Sunday, March 29, 2020

ಓಟಿಟಿ ಮತ್ತು ಮಾಲ್ಗುಡಿ ಡೇಸ್

ಒಂದು ಮೈಸೂರ್ ಪಾಕ್ ಕೊಡಿ.
ತಗೋಳಿ
ಅರೇ, ಇದೇನಿದು ? ನಾ ಕೇಳಿದ್ದು ಮೈಸೂರ್ ಪಾಕು
ಹೂಂ. ಇದೇ ಮೈಸೂರ್ ಪಾಕು
ಅರೆ, ಇದು ಪಾನಿಪೂರಿ ರೀ, ಮೈಸೂರ್ ಪಾಕ್ ಕೇಳಿದ್ರೆ ಪಾನಿಪೂರಿ ಕೊಡ್ತೀರಲ್ರೀ?
ಇದು ಮೈಸೂರು, ನಾ ಇದ್ನೇ ಮೈಸೂರ್ ಪಾಕ್ ಅಂತ ಕರೆಯೋದು !!
ಏನಪ್ಪಾ ಇದು ಅಂತ ಶಾಕಾದ್ರಾ ? ಮಾಲ್ಗುಡಿ ಡೇಸ್ ಅಂತ ಹೆಸರು ನೋಡಿ ಮೊದಲು ಶಂಕರ್ ನಾಗ್ ಅವ್ರ ಚಿತ್ರ ನೋಡಿ ಆ ಆರ್. ಕೆ. ನಾರಾಯಣನ್ ಅವ್ರ ಕತೆಯಾದಾರಿತ ಚಿತ್ರವನ್ನೇ ಮತ್ತೆ ಹೊಸದಾಗಿ ಸೃಷ್ಠಿಸುತ್ತಿದ್ದಾರ ಅಂತ ನಿರೀಕ್ಷೆಯಿಟ್ಟುಕೊಂಡು ನೋಡಿದ ನನಗೂ ಆದ ಅನುಭವ ಇದೇ ತರದ್ದು !

ಮುಂಚೇನೆ ಬರೆದ ಹಾಗೆ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದೇ ಒದ್ದಾಡುತ್ತಿದ್ದ ಕಾಲದಲ್ಲಿ ವರದಂತೆ ಕಂಡಿದ್ದು ಓ.ಟಿ.ಟಿ(ಓವರ್ ದ ಟಾಪ್) ತಾಣಗಳು. ಅಂದರೆ ಈ ವಿಪರೀತ ರೇಟು ಕೇಳೋ ಕೇಬಲ್ಲು, ಚಿತ್ರಕ್ಕಿಂತ ಅಡ್ಬಟೈಸ್ಮೆಂಟುಗಳನ್ನೇ ಜಾಸ್ತಿ ತೋರಿಸೋ ಟೀವಿ ಚಾನೆಲ್ಲುಗಳು, ಅವುಗಳನ್ನು ಬಿತ್ತರಿಸೋ ಉಪಗ್ರಹಗಳ ಗೊಡವೆಯೇ ಬೇಡ ಎಂದು ಅಂತರ್ಜಾಲದ ಮೂಲಕ ನೇರ ವೀಕ್ಷಕರ ಮನೆ ಬಾಗಿಲಿಗೆ ಚಿತ್ರಗಳನ್ನು ತಲುಪಿಸುತ್ತಿರೋ ಅಮೇಜಾನ್ ಪ್ರೈಂ, ಹಾಟ್ ಸ್ಟಾರ್, ನೆಟ್ ಫ್ಲಿಕ್ಸ್ , ವೂಟ್ ನಂತಹ ವಾಹಿನಿಗಳೇ ಓ.ಟಿ.ಟಿ ವಾಹಿನಿಗಳು. ಈಗ ಫೇಸ್ಬುಕ್ಕಲ್ಲೂ ಸುಮಾರಷ್ಟು ಧಾರಾವಾಹಿಗಳ ಪೂರ್ಣ ಎಪಿಸೋಡುಗಳನ್ನ ಆ ವಾಹಿನಿಗಳೇ ಹರಿಬಿಡುತ್ತಿರೋದ್ರಿಂದ ಅದೂ ಒಂತರ ಓ.ಟಿ.ಟಿ ಆಗ್ತಾ ಇದ್ಯಾ ಅನಿಸುತ್ತೆ. ಕರೋನಾ ಕರಾಮತ್ತಿಗೆ ಚಿತ್ರಮಂದಿರಗಳನ್ನ ಬಾಗಿಲು ಹಾಕಬೇಕಾಗಿ ಬಂದು, ಚಿತ್ರಗಳ ಧಾರಾವಾಹಿಗಳ ಚಿತ್ರೀಕರಣ ಅನಿರ್ದಿಷ್ಟಾವಧಿಯವರೆಗೆ ನಿಲ್ಲಿಸಿರೋದ್ರಿಂದ ಇನ್ನು ೧೦-೧೨ ದಿನಕ್ಕಾಗುವಷ್ಟು ಸರಕು ಮಾತ್ರ ನಮ್ಮ ಬಳಿ ಇದೆ ಎಂದು ಪ್ರಮುಖ ಧಾರಾವಾಹಿಗಳ ನಿರ್ದೇಶಕರು ಮಾರ್ಚ್ ೨೩ರಂದು ಹೇಳಿಕೆ ಕೊಟ್ಟಿದ್ದರು. ಈ ಧಾರಾವಾಹಿಗಳು ಇರಲಿ ಬಿಡಲಿ, ಒಳ್ಳೆಯ ಚಿತ್ರಗಳಿಗೆಂತೂ ಎಂದೂ ಇರುವ ನೋಡುಗ ಬಳಗಕ್ಕೆ ಈ ಕರೋನಾದ ಲಾಕ್ಡೌನು, ವರ್ಕ್ ಫ್ರಂ ಹೋಮು, ಮಧ್ಯ ಮಧ್ಯ ಬರೋ ರಜಾ ದಿನಗಳು ಹೇಳಿ ಮಾಡಿಸಿದಂತಿವೆ. ಹೊರಗೆಂತೂ ಹೋಗೋ ಹಾಗಿಲ್ಲ. ಇನ್ನೇನು ಮಾಡೋದು, ಚಿತ್ರ ನೊಡೋದು ಅಷ್ಟೆ! .

ಮತ್ತೆ ಕತೆಗೆ ಬರೋದಾದ್ರೆ ಇದು ಮಾಲ್ಗುಡಿ ಅನ್ನೋ ಕಾಲ್ಪನಿಕ ಪಟ್ಟಣದ ಸುತ್ತ ನಡೆಯೋ ಕತೆ. ಕಥಾನಾಯಕ ಲಕ್ಶ್ಮೀನಾರಾಯಣ ಮತ್ತವನ ಪ್ರಿಯತಮೆ ಲಿನೇಟಾರ ಪ್ರೇಮಕತೆ ಶುರುವಾಗೋದು ಎಸ್ಸೆಸ್ಸೆಲ್ಸಿಯಲ್ಲಾದರೂ ಮುಗಿಯೋದು ಇಬ್ಬರ ವೃದ್ಧಾಪ್ಯದಲ್ಲಿ. ಅಂದರೆ ಇವರು ಲವ್ ಮಾಡಿ ಮದುವೆಯಾದರಾ ? ಅಂದ್ರೆ ಇಲ್ಲ. ಮದುವೆಯಾಗದೇ ಉಳಿದರಾ ಅಂದರೆ ಅದೂ ಇಲ್ಲ ! ಹೆಸರಾಂತ ಕತೆಗಾರನಾಗೋ ಲಕ್ಶ್ಮೀನಾರಾಯಣ ಮಾಲ್ಗುಡಿ ತನ್ನ ಕತೆಗಳು ಇಂದಿನ ಪೀಳಿಗೆಗೆ ರುಚಿಸುತ್ತಿಲ್ಲ ಎಂದರಿತು ಬರೆಯುವುದನ್ನೇ ನಿಲ್ಲಿಸುವ ತೀರ್ಮಾನದಲ್ಲಿರುವ ಅವರ ಜೀವನದಲ್ಲಿ ಹಲವು ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅವೇ ಬೆಂದಕಾಳೂರಲ್ಲಿ ಬೇಯುತ್ತಿರೋ ಅವರನ್ನು ಮತ್ತೆ ಮಾಲ್ಗುಡಿಯತ್ತ ಕರೆತರುತ್ತದೆ. ಕತೆ ಇಷ್ಟೇ ಆದರೂ ಅದಕ್ಕೊಂದಿಷ್ಟು ಸವಿಯಿತ್ತಿದ್ದು ಅಂದರೆ ಬಾಲ್ಯದ ಲಕ್ಷ್ಮಿ, ವಿಮಲ, ಭಟ್ಟ , ಸಂತು ಮತ್ತು ಸರಸ್ವತಿ ಟೀಚರ್ರಿನ ಶಾಲಾ ದೃಶ್ಯಗಳು ಮತ್ತು ಮಲೆನಾಡ ಮಳೆ. ನಮ್ಮ ಬೆಂಗಳೂರಿನ ಲಾಲ್ ಬಾಗೇನಾ ಇದು, ಇದು ನಮ್ಮ ಮಲೆನಾಡ ತೀರ್ಥಹಳ್ಳಿ, ಹೊಸನಗರಗಳೇನಾ ಇವು ಅನ್ನುವಷ್ಟು ಅದ್ಭುತವಾಗಿ ತೋರಿಸಿರೋ ಸಿನಿಮಾಟೋಗ್ರಫಿ ಮೊದಲಾರ್ಧವನ್ನು ಆಪ್ತವೆನಿಸುತ್ತೆ.  ಪಾಂಡಿಚೇರಿಯ ಪ್ರೇಮ ಪ್ರಸಂಗ, ಆಫೀಸಿನ ಬಾಸ ದೌರ್ಜನ್ಯ, ತಾಯಿಯ ಸಂಸ್ಕಾರಕ್ಕೂ ಬರಲಾಗದ ಮಗಳ ಪರಿಸ್ಥಿತಿ, ತಮ್ಮ ಬೇಳೆ ಬೇಯಿಸಿಕೊಳ್ಳೋಕೆ ಅಂತ ಊರಿಗೇ ಬೆಂಕಿಯಿಡೋ ಗಿರಿರಾಜ ಮತ್ತು ಮಗಳಿಗೆ ಇಷ್ಟವಿಲ್ಲದಿದ್ದರೂ ಮದುವೆ ಮಾಡಿ ನಂತರ ಪರಿತಪಿಸೋ ತಂದೆ, ತಾಯಿಗೆ ಮದುವೆ ಮಾಡಲಿಷ್ಟವಿದ್ದರೂ ತನಗೇ ಇಷ್ಟವಿರದಿದ್ದ ಮಗಳು ಹೀಗೆ ಹಲವು ಭಾವಗಳ, ಪರಿಸ್ಥಿತಿಗಳ ಛಾಯೆ ಪಾತ್ರಗಳಲ್ಲಿ ಹಾಸು ಹೋಗುತ್ತದೆ. ಇನ್ನು ಚಿತ್ರದುದ್ದಕ್ಕೂ ಕಾಡೋ ರಘು ದೀಕ್ಷಿತ್ ಸಂಗೀತ ಚಿತ್ರ ಮುಗಿದರೂ ನಮ್ಮನ್ನ ಕಾಡುತ್ತಿರುತ್ತೆ. ಮನೆಯಿದ್ದರೆ ಹೀಗಿರಬೇಕು ಎಂಬಂತೆ ತಯಾರಿ ಮಾಡಿರೋ ಪ್ರಕೃತಿಯ ಮನೆ, ವಿಜಯ್ ಪಾತ್ರಕ್ಕಾಗಿ ಹೊಸದಾಗಿ ಎಂಟ್ರಿ ಕೊಟ್ಟಿರೋ ತುಳುನಾಡ ಹುಡುಗ ಅರ್ಜುನ್ ಕಾಪಿಕಾಡ್ ಅವರ ನಟನೆ, ನೃತ್ಯ ಕೂಡ ಮುದ ನೀಡುತ್ತೆ.

ಇಷ್ಟೆಲ್ಲಾ ಇದ್ದರೂ ಮೈಸೂರು ಪಾಕು, ಪಾನಿಪೂರಿಯ ಹೋಲಿಕೆ ಯಾಕೆ ಅಂತ ಅಂದ್ಕೊಂಡ್ರಾ ? ಚಿತ್ರದಲ್ಲಿರೋ ಸುಮಾರು ಅಸಂಬದ್ಧಗಳೇ ಅದಕ್ಕೆ ಕಾರಣ. ಮೊದಲಿಗೆ ಮಾಲ್ಗುಡಿ ಡೇಸ್ ಅಂತ ಹೆಸರಿಟ್ಟುಕೊಂಡು ಮೂಲ ಕತೆಯಲ್ಲಿ ಬರೋ ಸ್ವಾಮಿ ಮತ್ತವನ ಗ್ಯಾಂಗಿಗೆ ಸಂಬಂಧಪಡದ ಚಿತ್ರ ಮಾಡಿದ್ದು. ಎರಡನೆಯದು ಮಾಲ್ಗುಡಿ ಡೇಸಿಗೆ ಯಾವ ಸಂಬಂಧವೂ ಇರದ ಬೆಂಗಳೂರ, ಕೊಯಂಬತ್ತೂರಿನ ಚಿತ್ರಗಳ ಸೇರಿಸಿದ್ದು.. ಹೀಗೆ. ಮಲೆನಾಡ ತೋರಿಸಬೇಕು ಅಂತ, ನಗರ, ಆಗುಂಬೆ, ಶೃಂಗೇರಿ ಹೀಗೆ ಎಲ್ಲಾ ಪ್ರಮುಖ ಪೋಲೀಸ್ ಠಾಣೆಗಳನ್ನೂ ತೋರಿಸಿದ್ದು ! ದ್ವಿತೀಯಾರ್ಧದಲ್ಲಿ ಅಗತ್ಯವಿಲ್ಲದಿದ್ದರೂ ಎಳೆದು ತರುವ ಪ್ರಕೃತಿಯ ಅಮ್ಮನ ಮನೆಯಲ್ಲಿನ ಪೂಜೆ, ವಿಮಲನ ಮಗಳು, ಮಾಲ್ಗುಡಿ ಶಾಲೆಯಲ್ಲಿನ ಯೂನಿಯನ್ ಡೇ, ಪೋಲೀಸಪ್ಪನಾಗಿ ಬ್ಯಾಂಕ್ ಜನಾರ್ಧನ್ ಅವರ ನಗು ಬರದ ಕಾಮಿಡಿಗಳು,ಕೆಲವೆಡೆ ಕಳಚಿಬಿದ್ದಂತೆ ಕಾಣುವ ವಿಜಯ್ ರಾಘವೇಂದ್ರ ಅವರ ವಯಸ್ಸಾದ ಮೇಕಪ್ಪು, ಮನೆಯಲ್ಲಿ ಯಾರಿಲ್ಲದೇ ಗೋಡೆಗಳೇ ಬೀಳುವ ಹಾಗಿದ್ದರೂ ಹುಡುಗನೊಬ್ಬ ಸಣ್ಣಕ್ಕಿದ್ದಾಗ ಬರೆದ "ಅಮ್ಮ" ಅನ್ನೋ ಪದ ಅವ ಮುದುಕನಾದರೂ ಮಾಸದಂತಿರುವುದು ಇತ್ಯಾದಿ ಅಧ್ವಾನಗಳು ರಸಭಂಗವನ್ನುಂಟು ಮಾಡುತ್ತೆ.  ಈ ಪ್ರಕೃತಿ, ವಿಜಯ್ ಯಾರು, ಲಕ್ಷ್ಮೀನಾರಾಯಣ, ಲಿನೇಟಾರ ಪ್ರೇಮಕತೆಯೇನಾಗುತ್ತೆ, ಮಾಲ್ಗುಡಿಯವ ಬೆಂಗಳೂರಿಗೇಕೆ ಹೋದ, ಶೃಂಗೇರಿಗೂ ಕೊಯಂಬತ್ತೂರಿಗೂ ಏನು ಸಂಬಂಧ ಅಂತೆಲ್ಲಾ ಆಲೋಚಿಸುತ್ತಿದ್ದೀರ ? ಅವೆಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದ್ರೆ ನೀವು ಈ ಚಿತ್ರವನ್ನು ನೋಡಬೇಕು. ಮೊದಲಾರ್ಧಕ್ಕಾದರೂ ಮನೆಮಂದಿಯೊಂದಿಗೆ ಕೂತ ನೋಡಬೇಕಾದ ಚಿತ್ರ "ಮಾಲ್ಗುಡಿ ಡೇಸ್"

No comments:

Post a Comment