Monday, March 28, 2016

ಜಾಲ

ಆಗಾಗ ಒಳಸೇರೋ ಶುದ್ಧ ನೀರು ಖುಷಿ ಕೊಡುತ್ತೆ, ಆರೋಗ್ಯವನ್ನೂ. ಆದ್ರೆ ಆ ನೀರೊಳಗೇ ನಾವು ಸೇರಿದ್ರೆ ? ಕಚ್ಚೋ ಸೊಳ್ಳೆಯ ಸಾವಾಗೋ ಚಪ್ಪಾಳೆ ಹಿತವೀಯುತ್ತೆ. ಆದ್ರೆ ಸಾವೇ ಚಪ್ಪಾಳೆ ಹೊಡೆದು ನಮ್ಮ ಕರೆದ್ರೆ ? ಓದೋ ಕಥೆಯೊಂದು ಖುಷಿ ಕೊಡುತ್ತೆ. ಆದ್ರೆ ಅದೇ ಜಾಲವಾಗಿ ನಮ್ಮ ಸೆಳೆದ್ರೆ ?

ಊರಲ್ಲೊಂದು ಹೊಸ ಅಂಗಡಿ. ಹೆಸರು ಊರಾಗಿದ್ರೂ ಅದು ಹಳ್ಳಿಯೇನಲ್ಲ.ಹಂಗಂತ ಮಹಾನಗರಿಯೂ ಅಲ್ಲ. ಸಾವಿರದ ಸುಮಾರಿಗೆ ಜನರಿದ್ದ ಜಾಗವದು. ಅಲ್ಲಿನ ಜನಕ್ಕೆ ಅಂಗಡಿಗಳು ಹೊಸದಲ್ಲದಿದ್ದರೂ ತಮ್ಮೂರಿಗೆ ಪುಸ್ತಕದಂಗಡಿಯೊಂದು ಬಂದಿದ್ದು ಅಚ್ಚರಿ ಮೂಡಿಸಿತ್ತು. ಪುಸ್ತಕ ಅಂದ್ರೆ ಮಕ್ಕಳ ಪಠ್ಯಪುಸ್ತಕ, ದಿನಚರಿ ಪುಸ್ತಕ,ನೋಟ್ ಬುಕ್ ಬಿಟ್ರೆ ಕಥೆ ಪುಸ್ತಕವೆಂಬುದು ಊರ ಗ್ರಂಥಾಲಯದಲ್ಲೊಂದೇ ಸಿಗೋದು ಎಂಬ ಭಾವವಿರೋ ಜನಕ್ಕೆ ಈ ತರದ್ದೊಂದು ಅಂಗಡಿಯಿರಬಹುದಾ ಎಂಬ ಕಲ್ಪನೆಯೂ ಇರಲಿಲ್ಲ. ಹೊಸದೆಂಬುದ್ರ ಜೊತೆಗೆ ಆ ಅಂಗಡಿ ಕೆಲ ದಿನಗಳಲ್ಲೇ ಮತ್ತೊಂದು ಕಾರಣಕ್ಕೆ ಹೆಸರು ಮಾಡತೊಡಗಿತ್ತು. ಅದೇನಪ್ಪ ಅಂದ್ರೆ ಆ ಅಂಗಡಿಯಲ್ಲಿ ಏನಿದೆ ಅಂತ ನೋಡೋಕೆ ಹೋದ ನಾಲ್ಕೈದು ಹುಡುಗರು ಕೆಲದಿನಗಳಲ್ಲಿ ಮಾಯವಾಗಿದ್ರು !

ಈ ಅಂಗಡಿಯಲ್ಲೇ ಮಾಯವಾಗಿದ್ದಾರೆ ಎಂಬುದಕ್ಕೆ ಪುರಾವೆಗಳಿರದಿದ್ರೂ ಇದಕ್ಕೂ ಅವರು ಮಾಯವಾಗಿದ್ದಕ್ಕೂ ಸಂಬಂಧವಿದೆ ಅನ್ನೋದು ಊರವರ ನಂಬಿಕೆ. ಸಾಮಾನ್ಯ ಅಂಗಡಿಗಳು ಬೆಳಗ್ಗೆ ಬಾಗಿಲು ತೆಗೆದ್ರೆ ಇದು ಸಂಜೆ ತೆಗೆಯುತ್ತಿತ್ತು. ಯಾವಾಗ ಮುಚ್ಚುತ್ತಿತ್ತೋ ಯಾರಿಗೂ ಗೊತ್ತಿಲ್ಲ. ಪೇಟೆಯಲ್ಲೆಲ್ಲಾ ಹತ್ತಕ್ಕೆ ಅಂಗಡಿ ಮುಚ್ಚಬೇಕೆಂಬ ನಿಯಮವಿದ್ರೂ ಇಲ್ಲಿನ ಅಂಗಡಿಗಳೆಲ್ಲಾ ಒಂಭತ್ತಕ್ಕೇ ಬಾಗಿಲು ಹಾಕುತ್ತಿದ್ದರಿಂದ ರಾತ್ರಿ ಪಾಳಿಯ ಪೋಲೀಸಪ್ಪ ಅಂಗಡಿ ಮುಚ್ಚಿಸೋ ಸುದ್ದಿಗೆ ಹೋಗುತ್ತಿರಲಿಲ್ಲ. ಹಾಗಾಗಿ ಈ ಅಂಗಡಿ ಯಾವಾಗ ಮುಚ್ಚತ್ತೋ ಎನ್ನುವ ಬಗ್ಗೆ ಅವನಿಗೂ ಊರವರಿಗಿಂತ ಹೆಚ್ಚು ಗೊತ್ತಿರಲಿಲ್ಲ  ! ಒಂದೆರಡು ದಿನ ಗಸ್ತಿಗೆ ಹೋದಾಗಲೂ ಅಂಗಡಿಯ ಬಳಿ ಕಂಡ ಬೆಳಕು ಏನೋ ದಿಗಿಲು ಹುಟ್ಟಿಸಿ ಹಾಗೇ ವಾಪಾಸ್ಸಾಗಿದ್ದ ! ಆ ಅಂಗಡಿಯವನಿಗೆ ಹಗಲುನಿದ್ದೆಯ ರೋಗವಂತೆ. ಹಾಗಾಗಿ ಹಗಲೆಲ್ಲಾ ಅಂಗಡಿಯಲ್ಲೇ ಮಲಗಿರೋ ಅವನು ಸಂಜೆಯ ಮೇಲೇ ತನ್ನೆಲ್ಲಾ ಕೆಲಸಗಳನ್ನು ಮಾಡೋದಂತೆ ಎಂದು ಕೆಲವರೆಂದರೆ ಆ ಅಂಗಡಿ ಮಧ್ಯರಾತ್ರಿಯವರೆಗೂ ತೆಗೆದಿರುತ್ತಂತೆ. ರಾತ್ರೆಯೆಲ್ಲಾ ಎದ್ದಿರೋ ಅವ ಏನೋ ಮಾಟ ಮಂತ್ರಗಳನ್ನು ಮಾಡ್ತಿರಬೇಕು. ಅದಕ್ಕೇ ನಮ್ಮ ಹುಡುಗರು ಮಾಯವಾಗಿದ್ದಾರೆ ಎಂಬ ಊಹಾಪೋಹಗಳು ಕಂತೆ ಕಂತೆಯಾಗಿ ಊರಲ್ಲೆಲ್ಲಾ ಹಬ್ಬಲು ಹೆಚ್ಚು ದಿನ ಬೇಕಾಗಿರಲಿಲ್ಲ.

ಅಂಗಡಿ ಬಗ್ಗೆ ದಿನಕ್ಕೊಂದು ಕಥೆ ಬೆಳೀತಿದ್ರೆ ಆ ಊರ ಹಿರಿಯರು ಅನಿಸಿಕೊಂಡವರಿಗೆ ಅದನ್ನು ಕೇಳಿಕೊಂಡು ಸುಮ್ಮನೇ ಕೂರಲು ಆಗಲಿಲ್ಲ. ಹುಡುಗರು ಕಾಣೆಯಾಗಿ  ಮೂರ್ನಾಲ್ಕು ದಿನಗಳಾದ್ರೂ ಅವರ ಸುಳಿವಿರಲಿಲ್ಲ. ಪುಸ್ತಕದ ಅಂಗಡಿ ಅಂತ ಬೋರ್ಡ್ ಹಾಕ್ಕಂಡಿರೋ ಆ ಅಂಗಡಿಯಲ್ಲಿ ಏನೇನಿದೆ, ಇದಕ್ಕೂ ನಮ್ಮ ಹುಡುಗರ ಕಣ್ಮರೆಗೂ ಏನಾದ್ರೂ ಸಂಬಂಧವಿದೆಯಾ ನೋಡೇ ಬಿಡೋಣ ಅಂತ ನಾಲ್ಕೈದು ಜನ ಸೇರಿಕೊಂಡು ಹೊರಟ್ರು ಅಂಗಡಿ ಕಡೆಗೆ. ಅವರ ಎಣಿಕೆಯಂತೆ ಅಂಗಡಿ ತೆರೆದಿತ್ತು. ಅಂಗಡಿಯಾತನೂ ನಗುನಗುತ್ತಾ ಒಳಗೆ ಕರೆದ್ರೆ ಇವರಿಗೇನೋ ಭಯ. ಒಳಗೆ ಕರೆದು ಏನಾದ್ರೂ ಮಾಡಿದ್ರೆ ಅಂತ. ಹೇಗಿದ್ರೂ ಐವರಿದ್ದೀವಲ್ಲ ಅನ್ನೋ ಧೈರ್ಯದಲ್ಲಿ, ನೆನಪಾದ ದೇವರನ್ನೆಲ್ಲಾ ಬೇಡುತ್ತಾ ಅಂಗಡಿಯ ಒಳಗಡಿಯಿಟ್ರು. ನೋಡ್ತಾರೆ ಅಲ್ಲಿ ಪುಸ್ತಕಭಂಡಾರವೇ ಇದೆ. ರಾಮಾಯಣ, ಮಹಾಭಾರತ, ಪುರಾಣನಾಮ ಚೂಡಾಮಣಿ, ಶಂಕರ ವಿಜಯ..ಹೀಗೆ ಇಲ್ಲಿಯವರೆಗೆ ಹೆಸರು ಕೇಳಿದ್ದೆಲ್ಲಾ ಇದೆಯಲ್ಲಿ. ಇಂತಹ ಒಳ್ಳೆಯ ಸಂಗ್ರಹವಿರೋ ಅಂಗಡಿಯ ಬಗ್ಗೆ ಅನಗತ್ಯವಾಗಿ ಅಪಪ್ರಚಾರವಾಗ್ತಾ ಇದೆಯಲ್ಲ. ಎಲ್ಲಿ ಹೋಗಿದ್ದಾರೋ ನಮ್ಮ ಹುಡುಗರು ಇಂದೋ ನಾಳೆಯೋ ಬರುತ್ತಾರೆ ಬಿಡು ಎಂದುಕೊಂಡು ಮರಳಬೇಕನ್ನೋ ಹೊತ್ತಿಗೆ ಅಂಗಡಿಯವನೇ ಇವರಿಗೆ ಅಡ್ಡಬಂದ.

ನಮ್ಮ ಅಂಗಡಿಗೆ ಬಂದು ಹಾಗೇ ಹೋಗುವುದು ಅಂದರೇನು ? ಒಂದಾದರೂ ಪುಸ್ತಕ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡಿದ. ಬರುವಾಗೇನೋ ಭಂಡ ಧೈರ್ಯ ಮಾಡಿ ಬಂದಿದ್ದರು. ಆದರೆ ಅಲ್ಲಿ ಪುಸ್ತಕ ತೆಗೆದುಕೊಳ್ಳಬೇಕಾಗಬಹುದು ಅಂತ ಅವರ್ಯಾರೂ ಎಣಿಸಿರಲಿಲ್ಲ. ಹಾಗೆ ಅಷ್ಟು ದುಡ್ಡೂ ತಂದಿರಲಿಲ್ಲ. ಬೆ ಬೆ ಬೆ ಎನ್ನುತ್ತಾ,ಒಬ್ಬರ ಮುಖವನ್ನೊಬ್ಬರು ನೋಡೋಕೆ ಶುರು ಮಾಡಿದ್ರು. ಈಗ ದುಡ್ಡಿಲ್ಲದಿದ್ದರೆ ಪರವಾಗಿಲ್ಲ. ನಾಳೆಯೋ ನಾಡಿದ್ದೋ ಕೊಡಿ ಅಂತ ಅವರಿಗೊಂದಿಷ್ಟು ಪುಸ್ತಕ ಕೊಟ್ಟು ಕಳಿಸಿದ್ದ. ಅವರೆಲ್ಲಾ ಆಸೆಗಣ್ಣುಗಳಿಂದ ಯಾವ ಪುಸ್ತಕಗಳನ್ನು ಗಮನಿಸುತ್ತಿದ್ದರೂ ಎಂಬುದನ್ನು ಅವನ ಚುರುಕು ಕಣ್ಣುಗಳು ಗುರುತಿಸಿಯಾಗಿತ್ತು !

ಇನ್ನೆರಡು ದಿನಗಳಲ್ಲಿ ಊರಲ್ಲಿ ಹೊಸ ಸುದ್ದಿ. ಕಳೆದು ಹೋದ ಹುಡುಗರನ್ನು ಹುಡುಕಹೋದ ಊರ ಪಂಚರು ನಾಪತ್ತೆಯಾಗಿದ್ದಾರೆ. ಅವರ ಕುಟುಂಬಗಳೂ ಕಾಣದೆ ಅವರ ಮನೆಗೆ ಬೀಗ ಬಿದ್ದಿದೆ ಅನ್ನೋದೇ ಆ ಸುದ್ದಿ !  ಪಂಚರನ್ನು ಪತ್ತೆ ಮಾಡೋಕೆ ಅಂತ ಹೋದ ಯುವಕರ ದಂಡೂ ಮಾಯವಾಗಿದೆ ಅನ್ನೋ ಸುದ್ದಿ ಇನ್ನೂ ಬೇಗ ಹರಡತೊಡಗಿತ್ತು. ಪೇಪರನ್ನು ಓದುತ್ತಿದ್ದ ಅಪ್ಪನಿಗೆ ಶಾಲೆಗೆ ಹೋದ ತನ್ನ ಮಗ ಇನ್ನೂ ಮನೆಗೆ ಬಾರದಿರುವ ಬಗ್ಗೆ, ಪತ್ನಿಗೆ ಕೆಲಸಕ್ಕೆ ಹೋದ ತನ್ನ ಪತಿ ಇನ್ನೂ ಮರಳದಿರುವ ಬಗ್ಗೆ , ದೇವಸ್ಥಾನಕ್ಕೆ ಹೋದ ಅತ್ತೆ ಇನ್ನೂ ಮರಳದಿರುವ ಬಗ್ಗೆ ಮಾವನಿಗೆ, ತನ್ನ ನಾದಿನಿ ಕಾಣೆಯಾಗಿರುವ ಬಗ್ಗೆ ಸೊಸೆಗೆ.. ಹೀಗೆ ಊರವರಿಗೆಲ್ಲಾ ಒಬ್ಬರಲ್ಲಾ ಒಬ್ಬರು ಕಾಣೆಯಾಗಿರುವ ಚಿಂತೆ ಕಾಡತೊಡಗಿತು. ಎಲ್ಲರ ಬೊಟ್ಟೂ ಪುಸ್ತಕದಂಗಡಿಯ ಕಡೆಗೆ. ಆ ಪೋಲೀಸಪ್ಪ ಮತ್ತವನ ಸಂಗಡಿಗರು ಏನು ಮಾಡ್ತಾ ಇದ್ದಾರೆ. ನಮ್ಮವರನ್ನ ಹುಡುಕಿಕೊಡಿ ಅಂತ ಕೇಳೋದೇ ಸರಿ ಇವತ್ತು ಅಂತದುಕೊಂಡು ಒಂದಿಷ್ಟು ಜನ ಗುಂಪಾಗಿ ಪೋಲೀಸ್ ಕಛೇರಿಗೆ ಹೊರಡೋಕೆ ಶುರು ಮಾಡಿದ್ರು. ಪುಸ್ತಕದಂಗಡಿ ಯಥಾಪ್ರಕಾರ ಬಾಗಿಲು ಹಾಕಿತ್ತು. ಅದು ತೆಗೆಯುವವರೆಗೆ ತಾಳ್ಮೆಯಿಲ್ಲ. ಅದರ ಅಂಗಡಿಯಾತನನ್ನು ಹುಡುಕೋಣವೆಂದ್ರೆ ಅವ ಎಲ್ಲಿರುತ್ತಾನೆ ಎಂದು ಪೋಲೀಸರಿಗೂ ಗೊತ್ತಿಲ್ಲವಲ್ಲ. ತಮ್ಮವರನ್ನು ಕಳೆದುಕೊಂಡ ನೋವಿಗೆ ಆ ಅಂಗಡಿಯ ಮೇಲೊಂದಿಷ್ಟು ಕಲ್ಲುಗಳು ಬಿತ್ತು. ಪೋಲೀಸರಿಗೊಂದಿಷ್ಟು ಧಿಕ್ಕಾರಗಳು ಬೀಳಲು ಶುರುವಾಯ್ತು.  ಹೊತ್ತೇರುತ್ತಿದ್ದಂತೆ ಧಿಕ್ಕಾರಗಳ ದನಿ ಏಳುತ್ತಲೇ ಹೋಯಿತು. ಆ ದನಿ ಕೇಳಿಸಿಕೊಂಡ ಇನ್ನೊಂದಿಷ್ಟು ಜನ  ಮನೆಗೆ ಬೀಗವನ್ನೂ ಹಾಕದೇ ಮಾಡುತ್ತಿದ್ದ ಕೆಲಸಗಳ ಹಾಗಾಗೇ ಬಿಟ್ಟು ಪೋಲೀಸ್ ಇಲಾಖೆಯತ್ತ ತೆರಳತೊಡಗಿದ್ರು.
ಧಿಕ್ಕಾರಗಳ ಮೇಲೆ ಧಿಕ್ಕಾರದ ಕೂಗು ಹೊತ್ತೇರಿದಂತೆ ಹೆಚ್ಚುತ್ತಲೇ ಸಾಗಿತು !

ಇದ್ದಕ್ಕಿದ್ದಂತೆ ಕತ್ತಲು ! ಸುತ್ತಲಿದ್ದ ದೀಪಗಳೆಲ್ಲಾ ಆರಿದಂತೆ. ಕತ್ತಲೆಗೆ ಕಣ್ಣುಗಳನ್ನ ಹೊಂದಿಸಿಕೊಳ್ಳೋ ಹೊತ್ತಿಗೆ ಪೋಲೀಸ್ ವಾಹನದ ಸದ್ದು. ಕಿರ್ರೆನ್ನೋ ಧ್ವನಿವರ್ಧಕ ಸರಿಯಾದ ನಂತರವೊಂದು ಪ್ರಕಟಣೆ. ಸಾಗರದ ಜನತೆಗೆ ಆರಕ್ಷಕ ಇಲಾಖೆಯ ಪ್ರಕಟಣೆ. ದಿನಪತ್ರಿಕೆ, ವಾರಪತ್ರಿಕೆ, ಮೊಬೈಲುಗಳಲ್ಲಿ ಕಥೆಯೊಂದನ್ನು ಪ್ರಕಟಿಸಿ ಅದನ್ನು ಓದೋ ಎಲ್ಲರನ್ನೂ ಮರಳು ಮಾಡಿ ನಂತರ ಅವರ ಮನೆಯನ್ನು ದೋಚುವ ಕಳ್ಳರ ಜಾಲವನ್ನು ಪತ್ತೆಹಚ್ಚಿದ್ದೇವೆ. ಕಥೆಯೊಳಗೆ ಇರೋರೆಲ್ಲ ವಾಸ್ತವಕ್ಕೆ ಬನ್ನಿ. ನೀವಿದ್ದಿದು ನವಿಲೂರ ಕಥೆಯ ಗುಂಗಲ್ಲಿ. ನೀವು ಓದುತ್ತಿದ್ದ ಕಥೆಯಿಂದ ನಿಮ್ಮನ್ನು ಹೊರತರಲೆಂದೇ ಸದ್ಯಕ್ಕೆ ಕರೆಂಟ್ ತೆಗೆಯಲಾಗಿದೆ.  ನಿಮ್ಮ ಮಕ್ಕಳೆಲ್ಲಾ ಮನೆಯಲ್ಲೇ ಇದ್ದಾರೆ ನೋಡಿ. ಅವರೂ ನಿಮ್ಮ ತರಹ ಕಥೆಯ ಜಾಲದೊಳಗಿರಬಹುದು !..ಎದ್ದೇಳಿ. ಅವರನ್ನೂ ಅದರಿಂದ ಹೊರತನ್ನಿ.. ಸಾಗರದ ಜನತೆಗೆ..ಪ್ರಕಟಣೆ. ಅವರ ಪ್ರಕಟಣೆಯ ಅರಗಿಸಿಕೊಳ್ಳಲು ಪ್ರಯತ್ನಿಸಿದ ಜನ ಸುತ್ತ ನೋಡಿದರೆ ಹೌದು. ಪುಸ್ತಕದಂಗಡಿಯೂ ಇಲ್ಲ, ಅದರ ಯಜಮಾನನೂ ಇಲ್ಲ. ತಮ್ಮ ಕೈಯಲ್ಲಿ ಹಿಡಿದಿದ್ದ ಪೇಪರ್, ಪಕ್ಕದಲ್ಲಿದ್ದ ಮೊಬೈಲ್ ನಗುತ್ತಿತ್ತು.

ಈ ಕಥೆ "ಪಂಜು"ವಿನಲ್ಲಿ ಪ್ರಕಟವಾಗಿದೆ

Sunday, March 27, 2016

ನಾನೋದಿದ ಪುಸ್ತಕ ತುಳಸೀದಳ

ಚಿತ್ರಕೃಪೆ:newshunt.com
ಒಂದು ಪುಸ್ತಕವನ್ನ ಒಂದೇ ಗುಕ್ಕಿಗೆ ಓದಿ ಮುಗಿಸದೇ ಬಹಳ ಸಮಯವಾಗಿತ್ತು. ಮಧ್ಯಾಹ್ನ ಒಂಚೂರು ಓದೋಣವೆಂದು ಹಿಡಿದುಕೊಂಡು ಪುಸ್ತಕವನ್ನ ಈಗ ಮುಗಿಸಿಟ್ಟ ಮೇಲೇ ನೆಮ್ಮದಿ ! ದೆವ್ವವೆನ್ನೋದು ಮೂಡನಂಬಿಕೆಯೆನ್ನಿ,ಭಾವನೆಗಳ ಭ್ರಮೆಯೆನ್ನಿ, ನಂಬುವವರಿಗೆ ದೇವರೆಷ್ಟು ಸತ್ಯವೋ ದೆವ್ವವೂ ಅಷ್ಟೇ. ಅಣು-ಪರಮಾಣುಗಳೆಂದು ವಸ್ತುವನ್ನು ಒಡೆಯುತ್ತಾ ಹೋದ ವಿಜ್ಞಾನಿಗಳು ಹಿಗ್ಸ್ ಬೋಸಾನುಗಳೆಂಬ ವಿವರಣೆಗೆ ಸಿಕ್ಕದ್ದಕ್ಕೆ ಗಾಡ್ಸ್ ಪಾರ್ಟಿಕಲ್ಲೆಂದು ಹೆಸರಿಟ್ಟಿದ್ದಕ್ಕೂ ,ವಿವರಣೆಗೆ ಸಿಕ್ಕದಕ್ಕೆಲ್ಲ,ಎದುರಾಗೋ ಒಳಿತು ಕೆಡಕುಗಳಿಗೆಲ್ಲಾ ದೇವರನ್ನೋ ದೆವ್ವವನ್ನೋ ಹೊಣೆಯಾಗಿಸೋ ಜನರಿಗೂ ಸಾಮ್ಯತೆ ಕಂಡರದು ಅಚ್ಚರಿಯಲ್ಲ. ಮಾಟ-ಮಂತ್ರ, ಹಿಪ್ನೊಟಿಸಂ, ಅನಾಟಮಿ, ಗಣಿತ, ಮೋರ್ಸ್ ಕೋಡ್, ಫಿಸಿಕ್ಸ್ .. ಹೀಗೆ ಹಲವಾರು ವಿಷಯಗಳ ಸುತ್ತ ಸುತ್ತೋ ಕಾದಂಬರಿಯಲ್ಲಿ ಮಾನವನ ದುರಾಸೆಗೆ ಮುಗ್ದ ಜೀವಗಳು ಹೇಗೆ ಬಲಿಯಾಗುತ್ತವೆಂಬ ಪ್ರಸಂಗಗಳು ಇಂದೂ ಪ್ರಸ್ತುತವೆನಿಸುತ್ತದೆ. ರೇಕಿ, ಪ್ರಾಣಿಕ್ ಹೀಲಿಂಗ್, ಸುದರ್ಶನ ಕ್ರಿಯೆ, ಪಿರಮಿಡ್ಗಳ ಹಿಂದೆ ವೈಜ್ಜಾನಿಕ ನೆಲೆಗಟ್ಟಿದೆ ಎಂದರೆ ಮೂಲಾಧಾರ ಚಕ್ರ, ಪ್ರಾಣಾಯಾಮ, ಸುಷುಮ್ನು , ಢಾಕಿನಿಯೆಂಬ ತತ್ವಗಳಿಗೂ ಇರಬೇಕಲ್ಲ. ಕಣ್ಣಿಗೆ ಕಂಡಿದ್ದಷ್ಟೇ ಸತ್ಯವೆಂದರೆ ಕಾಣದ ಅಣುವನ್ನೇಗೆ ಒಪ್ಪೋದು, ಉಸಿರಾಡೋ ಆಮ್ಲಜನಕವನ್ನೇಗೆ ಒಪ್ಪೋದು ಅನ್ನೋ ವಾದಸರಣಿಗಳನ್ನೆಲ್ಲಾ ಸದ್ಯಕ್ಕೊಂದಿಷ್ಟು ಪಕ್ಕಕ್ಕಿಟ್ಟು ಪೂರ್ವಾಗ್ರಹವಿಲ್ಲದೇ ಓದುವುದಾದರೆ ಒಂದೊಳ್ಳೆ ಪುಸ್ತಕ "ತುಳಸೀದಳ"

ಬ್ಲಾಕ್ ಮಾಸ್ ಎಂದು ಹಣಮಾಡುವವರು, ಕಾಷ್ಮೋರ ಎಂದು ಪೆಟ್ರೋಲಿನಲ್ಲಿ ಕೈಸುಟ್ಟುಕೊಂಡವರು, ೨೩೪ ಬಿ.ಸಿ ಎಂದು ಬರೆದುಕೊಂಡಿದ್ದ ಶವಪೆಟ್ಟಿಗೆ ! ಇವೆಲ್ಲಾ ಜನರ ಮುಗ್ದತೆಯ ದುರುಪಯೋಗ ಪಡೆಯೋ,ಗೇಲಿ ಮಾಡೋ ಪ್ರಸಂಗಗಳಾದ್ರೆ , ಲಂಪಟ ಸ್ವಾಮಿ, ಅವನ ಬಾಸ್ ,ದುಡ್ಡಿನಾಸೆಗೆ ತಾನೇ ಬಲಿಯಾದ ಸಾಹೀರ್ , ಪುಟ್ಟಯ್ಯ ಮತ್ತು ಸರಸ್ವತಿಯರ ಷಡ್ಯಂತ್ರಗಳು ನಮ್ಮೊಡನೆಯೂ ಇರಬಹುದಾದ ವ್ಯಕ್ತಿತ್ವಗಳ ಸಾಣೆ ಹಚ್ಚುತ್ತದೆ. ಬಿಸ್ತಾದ ಮಾಂತ್ರಿಕನ ಕೃತ್ಯಗಳನ್ನು ಅವನ ಸೇಡು ಸಮರ್ಥಿಸಿದಿದ್ದರೂ ಅವನು ಬದುಕಿದ್ದೇ ಹಾಗೆ. ಅವನ ದೃಷ್ಠಿಯಲ್ಲಿ ಅದೇ ಸರಿ. ಮಧ್ಯೆ ಮಧ್ಯೆ ಬಂದು ಹೋಗೋ ಇಸ್ಮಾಯಿಲ್, ಸಂತಾನ ಫಕೀರನಂತಹ ಪಾತ್ರಗಳು ಕಥೆಗೆ ಆಗಾಗ ಒಂದಿಷ್ಟು ಟ್ವಿಸ್ಟ್ ಕೊಡೋದ್ರ ಮಜಾವನ್ನು ಪುಸ್ತಕವನ್ನು ಓದೇ ತಿಳಿಯಬೇಕು.

ಇನ್ನು ಶೀರ್ಷಿಕೆಯಲ್ಲೇ ಇರುವಂತೆ ಕಥೆಯ ನಿಜವಾದ ನಾಯಕಿ ಎಂದರೆ ಬಾಲಕಿ ತುಳಸಿ ಮತ್ತವಳ ಕುಟುಂಬ. ಅವಳ ಸಾವಿಗೆ ಅನೇಕರು ತರತರದಲ್ಲಿ ಹೊಂಚು ಹಾಕ್ತಿದ್ರೆ, ಅವಳು ಮರಣಶಯ್ಯೆಯಲ್ಲಿ ಒದ್ದಾಡ್ತಿದ್ರೆ ಓದುಗನಿಗೆ ಈ ಕಷ್ಟ ಯಾವಾಗ ಮುಗಿಯುತ್ತಪ್ಪ, ಯಾವಾಗ ಬದಲಾಗೋದಪ್ಪ ಅನ್ನೋ ಕುತೂಹಲ ಕೊನೆಯ ಘಟ್ಟದವರೆಗೂ ಓದಿಸಿಕೊಳ್ಳುತ್ತೆ. ಇನ್ನು ಇಂಜಿನಿಯರ್ ಶ್ರೀಧರ್ ಮತ್ತವನ ಕಂಪೆನಿಯ ಬಾಸ್, ಅವನ ಪತ್ನಿ ಶಾರದೆ ಮತ್ತವಳ ಮೂಗ ತಮ್ಮ, ಅಮಾಯಕಿ ಅನಿತಾ, ಅಬ್ರಕದಬ್ರ ಎಂದೇ ಖ್ಯಾತವಾಗೋ ಬ್ರಾಹ್ಮಿಣ್, ವಕೀಲ ವಿದ್ಯಾಪತಿ ಕಥೆಯಲ್ಲೆಲ್ಲಾ ಆವರಿಸಿಕೊಂಡ್ರೆ ನಂತರ ಬರೋ ಸೈಕಾಲಜಿಸ್ಟ್ ಫ್ರೊಫೆಸರ್ ಜಯದೇವ, ಡಾಕ್ಟರ್ ಪಾರ್ಥಸಾರಥಿ ಏಕಮುಖವಾಗಿದ್ದ ಕಥೆಗೆ ಮತ್ತೊಂದು ಮುಖವನ್ನೇ ಕೊಡುತ್ತಾರೆ. ಮನೆಯಾಳು ರಾಮಯ್ಯನ್ನಂತೂ ಮರೆಯೋಕೆ ಸಾಧ್ಯವೇ ಇಲ್ಲ ! ಇನ್ನು ಬಂದೂ ಬರದಂತಿರೋ ಆಶ್ರಮದ ಮಂಗಳಮ್ಮ, ಇಂಜಿನಿಯರ್ ಸುಧೀರ್ ಕೂಡ ಮುಖ್ಯ ಘಟ್ಟಗಳಲ್ಲಿ ಕತೆಯ ವೇಗ ಹೆಚ್ಚಿಸುತ್ತಾರೆ.  ಒಟ್ನಲ್ಲಿ ನಾ ಚಿಕ್ಕಂದಿನಿಂದ ಹೆಸರು ಕೇಳ್ತಿದ್ದ ಪುಸ್ತಕ ಓದೋ ಮುಹೂರ್ತ ಬಂದಿದ್ದು ಇವತ್ತು ! ನಾನೇನು ಯಂಡಮೂರಿಯವರ ಹುಟ್ಟಾ ಫ್ಯಾನಲ್ಲ. ಆದ್ರೂ ಪುಸ್ತಕವೊಂದು ಆರು ಘಂಟೆಗಳ ಕಾಲ ನಿಮ್ಮ ಗಮನ ಹಿಡಿದಿಡುತ್ತೆ ಅಂದ್ರೆ ಅಂತದ್ದೊಂದರ ಬಗ್ಗೆ ವಾವ್ ಅನ್ನದೇ ಇರೋಕೆ ಮನಸ್ಸು ಬರಲ್ಲ. ಇನ್ನೂ ಅದನ್ನೋದದೇ ಇದ್ದವರಿಗೆ ಓದಲು ಮರೆಯದಿರಿ ಅಂತ ಹೇಳೋಕೂ ಮರೆಯೊಲ್ಲ :-) ಅಂದಾಗೆ ಡೈಲಿ ಹಂಟ್(ಮುಂಚಿನ ನ್ಯೂಸ್ ಹಂಟ್) ಅಲ್ಲಿ ಕನ್ನಡ ಪುಸ್ತಕಗಳನ್ನೂ ಖರೀದಿಸಬೇಕೆಂಬ ಮಾಹಿತಿಯನ್ನ ವಿಕಾಸಣ್ಣ ನೀಡಿರದಿದ್ರೆ ಪ್ರಾಯಶ: ನಾನು ಆ ಆಪ್ನ install ಮಾಡಿಕೊಳ್ಳುತ್ತಿರಲಿಲ್ಲ, ಅದರ ಹುಡುಕಾಟದಲ್ಲಿ ಇವತ್ತು ಅಚಾನಕ್ಕಾಗಿ ಈ ಪುಸ್ತಕ ಸಿಗುತ್ತಿರಲಿಲ್ಲ ಅನ್ನಿಸುತ್ತೆ. ಹಾಗಾಗಿ ವಿಕಾಸಣ್ಣಂಗೊಂದು ಧವಾ.

Friday, March 25, 2016

ಹೋಳಿ

ಹ್ಯಾಪಿ ಹೋಲಿ,ಹ್ಯಾಪಿ ಹೋಳಿ ಅಂತ ಕೂಗಾಡ್ತಿದ್ದ ಹುಡುಗ್ರು ಕೇರಿಲೆಲ್ಲಾ ಓಡಾಡ್ತಿದ್ರೆ ಅಂಗಳಗಳಲ್ಲಿನ ರಂಗೋಲಿಗಳು ಬಣ್ಣ ತುಂಬಿಕೊಳ್ತಿದ್ದವು. ಹೋಳಿ ಅಂದ್ಕೊಂಡು ಯಾರ್ಯಾರು ಬಂದು ನನ್ನ ಬಿಳಿಸೀರಿಗೆ ಬಣ್ಣ ಹಾಕ್ತಾರೋ ಅಂತ ಹೆದರ್ಕೊಂಡು ಮನೆಯೊಳಗೇ ಕೂತ ರಂಗಜ್ಜಿ, ಮಕ್ಕಳ ಜೊತೆಗೆ ತಾವೂ ಮಕ್ಕಳಾಗಿ ಮೈಯೆಲ್ಲಾ ಬಣ್ಣವಾಗಿದ್ದ ಸಾಕಜ್ಜ, ಹೋಳಿಯ ಬಣ್ಣಗಳಿಗಿಂತ ತನ್ನೊಂದಿಗೆ ಆಡೋಕೆ ಬರ್ತಿದ್ದ ಮಕ್ಕಳನ್ನು ಖುಷಿಯಿಂದ ನೋಡ್ತಿದ್ದ ಬೀದಿನಾಯಿ ಗುಂಡಣ್ಣ, ಬೀದಿಯ ಹುಡುಗರೆಲ್ಲಾ ಹೋಳಿ ಆಡ್ತಾ ಇದ್ರೆ ತಾನೂ ಅವರ ಜೊತೆ ಸೇರಿಕೊಳ್ಳಲಾ ಬೇಡವ ಎಂಬ ಗೊಂದಲದಲ್ಲೇ ತಮ್ಮ ಅಪಾರ್ಟ್ ಮೆಂಟಿನ ಕಿಟಕಿಯಿಂದ ನೋಡ್ತಿದ್ದ ರಾಹುಲ್..ಹೀಗೆ ಬೀದಿಯಲ್ಲೊಂದು ಬಣ್ಣಗಳ, ಭಾವಗಳ ಹೋಳಿ
ಹ್ಯಾಪಿ ಹೋಳಿ,ಹ್ಯಾಪಿ ಹೋಳಿ ಅಂತ ದಾರೀಲಿ ಬರ್ತಿದ್ದ ಮಕ್ಕಳಿಗೆಲ್ಲಾ ಅವಳು ಬಣ್ಣ ಎರಚ್ತಾ ಇದ್ರೆ ಹಾಕಿಸಿಕೊಂಡ ಮಕ್ಕಳೂ ಹೋಳಿ ಹೋಳಿ ಅಂದ್ಕೊಂಡು ಅವ್ಳ ಕೈಯಲ್ಲಿದ್ದ ಬಣ್ಣ ತಗೊಂಡು ಅವ್ಳಿಗೇ ಒರಸ್ತಿದ್ರು. ಹಾಕಿಸಿಕೊಳ್ಳೋಕೆ ಒಪ್ಪದ ಮಕ್ಕಳನ್ನ ಒಂದಿಷ್ಟು ದೂರ ಅಟ್ಟಿಸಿಕೊಂಡಾದ್ರೂ ಹೋಗೋಳು. ಅವಳಿಗೆ ಹಾಕೋಕೆ ಆಗ್ದೇ ಇದ್ರು ಓಡ್ತಿದ್ದ ಮಕ್ಕಳ ಎದುರಿಗೆ ಬರೋ ಇನ್ಯಾರಾದ್ರೂ ಬಣ್ಣ ಹಾಕಿ ಬಿಡೋರು. ಹೆ ಹೆ, ಹೋ ಎಂಬ ಕೂಗಾಟವಲ್ಲಿ. ಭಾರತದ ಕ್ರಿಕೆಟ್ ಮ್ಯಾಚಲ್ಲಿ ಫೋರೋ, ಸಿಕ್ಸೋ ಹೊಡೆದಾಗ ಅಥವಾ ನಮ್ಮ ಬೌಲರ್ಗಳಿಗೆ ವಿಕೆಟ್ ಸಿಕ್ಕಾಗ ಜನ ಚೀರೋ ತರ. ಯಾರಾದ್ರೂ ಬಣ್ಣ ಹಾಕ್ಲಿ ಅಂತ್ಲೇ ಬಿಳಿ ಬಟ್ಟೆ ಹಾಕ್ಕೊಂಡು ಆ ರಸ್ತೆಯಲ್ಲಿ ಓಡಾಡ್ತಿದ್ದ ಜನರಿಗೂ ಅವಳ ಬಣ್ಣದ ರೇಚನವಾಗಿತ್ತು. ಯಾರಾದ್ರೇನು ಖುಷಿ ಹಂಚ್ಕೊಳ್ಳೋಕೆ ? ಹೋಳಿಗೆ ಬಣ್ಣ ಹಾಕೋಕೆ ?! ಹೋಗ್ತಿದ್ದ ಬಸ್ಸುಗಳಿಗೇ ಬಣ್ಣ ಎರಚ್ತಾರಂತೆ , ಇನ್ನು ತಮ್ಮದೇ ಬೀದೀಲಿ ನಡ್ಕೊಂಡು ಹೋಗೋರ್ನ ಬಿಡ್ತಾರಾ ? ಬಣ್ಣಗಳಲ್ಲಿ ಮಿಂದೆದ್ದ ಖುಷಿಯ ಬಗ್ಗೆ ವಿಧಿಗೂ ಅಸೂಯೆಯಾಗಿತ್ತು ಅನ್ಸತ್ತೆ. ಯಾರ್ರೋ ಅದು ಆ ಹುಚ್ಚಿ ಜತೆ ಬಣ್ಣ ಆಡೋರು ಎಂಬ ದನಿಯಾಗಿ ಹೊರಬಿದ್ದಿತ್ತದು. ಹುಡುಗರ ಮುಗ್ದತೆಯಲ್ಲಿನ ಖುಷಿ ಅಪರಾಧಿ ಪ್ರಜ್ಞೆಯೊಂದಿಗೆ ಸ್ಥಬ್ದವಾಗಿತ್ತು !

ಶಾಲೆಗೆ ಹೋಗೋ ಸಮಯದಲ್ಲಿ ತನ್ನದೇ ವಯಸ್ಸಿನ ಮಕ್ಕಳು ಗೋಲಿ, ಬುಗುರಿ ಆಡೋದನ್ನ ಕಂಡ್ರೆ ರಾಹುಲ್ಲಿನ ಮನಸ್ಸಲ್ಲೂ ಆಸೆ. ತಾನೂ ಅವರ ಜೊತೆ ಸೇರ್ಕೋಬೇಕು ಅಂತ. ಆದ್ರೆ ಮನೇಲಿ ಬಿಟ್ರೆ ತಾನೆ. ಇವನಿಗೂ ಅವರಿಗೂ ಇವನ ಅಪಾರ್ಟ್ಮೆಂಟಿಗೂ ಗ್ರೌಂಡ್ ಫ್ಲೋರಿಗೂ ಇದ್ದಷ್ಟೇ ಅಂತರ ಇರಬೇಕು ಅನ್ನೋದು ಅವನ ಅಪ್ಪ-ಅಮ್ಮನ ನಿಲುವು. ಆದ್ರೂ ಒಮ್ಮೆ ಮನಸ್ಸು ತಡೀದೆ ಅವ್ರ ಜೊತೆಗೆ ಕ್ರಿಕೆಟ್ ಆಡೋಕೆ ಹೋಗಿ ಬಿದ್ದು ಗಾಯ ಮಾಡ್ಕೊಂಡ ದಿನ ಮನೆಯಲ್ಲೂ ಚೆನ್ನಾಗಿ ಏಟು ಬಿದ್ದಿತ್ತವನಿಗೆ. ನಾವೆಷ್ಟು ಕಷ್ಟ ಪಟ್ಟು ಸಾವಿರ ಸಾವಿರ ಕಟ್ಟಿ ನಿನ್ನನೊಂದು ಒಳ್ಳೆ ಸ್ಕೂಲಿಗೆ ಸೇರಿಸಿದ್ದು ಆ ಬೀದಿಮಕ್ಕಳ ಜೊತೆಗೆಲ್ಲಾ ಸೇರಿ ಹಾಳಾಗ್ಲಿ ಅಂತಾನಾ ? ಮನೆಯೊಳಗೇ ಇದ್ದು ಏನಾದ್ರೂ ಮಾಡ್ಕೊ. ಹೊರಗೇನಾದ್ರೂ ಕಾಲಿಟ್ಯೋ ? ನೋಡು ಅಂತ ಅವನಪ್ಪ-ಅಮ್ಮ ಬಯ್ತಾ ಇದ್ರೆ ಶಾಲೆಯಲ್ಲಿ ದಿನಾ ಪಾಟ ಪಾಟ ಅಂತನ್ನೋದು ಬಿಟ್ರೆ ಆಟ ಅನ್ನೋದು ಸಿಲೆಬಸ್ಸಲ್ಲಿ ಮಾತ್ರ ಇದೆ ಅಂತ, ಶಾಲೆಯ ಸುತ್ತ ಇರೋ ಗ್ರೌಂಡು ಶಾಲಾ ವಾಹನಗಳ ಪಾರ್ಕಿಂಗಿಗೆ ಮಾತ್ರ ಅಂತ ಹೇಗಾದ್ರೂ ಹೇಳ್ತಾನವ.

ಗುಂಡಣ್ಣಂಗವತ್ತು ಸಖತ್ ಖುಷಿ. ತನ್ನ ಪಾಡಿಗೆ ಮಲಗಿದವನನ್ನ ಯಾರಪ್ಪಾ ನೀರಾಕಿ ಎಬ್ಬಿಸಿದವರು ಅಂತ ಬೈಯ್ಕೊಳ್ತಾ ಕಣ್ಣು ಬಿಟ್ರೆ ಕಣ್ಣೆದುರು ಒಂದಿಷ್ಟು ಮಕ್ಕಳು. ಅವ್ರ ಕೈಯಲ್ಲೆಲ್ಲಾ ಬಣ್ಣ. ಎಲ್ಲಾ ತನ್ನ ತಲೆಗೆ, ಮುಖಕ್ಕೆ ಮೆತ್ತೋಕೆ ಬರ್ತಾ ಇದ್ರೆ ಒಮ್ಮೆ ಬೌ ಬೌ ಅಂದು ಅವ್ರನ್ನೆಲ್ಲಾ ಹೆದರಿಸಿಬಿಡ್ಲಾ ಅನ್ನಿಸ್ತು. ಆದ್ರೂ ಆ ಮಕ್ಕಳ ಖುಷಿಯ ಮುಖದಲ್ಲಿ ಗಾಬರಿ ತರೋಕೆ ಇಷ್ಟ ಆಗದೇ ಸುಮ್ಮನಿದ್ದ ಅವ. ಕಣ್ಣಿಗೊಂದು ಬಿಟ್ಟು ಎಲ್ಲಾದ್ರೂ ಬಣ್ಣ ಹಾಕ್ಕೊಳ್ರಪ್ಪ ಅಂತ ಮುಖ ಒಡ್ಡಿ. ನಾಯಿ ಮುದ್ದುಮಾಡಿಸ್ಕೊಳ್ತಿದೆ ಅಂದ್ಕೊಂಡು ಅದ್ರ ಮುಖಕ್ಕೂ ಹಚ್ಚಿದ್ರೂ, ಬಾಲಕ್ಕೂ ಮೆತ್ತಿದ್ರು. ಏ ಆ ನಾಯಿ ಬಿಡ್ರೋ ಅಂತ ಬಿಡಿಸೋಕೆ ಬಂದ ಸಾಕಜ್ಜನಿಗೂ ಮೆತ್ತಿದ್ರು. ಎಲಾ ಮಕ್ಕಳ್ರಾ ನನ್ನ ಬಟ್ಟೆ ಎಲ್ಲಾ ಹಾಳು ಮಾಡಿದ್ರಲ್ರೋ ಅಂತ ಹುಸಿ ಕೋಪ ತೋರ್ಸಿದ ಅಜ್ಜ ಸುಮ್ಮನೇ ಅವ್ರನ್ನ ಓಡಿಸಿಕೊಂಡು ಹೋದ ಹಾಗೆ ಮಾಡಿ ಕೊನೆಗೆ ಅವ್ರ ಗುಂಪಲ್ಲೇ ಒಂದಾದ್ರು, ಎದುರಿಗೆ ಸಿಕ್ಕ ಮತ್ತೊಂದು ನಾಯಿಗೆ ಬಣ್ಣ ಹಚ್ಚೋಕೆ !

ನಾಯಿಯ ಬಾಲಕ್ಕೆ ಪಟಾಕಿ ಸರ ಹಚ್ಚಿ ತಮಾಷೆ ನೋಡಿದ ಮಕ್ಕಳಿಗೆ ಅದೇ ನಾಯಿಯ ಮೇಲೆ ಪ್ರೀತಿಯುಕ್ಕಿದೆ ಹೋಳಿಯ ಬಣ್ಣಗಳೊಂದಿಗೆ. ಹುಚ್ಚಿ ಹುಚ್ಚಿ ಅಂತ ಜನರಿಂದೆಲ್ಲಾ ತಾತ್ಸಾರಗೊಂಡು ಎಲ್ಲೋ ಮೂಲೆಯಲ್ಲಿ ಕೂತಿರುತ್ತಿದ್ದ ಅವಳಲ್ಲೊಂದಿಷ್ಟು ಚೈತನ್ಯ ಬಂದಿದೆ ಯಾರೋ ಎರಚಿದ ಬಣ್ಣದಿಂದ. ಏನೋ ಮಾಡಲು ಹೋಗಿ ಅನಿರೀಕ್ಷಿತವಾಗಿ ಬಿದ್ದ ಬಣ್ಣದಿಂದ ಸಾಕಜ್ಜನ ಬಾಲ್ಯ ಮರಳಿದೆ. ಮಗನ ಕಿಟಕಿಯಾಚೆಗಿನ ದೃಷ್ಠಿಯನ್ನು ಅರ್ಥ ಮಾಡ್ಕೊಂಡು ಅವನನ್ನೂ ಕರ್ಕೊಂಡು ಚಡ್ಡಿಯಲ್ಲಿ ಹೊರಬಂದ ಅಪ್ಪ ಬೀದಿಯ ಜನರೊಂದಿಗೆ ಒಂದಾಗಿ ಹೋಳಿ ಆಡ್ತಾ ಇದ್ರೆ ರಾಹುಲನಿಗೆ ಅನಿರೀಕ್ಷಿತ ಆಶ್ಚರ್ಯ. ಹೋಳಿಯೆನ್ನೋದು ಬರಿ ಬಣ್ಣಗಳ ಭಾವವಲ್ಲ. ಭಾವಗಳ ಬಣ್ಣ ಮೇಳವಿಸೋ, ಮನಸ್ಸುಗಳ ಬಣ್ಣ ಬಯಲಾಗೋ ಹಬ್ಬ. ಇಲ್ಲಿನ ಹುಚ್ಚಿ, ರಾಹುಲ್, ಗುಂಡಣ್ಣ, ಸಾಕಜ್ಜಿ, ರಂಗಮ್ಮ ಬೇರ್ಯಾರೂ ಅಲ್ಲ. ನಮ್ಮೊಳಗಿನ, ಸುತ್ತಲೂ ಇರೋ ಭಾವಗಳೇ ಇವು. ಮೇಲುಕೀಳು, ಸಂಪತ್ತು, ಅಂತಸ್ತು, ಜಾತಿ, ಬೀದಿಗಳೆಂದು ನಾವೇ ಸೃಷ್ಠಿಸಿಕೊಂಡ ಮೇಲರಿಮೆ, ಕೀಳರಿಮೆಗಳಲ್ಲೇ ಮಕ್ಕಳ ಬಾಲ್ಯ , ಯುವಕರ ಯೌವನ, ವಯಸ್ಕರ ಮುಪ್ಪೂ ಕೊಚ್ಚಿಹೋಗಿ ಸಂತೋಷ ಮರೆಯಾಗೋ ಸಮಯದಲ್ಲಿ ನಮ್ಮತನ ನೆನಪಿಸೋಕೆ ಬರೋ ಹಬ್ಬಗಳಲ್ಲೊಂದು ಹೋಳಿ. ಬಣ್ಣಗಳ ಖುಷಿಯಾಗೋ ನೀರಿಗ್ಯಾವ ಅಂತಸ್ತು, ಜಾತಿ ? ಹಿಡಿದವನ ಭಾವ, ನೀಡಿದ ಬಣ್ಣವಷ್ಟೇ ಅದಕ್ಕೆ. ವರ್ಷಕ್ಕೊಂದು ದಿನ ಹಣೆಗೆ ಬಣ್ಣ ಮೆತ್ತಿ, ಉಳಿದ ದಿನವೆಲ್ಲಾ ಅಸಲಿಯತ್ತನ್ನು ಮರೆ ಮಾಚೋ ಆತ್ಮವಂಚನೆಗಿಂತ ನಮ್ಮಲ್ಲಿನ ಅಹಮಿಕೆಗಳ ಕೊಳೆ ಕೊಚ್ಚಿ, ಮುಗ್ದತೆಗೊಂದು ಮೆರಗು ಸಿಕ್ಕ ದಿನವೇ ನಿಜವಾದ ಹೋಳಿ

Monday, March 21, 2016

ಕಾಪಿ

ಮಾಡಿದ್ದೇ ಕೆಲಸವನ್ನು ಸದಾ ಮಾಡ್ತಾ ಇರು ಅಂದ್ರೆ ಏನೂ ಮಾಡದೇ ಆದ್ರೂ ಇರ್ತೀನಿ,ಆದ್ರೆ ಅದನ್ನ ಮಾಡೋಲ್ಲ ಅಂತಿದ್ದವನು ಅವ. ಹೊಸತನಕ್ಕೆ ತುಡಿದು ಇರೋದನ್ನ ಕಳೆದುಕೊಳ್ಳುವುದಕ್ಕಿಂತ ಇದ್ದುದರಲ್ಲೇ ಖುಷಿಯಾಗಿರೋದು ಮೇಲು ಅನ್ನುವವಳು ಅವಳು. ಭಾರತ-ಪಾಕಿಸ್ತಾನಗಳಂತಹ ಭಿನ್ನ ವಿಚಾರಧಾರೆಯಿದ್ರೂ ಇವರ ಮಧ್ಯೆ ಅದೆಂತದೋ ಒಂದು ಲವ್ವಿರೋದು ಹೆಂಗೆ ಅನ್ನೋದು ಬೇರೆ ಅವ್ರಿಗೆ ಹೋಗ್ಲಿ ಸ್ವತಃ ಅವ್ರಿಗೇ ಅಚ್ಚರಿಯ ವಿಷಯವಾಗಿತ್ತು. ಎಡಪಂಥ ಬಲಪಂಥ ಅಂತ ಪ್ರತಿದಿನಾ ಕಚ್ಚಾಡೋರು ಹೆಗಲ ಮೇಲೆ ಕೈಹಾಕಿಕೊಂಡ್ರು ಓಡಾಡ್ತಿದ್ರೆ ಹೆಂಗೆ ಅಚ್ಚರಿಯಾಗುತ್ತೋ ಆ ತರಹದ ಆಶ್ಚರ್ಯ ಇವ್ರನ್ನ ಕಂಡವರದ್ದೆಲ್ಲಾ ಆಗಿರ್ತಿತ್ತು. ಅಫ್ಜಲ್ ಗುರುವಿಗೆ ಜೈಕಾರ ಹಾಕದ, ಅಸಹಿಷ್ಣುತೆಯ ಬಗ್ಗೆ ಹೂಂಕರಿಸಿದ, ಮೋದಿ ಸ್ತುತಿ ಮಾಡದ ಇವರಂಗೆ ಬದುಕೋಕು ಸಾಧ್ಯವಾ ಅಂತ ಎರಡೂ ಪಂಥಗಳ ಜನ ಎಷ್ಟೋ ಸಲ ಯೋಚಿಸಿದ್ದಿದೆ. ಇಂಡಿಯ ಅನ್ನೋದು ಪ್ರಗತಿಪರ ಚಿಂತನೆ, ಭಾರತ, ಹಿಂದೂಸ್ತಾನ ಅನ್ನೋದರ ಹಿಂದೆ ಮನುವಾದ ಅಡಗಿದೆ ಎಂಬ ಬುದ್ದಿಜೀವಿಗಳಿಗೂ , ಅಮೇರಿಕಾದಲ್ಲಿ ತಯಾರಾದ ರಾಕೆಟ್ಟು, ವಿಮಾನ, ಕಂಪ್ಯೂಟರ್ ತಂತ್ರಜ್ಞಾನಗಳೆಲ್ಲಾ ಭಾರತದಿಂದ್ಲೇ ಕದ್ಕೊಂಡು ಹೋಗಿದ್ದು, ಜೀನ್ಸ್ ಪ್ಯಾಂಟ್ ಹಾಕ್ತಿರೋದ್ರಿಂದ್ಲೇ ನಮ್ಮ ಸಂಸ್ಕೃತಿ ಹಾಳಾಗ್ತಿರೋದು ಎನ್ನೋ ಸಂಸ್ಕೃತಿವಾದಿಗಳ ಮಧ್ಯೆ ಯಾರ ಗುಂಪೂ ಸೇರದ ಇವರ ನಿಲುವು ಅನೇಕರಿಗೆ ನಿಗೂಢವೆನಿಸುತ್ತಿತ್ತು ! ಅಭಿವೃದ್ಧಿ, ರಾಷ್ಟ್ರೀಯತೆ, ದೇಶಪ್ರೇಮವೆಲ್ಲಾ ತಮ್ಮ ಪಕ್ಷದೇ ಸ್ವತ್ತು ಎಂಬಂತೆ ಬಿಂಬಿಸೋ ರಾಜಕಾರಣಿಗಳೆಂದರೆ ಇವರಿಗೆ ದಿವ್ಯ ನಿರ್ಲಕ್ಷ್ಯ. ನಾವು ಯಾರದ್ದೋ ಕಾಪಿ ಯಾಕಾಗಬೇಕು, ನಾವು ನಾವೇ ಎಂಬ ಇವರ ಲಕ್ಶ್ಯವೇನಿದ್ದರೂ ವಾಸ್ತವ, ಭವಿಷ್ಯಗಳತ್ತ ಮಾತ್ರ. ಸಂತಸ-ಸಂಕಷ್ಟಗಳೇನೇ ಇದ್ದರೂ ವಾಸ್ತವದಲ್ಲೇ ಖುಷಿಯಾಗಿರೋ ಪ್ರಕೃತಿಯಂತೆ ಅವಳಾದರೆ, ಇಂದಿಗೆ ತೃಪ್ತಿಯಾಗದೇ ಹೊಸ ನಾಳೆಗೆ ಹಂಬಲಿಸುವ ಪುರುಷನಂತೆ ಅವನು. 

ಕಾಲೇಜಲ್ಲೊಂದು ಕಥಾ ಸ್ಪರ್ಧೆ. ಬಣ್ಣ ಬಣ್ಣದ ಕಥೆಗಳು ಬಂದಿದ್ದವಲ್ಲಿ. ಹುಟ್ಟಾ ಕಥೆಗಾರರ ಕಥೆ, ಕುವೆಂಪು, ತೇಜಸ್ವಿ, ಭೈರಪ್ಪ,ಅನಂತಮೂರ್ತಿಯವರ ಕೃತಿಗಳಿಂದ ಸ್ಪೂರ್ತಿ ಪಡೆದ ಕತೆ, ಬಹುಮಾನಕ್ಕೆಂತಲೇ ನಿದ್ದೆಗೆಟ್ಟು, ತಿದ್ದಿ ತೀಡಿ ಕಳಿಸಿದ ಕಥೆ, ತಮ್ಮದೇ ಜೀವನದ ಸೋಲು-ಗೆಲುವುಗಳ ಪಾತ್ರಗಳನ್ನಾಗಿಸಿದ ಕಥೆ, ಕ್ರಾಂತಿಯಾಗ್ಬೇಕು, ಬೆಂಕಿ ಹಚ್ಬೇಕು ಅನ್ನೋ ಕತೆ,ಘೋರ ಕಾಡ ಮಧ್ಯದ ಮಧ್ಯರಾತ್ರಿಯ ಅನುಭವದ ಕತೆ, ಭೂತದ ಕತೆ, ರಾಜಕೀಯದ ಕತೆ.. ಹೀಗೆ ದೇಶದೆಲ್ಲಾ ವಿಚಾರಗಳೂ ಕತೆಯಾಗಿದ್ದವಲ್ಲಿ. ಅಲ್ಲಿವನ ನವಿಲುಗರಿಯ ಕತೆಗೆ ಮೊದಲ ಬಹುಮಾನ ಬಂದದ್ದು ಮೆಚ್ಚುಗೆಗಳಿಗಿಂತಲೂ ಹೆಚ್ಚು ಹೊಟ್ಟೆಕಿಚ್ಚುಗಳನ್ನು ಗಳಿಸಿತ್ತು ! ಕಾಡೊಂದರಲ್ಲಿ ಜಿಂಕೆಮರಿಗೆ ಆಕಸ್ಮಿಕವಾಗಿ ಸಿಗೋ ನವಿಲುಗರಿಯ ಸುತ್ತ ಓಡೋ ಆ ಕತೆಯನ್ನೋದಿ ಸಖತ್ ಖುಷಿಯಾದ ಅವಳು ಮುಂದಿನ ತಿಂಗಳು ನಡೆಯಲಿದ್ದ ಅಂತರಕಾಲೇಜು ಕಥಾಸ್ಪರ್ಧೆಗೆ ಅದನ್ನೇ ಕಳಿಸುವಂತೆ ಹೇಳಿದ್ದಳು. ಆದರೆ ಬರೆದದ್ದನ್ನೇ ಬರೆಯುವುದೆಂದರೆ , ಮಾಡುವುದನ್ನೇ ಮಾಡುವುದು ಅವನಿಗೆ ದಿನಾ ಕಹಿಬೇವಿನ ಕಷಾಯ ಕುಡಿಯುವಷ್ಟೇ ಕಷ್ಟ. ಎಕ್ಸಾಮಲ್ಲಿ ಕಾಪಿ ಮಾಡು ಅಂತ ಹೇಳ್ತಿಲ್ಲ ನಿಂಗೆ, ಇದು ಸ್ಪರ್ಧೆ. ಇಲ್ಲಿ ಗೆಲ್ಲುವಂತದ್ದೇ ಗೆಲ್ಲೋದು,ಹುಚ್ಚು ಹೊಸ ಪ್ರಯತ್ನಗಳಲ್ಲ ಅಂದ್ರೆ ಅವ ಒಪ್ಪಲೊಲ್ಲ.ಅದೇ ಕಥೆಯನ್ನ ಒಂಚೂರು ಬದಲಾಯಿಸಿ ಜಿಂಕೆ ಮರಿಯ ಕತೆಯೆಂತಲೂ , ನವಿಲಾರಣ್ಯ ಎಂತಲೋ ಬರಿಯೆಂದರೆ ಅದಕ್ಕೂ ಒಪ್ಪಿರಲಿಲ್ಲ ಅವ.  ಅಂತರಿಕ್ಷಯಾನದ ಬಗ್ಗೆಗೊಂದು ಬರೆದಿದ್ದ. ಆ ಕತೆಗೆ ಮೊದಲ ಬಹುಮಾನವಿರಲಿ ಸಮಾಧಾನಕರ ಬಹುಮಾನವೂ ಬಂದಿರಲಿಲ್ಲವೆಂಬುದು ಅವಳಿಗೆ ಎಷ್ಟು ಬೇಸರವಾಗಿತ್ತೋ ಅಷ್ಟೇ ಖುಷಿಯನ್ನು ಅವನ ಹಿಂದೆ ಬಿಟ್ಟು ನಗುವವರಿಗೂ ತಂದುಕೊಟ್ಟಿತ್ತು !  ಅರಳು ಹುರಿದಂತೆ ಮಾತನಾಡುವ ಅವನಿಗೆ ಪ್ರತೀ ವರ್ಷದ ಚರ್ಚಾ ಸ್ಪರ್ಧೆಯಲ್ಲೂ ಒಂದು ಬಹುಮಾನ ಇದ್ದಿದ್ದೇ. ನೀನು ಯಾವುದಾದ್ರೂ ಬಾನುಲಿಯ ಉದ್ಘೋಷಕನಾಗೋ, ನಿನ್ನಿಷ್ಟದ ಕೆಲಸ ಮಾಡ್ಕೊಂಡು ಆರಾಮಾಗಿರಬಹುದು ಅಂದಿದ್ಳು ಅವಳು. ಇವನೇ ಮನಸ್ಸು ಮಾಡಿರಲಿಲ್ಲ.

ಡಿಗ್ರಿ ಮುಗಿಸೋ ಹೊತ್ತಿಗೆ ಎಲ್ಲರಂತೆ ಇವರಿಗೂ ಓದಿಗೆ ತಕ್ಕ ಕೆಲಸದ ಅವಕಾಶ ಸಿಕ್ಕಿತ್ತು. ಒಳ್ಳೆಯ ಕೆಲಸ ಸಿಕ್ಕಿದೆ , ಇನ್ನೇನು ಲೈಫು ಸೆಟಲ್ ಆಯ್ತಲ್ಲ ಅಂತ ಅವಳು ಅನ್ನುತಿದ್ರೆ ಇವನಿಗೆ ಇನ್ನೂ ಓದಬೇಕೆಂಬ ಹಂಬಲ. ನಾನು ಮಾಡು ಅಂದಿದ್ದನ್ನು ಹೆಂಗಿದ್ರೂ ಮಾಡಲ್ಲ ನೀನು , ನಿನ್ನಿಷ್ಟದ ಹಾಗಿರು ಅಂತ ಬೇಸತ್ತಿದ್ದ ಅವಳು ಸಿಕ್ಕ ಕೆಲಸ ಸೇರಿ ದೂರ ಹೊರಟಿದ್ದಳು. ಓದಿದ, ಮತ್ತೂ ಓದಿದ. ಸಂಶೋಧನೆ ಮಾಡಬೇಕು ಅಂತಲೂ ಮುಂತಾದ. ತಾ ತಗೊಂಡ ಹೊಸ ವಿಷಯದಲ್ಲಿ ಹೆಜ್ಜೆ ಹೆಜ್ಜೆಗೂ ಸೋಲು ಎದುರಾದಾಗೆಲ್ಲಾ, ಇದು ಸುಲಭದಲ್ಲಿ ಆಗೋ ವಿಷಯವಲ್ಲ ಬಿಡಪ್ಪ, ಸುಲಭದ್ದೇನಾದ್ರೂ, ಸಿದ್ದ ಮಾದರಿಯ ತರಹದ್ದೇನಾದ್ರೂ ತಗೋಬಾರ್ದಿತ್ತ ಅಂತ ಗೈಡೇ ಹೇಳಿದ್ರೂ ಕೂಡ ಅವನಿಗೆ ತಾ ನಡೆದ ಹಾದಿಯ ಬಗ್ಗೆ ಬೇಸರವಿಲ್ಲ. ಹೊಸತನದ ತುಡಿತದ ಬಗ್ಗೆ ತಿರಸ್ಕಾರವಿಲ್ಲ. ಹೊಸ ಹೊಸದೆನ್ನುತ್ತಾ ಬರೆದ ಕತೆಗಳ ಬಂಡಲ ಧೂಳು ಕೊಡಹುವಾಗೆಲ್ಲಾ ಮತ್ತೆ ಅವಳೇ ನೆನಪಾಗುತ್ತಾಳೆ. ನಿಮ್ಮ ಕತೆಗಳನ್ನ ಅದೇಗ್ರಿ ಸಂಕಲನ ಮಾಡೋದು ? ಒಂದಿದ್ದಂಗೆ ಒಂದಿಲ್ವಲ್ರಿ . ಈಗ ಬಿಕರಿಯಾಗ್ತಿರೋ ಯಾವ ತತ್ವಗಳೂ ಇಲ್ವಲ್ರಿ ಇದ್ರಲ್ಲಿ. ಜನಪ್ರಿಯವಾಗಿರೋ ಅಂತದ್ದು,ರೋಚಕವಾಗಿರುವಂತದ್ದೇನಾದ್
ರೂ ಬರೆದು ಕೊಡಿ, ಬೇಕಾದ್ರೆ ಪ್ರಕಟಿಸೋಣ ಅಂತ ಫೋನಿಟ್ಟ ಪ್ರಕಾಶಕರೆಲ್ಲರ ಹಿಂದೆ ಅವಳ ನುಡಿ ನೆನಪಾದದ್ದಿದೆ.  ಹೊಸದೇನೋ ಮಾಡೋಕೋಗ್ಬೇಡ್ವೋ, ನಿನ್ನತನ ಕಳೆದೋಗುತ್ತೆ ಅನ್ನೋ ಅವಳ ಮಾತುಗಳು ಪ್ರತೀ ಸೋಲಲ್ಲೂ ನೆನಪಾಗುತ್ತಿತ್ತವನಿಗೆ. ಆದ್ರೆ ಪ್ರತೀ ಸಲ ಸೋಲು ಮಕಾಡೆ ಬೀಳಿಸಿದಾಗಲೂ ಧೂಳು ಕೊಡವಿ ಮೇಲೆಳುವಂತೆ ಮಾಡ್ತಿದ್ದಿದ್ದು ಆ ಮಾತೇ. 

ಎಂದೋ ಬರೆದಿಟ್ಟಿದ್ದ ಅಂತರಿಕ್ಷದ ಕತೆಯನ್ನು ನೋಡಿದ ತನ್ನ ಗೆಳೆಯ ತನಗೇ ತಿಳಿಯದಂತೆ ಪತ್ರಿಕೆಗೆ ಕಳಿಸಿದ್ದು, ಅದರಲ್ಲಿ ಪ್ರಕಟವಾಗಿದ್ದ ಕಥೆಯನ್ನು ನೋಡಿ ಬೆಳಗಿನಿಂದ ಬರುತ್ತಿರೋ ಅಭಿನಂದನಾ ಕರೆಗಳ ನಡುವೆ ಅವನಿಗೆ ಆಕೆಯ ನೆನಪು ಕಾಡ್ತಾ ಇದೆ. ಅದರ ಬೆನ್ನಲ್ಲೇ ನಿಮ್ಮ ಕತೆಗಳನ್ನ ಸಂಕಲನ ಮಾಡ್ಬೇಕು ಅಂತಿದೀವಿ ಕೊಡ್ತೀರಾ ಅಂತ ಮುಂಚೆ ತಿರಸ್ಕರಿಸಿದ್ದ ಪ್ರಕಾಶಕರೇ ಫೋನ್ ಮಾಡಿದಾಗ ಏನು ಹೇಳಬೇಕೆಂದು ತಿಳಿಯದ ಗೊಂದಲದಿಂದ ಮೂಕನಾಗಿದ್ದ. ಸದ್ಯಕ್ಕೆ ಆ ಆಸೆಯಿಲ್ಲ. ಪಕ್ವವಾಗಬೇಕಿದೆ ನಾನಿನ್ನೂ. ಪ್ರಕಟಿಸಬೇಕೆಂಬ ಬಯಕೆಯಾದ್ರೆ ಖಂಡಿತಾ ತಿಳಿಸುತ್ತೇನೆಂಬ ಮಾತೊಂದಿಗೆ ಫೋನಿಟ್ಟಿದ್ದ.ಹೊಸತನಕ್ಕೆ ತಕ್ಷಣದ ಸೋಲಾದ್ರೂ ಅದು ಹೊಸತನದ ಸಾವಲ್ಲ, ತಾತ್ಕಾಲಿಕ ಹಿನ್ನಡೆಯಷ್ಟೇ ಎಂದು ತಾನೆಂದೂ ನಂಬುತ್ತಿದ್ದುದರ ಬಗ್ಗೆ ಅವಳ ಜೊತೆ ಮತ್ತೆ ಮಾತನಾಡಬೇಕೆಂಬ ಬಯಕೆಯಾಗುತ್ತಿದೆ. ಆದ್ರೆ ಅವಳ ಪತ್ತೆಯಿಲ್ಲ. ತನ್ನ ರಿಸರ್ಚ್ ಪೇಪರ್ ಅಂತರಾಷ್ಟ್ರೀಯ ಪತ್ರಿಕೆಯಲ್ಲಿ ಬಂದ ಖುಷಿಯನ್ನು, ಸಂಶೋಧನೆಯನ್ನು ಗುರುತಿಸಿದ ಸರ್ಕಾರ ಕೆಲಸವೊಂದನ್ನು ನೀಡುತ್ತಿರೋ ಬಗ್ಗೆ ತಿಳಿಸುವ ಕನವರಿಕೆಯಾಗುತ್ತಿದೆ. ಆದ್ರೆ ಪ್ರತಿ ಸೋಲನ್ನೂ ಸವಾಲಾಗಿ ಸ್ವೀಕರಿಸುವಂತೆ ಮಾಡಿದ ನುಡಿಗಳ ಒಡತಿ ಅವಳೆಲ್ಲಿದ್ದಾಳೆಂಬ ಸುಳಿವಿಲ್ಲ. ಆಕೆಯಿರೋ ಊರಿಗೇ ಹೊರಟಿದ್ದೇನೆ, ಮರುದಿನವೇ ಆಕೆ ಸಿಗುವಳೆಂಬ ಕಲ್ಪನೆಯೂ ಇಲ್ಲದ ಆತ ಹೊರಟಿದ್ದಾನೆ, ಆಕೆಯದೆಂದು ತಿಳಿದಿರದ ಹೊಸ ಊರ, ಹೊಸ ಕೆಲಸದ, ಹೊಸತನದ ತುಡಿತದೊಂದಿಗೆ. ನೋವುಗಳ ನಿನ್ನೆಯಾಚೆ, ಸಮಭಾವದ ಇಂದಿನಾಚೆ ಹೊಸತನದ ನಾಳೆಯಿದ್ದೇ ಇದೆಯೆಂಬ ಭರವಸೆಯೊಂದಿಗೆ

ಈ ಕಥೆ "ಪಂಜು"ವಿನಲ್ಲಿ ಪ್ರಕಟವಾಗಿದೆ

Sunday, March 20, 2016

ಧಗೆ

ಬದಲಾಗದ ಬಿಸಿಗಾಳಿ, ಫ್ಯಾನ ಕಿವಿ ಹಿಂಡಿದ್ದಷ್ಟೇ ಬಂತು
ಬಳಿಬಾರದ ತಂಪ ನಗು,ಘಳಿಗೆಗಳ ಗಣಿತ ಮರೆತದ್ದೊಂದೇ ಬಂತು
ತಾತ್ಕಾಲಿಕ ಸಾಂತ್ವನಕ್ಕೂ ಬಾರದ ಪ್ರೀತಿ ಮಳೆಗೆ ಹಾಕಿದ್ದೆಷ್ಟೋ ಶಾಪ
ನೀರೆರೆಯದೇ ಹೋದ ಮೋಡಕ್ಕೆ ಮರುಗಿದ್ದೊಂದೇ ಬಂತು |೧

ಎದುರ ದೇಗುಲದಲ್ಲಿ ಕಂಡಂತೆ ಹೆತ್ತಾಕೆ
ಅತಿಮಧುರ ನೆನಪುಗಳ, ಸಂತೋಷ ಕೊಟ್ಟಾಕೆ
ದೂರದೆಲ್ಲೋ ನನ್ನ ನೆನೆಯುವಂತೆ
ಕಾಡೋ ಕಣ್ಣೀರೆಲ್ಲ ಫೋನಾಚೆ ಮರೆತಾಕೆ
ನೋವ ದೀಪದ ಬುಡದ ಕತ್ತಲಂತೆ |೨

ಹುಟ್ಟೂರ ಕರೆಘಂಟೆ ಹುಡುಕೆನ್ನ ಬಂದಿಹುದೆ
ದೇಗುಲದ ಚಾವಣಿಯ ಘಂಟೆಯಂತೆ ?
ಅರ್ಚನೆಯು ನೆಮ್ಮದಿಯ ತಂದಿಲ್ಲವಿಂದೆನಗೆ
ಕಾಡುತಿರೆ ಹೆತ್ತಾಕೆ ಬಗೆಯ ಚಿಂತೆ |೩

ದೂರವಾಗಿಹುದಿಲ್ಲಿ ನಾಡಲ್ಲ ಮನಸುಗಳು
ಹೊಟ್ಟೆಪಾಡಿನ ನೆವದಿ ಬೆಳೆದು ಸ್ವಾರ್ಥ
ಬೇರೆಯಾಗಲು ಹೊರಟ ಮಕ್ಕಳಿಗೆ ಮನೆಯಲ್ಲ
ಬೇಡವಾಗಿದ್ದಿಲ್ಲಿ ಸಲಹೊ ತರ್ಕ |೪

ನನ್ನ ಓದಿಸಲೆಂದೆ ಹೊತ್ತೂಟ ಬಿಟ್ಟವರ
ನೆನಪು ಮರುಕಳಿಸುತಿದೆ ಅನ್ನದಗುಳೂ
ತಂದೆ ತಾಯಿಯ ನಿದ್ದೆ ಕಸಿದ ದಿನಗಳು ಎಷ್ಟೊ
ಎಂಬ ಕೊರಗೇ ಇಂದು ಸುಡುವ ಬಿಸಿಲು|೫

ಹೆತ್ತ ತಾಯಿಯ ಬಳಿಯ ಬೀಸಣಿಕೆ ಸಾಕೆನಗೆ
ದೂರದೂರಿನ ಕೊಲ್ಲೊ ಏಸಿಗಿಂತ
ಅನಿಸಿದೊಡನೇ ಹೊರಟ ಕೆಲಸಕ್ಕೆ ರಜೆ ಜಡಿದು
ವೃದ್ಧ ತಂದೆಯ ನೆರವು ವಾಸಿಯಂತ|೬

Saturday, March 19, 2016

ಕರ್ನಾಟಕದ ಹೊಯ್ಸಳ ದೇವಾಲಯಗಳು - ೧೫ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ

Kedareshwara Temple, Balligavi

ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಹುಡುಕುತ್ತಾ ಹೊರಟ ನಾನು ನಂತರ ಭೇಟಿ ನೀಡಿದ್ದು ಬಳ್ಳಿಗಾವಿಗೆ. ಅಲ್ಲಮಪ್ರಭು ಮತ್ತು ನಾಟ್ಯರಾಣಿ ಶಾಂತಲೆಯ ಹುಟ್ಟೂರಾದ ಬಳ್ಳಿಗಾವಿಯಲ್ಲಿ ಅನೇಕ ಹೊಯ್ಸಳ ದೇವಸ್ಥಾನಗಳಿವೆ. ಅವುಗಳಲ್ಲಿ ಕೇದಾರೇಶ್ವರ, ತ್ರಿಪುರಾಂತಕೇಶ್ವರ,ಸೋಮೇಶ್ವರ, ನೀಲಕಂಠೇಶ್ವರ, ಅಲ್ಲಮಪ್ರಭು ದೇವಾಲಯ,ಪಂಚಲಿಂಗೇಶ್ವರ, ಭೇರುಂಡೇಶ್ವರ ದೇವಾಲಯಗಳು ಪ್ರಮುಖವಾದವು
Infront of Nandi Mantapa of Kedareshwara temple, Balligave
 ಹೋಗುವುದು ಹೇಗೆ ?
ಸಾಗರ ಮತ್ತು ಶಿವಮೊಗ್ಗದಿಂದ  ಶಿರಾಳಕೊಪ್ಪಕ್ಕೆ ನೇರೆ ಬಸ್ಸುಗಳಿವೆ. ಅಲ್ಲಿಂದ ಬಳ್ಳಿಗಾವಿಗೆ ೨.೩ಕಿ.ಮೀ. ಅಲ್ಲಿಂದ ಆನವಟ್ಟಿಗೆ ಹೋಗುವ ಬಸ್ಸುಗಳೆಲ್ಲ ಬಳ್ಳಿಗಾವಿಯ ಮುಖಾಂತರ ಹೋಗುತ್ತವೆ.
ಸಾಗರದಿಂದ ಬಳ್ಳಿಗಾವಿಗೆ ಹೋಗುವ ನೇರ ಬಸ್ಸಿದೆ. ಹಾವೇರಿಗೆ ಹೋಗುವ ಈ ಬಸ್ಸು ಬೆಳಗ್ಗೆ ೮:೦೫ ಕ್ಕೆ ಸಾಗರದಿಂದ ಹೊರಡುತ್ತದೆ. ತಲಾ ೫೦ ರೂ ಚಾರ್ಚ್. ೯:೧೫ ಕ್ಕೆ ಶಿಕಾರಿಪುರ ತಲುಪುವ ಇದು ೯:೩೫ ಕ್ಕೆ ಶಿಕಾರಿಪುರ ಬಿಟ್ಟು ೯:೪೫ ರ ಹೊತ್ತಿಗೆ ಬಳ್ಳಿಗಾವಿ ತಲುಪುತ್ತದೆ. ಪುರಾತತ್ವ ಇಲಾಖೆಗೆ ಸೇರಿರುವ ಕೇದಾರೇಶ್ವರ ದೇಗುಲ ಬೆಳಗ್ಗೆ ಆರರಿಂದ ಸಂಜೆ ಆರರವರೆಗೆ ತೆರೆದಿದ್ದು ಇದರ ಪಕ್ಕದಲ್ಲಿರುವ ಪುರಾತತ್ವ ಇಲಾಖೆಯ ಮ್ಯೂಸಿಯಂ ಅನ್ನೂ ಸಂದರ್ಶಿಸಬಹುದು.

ಕೇದಾರೇಶ್ವರ ದೇಗುಲದಲ್ಲಿರುವ ಅಲಂಕೃತ ನಂದಿ

 ಅಲ್ಲಮಪ್ರಭು ಮತ್ತು ನಾಟ್ಯರಾಣಿ ಶಾಂತಲೆಯ ಹುಟ್ಟೂರಾದ ಬಳ್ಳಿಗಾವಿಯಲ್ಲಿ ಅನೇಕ ಹೊಯ್ಸಳ ದೇವಸ್ಥಾನಗಳಿವೆ. ಅವುಗಳಲ್ಲಿ ತ್ರಿಪುರಾಂತಕೇಶ್ವರ, ಗಂಡಭೇರುಂಡ,ಸೋಮೇಶ್ವರ, ಪಂಚಲಿಂಗೇಶ್ವರ ದೇವಾಲಯಗಳು ಪ್ರಮುಖವಾದದು.


ಬಳ್ಳಿಗಾವಿಯ ಇತಿಹಾಸ
ವಿಷ್ಣುವಿನ ಐದನೇ ಅವತಾರವಾದ ವಾಮನಾವತಾರದಲ್ಲಿ ತ್ರಿವಿಕ್ರಮನಾಗಿ ಬೆಳೆಯುವ ವಾಮನನಿಂದ ಪಾತಾಳಕ್ಕೆ ದೂಡಲ್ಪಟ್ಟ ಬಲಿಚಕ್ರವತ್ರಿಯ ರಾಜಧಾನಿಯಾಗಿದ್ದ ಜಾಗವಿದು ಎಂದು ಹೇಳುತ್ತಾರೆ.  ಆದಕಾರಣ ಇದನ್ನು ಬಲಿಪುರವೆಂದು,ಅನಾಧಿರಾಜಧಾನಿಯೆಂದೂ, ಮಾತೃನಗರವೆಂದೂ ಕರೆಯಲಾಗುತ್ತಿತ್ತಂತೆ. ದಕ್ಷಿಣ ಕೇದಾರವೆಂದೂ ಪ್ರಸಿದ್ಧವಾಗಿದ್ದ ಬಳ್ಳಿಗಾವೆ ಕಾಲಾಂತರದಲ್ಲಿ ಬಳ್ಳಿಗಾವೆ, ಬೆಳಗಾಮಿ, ಬಳ್ಳಿಗಾಮೆ, ಬಳ್ಳಿಗ್ರಾಮವೆಂದೂ ಕರೆಯಲ್ಪಡುತ್ತಿತ್ತು ಎಂಬ ಉಲ್ಲೇಖಗಳಿವೆ. ಆರಂಭದಲ್ಲಿ ಚುಟು-ಶಾತವಾಹನರ ಆಳ್ವಿಕೆಗೂ, ನಂತರ ಬನವಾಸಿ ಕದಂಬರ ಆಳ್ವಿಕೆಗೂ, ನಂತರದಲ್ಲಿ ಬಾದಾಮಿ ಚಾಲುಕ್ಯರ, ಮಾಳಖೇಡದ ರಾಷ್ಟ್ರಕೂಟರ, ಕಲ್ಯಾಣಿ ಚಾಲುಕ್ಯರ, ಕಲಚೂರ್ಯರ, ದೇವರಿಗಿ ಯಾದವರ, ದೋರಸಮುದ್ರದ ಹೊಯ್ಸಳರ ಮತ್ತು ಕೊನೆಯಲ್ಲಿ ವಿಜಯನಗರದ ಆಳ್ವಿಕೆಗೂ ಒಳಪಟ್ಟಿತ್ತು ಎಂದು ತಿಳಿದುಬರುತ್ತದೆ.
Vishnu Statue @Kedareshwara temple, Balligavi

ಕೇದಾರೇಶ್ವರ ದೇವಸ್ಥಾನ:
ಹೊಯ್ಸಳ-ಚಾಲುಕ್ಯ ಶಿಲ್ಪಕಲೆಗಳ ಸಂಗಮದಲ್ಲಿರುವ ಈ ದೇಗುಲ ಈ ಮಾದರಿಯಲ್ಲಿ ಅತೀ ಪ್ರಾಚೀನವಾದದ್ದು ಎಂದರೂ ಖಚಿತವಾಗಿ ಎಂದು ನಿರ್ಮಿತವಾಗಿದ್ದು ಎಂಬ ದಾಖಲೆಗಳಿಲ್ಲ. ಹನ್ನೆರಡನೆಯ ಶತಮಾನದ ವಿಷ್ಣುವರ್ಧನ ಮಹಾರಾಜನ ಕಾಲಕ್ಕಿಂತಲೂ ಹಳೆಯದೇ ಎಂದು ಹೇಳಲು ಈ ದೇಗುಲದಲ್ಲಿರುವ ಹೊಯ್ಸಳ ಶಿಲ್ಪವನ್ನು ಹೊಯ್ಸಳರ ರಾಜ ವಿನಯಾದಿತ್ಯ(೧೦೪೭-೧೦೯೮) ಶಾಲಿವಾಹನ ಶಕೆ ೧೦೬೮ರಲ್ಲಿ ಸೇರಿಸಿದನೆಂದು ತಿಳಿಸುವ ಉಲ್ಲೇಖಗಳು ನೆರವಾಗುತ್ತವೆ. ಹೊಯ್ಸಳರ ಪ್ರಸಿದ್ದ ರಾಜ ವಿಷ್ಣುವರ್ಧನನ ಆಳ್ವಿಕೆ ಶುರುವಾದದ್ದು ೧೧೦೮ರಲ್ಲಿ. ಮಧ್ಯ ಬಂದವರೆಂದರೆ ಎರೆಯಂಗ(೧೦೯೮-೧೧೦೨), ವೀರಬಲ್ಲಾಳ ೧(೧೧೦೨-೧೧೦೮).

Nagas at the Kedareshwara temple

ಹೊಯ್ಸಳರಿಂದ ನಿರ್ಮಿತವಾದ ಕೇದಾರೇಶ್ವರ ದೇವಾಲಯ ತ್ರಿಕೂಟಾಚಲ ಮಾದರಿಯಲ್ಲಿದೆ.  ಪೂರ್ವ-ಪಶ್ಚಿಮವಾಗಿ ನಿರ್ಮಿತವಾಗಿರುವ ದೇಗುಲದಲ್ಲಿ ಪಶ್ಚಿಮದ ಗರ್ಭಗೃಹಕ್ಕೆ ಒಂದು ಸುಖನಾಸಿ ಇದೆ. ಇನ್ನೆರಡು ಗರ್ಭಗೃಹಗಳಿಗೂ ಅರ್ಧಮಂಟಪಗಳಿದ್ದು ಅವೆರಡೂ ಮಧ್ಯದಲ್ಲಿರುವ ಆರು ಕಂಬಗಳ ಮಹಾಮಂಟಪವನ್ನು ಸೇರುತ್ತವೆ. ಪಶ್ಚಿಮ ಮತ್ತು ದಕ್ಷಿಣ ಗರ್ಭಗೃಹಗಳಲ್ಲಿ ಶಿವಲಿಂಗಗಳಿದ್ದು ಉತ್ತರದಲ್ಲಿ ವಿಷ್ಣುವಿನ ಮೂರ್ತಿಯಿದೆ.  ದಕ್ಷಿಣದ ಲಿಂಗವನ್ನು ಬ್ರಹ್ಮನೆಂದೂ ಕರೆಯುವುದರಿಂದ ಇದನ್ನು ತ್ರಿಮೂರ್ತಿಗಳ ಸಂಗಮಕ್ಷೇತ್ರವೆಂದೂ ನಂಬುತ್ತಾರೆ.


Navagrahas at the ceiling of Balligavi Kedareshwara temple

Hoysala Emblem @Kedareshwara temple, Balligavi
 ಈ ದೇಗುಲದ ಹೊರಭಾಗದಲ್ಲಿ ಆಕರ್ಷಕ ವಿಮಾನಗೋಪುರವಿದೆ. ಇಲ್ಲಿರುವ ಕೆತ್ತನೆಗಳಲ್ಲಿ ತಾಂಡವೇಶ್ವರ, ನರಸಿಂಹ, ಭೈರವ, ವರಾಹ, ಲಕ್ಷ್ಮಿ ಮುಂತಾದ ಕೆತ್ತನೆಗಳಿವೆ. ಈ ದೇಗುಲದ ಒಳಚಾವಣಿಗಳಲ್ಲಿರುವ ನವಗ್ರಹಗಳ ಕೆತ್ತನೆ, ನಂದಿಮಂಟಪದಲ್ಲಿರುವ ಅಲಂಕೃತ ನಂದಿ, ತಕ್ಷಕ ಮುಂತಾದ ನಾಗಗಳ ಕೆತ್ತನೆಗಳು, ದೀಪಗಳನ್ನು ಇಡಲೆಂದೇ ಮಾಡಿರುವ ಬೇರೆ ಹೊಯ್ಸಳ ದೇಗುಲಗಳಲ್ಲಿ ಕಾಣದ ರಚನೆಗಳು ಆಕರ್ಷಕವಾಗಿವೆ.ಈ ದೇಗುಲದ ಬಲಭಾಗದಲ್ಲಿ ನಕರೇಶ್ವರ ದೇಗುಲದ ಅವಶೇಷಗಳಿವೆ. ಅದೇ ಈ ದೇಗುಲದ ಮಾದರಿಯಾಗಿತ್ತೆಂದೂ ಅದನ್ನು ಪ್ರಭುದೇವರ ಮಂಟಪವೆಂದೂ ಕರೆಯಲಾಗುತ್ತಿತ್ತಂತೆ

VimanaGopura

View of Balligavi Kedareshwara temple

 ಈ ದೇಗುಲದ ಒಳಚಾವಣಿಗಳಲ್ಲಿರುವ ನವಗ್ರಹಗಳ ಕೆತ್ತನೆ, ನಂದಿಮಂಟಪದಲ್ಲಿರುವ ಅಲಂಕೃತ ನಂದಿ, ತಕ್ಷಕ ಮುಂತಾದ ನಾಗಗಳ ಕೆತ್ತನೆಗಳು ದೀಪಗಳನ್ನು ಇಡಲೆಂದೇ ಮಾಡಿರುವ ಬೇರೆ ಹೊಯ್ಸಳ ದೇಗುಲಗಳಲ್ಲಿ ಕಾಣದ ರಚನೆಗಳು ಆಕರ್ಷಕವಾಗಿವೆ
one more close view of Vimanagopura


Place holders for lamps , ದೀಪಗಳನ್ನು ಇಡಲು ಮಾಡಿದ ಜಾಗದ ಕರಕುಶಲತೆ ನೋಡಿ!



Kaala bhairava

  ಬಿಟ್ಟಿದೇವ ವಿಷ್ಣುವರ್ಧನನಾದ ಕಥೆ:
ಹೊಯ್ಸಳರಸ ಬಿಟ್ಟಿದೇವ ಬೇಲೂರಿಗೆ ಹಿಂದಿರುಗುತ್ತಿದ್ದಾಗ ಬಳ್ಳಿಗಾವಿಯಲ್ಲಿ ತಂಗಿದ್ದನಂತೆ. ಅಲ್ಲಿನ ಮುಂಜಾನೆ ತ್ರಿಪುರಾಂತಕೇಶ್ವರ ದೇವಾಲಯದಿಂದ ಕೇಳಿಬರುತ್ತಿದ್ದ ರಾಗ,ತಾಳಗಳ ಸದ್ದನ್ನು ಕೇಳಿ ಅಲ್ಲಿಗೆ ಬಂದವನು ಅಲ್ಲಿಯೇ ಶಾಂತಲೆಯನ್ನು ಕಂಡನಂತೆ. ಅವಳನ್ನು ವರಿಸಲೋಸುಗವೇ ಆತ ಜೈನ ಧರ್ಮಕ್ಕೆ ಮತಾಂತರನಾಗಿ ವಿಷ್ಣುವರ್ಧನನಾದ ಎಂಬ ಐತಿಹ್ಯವಿದೆ!
Vishnu @Kedareshara

Remains of Nakareshwara temple
Prabhudevara mantapa
ಮ್ಯೂಸಿಯಂ:
ದೇಗುಲದ ಪಕ್ಕದಲ್ಲೇ ಇರುವ ಮ್ಯೂಸಿಯಂನಲ್ಲಿ ಅನೇಕ ಪುರಾತನ ಶಿಲ್ಪಗಳನ್ನು ಸಂರಕ್ಷಿಸಿ ಇಡಲಾಗಿದೆ. ಅವುಗಳಲ್ಲಿ ಪ್ರಮುಖ ಶಿಲ್ಪಗಳೆಂದರೆ ವಿಷ್ಣು, ನಾಗ, ವೀರಭದ್ರ, ಮಹಿಷಾಸುರ ಮರ್ಧಿನಿ, ಸಪ್ತ ಮಾತೃಕೆಯರು, ಸರಸ್ವತಿ, ಕಾರ್ತಿಕೇಯ, ತ್ರಿಮೂರ್ತಿ, ಗಣೇಶ, ಉಮಾ ಮಹೇಶ್ವರ ಮುಂತಾದವುಗಳು. ಇಲ್ಲಿ ಇದುವರೆಗಿನ ಹೊಯ್ಸಳ ಶಿಲ್ಪಗಳಲ್ಲಿ ಕಾಣದಿದ್ದ ವಿಶೇಷವಾದ ಚತುರ್ಮುಖ ಶಿವಲಿಂಗವಿದೆ. ಜೈನ ತೀರ್ಥಂಕರರ ಸಮಾಧಿಯ ಮೇಲೆ ಇರುವ ನಿಷಿಧಿ ಎಂಬ ಕಲ್ಲುಗಳು, ವರುಣ, ಬೌದ್ಧ ಶಿಲ್ಪಗಳು, ಜಾಲಂಧ್ರ , ನಂದಿ, ಮಾಸ್ತಿಗಲ್ಲು, ಸತಿಗಲ್ಲು, ವೀರಗಲ್ಲುಗಳೇ ಮೊದಲಾದ ಶಿಲ್ಪಗಳನ್ನೂ ಇಲ್ಲಿ ಕಾಣಬಹುದು. ಮ್ಯೂಸಿಯಂನ ಹೊರಭಾಗದಲ್ಲೂ ಬಳ್ಳಿಗಾವೆ ಎಂಬ ಹೆಸರಿರುವ ಅನೇಕ ಶಾಸನಗಳನ್ನು ಕಾಣಬಹುದು.

One of the inscriptions having the name Balligavi, ಬಳ್ಳಿಗಾಮೆ ಎಂಬ ಹೆಸರಿರುವ ಒಂದು ಶಿಲಾಶಾಸನ




Hoysala Emblem @Balligavi Musuem.ಹೊಯ್ಸಳ ಲಾಂಛನ
 ಸುತ್ತಮುತ್ತಲು ನೋಡಲು ಇರುವ ಜಾಗಗಳು:
ಶಿಕಾರಿಪುರದಿಂದ ೫ ಕಿ.ಮೀ ಬಳ್ಳಿಗಾವಿಯಿಂದ ೨.೭ ಕಿ.ಮೀ ದೂರವಿರುವ ಇಲ್ಲಿ ಪುರಾತನ ಪ್ರಣವಲಿಂಗೇಶ್ವರ ದೇವಸ್ಥಾನ ಮತ್ತು ಶಿಲಾಸ್ಥಂಭವಿದೆ. ಬೆಳಗ್ಗೆ ೧೧, ೧೨:೧೫ ಕ್ಕೆ ಬಳ್ಳಿಗಾವಿಯಿಂದ ಇಲ್ಲಿಗೆ ಬಸ್ಸುಗಳಿವೆ. ತಲಾ ೮ ರೂ ಚಾರ್ಚ್. ಬೆಳಿಗ್ಗೆ ಅಲ್ಲಿಗೆ ತೆರಳಿದ ನಾವು ೧೨:೫೨ ಕ್ಕೆ ವಿಜಯಲಕ್ಷ್ಮಿ ಬಸ್ಸಿನಲ್ಲಿ ಶಿಕಾರಿಪುರಕ್ಕೆ ವಾಪಾಸ್ಸಾದೆವು. ತಲಾ ೧೦ ಚಾರ್ಚ್.  ಅಲ್ಲಿಂದ ಶಿಕಾರಿಪುರಕ್ಕೆ ವಾಪಾಸ್ ಬಂದು ಅಕ್ಕಮಹಾದೇವಿ ಹುಟ್ಟಿದ ಸ್ಥಳ ಉಡುತಡಿ/ಉಡುಗಣಿಗೆ ಹೋಗಬಹುದು. ಶಿವಮೊಗ್ಗಕ್ಕೆ ತೆರಳುವ ಬಸ್ಸುಗಳು ಉಡುತಡಿಯ ಮೂಲಕ ಹೋಗುತ್ತವೆ. ತಲಾ ೭.೫ ಅಂತೆ ಕೊಟ್ಟು ೧:೦೫ರ ಬಸ್ಸನ್ನೇರಿದ ನಾವು ೧:೪೫ರ ಕೃಷ್ಣ ಬಸ್ಸಿನಲ್ಲಿ ಶಿಕಾರಿಪುರಕ್ಕೆ ವಾಪಾಸ್ಸಾದೆವು. ಅಲ್ಲಿಂದ ತಲಾ ೮ರ ಚಾರ್ಚು. ಶಿಕಾರಿಪುರದಿಂದ ಉಡುತಡಿಗೆ ೬ ಕಿ.ಮಿ. ಬಳ್ಳಿಗಾವಿಯಿಂದ ತಾಳಗುಂದಕ್ಕೆ ಅರ್ಧಘಂಟೆಗೊಂದರಂತೆ ಬಸ್ಸುಗಳಿವೆ.


ಮುಂದಿನ ಭಾಗದಲ್ಲಿ: ತ್ರಿಪುರಾಂತಕೇಶ್ವರ ದೇವಾಲಯ ಮತ್ತು ಭೈರುಂಡೇಶ್ವರ ದೇವಾಲಯ, ಬಳ್ಳಿಗಾವೆ

Monday, March 7, 2016

ಕಾಡೋ ಕಾಮೆಂಟಿಣಿ

ಪ್ರೇಮಿಗಳ ದಿನಕ್ಕೊಂದು ಲೇಖನ ಬರೀರಪ್ಪ ಅಂದಾಗ ಯಾರ ಬಗ್ಗೆ ಬರ್ಯೋದು ಅಂತ ಬಹಳ ಯೋಚನೆಯಾಗ್ತಿತ್ತು ಗುಂಡಣ್ಣಂಗೆ.ಜೀವನದಲ್ಲಿ ಐಲು, ಅದೇ ಇಂಗ್ಲೀಷಿನ ILU ರೀ ಅಂದೋರು ಯಾರಿಲ್ದಿದ್ರೂ ಇವನನ್ನಬೇಕನ್ನೋರು ಸುಮಾರಿದ್ರು. ಕೆಲವರಿಗೆ ಅನ್ನಬೇಕನ್ನುವಷ್ಟರಲ್ಲೇ ಅವರ ಮದ್ವೆಯಾಗೋ , ಹೆಸರೇ ಕಾಣದಂತೆ ಮಾಯವಾಗೋ ಆಗಿರುತ್ತಿತ್ತು ! ಇನ್ಯಾರೋ ಜ್ಯೂನಿಯರ್ಗಳು ಮ್ಯಾಚಾಗಬಹುದಾ ಅಂದ್ಕೊಳ್ಳುವಾಗ್ಲೇ ಅವ್ರು ಬಂದು ಗುಂಡಣ್ಣಾ ಎಂದು ಕರೆದು ಕನಸಬುಗ್ಗೆ ಟುಸ್ಸೆನಿಸಿ ಅಣ್ಣ ಅಂತ ಹೆಸರಲ್ಲೇ ಇಟ್ಟ ಮನೆಯರ್ವಿಗೆ ಅದೆಷ್ಟೋ ಬಾರಿ ಶಾಪ ಹಾಕಿದ್ದ. ಆಂಟಿ ಅಣ್ಣಾ ಚಳುವಳಿ ಮಾಡ್ಬೇಕು ಅಂತ ಗುಟುರು ಹಾಕ್ತಾ ಕಾಲೇಜೆಲ್ಲಾ ಸುತ್ತುತ್ತಿದ್ದ ಸಂಗದ ಅಧ್ಯಕ್ಷನೂ ಆಗಿದ್ದ ! ಇನ್ನು ಇಷ್ಟಪಟ್ರೂ ಹೇಳಲಾಗದವಳೊಬ್ಳು ! ಅವರೆಲ್ಲರ ನೆನಪಿಗೊಂದು ಗುಟುಕು ಜ್ಯೂಸ ಹೀರಿ ಏನ ಬರೆಯಬೇಕು ಅಂತ ಸ್ಪೂರ್ತಿಯ ಹುಡುಕುತ್ತಾ ಕೂತಿದ್ದ ಗುಂಡಣ್ಣನ ಮೊಬೈಲೊಮ್ಮೆ ಸದ್ದಾಗಿತ್ತು. ನೋಡಿದರೇನೋ ನೋಟಿಫಿಕೇಶನ್. ಅವ ಎಂದೋ ಬರೆದ ಲೇಖನದ ಪ್ರತಿಕ್ರಿಯಾ ದ್ವಾರದಲ್ಲಿ ಕಾಮೆಂಟಿಣಿಯ ಆಗಮನ . ಗುಂಡಣ್ಣನ ಮೊಗದಲ್ಲೊಂದು ನಗು ಮಿಂಚಿ ಮರೆಯಾಯ್ತು. ಲವ್ ಸ್ಟೋರಿ ರೆಡಿಯಾಯ್ತು

ಹೆಣ್ಣಿದ್ದಲ್ಲೆಲ್ಲಾ ಗಂಡಿರುವಂತೆ ಬರೆದಕ್ಕೆಲ್ಲಾ ಕಾಮೆಂಟಿರುತ್ತೆ ಅನ್ನೋದು ಗುಂಡಣ್ಣನ ಸಿದ್ದಾಂತ. ಅರೆ, ಇದೊಳ್ಳೆ ಕಥೆಯಾಯ್ತಲ್ಲ. ಮದುವೆಯೇ ಆಗದ ಅದೆಷ್ಟೋ ಬ್ರಹ್ಮಚಾರಿಗಳು, ಬ್ರಹ್ಮಚಾರಿಣಿಯರು ಇಲ್ವಾ ಅಂದ್ರೆ ಅವರು ಬೀಳದಿದ್ದರೂ ಅವರ ಹಿಂದೆ ಬಿದ್ದವರು ಯಾರಾದ್ರೂ ಇದ್ದೇ ಇರುತ್ತಾರೆಂಬುದು ಗುಂಡಣ್ಣನ ವಾದ ! ಜಗದೆಲ್ಲಾ ಬ್ರಹ್ಮಚಾರಿಗಳ ಜಾಲಾಡಿ ಗುಂಡಣ್ಣನ ಸಿದ್ದಾಂತವನ್ನ ಸುಳ್ಳೆಂದು ಸಾಬೀತುಪಡಿಸೋಕೆ ಹೋಗದೆ ಸದ್ಯಕ್ಕದನ್ನು ನಿಜವೆಂದೇ ಒಪ್ಪಿಕೊಂಡು ಮುಂದೆ ಸಾಗೋಣ !



ಗುಂಡಣ್ಣಂಗೂ ಕಮೆಂಟಿಣಿಗೂ ಲವ್ವಾಗಿ ಬಹಳ ಸಮಯವಾಯ್ತು. ಬೇಕೆಂದಾಗ ಬಾರದ ಬೇಡವೆಂದರೂ ಬಳಿಬಂದು ಕಾಡೋ ಅವಳೆಂದರೆ ಗುಂಡಣ್ಣಂಗೆ ಅದೆಂತದೋ ಕುತೂಹಲ, ಕಾತುರ.ಹುಟ್ಟಾ ಕವಿಯಲ್ಲದ ಅವ ಅವಳ ನಿರೀಕ್ಷೆಯಲ್ಲೇ ಸೆಂಚುರಿ ಸಾಹಿತಿಯಾಗಿದ್ದು ! ಹುಚ್ಚುಚ್ಚಾಗಿ ಏನೇನೋ ಬರೆದಾಗ ಗೆಳತಿಯಾಗಿ ಗದರಿದವಳು ನೋವ ಅಲೆಯಲ್ಲಿ ತೇಲುವಂತೆ ಬರೆದಾಗ ತಾಯಿಯಾಗಿ ಸಾಂತ್ವನ ಹೇಳಿದ್ದೂ ಉಂಟು. ಯಾರಿಗೆ ಬರೆಯಬೇಕೆಂದು ಬೇಸತ್ತಿದ್ದ ಸಮಯದಲ್ಲಿ ಬರಗಾಲದ ಮಳೆಯಂತೆ ಪ್ರತ್ಯಕ್ಷಳಾದವಳ ಬಗ್ಗೆ ಅದೇನೋ ಪ್ರೀತಿ. ಹೇಳಲು ಪದಗಳಿಲ್ಲ, ಧ್ವನಿ ಸಿಗದ ಭಾವಗಳಷ್ಟೇ ಅವು.


ಬೇಯದ ಭಾವಗಳ ಹಾಗೇ ತೆಗೆದಿಟ್ಟವನಿಗೆ ಕುದಿಯೋ ಎಣ್ಣೆಯಲ್ಲಿ ಮುಳುಗಿಸಿದಂತೆ ಉಗಿದಿದ್ದವಳು, ವಿಯೋಗದ ಭಾವಗಳಿಗೆ ಶೀತಲತೆಯ ಸ್ಪರ್ಷವಿತ್ತದ್ದೂ ಉಂಟು. ಹೆಚ್ಚಾಗಿ ಮಡಿಸಿದ ಪ್ಯಾಂಟಿನ ಮಡಿಕೆಯನ್ನೋ, ಮಡಚಿಹೋದ ಶರ್ಟ ಕಾಲರನ್ನೋ ಗುರುತಿಸಬಲ್ಲಷ್ಟು ಆಪ್ತತೆ ತೋರೋ ಗೆಳತಿಯಾದವಳು ಇದ್ದಕ್ಕಿದ್ದಂತೆ ಅನಾಮಿಕಳಾದಂತಾಗಿ ಹೋದಾಗ ಎಲ್ಲಿಲ್ಲದ ಅಚ್ಚರಿ,ಗಾಬರಿ . ಬರೆಯೋ ಉಮೇದಲ್ಲಿ ಮಿಸ್ಸಾದ ಲಾಜಿಕ್ಕನ್ನೂ ಉತ್ತಮಪಡಿಸಬಹುದಾಗಿದ್ದ ಎಳೆಯನ್ನೂ ಸೂಕ್ಷ್ಮದರ್ಶಕ ಹಾಕಿ ಹುಡುಕೋ ಅವಳ ಮಾರ್ಗದರ್ಶನವಿಲ್ಲದಿದ್ದರೆ ತನ್ನ ಹಾದಿ ಗುರುವಿಲ್ಲದ,ಗುರಿಯಿಲ್ಲದಂತಾಗುತ್ತಿ
ತ್ತಾ ಎಂದು ಅನಿಸಿದ್ದುಂಟು. ಮರಳುಗಾಡಲ್ಲಿ ದಿಕ್ಕಿಲ್ಲದೇ ನಡೆಯುತ್ತಿದ್ದವನಿಗೆ ನೀರಂತೆ ಕಾಣುವವಳು ನಿಜವಾಗಲೂ ಒಂದು ದಿಕ್ಕು ತೋರುತ್ತಾಳಾ ಅಥವಾ ಅಲೆದಾಟವನ್ನು ಇನ್ನಷ್ಟು ಹೆಚ್ಚಿಸೋ ಮರೀಚಿಕೆಯಾ ಎಂಬ ಗೊಂದಲ ಗುಂಡಣ್ಣನಿಗೆ.

ಮಿಥ್ಯಾಲೋಕದ ಕಮೆಂಟಿಣಿ ವಾಸ್ತವಲೋಕದ ಮತ್ತೊಬ್ಬರ ಧ್ವನಿಯಷ್ಟೇ, ಇನ್ಯಾರದೋ ಭಾವಗಳಿಗೊಂದು ಮುಖವಷ್ಟೇ ಎಂಬುದು ಗುಂಡಣ್ಣನಿಗೂ ಗೊತ್ತು. ಆದರೂ ಅವಳೇ ವಾಸ್ತವದಲ್ಲಿ ಜೊತೆಯಿದ್ದರೆ ಹೇಗಿರುತ್ತಿತ್ತೆಂಬ ಕನಸು ! ಬೇಸರಿಸೋ ವಾಸ್ತವಕ್ಕಿಂತ ನೆರವೇರದ ಕನಸುಗಳೇ ಮೇಲಂತೆ !


ಬರೆಯೋಕಿಂತ ಹೆಚ್ಚು ಬರಹಕ್ಕೆ ಬರಬಹುದಾದ ಕಮೆಂಟುಗಳ ಚಿಂತೆಯೇ ರಾತ್ರಿಯಿಡೀ ನಿದ್ದೆಗೆಡಿಸಿ ಕಾಡಿಸಿದ್ದುಂಟು. ಬರಹದ ಸಂದರ್ಭದಲ್ಲಿನ ಸಿಟ್ಟು ಕಡಿಮೆಯಾದರೂ ಅದಕ್ಕೆ ಬಂದ ಸಾಲು ಸಾಲು ಕಾಮೆಂಟು ಭಾವ ತೀರ್ವತೆಯನ್ನು ವಾರವಿಡೀ ಕಾಪಿಟ್ಟಿದ್ದುಂಟು. ಗುಂಡಣ್ಣ ಚೆಂದವಿದೆ ಎಂದುಕೊಂಡ, ತಿದ್ದು ತೀಡಿ ರೂಪಗೊಟ್ಟ ಬರಹಗಳಿಗೆ ಯಾವ ಪ್ರತಿಕ್ರಿಯೆಯೂ ಮೂಡದಿದ್ದಾಗ ಇನ್ನೆಂದೂ ಬರೆಯೋದೇ ಇಲ್ಲವೆಂಬ ಶಸ್ತ್ರತ್ಯಾಗಕ್ಕೆ ಮುಂದಾದ್ದೂ ಉಂಟು. ಆಗೆಲ್ಲಾ ಗುಂಡಣ್ಣನಿಗನಿಸಿದ್ದೊಂದೇ. ನಾ ಬರೆಯೋದು ಕಾಮೆಂಟಿಣಿಯ ನಿರೀಕ್ಷೆಗಾ ? ಅವಳು ಬರಲಿಲ್ಲವೆಂದ ಮಾತ್ರಕ್ಕೆ ಬರೆದದ್ದು ಚೆಂದವಿಲ್ಲವೆಂದೇ ? ಲೈಕಿಣಿಯದೊಂದು ಸ್ಮೈಲು ಸಿಕ್ಕಲಿಲ್ಲವೆಂದ ಮಾತ್ರಕ್ಕೆ ನಾ ಬೇಸರವಾದೆನೆಂದೇ ? ಮುಂಚಿನಂತೆಯೇ ಇದ್ದವ ನಾನು ಇನ್ನು ಮುಂದೂ ಹಾಗೇ ಇರಲಾಗದೆಂದೇ ಎಂದು. ಹಾಗೇ ಮುಂದುವರೆದ ಪಯಣದಲ್ಲಿ ಮತ್ತೆಂದೋ ಲೈಕಿಣಿ, ಕಮೆಂಟಿಣಿಯರು ಜೊತೆಯಾದಾಗ ಹಿಂದಿನದೆಲ್ಲಾ ಮರೆತಂತೆ ಮುಖದಲ್ಲೊಂದು ಮಂದಹಾಸ. ಮತ್ತದೇ ಹಿಂಬಾಲಿಕೆಯ ಕನಸುಗಳ ಜಾತ್ರೆ.

ಕೊನೇ ಕೊಯ್ಲು:
ಕ್ರಿಯೆಯನ್ನು ಪುರುಷನೆಂದು,ಪ್ರತಿಕ್ರಿಯೆಯನ್ನು ಪ್ರಕೃತಿಯೆಂದೂ ಚಿತ್ರಿಸಲಾದ ಕಲ್ಪನೆಯಲ್ಲಿ ಗುಂಡಣ್ಣ ಪುರುಷನಾದರೆ,ಕಮೆಂಟಿಣಿ ಸ್ತ್ರೀಯಾಗಿದ್ದಾಳೆ. ಇಲ್ಲಿ ಮೂಡಿದ ಪಾತ್ರಗಳ ಭಾವಗಳು ಯಾರೂ ಆಗಿರಬಹುದು. ಯಾರದಾಗಿಲ್ಲದೆಯೂ ಇರಬಹುದು !