Sunday, March 22, 2020

ಕರೋನಾ ಕಮಂಗಿಗಳು

"ವೈದ್ಯೋ ನಾರಾಯಣೋ ಹರಿಃ" ಎಂಬ ಮಾತಂತೆ ಕರೋನಾವೆಂಬ ಮಹಾ ಮಾರಿಯ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ನಮ್ಮ ಜೀವವ ರಕ್ಷಿಸುತ್ತಿರೋ ವೈದ್ಯರಿಗೆ, ಪೋಲೀಸರಿಗೆ, ನಮ್ಮ ನಗರವನ್ನು ಸ್ವಚ್ಛವಾಗಿಡೋಕೆ ಸಹಕರಿಸುತ್ತಿರೋ ಪಉರಕಾರ್ಮಿಕರಿಗೆ ನನ್ನ ಮೊದಲ ನಮನ. ಇಂದು ಸಂಜೆ ಐದಕ್ಕೆ ಘಂಟೆ, ಚಪ್ಪಾಳೆ, ಪ್ಲೇಟು, ಡ್ರಮ್ಮು , ಶಂಖ, ಜಾಗಟೆ, ಪೀಪಿ ಹೀಗೆ ಅನೇಕ ಶಬ್ದಗಳಿಂದ ಕೋಟ್ಯಾಂತರ ಜನ ಸಲ್ಲಿಸಿದ ನಮನವೂ ನಿಮಗೇನೇ. ನಿಮ್ಮ ಸೇವೆಯ ಬಗ್ಗೆ ಎಷ್ಟು ಕೊಂಡಾಡಿದರೂ ಕಮ್ಮಿಯೇ ಎಂದುಕೊಂಡರೂ ಒಂದಿಷ್ಟು ಸುದ್ದಿಗಳು ನನ್ನ ಮನಕಲಕಿದ್ದು ಸುಳ್ಳಲ್ಲ. 

ಸುದ್ದಿ-೧: "ಜನತಾ ಕರ್ಫ್ಯೂ" ದಿನ ಖಾಲಿಯಿದ್ದ ರಸ್ತೆಯಲ್ಲಿ ಡ್ರ್ಯಾಗ್ ರೇಸಿಂಗ್ ಮಾಡೋಕೆ ಹೋಗಿ ಬೈಕ್ ಸವಾರನ ಸಾವು !
ಸುದ್ದಿ-೨: ದುಬೈಯಿಂದ ಬಂದವ ಏರ್ಪೋರ್ಟಿಂದ ಮಡಿಕೇರಿಯವರೆಗೆ ಸಿಕ್ಕ ಸಿಕ್ಕ ಕಡೆಯೆಲ್ಲಾ ಓಡಾಡಿದ್ದು ಅವ ಎಲ್ಲೆಲ್ಲಿ ಹೋದ, ಯಾರ್ಯಾರನ್ನು ಭೇಟಿ ಮಾಡಿದ ಅಂತ ಪತ್ತೆ ಮಾಡೋಕೆ ಪೋಲೀಸರ ಹರಸಾಹಸ ! , ಚೆನ್ನೈಗೆ ಹೋಗಬೇಕಾದವ ಬೆಂಗಳೂರಲ್ಲಿ ಬಂದಿಳಿದು ಇಲ್ಲಿ ಲಾಡ್ಜಿಗೆ ಅಂತ ಮೆಜೆಸ್ಟಿಕಿನ ಸುತ್ತೆಲ್ಲಾ ಅಲೆದು ಕೊನೆಗೆ ಪೋಲೀಸರ ಕೈ ಸೇರಿದ್ದು !
ಸುದ್ದಿ-೩: ಹೊರ ರಾಜ್ಯದಿಂದ ಬರೋ ಕರೋನಾ ಸೊಂಕಿನ ತಡೆಗೆ ಹೊರ ರಾಜ್ಯಕ್ಕೆ ಹೋಗಿ ಬರೋ ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ಸಂಚಾರ ರದ್ದು. ಅಂತರ್ಜಿಲ್ಲಾ ಬಸ್ಸುಗಳ ಸಂಖ್ಯೆಯೂ ರದ್ದು. ಭಾರತದಾದ್ಯಂತ ಸಂಚರಿಸುತ್ತಿದ್ದ ಎಲ್ಲಾ ೧೩,೦೦೦ ರೈಲುಗಳನ್ನು ಮಾರ್ಚ್ ೩೧ರ ವರೆಗೆ ರದ್ದುಗೊಳಿಸಲಾಗಿದೆ. ಮೆಟ್ರೋ, ಬಸ್ಸುಗಳ ಸಂಚಾರಕ್ಕೂ ಅಡ್ಡಿ.
ಸುದ್ದಿ-೪: ಮಾರ್ಚ್ ಮೂವತ್ತೊಂದರ ತನಕ ಮುಂದುವರೆದ ವರ್ಕ್ ಫ್ರಂ ಹೋಂ. ವರ್ಕ್ ಫ್ರಂ ಹೋಂ ಸಿಕ್ಕಿತು ಅಂತ ರಜೆ ಸಿಕ್ಕಿತೆಂಬಂತೆ ಬೆಂಗಳೂರಿಂದ ನಿಮ್ಮ ನಿಮ್ಮೂರಿಗೆ ಹೊರಟು ಬಿಡಬೇಡಿ. ಆ ಪ್ರಯಾಣದ ಸಂದರ್ಭದಲ್ಲಿ ನಿಮ್ಮೊಂದಿಗೆ ಕರೋನಾ ತಗೊಂಡು ಊರ ಕಡೆ ಹೋಗ್ಬೇಡಿ . ಊರುಗಳಲ್ಲಿ ಪೇಟೆಗಳಷ್ಟು ಆಸ್ಪತ್ರೆಗಳಿಲ್ಲ, ಸೌಲಭ್ಯಗಳಿಲ್ಲ. ಸ್ವಲ್ಪ ದಿನ ಬೆಂಗಳೂರಲ್ಲೇ ಇದ್ದು ಬಿಡಿ ಎಂದು ಹಳ್ಳಿಗರ ಕೋರಿಕೆ
ಸುದ್ದಿ-೫: ಪಟ್ಟಣಗಳಿಂದ ಹಳ್ಳಿಗಳ ಕಡೆಗೆ ಕರೋನಾ ಹರಡುವುದನ್ನು ತಡೆಯೋಕೆ ಪಟ್ಟಣಗಳಿಂದ ಹಳ್ಳಿಗಳ ಕಡೆಗೆ ಮಾರ್ಚ್ ಮೂವತ್ತೊಂದರ ತನಕ ಹೋಗದಿರಿ ಎಂದು ಸಿ.ಎಂ ಯಡಿಯೂರಪ್ಪ ಕರೆ
ಸುದ್ದಿ-೬: ಬೆಂಗಳೂರ ಪೀಜಿಗಳಲ್ಲಿ ಬೇಜಾರೆಂದು ತಮ್ಮೂರಿಗೆ ಖಾಸಗಿ ಬಸ್ಸುಗಳಲ್ಲಿ ಹೊರಟ ಹುಡುಗ ಹುಡುಗಿಯರು ! ಬಸ್ಸಿಲ್ಲದಿದ್ದರೆ ಏನಾಯ್ತೆಂದು ತಮ್ಮ ಕಾರು ಬೈಕುಗಳಲ್ಲಿ ಬೆಂಗಳೂರಿಂದ ತಮ್ಮೂರ ಕಡೆಗೆ ಹೊರಟವರು !
ಸುದ್ದಿ-೭: "ಜನತಾ ಕರ್ಫ್ಯೂ" ಪ್ರಭಾವಕ್ಕೆ ಹಿಂದಿನ ದಿನಗಳ ಹೋಲಿಕೆಯಲ್ಲಿ ನಿಧಾನವಾದ ಕರೋನಾ ಸೋಂಕಿತರ ಸಂಖ್ಯೆಯಲ್ಲಿನ ಏರಿಕೆ. ಕರ್ಫ್ಯೂ ದಿನ ರಾತ್ರೆ ೯ರ ವರೆಗೆ ಮನೆಯಲ್ಲಿರಿ ಅಂದರೆ ಸಂಜೆ ಐದಕ್ಕೆ ಚಪ್ಪಾಳೆ ಹೊಡೆದು ನಂತರ ಗುಂಪುಗೂಡಿ ಸಂಭ್ರಮಿಸಿದ ಜನರು !
ಸುದ್ದಿ-೮: ಕರೋನಾಗೆ ಹೆಲಿಕ್ಯಾಪ್ಟರುಗಳ ಮೂಲಕ ಔಷಧ ಸಿಂಪಡಿಸುತ್ತಾರಂತೆ ಎಂಬ ಸುದ್ದಿ ವಾಟ್ಸಾಪಿನ ತುಂಬೆಲ್ಲಾ ಹರಡಿ ಅದಕ್ಕಾಗಿ ಬಾಯಿ ಕಳೆದುಕೊಂಡು ಕಾದ ಜನರು !

ಈ ಸುದ್ದಿಗಳನ್ನು ಓದ್ತಾ ಇದ್ರೆ ಜನಕ್ಕೆ ಏನಾಗಿದೆ ಅಂತ ಅರ್ಥ ಆಗ್ತಿಲ್ಲ. ಊರಿಗೆ ಹೋಗ್ಬೇಡ್ರಪ್ಪ ಅಂತ ಬಸ್ಸು, ರೈಲು ಕ್ಯಾನ್ಸಲ್ ಮಾಡಿದ್ರೆ ಪೀಜಿ ಊಟ ಸರಿಯಾಗ್ತಿಲ್ಲ, ಬೋರಾಗ್ತಿದೆ ಅಂತ ಊರಿಗೆ ಹೋಗ್ತೀನಿ ಅಂತೀರಲ್ಲ. ಏನೇನ್ಬೇಕು ನಿಮಗೆ ? ಒಂದು ವಾರವೂ ಮನೆಯಲ್ಲಿರದ ನಾನೇ ಈಗ ಮೂರು ವಾರಗಳಿಂದ ಮನೇಲಿದೀನಿ. ನಿಮಗೆ ಒಂದಿಷ್ಟು ದಿನ ಬೆಂಗಳೂರಲ್ಲೇ ಇರೋಕೆ ಏನಪ್ಪ ಕಷ್ಟ ಅಂದ್ರೆ ನನ್ನತ್ರ ಸ್ಯಾನಿಟೈಸರ್ ಇದೆ, ಮಾಸ್ಕ್ ಇದೆ, ಹ್ಯಾಂಡ್ ರಬ್ ಇದೆ ಅಂತಾರಲ್ಲ ಜನ ಏನೇನ್ನೋಣ. ನಿಮಗೆ ಕರೋನಾ ಇರದೇ ಇರಬಹುದು. ಆದರೆ ಆ ಬಸ್ಸಲ್ಲಿ ಬರೋ ಯಾರಿಗೂ ಕರೋನಾ ಇರಲ್ಲ ಅಂತ ಏನು ಗ್ಯಾರಂಟಿ ? ಅವರು ಬಳಸಿದ ಅದೇ ಹಾಸಿಗೆ, ಬಸ್ಸಿನ ಸಿಟು, ಹ್ಯಾಂಡಲ್ಲುಗಳನ್ನು ಬಳಸಿಯೇ ತಾನೇ ನೀವು ಹೋಗಬೇಕು. ಆಗ ನಿಮಗೆ ಕರೋನಾ ಸೋಂಕು ತಗುಲೋಲ್ಲ ಅಂತ ಏನು ಗ್ಯಾರಂಟಿ ಅಂದ್ರೆ ಇವ್ರ ಬಳಿ ಉತ್ತರವಿಲ್ಲ. ಅಲ್ಲಪ್ಪಾ, ಮಡಿಕೇರಿಯಿಂದ ಮೂರ್ನಾಡಿಗೆ ಕರೋನಾ ಸೋಂಕಿತನ ಜತೆಗೆ ಹೋದ ಆಟೋ ಡ್ರೈವರಿಗೇ ಕರೋನಾ ಸೋಂಕಿರೋ ಶಂಕೆಯಿದೆಯಂತೆ ಇನ್ನು ನೀವು ಊರಿಗೆ ಹೋಗಿ ಅದಿನ್ನೆಷ್ಟು ಜನರಿಗೆ ಕರೋನಾ ಹಬ್ಬಿಸುತ್ತೀರಾ ಅಂದ್ರೆ ನಾವೊಬ್ರು ಹೋದ್ರೆ ಏನಾಗುತ್ತೆ ಅಂತಾರಲ್ಲ ಇವರು ? ! ಬಸ್ಸು, ರೈಲು ನಿಲ್ಲಿಸಿದ್ದು ಸೂಚ್ಯಕ ಅಷ್ಟೆ. ಸರ್ಕಾರದ ಕೈಲಿ ಎಲ್ಲವನ್ನೂ ನಿಲ್ಲಿಸೋಕೆ ಆಗದೇ ಇರಬಹುದು. ಒಂದಷ್ಟು ಹೇಳಿದರೆ ಉಳಿದಿಷ್ಟನ್ನು ನೀವೇ ಅರ್ಥ ಮಾಡಿಕೊಳ್ಳಿ ಅಂತ ಅರ್ಥ ತಾನೇ ? ಬೆಂದಕಾಳೂರೆಂಬ ಮಹಾನಗರಿಯಲ್ಲಿರೋ ವಿದ್ಯಾವಂತ ಜನರೇ ಈ ರೀತಿ ಅವಿವೇಕಿಗಳಾಗಿ ವರ್ತಿಸಿದರೆ ಉಳಿದವರ ಕತೆಯೇನು ?

ಇನ್ನು ಕರ್ಫ್ಯೂ ದಿನ ಖಾಲಿ ರೋಡ್ ಸಿಕ್ತು ಅಂತ ಜೀವ ಕಳೆದುಕೊಳ್ಳೋರು, ಮನೆಯಲ್ಲೇ ನಿಂತು ಚಪ್ಪಾಳೆ ತಟ್ಟಿ ಅಂದ್ರೆ ಗುಂಪುಗೂಡಿ ಪಟಾಕಿ ಹೊಡೆಯೋರು ಇವ್ರಿಗೆಲ್ಲಾ ಏನನ್ನೋಣ. ಗುರುವೇ , ಏನು ಹೇಳಿದ್ದಾರೆ, ಅದನ್ನ ಯಾಕೆ ಹೇಳಿದ್ದಾರೆ ಅಂತ ಯಾಕೆ ಯೋಚನೆ ಮಾಡೋಲ್ಲ ನೀವು ? ಜನ ಮರುಳೋ, ಜಾತ್ರೆ ಮರುಳೋ ಅಂತ ಕುಣಿಯೋ ಬದಲು, ಗುಲಾಮರು-ಭಕ್ತರು ಅಂತ ಕಾದಾಡೋ ಬದಲು ಒಂದಿಷ್ಟು ದಿನ ತಣ್ಣಗೆ ಮನೇಲಿರಿ. ನಿಮ್ಮ ಈ ಜಾತಿ ಕಲಹ, ಎಡ-ಬಲ ಕಚ್ಚಾಟಗಳನ್ನ ಮತ್ತೆ ಯಾವಾಗಲಾದರೂ ಶುರು ಹಚ್ಚಿಕೊಳ್ಳುವಿರಂತೆ. ಈ ಕಚ್ಚಾಟಗಳಿಗಿಂತಾ ನೀವೆಲ್ಲಾ ತಣ್ಣಗೆ ಮನೆಯೊಳಗೆ ಇದ್ದು ವೈದ್ಯರಿಗೆ ಪೋಲೀಸರಿಗೆ ಅವರವರ ಕೆಲಸ ಮಾಡೋಕೆ ಬಿಡಿ. ವಾಟ್ಸಾಪಲ್ಲಿ ಬಂತು ಅಂತ ಕಣ್ಮುಚ್ಚಿಕೊಂಡು ಫಾರ್ವಾರ್ಡ್ ಮಾಡೋ ಬದಲು ಆ ಮಾಹಿತಿ ಕಳಿಸಿದವರ ಬಳಿ ಆ ಸಂದೇಶದ ಮೂಲದ ಬಗ್ಗೆ ವಿಚಾರಿಸಿ. ಬಂದ ಸಂದೇಶ, ವೀಡಿಯೋ ನಿಜವೋ ಸುಳ್ಳೋ ಪರೀಕ್ಷಿಸಿ. ನಂತರವಷ್ಟೇ ಅದನ್ನ ಬೇರೆಯವರ ಜೊತೆ ಶೇರ್ ಮಾಡಿ. ಈಗ ನಾನೊಬ್ಬ ಮನೆಯಲ್ಲೇ ಇದ್ದರೆ ಏನಾಗುತ್ತೆ ಅಂತೀರಾ ? ಸರ್ಕಾರದ ಅಧಿಕೃತ ಮಾಹಿತಿ ಆಕರಗಳಿಂದ ಮಾಹಿತಿ ಸಂಗ್ರಹಿಸೋ ಕೋವಿಡ್.ಔಟ್ ಎಂಬ ತಾಣವನ್ನೊಮ್ಮೆ ನೋಡಿ. ೨೦ನೇ ತಾರೀಖು ೨೫೩ ಇದ್ದ ಕರೋನಾ ಸೋಂಕಿತರ ಸಂಖ್ಯೆ ೨೧ಕ್ಕೆ ೩೨೮ಕ್ಕೆ ಏರಿತ್ತು. ಅಂದರೆ ೭೫ ಹೊಸ ಪ್ರಕರಣ. ಇವತ್ತು ಅಂದರೆ ೨೨ನೇ ತಾರೀಖು ಆ ಸೋಂಕಿರತ ಸಂಖ್ಯೆ ೩೬೫ಕ್ಕೆ ಏರಿದೆ. ಅಂದರೆ ೩೭ ಹೊಸ ಪ್ರಕರಣ. ದಿನೇ ದಿನೇ ಏರುತ್ತಲೇ ಸಾಗಿದ್ದ ಕರೋನಾದ ಏರುಗತಿ ಕಮ್ಮಿಯಾಗಿದೆ ಅಂದರೆ ದಿನವಿಡೀ ಮನೆಯೊಳಗೇ ಇದ್ದ ಜನರ ಸಹಕಾರವೇ ಕಾರಣ ಅದಕ್ಕೆ. ಇದೇ ತರಹ ಇನ್ನೊಂದಿಷ್ಟು ದಿನ ಮನೆಯೊಳಗೇ ಇದ್ದರೆ ಏನಾಗುತ್ತೆ ? ವರ್ಕ್ ಫ್ರಂ ಹೋಂ ಅಂತಿರೋ ಜನರು ಅತೀ ಅಗತ್ಯಗಳಾದ ದಿನಸಿ, ತರಕಾರಿಗಳಿಗೆ ಹೊರ ಹೋಗೋದು ಬಿಟ್ಟು ಬೇರೆ ಕೆಲಸಕ್ಕೆ, ಸುತ್ತೋಕೆ ಹೋಗದಿದ್ದರೆ ಏನಾಗುತ್ತೆ ? ಈ ಕರೋನಾ ಹತೋಟಿಗೆ ಬಾರಲಾರದೇ ? ಆಸ್ಪತ್ರೆಗೆ ದಾಖಲಾದವರಲ್ಲಿ ೨೦ ಜನರು ಕರೋನಾ ಸೋಂಕಿಂದ ಹೊರಬಂದಿದ್ದಾರೆ ಎಂಬ ಆಶಾದಾಯಕ ಮಾಹಿತಿಯನ್ನು ಮೇಲಿನ ಜಾಲತಾಣವೇ ನೀಡುತ್ತಿದೆ. ಹಾಗಾಗಿ ನನ್ನ ಗೆಳೆಯರ ಬಳಗದಲ್ಲಿರೋ ಗೆಳೆಯರಿಗೆಲ್ಲಾ ನೀವು ಬೆಂಗಳೂರಲ್ಲಿದ್ದರೆ , ವರ್ಕ್ ಫ್ಹ್ರಂ ಹೋಂ ನಂತಹ ಅವಕಾಶಗಳು ಸಿಕ್ಕಿದ್ದರೆ ದಯಮಾಡಿ ಮನೆಯಿಂದ ಹೊರಬಂದು ಊರು ತಿರುಗೋ ಸಾಹಸಕ್ಕೆ ಕೈ ಹಾಕಬೇಡಿ, ಸಿಕ್ಕ ಸಿಕ್ಕ ಸಂದೇಶಗಳ ಎಲ್ಲೆಡೆ ಹರಡಿಸಬೇಡಿ, ಇದ್ದಲ್ಲೇ ಇದ್ದು ಒಂದಿಷ್ಟು ದಿನ ಸಮಾಜಕ್ಕೆ ಈ ಕರೋನಾ ಸೋಂಕಿಂದ ಹೊರಬರೋಕೆ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ಕೋರುತ್ತೇನೆ. 

No comments:

Post a Comment