Saturday, September 15, 2012

Engineer's Day ಸ್ಪೆಷಲ್


ಬೆಳಿಗ್ಗೆ ಎದ್ದಾಗ ಗೆಳೆಯ ಗೌತಮನ ಮೆಸೇಜು ನೋಡಿದಾಗಲೇ ನೆನ್ಪಾಗಿದ್ದು ಇವತ್ತು ಇಂಜಿನಿಯರರ ದಿನ ಅಂತ.
ಆಮೇಲೆ ಯಥಾಪ್ರಕಾರ ಫೇಸ್ಬುಕ್ಕಿಗೆ ಬಂದ್ರೆ ಎಲ್ಲಾ ಕಡೆ ವಿಶ್ವೇಶ್ವರಯ್ಯನವರ ಫೋಟೋಗಳೇ ತುಂಬಿದ್ದವು.
Full photos of a great engineer who made all engineers proud and recall colourfull memories on every sept 15.

ಒಂದೂವರೆ ವರ್ಷ.. ಕಾಲೇಜು ಮುಗಿಸಿ.. ಫೈನಲ್ ಸೆಮ್ಮಲ್ಲಿದ್ದಾಗ ಇಂಜಿನಿಯರ್ ದಿನ ಅಂತ ಭಾಗವಹಿಸಿದ ನೆನಪಿಗೆ ಈಗ ೨ ವರ್ಷ. ಹಳೆಯ ನೆನ್ಪುಗಳನ್ನೆಲ್ಲಾ ಮೆಲುಕು ಹಾಕ್ತಾ ಹೋದ್ರೆ ಏನೋ ಒಂಥರಾ ರೋಮಾಂಚನ. ಏನೋ ಕಾಂಪಿಟೇಷನ್ನು ನಡ್ಸಿ, ಭಾಷಣ ಕೇಳಿ ಈ ಸೆಮ್ಮಿಗೆ ಅರ್ಧ ಇಂಜಿನಿಯರ್ ಆದ್ವಿ, ಮುಕ್ಕಾಲು ಆದ್ವಿ. ಆಗೇ ಬಿಟ್ವಿ ಇಂಜಿನಿಯರ್ ಅಂತ ಆಚರಿಸ್ತಾ ಇರೋ ಆ ದಿನಗಳ್ಗೂ ಸ್ವಂತ ಇಂಜಿನಿಯರ್ ಆಗಿ ಕೆಲ್ಸ ಮಾಡ್ತಿರೋ ಈ ದಿನಗಳಿಗೂ ಎಷ್ಟೊಂದು ವ್ಯತ್ಯಾಸ ಅಲ್ವಾ ಅನ್ಸುತ್ತೆ.
ಇದ್ದಾಗ ಅದ್ರ ಬೆಲೆ ಗೊತ್ತಿರಲ್ಲ, ಇಲ್ದಿದ್ದಾಗ್ಲೇ ಅದ್ರ ಬೆಲೆ ಗೊತ್ತಾಗೋದು ಅಂತಾರೆ ಅಲ್ವಾ.. ಆ ಬೆಳ್ಕು ಈ ಟ್ಯೂಬ್ಲೈಟುಗಳಿಗೆ ಹೊಳೆಯೋದು ಹಬ್ಬಗಳಿಗೆ, ಇಂಥಾ ದಿನಗಳಿಗೆ ಶುಭಾಶಯ ಹೇಳಕ್ಕೆ ಅಂತ ಮೆಸೇಜ್ ಮಾಡ್ದಾಗ..

ತಿಂಗಳುಗಟ್ಲೆ ಆಗಿರತ್ತೆ. ನಾವೂ ಮೆಸೇಜು ಹಾಕಿರಲ್ಲ, ಅವ್ನೂ ಹಾಕಿರಲ್ಲ. ತೀರಾ ತುರುಸ್ಕಳಕೂ ಪುರುಸೊತ್ತಿಲ್ಲದಷ್ಟು ಬಿಜಿ ಅಂತೇನೂ ಅಲ್ಲ. ಆದ್ರೂ ತಮ್ಮದೇ ಲೋಕದಲ್ಲಿ ಒಂತರಾ ಬಿಸಿ!!. ಅವ್ನು ಹಾಕ್ಲಿ , ಪ್ರತೀ ಸಲ ನಾನ್ಯಾಕೆ ಹಾಕ್ಬೇಕು ಅಂತ ಇವ್ನು, ನಾನ್ಯಾಕೆ ಹಾಕ್ಲಿ ಇವ್ನು ಹೆಂಗಿದ್ರೂ ಹಾಕ್ತಾನಲ್ಲ ಅವಾಗ ರಿಪ್ಲೇ ಮಾಡಿದ್ರಾತು ಅಂತ ಅವ್ನು.. ಇದೇ Ego clash ಗಳಲ್ಲಿ ಎಷ್ಟೋ ಗೆಳೆತನಗಳು ಮುರಿದು ಬಿದ್ದಿರತ್ತೆ. ಇಂಜಿನಿಯರ್ಗಳೂ ಹೊರತಲ್ಲ ಬಿಡಿ ಇದಕ್ಕೆ.. ಅಲ್ಲ, ಅವಶ್ಯಕತೆ ಇದ್ದಾಗ ನೆನಪಾಗಿ, ನೆರವಾಗಿ ಇಲ್ದಿದ್ದಾಗ ನೀನ್ಯಾರೋ ನಾನ್ಯಾರೋ ಅಂತ ಇದ್ದು ಬಿಡೋ adhoc connection ಗಳಾ ಗೆಳೆತನಾ ? ಹೇ,ಹೆಂಗಿದ್ರೂ ಫೇಸ್ಬುಕ್ಕು , ಮೊಬೈಲ್ ನಂಬರ್ ಇದ್ಯಲ್ಲಾ ಕೊನೆವರ್ಗೂ ಕಾಂಟಾಕ್ಟಲ್ಲಿರೋಣ ಅಂತ ಬೀಡ್ಕೋಡಿಗೆ ಸಮಾರಂಭದಲ್ಲಿ ಹೇಳಿರೋ ಮಾತುಗಳು ಅಣಕಿಸಿದಂಗೆ ಆಗತ್ತೆ..ಜಗತ್ತಿರೋದೇ ಕೊಡು ಕೊಳ್ಳೋದ್ರ ಮೇಲೆ ಅಂತ ಯಾರೋ ತತ್ವಜ್ಞಾನಿ ಹೇಳಿದ ಮಾತು ನೆನ್ಪಾಗತ್ತೆ..  

ಹೊಸ ನೀರು ಬಂದಾಗ ಹೆಂಗೆ ಹಳೇ ನೀರು ತೊಳ್ಕಂಡು ಹೋಗತ್ತೋ ಹಂಗೆ, ಆಫೀಸಿನ colleague ಗಳೇ ಹೊಸ ಫ್ರೆಂಡ್ಸ್ ಆಗ್ತಾರೆ. ನೆನಪಾಗದ "ಸ್ವಾರ್ಥಿ"!! ( ಆ ಕಡೆಗೂ ಹಿಂಗೇ ಅನ್ಸಿರಬಹುದು) ಗೆಳೆಯರ ಸ್ಥಾನಾನ ಈ ಹೊಸ ಗೆಳೆಯರು ತುಂಬಿರ್ತಾರೆ. ನೀನು ನನ್ನ ಬೆಸ್ಟ್ ಫ್ರೆಂಡ್ ಕಣೋ, ನಿನ್ನ ಜಾಗ ಯಾರೂ ತುಂಬಕ್ಕೆ ಆಗಲ್ಲ ಅಂತ ಎಷ್ಟೇ ಹೇಳಿದ್ರೂ ದೂರದ ಜೊತೆಗೆ ನೆನ್ಪುಗಳು ಮಾಸೋಕೆ ಶುರುವಾದ್ರೆ, ಆ ಜಾಗಕ್ಕಲ್ದಿದ್ರೂ ಹೊಸ ಜಾಗ ಮಾಡಿ ಹೊಸಬ್ರು ಬಂದು ಕೂರ್ತಾರೆ.


ನಿಜ, ೪ ವರ್ಷ ಜೊತೆಗೆ ಓದಿದ ಮಾತ್ರಕ್ಕೆ ಜೀವಮಾನ ಇಡೀ ಜೊತೆಗೆ ಇರಕ್ಕೆ ಆಗಲ್ಲ!! ಇದು ಎಲ್ಲಾ ವರ್ಗಕ್ಕೂ ಅನ್ವಯಿಸತ್ತೆ. ನಿನ್ನ ಜೊತೆಗೆ ಒಂದನೇ ಕ್ಲಾಸು ಓದಿದ ಎಲ್ರೂ ನಿನ್ನ ಜೊತೆಗೇ ಇಂಜಿನಿಯರಿಂಗ್ ಗೆ ಬಂದಿದ್ರಾ? ಎಲ್ರೂ ಕಾಂಟಾಕ್ಟಲ್ಲಿ ಇದಾರಾ ಈಗ್ಲೂ ಅಂತ ಪ್ರಶ್ನೆ ಬರ್ತಿರುತ್ತೆ, ಇಂಜಿನಿಯರ್ ಗೆಳೆಯರ ಅಗಲುವಿಕೆ ನೆನ್ಪಾದಾಗಲ್ಲ.
ಎಲ್ಲಾ ೩ ಈಡೀಯಟ್ಸ ರಾಂಚೋ ತರ ಎಲ್ಲೋ ಮಾಯ ಆದ್ರೂ ಅಂತಲ್ಲ. ಅತ್ವಾ ನಾನೇ ರಾಂಚೋ ಅಂತ್ಲೂ ಅಲ್ಲ.
ಆದ್ರೂ ಹಳೆಯ ಮೆಸೇಜುಗಳು, ವಿಷ್ಗಳು , ಅಪ್ಯಾಯಮಾನತೆ ಅವ್ರಿಂದ ಕಡ್ಮೆ ಆಗಿರುತ್ತೆ. ಎಷ್ಟೋ ಜನರಿಂದ ಮೆಸೇಜುಗಳಿಗೆ ಪದೇ ಪದೇ who is this ರಿಪ್ಲೆ ಬರ್ತಿರುತ್ತೆ. ಯಾರೂ ಗೆಳೆಯರಿಲ್ಲದ, ಬೇಡದ ಸ್ವಾರ್ಥಿ, ಒಂಟಿ ಜೀವ ಅಂತಲ್ಲ. ಆದ್ರೂ ಅರಿವಿಗೇ ಬರದೇ ಮರೆಯಾಗ್ತಿರೋ ಗೆಳೆತನ ಒಂತರಾ ಬೇಜಾರು ಮಾಡತ್ತೆ.. ಪರಿವರ್ತನೆ ಜಗದ ನಿಯಮ !!!

ಯಾಕೆ ಮೈಮೇಲೆ ಬಿದ್ದು ಮಾತಾಡ್ಸೋದು, ಮೇಲ್ ಹಾಕೋದು, ಮೆಸೇಜು ಹಾಕೋದು.. ನಮ್ಮ ನೆನ್ಪಿರದೋರಿಗೆ ಮತ್ಯಾಕೆ ನೆನ್ಪು ಮಾಡಿ ಕಷ್ಟ ಕೊಡೋದು, ನಂ ಪಾಡಿಗೆ ಸುಮ್ನಿದ್ದು ಬಿಡೋಣ ಅಂತ ಅನೇಕ ಸಾರಿ ಅನುಸ್ತಾ ಇರತ್ತೆ.
.
.
.
ಆದ್ರೆ ಆ ಭಾವ ಶಾಶ್ವತ ಅಲ್ಲ. ಸುಮಾರು ವರ್ಷಗಟ್ಲೆ ಆದ್ಮೇಲೆ ಸಿಕ್ಕಿರ ಗೆಳೆಯರನ್ನ ಮಾತಾಡ್ಸಿದಾಗ , ಫೇಸ್ಬುಕ್ಕಲ್ಲಿ ಸಿಕ್ಕಾಗ್ಲೋ, ಸುಮ್ನೇ ಹಿಂಗೇ ಅಂತ ಹಾಕಿರೋ ಮೆಸೇಜಿಗೆ ರಿಪ್ಲೆ ಬಂದಾಗ ಆಗೋ ಖುಷಿ ಇದ್ಯಲ್ಲ.. ಅದು ಹಳೆಯ ಎಲ್ಲಾ ನೆನ್ಪುಗಳನ್ನೂ ತೊಳೆದು ಬಿಡತ್ತೆ. ಎಷ್ಟಕ್ಕೂ ಮನುಷ್ಯ ಸಂಘ ಜೀವಿ, ಭಾವ ಜೀವಿ ಅಲ್ವಾ.. ಯಾವ್ದೋ ಖುಷೀಲಿ ಇನ್ಯಾವ್ದೋ ಬೇಜಾರು ಮರೆಯಾಗತ್ತೆ. ಏನಪ್ಪಾ ನೀನು ಬಿಜಿ ಮನುಷ್ಯ. ಒಂದು ಮೆಸೇಜು ಹಾಕೋ ಅಷ್ಟು ಪುರುಸೊತ್ತು ಇಲ್ವಾ
ಹಾಳಾದವ್ನೆ ಅಂತ ಪರಸ್ಪರ ಬೈದಾಡಿಕೊಂಡಾಗ ಮತ್ತೆ ಮುರುಟಿರೋ ಸ್ನೇಹ ಚಿಗುರುತ್ತೆ.

 ಯಾರೋ ಹೊಸ ಗೆಳೆಯರು ಸಿಕ್ಕಾಗ ಮರೆತೋದ ಗೆಳೆಯರು ಮರೆತೊಗ್ತಾರೆ.. ಈ adhoc ಸಂಪರ್ಕಗಳ ಮಧ್ಯೆ ಕೆಲವು ಪರ್ಮನೆಂಟು ಅನ್ಸೋ ಪೆಪ್ಪರಮೆಂಟಿನಂತೆ ಸ್ನೇಹದ ಸವಿ ಹಂಚಿದ, ಹಂಚುವ ಗೆಳೆಯರೂ ಸಿಕ್ಕಿರ್ತಾರೆ.೫ನೇ ಕ್ಲಾಸಿಂದ ೩ ವರ್ಷ ಜೊತೆಗೆ ಓದಿದ್ರೂ ಇನ್ನೂ ಸಂಪರ್ಕದಲ್ಲಿರೋ ಹಲವು ಗೆಳೆಯರು, ಎಸ್ಸೆಸ್ಸೆಲ್ಸಿ ಗೆಳೆಯರು, ಪಿಯು ಮಿತ್ರರ ಜೊತೆಗೆ ಈ ಇಂಜಿನಿಯರ್ ಮಿತ್ರರೂ ಕಾಲದ ನೆನಪಿನ ಪುಟದಲ್ಲಿ ದಾಖಲಾಗಿದಾರೆ.

ಎಲ್ಲೋ ಒಮ್ಮೊಮ್ಮೆ ಬದಲಾವಣೆ ಗಾಳಿ ಬೀಸಿ ಪುಸ್ತಕದ  ಮುಂದಿನ ಪುಟ ಕಾಣೋ ಬದ್ಲು ಹಿಂದಿನದ್ದೆಲ್ಲಾ ಪಟ ಪಟ ಸದ್ದಿನೊಂದಿಗೆ ತಿರುಗೋಕೆ ಶುರು ಮಾಡಿ ಅಲ್ಲಲ್ಲಿ ನಿಲ್ಲೋ ಪುಟಗಳಿಂದ ಇಣುಕ್ತಾರೆ.. ಬದುಕನ್ನೋ ಪೇಪರ್ ದೋಣಿ ಸಾಗ್ತಾ ಇದೆ. ಮಧ್ಯ ಮಧ್ಯ ಯಾವ್ದೋ ಕಸ, ಕಡ್ಡಿ ಸಿಕ್ಕು ಪಯಣಕ್ಕೆ ಅಲ್ಪ ವಿರಾಮ. ಆ ವೇಳೆ ಅಲ್ಲಿ ಬಂದು ಸೇರೋ ಉಳಿದ ದೋಣಿಗಳೇ ಗೆಳೆಯರು . ಹಂಗಂತಾ ಆ ನಿಲುಗಡೆ ಶಾಶ್ವತ ಅಲ್ಲ. ಸ್ವಲ್ಪ ಕಾಲದ ನಂತರ ಬರೋ ಜೋರು ನೀರಲ್ಲಿ , ಬೀಸೋ ಗಾಳೀಲಿ ಕಡ್ಡಿ ಸರಿದಾಗ ಮತ್ತೆ ನಂನಮ್ಮ ಪಯಣ ನಮ್ಮ ಪಾಡಿಗೆ.. ಈ ಪಯಣದಲ್ಲಿ ಜೊತೆ ಸಿಕ್ಕ ಎಲ್ಲಾ ದೋಣಿಗಳಿಗೂ ಇಂದು ಒಂದು ಕೆಲ್ಸ ಅಂತ ಮಾಡೋಕೆ ಕಾರಣ ಆಗಿರೋ ಎಲ್ಲಾ ಗಾಳಿಗಳಿಗೂ , ನೋವು ಮರೆಸೊ ಸವಿನೆನಪಿನ ಮುಲಾಂಗಳಿಗೂ.. ನನ್ನ ಜೀವ , ಜೀವನ ರೂಪಿಸಿದ, ಕಟ್ಟಿದ, ಬೆಳೆಸುತ್ತಿರುವ ಎಲ್ಲಾ ಇಂಜಿನಿಯರ್ರುಗಳಿಗೂ ಮತ್ತೊಮ್ಮೆ ಸಲಾಂ
ಇಂತಿ,
ನಿಮ್ಮವ
ಪ್ರಶಸ್ತಿ

Thursday, September 13, 2012

ಹಿಂಗೊಂದು ಸಂ....ಶೋಧನೆ

ಉಪ್ಪಿಗಿಂತ ರುಚಿ ಬೇರೆ ಇಲ್ಲ
ಟೆಸ್ಟಿಂಗಿಲ್ಲದ ಜಗತ್ತೆ ಇಲ್ಲ...
ಅಂತ ಗುಂಡಣ್ಣ ಹಾಡ್ತಾ ಇದ್ದ . ಸೂಪರ್ ಮಚ್ಚಾ.. ಮಸಾಲೆಪುರಿಗೆ ಐಸ್ ಕ್ರೀಂ ಸೇರ್ಸಿದಂಗೈತೆ ಅಂತ ಕಾಲೆಳ್ದ ತರ್ಲೆ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಗೊಳ್ ಅಂತ ನಕ್ರು.  ಏ ಸುಮ್ನಿರ್ರಿ ,ಅಷ್ಟೇನೂ ಅದ್ವಾನವಾಗಿಲ್ಲ.  ಮಿಸ್ಟರ್ ರೌಂಡ್ ಅಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ಕಿರ್ಬೇಕು. ಅದ್ಕೇ ಖುಷಿಯಾಗಿ ಹಾಡ್ತಿರಬೇಕು ಅಲ್ವಾ ರೌಂಡ್ ಅಂತ ಸಮಾಧಾನ ಮಾಡಿದ್ಲು ಇಳಾದೇವಿ ಅಲಿಯಾಸ್ ಇಳಾ..

ಹೂಂ ಕಣ್ರೋ. ನನ್ನಣ್ಣಂಗೆ ಸಾಪ್ಟವೇರ್ ಟೆಸ್ಟರ್ ಕೆಲ್ಸ ಸಿಕ್ತು. ಡೆವಲಪರ್ಸ್ ಏನೇ ಮಾಡಿದ್ರೂ ಅದ್ನ ಟೆಸ್ಟರ್ಸ್ ಸೈ
ಅನ್ನದೆ ಅದು ಜೈ ಅನ್ನಲ್ಲ. ಹಂಗಾಗಿ ಅದ್ಕೂ ಈಗೀಗ ಬೆಲೆ ಬರ್ತಿದ್ಯಂತೆ ಅಂದ ಗುಂಡ. ಹೌದಂಬ್ರು ,
ಸಾಪ್ಟವೇರ್ ಟೆಸ್ಟಿಂಗ್ ಜೊತೆ ಡಾಟಾ ಮೈನಿಂಗ್ ಅಂತೇನೂ ಮುಂದಿನ ಸೆಮ್ಮಲ್ಲಿ ಉಟಂತಲಾ ಅದ್ಕೂ ಭರ್ಜರಿ ಬೆಲಿ ಇತ್ತಂಬ್ರು ಅಂದ್ಲು ಸರಿತಾ ಅಲಿಯಾಸ್ ಸರಿ. ಹೌದಾ ಸರಿ ??, ನೀ ಹೇಳಿದ್ದೆಲ್ಲಾ ಸರಿ ಅಂದ ತಿಪ್ಪ. ಎಲ್ಲಾ ಮತ್ತೆ ನಕ್ರು.

ನಂಗೆ ಬಳ್ಳಾರಿ ಮೈನಿಂಗ್ ಮಾತ್ರ ಗೊತ್ತುಂಟು. ಇದೆಂತಾ ಡಾಟಾ ಮೈನಿಂಗ್ ಮಾರ್ರೆ ಅಂದ ಮಂಗ್ಳೂರು ಮಂಜ.
ರಾಶಿ ಬಿದ್ದಿರೋ ಮಾಹಿತೀಲಿ ಬೇಕಾಗಿರೋ ಮಾಹಿತೀನ ಕೆದಕಿ ತೆಗ್ಯೋದು , Finding required data out of heap of data ಅಂದ್ಲು ಇಳಾ ತನ್ನತ್ರ ಇರೋ ಮಾಹಿತಿ ಮತ್ತೆ ಇಂಗ್ಲೀಷಿಗೆ ಜಂಭ ಪಡ್ತಾ. ಓ, ತಿಪ್ಪೇಲಿ ಕಸ ಆರಿಸ್ದಂಗಾ ಅಂದ ತಿಪ್ಪೇಶಿ. ಮತ್ತೆ ಗೊಳ್.. ಹೇ, ಹಂಗೆಲ್ಲಾ ಅವ್ಮಾನ ಮಾಡಬಾರ್ದು. ಅದ್ಕೆ ಎಷ್ಟು ಬೆಲೆ ಇದೆ ಗೊತ್ತಾ ಅಂದ ಗುಂಡ.
ಹೂಂ ಆದ್ರೆ ಅದ್ರಲ್ಲಿ ನಡೀತಿರೋ ಹೆಚ್ಚಿನ ಸಂಶೋಧನೆಗಳೆಲ್ಲಾ ಚೈನೀಸ್, ಜಪಾನೀಸ್ ಗಳದ್ದೇ ಅಲ್ವಾ, ನಮ್ದೇನಿದೆ ಅಂದ
ತಿಪ್ಪ. ಓ, ಈ ಮೈನಿಂಗ್ಲೂ ಚೀನಾ ಎತ್ತಿದ ಕೈ ಅಂದ ಮಂಜ.. ಮತ್ತೆ ಗೊಳ್

ಹೂಂ ತಿಪ್ಪ. ಆದ್ರೆ ಈ ಕ್ಷೇತ್ರದ ಸಂಶೋಧನೇಲಿ ನಮ್ಮ ಭಾರತದವ್ರೂ ಇದಾರೆ. ಇದು ಅಥವಾ ನಮ್ಮ ಮುಂದಿನ ಸೆಮ್ ನ ಪ್ರಾಜೆಕ್ಟ್ ಕ್ಷೇತ್ರ ಇಮೇಜ್ ಪ್ರೊಸೆಸಿಂಗ್ ನ ಸಂಶೋಧನೆಗಳಲ್ಲಿ ಚೀನಾ, ಜಪಾನ್ ವಿಜ್ಞಾನಿಗಳ್ನ ಬಿಟ್ರೆ ನಮ್ಮ ಭಾರತದವ್ರೆ ಹೆಚ್ಚಿನವ್ರು ಇರೋದು ಆಂದ ಗುಂಡ. ಆದ್ರೆ ಎಲ್ಲೋ ಅಲ್ಲೊಂದು , ಇಲ್ಲೊಂದು ಅಷ್ಟೆ. ನಮ್ಮ ಭಾರತದ ಶಿಕ್ಷಣ ಕ್ರಮಾನೆ ಬೇರೆ ಅವ್ರಿಂದ ಸಾಲ ತಗೊಂಡಿದ್ದಲ್ವಾ? ಅಮೇರಿಕಾದಲ್ಲೆಲ್ಲಾ ಅವ್ರ ಸ್ವಂತ ಶಿಕ್ಷಣ ಕ್ರಮ ಇದೆ. ಹಂಗಾಗಿ ಅಲ್ಲಿ ಹೆಚ್ಚಿನ ಸಂಶೋಧನೆ ಆಗತ್ತೆ. ನಮ್ಮಲ್ಲೇನಿದೆ. ಉನ್ನತ ಶಿಕ್ಷಣ ಕ್ರಮ ರಷ್ಯಾದ ಕಾಪಿ.. ಹಂಗಾಗಿ ಅವ್ರದ್ದನ್ನ ಉಪಯೋಗಿಸಿ ನಾವು ಏನಾರು ಮಾಡಿದ್ರೆ ಅದು ಸಂಶೋಧನೆ ಆಗತ್ತಾ ಅಂದ ತಿಪ್ಪೇಶಿ..

ವಿಷ್ಯ ಯಾಕೋ ಗಂಭೀರ ಆಗ್ತಿರೋ ಲಕ್ಷಣ ಕಾಣ್ತು. ಇಳಾ ಮಧ್ಯ ಬಂದ್ಲು. ಸಮಾಧಾನ ತಿಪ್ಪ ಅವ್ರೆ, ಸಮಾಧಾನ.
ಭಾರತದ್ದು ರಷ್ಯಾದ ಕಾಪಿ ಅಂದ್ರಲಾ, ಅದೆಂಗೆ ಅಂದ್ಲು. ಹೂಂ ಮತ್ತೆ, ಸ್ವಾತಂತ್ರ್ಯಾ ನಂತರ ಬಂದ ಪ್ರಧಾನಿ ನೆಹ್ರೂ ಅವ್ರ ಮೇಲೆ ಸೋವಿಯತ್ ಒಕ್ಕೂಟದ ಪ್ರಭಾವ ಬಾರಿ ಇತ್ತು ಅದ್ಕೇ, ನಮ್ಮ ಉನ್ನತ ಶಿಕ್ಷಣ ಕ್ರಮ ರಷ್ಯಾದ್ದು ಅಂತ ನಮ್ಮ ಸರ್ರೊಬ್ರು ಹೇಳ್ತಾ ಇದ್ರು. ಅದ್ನೇ ನಾನು ಹೇಳ್ದೆ. ತಪ್ಪೇನಿದೆ ಅಂದ ತಿಪ್ಪ. ಅದ್ಕೇನಿದ್ರೂ ದಾಖಲೆ ಉಂಟಾ ಮಾರ್ರೆ. ನಾನು ಕೇಳಿದಂಗೆ
ಬ್ರಿಟಿಷ್ ರಾಜ್ ವೇಳೆ ಮೆಖಾಲೆ ಶಿಕ್ಷಣ ಪದ್ದತೀನ ನಮ್ಮೇಲೆ ಹೇರಿದ್ರು ಅಂತ ಕೇಳ್ದೆ. ಆದ್ರೆ ನೀ ಹೇಳಿದ್ ವಿಷ್ಯ ನಂಗೆ ಗೊತ್ತಿಲ್ಲ ಮಾರ್ರೆ ಅಂದ ಮಂಜ.ಹೂಂ, ಹೌದು ಹೌದು.ನೀನು ನಮ್ಮ ಭಾರತೀಯರನ್ನ ಅಷ್ಟೆಲ್ಲಾ ಹೀಗಳಿಯೋ ಹಾಗಿಲ್ಲ ಅಂದ್ರು ಎಲ್ಲ.

ಸ್ವಲ್ಪ ಹೊತ್ತು ಎಲ್ಲಾ ಸುಮ್ನಿದ್ರು. ಕೊನೆಗೆ ಗುಂಡನೇ ತಿಪ್ಪನ್ನ ಸಮಾಧಾನ ಮಾಡ್ತ ಹೇಳ್ದ.
ಅಲ್ವೋ ತಿಪ್ಪ, ನಮ್ಮ ಶಿಕ್ಷಣ ಪದ್ದತೀನಲ್ಲಿ ಕೆಲವು ಅಂಶಗಳ್ನ ಬೇರೆ ಕಡೆ ಇಂದ ತಗೊಂಡಿದೀವಿ ಅಂತ್ಲೇ ಇಟ್ಕ.
ಆದ್ರೆ ಅದ್ನ ಉಪಯೋಗಿಸ್ಕಂಡು ನಾವು ಬೆಳೆದ್ರೆ, ಏನೋ ಸಂಶೋಧನೆ ಮಾಡಿದ್ರೆ ಅದು ನಮ್ದು ಆಗತ್ತೋ , ಶಿಕ್ಷಣ ಪದ್ದತೀದು ಆಗತ್ತೋ ಅಂದ. ಹೌದಲ್ವಾ ಮಾರ್ರೆ.ಕ್ರಿಕೆಟ್ ಬ್ಯಾಟ್ ಕಂಡ್ ಹಿಡ್ದಿದ್ದು ಬ್ರಿಟಿಷರು ಅಂದ ಮಾತ್ರಕ್ಕೆ ನಮ್ದೋನಿ ಹೆಲಿಕ್ಯಾಪ್ಟರ್ ಶಾಟ್ ಬ್ರಿಟಿಷರದ್ದು ಆಗತ್ತಾ ಅಂದ ಮಂಗ್ಳೂರು ಮಂಜ. ಎಲ್ಲಾ ಗೊಳ್ ಅಂದ್ರು..

ಪರಿಸ್ಥಿತಿ ಸ್ವಲ್ಪಾನೆ ತಿಳಿ ಆಗ್ತಾ ಬಂತು.ಈಗ ಇಂಟೆಲ್ ಪೆಂಟಿಯಮ್ ಕಂಡು ಹಿಡ್ದೋನು ಭಾರತದವ್ನು. ಹಾಟ್ ಮೇಲ್ ಸಬೀರ್ ಭಾಟಿಯಾಂದು..ಇಂತದ್ರಲ್ಲಿ ಭಾರತದವ್ರು ಸಂಶೋಧನೇಲಿ ಇಲ್ಲ ಅನ್ನೋದು ಸರೀನಾ ತಿಪ್ಪು ಅವ್ರೆ, ನೀವೇ ಹೇಳಿ ಅಂದ್ಲು ಇಳಾ. ಅಲ್ಲಾ, ಹಂಗೆ ನೋಡಿದ್ರೆ,  ಪ್ರಪಂಚದ ಮೊದಲ್ನೇ ವಿಶ್ವವಿದ್ಯಾಲಯ ನಳಂದಾ. ಭಾರತೀಯ ಎಣಿಕೆ ಕ್ರಮ ಇಲ್ದಿದ್ರೆ ಈಗಿನ ಕಂಪ್ಯೂಟರ್ರೇ ಇರ್ತಿರ್ಲಿಲ್ಲ... ಹಿಂಗೇ ಗುಂಡ ಹೇಳ್ತಿರ್ಬೇಕಾದ್ರೆ, ಅದ್ರೆ ಅದನ್ನೆಲ್ಲಾ ಈಗ ನಾವು ಉಪಯೋಗಿಸ್ತಾ ಇದೀವಾ? ಏನೇ ಸಂಶೋಧನೆ ಮಾಡೋದಿದ್ರೂ ಪಾಶ್ಚಾತ್ಯ ಶಿಕ್ಷಣದ ಬುನಾದಿ ಮೇಲೇ ಮಾಡ್ತೀವಿ ತಾನೆ ?
ಎ ಬಿ ಸಿ ಡಿ ಗೊತ್ತಿಲ್ದೇ ಸಂಶೋಧನೆ ಮಾಡಕ್ಕೆ ಆಗತ್ತಾ ಅಂದ ತಿಪ್ಪ.

ಹೂಂ. ತಿಪ್ಪ. ನಿಮ್ ಮಾತು ಸರಿ. ಆದ್ರೆ ಎಲ್ಲದನ್ನೂ ಶೂನ್ಯದಿಂದ ಸೃಷ್ಟಿ ಮಾಡೂಕೆ ಸಾಧ್ಯ ಉಂಟಾ?
ಮಂಜಣ್ಣ ಹೇಳ್ದಂಗೆ ಕ್ರಿಕೆಟ್ ಆಡ್ಬೇಕು ಅಂದ್ರೆ ನೀನೇ ಬ್ಯಾಟನ್ನೂ ತಯಾರು ಮಾಡಿ ಶಾಟ್ ಹೊಡಿ ಹೇಳೂದು ಸರ್ಯಾ?
ಯಾರೋ ಮಾಡಿದ್ದು ಬ್ಯಾಟ್ ತಗಂಡು ಇನ್ಯಾರೋ ಆಡುರ್ತಪ.ಹಂಗಂತ ಹೊಡೆತದ ಶ್ರೇಯ ಬ್ಯಾಟ್ ತಯಾರಿ ಮಾಡಿದವಂಗೆ ಕೊಡುಕೆ ಆತ್ತಾ ? ಅಂದ್ಲು ಸರಿ. ಎಲ್ಲಾ ಸರಿ ಸರಿ ಅಂದ್ರು. ಒಳ್ಳೇ ಭಾಷಣ ಕೇಳಿದಂಗಾಗಿ ಎಲ್ರೂ ಒಂದು ರೌಂಡ್ ಚಪ್ಪಾಳೇನೂ ಹೊಡುದ್ರು.ಅದು ನಿಲ್ತಿದ್ದಂಗೇ ಮತ್ತೆ ನಗು..

ಹೂಂ. ನೀವು ಹೇಳದು ಸರಿ ಸರಿ ಅಂದ ತಿಪ್ಪನೂ.ಮೊದಲ್ನೇ ಸೆಮ್ ಮೆಕಾನಿಕಲ್ ವಿಷ್ಯದಲ್ಲಿ ಶೀತಲೀಕರಣ ( refrigeration) ವಿಷಯನೂ ಇತ್ತಲ್ವಾ ಅಂದ ತಿಪ್ಪ. ಹೂಂ.. ಐಸ್ ಕ್ರೀಂ ನನ್ ಫೇವರಿಟ್ ಅಂದ್ಲು ಸರಿ. ಎಲ್ಲಾ ಗೊಳ್.. ಹೂಂ. ಈಗ್ಲೂ ಶೀತಲೀಕರಣ ಕ್ಷೇತ್ರದಲ್ಲಿನ ಸಿಂಹಪಾಲು ಇರೋದು ರಷ್ಯಾದ್ದೆ. ಹಂಗಾಗಿ ಆ ವಿಷ್ಯದ ಪಾಠ ಮಾಡ್ಬೇಕಿದ್ರೆ ನಮ್ಸಾರು ಉನ್ನತ ಶಿಕ್ಷಣ ಎಲ್ಲಾ ರಷ್ಯಾದ ಕಾಪಿ ಅಂದಿದ್ರು ಅಂತ ನೆನಪಿಸಿಕೊಂಡ ತಿಪ್ಪ. ಹೂಂ. ಸರಿ ಹೋಯ್ತು. ರೆಫ್ರಿಜರೇಟರ್ನ ೧೯೩೫ ರಲ್ಲಿ ಕಂಡು ಹಿಡ್ದಿದ್ದು ಅಮೇರಿಕಾದ ಪ್ರೆಡೆರಿಕ್ ಜೋನ್ಸ್ ಅಂತ ಓದಿದ ನೆನ್ಪುಂಟು ಅಂದ್ಲು ಸರಿ. ಹೂಂ, ಸರಿ ಹೇಳಿದ್ಮೇಲೆ ಸರಿ, ಸರಿ ಅಂದ್ಲು ಇಳಾ. ಮತ್ತೆ ಗೊಳ್.. ಅದೆ ವಿಷ್ಯದಲ್ಲಿ ಇತ್ತಲಪಾ ಉಗಿ ಇಂಜಿನ್. ಅದನ್ನು ಕಂಡು ಹಿಡ್ದಿದ್ದು ರಷ್ಯಾದಲ್ಲಾ ? ಕೈಗಾರಿಕಾ ಕ್ರಾಂತಿ ಶುರು ಆಗಿದ್ದು ಯುರೋಪಲ್ಲಿ. ಕೊನೆಗೆ ಹರಡಿದ್ದು ರಷ್ಯಾಕ್ಕೆ. ಅಂತಾದ್ರಲ್ಲಿ ರಷ್ಯಾದವ್ರ ಪ್ರಭಾವ ಉನ್ನತ ಶಿಕ್ಷಣದ ಮೇಲೆ ಹೆಂಗೆ ಅಂತ ಕೊನೆಗೂ ಅರ್ಥ ಆಗ್ಲಿಲ್ಲ ಅಂದ ತಿಪ್ಪ... ಎಲ್ಲರ ಮುಖ ಭಾವ ಹೂಂ ಅಂತಿತ್ತು. ಆ ಪುಣ್ಯಾತ್ಮ ಏನನ್ನ ಓದಿ ಹೇಳಿದ್ನೋ, ನಂಗೂ ಆ ಮೂಲ ಸಿಕ್ಕಿದ್ರೆ ಗ್ಯಾರಂಟಿ ದಾಖಲೆ ಸಮೇತ ಹೇಳ್ತೀನಿ. ಅಲ್ಲಿವರ್ಗೂ ಏನೂ ಹೇಳಕ್ಕಾಗಲ್ಲ, ಸಾರಿ ಅಂತ ಸಪ್ಪೆಯಾದ ತಿಪ್ಪ.

ಬುನಾದಿ(base) ಬೇಕು ಅನ್ನೋ ಮಾತನ್ನ ಒಪ್ತೀನಿ ತಿಪ್ಪ ಅವ್ರೆ. ನಮ್ಮ ಶಿಕ್ಷಣ ಕ್ರಮದ ಬುನಾದಿ ಬೇರೆದ್ರ ಮೇಲಿದೆ ಅಂದ್ರೆ ಅಥವಾ ಬೇರೆ ಕಡೆ ಚೆನ್ನಾಗಿರೋದನ್ನ ಎರವಲು ಪಡೆದಿದೆ ಅಂತನೇ ಇಟ್ಕಂಡ್ರೂ ಅದ್ರಲ್ಲಿ ತಪ್ಪೇನಿದೆ ಅಲ್ವಾ ? ನಮ್ಮ ಮನೇಲಿ ಸ್ವೀಟ್ ಮಾಡ್ದಾಗ ಪಕ್ಕದ ಮನೇಗೆ ಕೊಟ್ಟು, ಅವರ ಮನೇಲಿ ಸ್ವೀಟ್ ಮಾಡ್ದಾದ ನಾವು ಹೋಗಿ ತಿನ್ನಲ್ವಾ .. ಹಂಗೇ ಇದು ಅಂದ್ಲು ಇಳಾ.. ಎಲ್ಲಾ ಹೋ ಅಂತ ಚಪ್ಪಾಳೆ ತಟ್ಟಿದ್ರು ಈ ಸಲ ಇಳಾಗೆ. ಆದ್ರೆ ಹಂಗಂತ ಬುನಾದಿ ಒಂದೇ ಸಂಶೋಧನೆಗೆ ಕಾರಣ ಅಲ್ಲ ಅನ್ನೋ ಸರಿತಾ ಮಾತನ್ನೂ ನಾನೂ ಒಪ್ತೀನಿ ಎಂದ್ಲು ಇಳಾ.

ಹೂಂ, ಸರಿ. ನೀವೆಲ್ಲಾ ಹೇಳಿದ್ದು ಸರಿ. ನಂಗನಿಸಿದ್ದು ಹೇಳ್ದೆ. ನಿಮ್ಗೇನಾದ್ರೂ ಬೇಜಾರಾದ್ರೆ ಸೋರಿ. ನಂ ಭಾರತದ ಬಗ್ಗೆ ನಂಗೂ ಹೆಮ್ಮೇನೆ. ಆದ್ರೆ ಅವತ್ತು ಆ ಸರ್ ಹೇಳಿದ್ದ ಮಾತು ಇನ್ನೂ ತಲೇಲಿ ಕೊರಿತಾ ಇತ್ತು. ಅದ್ಕೇ ಹೇಳ್ದೆ ಅಂದ ತಿಪ್ಪ. ಹೇ, ಸೋರಿ ಎಲ್ಲಾ ಬ್ಯಾಡ.. ಪ್ರೆಂಡ್ಸ್ ಮಧ್ಯ ಅದೆಲ್ಲಾ ಯಾಕೆ..ಅಂದ್ರು ಎಲ್ಲಾ. . ಹೂಂ ಸರಿ, ಕಾಲೇಜ್ ಬಸ್ಸಿಗೆ ಲೇಟಾಗ್ತಾ ಉಂಟು, ಹೊರಡುವ ಹಂಗಾದ್ರೆ ಅಂದ್ಲು ಸರಿ.

ಹೇ, ಮಾರ್ರೆ ಈಗ್ಲೇ ಹೊಂಟ್ರೆ ಹೆಂಗೆ ? ನಮ್ಮ ಗುಂಡು ಪಾರ್ಟಿ ಮರರ್ತಾ ಅಂದಾ ? ಸರಿ, ಇಳಾ ಮುಖ ಮುಖ ನೋಡ್ಕಂಡ್ರು. ಲೇ, ಮಂಜಾ, ಗುಂಡು ಪಾರ್ಟಿ ಅಲ್ಲೋ. ಗುಂಡನ ಅಣ್ಣಂಗೆ ಕೆಲ್ಸ ಸಿಕ್ಕಿರೋ ಖುಷೀಲಿ, ಗುಂಡ ಕೊಡುಸ್ತಿರೋ ಪಾರ್ಟಿ ಅನ್ನೋ ಅಂದ.. ಎಲ್ಲಾ ಮತ್ತೆ ನಗುತ್ತಾ ಎದ್ದು , ಸರಿ ಸರಿ ಅಂತ ಗುಂಡನ ಪಾರ್ಟಿಗೆ ಹೊರಟ್ರು.


References:
1)http://en.wikipedia.org/wiki/Education_in_India
2)http://mechanical-engineering-industry.europages.co.uk/business-directory-europe/did-05/hc-05840/cc-RUS/Russia/pg-4/Refrigeration-plants-and-equipment-commercial-and-industrial.html
3)http://en.wikipedia.org/wiki/Industrial_Revolution
4)https://www.google.co.in/#hl=en&sclient=psy-ab&q=who%20invented%20refrigerated%20trucks&oq=&gs_l=&pbx=1&bav=on.2,or.r_gc.r_pw.r_cp.r_qf.&fp=deee9bcb02606245&biw=1366&bih=640&pf=p&pdl=300



Tuesday, September 11, 2012

ಯಾವ ನೋವ ಹಿಂದೆ

ಯಾವ ನೋವ ಹಿಂದ್ಯಾವ ಗಾಯವೋ
ತೆರೆಯ ಹಿಂದೆ ಚಿಂತೆ
ಬೆಸೆದ ನಂಟುಗಳ ಬಿರುಕಿನಂಟನು
ಮರೆತ ನೆನಪ ಸಂತೆ |೧|

ದೂರ, ದೂರ ಹಾರೋ ಹಕ್ಕಿ ನಾ
ಹಿಂದೆ ನಿನ್ನೆ ಸೋಲು
ಬಾರಿ, ಬಾರಿ ಕೈಸೋತು ಕುಸಿಯಲು
ಕಾಲ ಗಾಳಿ ಪಾಲು |೨|


ಬರ ಕಂಡಿದೆ ನಗುವಿಂದಿಗೆ
ಬರಿದು ಸ್ಪೂರ್ತಿ ಭಾವವು
ನೀನಿಲ್ಲದೆ ಒಣಗಿ ದೇಹ
ನೀರಿಲ್ಲದ ಬಾವಿಯು|೩|

ರೆಕ್ಕೆ ಹರಿದರೂ, ಪಕ್ಕೆ ಮುರಿದರೂ
ನಿಲ್ಲದಿಂದು ಪಯಣ
ನೆನಪ ಬಿಸಿಗೆ ಮನ ಮೇಣ ಕರಗಿ
ನವ ರೂಪ ತಂತು ಕಾಣ.
ದೂರ ದೂರ ಸಾಗೋ ಹಕ್ಕಿ ನಾ
ಮರೆತು ಹಳೆಯ ನೆನಪು
ಬಾನಿನಲ್ಲಿ ಮೈ ಮರೆತು ನಲಿವೆ ನಾ
ಜೀವ ಸಾಥಿ ದೊರೆತು|೪|