

ಈ ಸಂದರ್ಭದಲ್ಲಿ ಸಂಕ್ರಾಂತಿಯ ಬಗ್ಗೆ ಅಮ್ಮ ಹೇಳ್ತಿದ್ದ ಮಾತು ನೆನಪಾಗುತ್ತೆ. ಸಂಕ್ರಾಂತಿ ಬರೋದು ಚಳಿಗಾಲದಲ್ಲಿ..ಚರ್ಮ ಚಳಿಗೆ ಒಣಗುತ್ತಿರೋ ಸಮಯದಲ್ಲಿ ದೇಹಕ್ಕೆ ಎಣ್ಣೆಯ ಅಂಶದ ಅವಶ್ಯಕತೆ ಇರತ್ತೆ. ಎಳ್ಳಿಗಿಂತ ಹೆಚ್ಚು ಎಣ್ಣೆಯಿರೋ ವಸ್ತು ಬೇಕೇ ? ಅದೇ ರೀತಿ ಕಬ್ಬಿಣದ ಅಂಶ ಹೆಚ್ಚಿರೋ ಬೆಲ್ಲ, ಅದರ ಹೆತ್ತವ್ವ ಕಬ್ಬು, ಮತ್ತೆ ಎಣ್ಣೆಯೊದಗಿಸುವ ಕಡಲೆ .. ಹೀಗೆ ನಮ್ಮ ಸಂಕ್ರಾಂತಿ ಆಚರಣೆ ಹಿಂದೆ ನಮ್ಮ ಹಿರಿಯರ ಎಷ್ಟೆಲ್ಲಾ ಮುಂದಾಲೋಚನೆಗಳು ಅಡಗಿದೆ ಅಂತ.
ನಮ್ಮಲ್ಲಿನ ಹಬ್ಬದ ಪರಿಪಾಟ ಹೇಗೂ ನಮಗೆ ಗೊತ್ತೇ ಇರತ್ತೆ.. ಆದರೆ ಈ ಸಲ ಭಾರತದ ಬೇರೆ ಬೇರೆ ಭಾಗದ ಸ್ನೇಹಿತರು ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಅನ್ನೋ ಮಾಹಿತಿ ಕಲೆ ಹಾಕೋ ಯೋಚನೆ ಮೂಡಿತು. ಅದರಲ್ಲಿ ಕೆಲವರಿಗೆ ಕಳಿಸಿದ ಸಂದೇಶಗಳಿಗೆ ಸಿಕ್ಕ ಉತ್ತರಗಳು.. ನಿಮ್ಮ ಮುಂದೆ. ಇಷ್ಟವಾಗಬಹುದೆಂಬ ನಿರೀಕ್ಷೆಯಲ್ಲಿ. ದೆಲ್ಲಿಯ ಗೆಳೆಯನ ಪಾಲಿಗೆ ಸಂಕ್ರಮಣವೆಂದರೆ ಲಾಡು ಹಬ್ಬವಂತೆ ! ಲಾಡು ತಿನ್ನೋದ್ರ ಜೊತೆಗೆ ಗಾಳಿಪಟ ಹಾರಿಸೋದು ಇನ್ನೊಂದು ಖುಷಿಯಂತೆ ಅಲ್ಲಿ. ಮತ್ತೊಬ್ಬ ಉತ್ತರಪ್ರದೇಶದ ಗೆಳೆಯನ ಪ್ರಕಾರ ಅಲ್ಲಿ ಈ ಸಂದರ್ಭದಂತೆಯೇ ನವರಾತ್ರಿಯ ಪಂಚಮಿಯಂದೂ ಗಾಳಿಪಟ ಹಾರಿಸುತ್ತಾರಂತೆ. ಬೆಂಗಾಲಿ ಗೆಳೆಯನಿಗೆ ಹಾಲು, ಅಕ್ಕಿ, ಬೆಲ್ಲ ಹಾಕಿ ತಯಾರಿಸಿದ ಪೀಥಾ ಅನ್ನೋ ಸ್ವೀಟೇ ಸಂಕ್ರಾಂತಿ ಸಂಭ್ರಮಬೆಂಗಳೂರಿನ ಗವಿಪುರದಲ್ಲಿನ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳೋ ವರ್ಷದ ಏಕಮಾತ್ರ ದಿನವೂ ಸಂಕ್ರಾಂತಿಯೇ. ಆಗಿನವರ ವೈಜ್ನಾನಿಕ ಪ್ರಜ್ನೆ ಹೆಮ್ಮೆ ತರುತ್ತದೆ.
ನಮ್ಮಲ್ಲಿ ಒಂದು ದಿನದ ಆಚರಣೆಯ ಈ ಹಬ್ಬದ ಆಚರಣೆ ನೆರೆಯ ಆಂಧ್ರದಲ್ಲಿ ನಾಲ್ಕು ದಿನ ನಡೆಯುತ್ತದೆಯಂತೆ.ಮೊದಲ ದಿನ ಮನೆ, ಮನದಲ್ಲಿರೋ ಹಳೆಯ , ನಿರುಪಯೋಗಿ ವಸ್ತುಗಳನ್ನ ಹೊರಹಾಕೋ "ಭೋಗಿ" ಹಬ್ಬ. ಸಂಜೆಯ ಹೊತ್ತಿಗೆ ಊರ ಹೊರಗೆ ಒಂದು ಕಡೆ ಬೆಂಕಿ ಹಾಕಿ ಮನೆಯಲ್ಲಿರೋ ನಿರುಪಯುಕ್ತ ಮರದ ವಸ್ತುಗಳನ್ನ ಸುಡೋ ಪದ್ದತಿಯೂ ಇದೆಯಂತೆ ಕೆಲಕಡೆ. ಮನೆ ಮನಗಳಲ್ಲಿರೋ ರಾಕ್ಷಸತ್ವವನ್ನು ಸುಟ್ಟು, ಸದ್ಭಾವನೆಗಳಿಗೆ, ಮನುಷ್ಯತ್ವಕ್ಕೆ ಜಾಗ ಮಾಡಿ ಕೊಡೋ ಸದುದ್ದೇಶ ಅಡಗಿರಬಹುದು ಅದರ ಹಿಂದೆ. ಎರಡನೇ ದಿನ ಮಕರ ಸಂಕ್ರಾಂತಿ. ಮಕರ ಸಂಕ್ರಾಂತಿ ಅಂದ್ರೆ ಕೇರಳದ ಶಬರಿಮಲೆಯ ಮಕರ ಸಂಕ್ರಮಣದ ಆಚರಣೆ ಮತ್ತು ಸಂಜೆಯ ಮಕರ ಜ್ಯೋತಿಯ ನೆನಪೂ ಆಗುತ್ತದೆ. ಮತ್ತೆ ಆಂಧ್ರದ ಸಂಕ್ರಾತಿಯ ಕತೆಗೆ ಹೊರಳಿದರೆ ಎರಡನೇ ದಿನದ ಸಂಕ್ರಾಂತಿಯನ್ನು ಪೆದ್ದ ಪಂಡುಗ(ದೊಡ್ಡ ಹಬ್ಬ) ಅಂತ ಕರೆಯುತ್ತಾರಂತೆ ಅಲ್ಲಿ. ಗತಿಸಿದ ಪೂರ್ವಜರಿಗೆಲ್ಲಾ ನಮಿಸೋ ಪುಣ್ಯ ದಿನ ಅಂದು. ಮೂರನೇ ದಿನವನ್ನು "ಕನುಮ" ಎಂದು ಹೊಸ ಬಟ್ಟೆ ತೊಟ್ಟ ಹೆಣ್ಣು ಮಕ್ಕಳು ಗೋಪೂಜೆ, ಹಕ್ಕಿ ಪಕ್ಷಿ, ಪ್ರಾಣಿ, ಮೀನುಗಳಿಗೆ ಅನ್ನವಿಕ್ಕೋದ್ರಲ್ಲಿ ತೊಡಗುತ್ತಾರಂತೆ. ನಾಲ್ಕನೇ ದಿನ "ಮುಕ್ಕನುಮ" ಮಾಂಸಾಹಾರಿಗಳ ಸುಗ್ಗಿ.ಮೊದಲ ಮೂರು ದಿನ ಮಾಂಸ ತಿನ್ನದ ಅವರಿಗೆ ನಾಲ್ಕನೆಯ ದಿನ ಹಬ್ಬವೋ ಹಬ್ಬ.
ಭಾರತದಲ್ಲಿ ರಾಜ್ಯ, ಭಾಷೆಗಳ ವೈವಿಧ್ಯತೆ ಎಷ್ಟಿದೆಯೋ ಅದೇ ತರ ಸಂಕ್ರಾಂತಿ ಆಚರಣೆಯಲ್ಲೂ ಇದೆ. ಗುಜರಾತಲ್ಲಿ ಮೊದಲ ದಿನ ಉತ್ತರಾಯಣ, ಎರಡನೆಯ ದಿನ ವಸಿ ಉತ್ತರಾಯಣ ಅಂತ ಆಚರಿಸಿದರೆ ಅಸ್ಸಾಮಿನ ಬಿಹುವಿನದು ಒಂದು ವಾರದ ಆಚರಣೆ ! ಗೂಳಿ ಕಾಳಗ, ಕೋಳಿ ಕುಸ್ತಿ, ಹಲ ತರ ವಾದ್ಯಗಳ ನುಡಿಸೋದು.. ಹೀಗೆ ಆಚರಣೆಯ ಪರಿಯೇ ಬೇರೆ. ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ.. ಹೀಗೆ ಹಲವು ಪ್ರದೇಶಗಳ ಸ್ನೇಹಿತರನ್ನು ಕೇಳುತ್ತಾ, ಅಲ್ಲಿನ ಸಂಕ್ರಾಂತಿ ಆಚರಣೆಯ ಪರಿ ದಾಖಲಿಸುತ್ತಾ ಹೋದರೆ ಒಂದು ಪುಟ ಖಂಡಿತಾ ಸಾಕಾಗೊಲ್ಲ..ಮನೆ ಮನಗಳನ್ನು ಒಂದುಗೂಡಿಸೋ ಈ ಹಬ್ಬ ಹದಿನೈದಕ್ಕೇ ಬರುತ್ತೆ ಅನ್ನೋದು ಸಾಮಾನ್ಯ ನಂಬಿಕೆಯಾದರೂ ಅದನ್ನ ತಳ್ಳಿ ಹಾಕುತ್ತಾರೆ ಖಗೋಳ ಶಾಸ್ತ್ರಜ್ಞರು. ಭೂಮಿಯ ಕಕ್ಷೆಯಲ್ಲಿ ನಿಧಾನಗತಿಯ ಬದಲಾವಣೆ ಆಗ್ತಿರೋ ಹಾಗೆಯೇ ಸೂರ್ಯ ಮಕರ ರಾಶಿಗೆ ಪ್ರವೇಶಿಸೋ ದಿನದ ಈ ಹಬ್ಬವೂ ಮುಂದಕ್ಕೆ ಸರಿಯುತ್ತಂತೆ..ಸಾವಿರ ವರ್ಷಗಳ ಹಿಂದೆ ೩೧ ಡಿಸೆಂಬರಲ್ಲಿದ್ದ ಈ ಹಬ್ಬ ಈಗ ಈ ದಿನಕ್ಕೆ ಬಂದಿದೆಯಂತೆ. ೨೦೫೦ರಲ್ಲಿ ಇದು ಜನವರಿ ಹದಿನೈದರಂದು ಬರುತ್ತೆ ಅನ್ನುತ್ತೆ ಮತ್ತೊಂದು ಲೆಕ್ಕಾಚಾರ. ಏನೇ ಆಗ್ಲಿ, ಎಂದೇ ಬರ್ಲಿ, ಏನೆಂದೇ ಕರೆಸಿಕೊಳ್ಲಿ ಸಂಕ್ರಾಂತಿ ಸಂಕ್ರಾಂತಿಯೇ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ ಅಲ್ವಾ ಎಂಬ ಸದುದ್ದೇಶವನ್ನು ಪ್ರತೀ ಸಲದಂತೆ ಈ ಸಲವೂ ತರಲೆಂಬ ಹಾರೈಕೆಯೊಂದಿಗೆ..
ಅಬ್ಬಾ.. ಬಹಳ ವಿಷಯಗಳಿವೆ ನಾ ತಿಳಿದುಕೊಳ್ಳಲು... :)
ReplyDeleteತಡವಾಯಿತು... ಆದರೂ ಸಂಕ್ರಾಂತಿಯ ಶುಭಾಶಯಗಳು.. ಮತ್ತು ಮಾಹಿತಿಯುಕ್ತ ಬರಹಕ್ಕಾಗಿ ಧನ್ಯವಾದಗಳು..
ಹೆ ಹೆ.. ಅಡ್ಡಿಲ್ಲೆ ಬಿಡು ಸುಷ್ಮಾ.. ನಿಂಗೂ ಸಂಕ್ರಾಂತಿ ಶುಭಾಶಯಗಳು :-)
Deleteಉತ್ತಮ ಲೇಖನ , ಅಭಿನ೦ದನೆಗಳು.
ReplyDeleteಧನ್ಯವಾದಗಳು ಪ್ರಭಾಕ್ಕ
Delete