Monday, August 13, 2018

ರಾಮದೇವರ ಬೆಟ್ಟ ಚಾರಣ-೨

ರಣಹದ್ದು ವನ್ಯಜೀವಿ ವಿಭಾಗದ ಗೇಟು ತೆರೆಯೋವರೆಗೆ ಕಾದ ನಾವು ತಲಾ ೨೫ ಮತ್ತು ಗಾಡಿಗೆ ೧೦ ರೂ ಅಂತ ಪ್ರವೇಶಧನ ಕೊಟ್ಟು ಒಳನಡೆದೆವು. ಅಲ್ಲಿಂದ ಸುಮಾರು ಮುನ್ನೂರು ಮೀಟರ್ ಟಾರ್ ರಸ್ತೆಯಿದೆ. ಅದನ್ನ ದಾಟುತ್ತಿದ್ದಂತೆ ಸಿಗುವುದೇ ರಾಮದೇವರ ಬೆಟ್ಟಕ್ಕೆ ಹತ್ತೋ ಪ್ರವೇಶದ್ವಾರ.

ಬೆಟ್ಟದ ಪ್ರವೇಶ ದ್ವಾರ: 
Entrance to Ramadevara betta
 ಇಲ್ಲಿರುವ ಮೆಟ್ಟಿಲುಗಳನ್ನು ಹತ್ತಿ ಹಾಗೇ ಸಾಗಿದರೆ ಹಾದಿಯಲ್ಲಿ ಹಲವು ಸಣ್ಣ ಗುಡಿಗಳು ಕಾಣುತ್ತದೆ.
Steps on the way to Sri Ramadevara betta
ಅದರಲ್ಲಿ ಮೊದಲಿಗೆ ಬಲಕ್ಕೆ ಸಿಗೋದು ಒಂದು ಕಲ್ಲಿನಲ್ಲಿ ಕೆತ್ತಿದ ಹನುಮ. ಅದನ್ನು ದಾಟಿ ಹಾಗೇ ಮುಂದೆ ಸಾಗಿದರೆ ಸಿಗೋದು ಈಶ್ವರ. ಸದ್ಯಕ್ಕೆ ನಿರ್ಲಕ್ಷ್ಯಿಸಲ್ಪಟ್ಟಂತೆ ಕಾಣುವ ಈಶ್ವರನನ್ನು ದಾಟಿ ಮುಂದೆ ಹೋದರೆ ಮತ್ತೊಂದು ಹನುಮನ ಗುಡಿ ಮತ್ತು ಅದನ್ನು ಪೂಜಿಸಲಿರುವ ಅರ್ಚಕರು ಸಿಗುತ್ತಾರೆ.
One of the Hanuman statues in Ramadevara betta

ಅದರೆದುರೇ ಇನ್ನೊಂದು ಗುಡಿಯಿದ್ದ ಲಕ್ಷಣವಿದ್ದರೂ ಹೆಚ್ಚಿನ ದಿನಗಳಲ್ಲಿ ಕಾಣಸಿಗೋದು ಬೀಗಮುದ್ರೆಯೇ. ಅಲ್ಲಿಂದ ಹಾಗೇ ಮುಂದೆ ಸಾಗಿದರೆ ಬೆಟ್ಟದ ಮಧ್ಯಕ್ಕೆ ಬರುತ್ತೇವೆ.
We infront of Sri Ramadevara betta
ರಾಮೇಶ್ವರ ದೇವರು: 
ಇಲ್ಲಿರೋ ರಾಮೇಶ್ವರ ದೇವರಿಂದಲೇ ರಾಮನಗರಕ್ಕೆ ಆ ಹೆಸರು ಬಂತೆಂದು ಜನ ಹೇಳುತ್ತಾರೆ. ಆದರೆ ಇಲ್ಲಿನ ಜಾತ್ರೆ ಮತ್ತು ಉಳಿದ ದಿನಗಳಲ್ಲಿ ಇದರ ಬೀಗವನ್ನೇ ಕಾಣಬೇಕಾದೀತು. ಅದನ್ನು ದಾಟಿ ಹಾಗೇ ಮುಂದೆ ಹೋದರೆ ಒಂದು ವೀಕ್ಷಣಾ ಗೋಪುರ ಮತ್ತು ನೀರಿನ ತೊಟ್ಟಿಗಳನ್ನು ಕಾಣಬಹುದು. ಇಲ್ಲಿಂದ ಸುತ್ತಲ ಬೆಟ್ಟಗಳ ನೋಟ ವಿಹಂಗಮ.
View of Sri Pattabhirama temple and its lake from Rameshwara temple
ಜೈ ಹನುಮಾನ್ ಘಂಟೆ ಮಂಟಪ: 
ಶ್ರೀರಾಮನಿದ್ದ ಮೇಲೆ ಹನುಮಾನ್ ಇಲ್ಲದಿದ್ದರೆ ಹೇಗೆ ? ಹಾಗೆಂದೇ ಇರೋದು ಇರೋದು ಇಲ್ಲಿನ ಜೈ ಹನುಮಾನ್ ಘಂಟೆ ಮಂಟಪ. ಒಳಗೆ ಘಂಟೆಯಿಲ್ಲದಿದ್ದರೂ ಅದರ ಆಕಾರದಿಂದ ಅದಕ್ಕೆ ಆ ಹೆಸರಿರಬಹುದೇನೋ. ಇಲ್ಲಿಂದ ಸುತ್ತಲ ನೋಟ ಸವಿಯೋಕೆ ಮತ್ತು ಹೆಚ್ಚು ಬಿಸಿಲು, ಮಳೆಗಳಿದ್ದಾಗ ರಕ್ಷಣೆ ಪಡೆಯೋಕೆ ಅನುಕೂಲವಾಗುತ್ತೆ.
Jai Hanuman Ghante Mantapa

ಸಪ್ತರ್ಷಿಗಳ ಬೆಟ್ಟ:
ರಾಮೇಶ್ವರ ದೇಗುಲದ ಎದುರಿಗೆ ಒಂದು ಭೋಜನಶಾಲೆಯಂತಹ ಕಟ್ಟಡವಿದೆ. ಇಲ್ಲಿನ ಜಾತ್ರೆ ಮುಂತಾದ ಸಂದರ್ಭಗಳಲ್ಲಿ ಇಲ್ಲಿ ಹೋಮಹವನಗಳನ್ನು ನಡೆಸಲು ಬಳಸುತ್ತಾರೇನೋ ಇದನ್ನು. ಅದರ ಹಿಂಭಾಗದಲ್ಲಿರುವುದೇ ಸಪ್ತರ್ಷಿಗಳ ಬೆಟ್ಟ. ಹೆಸರಿಗೆ ತಕ್ಕಂತೆಯೇ ಇದು ಏಳು ದೊಡ್ಡ ದೊಡ್ಡ ಬಂಡೆಗಳನ್ನು ಹೊಂದಿದೆ
View of Saptarshi Betta 

ಪಟ್ಟಾಭಿರಾಮ ದೇವಸ್ಥಾನ: 


Sri Pattabhirama Temple

ದೇವದರ್ಶನದ ಉದ್ದೇಶಕ್ಕೆ ಇಲ್ಲಿಗೆ ಬಂದಿದ್ದಾದರೆ ನೀವು ಭೇಟಿ ಕೊಡಬೇಕಾದ ಇಲ್ಲಿನ ದೇವಸ್ಥಾನ ಶ್ರೀ ಪಟ್ಟಾಭಿರಾಮ ದೇವಸ್ಥಾನ. ಕೋದಂಡರಾಮನಾಗಿಯೋ, ಸೀತಾರಾಮನಾಗಿಯೋ ಶ್ರೀರಾಮನನ್ನು ನೋಡಿರಬಹುದಾದ ನೀವು ವೆಂಕಟೇಶ್ವರ ಸ್ವಾಮಿಯಂತೆ ಮೂರು ನಾಮ ಹೊಂದಿದ ರಾಮನನ್ನು ನೋಡಿರೋ ಸಾಧ್ಯತೆ ಕಡಿಮೆ. ಹಾಗಾಗಿ ಒಂದು ಭಿನ್ನ ಅನುಭವವಿಲ್ಲಿ. ಚಾರಣದ ಉದ್ದೇಶಕ್ಕೇ ಬಂದಿದ್ದರೂ ಇಲ್ಲಿನ ಕೊಳ, ದೇಗುಲದ ಪರಿಸರ ಮತ್ತು ಅಲ್ಲಿನ ಪ್ರಶಾಂತತೆಯನ್ನು ಅನುಭವಿಸಲು ಈ ದೇಗುಲಕ್ಕೆ ಬರಬಹುದು. ೧೯೭೫ರಲ್ಲಿ ಈ ದೇಗುಲಕ್ಕೆ ಬಂದವರೊಬ್ಬರು ಅಂದಿನ "ಉದಯವಾಣಿ" ಯಲ್ಲಿ ಬರೆದ ಲೇಖನವನ್ನು ಕಟ್ಟು ಹಾಕಿಸಿಟ್ಟಿದ್ದಾರೆ ಈ ದೇಗುಲದಲ್ಲಿ. ಈ ಜಾಗ ಅಂದು ಹೇಗಿತ್ತು, ಈಗ ಹೇಗಿದೆ ಎಂದು ಚಿತ್ರಗಳೊಂದಿಗಿನ ಫ್ಲಾಷ್ ಬ್ಯಾಕ್ ಅನುಭವಗಳನ್ನು ನೋಡಲಾದರೂ   ಈ ದೇಗುಲಕ್ಕೆ ಭೇಟಿ ಕೊಡಬಹುದು.

ಕೋಟೆಯ ಬಾಗಿಲು: 
ಪಟ್ಟಾಭಿರಾಮ ದೇಗುಲದ ಬಲಭಾಗದಲ್ಲಿ(ನಮ್ಮ ಎಡಕ್ಕೆ) ಬೆಟ್ಟದ ಮೇಲಕ್ಕೆ ಹತ್ತೋ ದಾರಿ ಸಿಗುತ್ತೆ. ಅದರಲ್ಲಿ ಸ್ವಲ್ಪ ದೂರ ಹೋಗುವ ಹೊತ್ತಿಗೆ ಕೋಟೆಯ ಬಾಗಿಲು ಸಿಗುತ್ತೆ.

Walls of the Fort and way to enter it
ಅದನ್ನು ದಾಟಿ ಹಾಗೇ ಮುಂದೆ ಹೋಗುವ ಹೊತ್ತಿಗೆ ಕೋಟೆಯ ಪಳೆಯುಳಿಕೆಗಳು ಕಾಣಸಿಗುತ್ತೆ. ಅದನ್ನು ನೊಡೋ ಇಷ್ಟವಿಲ್ಲದಿದ್ದರೆ ಹಾಗೇ ಬೆಟ್ಟದ ಮೇಲ್ಗಡೆ ನಡೆಯಬಹುದು

ಧನು ಕಂಬಿ: 
ಸಿಗೋ ಮತ್ತೊಂದು ಆಂಜನೇಯನಿಗೆ ನಮಸ್ಕರಿಸಿ ಮುಂದೆ ಸಾಗಿದರೆ ಬೆಟ್ಟದ ಮೇಲ್ಗಡೆ ಹತ್ತೋ ಮೆಟ್ಟಿಲುಗಳು ಕಾಣುತ್ತೆ. ಕೆಲವೆಡೆ ತೀರಾ ಓರೆಯಾಗಿರೋ ಇವುಗಳನ್ನು ಹತ್ತುವಾಗ ನೆರವಾಗಲೆಂದು ಎರಡೂ ಬದಿಗಳಲ್ಲಿ ಕಂಬಿಗಳನ್ನು ಕಟ್ಟಿದ್ದಾರೆ. ಸಾಮಾನ್ಯವಾಗಿ ಹತ್ತುವಾಗ ಕಂಬಿಗಳು ಬೇಡದಿದ್ದರೂ ಹೆಚ್ಚಿನ ಗಾಳಿ ಮತ್ತು ಮಳೆಯಿದ್ದಾಗ ಕಂಬಿಗಳು ಬೇಕನಿಸುತ್ತೆ. ನಾವು ಕೆಳಗಿಳಿಯುವಾಗ ನಮ್ಮನ್ನೇ ಹಾರಿಸಿಕೊಂಡು ಹೋಗುವಂತ ಗಾಳಿ ಬೀಸುತ್ತಿತ್ತು. ಆಗ ನಮಗೊಂದಿಷ್ಟು ಧೈರ್ಯ ತುಂಬಿದ್ದು "ಧನು ಕಂಬಿ" ಎಂಬ ಹೆಸರಿನ ಈ ಕಂಬಿಗಳೇ.
Dhanu Kambi

ರಾಮ ತೀರ್ಥ:
ಬೆಟ್ಟದ ಮೇಲೆ ಹತ್ತಿದರೆ ಹಿಂದೆ ಯಾವುದೋ ಮಂಟಪವೊಂದು ಇದ್ದಿರಬಹುದಾದ ಕುರುಹು ಕಾಣುತ್ತೆ.
Remains of some mantapa at the top of hill
ಕೋಟೆಯ ಗೋಡೆಯಿದ್ದ ಕುರುಹೂ ಸಿಗುತ್ತೆ.

Me standing on the remaining walls of Fort

ಅದನ್ನು ಬಿಟ್ಟು ಸುತ್ತಲೊಂದು ಪ್ರದಕ್ಷಿಣೆ ಹೊರಟರೆ ಗಮನ ಸೆಳೆಯೋದು ರಾಮತೀರ್ಥ. ಮೊದಲು ನೋಡಿದಾಗ ಇದು ಮಳೆನೀರು ನಿಂತಿರೋ ಗುಂಡಿ ಅಂತ ಅಂದುಕೊಂಡ್ವಿ. ಅದರ ಮತ್ತೊಂದು ಬದಿಗೆ ಹೋದಾಗ ಅದರಿಂದ ಹೊರಕ್ಕೆ ಹರಿಯುತ್ತಿರೋ ನೀರನ್ನು ಕಂಡಾಗಲೇ ಇಲ್ಲೊಂದು ಜಲಮೂಲವಿರೋ ಬಗ್ಗೆ ಕಂಡುಬಂದಿದ್ದು. ಅಷ್ಟು ದೊಡ್ಡ ಬೆಟ್ಟದ ಮೇಲೊಂದು ನೀರಿನ ಸೆಲೆಯಿರೋದು ಅಚ್ಚರಿಯೇ. ಅದರ ಸುತ್ತಲಿದ್ದ ಮತ್ತು ನಮ್ಮ ಕೈಗೆ ಸಿಕ್ಕ ಅಷ್ಟೂ ಪ್ಲಾಸ್ಟಿಕ್ಕನ್ನು ಎರಡು ಚೀಲಗಳಲ್ಲಿ ತುಂಬಿ ತಂದರೂ ತೀರ್ಥದ ಒಳಕ್ಕೂ ಕೆಲವು ಕಿಡಿಗೇಡಿಗಳು ಎಸೆದಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಸ್ವಚ್ಛ ಮಾಡಲಾಗದಿದ್ದಿದ್ದು ಬೇಸರ :-(
Sri Rama teertha
ಸ್ವಚ್ಛ ಭಾರತ ಅಭಿಯಾನ: 
ರಾಮ ತೀರ್ಥ ಮತ್ತು ಅದರ ಸುತ್ತಲಿನ ವಿಹಂಗಮ ಪ್ರಕೃತಿಯನ್ನು ನೋಡುತ್ತಾ ಕುಳಿತಿದ್ದ ನಮಗೆ ಎದ್ದು ಬರುವಾಗ ಅದರ ಪಕ್ಕದಲ್ಲೊಂದು ಪ್ಲಾಸ್ಟಿಕ್ ಕಂಡಿತು. ಇದನ್ನು ತೆಗೆದುಕೊಂಡು ಕೆಳಗೆ ಹಾಕೋಣ ಅಂತಂದುಕೊಂಡಾಗ ಮತ್ತೊಂದು. ಅದನ್ನು ಹೆಕ್ಕಿದಾಗ ಪೊದೆಯ ಬಳಿಯಲ್ಲಿ ಇನ್ನೊಂದು. ಕ್ರಶ್ ಮಾಡಿ ಬ್ಯಾಗಿನ ಎರಡೂ ಬದಿಗೆ ತುಂಬಿಸಿಕೊಂಡರೂ ಸಿಗುತ್ತಲೇ ಹೋದವು ಪ್ಲಾಸ್ಟಿಕ್ :-( ಸರಿ, ಎಲ್ಲರೂ ಎರಡೂ ಕೈಗಳಲ್ಲಿ ಎರಡೆರಡು ಹಿಡಿದು ಕೆಳಗೆ ಹೋಗೋದು ಅಂತಂದುಕೊಂಡು ಸ್ವಲ್ಪ ಮುಂದೆ ಹೋದಾಗ ಪ್ಲಾಸ್ಟಿಕ್ ಕವರ್ರೇ ಸಿಗಬೇಕೇ ? ಸರಿ ಅಂತ ಆ ಕವರಲ್ಲೇ ಅಲ್ಲಿ ಸಿಕ್ಕಿದ ಎಲ್ಲಾ ಪ್ಲಾಸ್ಟಿಕ್ ಬಾಟಲುಗಳನ್ನೂ ಕ್ರಷ್ ಮಾಡಿ ಮಾಡಿ ತುಂಬಿಸಿದೆವು. ಅಲ್ಲಿ ಸಿಕ್ಕ ಎರಡು ಕವರುಗಳಲ್ಲಿ ತುಂಬಿಸಿ ಕೆಳತಂದ ನಮಗೆ ಅಲ್ಲಿನ ಯಾವುದೋ ಸಿಮೆಂಟ್ ಕೆಲಸಕ್ಕೆ ಅಂತ ತಂದ ಚೀಲವೊಂದು ಸಿಕ್ಕಿತು. ಅದರಲ್ಲಿ ಪಟ್ಟಾಭಿರಾಮೆ ದೇಗುಲದ ಬಳಿ ಬಿಸಾಡಿದ್ದ ಪ್ಲಾಸ್ಟಿಕ್ ಬಾಟಲುಗಳನ್ನು ತುಂಬಿಸಿ ಕೆಳಗೆ ತೆಗೆದುಕೊಂಡು ಹೋದೆವು. ಪಟ್ಟಾಭಿರಾಮ ದೇಗುಲಕ್ಕೆ ಹತ್ತಲು ಶುರುವಾಗೋ ಮೆಟ್ಟಿಲುಗಳ ಶುರುವಲ್ಲಿ ಮತ್ತು ಮಧ್ಯದಲ್ಲಿ ಕಸ ಹಾಕಲೆಂದೇ ತೊಟ್ಟಿಗಳಿವೆ. ರಣಹದ್ದು ವಿಭಾಗದ ಗೇಟಿನೊಳಗೆ ಬರೋ ಮುಂಚೆಯೂ ಪ್ಲಾಸ್ಟಿಕ್ ಎಸೆಯಬೇಡಿ ಎಂಬ ಬೋರ್ಡಿದೆ. ಆದರೂ ಹೀಗೆ ಪರಿಸರ ಹಾಳು ಮಾಡೋ ಜನರಿಗೆ ಏನನ್ನಬೇಕೋ ಗೊತ್ತಿಲ್ಲ. ಕೇರಳದಂತೆ ಎಲ್ಲಾ ಬ್ಯಾಗು ತಪಾಸಣೆ ಮಾಡಿ ತಲಾ ನೂರು ರೂ ಇಸ್ಕೊಂಡು, ಬಾಟಲಿ ವಾಪಾಸ್ ತಂದರೆ ಮಾತ್ರ ನೂರು ರೂ ವಾಪಾಸ್ ಅಂತ ಮಾಡಿದರೆ ಮಾತ್ರ ಇದೆಲ್ಲಾ ಸರಿಯಾಗುತ್ತೋ ಅನಿಸಿಬಿಡುತ್ತೆ ಒಮ್ಮೊಮ್ಮೆ. 
Our Group at the top of Ramadevara betta

ರಣಹದ್ದುಗಳು ಕಾಣದ ಬೇಸರದಲ್ಲಿ, ಹೊಸ ಜಾಗವನ್ನು ನೋಡಿದ, ಅದನ್ನು ಶುದ್ದೀಕರಿಸಿದ ಖುಷಿಯಲ್ಲಿ ನಮ್ಮ ಪಯಣ ಮುಂದುವರೆಯಿತು..

Thursday, August 9, 2018

Kanakapura Explorations

The beginning: 
During the Trek in Kanakapura
On a fine sunday morning we were supposed to meet around 6:30  Banashankari bus stop for our explorations in Kanakapura. As 500C was not running from my place to Banashankari that early, i need to change 3 buses to finally reach meeting point around 06:40. Our guide for the day and organizer Suresh Babu was waiting for us there with fellow trekkers Apoorva Gajanan, Srivatsa, Uday  and Arpita. By the time i came there Amulya and Santhosh joined the team. Soon after Poornima , Renu and Sushma joined the party. Last entry was Skanda and Sayantan was further late and had to catch us later :-)

We started towards Kanakapura in a KSRTC bus and were there around 08:30 AM. First exploration was Vasu hotel, which seemed to be one of the most popular hotels in Kanakapura and the busiest and oldest as well. After our breakfast and tea, we came back to Kanakapura bus station to catch our next bus towards our destination. 09:00 o clock bus which we were supposed to take had gone by this time and we had to wait till 09:30 bus. We took that and traveled towards  our destination watching the green farms and silk farming baskets. Although the place was not very far from Bengaluru it seemed unaffected by the modernization and real estate as we could see the farmers coming out of traditional houses and  ploughing the lands in good old traditional methods. We reached our destination around 10:15 and were told by the conductor that return bus would come back by 03:30. So, we had a whole morning and bit of afternoon for our explorations and were also warned to be carefull about elephants in the forest

Villagers were very friendly and were showing us the way towards the hill. Found a modest guy as in below pic who wanted to take the pic of his beloved goat. Both of us were sure that he would not get this picture delivered to him. But he was somehow sure that the memory of his beloved goat would be preserved somewhere safe in some unknown tourist's album. So is the pic as per his wish !
Here is the modest villager and his goat as i could not take only his goat pic :-) Say a hi to him if you happen to meet him during your trek here

About the place: 

The place which we went seems to be untouched by fancy trekking groups and irresponsible trekkers as we could not see any plastic bottles or covers on the way and the trekking trail was clean as well.

We had to take the tar road initially and then into the village road as in above pic which lead us to the forest road until we found the steps leading to the top of the hill
Steps leading to the top of the hill

In a while, steps disappeared and we started seeing the temple towards our right in the opposite side of the hill. Here we have to take the trail and ascend the remaining of the path
In one of the pitstops
After few pitstops and photography breaks, we reached a temple and thought we reached the destination. It was a Ganesha temple and guide told us that the main place is still ahead.
View near the Ganesha temple

The Villagers consider this place to be holy place as well and except the localities only a few trekking enthusiasts seems to visit here as per few posts which date back to 2009.

Legend about the place:
One of the Legend about this place  goes like this... "villagers were surprised to observe that their cows were not having any milk after returning from this hill. So, one day they followed their cows and were further surprised to see them giving their milk to a tree on the top of the hill. Their was an idle of Lord Hanuman formed on that tree and they took out that idle and built a temple for that." Every year a fair is held here which involves many events like "Rathotsavam"(Car Festival).  We can see the car shelter near to the Ganesha temple.. There is a small pond or "Pushkarini" next to Lord Ganesha temple and is known as "Sanjeevini Teertha".

Our Group sitting next to Sanjeevini Theertha
We went ahead to see the main temple of Lord Hanuman. The View from there is amazing as well and noticed that there is a motor able road as well to directly reach this temple instead of taking the hilly trail. The view of surrounding mountains of Kanakapura is amazing and worth the 2.5KM hike(one side) from bus stop.
Our Group 
We had our packed lunch where we shared the different items brought by different team mates and descended with many picture breaks in between.

One more view near Sanjeevini Theertha
 Descend was easier as well and we reached the bottom by 3 and waited at the bus stop with some chitchats with the villagers. Could reach Kanakapura around 4:15 and were in Bangalore around 7. Overall trip cost was around 200 Rs and was a decent and memorable one day trip with BASC. Enjoyed trekking with new set of friends on friendship day and wish to see them again in some or the other trip in some day.. Till then, keep trekking, blogging and reading :-)

Last line: 
Let us not only explore nature, but also conserve and preserve it for the  generations to come as did our previous generations.
Our Group after the descend and heading towards the bus stop

Wednesday, August 8, 2018

ರಾಮದೇವರ ಬೆಟ್ಟ ಚಾರಣ -೧

ಹೆಸರಲ್ಲೇನಿದೆ ಅಂದ್ರಾ ? 
Ramanagara Betta Trekking

ಕರ್ನಾಟಕದಲ್ಲಿ ಅದೆಷ್ಟು ಊರುಗಳಿಗೆ ಒಂದೇ ಹೆಸರಿರತ್ತಪ್ಪಾ ? ಎಲ್ಲಾ ಊರುಗಳಲ್ಲೂ ಎಂ.ಜಿ ರೋಡು ಇರೋ ತರ "ರಾಮದೇವರ ಬೆಟ್ಟ" ಮುಂತಾದ ಹೆಸರುಗಳೂ ಕಾಮನ್ನು ಅನ್ನೋದು ಹಿಂದಿನ ವಾರದ ತನಕ ಗೊತ್ತಿರಲಿಲ್ಲ. ಮೊದಲೆಲ್ಲಾ ನನಗೆ ರಾಮನಗರ ಅಂದರೆ "ಶೋಲೆ" ಚಿತ್ರದ ಚಿತ್ರೀಕರಣ ನಡೆದ ಜಾಗ ಮಾತ್ರವಾಗಿತ್ತು. ಅಲ್ಲಿರೋ ರಾಮದೇವರ ಬೆಟ್ಟಕ್ಕೆ ಚಾರಣ ಹೋಗಬೇಕು ಅಂತ ಹುಡುಕಹೊರಟಾಗಲೇ ಆ ಹೆಸರಿನ ಎರಡು ಬೆಟ್ಟಗಳಿವೆ ಅಂತ ಗೊತ್ತಾಗಿದ್ದು ! ಒಂದು ಬೆಟ್ಟ ರಾಮನಗರದ ಬಳಿಯಿದ್ದರೆ ಮತ್ತೊಂದು ತುಮಕೂರಿನ ಬಳಿಯಿದೆ. ರಾಮನಗರ ಬೆಟ್ಟದ ಬಳಿ ಒಂದು ರಣಹದ್ದು ವನ್ಯಜೀವಿ ಧಾಮ ಇದೆ ಅಂತ ಒಂದು ಬ್ಲಾಗಲ್ಲಿ ಓದಿದ್ದಕ್ಕೆ ಆ ಹೆಸರಿಂದ ಹುಡುಕಬಹುದೇನೋ ಅಂತ ಹುಡುಕಿದರೆ ಆ ವನ್ಯಜೀವಿಧಾಮವನ್ನು ತುಮಕೂರಿನ ಹತ್ರವಿರೋ ರಾಮನಗರ ಬೆಟ್ಟದಲ್ಲಿ ತೋರಿಸಿತ್ತು ಗೂಗಲ್ಲು ! ಹಂಗಾಗಿ ನಾವು ಹೋಗಬೇಕಾದ ಜಾಗ ಕರೆಕ್ಟಾಗೆಲ್ಲಿದೆ ಅನ್ನೋ ಗೊಂದಲದಲ್ಲೇ ಶ್ರೀಕೃಷ್ಣನ ಜೊತೆ ಹೋಗಬೇಕೆಂದುಕೊಂಡಿದ್ದ ಒಂದು ಭಾನುವಾರದ ಪ್ಲಾನು ಫ್ಲಾಪಾಗಿತ್ತು. ಶನಿವಾರ ಪೂರ್ತಿ ಸುತ್ತಿದ ಸುಸ್ತಿನಲ್ಲಿ ಭಾನುವಾರಕ್ಕೆ ಅಲಾರಂ ಇಡುವಾಗ ಎ.ಎಂ ಬದಲು ಪಿ.ಎಂ ಅಂತಿಟ್ಟು ಅದು ಹೊಡೆಯದೇ ಇದ್ದಿದ್ದು ಮತ್ತೊಂದು ಕಾರಣ ಬಿಡಿ!

ಬೆಟ್ಟದ ಪ್ಲಾನಿಗೇ ಜೋತು ಬಿದ್ದು:
ಛಲಬಿಡದ ತ್ರಿವಿಕ್ರಮನಂತೆ ಮತ್ತದೇ ರಾಮನಗರಕ್ಕೆ ಮತ್ತೆರಡು ವಾರಗಳ ನಂತರ ಪ್ಲಾನು ಹಾಕಿದ್ದಾಯ್ತು. ಪ್ಲಾನೇನೋ ಹಾಕಿದ್ದಾಯ್ತು. ಆದ್ರೆ ಪಕ್ಕಾ ಬರೋರ್ಯಾರು ಅಂತನೂ ಖಾತ್ರಿ ಆಗಬೇಡ್ವೇ ? ನಮ್ಮ "ವಾರಾಂತ್ಯದ ಟ್ರಿಪ್ಪು" ಗುಂಪಿನ ಹಳೇ ಗೆಳೆಯರೆಲ್ಲ ಈ ವಾರ ಬ್ಯುಸಿಯಿದ್ದ ಕಾರಣ ಹೊಸಬರನ್ನು ಕೇಳೋ ಅಗತ್ಯ ಬಿತ್ತೀಸಲ. ನಂಜೊತೆ ಟ್ರಿಪ್ ಬರ್ತೀನಿ ಅಂತ ಒಂದ್ಸಲ, ಈ ವಾರ ತನ್ನ ಗೆಳೆಯರ ಜೊತೆಗೆ ಹೊರಗೆಡೆ ಹೋಗೋ ಪ್ಲಾನಿದೆ ಅಂತ ಒಂದ್ಸಲ ಹೇಳ್ತಿದ್ದ ನಮ್ಮಾಫೀಸಿನ  ರಾಜಣ್ಣನ್ನ ನಂಬ್ಕೊಳೋ ಹಾಗಿರ್ಲಿಲ್ಲ.  ಖಾಯಂ ಟ್ರಿಪ್ ಪಾರ್ಟನರ್ ಶ್ರೀಕೃಷ್ಣನೂ ಈ ಬಗ್ಗೆ ಖಾತ್ರಿ ಮಾಡದೇ ಶುಕ್ರವಾರ ಹೇಳ್ತೀನಿ ಅಂದಿದ್ರಿಂದ ಅವನ ಗ್ಯಾರಂಟಿಯೂ ಇರಲಿಲ್ಲ. ರಾಮನಗರಕ್ಕೆ ಹತ್ತಿರದಲ್ಲೇ ಇರೋ ಪ್ರತೀ ವಾರ ಹೊಸ ಜಾಗಗಳಿಗೆ ಚಾರಣ ಹೋಗೋ ಪ್ರವೀಣನನ್ನು ಈ ಜಾಗದ ಬಗ್ಗೆ ಕೇಳಿದಾಗ ನಾ ಖಂಡಿತ ಬರ್ತೀನಿ ಅಂತ ಒಪ್ಕೊಂಡ. ಹಾಗೇ ಮೈಸೂರಿನ ಸಹೋದ್ಯೋಗಿ ಶ್ರೀನಂದನ್ನಿಗೂ ಈ ಜಾಗ ಇಷ್ಟವಾಗಿ ತಾನೂ ಬರ್ತೀನಿ ಅಂತಂದ. ನಮ್ಮ ಹಳೇ ಬೈಕ್ ಟ್ರಿಪ್ಪಿನ ಸಾಥಿ ಅಮಿತ್ ಕೂಡ ಆಸಕ್ತಿ ತೋರ್ಸಿದ್ರಿಂದ ಪ್ಲಾನು ಫಿಕ್ಸಾಯ್ತು.

ಅಂದುಕೊಂಡಿದ್ದೊಂದು ಆಗಿದ್ದೊಂದು:
ತುಮಕೂರಿನ ಹತ್ರದ ರಾಮನಗರ ಬೆಟ್ಟ ನೋಡಿದೀನಿ. ಅದಾದ್ರೆ ಬರಲ್ಲ ಅಂತ ರಾಜಣ್ಣ ಹೇಳ್ತಿದ್ರು. ಮತ್ತೊಂದು ರಾಮನಗರಕ್ಕೆ ಬರ್ತಾರಾ ಇಲ್ವಾ ಅಂತ ಖಾತ್ರಿ ಮಾಡದೇ ಹೋದ್ರೂ :-) ಅವರು ಬರಲಿ ಬರದಿರ್ಲಿ, ಯಾವ ರಾಮನಗರಕ್ಕೆ ಹೋಗ್ಬೇಕು ಅಂತ ನಮಗೆ ಪಕ್ಕಾ ಆಗಿದ್ರಿಂದ
ಪ್ರವೀಣ ಮತ್ತು ಶ್ರೀನಂದನ್ನರ ಜೊತೆ ಕೇಳಿ ಕರೆಕ್ಟಾದ ಜಾಗ ಎಲ್ಲಿದೆ ಅಂತ ಖಾತ್ರಿ ಮಾಡಿಕೊಂಡು ಅದರ ಜಿ.ಪಿ.ಎಸ್ ಲೊಕೇಶನ್ನನ್ನೇ ವಾಟ್ಸಾಪಿನಲ್ಲಿ ಶೇರ್ ಮಾಡಾಯ್ತು ! ಪ್ರವೀಣನ ಗೆಳೆಯನ್ಯಾರೋ ಈ ಬೆಟ್ಟ ಹತ್ತೋಕೆ ೨ ಘಂಟೆ ಬೇಕು ಅಂದಿದ್ರಿಂದ ಮತ್ತು ಈ ಬೆಟ್ಟದ ಬಗ್ಗೆಯಿದ್ದ ಗೂಗಲ್ಲಿನ ಚಿತ್ರಗಳನ್ನ ನೋಡಿ ಇಡೀ ಬೆಟ್ಟ ಇದೇ ತರ ಇರ್ಬೇಕು ಅಂದ್ಕೊಂಡು ಅಮಿತ್ ಟ್ರಿಪ್ಪಿಂದ ಹೊರಬಿದ್ದ! ಬ್ಲಾಗಲ್ಲಿ ಬರೆದೋರು ಇಲ್ಲಿನ ರಣಹದ್ದು ನೋಡ್ಬೇಕು ಅಂದ್ರೆ ೬ ಘಂಟೆಗೆ ಬರ್ಬೇಕು ಅಂತಿದ್ರು. ಹಾಗಾಗಿ ನಾಲ್ಕು ಘಂಟೆಗೆ ಬೆಂಗಳೂರು ಬಿಡೋದು. ಈ ಪ್ಲಾನು ಇಷ್ಟವಾದ ಶ್ರೀ ಕೃಷ್ಣ ಅವತ್ತಿನ ಟ್ರಿಪ್ಪಿಗೆ ಒಪ್ಕೊಂಡಾಗ ಅಲ್ಲಿಗೆ ಹೋಗೋರ ಸಂಖ್ಯೆ ಮತ್ತೆ ನಾಲ್ಕಕ್ಕೆ ಬಂತು. ರಣಹದ್ದುಗಳನ್ನ ನೋಡ್ಜೊಂಡು ಆಮೇಲೆ ದೇವಸ್ಥಾನ ನೋಡೋದು ಅಂತ ಮೊದ್ಲು  ಪ್ಲಾನ್ ಹಾಕಿದ್ವಿ. ಅಷ್ಟರಲ್ಲಿ ಪ್ರವೀಣ್ ತಡೀರಿ ನನ್ನ ಫ್ರೆಂಡೊಬ್ಬ ಅಲ್ಲೇ ಕೆಲ್ಸ ಮಾಡ್ತಿದ್ದಾನೆ. ಒಮ್ಮೆ ಅವನನ್ನ ವಿಚಾರ್ಸೋಣ ಅಂತ ಅವನ್ನನ್ನ ಕೇಳೋತನಕ ದೇವಸ್ಥಾನ ಇರೋದೇ ರಣಹದ್ದು ವನ್ಯಜೀವಿ ಧಾಮದಲ್ಲಿ . ಆ ಧಾಮ ತೆಗೆಯೋದು ೯ ಘಂಟೆಗೆ ಅಂತ ಗೊತ್ತಾಯ್ತು ! ಯಾವ್ದೋ ಬ್ಲಾಗ್ ನಂಬ್ಕೊಂಡು ನಾವು ಆರು ಘಂಟೆಗೆ ಅಲ್ಲಿದ್ದಿದ್ರೆ ನಮ್ಮ ಕತೆಯೇ ಬೇರೆ ಆಗಿರ್ತಿತ್ತು ! ಗೂಗಲ್ಲಿನಲ್ಲಿ ರಣಹದ್ದು ವನ್ಯಧಾಮ ಅಂತ ತೋರಿಸ್ತಿದ್ದ ಜಾಗ ನಂಬ್ಕೊಂಡಿದ್ರೂ ತಪ್ಪು ಜಾಗಕ್ಕೆ ಹೋಗ್ತಿದ್ವಿ ! ಪ್ರವೀಣ ಇಷ್ಟು ಮಾಹಿತಿ ಕಲೆಹಾಕೋ ಹೊತ್ತಿಗೆ ನಾನು ಶ್ರೀನಂದನ್ ಆ ಜಾಗದ ಬಗೆಗಿನ ಗೂಗಲ್ ಮ್ಯಾಪಿನ ಬೇರೆ ಮಾಹಿತಿ ಹುಡುಕುತ್ತಾ ಅದು ತೆಗೆಯೋ ಸಮಯ ಹುಡುಕಿದ್ವಿ. ಅದೂ ಪ್ರವೀಣ ಕೊಟ್ಟಿದ್ದ ಮಾಹಿತಿಗೆ ತಾಳೆಯಾಗುತ್ತಿತ್ತು ! ಇಷ್ಟೆಲ್ಲಾ ಹುಡುಕೋ ಹೊತ್ತಿಗೆ ಆ ಜಾಗ ತೆಗೆಯೋದೇ ಒಂಭತ್ತಕ್ಕೆ ಮತ್ತೆ ಹತ್ತೋಕೆ ೨ ಘಂಟೆ ಬೇಕು ಅಂದ್ರೆ ತನಗಾಗೋಲ್ಲ ಅಂತ ಶನಿವಾರ ಆಫೀಸಿನ ಕೆಲಸವಿದ್ದ ಶ್ರೀನಂದನ್ ಪ್ಲಾನಿಂದ ಡ್ರಾಪಾದ್ರು.  ಇದೊಳ್ಳೇ ಕತೆಯಾಯ್ತಲ್ಲ . ಕೊನೆಗೆ ಮುಂಚಿನ ವಾರ ಪ್ಲಾನ್ ಮಾಡಿದಂಗೆ ಈ ಸಲವೂ ನಾನು ಕೃಷ್ಣನೇ ಹೋಗಬೇಕಾಗುತ್ತಾ ಅಂತ ಅಂದ್ಕೊಳ್ಳೋ ಹೊತ್ತಿಗೆ ರಾಜಣ್ಣ ತಮ್ಮ ಪ್ಲಾನು ಕ್ಯಾನ್ಸಲ್ ಆಯ್ತು. ನಾ ಬರ್ತೀನಿ ನಿಮ್ಮ ಜೊತೆಗೆ ಅಂತ ಫಿಲ್ಮ್ ಹೀರೋ ರೇಂಜಿಗೆ ಸಸ್ಪೆಂಸ್ ಕೊಟ್ರು . ಅಲ್ಲಿಗೆ ಕೊನೆಗೂ ಟ್ರಿಪ್ಪಿಗೆ ನಿಕ್ಕಿಯಾದ ಜನರ ಸಂಖ್ಯೆ ನಾಲ್ಕಾಯ್ತು!

ನಾಲ್ಕು ದಿಕ್ಕಿಂದ ನಾಲ್ಕು ಜನ: 
ಮಾರತ್ತಳ್ಳಿ ಕಡೆಯಿಂದ ಬರೋ ನಾನು, ಕೆ.ಆರ್ ಪುರಂ ಕಡೆಯಿಂದ ಬರೋ ಶ್ರೀಕೃಷ್ಣ ಕಾರ್ಪೋರೇಷನ್ ಸರ್ಕಲ್ಲಿನತ್ರ ಸಿಗೋದು ಅಂತ ಮಾತಾಡ್ಕೊಂಡ್ವಿ. ಯಲಹಂಕಾದಿಂದ ಬರೋ ರಾಜಣ್ಣ ಕೆಂಗೇರಿ ಹತ್ರ ಸಿಗೋದು ಅಂತ ಮಾತಾಗಿದ್ರೂ ಬೆಳಗ್ಗೆ ಎಷ್ಟು ಫೋನ್ ಮಾಡಿದ್ರೂ ಅವ್ರು ಎತ್ತುತ್ತಿರಲಿಲ್ಲ ! ಹೀರೋ ರೇಂಜಿಗೆ ಅವರು ಬ್ಯುಸಿಯಾದ್ರೆ ಹೀರೋ ಕಾಲ್ ಶೀಟ್ ಬುಕ್ ಮಾಡಿ ಬೇರೆಲ್ಲಾ ವ್ಯವಸ್ಥೆ ಮಾಡಿಕೊಂಡ್ರೂ ಪತ್ತೆಯಿಲ್ಲದ ಹೀರೋಗೋಸ್ಕರ ಕಾಯ್ತಿರೋ ಡೈರೆಕ್ಟರಿನಂತೆ ನಾನು ! ಕೊನೆಗೂ ನಾನೂ ಹೊರಟಿದ್ದೇನೆ ಅನ್ನೋ ಮೆಸೇಜು ನಾ ಕಾರ್ಪೋರೇಷನ್ನಿನ ಬಳಿಯಿದ್ದಾಗ ಸಿಕ್ಕಿದ್ರಿಂದ ಚಿತ್ರಕ್ಕೆ ದುಡ್ಡು ಹಾಕಿದ ನಿರ್ಮಾಪಕನಂತೆ ನನ್ನ ಮುಖ ಅರಳಿತ್ತು :-)
ಪ್ರವೀಣ ತಮ್ಮೂರಿಗೆ ಹದಿನೈದೇ ಕಿ.ಮೀ ಇದು. ಬಿಡದಿಗೆ ಬಂದ ನಂತರ ತನಗೆ ಫೋನ್ ಮಾಡಿ ತಾ ಬರ್ತೀನಿ ಅಂದಿದ್ರಿಂದ ಅವನ ಬಗ್ಗೆ ತಲೆಬಿಲಿಯಿರ್ಲಿಲ್ಲ. ನಾಲ್ಕು ಮೂಲೆಯಿಂದ ಹೊರಟಿದ್ದ ನಾಲ್ಕು ಜನ ರಾಮನಗರದಲ್ಲಿ ಸೇರೋ ಘಳಿಗೆಯ ನಿರೀಕ್ಷೆ ನಮ್ಮ ಪಯಣವನ್ನು ಮುಂದುವರೆಸುತ್ತಿತ್ತು.

ಬಿಡದಿ ತಟ್ಟೆಯಿಡ್ಲಿ ಮತ್ತು ಪ್ಲಾಸ್ಟಿಕ್ಕು: 
ಬಿಡದಿಯಲ್ಲಿ ಮಾಡೋ ತಟ್ಟೆಯಿಡ್ಲಿಗಳನ್ನ ಪ್ಲಾಸ್ಟಿಕ್ ಶೀಟುಗಳಲ್ಲಿ ಮಾಡ್ತಾರೆ. ಅದನ್ನ ತಿನ್ನೋರ ಹೊಟ್ಟೆಗೆ ಹೋಗೋ ಆ ಇಡ್ಲಿಗಳಿಂದ ಕ್ಯಾನ್ಸರ್ ಬರುತ್ತೆ ಅಂತ ಯಾವುದೋ ಇಂಗ್ಲೀಷ್ ಪತ್ರಿಕೆಯಲ್ಲಿ ಯಾರೋ ಬರೆದಿದ್ರು. ಅದನ್ನೋದಿದ್ದ ಶ್ರೀಕೃಷ್ಣ ಬಿಡದಿಯಲ್ಲಿ ಇಡ್ಲಿ ಮಾತ್ರ ತಿನ್ನೋದು ಬ್ಯಾಡ. ಬೇಕಾದ್ರೆ ದೋಸೆ ತಿನ್ನೋಣ ಅಂತ. ಈ ಪೇಪರಿನ ವರದಿಗಳು ಬಿಡದಿಯ ಸಾಮಾನ್ಯ ಹೋಟೇಲ್ಲುಗಳ ಮೇಲೆ ಹೊಡೆಯೋ ದೊಡ್ಡ ಹೋಟೇಲುಗಳ ಹುನ್ನಾರ ಅಂತ ಪ್ರವೀಣನ ವಾದ.ಏನಾದ್ರಾಗಲಿ ನೋಡೇ ಬಿಡೋಣ ಅಂತ ಬಿಡದಿಯಲ್ಲಿ ಒಂದು ಹೋಟೇಲಿನಲ್ಲಿ ತಿಂಡಿಗೆ ನಿಲ್ಲಿಸಿದ್ವಿ.
One of the Tatte Idli hotels in Bidadi

ಅಲ್ಲಿ ಸುಮಾರಷ್ಟು ಜನ ತಟ್ಟೆಯಿಡ್ಲಿ ತಿಂತಾ ಇದ್ರು. ಯಾವುದೇ ತಲೆಬಿಸಿಯಿಲ್ದೆ. ಅದರಲ್ಲಿ ಸುಮಾರಷ್ಟು ಬೈಕರ್ರುಗಳು, ಕಾರಿನವ್ರು, ಮುದುಕರು, ಮಕ್ಕಳು ಎಲ್ಲಾ ಇದ್ರು. ಇಲ್ಲಿನ ತಟ್ಟೆಯಿಡ್ಲಿಯ ಬಗ್ಗೆ ಓದಿದವರೂ ಅಲ್ಲಿ ಇದ್ದಿರಬಹುದೇನೋ. ನೀ ಬೇಕಾದ್ರೆ ದೋಸೆ ತಗೋ, ನಾ ಇಡ್ಲಿ ತಗೋತೀನಿ ಅಂತ ಮನಸ್ಸಲ್ಲೇ ಅಂದುಕೊಂಡ ನಾನು ಕೃಷ್ಣನ ಜೊತೆ ಬಿಲ್ಲಿಂಗ್ ಕೌಂಟರಿನತ್ರ ಹೋದೆ. ಪಕ್ಕದಲ್ಲೇಿ ಇಡ್ಲಿ ಎರೆಯುತ್ತಿದ್ದ ಅಡಿಗೆ ಮನೆಯಿತ್ತು. ಅಲ್ಲಿದ್ದ ಅಡಿಗೆಯವರು ನಮ್ಮ ಕಣ್ಣೆದುರೇ ಸ್ಟೈನ್ ಲೆಸ್ ಸ್ಟೀಲಿನ ಇಡ್ಲಿ ಪಾತ್ರೆಗಳಲ್ಲಿ ಇಡ್ಲಿಯ ಹಿಟ್ಟು ಸುರಿದು ಬೇಯೋಕೆ ಇಡ್ತಿದ್ರು.  ಬೆಂದ ಇಡ್ಲಿಗಳನ್ನ ನಮ್ಮ ಕಣ್ಣೆದುರೇ ತೆಗೆದು ತಟ್ಟೆಗೆ ಬಾಳೆಲೆಯ ಮೇಲೆ ಹಾಕಿ ಕೊಡ್ತಿದ್ರು. ಪ್ಲಾಸ್ಟಿಕ್ ಹಾಳೆಯೂ ಇಲ್ಲ. ಎಂತದೂ ಇಲ್ಲ !
Tatte Idli being made in Bidadi without using Plastic sheet. Idli made directly on stainless sheet plates


ಕೃಷ್ಣನ ಮುಖ ನೋಡಿದೆ. ಖುಷಿಯಾಗಿದ್ದ ಅವ. ತಗೋ ಅಂತ ಎರಡು ಪ್ಲೇಟು ತಟ್ಟೆಯಿಡ್ಲಿ, ವಡೆ ತಗೊಂಡ್ವಿ :-) ಹಂಗಾದ್ರೆ ಪೇಪರಿನಲ್ಲಿ ಬಂದ ಮಾಹಿತಿ ಪೂರ್ಣ ಸುಳ್ಳೇ ? ಅದು ಹೋಟೇಲಿನವರ ಹೊಟ್ಟೆಯ ಮೇಲೆ ಹೊಡೆಯೋಕೆ ಮಾಡಿದ ಹುನ್ನಾರವೇ ? ಗೊತ್ತಿಲ್ಲ. ಬರೆದವರಿಗೆ ಯಾವುದೋ ಹೋಟೇಲ್ಲಿನಲ್ಲಿ ಆ ತರ ಕಂಡಿರಲೂ ಬಹುದು. ಪ್ಲಾಸ್ಟಿಕ್ಕಿನಿಂದ ಕ್ಯಾನ್ಸರ್ ಬರುತ್ತೆ ಎಂಬ ಮಾಹಿತಿಯನ್ನಾದರಿಸಿ ಆ ಪುಣ್ಯಾತ್ಯ ಬಿಡದಿಯಲ್ಲಿ ಎಲ್ಲೇ ಇಡ್ಲಿ ತಿಂದರೂ ಕ್ಯಾನ್ಸರ್ ಬರುತ್ತೆ ಅಂತ ಬರೆದಿರಲೂ ಬಹುದು ! ಆದರೆ ಸ್ವತಃ ಕಣ್ಣೆದುರೇ ಕಾಣದೇ ಯಾವುದನ್ನೂ ನಂಬಬೇಡ ಅನ್ನೋ ಮಾತು ಮತ್ತೊಮ್ಮೆ ಸತ್ಯವಾಗೋಯ್ತು. ಬಿಡದಿಯ ಇಡ್ಲಿಗಳಿಂದ ಏನೂ ಆಗೋಲ್ಲವೆನ್ನೋದೂ ಖಾತ್ರಿಯಾಗೋಯ್ತು.

ರಾಮನಗರದ ಹನುಮಂತ: 
Iconic Hanuman statue where we have to deviate from main highway to reach Ramadevarabetta

ಬಿಡದಿಗೆ ಬರೋಕೆ ಮುಂಚೆ ಸುಮಾರು ಕಡೆ ಫೋನ್ ಮಾಡಿದ್ರೂ ರಾಜಣ್ಣ ತೆಗೀತಿರ್ಲಿಲ್ಲ. ಹಂಗಾಗಿ ಪ್ರವೀಣಂಗೆ ಫೋನ್ ಮಾಡಿ ನಾವು ಬಿಡದಿಗೆ ಬಂದಿದೀವಿ. ತಿಂಡಿ ತಿಂದ್ಕೊಂಡು ಹೊರಡ್ವೀವಿ. ನೀನು ಹೊರಡು ಅಂತ ಹೇಳಾಯ್ತು. ತಿಂಡಿ ಆರ್ಡರ್ ಮಾಡಿ ರಾಜಣ್ಣಂಗೆ ಮತ್ತೆ ಫೋನ್ ಮಾಡಿದ್ರೆ ನಾನು ಬಿಡದಿ ದಾಟಿ ಹೋಗಾಯ್ತು ಆಗ್ಲೇ ಅನ್ಬೇಕಾ ? ಸರಿ. ಅಲ್ಲೇ ಎಲ್ಲಾದ್ರೂ ತಿಂಡಿ ತಿನ್ನಿ. ರಾಮನಗರದಲ್ಲಿ ಸಿಗೋಣ ಅಂತ ಇಟ್ಟಾಯ್ತು ಸಸ್ಪೆಂಸ್ ರಾಜಣ್ಣನ ಫೋನನ್ನ. ರಾಮನಗರ ಬೆಟ್ಟಕ್ಕೆ ಹೋಗೋದಾದ್ರೆ ರಾಮನಗರ ನಗರಕ್ಕೆ ಹೋಗೋದು ಬೇಡ. ಸ್ವಲ್ಪ ಮುಂಚೆಯೇ ಬಲಕ್ಕೆ ತಿರುಗಬೇಕು ಅಂತ ಶ್ರೀಕೃಷ್ಣ ಹೇಳ್ತಾ ಇದ್ದ. ಹಾಗೇ ಹೋಗ್ತಿದ್ದಾಗ ಬಲಗಡೆ ಒಂದು ಹನುಮಂತನ ದೊಡ್ಡ ವಿಗ್ರಹ ಕಾಣಿಸ್ತು. ಅದರ ಪಕ್ಕದಲ್ಲೇ ಒಂದು ಯೂ ಟರ್ನಿತ್ತು. ಆದರೆ ಗೂಗಲ್ಲಿನಲ್ಲಿ ಇನ್ನೂ ಇನ್ನೂರು ಮೀಟರ್ ಮುಂದೆ ತೋರಿಸ್ತಾ ಇದೆಯಲ್ಲ ಯೂ ಟರ್ನು ಅಂತ ಮುಂದೆ ಹೋದ್ವಿ. ಅಲ್ಲಿ ಟರ್ನೇನೋ ಇತ್ತು. ಆದ್ರೆ ಅದು ಯೂ ಟರ್ನಾಗಿರಲಿಲ್ಲ ! ಅಲ್ಲೇ ಕೆಲವರು ತಿರುಗಿಸುತ್ತಿದ್ದಿದ್ದ ನೋಡಿ, ಗೂಗಲ್ಲಿಗೆ ಶಾಪ ಹಾಕುತ್ತಾ ಹನುಮನ ಗುಡಿಗೆ ಬಂದ್ವಿ. ಅಲ್ಲಿಂದ ಮತ್ತೆ ಪ್ರವೀಣಿಗೆ ಫೋನ್ ಮಾಡಿದ್ರೆ ಆತ ಹೊರಟಿರಲಿಲ್ಲ. ರಾಜಣ್ಣಂಗೆ ಫೋನ್ ಮಾಡಿದ್ರೆ ಈಗಷ್ಟೇ ತಿಂಡಿ ತಿಂದು ಹೊರಡ್ತಾ ಇದೀನಿ ಅನ್ನಬೇಕೇ ? ! ತಗಳ್ಳಪ್ಪ. ಸಸ್ಪೆಂಸಿನ ಮೇಲೆ ಸಸ್ಪೆಂಸು. ಸರಿ, ಇಲ್ಲೊಂದು ಹನುಮಂತನ ವಿಗ್ರಹ ಕಾಣುತ್ತೆ. ಅಲ್ಲೇ ನಿಂತಿರ್ತೀವಿ ಬನ್ನಿ ಅಂದೆ. ಹೂಂ ಅಂದ್ರು. ಬೆಳಗ್ಗಿನಿಂದ ಟೀ ಸಿಕ್ಕದೇ ಟೀಗಾಗಿ ಪರಿತಪಿಸುತ್ತಿದ್ದ ಶ್ರೀಕೃಷ್ಣನಿಗೆ ಟೀ ಹುಡುಕುತ್ತಾ ಅಲ್ಲಿಂದ ಮುಂದೆ ಬಂದೆವು. ಬೈಕಲ್ಲಿದ್ದ ಅವ ಸುಮಾರು ದೂರದವರೆಗೂ ಹೋಗಿ ಒಂದೂ ಟೀ ಅಂಗಡಿಯಿಲ್ಲ ಈ ಊರಲ್ಲಿ ಅಂತ ಆಶ್ಚರ್ಯಪಡುತ್ತಾ ವಾಪಾಸ್ ಬರುತ್ತಿದ್ದ. ನಡ್ಕೊಂಡು ಬರ್ತಿದ್ದ ನನಗೆ ಒಂದು ಬೇಕರಿಯಲ್ಲಿ ಟೀ ಕ್ಯಾನು ಹೊರಗಿಟ್ಟಿದ್ದು ಕಂಡಿತ್ತು. ಅಲ್ಲಿಗೆ ಹೋಗಿ ಟೀ ಇದ್ಯಾ ಅಂದ್ರೆ ಅವ್ರೂ ಇಲ್ಲಾ ಅನ್ನಬೇಕೇ ? ಟೀ , ಕಾಫಿ ಏನೂ ಇಲ್ಲದಿದ್ರೂ ಖಾಲಿ ಕ್ಯಾನು ಹೊರಗೇಕೆ ಇಟ್ಟಿದ್ದೀರಾ ಅಂದ್ರೆ ಅದು ಹಂಗೇ ಅಂತೆ ! ನಾವು ಆ ಹನುಮಂತನ ವಿಗ್ರಹದ ಕೆಳಗಿದ್ದ ಸಣ್ಣ ಗುಡಿಗೆ ಹೊಕ್ಕು, ಈ ಟೀ ಹುಡುಕಾಟ ನಡೆಸಿದ್ರೂ ರಾಜಣ್ಣನ ಸುದ್ದಿಯಿಲ್ಲ. ಇನ್ನು ಇಲ್ಲಿ ಕಾದು ಉಪಯೋಗವಿಲ್ಲ. ಇಲ್ಲಿಂದ ೨.೯ ಕಿ.ಮೀ ಮುಂದೆ ಇರೋ ರಣಹದ್ದು ವನ್ಯಜೀವಿ ವಿಭಾಗದ ಗೇಟತ್ರನಾದ್ರೂ ಹೋಗೋಣ. ಅದೃಷ್ಟವಿದ್ರೆ ಅಲ್ಲೇನಾದ್ರೂ ಕಾಣಬಹುದೇನೋ ಅಂದೆ. ಸರಿ ಅಂತ ಬೈಕ್ ಸ್ಟಾರ್ಟ್ ಮಾಡಿ ಹೊರಡೋ ಹೊತ್ತಿಗೆ ರಾಜಣ್ಣನ ಫೋನು. ನೀವೆಲ್ಲಿದೀರಾ ? ನಾನು ವನ್ಯಜೀವಿ ವಿಭಾಗದ ಗೇಟ್ ಹತ್ರ ಕಾಯ್ತಾ ಇದ್ದೀನಿ ಅನ್ಬೇಕೆ ? ಇದೊಳ್ಳೆ ಕತೆಯಾಯ್ತಲ್ಲ. ಬರ್ತೀವಿ ತಡೀರಿ. ಅಲ್ಲೇ ಇರಿ ಅಂತಂದು ಅತ್ತ ಸಾಗಿದ್ವಿ. ಹಿಂದಿನ ದಿನದಿಂದ ಹೊಸ ಹೊಸ ಸಸ್ಪೆಂಸ್ ಕೊಡ್ತಿದ್ದ ರಾಜಣ್ಣನ ಸಸ್ಪೆಂಸ್ ಸರಣಿ ಮತ್ತು ರಾಮನಗರ ಬೆಟ್ಟ ಚಾರಣದ ಮುಂದಿನ ಅನುಭವಗಳು ಮುಂದಿನ ಭಾಗದಲ್ಲಿ ಮುಂದುವರಿಯುತ್ತೆ

Note: 
1. ramadevarabetta vulture sanctuary(incorrect) ==> suggested correction in google maps already and waiting for the correction to be approved by next level admins.
2. Ramadevara Betta Viewpoint(correct) ==> Place to be bookmarked if you want to visit there next time as would be explained in next blogpost

Friday, August 3, 2018

ಜೋಗ ಜಲಪಾತ

ಬೆಂಗಳೂರಲ್ಲಿರೋ ಸುಮಾರಷ್ಟು ಗೆಳೆಯರು ಜೋಗ ಜಲಪಾತಕ್ಕೆ ಹೋಗೋದು ಹೇಗೆ ಅಂತ ಕೇಳ್ತಿದ್ರು. ಜೋಗಕ್ಕೆ ಹೋಗೋ ಹಾದಿಯ ಜೊತೆ ಜೋಗದ ಸುತ್ತಮುತ್ತಲಿರೋ ಕಲ್ಸಂಕ, ನಿಪ್ಲಿ ಜಲಪಾತ, ದಬ್ಬೆ ಜಲಪಾತ, ಭೀಮೇಶ್ವರಗಳ ಬಗ್ಗೆಯೂ ಹೇಳುತ್ತಿದ್ದೆ. ಮುಂದಿನ ಸಲ ಜೋಗಕ್ಕೆ ಹೋಗುವವರಿಗೆ ಸಹಾಯಕವಾಗಬಹುದಾದ ಈ ತರದ ಹಲವು ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸುವ ಪ್ರಯತ್ನವೇ ಈ ಲೇಖನ

ಜೋಗದಲ್ಲಿರೋ ಜಲಪಾತಗಳೆಷ್ಟು? 
ಜೋಗಕ್ಕೆ ಹೋಗೋ ಹೆಚ್ಚಿನ ಜನರಿಗೆ ಅದರಲ್ಲಿ ನಾಲ್ಕು ಜಲಪಾತಗಳಿವೆಯೆಂದು ತಿಳಿದಿದ್ದರೂ ಅದರ ಹೆಸರು ತಿಳಿದಿರೋಲ್ಲ. ಹೆಸರು ತಿಳಿದಿದ್ದರೂ ಅದರಲ್ಲಿ ಯಾವ್ಯಾವುದರ ಹೆಸರು ಯಾವ್ಯಾವುದೆಂದು ತಿಳಿದಿರೋಲ್ಲ.
4 Falls located in Joga
ಮೇಲಿನ ಚಿತ್ರದಲ್ಲಿರುವಂತೆ ಎಡದಿಂದ ಮೊದಲನೆಯ ಜಲಪಾತದ ಹೆಸರು ರಾಜ. ರಾಜಾರೋಷವಾಗಿ ೮೬೦ ಅಡಿಯ ಮೇಲಿಂದ ಬೀಳುವ ಕಾರಣಕ್ಕೆ ಅದರ ಹೆಸರು ಹಾಗಿರಬಹುದು. ನಂತರ ಸಿಗೋದು "ರೋರರ್". ಮಧ್ಯದಿಂದ ಬೀಳುತ್ತ ರಾಜನನ್ನು ಸೇರುತ್ತೆ ಇದು. ರಭಸವಾದ ಧಾರೆಯಾಗಿ ಬೀಳೋ ಮೂರನೆಯ ಜಲಪಾತ "ರಾಕೆಟ್". ಅದು ಬೀಳೋ ವೇಗ ನೋಡಿ ಹಾಗೆ ಹೆಸರಿಟ್ಟಿರಬಹುದೇನೋ. ಬೆಟ್ಟದ ಮೇಲಿಂದ ನಿಧಾನವಾಗಿ ಬೀಳುವ ಕೊನೆಯ ಜಲಪಾತದ ಹೆಸರು "ರಾಣಿ" . ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ೨೫೩ ಮೀಟರ್ ಮೇಲಿಂದ ಬೀಳೋ ಈ ಜಲಪಾತಕ್ಕೆ ಮೂರನೆಯ ಸ್ಥಾನ ಅನ್ನುತ್ತೆ ಹಲವು ಮೂಲಗಳು.

ಜೋಗ ಜಲಪಾತದ ವೀಕ್ಷಣಾ ಸ್ಥಳಗಳು: 
೧. ಜಲಪಾತದೆದುರು:
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆಯವರು ಜೋಗ ಜಲಪಾತದೆದುರೇ ಕೆಲವು ಶೆಡ್ಗಳನ್ನು, ವೀಕ್ಷಣಾ ತಾಣಗಳನ್ನು ನಿರ್ಮಿಸಿದ್ದಾರೆ. ಹಾಗಾಗಿ ಎಂತಹ ಜೋರು ಮಳೆ ಸುರಿಯುತ್ತಿದ್ದರೂ ಅಲ್ಲಿ ನಿಂತು ಜೋಗದ ಭೋರ್ಗರೆತವನ್ನು ಆನಂದಿಸಬಹುದು. ಮಳೆಗಾಲದಲ್ಲಿ ಮಳೆ ಉಧೋ ಎಂದು ಸುರಿಯುತ್ತಿದ್ದರೆ ನಿಮಿಷಗಟ್ಟಲೇ ಜಲಪಾತದೆದುರು ಮಂಜ ಪರದೆ ಕವಿದಿರುತ್ತೆ. ಜೋರಾಗಿ ಗಾಳಿ ಬೀಸಿದಾಗ ಅಥವಾ ಮಳೆ ಹೆಚ್ಚು, ಕಮ್ಮಿಯಾದಾಗ ಮಂಜ ಪರದೆ ಸರಿಯುತ್ತೆ. ಆಗ ಸಿಗುವ ದೃಶ್ಯವೇ ಅದ್ಭುತ

೨. ಜಲಪಾತದ ಕೆಳಗಿಂದ:
ಮುಂಚೆಯೆಲ್ಲಾ ಜಲಪಾತದ ಬುಡಕ್ಕೆ ಹೋಗಬೇಕೆಂದರೆ ಬೇಸಿಗೆಯಲ್ಲಿ ಜಲಪಾತದ ನೀರು ಬತ್ತುವವರೆಗೂ ಕಾಯಬೇಕಿತ್ತು. ಅದೂ ಸರಿಯಾದ ದಾರಿಯಿಲ್ಲದೇ ಕಲ್ಲ ಮೆಟ್ಟಿಲುಗಳ, ಬಂಡೆಗಳನ್ನಿಳಿದು ತಲುಪಬೇಕಿತ್ತು.ಈಗ ಪ್ರವಾಸೋದ್ಯಮ ಇಲಾಖೆಯವರು ಕೆಳಗಿನವರೆಗೂ ಮೆಟ್ಟಿಲುಗಳ ನಿರ್ಮಿಸಿದ್ದಾರೆ. ಸುಮಾರು ಸಾವಿರದನೈರು ಮೆಟ್ಟಿಲುಗಳ ಇಳಿಯಲು ಇಪ್ಪತ್ತು ನಿಮಿಷ ಸಾಕಾದರೆ ಹತ್ತೋಕೆ ಅರ್ಧಗಂಟೆ ಬೇಕಾಗುತ್ತೆ ಅಂದುಕೊಳ್ಳಿ. ನಿಧಾನವಾಗಿ, ಅಲ್ಲಲ್ಲಿ ಸುಧಾರಿಸಿಕೊಂಡು, ಫೋಟೋ ತೆಗೆದುಕೊಂಡು ಹತ್ತಿ ಇಳಿದ್ರೂ ಸುಮಾರು ಒಂದು ಘಂಟೆ ಇಳಿಯೋಕೆ ಮತ್ತೆ ಒಂದು ಘಂಟೆ ಹತ್ತೋಕೆ ಬೇಕಾಗಬಹುದು. ಬೆಳಿಗ್ಗೆ ಒಂಭತ್ತರಿಂದ ಸಂಜೆ ನಾಲ್ಕರವರೆಗೆ ಕೆಳಗಿಳಿಯೋ ಗೇಟು ತೆಗೆದಿರುತ್ತೆ. ಜನ ಹೆಚ್ಚಿದ್ದರೆ ನಾಲ್ಕೂವರೆಯವರೆಗೂ ಬಿಡುತ್ತಾರೆ ಕೆಲ ಸಲ. ಆದರೆ ಮಳೆಗಾಲದಲ್ಲಿ ಸಂಜೆ ಬೇಗ ಕತ್ತಲಾಗೋದ್ರಿಂದ ನಾಲ್ಕರವಳಗೇ ಗೇಟಿಂದ ಕೆಳಗಿಳಿಯೋದು ಉತ್ತಮ. ಕೆಳಗಡೆಯೂ ಇಬ್ಬರು ಗಾರ್ಡುಗಳು ಇದ್ದು ಮುಂದಿರೋ ದೊಡ್ಡ ಬೇಲಿಯನ್ನೂ ದಾಟಿ ಜಲಪಾತದ ಬುಡಕ್ಕೆ ಹೋಗದಂತೆ ತಡೆಯುತ್ತಾರೆ.ಜೋಗ ಜಲಪಾತದ ಬುಡದಿಂದ ಬ್ರಿಟಿಷ್ ಬಂಗಲೋವರೆಗೆ ಹೋದ ನಮ್ಮ ಪಯಣ ಹೇಗಿತ್ತು ಅನ್ನೋದನ್ನ ಈ ವೀಡಿಯೋದಲ್ಲಿ ನೋಡಬಹುದು

೩. ಹೋಟೆಲ್ ಯಾತ್ರಿ ನಿವಾಸ್:
ಜಲಪಾತದ ಬುಡದಿಂದ ನೋಡುವವರಿಗೆ ಮೇಲ್ಗಡೆ ಬಲಕ್ಕೊಂದು ಹೋಟೆಲ್ ಕಾಣುತ್ತೆ. ಸುಮಾರು ಜನ ಅದೇ ಬ್ರಿಟಿಷ್ ಬಂಗಲೋ ಅಂದುಕೊಂಡಿರುತ್ತಾರೆ. ಆದರೆ ಬ್ರಿಟಿಷ್ ಬಂಗಲೋ ಅದಲ್ಲ್. ಎಡಕ್ಕೆ ಕಾಣೋ ಮತ್ತೊಂದು ಜಾಗ ಬ್ರಿಟಿಷ್ ಬಂಗಲೋ. ಜಲಪಾತದಿಂದ ಹೊರಬಂದು ಎಡಕ್ಕೆ ಸಿಗೋ ರಸ್ತೆಯಲ್ಲಿ ಬ್ರಿಟಿಷ್ ಬಂಗಲೋ ಕಡೆಗೆ ಹೊರಟಾಗ ಸಿಗೋ ಮೊದಲ ತಾಣ ಹೋಟೆಲ್ ಯಾತ್ರಿ ನಿವಾಸ್. ಅಲ್ಲಿ ನಿಂತಾಗ ಜಲಪಾತದ ತಲೆಯ ಮೇಲಿಂದ ಅದು ಹೇಗೆ ಬೀಳುತ್ತೆ ಅಂತ ಕಾಣಬಹುದು


೪. ಬ್ರಿಟಿಷ್ ಬಂಗಲೋ
ಅಲ್ಲಿಂದ ಹಾಗೇ ಮುಂದೆ ಸಾಗಿದರೆ ಸಿಗೋ ಸೇತುವೆಯನ್ನು ದಾಟಿ ಮುಂದೆ ಬಂದರೆ ಭಟ್ಕಳ ರಸ್ತೆ ಸಿಗುತ್ತೆ. ಆ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಮತ್ತೆ ಎಡಕ್ಕೆ ಮೇಲೆ ಹತ್ತೋ ಸಿಮೆಂಟ್ ರಸ್ತೆ ಸಿಗುತ್ತೆ.ಅದರಲ್ಲಿ ಸುಮಾರು ಇನ್ನೂರು ಮೀಟರ್ ಸಾಗುವಷ್ಟರಲ್ಲಿ ಸಿಗೋದೇ ಬ್ರಿಟಿಷ್ ಬಂಗಲೋ. ಇದರ ಮೇಲಿಂದ ಜೋಗ ಜಲಪಾತವನ್ನು ಮತ್ತೊಂದು ಬದಿಯಿಂದ ನೋಡಬಹುದು. ಇಲ್ಲಿಂದ ನೋಡಿದರೆ ರಾಜ ಮತ್ತು ರೋರರ್ ಜಲಪಾತ ಮಾತ್ರ ಕಾಣುತ್ತದೆ. ರಾಕೆಟ್, ರಾಣಿ ಕಾಣದಿದ್ದರೂ ಆ ಜಾಗದಿಂದ ಕಾಣದೇ ಇದ್ದ ಮತ್ತೊಂದು ಹೊಸ ಧಾರೆ ಇಲ್ಲಿಂದ ಕಾಣುತ್ತದೆ.

ಮಳೆಗಾಲದ ಹೊಸ ಜಲಪಾತಗಳು:
ಜೋಗದಲ್ಲಿ ಮೇಲೆ ಹೇಳಿದ ನಾಲ್ಕಲ್ಲದೇ ಮಳೆಗಾಲದಲ್ಲಿ ಇನ್ನೂ ಹಲವು ಧಾರೆಗಳು ಕಾಣಸಿಗುತ್ತೆ. ಈ ಸಲ ಕಂಡ ಹಲವು ಧಾರೆಗಳ ಫೋಟೋಗಳು ಕೆಳಗಿವೆ. 

ಜೋಗದತ್ರ ಇನ್ನೇನಿದೆ: 
ಕಲ್ಸಂಕ-೮ ಕಿ.ಮೀ
ನಿಪ್ಲಿ ಜಲಪಾತ-೧೨ ಕಿ.ಮೀ
ಭೀಮೇಶ್ವರ ದೇವಸ್ಥಾನ ಮತ್ತು ಜಲಪಾತ-೩೦ ಕಿ.ಮೀ(ಸಾಗರ-ಭಟ್ಕಳ ಹೈವೇ). ಮುಖ್ಯ ರಸ್ತೆಯಿಂದ ೨.೫ ಕಿ.ಮೀ ಒಳಗೆ.
ದಬ್ಬೆ ಜಲಪಾತ-೧೮ ಕಿ.ಮೀ. ಮುಖ್ಯ ರಸ್ತೆಯಿಂದ ೪.೫ ಕಿ.ಮೀ ಒಳಗೆ/ಚಾರಣ
ಹೊನ್ನೆಮರಡು-೨೦ ಕಿ.ಮೀ
ಮುಪ್ಪಾನೆ ಪ್ರಕೃತಿ ಶಿಬಿರ-೧೨ ಕಿ.ಮೀ
ಕಾನೂರು ಕೋಟೆ-೩೫ ಕಿ.ಮೀ . ಮುಖ್ಯ ರಸ್ತೆಯಿಂದ ೧೪ ಕಿ.ಮೀ ಮತ್ತು ೭ ಕಿ.ಮೀ ಚಾರಣ. ಅರಣ್ಯ ಇಲಾಖೆಯ ಪರ್ಮಿಷನ್ ಬೇಕು.

ಇದರಲ್ಲಿ ಹೊನ್ನೆಮರಡು ಅಥವಾ ಮುಪ್ಪಾನೆಯಲ್ಲಿ ಉಳಿಯೋ ಪ್ಲಾನಿದ್ದರೆ ಅಲ್ಲಿನವರಿಗೆ ಫೋನ್ ಮಾಡಿ ಬುಕ್ ಮಾಡಿಕೊಳ್ಳೋದು ಉತ್ತಮ ಅನಿಸುತ್ತೆ. ರಸ್ತೆಯಿಂದ ಹೊನ್ನೆಮರಡುವಿಗೆ ೭ ಕಿ.ಮೀ ಒಳಗೆ ಮತ್ತು ಮುಪ್ಪಾನೆಗೆ ಮೂರು ಕಿ.ಮೀ ಒಳಗೆ ಹೋಗಬೇಕು. ಇದರಲ್ಲಿ ಮುಪ್ಪಾನೆ, ಕಾನೂರು, ದಬ್ಬೆ, ಭೀಮೇಶ್ವರಗಳಿಗೆ ಹೋಗಿ ಬಂದಿದ್ದರೂ ಅಲ್ಲಿ ತೆಗೆದಿದ್ದ ಹಿಂದಿನ ರೀಲ್ ಕ್ಯಾಮೆರಾದಲ್ಲಿದ್ದ ಚಿತ್ರಗಳು ಹಾಳಾಗಿ ಬ್ಲಾಗಿಗೆ ದಕ್ಕದೇ ಹೋಗಿದ್ದು ಬೇಸರದ ಸಂಗತಿ. ಮತ್ತೊಮ್ಮೆ ಅಲ್ಲಿ ಹೋಗಿ ಬಂದು ಬ್ಲಾಗಿಸೋ ಉಮ್ಮೇದಿನೊಂದಿಗೆ ಸದ್ಯಕ್ಕೊಂದು ವಿರಾಮ

Wednesday, August 1, 2018

ಕಲ್ಸಂಕ

Kalsanka. Photo credits: Wikipedia

ಜೋಗ ಜಲಪಾತಕ್ಕೆ ಹೋದಾಗ ಸುತ್ತಮುತ್ತ ನೋಡಬಹುದಾದ ಜಾಗಗಳಲ್ಲೊಂದು ಕಲ್ಸಂಕ. ಎರಡು ವರ್ಷಗಳ ಹಿಂದೆ ವಿಕಿಪೀಡಿಯಾದಿಂದ ಸಾಗರದಲ್ಲಿ ಕಾರ್ಯಾಗಾರ ಏರ್ಪಡಿಸಿದ್ದಾಗ ಸಾಗರ ಫೋಟೋವಾಕ್ ಮಾಡುವ ಸಲಹೆ ಬಂದಿತ್ತು. ಅದರಂತೆ ಸಾಗರದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿ ಅವುಗಳ ಚಿತ್ರ ತೆಗೆದು ಅವುಗಳ ಬಗೆಗಿನ ಲೇಖನಗಳನ್ನು ಉತ್ತಮಪಡಿಸಲು ಪ್ರಯತ್ನಿಸಿದ್ದೆವು. ಹಾಗೇ ಭೇಟಿ ಕೊಟ್ಟ ಸ್ಥಳಗಳಲ್ಲೊಂದು ಕಲ್ಸಂಕ. ಅದರ ವಿಕಿಲೇಖನ ಇಲ್ಲಿದೆ

ಎಲ್ಲಿದೆ ಈ ಕಲ್ಸಂಕ? : 
ಸಾಗರದಿಂದ ತಾಳಗುಪ್ಪ ಮಾರ್ಗವಾಗಿ ಹೋಗಿ ಚೂರಿಕಟ್ಟೆಯಲ್ಲಿ ಎಡಕ್ಕೆ ತಿರುಗದೇ ಸೀದಾ ಮುಂದಕ್ಕೆ ಹೋದರೆ ಸುಮಾರು ಐದು ಕಿ.ಮೀ ಹೋಗುವಷ್ಟರಲ್ಲಿ ಜೋಗ ಎಂಟು ಕಿ.ಮೀ ಎಂಬ ಬೋರ್ಡ್ ಕಾಣುತ್ತದೆ. ಅದರ ಪಕ್ಕದಲ್ಲೇ ಸಣ್ಣದೊಂದು ಬೋರ್ಡಿದೆ. ಅದುವೇ ಗ್ರಾಮ ಪಂಚಾಯತಿಯವರು ನಿಲ್ಲಿಸಿರುವ "ಕಲ್ಸಂಕ" ಎಂಬ ಬೋರ್ಡು !

ಇದರ ವೈಶಿಷ್ಟ್ಯವೇನು ? 
ನೆಲಕ್ಕಿಂತ ಸುಮಾರು ಹತ್ತು ಅಡಿ ಎತ್ತರಕ್ಕಿರುವ ಈ ಕಲ್ಲಿನ ಸೇತುವೆ ನಲವತ್ತೈದು ಅಡಿಗಿಂತಲೂ ಉದ್ದವೂ, ಸುಮಾರು ನಾಲ್ಕರಿಂದ ಆರಡಿ ಅಡಿ ಅಗಲವೂ, ಎರಡು ಅಡಿಯಷ್ಟು ದಪ್ಪವೂ ಆದ ನೈಸರ್ಗಿಕ ರಚನೆ. ಜಂಬಿಟ್ಟಿಗೆಯಿಂದ ಆಗಿರೋ ಈ ಕಲ್ಲಿನ ಸೇತುವೆಯಡೆ ಕಲಗಾರಿನಲ್ಲಿ ಹುಟ್ಟಿ ವರದೆಯನ್ನು ಸೇರುವ ಸಣ್ಣ ಝರಿಯೊಂದು ಹರಿಯುತ್ತದೆ. ಆ ಝರಿಯಿಂದಲೇ ಕ್ರಮೇಣ ಕಲ್ಲು ಕೊರೆದು ಈ ಸೇತುವೆ ನಿರ್ಮಾಣವಾಗಿರಬಹುದೆಂದು ನಂಬಲಾಗಿದೆ. ಅಮೇರಿಕಾದ ಉಟಾ ಎಂಬಲ್ಲಿ ಕಂಡುಬಂದ ಇಂತದ್ದೇ ರಚನೆಯನ್ನು ರಾಷ್ಟ್ರೀಯ ಸ್ಮಾರಕವೆಂದು ಸಂರಕ್ಷಿಸಲಾಗಿದೆ. ಹಲವು ಮೂಲಗಳ ಪ್ರಕಾರ ವಿಶ್ವದ ಅತೀ ಉದ್ದನೆಯ ನೈಸರ್ಗಿಕ ಶಿಲಾಸೇತುವೆಗಳಲ್ಲಿ ಕಲ್ಸಂಕ ಎರಡನೆಯದು ಎಂದೂ ಹೇಳಲಾಗುತ್ತದೆ !


ಸಂರಕ್ಷಣೆಯ ಅಗತ್ಯ: 
ಅಮೇರಿಕಾದಲ್ಲಿ ರಾಷ್ಟ್ರೀಯ ಸ್ಮಾರಕ ಅಂತ ಗುರುತಿಸಲ್ಪಡುವ ರಚನೆಯಂತದ್ದೇ ಇಲ್ಲಿದ್ದರೂ ಸರ್ಕಾರದ ರಕ್ಷಣೆಯಿರಲಿ ಒಂದು ಮಾಹಿತಿಫಲಕವೂ ಇದರ ಬಗ್ಗೆಯಿಲ್ಲ :-( ಆ ಕಡೆಯ ಗದ್ದೆಗಳಿಗೆ ಏನಾದರೂ ಸಾಗಿಸಲು, ಜನ ಓಡಾಡಲು ಇದನ್ನೇ ಬಳಸುತ್ತಿದ್ದರಂತೆ. ನಾವು ಹಿಂದಿನ ಸಲ ಹೋದಾಗ ಈ ಸೇತುವೆಯ ಒಂದು ಬದಿ ಜಂಬಿಟ್ಟಿಗೆ ಕಲ್ಲು ಕಡಿಯಲಾಗುತ್ತಿತ್ತು ! ಕೆಳಗೆ ಒಂದು ಚೌಡಿಯಿದೆ ಅಂತ ಜನ ನಂಬುತ್ತಿದ್ದರಿಂದ ಇದರ ಕಲ್ಲುಗಳನ್ನು ಚಪ್ಪಡಿಯಂತೆ ಒಡೆದು ಮನೆಗೆ ಸಾಗಿಸದೇ ಹೋದದ್ದು ಪುಣ್ಯ ಎನ್ನಬೇಕೇನೋ. ಮತ್ತೊಂದು ಬಾರಿ ಹೋದಾಗ ಚೌಡಿಯ ಗುಡಿಯನ್ನು ಸ್ವಲ್ಪ ಪಕ್ಕದಲ್ಲಿ ಮಾಡಿ, ದೂರದಲ್ಲೊಂದು ಸೇತುವೆ ಮಾಡಿದ್ದರಿಂದ ಈ ನೈಸರ್ಗಿಕ  ಸೇತುವೆಯ ಸುದ್ದಿಗೆ ಯಾರೂ ಬಂದಿಲ್ಲದ್ದು ಪುಣ್ಯ. ಅದೇ ಇದರ ಸಂರಕ್ಷಣೆ ಅಂತ ಖುಷಿಪಡಬೇಕೇನೋ :-(

ನಿಪ್ಲಿ ಜಲಪಾತ

ನಿಪ್ಲಿ ಜಲಪಾತ: 
Nipli falls
 ಕಳೆದ ವರ್ಷ ನಾ ಮೆಕ್ಸಿಕೋದಲ್ಲಿದ್ದಾಗ ಅಮ್ಮ "ನಿಪ್ಲಿ ಫಾಲ್ಸ್" ಗೆ ಹೋಗಿ ಬಂದ್ವಿ ಕಣೋ ಇವತ್ತು ಅಂದ್ರು ಒಂದಿನ. ಇಲ್ಲಿಯವರೆಗೆ ಹೆಸರೇ ಕೇಳಿರ್ಲಿಲ್ವಲ್ಲಾ. ಎಲ್ಲಿ ಬಂತಪಾ ಈ ಫಾಲ್ಸ್ ಅಂತ ಅಂದ್ಕೊಳ್ತಿದ್ದಾಗ ತಾಳಗುಪ್ಪದಿಂದ ಹದಿನೈದು ಕಿ.ಮೀ ಒಳಗೆ ಅಂತಲೂ ಅಂದ್ರು. ಅದಾದ ಮೇಲೆ ಫೇಸ್ಬುಕ್ಕಲ್ಲಿ ಯಾರ ಗೋಡೆ ಮೇಲೆ ನೋಡಿದ್ರೂ ನಿಪ್ಲಿ ಫಾಲ್ಸಿಂದೇ ಫೋಟೋ. ವಾಪಾಸ್ ಬಂದ್ಮೇಲೆ ಹೋಗ್ಲೇ ಬೇಕು ಅಂತಂದುಕೊಂಡಿದ್ದ ಮೊದಲ ಜಾಗ. ಅಂತೂ ಬಂದ ವಾರವೇ ಹೋಗಿ ಬಂದ್ವಿ ಅಲ್ಲಿಗೆ. ನಾ ಹಾಕಿದ ಫೋಟೋ ನೋಡಿ ಅಲ್ಲಿಗೆ ಹೋಗೋದೇಗೆ ಅಂತ ಕೇಳ್ತಿದ್ದ ಗೆಳೆಯರಿಗಾಗಿ ಈ ಲೇಖನ

ಹೋಗೋದು ಹೇಗೆ? 
ಸಾಗರದಿಂದ ೩೦ ಕಿ.ಮೀ ದೂರವಿರೋ ಈ ಜಲಪಾತ ಆಡುಕಟ್ಟೆ, ಹಾಲಗೇರಿ ರಸ್ತೆಯಲ್ಲಿ ಬರುತ್ತದೆ. ಸಾಗರದಿಂದ ಜೋಗಕ್ಕೆ ಹೋಗೋ ರಸ್ತೆಯಲ್ಲಿ ತಾಳಗುಪ್ಪ ದಾಟಿ ಮುಂದೆ ಹೋದರೆ ಸಿಗೋ ಚೂರಿಕಟ್ಟೆಯ ಸರ್ಕಲ್ಲಿನಲ್ಲಿ ಎಡಕ್ಕೆ ಹೋಗದೇ ಸೀದಾ ಹೋಗಬೇಕು. ಸುಮಾರು ಐದು ಕಿ.ಮೀ ಹೋಗುವಷ್ಟರಲ್ಲಿ ಜೋಗ ಏಳು ಕಿ.ಮೀ ಅಂತ ಬೋರ್ಡ್ ಕಾಣುತ್ತೆ. ಆ ಬೋರ್ಡಿನ ಪಕ್ಕದಲ್ಲೇ ಎಡಕ್ಕೆ ಹೋದರೆ ಕಲ್ಸಂಕ ಅತ ಪ್ರಪಂಚದಲ್ಲೇ ಅತ್ಯಂತ ಉದ್ದದ ಏಕಶಿಲಾ ಸೇತುವೆಗಳಲ್ಲಿ ಒಂದಾದ ಶಿಲಾ ಸೇತುವೆಯೊಂದು ಸಿಗುತ್ತೆ. (ಅದರ ಬಗ್ಗೆ ನನ್ನ ಹಿಂದಿನ ಬ್ಲಾಗ್ ಬರಹದಲ್ಲಿದೆ). ಅದನ್ನು ದಾಟಿ ಒಂದೆರಡು ಕಿ.ಮೀ ಹೋಗುವಷ್ಟರಲ್ಲಿ ಸಿದ್ದಾಪುರಕ್ಕೆ ಹೋಗಲು ಬಲಗಡೆ ಒಂದು ತಿರುವು ಸಿಗುತ್ತೆ. ಆ ತಿರುವಲ್ಲೂ ತಿರುಗದೇ ಹಾಗೇ ಸ್ವಲ್ಪ ಮುಂದೆ ಹೋದರೆ ಆಡುಕಟ್ಟೆ ಸಿಗುತ್ತೆ. ಅಲ್ಲಿ ಬಲಕ್ಕೆ ತಿರುಗಿ ಏಳು ಕಿ.ಮೀ ಹೋಗೋ ಹೊತ್ತಿಗೆ "ನಿಪ್ಲಿ" ಅಂತ ಊರು ಸಿಗುತ್ತೆ. ಆ ಊರೊಳಗೆ ಹೋಗೋ ಬದಲು ಹಾಗೇ ಅದೇ ಟಾರ್ ರಸ್ತೆಯಲ್ಲಿ ಒಂದಿನ್ನೂರು ಮೀಟರ್ ಮುಂದೆ ಹೋಗೋ ಹೊತ್ತಿಗೆ ರಸ್ತೆಯ ಎಡಭಾಗದಲ್ಲಿ ಕಾಣ ಸಿಗೋದೇ ನಿಪ್ಲಿ ಜಲಪಾತ.
Nipli or Husur dam falls

ಈ ಜಲಪಾತ ಆಗಿದ್ದು ಹೇಗೆ? 
ಆಡುಕಟ್ಟೆಯಿಂದ ಸಿದ್ದಾಪುರದ ಹಲಗೇರಿಗೆ ಹೋಗಬಹುದಾದ ರಸ್ತೆಯೊಂದಿದೆ. ಆ ರಸ್ತೆಯಲ್ಲಿ ಹಲಗೇರಿಗಿಂತ ಎರಡು ಕಿ.ಮೀ ಮುಂಚೆ ಹುಸೂರು ಅಂತೊಂದು ಊರು ಸಿಗುತ್ತೆ. ಅಲ್ಲೊಂದು ಸಸ್ಯಪಾಲನಾ ಕ್ಷೇತ್ರವಿದೆ.
Forest Nursery at Husur
ಅದರ ಬಲಗಡೆಗೇ ಒಂದು ಡ್ಯಾಂ ಇದೆ. ಮಳೆಗಾಲದಲ್ಲಿ ಅದನ್ನು ತುಂಬುವ ಶರಾವತಿ "ನಿಪ್ಲಿ" ಜಲಪಾತವಾಗಿ ಧುಮುಕುತ್ತಾಳೆ. ಹಾಗಾಗಿ ಇದಕ್ಕೆ "ಹುಸೂರು ಡ್ಯಾಂ ಜಲಪಾತ" ಎಂದೂ ಕೆಲವರು ಕರೆಯುತ್ತಾರೆ. ಅಂದ ಹಾಗೆ ಈ ಜಲಪಾತ ಮಳೆಗಾಲ ಮುಗಿಯೋವರೆಗೆ ಮಾತ್ರವಿರುತ್ತೆ.
Husur Reservoir
Steps to Get down to Husur Reservoir

ಈ ಜಲಪಾತ ನೋಡೋಕೆ ಹೋಗೋದು ಎಷ್ಟು ಸುರಕ್ಷಿತ? : 
ಮಳೆ ಜೋರಿದ್ದಾಗ ನೀರಿನ ರಭಸ ಸ್ವಲ್ಪ ಜಾಸ್ತಿ ಇದ್ದರೂ ಜಲಪಾತದ ತಲೆಯವರೆಗೂ ನಡೆದುಕೊಂಡು ಬರಬಹುದು. ನೀರು ಕಮ್ಮಿಯಿದ್ದಾಗ ಹಿನ್ನೀರಿನಲ್ಲೂ ಸ್ವಲ್ಪ ದೂರ ಓಡಾಡಬಹುದು. ಜಲಪಾತದ ತಲೆಯ ಮೇಲೆ ಸರ್ಕಸ್ ಮಾಡೋಕೆ ಅಥವಾ ಜಲಪಾತ ಧುಮ್ಮುಕ್ಕುವಲ್ಲಿ ಹೆಚ್ಚು ನೀರಿದ್ದಾಗ ಈಜಲು ಹೋಗದೇ ಹೋದರೆ ಹೆಚ್ಚಿನ ಎತ್ತರದಿಂದ ಬೀಳದ ಈ ಜಲಪಾತ ಪ್ರವಾಸಿಗರ ಮಟ್ಟಿಗೆ ಸುರಕ್ಷಿತವೇ.
on the top of Nipli falls
ಸುತ್ತಲಿರೋ ಸೌಲಭ್ಯಗಳು: 
ಈ ಜಲಪಾತ ಮಳೆಗಾಲದಲ್ಲಿ ಮಾತ್ರ ಕಾಣಸಿಗೋದ್ರಿಂದ ಇದರ ಸುತ್ತ  ಒಂದು ಮಂಡಕ್ಕಿ, ಎಳನೀರು ಮುಂತಾದವು ಸಿಗೋ ಸಣ್ಣ ಅಂಗಡಿ ಬಿಟ್ಟರೆ ಹೆಚ್ಚೇನೂ ಸೌಲಭ್ಯಗಳಿಲ್ಲ. ಪಕ್ಕದಲ್ಲೇ ದೊಡ್ಡ ಬಯಲಿರೋದ್ರಿಂದ ವಾಹನಗಳ ನಿಲುಗಡೆಗೆ ತೊಂದರೆಯೇನಿಲ್ಲ. ಪೇಪರ್ರು, ಕವರ್ರುಗಳನ್ನು ಅಲ್ಲಲ್ಲಿ ಎಸೆಯೋ ಜನರ ದುರ್ಬುದ್ದಿ ನೋಡಿ ಬೇಜಾರಾಗುತ್ತೆ ಬಿಟ್ಟರೆ ಹಿರಿಯರು, ಮಕ್ಕಳಿರೋ ಕುಟುಂಬದೊಂದಿಗೆ, ಗೆಳೆಯರೊಂದಿಗೆ ಬಂದು ಒಂದಿಷ್ಟು ಹೊತ್ತು ಕಳೆಯಲು ಪ್ರಶಸ್ತವಾದ ಜಾಗವಿದು. ಜೋಗ ಜಲಪಾತ ಇಲ್ಲಿಂದ ಸುಮಾರು ಹನ್ನೆರಡು ಕಿ.ಮೀ ಅಷ್ಟೇ ಆಗಿರೋದ್ರಿಂದ ಜೋಗ ಜಲಪಾತಕ್ಕೆ ಬಂದವರು ಆರಾಮವಾಗಿ ಬಂದು ಹೋಗಬಹುದಾದ ಮತ್ತೊಂದು ಜಲಪಾತ ಇದು.