹೋಗಿದ್ದು ತಪ್ಪು ಅಂತ ಅನಿತಾ, ವನಿತಾ, ಅಮಿತರು ಎಗರಾಡ್ತಿದ್ರು. ಈ ಕಾಡಿಂದ ಹೊರಗಾಗ್ಬೇಕು ಅಂತ ನವನೀತನಿಗೆ ಹೇಳ್ತಿದ್ರು. ನಾವು ಯಾಕೆ ಬಂದ್ವೋ ಇಲ್ಲಿಗೆ ಅಂತ ಚೆಂಗುಮರಿ ಮತ್ತು ಕೊಂಗೂಸ್ ಪ್ರತೀ ದಿನ ಕೊರಗ್ತಿದ್ರು ಇವ್ರ ಕಾಟಕ್ಕೆ. ಕೊನೆಗೊಂದು ದಿನ ಇವರ ಕಾಟ ತಡೆಯಲಾದರೆ ಕೊಂಗೂಸ್ ಪಕ್ಕದ ಕಾಡಿಗೆ ಹೋಗೋದ್ರೊಂದಿಗೆ ಚೆಂಗುಮರಿಗಿದ್ದ ಏಕೈಕ ಖುಷಿಯೂ ನಿಂತೋಯ್ತು..

ಪ್ರತೀದಿನದ ದುಃಖ, ಅವಮಾನ, ಅಸಹಾಯಕತೆಗಳನ್ನ ಚೆಂಗು ಮರಿ ತಡಕೊಳ್ತಿದ್ಳು. ಕಣ್ಣಂಚಿಗೆ ಬಂದ ನೀರ ಸಾಗರವನ್ನ ಛಲವೆಂಬ ಬೆಂಕಿ ಬತ್ತಿಸಿಬಿಡ್ತಿತ್ತು. ಸ್ವಾಭಿಮಾನಕ್ಕೆ ಧಕ್ಕೆಯಾಗೋ ಈ ಕಾಡಲ್ಲಿ ಯಾಕಿರ್ಲಿ ಅಂತ ಅದೆಷ್ಟು ಸಲ ಚೆಂಗು ಮರಿ ಯೋಚಿಸಿದ್ಲೋ ಗೊತ್ತಿಲ್ಲ. ಆದ್ರೆ ಇವರಿಗೆ ತಾನೇನು ಅಂತ ತೋರಿಸಿಯೇ ಮುಂದೆ ಹೋಗ್ಬೇಕು ಅನ್ನೋ ಛಲದಲ್ಲಿ ಅಲ್ಲೇ ಉಳ್ಕೊಂಡ್ಲು. ಕಾಲಚಕ್ರ ನಿಧಾನಕ್ಕೆ ತಿರುಗ್ತಾ ಇತ್ತು. ಕಾಡಿಂದ ಹೊರಗಾಗ್ಬೇಕು ಅನ್ನೋ ನಿರ್ಣಯಕ್ಕೆ ವಿರುದ್ಧವಾಗಿ ಕಾಡಲ್ಲಿದ್ದ ಶಿವಮ್ಮ ಅನ್ನೋ ಹಸು ಮತ್ತು ಭೈರಪ್ಪ ಜಿರಾಫೆ ಅಡ್ಡ ನಿಂತ್ರು. ಏನೇ ಮಾಡ್ಕೊಂಡ್ರೂ ತನ್ನ ಸುದ್ದಿಗೇನು ಬರ್ತಿಲ್ವಲ್ಲ ಅಂತ ವನಿತಾಳೂ ಸುಮ್ಮನಾಳ್ದು. ಅನಿತಾಗೆ ಏನಾದ್ರೂ ಮಾಡಿ ಇವಳನ್ನು ಹೊರಹಾಕ್ಬೇಕು ಅಂತ ಅನಿಸ್ತಿದ್ರೂ ಸೂಕ್ತ ಬೆಂಬಲವಿಲ್ದೇ , ಸೂಕ್ತ ಅವಕಾಶಕ್ಕಾಗಿ ಹೊಂಚು ಹಾಕ್ತಿದ್ದಳು. ಸಿಕ್ಕ ಸಣ್ಣ ಸಣ್ಣ ಅವಕಾಶಗಳಲ್ಲೂ ಮೈಮೇಲೆರಗಿ ಮುಗಿಸಿ ಬಿಡೋ ಪ್ರಯತ್ನ ಮಾಡ್ತಿದ್ದಳು. ಆದರೆ ಚೆಂಗುಮರಿಯ ಜೀವ ಗಟ್ಟಿಯಿತ್ತು. ಬದುಕಿದಳು ಪ್ರತೀ ಬಾರಿ.

ಕಾಲ ಚಕ್ರ ಮತ್ತೆ ಉರುಳುತ್ತಿತ್ತು. ಕಾಡಿನ ಬೇಟೆಗಾರರು ಹಾಕಿದ ಬಲೆಗೆ ಸಿಕ್ಕು ನವನೀತ ತಾನೇ ಹೊರಸಾಗಿದ್ದ. ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ಯಾರನ್ನೋ ಹೊರಹಾಕಲು ಹೋಗಿದ್ದ ಆತನನ್ನೇ ವಿಧಿ ಕಾಡಿಂದ ಹೊರಹಾಕಿತ್ತು ! ಜಗಳ ಕಾಯೋಕೆ ಸದಾ ಕಾಯ್ತಿದ್ದ ಅನಿತಾ ವನಿತಾರಿಗೆ ಚೆಂಗುಮರಿಯ ಜೊತೆಯ ಜಗಳ ಬೇಸರ ತರಿಸಿತ್ತು. ಇವರಿಗೆ ಜಗಳವಾಡಲು ವಿಷಯ ಕೊಟ್ಟರೆ ತಾನೇ ಚೆಂಗು ಮರಿ ! ತನ್ನ ಪಾಡಿಗೆ ತಾನಿರುತ್ತಾ, ಕಾಡಿನ ನಿಯಮಗಳ ಚೆನ್ನಾಗಿ ಪಾಲಿಸುತ್ತಿದ್ದ ಅವಳ ಮೇಲೆ ಹರಿಹಾಯಲು ಇವರಿಗೆ ವಿಷಯಗಳೂ ಸಿಗ್ತಿರಲಿಲ್ಲ. ಆದ್ರೆ ಜಗಳದ ಚಪಲ ತಾಳಬೇಕೇ ? ಎಷ್ಟೋ ದಿನಗಳಿಂದ ಬಚ್ಚಿಟ್ಟಿದ್ದ ಪರಸ್ಪರ ಧ್ವೇಷ, ಅಸಹನೆಗಳು ಭುಗಿಲೇಳತೊಡಗಿದವು. ಚೆಂಗುಮರಿಯ ಮೇಲೆ ಬೀಳ್ತಿದ್ದ ಇವರು ಈಗ ಪರಸ್ಪರ ಕಚ್ಚಾಡತೊಡಗಿದರು. ನವನೀತನ ನಿರ್ಗಮನದಿಂದ ತೆರವಾಗಿದ್ದ ಕಾಡಿನ ರಾಜನ ಸ್ಥಾನವನ್ನು ಆಕ್ರಮಿಸುವ ಚಪಲ, ಅದಕ್ಕಾಗೇ ನಡೆಸಿದ ವರ್ಷಗಳ ತಂತ್ರಗಾರಿಕೆ ಕೊನೆಗೂ ಕೈಗೂಡೋ ಕ್ಷಣದಲ್ಲಿ ಯಾವ ಪ್ರಯತ್ನವನ್ನೂ ಬಿಡಬಾರದು ಅಂತ ಶಕ್ರಿಮೀರಿ ಕಚ್ಚಾಡತೊಡಗಿದರು.
ಅನಿತಾ, ವನಿತಾರು ಈ ರೀತಿ ಕಚ್ಚಾಡುತ್ತಿದ್ದರೆ ಅವರ ಮಧ್ಯೆ ತಂದಿಟ್ಟಿದ್ದ ಅಮಿತ ದೂರದಿಂದಲೇ ನೋಡಿ ಖುಷಿ ಪಡುತ್ತಿದ್ದ. ಅವನಿಗೂ ಕಾಡಿನ ರಾಜನಾಗುವ ಉಮೇದಿತ್ತೆಂದು ಹೇಳಬೇಕಾಗಿಲ್ಲ ತಾನೇ ? ಯಾರಿಗೋ ಒಳ್ಳೆಯದು ಮಾಡಿದ್ರೆ ನಮಗೆ ತಕ್ಷಣಕ್ಕೆ ಒಳ್ಳೆಯದಾಗದೇ ಇರಬಹುದಂತೆ. ಆದರೆ ಯಾರಿಗಾದರೂ ಕೆಟ್ಟದ್ದನ್ನು ಬಯಸಿದರೆ ಸದ್ಯದಲ್ಲೇ ಅದು ಬಡ್ಡಿ ಸಮೇತ ವಾಪಾಸ್ ಬರುತ್ತಂತೆ ! ಎಲ್ಲರಿಗೂ ಒಳ್ಳೆಯದು ಬಯಸಿದ ಚೆಂಗುಮರಿ ತನ್ನ ಪಾಡಿಗೆ ಕಾಡಿನ ಮೂಲೆಯೊಂದರಲ್ಲಿ ಮೇಯುತ್ತಿತ್ತು. ಅದರ ವಿರುದ್ಧ ಕತ್ತಿ ಮಸೆದವರೆಲ್ಲರೂ ತಾವೇ ಪರಸ್ಪರ ಕಚ್ಚಾಡುತ್ತಾ ತಮ್ಮ ನಾಶದಲ್ಲಿ ತೊಡಗಿದ್ದರು.

ಬರೆಯೋ ಸೋಂಬೇರಿತನದಲ್ಲೂ ಹಿಂದೆ ಬಿದ್ದು ಇಷ್ಟುದ್ದ ಬರೆಯೋಕೆ ಸ್ಪೂರ್ತಿ ನೀಡಿದ ಅರ್ಧಾಂಗಿಗೆ ಒಂದು ಧನ್ಯವಾದ

Wednesday, July 10, 2019

ಕಳೆದು ಹೋದ ಕತೆ

ಮನೆಯ ಹಿತ್ತಲ ಹಳ್ಳದಲ್ಲಿ ನೀರುಕ್ಕಿದೆ ಪ್ರಭು ಅಂತ ಅಮ್ಮ ಹೇಳ್ತಾ ಇದ್ರೆ ಬೆಂಗಳೂರಲ್ಲಿರೋ ಮಗನ ಕಣ್ಣಲ್ಲಿ ಏನೋ ಪುಳಕ. ಪಕ್ಕದ ಮನೆಯವ ಬೋರು ತೆಗೆಸಿದ ದಿನದಿಂದಲೇ ಬತ್ತಿ ಹೋಗಿದ್ದ ಅಕ್ಕಿಹೊಳೆ ಜೋರು ಮಳೆಗಾಲದಲ್ಲೆಲ್ಲಾದರೂ ಒಮ್ಮೊಮ್ಮೆ ತನ್ನ ಇರುವಿಕೆಯನ್ನು ಸಾರುತ್ತಿತ್ತು. ಒಂದಾನೊಂದು ಕಾಲದಲ್ಲಿ ನದಿಯಿತ್ತು ಎಂಬ ಕುರುಹನ್ನೇ ಬಿಡದಂತೆ ನದೀಪಾತ್ರವನ್ನು ಒತ್ತುವರಿ ಮಾಡಿ ಬೆಳೆಸಿದ ಗದ್ದೆಗಳ ಮೇಲೆ ಹರಿದು, ಸ್ವಲ್ಪ ಹೊತ್ತು ನಿಂತಿದ್ದು ನಂತರ ಹರಿಯುವಿಕೆಯನ್ನು ಮುಂದುವರಿಸುತ್ತಿದ್ದಳು ಅಕ್ಕಿಹೊಳೆ. ಮುಂಚೆಯೆಲ್ಲಾ ಮಳೆಗಾಲದ ಹಲವು ದಿನ ದೂರದೂರದ ಗದ್ದೆಗಳ ಮೇಲೂ ಅಕ್ಕಿಹೊಳೆ ನಿಂತಿರುತ್ತಿದ್ದಳಂತೆ. ಆಕೆಯ ರಭಸಕ್ಕೆ ಊರ ಸಂಪರ್ಕಿಸೋ ಸೇತುವೆ ಮುಳುಗಿ , ಗದ್ದೆಯೇರುಗಳೆಲ್ಲಾ ಕೊಚ್ಚಿ ಹೋಗುತ್ತಿದ್ದವಂತೆ. ಅಕ್ಕಿಹೊಳೆ ತುಂಬಿದಳು ಅಂದರೆ ಸಂಪರ್ಕಸೇತುವೇ ಮುಳುಗೋದ್ರಿಂದ ಮಕ್ಕಳಿಗೆಲ್ಲಾ ಖುಷಿಯೋ ಖುಷಿ. ಶಾಲೆಯ ಪಾಠಿ ಚೀಲಗಳನ್ನು ಬದಿಗೆಸೆದು,ಕಂಬಳಿ ಕೊಪ್ಪೆಗಳ ಜಗುಲಿಗಿಟ್ಟು ಇಡೀ ದಿನ ಅಜ್ಜಿ ಜೊತೆ ಆಡುತ್ತಿದ್ದ ಪಗಡೆಯೇನು, ಅಮ್ಮನ ಹಿಂದೆ ಬಿದ್ದು ತಿನ್ನುತ್ತಿದ್ದ ಹಪ್ಪಳ, ಚಿಪ್ಸುಗಳೇನು .. ಆಹಾ ? ಅದೇ ಸ್ವರ್ಗ . ಬಿಟ್ಟರೆ ಹೊರಗೆ ಮಳೆಯಲ್ಲೇ ಆಡಿಬಿಡುತ್ತಿದ್ದರೇನೋ . ಮಳೆ ಸ್ವಲ್ಪ ನಿಂತ ಮೇಲೆ ಮರಗಳಿಂದ ತೊಟ್ಟಿಕ್ಕೋ ಹನಿಗಳ ಜೊತೆ ಆಡೋದೋ ? ಅಪ್ಪನ ಇಂಗುಗುಂಡಿಗಳು ತುಂಬ್ತಾ ಇಲ್ವಾ ನೋಡೋದು ? ಚಿಗುರ್ತಿರೋ ಹುಲ್ಲುಗಳ ನಡುವೆ ರೇಷ್ಮೆ ಹುಳವೇನಾದ್ರೂ ಸಿಗಬಹುದಾ ಎಂಬ ಹಲವು ಆಸೆಗಳ ನಡುವೆ ಬೆಚ್ಚಗೆ ಕಂಬಳಿ ಕೊಪ್ಪೆ ಹೊದೆದು ತುಂಬಿ ಹರಿಯೋ ಅಕ್ಕಿಹೊಳೆಯ ಸೌಂದರ್ಯ ನೋಡೋ ಆಸೆ ಬೇರೆ. ಆದರೇನು ಮಾಡೋದು ? ಅಪ್ಪನ ಕಣ್ಣು ತಪ್ಪಿಸಿ ಹೊರ ಹೊರಟರೂ ಎದುರಿಗೆ ಯಾರಾದ್ರೂ ಸಿಕ್ಕು ಬಯ್ಯಬೇಕೇ ? ಮಾತುಗಳು ಏಟಾಗೋ ಮುಂಚೆ ಒಳಸೇರೋದು ಬುದ್ದಿವಂತಿಕೆ ಅಂತ ಹಿಂದಿನ ಅನುಭವಗಳು ಹೇಳ್ತಿದ್ವು.

ನಿಧಾನವಾಗಿ ಬಾಲ್ಯ ಕರಗಿ ಓದು, ಹೊಟ್ಟೆಪಾಡಿಗಂತ ಮಕ್ಕಳೆಲ್ಲಾ ಪಟ್ಟಣ ಸೇರೋ ಹೊತ್ತಿಗೆ ಅಕ್ಕಿಹೊಳೆಯೂ ಕರಗಿ ಹೋಗಿದ್ದಳು. ಇಂದು ದಿನಗಟ್ಟಲೇ ಗದ್ದೆಗಳ ಮೇಲೆ ತುಂಬಿ ಹರಿಯೋದು, ಸೇತುವೆ ಮುಳುಗೋದು, ಅದಕ್ಕಾಗಿ ಶಾಲೆಗೆ ರಜಾ ಕೊಡೋದು ಎಲ್ಲಾ ನೆನಪು ಪಾತ್ರ. ಎತ್ತಿನ ಹೊಳೆ ಯೋಜನೆ ಎಂದ ಸರ್ಕಾರ, ಶರಾವತಿಯ ಬುಡಕ್ಕೂ ಕೈ ಹಾಕೋಕೆ ಹೋಗಿತ್ತು. ಎಲ್ಲೋ  ಶರಾವತಿಗೆ ಸೇರೋ ಅಕ್ಕಿಹೊಳೆಗೆ ಶರಾವತಿಯೇ ಇಲ್ಲದಿದ್ದರೆ ಏನಾದೀತು ? ಶರಾವತಿಯಂತ ನದಿಗಳಿಂದ ಹಸಿರ ಸಿರಿಗೆ ಮತ್ತು ವಾತಾವರಣಕ್ಕೆ ಸಿಕ್ಕ ನೀರಿನಂಶನಿಂದ ಕೆಲದಿನಗಳಾದರೂ ಜೀವಂತವಿರೋ ಅಕ್ಕಿಹೊಳೆಯಂತ ತೊರೆಗಳ ಕತೆ ಈ ಮಂಗಾಟಗಳಿಂದ ಏನಾಗಬಹುದು ಎಂಬ ಚಿಂತೆ ಪ್ರಭುವಿಗೆ ದಿನೇ ದಿನೇ ಕಾಡುತ್ತಿತ್ತು.  ಹೆಚ್ಚುತ್ತಿರೋ ಭೂತಾಪ ಮತ್ತು ಜನರ ದುರಾಸೆಗಳಿಂದ ವರ್ಷದ ಕೆಲ ದಿನಗಳಲ್ಲಿ ಮಾತ್ರ ಬದುಕಿರೋ ಅಕ್ಕಿಹೊಳೆಯಂತಹ ಜೀವ ತೊರೆಗಳು ಮುಂದೆ ಶಾಶ್ವತವಾಗಿ ಬತ್ತಿ ಹೋಗಬಹುದೇನೋ ಎಂಬ ದಿಗಿಲೂ ಶುರುವಾಯ್ತು.

ಆಫೀಸು, ಟ್ರಾಫಿಕ್ಕು, ಡೆಡ್ಲೈನುಗಳೆಂಬ ಚಿಂತೆಗಳಲ್ಲೇ ರಾತ್ರಿಯಾಗಿ , ಬೆಳಗಾದರೆ ಕ್ಲೈಂಟು, ಬಾಸು ಯಾವ ವಿಷಯಕ್ಕೆ ಬೈತಾರೋ ಎಂಬ ಭಯಗಳಲ್ಲೇ ಬೆಳಗಾಗುತ್ತಿತ್ತು ಪ್ರಭುವಿಗೆ. ಬೆಳಗಾದರೆ ಶುರುವಾಗೋ ಕೆಲಸಗಳ ಲೆಕ್ಕ ವಾರಾಂತ್ಯ ಬಂದರೂ ಚುಕ್ತವಾಗುತ್ತಿರಲಿಲ್ಲ. ಇಂತಹದರಲ್ಲಿ ಬಂದ ಅಮ್ಮನ ಕರೆ ಪ್ರಭುವನ್ನ ಬಡಿದೆಬ್ಬಿಸಿತ್ತು. ಇಲ್ಲಿರೋದು ಸುಮ್ಮನೇ, ಅಲ್ಲಿರೋದು ನಮ್ಮನೆ ಅಂತ ಬಂದ ವಾರಾಂತ್ಯದಲ್ಲಿ ಮನೆಗೆ ಹೋಗೋ ಕನಸು ಕಾಣಹತ್ತಿದ.

ಮನೆಗೆ ಹೋಗೋಕೆ ರೈಲು ಬುಕಿಂಗ್ ಸಿಕ್ಕೋಲ್ಲ. ತತ್ಕಾಲಲ್ಲಿ ಬುಕ್ ಮಾಡ್ಕೋಳ್ಳೋಕೆ ಅದೇ ಸಮಯದಲ್ಲಿ ದಿನಾ ಮೀಟಿಂಗ್ ಇರುತ್ತೆ. ಪ್ರೈವೇಟ್ ಬಸ್ಸಿಗೆ ಹೋಗೋಣ ಅಂದ್ಕೊಂಡ್ರೆ ಅವ್ರು ಹೇಳಿದ ಸಮಯಕ್ಕೆ ಹೊರಡೋಲ್ಲ, ಕಾಯಿಸಿ ಕಾಯಿಸಿ ಜೀವ ತಿಂತಾರೆ. ಸರ್ಕಾರಿ ಬಸ್ಸಿಗೆ ಹೋಗೋಣ ಅಂದ್ಕೊಂಡ್ರೆ ಮೆಜೆಸ್ಟಿಕ್ವರೆಗೆ ಹೋಗೋದೇ ಸಮಸ್ಸೆ. ಬೈಕಲ್ಲಾದರೂ ಹೋಗೋಣ ಅಂದ್ರೆ ಅಷ್ಟು ದೂರ ಯಾರಾದ್ರೂ ಹೋಗ್ತಾರೆ ಅನಿಸುತ್ತೆ. ಸರಿ ರೈಲಿಗೆ ಹೋಗೋಣ ಆರಾಮಾಗಿ ಅಂದರೆ... ಅಂತ ಎಂದೂ ಮುಗಿಯದ ಗೊಂದಲ ವರ್ತುಲಕ್ಕೆ ಬೀಳ್ತಿದ್ದ ಮನಸ್ಸಿಗೆ ಹೆಂಗೋ ಸಮಾಧಾನ ಮಾಡಿ ಸಿಕ್ಕಿದ ಬಸ್ಸಿಗೆ ಹೆಂಗೋ ಹೊರಟರಾಯ್ತು ಅಂತ ಮೆಜೆಸ್ಟಿಕ್ಕಿಗೆ ಹೊರಟಿದ್ದ. ಅಲ್ಲಿಗೆ ಬರೋ ಹೊತ್ತಿಗೆ ಊರ ಕೆಂಪ ಬಸ್ಸೇ ಸಿಗಬೇಕೇ ? ಹೊರಡೋದು ೨೦ ನಿಮಿಷ ಆಗುತ್ತೆ ಅಂದರೂ ಪರವಾಗಿಲ್ಲವೆಂದು ಹತ್ತಿ ಟಿಕೇಟು ಮಾಡಿಸಿದವಗೆ ಸೀಟಲ್ಲಿ ಒರಗಿದ್ದೊಂದೇ ಗೊತ್ತು.

ಅದೆಷ್ಟು ಹೊತ್ತು ಹಾಗೇ ಮಲಗಿದ್ದನೋ ಗೊತ್ತಿಲ್ಲ. ಯಾಕೋ ಕಾಲು, ಮೈಯೆಲ್ಲಾ ಒದ್ದೆಯಾದಂತೆನಿಸಿ ಕಣ್ಣು ಬಿಟ್ಟರೆ ಎಲ್ಲೋ ಗಟ್ಟಿ ವಸ್ತುವೊಂದರ ಮೇಲೆ ಮಲಗಿದ್ದ ಪ್ರಭು! ಕೈಕಾಲುಗಳಿಗೆ ತಾಕುತ್ತಾ ಹರಿಯುತ್ತಿದೆ ನೀರು !  ಹಿಂದಿನ ರಾತ್ರಿ ಬಸ್ಸು ಹತ್ತಿದ್ದೆನಲ್ಲಾ , ಈಗ ಇಲ್ಲಿಗೆ ಹೇಗೆ ಬಂದೆ ಅಂತ ಒಮ್ಮೆ ಯೋಚಿಸಿದನಾದರೂ ಏನೂ ನೆನಪಾಗುತ್ತಿಲ್ಲ. ತಾನು ಎಲ್ಲಿದ್ದೇನೆ,ಎಂತ ಕತೆ ಎಂದು ನೋಡೋಣವೆಂದರೆ ಸುತ್ತಲು ಕತ್ತಲಷ್ಟೆ. ಅತ್ತಲಿತ್ತ , ಎಲ್ಲೆಡೆಗೂ ನೀರೇ ನೀರು. ಮೇಲ್ಗಡೆ ಕಣ್ಣು ಹಾಯಿಸಿದರೆ ಸಗಣಿ ಹಾಕಿ ಸಾರಿಸಿದ ಕರಿಯಂಗಳದ ಮೇಲೆ ರಂಗೋಲಿಗೆ ಚುಕ್ಕಿಯಿಟ್ಟಂತೆ ತಾರೆಗಳು.ಮಧ್ಯದಲ್ಲೆಲ್ಲೋ ರಂಗೋಲಿ ಬಟ್ಟಲಿಟ್ಟಂತೆ ಚಂದ್ರ. ಆಗಾಗ ವಟರುಗುಟ್ಟೋ ಕಪ್ಪೆ ಮತ್ತು ಜೀಂಕರಿಸೋ ಜೀರುಂಡೆಗಳ ಸದ್ದು, ಹರಿಯೋ ನೀರಿನ ಸದ್ದು ಬಿಟ್ಟರೆ ಬೇರೇನೋ ಕೇಳದ ನೀರವ ರಾತ್ರಿ. ಅತ್ತ ಇತ್ತ ದಿಟ್ಟಿಸುತ್ತಿದ್ದ ಪ್ರಭುವಿಗೆ ಆ ಇರುಳ ಚಂದ್ರನ ಬೆಳಕಲ್ಲಿ ತಾನು ಮಲಗಿರೋದು ನೀರ ಮಧ್ಯದ ಬಂಡೆಯ ಮೇಲೆ ಅಂತ ತಿಳಿಯಹತ್ತಿತು. ಆದರೆ ಅಲ್ಲಿಂದ ದಡಕ್ಕೆ ಹೋಗೋಣ ಎಂದರೆ  ರಾತ್ರಿಯ ಮಂಜಲ್ಲಿ, ಮಸುಕು ಬೆಳಕಲ್ಲಿ ಹತ್ತಿರದಲ್ಲೇನೂ ದಡ ಕಾಣಿಸುತ್ತಿಲ್ಲ. ಕೈಕಾಲುಗಳನ್ನ ನೀರಿಂದ ಸ್ವಲ್ಪ ಕೆಳಗೆ ಹಾಕಿ ನೋಡಿದರೂ ಯಾವ ನೆಲವೂ ಸಿಗುತ್ತಿಲ್ಲ ! ಅಲ್ಪ ಸ್ವಲ್ಪ ಈಜು ಬಂದರೂ ಎತ್ತಲಂತ ಈಜೋದು ಗೊತ್ತು ಗುರಿಯಿಲ್ಲದೇ ? ಕೈಕಾಲುಗಳಷ್ಟೇ ಅಲ್ಲ, ತಲೆ, ಮೈಯೂ ಒದ್ದೆಯಾಗಿದೆ ಅಂತ ಗೊತ್ತಾದರೂ ಏನೂ ಮಾಡಲಾಗದ ಪರಿಸ್ಥಿತಿ. ಒಂದೆಡೆ ಮಂಜ ತಂಪು. ಮತ್ತೊಂದೆಡೆ ಹರಿವ ನೀರು ನೆನೆಸಿದ ತಂಪು. ಎರಡೂ ಸಾಲದೆಂಬಂತೆ ಇನ್ನಷ್ಟು ಚಳಿ ಹುಟ್ಟಿಸುವಂತಿರುವ ಬಂಡೆ ಬೇರೆ ! ಆದರೆ ಆ ಬಂಡೆ ಬಿಟ್ಟಿಳಿದರೂ ಎಲ್ಲಿಳಿಯೋದು ? ಹೋದರೂ ಎಲ್ಲಿಗೆ ಹೋಗೋದು ? ಬೆಳಕಾಗೋವರೆಗೆ ಕಾಯೋಣವೆಂದರೂ ಇನ್ನೆಷ್ಟು ಹೊತ್ತು ಕಾಯೋದು ? ಒಮ್ಮೆ ಟೈಟಾನಿಕ್ ಸಿನಿಮಾ ನೆನಪಿಗೆ ಬಂತು ಪ್ರಭುಗೆ. ಹಿಮಬಂಡೆಗೆ ಡಿಕ್ಕಿ ಹೊಡೆದ ಹಡಗಿನಲ್ಲಿ ನಾಯಕ ನಾಯಕಿಗೋಸ್ಕರ ಚಳಿಯ ನೀರಿನಲ್ಲೇ ರಾತ್ರಿಯವರೆಗೂ ಕಳೆಯುತ್ತಾ ಸಾಯೋದು ನೆನಸಿ ತನಗೂ ಅದೇ ಕತೆ ಬರುತ್ತಾ ಅಂತನಿಸ್ತು. ಆ ಆಲೋಚನೆಯೇ ಗಾಬರಿ ಹುಟ್ಟಿಸಿದ್ರೂ ಮರು ಕ್ಷಣದಲ್ಲೇ ನನಗೆಲ್ಲಿಯ ಹುಡುಗಿ, ನಾ ನೀರ ಕೆಳಗೆಲ್ಲಿದ್ದೇನೆ? ಇರೋದು ಬಂಡೆಯ ಮೇಲಲ್ವಾ ? ಬೆಳಗೊರಿಗೆ ಕಾದರೆ ನನ್ನ ಕೈಕಾಲು ಮರಗಟ್ಟಿದ್ರೂ ಸಾವೇನೂ ಬರೋಲ್ಲ ಅನ್ನೋ ಭರವಸೆ ಮೂಡಿತು !  ಆದ್ರೂ ಕೈಕಾಲು ಮರಗಟ್ಟೋದು ಅಂದ್ರೆ .. ? ಮೇರು ಅನ್ನೋ ಡಾಕ್ಯುಮೆಂಟರಿ ಚಿತ್ರ ನೋಡುತ್ತಾ ಅದರಲ್ಲಿ ಹಿಮಾಲಯದ ಮೇರು ಅನ್ನೋ ದುರ್ಗಮ ಪರ್ವತ ಏರೋಕೆ ಹೋಗಿ ಹಿಮಪಾತಕ್ಕೆ ಸಿಲುಕಿ ಕೈಕಾಳು ಮರಗಟ್ಟೋ ಸ್ಥಿತಿಯಲ್ಲಿ ಸ್ನೇಹಿತರು ಸಿಕ್ಕಿ ಹಾಕಿಕೊಳ್ಳೋದು, ನಂತರ ದೈವ ದಯದಿಂದ ಬೇರೊಂದು ಚಾರಣಿಗರ ಸಹಾಯದಿಂದ ಅವರು ಬದುಕಿ ಬರೋದು ನೆನಪಾಗುತ್ತೆ ! ತನಗೂ ಅಂತಹ ಸ್ಥಿತಿ .. ? ಛೆ. ಛೆ. ಹಾಗೇನೂ ಆಗಲಾರದು ಎಂಬ ಸಮಾಧಾನ ಮರುಕ್ಷಣ.. ತುಸು ಹೊತ್ತಿಗೆ ಅಲ್ಲಿ ಹಾರಿಹೋಗೋ ಬಾವಲಿಗಳ ಹಿಂಡು ಕಂಡು ಮತ್ತೇನೋ ಆಲೋಚನೆ.. ಅಲ್ಲಿದ್ದ ಪರಿಸ್ಥಿತಿಗಳಿಗಿಂತ ತನ್ನ ಆಲೋಚನಾಲಹರಿಯೇ ತನ್ನ ಜಾಸ್ತಿ ಕಾಡುತ್ತಾ ಇದೆಯಾ ಅನ್ನೋ ಅನುಮಾನ ಶುರುವಾಯ್ತು ಪ್ರಭುವಿಗೆ.

ಯಾವುದೋ ಚಾರಣಕ್ಕೆ ಬಂದ ಸಂದರ್ಭದಲ್ಲಾದರೆ ಈ ತರಹ ಸಿಕ್ಕ ಜಾಗವನ್ನ ಆಸ್ವಾದಿಸುತ್ತಾ ರಾತ್ರಿಯೆಲ್ಲಾ ಅಲ್ಲಿಯೇ ಕಳೆದು ಬಿಡುತ್ತಿದ್ದನೇನೋ  ಪ್ರಭು. ಆದರೆ ಈಗ ತಾನೆಲ್ಲಿದ್ದೇನೆ , ಹೇಗೆ ಬಂದೆ ಎಂಬುದೇನೂ ಅರಿಯದ ಗೊಂದಲದಲ್ಲಿ ಅವ್ಯಕ್ತ ಭಯ ಕಾಡೋಕೆ ಶುರುವಾಗಿತ್ತು ಪ್ರಭುವಿಗೆ. ಮೊದಲು ಚೆಂದವೆನಿಸಿದ್ದ ಶಶಿಯ ಬಳಗವೇ ಈಗ ಬೇಸರವೆನಿಸಿತ್ತು. ಈ ತಾರೆಯೇಕೆ ಇಷ್ಟು ಮಿನುಗುತ್ತೆ ? ಈ ಚಂದ್ರನೇಕೆ ಮೋಡದ ಮರೆಗೆ ಹೋಗಿ ನನಗೆ ಮಲಗೋಕೆ ಬಿಡೋಲ್ಲ. ಇನ್ನೇನು ನಿದ್ರೆ ಹತ್ತಿತು ಅನ್ನೋ ಹೊತ್ತಿಗೆ ಈ ಉಲ್ಕೆಯೇಕೆ ಮೈಮೇಲೇ ಬೀಳುವಂತೆ ಬಂದು ಬೀಳುತ್ತೆ ? ಈ ಬಾವಲಿ ಹಿಂಡು ಈಗಲೇ ಹಾರಬೇಕಾ ಅನಿಸತೊಡಗಿತ್ತು. ಆದರೆ ಈ ಪ್ರಶ್ನೋತ್ತರಗಳ ನಡುವೆ ತನ್ನೂರ ಅಕ್ಕಿಹೊಳೆ ನೆನಪಾಗಿ ಕೊಂಚ ಹಿತವೆನಿಸತೊಡಗಿತು. ಅಕ್ಕಿಹೊಳೆಯಲ್ಲಿ ನೀರಿಳಿಯುತ್ತಿದ್ದ ಬೇಸಿಗೆಯಲ್ಲಿ ಅದರಲ್ಲಿ ಈಜುತ್ತಿದ್ದುದು , ನೀರು ಕಮ್ಮಿ ಅಂದುಕೊಂಡು ಕಾಲಿಟ್ಟಲ್ಲಿ ಕಾಲು ಹುಗಿದು ಮುಳುಗೋಗಾಕಿ ಈಜಿದ್ದು, ನೀರು ಹೆಚ್ಚಿರಬಹುದು ಅಂತ ಈಜೋಕೆ ಹೋಗಿ ಕೈಯನ್ನು ಬಂಡೆಗೆ ಹೊಡೆಸಿಕೊಂಡಿದ್ದು ನೆನಪಾಗಿ ನಗು ಬರುತ್ತಿತ್ತು. ಅಕ್ಕಿಹೊಳೆಯಲ್ಲಿ ಈಗ ಸ್ವಚ್ಛ ಬಿಳಿ ನೀರಿರಬಹುದೇ ಅಥವಾ ಮೊದಲ ಮಳೆಯ ಕೆಂಪಿರಬಹುದೇ ಅನ್ನೋ ಕುತೂಹಲ. ಅದನ್ನೆಲ್ಲಾ ಕೇಳಲೇ ಇಲ್ಲವಲ್ಲ ಅಮ್ಮನ ಹತ್ತಿರ ಛೇ ಅನ್ನಿಸ್ತು! ನಗರದಲ್ಲಿ ಪ್ರತಿಭಟನೆ ಮಾಡಿದ್ರಂತೆ, ಶಿವಮೊಗ್ಗ ಬಂದಂತೆ ನಾಳೆ ಶರಾವತಿಯ ಪ್ರತಿಭಟನೆಗೆ ಅಂತ ನೆನಪಿಗೆ ಬಂತು. ಇಲ್ಲೆಲ್ಲೋ ನೀರ ಮಧ್ಯ ಮಲಗಿಕೊಂಡ್ರೂ ಅಕ್ಕಿಹೊಳೆ ನೆನಪಾಗ್ತಿದೆಯಲ್ಲೋ ನಿನಗೆ ಹುಚ್ಚಪ್ಪಾ ಅಂತ ಒಂದು ಮನಸ್ಸು ಲೇವಡಿಯಾಡಿದ್ರೂ ಸದ್ಯದ ಪರಿಸ್ಥಿತಿಯ ತೊಂದರೆಗಳ ಬಗೆಗಿನ ಯೋಚನೆಗಳಿಗಿಂತ ಅಕ್ಕಿಹೊಳೆಯ ನೆನಪುಗಳೇ ಮಧುರ ಅನ್ನಿಸಿ ಮನಸ್ಸನ್ನು ಮತ್ತೆ ಅತ್ತಲೇ ಹೊರಳಿಸಿದ ಪ್ರಭು. ಮತ್ತೆ ನಿದ್ದೆ ಹತ್ತಿತು ಅಂತ ಕಾಣಿಸುತ್ತೆ.

ಅದೆಷ್ಟೋ ಹೊತ್ತಾದ ನಂತರ ಎಲ್ಲೋ ಸ್ವಲ್ಪ ಬೆಳಕು ಕಂಡಂತೆ ಆಯ್ತು. ಅಂತೂ ಬೆಳಕಾಯ್ತಾ ಅಂತ ಕಣ್ಣು ಬಿಡೋ ಪ್ರಯತ್ನದಲ್ಲಿರುವಾಗ ಅಂಬಿಗನೊಬ್ಬ ತನ್ನ ತೆಪ್ಪದಲ್ಲಿ ನಿಂತು ತನ್ನತ್ತ ಕೈ ಮಾಡಿ ತನಗೆ ಏನೋ ಹೇಳುತ್ತಿರುವಂತೆ ಭಾಸವಾಯ್ತು. ಕ್ರಮೇಣ ಆ ಅಂಬಿಗನ ಆಕೃತಿ ಹತ್ತಿರವಾಗ್ತಾ ಬಂದ್ರೂ ಆತ ಏನು ಹೇಳ್ತಿದ್ದಾನೆ ಅನ್ನೋದು ಸ್ವಷ್ಟವಾಗ್ತಿರಲಿಲ್ಲ. ಅಂತೂ ನನ್ನ ಸಹಾಯಕ್ಕೆ ಬಂದ್ರಾ ಥ್ಯಾಂಕ್ಸ್ ಅಂತ ತಾನೇ ಮೊದಲು ಮಾತಿಗೆ ಶುರು ಮಾಡಿದ ಪ್ರಭು, ಥ್ಯಾಂಕ್ಸಾ ಅಂದ ಅಂಬಿಗ. ಏನಪ್ಪಾ ಅಂತ ಮತ್ತೆ ಕಣ್ಣು ಮಿಟಿಕಿಸೋವಷ್ಟರಲ್ಲಿ  ಥ್ಯಾಂಕ್ಸ್ ಏನು ಸಾರ್ ? ಇದೇ ಕೊನೆ ಸ್ಟಾಪು ಏಳಿ. ಬಸ್ಸಲ್ಲಿರೋರೆಲ್ಲಾ ಇಳ್ದಾಯ್ತು. ನಿಮ್ಮನ್ನಿಳಿಸಿ , ಬಸ್ಸನ್ನ ಡಿಪೋಗೆ ಹಾಕಿ ನಾವೂ ಮಲ್ಕೋಬೇಕು , ಏಳೇಳಿ ಬೇಗ ಅಂದ ಎದುರಿದ್ದವ. ಡಿಪೋನ ಅನ್ನೋ ಹೊತ್ತಿಗೆ ಕಣ್ಣ ಮುಂದಿದ್ದ ಅಂಬಿಗನ ಚಿತ್ರಣ ಬದಲಾಗುತ್ತಾ ಆತ ಖಾಕಿ ಬಣ್ಣ ಧರಿಸಿದ್ದ ಹಿಂದಿನ ರಾತ್ರಿ ಟಿಕೇಟ್ ಕೊಟ್ಟ ಕಂಡೆಕ್ಟರ್ ಆಗಬೇಕೇ ? ! ಎಲ್ಲಿ ಅಂಬಿಗ, ಎಲ್ಲಿ ಕಂಡೆಕ್ಟರ್ ಅಂತ ಅಂದ್ಕೊಳ್ಳೋ ಹೊತ್ತಿಗೆ, ಸಾರ್, ಏಳಿ ಬೇಗ ಅಂತ ಕೈಹಿಡಿದು ಎಬ್ಬಿಸೋಕೆ ಬಂದನವ. ಬಂದವನೇ ಒದ್ದೆಯಾಗಿದ್ದ ಸೀಟು, ಸ್ವಲ್ಪ ಒದ್ದೆಯಾಗಿದ್ದ ಬಲತೋಳು ನೋಡಿ, ಸಾರ್ ನಿಮಗೆ ಇನ್ನೂ ನಿದ್ದೆಗಣ್ಣು ಅನಿಸುತ್ತೆ. ನಿದ್ದೆ ಭರದಲ್ಲಿ  ನಿನ್ನೆಯ ಮಳೆಗೆ ಕಿಟಕಿ ಸ್ವಲ್ಪ ತೆರೆದು ಒಳಗೆ ನೀರು ನುಗ್ಗಿದ್ದೂ ಗೊತ್ತಿಲ್ಲ, ನಿಮ್ಮ ಮೈ ತೋಳು ಒದ್ದೆಯಾಗಿದ್ದೂ ಗೊತ್ತಿಲ್ಲ. ಒಳ್ಳೆ ನಿದ್ದೆ ನಿಮ್ಮದು ಅಂತಿದ್ರೆ ಡ್ರೈವರು ಹಿಂದೆ ತಿರುಗಿ ಹೆ ಹೆ ಹೆ ಅಂತಿದ್ದ. ಹೌದಾ ಅಂತ ಸುತ್ತ ತಿರುಗಿದ್ರೆ ಪಕ್ಕದಲ್ಲಿದ್ದ ನೀರೂ ಇಲ್ಲ, ಕೆಳಗೆ ಬಂಡೆಯೂ ಇಲ್ಲ. ತಾನಿದ್ದಿದ್ದು ಬಸ್ಸ ಸೀಟ ಮೇಲೇ ಅಂತ ಪ್ರಭುವಿಗೆ ಅರಿವಾಗ್ತಿತ್ತು. ಮೇಲೆ ನೋಡಿದ್ರೆ ಆಕಾಶದ ಬದಲು ಬಸ್ಸ ಟಾಪು ! ಹಂಗಾದ್ರೆ ಇಷ್ಟರವರೆಗೆ ತನಗಾದದ್ದು  ? !! ಮೇಲೆ ಕಣ್ಣು ಹಾಯಿಸುವ ಹೊತ್ತಿಗೆ ಕೈಗೆ ಸಿಕ್ಕ ತನ್ನ ಬ್ಯಾಗು ತೆಗೆದುಕೊಂಡು ಕೆಳಗಿಳಿದ ಪ್ರಭು. ಕೆಂಪಿ ಬಸ್ಸು ಮಂಜ ಸೀಳುತ್ತಾ ಮುನ್ನಡೆದರೂ ಬೆಳಕಾಗದ ಪ್ರಭುವಿನ ಮನಸ್ಸಿನಲ್ಲಿ ಪ್ರಶ್ನೋತ್ತರಗಳ ದೊಂಬರಾಟ ಮುಂದುವರೆದಿತ್ತು ! 
x

Wednesday, March 6, 2019

ಹಾಲುಮುದ್ದೆ ಪುರಾಣ


Haalu mudde ಹಾಲುಮುದ್ದೆ 
ಭಾನುವಾರದ ಬೆಳಗೆದ್ದು ಹಾಲುಮುದ್ದೆ ಮಾಡಲಾ ಅಂತ ಮಡದಿ ಕೇಳ್ತಿದ್ರೆ ನಂಗೆ ಏನು ಹೇಳ್ತಿದ್ದಾಳಪ್ಪಾ ಇವ್ಳು ಅಂತ ! ರಾಗಿಮುದ್ದೆನಾ ಅಂತ ಒಮ್ಮೆ ಅನಿಸಿ ಆಂ ಅಂದ್ರೆ , ಹಾಲುಮುದ್ದೆ ಅಂದ್ಲು ಮತ್ತೆ.  ಆಫೀಸಲ್ಲಿ ಚಮಚ ತಗೊಂಡು ರಾಗಿಮುದ್ದೆ ತಿನ್ನೋ ಜನರೆಲ್ಲಾ ನೆನಪಾಗಿ, ಮುದ್ದೆಯ ವಿಚಾರವನ್ನೇ ರಾಜಕೀಯವಾಗಿಸೋ ಜನರೆಲ್ಲಾ ಕಣ್ಮುಂದೆ ಬಂದು ಮತ್ತೊಮ್ಮೆ ಆಂ ಅನ್ನೋ ಮೊದಲೇ ಹಾಲುಮುದ್ದೆ ಅನ್ನೋದು ಒಂದು ತಿಂಡಿ , ಸಿಹಿತಿಂಡಿ ಅಂದ್ರು ಹೋಂ ಮಿನಿಸ್ಟರ್ರು. ಓ, ಹೌದಾ, ಸರಿ. ಮಾಡು ಅಂದೆ. ನಂತರ ಹಾಲು ಮುದ್ದೆಯ ಚಿತ್ರ ಹಾಕಿದ್ದನ್ನ ನೋಡಿ ಅದನ್ನು ಮಾಡೋದು ಹೇಗೆ ಅಂತ ಎಲ್ಲಾ ಕೇಳುತ್ತಿದ್ದಾಗ ಅದನ್ನ ಮಾಡೋದು ಹೇಗೆ ಅಂತ ಎಲ್ರಿಗೂ ಮತ್ತೆ ಮತ್ತೆ ಹೇಳೋ ಬದ್ಲು ಒಂದೇ ಕಡೆ ಬರದ್ರೆ ಹೆಂಗೆ ಅಂತನಿಸಿ ಬರೆಯೋಕೆ ಕೂತಾಗ ನೆನಪಾಗಿದ್ದಿಷ್ಟು. ಇನ್ನೂ ಹೆಚ್ಚಿನ ಸುದ್ದಿಯಿಲ್ಲದೆ ಹಾಲು ಮುದ್ದೆಯ ತಯಾರಿ ಹೆಂಗೆ ಅನ್ನೋ ಅಲ್ಲಿಗೆ ಹೋಗೋಣ.

ಬೇಕಾದ ಸಾಮಗ್ರಿಗಳು: 
ರವೆ-೨ ಕಪ್ಪು
ಸಕ್ಕರೆ/ಬೆಲ್ಲ- ೨ ಕಪ್ಪು
ತುಪ್ಪ-೧ ಕಪ್ಪು
ಹಾಲು- ೪ ಕಪ್ಪು
ಏಲಕ್ಕಿ- ೧
ಲವಂಗ- ೪
ದ್ರಾಕ್ಷಿ- ಸ್ವಲ್ಪ

ಮಾಡೋ ವಿಧಾನ: 
ರವೆಯನ್ನು ಸಣ್ಣ ಉರಿಯಲ್ಲಿ ಸ್ವಲ್ಪ ಹುರಿದುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಕುದಿಸಿಕೊಂಡು ಅದಕ್ಕೆ ಹುರಿದ ರವೆಯನ್ನು ಹಾಕಿ. ರವೆಯನ್ನು ಹಾಕಿದ ತಕ್ಷಣ ನಿಧಾನವಾಗಿ ತೊಳೆಸುತ್ತಾ ಸಕ್ಕರೆ/ಬೆಲ್ಲ, ಸ್ವಲ್ಪ ತುಪ್ಪ  ಮತ್ತು ಪುಡಿ ಮಾಡಿದ ಏಲಕ್ಕಿ, ಲವಂಗಗಳನ್ನು ಹಾಕಬೇಕು. ಗಟ್ಟಿಯಾಗುವ ತನಕ ತಳಹಿಡಿಯದಂತೆ ತೊಳೆಸುತ್ತಾ ಇರಬೇಕು. ಸುಮಾರು ಹತ್ತು-ಹದಿನೈದು ನಿಮಿಷಗಳ ನಂತರ ಈ ಮಿಶ್ರಣ ಉಂಡೆ ಕಟ್ಟುವಷ್ಟು ಗಟ್ಟಿಯಾಗುತ್ತೆ. ಆಗ ದ್ರಾಕ್ಷಿ ಹಾಕಿ ಉಂಡೆಕಟ್ಟಿದ್ರೆ ಹಾಲುಮುದ್ದೆ ಸವಿಯಲು ಸಿದ್ದ. ಇದನ್ನು ತುಪ್ಪದೊಂದಿಗೆ ಅಥವಾ ಚಟ್ನಿಪುಡಿಯೊಂದಿಗೆ ತಿನ್ನಬಹುದು.

ರೆಸಿಪಿ ಕ್ರೆಡಿಟ್ಸ್: ಅಕ್ಷತಾನ ಅಜ್ಜಿ
ಮಾಡಿದ್ದು: ನಮ್ಮನೆ ಅಕ್ಷತಾ 

ಅಂದ ಹಾಗೆ ಇದನ್ನು ಶ್ರಂಗೇರಿ ಕಡೆ ಜಾಸ್ತಿ ಮಾಡ್ತಾರಂತೆ ಅಂತ ನಮ್ಮನೆಯವ್ರು ಹೇಳ್ತಾ ಇದ್ರು. ಇನ್ನೂ ಹೆಚ್ಚಿನ ಮಾಹಿತಿ ಗೊತ್ತಿರೋರು ಹಂಚ್ಕೊಂಡ್ರೆ ಇನ್ನೊಂದಿಷ್ಟು ತಿಳ್ಕೋಬೋದು

Monday, February 4, 2019

ಗುಡ್ ಬೈ ಗೂಗಲ್ ಪ್ಲಸ್



ಸೆಪ್ಟೆಂಬರ್ ೩೦,೨೦೧೪
ಅಂತರ್ಜಾಲದ ದೈತ್ಯ ಗೂಗಲ್ಲಿನ ಉತ್ಪನ್ನವಾಗಿದ್ದ ಆರ್ಕುಟ್ಟಿನ ಬಳಕೆದಾರರ ಪಾಲಿಗೆ ಕರಾಳ ದಿನ. ಸಮಾನ ಆಸಕ್ತರನ್ನು ಒಂದೆಡೆ ಸೆಳೆಯುವ ಆರ್ಕುಟ್ ಗ್ರೂಪುಗಳ ಮೂಲಕ ಸಹಸ್ರಾರು ಜನರನ್ನು ಒಂದೆಡೆ ಸೆಳೆದಿದ್ದ ಆರ್ಕೂಟ್ ಬಾಗಿಲು ಹಾಕಿದಾಗ ಮುಂದೇನಪ್ಪ ಅಂತ ಸುಮಾರು ಜನ ಬೇಸರಗೊಂಡಿದ್ದರು. ಆಗ ಅದು ಬಾಗಿಲು ಹಾಕೋಕೆ ಮುಖ್ಯ ಕಾರಣ ಅದರ ಪ್ರತಿಸ್ಪರ್ಧಿ ಫೇಸ್ಬುಕ್ಕು. ೨೦೦೪ರಲ್ಲೇ ಶುರುವಾದ ಫೇಸ್ಬುಕ್ಕು ಮತ್ತು ಅದರ ಪ್ರತಿಸ್ಪರ್ಧಿ ಗೂಗಲ್ಲಿನ ಜಟಾಪಟಿಗೆ ಈಗ ಹದಿನೈದರ ಹರೆಯ ! 

ಫೇಸ್ಬುಕ್ ವರ್ಸಸ್ ಗೂಗಲ್:
೨೦೦೪ರಲ್ಲಿ ಶುರುವಾಗಿದ್ದ ಆರ್ಕುಟ್ ಸೇವೆ ೨೦೦೬ ರ ಹೊತ್ತಿಗೆ ವಿಶ್ವದಲ್ಲಿ ಹೆಚ್ಚು ಬಳಸಲ್ಪಡುವ ಸಾಮಾಜಿಕ ಜಾಲತಾಣವಾಯಿತು. ಅದರ ೭೦% ಪ್ರತಿಶತ ಬಳಕೆದಾರರು ಬ್ರೆಜಿಲಿಯನ್ನರು ಎಂದು ಆಗ ಅಂದಾಜಿಸಲಾಗಿತ್ತು. ೨೦೦೯ರ ಹೊತ್ತಿಗೆ ಭಾರತದಲ್ಲೂ ಅದರ ಹೆಚ್ಚುತ್ತಿರುವ ಪ್ರಖ್ಯಾತಿಯನ್ನರಿತ ಫೇಸ್ಬುಕ್ಕಿನ ಸಿ.ಇ.ಒ ಮಾರ್ಕ್ ಜುಕರ್ ಬರ್ಗ್ ಭಾರತಕ್ಕೆ ಭೇಟಿಯಿತ್ತು ಇಲ್ಲಿನ ತಂತ್ರಜ್ಞರೊಂದಿಗೆ ಚರ್ಚಿಸಿ ಫೇಸ್ಬುಕ್ಕನ್ನು ಕನ್ನಡ, ಹಿಂದಿ, ತಮಿಳು ಮುಂತಾದ ಭಾರತೀಯ ಭಾಷೆಗಳಲ್ಲಿ ದೊರೆಯುವಂತೆ ಮಾಡಿ ಆರ್ಕುಟ್ಟಿಗೆ ಸಡ್ಡು ಹೊಡೆಯತೊಡಗಿದರು. ೨೦೦೬ರಲ್ಲಿ ಮೊದಲನೆಯ ಸ್ಥಾನದಲ್ಲಿದ್ದ ಮೈ ಸ್ಪೇಸನ್ನು ಹೇಳ ಹೆಸರಿಲ್ಲದಂತೆ ಮಾಡಿದ ಫೇಸ್ಬುಕ್ ಮತ್ತು ಆರ್ಕುಟ್ಟಿನ ಸಮರದಲ್ಲಿ ಮೊದಲನೇ ಸ್ಥಾನವನ್ನು ಆರ್ಕುಟ್ಟೇ ಹಲವು ವರ್ಷಗಳ ಕಾಲ ಕಾಯ್ದುಕೊಂಡಿತ್ತು.  ಈ ಯಶಸ್ಸಿನಿಂದ ಪ್ರೇರೇಪಿತರಾದ ಗೂಗಲ್ಲಿನವರು ಗೂಗಲ್ ಪ್ಲಸ್ ಎಂಬ ಹೊಸ ಸಾಮಾಜಿಕ ತಾಣವನ್ನು ತಂದರು. ಇದರಿಂದ ಆರ್ಕುಟ್ಟಿನಿಂದ ತಲುಪಲಾಗದ ಜನರನ್ನು ತಲುಪೋದು ಮತ್ತು ಫೇಸ್ಬುಕ್ಕಿನ ಪ್ರಾಬಲ್ಯವನ್ನು ಕಡಿಮೆ ಮಾಡೋದು ಗೂಗಲ್ಲಿನ ಉದ್ದೇಶವಾಗಿರಬಹುದು. ಆದರೆ ನಿಧಾನವಾಗಿ ಹೆಚ್ಚುತ್ತಿದ್ದ ಫೇಸ್ಬುಕ್ಕಿನ ಪ್ರಖ್ಯಾತಿಯ ಮುಂದೆ ಇದು ನಿಲ್ಲಲಿಲ್ಲ ಮತ್ತು ೨೦೧೪ರಲ್ಲಿ ಗೂಗಲ್ಲು ಆರ್ಕುಟನ್ನು ಬಂದ್ ಮಾಡಬೇಕಾಯಿತು ! ಆಗ ಜನರಿಗಿದ್ದ ಆಶಾಕಿರಣವೆಂದರೆ ಗೂಗಲ್ ಪ್ಲಸ್. ಅದಾಗಿ ನಾಲ್ಕೇ ವರ್ಷಗಳಲ್ಲಿ ಗೂಗಲ್ ತನ್ನ ಮತ್ತೊಂದು ತಾಣವಾದ ಗೂಗಲ್ ಪ್ಲಸ್ ಅನ್ನೂ ಬಂದ್ ಮಾಡಬೇಕಾಗಿದೆ. ಕಮ್ಮಿಯಾಗುತ್ತಿರುವ ಬಳಕೆ ಮತ್ತು ಗ್ರಾಹಕರ ಮೆಚ್ಚಿನ ಉತ್ಪನ್ನವನ್ನು ನಿರ್ವಹಿಸೋಕೆ ಆಗುತ್ತಿರೋ ಕಷ್ಟದಿಂದ ಇಂತಹ ನಿರ್ಧಾರವನ್ನು ಕೈಗೊಳ್ಳಬೇಕಾಗ್ತಿದೆ ಅಂತ ಡಿಸೆಂಬರ್ ೨೦೧೮ರಲ್ಲಿ ಗೂಗಲ್ ಪ್ರಕಟಿಸಿದ್ದರೂ ಇದರ ಮುಖ್ಯ ಕಾರಣ ಕಮ್ಮಿಯಾಗುತ್ತಿರೋ ಬಳಕೆ ಅಂತಲೇ ಕಾಣುತ್ತಿದೆ. 

ಎಂದು ಬಾಗಿಲು ಗೂಗಲ್ ಪ್ಲಸ್ಸಿನ ಮನೆಗೆ? : 
ಫೆಬ್ರವರಿ ೩, ೨೦೧೯ರಂದು ಎಲ್ಲಾ ಗೂಗಲ್ ಪ್ಲಸ್ ಬಳಕೆದಾರರಿಗೆ ಗೂಗಲ್ ಕಳಿಸಿರುವ ಮಿಂಚೆಯ ಪ್ರಕಾರ ಏಪ್ರಿಲ್ ೨,೨೦೧೯ಕ್ಕೆ ಗೂಗಲ್ ಪ್ಲಸ್ ಬಾಗಿಲು ಹಾಕಲಿದೆ. ಅಂದರೆ ಇನ್ನು ಎರಡು ತಿಂಗಳೂ ಇಲ್ಲ ! 

ಫೆಬ್ರವರಿ ಮೂರಕ್ಕೇ ಯಾಕೆ ಮಿಂಚೆ? :
ಯಾವುದಾದ್ರೂ ಸೇವೆಯನ್ನ ಸ್ಥಗಿತಗೊಳಿಸೋಕೆ ಮುಂಚೆ ಮಾಹಿತಿ ತಿಳಿಸೋದು ಸಾಮಾನ್ಯವಾದ್ರೂ ಇಷ್ಟು ಮುಂಚೆ ಯಾಕೆ ಅಂತ ಕೆಲವರಿಗಾದ್ರೂ ಅನಿಸಿರಬಹುದು. ಆರ್ಕುಟ್ಟಿನಲ್ಲೆಂತೂ ಇಷ್ಟು ಮುಂಚೆ ತಿಳಿಸಿರಲಿಲ್ಲ. ಗೂಗಲ್ಲಿನ ಮಿಂಚೆಯನ್ನು ಓದಿದವರಿಗೆ ಅದರಲ್ಲಿನ ಒಂದು ಸಾಲು ಮಿಸ್ಸಾಗಿರಬಹುದು. ಅದೆಂದರೆ ಫೆಬ್ರವರಿ ನಾಲ್ಕರ ನಂತರ ಗೂಗಲ್ ಪ್ಲಸ್ಸಿನಲ್ಲಿ ಯಾವುದೇ ಹೊಸ ಪೇಜನ್ನೋ, ಪ್ರೊಫೈಲನ್ನೋ, ಸಮುದಾಯಗಳನ್ನೋ, ಘಟನೆಗಳನ್ನೋ ತೆರೆಯಲಾಗೋದಿಲ್ಲ ಅನ್ನೋದು ! ಲಕ್ಷಾಂತರ ಜನರು ಬಳಸಲ್ಪಡುವ ಯಾವುದೋ ಒಂದು ಸೇವೆಯನ್ನು ಏಕದಂ ಬಂದ್ ಮಾಡಲಾಗೋದಿಲ್ಲ. ಅದರಲ್ಲಿರೋ ಜನರು ತಮಗೆ ಸಂಬಂಧಿಸಿದ ಮಾಧ್ಯಮಗಳನ್ನು ಬೇರೆಡೆ ಸ್ಥಳಾಂತರಿಸೋಕೆ ಒಂದಿಷ್ಟು ಸಮಯ ಕೊಡಬೇಕಾಗುತ್ತೆ. ಆದರೆ ಅವರಿಗೆ ಹೊಸ ಮಾಧ್ಯಮಗಳನ್ನು ಇಲ್ಲಿ ಹಾಕೋಕೆ ಅವಕಾಶ ಕೊಟ್ರೆ ಅವರು ಅದನ್ನು ಇಲ್ಲಿ ಕೊನೆಯ ಕ್ಷಣದವರೆಗೂ ಹಾಕ್ತಾನೇ ಇರ್ತಾರೇ ಹೊರತು ಇರೋದನ್ನ ಬೇರೆಡೆ ಸ್ಥಳಾಂತರಿಸೋಲ್ಲ. ಹಾಗಾಗಿ ಸದ್ಯದಲ್ಲೇ ಇಲ್ಲಿಂದ ಜಾಗ ಖಾಲಿ ಮಾಡಿ ಅನ್ನೋ ಪರೋಕ್ಷ ಸೂಚನೆ ಇದು ! 


ಗೂಗಲ್ ಪ್ಲಸ್ ಬಾಗಿಲು ಹಾಕಿದ್ರೆ ಏನಾಗುತ್ತೆ? 
೧. ಫೋಟೋಗಳು: 
ನಿಮ್ಮ ಮೊಬೈಲಲ್ಲಿ ಜಿಮೇಲ್ ಐಡಿಯನ್ನ್ ಹಾಕಿದ್ರೆ ನಿಮ್ಮ ಫೋಟೋಗಳು ತಾವಾಗೇ ಗೂಗಲ್ ಡ್ರೈವಿನಲ್ಲಿ ಬ್ಯಾಕಪ್ ಆಗ್ತಿರೋದನ್ನು ನೀವು ಗಮನಿಸಿರಬಹುದು ! ಅದನ್ನು ಬದಲಾಯಿಸಬಹುದಾದರೂ ಸುಮಾರು ಜನ ಮೊಬೈಲ್ ತಗೊಂಡವ್ರು ಅದರಲ್ಲಿ ಬರೋ ಎಲ್ಲಾ ಮಾಹಿತಿಗೂ ಸರಿ ಸರಿ ಅಂತ ತಲೆಯಾಡಿಸೋದ್ರಿಂದ ಇದರ ಬಗ್ಗೆ ತಲೆ ಕೆಡಿಸಿಕೊಂಡಿರೋಲ್ಲ ! ಗೂಗಲ್ ಪ್ಲಸ್ ಬಾಗಿಲ್ ಹಾಕಿದ್ರೆ ಗೂಗಲ್ಲಿನ ಆ ಫೋಟೋಗಳೂ ಡಿಲಿಟ್ ಆಗುತ್ತಾ ಅಂತ ಕೆಲವರು ಅಂದುಕೊಂಡಿರಬಹುದು. ಆದರೆ ಹಾಗೇನೂ ಆಗೋಲ್ಲ. ಅವೆಲ್ಲಾ ಇರೋದು ಗೂಗಲ್ಲಿನ ಬೇರೊಂದು ಉತ್ಪನ್ನವಾದ ಗೂಗಲ್ ಫೋಟೋಸ್ ನಲ್ಲಿ. ಗೂಗಲ್ ಪ್ಲಸ್ಸಿನಲ್ಲಿ ನಿಮ್ಮದೊಂದು ಖಾತೆ ತೆಗೆದು ಅದರಲ್ಲೇ ನೇರವಾಗಿ ಅಪ್ಲೋಡ್ ಮಾಡಿರೋ ಫೋಟೋಗಳು ಆ ಅಕೌಂಟಿನಲ್ಲಿರುವ ಬೇರೆ ಮಾಹಿತಿಗಳಂತೆ ಏಪ್ರಿಲ್ ೨ರಂದು ಅಳಿಸಲ್ಪಡುತ್ತೆ. 

೨. ಗ್ರೂಪುಗಳು: 
ಇಲ್ಲಿರೋ ಗ್ರೂಪುಗಳೂ ಏಪ್ರಿಲ್ ೨ರಂದು ಅಳಿಸಲ್ಪಡುತ್ತೆ. ಆದರೆ ಇದರಲ್ಲಿರೋ ಗ್ರೂಪಿನಲ್ಲಿ ಸುಮಾರು ಮುಖ್ಯ ಇಮೇಲ್ ಐಡಿಗಳೆಲ್ಲಾ ಇದ್ವು. ಅದನ್ನೆಲ್ಲಾ ಏನು ಮಾಡೋದಪ್ಪ ಅಂತ ತಲೆಕೊಡಿಸಿಕೊಂಡಿದ್ದೀರಾ ? ಗೂಗಲ್ಲಿನವರ ಪ್ರಕಾರ ಅದಕ್ಕೆ ತಲೆಕೆಡಿಸಿಕೊಳ್ಳೋ ಆಗತ್ಯವಿಲ್ಲಾ. ಎಲ್ಲಾ ಗ್ರೂಪಿನ ಅಡ್ಮಿನ್ನು ಮತ್ತು ಮಾಡರೇಟರುಗಳಿಗೆ ಗುಂಪಿನ ಮಾಹಿತಿಯನ್ನು ಎಕ್ಸಪೋರ್ಟ್ ಮಾಡುವ ಸೌಲಭ್ಯ ಮಾರ್ಚಿನ ಮೊದಲ ವಾರದಿಂದ ಲಭಿಸಲಿದೆ. ಅದು ಎಂದಿನಿಂದ ಎಂದು ಹೇಳದಿದ್ದರೂ ಅದೂ ಮಾರ್ಚ್ ೨ಕ್ಕೇ ಶುರುವಾಗಬಹುದು ಎಂಬುದು ಹಲವರ ಅಂದಾಜು !

೩. ಬ್ಲಾಗರ್: 
ಕನ್ನಡದ ಮಟ್ಟಿಗೆ ಅತೀ ಹೆಚ್ಚು ಅಂತರ್ಜಾಲದ ಬ್ಲಾಗರ್ರುಗಳಿರೋದು ಗೂಗಲ್ಲಿನ ಬ್ಲಾಗರ್ ಮತ್ತು ಪ್ರತಿಸ್ಪರ್ಧಿಯಾದ ವರ್ಲ್ ಪ್ರೆಸ್ಸಿನಲ್ಲಿ. ನೀವು ಈ ಬ್ಲಾಗುಗಳನ್ನ ಓದುತ್ತಿದ್ರೆ , ಮತ್ತು ಅಂತರ್ಜಾಲದ ಹಲವು ತಾಣಗಳನ್ನು ಓದುತ್ತಿದ್ರೆ ಅವುಗಳ ಪ್ರತೀ ಪೋಸ್ಟಿನ ಕೆಳಗೆ ಕಮೆಂಟ್/ಪ್ರತಿಕ್ರಿಯೆ ಎಂಬ ಆಯ್ಜೆಯಿರೋದನ್ನ ನೋಡಿರುತ್ತೀರಿ. ಅಲ್ಲಿ ಕಾಮೆಂಟ್ ಮಾಡಿದವರು ಯಾರು ಎಂಬುದನ್ನು ತಿಳಿಸೋಕೆ ಹಲವು ಆಯ್ಕೆಗಳಿರುತ್ತೆ. ಅಂದರೆ ಅಲ್ಲಿ ನಿಮ್ಮ ಫೇಸ್ಬುಕ್ ಐಡಿಯ ಮೂಲಕ ಕಾಮೆಂಟ್ ಮಾಡಬಹುದು. ಅಥವಾ ಗೂಗಲ್ ಪ್ಲಸ್ಸಿನ ಮೂಲಕ ಮಾಡಬಹುದು. ಇದೇ ತರಹ ಹಲವು ಆಯ್ಕೆಗಳಿರುತ್ತೆ. ಬ್ಲಾಗರ್ರುಗಳಿಗೆ ಈ ಗೂಗಲ್ ಪ್ಲಸ್ಸಿನ ಆಯ್ಕೆ ಫೆಬ್ರವರಿ ನಾಲ್ಕರಿಂದ ಮತ್ತು ಬೇರೆ ತಾಣಗಳಿಗೆ ಮಾರ್ಚ್ ಏಳರಿಂದ  ಕಾಣೆಯಾಗುತ್ತೆ ! ನಿಮ್ಮದೇ ಆದ ಬ್ಲಾಗಿದ್ದರೆ ಆ ಬ್ಲಾಗಿನಲ್ಲಿ ಈ ಹಿಂದೆ ಗೂಗಲ್ ಪ್ಲಸ್ಸಿನ ಮೂಲಕ ಮಾಡಿದ ಕಾಮೆಂಟುಗಳೂ ಗೂಗಲ್ ಪ್ಲಸ್ಸಿನ ಬಾಗಿಲು ಹಾಕೋ ದಿನ ಅಂದರೆ ಏಪ್ರಿಲ್ ಎರಡರಂದು ಅಳಿಸಲ್ಪಡುತ್ತೆ ಅನ್ನುತ್ತೆ ಗೂಗಲ್ಲು ! ಹಾಗಾಗಿ ನೀವೊಬ್ಬ ಬ್ಲಾಗಿಗರಾಗಿದ್ದು ಅದಕ್ಕೆ ಬಂದಿದ್ದ ಹೆಚ್ಚಿನ ಕಮೆಂಟುಗಳು ಗೂಗಲ್ ಪ್ಲಸ್ಸಿನಿಂದಲೇ ಆಗಿದ್ದರೆ ಇದು ನಿಮ್ಮ ಪಾಲಿಗೆ ದೊಡ್ಡ ಹೊಡೆತವೇ ಸರಿ !


೪. ಉಳಿದೆಡೆ: 
ಹಾಗಂತ ಎಲ್ಲೆಲ್ಲಿ ಗೂಗಲ್ ಪ್ಲಸ್ ಬಳಸಲ್ಪಡುತ್ತಿತ್ತೋ ಅಲ್ಲೆಲ್ಲಾ ಬಾಗಿಲು ಹಾಕಲಾಗಿದೆ ಅಂತಲ್ಲ. ನೀವು ಗೂಗಲ್ಲಿನ ಮತ್ತೊಂದು ಉತ್ಪನ್ನವಾದ ಜಿ-ಸೂಟನ್ನು ಬಳಸುತ್ತಿದ್ರೆ ಅದರಲ್ಲಿ ಮುಂದೆಯೂ ಗೂಗಲ್ ಪ್ಲಸ್ಸನ್ನು ಬಳಸಬಹುದೆಂದೂ , ಗೂಗಲ್ ಪ್ಲಸ್ಸಿನ್ ಡೆವಲಪರಾಗಿದ್ರೆ ಅಲ್ಲೂ ಸ್ವಲ್ಪ ಬದಲಾವಣೆಗಳು ಬೇಕಾದ ಹೊರತು ಬೇರೆ ಚಿಂತೆಯಿಲ್ಲವೆಂದು ಗೂಗಲ್ ತಿಳಿಸಿರೋದ್ರಿಂದ ಜನಸಾಮಾನ್ಯರ ಪಾಲಿಗೆ ಗೂಗಲ್ ಪ್ಲಸ್ ಮರೆಯಾದ್ರೂ ತೆರೆಮರೆಯಲ್ಲಿ ಅದು ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ ಎಂದು ತಿಳಿದುಬರುತ್ತೆ. 

ಮುಂದೇನು ? 
ಆರ್ಕುಟ್ ಹೋಯ್ತು ಗೂಗಲ್ ಪ್ಲಸ್ ಬಂತು ಡುಂ ಡುಂ ಡುಂ. .. ಎಂದು ಹೇಳುತ್ತಿದ್ದ ಜನರಿಗೆ ಗೂಗಲ್ ಪ್ಲಸ್ ಹೋಯ್ತು.. ಮತ್ತೊಂದು ಬಂತು ಎನ್ನೋಕೆ ಆ ಮತ್ತೊಂದು ಯಾವುದು ಎಂದು ಹೇಳೋಕೆ ಗೂಗಲ್ ಯಾವ ಆಯ್ಕೆಯನ್ನೂ ನೀಡಿಲ್ಲ ಸದ್ಯದ ಮಟ್ಟಿಗೆಂತೂ. ಹಾಗಾಗಿ ಇಷ್ಟವಿದ್ದರೂ , ಇಲ್ಲದಿದ್ದರೂ ಫೇಸ್ಬುಕ್ಕಿನ ಪ್ರಾಬಲ್ಯ ಇನ್ನೂ ಹೆಚ್ಚಾಗೋ ಸಾಧ್ಯತೆಯಿದೆ. ವಿಶ್ವದ ಹಲವು ದೇಶಗಳಲ್ಲಿ ಬೇರೆ ಬೇರೆ ಜಾಲತಾಣಗಳಿದ್ದರೂ ಅವ್ಯಾವದೂ ಭಾರತದಲ್ಲಿ ಫೇಸ್ಬುಕ್ ಹೊಕ್ಕಿರುವಷ್ಟು ಹೊಕ್ಕಿಲ್ಲ. ಹಾಗಾಗಿ ಗೂಗಲ್ ಪ್ಲಸ್ಸಿನ ನಿರ್ಗಮನದಿಂದ ಖಾಲಿಯಾಗೋ ಜಾಗವನ್ನು ತುಂಬೋರು ಯಾರು ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು. 

Sunday, January 20, 2019

ಹುತ್ರಿದುರ್ಗ ಚಾರಣ

Our Group (Akshata, Me, Suresh, Another trekker who joined on the way, Manjunath, Divya, Raj, Deepika) infront of HutriDurga Fort
ಮನದನ್ನೆಯೊಡನೆ ನವದುರ್ಗಗಳ ಚಾರಣ ಮಾಡಬೇಕೆಂಬ ಕನಸು ಶುರುವಾದದ್ದು ಸಾವನದುರ್ಗದಲ್ಲಿ. ಅದರ ಎರಡನೇ ಅಂಕವಾದ ಹುತ್ರಿದುರ್ಗದ ಚಾರಣ ಇಂದು ನನಸಾಯ್ತು.
ಮನೆಯಿಂದ ೧೯೦ ಕಿ.ಮೀಗಳ ಬೈಕ್ ಟ್ರಿಪ್ಪು ಹಾಸನ ಹೈವೇ ಮೂಲಕ ಹೋಗಿದ್ದಾಗಿದ್ದಾದ್ದರಿಂದ ಆ ಉತ್ತಮ ರಸ್ತೆಯಿಂದ ಉಲ್ಲಾಸಭರಿತವಾಗಿತ್ತು.


ಹೋಗೋದು ಹೇಗೆ ? 
ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ ದೂರವಿರೋ ಹುತ್ರಿದುರ್ಗಕ್ಕೆ ಹೋಗೋದೂ ಸುಲಭ. ಕೆ.ಎಸ್. ಆರ್. ಟಿ.ಸಿ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ಹುತ್ರಿದುರ್ಗ ಊರವರೆಗೆ ಹೋಗುತ್ತೆ. ಊರ ಪೇಟೆಯಲ್ಲೇ ಹುತ್ರಿದುರ್ಗ ಬೆಟ್ಟಕ್ಕೆ ದಾರಿ ಅಂತ ಬೋರ್ಡ್ ಕಾಣುತ್ತೆ. ಆ ಬೋರ್ಡಿನಿಂದ ಸುಮಾರು ೧ ಕಿ.ಮೀ ಮೇಲೆ ನಡೆದರೆ ಹುತ್ರಿದುರ್ಗ ಊರು ಸಿಗುತ್ತದೆ. ಅಲ್ಲಿ ಶಂಕರಲಿಂಗೇಶ್ವರ ದೇವಸ್ಥಾನಕ್ಕೆ ದಾರಿ ಎಂಬ ಬೋರ್ಡ್ ಕಾಣುತ್ತದೆ. ಅಲ್ಲಿ ಎಡಕ್ಕೆ ತಿರುಗಿ ನೂರು ಮೀಟರ್ ಸಾಗೋ ಹೊತ್ತಿಗೆ ದೇಗುಲ ಸಿಗುತ್ತೆ. ಅದರ ಪಕ್ಕದಲ್ಲಿರೋ ದಾರಿಯಲ್ಲಿರೋ ಸಾಗಿದರೆ ಕೋಟೆಯ ಗೋಡೆಗಳು ಮತ್ತು ಒಳಗೆ ಸಾಗೋ ಬಾಗಿಲು ಸಿಗುತ್ತೆ. ಅದರಲ್ಲಿ ಸಾಗಿದರೆ ಹುತ್ರಿದುರ್ಗ ಬೆಟ್ಟದ ಚಾರಣ ಮಾಡಬಹುದು. ಬೈಕಿನಲ್ಲಿ ಹೋಗೋದಾದರೆ ಕುಣಿಗಲ್ಲಿಗೆ ೭ ಕಿ.ಮೀ ದೂರ ಅಂತ ಕಾಣುವ ಬೋರ್ಡಿನ ನಂತರ ಸಿಗೋ ಎಡತಿರುವಿನಲ್ಲಿ ೧೪ ಕಿ.ಮೀ ಸಾಗಿದರೆ ಹುತ್ರಿದುರ್ಗ ತಲುಪಬಹುದು. ಮುಖ್ಯ ರಸ್ತೆಯಲ್ಲೇ ಹುತ್ರಿದುರ್ಗಕ್ಕೆ ದಾರಿ ಎನ್ನುವ ಬೋರ್ಡು ಸಿಗುವ ತನಕ ಸಾಗಿ ಅಲ್ಲಿಂದ ಎಡಕ್ಕೆ ಸಾಗಿ ಮುಂದುವರಿಯಬೇಕು. ಕೆಲಕಡೆ ರಸ್ತೆಯಲ್ಲಿ ಸ್ವಲ್ಪ ಗುಂಡಿ ಬಿದ್ದಿದೆಯಾದರೂ ಬೆಂಗಳೂರಿನಿಂದ ಚಾರಣದವರೆಗಿನ ರಸ್ತೆ ಚೆನ್ನಾಗೇ ಇದೆ. ಹುತ್ರಿದುರ್ಗ ತಲುಪಿದ ನಂತರ ಶಂಕರಲಿಂಗೇಶ್ವರ ದೇಗುಲ ದಾಟಿ ಕೋಟೆಯ ಬಂಡೆಗಳವರೆಗೂ ಬೈಕನ್ನು ಕೊಂಡೊಯ್ಯುವ ದಾರಿಯಿದೆ.


ಚಾರಣದ ದೂರ ಎಷ್ಟು? 
ಹುತ್ರಿದುರ್ಗದ ಚಾರಣ ಹೆಚ್ಚು ದೂರದ್ದೂ, ಹೆಚ್ಚು ಹೊತ್ತಿನದ್ದೂ ಅಲ್ಲ. ಬೆಟ್ಟದ ಮೇಲೆ ಹತ್ತಿ, ಸುತ್ತಲ ಜಾಗಗಳನ್ನೆಲ್ಲಾ ನೋಡಿ ವಾಪಾಸ್ ಬರಲು ಸುಮಾರು 2.6 ಕಿ.ಮೀ ಆಗುತ್ತದೆ ಅಷ್ಟೆ.


ಫುಲ್ ಕನ್ ಫ್ಯೂಷನ್ ಕಣಣ್ಣ  ನಮ್ಮಣ್ಣ: 
ನಿನ್ನೆ ಸಂಜೆ ಹುತ್ರಿದುರ್ಗಕ್ಕೆ ಹೋದರೆ ಹೇಗೆ ಅಂತ ಪ್ಲಾನ್ ಮಾಡಾಯ್ತು. ಮೊನ್ನೆ ಗೆಳೆಯ ವಿನಯ್ ರಾವ್ ಅವರು ಹೋಗಿದ್ದ ಚಿತ್ರಗಳನ್ನು ನೋಡಿ ಮತ್ತು ಅದಕ್ಕಿಂತ ಮುಂಚೆ ಪ್ರವೀಣ್ ಅವ್ರ ತಂಡ ಹೋಗಿ ಬಂದಿದ್ದ ಕಥೆ ಕೇಳಿ ಇಲ್ಲಿಗೆ ಹೋಗಿಬರಬೇಕೆಂಬ ಆಸೆ ಮೊಳೆಯುತ್ತಲೇ ಇತ್ತು. ಇತ್ತೀಚಿಗಿನ ಚಾರಣಗಳ ಖಾಯಂ ಸಾಥಿಯಾಗಿರೋ ಜೀವನಸಾಥಿ ಅಕ್ಷತಾ ಹೇಗಿದ್ರೂ ರೆಡಿಯಾಗಿದ್ಲು. ಮತ್ತಿನ್ಯಾರು ಜೊತೆ ಸಿಗಬೋದು ಅಂತ ನಮ್ ರಾಜಣ್ಣ ಮುಂತಾದವರನ್ನ ಕೇಳಾಯ್ತು.  ಬೇರೆಯವ್ರು ಬೇರೆ ಬೇರೆ ಕಾರಣಗಳಿಂದ ಬರೋಕಾಗದಿದ್ರೂ ರಾಜಣ್ಣ ೩೦ ನಿಮಿಷದಲ್ಲಿ ಹೇಳ್ತೀನಿ ಅಂದ್ರು. ಸ್ವಲ್ಪ ಹೊತ್ತು ಬಿಟ್ಟು ಬರ್ತೀನಿ ಅಂದ್ರು. ಜೊತೆಗೆ ತಮ್ಮ ಗೆಳೆಯರನ್ನೂ ಕರ್ಕೊಂಡು ಬರ್ತೀನಿ ಅಂದ್ರು . ಸರಿ, ಆಗ್ಲಿ ಅಂತ ಗ್ರೂಪೊಂದು ಮಾಡಿ, ಬರೋರ್ನೆಲ್ಲಾ  ಸೇರ್ಸಿ ಅಂತೇಳಿ ಬೇರೆ ಕೆಲಸಗಳಲ್ಲಿ ಮಗ್ನನಾಗಿದ್ದೆ. ಹತ್ತೂಕಾಲಾದ್ರೂ ರಾಜಣ್ಣನ ಸುದ್ದಿಯಿಲ್ಲ. ಬರೋ ಬೇರೆಯವ್ರ ಸದ್ದಿಲ್ಲ ! ಚಳಿಗಾಲ ಅಂತ ಬೆಚ್ಚಗೆ ಹೊದ್ಕೊಂಡು ಮಲ್ಗಿದ್ರಾ ಅಂತ ಸಂದೇಹ ಬಂದು ಫೋನ್ ಮಾಡಿದ್ರೆ , ಬರ್ತೀನಿ ಅಂದಿದಾರೆ ಒಂದಿಬ್ರು, ಕೇಳ್ತೀನಿ ತಡೀರಿ ಅಂದ್ರು. ಹಂಗೇ ಮಂಜುನಾಥ್ ಮತ್ತು ಸುರೇಶ್ ಗೌಡ ಅವರನ್ನು ಸೇರಿಸಿದ್ರು ಬರೋರ ಸಾಲಿಗೆ. ಸರಿ, ಮೂರು ಜನರ ಬದ್ಲಿಗೆ ಐದು ಜನರಾದ್ರೆ ಒಳ್ಳೇದೆ ಅಂತ ಎಲ್ಲರಿಗೂ ನೀರಿನ ಬಾಟ್ಲಿ ತಗಂಡು ಬರ್ರಪ್ಪ ಅಂತೇಳಿ ಮಲ್ಕೊಂಡಾಯ್ತು ಹನ್ನೊಂದರ ಹೊತ್ತಿಗೆ. ಬೆಳಿಗ್ಗೆ ನಾಲ್ಕೂಮುಕ್ಕಾಲಿಗೆ ಎದ್ದು ನೋಡಿದ್ರೆ ಗ್ರೂಪಲ್ಲಿ ಇನ್ನೆರಡು ಹೊಸ ಎಂಟ್ರಿ ! ಅವ್ರನ್ನ ಯಾರು , ಎಲ್ಲಿಂದ ಕರ್ಕೊಂಡು ಬರೋದು ಅನ್ನೋದ್ರ ಬಗ್ಗೆ ಫುಲ್ ರಾಮಾಯಣ ! ಅದ್ರಲ್ಲೊಬ್ಬರಾದ ದಿವ್ಯ ನಮ್ಮನೆ ಹತ್ರನೇ ಇರದು. ಅವ್ರನ್ನ ಬೇರೆ ಜಾಗದಿಂದ ಕರ್ಕೊಂಡು ಬರ್ಬೇಕು ಅಂತ ಮೆಸೇಜು ! ಸರಿ, ಹಿಂದಿನ ದಿನ ಸುದ್ದಿಯಿರದ ಅವ್ರು ರೆಡಿಯಿರ್ತಾರ , ಬರ್ತಾರ ಅಂತ ಅವರಿಗೆ ಮೆಸೇಜಿಸಿದರೆ ಅವ್ರ ಸುದ್ದಿಯಿಲ್ಲ. ನಮ್ಮ ರಾಜಣ್ಣಂಗೆ ಕೇಳಿದ್ರೆ ನೀವೇ ಕರ್ಕೊಂಡು ಬನ್ನಿ, ಇಲ್ಲಾಂದ್ರೆ ಪ್ರವೀಣಂಗೆ ಹೇಳಿದೀನಿ ಅಂದ್ರು. ಪ್ರವೀಣಂಗೆ ಫೋನ್ ಮಾಡಿದ್ರೆ ನೀವು ಕರ್ಕೊಂಡು ಬರೋದಾದ್ರೆ ಕರ್ಕೊಂಡು ಬನ್ನಿ ಅಂದ. ಸರಿ , ಆಯ್ತಪ್ಪ ಅಂತ ನಿಂಗೆ ಯಾವ ಸ್ಟಾಪ್ ಹತ್ರನಮ್ಮ ಅಂದ್ರೆ ದಿವ್ಯ ನಮ್ಮನೆ ಹತ್ರದ ಸ್ಟಾಪೇ ಹೇಳ್ಬೇಕಾ ? ಸರಿ ಅಂತ ನಮ್ಮನೆಯವ್ರು ರೆಡಿಯಾಗಿ ಹೊರಡೋ ಹೊತ್ತಿಗೆ ದಿವ್ಯನ ಫೋನ್ ಹೋಗ್ತಿಲ್ಲ. ಮತ್ತೆ ಸ್ವಲ್ಪ ಹೊತ್ತಿಗೆ ನೋಡಿದ್ರೆ ಪ್ರವೀಣನ ಮಿಸ್ ಕಾಲು ! ಏನಪ್ಪಾ ಅಂತ ಮತ್ತೆ ಫೋನ್ ಮಾಡಿದ್ರೆ ಅವ್ರನ್ನ ಕರ್ಕೊಂಡೋಗಿ ಮತ್ತೊಂದು ಸ್ಟಾಪಿಗೆ ಬಿಟ್ಟಿದೀನಿ ಅನ್ಬೇಕೆ ? ನಂ ರಾಜಣ್ಣ ಎಲ್ರನ್ನ ಎಲ್ರಿಗೂ ಪಿಕ್ ಮಾಡಕ್ಕೆ ಹೇಳಿದ್ರು . ಆದ್ರೆ ಅವ್ರು ಯಾರ್ಯಾರಿಗೆ ಹೇಳಿದಾರೆ ಅಂತ ಮತ್ತೊಬ್ರಿಗೆ ಗೊತ್ತಿರ್ಲಿಲ್ಲ ! ಅಣ್ಣನ ಗೊಂದಲಗಳಿಂದ ಆರಕ್ಕೆ ಹೊರಡಬೇಕಾದ ನಾವು ಆರೂಮುಕ್ಕಾಲಾದ್ರೂ ಒಬ್ಬರೊಬ್ಬರಿಗೆ ಕಾಯ್ತಾ ಮಾರತ್ತಳ್ಳಿಯಲ್ಲೇ ಕೂತಿದ್ವಿ ! ಸರಿ, ಆಯ್ತಪ್ಪ , ನಾವು ಹೊರಟಿದೀವಿ ಬನ್ನಿ ಅಂದ್ರೆ, ಪಾರ್ಲೇಜಿ ಹತ್ರ ಬನ್ನಿ ಬರ್ತೀನಿ ಅಂದ ಅಣ್ಣ ನಮ್ಮನ್ನಲ್ಲಿ ಕಾಯ್ಸಿದ್ದೇ ಕಾಯ್ಸಿದ್ದು ! ಅಣ್ಣನ ಸೂಪರ್ ಕನ್ ಫ್ಯೂಷನ್ನುಗಳಿಂದ ಸುಮ್ಮನೇ ಬೇಗ ಎಬ್ಸಿ , ಜಾಕೇಟುಗಳಿದ್ರೂ ನಡುಗಿಸ್ತಿದ್ದ ಚಳೀಲಿ ಕರ್ಕೊಂಡು ಬಂದು ಕಾಯ್ಸಿದ್ದಕ್ಕೆ  ಮಹಿಳಾಮಣಿಗಳಾದ ದಿವ್ಯ, ಅಕ್ಷತಾ ಮತ್ತು ದೀಪಿಕಾರಿಂದ ನಮಗೆಲ್ಲಾ ಮಂಗಳಾರತಿ ಆಗದೇ ಹೋದದ್ದು ನಮ್ಮ ಪುಣ್ಯ  !

ನೆಲಮಂಗಲದ ತಟ್ಟೆ ಇಡ್ಲಿ: 
ನೆಲಮಂಗಲ ರಸ್ತೆಯಲ್ಲಿ ಹೋಗೋವಾಗ ಖುಷಿ ಕೊಡೋ ಹಲವು ಸಂಗತಿಗಳಲ್ಲಿ ಸಖತ್ತಾಗಿರೋ ರಸ್ತೆ ಒಂದಾದ್ರೆ ಮತ್ತೊಂದು ಸಂಗತಿ ಅಲ್ಲಿ ಸಿಗೋ ತಟ್ಟೆ ಇಡ್ಲಿ. ಬೆಳಗ್ಗೆ ತಿಂಡಿ ತಿನ್ನದೇ ಹೊರಟಿದ್ದ ನಮಗೆ ನೆಲಮಂಗಲ ಕ್ರಾಸು ದಾಟಿ ಹಾಸನ ಹೈವೇ ಹಿಡಿಯೋ ಹೊತ್ತಿಗೆ ಹೊಟ್ಟೆ ಚುರುಗುಟ್ಟತೊಡಗಿತ್ತು. ಸರಿ, ಅಂತ ಅಲ್ಲೇ ಗಾಡಿ ಸೈಡಿಗಾಕಿ ತಟ್ಟೆ ಇಡ್ಲಿ, ಮೆಂತೆ ಬಾತುಗಳನ್ನ ಚೆನ್ನಾಗಿ ಬಾರ್ಸಿದ್ದಾಯ್ತು. ಬಿಸಿ ಬಿಸಿ ಚಾಯೂ ಒಳಗಿಳಿದ ಮೇಲೆ ದೇಹ ಸ್ವಲ್ಪ ಬೆಚ್ಚಗಾಯ್ತು. ಹಾಸನದ ಹಾದೀಲಿ ಗಾಡಿಗಳನ್ನ ಮುಂದುವರೆಸಾಯ್ತು.

confusion Continues..
ಕುಣಿಗಲ್ ಹಾದಿಯಲ್ಲಿ ಎಡಕ್ಕೆ ಸಾಗಿದ ನಾವು ಹುತ್ರಿದುರ್ಗದವರೆಗೂ ಸರಿಯಾಗೇ ಸಾಗಿದ್ವಿ. ಆಮೇಲೆ ನಾವು ಮುಂದೆ ಹೋಗ್ತೀವಿ ಅಂತ ಮುಂದೆ ಹೋದ ರಾಜಣ್ಣ ಹುತ್ರಿದುರ್ಗ ಬೆಟ್ಟಕ್ಕೆ ದಾರಿ ಅಂತ ಇರೋ ಬೋರ್ಡನ್ನೂ ದಾಟಿ ಮುಂದೆ ಹೋಗಿದ್ರು.
Two boards which should not be missed if you want to go to Hutridurga for trekking 

ಫೋನ್ ಮಾಡಿದ್ರೆ ತೆಗಿಯಂಗಿಲ್ಲ ! ಸರಿಯಾಯ್ತು ಅಂತ ಮಂಜುನಾಥ್ ಮುಂದೆ ಹೋಗಿ ರಾಜಣ್ಣ ಮತ್ತು ಅವರ ಜೊತೆಗೆ ಮುಂದೆ ಹೋಗಿದ್ದ ಗ್ಯಾಂಗನ್ನು ವಾಪಸ್ ಕರ್ಕಂಡು ಬಂದ್ರು ! ದಿವ್ಯನ ಅದ್ಭುತ ಡ್ರೈವಿಂಗಿನ ಪ್ರದರ್ಶನದ ನಂತರ ನಾವೆಲ್ಲಾ ಸೇಫಾಗಿ ಹುತ್ರಿದುರ್ಗ ಹಳ್ಳಿಗೆ ಭೇಟಿ ಕೊಟ್ವಿ !
Our Group starting towards Trek 

ಆಂಟಿ ಅಟ್ಯಾಕ್ !
ಹುತ್ರಿದುರ್ಗದ ಊರ ಬಾಗಿಲಿನಲ್ಲಿರುವ ಪ್ರವೇಶ ದ್ವಾರವನ್ನು ದಾಟಿ ಮುಂದೆ ಬರುತ್ತಿದ್ದಂತೇ ಮುಂದೆ ಹೋಗುತ್ತಿದ್ದ ರಾಜಣ್ಣ ಮತ್ತು ಮಂಜುನಾಥ್ ಅವರಿದ್ದ ಬೈಕನ್ನು ಊರ ಹೆಂಗಸೊಬ್ರು ಅಡ್ಡ ಹಾಕಿದ್ರು ! ಅಷ್ಟರಲ್ಲೇ ಬಂದ ಸುರೇಶ್ ಅವರ ಬೈಕನ್ನೂ , ಪಕ್ಕದ ಬೈಕವರನ್ನೂ ಬಿಡಲಿಲ್ಲ. ಏನು ಅರ್ಜೆಂಟಲ್ಲಿದೀರಾ ? ಅಡ್ಡ ಹಾಕಿದ್ರೂ ಹಾಗೇ ಹೋಗ್ತಿದೀರಾ ಮರ್ಯಾದೆ ಇಲ್ವಾ ಅಂತ ದನಿ ಏರಿಸೋಕೆ ಶುರು ಮಾಡಿದ್ರು. ಹಿಂದಿದ್ದ ನಮಗೆ ಏನಾಗ್ತಿದೆ ಇಲ್ಲಿ ಅಂತ ಅರ್ಥ ಆಗ್ಲಿಲ್ಲ. ಕೊನೆಗೆ ನೋಡಿದ್ರೆ ಅವರು ಊರಲ್ಲಿ ಜೀರ್ಣೋದ್ದಾರ ಆಗ್ತಿರೋ ಶಂಕರಲಿಂಗೇಶ್ವರ ದೇಗುಲಕ್ಕೆ ಚಂದಾ ಕೇಳೋಕೆ ಬಂದಿದ್ದು ಅಂತ ಅವರ ಮೊಮ್ಮಗ ಚಂದಾ ಪುಸ್ತಕ ತಗೊಂಡು ಬಂದ ಮೇಲೇ ಗೊತ್ತಾಗಿದ್ದು. ರಾಜಣ್ಣ ನೂರು ರೂ ಕೊಟ್ರೂ ಎಲ್ಲಾ ಬೈಕೋರೂ ನೂರು ರೂ ಕೊಡಿ ಅಂತ ಕುತ್ಕೊಂಡ್ರು ಅವ್ರು ! ನಾವೆಲ್ಲಾ ಒಂದೇ ಗುಂಪು ಅಂತ ಅವರಿಗೆ ಮನವರಿಕೆ ಮಾಡ್ಕೊಟ್ಟು ರಾಜಣ್ಣ ಅವರೇ ಹೇಳುವಂತೆ "ಆಂಟಿ ಆಟ್ಯಾಕ್" ನಿಂದ ಎಸ್ಕೇಪಾಗೋ ಹೊತ್ತಿಗೆ ಸಾಕಾಯ್ತು !

ಕೋಟೆ ದ್ವಾರಗಳೂ ಮತ್ತು ಹತ್ತೋ ಮೆಟ್ಟಿಲುಗಳು: 
ಕೋಟೆಗೆ ಒಟ್ಟು ಆರು ಬಾಗಿಲುಗಳೂ ಮತ್ತು ಊರ ಶುರುವಿನಲ್ಲಿರುವ ಬಾಗಿಲೂ ಸೇರಿ ಹುತ್ರಿದುರ್ಗಕ್ಕೆ ಏಳು ಬಾಗಿಲುಗಳಿವೆ. ಒಳಗೆ ಇನ್ನೂ ಕೆಲವು ದ್ವಾರಗಳ ರೀತಿ ಕಲ್ಲು ಜೋಡಿಸಲಾಗಿದೆ. ಆದರೆ ಆ ದ್ವಾರಗಳು ಎಲ್ಲೋ ಮೂಲೆಯಲ್ಲಿದ್ದು ಅವುಗಳ ಮೂಲಕ ಎಲ್ಲೂ ಹೋಗೋ ದಾರಿ ಕಾಣುತ್ತಿರಲಿಲ್ಲ. ಕೋಟೆ ಹತ್ತೋದು ಹೇಗಪ್ಪಾ ಅಂತ ಅಂದುಕೊಳ್ಳೋರಿಗೆ ಇಲ್ಲಿ ಯಾವ ಕಷ್ಟವೂ ಇಲ್ಲ. ಯಾಕೆಂದರೆ ಇಲ್ಲಿ ಹತ್ತೋ ದಾರಿಯಲ್ಲಿನ ಎಲ್ಲಾ ಬಂಡೆಗಳಿಗೂ ಮೆಟ್ಟಿಲುಗಳನ್ನು ಕೆತ್ತಲಾಗಿದೆ. ಒಂದು ಬಾಗಿಲಿನಿಂದ ಇನ್ನೊಂದು ಬಾಗಿಲಿಗೆ ಹೋಗ್ತಿರೋ ತನಕ ಮತ್ತು ಮುಂದೆ ಮೆಟ್ಟಿಲುಗಳು ಕಾಣ್ತಿರೋ ತನಕವೂ ನಾವು ಸರಿ ದಾರಿಯಲ್ಲಿದ್ದೀವಿ ಅಂತಲೇ ಅರ್ಥ. ಬೆಟ್ಟದ ಮೇಲ್ಗಡೆ ಸ್ವಲ್ಪ ಹುಲ್ಲುಗಾವಲು ಸಿಕ್ಕಿದ್ರೂ ಇಲ್ಲಿಗೆ ಆಗಾಗ ಜನ ಬರೋದ್ರಿಂದ ಹುಲ್ಲಿನ ಮಧ್ಯೆ ದಾರಿಯಾಗಿದೆ .

First entrance to the Fort 
Our Group at the Entrance 

 ಮೂರನೇ ಬಾಗಿಲೂ ಮತ್ತು ಮೂರು ಮೀನುಗಳು: 
ಕೋಟೆಯ ಮೇಲೆ ಹಲವು ರೀತಿಯ ಗೂಢಾರ್ಥಗಳಿರೋ ಚಿತ್ತಾರಗಳಿರುತ್ತೆ ಅಂತ ಕೇಳಿದ್ದೆ. ಉದಾಹರಣೆಗೆ ಕೋಟೆಯ ಶುರುವಿನಲ್ಲಿ ನಾಗರಹಾವಿದ್ದರೆ ಅದು ಎಷ್ಟು ಸುತ್ತು ಸುತ್ತಿದೆ ಅನ್ನೋದರ ಮೇಲೆ ಕೋಟೆ ಎಷ್ಟು ಸುತ್ತಿದೆ ಅಂತ ಹೇಳಬಹುದಂತೆ. ಅದೇ ತರಹ ಇಲ್ಲಿರೋ ಮೂರನೇ ಬಾಗಿಲಿನ ಮೇಲೆ ಮೂರು ಮೀನುಗಳಿವೆ !
We at the 3rd Entrance
 ಬೆಟ್ಟದ ಆಂಜನೇಯ: 
ಬೆಟ್ಟವನ್ನು ಹತ್ತೋ ಹೊತ್ತಿಗೆ ಸಣ್ಣ ಆಂಜನೇಯನ ಗುಡಿ ಸಿಗುತ್ತದೆ.  ಕೈಮುಗಿಯುವವರೆಲ್ಲಾ ಶೂ ಬಿಚ್ಚಿ ಜೈ ಹನುಮಾನ್ ಅಂದ್ರೆ ಕೈಮುಗಿಯಲಿಷ್ಟವಿಲ್ಲದವರು ಅಲ್ಲಿನ ಆಳೆತ್ತರದ ಹುಲ್ಲ ಮಧ್ಯ ಫೋಟೋ ಶೂಟ್ ನಡೆಸ್ತಾ ಇದ್ರು. ನಂತರ ಮುಂದುವರದ್ರೆ ಕೆಂಪೇಗೌಡರ ಕಾಲದ ಕೋಟೆಯ ಗುರುತುಗಳು, ಬುರುಜುಗಳು ಕಾಣುತ್ತದೆ.


Full Grasses in few places and a path beneath it

A group selfie during the Trek  

Stairs showing the way and making the path easier 

ಬೆಟ್ಟದ ಮಧ್ಯದ ಶಿವ ದೇಗುಲ: 
ಇನ್ನೊಂದು ಸ್ವಲ್ಪ ಬೆಟ್ಟ ಹತ್ತೋ ಹೊತ್ತಿಗೆ ಬೆಟ್ಟದ ಮಧ್ಯದಲ್ಲೊಂದು  ಮೇಲೆ ಹತ್ತೋ ಮೆಟ್ಟಿಲುಗಳೂ, ಆ ಮೆಟ್ಟಿಲ ಬುಡದಲ್ಲಿ ನಂದಿ ಮಂಟಪವೂ ಕಾಣುತ್ತೆ. ಆ ನಂದಿಗೆ ನಮಸ್ಕರಿಸಿ ಮೇಲೆ ಹತ್ತಿದರೆ ಅಲ್ಲೊಂದು ದೇಗುಲ ಕಾಣುತ್ತೆ. ಕೆಂಪೇಗೌಡರ ಕಾಲದಲ್ಲಿ ಕಟ್ಟಿದ ಆ ದೇಗುಲ ಪಾಳುಬಿದ್ದಿದ್ದರೂ ಅಲ್ಲಲ್ಲಿ ಜೀರ್ಣೋದ್ದಾರ ಮಾಡಲಾಗಿದೆ. ಇದಕ್ಕೆ ಸೋಮವಾರ ಮತ್ತು ಶುಕ್ರವಾರಗಳಂದು ಪೂಜೆ ಸಲ್ಲಿಸಲಾಗುತ್ತದಂತೆ. ಅದರ ಎದುರಿಗೆ ಇರೋ ಹೊಂಡದಲ್ಲಿ ವರ್ಷಪೂರ್ತಿ ನೀರಿರುತ್ತೆ ಎಂದು ಇಲ್ಲಿನ ಜನ ಹೇಳುತ್ತಾರೆ. ಮಳೆಗಾಲದಲ್ಲಿ ಬಂದು ಸಂಗ್ರಹವಾಗೋ ನೀರು ಇಲ್ಲಿಂದ ಉಕ್ಕಿ ಹರಿದು ಕೆಳಗಿರೋ ಹಲವು ಹಳ್ಳಗಳಲ್ಲಿ ಸಂಗ್ರಹವಾಗುತ್ತೆ. ಈಗ ಮೇಲಿನ ನೈಸರ್ಗಿಕ ಪುಷ್ಕರಣಿಯಲ್ಲಿ ಮಾತ್ರ ಸ್ವಚ್ಛ ನೀರಿದ್ದರೂ ಕೆಳಗಿನ ಸಣ್ಣವುಗಳಲ್ಲಿ ನೀರು ಬತ್ತಿ ಹೋಗಿದೆ. ಕೆಲವುದರಲ್ಲಿ ನೀರಿದ್ದರೂ ಇಲ್ಲಿಗೆ ಬರೋ ಬೇಜವಾಬ್ದಾರಿ ಜನರು ಎಸೆದ ಪ್ಲಾಸ್ಟಿಕ್ ಬಾಟಲಿಗಳಿಂದ ಅವು ಕುಡಿಯಲಯೋಗ್ಯವಾಗಿವೆ !

Nandi at the Top of the Hill

Shiva Temple and the small pond infront of it . A portion of the pond goes beneath the rocks touching the base of temple ! 
A Nandi inside the temple 

One more pic near the Mantapa of the temple 
 ಬೆಟ್ಟದ ಮೇಲಣ ಪಾಳು ಮಂಟಪಗಳು: 
ದೇಗುಲದ ಸುತ್ತ ಬಂದರೆ ಅದರ ಆಚೆಯ ಬಂಡೆಯ ಮೇಲೆ ಹತ್ತೋಕೆ ಮೆಟ್ಟಿಲುಗಳನ್ನು ಕೆತ್ತಿರೋದು ಕಾಣಿಸುತ್ತೆ.
Observer Carefully at the Right corner to see the steps going to the other side of the Rock
ಮಂದಿರದ ಪಕ್ಕದಲ್ಲೇ ಸಾಗೋ ಹಾದಿಯಲ್ಲಿ ಸಾಗಿದರೆ ಸುಮಾರಷ್ಟು ಪಾಳು ಬಿದ್ದ ಮಂಟಪಗಳು, ಬುರುಜುಗಳು , ಕೋಟೆಯ ಕಾವಲುಗಾರರು  ಪಿರಂಗಿಯಿಡಬಹುದಾದ ಜಾಗಗಳು ಕಾಣುತ್ತದೆ.
One of the fallen mantapas 
Few more remains of a building 
ಅದರಲ್ಲಿ ಕೆಲವು ಹುಲ್ಲು ಮುಚ್ಚಿಕೊಂಡಿದ್ದರೂ ಪರಸ್ಪರ ಸಂಪರ್ಕಿಸಲ್ಪಡುವ ಕಲ್ಲ ಮೆಟ್ಟಿಲುಗಳಿಂದಲೋ, ಹುಲ್ಲ ಮಧ್ಯದ ಹಾದಿಯಿಂದಲೋ ಕೂಡಿದೆ. ಜನಕ್ಕೆ ಗೊಂದಲವುಂಟಾಗದಿರಲೆಂದು ಎಷ್ಟು ಚೆನ್ನಾಗಿ ಮೆಟ್ಟಿಲು ಕೆತ್ತಿದ್ದಾರೆಂದರೆ ಕೆಲವು ಕಡೆ ಮೂರೇ ಮೆಟ್ಟಿಲು, ಕೆಲವು ಕಡೆ ನಾಲ್ಕೈದು, ಕೆಲವು ಕಡೆ ಸಾಲು ಸಾಲು ಮೆಟ್ಟಿಲು.. ಹೀಗೆ ಮೆಟ್ಟಿಲುಗಳ ಹಾದಿ ಹಿಡಿದು ಹೊರಟರೆ ಎಲ್ಲೂ ಕಳೆದು ಹೋಗದಂತೆ ತುಂಬಾ ಚೆನ್ನಾಗಿ ಕೋಟೆ ಕಟ್ಟಿದ್ದಾರೆ ಇಲ್ಲಿ. ನಾನು ಇತ್ತೀಚೆಗೆ ಕಂಡ ಕೋಟೆಗಳಲ್ಲೇ ಅತ್ಯಂತ ಹೆಚ್ಚು ವ್ಯವಸ್ಥಿತವಾಗಿ ಯೋಜಿಸಿ ಕಟ್ಟಿದ ಕೋಟೆ ಇದಂದ್ರೆ ತಪ್ಪಾಗಲಾರದೇನೋ.

At one the view points 

A path to Descend 

A Group pic :-) 

one more group pic of the Guys . Don't ask me on where Rajanna is looking at ! 


ಕೋಟೆಯಂದ್ರೆ ಬರೀ ಕಲ್ಲಲ್ಲವಿಲ್ಲಿ: 
ಸಾಮಾನ್ಯವಾಗಿ ಕೋಟೆಯಂದ್ರೆ ಬರೀ ಕಲ್ಲು, ಹತ್ತು ಹತ್ತು ಹತ್ತೋದೇ ಆಗುತ್ತೆ ಅನ್ನೋದು ಸಾಮಾನ್ಯ ಭಾವನೆ. ಆದರೆ ಇಲ್ಲಿ ಹಾಗಲ್ಲ. ಒಂದೆಡೆ ಕೋಟೆಯ ಮೇಲೆ ಹತ್ತಿದ್ರೆ ಶಿವಾಲಯವಾದ ನಂತರ ಕೋಟೆಯಿಂದ ಕೆಳಗಿಳಿದು ಮತ್ತೆ ಹತ್ತೋಕೆ ಶುರು ಮಾಡ್ತೀವಿ ಇಲ್ಲಿ ! ಬೆಟ್ಟದ ಮೇಲಿಂದ ಜಾರಿ ಬೀಳದೆ ಹೇಗೆ ಪರಸ್ಪರ ಅಂಟಿಕೊಂಡಿವೆಯೋ ಎಂದು ಅಚ್ಚರಿ ಹುಟ್ಟಿಸುವ ಹಲವು ಬಂಡೆಗಳಿವೆಯಿಲ್ಲಿ. ಅಪರೂಪವೆನಿಸೋ ಪಾಪಾಸ್ ಕಳ್ಳಿಯ ಹೂವು, ಮುತ್ತುಗದ ಹೂ ಮೊದಲಾದ ಹೂಗಳು, ಕಾಮನ್ ಫೋರ್ ರಿಂಗ್, ಕಾಮನ್ ಕ್ರೋ, ಕಾಮನ್ ಟೈಗರ್ ಮುಂತಾದ ಚಿಟ್ಟೆಗಳೂ ಕಾಣಸಿಕ್ಕವು.
Cactus Flower
ಅಲ್ಲಲ್ಲಿ ಮರಗಳ ನೆರಳು, ಕೋಟೆ ಬಾಗಿಲ ನೆರಳು ಇರೋದರಿಂದ ಇಲ್ಲಿ ಬಿಸಿಲ ಕಾಟವೂ ಅಷ್ಟಿಲ್ಲ. ಹತ್ತೋದೂ ಹೆಚ್ಚಿಲ್ಲದ ಕಾರಣ ಸುತ್ತಲ ಪ್ರಕೃತಿಯ ಸೌಂದರ್ಯ ಸವಿಯುತ್ತಾ, ಫೋಟೋ ತೆಗೆಯುತ್ತಾ ಕೋಟೆಯನ್ನು ಏರಬಹುದಿಲ್ಲಿ. ಹತ್ತಿಳಿಯೋದು, ಅಲ್ಲಿದ್ದಿದ್ದು ಎಲ್ಲಾ ಸೇರಿ ಸುಮಾರು ಮೂರೂವರೆ ಘಂಟೆಗಳ ಕಾಲ ನಾವಿದ್ದವಿಲ್ಲಿ. ಕೆಲವರು ರಾತ್ರೆಯೇ ಬಂದು ಸೂರ್ಯೋದಯವ ಸವಿದು ಬೆಳಗ್ಗೆ ಮುಂಚೆ ತೆರಳೋದೂ ಇದೆ.  ಸಂಜೆಗೆ ಮನೆಗೆ ಮರಳಿದ ನನ್ನ ನೆನಪುಗಳು ಮಾಸುವ ಮುನ್ನ ಪದಗಳಾಗಿ ನಿಮ್ಮ ಮುಂದೆ ಅರಳೋ ಪ್ರಯತ್ನದಲ್ಲಿವೆ. ಮತ್ತೊಂದು ಚಾರಣದ್ದೋ ಪ್ರವಾಸದ್ದೋ ನೆನಪುಗಳೊಂದಿಗೆ ಮತ್ತೆ ಭೇಟಿಯಾಗೋಣ ಎಂಬ ನಿರೀಕ್ಷೆಯಲ್ಲಿ ಸದ್ಯಕ್ಕೊಂದು ವಿರಾಮ.




Our Group completing the Trek 

Saturday, January 19, 2019

ಶಿವಗಂಗೆ ಟ್ರಿಪ್ಪು

We at Shivagange
ನಮ್ಮ ಮೂರನೇ ಚಾರಣವಾದ ಸಾವನದುರ್ಗದ ನಂತರ ಎಲ್ಲಿಗೆ ಹೋಗೋದು ಅಂತ ಪ್ಲಾನ್ ಮಾಡ್ತಿದ್ದೆ. ನವದುರ್ಗಗಳಲ್ಲಿ ಮುಂದಿನ ದುರ್ಗವಾದ ಹುತ್ರಿದುರ್ಗಕ್ಕೋ, ಹುಲಿಯೂರು ದುರ್ಗಕ್ಕೋ ಹೋಗಿ ಬರೋಣ ಅಂತ ಪ್ಲಾನ್ ಹಾಕಿದ್ರೂ ಹೆಚ್ಚಿನ ಜನ ಸಿಗದೇ ಅದು ನೆರವೇರಲಿಲ್ಲ. ಸರಿ, ಶಿವಗಂಗೆಗೆ ಹೋಗಿ ಅಲ್ಲೇ ಹತ್ತಿರದಲ್ಲಿರೋ ದೇವರಾಯನದುರ್ಗಕ್ಕಾದರೂ ಹೋಗಿ ಬರೋಣ ಅಂದ್ಕೊಂಡ್ವಿ. ಆದರೆ ಒಮ್ಮೆ ಶಿವಗಂಗೆಯನ್ನು ಹೊಕ್ಕಾಗ ಅಲ್ಲಿರೋ ಅಷ್ಟ ಲಿಂಗಗಳು, ಅಷ್ಟ ವೃಷಭಗಳು, ಒಳಕಲ್ಲು ತೀರ್ಥ, ಪಾತಾಳಗಂಗೆ, ಗಂಗಾಧರೇಶ್ವರ, ಹೊನ್ನಮ್ಮ ದೇವಿಯ ಗುಡಿಗಳನ್ನು ನೋಡೋದರಲ್ಲೇ ಸಂಜೆಯಾಗುತ್ತೆ ಅಂತ ಅಂದ್ಕೊಂಡಿರಲಿಲ್ಲ. ಅದೆಷ್ಟೋ ಕಡೆ , ಬಂಡೆಗಳ ಮೇಲೆಲ್ಲಾ ನಂದಿ, ಕೆತ್ತನೆಗಳು, ಹಳಗನ್ನಡದ ಲಿಪಿಗಳು ನಮ್ಮನ್ನು ಕಾಲದಲೆಯಲ್ಲಿ ಹಿಂದಿಂದೆ ಕೊಚ್ಚಿಕೊಂಡು ಹೋದಂತನಿಸುತ್ತಿತ್ತು.
Entrance to the Old city of Shivagange 

ಅಷ್ಟ ಲಿಂಗಗಳು: 
ಶಿವಗಂಗೆಗೆ ಹೋದವರಿಗೆ ಅಲ್ಲಿನ ಗಂಗಾಧರೇಶ್ವರ ಗುಡಿಯ ಬಗ್ಗೆ ಗೊತ್ತಿರುತ್ತೆ. ಆದರೆ ಅದರ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಸ್ವರ್ಣಾಂಭ, ಶಾಂತೇಶ್ವರ, ಓಂಕಾರೇಶ್ವರ, ರೇವಣ ಸಿದ್ದೇಶ್ವರ, ಕುಂಭೇಶ್ವರ, ಸೋಮೇಶ್ವರ, ಮುದ್ದು ವೀರೇಶ್ವರ ಎಂಬ ಅಷ್ಟ ಲಿಂಗಗಳಿವೆ ಅಂತ ಗೊತ್ತಿರೋಲ್ಲ.ಈಗ ದ್ವಾದಶ ಜ್ಯೋತಿರ್ಲಿಂಗ ಕ್ಷೇತ್ರ ಎಂಬ ಹೆಸರಲ್ಲಿ ಇನ್ನೂ ಹನ್ನೆರಡು ಲಿಂಗಗಳನ್ನು ಸ್ಥಾಪಿಸಲಾಗಿದೆಯಿಲ್ಲಿ
one of the less known rock in Shivagange with a Nandi 


ಅಷ್ಟ ವೃಷಭಗಳು/ಎಂಟು ಬಸವಗಳು: 
ಈ ಬೆಟ್ಟದ ಮೇಲೆ ನಂದಿ ವೃಷಭ/ಬಸವ, ಮಕರ ಬಸವ, ಎಮ್ಮ ಬಸವ/ಮಹಿಷ ಬಸವ, ಗಾರೇ ಬಸವ, ದೊಡ್ಡ ಬಸವ, ಕಡಲೆ ಬಸವ, ಗಿರಿ ಬಸವ ಮತ್ತು ಕೋಡುಗಲ್ಲು ಬಸವ ಎಂಬ ಎಂಟು ಬಸವನ ಮೂರ್ತಿಗಳಿವೆ.
One of the less known Nandi Mantapa in Shivagange 

ಅಷ್ಟ ತೀರ್ಥಗಳು: 
ಇಲ್ಲಿ ಅಗಸ್ತ್ಯ ತೀರ್ಥ, ಶಂಕರ ತೀರ್ಥ, ಕಣ್ವ ತೀರ್ಥ, ಕದಂಬ ತೀರ್ಥ, ಮೈಥಲ ತೀರ್ಥ, ಪಾತಾಳ ಗಂಗೆ, ಒಳಕಲ್ಲು ತೀರ್ಥ ಮತ್ತು ಕಪಿಲ ತೀರ್ಥಗಳೆಂಬ ಎಂಟು ತೀರ್ಥಗಳೂ ಇವೆಯಂತೆ. ಆದರೆ ಪಾತಾಳಗಂಗೆ ಮತ್ತು ಒಳಕಲ್ಲು ತೀರ್ಥಗಳನ್ನು ಬಿಟ್ಟು ಬೇರೆ ಯಾವುದಕ್ಕೂ ಬೋರ್ಡುಗಳಿಲ್ಲದಿರುವುದರಿಂದ ಇವುಗಳ ಬಗ್ಗೆ ತಿಳಿದವರನ್ನು ಕರೆದುಕೊಂಡು ಹೋಗದಿದ್ದರೆ ಇವೇ ಇವು ಅಂತ ಗೊತ್ತಾಗೋದು ಕಷ್ಟ.
One of the less known Theertha

One more Less Known Theertha



ಇತಿಹಾಸ, ದಂತಕತೆಗಳು ಮತ್ತು ಇಲ್ಲಿನ ವಿಶಿಷ್ಟ ಆಚರಣೆಗಳು: 
ಇಷ್ಟೆಲ್ಲಾ ವಿಶೇಷಗಳಿವೆಯಾ ಇಲ್ಲಿ ಅಂದ್ರಾ ? ಇಲ್ಲಿನ ಇತಿಹಾಸ, ದಂತಕತೆಗಳು ಬಹಳವೇ ಇದೆ. ಅದರಲ್ಲಿ ಮುಖ್ಯವಾದದ್ದು ಗಂಗಾಧರೇಶ್ವರ ಮತ್ತು ಹೊನ್ನಮ್ಮ ದೇವಿ ದೇಗುಲಗಳದ್ದು. ಇವನ್ನು  ಚೋಳರ ಕಾಲದಲ್ಲೇ ಕಟ್ಟಲಾಯಿತಂತೆ. ನಂತರ ಹೊಯ್ಸಳ ವಿಷ್ಣುವರ್ಧನ ಮತ್ತು ಕೆಂಪೇಗೌಡನ ಕಾಲದಲ್ಲಿಇವುಗಳನ್ನು  ಜೀರ್ಣೋದ್ದಾರ ಮಾಡಲಾಯಿತು.
Near the Gangadhareshwara temple at the base

ಮೇಲ್ಗಡೆ ಇರುವ ಗಂಗಾಧರೇಶ್ವರ ದೇವಸ್ಥಾನದ ಹಿಂಭಾಗದಲ್ಲೇ ಹೊಯ್ಸಳ ರಾಣಿ ಶಾಂತಲಾ ಜಿಗಿದು ಪ್ರಾಣ ತ್ಯಾಗ ಮಾಡಿದಳೆಂದು ಹೇಳಲಾದ ಜಾಗವೂ ಇದೆ. ಅವಳು ಕೆಳಗೆ ಹಾರುವಾಗ ಸೆರಗಲ್ಲಿ ಅರಳೀ ಬೀಜ ಕಟ್ಟಿಕೊಂಡು ಜಿಗಿದಳು. ಅಲ್ಲಿ ಕಾಣುವ ಅರಳೀ ಬೀಜಗಳು ಈಗಲೂ ಚಿಗುರುತ್ತವೆ. ಅವನ್ನು ತಂದು ಬೇಯಿಸಿದರೆ ರಕ್ತದ ತರ ಆಗುತ್ತೆ ಅಂತ ಸ್ಥಳೀಯರು ನಂಬುತ್ತಾರೆ. ಇಲ್ಲಿರುವ ಹೊನ್ನಮ್ಮ ದೇವಿಯ ದೇಗುಲದ ಬಗೆಯೂ ದಂತಕತೆಯೊಂದಿದೆ. ಈ ಬೆಟ್ಟದ ಮೇಲಿದ್ದ ಹೊನ್ನಮ್ಮ ದೇವಿಯು ಬಸರಿ ಹೆಂಗಸರನ್ನು ಬಲಿ ತೆಗೆದುಕೊಳ್ಳುತ್ತಿದ್ದಳಂತೆ. ಈ ಸರತಿಯಂತೆ ಕೋಟೆಯ ಕಾವಲುಗೈವ ನಾಯಕನ ಹೆಂಡತಿಯೂ ಹೋಗಬೇಕಾಗಿ ಬಂತಂತೆ. ಅವಳು ಕಣ್ಣೀರು ಹಾಕಿಕೊಳ್ಳುತ್ತಾ ಬಂದಾಗ ಎದುರು ಬಂದ ದೇವಿ ನೀನು ಕಣ್ಣೀರು ಹಾಕಿಕೊಂಡು ಬಂದ್ರೆ ಶ್ರೇಯಸ್ಸಲ್ಲ. ನಿನ್ನ ಗಂಡನ ಕೈಯಲ್ಲಿ ಮೂರು ಕವಲೊಡೆದಿರುವ ಬಸರೀ ಮರ ತಂದು ನೆಡೆಸಿ ಬೆಳಿಗ್ಗೆ , ಸಾಯಂಕಾಲ ಪೂಜೆ ಮಾಡಂಗಿದ್ರೆ ನಾನು ಇನ್ಮೇಲೆ ನರಬಲಿ ತಗೊಳ್ಳಲ್ಲ ಅಂತ ವಾಗ್ದಾನ ತಗೊಂಡ್ಲಂತೆ. ನಾಯಕರು ದೇವಿ ದೇವಸ್ಥಾನದ ಕಾವಲುಗಾರರಾಗಿದ್ದವರು, ಬಸರೀ ಮರ ತಂದು ನೆಟ್ಟು ಪೂಜೆ ಮಾಡತೊಡಗಿದರಂತೆ. ಆ ನೆನಪಿಗೆ  ಈಗಲೂ ಪ್ರತೀ ವರ್ಷದ ಯುಗಾದಿ ಆದ ನಂತರ ಬರುವ ಮಂಗಳವಾರದಂದು ದೇಗುಲಕ್ಕೆ ಏರುವಲ್ಲಿ ಸಿಗುವ ಚೌಕದಲ್ಲಿ ಬಸರೀ ಮರ ಇಟ್ಟು ಬೆಳಗ್ಗೆ, ಸಂಜೆಯ ಪೂಜೆಯನ್ನು ಮಾಡಲಾಗುತ್ತದೆ. ಪೂಜೆ ಮಾಡಿದಾಗ ನಮ್ಮ ಮುಖದಲ್ಲಿ ಹೇಗೆ ಬೆವರು ಸುರಿಯುತ್ತಿರುತ್ತೋ ಅದೇ ರೀತಿ ಹೊನ್ನ ದೇವಿ ದೇಗುಲದಲ್ಲಿ ನೀರು ಜಿನುಗುತ್ತಿರುತ್ತಂತೆ. ಹದಿನೈದು ದಿನ. ಅದನ್ನು ಉಗ್ರರೂಪ ಎನ್ನುತ್ತಾರೆ.  ಅದಾದ ನಂತರ ಹೊನ್ನಾ ದೇವಿ(ಹೊನ್ನಮ್ಮ ದೇವಿ/ಸ್ವರ್ಣಾಂಭ ದೇವಿ)ಗೆ ಹದಿನಾರು ಸೇರು ಆರತಿ, ಗಂಗಾಧರೇಶ್ವರನಿಗೆ ಐದು ಸೇರು ಆರತಿ, ಬೆಟ್ಟದ ಸುತ್ತಮುತ್ತ ಎಷ್ಟು ದೇವರಿದ್ದಾರೋ ಅವರಿಗೆಲ್ಲಾ ಒಂದೊಂದು ಸೇರು ಆರತಿ ಮಾಡಿ, ಅಡಿಕೆ ಹೊಂಬಾಳೆಯನ್ನು ತಗೊಂಡು ಹೋಗಿ ಬಸರಿ ಮರಕ್ಕೆ ಕೊಡ್ತಾರೆ. ಅದು ಐದು ದಿನಕ್ಕೆ ಹೊಸ ಗಿಡ ಚಿಗುರಿದಂತೆ ಚಿಗುರಿರುತ್ತೆ. ಅದನ್ನ ಬುಧವಾರ ದಿನ ಕಿತ್ತು ಕೆಳಗಿರೋ ಕಲ್ಯಾಣಿಗೆ ಬಿಡುತ್ತಾರೆ. ಗುರುವಾರದಿಂದ ಹೊನ್ನಾ ದೇವಿಗೆ ಹೊಸ ಕಾಯಿ, ಗಂಗೆ, ಗೌರಿಗಳನ್ನ ಕೊಡೋದು, ಗಂಗಾಧರೇಶ್ವರನಿಗೆ ವಾಹನ, ತೇರು, ತೆಪ್ಪೋತ್ಸವಗಳನ್ನು ನಡೆಸಲಾಗುತ್ತೆ. ಯುಗಾದಿ ಆದ ಮೇಲೆ ಬರುವ ಮಂಗಳವಾರದಂದು ಕಂಬ ಹಾಕೋದು.ಅದಾಗಿ ಹದಿನೈದು ದಿನಕ್ಕೆ ಹೊನ್ನಾದೇವಿಗೆ ಮಡೆ ಆರತಿ. ಬೆಟ್ಟದ ಮೇಲೆ ಗಂಗಾಧರೇಶ್ವರ, ವೀರಭದ್ರ ಸ್ವಾಮಿ ಗುಡಿಗಳ ಎದುರಿರೋ ಬಂಡೆಗಳ ಮೇಲೆ ಎರಡು ಕಂಬಗಳಿವೆ. ಬಾಂಡಲಿ ತರ ಇರೋ ಕಂಬದ ಮೇಲೆ ಪ್ರತೀ ಹುಣ್ಣಿಮೆಗೆ ದೀಪ ಹಚ್ಚುತ್ತಾರೆ. ಮತ್ತೊಂದು ಕಂಬಕ್ಕೆ ಉರಿಗಂಬ ಎಂದು ಹೆಸರು. ಸಂಕ್ರಾಂತಿ ಬರುವ ಜನವರಿಯ ಹದಿನಾರನೇ ತಾರೀಖು ಈ ಉರಿಗಂಬ/ಹುರಿಗಂಬ/ಹುಲಿಗಂಬ ದಲ್ಲಿ ಹಾಲು ಬರುತ್ತೆ ಅಂತ ನಂಬುತ್ತಾರೆ. ಆಗ ಗಂಗೆ, ಗೌರಿ, ಗಂಗಾಧರೇಶ್ವರನಿಗೆ ಧಾರೆ ಮುಹೂರ್ತವನ್ನು ನಿಶ್ವಯಿಸುತ್ತಾರೆ. ತೇರೇನು ಇರೋಲ್ಲ. ಅದರ ಮುಂಚಿನ ಹದಿನಾಲ್ಕರ ರಾತ್ರೆ ಹನ್ನೆರಡಕ್ಕೇ ಈ ಹುಲಿಗಂಬದಲ್ಲಿ ಒಸರೋ ತೀರ್ಥವನ್ನು ನೋಡೋಕೆ ಅಲ್ಲಿ ಜನ ಸೇರಿರುತ್ತಾರೆ. 


ಹೋಗೋದು ಹೇಗೆ ? 
ಬೆಂಗಳೂರಿನಿಂದ ತುಮಕೂರಿಗೆ ಹೋಗೋ ರಸ್ತೆಯಲ್ಲಿ ಸಾಗಿ, ಡಾಬಸ್ ಪೇಟೆಗಿಂತ ಮುಂಚೆ ಸಿಗೋ ಎಡಕ್ಕೆ ಸಾಗೋ ತಿರುವಿನಲ್ಲಿ ಆರೂವರೆ ಕಿ.ಮೀ ಸಾಗಿದರೆ ಶಿವಗಂಗೆ ಸಿಗುತ್ತೆ. ಡಾಬಸ್ ಪೇಟೆಯಿಂದ ರಾಮನಗರಕ್ಕೆ ಹೋಗೋ ಹೈವೆಗೆ ಬೆಂಗಳೂರು-ತುಮಕೂರು ಹೈವೇಯಿಂದ ಹೊರಬರುವ ನಾವು ಸೇರುವ ಜಾಗದಿಂದ ಒಂದು ಕಿ.ಮೀ ಒಳಗೆ ಹೋದರೆ ಶಿವಗಂಗೆ ಬೆಟ್ಟ ಸಿಗುತ್ತೆ. ಅಲ್ಲಿ ರಸ್ತೆಯನ್ನು ಅಡ್ಡ ಹಾಕುವ ಜನರಿಂದ ೨೦ ರೂ ಟಿಕೇಟ್ ಪಡೆದು ಒಳಹೋಗಬೇಕು. ದೇಗುಲದ ಎದುರು ಪಾರ್ಕಿಂಗಿಗೆ ಟಿಕೇಟ್ ಕೊಡೋಕೆ ಬರೋ ಜನರಿಗೆ ಮುಂಚೆ ತಗೊಂಡ ಟಿಕೇಟ್ ತೋರಿಸಿದ್ರೆ ನಡೆಯುತ್ತೆ. ಬೇರೆ ಟಿಕೇಟ್ ತಗೊಳ್ಳೋ ಅವಶ್ಯಕತೆಯಿಲ್ಲ. ದೇಗುಲದ ಎದುರಿಗೇ ಚಪ್ಪಲಿ ಬಿಟ್ಟು ಮೇಲೆ ಹತ್ತಬಹುದು. ಬೆಟ್ಟದ ತುದಿಯವರೆಗೂ ಹೋಗೋದಾದರೆ ಚಪ್ಪಲಿ/ಶೂ ಹಾಕಿಕೊಂಡೇ ಮೇಲೆ ಹತ್ತಬಹುದು. ಸ್ವಲ್ಪ ಮೇಲೆ ಹತ್ತಿದ ಮೇಲೆ ಬಲಕ್ಕೆ ಹೋದರೆ ಹೊನ್ನಮ್ಮ ದೇವಿ, ಗಂಗಾಧರೇಶ್ವರ ದೇಗುಲಕ್ಕೆ ಸಾಗುತ್ತೆ. ಎಡಕ್ಕೆ ಹೋದರೆ ಬೆಟ್ಟದ ಮೇಲೆ ಸಾಗುತ್ತೆ. ಬಲಕ್ಕೆ ಹೋದರೆ ಹೊನ್ನಮ್ಮ ದೇವಿಯ ದೇಗುಲದ ಬಳಿ ಚಪ್ಪಲಿ ಬಿಡೋಕೆ ಮತ್ತೆ ಅವಕಾಶವಿದೆ. ಸೀದಾ ಮೇಲೆ ಹೋದರೆ ಗಂಗಾಧರೇಶ್ವರ ದೇಗುಲದ ಉತ್ತರ ದ್ವಾರದ ಬಳಿಯಿಂದ ಬಂದು ಅಲ್ಲಿನ ಶಿಲ್ಪಕಲೆಯನ್ನು ನೋಡಬಹುದಾದರೂ ದೇಗುಲವನ್ನು ಪ್ರವೇಶಿಸಲು ಹೊನ್ನಮ್ಮ ದೇವಿಯ ಗುಡಿಯ ಪಕ್ಕದಲ್ಲಿರುವ ದಾರಕ್ಕೇ ಬರಬೇಕಾಗಿರುವುದರಿಂದ ದೇವಸ್ಥಾನಕ್ಕೆ ಹೋಗ್ತಾ ಚಪ್ಪಲಿ ಏನ್ಮಾಡೋದಪ್ಪ ಅನ್ನೋ ತಲೆಬಿಸಿಯಿಲ್ಲ. ಬೆಟ್ಟ ಏರುವಾಗ ಅಲ್ಲಿನ ಕಲ್ಲುಬಂಡೆಗಳ ಮೇಲೆ ಕಾಲು ಸುಡೋದರಿಂದ ಚಪ್ಪಲಿ/ಶೂ ಹಾಕ್ಕೊಂಡೇ ಹೋಗೋದು ಉತ್ತಮ ಅಂತ ನಮ್ಮ ಅನಿಸಿಕೆ


ಎಮ್ಮ ಬಸವ: 
ಊರ ಪ್ರವೇಶದ್ವಾರವ ದಾಟಿ, ಬೆಟ್ಟದ ಪ್ರವೇಶದ್ವಾರದ ಮೆಟ್ಟಿಲುಗಳನ್ನು ಹತ್ತುತ್ತಾ ಬಲಕ್ಕೆ ಸಿಕ್ಕ ದೇಗುಲಗಳತ್ತ ಹೊರಳದೇ ಎಡಕ್ಕೆ ತಿರುಗಿದ್ರೆ ದೊಡ್ಡ ನಂದಿಯೊಂದು ಎದುರಾಗುತ್ತೆ. ಅದಕ್ಕೆ ಎಮ್ಮ ಬಸವ/ಮಹಿಷ ಬಸವ ಅಂತ ಹೆಸರು. ಅದರ ಪಕ್ಕದಲ್ಲೇ ಶೌಚಾಲಯವೊಂದು, ಮೇಲಕ್ಕೆ ಹತ್ತೋ ಮೆಟ್ಟಿಲುಗಳು ಸಿಗುತ್ತೆ. ಇಡೀ ಬೆಟ್ಟದ ಆವರಣದಲ್ಲಿ ಸಿಗೋ ಶೌಚಾಲಯ ಇದೊಂದೇ. ಎಮ್ಮ ಬಸವನ ಬಳಿ ಫೋಟೋ ತೆಗೆಸಿಕೊಂಡು ಮುಂದೆ ಸಾಗಿದ್ವಿ.
Infront of Emma Basava

 ಕೆಂಪೇಗೌಡನ ಹಜಾರ:
ಇಲ್ಲಿನ ದೇಗುಲಗಳನ್ನು ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರ ಕಾಲದಲ್ಲಿ ಜೀರ್ಣೋದ್ದಾರ ಮಾಡಲಾಯಿತು ಅಂತ ಮೇಲೆ ಹೇಳಿದ್ದೆನಲ್ಲ. ಆ ಕಾಲದಲ್ಲಿ ಕಟ್ಟಿದ ಮಂಟಪವೊಂದು ಸಿಗುತ್ತೆ ಮೇಲೆ ಹತ್ತುವಾಗ. ಕೆಂಪೇಗೌಡನ ಹಜಾರ ಎಂದು ಕರೆಯಲ್ಪಡುವ ಇಲ್ಲಿ ಕುಳಿತು ಇಲ್ಲಿನ ಶಿಲ್ಪಗಳನ್ನು , ಸುತ್ತಲ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಪಕ್ಕದಲ್ಲೇ ಧ್ವಜಸ್ಥಂಭ, ಇನ್ನೆರಡು ನಂದಿ ಮಂಟಪಗಳೂ ಕಾಣುತ್ತೆ. ಅಲ್ಲಿ ಬಲಕ್ಕೆ ಕೋಟೆಯ ಕುರುಹುಗಳೂ, ಗಂಗಾಧರೇಶ್ವರ ದೇಗುಲದ ಉತ್ತರ ದ್ವಾರಗಳೂ ಕಾಣುತ್ತೆ. ಅತ್ತ ಸಾಗದೇ ಸೀದಾ ಮೇಲಕ್ಕೆ ಹತ್ತಿದರೆ ಮತ್ತೊಂದು ನಂದಿ ದ್ವಾರದ ಮೂಲಕ ಬೆಟ್ಟ ಹತ್ತೋಕೆ ಶುರು ಮಾಡುತ್ತೀವಿ. ಇಲ್ಲೂ ಬಲಕ್ಕೆ ನಂದಿ ಮಂಟಪವೊಂದು ಕಾಣುತ್ತೆ.
At KempeGowdana Hajara

Remains of the Fort and one more Nandi mantapa at the Backdrop
Remains of the Fort

Ascending the hill











View of the Kalyani and One more Nandi Mantapa as seen from the top
 ಒಳಕಲ್ಲು ತೀರ್ಥ: 
ಸ್ವಲ್ಪ ಬೆಟ್ಟ ಹತ್ತೋ ಹೊತ್ತಿಗೆ ಒಳಕಲ್ಲು ತೀರ್ಥಕ್ಕೆ ದಾರಿ ಅಂತ ಬೋರ್ಡೊಂದು ಕಾಣುತ್ತೆ. ಅದರಲ್ಲಿ ಬಲಕ್ಕೆ ಇರೋ ಮುಖ್ಯ ದಾರಿಯಲ್ಲಿ ಎಲ್ಲರೂ ಸಾಗುತ್ತಾರೆ. ಅದರ ಬದಲು ಎಡಕ್ಕಿರೋ ದಾರಿಯಲ್ಲಿ ಸಾಗಿದರೆ ಮತ್ತೊಂದು ನಂದಿ ಮಂಟಪ ಸಿಗುತ್ತೆ. ಅಲ್ಲಿನ ಮಂಟಪ ಮತ್ತು ಮೂರ್ತಿಗಳನ್ನು ನೋಡಿಕೊಂಡು ಒಳಕಲ್ಲು ತೀರ್ಥಕ್ಕೆ ಸಾಗಬಹುದು.

One more Nandi Mantapa Near Olakallu Teertha
ಇಲ್ಲಿ ಹೆಸರೇ ಹೇಳುವಂತೆ ಒರಳ ರೀತಿಯಿರುವ ಕಲ್ಲೊಂದಿದೆ. ಅದರ ಒಳಗೆ ನೀರಿರುತ್ತೆ. ಅದರಲ್ಲಿ ಕೈ ಹಾಕಿದಾಗ ನೀರು ಸಿಕ್ಕಿದ್ರೆ ಪುಣ್ಯ ಮಾಡಿದ್ದೀವಿ ಅಂತ. ಇಲ್ಲಾಂದ್ರೆ ತಪ್ಪಾಗಿದೆಯಪ್ಪಾ ದೇವ್ರೆ, ಮುಂದಿನ ಸಲ ಬಂದಾಗಲಾದ್ರೂ ನೀರು ಸಿಗೋ ಹಾಗೆ ಮಾಡು ಅಂತ ಬೇಡ್ಕೋಬೇಕು ಅಂತ ಇಲ್ಲಿನವರ ನಂಬಿಕೆ.



ಹಿಂದಿನ ಸಲ ಗೆಳೆಯರೊಂದಿಗೆ ಬಂದಾಗ್ಲೂ ಸಿಕ್ಕಿತ್ತು ನನಗೆ. ಈ ಸಲ ಅಕ್ಷತಾಳೊಂದಿಗೆ ಬಂದಾಗ್ಲೂ ನೀರು ಸಿಕ್ಕಿತು ನಂಗೆ. ಹಿಂದಿನ ಸಲಕ್ಕಿಂತಲೂ ಮೇಲೇ ಇದೆಯೇನೋ ಈ ಬಾರಿ ಅನಿಸಿದ್ದು ಸುಳ್ಳಲ್ಲ ! ಆಳಕ್ಕೆ ಕೈ ಹಾಕಿದ್ರೆ ಸಿಗುತ್ತೆ ಅಂತ ಕೆಲವರೂ , ಪಾಪ ಪುಣ್ಯಗಳ ಆಧಾರದ ಮೇಲೆ ಕೆಲವರೂ ವಾದಿಸುತ್ತಾ ಇದ್ದಾಗ ನಮ್ಮ ಮುಂಚೆ ಹೋದವರಿಗೆ ನೀರು ಸಿಕ್ಕದ್ದು ಕಂಡು ಒಂದು ಬೊಗಸೆ ನೀರು ತೆಗೆದು ಮತ್ತೆ ಅದೇ ತೀರ್ಥಕ್ಕೆ ಹಾಕಿ , ಪಕ್ಕದ ವೀರಭದ್ರ ಸ್ವಾಮಿಗೆ ನಮಸ್ಕರಿಸಿ, ಅದರೆದುಗಿರೋ ಹಳೆಗನ್ನಡ ಶಾಸನಗಳ ಓದೋ ಪ್ರಯತ್ನದಲ್ಲಿ ಮುಂದೆ ಬಂದ್ವಿ. ಹಳೆಗನ್ನಡ ಶಾಸನಗಳ ಅಧ್ಯಯನ ಮಾಡೋ ಆಸಕ್ತಿಯಿರೋರು ಇಲ್ಲಿಗೊಮ್ಮೆ ಭೇಟಿ ಕೊಡಬಹುದು. ಇಲ್ಲಿ ಒಳಹೋಗೋಕೆ ೫ ರೂಗಳ ಟಿಕೇಟ್


ದ್ವಾದಶ ಜ್ಯೋತಿರ್ಲಿಂಗಗಳು: 
ಹನ್ನೆರಡು ಜ್ಯೋತಿರ್ಲಿಂಗಗಳನ್ನು ನೋಡೋಕೆ ಭಾರತದಾದ್ಯಂತ ತಿರುಗೋಕಾಗಲ್ಲ, ಅದರ ಬದಲು ಇಲ್ಲೇ ದರ್ಶನ ಮಾಡಬಹುದು ಎಂಬ ಉದ್ದೇಶದಿಂದ ಇಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆಯಂತೆ ! ನಂಬಿಕೆಗಳೇನೇ ಇದ್ರೂ ಸುಡೋ ಬಿಸಿಲಲ್ಲಿ ನೆರಳೀವ ಈ ಜಾಗ, ಇಲ್ಲಿರೋ ಶಿವ ಪಾರ್ವತಿ, ನಂದಿಗಳ ಹಿನ್ನೆಲೆಯಲ್ಲಿ ಕಾಣೋ ಶಿವಗಂಗಾ ಶಿಖರ, ಕೆಳಗೆ ಮನಸೆಳೆವ ಪ್ರಕೃತಿಗಳು ಖುಷಿಕೊಡುತ್ತೆ.
Near Dwadasha Jyotirlinga


ಬೆಟ್ಟದ ಹಾದಿ: 
ಈ ಲಿಂಗಗಳ ದಾಟಿ ಮುನ್ನಡೆದ ಮೇಲೆ ಮುಂದಿನ ಹಾದಿ ಕಷ್ಟವಾಗುತ್ತೆ. ಮೊದಲು ಸಿಗೋ ಮೆಟ್ಟಿಲುಗಳು, ನಂತರ ಸಿಗೋ ಗುಹೆ, ಗುಹೆಯಾದ ಮೇಲೆ ಸಿಗೋ ಬಂಡೆಗಳ ಮೇಲೆ ಮೇಲೆ ಹತ್ತಲು ಮಾಡಿರೋ ಗುರುತುಗಳಿಂದ ಹತ್ತೋದು ಒಂಥರಾ ಮಜವೆನಿಸುತ್ತೆ. ಸಾವನದುರ್ಗದ ರೀತಿಯ ಇಳಿಜಾರಿನ ಬಂಡೆಗಳು ಇರದಿದ್ದರೂ ಇಲ್ಲಿ ಸ್ವಲ್ಪ ಎಚ್ಚರವಹಿಸೋದು ಅಗತ್ಯ

Steep Steps starting towards the top of the hill
 ಬೆಟ್ಟದ ಮೇಲಿನ ನಂದಿ: 
ಬೆಟ್ಟದ ಮೇಲೆ ಸಾಗುತ್ತಿದ್ದಂತೆ ಹಾದಿ ಇನ್ನೂ ಕಠಿಣವಾಗುತ್ತಾ ಸಾಗುತ್ತೆ. ಬ್ಯಾಗಿಗೆ ಕೈ ಹಾಕೋಕೆ ಬರೋ ಮಂಗಗಳು, ಬೀಸೋ ಗಾಳಿ, ಕಡಿದಾದ ಮೆಟ್ಟಿಲು, ಮತ್ತೊಂದೆಡೆ ನೋಡಿದರೆ ಭಯ ಹುಟ್ಟಿಸೋ ಪ್ರಪಾತ ಕೆಲವು ಸ್ಥಳಗಳಲ್ಲಿ ಭಯ ಹುಟ್ಟಿಸಬಹುದೇನೋ. ಆದರೆ ಇಲ್ಲಿರೋ ಕಂಬಿಗಳನ್ನು ಹಿಡಿದುಕೊಂಡು ಅಗಲವಾದ ಮೆಟ್ಟಿಲುಗಳು ಇರುವ ಕಡೆ ಬಂದರೆ ಯಾವ ಅಪಾಯವೂ ಇಲ್ಲವಿಲ್ಲಿ. ಬೆಟ್ಟ ಹತ್ತಿ ಮುಗಿದ ಮೇಲೆ ಕಾಣೋ ಸಣ್ಣ ಬಂಡೆಯ ಮೇಲೆ ನಂದಿಯಿದ್ದಾನೆ. ಅಲ್ಲಿಗೆ ಸಾಗೋ ಹಾದಿಯಲ್ಲೂ ಸ್ವಲ್ಪ ಎಚ್ಚರವಹಿಸಬೇಕು.

Path to reach towards Nandi
ನಂದಿಯ ಸುತ್ತಲೂ ಪ್ರದಕ್ಷಿಣೆ ಹಾಕಲು ಕಬ್ಬಿಣದ ಕಂಬಿಗಳನ್ನು ಕಟ್ಟಿ ಕೆಳಗೆ ಬೀಳದಂತೆ ರಾಡುಗಳನ್ನು ಕಟ್ಟಿದ್ದರೂ ಅಲ್ಲಿ ಕೂತಿರೋ ಮಂಗಗಳಿಂದ ಸ್ವಲ್ಪ ಎಚ್ಚರವಹಿಸಬೇಕು . ಕೈಯಲ್ಲೊಂದು ಸಣ್ಣ ಕೋಲನ್ನು ಹಿಡಿದುಕೊಂಡೋ, ಕೈಯಲ್ಲಿದ್ದ ಬ್ಯಾಗನ್ನು ಕೆಳಗಿರುವವರ ಬಳಿ ಕೊಟ್ಟೋ ಮಾಡದಿದ್ದರೆ ಅಪಾಯ ತಪ್ಪಿದ್ದಲ್ಲ.
We at the top spot near the Nandi
View Seen from Nandi
 ಗಂಗಾಧರೇಶ್ವರ ಮತ್ತು ವೀರಭದ್ರ ಗುಡಿಗಳು: 
ನಂದಿಯನ್ನು ನೋಡಾದ ಮೇಲೆ ಪಕ್ಕದಲ್ಲಿರೋ ಹಾದಿಯಲ್ಲಿ ಸಾಗಿದರೆ ಮತ್ತೆರಡು ಗುಡಿಗಳು ಕಾಣುತ್ತೆ. ನಾವು ಹೋದಾಗ ಬಾಗಿಲು ಹಾಕಿತ್ತಾದರೂ ಹನ್ನೆರಡು ಘಂಟೆಯ ಹೊತ್ತಿಗೆ ಮತ್ತೆ ತೆಗೆದರು.
Gangadhareshwara temple. Veerabhadra temple is at its left 

ಅದರ ಹಿಂದೆಯೇ ಹೊಯ್ಸಳ ರಾಣಿ ಶಾಂತಲೆ ಧುಮುಕಿ ಆತ್ಮಹತ್ಯೆ ಮಾಡಿಕೊಂಡ ಜಾಗವೂ ಇದೆ. ಆದರೆ ಈ ಬಗ್ಗೆ ಇಲ್ಲಿ ಯಾವುದೇ ಬೋರ್ಡಿರದೇ ಇರುವುದರಿದ ಸುಮಾರು ಜನ ಅದನ್ನು ನೋಡದೇ ಮುಂದೆ ಹೋಗುತ್ತಾರೆ. ಹಿಂದೆ ಹೊದರೆ ಈಗ ಹಾಕಿರೋ ಕಂಬಿಯ ಬಳಿಯೇ ಆಕೆ ಧುಮುಕಿದ್ದು ಎಂದು ಜನ ಹೇಳುತ್ತಾರೆ !  ಅದನ್ನು ದಾಟಿ ಬಲಕ್ಕಿರುವ ಮತ್ತೊಂದು ಬಂಡೆಗೆ ಬಂದರೆ ಅಲ್ಲಿ ಎಣ್ಣೆಗಂಬ ಮತ್ತು ಉರಿಗಂಬಗಳನ್ನು ಕಾಣಬಹುದು. ಆ ಕಂಬಗಳ ವೈಶಿಷ್ಟ್ಯವನ್ನು ಆಗಲೇ ಓದಿದ್ದೆವು.
Near Urigamba and Enne Kamba

ಪಾತಾಳಗಂಗೆ: 

ಮೇಲಿನ ಜಾಗಗಳನ್ನೆಲ್ಲಾ ನೋಡಿ ಕೆಳಗೆ ಬರೋ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಮೇಲಿನವರೆಗೂ ಹೋದರೂ ಇಲ್ಲಿಗೆ ಹೋದಾಗ ನೋಡಲೇಬೇಕು ಎಂದುಕೊಂಡಿದ್ದ ಪಾತಾಳಗಂಗೆ ಸಿಕ್ಕಿರಲಿಲ್ಲ ! ಹಾಗಾಗಿ ಸಿಕ್ಕ ಅಂಗಡಿಗಳಲ್ಲೆಲ್ಲಾ ಪಾತಾಳಗಂಗೆ ಎಲ್ಲಿ ಅಂತ ಕೇಳಿಕೊಳ್ಳುತ್ತಲೇ ಕೆಳಗಿಳಿದೆವು . ಎಲ್ಲರೂ ಇನ್ನೂ ಕೆಳಗಿದೆ ಅನ್ನೋರೆ.  ಕೊನೆಗೆ ಹೊನ್ನಮ್ಮ ದೇವಿಯ ಗುಡಿಯ ಬಳಿ ಬಂದಾಗ ಅಲ್ಲೇ ಬಲಗಡೆ ಪಾತಾಳಗಂಗೆ ಅಂತ ಇದ್ದ ಬೋರ್ಡು ಕಂಡಿತು ! ಇಲ್ಲಿ ಬಂಡೆಗಳ ನಡುವೆ ಇರೋ ನೀರಿಗೇ ಪಾತಾಳಗಂಗೆ ಅಂತ ಕರೆದು ಪೂಜಿಸಲಾಗುತ್ತದೆ. ಇದಕ್ಕೆ ಹತ್ತು ರೂಗಳ ಟಿಕೇಟ್.
Near Patalagange 
ಮುಂಚೆಯೆಲ್ಲಾ ನೀರಿಗೆ ಹೂಗಳನ್ನು ತೇಲಿಬಿಟ್ಟು ನೀರನ್ನು ಹಾಳು ಮಾಡುತ್ತಿದ್ದರಿಂದ ಈಗ ನೀರಿಗೆ ಏನನ್ನೂ ಹಾಕುವಂತಿಲ್ಲ. ಇಲ್ಲಿನ ಬಂಡೆಗಳ ನಡುವಿನ ನೀರಲ್ಲದೇ ಬಂಡೆಯ ಮೇಲೆ ಕೆತ್ತಿರುವ ದೊಡ್ಡ ಗಾತ್ರದ ವೀರಭದ್ರನನ್ನು ನೋಡೋದೇ ಒಂದು ಚೆಂದ. ಇಲ್ಲಿಂದ ಕೋಟೆಯ ಪಳೆಯುಳಿಕೆಗಳು, ಪಾಳುಬಿದ್ದ ಪುಷ್ಕರಿಣಿ, ದೇಗುಲಗಳ ಕುರುಹುಗಳನ್ನೂ ಕಾಣಬಹುದು. ಇಲ್ಲಿ ಮಗು ತೇಲಿಬಿಟ್ಟು ಕಳ್ಕೊಂಡೋರೊಬ್ರಿಗೆ ಇಲ್ಲಿಂದ ಹದಿನೇಳು ಕಿ.ಮೀ ದೂರವಿರೋ ಕುದೂರು ಎಂಬಲ್ಲಿ ಸಿಕ್ಕಿತ್ತಂತೆ. ಹಾಗಾಗಿ ಈ ಪಾತಾಳಗಂಗೆ ಅಲ್ಲಿಗೆ ಹೋಗಿ ಸೇರುತ್ತಾಳೆ ಎಂದು ಹೇಳುತ್ತಾರೆ. ಅಲ್ಲೂ ಒಂದು ಪುರಾತನ ಗುಡಿಯಿದೆ ಎಂದು ತಿಳಿದು ಬಂತು.
Patala Gange
ಕೆಳಗಿನ ಗುಡಿಗಳು:
ಗಂಗಾಧರೇಶ್ವರ, ಸ್ವರ್ಣಾಂಭ ದೇವಸ್ಥಾನಗಳು  ಹೇಗಿದ್ರೂ ಬಾಗಿಲು ಹಾಕಿದ್ವು . ತೆಗೆಯೋದು ಐದು ಘಂಟೆಗೆ ಅಂತ ತಿಳಿದ ನಾವು ಇದನ್ನಾದರೂ ನೋಡಿಕೊಂಡು ಹೋಗೊಣ ಅಂತ ಪಾತಾಳಗಂಗೆಗೆ ಬಂದಿದ್ವಿ. ಆದರೆ ಪಾತಾಳಗಂಗೆಯನ್ನು ನೋಡಿ ಹೊರಬರೋ ಹೊತ್ತಿಗೇ ಘಂಟೆ ಮೂರೂಮುಕ್ಕಾಲಾಗುತ್ತಾ ಬಂದಿತ್ತು.  ಇಲ್ಲಿಯವರೆಗೆ ಬಂದದ್ದು ಬಂದಾಗಿದೆ , ಇಲ್ಲೇ ಊಟ ಮಾಡ್ಕೊಂಡು ಇವೆರಡನ್ನೂ ನೊಡ್ಕೊಂಡೇ ಹೋಗೋಣ ಅಂದ್ಕೊಂಡ್ವಿ. ಕೆಳಗಡೆ ಅನ್ನಸಂತರ್ಪಣೆ ನಡೀತಾ ಇರ್ಬೋದು ಇನ್ನೂ ಅಂದ್ರು ಅಲ್ಲೇ ಯಾರೋ. ಅಲ್ಲಿಗೆ ಹೋಗುವ ಹೊತ್ತಿಗೆ ಅದು ಮುಗಿದ್ರೂ ಇನ್ನೂ ಕೆಳಗಿಳಿದು ಕೆಳಗಿದ್ದ ಹೋಟೆಲ್ ಸ್ವರ್ಣಾಂಭದಲ್ಲಿ ಅನ್ನ ಸಾಂಬಾರ್, ಮತ್ತು ಸೂಪರ್ರಾಗಿದ್ದ ಫ್ರೈಡ್ ರೈಸ್ ತಿಂದು ಮತ್ತೆ ಮೇಲೆ ಬರುವ ಹೊತ್ತಿಗೆ(ನಾಲ್ಕೂವರೆಗೇ) ಗಂಗಾಧರೇಶ್ವರ ದೇಗುಲ ತೆಗೆದಿತ್ತು. ಅದರೊಳಗಿರುವ ಮೂರ್ತಿಗಳು, ನಂದಿ ಮಂಟಪ, ಹೊಯ್ಸಳ ಶಿಲ್ಪಗಳು ಮುಂತಾದವನ್ನು ನೋಡಿಕೊಂಡು ಹೊರಬರುವ ಹೊತ್ತಿಗೆ ಸ್ವರ್ಣಾಂಭಾ ದೇಗುಲವೂ ತೆಗೆದಿತ್ತು. ಬೆಟ್ಟದ ಬಂಡೆಗಳ ಕೆಳಗಿನ ಗುಡಿಯದು. ಅಲ್ಲೂ ನಮಸ್ಕರಿಸಿ ಹೊರಬಂದ ನಾವು ಸೀದಾ ಮನೆಯ ಹಾದಿ ಹಿಡಿದೆವು.
Sculptures at Gangadhareshwara temple

Architecture of Gangadhareshwara temple at the base of the hill