Wednesday, October 31, 2012

ಮಳೆಯಲಿ, ಚಳಿಯಲಿ



ಬೆಂಗ್ಳೂರಲ್ಲಿ ಮತ್ತೆ ಮಳೆ. ಅದ್ರಲ್ಲೇನು ವಿಶೇಷ ಅಂದ್ರಾ ? ಇಲ್ಲಿ ಯಾವಾಗ ಮಳೆ ಇರತ್ತೆ ಯಾವಾಗ ಬಿಸ್ಲಿರುತ್ತೆ ಅನ್ನೋದು ಓಸಿ ಲಾಟ್ರಿ ಹೊಡ್ಯತ್ತೆ ಅಂದಷ್ಟೇ ಗ್ಯಾರಂಟಿ ಅಂತೀರಾ? ಹೌದು ಬಿಡಿ. ಆದ್ರೂ  ಈ ಸಲ , ಈ ಮಳೆ ಏನೋ ವಿಶೇಷ ಅಂತ ಅನ್ಸಿದ್ದೆಂತೂ ಹೌದು. ಮಳೆ ದಿನ, ಬೆಳಗಿನ ಚಳೀಲಿ ಬಚ್ಚಲು ಮನೇಲಿ ಬೆಚ್ಚ ಬೆಚ್ಚಗಿನ ನೀರು ಮೈಮೇಲೆ ಬೀಳ್ತಾ ಇದ್ರೆ ಊರಿನ ಹಂಡೆಯ, ಹೊಡಸಲಿನ, ಮುಂಜಾನೆ ಮಳೆಯ ಅದೆಷ್ಟೋ ನೆನಪುಗಳ ಮೆರವಣಿಗೆ. ಅಂತದ್ದೇ ಕೆಲ ನೆನಪುಗಳನ್ನು ಇಲ್ಲಿ ಹೆಕ್ಕಿಡೋ ಪ್ರಯತ್ನದಲ್ಲಿದ್ದೇನೆ...

ಮಳೆಗಾಲ, ಚಳಿ ಅಂದ್ರೆ ಮೊದ್ಲು ನೆನ್ಪಾಗೋದು ನಮ್ಕಡೆಯ ಕಂಬಳಿ-ಚಳಿ ಅನ್ನೋ ಮಾತುಗಳು. ನಮ್ಕಡೆಗೆ ನಿನ್ನೆ ೨ ಕಂಬಳಿ ಚಳಿ ಇದ್ದೋ, ನಿಂಬದಿಗೆ ಎಷ್ಟು ಅನ್ನೋ ಮಾತು ಈಗ್ಲೂ ನಮ್ಮ ಬದಿಯ ಹಳೆ ಕಾಲದವರ ಮನೆಗಳಲ್ಲಿ ಮಾಮೂಲು. ಮಳೆಗಾಲದ ಆ ದಿನಗಳಲ್ಲಿ ಬೇಗ ಎದ್ದು ಶಾಲೆಗೆ ರೆಡಿ ಆಗೋದು ಅಂದ್ರೆ ಅದೊಂತರ ಹಿಂಸೆ. ಹಾಗಾಗಿ ಶನಿವಾರ ಬಂತದ್ರೆ , ಯಾಕಪ್ಪಾ ಅನುಸ್ತಿತ್ತು ಕೆಲ ಸಲ. ಆದ್ರೆ ಅಮ್ಮ ನಂಕಿಂತನೂ ಮುಂಚೆನೇ ಎದ್ದು ಬಚ್ಚಲು ಒಲೆಗೆ ಬೆಂಕಿ ಹಾಕ್ತಿದ್ರಿಂದ ಹಂಡೇಲಿ ಬಿಸಿ ಬಿಸಿ ನೀರು ರೆಡಿ. ಈಗೆಲ್ಲಾ ಗೀಸರು, ಸೋಲಾರು ಬಂದು ಹಂಡೆ ಅಂದ್ರೆ ಏನು ಅಂತ ಸುಮಾರು ಪೇಟೆ ಹುಡ್ಗರು ಕೇಳೋ ಹಾಗಾಗಿದೆ ಬಿಡಿ , ಆದ್ರೆ ನಂಕಡೆ ಆಗ ಹಾಗಿರ್ಲಿಲ್ಲ, ಈಗ್ಲೂ ಹಂಡೆಗಳ ಜಮಾನ ಮುಗಿದಿಲ್ಲ... ಎಲ್ಲೋ ಹೋದ್ವಿ, ಮತ್ತೆ ಫ್ಲಾಷ್ ಬ್ಯಾಕಿಗೆ.. ಸರಿ, ಸ್ನಾನ ಮಾಡಿ, ಪೂಜೆ ಮಾಡಿ, ಬಿಸಿ ಬಿಸಿ ತಿಂಡಿ ನುಂಗಿ(ತಿಂತ ಕೂತ್ರೆ ಶಾಲೆಗೆ ಲೇಟಾಗತ್ತಲ ಮತ್ತೆ :-) ) ಶಾಲೆ ಕಡೆ ದಾಪುಗಾಲು ಹಾಕ್ತಿದ್ವಿ. ಕೆಲೋರು ದಪ್ಪ ದಪ್ಪ ಸ್ವೆಟರು ಹಾಕ್ಕಂಡು ಬರೋರು. ಆದ್ರೆ ನನ್ನಂತ ಕೆಲೋರಿಗೆ ಸ್ವೆಟರು ಹಾಕೋದು ಜ್ವರ ಬಂದಾಗ, ಹುಷಾರಿಲ್ದಿದ್ದಾಗ ಮಾತ್ರ ಅಂತ ಭಾವ !! ಹಾಗಾಗಿ ಮಳೆಗೊಂದು ಛತ್ರಿ ಹಿಡಿದು , ಚಳಿಗೆ ನಿಮಿರಿ ನಿಂತಿರ್ತಿದ್ದ ಕೈ ರೋಮಗಳನ್ನ ಒಬ್ರಿಗೊಬ್ರು ತೋರಿಸ್ಕೊಂಡು ನಗಾಡ್ತಾ ಶಾಲೆಗೆ ಹೋಗ್ತಿದ್ವಿ. ಶನಿವಾರ ಶಾಲೇಲಿ ಮೊದಲೆರ್ಡು ಪೀರಿಯಡ್ ಪೀಟಿ ಇರ್ತಿತ್ತು.ಮಳೆಗಾಲದಲ್ಲಿ ಆ ಪೀರಿಯಡ್ ಬದ್ಲು ಬೇರೆ ಇರ್ತಿತ್ತು. ಚಳಿಗಾಲದಲ್ಲಿ ಅದೇ ನಮ್ಮ ಮೆಚ್ಚಿನ ಪೀರಿಯಡ್ ಆಗ್ತಿತ್ತು. ವ್ಯಾಯಾಮ ಮಾಡ್ತಾ ಆಗಾಗ ಇಣುಕ್ತಿದ್ದ ಸೂರ್ಯನ ಮುಂಜಾನೆ ಬಿಸ್ಲಿಗೆ ಮೈ ಕಾಯಿಸ್ಕೊಳೋ ಆ ಸುಖ ಇದ್ಯಲ್ಲ.. ಅದನ್ನ ಅನುಭವಿಸಿಯೇ ತಿಳಿಯಬೇಕು..

ಮಳೆಗಾಲ, ಚಳಿಗಾಲ ಅಂದಾಗ ಕಾಡೋ ಇನ್ನೊಂದು ಮಧುರ ನೆನಪು ನಮ್ಮಜ್ಜಿ ಮನೆ ಹೊಡಸಲಿನದು. ಜೋಗದ ಗುಂಡಿ.. (ಈಗಿನ ಜೋಗ ಫಾಲ್ಸು !!) ಕೇಳಿರಬೇಕಲ್ವಾ ಅದ್ರತ್ರ ನನ್ನಜ್ಜಿ ಮನೆ.
ಹೊಡಸಲು ಅಂದ್ರೆ ಅಲ್ಲಿ ಮಳೆಗಾಲದಲ್ಲಿ ಏಲಕ್ಕಿ, ಕಾಫಿ, ಲವಂಗ ಇತ್ಯಾದಿ ಬೆಂಕಿ ಶಾಖಕ್ಕೆ ಒಣಗಿಸೋಕೆ ಅಂತ ಮಾಡಿರ್ತಿದ್ದ ಜಾಗ. ಹೊಡಸಲಿನ ಮೇಲ್ಗಡೆ ಲವಂಗ ಇತ್ಯಾದಿ ಒಣ ಹಾಕಿದ್ರೆ ಕೆಳಕ್ಕೆ ಬೆಂಕಿ ಉರೀತಾ ಇರತ್ತೆ. ಹಾಗಾಗಿ ಮನೇಲಿರೋ ಮಕ್ಕಳಲ್ದೇ, ಬೆಕ್ಕು, ನಾಯಿಗಳಿಗೂ ಹೊಡಸಲು ಚಳಿ ಕಾಯಿಸೋ ಮೆಚ್ಚಿನ ಜಾಗ. ಅಲ್ಲಿ ಘೋರ ಮಳೆಗಾಲದಲ್ಲೇ ಏನಾರು ಕಾರ್ಯಕ್ರಮ ಇರ್ತಿತ್ತು. ಪ್ರತೀ ಸಲವೂ ಬಸ್ಸಿಳಿದು ಬಸ್ಟಾಂಡಿಂದ ೨ ಕಿ.ಮೀ ದೂರದ ಅವರ ಮನೆಗೆ ಹೋಗೋ ಹೊತ್ತಿಗೆ ಅದೇಗೆ ಛತ್ರಿ ಹಿಡಿದು ನಡದ್ರೂ ಅರ್ಧ ಪ್ಯಾಂಟಾದ್ರೂ ನೆಂದಿರ್ತಿತ್ತು.. ಅಡ್ಡಮಳೆಗೆ ಶಾಪ ಹಾಕ್ತಾ , ಕಾಲಿಗೆ ಹತ್ತುತ್ತಿದ್ದ ಉಂಬುಳಗಳನ್ನು ಕೀಳ್ತಾ ಮನೆಗೆ ಸಾಗ್ತಿದ್ವಿ. ತೀರಾ ನಿಧಾನ ನಡೆದಷ್ಟೂ ಉಂಬ್ಳ ಹತ್ತದು ಜಾಸ್ತಿ. ಹಂಗಂತ ತೀರಾ ಬೇಗ ನಡ್ಯಕ್ಕಾಗಲ್ಲ..ಆ ಮಣ್ಣು ರಸ್ತೆ ಎಲ್ಲಿ ಜಾರತ್ತೋ ಅನ್ನೋ ಭಯ..ಅಂತೂ ಮನೆ ಮುಟ್ಟಿ ಕಾಲಿಗೆ ಹತ್ತಿ, ನಾ ನಿನ್ನ ಬಿಡಲಾರೆ ಅಂತಿದ್ದ ಉಂಬುಳಗಳ್ನ ಸುಣ್ಣ-ಹೊಗೆಸೊಪ್ಪಿನ ನೀರಿನ ದ್ರಾವಣ ಮುಟ್ಸಿ ತೆಗದು ದೂರ ಬಿಸಾಕ್ತಿದ್ವಿ. ಕೆಲ ಉಂಬುಳ ದ್ವೇಷಿಗಳು ಅದ್ನ ಹೊಡಸಲಿನ ಬೆಂಕಿಗೆ ಹಾಕ್ತಿದ್ರು !!.. ಹಂಡೆಯ ಕುದಿ ಕುದಿ ನೀರಲ್ಲಿ ಕೈಕಾಲು ತೊಳಿವಾಗ ಮಳೇಲಿ ಮೈ ತೋಯಿಸ್ಕಂಡಾಗಿನ ಚಳಿ ಮರ್ತೇ ಹೋಗ್ತಿತ್ತು.. ಬಟ್ಟೆ ಬದಲಾಯಿಸಿದ ನಂತರ ಹೊಡಸಲೆದ್ರೇ ನಮ್ಮ ಹಾಜರಿ. ಬಿಸಿ ಬಿಸಿ ಕಾಫಿಯೋ, ಚಾವೋ ಸ್ವಲ್ಪ ಹೊತ್ತಿಗೆ ಅಲ್ಲೇ ಬರೋದು. ಮಳೆ-ಚಳಿಗಾಲದಲ್ಲಿ ಹೊಡಸಲಲ್ಲಿ ಚಳಿ ಕಾಯಿಸ್ತಾ ಇರ್ವಾಗ ಬಿಸಿ ಬಿಸಿ ಕಾಫಿ-ಚಾ ಒಳಗೆ ಇಳಿತಾ ಇದ್ರೆ..ಆ ಸುಖ ಅನುಭವಿಸಿಯೇ ತಿಳಿಯಬೇಕು..  

ಆಮೇಲಿಂದು ಹೈಸ್ಕೂಲ್ ಸೈಕಲ್ ನೆನ್ಪುಗಳು.. ಹೈಸ್ಕೂಲಿಗೆ ಬಂದ ಮೇಲೆ ಸೈಕಲ್ ಬಂತು. ಐದು ಕಿ,ಮೀ ದೂರ ಸೈಕಲ್ ಹೊಡ್ದು ಹೋಗೋದು ಖುಷೀನೆ. ಆದ್ರೆ ಮಳೆಗಾಲ ಬಂದಾಗ ಅದು ಬೇರೆ ಕಥೆ. ರೈನ್ ಕೋಟು ಹಾಕಿದ್ರೆ ಸೈಕಲ್ ತುಳ್ಯೋಕೆ ಸುಲ್ಬ. ಆದ್ರೆ ಎಷ್ಟೇ ದುಬಾರಿ ರೈನ್ ಕೋಟ್ ತಂದ್ರೂ ಅದ್ರ ಪ್ಯಾಂಟು ೧೫-೨೦ ದಿನಕ್ಕೆ ತೂತಾಗಿ ಒಳಗೆಲ್ಲಾ ನೀರು ಬರ್ತಿತ್ತು. ಹಾಗಾಗಿ ರೈನ್ ಕೋಟಿನ ಪ್ಯಾಂಟು ಹಾಕಿದ್ರೂ ಒಳಗಿರೋ ಪ್ಯಾಂಟೆಲ್ಲಾ ಹೈಸ್ಕೂಲು ಮುಟ್ಟೋವರ್ಗೆ ಒದ್ದೆ!!. ಹೈಸ್ಕೂಲಿಂದ ಮನೆಗೆ ಬರ್ತಾನೂ ಇದೆ ಕತೆ. ಆದ್ರೆ ಮನೆಗೆ ಬಂದ ತಕ್ಷಣನೇ ಆ ಹಸಿ ಪ್ಯಾಂಟು ತೆಗ್ದು ಬೇರೆ  ಬಟ್ಟೆ ಹಾಕ್ಬೋದಿತ್ತು. ಆದ್ರೆ ಹೈಸ್ಕೂಲಲ್ಲಿ ಹಂಗಲ್ವಲ್ಲ... ಆ ಹಸಿ ಪ್ಯಾಂಟು ನಂ ದೇಹದ ಬಿಸಿಗೆ ಆರೋವರ್ಗೆ ಕಾಯೋದನ್ನ ಬಿಟ್ಟು ಬೇರೆ ಏನ್ಮಾಡೋಕೂ ಆಗಲ್ಲ.  ಇನ್ನು ರೈನ್ ಕೋಟಿನ ಸಹವಾಸವೇ ಬೇಡ ಛತ್ರಿ ಹಿಡ್ಕೊಂಡು ಹೋಗನ ಅಂದ್ರೆ ಒಂದು ಕೈಯಲ್ಲಿ ಛತ್ರಿ ಹಿಡ್ದು ಸೈಕಲ್ಲು ಬ್ಯಾಲೆನ್ಸ್ ಮಾಡೋದು ಸ್ವಲ್ಪ ಕಷ್ಟನೇ..ಕ್ರಮೇಣ ಅಭ್ಯಾಸ ಆಗಿ ಹಳ್ಳೀಲೂ ಪೇಟೇಲೂ ಹಿಂಗೆ ಒಂಟಿ ಕೈ ಬ್ಯಾಲೆನ್ಸಲ್ಲೇ ಸೈಕಲ್ ಹೊಡಿತಿದ್ವಿ.ಆದ್ರೆ ಒಮ್ಮೊಮ್ಮೆ ಬೀಸ್ತಿದ ಅಡ್ಡ ಮಳೆ ಅಲ್ದೇ ಛತ್ರಿ ಜೊತೆ ಸೈಕಲ್ಲನ್ನೂ ತಳ್ಳೋ ಅಷ್ಟು ಜೋರಾಗಿ ಬೀಸ್ತಿದ್ದ ಗಾಳಿ ಮುಂದೆ ನಮ್ಮ ಪ್ರಯತ್ನಗಳೆಲ್ಲಾ ವ್ಯರ್ಥ ಆಗಿ ಮತ್ತೆ ಒಂದರ್ಧ ಪ್ಯಾಂಟಾದ್ರೂ ನೆಂದಿರ್ತಿತ್ತು. ಚಳಿಗಾಲದ ಶನಿವಾರಗಳು ಮತ್ತೆ ಮುಂಜಾನೆ ಕ್ಲಾಸು. ಮತ್ತದೇ ಸೈಕಲ್ಲು. ಮೈ ಕೊರೆಯೋ ಚಳಿಗೆ ಸೈಕಲ್ ತುಳಿತಾ ಹೈಸ್ಕೂಲ್ ಮುಟ್ಟೋ ಹೊತ್ಗೆ ಕೈ ಮೇಲಿನ ಎಲ್ಲಾ ರೋಮಗಳೂ ಎದ್ದು ನಿಂತಿರ್ತಿದ್ವು !! :-)

ಕಾಲೇಜಿಂದು ಮತ್ತೊಂದು ತರ ಕತೆ. ನಮ್ಮ ಕಾಲೇಜು ದಿನಾ ಬೆಳಗ್ಗೆ ಏಳೂವರೆಗೆ ಶುರುವಾಗ್ತಿತ್ತು ! ಅಂದ್ರೆ ಪ್ರತೀದಿನ ಒಂತರಾ ಶನಿವಾರ. ಹಂಗಾಗಿ ಚಳಿಗಾಲ , ಮಳೆಗಾಲಗಳಲ್ದೇ ಇದ್ರೂ ಮುಂಜಾನೆ ಚಳಿಯ ರುಚಿ ದಿನಾ ಸಿಗ್ತಿತ್ತು ನಂಗೆ. ಚಳಿಗಾಲದ ಮುಂಜಾನೆ ಚಳಿಗೆ  ಸೈಕಲ್ ತುಳ್ಯದು ಇರ್ಲಿ ಹ್ಯಾಂಡ್ ಗ್ಲವ್ಸು ಹಾಕಿ ಗಾಡಿ ಓಡ್ಸಬೇಕಂದ್ರೂ ಕೈನಡುಗ್ತಿತ್ತು.ಸಾಗರದ ಕಾಲೇಜು ಮುಗ್ದು ಶಿವಮೊಗ್ಗ ಕಾಲೇಜಿಗೆ ಬಂದ ಮೇಲೆ ಈ ಚಳಿಯ ದಿನಗಳು ಸ್ವಲ್ಪ ಕಡ್ಮೆ ಆದ್ವು ಅನುಸ್ತು. ಅಲ್ಲೂ ನಮ್ಮ ಕಾಲೇಜು ಬೆಳಿಗ್ಗೆ ಏಳೂವರೆಗೆ ಶುರು ಆಗ್ತಿತ್ತು. ಇಲ್ಲಿ ತೀರಾ ಮಳೆ, ಚಳಿಯ ದಿನಗಳಲ್ಲಿ ಕೈ ರೋಮ ಸ್ವಲ್ಪ ನಿಮಿರಿರ್ಬಹ್ದು ಅನ್ನೋದು ಬಿಟ್ರೆ ಹೆಚ್ಚೇನೂ ಚಳಿ-ಮಳೆ ಕಾಡಿಲ್ಲ. ಬೆಂಗಳೂರಿಗೆ ಬಂದ ಮೇಲಂತೂ ಬಿಡಿ.. ಚಳಿ ಅನ್ನೋದೆ ಮರೆತು ಹೋದಂಗಾಗಿತ್ತು. ಬಂದ ಆರು ತಿಂಗಳಲ್ಲಿ  ಒಂದು ದಿನವೂ ಸ್ವೆಟರ್ ಹಾಕಿಲ್ಲ. ಇರೋ ಸ್ವೆಟರನ್ನೂ ಊರಲ್ಲಿಟ್ಟಿದೀನಿ !!    ಅಂತದ್ರಲ್ಲಿ ಇವತ್ತು ಬೆಳಬೆಳಿಗ್ಗೆ ಯಾಕೋ ಚಳಿ ಅನುಸ್ತು. ನಿನ್ನೆ ಚನ್ನಾಗಿ ಮಳೆ ಹೊಡಿದ ಪ್ರಭಾವ ಇರ್ಬೋದೇನು. ಬೆಂಗ್ಳೂರಷ್ಟೇ ಅಲ್ದೇ ತುಮ್ಕೂರು, ಮಂಡ್ಯ ಈ ಬದಿಗೆಲ್ಲಾ ಮಳೆ ಸುರೀತಿರೋ ಪ್ರಭಾವ ಇರ್ಬೋದು.. ನಿನ್ನೆಯಿಂದ ಮೋಡ ಕಟ್ಟೇ ಇರೋದ್ರ ಪ್ರಭಾವ ಇರ್ಬೋದು..ಅಂತ ಮಳೆ-ಚಳಿ ಮುಂಜಾನೇಲಿ ಎದ್ದು ಗೀಸರಿನ ಬಿಸಿ ನೀರು ಹೊಯ್ಕಳ್ತಾ ಇದ್ದಾಗ  ಹಳೆಯ ಹಂಡೆ, ಹೊಡಸಲು, ಮಳೆಗಾಲದ ನೆನ್ಪುಗಳು ಮರುಕಳಿಸಿದ್ವು.. ಹಾಗೇ ಈರೀತಿ ಪದಗಳಾದ್ಚು. ನಿಮ್ಗೂ ಇದನ್ನ ಓದ್ತಾ ಕೆಲ ಬೆಚ್ಚನೆಯ ನೆನ್ಪುಗಳು ಮರುಕಳಿಸಿರ್ಬೋದು.. ಆ ಬೆಚ್ಚನೆಯ ನೆನಪುಗಳ್ನ ಸವೀತಾ, ಬಿಸಿ ಬಿಸಿ ಕಾಫೀನೋ, ಟೀನೋ ಹೀರ್ತಾ, ಚಳೀಗೆ ಪಕೋಡಾನೋ ಬಜೀನೋ ಸವೀತಾ ಹಾಗಾಗಿರಿ. ಶುಭದಿನ :-)

Friday, October 19, 2012

ನೂರ್ನಳ್ಳೀಲಿ ಅವ-೨

ಹಿಂದಿನ ಭಾಗ: ನೂರ್ನಳ್ಳೀಲಿ ಅವ-1

.. ಸೀಟು ಬಿಡ್ಬೇಕಲ್ಲಾ ಅನ್ನೋ ಸಂಕಟದಿಂದ ಇವ ಅವನನ್ನು ತಟ್ಟಿ ಕೇಳ್ದ. ಯಾವೂರಿಗೆ ಹೋಗ್ತೀದೀರಿ ನೀವು ಅಂತ. ಇತ್ಲಗೆ ತಿರುಗಿ ನೂರ್ನಳ್ಳಿ ಅಂದ.ಆ ಹಿರಿಯರನ್ನ ನೋಡಿದವ್ನೇ ಅವ, ಓ . ಮೇಷ್ಟ್ರೇ, ನಿಂತೇ ಇದೀರಲ್ಲಾ.. ಕೂತ್ಕಳಿ ಅಂತ ತನ್ನ ಸೀಟು ಬಿಟ್ಕೊಟ್ಟ!! ಅವ ಯಾರು? ಡ್ರೈವರನ್ನೂ ಸೇರ್ಸಿ ಆ ಬಸ್ಸಲ್ಲಿರೋ ಹೆಚ್ಚಿನ ಜನ ಆ ಮೇಷ್ಟ್ರ ಶಿಷ್ಯರೇ ಆಗಿದ್ರೂ ಯಾರೂ ಸೀಟು ಬಿಟ್ಟು ಕೊಡ್ದಿರೋವಾಗ ಅವ ಯಾಕೆ ಸೀಟು ಬಿಟ್ ಕೊಟ್ಟ ಅನ್ನೋ ಎಲ್ಲರ ಕುತೂಹಲ ಹೊತ್ತ ಬಸ್ಸು ಗುಂಡಿ ರಸ್ತೇಲಿ ಕುಲುಕಾಡ್ತಾ ಸಾಗ್ತಾ ಇತ್ತು.

ಬಸ್ಸು ಮೂರ್ನಳ್ಳಿ ಮುಟ್ಟೋ ಹೊತ್ಗೆ ಸೂರ್ಯನೂ ಮನೆ ಸೇರ್ತಾ ಇದ್ದ. ದೂರದಲ್ಲಿ ಹರಿತಾ ಇದ್ದ ಬಾವಿಹೊಳೆ ಮುಳುಗ್ತಿದ್ದ ಸೂರ್ಯನ ಕಾಂತಿಗೆ ಕೆಂಪಾಗಿತ್ತು.ಚಾ ಕುಡ್ಯಕ್ಕೆ ಅಂತ ಇಳ್ದ ಡ್ರೈವರಣ್ಣ ಇನ್ನೂ ಬಂದಿರ್ಲಿಲ್ಲ. ಎಲ್ರಂಗೆ ಬಸ್ಸಿಂದ ಇಳ್ದ ಆ ಹೊಸ್ಬ ಸೂರ್ಯಾಸ್ತ ನೋಡ್ತಾ ಇದ್ದ ಪರಿಯಲ್ಲೇ ಏನೋ ಹೊಸ ತರ ಇತ್ತು . ಏನಪ್ಪಾ ಯಾವತ್ತು ಸೂರ್ಯಾಸ್ತ ನೋಡಿಲ್ವೇ, ಪಟ್ಣಾದಿಂದ ಬಂದಾಂಗೆ ಕಾಣ್ತೀಯ ಅಂದ್ರು ಒಬ್ರು. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಅಂತಾರಲ ಮರಿಯಣ್ಣ, ಎಲ್ಲಿ ಎಷ್ಟೇ ಸಂದಾಕಿದ್ರೂ ನಮ್ಮೂರಿನ ಸೌಂದರ್ಯ ನೋಡ್ದಂಗೆ ಆತದಾ ಅಂತ ನಕ್ಕ ಅವ. ಆ ಮರಿಯಣ್ಣಂಗೂ ಒಮ್ಮೆ ಗಾಬ್ರಿ ಆತು. ಯಾರಪ ಇವ, ನನ್ನ ಹೆಸ್ರನ್ನ ಇಷ್ಟು ಗೌರವದಿಂದ ಕರ್ಯೋನು ಅಂತ ಆಶ್ಚರ್ಯ ಪಟ್ಟ ಸಣ್ಣ ಮಕ್ಳಿಂದಲೂ ಏ ಮರ್ಯ ಅಂತ್ಲೇ ಕರ್ಸಕಂಡು ಆಭ್ಯಾಸ ಆಗಿದ್ದ ಜವಾನ ಮರ್ಯ. ಯಾರ್ ಸ್ವಾಮಿ ನೀವು ಅಂದ ಮರ್ಯ ಮರ್ಯಾದೆಯಿಂದ ಅಭ್ಯಾಸಬಲದಿಂದ. ಅಯ್ಯೋ ಮರಿಯಣ್ಣ, ನೀವು ನಂಗೆ ಸ್ವಾಮಿ ಅನ್ನೋದೇ? ಅಷ್ಟೆಲ್ಲಾ ದೊಡ್ಡ ಮನ್ಷ ಆಗಿಲ್ಲ ನಾನು. ನಾನ್ಯಾರಂತಾ ನಿಮ್ಗೆ ಗೊತ್ತಾಗಿಲ್ವಾ ಅಂದ? ಇಲ್ಲ ಸ್ವಾಮಿ ಅಂದ. ಮತ್ತೆ ಅದೇ, ನನ್ನ ಸ್ವಾಮಿ ಅಂತ ಕರೀಬೇಡಿ.. ನನ್ರೆಸ್ರು... ಅಂತ ಏನೋ ಹೇಳೋಕೆ ಹೋದವನು ಅಲ್ಲೇ ತಡೆದ. ಇನ್ನೊಂದು ಎರಡು ದಿನದಲ್ಲಿ ನಿಮಗೇ ನೆನ್ಪಾಗತ್ತೆ ಬಿಡಿ ಅಂತ ನಗ್ತಾ ಬಸ್ಸಿನ ಕಡೆ ಹೆಜ್ಜೆ ಹಾಕ್ದ . ಅವ ಯಾರು ಅನ್ನೋ ಕುತೂಹಲ ಮರ್ಯಣ್ಣಂಗೆ ಇರ್ಬೇಕಾದ್ರೆ ಬಸ್ಸಿನ ಹಾರ್ನಿನ ಸದ್ದು ಕೇಳಿ ಮರ್ಯಣ್ಣನೂ ಬಸ್ಸಿನ ಕಡೆ ಓಡಿದ.

ಗುಂಡಿ ಸ್ವಲ್ಪ ಕಮ್ಮಿ ಆಗಿದ್ರಿಂದನೋ, ಡ್ರೈವರು ಚಾ ಏರ್ಸಿದ್ರಿಂದನೋ ಗಾಡಿಗೆ ಸ್ವಲ್ಪ ವೇಗ ಸಿಕ್ಕಿತ್ತು. ನೀರ್ನಳ್ಳಿ ದಾಟಿ ದೂರದಲ್ಲಿ ನೂರ್ನಳ್ಳಿ ಗುಡ್ಡ ಕಾಣ್ತಾ ಇತ್ತು. ದಿನಾ ಲೇಟಾಗೋ ಬಸ್ಸು ಇವತ್ತು ಕರೆಕ್ಟ್ ಟೈಮಿಗೆ ಹೋಗ್ತಾ ಇರೋದಕ್ಕೆ ಮೇಷ್ಟ್ರು, ಮರಿಯಣ್ಣನಿಂದ ಹಿಡ್ದು ಎಲ್ಲಾ ಖುಷಿ ಆಗಿದ್ರು.  ಹೋಗ್ತಾ ಇರೋ ಬಸ್ಸು ಇದ್ದಕ್ಕಿದ್ದಂಗೆ ಬ್ರೇಕು ಹಾಕ್ತು. ಬ್ರೇಕು ಹಾಕಿದ ರಭಸಕ್ಕೆ ಕಂಬಿ ಹಿಡಕೊಳ್ದೇ ಹರಟೆ ಹೊಡೀತಾ ನಿತ್ತಿದ್ದ ಕಾಲೇಜು ಹುಡ್ಗ ಹುಡ್ಗೀರೆಲ್ಲಾ  ಒಬ್ಬರ ಮೇಲೊಬ್ರು ಅವ್ನ ಮೇಲೇ ಬಿದ್ರು. ಕೆಲವರಿಗೆ ಒಳಗೊಳಗೇ ಖುಷಿ!! ಅವ್ರನ್ನ ನೋಡಿ ಕೂತಿದ್ದ ಕೆಲವರಿಗೆ ತಾವೂ ನಿಲ್ಲಬಾರದಿತ್ತ ಅನ್ನೋ ಸಂಕಟ!!! ಕೆಳಗೆ ಬಿದ್ದಿದ್ದ ಹುಡುಗ ಅವ ಏನ್ ಬಸಣ್ಣ, ಸಡನ್ನಾಗಿ ಬ್ರೇಕ್ ಹಾಕೋದು ಈಗ್ಲೂ ಕಮ್ಮಿ ಮಾಡಿಲ್ವಾ ನೀನು ಅಂದ. ಇವ್ನ ಮೇಲೆ ಬಿದ್ದ ಎಲ್ರಿಗೂ, ಬಸ್ಸಲ್ಲಿದ್ದ ಉಳ್ದವ್ರಿಗೂ ಅವ್ನಿಗೆ ಡ್ರೈವರ್ ಹೆಸ್ರು ಹೆಂಗೆ ಗೊತ್ತಾಯ್ತು ಅನ್ನೋ ಆಶ್ಚರ್ಯ. ತೋ , ಬೆಕ್ಕು ಅನ್ನೋಕೆ ಹೋಗಿದ್ದ ಡ್ರೈವರನೂ ಆಶ್ಚರ್ಯದಿಂದ ಒಂದು ಕ್ಷಣ ಸುಮ್ನಾದ.ಪುಣ್ಯ, ಇವ್ನಿಂದ ಒಂದು ಶಾಪ ಕಮ್ಮಿ ಆಯ್ತು ಅನ್ನೋ ಸಂತೋಷದಲ್ಲೇ ಡ್ರೈವರ್ ಕೇಳ್ದ. ಯಾರಪ್ಪಾ ನೀನು? ನಾನು, ಈ ಮೇಷ್ಟು ಎಲ್ಲಾ ಹೆಂಗೆ ಗೊತ್ತು ನಿಂಗೆ? ನಿನ್ನ ಮುಖ ನೋಡಿದ ನೆನ್ಪೇ ಇಲ್ವಲ ಅಂದ. ಎಲ್ಲಾ ಒಂದೇ ದಿನ ಕೇಳ್ತೀಯ ಬಸಣ್ಣ. ನಿಮ್ಮನೇಗೇ ಬರ್ತೀನಿ ತಗ ಒಂದಿನ. ನಿಮ್ಮಮ್ಮ ತಿಮ್ಮವ್ವ ಹೆಂಗವ್ಳೇ ಅಂದ ಅವ. ಡ್ರೈವರ್ ಒಂದು ಕ್ಷಣ ಇವ್ನ ಮುಖನೇ ಒಂತರಾ ನೋಡಿ, ಗಾಡಿ ಮುಂದೆ ಓಡ್ಸಿದ. ಡ್ರೈವರು ಯಾಕೆ ಹಾಗೆ ಮಾಡಿದ ಅಂತ ಇವ್ನಿಗೆ ಅರ್ಥ ಆಗ್ಲಿಲ್ಲ. ಬಸ್ಸಲ್ಲಿದ್ದೋರೆಲ್ಲಾ ಇವ್ನೇ ನೋಡ್ತಿದ್ರಿಂದ ಮತ್ತೇನಾದ್ರೂ ಮಾತಾಡಿದ್ರೆ ನೂರು ಪ್ರಶ್ನೆಗೆ ಉತ್ರ ಹೇಳ್ಬೇಕು ಅಂತ ಸುಮ್ನಾದ ಅವ.
    
ಅಂತೂ ನೂರ್ನಳ್ಳಿ ಬಂತು. ಕತ್ಲಾಗ್ತಾ ಬಂದಿತ್ತು. ಎಲ್ಲಾ ಮನೆ ಸೇರೋ ಗಡಿಬಿಡಿಲಿದ್ದಿದ್ರಿಂದ ಯಾರೂ ಹೊಸಬನ ಸುದ್ದಿಗೆ ಹೋಗಲಿಲ್ಲ. ನಮ್ಮೂರಿಗೆ ಬಂದಿದಾನಲ, ಹೆಂಗಿದ್ರೂ ಇವತ್ತು ಇದ್ದೇ ಇರ್ತಾನೆ ಯಾರ ಮನೆಲಾದ್ರೂ. ನಾಳೆ ನೋಡ್ಕಂಡ್ರಾಯ್ತು ಅಂತ ಸುಮ್ನಾದ್ರು. ಮೇಷ್ಟಿಗೆ ಮನ್ಸು ತಡೀದೆ ಕೇಳಿದ್ರು. ಯಾರ ಮನೇಗೆ ಹೋಗ್ತಿದೀಯಪ್ಪ ನೂರ್ನಳ್ಳೀಲಿ ಅಂತ. ನಿಮ್ಮನೇಗೆ ಮೇಷ್ಟ್ರೇ ಅಂತ ನಕ್ಕ ಅವ. ಮೇಷ್ಟ್ರಿಗೂ ನಗು ಬಂತು. ಇರೋ ಸ್ವಲ್ಪ ಹಲ್ಲು ತೋರುಸ್ತಾ ಅವ್ರೂ ನಕ್ರು. ಒಳ್ಳೇ ಹಾಸ್ಯ ಮಾಡ್ತೀಯ ನೀನು. ಯಾರ ಮನೆಗೆ ಅಂತ ನೀನೇನೂ ಹೇಳೋ ಹಂಗೆ ಕಾಣಲ್ಲ. ಇರ್ಲಿ ಬಿಡು. ನೀನು ಹೇಳ್ದಿದ್ರೂ ನಾಳೆ ಗೊತ್ತಾಗತ್ತೆ. ನಮ್ಮನೇಗೆ ಯಾವಾಗ ಬೇಕಿದ್ರೂ ಬರ್ಬೋದು ನೀನು. ಹೆಂಗಿದ್ರೂ ಮನೆ ಖಾಲಿ ಹೊಡಿತಿದೆ ಅಂತ ವಿಷಾದದ ನಗೆ ನಕ್ರು ಮೇಷ್ಟು. ಅವ್ನಿಗೂ ಏನು ಹೇಳ್ಬೇಕು ಅಂತ ಗೊತ್ತಾಗ್ಲಿಲ್ಲ. ಸರಿ, ನೀವು ಹೊರ್ಡಿ ಮೇಷ್ಟೆ, ನಾ ನಿಧಾನ ಬರ್ತೀನಿ ಅಂತ ಕಳ್ಸಿದ ಅವ್ರನ್ನ ಮುಂದೆ.

ಕೊನೇ ಬಸ್ಸೂ ಬಂದು ತಿರುಗಿಸ್ಕಂಡು ವಾಪಾಸ್ ಹೊರಟಿದ್ದನ್ನ ಕಂಡು ಜಾಫರ್ ಸಾಹೇಬ್ರು ಅಂಗ್ಡಿ ಬಾಗ್ಲು ಹಾಕಕ್ಕೆ ಹೊಂಟ್ರು. ಅಷ್ಟರಲ್ಲಿ ಅವ ಕೈಸೆ ಹೋ ಜಾಫರ್ ಭಾಯ್ ಅಂತ ಅಂಗಡಿ ಎದ್ರಿನ ಕಟ್ಟೆ ಮೇಲೆ ಬಂದು ಕೂತ . ತಮ್ಮ ಕಡೆ ಮಾತಾಡವ ಯಾರಪ ಇವ್ನು ಅಂತ ಜಾಫರ್ ಸಾಬ್ರಿಗೂ ಆಶ್ಚರ್ಯ ಆಗಿ ಅವ್ರು ಅಂಗ್ಡಿ ಬಾಗ್ಲು ಹಾಕೋದನ್ನ ಬಿಟ್ಟು ಇವ್ನ ಜೊತೆ ಮಾತಾಡ್ತಾ ಕೂತ್ರು.

ಸುಮಾರು ಹೊತ್ತಿನ ಮೇಲೆ ಜಾಫರ್ ಸಾಬ್ರ ಎಮ್ಮೇಟಿ ಸ್ಟಾರ್‍ಟ್ ಆಗಿ ಎತ್ಲಗೋ ಹೋದ ಸದ್ದು ಕೇಳಿತು...
*********

ಮಾರ್ನೇ ದಿನ ಬೆಳಗಾಯ್ತು.  ಶಾಲೆಗೆ ಹೋಗೋ ಮಕ್ಳದ್ದೆಲ್ಲಾ ಅದೇ ಸುದ್ದಿ. ಬಸ್ಟಾಂಡಿನ ಪಕ್ಕದಲ್ಲಿರೋ ಜಾಫರ್ ಸಾಬ್ರ ಅಂಗ್ಡಿ ಬೀಗ ಹಾಕಿದೆ ಅಂತ !! ಮೊದಲ್ನೇ ಬಸ್ಸಿಗೆ ಪೇಟೆಯಿಂದ ಊರಿಗೆ ಬಂದವ್ರು ಊರಲ್ಲೆಲ್ಲಾ ಆ ಸುದ್ದಿ ಹಬ್ಸಿದ್ರು.  ಇದ್ದಕ್ಕಿದ್ದಂಗೆ ಜಾಫರ್ ಸಾಬ್ರು ಅಂಗ್ಡಿಗೆ ಬೀಗ ಹಾಕಿ ಎತ್ಲಗೆ ಹೋದ್ರು ಅಂತ ಯಾರಿಗೂ ಗೊತಾಗ್ಲಿಲ್ಲ. ನಿನ್ನೆ ಕೂಡ ಯಾರತ್ರನೂ ಅವ್ರು ಎಲ್ಲಿಗೂ ಹೋಗ ಸುದ್ದಿ ಹೇಳಿರ್ಲಿಲ್ಲ. ಕೇಳೋನ ಅಂದ್ರೆ ಅವ್ರ ಸಂಬಂಧಿಕರು ಯಾರೂ ನೂರ್ನಳ್ಳೀಲಿ ಇರ್ಲಿಲ್ಲ. ಈಗ ಎಂತ ಕತೆ ಅಂತ ಎಲ್ಲ ತಲೆ ಕೆಡಸ್ಕಂಡ್ರು.. ಅಷ್ಟರಲ್ಲಿ ನಿನ್ನೆ ಸಂಜೆ ಬಸ್ಸಿಗೆ ಬಂದ ಹೊಸಬನ ಜೊತೆಗೆ ಜಾಫರ್ ಸಾಬ್ರು ಮಾತಾಡ್ತಾ ಕೂತಿದ್ರು ಅಂದ ಒಬ್ಬ. ಹೌದು ನಿನ್ನೆ ಪಟ್ಣದಿಂದ ಯಾರೋ ಒಬ್ಬ ಬಂದಿದ್ದ. ಅವ, ಯಾರು, ಯಾಕೆ ಬಂದ ಅಂತ ಯಾರಿಗೂ ಗೊತ್ತಿಲ್ಲ. ಆದ್ರೆ ನಮ್ಮೆಲ್ರಾ ಹೆಸ್ರು ಅವಂಗೆ ಗೊತ್ತು ಅಂದ ಇನ್ನೊಬ್ಬ. ಅವ ತ್ರಿಕಾಲ ಜ್ಞಾನಿನ ಎಂತಾ ಕತೆ ಹಂಗಾರೆ, ಮುಖ ನೋಡ್ತಿದ್ದಂಗೆ ಹೆಸ್ರು ಹೇಳ್ತಿದ್ದ ಅಂದ ಇನ್ನೊಬ್ಬ!!.ನಮ್ಮೂರು ಹಾಳ್ಮಾಡೋಕೆ ಯಾರ್ ಬಂದ್ರಪಾ, ಕಾಪಾಡೋ ಶಿವ್ನೆ ಅಂದ ಮತ್ತೊಬ್ಬ.. ಏ ಹೌದೌದು. ಅವ ಬಸ್ಸಲ್ಲಿ ನಮ್ಮೂರಿಗೆ ಬರ್ತಿರೋವಾಗ್ಲೇ ಯಾವತ್ತೂ ಬರ್ದಿರೋ ಬೆಕ್ಕು ಅಡ್ಡ ಬಂತು ಬಸ್ಸಿಗೆ. ಯಾವಾಗ್ಲೂ ಕಿಟಕಿಯಿಂದ ಹೊರಗೆ ನೋಡ್ತಾ ಏನೋ ಮಸಲತ್ತು ಮಾಡ್ತಾ ಇದ್ದ ಅಂದ ಮತ್ತೊಬ್ಬ..  ಏ ಸುಮ್ನಿರ್ರೊ, ತ್ರಿಕಾಲ ಜ್ಞಾನಿ ಅಂತೆ, ಮತ್ತೊಂದಂತೆ, ನಿನ್ನೇನೆ ಅವ ಯಾರು, ಎತ್ತ ಅಂತ ವಿಚಾರ್ಸಿದ್ರೆ ಆಗ್ತಿತ್ತು. ಅದು ಬಿಟ್ಟು ಈಗ ತಲೆ ಕೆಡಸ್ಕಂಡ್ರೆ ಏನು ಬಂತು? ಕೊಳ್ಳೆ ಹೊಡದ್ಮೇಲೆ ದೊಡ್ಡಿ ಬಾಗ್ಲು ಹಾಕ್ದಂಗೆ..ಅವ ಯಾವ ಭಯೋತ್ಪಾದಕನೋ ಯಾರಿಗೆ ಗೊತ್ತು ಅಂದ ಇನ್ನೊಬ್ಬ. ಮೊನ್ನೆ ಬೆಂಗ್ಳೂರಲ್ಲಿ ಬಾಂಬ್ ಹಾಕಿದವ ತಪ್ಪಿಸಿಕೊಂಡಿದಾನಂತೆ. ಅವ್ನೇನಾ ಇವ ಅಂದ ಮತ್ತೊಬ್ಬ !!.

 ಹೀಗೆ ಸುದ್ದಿಗಳು ಒಬ್ಬರ ಬಾಯಿಂದ ಮತ್ತೊಬ್ಬರ ಬಾಯಿಗೆ ಹರಡುತ್ತಾ... ಊರಿಗೆ ಬೆಂಗ್ಳೂರಿಂದ ಭಯೋತ್ಪಾದಕ ಬಂದಿದಾನಂತೆ. ಅವ ಊರಲ್ಲಿರೋ ಪ್ರತಿಯೊಬ್ರ ಮನೇಲಿ ಎಷ್ಟು ಅಡ್ಕೆ ಮರ ಇದೆ, ಎಷ್ಟು ಕೇಜಿ, ಎಷ್ಟು ಗ್ರಾಂ ಚಿನ್ನ ಇದೆ, ಹೆಣ್ಮಕ್ಳನ್ನ ಯಾಯಾ ಊರಿಗೆ ಕೊಟ್ಟಿದಾರೆ ಅನ್ನೋ ಲೆವೆಲ್ ಗೆ ಮಾಹಿತಿ ಕಲೆ ಹಾಕಿದಾನಂತೆ. .. ಬತ್ರಿದ್ದಂಗೆ ಅಂಗ್ಡಿ ಜಾಫರ್ ಸಾಬ್ರನ್ನ ಬಲಿ ತಗಂಡಿದಾನಂತೆ.. ಊರಿಗೆ ಊರ್ನೇ ಸರ್ವನಾಶ ಮಾಡೇ ಮುಂದೆ ಹೋಗದಂತೆ.ಅವ್ನು ಬಾಂಬು ತರೋಕೆ ನಿನ್ನೇನೆ ಜಾಫರ್ ಸಾಬ್ರ ಎಮ್ಮೇಟೀಲಿ ಎಲ್ಲಿಗೋ ಹೋಗಿದಾನಂತೆ  .ಎಂಬಿತ್ಯಾದಿ ಸುದ್ದಿಗಳು ಸಂಜೆವರ್ಗೆ ಊರಲ್ಲೆಲ್ಲಾ ಹಬ್ಬಿತ್ತು. , ಅದ್ಕೆ  ಸರಿಯಾಗಿ ಅವ್ನೂ ಊರಲ್ಲೆಲ್ಲಾ ಕಂಡಿರ್ಲಿಲ್ಲ.. ಆ ಗಾಳಿ ಸುದ್ದಿಗಳಿಂದ ಅವ್ನು ಯಾರು, ಊರಿಗೆ ಯಾಕೆ ಬಂದ, ಬಂದವ್ನು ರಾತ್ರೆ ಎಲ್ಲಿ ಹೋದ, ಈಗ ಎಲ್ಲಿದಾನೆ ಎನ್ನೋ ಕುತೂಹಲ,ಭಯ ಎಲ್ಲಾ ಕಡೆ ಆವರಿಸಿತ್ತು..

**************
(ಮುಂದುವರಿಯುತ್ತದೆ)
ಮುಂದಿನ ಭಾಗ: ನೂರ್ನಳ್ಳೀಲಿ ಅವ-೩

Wednesday, October 17, 2012

ನೂರ್ನಳ್ಳೀಲಿ ಅವ -1


ಮುಂಚೆ ಎಲ್ಲ ಬರಿ, ಬರಿ ಬರಿತಿದ್ದೋನು ಈಗ್ಯಾಕೋ ಬರ್ಯೋದೇ ಕಮ್ಮಿ ಆಗ್ಬಿಟ್ಟಿದೆ! ಓದೋದೂ ಕಮ್ಮಿ ಆಗ್ಬಿಟ್ಟಿದೆ!!.
ಕಾರಣ ? ಹುಡ್ಕಿದರೆ ನೂರು ಸಿಗ್ಬೋದೇನೋ.. ಆದರೆ ಬರೀದಿರೋಕೆ ನೂರು ಕಾರಣ ಹುಡ್ಕೋಬದ್ಲು ಬರೀಬೇಕು ಅನ್ನೋ ಒಂದೇ ಉತ್ಸಾಹ ಮೇಲಲ್ವೇ ? ಹಂಗಾಗೇ ಸುಮಾರು ದಿನದಿಂದ ಮನ್ಸಲ್ಲಿ ಅರ್ಧಬಂರ್ದ ಮೂಡಿದ್ದ ಕತೆಗೊಂದು ಆಕಾರ ಕೊಡೋ ಪ್ರಯತ್ನ ಇದು..

ಹೀಗೇ ಬಸ್ಸಲ್ಲಿ ಕಿಟಕಿ ಪಕ್ಕಕ್ಕೆ ಕೂತಿದ್ದ ಅವ. ಬೀಸ್ತಾ ಇದ್ದ ಗಾಳಿ ಅವನ ಗಡ್ಡ ನೇವರಿಸ್ತಾ ಇತ್ತು. ಆ ಗಡ್ಡ ಅವ್ನು ಸಂಪ್ರದಾಯಕ್ಕನುಸಾರ ಉಳಿಸಿದ್ದಾ ಅತ್ವಾ ಫ್ಯಾಷನ್ನಿಗಾಗಿ ಬೆಳೆಸಿದ್ದಾ ಅಲ್ಲಿದ್ದವ್ರಿಗೆ ಯಾರಿಗೂ ಗೊತ್ತಿರ್ಲಿಲ್ಲ. ಕುಂಕುಮ, ನಾಮ, ವಿಭೂತಿ, ಟೋಪಿ, ಕೊರಳಲ್ಲಿ ಕ್ರಾಸು, ತಾಯಿತ ಈ ತರದ್ಯಾವ್ದೂ ಕಾಣಿಸ್ದೇ ಇದ್ದಿದ್ರಿಂದ ಅವ್ನ್ಯಾರು ಅಂತ ಊಹಿಸೋದೂ ಸ್ವಲ್ಪ ಕಷ್ಟವೇ ಆಗಿತ್ತು. ಜುಬ್ಬಾ ಹಾಕಿದ್ರೂ ಯಾವ ಸೆಂಟೂ ಇರ್ಲಿಲ್ಲ. ಬುದ್ದಿಜೀವಿನಾ ಅನ್ನೋಕೆ ಜೋಳಿಗೆ ಇರ್ಲಿಲ್ಲ. ಮುಖ ಗಂಟುಹಾಕಿದಂಗೆ ಇತ್ತು. ಡೈವರ್ ಹಿಂದಿನ ಸೀಟಲ್ಲಿ ಕೂತಿದ್ದ ಅವ ಯಾವಾಗ್ಲೋ ಕಿಟಕಿ ಹೊರಗೆ ಏನೋ ಹುಡುಕೋ ತರ ನೋಡ್ತಿರ್ತಿದ್ದ.. ಹಂಗಾಗಿ ಬಸ್ಸಲ್ಲಿರೋ ಯಾರೂ ಅವ್ನ ಮಾತಾಡ್ಸೋ ಉಸಾಬರಿಗೆ ಹೋಗಿರ್ಲಿಲ್ಲ. ನೂರ್ನಳ್ಳಿ ಬಸ್ಸಲ್ಲಿ ದಿನಾ ನೂರಾರು ಜನ ಓಡಾಡ್ತಾರೆ. ಆದ್ರೂ ಈ ವಿಚಿತ್ರ ವೇಷದವ್ನ ಬಗ್ಗೆ ಕೆಲವ್ರಿಗೆ ಕುತೂಹಲ, ಅನುಮಾನ ಬಂದ್ರೂ ಕೇಳೋ ಧೈರ್ಯ ಮಾಡಿರ್ಲಿಲ್ಲ.

ಬಸ್ಸು ಕುಲುಕಾಡ್ತಾ ಸಾಗ್ತಾ ಇತ್ತು. ಸ್ವಲ್ಪ ಹುಷಾರಾಗಿ ಓಡ್ಸಪ್ಪ ಡ್ರೈವರಪ್ಪ ಅಂದ್ರು ಹಿರಿಯರೊಬ್ರು ಈ ಕುಲುಕಾಟ ತಡ್ಯಕಾಗ್ದೆ. ಏನ್ ಮಾಡ್ಲಿ ಅಜ್ಜ ಚಂದ್ರ, ಮಂಗಳ ಗ್ರಾದಲ್ಲೂ ಈ ಪಾಟಿ ಗುಂಡಿ ಇದಾವೋ ಇಲ್ಲೋ ಗೊತ್ತಿಲ್ಲ. ನನ್ ಕರ್ಮ . ಏನ್ ಮಾಡ್ಲಿ ಅಂತ ರಸ್ತೆ ಮಾಡಿದ ಕಾಂಟ್ರಾಕ್ಟರ್ಗೆ, ದುಡ್ಡು ನುಂಗಿದ ಮತ್ತೊಬ್ಬ ದೊಡ್ಮನ್ಷಂಗೆ ಶಾಪ ಹಾಕ್ತಿದ್ದ ಡ್ರೈವರಣ್ಣ. ಬಸ್ಸು ತೀರಾ ತುಂಬಿ ಹೋಗ್ದಿದ್ರೂ ಕೆಲವರು ನಿತ್ತಿದ್ರು. ಡ್ರೈವರಿಗೆ ಪ್ರಶ್ನೆ ಹಾಕಿದ ವಯಸ್ಸಾದವ್ರಿಗೆ ಪಾಪ ಕುಲುಕಾಡೋ ಬಸ್ಸಲ್ಲಿ ನಿಲ್ಲೋದು ಸ್ವಲ್ಪ ಕಷ್ಟ ಆಗ್ತಿತ್ತು. ಆದ್ರೆ ಜಾಗ ಬಿಟ್ಕೊಡಿ ಅಂತ ಕೇಳೋಕೆ ಸ್ವಲ್ಪ ಮುಜುಗರ ಆಯ್ತು. ಕೊನೆಗೆ ಅಲ್ಲೇ ಪಕ್ಕ ಕೂತಿದ್ದ ಈ ವಿಚಿತ್ರ ಆಸಾಮಿ ಮೇಲೆ ಅವ್ರ ದೃಷ್ಟಿ ಬಿತ್ತು.

ಎಲ್ಲಿಗೋಗ್ತಿದೀಯಪ್ಪ ಅಂದ್ರು. ಅವ್ನು ತಿರ್ಗೂ ನೋಡ್ಲಿಲ್ಲ. ಹೊರಗೆ ನೋಡ್ತಿದ್ನಲ ಅದ್ಕೆ ತಾವು ಕರ್ದಿದ್ದು ಅವ್ನಿಗೆ ತಿಳಿಲಿಲ್ವೋ ತಾವು ಕರೀತಿರೋ ಭಾಷೆ ಅವ್ನಿಗೆ ಅರ್ಥ ಆಗ್ತಿಲ್ವಾ ಅನ್ನೋ ಸಂಶಯ ಬಂತು ಹಿರೀರಿಗೆ. ಇವ್ನು ಕೆಪ್ನೇನಪ್ಪ ಅಂತ ಆ ಹೊಸ್ಬನ ಪಕ್ಕ ಕೂತಿದ್ದ ನೂರ್ನಳ್ಳಿಯ ಒಬ್ನಿಗೆ ಕೇಳಿದ್ರು..ಇವ್ನೂ ಆ ವಿಚಿತ್ರ ಆಸಾಮೀನ ಮಾತಾಡ್ಸೋ ಗೋಜಿಗೆ ಹೋಗಿರ್ಲಿಲ್ಲ. ವಯಸ್ಸಾದೋರ ಸಡನ್ನಾದ ಪ್ರಶ್ನೆಯಿಂದ ತನ್ನ ಸೀಟಿಗೆ ಎಲ್ಲಿ ಸಂಚಕಾರ ಬಂತಪ ಅಂದ್ಕೊಂಡ ಇವ.
(ಮುಂದುವರಿಯುತ್ತದೆ..)


ಮುಂದೆ..
೧)ದೂರದ ಬೆಂಗ್ಳೂರಿನಲ್ಲಿ ಯಾರೋ ಬಾಂಬ್ ಹಾಕಿದೋನು ತಪ್ಪಿಸ್ಕಂಡಿದಾನಂತೆ ಅವ್ನು ಇವ್ನೇನಾ ಅಂತ..
.. ನೂರ್ನಳ್ಳೀಲಿ ಅವ: ಭಾಗ -೨