Tuesday, December 31, 2013

ಅನಿರೀಕ್ಷಿತ

ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನೋದು ಮುಂಚಿನ ಮಾತಾದರೆ ಬರೆದರೆ ವಾವ್ ವಾ ಅಂತಿರಬೇಕು ಅನ್ನೋದು ನಮ್ಮ ಇಂದಿನ ಸಾಹಿತಿ ಸಾಕಣ್ಣನ ತತ್ವ. ಈ ಸಾಕಣ್ಣ ಯಾರು ಅಂದ್ರಾ ? ಯಾರೋ ಕೊಡಿಸುತ್ತಾರೆ ಅಂದ್ರೆ ಬೇಕರೀಲಿ ಕಂಡಿದ್ದೆಲ್ಲಾ ಬೇಕೆನ್ನೋ ಬೇಕಣ್ಣನ ತಮ್ಮನಾ ? ಅಲ್ಲ. ಫೇಸ್ಬುಕ್ಕಲ್ಲಿ ಹಾಯೆಂದವರೆಲ್ಲಾ ಬಂದುಗಳೆನ್ನೋ ಪಾಪಣ್ಣನ ತಮ್ಮನಾ ? ಅಲ್ಲ. ಜೀವನವೇ ಒಂದು ನಶ್ವರ. ಗುಳ್ಳೇಯಂತಿರೋ ಈ ಬದುಕಲಿ ನನಗ್ಯಾರೂ ಇಲ್ಲ. ಬೇಕಾದವರಿಗೆಲ್ಲಾ ನಾ ಬೇಕು. ನಾನೆಷ್ಟು ಅತ್ತರೂ ಬಳಿ ಬರುವವರೇ ಇಲ್ಲವೆಂದು ಕಣ್ಣೀರಿಡೋ ನಾರಾಣಿಯ ನೆಂಟನಾ ? ಅಲ್ಲ. ಸ್ವಾತಂತ್ರ್ಯವಿದೆಯೆಂದು ಆಸೇತು ಹಿಮಾಚಲದವೆರೆಗೆ, ತಮ್ಮೆದುರು ಸಿಕ್ಕ, ಮಾತಾಡಿದ, ಕದ್ದು ಕೇಳಿದ ಗೆಳೆಯ ಗೆಳತಿಯರ ಮಾತನ್ನೆಲ್ಲಾ ಕತೆಯಾಗಿಸಿ ಓದುಗರ ಕೈಯಲ್ಲಿ ವಾವೆನ್ನಿಸಿಕೊಂಡು ಬರೆಸಿಕೊಂಡವರ ಮಾನ ಮೂರಾಬಟ್ಟೆಯಾಗಿಸುವ ಕಥೆಗಾರ ಕಪ್ಪಣ್ಣನಿಗೂ ಇವನಿಗೂ.. ಊಹೂಂ ಲಿಂಕೇ ಇಲ್ಲ. ಯಾವ ದೋಸ್ತಿ ರಾಜಕಾರಣಕ್ಕೂ, ಟೋಪಿ ಸಮಾರಂಭಗಳಲ್ಲಿ ಮೈಕು, ಸನ್ಮಾನ ಬಯಸೋ ಕನಿಷ್ಟ ಆಸೆಯೂ ಇಲ್ಲದ ಈ ಯುಗದ ವಿಚಿತ್ರ ಸಾಹಿತಿಯೇ ನಮ್ಮೀ ಸಾಕಣ್ಣ. ಸಾಕಣ್ಣ ಹೊಸ ವರ್ಷಕ್ಕೊಂದು ಲೇಖನ ಬರೆಯೋ ಉಮೇದಿನಲ್ಲಿದ್ದ.

ಬರೆಯಬೇಕು ಸರಿ. ಆದರೆ ಏನು ಬರೆಯೋದು ? ಕತೆಯಾ, ಲೇಖನವಾ, ಲಲಿತ ಪ್ರಬಂಧವಾ, ವಿಡಂಬನೆಯಾ, ಹಾಸ್ಯವಾ.. ಗೊತ್ತಿದ್ದು ನಾಲ್ಕೈದೇ ಪ್ರಕಾರಗಳಾದ್ರೂ ಅದರಲ್ಲೇ ಏನು ಬರೆಯೋದು ? ಕವಿತೆ ಬರೆಯದೇ ಸುಮಾರು ದಿನವಾಗಿದೆಯಲ್ಲಾ ಅದೇ ಸುಲಭವೆಂದು ಬರೆಯಲು ಕೂತ.ಹೊಸ ವರ್ಷ ಅಂತಂದ್ರೆ ಕುಡಿತ, ಪಾರ್ಟಿ, ಮಸ್ತಿ ಅನ್ನೋ ಹಲವು ಕಲ್ಪನೆಗಳು ಬಂದವು. ಆದರೆ ಒಂದು ದಿನದ ದುಂದು ಸರಿಯಲ್ಲ. ಅದರಿಂದ ಸಮಾಜಕ್ಕೇನಾದ್ರೂ ಒಳ್ಳೇದಾಗಬೇಕೆನ್ನೋ ಸಂದೇಶವನ್ನೂ ಕವಿತೆಯಲ್ಲೇ ನೀಡಬೇಕೆಂದುಕೊಂಡ. ಧುಮ್ಮಿಕ್ಕೋ ಜಲಪಾತದಂತೆ ಕಲ್ಪನೆಗಳು , ಭಾವಗಳು ಭೋರ್ಗತೆಯುತ್ತಿದ್ದರೂ ಪದಗಳ ತೆಕ್ಕೆಗೆ ಅವು ದಕ್ಕುತ್ತಿರಲಿಲ್ಲ. ಅಗೋ ನೋಡು ಬಾರು, ಬಂದಿತೊಂದು ಕಾರು.. ಬೆರೆಸುತ್ತಿದ್ದ ಬಾರಿನಲ್ಲಿ ಪೆಗ್ಗಿನಲ್ಲಿ ನೀರು.. ಅಂತೋನೂ ಗೀಚಿದ್ದು ಶುರುವಿನಲ್ಲಿ ವಾವೆನಿಸಿದ್ರೂ ಕಡೆಗೆ ಅವನಿಗೇ ನಾಚಿಕೆ ತರಿಸಿತು. ನೀ, ಮೆಚ್ಚಿದರೆ ಕಾವ್ಯ. ಮೆಚ್ಚದಿದ್ದರೆ, ಅದೇ ರಮ್ಯ ಅಂತ ಪ್ರತೀ ಪದವನ್ನು ಒಂದೊಂದು ಸಾಲಲ್ಲಿ ಬರೆಯುತ್ತಿದ್ದ ತನ್ನ ಶುರುವಿನ ಕಾವ್ಯ ರಚನೆ ನೆನಪಿಗೆ ಬಂದು ಆ ತರಹ ಮತ್ತೆ ಪ್ರಯತ್ನಿಸಲೇ ಎನಿಸಿತು. ಆದರೆ ನಂತರದ ತನ್ನ ಓದುವಿಕೆಯ ಸಮಯದಲ್ಲಿ ತನ್ನ ಮೊದಲ ಕವನಗಳು ಮೂಡಿಸಿದ್ದ ನಾಚಿಕೆ ಮತ್ತು ಅದರಿಂದ ಕವನ ರಚನೆಯನ್ನೇ ನಿಲ್ಲಿಸಿಬಿಡೋಕೆ ಮುಂದಾಗಿದ್ದ ದುಸ್ವಪ್ನಗಳು ನೆನಪಾದವು.ಸರಿ , ಇದಲ್ಲದಿದ್ದರೆ ಯಾವುದು ಎಂದು ಪ್ರಶ್ನಿಸಿದ ಮನಸ್ಸಿಗೆ. ಕತೆ, ಲೇಖನ, ಪ್ರಬಂಧಗಳು ನಾಮುಂದು , ತಾಮುಂದು ಎಂದು ಜಗಳಕ್ಕೆ ನಿಂತು ಅರ್ಧ ಘಂಟೆಯಾದರೂ ಬಗೆಹರಿಯಲಿಲ್ಲ. ಆದರ್ಶ ಸಾಹಿತ್ಯದ ರಚನೆ, ಹುಮ್ಮಸ್ಸಿದ್ದರೂ ಚುರುಗುಟ್ಟುತ್ತಿದ್ದ ಹೊಟ್ಟೆಯನ್ನು ತಡೆಯೋ ಸಾಮರ್ಥ್ಯ ಅವಕ್ಕಿರಲಿಲ್ಲ. ಚೆನ್ನಾಗಿ ಉಂಡು ಬಂದವನಿಗೆ ನಿದ್ದೆ ಎಳೆಯಹತ್ತಿತು. ಕಣ್ಣು ರೆಪ್ಪೆಗಳನ್ನು ಹಗ್ಗ ಹಾಕಿ ಎಳೆದಂತಾಗಲು ಶುರುವಾಗಿ ತೂಕಡಿಸಿ ತೂಕಡಿಸಿ ಎದುರಿಗಿದ್ದ ಪೆನ್ನಿನ ಮೇಲೇ ಬೀಳೋ ಬದಲು ಎಲ್ಲಾದರೂ ಮಲಗೋದು ವಾಸಿ ಎನ್ನಿಸತೊಡಗಿತು.

 ಎಷ್ಟೋ ಹೊತ್ತಿನ ನಂತರ ಎದ್ದು ಕಣ್ಣುಬಿಡುತ್ತಾನೆ. ಸುತ್ತೆಲ್ಲಾ ಕತ್ತಲು. ಎಷ್ಟೊತ್ತು ಮಲಗಿದ್ದೆನೋ ಏನೋ ? ಇಷ್ಟು ಬೇಗ ಕತ್ತಲಾಗಿ ಹೋಯ್ತಾ ಅನಿಸಿತು. ಅರೆ, ಕತ್ತಲನ್ನೋದ್ರಲ್ಲಿ ಗಮನಿಸೇ ಇರಲಿಲ್ಲ. ಬಲಗೈ ಚಾಚಿದ್ರೆ ತಡರುತ್ತಿದ್ದ ಗೋಡೆ, ದಪ್ಪ ಜಾಸ್ತಿಯಾಗಿ ಕುತ್ತಿಗೆ ಒತ್ತುತ್ತಿದ್ದ ಹಾಸಿಗೆಯ ದಿಂಬುಗಳಿಲ್ಲ. ಕೈಚಾಚಿದ್ರೆ ಕೈ ಮುಂದೆ ಮುಂದೇ ಹೋಗುತ್ತಿದೆ. ದಿಂಬಿರಲಿ ದಿನಾ ಮಲಗುತ್ತಿದ್ದ ಹಾಸಿಗೆಯಂತಿರದೇ ಎಲ್ಲೋ ತರಗೆಲೆಗಳ ಮೇಲೆ ಮಲಗಿದಂತಿದೆ.. ಫ್ಯಾನ್ ಹಾಕ್ಬೇಡ ಅಂತ ಹೇಳಿದ್ರೂ ರೂಂ ಮೇಟ್ ಫ್ಯಾನ್ ಹಾಕಿಟ್ಟು ಹೊರಗೆಲ್ಲೋ ಹೋಗಿ ಬಿಟ್ಟಿದ್ದಾನಾ ? ಅರೆ ಫ್ಯಾನ ಸೌಂಡೂ ಇಲ್ಲ. ಆದ್ರೂ ತಣ್ಣನೆಯ ಗಾಳಿ.. ಎಲ್ಲಾ ವಿಚಿತ್ರವಾಗಿದೆಯಲ್ಲಾ ಅನಿಸತೊಡಗಿತು. ಜೊತೆ ಜೊತೆಗೇ ನಾನು ಎಲ್ಲಿದ್ದೇನೆ ಅನ್ನೋ ಆಶ್ಚರ್ಯ, ಅಳುಕು ಕಾಡತೊಡಗಿತು.

ಕಣ್ಣು ಕತ್ತಲೆಗೆ ಒಗ್ಗತೊಡಗಿದಂತೆ ಮಲಗಿದ್ದ ವಿಶಾಲಮರದ ಬುಡ, ಮರದ ಆಕಾರಕ್ಕೆ ಹೆದರಿ ಬಳಿ ಬರಲೇ ಹೆದರಿದಂತೆ ಅನತಿ ದೂರದಲ್ಲೇ ಹರಿದುಹೋಗಿದ್ದ ರಸ್ತೆ, ಕಪ್ಪು ರಸ್ತೆಯಾಚೆಗೆ ಹಬ್ಬಿಕೊಂಡಿದ್ದ ದಿಗಂತ, ದಿಗಂತದಲ್ಲಿ ಮುಳುಗಿದ ಸೂರ್ಯನ ಕೆಂಪನ್ನು ತೊಳೆಯಲು ತಮ್ಮ ನೀಲಿ, ಕಪ್ಪು ಬಕೆಟ್ ನೀರಿನೊಂದಿಗೆ ತಯಾರಾದಂತಿರೋ ನಕ್ಷತ್ರಗಳು ತಮ್ಮ ಕೆಲಸದ ಮಧ್ಯೆಯೂ ಇವನನ್ನೇ ನೋಡಿ ಕಣ್ಣು ಹೊಡೆದಂತೆ!.., ತಮ್ಮ ಕೆಲಸದಲ್ಲಿ ತೊಡಗಿ ಇಲ್ಲಿ ಮರೆಯಾಗಿ ಇನ್ನೆಲ್ಲೋ ಕಂಡಂತೆ ಮಿನುಗುತ್ತಿದ್ದ ನಕ್ಷತ್ರಗಳು ಚುರುಕಾಗೇ ಕೆಲಸ ಮಾಡುತ್ತಿರಬೇಕು. ನೋಡ ನೋಡುತ್ತಿದ್ದಂತೇ ಆಗಸದ ಕಡುಗೆಂಪು ನೀಲಿಯಾಗಿ, ಕಪ್ಪಾಗತೊಡಗಿತು. ಹಾಗೇ ಎದ್ದು ಕುಳಿತ. ಪೇಟೆಯಲ್ಲಿ ದಿನಾ ಕಣ್ಣು ಕೋರೈಸುತ್ತಿದ್ದ ಜಗಮಗವಿಲ್ಲ. ಬದಲು ದಿನಾ ಅರಸುತ್ತಿದ್ದ ಶಾಂತಿ, ನಿಶ್ಯಬ್ದತೆ ಇವನನ್ನೇ ಅರಸಿ ಬಂದಂತೆ. ನಿಶ್ಯಬ್ದತೆಯೆಲ್ಲಾ ತನ್ನದೇ ಎಂದು ಹಕ್ಕು ಚಲಾಯಿಸಿ ಕೂಗುತ್ತಿದ್ದ ಕೀಟಗಳ ವಿಚಿತ್ರ ಸದ್ದು ಮೊದಲು ಕಿರಿಕಿರಿಯೆನಿಸಿದರೂ ಅದೇ ಒಂದು ತರಹ ಖುಷಿ ಕೊಡತೊಡಗಿದವು. ಇನ್ನೊಂದು ಸ್ವಲ್ಪ ಹೊತ್ತು ಹೀಗೇ ಮಲಗಿರೋಣ ಎಂಬ ಎಂದಿನ ಆಲಸ್ಯ ಕಾಡಿದರೂ, ಮಲಗಿ ಬೇಸರವೆನಿಸಿ ಎದ್ದು ಕುಳಿತ.

ಕಾಣದ ದೀಪಗಳ ಬೆಳಕು, ಗಿಜಿಗುಟ್ಟೊ ಹಾರ್ನು , ಮೈಕುಗಳಿಲ್ಲದ ಪರಿಸರ ತಾನು ಪೇಟೆಯಲ್ಲೆಂತೂ ಇಲ್ಲ. ಯಾವುದೋ ಹಳ್ಳಿಯ ಮೂಲೆಯಲ್ಲೋ ಕಾಡ ಮಧ್ಯೆದಲ್ಲೋ ಇದ್ದೇನೆಂಬ ಭಾವವನ್ನು ಗಟ್ಟಿಗೊಳಿಸತೊಡಗಿದವು. ಜೇಬ ತಡಕಿದರೆ ಮೊಬೈಲಿಲ್ಲ. ನಿಧಾನಕ್ಕೆ ಹೊಟ್ಟೆ ತಾಳ ಹಾಕತೊಡಗಿದ್ದಾಗ ಎಂದೂ ಜೊತೆಗಿರುತ್ತಿದ್ದ ಬ್ಯಾಗು ನೆನಪಾಯ್ತು. ಸುತ್ತೆಲ್ಲಾ ತಡಕಿದರೂ ಅದು ಸಿಗದಿದ್ದಾಗ ಎಲ್ಲಿ ಕಳೆದುಹೋಗಿದೀನಪ್ಪಾ ನಾನು , ಹೇಗೆ ಇಲ್ಲಿಂದ ಹೊರಬರೋದು ಅಂತ ಅನಿಸೋಕೆ ಶುರು ಆಯ್ತು. ಹತ್ತಿರದಲ್ಲೇ ಯಾವುದಾದರೂ ಒಂದು ಹಳ್ಳಿ ಕಾಣಬಹುದೇನೋ ಅಂತ ಎದ್ದು ಕತ್ತು ನಿರುಕಿಸಿದ. ಊಹೂಂ. ಏನೂ ಇಲ್ಲ. ಎದುರು ಕಂಡ ರಸ್ತೆಯನ್ನೇ ಹಿಡಿದು ಹೊರಟರೆ ಯಾವುದಾದ್ರೂ ಹಳ್ಳಿಯೋ ಪೇಟೆಯೋ ಸಿಕ್ಕೇ ಸಿಗುತ್ತೆ. ಆದ್ರೆ ಯಾವ ಕಡೆ ಹೋಗೋದು ? ಎಡಕ್ಕೋ, ಬಲಕ್ಕೋ? ಜೀವನದಲ್ಲಿ ಪ್ರತೀ ಹೆಜ್ಜೆಯನ್ನೂ , ದಾರಿಯನ್ನೂ ದೊಡ್ಡವರು ಮಾರ್ಗದರ್ಶಿಸುತ್ತಲೇ ಬಂದಿದ್ರಿಂದ ಈ ತರಹದ ಹೊಸ, ವಿಚಿತ್ರ ಆಯ್ಕೆ ಎದುರಾಗಬಹುದಾದ ಕುರಿತು ಯೋಚನೆಯೇ ಬಂದಿರಲಿಲ್ಲ. ಏನಾದರಾಗಲಿ ಎಂದು ಮನಸ್ಸು ಗಟ್ಟಿ ಮಾಡಿ ರಸ್ತೆಯಲ್ಲಿ ಎಡಕ್ಕೆ ಹೊರಟ.. ಸ್ಚಲ್ಪ ದೂರ ನಡೆಯುವಷ್ಟರಲ್ಲೇ ಬಾಯಾರಿಕೆಯಾಗತೊಡಗಿತು.

ಆದರೆ ಆ ಗೊತ್ತಿಲ್ಲದ ರಸ್ತೆಯಲ್ಲಿ ಇವನಿಗೆ ನಿತ್ಯದ ಬಿಸ್ಲೇರಿ ಬಾಟಲಿಯನ್ಯಾರು ಮಾರಬೇಕು ? ಸ್ವಲ್ಪ ಮುಂಚೆ ಕಂಡ ರಸ್ತೆಯಿಂದ ಸ್ವಲ್ಪ ದೂರದಲ್ಲಿ ಆಕಾಶಕ್ಕೊಂದು ಕನ್ನಡಿಯಿಟ್ಟಂತೆ ಆಗಸದ ತಾರೆಗಳನ್ನು, ಸುತ್ತಲಿನ ಮರಗಳನ್ನೂ ಪ್ರತಿಬಿಂಬಿಸುತ್ತಿದ್ದ ಕೆರೆಯ ನೆನಪಾಯ್ತು.ಅಲ್ಲಿಗೇ ಮರಳಿ ಸ್ವಲ್ಪ ನೀರು ಕುಡಿದುಬಿಡಲಾ ಎನಿಸಿಬಿಟ್ಟಿತು. ಆದರೆ ಹಾಗೆಲ್ಲಾ ಕೆರೆ, ಬಾವಿಗಳ ನೀರು ಕುಡಿಯಬಾರದಂತೆ! ಮೊನ್ನೆಯಷ್ಟೇ ಹೋಟೇಲಿನ ನೀರು ಕುಡಿದು ಜಾಂಡೀಸ್ ಬಂದ ಫ್ರೆಂಡು, ಮತ್ತೆಲ್ಲೋ ಹಾದಿಬದಿಯ ನೀರು ಕುಡಿದು ವೈರಲ್ ಫೀವರ್ ಬಂದ ಮತ್ತೊಬ್ಬ ನೆನಪಾದರು. ನೀರಿಲ್ಲದೇ ಗಂಟಲೊಣಗಿ ಸಾಯೋದಕ್ಕಿಂತ ಕೆರೆ ನೀರು ಕುಡಿದು ಕಾಯಿಲೆ ಬೀಳೋದು ವಾಸಿ ಅನಿಸಿತು. ಅಷ್ಟಕ್ಕೂ ಕೆರೆ ನೀರು ಕುಡಿದ ತಕ್ಷಣ ಕಾಯಿಲೆ ಬರುತ್ತಾ ? ಏನೋ ತಿಂದು ಏನೋ ಕಾಯಿಲೆ ತಂದುಕೊಂಡು ಹೋಟೇಲಿನ ಕಾಯದ ನೀರು ಅಂತ ಕಾರಣ ಹೇಳಿರಬಹುದೇ ಅಂತಲೂ ಪ್ರಶ್ನಿಸಿತು ವಿವೇಕ ಒಮ್ಮೆ. ಕೆರೆಯಲ್ಲಿ ನೀರನ್ನು ಬೊಗಸೆ ತುಂಬಿ ಕುಡಿಯಲು ಮುಂದಾದಾಗ ಕೆರೆಯಲ್ಲಿ ಸಾವಿರಾರು ಬಿಸ್ಲೇರಿ ಬಾಟಲಿಗಳು ತೇಲಿದಂತೆ ಕಂಡು, ಅವುಗಳಲ್ಲೊಂದು ಪ್ಲಾಸ್ಟಿಕ್ ತುಂಡು ಕೈಗೆ ಬಂದಂತಾಗಿ ನೀರನ್ನು ಚೆಲ್ಲಿ ಬಿಟ್ಟ. ಮತ್ತೆ ನೋಡಿದರೆ ಎಲ್ಲಾ ಭ್ರಮೆ. ಅಲ್ಲಿದ್ದಿದ್ದು ಸ್ವಚ್ಛ ನೀರಷ್ಟೇ. ತನ್ನ ಭ್ರಮೆಗೆ ಬೆಚ್ಚಿ ಎರಡನೇ ಬಾರಿ ಬೊಗಸೆಯಲ್ಲಿ ನೀರು ಬಗೆದಾಗ ಹಳೆಯ ನೆನಪುಗಳು ಮರುಕಳಿಸಿದವು. ಹೋದಲ್ಲೆಲ್ಲಾ ನನಗೆ ಬಿಸ್ಲೇರಿಯೇ ಬೇಕು ಎಂದು ಹಟ ಬೀಳುತ್ತಿದ್ದ ತನಗೆ ಬಿಸ್ಲೇರಿ ಬಾಟಲಿ ತಂದುಕೊಡಲು ಅವರು ಎಷ್ಟು ಕಷ್ಟಪಟ್ಟಿರಬಹುದು ? ಹುಚ್ಚು ಹಟ ತಂದಿರಬಹುದಾದ ನೂರು ನೋವು ನಾಚಿಕೆ ಹುಟ್ಟಿಸಿತು. ನಾನು ಸೇಫಾಗಿ ಪಟ್ಟಣ ಸೇರಿದರೆ ಸಿಕ್ಕೋ ಸ್ವಚ್ಚ ನೀರನ್ನೇ ಕುಡಿತೇನೆ. ಕಾದ ನೀರು , ಬಿಸ್ಲೇರಿ, ಮಿನರಲ್ ವಾಟರ್ರೇ ಬೇಕೆನ್ನೋ ಹುಚ್ಚುತನ ಬಿಡುತ್ತೇನೆ ಅಂದುಕೊಂಡ.

ಕೆರೆಯ ನೀರು ಕುಡಿದು ಹಾಗೇ ರಸ್ತೆಗೆ ಮರಳುತ್ತಿದ್ದವನಿಗೆ ಕೆರೆಯ ದಂಡೆಯಲ್ಲಿದ್ದ ಪೇರಲೆ ಮರವೊಂದು ಕಾಣಿಸಿತು. ನೆಲಕ್ಕೆ ಬಿದ್ದಿದ್ದ ಹಕ್ಕಿ ಕಚ್ಚಿದ್ದ ಪೇರಲೇ ಹಣ್ಣುಗಳೂ ಇವನಿಗೆ ಪೇಟೆಯ ಫಿಜ್ಜಾ ಬರ್ಗರಿನಂತೆ ಕಂಡವು. ಬರ್ಗರ್ ಕಂಡು ಖುಷಿಯಾಗಿ ಕೈ ಹಾಕಿದವನಿಗೆ ಸಿಕ್ಕಿದ್ದು ಅರೆ ತಿಂದ ಪೇರಲೇ ಕಾಯಿ! ಛೇ, ನೆಲಕ್ಕೆ ಬಿದ್ದಿದ್ದು ಮಣ್ಣು, ಹಕ್ಕಿ ತಿಂದಿದ್ದು. ಇದನ್ನೆಲ್ಲಾ ತಿಂದರೆ ಏನಾಗುತ್ತೋ, ಕೊಳಕು ಅಂದಿತು ಮನಸ್ಸು. ಏನೂ ಆಗಲ್ಲ. ಹಸಿವಿಂದ ಆಯೋ ಬದ್ಲು ಇದನ್ನ ತಿಂದು ಕಾಯಿಲೆ ಬರಿಸ್ಕೊಂಡ್ರೂ ಪರವಾಗಿಲ್ಲ. ಪಕ್ಕದಲ್ಲೇ ಕೆರೆಯ ಸ್ವಚ್ಛ ನೀರಿದೆ. ಬೇಕಾದ್ರೆ ತೊಳೆದುಕೋ ಎಂದಿತು ವಿವೇಕ. ಮೊದಲ ಪೇರಲೇ ಹಣ್ಣನ್ನ ಮತ್ತೆ ಕೆರೆಯ ನೀರಿನಲ್ಲಿ ತೊಳೆದುಕೊಂಡು ಗಬಗಬನೆ ತಿಂದ. ಎರಡನೆಯದನ್ನು ತೊಳೆಯುವಷ್ಟೂ ವ್ಯವಧಾನವಿರಲಿಲ್ಲ. ನೋಡಿದ, ಧೂಳೇನೂ ಕಾಣಲಿಲ್ಲ. ಧೂಳು ಕಾಣುವಷ್ಟು ಬೆಳಕಿರದ ಕತ್ತಲೆಯಾಗಿತ್ತು , ಚಂದ್ರನ ಬೆಳಕೂ ಅಷ್ಟು ಪ್ರಕರವಾಗಿರಲಿಲ್ಲ. ಕಂಡಿದ್ದರೂ ಪೇರಲೇ ಹಣ್ಣು ದೂರಕ್ಕೆಸೆಯುವಷ್ಟು ಹೊಟ್ಟೆ ತುಂಬಿದಂತ ಸ್ಥಿತಿ ಅವನದಾಗಿರಲಿಲ್ಲ. ಏನು ಸಿಕ್ಕಿದರೂ ತಿನ್ನುವಂತಾಗಿದ್ದ ಅವ.. ಎರಡು ಪೇರಲೇ ಹಣ್ಣು ತಿನ್ನುವಷ್ಟರ ಹೊತ್ತಿಗೆ ಕತ್ತಲು ಬರುವಂತಾಗಿದ್ದ ಕಣ್ಣು, ಹಸಿದಸಿದು ತಿರುಗುವಂತಾಗಿದ್ದ ತಲೆ ಸ್ವಲ್ಪ ಸ್ಥಿಮಿತಕ್ಕೆ ಬಂತು. ಸುತ್ತ ಬಿದ್ದಿದ್ದ ಅನೇಕ ಪೇರಲೇ ಹಣ್ಣುಗಳು ಕಂಡವು. ತಾನು ತರಿಸಿ ತಿನ್ನದೇ ಅರ್ಧ ಎಸೆಯುತ್ತಿದ್ದ ಬರ್ಗರು, ಫಿಜ್ಜಾಗಳೂ , ದಿನಾ ಊಟದಲ್ಲಿ ಬಡಿಸಿಕೊಂಡು ತಿನ್ನದೇ ಚೆಲ್ಲುತ್ತಿದ್ದ ಅನ್ನ, ಪಲ್ಯಗಳು ನೆನಾಪಾದವು. ಹೊತ್ತು ತುತ್ತಿಗಾಗಿ ದೇವಸ್ಥಾನದವರು ಕೊಡುತ್ತಿದ್ದ ಬೊಗಸೆ ಮೊಸರನ್ನಕ್ಕೆ ಜಗಳವಾಡುತ್ತಿದ್ದ ಭಿಕ್ಷುಕರ ಮಕ್ಕಳು, ತಾನು ಬೇಕರಿಯಲ್ಲಿ ಕೇಕು , ಬನ್ನುಗಳನ್ನು ತಗೊಂಡು ತಿನ್ನುವಾಗ ನನಗೂ ಒಂಚೂರು ಕೊಡಿ ಅಣ್ಣಾ .ಊಟವಿಲ್ಲದೇ ಮೂರು ದಿನವಾಯಿತು ಅಂತ ಬೇಡುತ್ತಿದ್ದ ಮಕ್ಕಳನ್ನು ನೋಡಿ ಅಸಹ್ಯಪಟ್ಟುಕೊಳ್ಳುತ್ತಿದ್ದುದು ನೆನಪಾಯಿತು. ಹಸಿವಿನ ಬೆಲೆ ಅರಿತಿದ್ದರಿಂದ ಸುರಕ್ಷಿತವಾಗಿ ಊರು ಸೇರಿದ್ರೆ ಮಾಡಬೇಕೆನ್ನೋ ಹೊಸವರ್ಷದ ಎರಡನೇ ಪ್ರತಿಜ್ನೆ ರೆಡಿಯಾಯ್ತು. ಅಗತ್ಯವಿದ್ದಷ್ಟು ಮಾತ್ರ ಬಡಿಸಿಕೊಂಡು ಒಂದಗುಳು ಅನ್ನವನ್ನೂ ಚೆಲ್ಲೊಲ್ಲ. ಹೊಟ್ಟೆಗಿಲ್ಲದಿರೋ ಜನರನ್ನ ಕಂಡಾಗ ಕೈಲಾದಷ್ಟು ಸಹಾಯ ಮಾಡ್ತೇನೆ. ಅನ್ನೋ ಪರಬ್ರಹ್ಮ ಅಂತ ತೀರ್ಮಾನಕ್ಕೆ ಬಂದ. ರಸ್ತೆಗೆ ಮರಳಿ ಸುಮಾರು ಹೊತ್ತು ಹಾಗೇ ನಡೆದ, ಊರು ಹುಡುಕಿ.

ಊರಿನ ಯಾವ ಬೆಳಕು ಕಾಣದಿದ್ದರೂ ಯಾರೋ ಕೆಮ್ಮುತ್ತಿದ್ದಂತೆ ಸದ್ದು ಕೇಳಿತು. ಕೊನೆಗೂ ಯಾವುದೋ ಮನುಷ್ಯ ದನಿ ಕೇಳಿತಲ್ಲಾ ಅಂತ ಸದ್ದು ಬಂದ ಕಡೆಗೆ ಲಗುಬಗೆಯಿಂದ ಹೆಜ್ಜೆ ಹಾಕಿದ. ನೋಡಿದರೆ ಒಬ್ಬ ಮುದುಕ ಮರದ ಬುಡದಲ್ಲಿ ಸಣ್ಣಗೆ ಬೆಂಕಿ ಹಾಕಿ ಅದರಲ್ಲೇ ಚಳಿ ಕಾಯಿಸುತ್ತಾ, ಬೀಡಿ ಹಿಡಿದು ಕೆಮ್ಮುತ್ತಾ ಕೂತಿದ್ದಾನೆ. ಕೆಮ್ಮಿ ಕೆಮ್ಮಿ ಹೈರಾಣಾಗಿ ಹೋದಂತಿದ್ದರೂ ಆತ ಬೀಡಿ ಬಿಡಲೊಲ್ಲ. ಅತನನ್ನು ನೋಡಿ ಏನೋ ಕೇಳಬೇಕೆನಿಸಿದವನಿಗೆ ಸಿಗರೇಟು ಬಿಡಲೊಲ್ಲದೇ ಒದ್ದಾಡಬೇಕಾದ ತನ್ನ ವೃದ್ದಾಪ್ಯ ಕಣ್ಣ ಮುಂದೆ ಬಂದತಾಗಿ ಬೆಚ್ಚಿ ಬಿದ್ದ. ಬೀಸಲಾರಂಬಿಸಿದ ತಣ್ಣನೆಯ ಗಾಳಿಗೋ, ತನ್ನ ವೃದ್ದಾಪ್ಯದ ನರಳಾಟದ ಕಲ್ಪನೆಗೋ ಮೈಯೆಲ್ಲಾ ನಡುಗಲಾರಂಭಿಸಿತು. ಚಳಿಗೆ ಶಿಕಾಪಟೆ ನಡುಗ್ತಿದಿ. ತಗಾ, ಈ ಕಂಬ್ಳಿ ಹೊದ್ಕ. ಆಮೇಲೆ ಮಾತಾಡೋವಂತಿ ಅಂತ ಆ ಮುದುಕ ಒಂದು ಕಂಬಳಿ ತನ್ನ ಮೈಮೇಲೆ ಹೊಚ್ಚಿದಾಗಲೇ ಇವ ವಾಸ್ತವಕ್ಕೆ ಬಂದಿದ್ದು.

ಯಾರಪ್ಪಾ ನೀ, ಎಲ್ಲಿಂದ ಬಂದಿ ಅಂದ ಆ ಮುದುಕ. ಹೌದು .ಯಾರು ನಾನು ? ಬಂದಿದ್ದಾದ್ರೂ ಎಲ್ಲಿಂದ ? ಹೋಗ್ತಿರೋದು ಎಲ್ಲಿಗೆ ಅಂತ ಇವನಿಗೇ ಗೊಂದಲವಾಯ್ತು. ಒಂದು ಮರದ ಬುಡದಲ್ಲಿ ಮಲಗಿದ್ದೆ . ಕಣ್ಣು ತೆರೆದು ನೋಡುವಷ್ಟರಲ್ಲಿ ಕತ್ತಲಾಗಿತ್ತು. ನನ್ನದು ಯಾವ ಊರೋ, ಯಾವ ಕೇರಿಯೋ ನೆನಪಾಗ್ತಾ ಇಲ್ಲ. ನನ್ನವರ ಹುಡುಕಿಕೊಂಡು ಮುಂದೆ ಸಿಗೋ ಹಳ್ಳಿಗೆ ಹೊರಟಿದ್ದೇನೆ ಅಂದ ಇವ. ಆ ಮುದುಕ ಒಮ್ಮೆ ನಸುನಕ್ಕ. ಯಾಕೆ ನಗ್ತಿದಿ ಅಜ್ಜಾ ಅಂದ ಇವ. ತಾಯೆಂಬೋ ಹೆಮ್ಮರದ ನೆರಳಲ್ಲಿ ಹುಟ್ಟಿ ಬೆಳೆದು , ಆಕಿ ಕೊಟ್ಟ ಹಣ್ಣೇ ಹೊಟ್ಟಿ ತುಂಬಿಸಿದ್ರೂ ಸಮಾಧಾನಿಲ್ಲ. ಅವಳನ್ನೇ ಅಡ್ಡಡ್ಡ ಸಿಗಿದು ಮಾರಿ ದುಡ್ಡು ಮಾಡೋಕೆ ಹೊಂಟಿ ನೀ. ಇನ್ನು ಆ ಮರ ಯಾವುದು ಅಂತ ನಿಂಗೆ ತಿಳಿಯೋದ್ ಹೆಂಗೆ ? ರ್ಆಕಿ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ, ಅಮ್ಮಾ ಅಂತ ಒಂದ್ ಮಾತು ಕರೆದಿದ್ರೆ ಗೊತ್ತಾಗಿಹೋಗ್ತಿತ್ತು ಅಂತ ಅಜ್ಜ ಹೇಳ್ತಿದ್ದರೆ ಒಂದು ಕ್ಷಣವೂ ಬೇರೆಯವರ .. ಹೋಗಲಿ ಹೆತ್ತಮ್ಮನ ಬಗ್ಗೆಯೇ ಯೋಚಿಸಲು ಸಮಯವಿಲ್ಲದಂತಾಗಿರೋ ಅಥವಾ ಹಾಗೆ ನಟಿಸ್ತಾ ಇರೋ ತನ್ನ ಬಗ್ಗೆನೇ ಜಿಗುಪ್ಸೆ ಹುಟ್ಟೋಕೆ ಶುರು ಆಯ್ತು. ಹೊಸ ವರ್ಷದಲ್ಲಿ ತಾನು ಮಾಡಬೇಕಾದ ಮೂರನೇ ಮತ್ತು ನಾಲ್ಕನೇ ಕೆಲಸಗಳೂ ನೆನಪಾಗಿದ್ವು.

ಮತ್ತೆ ಅಜ್ಜ, ಆ ಕೆರೆ, ಪೇರಲೇ ಹಣ್ಣು ಅಂದ. ಆ ಕೆರೆ ಹೆಸ್ರು ದಯಾಸಾಗರ. ದೇಹಿ ಅಂತ ಬಂದವ್ರಿಗೆ ಎಂದೂ ನಾಸ್ತಿ ಅಂದೋರಲ್ಲ ನಿನ್ನಪ್ಪ. ನೀ ಈಗ ಹೊದ್ದಿದೀಯಲ್ಲ ಕಂಬಳಿ. ಅದನ್ನು ಈ ಹದಿಮೂರಜ್ಜಂಗೆ ಕೊಟ್ಟೋರೂ ನಿನ್ನಪ್ಪನೇ. ಎಲ್ಲರ ಕಷ್ಟಕ್ಕೆ ನೆರವಾಗ್ತಿದ್ದ ಅವರ ಪುಣ್ಯವೇ ಒಂದು ಬೊಗಸೆ ನೀರಾಗಿ ನಿನ್ನ ಜೀವ ಉಳಿಸಿದ್ದು ಅಂತ ಜಾರಿದ್ದ ಕಂಬಳಿಯನ್ನ ಹಿಂಬಂದಿಗೆ ಬಂದು ತಲೆಯ ತನಕ ಹೊದಿಸಿದ ಅಜ್ಜ. ನನ್ನ ತಾಯಿ ಮಾಡಿದ ಅನ್ನ ಸಂತರ್ಪಣೆನೇ ಪೇರಳೆ ಹಣ್ಣಾಗಿ ನನ್ನ ಹಸಿವಿಂಗಿಸಿದ್ದ ಹಾಂಗಾರೆ ? ಹೌ ರಿಡಿಕ್ಯುಲಸ್ ಅಂತ ಕಂಬಳಿ ಹೊದೆಸಿದ್ದ ಅಜ್ಜನಿಗಾಗಿ ಹಿಂದೆ ತಿರುಗಿ ನೋಡಿದ. ಅಲ್ಲಿ ಅಜ್ಜನಿಲ್ಲ! ದಾನ, ಧರ್ಮ, ಪಾಪ, ಪುಣ್ಯ ಎಲ್ಲಾ ಮೂಢನಂಬಿಕೆ . ಈ ವೈಜ್ನಾನಿಕ ಯುಗದಲ್ಲೂ ಅದನ್ನೆಲ್ಲಾ ನಂಬೋದೇ ಅಂತಿತ್ತು ವಿವೇಕ. ಹೌದು. ಆದ್ರೆ ಹೊಟ್ಟೆ ತುಂಬಿದ್ದೆಂತೂ ಹೌದು. ಬಾಯಾರಿದ್ದೂ ಹೌದು. ದಾನ ಧರ್ಮಗಳೆಲ್ಲಾ ಸುಳ್ಳೋ ಸತ್ಯವೋ ಅನ್ನೋ ವಾದ ಇತ್ತಟ್ಟಿಗಿಟ್ಟರೂ ನಾನು ಮಾಡಿದ್ದ ನಾಲ್ಕು ಪ್ರತಿಜ್ನೆ ಮಾತ್ರ ನಿಜ ಅಂತು ಮನಸ್ಸು. ಅಂದ ಹಾಗೆ ಈ ಹದಿಮೂರಜ್ಜ ಯಾರು ಅನ್ನೋ ಪ್ರಶ್ನೆ ಹಲವು ಸಲ ಕಾಡಿದ್ರೂ ಇಲ್ಲೇ ಎಲ್ಲೋ ಹೋಗಿರಬಹುದಾದ ಅವನು ಬಂದಾಗ ಕೇಳೇ ಮುಂದೆ ಹೋಗ್ಬೇಕು ಅಂತ ಬೆಂಕಿ ಕಾಯಿಸುತ್ತಾ ಅಲ್ಲೇ ಕೂತ. ಹಾಗೇ ಯಾವಾಗ ಕಣ್ಣಿಗೆ ನಿದ್ದೆ ಹತ್ತಿತೋ ಗೊತ್ತಿಲ್ಲ.. ಮೊಬೈಲಿನ ಧೂಮ್ ಮಚಾಲೇ ಹಾಡು ಯಾರದೋ ಕರೆ ಬರ್ತಿದೆ. ಬೇಗ ಬಂದು ಎತ್ತೋ ಅಂತ ಬೈದು ಬೈದು ಎಬ್ಬಿಸಿದ್ದು, ಕಣ್ಣು ಬಿಟ್ಟರೆ ಎಂದಿನ ಹಾಸಿಗೆಯಲ್ಲೇ ಮತ್ತೆ ಪವಡಿಸಿರೋದು ಮಾತ್ರ ಅರಿವಿಗೆ ಬಂದಿತ್ತು.. ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

Tuesday, December 24, 2013

ಅರ್ಧ

ಅರೆಬೆಂದ ತರಕಾರಿ, ಅಡ್ಡಗೋಡೆಯ ಮೇಲಿಟ್ಟಂತೆ ಅರ್ಧ ಪೂರ್ತಿ ಮಾಡಿದ ಮಾತು, ಒಂದೇ ಹೃದಯವೆನ್ನುವಂತಿದ್ದಾಗ ದೂರಾದ ಎರಡು ಅರ್ಧಗಳು, ಅರ್ಧಾಂಗಿ ದೂರಾಗಿ ವಿರಹವೇದನೆಯಿಂದ ಬಳಲುತ್ತಿರೋ ಉಳಿದರ್ಧ.. ಹೀಗೆ ಅರ್ಧವೆನ್ನೋದು ಕೊಡೋ ವೇದನೆ ಅಷ್ಟಿಷ್ಟಲ್ಲ. ಅರೆಬರೆದ ಕವನವೋ, ಕತೆಯೋ ಮುಗಿಸಲಾಗದಿದ್ದರೆ ನನ್ನನ್ನು ಶುರುವಾದರೂ ಯಾಕೆ ಮಾಡಿದೆಯೋ ಎನ್ನುವಾಗ ಆಗೋ ನರಳಾಟವೂ ಕಮ್ಮಿಯಲ್ಲ , ಅರೆಕ್ಷಣದಲ್ಲಿ ಒಲಿಂಪಿಕ್ ಪದಕ ತಪ್ಪಿದಾಕೆ, ಅರೆಕ್ಷಣ ಮೈಮರೆತಿದ್ದೆ ಜೀವನವೇ ಹಾಳಾಯ್ತು ಅನ್ನೋ ವ್ಯಕ್ತಿ, ಅರೆಕ್ಷಣ ನಿದ್ರೆ ತೂಕಡಿಸಿತ್ತಷ್ಟೇ.. ಎಚ್ಚೆತ್ತುಕೊಳ್ಳೋದ್ರಲ್ಲಿ ಅನಾಹುತ ಘಟಿಸಿಹೋಗಿತ್ತು ಅನ್ನೋ ಡ್ರೈವರುಗಳು ಆ ಅರೆಕ್ಷಣಕ್ಕೆ ಜೀವನವಿಡೀ ಪರಿತಪಿಸೋ ಪರಿ ಯಾರಿಗೂ ಬೇಡ. ಹಲ್ಲಿ, ಹಾವು, ನೊಣ, ಸೊಳ್ಳೆಯಂತ ಜೀವಿಗಳ ಕೊಲ್ಲಹೋಗಿ ಅವು ಸಾಯದೇ, ಅರ್ಧ ಜೀವವಾಗಿದ್ದಾಗಿನ ನರಳಾಟ ನೋಡಲಾಗದು. ಜೀವಚ್ಚವವಾಗಿ ಅರ್ಧ ಬದುಕಿ ಅರ್ಧ ಸತ್ತಂತಿರೋ ಜೀವಗಳಿಗೆ “ದಯಾಮರಣ” ಕೊಡಬೇಕೆನ್ನೋ ವಾದ-ವಿವಾದಗಳು ಅತ್ತ ನಿರಾಕರಣೆಯನ್ನು ಕಾಣದೆ ಇತ್ತ ಸಮ್ಮತಿಯನ್ನೂ ಪಡೆಯದೇ ಅತ್ತ ಹೋಗದೇ, ಇತ್ತಲೂ ಮರಳದ ಅರ್ಧದಾರಿಯಲ್ಲಿರುವುದು ಬೇರೆ ಮಾತಾದರೂ ಈ ಅರ್ಧವೆನ್ನೋದರ ನೋವು ಅರ್ಥವಾಗದವರ ಕಣ್ಣಲ್ಲೂ ನೀರಿಳಿಸುತ್ತದೆ. ಆದರೆ ಈ ಅರ್ಧವೆನ್ನೋದು ನೋವನ್ನೇ ತರುತ್ತೆ ಅನ್ನೋದೂ ಅರ್ಧ ಸತ್ಯವಷ್ಟೇ.ಅರ್ಧ ರಾತ್ರಿಗೇ ನಮ್ಮ ದೇಶಕ್ಕೆ ಸಿಕ್ಕ ಸ್ವಾಂತಂತ್ರ್ಯ, ಮಧ್ಯ ರಾತ್ರಿಯಾದ ಮೇಲೆಯೇ ಪುಸ್ತಕ ತೆಗೆಯೋ ನೈಟೌಟುಗಳು.. ಅರ್ಧ ಮಸಾಲೆಪುರಿ, ಬೈಟು ಕಾಫಿಗಳು ಹೀಗೆ ಅರ್ಧವೆನ್ನೋದು ವಿದ್ಯಾರ್ಥಿ ಜೀವನದಲ್ಲಿ ಕೊಟ್ಟ ಖುಷಿ ಮರೆಯೋದೇಗೆ ? ಅರ್ಧ ರೂಪಾಯಿಯ ಐಸ್ ಕ್ಯಾಂಡಿ, ಸೈಕಲ್ ರೈಡುಗಳು ಕೊಟ್ಟ ಮಜಾ.. ವಾಹ್. ಅದೆಲ್ಲಾ ಹೌದು. ಇದ್ದಕ್ಕಿದ್ದಂತೆ ಈ ಅರ್ಧದ ಬಗೆಗಿನ ಮಾತೇಕೆ ಅಂದಿರಾ ? ಇದಕ್ಕೆ ನಿನ್ನೆಯ ಬೆಳಗ್ಗೆ ಹನ್ನೆರಡರ ಸುಮಾರಿಗೆ, ಹನ್ನೆರಡನ್ನುವುದು ಬೆಳಗ್ಗೆಯೋ ಮಧ್ಯಾಹ್ನವೋ ಅನ್ನೋ ಮಾತು ಸದ್ಯಕ್ಕೆ ಆಚೆಗಿಟ್ಟು ಅರ್ಧದಿನ ಕಳೆದಾಗ ಅಂದಿಟ್ಟುಕೊಳ್ಳಬಹುದಾಗ ನಡೆದ ಘಟನೆಯೇ ಸ್ಪೂರ್ತಿ. ಬೆಂಗಳೂರಲ್ಲಿ ಅರ್ಧಕ್ಕರ್ದ ದಾರಿ ತಪ್ಪಿಸೋರೇ ಇರ್ತಾರೆ ಅಂತ ಇಲ್ಲಿಗೆ ಬಂದ ಎರಡು ವರ್ಷಗಳಲ್ಲಿ ಮೂಡಿದ ಭಾವವಾಗಿತ್ತು. ಗೌತಮ ಬುದ್ದ ಕಾಲೇಜು, ಅಂಬೇಡ್ಕರು ಇಂಜಿನಿಯರಿಂಗ್ ಕಾಲೇಜಿನ ಹತ್ರ ಹೋಗೋಕೆ ಯಾವ ಬಸ್ಸು ಅಂದವನಿಗೆ ಅಂಬೇಡ್ಕರ್ ಮೆಡಿಕಲ್ ಕಾಲೇಜಿನ ಬಸ್ಸು ಹತ್ತಿಸಿದ ಮಂದಿ.. ತದ್ವಿರುದ್ದ ದಿಕ್ಕಿನಲ್ಲಿರೋ ಅಲ್ಲಿ ಹೋಗಿ ಇಳಿದಾಗ ಬೆಂಗಳೂರಲ್ಲಿ ಎಪ್ಪತ್ತು ಕಾಲೇಜಿದೆ. ಅಡ್ರೆಸ್ ತಿಳಿಯದೇ ಎಲ್ಲೆಲ್ಲಿಗೋ ಹೋಗೋದು ನಿನ್ನ ಕರ್ಮವೆಂದು ಬಯ್ಸಿಕೊಳ್ಳಬೇಕಾದ ಪರಿಸ್ಥಿತಿ. ದೊಮ್ಮಲೂರಿನ ಪಕ್ಕದ ಕಮಾಂಡ್ ಆಸ್ಪತ್ರೆಗೆ ಹೋದಾಗ ಮೆಜೆಸ್ಟಿಕ್ಕಿಗೆ ವಾಪಾಸ್ ಹೋಗೋಕೆ ಬಸ್ಟಾಂಡೆಲ್ಲಿ ಅಂದವನಿಗೆ ಅಲ್ಲೇ ಎಡಪಕ್ಕದಲ್ಲಿದ್ದ ಬಸ್ಟಾಂಡ್ ತೋರಿಸದೇ ಒಂದೂವರೆ ಕಿಲೋಮೀಟರ್ ದೂರದಲ್ಲಿ ಬಲಬದಿಗಿದ್ದ ಬಸ್ಟಾಂಡಿಗೆ ದಾರಿ ತೋರಿದವರು! , ಹೆ.ಎಸ್. ಆರ್ ಲೇಔಟಿಂದ ಮೆಜೆಸ್ಟಿಕ್ಕಿಗೆ ಹೋಗಬೇಕಾದವನಿಗೆ ಸಿಲ್ಕ್ ಬೋರ್ಡಿಗೆ ಬಸ್ಸಿನ ದಾರಿ ತೋರೋ ಬದಲು ಎರಡೂವರೆ ಕಿಲೋಮೀಟರ್ ಇನ್ಯಾವುದೋ ಒಳದಾರಿಯಲ್ಲಿ ನಡೆಸಿದ ಪುಣ್ಯಾತ್ಮರು,,, ಹೀಗೆ ಇಲ್ಲಿ ಪ್ರತೀ ಬಾರಿ ಬಸ್ಸುಹತ್ತೋ ಮೊದ್ಲು ಗೂಗಲ್ಲಲ್ಲಿ ಅಡ್ರೆಸ್ ಹುಡ್ಕಿ ಹೋಗಬೇಕಾಗುವುದನ್ನು ನೆನಪಿಸೋರು ಹಲವು ಮಂದಿ. ಹಲವು ಆಸೆಗಳ ಹೊತ್ತು ಬೆಳಗ್ಗೆಯ ತಿಂಡಿ ತಿಂದು ಮನೆ ಬಿಟ್ಟವನು ಮಧ್ಯಾಹ್ನದ ಊಟಕ್ಕೂ ಗತಿಯಿಲ್ಲದೇ ಎಲ್ಲೆಲ್ಲೋ ಅಲೆದಲೆದು ಸಂಜೆಯ ಹೊತ್ತಿಗೆ ಹೇಗೋ ಅಡ್ರೆಸ್ ಹುಡುಕಿ ಮೆಜೆಸ್ಟಿಕ್ಕಿಗೆ ಬಂದ ದಿನಗಳು, ಕನಸುಗಳೂ ಬೇಡ, ಇಲ್ಲಿನ ಅಲೆಮಾರಿತನವೂ ಬೇಡ, ಮರಳಿಬಿಡೋಣ ಎನಿಸಿದ್ದ ದಿನಗಳೆಷ್ಟೋ. ದಾರಿಯಲ್ಲಿ ಹೋಗ್ತಿದ್ದವರನ್ನ ಕೇಳಿದರೆ ಗೊತ್ತಿಲ್ಲ ಅನ್ನೋ ಉತ್ತರವೇ ಖಾಯಂಮ್ಮಾಗಿ ಇಲ್ಲಿ ಪೋಲಿಸರನ್ನ, ಆಟೋದವ್ರನ್ನ ಮಾತ್ರ ಅಡ್ರೆಸ್ ಕೇಳ್ಬೇಕು. ಇನ್ಯಾರನ್ನೂ ಅಡ್ರೆಸ್ಸೇ ಕೇಳಬಾರದೆನಿಸಿಬಿಟ್ಟಿತ್ತು. ಆದರೆ ಇದೇ ವಾಸ್ತವವನ್ನೋ ಭ್ರಮೆ ಹರಿದಿದ್ದು ನಿನ್ನೆಯ ಹನ್ನೆರಡರ ಹೊತ್ತಿಗೆ.. ಬೆಂಗಳೂರಲ್ಲಿ ಮಲ್ಲೇಶ್ವರಂ ಅಂತ ಗೂಗಲ್ಲಲ್ಲಿ ಕೊಟ್ರೆ ತಮಿಳರ ಅಡ್ಡ ಅನ್ನೋ ಹಲ ಕೊಂಡಿಗಳು ತೆರೆದುಕೊಳ್ಳುತ್ತೆ. ಆದ್ರೆ ಈ ಮಲ್ಲೇಶ್ವರಂ ಅಥವಾ ಮಲ್ಲೇಶ್ವರಕ್ಕೆ ಆ ಹೆಸ್ರು ಬಂದಿದ್ದು ಅಲ್ಲಿರೋ ೧೭ನೇ ಶತಮಾನದ ಕಾಡುಮಲ್ಲಿಕಾರ್ಜುನ ಅಥವಾ ಕಾಡುಮಲ್ಲೇಶ್ವರ ದೇವಸ್ಥಾನದಿಂದ ಅಂತ ಅನೇಕರಿಗೆ ತಿಳಿದಿರಲಾರದು. ಅಲ್ಲಿನ ಸಾಯಿ ಭವನ, ನಂದಿ ತೀರ್ಥ, ಗಂಗಮ್ಮ, ವೆಂಕಟೇಶ, ಈಶ್ವರ ಹೀಗೆ ಹಲವು ದೇಗುಲಗಳಿರೋ ದೇಗುಲ ಬೀದಿಯ ದರ್ಶನ ಮುಗಿಸಿ ಮಲ್ಲೇಶ್ವರಂನ ಫ್ಲೈ ಓವರ್ ಬಳಿ ನಿಂತಿದ್ದೆವು.ಮುಂದೆ ಮಂತ್ರಿ ಮಾಲೆಂಬೋ ಗಮ್ಯ ಮನದಲ್ಲಿತ್ತು. ಆದ್ರೆ ಹೇಗೆ ಸಾಗಬೇಕೆಂಬೋ ದಾರಿ ಗೊತ್ತಿರಲಿಲ್ಲ. ಫ್ಲೈ ಓವರಿನ ಎಡಕ್ಕೆ ಹೋದರೆ ಬಸ್ಟಾಂಡೋ, ಬಲಕ್ಕೆ ಹೋದರೆ ಬಸ್ಟಾಂಡೋ ಎಂಬ ಮಾತಲ್ಲಿದ್ದೆವು. ಸೀದಾ ನಡೆದರೆ ಮಂತ್ರಿ ಮಾಲೇ. ಆದರೆ ಅದು ಎಷ್ಟೂ ದೂರವೋ ಗೊತ್ತಿಲ್ಲ. ಅದಲ್ಲದೇ ಒನ್ ವೇ ಬೇರೆ. ಸೀದಾ ಬಸ್ಸುಗಳೂ ಹೋಗಲ್ಲ. ಸರಿ ಅಲ್ಲಿದ್ದ ಆಟೋದವ್ರ ಬಳಿ ಕೇಳಬೇಕು ಅಂತ ಮಾತಾಡ್ತಿದ್ವಿ. ಮಂತ್ರಿ ಮಾಲ್ ಇಲ್ಲೇ ಹತ್ರ ಅಪ್ಪ. ಒಂದು ನಾನೂರು ಮೀಟರ್ ನಡೆದ್ರೆ ಸಿಗುತ್ತೆ ಅನ್ನೋ ಮಾತು ಕೇಳಿಬಂತು ಹಿಂದಿಂದ. ಬೆಂಗಳೂರಲ್ಲಿ ಕನ್ನಡ ! ಅದೂ ಅನಪೇಕ್ಷಿತವಾಗಿ.. ಕನ್ನಡಿಗರೊಂದಿಗೂ ಮೊದಲ ಬಾರಿ ಇಂಗ್ಲೀಷಿನಲ್ಲಿ ಶುರು ಮಾಡಿ ಆಮೇಲೆ ಕನ್ನಡದವರು ಅಂತ ಅರಿತು ಕನ್ನಡಕ್ಕೆ ಎಳೆಯಬೇಕಾದ ಪರಿಸ್ಥಿತಿ ಬಂದಿರೂ ಸಂದರ್ಭದಲ್ಲಿ ಕೇಳಿದ ಕನ್ನಡ ಖುಷಿಯನ್ನೂ, ಅಚ್ಚರಿಯನ್ನೂ ತಂದಿತು. ಕನ್ನಡಾಂಬೆಯೇ ನಮ್ಮ ಮೇಲೆ ಕರುಣೆ ತೋರಿ ಮೂರ್ತಿವೆತ್ತು ಬಂದಿದ್ದಾಳೋ, ಅಥವಾ ಆಶರೀರವಾಣಿಯೋ ಎಂದೂ ಒಮ್ಮೆ ಅನುಮಾನ ಮೂಡಿತು. ಹಿಂದೆ ತಿರುಗಿ ನೋಡಿದರೆ ಅದು ಆಶರೀರವಾಣಿಯಲ್ಲ ಮಹಿಳಾ ವಾಣಿ. ಇಬ್ಬರು ನೀಳವೇಣಿ ತಾಯಂದಿರು ನಮ್ಮ ಹಿಂದೇ ಬರುತ್ತಿದ್ದರು. ಆಟೋದವ್ರಿಗೆ ಕೇಳ್ಬೇಡಿ ಅಪ್ಪಾ. ಅವ್ರು ಎಲ್ಲೆಲ್ಲೋ ಸುತ್ತಿಸಿ ಸುತ್ತಿಸಿ ಹೋಗ್ತಾರೆ. ಸೀದಾ ನಡ್ಕೊಂಡು ಹೋಗಿಬಿಡಿ. ಮಂತ್ರಿ ಮಾಲ್ ಸಿಗುತ್ತೆ ಅಂದ್ರು. ಹೂಂ ಸರಿ ಅಕ್ಕಾ, ತುಂಬಾ ಥ್ಯಾಂಕ್ಸ್ ಅಂದೆ. ಬಾಯ್ತುಂಬಾ ಧನ್ಯವಾದಗಳು ಅನ್ನದೇ ದರಿದ್ರ ಅಭ್ಯಾಸ ಬಲದಿಂದ ಥ್ಯಾಂಕ್ಸೆಂದ ನಾಲಿಗೆಗೆ ಮನಸ್ಸು ಶಪಿಸ್ತಾ ಇದ್ರೂ ಧನ್ಯವಾದಗಳು ಅಂದ್ರೆ ಇವ್ನು ಯಾವ ಲೋಕದ ಜೀವಿ ಅಂತ ನೋಡ್ತಾರೇನೋ ಅನ್ನೋ ಅಳುಕು ಕುಟುಕ್ತಾ ಇತ್ತು! ಅವರು ಹೇಳಿದಂತೆ ಹತ್ತೇ ನಿಮಿಷದಲ್ಲಿ ಮಂತ್ರಿ ಮಾಲ್ ಹತ್ರ ಇದ್ವಿ ಆಮೇಲೆ.. ಇದರೊಂದಿಗೆ ಇಲ್ಲಿ ಸಹಾಯ ಕೇಳಿದ್ರೂ ಸಹಾಯ ಮಾಡಲ್ಲ. ಸಹಾಯ ಮಾಡೋದು ಹೋಗ್ಲಿ ತಮ್ಮ ಪಕ್ಕದ ಅಪಾರ್ಟಮೆಂಟಲ್ಲಿರೋರ ಹೆರ್ಸೂ ಗೊತ್ತಿರೋಲ್ಲ ಅಂತ ಕಂಡ ಕೆಲ ಸಂಗತಿಗಳನ್ನೇ ವಾಸ್ತವವೆಂದು ಭಾವಿಸಿದ್ದ ಭ್ರಮೆ ಕರಗಿಹೋಯ್ತು. ಮಾರತ್ತಳ್ಳಿಯ ಮೂಲೆಯಲ್ಲಿ ಕನ್ನಡಕ್ಕಾಗಿ ಕಾತರಿಸುತ್ತಿರೋ ಕಿವಿ ಮಲ್ಲೇಶ್ವರದ ಕನ್ನಡ ವಾತಾವರಣದಿಂದ ಖುಷಿಯಾಗಿತ್ತು. ಮತ್ತೆ ಮಂತ್ರಿ ಮಾಲಿಗೆ ಕಾಲಿಟ್ರೆ ಅಲ್ಲೊಂದು ನೃತ್ಯ ಕಾರ್ಯಕ್ರಮಕ್ಕೆ ಆಯ್ಕೆ(ಅದೇ ರೀ ಆಡಿಷನ್!!) ನಡೀತಾ ಇತ್ತು. ಅದು ಕನ್ನಡ ಕಾರ್ಯಕ್ರಮ ಅನ್ನೋದು ಅಲ್ಲಿದ್ದ ಫಲಕಗಳಿಂದ ಮಾತ್ರ ಗೊತ್ತಾಗಬೇಕಿತ್ತಷ್ಟೇ. ಲುಂಗಿ ಡ್ಯಾನ್ಸ್ ಲುಂಗಿ ಡ್ಯಾನ್ಸ್, ಮತ್ತೊಂದು , ಇನ್ನೊಂದು .. ಹೀಗೆ ಕನ್ನಡ ಬಿಟ್ಟು ತಮಿಳು, ತೆಲುಗು, ಹಿಂದಿ ಹೀಗೆ ಬೇರೆಲ್ಲಾ ಭಾಷೆಗಳ ಹಾಡುಗಳು, ಅದಕ್ಕೆ ಡ್ಯಾನ್ಸು!! ಅದಕ್ಕೊಬ್ಬ ನಿರೂಪಕನ ಬದಲು ಆಂಕರ್ರು. ಹೌ ಆರ್ ಯೂ ಫೀಲಿಂಗ್ ಅಂತ ಇವನಂದ್ರೆ ಕುಣಿದು ಕುಣಿದು ಸುಸ್ತಾಗಿದ್ದವ ಒಂದೂವರೆ ನಿಮಿಷ ಇಂಗ್ಲೀಷಲ್ಲಿ ಮಾತಾಡಿದ !! ಇಂಗ್ಲೀಷ್ ಅರ್ಥವಾಗೋಲ್ಲ ಅಂತಲ್ಲ. ಈ ತರದ ಶೋನ ಡಿಸ್ಕವರಿ ಚಾನಲ್ಲವ್ರೋ, ಹಿಂದಿಯ ಜೀ ಟೀವರ್ರೋ ನಡೆಸಿದ್ರೆ ಬೇಜಾರಾಗ್ತಿರ್ಲಿಲ್ಲ. ಆದ್ರೆ ಪಕ್ಕಾ ಕನ್ನಡದ ಚಾನೆಲ್ಲೊಂದು.. ಬಿಡಿ ಆ ವಿಷಯ.ಅಲ್ಲಿ ನಿಲ್ಲೋಕಾಗದೆ ಮುಂದೆ ನಡೆದ್ವಿ. ಮತ್ತೆ ಅಂದು ಸಿಕ್ಕ ಮಹಿಳಾ ಮಣಿಗಳ ವಿಷಯಕ್ಕೆ ವಾಪಾಸ್ ಬರ್ತೀನಿ. ಯಾವೂರಪ್ಪ ಅಂದ್ರು. ಅವ್ರಿಗೂ ಆಶ್ಚರ್ಯ ಆಗಿರ್ಬೇಕು ನಮ್ಮ ನೊಡಿ. ಈ ಬೆಂಗ್ಳೂರಲ್ಲಿ ಹುಡುಗರಿಬ್ರು ನಡ್ಕೊಂಡು ಹೊರಟಿದಾರೆ ಅಂದ್ರೆ, ಅದೂ ಶೂ, ಸ್ಪೈಕು, ಕಿವಿಗೊಂದು ಇಯರ್ ಫೋನ್ ಹಾಕ್ಕೊಳದೇ ಹೊರಗೆ ಕಾಲಿಟ್ಟಿದಾರೆ ಅಂತಂದ್ರೆ ಖಂಡಿತಾ ಇವ್ರು ಇಲ್ಲಿನೋರಲ್ಲ ಅನಿಸಿಬಿಟ್ಟಿರ್ಬೇಕು ಅವ್ರಿಗೆ. ಯಾವೂರಪ್ಪ ನಿಮ್ಮದು ಅಂದ್ರು. ಬೆಂಗಳೂರು ಅನ್ನೋಕೆ ಬಾಯಿ ಬರಲಿಲ್ಲ. ಮೂಲ ಜಿಲ್ಲೆಯ ಹೆಸರೇ ಹೇಳಿದ್ವಿ. ಸದ್ಯ ನಮ್ಮೂರು ಬೆಂಗಳೂರೇ ಆಗಿದ್ರೂ ನಮ್ಮ ಮೂಲ ಊರಿನ ಹೆಸ್ರು ಹೇಳಿದ್ದು ಪೂರ್ಣ ಸುಳ್ಳೇನೂ ಆಗಿರ್ಲಿಲ್ಲ. ಪೂರ್ಣ ಸತ್ಯವೂ ಅಲ್ಲ. ಅರ್ಧ ಸತ್ಯ ಅಷ್ಟೇ. ಅರ್ಧ ಸತ್ಯ ಅಂದಾಕ್ಷಣ ನೆನಪಿಗೆ ಬಂತು. ನಾವು ಸಣ್ಣವರಿದ್ದಾಗ ಆ ಹೆಸರಿನ ಧಾರಾವಾಹಿಯೊಂದು ಬರುತ್ತಿತ್ತು. ಧಾರಾವಾಹಿಗಳೆಂದರೆ ಮೂರು ವರ್ಷ, ಏಳೂವರೆ ವರ್ಷಗಳೆಲ್ಲಾ ಚಿಂಗಮ್ಮಿನಂತೆ ಎಳೆಯೋ ಸಂಪ್ರದಾಯವಿರದ ಆ ಕಾಲದಲ್ಲಿ ಅದು ನೂರು, ಇನ್ನೂರು ಕಂತುಗಳನ್ನ ಪೂರೈಸೋದೇ ಒಂದು ದೊಡ್ಡ ಸಂಭ್ರಮವಾಗಿತ್ತು. ಈಗ ಬರ್ತಿರೋ ಎಳೆವಾಹಿಗಳು(ವಿಪರೀತ ಎಳೆಯೋದಕ್ಕೆ ಈ ರೀತಿ ಕರೆಯೋದು ಸೂಕ್ತ ಅಂದುಕೊಂಡಿದ್ದೇನೆ) ಒಟ್ಟೊಟ್ಟಿಗೆ ಎರಡು ಮೂರನ್ನು ನೋಡಿದರೂ ಎಲ್ಲದರ ಕತೆಯನ್ನೂ ಅರ್ಥ ಮಾಡ್ಕೊಂಡು ಜೀರ್ಣಿಸಿಕೊಳ್ಳೋ ಸೂಪರ್ ಶಕ್ತಿವಂತೆಯರನ್ನಾಗಿ ನಮ್ಮ ತಾಯಿ, ತಂಗಿಯಂದಿರನ್ನು ರೂಪಿಸಿಬಿಟ್ಟಿದೆ !. ಅರ್ಧ ಗಮನ ಹೋಂ ವರ್ಕಿನ ಮೇಲೆ, ಅರ್ಧ ಕಾರ್ಟೂನಿನ ಮೇಲಿಡೋದೇ ಅಭ್ಯಾಸವಾಗಿ ಆಗಿ ಕಾರ್ಟೂನಿಲ್ಲದೇ ಹೋಂವರ್ಕೇ ಮಾಡದ ಹುಡುಗರನ್ನ ನಿರ್ಮಿಸಿ ಬಿಟ್ಟಿದೆ ! ನನಗೆ ಅಂಡರ್ಸ್ಟಾಂಡ್ ಆಗ್ತಿಲ್ಲ, ಕಂಡೆಕ್ಟರೇ ಚೇಂಚ್ ಕೊಡಿ, ಐ ಆಮ್ ಗೋಯಿಂಗ್ ಟು ಮಾಲು, ಯೂ ಕಮಿಂಗು ಅನ್ನೋ ಕನ್ನಡಿಗರ ಧಿಮಾಕುಗಳೆಲ್ಲಾ ಕನ್ನಡನ ಕೊಲ್ತಿವೆ. ಕನ್ನಡ-ಇಂಗ್ಲೀಷುಗಳ ಕಲಬೆರಕೆ ಮಾಡಿ ಕಂಗ್ಲೀಷ್ ಮಾಡ್ತಿವೆ, ಮೂಲ ಕನ್ನಡ ಸಾಯ್ತಿದೆ ಅನ್ನೋ ಮಾತು ಸತ್ಯ. ಆದರೆ ನೂರಕ್ಕೆ ನೂರರಷ್ಟಲ್ಲ. ನಿಂತ ನೀರಾಗಿರದೇ ಬಂದ ಒಳ್ಳೆಯ ಅಂಶಗಳೆಲ್ಲಾ ಬರಲಿ ಎಂದು ಎಲ್ಲವನ್ನೂ ಸೇರಿಸ್ಕೊಂಡು ಬೆಳೆದ್ರೆ ಭಾಷೆಯೂ ಬೆಳಿತಾ ಹೋಗತ್ತೆ ಅನ್ನಿಸುತ್ತೆ. ಅಂದ ಹಾಗೆ ಇದು ಈ ಅರೆಕ್ಷಣದ ಅಭಿಪ್ರಾಯವಷ್ಟೇ.. ಜ್ನಾನ ಬೆಳೆದಂತೆ, ಸತ್ಯದ ಹಲಮುಖಗಳ ತಿಳಿಯುತ್ತಾ ಹೋದಂತೆ ಇದೂ ಬದಲಾಗುತ್ತಾ ಸಾಗುತ್ತೆ. ಅಂದ ಹಾಗೆ ಎಂದಿನಂತೆ ಮೂಡೋ ಪ್ರಶ್ನೆ. ಸಂಪೂರ್ಣ ಎಂದು ಯಾವುದನ್ನೇ ನಾವು ಅಂದುಕೊಂಡರೂ ಅದೇ ಪೂರ್ಣವೇ ? ಅದನ್ನು ಬಿಟ್ಟು ಬೇರೆ ಇಲ್ಲವೇ ಎಂದು. ಪೂರ್ಣಚಂದ್ರನೆನಿಸಿರೋ ಶಶಿಯೇ ಪರಶಿವನ ತಲೆಯ ಮೇಲೆ ಅರ್ಧವಾಗಿದ್ದಾನೆ. ಹುಣ್ಣಿಮೆಯಲ್ಲಿ ಪೂರ್ಣನೆನಿಸಿದವನು ಹದಿನೈದು ದಿನಗಳಲ್ಲೇ ಕ್ಷೀಣಿಸುತ್ತಾ ಸಾಗಿ ಮಾಯವಾಗುತ್ತಾನೆ. ಮತ್ತೆ ಹದಿನೈದು ದಿನಗಳ ಕಾಲಚಕ್ರದಲ್ಲಿ ಮತ್ತೆ ಮೂಡುತ್ತಾನೆ. ನಾವು ಒಮ್ಮೆ ಮಾತ್ರ ಅವನನ್ನು ನೋಡಿ ಅದೇ ಸತ್ಯವೆನ್ನೋದಾದ್ರೆ ನಮ್ಮ ಸತ್ಯ ಯಾವ ಕಾಲಘಟ್ಟದಲ್ಲಿ ಅವನನ್ನು ನೋಡಿರುತ್ತೇವೆ ಅನ್ನೋದ್ರ ಮೇಲೆ ನಿರ್ಧರಿಸಿರುತ್ತೆ.ಅದೇ ತರಹ ಸಾರ್ವಕಾಲಿಕ ಸತ್ಯವೆನ್ನೋದು ಇದ್ಯೇ ? ಒಂದು ಕಾಲಕ್ಕೆ, ಸಮೂಹಕ್ಕೆ ಸತ್ಯವೆನಿಸಿದ್ದು ಮತ್ತೊಂದು ಕಾಲಘಟ್ಟಕ್ಕೆ ಸತ್ಯವಲ್ಲವೆನಿಸಬಹುದು. ಒಬ್ಬರಿಗೆ ಶತಸತ್ಯವೆನ್ನಿಸಿದ್ದು ಮತ್ತೊಬ್ಬರಿಗೆ ಶುದ್ದಸುಳ್ಳೆನಿಸಬಹುದು. ಬೇಸಿಗೆ ಕಾಲ ವರ್ಷಕ್ಕೆ ನಾಲ್ಕು ತಿಂಗಳು ಮಾತ್ರ ಅನ್ನೋ ಭಾರತೀಯನ ಸಾರ್ವಕಾಲಿಕ ಸತ್ಯ ಆರು ತಿಂಗಳು ಬೇಸಿಗೆ ಕಾಣೋ ನಾರ್ವೆ ವಾಸಿಗೆ ಸುಳ್ಳೆನಿಸಬಹುದು. ಅದೇ ತರ ಇಲ್ಲೂ.. ನಮ್ಮ ಅರಿವಿನ ಪರಿಧಿ ವಿಸ್ತರಿಸುತ್ತಾ ಸಾಗದಿದ್ದರೆ ನಮಗೆ ಕಂಡಿದ್ದೇ ಸತ್ಯವೆಂದುಕೊಳ್ಳುತ್ತಾ ಅರೆಸತ್ಯದ ಭ್ರಮೆಯಲ್ಲೇ ಬದುಕಿ ಅರ್ಧ ಕತ್ತಲೆಯನ್ನೇ ಬೆಳಕೆಂದುಕೊಂಡು ಬೆಳಕಿನ ಅಭಾವದಲ್ಲಿ ಬದುಕುತ್ತಿರುತ್ತೇನೆ.. ಅಂದ ಹಾಗೆ ಪಂಜುವಿಗೆ ಇನ್ನೇನು ಐವತ್ತರ ಸಂಭ್ರಮ. ಐವತ್ತು ಅನ್ನೋದಕ್ಕಿಂತ ಅರ್ಧಶತಕ ಅನ್ನೋದು ಸೂಕ್ತ ಅಂದ್ಕೋತೀನಿ. ತೆಂಡೂಲ್ಕರಿನ ಕಟ್ಟಾ ಅಭಿಮಾನಿಗಳಿಗೆ ಇದು ಇಷ್ಟವಾಗಬಹುದು, ಎಲ್ಲೆಲ್ಲೂ ಕ್ರಿಕೆಟ್ಟಿನ ಹೇರುವಿಕೆ ನಡೀತಿದೆ ಅನ್ನೋ ಕ್ರಿಕೆಟ್ ದ್ವೇಷಿಗಳಿಗೆ ಇದರ ಜೀರ್ಣಿಸುವಿಕೆ ಕಷ್ಟವೂ ಆಗಬಹುದು. ಏನೇ ಅಂದುಕೊಂಡರೂ ಉದ್ದೇಶ ಅದಲ್ಲ. ಈ ಐವತ್ತ್ತು ನೂರು ಇನ್ನೂರು ಸಾವಿರಗಳಾಗಿ ಬೆಳೆಯಲೆಂಬುದೇ ಹಾರೈಕೆ.. ಮುಗಿಸೋ ಮೊದಲು ಮೂಡಿರಬಹುದಾದ ಸಂದೇಹವನ್ನು ನಿವಾರಿಸೋ ಅರ್ಧ ಪ್ರಯತ್ನವನ್ನೂ ಮಾಡಿಬಿಡುತ್ತೇನೆ. ಏನಾಗಿದೆ ನಿನಗೆ ? ಶುರು ಮಾಡಿದ ಯಾವುದನ್ನೂ ಪೂರ್ತಿಮಾಡದೇ ಅರ್ಧಂಬರ್ಧ ಮಾಡ್ತಾ ಇದೀಯಲ್ಲ ಅಂದ್ರಾ ? ಏನ್ಮಾಡೋಣ ಹೆಸರಿಟ್ಟ ಮೇಲೆ ಅದ್ರ ದುಷ್ಪರಿಣಾಮ ಲೇಖನದ ಮೇಲೂ ಅಗ್ಬಿಟ್ಟಿದೆ. ಅಂದ ಹಾಗೆ ನಿಮ್ಮ ಓರೆ ನೋಟ, ಅರೆಗಣ್ಣು, ಅರೆ ನಗುವಾದರೂ ಇದಕ್ಕೆ ಸಿಗಲೆಂಬ ನಿರೀಕ್ಷೆಯೊಂದಿಗೆ ವಿರಮಿಸುತ್ತಿದ್ದೇನೆ.

Monday, December 23, 2013

Temple Street, Malleshwaram


When i was searching for places to roam around in bangalore, did not find any good places within 70 kms. Places like
  •  Lal bagh
  • Vidhanasoudha, High Court
  •  Bangalore Palace
  •  HAL Heritage Musuem
  • Vishweshwarayya Musuem
  • Nehru Planetorium
  •  Bannerghatta National Park
were already covered.Then, suddenly somewhere in the middle, saw the name of a 17th century temple from which malleshwaram got its name. Yes it is Kaadu Malleswara Temple in malleshwaram. Then decided to go there only.

By any chance, if you wanna go to this place by BMTC bus, then you can go to platform#22 and get ticket to Stop 15.Name seems strange . But it is. It is in 15th cross of Malleshwaram

View of Kaadu malleshwara temple from Temple street
Kaadu malleshwara or Kaadu mallikarjuna temple was built in 17th Century. Apart from Kaadu mallikarjuna god, it also has chandikeshwara(Shiva who should be prayed with Claps), Kaala bhirava, hanuma, shakti ganapati, arunachaleshwara(Shiva , the god of region Arunachala), Parvati, Kashi vishwanatha(Shiva, the protector of Kashi), Prasanna maha ganapati, Bramarambha and Mahavishnu.

Normally shiva temples will be having Shiva and his family like Ganesha, Parvati, and parivar like Nandi, Kaala bhirava etc. But its rare to see Vishnu in the same temple. But it is here. But compared to Bhramarambha, and Ganesha which are in two sides of Kaadu malleshwara, Vishnu at the corner seems very simple...



You can also See many small wooden chariots which will be used during car festival(Ratha Yatra) near the temple. There are some Big chariots also outside(coming next). When you descend the steps near wooden chariots you will get a park and Nagara bana

Small chariots near Kaadu malleshwara temple
Small chariots near kaadu malleshwara temple
Varaaha carrying Brahma




Nagara bana in Kaadu malleshwara temple


After visiting Kaadumalleshwara temple, you can see Sai bhavana at the left of it.
Sai bhavana

Or you can go in the 15th cross road down or come in the stpes near Nagarabana to the other temples in Templestreet.

There are many temples like
  • Sri Lakshmi Narasimha temple
  • Nandi Teertha
  • Gangamma temple
  • Sri Raghavendra Sannidhi
  • Venugopala swamy temple( A bit away. Is in 11th cross. Not in 15th cross where rest all are)
  • Ishwara temple(Easy to find. It is near flower market before 15th cross)

Lakshmi Narasimha temple
VenuGopala Swamy



Sri Raghavendra Sanniddi

You can also find Siddashrama, many ayurvedic centres and lots of hospitals on the way.
So, it can also be called as health street of bangaluru  as well as Temple street of bangaluru

Timings : During Dhanur Maasa(Current month) most of the temples will be open from 5AM to 10 PM. otherwise wil be open till 11:30.So, its better to go early..

Places Nearby:
  • Mantri Square

Sunday, December 15, 2013

ಹೊಗೆ ಸುರುಳಿಗಳ ನಡುವೆ



ಒತ್ತೊತ್ತರಿಸಿ ಬರುತ್ತಿದ್ದ ಕೆಮ್ಮು. ಕೆಮ್ಮಿದಾಗೆಲ್ಲಾ ಒತ್ತರಿಸಿ ಬರೋ ಕಫ. ಕೆಮ್ಮಿ ಕೆಮ್ಮಿ ತತ್ತರಿಸಿ ಹೋಗಿರೋ ಗಂಟಲಿಂದ ಪ್ರತೀ ಉಗುಳಿಗೂ ರಕ್ತಲೇಪ. ಸುಮ್ಮನೇ ಒಮ್ಮೆ ತನ್ನ ಕೋಣೆಯತ್ತ ದೃಷ್ಠಿ ಬೀರಿದ. ಚದುರಿ ಬಿದ್ದಿರೋ ಬುಕ್ಕುಗಳು, ಮಡಚದೇ ಒಗೆದಿರೋ ಬಟ್ಟೆ, ತುಂಬಿ ಹೋಗಿರೋ ಧೂಳು, ದೇವರೆಂದು ಇಟ್ಟುಕೊಂಡಿದ್ದ ಪಟದ ಮೇಲೇ ಕಟ್ಟಿದ್ದ ಜೇಡರ ಬಲೆ, ಎಮ್. ಆರ್. ಎಪ್ಫಿನ ತೆಂಡೂಲ್ಕರಿನ ಅರ್ಧ ಕಿತ್ತು ದಿನಾ ಅಂಟಿಸಬೇಕು ಇಲ್ಲಾ ಕಿತ್ತೊಗೆಯಬೇಕು ಅಂತಿರೋ ಪೋಸ್ಟರು.. ಹೀಗೆ ಅಧ್ವಾನವಾಗಿರೋ ವಸ್ತುಗಳೆಲ್ಲಾ ಭವ್ಯ ಭೂತವನ್ನು, ಗೊತ್ತುಗುರಿಯಿಲ್ಲದೇ ಸಾಗುತ್ತಿರುವ ವಾಸ್ತವವನ್ನು ಬಿಂಬಿಸುವಂತಿದ್ದವು. ಬೆಳಿಗ್ಗೆ ಎದ್ದೊಡನೆಯೇ ರೆಡಿಯಾಗಿ ಆಫೀಸಿಗೆ ದೌಡಾಯಿಸಿದರೆ ಬರುತ್ತಿದ್ದುದು ರಾತ್ರಿಯೇ. ಬಂದ ಮೇಲೂ ಮತ್ತೇನೋ ಕೆಲಸವೆಂದು ಕಂಪ್ಯೂಟರ್ ತೆಗೆದರೆ ರಾತ್ರಿ ಕಣ್ಣು ಮುಷ್ಕರ ಹೂಡೋ ತನಕ ಆ ಡಬ್ಬಿ ಬಂದಾಗುತ್ತಿರಲಿಲ್ಲ. ಅಷ್ಟೇ ಆಗಿದ್ದರೆ ಈ ಗತಿ ಬರುತ್ತಿರಲಿಲ್ಲವೇನೋ. ಟೆನ್ಷನ್ನಿಗೆಂದು ಶುರುವಿಟ್ಟುಕೊಂಡ ಹೊಗೆಯ ಸಂಗವೇ ಇಂದು ಬಿಡಲಾರದ ಅಂಟಾಗಿ ಜೀವ ತಿನ್ನುತ್ತಿದೆ. ಎಂದಿನಂತೆ ಟಾರಸಿಯ ಮೇಲೆ ಹತ್ತಿ ಸುರುಳಿ ಸುರುಳಿ ಹೊಗೆ ಬಿಡಲು ಪ್ರಾರಂಭಿಸಿದವನಿಗೆ ಭೂತದ ನೆನಪುಗಳು ಮರುಕಳಿಸತೊಡಗಿದವು.

ಕಾಲೇಜು ದಿನಗಳವು. ಕಾಲೇಜು ಜೀವನ ಬಂಗಾರದ ಜೀವನ ಮಗಾ. ಇಲ್ಲಿ ಎಂಜಾಯ್ ಮಾಡ್ದೇ ಯಾವಾಗ ಮಾಡ್ತೀಯ ಅಂತಿದ್ದ ಸ್ನೇಹಿತರು, ನಮ್ಮ ಬ್ರಾಂಚಿನಲ್ಲಿದ್ದು ಈ ತರ ಹವ್ಯಾಸಗಳಿಲ್ದೇ ಇದ್ದರೇ ಬ್ರಾಂಚಿಗೇ ಅವಮಾನ ಅಂತಿದ್ದೋರು, ಒಮ್ಮೆ ದಮ್ಮು ಹೊಡ್ದು ನೋಡೋ ಏನೂ ಆಗಲ್ಲ ಅಂತಿದ್ದೋರು ಎಲ್ಲಾ ಇದ್ದರೂ ನಿರ್ಲಿಪ್ತನಾಗಿ ಉಳಿದಿದ್ದ ಈತ. ಸಿಗರೇಟಿಗೆ ದಾಸನಾಗಿದ್ದ ಅಣ್ಣ ಅದಕ್ಕೆ ದುಡ್ಡು ಹೊಂದಿಸಲಾಗದೇ ಅದನ್ನು ಬಿಡಲೂ ಆಗದೇ ಒದ್ದಾಡುತ್ತಿದ್ದದನು ಕಣ್ಣಾರೆ ಕಂಡಿದ್ದ ಇವ ತನ್ನ ಜೀವಮಾನದಲ್ಲಿ ಅದಕ್ಕೆ ಕೈ ಹಚ್ಚಬಾರದೆಂಬ ನಿರ್ಣಯ ಮಾಡಿದ್ದ. ಸಿಗರೇಟು ಬಿಡಬೇಕೆಂದು ಇವನಣ್ಣ ಮಾಡಿದ್ದ ಪ್ರಯತ್ನಗಳು ಒಂದಲ್ಲಾ ಎರಡಲ್ಲ. ಎಲೆಕ್ಟ್ರಾನಿಕ್ ಸಿಗರೇಟು, ಸಿಗರೇಟ್ ಬಿಡಿಸುವಂತಹ ಚೂಯಿಂಗ್ ಗಮ್ಮು, ಮಾತ್ರೆ ಹೀಗೆ ಹಲವೆಲ್ಲಾ ಪ್ರಯತ್ನ ಪಟ್ಟೂ ಅದರಿಂದ ಸಾಧ್ಯವಾಗದೇ ಕೈ ಬಿಟ್ಟಿದ್ದ. ಆ ಚೂಯಿಂಗ್ ಗಮ್ಮು ಹೇಗಿರುತ್ತೆ ಅಂತ ಒಮ್ಮೆ ಬಾಯಿಗೆ ಹಾಕಿಕೊಂಡವನಿಗೆ ಗಂಟಲೆಲ್ಲಾ ತುರಿಕೆ ಶುರುವಾಗಿ ಅಸಾಧ್ಯ ವೇದನೆ ಶುರುವಾಗಿ ಇದಕ್ಕಿಂತ ಸಿಗರೇಟಿನಿಂದ ಆರೋಗ್ಯದ ಮೇಲಾಗೋ ದುಷ್ಪರಿಣಾಮಗಳೇ ಮೇಲೇನೋ ಅನಿಸುತ್ತಿತ್ತು. ಈ ವೇದನೆಗಳ ಹೊರತಾಗಿಯೂ ಸಿಗರೇಟು ಬಿಡಲು ನಡೆಸುತ್ತಿದ್ದ ಅಣ್ಣನ ಪ್ರಾಮಾಣಿಕ ಪ್ರಯತ್ನದ ಮೇಲೆ ಹೆಮ್ಮೆಯೂ ಮೂಡುತ್ತಿತ್ತು. ಬಸ್ಸಿನಲ್ಲಿ ಕಂಡ "ಒಂದು ತಿಂಗಳಲ್ಲಿ ಸಿಗರೇಟು ಬಿಡಿಸಿ" ಎಂಬ ಜಾಹಿರಾತಿನಿಂದ , ಹಾದಿಯ ಹಕೀಮರ ಜೌಷಧಿಯವರೆಗೆ, ನೆಟ್ಟಿನಲ್ಲಿ "ಸಿಗರೇಟು ಬಿಡೋದು ಹೇಗೆ" ಎಂಬ ಮಾಹಿತಿಗಳಿಂದ ಬಿಟ್ಟವರ ಬ್ಲಾಗುಗಳವರೆಗೆ ಎಲ್ಲಾ ತಡಕಿದರೂ ಪರಿಣಾಮ ಮಾತ್ರ ನಗಣ್ಯವಾಗಿತ್ತು. ಚಿತ್ರಗಳ ಆರಂಭದಲ್ಲಿ ತೋರಿಸೋ ಒಬ್ಬ ಯುವಕನ ಚಿತ್ರ ನೋಡಿ ತನ್ನಣ್ಣನಿಗೆ ಇಂತಹ ಗತಿ ಬರಬಹುದಾ ಒಂದು ದಿನ ಎಂದು ಎಷ್ಟೋ ದಿನ ಹೆದರಿ ರಾತ್ರಿಯೆಲ್ಲಾ ನಿದ್ರೆಗೆಟ್ಟಿದ್ದನಿವನು.ವಿಧಿಯ ಹಾಸ್ಯ ನೋಡಿ. ಅಂದು ಸ್ನೇಹಿತರ ಅಷ್ಟೆಲ್ಲಾ ಆಮಿಷಗಳ ನಡುವೆಯೂ ಕೆಡದಿದ್ದ ಈತನ ಧೃಡಚಿತ್ತ ಕೆಲಸಕ್ಕೆ ಸೇರಿ ಕೆಲವೇ ದಿನಗಳಲ್ಲಿ ಕದಡಿಹೋಗಿತ್ತು !.

ಆಫೀಸಿಗೆ ಕಾಲಿಟ್ಟ ಮೊದಲ ದಿನಗಳವು. ಮೊದಲ ದಿನ ಆಫೀಸಿನ ಬಗ್ಗೆ ಪರಿಚಯಿಸುತ್ತಿದ್ದ ಸಹೋದ್ಯೋಗಿ ಆಫೀಸಲ್ಲಿ ಲೈಬ್ರರಿ ಇಲ್ಲಿದೆ,ಕ್ಯಾಂಟೀನ್ ಆ ಮೂಲೆಯಲ್ಲಿ, ಸ್ಮೋಕಿಂಗ್ ಜೋನ್ ಟೆರೇಸಿನ ಮೇಲೆ.. ಎಂದ ಓಹ್, ಸ್ಮೋಕಿಂಗ್ ಜೋನ್ ಅಂತ ಬೇರೆ ಇರತ್ತಾ ? ಅಂತ ಆಶ್ಚರ್ಯಗೊಂಡಿದ್ದ ಆತ ಕೆಲ ದಿನಗಳ ನಂತರ ಯಾವುದೋ ಕೆಲಸದ ಮೇಲೆ ಕೊನೆಯ ಪ್ಲೋರಿನಲ್ಲಿದ್ದವ ಅಲ್ಲಿ  ಮೊಬೈಲ್ ನೆಟ್ವರ್ಕು ಸಿಗದಿದ್ದ ಕಾರಣ ನೆಟ್ವರ್ಕು ಅರಸಿ ಟೆರೇಸಿಗೆ ಬಂದಿದ್ದ. ನೋಡಿದರೆ ಯುವಕರಷ್ಟೇ ಅಲ್ಲ ಯುವತಿಯರೂ, ಅಂಕಲ್ ಆಂಟಿಯರು ಸಾರಿ ಬಾಸ್ಗಳು ! ಪೈಪೋಟಿಯ ಮೇಲೋ ಎಂಬಂತೆ ಹೊಗೆ ಬಿಡುವುದರಲ್ಲಿ ಮಗ್ನರಾಗಿದ್ದರು. ಒಬ್ಬೊಬ್ಬರ ಮೊಗದ ಮೇಲೂ ಪ್ರಪಂಚದ ಎಲ್ಲಾ ಚಿಂತೆಗಳು ಇವರ ಮೈಮೇಲೆ ಬಿದ್ದಂತಾ ಲುಕ್ಕು ! ಅಣ್ಣನ ಒದ್ದಾಟ ನೆನಪಾಗಿ  ಆ ಧೂಮ್ರವ್ಯೂಹದ ಮಧ್ಯೆ ನಿಲ್ಲಲಾಗದೇ ಕೆಳಗೆ ಬಂದುಬಿಟ್ಟಿದ್ದ ಈತ.  ಸಿಗರೇಟೆಂದರೆ ಬರೀ ಹುಡುಗರು, ಪೋಲಿಗಳೆಂಬ ಈತನ ಭ್ರಮೆ ತನ್ನ ಆಫೀಸಿನ ಸುಂದರಿಯರು ಅಂದುಕೊಂಡಿದ್ದವರ ಕೈಯಲ್ಲೆಲ್ಲಾ ಕಂಡ ಸಿಗರೇಟುಗಳಿಂದ ಸುಟ್ಟು ಬೂದಿಯಾಗಿತ್ತು. ತಾವು ಹುಡುಗರಿಗಿಂತ ಯಾವ ರೀತಿಯಲ್ಲೂ ಕಮ್ಮಿಯಿಲ್ಲವೆಂಬ ಭಾವದಿಂದ ಅವರು ಹೀಗೆ ಮಾಡುತ್ತಿರಬೇಕೆಂದು ಒಮ್ಮೆ ಅನಿಸಿದರೆ ಈ ನಿಕೋಟಿನ್ನಿನ ಅಂಟೇ ಹೀಗೆ. ಒಮ್ಮೆ ಅಂಟಿಕೊಂಡರೆ ಮತ್ತೆ ಬಿಡಿಸಲಾಗದೆಂದು ಮತ್ತೊಮ್ಮೆ ಅನಿಸುತ್ತಿತ್ತು.

ಸಖತ್ ವರ್ಕ್ ಮಾಡ್ತಾನೆ ಹುಡುಗ ಅಂತ ಎಲ್ಲರ ಮೆಚ್ಚುಗೆ ಗಳಿಸಿದ ಮೊದಲೆರೆಡು ತಿಂಗಳುಗಳಲ್ಲಿ. ದಿನ ಕಳೆಯುತ್ತಿದ್ದಂತೆ ಮಹತ್ವದ ಜವಾಬ್ದಾರಿಗಳು ಹೆಗಲ ಮೇಲೆ ಬೀಳತೊಡಗಿದವು. ಸಂಜೆ ಐದಕ್ಕೆ ಮನೆಗೆ ಬರುತ್ತಿದ್ದವನು ಏಳು, ಎಂಟು ಒಂಬತ್ತಾಗುತ್ತಾಗುತ್ತಿತ್ತು. ಶನಿವಾರ, ಭಾನುವಾರಗಳು ಆಫೀಸಿಗೆ ಹೋಗಬೇಕಾಯಿತು. ಬೆಳಗ್ಗೆ ಮಾಡುತ್ತಿದ್ದ ಯೋಗ, ಧ್ಯಾನ, ಓಟ, ಸಂಜೆಯ ಬ್ಯಾಡ್ಮಿಂಟನ್ನುಗಳೆಲ್ಲಾ ಟೈಂ ವೇಸ್ಟು. ಆ ಸಮಯವನ್ನು ಆಫೀಸಿಗೆ ಉಪಯೋಗಿಸಿದರೆ ತನ್ನ ವೃತ್ತಿ ಜೀವನದಲ್ಲಿ ಎಷ್ಟು ಮುಂದೆಬರಬಹುದು ಅಂತ ಯೋಚಿಸತೊಡಗಿದ. ಸ್ನೇಹಿತರಿಗೆ ಮೆಸೇಜಿಸುವುದು, ಫೇಸ್ಬುಕ್ಕು, ವಾಟ್ಸಾಪುಗಳೆಲ್ಲಾ ಕಾಲಹರಣಗಳಂತೆ ಕಾಣತೊಡಗಿದವು. ಸ್ನೇಹಿತರು ಹೋಗಲಿ ಮನೆಯವರು ಕಾಲ್ ಮಾಡಿದರೂ ಮಾತನಾಡದಷ್ಟು ಬಿಸಿಯಾಗಿಬಿಟ್ಟ ಹುಡುಗ. ಈ ಒಂಟಿ ಬಾಳು ನಾಲ್ಕೈದು ತಿಂಗಳು ಚೆನ್ನಾಗೇ ನಡೆಯಿತು. ಇದ್ದ ಬದ್ದ ಪ್ರಶಸ್ತಿಗಳೆಲ್ಲಾ ಈತನನ್ನರಸಿ ಬರತೊಡಗಿದವು. ಆದರೆ ಅದರೊಂದಿಗೆ ತಾನು ಸದಾ ಮುಂದೇ ಇರಬೇಕೆಂಬ ಗೀಳು ಈತನನ್ನಾವರಿಸಿಕೊಂಡಿತು. ಸಣ್ಣ ಸೋಲನ್ನು, ಮಾತನ್ನೂ ಸಹಿಸಲಾಗುತ್ತಿರಲಿಲ್ಲ. ಈಗಾಗಲೇ ಎಲ್ಲರಿಂದ ದೂರಾಗಿ ಒಂಟಿಯಾಗಿದ್ದರಿಂದ ಈತನ ಸಿಟ್ಟು, ನೋವುಗಳನ್ನು ತೋಡಿಕೊಳ್ಳಲೂ ಯಾರೂ ಸಿಗದೇ ಅದು ಈತನನ್ನೇ ಸುಡತೊಡಗಿತು. ಆಗ ಕಂಡ ಸಾಥಿಯೇ ಸಿಗರೇಟು. ಸಿಗರೇಟು ಹೊಗೆಯನ್ನು ಉಫ್ ಎಂದು ಬಿಡುತ್ತಿದ್ದರೆ ಮನದ ಸಿಟ್ಟು, ನೋವುಗಳನ್ನೆಲ್ಲಾ ತೋಡಿ ತೋಡಿ ಹೊರಕ್ಕೆಸೆದಂತಾಗಿ ಕ್ಷಣಿಕ ಸಮಾಧಾನವಾದರೂ ಸಿಗುತ್ತಿತ್ತು. ಮುಂಚೆ ತನಗೆ ಸಿಗುತ್ತಿದ್ದ ಯೋಗ, ಪ್ರಾಣಾಯಾಮಗಳಲ್ಲಿನ ಸಮಾಧಾನಕ್ಕೆ ಹೋಲಿಸಿದರೆ ಇದು ಏನೂ ಅಲ್ಲವೆಂದು ಕೆಲವೊಮ್ಮೆ ಅನಿಸಿದರೂ ಕೊನೆಗೆ ಇದರಲ್ಲೇ ತೃಪ್ತನಾಗಿಬಿಡುತ್ತಿದ್ದ. ದಿನ ಕಳೆದಂತೆ ಚಿಂತೆಗಳು ಹೆಚ್ಚಾಯ್ತು. ಅದರಂತೆ ಸಿಗರೇಟುಗಳ ಸಂಖ್ಯೆಯೂ. ಆಫೀಸಿನ ಚೈನ್ ಸ್ಮೋಕರ್ಗಳಲ್ಲಿ, ಸ್ಮೋಕಿಂಗ್ ಜೋನಿನ ಕಾಯಂ ಸದಸ್ಯರಲ್ಲಿ ಒಬ್ಬನಾಗಿಬಿಟ್ಟ.

ಹೀಗಿರುವಾಗ ಒಮ್ಮೆ ಇದ್ದಕ್ಕಿದ್ದಂತೆ ಸೀತ, ಕೆಮ್ಮು ಕಾಡತೊಡಗಿತು ಇವನಿಗೆ. ಒಂದು ದಿನ ಆಫೀಸಿಗೇ ಹೋಗಲಾಗದಂತೆ ಮಲಗಿ ಬಿಟ್ಟ. ಹುಷಾರಿಲ್ಲ ಎಂದು ಶಾಲಾದಿನಗಳಿಂದ ಹಿಡಿದು ಯಾವತ್ತೂ ರಜೆ ಹಾಕದವನಿಗೆ ತನ್ನ ಮೇಲೇ ಬೇಸರವಾಗತೊಡಗಿತ್ತು. ದಿನಾ ಆರಕ್ಕೆ ಏಳುತ್ತಿದ್ದವನು ಇಂದು ಹತ್ತಕ್ಕೆ ಎದ್ದಿದ್ದ. ತನ್ನ ಎಲ್ಲ ಮಿಸ್ ಮಾಡ್ಕೊತ್ತಿರಬಹುದು ಎಂದು , ಒಂದು ಹದಿನೈದಾದರೂ ಕಾಲುಗಳ ನಿರೀಕ್ಷೆಯಲ್ಲಿದ್ದವನಿಗೆ ನಿರಾಸೆ. ಆಫೀಸಿನಿಂದ ಒಂದೂ ಕಾಲಿಲ್ಲ. ತನ್ನಿಂದ ಕೆಲಸ ಆಗಬೇಕೆಂದಾಗೆಲ್ಲಾ ಮಧ್ಯರಾತ್ರಿಗೂ ಫೋನ್ ಮಾಡುತ್ತಿದ್ದವರು ಇಂದು ಹುಷಾರಿಲ್ಲದೇ ಮಲಗಿದರೂ ವಿಚಾರಿಸಲು ಫೋನ್ ಮಾಡಿಲ್ಲವಲ್ಲ ಎಂಬ ಬೇಸರ ಕಾಡುತ್ತಿತ್ತು. ಬಂದಿದ್ದು ಮೂರು ಕಾಲು. ಮೂರೂ ಅಮ್ಮನದು. ಇತ್ತೀಚೆಗೆ ಅವಳು ಫೋನ್ ಮಾಡಿದಾಗೆಲ್ಲಾ ತಾನು ಉತ್ತರಿಸುತ್ತಿದ್ದ ರೀತಿ , ಉಡಾಫೆ ನೆನೆದು ಬೇಸರವಾಯ್ತು. ಅವಳಿಗೆ ತಾನಲ್ಲದೆ ಇನ್ನು ಯಾರಿದ್ದಾರೆ.. ತಾನು ಹೀಗೆ ವರ್ತಿಸಬಾರದಿತ್ತು ಎಂದು ನೆನೆದು ಕಣ್ಣಂಚಲ್ಲಿ ನೀರು ಜಿನುಗತೊಡಗಿತು. ಹಾಗೇ ಫೋನ್ ಮಾಡಿದ ಅಮ್ಮನಿಗೆ ಮಲಗಿದ್ದಲ್ಲಿಂದಲೇ.. ಬುಸಿಯಿದ್ದಿಯೇನೋ ಅಲ್ವೇನೋ, ಆಫೀಸಲ್ಲಿದ್ದೀಯ ಅಂದ್ಲು ಅಮ್ಮ. ಇಲ್ಲಮ್ಮಾ ಹೇಳು ಅಂದ ಈತ. ಹುಟ್ಟಿದ ಹಬ್ಬದ ಶುಭಾಶಯಗಳು ಕಣೋ ಮಗನೇ. ಆ ದೇವರು ನನ್ನ ಆರೋಗ್ಯ, ಐಶ್ವರ್ಯವನ್ನೂ ನಿನಗೇ ಕೊಡಲಿ ಅಂದರು ಅಮ್ಮ. ತನ್ನ ಹುಟ್ಟಿದ ದಿನವನ್ನು ಉಳಿದವರು ಹೋಗಲಿ ತಾನೇ ಮರೆತ ಸಂದರ್ಭದಲ್ಲಿ  ತನ್ನ ಹೆತ್ತಾಕೆ ನೆನಪಿಟ್ಟು ಫೋನ್ ಮಾಡಿದ ಪರಿ ಕಂಡು ಮತ್ತೆ ಕಣ್ಣಲ್ಲಿ ನೀರು ಜಿನುಗತೊಡಗಿತು. ಸಾರಿ ಕಣೋ, ನಿನ್ನ ಡಿಸ್ಟರ್ಬ್ ಮಾಡಿದ್ದಕ್ಕೆ , ಇಡಲಾ ಅಂದ್ಲು ಅಮ್ಮ. . ತಕ್ಷಣಕ್ಕೆ ಏನೋ ಕಂಡವರಂತೆ, ಏ ಏನೋ, ಏನಾಯ್ತೋ. ಯಾಕೋ ಅಳ್ತಿದೀಯ ಅಂದ್ರು. ಈ ಕಡೆಯಿಂದ ಏನೂ ಉತ್ತರವಿಲ್ಲ. ತನ್ನ ಅಮ್ಮನ ಹುಟ್ಟಿದಬ್ಬಕ್ಕೆ, ದೀಪಾವಳಿಗೆ, ಚೌತಿಗೆ ಮನೆಗೆ ಹೋಗಿ ಅವಳ ಜೊತೆಗಿರೋದು ಹೋಗಲಿ,ಒಂದು ಸೀರೆ ಕೊಡೆಸೋದು ಹೋಗಲಿ, ಒಂದು ವಿಷ್ ಕೂಡ ಮಾಡಲು ಸಮಯವಿಲ್ಲದಷ್ಟು ಸ್ವಾರ್ಥಿಯಾಗಿಬಿಟ್ಟೆನಲ್ಲಾ ತಾನು ಎಂದು ತನ್ನನ್ನೇ ಕರುಬುತ್ತಿದ್ದ ಈತ. ಕೆಮ್ಮು ಒತ್ತರಿಸಿ ಬರತೊಡಗಿತು. ಹೇ, ಏನಾಯ್ತೋ ? ಯಾಕೆ ಅಳ್ತಿದೀಯ. ಮೊನ್ನೆಯಿಂದ ಕೆಮ್ತಿದೀಯ. ಏನಾಯ್ತೋ ? ಆರೋಗ್ಯ ಸರಿ ಇದೆ ತಾನೇ ? ಆಫೀಸಿಗೆ ಹೋಗಿದೀಯ ಇಲ್ಲ ಮನೇಲೇ ಇದೀಯ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಶುರು ಮಾಡಿದರು ಅಮ್ಮ.

ಸಿಗರೇಟಿಗೆ ದಾಸನಾದ ಮೇಲೆ ಮನೆಗೆ ಹೋಗಿರಲಿಲ್ಲ. ಸಮಯವಿಲ್ಲದಿರೋದು ಒಂದು ಕಾರಣವಾದರೆ, ಅಣ್ಣ ಒದ್ದಾಟಪಟ್ಟಿದ್ದನ್ನು ನೋಡಿ ನೋಡಿ ಸಿಗರೇಟಿಗರನ್ನೆಲ್ಲಾ ದ್ವೇಷಿಸುತ್ತಿದ್ದ, ಕೊನೆಯ ಪಕ್ಷ ತನ್ನ ಸಣ್ಣ ಮಗನಾದರೂ ಅದರ ದಾಸನಾಗಿಲ್ಲವಲ್ಲ ಎಂದು ಹೆಮ್ಮೆ ಪಡುತ್ತಿದ್ದ ಅಮ್ಮನ ಎದುರಿಸಲು ನೈತಿಕ ಧೈರ್ಯ ಸಾಕಾಗುತ್ತಿರಲಿಲ್ಲ. ಅಂತದ್ರಲ್ಲಿ ತಾನೇ ಈಗ ಅದರ ದಾಸನಾಗಿ ಒದ್ದಾಡುತ್ತಿದ್ದೇನೆ ಎಂದು ಹೇಗೆ ಹೇಳಲಿ ಎಂಬ ಸಂದಿಗ್ದ ಆತನನ್ನು ಕಾಡತೊಡಗಿತು. ಇಲ್ಲಮ್ಮ. ಇಲ್ಲಿ ಹವಾ ಬದಲಾವಣೆಯಿಂದ ನನಗೆ ಸೀತ ಶುರುವಾಗಿದೆ ಅಷ್ಟೆ. ಇವತ್ತು ಅದಕ್ಕೇ ರಜ ಹಾಕಿದ್ದೀನಿ. ಸೀತದಿಂದ ನನ್ನ ಧ್ವನಿ ಎಲ್ಲಾ ಕೂತು ಹೋಗಿ ನಿನಗೆ ಅತ್ತಂತೆ ಕೇಳ್ತಾ ಇದೆ ಅಷ್ಟೆ ಅಂದಿದ್ದ. ಅಮ್ಮನಿಗೆ ಅದು ಪೂರ್ಣ ನಿಜವಲ್ಲ ಎಂದು ಗೊತ್ತಾದರೂ ಮಗ ನನ್ನಿಂದ ಏನೋ ಮುಚ್ಚಿಡುತ್ತಿದ್ದಾನೆ ಎಂದರೆ ಸದ್ಯ ಹೇಳಲಾರದ ಸಂದಿಗ್ದದಲ್ಲಿದ್ದಾನೆ. ಸಮಯ ಬಂದಾಗ ಹೇಳೇ ಹೇಳುತ್ತಾನೆ , ತಪ್ಪು ದಾರಿಯಲ್ಲೆಂತೂ ಹೋಗಲಾರ ಆತ ಎಂದು ಧೈರ್ಯ ತಂದುಕೊಂಡರು. ಸರಿ ಮಗ. ನಿನ್ನ ಆರೋಗ್ಯದ ಕಡೆ ಕಾಳಜಿ ತಗೊ. ಒಳ್ಳೆದಾಗ್ಲಿ ನಿಂಗೆ. ಸಂಜೆ ಫೋನ್ ಮಾಡ್ತೀನಿ ಅಂತ ಫೋನಿಟ್ಟರು. ಒರೆಸುತ್ತಿದ್ದ ಕಣ್ಣೀರಿನ ಜೊತೆ ಪ್ರಪಂಚದಲ್ಲಿ ನಾನು ಒಂಟಿಯಲ್ಲ. ಅಮ್ಮನಿಗಾದರೂ ನಾನು ಹುಷಾರಾಗಬೇಕು. ಈ ಕೆಟ್ಟ ಸಿಗರೇಟಿಂದ ನಾನು ಅಕಾಲಿಕವಾಗಿ ಸಾಯೋದು ತಪ್ಪಬೇಕು ಎನ್ನೋ ಧೃಢ ನಿಶ್ಚಯ ಈತನಲ್ಲಿ ಮೂಡತೊಡಗಿತು.

ಗಂಟಲು ಕಿತ್ತು ಬರುವಂತೆ ಕೆಮ್ಮುತ್ತಿದ್ದರೂ ಇನ್ನು ಇಲ್ಲಿ ಮಲಗಿ ಉಪಯೋಗವಿಲ್ಲ, ಎದ್ದು ಆಫೀಸಿಗಾದರೂ ಹೊರಡೋಣವೆಂದು ರೆಡಿಯಾದ. ಹನ್ನೊಂದರ ಹೊತ್ತಿಗೆ ಆಫೀಸಿಗೆ ತಲುಪಿದ್ದ. ಇವನ ಮುಖ ನೋಡಿಯೇ ಈತನಿಗೆ ಹುಷಾರಿಲ್ಲವೆಂದು ಗೊತ್ತಾದ ಯಾರೂ ಈತನನ್ನು ಯಾಕೆ ಲೇಟೆಂದು ವಿಚಾರಿಸಲಿಲ್ಲ. ವಿಚಾರಿಸೋದು ಹೋಗಲಿ, ತನ್ನ ಹುಟ್ಟಿದಬ್ಬಕ್ಕೆ ವಿಷ್ ಮಾಡಬಹುದೆಂದು ನಿರೀಕ್ಷಿಸಿದ್ದ ಆ ನಿರಾಸೆ ಬತ್ತಿಹೋದರೂ ಈತನಿಗೆ ಬೇಸರವಾಗಲಿಲ್ಲ. ಎಲ್ಲರಿಗಾಗಿ ತಾನು. ತನಗಾಗಿ ಎಲ್ಲರೂ ಅಲ್ಲ.ಗಟ್ಟಿಯಿದ್ದರೆ ಮಾತ್ರ ಇಲ್ಲಿ ಬದುಕೋಕೆ ಸಾಧ್ಯ. ದಿನಾ ಸಾಯೋರ್ನ ಇಲ್ಲಿ ಯಾರೂ ವಿಚಾರಿಸೋಲ್ಲ ಅನ್ನೋ ಪ್ರಾಕ್ಟಿಕಲ್ ಸ್ವಭಾವ ಅವನದಾಗುತ್ತಾ ಬಂದಿತು ಬೆಳಗಿನ ಘಟನೆಗಳಿಂದ. ಏಳೆಂಟು ಸಲ ಸಿಗರೇಟು ಹೊಡೆಯೂ ಮನಸ್ಸಾದರೂ ಹೇಗೂ ಕಷ್ಟಪಟ್ಟು ತಡಕೊಂಡ. ಸಿಗರೇಟಿನ ನೆನಪಾದಾಗಲೆಲ್ಲಾ ನೀರು ಕುಡಿಯೋದೋ, ಯಾರಿಗಾದ್ರೂ ಪಿಂಗ್ ಮಾಡಿ ಮಾತಾನಾಡೋದೋ, ತಿಂಗಳುಗಳಿಂದ ತೆಗೆಯದ ಫೇಸ್ಬುಕ್ಕು ವಾಟ್ಸಾಪು ತೆಗೆದು ಯಾರಿಗಾದ್ರೂ ಮೆಸೇಜ್ ಮಾಡೋದೋ ಮಾಡತೊಡಗಿದ.ಸ್ಮೋಕಿಂಗ್ ಜೋನಿನ ಗೆಳೆಯರು ಕರೆದಾಗಲೂ ಕಷ್ಟಪಟ್ಟು ಏನೋನೋ ನೆವ ಹೇಳಿ ತಪ್ಪಿಸಿಕೊಂಡ. ಒಂದೇ ಒಂದು ಎಂದಂದ ಸಿಗರೇಟು ಮತ್ತೆ ಚೈನಿಗೆಳೆಯುತ್ತೆ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಅಂತೂ ಸಂಜೆಯವರೆಗೆ ಕಷ್ಟಪಟ್ಟು ಆಫೀಸಲ್ಲಿ ಕಳೆದ ಅವನಿಗೆ ಸಿಗರೇಟಿಲ್ಲದ ದಿನ ಕೊಟ್ಟ ಹಿಂಸೆ ಅಷ್ಟಿಷ್ಟಲ್ಲ. ಎದೆಯಲ್ಲಿ ಉರಿಯುತ್ತಿದ್ದಂತೆ. ಬೇಕು ಬೇಕು ಅನಿಸಿದಂತೆ. ಅದನ್ನ ತಡೆಯೋದ್ರಲ್ಲಿ ಸಾಕು ಬೇಕಾಗಿ ಹೋಗುತ್ತಿತ್ತು. ಹೀಗೇ ಒಂದು ವಾರ ಕಳೆಯಿತು. ಅಷ್ಟರಲ್ಲಿ ಕಾಡುತ್ತಿದ್ದ ಸಿಗರೇಟನ್ನು ಬಿಡೋಕೆ ಆತ ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ.ದಿನಾ  ಒಂದು ಹಾಳೆಯ ಮಧ್ಯ ಗೆರೆಯೆಳೆದು ಸಿಗರೇಟನ್ನು ಬಿಡಲು ಕಾರಣಗಳು, ಬಿಡಲಾಗದ ಕಾರಣಗಳನ್ನು ಬರೆಯಲಾರಂಬಿಸಿದ. ಮೊದಲ ದಿನ ಬಿಡಲಾಗದ ಕಾರಣಗಳೇ ಜಾಸ್ತಿಯಿದ್ದವು. ಅವುಗಳಲ್ಲಕ್ಕೆ ಸಿಗರೇಟೊಂದೇ ಪರಿಹಾರವಲ್ಲವೆಂದು ಅವುಗಳ ಮೂಲವನ್ನು ಹುಡುಕುಡುಕಿ ದಿನೇ ದಿನೇ  ಬಿಡಲಾಗದ ಕಾರಣಗಳು ಕಡಿಮೆಯಾಗಲಾರಂಬಿಸಿದವು.ಮನೆಯಲ್ಲಿದ್ದ ಜಾಗಿಂಗ್ ಶೂಗಳು, ಧೂಳು ಹೊಡೆದ ಯೋಗ ಮ್ಯಾಟುಗಳೆಲ್ಲಾ ಹೊರಬಂದಿದ್ದವು.ಮರೆತೇ ಹೋಗುವಂತಿದ್ದ ಪ್ರಾಣಾಯಾಮದ ಅನುಲೋಮ, ವಿಲೋಮ, ಸೂರ್ಯ , ಚಂದ್ರ ಪ್ರಾಣಾಯಾಮಗಳು, ಮುದ್ರೆಗಳು, ಯೋಗದ ಕುಕ್ಕುಟಾಸನ, ಪದ್ಮಾಸನ , ಬಕಾಸನ, ವೃಕ್ಷಾಸನಗಳೂ ನೆನಪಾಗಿದ್ದವು. ಸೂರ್ಯೋದಯ, ಸೂರ್ಯಾಸ್ತಗಳ ಸೌಂದರ್ಯವನ್ನು, ರಾತ್ರಿಯ ನಕ್ಷತ್ರಗಳ ಕಾಂತಿಯನ್ನು ಮತ್ತೆ ಅನುಭವಿಸಲು ಶುರುಮಾಡಿದ್ದ. . ಈತನ ಮನದಲ್ಲಿ ಮರೆಯಾಗಿದ್ದ ನಗು ಮತ್ತೆ ಮಾಡತೊಡಗಿ ಹಣೆಯಲ್ಲಿ ಮೂಡುತ್ತಿದ್ದ ಗೆರೆಗಳು, ರಾತ್ರೆ ಬರದೇ ಕಾಡುತ್ತಿದ್ದ ನಿದ್ರೆ, ಕಣ್ಣ ಕೆಳಗೆ ಮೂಡುತ್ತಿದ್ದ ಕಪ್ಪು ಚಂದ್ರ ನಿಧಾನವಾಗಿ ಗುಣವಾಗತೊಡಗಿದವು. ಎಲ್ಲಾ ಸಮಸ್ಯೆಗಳಿಗೂ ಸಿಗರೇಟೊಂದೇ ಪರಿಹಾರವಲ್ಲ. ಎಲ್ಲಕ್ಕೂ ಅವವೇ ಉತ್ತರಗಳಿರುತ್ತೆ. ಹುಡುಕಬೇಕಷ್ಟೆ. ನಮ್ಮ ಪ್ರಯತ್ನವನ್ನು ಉತ್ತರದ ಹುಡುಕಾಟದಲ್ಲಿ ಹಾಕೋಣ.ಚಿಂತೆಯಲ್ಲಿ ನಮ್ಮನ್ನೇ ಸುಟ್ಟುಕೊಳ್ಳೋದ್ರ ಮೇಲಲ್ಲ ಅನ್ನೋ ಭಾವ ಗಟ್ಟಿಯಾಯಿತು. ಹುಟ್ಟಿದ ದಿನದಂದು ಮೂಡಿದ ಭಾವ ಸಾವಿನತ್ತ ಸಾಗೋವಂತಿದ್ದ ಈತನನ್ನು ತಡೆದಿತ್ತು. ಏನಾದ್ರಾಗಲಿ ಸಿಗರೇಟು ಬಿಟ್ಟೇ ಸಿದ್ದ ಎನ್ನುವ ಇವನ ನಿರ್ಣಯ ಇವನ ಕೈಹಿಡಿದಿತ್ತು.

Tuesday, December 10, 2013

ನಗು

ಮೆಚ್ಚುನಗು, ಪೆಚ್ಚುನಗು, ಕೆಚ್ಚು ನಗು, ಹುಚ್ಚು ನಗು,ಮನ ಬಿಚ್ಚಿ ನಗು.. ಅಬ್ಬಬ್ಬಾ ಅದೆಷ್ಟೊಂದು ಪರಿ ನಗು ? ಆನಂದ, ಅತ್ಯಾನಂದ, ಮಹದಾನಂದ, ಅದ್ಭುತಾನಂದ ಹೀಗೆ ಹಲ ಪರಿಯ ಖುಷಿಯಾದಾಗಲೆಲ್ಲಾ ತುಂಟಿಯಂಚಿನಲ್ಲಿ ಮೂಡಿ, ಕಣ್ಣಂಚಲ್ಲಿ ಮಿನುಗುತ್ತಲ್ಲ.. ಅದೇ ನಗು. ಏನಪ್ಪಾ ಇದು ಈ ಪರಿ ಪೀಠಿಕೆ ಅಂದ್ರಾ ? ಹೆ.ಹೆ ಇವತ್ತು ಬರೆಯೋಕೆ ಹೊರಟಿರೋ ಲೇಖನ ಅದೇ ಕಣ್ರಿ. ನಗು. ಅಂದಂಗೆ ಇಲ್ಲಿರೋ ಪಾತ್ರ, ವ್ಯಕ್ತಿ, ಸನ್ನಿವೇಷಗಳನ್ನೆಲ್ಲಾ ಸಿಕ್ಕಾಪಟ್ಟೆ ಸೀರಿಯಸ್ಸಾಗಿ ತಗೋಬೇಡಿ. ಸುಮ್ನೇ ಓದಿ, ನಕ್ಕು ಬಿಡಿ.

ನಗು ಬಾರದ ಕಾಮಿಡಿಗಳಿಗೆಲ್ಲಾ ಬಿದ್ದು ಬಿದ್ದು ನಗಬೇಕಾದ ಅನಿವಾರ್ಯತೆಯ ನಟ ಭಯಂಕರರನ್ನೂ, ನಟಿಮಣಿಯರನ್ನೂ ನೋಡಿಯೇ ನಗು ಬತ್ತಿ ಹೋಗುತ್ತಿರೋ ಸಂದರ್ಭದಲ್ಲಿ, ಕಾಮಿಡಿ ಟೈಂ ಅಂತ ಮಾಡಿ ನಗಿಸೋಕೆ ಪ್ರಯತ್ನ ಪಟ್ಟೂ ಪಟ್ಟೂ ಸುಸ್ತಾಗಿ ಕೊನೆಗೆ ಹಳೆಯ ಚಿತ್ರದ ತುಣುಕುಗಳ್ನೇ ನಗೆಯ ಸರಕುಗಳಾಗಿ ಉಪಯೋಗಿಸಬೇಕಾದ ಅನಿವಾರ್ಯತೆಯಲ್ಲಿ, ಎದುರಿಗೆ ನಗೆಯ ಮುಖವಾಡ ತೊಟ್ಟಿದ್ರೂ ಒಳಗಡೆ ಏನು ಬತ್ತಿ ಇಡ್ತಿದಾನೋ ಅಂತ ಇವ್ನೂ, ಎಷ್ಟು ಬೇಗ ನನಗಿಂತ ಚೆನ್ನಾಗಿ ಬೆಳೆದು ಬಿಟ್ನಲ್ಲ, ಇವ್ನ ಹೆಂಗೆ ಹಣಿಯೋದು ಅನ್ನೋ ಆಲೋಚನೆಯ ಮಧ್ಯೆಯೂ ಹಿ.ಹಿ.ಹಿ ಅಂತ ಹಲ್ಕಿರಿಯೋ ಅವನು..ಹೀಗೆ ನೂರೆಂಟು ಮುಖವಾಡಗಳ ನೋಡಿ ನೋಡಿ ಮಗುವಿನ ಮುಗ್ದ ನಗುವಿನಂತ ಶುದ್ದ ನಗು ಇನ್ನೂ ಉಳಿದಿದ್ಯಾ ಎಲ್ಲಾದ್ರೂ ಅನಿಸಿಬಿಡತ್ತೆ. ಪರರ ಹಾಸ್ಯ, ಅಪಹಾಸ್ಯ, ಕುಚೇಷ್ಟೆ ಮಾಡೋದ್ರಲ್ಲೇ ಕೆಲವರು ಅಪರಿಮಿತ ನಗುವನ್ನು ಕಂಡರೆ, ತಮ್ಮ ರೂಪ, ಆಕಾರ, ಮರೆವುಗಳನ್ನೇ ಹಾಸ್ಯದ ಅಕ್ಷಯ ಪಾತ್ರೆಯಾಗಿಸೋದು ಇನ್ನು ಕೆಲವರ ದೊಡ್ಡಗುಣ.

ನಗುನಗುತಾ ನಲಿ, ನಲಿ ಏನೇ ಆಗಲಿ ಅಂತ ಅಣ್ಣಾವ್ರು ಹಾಡಿದ್ರೆ , ನಮ್ಮ ಗಣೇಶ ನಗೂ ನಗು ನಗೂ ನಗು ನಗೂ ನಗೂ ನಗು.. ಅಂತ್ಲೇ ಅರಮನೆಯಲ್ಲಿ ಜೋಕರಾಗಿ ನಗಿಸೋಕೆ ಬರ್ತಾರೆ.
ನಗುವ ಗುಲಾಬಿ ಹೂವೆ ಅಂತ ಅಂಬರೀಷ್ ನಗುನಗುತ್ತಲೇ ವಿಷಾದದ ಭಾವಕ್ಕೆ ತಳ್ಳಿದ್ರೆ, ವಿಷ್ಣು ಭಾಯ್ ಆಪ್ತರಕ್ಷಕನ ರಾಜನ ನಗು, ಗೆಳೆಯನ ಹಾಸ್ಯದಲ್ಲಿ ಮಿಂಚುತ್ತಾರೆ.
ಉಮೇಶ್, ಜಹಾಂಗೀರ್, ಸಿಹಿಕಹಿ ತಮ್ಮನ್ನೇ ಹಾಸ್ಯ ಮಾಡ್ಕೊಂಡ್ರೆ, ಬೀಚಿ, ಪ್ರಾಣೇಶ್, ರಮೇಶ್ರಂತರ್ವು ಚುಚ್ಚದ್ರಲ್ಲೇ ನಗು ತರಿಸ್ತಾರೆ. ತುಟಿ ಬಿಚ್ಚದಿದ್ದರೂ, ಮಾತೊಡೆಯದಿದ್ದರೂ ಕಣ್ಣುಗಳಲ್ಲೇ ನಗು ಬೀರೋದು ಒಂದು ಪರಿಯಾದ್ರೆ ನಾಚೊ ನಗು, ಆತ್ಮವಿಶ್ವಾಸದ ನಗು, ಜಗದಲ್ಲಿ ನನ್ನ ಬಿಟ್ಟರಿಲ್ಲವೆಂಬ ಹಮ್ಮಿನ ನಗು, ಅಸಹನೆಯ ನಗು.. ಹೀಗೆ ಹನುಮನ ಬಾಲದಂತಹ ಪಟ್ಟಿ ನಗುವಿನ ಪರಿಯದು.

ನಗೋದ್ರಿಂದ ಏನೇನು ಪ್ರಯೋಜನ ಅಂತೊಂದು ಲೇಖನ ಓದ್ತಾ ಇದ್ದೆ. ಅದನ್ನ ಓದಿದ್ರೆ ನಿಮಗೂ ನಗು ಬರ್ಬೋದು ಅನಿಸ್ತು. ಅದರಲ್ಲಿದ್ದ ಅಂಶಗಳ್ನ ಹಾಕ್ತಿದೀನಿ ನೋಡಿ.
೧)ನಗೋದ್ರಿಂದ ದೇಹಕ್ಕೆ ಭಾರೀ ಅನುಕೂಲ: ಹೌದಂತೆ. ಸಿಟ್ಟು ಮಾಡ್ಕೊಂಡಾಗ ೪೩ ಸ್ನಾಯುಗಳ್ನ ಉಪಯೋಗಿಸಿದ್ರೆ ನಕ್ಕಾಗ ಬರೀ ೧೭ ಸ್ನಾಯುಗಳ್ನ ಮಾತ್ರ ಉಪಯೋಗಿಸ್ತೀವಿ. ಈ ತರ ದೇಹಕ್ಕೆ ಕಮ್ಮಿ ಶ್ರಮ ಕೊಟ್ರೂ ಮನಸ್ಸಿಗೆ ಖುಷಿಯಾಗುತ್ತೆ. ಪಕ್ಕದ ಪರಿಸರದಲ್ಲಿರೋರಿಗೂ ಒಳ್ಳೇದು. ಹೌದಪ್ಪಾ ಹೌದು. ಬೇಜಾರಾಯ್ತು ಅಂತ ಪಕ್ಕದಲ್ಲಿರೋರ ಮೇಲೆಲ್ಲಾ ಹರಿಹಾಯ್ತಾ, ಬೈಯ್ತಾ ಹೋದ್ರೆ ನಮ್ಮ ಬೇಜಾರು, ಸಿಟ್ಟು ಪರಿಹಾರ ಆಗ್ಬೋದು(??) ತಕ್ಷಣಕ್ಕಾದ್ರೂ . ಆದ್ರೆ ಪಕ್ಕದ ಪರಿಸರ ಕೆಟ್ಟು ಅವರೂ ತಿರುಗಾ ನಮ್ಮ ಮೇಲೆ ಹರಿಹಾಯ್ತಾರೆ. ಬಯ್ಯೋದು, ಹೊಡೆಯೋದು.. ಎಲ್ಲಾ ದೇಹಕ್ಕೆ ಅಷ್ಟು ಒಳ್ಳೇದಲ್ಲ ಅಲ್ವಾ ? (ಕಿಸೆಗೂ). ಮತ್ತೆ ಈ ಸಿಟ್ಟು ಮಾಡ್ಕೊಳ್ಳೋದ್ರಲ್ಲಿ ಬಳಕೆ ಆಗೋ ಸ್ನಾಯುಗಳು ಯಾವ ತರಹದ ಸಿಟ್ಟು ಅಂತೆಲ್ಲ ಅಲ್ಲಿ ಹಾಕಿಲ್ಲ ಮತ್ತೆ. ಸಿಟ್ಟು ಮಾಡ್ಕೊಂಡು ಅಟ್ಟಿಸ್ಕೊಂಡು ಹೋಗೋದು, ಹೊಟ್ಟೆ ಹಿಡಿದುಕೊಂಡು ಉರುಳಾಡಿಕೊಂಡು ನಗೋದು ಎಲ್ಲಾ ಎಷ್ಟು ಸ್ನಾಯುಗಳ್ನ ಬಳಸತ್ತೆ ಅಂತಲೂ ಹೇಳಿಲ್ಲ ಮತ್ತೆ. ಹೆ ಹೆ.

೨)ನಗೋದು ಮನುಷ್ಯನಿಗೆ ಮಾತ್ರ ಸಾಧ್ಯವಾಗೋವಂತ ಒಂದು ವರ(?): ಯಾಕೋ ಇದ್ನ ಓದೇ ನಗು ಬಂತು ನನಗೆ. ಅಲ್ಲಾ ಸ್ವಾಮಿ ಹಲ್ಲು ಕಿರೀಯೋ ಕೋತಿಗಳ್ನ, ಚಿಂಪಾಂಜಿಗಳ್ನ ನೋಡೇ ಇಲ್ವಾ ? ಮನುಷ್ಯನಂತೆ ನಗಬಲ್ಲ ಮತ್ತೊಂದು ಪ್ರಾಣಿ "ಹೈನಾ" ಅಂತ ಜೀವಶಾಸ್ತ್ರದಲ್ಲಿ ಓದಿದ್ದು ಮರ್ತೇ ಹೋಯ್ತ ಇವನಿಗೆ ಅನುಸ್ತು . ಅವಗಳ ಭಾವ ಅರ್ಥ ಆಗಲ್ಲ ಅಂದ ಮಾತ್ರಕ್ಕೆ ಅವು ಸುಮ್ನೆ ಹಲ್ಲು ಕಿರಿಯತ್ತೆ, ನಾವು ಮಾತ್ರ ಸಾಚಾ ನಗು ಬೀರೋದು ಅನ್ನಬೋದಾ ? ಹೆ ಹೆ. ಒಳ್ಳೆ ಕತೆ ಆಯ್ತು ಇದು.

೩)ಮಹಿಳೆಯರು ಜಾಸ್ತಿ ನಗುತ್ತಾರೆ : ಹಿ ಹಿ. ಇದು ನಿಜ ಇಅರಬಹುದೇನೋ. ಮಾತಾಡೋದೂ ಅವ್ರೇ ಜಾಸ್ತಿ. ಆಪಾದನೆ ಅಂತಲ್ಲ ಮೇಡಂಗಳೇ, ನೋಡಿದ್ದು, ಕೇಳಿದ್ದು ಅಷ್ಟೇ. ಕಂಪ್ಲೇಂಟಲ್ಲ, ಕಾಂಪ್ಲಿಮೆಂಟು ಅಂತ್ಲೇ ಇಟ್ಕೊಳಿ.  ಮಾತಿನ ಮಧ್ಯೆ ಮನೆಯ, ಆಫೀಸಿನ, ಮಕ್ಕಳ ಸುದ್ದಿ, ತರಲೆ ನೆನಪಿಸಿಕೊಂಡು ನಗೋದು ಕಾಮನ್ನೇ. ಇದ್ರ ಬಗ್ಗೆನೂ ಸಂಶೋಧನೆ ಮಾಡಿದ ಯೇಲ್ ಅನ್ನೋ ವಿಶ್ವವಿದ್ಯಾಲಯದವರು(ಅದು ಎಲ್ ಬಂತು ಅಂದ್ರಾ ? ನಂಗೂ ಗೊತ್ತಿಲ್ಲ ಬಾಸ್ . ಹಿ.ಹಿ.) ಮಹಿಳೆಯರು ದಿನಕ್ಕೆ ೬೨ ಬಾರಿ ನಗ್ತಾರೆ. ಗಂಡಸರು ಬರೀ ೮ ಬಾರಿ ನಗ್ತಾರೆ ಅಂತಂದಿದಾರೆ. ಗಂಡಸರ ನಗು, ಅಳು ಎಲ್ಲಾ , ಬಾರಿನಲ್ಲೆ. ಅಲ್ಲಿಗೆ ಈ ಸಂಶೋಧಕರು ಹೋಗಿರಲಿಕ್ಕಿಲ್ಲ ಅದಕ್ಕೇ ಹೀಗೆ ಅಂತ ಈ ಸಂಶೋಧನೆ ಸುದ್ದಿ ಕೇಳಿದ ನಮ್ಮ ಪೋಲಿಬಾರಿನ ಕುಮಾರ್ ಕುಹಕ ನಗು ಬೀರ್ತಾ ಇದ್ರು. ಮಗುವಿನ ಮುಗ್ದ ನಗು ಅಂದ ತಕ್ಷಣ ನೆನಪಾಯ್ತು. ಮಗು ಹುಟ್ಟಿದ ತಕ್ಷಣ ಅಳೋದಕ್ಕೆ ಶುರು ಮಾಡುತ್ತೆ ಅನ್ನೋದು ಎಲ್ರಿಗೂ ಗೊತ್ತಿದ್ರೂ ಮಗು ಹುಟ್ಟಿದ ಎರಡು ಘಂಟೆಗಳಲ್ಲೇ ಮೊದಲ ನಗು ಬೀರುತ್ತೆ ಅನ್ನೋದು ಗಮನಕ್ಕೆ ಬರದೆ ಹೋಗುತ್ತೆ.

೪)ಬೇರೆ ಬೇರೆ ತರದ ನಗುಗಳಿವೆ. ಇದು ಮಾತ್ರ ೧೦೦% ಹೌದ್ರಿ ಸರ. ಹೆಹೆ, ಹಹ, ಹಾಹಾಹಾ ಅಂತ ತರಹೇವಾರಿ ನಗೋರನ್ನು, ಸೂರೇ ಕಿತ್ತು ಹೋಗೋ ಪರಿ ನಗೋರನ್ನು, ಹಕ್ ಹಕ್ ಅಂತ ಬಿಕ್ಕಳಿಕೆ ಬಂದ ಹಾಗೆ ನಗೋರನ್ನ. ನಕ್ರೆ ಮಾನಗೇಡು ಅಂತ್ಲೋ , ನಗುವುದು ಸಭ್ಯತೆ ಅಲ್ಲ ಅಂತ್ಲೋ ನಗುವನ್ನು ತಗೆಹಿಡಿಯಕ್ಕೆ ಪ್ರಯತ್ನ ಪಟ್ರೂ ಅದು ನಿಯಂತ್ರಣಕ್ಕೆ ಸಿಗದೇ ನಗೋರನ್ನೂ, ಏನೋ ಕಿತಾಪತಿ ಮಾಡಿದ ಖುಷಿಯಲ್ಲಿ ಮೀಸೆಯಂಚಲ್ಲಿ, ಹುಳ್ಳ ಹುಳ್ಳಗೆ, ಮುಖಕ್ಕೆ ಕೈಯೋ, ಕರ್ಚೀಪೋ ಅಡ್ಡ ಇಟ್ಟುಕೊಂಡು ನಗೋದನ್ನೂ ನೋಡಿರ್ತೀವಿ. ನಗುವಲ್ಲಿ ಎಷ್ಟು ತರ ಇದೆ ಅಂತ ಸುಮ್ನೆ ಗೂಗಲ್ಲಲ್ಲಿ ಕೊಟ್ಟೆ. ಒಂದು ಸೈಟು ೨೩ ಅಂದ್ರೆ ಮತ್ತೊಂದು ೧೯ ಅಂತು. ಮತ್ತೊಂದ್ರ ಪ್ರಕಾರ ಬರೀ ಎಂಟಂತೆ. ಮತ್ತೊಂದು ಹೇಗೆ ನಗೋದು ಅಂತ ಹೇಳ್ಕೊಡ್ತೀನಿ ಬಾ ಅಂತಿತ್ತು.. ಯಪ್ಪಾ ಶಿವನೆ , ಎಂತಾ ಕಾಲ ಬಂತು ಅಂತ ನಗು ಬಂತು. ನಗು ಕ್ಲಬ್ಬು ಅಂತ ಮಾಡ್ಕೊಂಡು ಬೆಳಬೆಳಗ್ಗೆ ಎಲ್ಲಾ ಸೇರಿ ಬಿದ್ದು ಬಿದ್ದು ನಗೋದು ಈ ಪೇಟೆಗಳಲ್ಲಿ ಹೊಸ ಆರೋಗ್ಯವರ್ಧಕ ವಿಧಾನ. ಮನೆಯವರ ಜೊತೆ ನಗುನಗುತ್ತಾ ನಾಲ್ಕು ಒಳ್ಳೆ ಮಾತಾಡಿದ್ರೆ ಆಗಲ್ವಾ ಗುರು ? ಫೇಸ್ಬುಕ್ಕಲ್ಲಿ, ಅಲ್ಲಿ ಇಲ್ಲಿ ಹೀಗೆ ಬೀದಿಯವ್ರಿಗೆ ಮಾತ್ರ ಇವ್ರ ಈ ನಗು. ಮನೆಗೆ ಹೋದ ತಕ್ಷಣ ಉಗ್ರನಾರಾಯಣರು ಅಂತ ಕೆಲವರ ಹಿಂದೆ ಬಿಟ್ಟು ನಗ್ತಿದ್ದ ಗುಂಡ.  ನಿನ್ನಿಂದ ಆಗಲ್ಲ ಬಿಡು, ಹಿ ಹಿ. ನೀನು ಹೀಗೆ  ಬಂದೇ ಬರ್ತೀಯ  ಅಂತ ಗೊತ್ತಿತ್ತು. ಬಂದ್ಯಾ, ಬಾ ಬಾ ಅನ್ನೋ ಆತ್ಮವಿಜೃಂಭಣೆಯ ನಗು.. ಓಹೋ, ಉಗ್ರ ಪ್ರತಾಪಿ ಎಂಬ ಅಣ್ಣಾವರ ಬಭ್ರುವಾಹನನ ಹೀಯಾಳಿಕೆ ನಗು, ನಗುವೆಂದರೆ ನರಸಿಂಹರಾಜ್ ಅನ್ನುವಂತಿದ್ದ ಹೊಟ್ಟೆ ಹುಣ್ಣಾಗಿಸುವಂತಹ ನಗು, ಧೀರೇಂದ್ರ ಗೋಪಾಲ್, ಹೊನ್ನವಳ್ಳಿ ಕೃಷ್ಣರಿಂದ ಶುರುವಾಗಿ ಕಾಶೀನಾಥ್,ಟೆನ್ನಿಸ್ ಕೃಷ್ಣ, ಸಾಧುಕೋಕಿಲ, ಜಗ್ಗೇಶ್,ಕೋಮಲ್, ಬುಲೆಟ್ ಪ್ರಕಾಶ್, ಚರಣ್ , ಮಾಸ್ಟರ್ ಆನಂದ್, ಪಾಪ ಪಾಂಡು ವರೆಗೆ ಮುಂದುವರೆದು ಬಂದಿರೋ ಚಿತ್ರ ವಿಚಿತ್ರ ಪರಿಯ ನಗು. ಕನ್ನಡವೊಂದೇ ಅಲ್ಲದೇ ಹಿಂದಿಯ ಜಾನಿ ಲಿವರ್, ತೆಲುಗಿನ ಬ್ರಹ್ಮಾನಂದಂ ತನಕ ಚಿತ್ರವೆಂದರೆ ನಗು,ನಗಿಸೋರು ಇದ್ದೇ ಇರಬೇಕೆಂಬ ಅಘೋಷಿತ ನಿಯಮ ಬಂದಿದೆ ಅಂದ್ರೆ ಲೆಕ್ಕ ಹಾಕಿ . ನಗುವೊಂದು ಹಿಟ್ ಮಂತ್ರವೇ ಆಗಿ ಹೀರೋವೂ ರೊಚ್ಚಿಗೆ ಬಿದ್ದವನಂತೆ ನಗಿಸಲು ಅವಸ್ಥೆ ಪಡೋದ್ನ ನೋಡಿದ್ರೆ ನಗ್ಬೇಕೋ ಅಳ್ಬೇಕೋ ಗೊತ್ತಾಗಲ್ಲ.

೫)ನಗುವೇ ಸೌಂದರ್ಯ: ನಿಜವಾಗ್ಲೂ ಕಣ್ರಿ. ಐಶ್ವರ್ಯ ರೈ ನೋಡಿ. ಸೌಂದರ್ಯ ಅವರನ್ನೇ ನೋಡಿ. ನಕ್ಕಾಗ ಅವ್ರು ಏನ್ ಚಂದ. ದೇವಾನುದೇವತೆಗಳ ಫೋಟೋನೇ ನೋದ್ರಿ, ಅಭಯ ಹಸ್ತ ಇದೆ ಅಂದ್ರೆ ಅವ್ರು ನಗ್ತಿರ್ತಾರೆ. ಅಂದಂಗೆ ಫೋಟೋ ಹೊಡೆಯುವಾಗ್ಲೂ ಇಸ್ಮಾಯಿಲ್ ಅಂತ್ಲೇ ಹೇಳೋದು. ನಗ್ತಿದ್ದಾಗ್ಲೇ ಯಾಕೆ ಫೋಟೋ ತೆಗಿಬೇಕು ಅಂತ್ಲೂ ಕೆಲವರು ಅಂದ್ಕೊಂಡಿರಬಹುದು. ಈ ನಗು ಅನ್ನೋದು ಒಂತರಾ ಸಾಂಕ್ರಾಮಿಕ ಕಣ್ರಿ. ಯಾರಾದ್ರೂ ನಗೋದ್ನ ನೋಡಿದ್ರೆ ನಾವು ಪರರ ನಗುವಿನ ಕಾರಣ ತಿಳಿದಿದ್ರೂ ನಗೋಕೆ ಶುರು ಮಾಡ್ತೀವಿ. ಪಕ್ಕದಲ್ಲಿದ್ದವ ಬಿದ್ದು ಬಿದ್ದು ನಗ್ತಾ ಇದ್ರೆ, ನಮ್ಮ ತುಟಿಯಂಚಲ್ಲಾದ್ರೂ ನಗು ಮೂಡೇ ಮೂಡತ್ತೆ. ಈ ನಗೂನೆ ಮುಂದಿನ ಕಾಲಕ್ಕೆ ಸೆರೆಹಿಡಿದು ಭದ್ರಪಡಿಸೋಕೆ, ಫೋಟೋ ನೋಡಿದಾಗಲೆಲ್ಲಾ ಈ ನಗುವಿನ ಸವಿ ಮತ್ತೆ ಮತ್ತೆ ಮೂಡ್ತಾ ಇರ್ಲಿ ಅಂತ್ಲೇ ನಗಿರಪ್ಪಾ ಸ್ವಲ್ಪಾಂತ ಹೇಳ್ಬೋದೇನೋ.

೬) ನಗುವಿನಿಂದ ಆರೋಗ್ಯ ವರ್ಧಿಸುತ್ತೆ: ಇದು ಇಲಿನಾಯ್ಸ್ ವಿಶ್ವವಿದ್ಯಾಲಯದ (ಇಲ್ಲಿ noice ಅಲ್ಲ ಮತ್ತೆ. ಹೆ ಹೆ) ಸಂಶೋಧನೆ.  ನಗ್ತಾ ನಗ್ತಾ ಇದ್ರೆ, ಆ ನಗುವಲ್ಲೇ ನೋವುಗಳು ಕರಗಿ ಹೋಗಿ, ಚಿಂತೆಗಳು , ದುಗುಡಗಳು ಕರಗಿಹೋಗಿ ಮನಸ್ಸು ಶಾಂತವಾಗುತ್ತೆ. ಜಾಸ್ತಿ ನಗ್ತಾ ಇರೋರ ನಗು ಹಿಂದೆ ಎಷ್ಟೋ ಆಳದ ನೋವುಗಳಿರುತ್ತೆ . ಆದ್ರೆ ಅದ್ನ ತೋರಿಸಿಕೊಳ್ದೇ ಅವ್ರು ಎಲ್ಲರಂತೆಯೇ ಇರ್ತಾರೆ ಅಂತಾನೊಬ್ಬ ವೇದಾಂತಿ. ಈ ವೇದಾಂತವೇ ಅತಿಯಾಗಿ  ವಾಂತಿಯಾಗೋ ಮೊದ್ಲು ಮುಂದಿನದ್ರ ಬಗ್ಗೆ ನೋಡೋಣ.

೭)ಸುಖೀ ಕುಟುಂಬಗಳೆಲ್ಲಾ ನಗುವಿನ ಮೇಲೇ ನಿಂತಿದೆ: ನಂಗೆ ಮದ್ವೆ ಆಗದೇ ಕುಟುಂಬದ ಬಗ್ಗೆ ಮಾತಾಡೋ ಹಾಗಿಲ್ಲದಿದ್ರೂ (ಹಿ ಹಿ) ಅಪ್ಪ, ಅಮ್ಮ , ಅಣ್ಣ, ತಂಗಿ, ನೆಂಟರು .. ಅಂತೆಲ್ಲಾ ಲೆಕ್ಕಕ್ಕೆ ತಗೊಂಡು ಕುಟುಂಬ ಅನ್ನೋ ದೊಡ್ಡ ಲೆಕ್ಕದಲ್ಲಿ ಈ ಬಗ್ಗೆ ಹೇಳ್ಬೋದೇನೋ. ಮನೆಗೆ ಬಂದ ಅಪ್ಪ, ಅಮ್ಮ ದಿನಾ ಮುಖ ಗಂಟು ಹಾಕಿಕೊಂಡ್ರೆ ಬಯ್ತಾ ಇದ್ರೆ ಮಕ್ಕಳಲ್ಲಿ ಅಪ್ಪ ಬಯ್ತಾ, ಅಪ್ಪ ಭೂತ ಅನ್ನೋ ಭಯಾನಕ ಭಾವಗಳು ಮೂಡಬಹುದು !! ನಗುನಗುತ್ತಾ ಗೆಳೆಯರಂತಿರೋ ಅಪ್ಪ ಅಮ್ಮ ಯಾರಿಗೆ ತಾನೇ ಇಷ್ಟ ಆಗಲ್ಲ. ನಗು ತುಂಬಿ ತುಳುಕ್ತಿರೋ ಮನೆ ಸಹಜವಾಗೇ ಸುಖಿಯಾಗಿರತ್ತೆ.

೮)ನಗುವಿನಿಂದ ಸೀತ ದೂರ ಓಡುತ್ತೆ !!. ಇದೊಂತರ ಭಯಂಕರ ನಗು ತರುಸ್ತಾ ಇದೆ. ನಗ್ತಾ ನಗ್ತಾ ಇದ್ರೆ, ಮೂಗಿಗೆ ಸೋರೋದು ಮರ್ತು ಹೋಗಿ ಶೀತ ವಾಸಿಯಾಗುತ್ತೆ ಅಂದ್ರಾ ? ಹೆ ಹೆ. ಹಂಗಲ್ಲ. ನಗೋದೇನು ಬೇಡಂತೆ. ಸುಮ್ನೆ ಮುಖ ಮೇಲೆತ್ತಿ ಹಲ್ಲು ಎಷ್ಟು ಬೆಳ್ಳಗಿದೆ ಅಂತ ತೋರಿದ್ರೆ ಸಾಕಂತೆ ಎಂಡೋಫ್ರಿನ್ ಎಂಬ ಹಾರ್ಮೋನ್ಗಳು ಬಿಡುಗಡೆ ಆಗತ್ತಂತೆ. ಎಂಡೋರ್ಫಿನ್ ಅಂದ್ರೆ ಅದು ಸಂತೋಷದ ಅನುಭವ ಕೊಡೋ ಹಾರ್ಮೋನು. ಅದೇ ತರಹ ಟೆನ್ಸನ್ನು ಕಡಿಮೆ ಮಾಡೊ ಸೆರೋಟಿನಿನ್ ಅನ್ನೋ ಹಾರ್ಮೋನ್ ಕೂಡ ಬಿಡುಗಡೆ ಆಗತ್ತಂತೆ !ನಗ್ತಾ ನಗ್ತಾ ಇದ್ರೆ ಚಿಂತೆ ಕಮ್ಮಿ ಆಗತ್ತೆ ಅನ್ನೋದು ಸುಮ್ನೆ ಅಲ್ಲ ಸ್ವಾಮಿ. ಇನ್ನು ಶೀತದ ವಿಷ್ಯ. ಪ್ರತಿ ಸಲ ಹಲ್ಲು ಕಿರಿಯೋದ್ರಿಂದ ಬಿಳಿ ರಕ್ತಕಣಗಳು ಉತ್ಪಾದನೆ ಆಗತ್ತಂತೆ ಇದರಿಂದ ಶೀತ ದೂರ ಓಡತ್ತಂತೆ !. ಇದು ಎಷ್ಟರ ಮಟ್ಟಿಗೆ ಕಾಗೆ ಅಂತ ಆ ಸಂಶೋಧಕರಾಣೆ ಗೊತ್ತಿಲ್ಲ ಗುರು. ಹಿ ಹಿ.  ಬಿಳಿ ಹಲ್ಲು ತೋರಿಸಿದ ತಕ್ಷಣ ಬಿಳಿ ರಕ್ತಕಣಗಳು ಉತ್ಪಾದನೆ ಆಗದಿದ್ರೆ ದ್ವಾರಪಾಲಕರು ರಕ್ತ ಕಣದ ಫ್ಯಾಕ್ಟರೀನೇ ಇಡ್ಬೋದಲ್ವಾ ಅನ್ನೋ ಖತರ್ ನಾಕ್ ಐಡಿಯಾ ಮಾಡಿದ್ರಾ ? ಟ್ರೈ ಮಾಡೋದ್ರಲ್ಲಿ ತಪ್ಪೇನಿಲ್ಲ ಅನಿಸುತ್ತೆ. ಹೆ ಹೆ. ಅಂತೂ ನಗುವಿನ ಅಷ್ಟಲಾಭಗಳನ್ನ ಓದೋ ಹೊತ್ತಿಗೆ ಆಕಳಿಸಿ ನಿದ್ರೆ ತೆಗೆದಿರಬಹುದಾದ, ಬೈಕಂಡಿರಬಹುದಾಗ, ಓದೋ ಕರ್ಮ ಬೇಡವೆಂದು ಅಲ್ಲಲ್ಲಿ ಹಾರಿಸಿ ಕೊನೆಯ ಪ್ಯಾರಾಕ್ಕೆ ಬಂದಿರಬಹುದಾದ ಎಲ್ಲರಿಗೂ ಒಮ್ಮೆ ಧ.ವಾ. ಓದ್ತಾ ಓದ್ತಾ ಕೆಲವಾದ್ರೂ ನಿಮಗೆ ನಿಮ್ಮ ಬಾಲ್ಯದ, ಮೋಜಿನ ಪ್ರಸಂಗಗಳ, ನಗುವಿನ ನೆನಪು ತಂದು ನಕ್ಕು ನಗಿಸಿರಬಹುದು. ಕಲ್ಪನೆಗಳ ಏಣಿ ಏರಿಸಿರಬಹುದು. ಹಾಗಾಗಿದ್ದರೆ ನನ್ನ ಶ್ರಮ ಧನ್ಯ. ಮತ್ತೊಮ್ಮೆ ಸಿಗೋಣ..

Monday, December 2, 2013

ಟೆಲಿಪತಿ:

ಪೀಠಿಕೆ:
ನಂಬಿಕೆ-ಮೂಡನಂಬಿಕೆಗಳ ನಡುವಿನ ವಾದ ಪ್ರತಿವಾದಗಳೇನೇ ಇರ್ಲಿ. ವಿಜ್ಞಾನದ ಸೂಕ್ಷ್ಮದರ್ಶಕಗಳ , ಪರೀಕ್ಷಾ ವಿಧಾನಗಳ ಕಣ್ಣಿಗೆ ಕಂಡಿದ್ದು ಮಾತ್ರ ಸತ್ಯ ಅನ್ನೋ ವೈಜ್ಞಾನಿಕರು, ನಮ್ಮಲ್ಲಿನ ವಸ್ತು, ವಿದ್ಯೆ, ಜ್ಞಾನಗಳನ್ನೆಲ್ಲಾ ಅವಲಕ್ಷಿಸುತ್ತಿದ್ದಾರೆ ಎಂದು ಅಲವತ್ತುಕೊಳ್ಳೋ ಪ್ರಾಚೀನರಿಗೂ ಇಂದಿನ ಮಹಾನ್ ಜ್ಞಾನಿ ಬುದ್ದಿಜೀವಿಗಳಿಗೂ ನಡುವೆ ನಡೀತಿರೋ ಸಂಘರ್ಷಗಳೇನೇ ಇದ್ರೂ ಕೆಲವೊಮ್ಮೆ ಈ ಮನಸ್ಸು ಅನ್ನೋದು ಯಾರ ಊಹೆಗೂ ನಿಲುಕದಂತೆ ವರ್ತಿಸುತ್ತಿರುತ್ತೆ. ನಾವು ಫೋನ್ ಮಾಡ್ಬೇಕು ಅಂತಿದ್ದಾಗಲೇ ಆತ್ಮೀಯರೊಬ್ಬರು ಫೋನ್ ಮಾಡೋದು, ಗೆಳತಿಯ ಹತ್ರ ನಾವೇನೋ ಮಾತಾಡಬೇಕು ಅಂತಿರುವಾಗ ಅವಳೇ ಅದ್ರ ಬಗ್ಗೆ ಮಾತಾಡಿಬಿಡೋದು..ಹೀಗೆ ನಮ್ಮ ಮನಸ್ಸಿನ ಭಾವನೆಗಳು ಬೇರೆಯವರಿಗೆ ದಾಟೋದು, ಅವರ ಭಾವಗಳು ನಮಗೆ ಬಂದು ತಲುಪೋದು ಆಗ್ತಿರುತ್ತೆ ಅಂತ ಅನೇಕರ ಅಭಿಪ್ರಾಯ. ಇವೆಲ್ಲಾ ಕಾಕತಾಳೀಯ ಅಂತ ಎಷ್ಟೇ ನಿರಾಕರಿಸಿದ್ರೂ ಪದೇ ಪದೇ ನಡೆಯೋಕೆ ಶುರು ಆದಾಗ ಅದರ ಬಗ್ಗೆ ಆಲೋಚಿಸೋ ಹಾಗೆ ಮಾಡುತ್ತೆ. ವಿಜ್ಞಾನಿಗಳ ಪ್ರಕಾರ ಅದೊಂದು ಭ್ರಮೆ ಅಥವಾ ಮನಸ್ಸಿನ ಅವಸ್ತೆ ಅಷ್ಟೇ. ಉಳಿದವರ ಮಾತಿನಲ್ಲಿ ಹೇಳೋದಾದ್ರೆ ಅದೇ ಟೆಲಿಪತಿ.

ಮುಂಚೆ ಲ್ಯಾಂಡ್ ಲೈನಿದ್ದಾಗ್ಲೇ ಚೆನ್ನಾಗಿತ್ತಪ್ಪ. ಚಿಕ್ಕಪ್ಪನ ಮನೆಗೋ, ದೊಡ್ಡಪ್ಪನ ಮನೆಗೋ ಫೋನ್ ಮಾಡಿದ್ರೆ ಅಲ್ಲಿದ್ದ ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ-ಅಜ್ಜಿ, ಅಣ್ಣ-ತಮ್ಮ, ಅಕ್ಕ ಎಲ್ರತ್ರನೂ ಮಾತಾಡತಿದ್ವಿ. ಅವ್ರೂ ಹಾಗೆ, ನಮ್ಮನೆಯಲ್ಲಿರೋ ಎಲ್ರತ್ರನೂ ಮಾತಾಡೋವರ್ಗೂ ಸಮಾಧಾನ ಆಗ್ತಿರಲಿಲ್ಲ. ಫೋನ್ ಬಿಲ್ಲು ಸಿಕ್ಕಾಪಟ್ಟೆ ಬರತ್ತೆ ಬೇಗ ಮಾತಾಡ್ರೋ ಅಂತ ಅಮ್ಮ ಅಂದ್ರೆ, ಹೇ ಹಾಗೇನಿಲ್ಲ. ಮಾತಾಡ್ಲಿ ಬಿಡು. ನಾವು ಅಲ್ಲಿಗೆ ಹೋಗಿ ಬಂದಷ್ಟೇನು ಖರ್ಚಾಗಲ್ಲ. ಈ ಫೋನಲ್ಲಿ ಮಾತಾಡ್ತಾ ಇದ್ರೆ, ಅಲ್ಲಿಗೆ ಹೋಗಿ ಬಂದಂಗೇ ಆಗತ್ತೆ ಅಂತ ಸಮಾಧಾನ ಮಾಡ್ತಿದ್ರು ಅಪ್ಪ. ಈಗ ಎಲ್ರ ಕೈಗೊಂದು ಮೊಬೈಲು ಬಂದ್ರೂ ಯಾರೂ ಮಾತಿಗೆ ಸಿಗಲ್ಲ. ಎಲ್ಲಿಗಾದ್ರೂ ಫೋನ್ ಮಾಡಿದ್ರೂ ಅವ್ರ ಮಕ್ಕಳೋ, ಮನೆಯವ್ರೋ ಸಿಗಲ್ಲ. ಹೇ ಹೊರಗಿದೀನಿ ಕಣೋ ಅಂತನೋ, ಅವ್ರು ಇನ್ನೇನೋ ಬಿಸಿ ಇದಾರೆ ಕಣೋ ಅಂತಾನೋ ಉತ್ರ ಬರತ್ತೆ. ಮುಂಚೆಯಾದ್ರೂ ಫ್ರೀಯಾದ ಮೆಸ್ಸೇಜುಗಳಾದ್ರೂ ಇರ್ತಿತ್ತು. ಈಗ ಅದಕ್ಕೂ ಕತ್ರಿ ಹಾಕಿದ ಮೇಲೆ ಗೆಳೆಯ ಗೆಳೆಯರ ನಡುವಿನ ಬಂಧನೇ ದೂರಾಗ್ತಿರೋ ಹಾಗೆ ಅನಿಸುತ್ತಿದೆ. ಈ ಫೇಸ್ಬುಕ್ಕು, ವಾಟ್ಸಾಪುಗಳಿದ್ರೂ ಎಲ್ಲಕ್ಕೂ ನೆಟ್ಟು ಬೇಕು.. ಆಗೆಲ್ಲಾ ಅನಿಸೋದು ಒಂದೇ. ನಾವು ಮತ್ತೊಬ್ರ ಮನಸ್ಸಿನ ಜೊತೆ ಸೀದಾ ಮಾತಾಡೋ ಹಾಗಿದ್ರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ ಅಂತಾ... ಹೂಂ. ಈ ತರ ಅನ್ಕೊಂಡಿದ್ದು ನಾವು ನೀವುಗಳಷ್ಟೇ ಅಲ್ಲ. ನಮ್ಮ  X-Men ಸೀರೀಸ್ ಅಲ್ಲಿ ಬರೋ ಪ್ರೊಫೆಸರ್ ಎಕ್ಸ್(ಮಾರ್ವೆಲ್), ಗೀತಾ ಮತ್ತು ಶಕ್ತಿಮಾನ್, ಮಹಾ ಗುರುಗಳ ಮಧ್ಯೆಯ ಟೆಲಿಪತಿಕ್ ಸಂಭಾಷಣೆ, Shiva Tilogyಯ Secret of Nagas ಅಲ್ಲಿ ಎದುರಿಗಿರುವವರ ಮನಸ್ಸಿನಲ್ಲಿರೋದನ್ನ ಅರಿತಿದ್ದ ಭೃಗು ಮಹರ್ಷಿ, ದ್ರೌಪದಿ ಸಭೆಯೊಳಗಿಂದ ಕೃಷ್ಣಾ ಅಂದಿದ್ದನ್ನು ಎಲ್ಲೋ ಇದ್ದ ತನ್ನ ಅಂತಃಪುರದಿಂದ ಕೇಳಿಸಿಕೊಂಡ ಮುರಾರಿ.. ಹೀಗೆ ನಮ್ಮ ಕಥಾ ಹಂದರಗಳಲ್ಲಿ, ಶತ ಶತಮಾನಗಳ ಹಿಂದಿನಿಂದಲೇ ಈ ತರದ ಪ್ರಯತ್ನಗಳೂ, ಇತ್ತೀಚೆಗೆ ಅವುಗಳ ಸತ್ಯಾಸತ್ಯತೆಯನ್ನು ಪ್ರಮಾಣಿಸಲು ಅನೇಕ ಪ್ರಯೋಗಗಳೂ ನಡೆದೇ ಇದೆ.ಬನ್ನಿ ಈ ಮನೋಲೋಕದಲ್ಲೊಂದು ಸುತ್ತು ಹಾಕಿ ಬರೋಣ.

ಈಗಿನ ಹಲವರಿಗೆ ವಿಜ್ಞಾನ ಅಂದರೆ ಪಾಶ್ಚಾತ್ಯ ಜಗತ್ತಿನದು ಮಾತ್ರ. ಉಳಿದದ್ದೆಲ್ಲಾ ಮೂಢನಂಬಿಕೆ. ಹಾಗಾಗಿ ಈ ಟೆಲಿಪತಿಯ ಬಗ್ಗೆ ಅಲ್ಲಿಂದಲೇ ಶುರು ಮಾಡೋಣ. ಟೆಲಿಪತಿ ಅನ್ನೋದು ಟೆಲಿ(ದೂರ), ಪ್ಯಾಥಿಯೋಸ್(ಸಂವೇದನೆ, ಭಾವನೆ, ಅನುಭವ) ಅನ್ನೋ ಎರಡು ಗ್ರೀಕ್ ಪದಗಳ ಸಂಯೋಗದಿಂದ ಉದ್ಭವಿಸಿದ್ದು. ಅಂದಾಗೆ ಈ ಪದವನ್ನು ೧೮೮೨ ರಲ್ಲಿ ಫೆಡರಿಕ್ ಮೈರಿಸ್ ಅನ್ನೋ ಲೇಖಕ ಬಳಸಿದನಂತೆ. ಅದಕ್ಕಿಂತ ಮುಂಚೆ ಇದು ಇರಲಿಲ್ಲವೇ ಅನ್ನೋದು ಮತ್ತೊಂದು ವಾದ. ಅದಕ್ಕೆ ಆಮೇಲೆ ಬರೋಣ. ಇದನ್ನು ಪ್ರಮಾಣಿಕರಿಸಲು ನಡೆದ ವೈಜ್ಞಾನಿಕ(?) ಪ್ರಯೋಗಗಳಲ್ಲಿ ಮೊದಲನೆಯದು  ಅಮೇರಿಕನ್ ಲೇಖಕ ಉಂಪ್ಟನ್ ಸಿಂಕ್ಲೇರ್(umpton sinclair) ನ ಮೆಂಟನ್ ರೇಡಿಯೋ ಎಂಬ ಪುಸ್ತಕದಲ್ಲಿನ ಪ್ರಯೋಗ. ಅದರಲ್ಲಿ ಆತ ತನ್ನ ಎರಡನೇ ಹೆಂಡತಿ  ಮೇರಿಗೆ ತಾನು ಬರೆದಿದ್ದ, ಆದರೆ ಆಕೆಗೆ ತೋರಿಸದಿದ್ದ ೨೨೫ ಚಿತ್ರಗಳನ್ನು ಈ ಟೆಲಿಪತಿಯ ಮೂಲಕ ಪುನಃ ಬಿಡಿಸಲು ಕೊಡುತ್ತಾನೆ. ಅದರಲ್ಲಿ ಆಕೆ ೬೫ನ್ನು ಯಥಾವತ್ ಬಿಡಿಸುತ್ತಾಳೆ. ೧೫೫ ಭಾಗಷಃ ಸರಿ, ೭೦ ರಲ್ಲಿ ಫೇಲ್ ಆಗ್ತಾಳೆ ಅಂತ ಬರೆದುಕೊಳ್ತಾನೆ ಲೇಖಕ. ಆದರೆ ಇದನ್ನು ಯಾವುದೇ ವೈಜ್ಞಾನಿಕ ವಿಧಾನದಲ್ಲಿ ಮಾಡಲಾಗದೇ ಇದ್ದಿದ್ರಿಂದ ಇದನ್ನು ಒಪ್ಪಲಾಗದು ಅಂತ ವಿಜ್ಞಾನಿಗಳು ತಳ್ಳಿ ಹಾಕಿ ಬಿಡ್ತಾರೆ. ನಂತರ ನಡೆದ ಪ್ರಯೋಗ ಅಕ್ಟೋಬರ್ ೧೯೩೭ರಲ್ಲಿ ನಡೆದ ಲೇಖಕ ಹೆರಾಲ್ಡ್ ಶೆರ್ಮಾನ್ ಮತ್ತು ಹ್ಯೂಬರ್ಟ್ ವಿಲ್ಕಿನ್ಸನ ನಡುವಿನದು. ಶೆರ್ಮಾನ್ ನ್ಯೂಯಾರ್ಕಿನಲ್ಲಿದ್ದರೆ, ವಿಲ್ಕಿನ್ಸ್ ಆರ್ಕಟಿಕ್ ಧೃವ ಪ್ರದೇಶದಲ್ಲಿ ಸಂಶೋಧನೆಯಲ್ಲಿ ತೊಡಗಿರುತ್ತಾನೆ. ಪ್ರತಿ ನಿತ್ಯ ಅವರು ತಮಗನಿಸಿದ ಭಾವಗಳನ್ನ ಒಂದು ಡೈರಿಯಲ್ಲಿ ದಾಖಲಿಸುತ್ತಾ, ಅದರ ಒಂದು ಪ್ರತಿಯನ್ನು ಕೊಲಂಬಿಯಾ ಯೂನಿವರ್ಸಿಟಿಯ ಒಬ್ಬ ಸೈಕಾಲಜಿ ಪ್ರೊಫೆಸರ್ ಗಾರ್ಡನರ್ ಮರ್ಫಿಗೆ ಕಳುಹಿಸುತ್ತಾ ಇರುತ್ತಾರೆ. ಐದೂವರೆ ತಿಂಗಳ ನಂತರ ಅವರು ಸಿಕ್ಕಾಗ ನೋಡಿದರೆ ೭೫% ಭಾವಗಳು ಒಂದೇ ಇರುತ್ತದೆ. ಅದರಲ್ಲಿರೋ ಕೆಲವೊಂದು ಒಂದು ದಿನದ  ಟೆಲಿಪತಿಗಳು ಅಥವಾ ಇನ್ನೊಂದು ಗುಂಪಿನವರ ಪ್ರಕಾರ ಕಾಕತಾಳೀಯತೆಗಳು ಹೀಗಿವೆ ನೋಡಿ. ಒಂದೇ ದಿನ ಇಬ್ಬರಿಗೂ ಕೆಟ್ಟ ಹವಾಮಾನದ ಕಾರಣದಿಂದ ಕೆಲಸ ಕೆಟ್ಟಿರುತ್ತೆ, ಯಾರದೋ ಕೈ ಚರ್ಮ ಉಗುರಿನ ಬಳಿ ಕಿತ್ತು ಬಂದಿರೋದು ನೋಡಿರ್ತಾರೆ, ಚೆನ್ನಾಗಿ ಕುಡಿದಿರ್ತಾರೆ, ಸಿಗಾರ್ ಪೆಟ್ಟಿಗೆ ಇವರು ಬರೋ ದಾರಿಯಲ್ಲಿ ಎದುರಾಗಿರುತ್ತೆ.ಮತ್ತೊಂದು ಪ್ರಸಂಗ ನೋಡಿ.  ಆರ್ಕಟಿಕ್ ನಲ್ಲಿದ್ದ ವಿಲ್ಕಿನ್ಸ್ ಅಮೇರಿಕನ್ ಸೇನಾಧಿಕಾರಿಗಳ ಜೊತೆಗೆ ಒಂದು ಕಾರ್ಯಕ್ರಮಕ್ಕೆ ಹೋಗಬೇಕಾಗಿರತ್ತೆ. ಆದ್ರೆ ಕೆಟ್ಟ ಹವೆಯ ಕಾರಣದಿಂದ ಆತನ ವಿಮಾನವನ್ನ ಮಧ್ಯೆಯೇ ಒಂದು ಕಡೆ ನಿಲ್ಲಿಸಬೇಕಾಗಿರತ್ತೆ. ಅಂದು ಕಾರ್ಯಕ್ರಮಕ್ಕೆ ಒಳ್ಳೆಯ ಕೋಟನ್ನೂ ಹಾಕಿಲ್ಲವಲ್ಲಪ್ಪ. ನನ್ನ ಸಂಜೆಯ ಕೋಟು ಗಿಡ್ಡವಾಗುತ್ತಿದೆ ಎಂಬ ವೇದನೆಯಲ್ಲಿರುತ್ತಾನೆ ವಿಲ್ಕಿನ್ಸ್. ಇತ್ತ ಕೂತಿರೋ ಶರ್ಮನ್ ಕವಿ ಮಹಾಶಯ ಬರೆದಿರುತ್ತಾನೆ. ನೀನು ಮಿಲಿಟರಿ ಡ್ರೆಸ್ಸಿನಲ್ಲಿರೋ ಜನರೊಂದಿಗೆ ಇದ್ದೀಯ. ಸಖತ್ತಾದ ಮಾತುಕತೆಗಳು ನಡಿತಾ ಇದೆ. ನೀನಿನ್ನು ಸಂಜೆಯ ಡ್ರೆಸ್ಸಿನಲ್ಲೇ ಇದೀಯ... ಅಂತ !!  ಯಪ್ಪಾ.. ಕೆಲವೊಂದು ಕಾಕತಾಳೀಯಗಳು ಇದ್ದರೂ ಇಷ್ಟೆಲ್ಲಾ ಸಮಾನತೆಗಳಿರಲು ಸಾಧ್ಯವೇ ಇಲ್ಲ. ಐದೂವರೆ ತಿಂಗಳುಗಳ ನಂತರ ಇವರ ಡೈರಿಗಳನ್ನ, ಇವರು ತಮಗೆ ಕಳುಹಿಸಿದ ದಾಖಲೆಗಳನ್ನ ಪರಾಮರ್ಶಿಸಿದ ಕೊಲಂಬಿಯಾ ಯೂನಿವರ್ಸಿಟಿಯ ಪ್ರೊಫೆಸರ್ ದಂಗಾಗುತ್ತಾರೆ. ಇಲ್ಲಿಯವರಿಗೆ ಪ್ರಮಾಣೀಕರಿಸದ "ಏನೋ"  ಸತ್ಯ  ಇದೆ ಎಂದು ಆ ಯೂನಿವರ್ಸಿಟಿ ಪ್ರೊಫೆಸರ್ ಅಭಿಪ್ರಾಯ ಪಡುತ್ತಾರೆ.

ಈ ತರದ ಅಸಂಖ್ಯ ಪ್ರಯೋಗಗಳು ನಡೆದಿರಬಹುದು. ಈ "ಟೆಲಿಪತಿ"ಯನ್ನು ವೈಜ್ಞಾನಿಕವಾಗಿ ವಿವರಿಸಲೂ ಅನೇಕ ಸಿದ್ಧಾಂತಗಳು ಹುಟ್ಟಿಕೊಂಡವು. ಅದರಲ್ಲೊಂದು ವಿಲಿಯಮ್ ಕ್ರೂಕನ ಮನೋಅಲೆ(ಬ್ರೈನ್ ವೇವ್) ಸಿದ್ದಾಂತ. ಮೆದುಳಿನಲ್ಲಿನ ಈಥರ್ನ ವೈಬ್ರೇಶನ್ಗಳಿಂದ ಉಂಟಾಗೋ ಅಲೆಗಳೇ ಈ ಟೆಲಿಪತಿಗೆ ಕಾರಣ ಇರಬಹುದೆಂದು ಆತ ಪ್ರತಿಪಾದಿಸಿದ್ದ.  ಇಪ್ಪತ್ತನೆಯ ಶತಮಾನದ ಹೊತ್ತಿಗೆ ಇನ್ನೊಂದಿಷ್ಟು ಸಿದ್ದಾಂತಗಳು ಹುಟ್ಟಿಕೊಂಡವು. ಅದರಲ್ಲೊಂದು ದೈವಿಕ ಸಿದ್ದಾಂತ(spiritual theory). ಇದರ ಪ್ರಕಾರ ಹೊರಗ್ರಹದಿಂದ ಬಂದ ಜೀವಿಗಳು, ಮಾನವಾತೀತ ಶಕ್ತಿಗಳು, ದೈವೀಕ ಶಕ್ತಿಗಳು ನಮ್ಮ ಯೋಚನೆಗಳನ್ನು ನಿಯಂತ್ರಿಸುತ್ತವೆ! ನಂತರ ವಿಜ್ಞಾನಿಗಳು ಇದನ್ನು ಅಲ್ಲಗಳೆದು ಈ ತರ ಅಂದುಕೊಳ್ಳೋ ಮನಸ್ಥಿತಿಯನ್ನೇ ಒಂದು ಖಾಯಿಲೆ ಅಂತ ಹೆಸರಿಟ್ಟಿದ್ದು ಇತಿಹಾಸ !! ಸ್ಕ್ರೀಜೋಫೀನಿಯಾ ಎಂಬ ಮಾನಸಿಕ ಅವಸ್ಥೆ(ಖಾಯಿಲೆ ಅನ್ನೋದು ತಪ್ಪಾಗಬಹುದೇನೋ)ಯ ಜನರಿಗೆ ನಮ್ಮ ಆಲೋಚನೆಗಳು ನಮ್ಮದಲ್ಲ. ಇದು ಯಾವುದೋ ದೆವ್ವ, ಪ್ರೇತ, ದಯ್ಯ, ಅಪ್ಸರೆ, ಅಥವಾ ಇನ್ಯಾವುದೋ ಮಾನವಾತೀತ ಶಕ್ತಿಯದು. ಇದನ್ನ ಯಾರೋ ತಮ್ಮ ಮನಸ್ಸಿನೊಳಗೆ ತುರುಕುತ್ತಿದ್ದಾರೆ ಅನ್ನಿಸುತ್ತಂತೆ. ಇನ್ನು ಕೆಲವರಿಗೆ ತಮ್ಮ ಭಾವನೆ, ಕಲ್ಪನೆಗಳನ್ನ ಯಾರೋ ತಮ್ಮ ಮನಸ್ಸಿನಿಂದ ಕಿತ್ತು ಹೊರಗೆ ಹಾಕುತ್ತಿದ್ದಾರೆ ಅಂತಲೂ ಅನಿಸುತ್ತಂತೆ. ಈ ತರಹದ ಭಾವಗಳ ಬಗ್ಗೆ ಮೆಲನಿ ಕ್ಲೈನ್ ಅನ್ನೋ ಮನೋವಿಜ್ಞಾನಿ ಬರೀತಾ ಹೋಗ್ತಾಳೆ. ತಾಯಿಯ ಹೊಟ್ಟೆಯೊಳಗಿರೋ ಮಗುವಿಗೆ ಅದರ ಮನಸ್ಸಿನಲ್ಲಿ ನಡಿತಿರೋ ಭಾವಗಳಿಗೂ ಅದನ್ನು ಹೊತ್ತಿರೋ ತಾಯಿಯ ಮನಸ್ಸಿನ ಭಾವಗಳಿಗೂ ನಡುವಿನ ವ್ಯತ್ಯಾಸ ತಿಳಿಯಲು ಆಗೋದಿಲ್ಲ. ಆದರೆ ಬೆಳಿತಾ ಬೆಳಿತಾ ಮಗು ತನ್ನದೇ ಆದ ಭಾವಗಳನ್ನ ಹೊಂದುತ್ತಾ ಹೋಗುತ್ತೆ. ಇದು ಸಾಧ್ಯವಾಗದಂತಹ ವ್ಯಕ್ತಿಗಳು ಈ ಸ್ಕ್ರೀಜೋಫೀನಿಯಾ ಅಂತ ಆ ಮಾನಸಿಕ ಅವಸ್ಥೆಯನ್ನು ವರ್ಣಿಸಲು ಪ್ರಯತ್ನಿಸ್ತಾ ಹೋಗ್ತಾಳೆ.


Zener Cards
ನಂತರ ಬಂದ ವಿಜ್ಞಾನಿಗಳು ಈ ಮನೋ ಅಲೆಗಳೆಂಬುದು ಇದ್ರೂ ಅವು ತುಂಬಾ ಕ್ಷೀಣವಾಗಿದ್ದು ಇದರಿಂದ ಯಾವುದೇ ತರಹದ ಮಾಹಿತಿ ವಿನಿಮಯ ಸಾಧ್ಯವಿಲ್ಲವೆಂದು ತಳ್ಳಿ ಹಾಕಿದ್ರು.  ಆದ್ರೂ ಈ ಟೆಲಿಪತಿಯನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸೋ/ಅಲ್ಲಗಳೆಯೋ ಯಾವ ಪ್ರಯೋಗಗಳೂ ಇದ್ದಿರಲಿಲ್ಲ. ಆಗ ಬಂದಿದ್ದು ಎರಡು ಪ್ರಸಿದ್ದ ಪ್ರಯೋಗಗಳು. ಮೊದಲನೆಯದು "ಜೀನರ್ ಕಾರ್ಡ್ ಪ್ರಯೋಗ". ಒಬ್ಬನಿಗೆ ಸಂದೇಶ ಕಳುಹಿಸುವವನು ಎಂದು ಅವನಿಗೆ ಐದು ಜೀನರ್ ಕಾರ್ಡುಗಳಲ್ಲಿ ಯಾವದಾದರೂ ಒಂದನ್ನು ತನ್ನ ಮನಸ್ಸಿನಲ್ಲೇ ಕಲ್ಪಿಸಿಕೊಂಡು ಅದನ್ನು ಮತ್ತೊಬ್ಬನಿಗೆ ಈ "ಟೆಲಿಪತಿ"ಯ ಮೂಲಕ ತಿಳಿಸಬೇಕು. ಅದನ್ನು ಅರಿತ ಆತ ಮೊದಲನೆಯವನು ಯಾವ ಕಾರ್ಡನ್ನು ಆರಿಸಿದ್ದಾನೆ ಎಂದು ತಿಳಿಸಬೇಕು. ಸುಮ್ಮನೇ ಊಹಿಸಿದರೂ ೨೦% ಸತ್ಯ ಹೇಳೋ ಸಾಧ್ಯತೆಯಿರೋದ್ರಿಂದ ೨೦% ಗಿಂತ ಜಾಸ್ತಿ ಸರಿಯಾದರೆ ಮಾತ್ರ ಇದು "ಟೆಲಿಪತಿ" ಎಂಬುದು ಇರುವುದರ ಸಾಧ್ಯತೆಯನ್ನು ಸಾರುತ್ತದೆ ಎಂದು ಇದರ ಹೇಳಿಕೆ.  ಆದರೆ ಮೊದಲನೆಯವ ಗ್ಲಾಸ್ ಹಾಕಿಕೊಂಡಿದ್ರೆ ಅವನ ಗ್ಲಾಸುಗಳನ್ನ ನೀಟಾಗಿ ಗಮನಿಸ್ತಾ ಇದ್ರೆ ಅವನು ನೋಡುತ್ತಿರೋ ಕಾರ್ಡುಗಳು ಯಾವುದು ಎಂದು ಗಮನಿಸಬಹುದು ! ಈ ತರಹದ್ದೇ ಹಲವು ಮೋಸಗಳಾಗೋ ಸಾಧ್ಯತೆಯಿದ್ದಿದ್ರಿಂದ ಬಂದ ಮತ್ತೊಂದು ಪ್ರಯೋಗ ಗ್ಯಾಂಗ್ ಫೆಲ್ಡ್ ಪ್ರಯೋಗ. ಇದರಲ್ಲಿ ಇಬ್ಬರನ್ನು ಯಾವ ತರದಲ್ಲೂ ಸಂಪರ್ಕಿಸಲು ಸಾಧ್ಯವೇ ಆಗದಂತಹ ಎರಡು ಪ್ರತ್ಯೇಕ ಕೋಣೆಗಳಲ್ಲಿ ಕುಳ್ಳಿರಿಸಿ ಮೊದಲನೆಯ ಪ್ರಯೋಗವನ್ನು ನಡೆಸುತ್ತಾರೆ.

ತದನಂತರ ಇನ್ನೂ ಹಲವು ಸಿದ್ದಾಂತಗಳು ಬಂದವು. ಕೆಲವರು ಇದನ್ನೂ ಒಂದು ಪ್ರಕಾರದ ಎಲೆಕ್ಟ್ರೋ ಮ್ಯಾಗ್ನೆಟಿಕ್ ಅಲೆಗಳು( ನಿರ್ವಾತ(vacuum) ಮೂಲಕವೂ ಹಾದು ಹೋಗಬಹುದಾದ ಬೆಳಕು, xray , gamma ರೇ ನಂತಹವು ) ಎಂದರೆ ಗೆರಾಲ್ಡ್ ಫಿನ ಬರ್ಗ್ ಅನ್ನೋನು ಇದು ಇನ್ನೂ ಕಂಡು ಹಿಡಿಯಲಾಗದ "ಸೈಕಾನ್" ಅಥವಾ "ಮೈಂಡಾನ್" ಅನ್ನೋ ಕಣಗಳಿಂದ ಆಗುತ್ತವೆ ಅಂತ ಪ್ರತಿಪಾದಿಸಿದ. ಇತ್ತೀಚಿನ ವಿಜ್ಞಾನಿಗಳಾದ ಚಾರ್ಲ್ಸ್ ಟಾರ್ಟ್ ಅಂತಹ ಕೆಲವರು ಈ "ಟೆಲಿಪತಿ" ಅನ್ನೋದು ಒಂದು ಇದೆ ಅಂತ ಒಪ್ಪಿಕೊಂಡರೂ ಅದು ಭೌತಿಕವಾಗಿಲ್ಲ. ಆದರೆ ಮಾನಸಿಕವಾದ ಸಿದ್ದಾಂತಗಳಿಂದ ಅದನ್ನು ಪ್ರಮಾಣಿಸಬಹುದೇನೋ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೇ ತರಹದ ನಂಬಿಕೆಗಳು ಬೆಳೆಯುತ್ತಾ ಮನೋಸಾರಿಗೆ (ಟೆಲಿ ಟ್ರಾನ್ಸಪೋರ್ಟ್) ಅನ್ನೋ ಕಲ್ಪನೆ ಕೂಡ ಬರ್ತಾ ಇದೆ. ಅಂದ್ರೆ ವಸ್ತುಗಳನ್ನೇ ಅಣು ಅಣುಗಳಾಗಿ ವಿಭಜಿಸಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಗಳ ಮೂಲಕ ಸಾಗಿಸಿ ಅಲ್ಲಿ ಮತ್ತೆ ಜೋಡಿಸೋದು !. ಕಲ್ಪನೆಗೆ ಬರ್ತಿಲ್ವಾ ?
ಸುಮ್ನೇ ಹಿಂಗೆ ಊಹಿಸಿ. ನೀವು ನಿಮ್ಮ ಸ್ನೇಹಿತನ ಜೊತೆಗೆ ಒಂದು ಫೋನಿನಲ್ಲಿ ಮಾತಾಡ್ತಿರೀರಿ. ಸದ್ಯಕ್ಕೆ ಲ್ಯಾಂಡ ಲೈನೇ ಅಂತಿಟ್ಕೊಳ್ಳಿ. ಆ ಲ್ಯಾಂಡ್ ಲೈನಿನ ಮೂಲಕವೇ ನೀವು ತೂರಿ ಹೋಗಿ, ಆ ಕಡೆಯ ಫೋನಿನಿಂದ ಆಚೆ ಬಂದ್ರೆ ಹೇಗಿರುತ್ತೆ ? ಅದೂ ಕ್ಷಣ ಮಾತ್ರದಲ್ಲಿ .. ಸೂಪರ್ ಅಲ್ವಾ ? :-) ಈ ಬಸ್ಸು, ಆಟೋ, ರೈಲುಗಳಿಗೆ ಕಾಯೋ ಜಂಜಾಟ, ಟ್ರಾಫಿಕ್ ತಲೆನೋವುಗಳೇ ಇಲ್ಲ ! ಲ್ಯಾಂಡ್ ಲೈನ್ ಓಕೆ. ಮೊಬೈಲಾದ್ರೆ .. ? ಆಗ ತರಂಗಾಂತರಗಳಲ್ಲಿ ಒಂದಾಗಿ ಆಕಾಶ ಮಾರ್ಗದಲ್ಲಿ ಹಾದು ಮತ್ತೆ ಆಚೆ ಕಡೆ ಪಂಚಭೂತಗಳಲ್ಲಿ ಒಂದಾದ ದೇಹದಲ್ಲಿ ಬದಲಾಗೋದು.. ಹೇಳೋಕೆ ಕೇಳೋಕೆ ಚೆನ್ನಾಗೇ ಇದೆ. ಆದ್ರೆ ಫುಲ್ಲು ಕಾಗೆ ಅಂದ್ರಾ ? ಇಲ್ಲಪ್ಪ. ಆ ತರಹದ ಪ್ರಯೋಗಗಳು ನಡೀತಾ ಇದೆ. ನಿಜವಾಗ್ಲೂ. ಈಗಾಗ್ಲೇ ನಮ್ಮ ಪುರಾಣಗಳಲ್ಲಿ ಬಂದ ಕ್ಷಣಮಾತ್ರದಲ್ಲಿ ಎಲ್ಲಿಗೆ ಬೇಕಾದ್ರೂ ಸಂಚರಿಸೋ ಪರಶುರಾಮ, ನಾರದರಂತ ಎಷ್ಟೋ ಉದಾಹರಣೆಗಳಿವೆ ಅಂದ್ರಾ ? ಹೂಂ ಸರ್.. ಸ್ಟಾರ್ ಟ್ರೆಕ್ಕುಗಳಂತ ಕತೆಗಳಲ್ಲಿ ಇದು ಆಗ್ಲೇ ಬಂದೋಗಿದೆ ಅಂದ್ರಾ.. ಅದೂ ಹೌದು ಸಾರ್.. ಆದ್ರೆ ವೈಜ್ನಾನಿಕವಾಗಿ, ಪ್ರಾಕ್ಟಿಕಲ್ಲಾಗಿ ಇದನ್ನು ಸಾಧ್ಯವಾಗಿಸೋ ಪ್ರಯತ್ನಗಳು ಇನ್ನೂ ನಡೀತಾ ಇದೆ ಅಂದೆ ಅಷ್ಟೇ,, 


ಮುಗಿಸೋ ಮೊದಲು:
ನನ್ನ ಗೆಳೆಯರೊಬ್ರು ಕೇಳ್ತಾ ಇದ್ರು . ಈ  ಭೂತ ಕೋಲ, ದೇವರು ಅನ್ನದೆಲ್ಲಾ ನೀನು ನಂಬ್ತೀಯ ಅಂತ. ಅಲ್ಲ ಕಣೋ ಈ ರೇಖಿ, ಪ್ರಾಣಿಕ್ ಹೀಲಿಂಗ್, ಸಿದ್ದಿ ಸಮಾಧಿ, ಸುದರ್ಶನ ಕ್ರಿಯೆ ಎಲ್ಲಾ ಸತ್ಯ ಅಂತಾದ್ರೆ ಟೆಲಿಪತಿ, ಭೂತ ಕೋಲ, ದೇವರೂ ಯಾಕಿರ್ಬಾದ್ರು ? ವರ್ಣಿಸಲಾಗದ, ಅನುಭವಕ್ಕೆ ಬರದ ಶಕ್ತಿಯೊಂದು ಇದೆ. ಅದು ಒಳ್ಳೆಯದೇ ಮಾಡುತ್ತೆ ಅನ್ನೋ ನಂಬಿಕೆಯಿಂದ ಅದನ್ನ  ಕರೆಯೋ ಹೆಸರುಗಳು ಬೇರೆ ಇರ್ಬೋದು. ಆದರೆ ನನ್ನೊಬ್ಬನ್ನ ಕಣ್ಣಿಗೆ ಕಂಡಿಲ್ಲ ಅಂದ ಮಾತ್ರಕ್ಕೆ ಅದು ಇಲ್ಲ ಅಂತಲೇ ಯಾಕೆ ಅಂದುಕೊಳ್ಳಬೇಕು ? ನಮಗೆ ತಿಳಿದದ್ದೊಂದೇ ಸತ್ಯ ಆಗಿರಬೇಕು. ನಮ್ಮ ಗ್ರಹಿಕೆಗೆ ಬರದ ಪ್ರಪಂಚದ ಉಳಿದೆಲ್ಲಾ ಸಂಗತಿಗಳು ಶುದ್ದ ಸುಳ್ಳೆನ್ನುವುದು ಎಷ್ಟರ ಮಟ್ಟಿಗೆ ಸರಿ ಅಂತ ಕೇಳಿದೆ.. ಅಲ್ವಾ ? ಇದೇ ಸತ್ಯ ಅಂತಲ್ಲ. ಆಗಿರಬಾರದೇಕೆ ಅನ್ನೋ ಅಭಿಪ್ರಾಯವಷ್ಟೇ.

ಮಾಹಿತಿ ಮೂಲಗಳು:
http://en.wikipedia.org/wiki/Telepathy
http://learn-telekinesis-training.com/learn-telepathy.php
http://powerlisting.wikia.com/wiki/Telepathy
http://powerlisting.wikia.com/wiki/Aether_Manipulation
http://content.time.com/time/health/article/0,8599,1874760,00.html
http://science.howstuffworks.com/science-vs-myth/everyday-myths/teleportation.htm

Monday, November 25, 2013

ಒಂಟಿಬುಡುಕ

ಪೀಠಿಕೆ:
ನಮ್ಕಡೆ  ಒಂದು ಪದ ಇದೆ "ಒಂಟಿಬುಡುಕ" ಅಂತ. ಪದ ಅನ್ನೋದಕ್ಕಿಂತ ಅದನ್ನೊಂದು ಸ್ವಭಾವ ಅನ್ನಬಹುದು. ಏನನ್ನೂ, ಯಾರಿಗೂ ಹಂಚದೇ ತಿನ್ನುವ, ಅನುಭವಿಸೋ ಸ್ವಭಾವದವನು/ದವಳಿಗೆ ಒಂಟಿಬುಡುಕ ಆಗ್ಬೇಡ. ಒಳ್ಳೇದಲ್ಲ ಅದು ಅಂತ ಅಪ್ಪ-ಅಮ್ಮ, ಹಿರಿಯರು ಕಿವಿ ಮಾತು ಹೇಳ್ತಿರುತ್ತಾರೆ. ಆ ಸ್ವಭಾವವಿದ್ದವರಿಗೆ ಏನೂ ಅನಿಸದಿದ್ದರೂ, ಹೊರಗಿನವರ ದೃಷ್ಟಿಯಲ್ಲಿ ಕೆಟ್ಟ ಅಭಿಪ್ರಾಯವನ್ನು ಮೂಡಿಸುತ್ತಿರುತ್ತೆ. ಇಂದು ಅದೇ ಸ್ವಭಾವದ ಬಗ್ಗೆ ಒಂದಿಷ್ಟು ಮಾತುಗಳು..ಯಾರದೋ ವ್ಯಕ್ತಿಗತ ನಿಂದೆ ಅಂತಲ್ಲ. ನಮ್ಮ ನಿಮ್ಮೊಳಗೂ ಅರಿಯದೇ ಅವಿತಿರುವ ಈ ಮರಿ ರಾಕ್ಷಸನ ಗುರುತಿಸಿ ಹೊರಗಾಕಲನುವಾಗಲೊಂದು ಪ್ರಯತ್ನ ಅಷ್ಟೇ.

ಹೀಗೆ ಒಂದು ಸಂಜೆ. ಕಾಲೇಜಿಗೆ ಹೋದ ಗೆಳೆಯರೆಲ್ಲಾ ಒಬ್ಬೊಬ್ಬರಾಗಿ ರೂಮು ಸೇರಿದ್ದಾರೆ. ರೂಮು ಸೇರಿದವರಲ್ಲಿ ಒಬ್ಬನ ಕೈಯಲ್ಲೊಂದು ಚೀಲ. ಬಿಳಿ ಪ್ಲಾಸ್ಟಿಕ್ ಕವರಾಗಿದ್ರಿಂದ ಒಳಗಿದ್ದಿದ್ದು ಕಿತ್ತಳೆ ಹಣ್ಣೋ, ಮೋಸಂಬಿಯೋ ಇರಬೇಕು ಅಂತ ಅನಿಸ್ತಾ ಇತ್ತು. ಅದರಿಂದ ಒಂದು ಕಿತ್ತಳೆ ಹಣ್ಣು ಹೊರತೆಗೆದ ಒಬ್ಬ. ಕಂಪ್ಯೂಟರ್ ಕಡೆ ಮುಖ ಹಾಕಿ ಅದರಲ್ಲಿ ಏನೋ ಹುಡುಕುತ್ತಿದ ಇವನ ರೂಂಮೇಟಿಗೆ ಇವನು ಕಿತ್ತಳೆ ಹಣ್ಣು ತಿನ್ನುತ್ತಿರೋದು ಗೊತ್ತಾದ್ರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ತನ್ನ ಕೆಲಸದಲ್ಲಿ ಮಗ್ನನಾಗಿದ್ದ.. ಆಗದಿದ್ದರೂ ಆದಂತೆ ನಟಿಸುತ್ತಿದ್ದ. ಮುಸುಕಿ ಹಾಕಿ ಮಲಗಿದ್ದ ಮತ್ತೊಬ್ಬ ಗೆಳೆಯನಿಗೂ ಪರಿಮಳದಿಂದಲೇ ರೂಮಲ್ಲಿ ಯಾರೋ ಕಿತ್ತಲೆ ಹಣ್ಣು ತಿನ್ನುತ್ತಿದ್ದಾರೆ ಅಂತ ಅನ್ನಿಸಿ ತನಗೂ ಕೊಡಬಹುದೇನೋ ಎಂಬ ಆಸೆಯಿಂದ ಮುಸುಕು ಸರಿಸಿದ. ನೋಡಿದರೆ ಇವನು ಒಬ್ಬನೇ ತಿನ್ನುತ್ತಿದ್ದಾನೆ. ಅವರಿಬ್ಬರೂ ಜೀವನದಲ್ಲಿ ಕಿತ್ತಳೇ ಹಣ್ಣು ತಿಂದೇ ಇಲ್ಲ ಅಂತ ಅಲ್ಲ. ಏನೇ ತಂದರೂ ಹಂಚಿ ತಿನ್ನೋ ತಮ್ಮಿಬ್ಬರನ್ನು ಬಿಟ್ಟು ಒಬ್ಬನೇ ತಿಂತಿದ್ದಾನಲ್ಲ ಈ ಭೂಪ ಅನ್ನೋದಕ್ಕಿಂತ ರೂಮಲ್ಲೇ ಕೂತು ತೋರಿಸಿ ತೋರಿಸಿ ಒಬ್ಬನೇ ತಿಂತಿದ್ದಾನಲ್ಲ, ಒಂದೊಂದು ಸೊಳೆ ಕೊಟ್ಟು ತಿಂತೀರೇನೋ ಅಂತ ಔಪಚಾರಿಕತೆಗಾದ್ರೂ ಕೇಳಿದ್ರೆ ಅವ್ನ ಗಂಟೇನಾದ್ರೂ ಹೋಗ್ತಿತ್ತಾ ? ಅವ್ನು ಕೊಟ್ಟಿದ್ರೂ ನಾವು ಬೇಡ ಅಂತನೇ ಹೇಳ್ತಿದ್ವಿ ಅನ್ನೋದು ಬೇರೆ ಮಾತು. ಆದ್ರೆ ಹಂಚಿ ತಿನ್ನೋ ಸ್ವಭಾವವೇ ಇಲ್ಲದ ಒಂಟಿಬುಡುಕ ಇವನು .ಹೀಗೆ ಮಾಡ್ತಾ ಇದ್ರೆ ಒಂದು ದಿನ ಸರಿಯಾಗಿ ಬುದ್ದಿ ಕಲಿಸಬೇಕು ಇವನಿಗೆ ಅಂತ ಅವನ ಬಗ್ಗೆ ಸಿಟ್ಟು ಬರುತ್ತಿತ್ತು ಇಬ್ಬರಿಗೂ.
**
ಮತ್ತೊಂದು ಹಾಸ್ಟೆಲ್ ರೂಮು. ಗಣಪತಿ ಹಬ್ಬ ಆಗಿದೆ. ಎಲ್ಲ ತಮ್ಮೂರಿಂದ ಏನೇನೋ ತಂದು ತಮ್ಮ ರೂಮವರೊಂದಿಗೆ, ಪಕ್ಕದವರೊಂದಿಗೆ ಹಂಚಿ ನಲಿಯುತ್ತಾ, ತಿನ್ನುತ್ತಿದ್ದಾರೆ. ಒಬ್ಬಳು ಮಾತ್ರ ತಾನು ಊರಿಂದ ಏನೂ ತಂದೇ ಇಲ್ಲವೆಂಬಂತೆ ಇದ್ದಾಳೆ. ನೀನು ಏನೂ ತಂದೇ ಇಲ್ಲವೇನೇ ಅಂದವರಿಗೆಲ್ಲಾ, ಸ್ವಲ್ಪನೇ ಮಾಡಿದ್ರು ಕಣೆ, ಈ ಸಲ. ಹಾಗಾಗಿ ಹೆಚ್ಚು ತರೋಕಾಗ್ಲಿಲ್ಲ. ಮುಂದಿನ ಸರ್ತಿ ತರ್ತೀನಿ ಅಂತಿದ್ದಾಳೆ. ಹೌದಿರಬೌದು ಅಂದುಕೊಂಡ್ರು ಉಳಿದ ಗೆಳತಿಯರೆಲ್ಲಾ. ಬ್ಯಾಗಿಂದ ಯಾವುದೋ ಡಬ್ಬ ತೆಗೀತಿರೋದನ್ನ ನೋಡಿದ್ದ ಅವಳ ರೂಂಮೇಟ್ ಕೂಡ ಗೆಳತಿ ಈ ರೀತಿ ಡೌ ಹೊಡಿತಿರೋದನ್ನ ನೋಡಿ ಸುಮ್ಮನಿದ್ಲು. ರೂಮಲ್ಲಿ ಆಮೇಲೆ ಕೇಳಿದ್ರಾಯ್ತು ಅಂತ. ಹಿಂಗೇ ಅವತ್ತಿನ ರಾತ್ರಿಯಾಯ್ತು. ರೂಂಮೇಟ್ಸೆಲ್ಲಾ ಮಲಗಿದರೂ ಇವಳಿಗೆ ನಿದ್ರೆಯಿಲ್ಲ. ಮನೆಯಿಂದ ತಂದಿದ್ದು ಏನಾಯ್ತು ಏನೋ ಅಂತ. ಬೆಳಗ್ಗಿನಿಂದ ಮನೆಯಿಂದ ತಂದಿದ್ದ ಚಕ್ಕುಲಿ-ಕೋಡುಬಳೆ ತಿನ್ನಬೇಕೆಂಬ ಆಸೆಯನ್ನು ಅದುಮಿಟ್ಟಿದ್ಲು. ಆದ್ರೆ ರಾತ್ರಿಯಾದರೂ ಆ ಆಸೆ ಈಡೇರದೆ ನಿದ್ರೆನೇ ಬರ್ತಾ ಇಲ್ಲ. ಯಾವಾಗ ನೋಡಿದ್ರೂ ರೂಮಲ್ಲಿ ಜನ ತುಂಬಿ ಬಿಟ್ಟಿರ್ತಾರಪ್ಪ. ಆರಾಮಾಗಿ ತಂದಿದ್ದು ತಿನ್ನೋಕೂ ಆಗಲ್ಲ. ನಾನು ಕಷ್ಟಪಟ್ಟು ಹೊತ್ತು ತಂದಿದ್ದು ನಾನೊಬ್ಳೇ ತಿನ್ನೋಕೆ ಅಂತ. ಅದನ್ನ ಇವರಿಗೆಲ್ಲಾ ಯಾಕೆ ಕೊಟ್ಟು ಖಾಲಿ ಮಾಡ್ಬೇಕು ಅನ್ನೋದು ಅವಳ ಭಾವ. ನಿಧಾನವಾಗಿ ಸದ್ದಾಗದಂತೆ ಕಳ್ಳ ಹೆಜ್ಜೆ ಹಾಕಿ ಡಬ್ಬ ತೆಗೆಯೋಕೆ ಹೋದ್ರೂ ಅಲ್ಲೇ ಪಕ್ಕದಲ್ಲಿದ್ದ ನೀರಿನ ಲೋಟ ಬಿದ್ದೋಯ್ತು. ಆ ಸದ್ದಿಂದ ರೂಂಮೇಟ್ಸಿಗೆಲ್ಲಾ ಎಚ್ಚರ ಆಗಿ ಬಿಡ್ಬೇಕೆ ? ಏನೇ ಸೌಂಡು ಅಂದ್ರೆ ನೀರು ಕುಡಿಯೋಣ ಅಂತ ಲೋಟ ತೆಗೆಯೋಕೆ ಹೋದ್ರೆ ಅದು ಬಿದ್ದೋಯ್ತು ಕಣ್ರೆ ಅಂತ ಮತ್ತೆ ಸುಳ್ಳು ಬಿಟ್ಲು. ಲೈಟು ಹಾಕ್ಕೊಳಕಾಗಲ್ವಾ ಸೋಂಬೇರಿ ಅಂದು ಮಲ್ಕೊಂಡ್ರು ಉಳಿದಿಬ್ಬ ರೂಂ ಮೇಟ್ಸು. ಸರಿ, ಡಬ್ಬ ತೆಗೆದ್ಲು. ಒಂದೊಂದೇ ಚಕ್ಕುಲಿ ತೆಗ್ದು ತಿನ್ನೋಕೆ ಶುರು ಮಾಡಿದ್ಲು. ಏನೂ ತಂದಿಲ್ಲವಂತ ಬೇರೆ ಅವ್ರಿಗೆಲ್ಲಾ ಹೇಳಿದವಳು ಈಗ ಒಬ್ಬಳೇ ರಾತ್ರಿ ಕೂತು ಚಕ್ಕುಲಿ ತಿಂತಾ ಇದ್ದಾಳೆ. ಎಷ್ಟು ಸಲ ಮನೆಯಿಂದ ಸ್ವೀಟು, ಹಣ್ಣು ತಂದಾಗ ಇವಳಿಗೆ ಕೊಟ್ಟಿಲ್ಲ. ಆದ್ರೂ ಸೊಕ್ಕು ನೋಡು ಇವ್ಳಿಗೆ ಒಂಟುಬುಡುಕಿ. ಹೊರಗಿನವ್ರು ಹೋಗ್ಲಿ ರೂಂಮೇಟ್ಸಿಗಾದ್ರೂ ತಗೊಳ್ರೆ ಅಂತ ಒಂದು ಚಕ್ಕುಲಿ ಕೊಟ್ಟಿದ್ರೆ ಏನಾಗ್ತಿತ್ತಪ್ಪ ಇವಳಿಗೆ ಅಂತ ಮನಸ್ಸಲ್ಲೇ ಬಯ್ಕೊಳ್ಳಕ್ಕೆ ಶುರು ಮಾಡಿದ್ರು. ಬಾಯ್ಬಿಟ್ಟು ಒಂದು ಮಾತಾಡದಿದ್ರೂ ಈ ಚಕ್ಕುಲಿ ಶಬ್ದದಿಂದ ಇರಿಟೇಟ್ ಆಗಿ ಕಿವಿ ಮೇಲೆ ಶಬ್ದ ಕಮ್ಮಿಯಾಗೋ ತರ ಬೆಡಶೀಟ್ ಬಲವಾಗಿ ಎಳೆದು ಮಲಗಿ ಬಿಟ್ರು.

ಇದು ತೀರಾ ಬಾಲಿಷ ಆಗ್ತಿದೆ ಅಂತ ನಿಮ್ಮಲ್ಲಿ ಕೆಲವರಿಗೆ ಅನಿಸಬಹುದು. ಆದ್ರೆ ಇದು ನಿಜ. ನೀವು ಇಂತಹವರನ್ನು ಇಲ್ಲಿಯವರೆಗೂ ನೋಡಿರಲಿಕ್ಕಿಲ್ಲ. ಅದಕ್ಕೇ ಹಾಗನಿಸುತ್ತಿದೆ. ಮಧ್ಯರಾತ್ರಿಗೆ ಎದ್ದು ಒಬ್ಬರೇ ಕಿತ್ತಳೆ ಹಣ್ಣು ತಿನ್ನೋರು, ಒಂದೇ ಮನೆಯಲ್ಲಿದ್ದರೂ ಅತ್ತೆ ಮಾವನಿಗೆ ಕೊಡದೇ ತಾನೊಬ್ಳೇ ಹಣ್ಣು ತಂದು ತಿನ್ನೋ ಸೊಸೆ, ತನ್ನ ಪಕ್ಕದಲ್ಲೇ ಇನ್ನೊಂದು ಪುಟಾಣಿಯಿದ್ದು ಅದು ತನ್ನನ್ನೇ ನೋಡ್ತಾ ಇದ್ರೂ  ತನಗೆ ಯಾರೋ ಕೊಟ್ಟ ಚಾಕ್ಲೇಟನ್ನು ತಾನೊಬ್ಳೇ ತಿನ್ನೋ ಮಗು.. ಇವೆಲ್ಲಾ ಕಟು ವಾಸ್ತವಗಳೇ. ಒಮ್ಮೆ ತಣ್ಣಗೆ ಕೂತು ಅವಲೋಕಿಸಿದ್ರೆ, ಆತ್ಮಾವಲೋಕನಕ್ಕೆ ಮುಂದಾದ್ರೆ ನಾವೂ ಹೀಗೆ ಒಂಟಿಬುಡುಕರಾದ ಸಣ್ಣತನದ ಪ್ರಸಂಗಗಳು ನೆನಪಾಗ್ಬೋದು. ಮುಂದಾದ್ರೂ ಹಾಗಾಗದಂತೆ ನಮ್ಮ ಸ್ವಭಾವವನ್ನು ತಿದ್ದಿಕೊಳ್ಳೋಕೆ ಮುಂದಾಗ್ಬೋದು. ನನಗನಿಸಿದಂತೆ ಈ ಒಂಟಿಬುಡುಕತನ ಶುರುವಾಗೋದು ಎಲ್ಲಾ ಒಳ್ಳೆಯ, ಕೆಟ್ಟ ಸ್ವಭಾವಗಳ ಬೇರಾದ ಬಾಲ್ಯದಲ್ಲೇ. ಆಗಲೇ ಇದನ್ನ ತಿದ್ದದಿದ್ದರೆ ಆಮೇಲೆ ತಿದ್ದಿಕೊಳ್ಳೋದು ತುಂಬಾನೇ ಕಷ್ಟ. ಬೇರೆಯವರ ಹೇಳೋವರೆಗೂ ನಮಗೆ ಇದರ ಬಗ್ಗೆ ಗೊತ್ತೇ ಆಗಿರೊಲ್ಲ. ಬೇಜಾರಾಗೋತ್ತೆ ಹೇಳಿದ್ರೆ, ನಮಗ್ಯಾಕೆ ಇಲ್ಲದರ ಉಸಾಬರಿ ಅಂತ ನಮ್ಮ ಬಗ್ಗೆ ಕಾಳಜಿಯಿದ್ದೋರೂ ಕೆಲ ಸಲ ನಮಗೆ ಇಂತದ್ರ ಬಗ್ಗೆ ಹೇಳಿರಲ್ಲ. ಹೇಳಿದ್ರೂ ಬದಲಾಗೋ ಮನಸ್ಸಿರೋಲ್ಲ ಕೆಲವರಿಗೆ. ಈ ಒಂಟಿಬುಡುಕ ಸ್ವಭಾವವನ್ನ ಬಾಲ್ಯದಲ್ಲೇ ಚಿವುಟೋಕೆ ನಮ್ಮ ಕಡೆಯೆಲ್ಲಾ ಹೇಗೇಗೆ ಪ್ರಯತ್ನಿಸ್ತಿದ್ರು ಅನ್ನೋ ಕೆಲ ಮಾತುಗಳೊಂದಿಗೆ ಇವತ್ತಿನ ಲೇಖನದಿಂದ ವಿರಮಿಸ್ತೀನಿ.

ನಮ್ಮ ಕಡೆಯೆಲ್ಲಾ ಯಾರದಾದ್ರೂ ಮನೆಗೆ ಹೋಗಬೇಕಾದ್ರೆ ಬರಿಗೈಯಲ್ಲಿ ಹೋಗ್ತಿರಲಿಲ್ಲ. ಮನೆಯಲ್ಲಿ ಮಕ್ಕಳಿದ್ದಾರೆ ಅಂದ್ರೆ ಚಾಕಲೇಟೋ, ಬಿಸ್ಕೇಟು ಪಟ್ಟಣವೋ, ವಯಸ್ಸಾದವರಿದ್ದಾರೆ ಅಂದ್ರೆ ಹಣ್ಣೋ ತಗೊಂಡು ಹೋಗೋದು ಗ್ಯಾರಂಟಿ. ಸಂಜೆ ಬರೋರು ಪಾನಿಪುರಿ, ಮಸಾಲೆ ಪುರಿ ತರೋ ಟ್ರೆಂಡೂ ಇತ್ತೀಚಿಗೆ ಶುರುವಾಗಿದೆಯಾದ್ರೂ ಒಟ್ನಲ್ಲಿ ಖಾಲಿ ಕೈಯಲ್ಲಿ ಬರೋದು ತುಂಬಾ ಕಡ್ಮೆ.ಯಾರಾದ್ರೂ ನೆಂಟ್ರು ಬಂದು ತಗೋಳೋ ಚಾಕ್ಲೇಟು ಅಂತ ಕೊಟ್ರೆ ಆ ಮಗೂಗೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ. ಆ ಮಗುವಿನ ಮುಖ ಅರಳೋದನ್ನ ಅಲ್ಲೇ ನೋಡ್ಬೇಕು. ತಕ್ಷಣ ಅದನ್ನ ತಿನ್ನಬಾರದೆಂಬ ನಿಷಿದ್ದ ಇಲ್ಲದಿದ್ರೂ ಮಕ್ಕಳು ಅದನ್ನ ಅಮ್ಮನ ಕೈಲೋ, ಅಪ್ಪನ ಕೈಲೋ ತಗೊಂಡು ಹೋಗಿ ಕೊಟ್ತಿದ್ರು.. ಬಿಡಿಸಿಕೊಡು ಅಂತ. ಬಿಡಿಸಿಕೊಳ್ಳೋಕೆ ಬಂದ್ರೂ ಬಿಡಿಸಿಕೊಳ್ಳೋ ಪ್ರಯತ್ನದಲ್ಲಿದ್ದಾಗ ಅಪ್ಪನೋ, ಅಮ್ಮನೋ ಏ ಒಬ್ಬನೇ ತಿಂತ್ಯನೋ. ಒಂಟಿಬುಡುಕ ಆಗೋಗ್ತೆ. ತಮ್ಮಂಗೆ ಚೂರು ಕೊಟ್ಯಾ ಅಂತಿದ್ರು. ಒಂದೆರಡು ಸಲ ಹೀಗೆ ಹೇಳೋದ್ರೊಳಗೆ ಮುಂದಿನ ಸಲ ಯಾರು ಏನೂ ಹೇಳದಿದ್ರೂ ಕೈ ಚಾಕ್ಲೇಟನ್ನ ಅರ್ಧ ಮಾಡಿ ತಮ್ಮಂಗೆ ಕೊಟ್ಟಿರ್ತಿತ್ತು.

 ಅವಿಭಕ್ತ ಕುಟುಂಬಗಳಲ್ಲಿ ಬೆಳೆಸುತ್ತಿದ್ದ ಈ ಹಂಚಿ ತಿನ್ನೋ ಸ್ವಭಾವ ಆ ನಂತರದ ವಿಭಕ್ತ ಕುಟುಂಬಗಳಲ್ಲೂ ಮುಂದುವರೀತು.  ಒಬ್ನೇ ಮಗ, ಮಗಳಿದ್ರೂ ಮಗಾ, ಒಂಟಿಬುಡುಕ ಆಗ್ಲಾಗ ನೋಡು. ಎಂತೇ ಇದ್ರೂ ಹಂಚಿ ತಿನ್ನಕ್ಕು ಅಂತ ಅಮ್ಮನೋ, ಅಪ್ಪನೋ ಆಗಾಗ ತಿಳಿಹೇಳ್ತಿದ್ರು. ಹಂಗಾಗಿ ಶಾಲೇಲೆ ಊಟದ ಜೊತೆಗೆ ತಗೊಂಡು ಹೋದ ಸ್ವೀಟನ್ನು ತಾನು ಸ್ವಲ್ಪವೇ ತಿಂದ್ರೂ ಆದಷ್ಟು ಗೆಳೆಯರಿಗೆ ಹಂಚೋ ಅಭ್ಯಾಸ ಶುರು ಆಯ್ತು.  ಬಾಲ್ಯದಲ್ಲೇ ಬೆಳೆದ ಆ ಅಭ್ಯಾಸ ಎಷ್ಟು ಬಲವಾಗಿ ಬೆಳೆಯುತ್ತೆ ಅಂದ್ರೆ ಹೊರಗಡೆ ಇಂದ ರೂಮಿಗೆ ಜೋಳ ತಗೊಂಡು ತಿಂತಾ ಹೋಗೋನು. ರೂಮಲ್ಲಿ ತನ್ನ ಗೆಳೆಯರೂ ಇದ್ದಾರೆ ಅಂತ ನೆನಪಿಸಿಕೊಂಡು ಅವರಿಗಾಗೇ ಇನ್ನೊಂದು ಜೋಳ ತಗೋತಾನೆ. ಇಲ್ಲ, ರೂಮಿಗೆ ಹೋದ ಮೇಲೆ ತನ್ನ ಜೋಳದಲ್ಲೇ ಅರ್ಧ ಮಾಡಿ ತಿಂತೀರೇನೋ ಅಂತಾನೆ.. ಅವರು ತಿಂತಾರೋ ಬಿಡ್ತಾರೋ ಅದು ಬೇರೆ ಮಾತು. ಆದ್ರೆ ಈ ಮಧ್ಯರಾತ್ರೀಲಿ ಕಿತ್ತಳೆ ಹಣ್ಣೋ ತಿನ್ನುವಾಗ ಆಗುವಂತಹ ಕಿರಿಕಿರಿ ಅವರಿಗೆ ಆಗೋಲ್ಲ. ಎಲ್ಲರನ್ನೂ ಬಿಟ್ಟು ಒಬ್ಬನೇ ತಿನ್ನಬೇಕಲ್ಲ, ಅವರೆಲ್ಲಾ ಏನೇನು ಕಣ್ಣು ಹಾಕ್ತಿದ್ದಾರೋ ಅನ್ನೋ ಅಳುಕೂ ಇವನಿಗೆ ಇರೋಲ್ಲ. ಈ ಅಭ್ಯಾಸ ಎಲ್ಲಿ ಹೋದ್ರೂ, ಎಷ್ಟೇ ದೊಡ್ಡವರಾದ್ರೂ ಅವರಿಗೆ ಬಿಡೋಲ್ಲ ಅನ್ನೋದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ.


ಊರಿಂದ ಅಮ್ಮ ಬಂದಿದ್ದಾರೆ. ಅವರಿಗೆ ಪೇಟೆ ತೋರಿಸೋಕೆ ಅಂತ ಕರೆದುಕೊಂಡ ಮಗ ಮೆಕ್ ಡೊನಾಲ್ಡಿಗೆ ಕರೆದುಕೊಂಡು ಹೋಗಿದ್ದಾನೆ. ಅಮ್ಮ ನೋಡು ಇದು ಬರ್ಗರ್ ಅಂತ ತಿನ್ನು ಇದ್ನ. ನಮ್ಮ ಹಳ್ಳಿ ಕಡೆ ಎಲ್ಲಾ ಸಿಗಲ್ಲ ಇದು ಅಂದಿದ್ದಾನೆ. ನೀನು ತಿನ್ನೊಲ್ವೇನು ಅಂದಿದ್ದಕ್ಕೆ , ಏ ಬೇಡಮ್ಮಾ ನಂಗೆ ಇದ್ನ ತಿಂದು ತಿಂದು ಬೇಜಾರಾಗಿ ಹೋಗಿದೆ. ನೀ ತಿನ್ನು ಪರವಾಗಿಲ್ಲ. ನಾ ಇಲ್ಲೇ ಕೂತಿರ್ತೀನಿ ಅಂತ ತನ್ನ ಮೊಬೈಲಲ್ಲಿ ಏನೋ ಮಾಡ್ತಾ ಅಮ್ಮನ ಎದುರಲ್ಲೇ ಕೂತಿದ್ದಾನೆ. ಸುಮ್ಮನೇ ಕೂತ್ರೆ ಅಮ್ಮನಿಗೆ ಒಬ್ಳೇ ತಿನ್ನೋಕೆ ಕಸಿವಿಸಿ ಆಗ್ಬೋದು ಅಂತ. ಒಂದು ನಿಮಿಷ ಆಯ್ತು. ಏನು ನೋಡ್ತಾ ಇದಿಯಾ ಅಮ್ಮ. ತಿನ್ನು ಅಂತ ಮತ್ತೆ ತನ್ನ ಮೊಬೈಲತ್ತ ಕಣ್ಣು ಹಾಯಿಸಿದ. ಒಂದೆರಡು ಕ್ಷಣ. ತಗೋಳೋ ಅಂದ್ರು ಅಮ್ಮ. ಏನು ಅಂತ ನೋಡಿದ್ರೆ ಅಮ್ಮ ಬರ್ಗರನ್ನು ಮದ್ಯಕ್ಕೆ ಎರಡು ಪೀಸು ಮಾಡೋಕೆ ಪ್ರಯತ್ನ ಪಡ್ತಾ ಇದ್ದಾರೆ ! ಏನೇ ಇದ್ರೂ ಹಂಚಿ ತಿನ್ಬೇಕು ಒಬ್ಬರೇ ತಿನ್ನೋದು ಪಾಪ ಅನ್ನೋದು ಅವರ ಧೃಢ ನಂಬಿಕೆ !! ಮನೆಗೆ ಏನೇನೋ ಸಹಾಯ ಮಾಡಬಹುದಾಗಿದ್ದರೂ ತನ್ನ ಸ್ವಾರ್ಥವನ್ನೇ ನೆನೆದು ಕೂತಿದ್ದ ಮಗನಿಗೆ ಈ ಪ್ರಸಂಗ ನೋಡಿ ಕಣ್ಣಂಚಲ್ಲಿ ನೀರು .. ಸ್ವಲ್ಪ ಓವರಾಯ್ತು ಅಂದ್ಕೊಂಡ್ರಾ ? ಮೊದಲೇ ಹೇಳಿದಂತೆ ಇದೂ ಸತ್ಯಘಟನೆಯೇ ! ಈ ತರವೂ ಇರಬೇಕು ಅಂತಲ್ಲ. ಆದ್ರೆ ಯಾವಾಗ್ಲೂ ನಾನು , ನಾನು ಅಂತಲೇ ಇರದೇ ಒಮ್ಮೆಯಾದರೂ ನಾವು ಅನ್ನೋಣ ಅಂತ ಅಷ್ಟೇ. ನಾವು ಪ್ರಾಣಿಗಳಿಂದ್ಲೂ ಕಲಿಯೋದಿರುತ್ತೆ ಅಂತಾರೆ.  ಕಾಗೆನೇ ನೋಡಿ. ಒಂದು ಅಗುಳು ಬಿದ್ದಿದ್ರೂ ತನ್ನ ಕುಟುಂಬದವರನ್ನೆಲ್ಲಾ ಕೂಗಿ ಕರೆಯುತ್ತೆ. ಅಂತದ್ರಲ್ಲಿ ನಮ್ಮದು ಮನುಷ್ಯ ಜನ್ಮ. ಸಂಘಜೀವಿ, ಸಮಾಜ ಜೀವಿ ಅಂತ ಅಷ್ಟೆಲ್ಲ್ ಕೊಚ್ಚಿಕೊಳ್ಳೋ ನಾವು, ಸಮಾಜಕ್ಕೆ ನಾನು ಬೇಕು, ನನಗೆ ಸಮಾಜ ಬೇಡ ಅಂದರೆ ಹೇಗೆ ?  ಒಮ್ಮೆ ತಣ್ಣಗೆ ಕೂತು ಆಲೋಚಿಸೋಣ. ನಮ್ಮ ನಿಮ್ಮೊಳಗೂ ಈ ಒಂಟಿಬುಡುಕ ರಾಕ್ಷಸ ಅವಿತು ಕೂತಿರಬಹುದು. ಅವನನ್ನು ಹೊರಹಾಕೋದು ಹೇಗೆ ಅಂತ ಆಲೋಚಿಸೋಣ. ಎಲ್ಲರೊಳಗೊಂದಾಗಿ ಬದುಕೋದ ಕಲಿಯೋಣ.. ಏನಂತೀರಿ ಗೆಳೆಯರೇ ?

Tuesday, November 19, 2013

ರಿಟೈರಾದ ದೇವರು

"ದೇವರು ರಿಟೈರಾಗುತ್ತಿದ್ದಾನೆ"!!. ಕೆಲವರಿಗೆ ಈ ಶೀರ್ಷಿಕೆಯೇ ವಿಚಿತ್ರವೆನಿಸಿದರೆ ಉಳಿದವರಿಗೆ ನಾನಿಂದು ಯಾರ ಬಗ್ಗೆ ಹೇಳಹೊರಟಿರುವೆನೆಂದು ಹೊಳೆದಿರಬಹುದು. ಹಾಂ, ಹೌದು . ಹೇಳಹೊರಟಿರುವುದು ಇಂದಷ್ಟೇ ತನ್ನ ಕ್ರಿಕೆಟ್ ಜಗತ್ತಿನ ಎಲ್ಲಾ ಪ್ರಕಾರಗಳಿಂದ ಕ್ರಿಕೆಟ್ ಲೋಕದ ದಿಗ್ಗಜನ ಬಗ್ಗೆ. ದಾಖಲೆಗಳ ಮೇಲೆ ದಾಖಲೆಗಳ ಬರೆಯುತ್ತಾ ಹೋದ ಅವನೆಲ್ಲಾ ದಾಖಲೆಗಳು ಕ್ರಿಕೆಟ್ ಪ್ರಿಯರಿಗೆ ಎರಡರ ಮಗ್ಗಿಯಂತೆ ನೆನಪಲ್ಲಿದ್ದರೂ ದಾಖಲಾಗದ ಹಲವು ಸವಿನೆನಪುಗಳು ಅವನ ಆಟದ ಸುತ್ತ. ಕ್ರಿಕೆಟ್ ಜಗತ್ತಿನ ಬಂಗಾರದ ಮನುಷ್ಯ, ಹೆಸರಲ್ಲೇ ಚಿನ್ನ ಇಟ್ಟುಕೊಂಡಿರೋ ಸಚಿನ್ ಎಂದು ಯಾರಾದರೂ ಅಂದರೂ ಅದು ತೀರಾ ಉತ್ಪ್ರೇಕ್ಷೆಯಾಗಲಾರದೇನೋ. ಯಾಕೆಂದರೆ ಆಟದಲ್ಲಿ ಆತನ ತನ್ಮಯತೆ, ಆಟವೇ ತನ್ನ ಸರ್ವಸ್ವವೆಂದು ತನ್ನ ಕೊನೆಯ ಕ್ರಿಕೆಟ್ ದಿನಗಳವರೆಗೂ ತೊಡಗಿಸಿಕೊಂಡ ಆತನ ಪ್ರೀತಿ ಆತನ ವಿರೋಧಿಗಳನ್ನೂ ಸುಮ್ಮನಾಗಿಸುವಂತದ್ದು. ಯುವಪೀಳಿಗೆಗೆ ಮಾದರಿಯಾಗುವಂತದ್ದು. ಕ್ರಿಕೆಟ್ಟೆಂದರೆ ಸಚಿನ್ ಒಬ್ಬನೇ ಅಲ್ಲ , ಅವನಿಗಿಂತ ಪ್ರತಿಭಾವಂತರು ಹಲವರು ಬಂದು ಹೋಗಿದ್ದಾರೆ, ಆದರೆ ಯಾರಿಗೂ ಸಿಕ್ಕದ ಪ್ರಚಾರ ಸಿಕ್ಕಿದ್ದು ಸಚಿನ್ನಿಗೆ ಎಂದು ಸಚಿನ್ ದ್ವೇಷಿಗಳು ಇಂದಿಗೂ ಕುಹಕವಾಡುತ್ತಿರಬಹುದು.. ಹೌದು.  A ಇಂದ Z ತನಕ ಎಲ್ಲಾ ಅಕ್ಷರಗಳ ಆಟಗಾರರು ಬಂದು ಹೋಗಿರಬಹುದು. ಬ್ರಾಡ್ಮನ್, ಬುಚರ್, ಲಾರಾ,ಲಿಲಿ,  ಸೋಬರ್ಸ್, ರಿಚರ್ಡ್ಸ್, ಹೇಡನ್ನಿನಂತ ಹಲವು ದೈತ್ಯ ಪ್ರತಿಭೆಗಳು ಬಂದಿರಬಹುದು. ಭಾರತೀಯ ಕ್ರಿಕೆಟ್ಟಿನಲ್ಲೂ ಅಮರನಾಥ್, ಕಪಿಲ್ ದೇವ್, ಗವಾಸ್ಕರರಂತ ಪ್ರತಿಭಾ ಪರ್ವತಗಳಿರಬಹುದು. ನಮ್ಮ ಪೀಳಿಗೆಯವರೂ ಹಲವು ಪ್ರತಿಭಾವಂತ ಕ್ರಿಕೆಟಿಗರು ಇರಬಹುದು. ಇಲ್ಲವೆಂದಲ್ಲ. ಅವರ್ಯಾರ ಪ್ರತಿಭೆಗಳ ಬಗ್ಗೆ ದೂಸರಾ ಮಾತಿಲ್ಲ. ಆದರೆ ಇಂದಿನ ಗೌರವ ಪಡೆದಿದ್ದು ಸಚಿನ್ ಎಂದಷ್ಟೇ ನಾನು ಹೇಳಹೊರಟಿರೋದು..

ರಿಟೈರಾದ ಸಮಯದಲ್ಲಿ ಅವನ ಕೈಗೆ ರವಿ ಶಾಸ್ತ್ರಿ ಮೈಕ್ ಕೊಟ್ಟು.. Time is yours ಅಂದಾಗ ಸಚಿನ್ ಯಾರ ಬಗ್ಗೆ ಮಾತನಾಡಬಹುದೆಂಬ ಕುತೂಹಲ ಎಲ್ಲರಂತೆ ನನಗೂ ಇತ್ತು. ತಮ್ಮ ಬಾಲ್ಯದ ಗೆಳೆಯ ೬೦೦ ಚಿಲ್ರೆ ರನ್ನಿನ ದಾಖಲೆ ಬರೆದ ಕಾಂಬ್ಳಿಯ ಬಗ್ಗೆಯೋ, ದಾಖಲೆಗಳ ಜೊತೆಯಾಟವಾಡಿದ ಗಂಗೂಲಿಯ ಬಗ್ಗೆಯೋ ಹೇಳಬಹುದೇನೋ ಎಂದುಕೊಂಡಿದ್ದೆ. ಆದರೆ ಸಚಿನ್ ಮಾತು ಶುರುಮಾಡಿದ್ದು ಅಪ್ಪನ ಬಗ್ಗೆ. ಕನಸನ್ನ ಹಿಂಬಾಲಿಸು ಎಂದು ನನ್ನ ಹನ್ನೊಂದನೇ ವರ್ಷದಲ್ಲೇ ನನಗೆ ಪೂರ್ಣ ಸ್ವಾತಂತ್ರ ಕೊಟ್ಟ ಅಪ್ಪ ಎಂದು ಅಪ್ಪನ ಬಗ್ಗೆ ಹೇಳುತ್ತಿದ್ದರೆ ನಾನೊಮ್ಮೆ ಮೂಕನಾಗಿದ್ದೆ. ಅಪ್ಪ, ಅಮ್ಮ, ಬಾಲ್ಯದ ಗೆಳೆಯರು.. ಹೀಗೆ ತಮ್ಮ ದಾಖಲೆಗಳ ಬಗ್ಗೆ ಒಮ್ಮೆಯೂ ನೆನೆಯದ, ಆ ಬಗ್ಗೆ ತುಟಿ ಪಿಟಕ್ಕೆನ್ನದ ಸಚಿನ್ ನೆನೆಸಿಕೊಂಡಿದ್ದು ತಮ್ಮ ಬಾಲ್ಯದ ಕೋಚ್, ಮುಂಬೈ ಅಸೋಸಿಯೇಷನ್, ಬಿಸಿಸಿಐ, ತಮ್ಮೊಂದಿಗೆ ಪ್ರತೀ ಸಲವೂ ಕ್ರಿಕೆಟ್ಟಿನ ಬಗ್ಗೆಯೇ ಮಾತನಾಡೋ ಅಣ್ಣ, ತಮಗೆ ಮೊದಲ ಬ್ಯಾಟನ್ನು ಗಿಫ್ಟ್ ಕೊಟ್ಟ ಅಕ್ಕ, ಪತ್ನಿ, ಮಕ್ಕಳ ಬಗ್ಗೆ. ಹದಿನಾರು ವರ್ಷ ನಿಮ್ಮ ಶಾಲಾ ದಿನ, ಕ್ರೀಡಾ ದಿನ, ಹುಟ್ಟಿದ ದಿನ .. ಹೀಗೆ ನಿಮ್ಮೊಂದಿಗೆ ನಿಮ್ಮ ಮೆಚ್ಚಿನ ದಿನಗಳನ್ನು ಕಳೆಯಲಾಗಿಲ್ಲ. ಇನ್ನು ಮುಂದಿನ ದಿನಗಳನ್ನು ನಿಮ್ಮೊಂದಿಗೇ ಕಳೆಯುವೆನೆಂದು ಭಾಷೆಯಿತ್ತ ಆ ವಾಮನಮೂರ್ತಿ ನಿಜವಾಗೂ ದೊಡ್ಡವನಾಗಿ ಕಾಣುತ್ತಾನೆ. ತಂಡದ ಫಿಸಿಯೋ, ಡಾಕ್ಟರ್, ಮ್ಯಾನೇಜರ್ಗಳಿಂದ ಹಿಡಿದು , ಗ್ರೌಂಡ್ಸಮೆನ್ಗಳವರೆಗೆ, ಮೀಡಿಯಾದವರನ್ನೂ ಬಿಡದೇ ವಂದಿಸಿದ , ಯಾರೂ ಮರೆತು ಹೋಗಬಾರದೆಂದು ಒಂದು ದೊಡ್ಡ ಹಾಳೆಯನ್ನೇ ಹೊತ್ತು ತಂದ ಅವರ ಸೌಮ್ಯ ಸ್ವಭಾವ ಇಷ್ಟವಾಗುತ್ತೆ. ತಮ್ಮ ಕೊನೆಯ ಟೆಸ್ಟ್ ಮ್ಯಾಚಿನಲ್ಲಿ ಗೌರವಪೂರ್ಣ ವಿಧಾಯ  ಹೇಳಿ ವರ್ತಮಾನದ ಭಾಗವೇ ಆದರೂ ಇತಿಹಾಸದ ಪುಟ ಸೇರಿಹೋದ ಸಚಿನ್ನಿನ್ನ ಮಾತುಗಳು ನನ್ನ ನೆನಪುಗಳನ್ನ ಮತ್ತೆ ಮತ್ತೆ ಕೆದಕತೊಡಗಿದವು.


ಮುಂಚೆಯೆಲ್ಲಾ ಟೆಸ್ಟ್ ಮ್ಯಾಚುಗಳೆಂದರೆ ಐದು ದಿನಗಳು ಪೂರ್ತಿ ನಡೆಯೋ ಸಂಭ್ರಮ!. ಇಡೀ ದಿನ ಆಡಿ ಇನ್ನೂರು ರನ್ ಹೊಡೆದರೂ ಅದೊಂದು ಭಯಂಕರ ಬ್ಯಾಟಿಂಗ್. ತಮ್ಮ ಬೌಲಿಂಗ್ ಸಾಮರ್ಥ್ಯವನ್ನೇ ಧಾರೆಯೆರೆಯುತ್ತಿದ್ದ ಬೌಲರ್ಗಳ ನಾನಾ ಎಸೆತಗಳನ್ನ ಎದುರಿಸುವುದು ಬ್ಯಾಟ್ಸಮನ್ನಿನ ನಿಜವಾದ ಸತ್ವಪರೀಕ್ಷೆಯೆ. ಯಾವ ತರಹದ ಎಸೆತಗಳಿಗೂ ಜಗ್ಗದೇ, ಇತ್ತ ರನ್ನನ್ನೂ ಹೊಡೆಯದೇ ಬ್ಯಾಟ್ಸಮನ್ ನೆಲಕಚ್ಚಿ ನಿಂತರೆಂದರೆ ಆಗ ಬೌಲರ್ಗಳ ಸತ್ವ ಪರೀಕ್ಷೆ ಶುರು ವಾಗುತ್ತಿತ್ತು. ಹೇಗಪ್ಪಾ ಈತನನ್ನು ಔಟ್ ಮಾಡೋದು ಎಂದು ಬೆವರಿಳಿಯುತ್ತಿತ್ತು. ಟೆಸ್ಟ್, ಒಂದು ದಿನ ಅನ್ನದೇ ಎಲ್ಲ ಪ್ರಕಾರಗಳಲ್ಲೂ ಒಂದೇ ಸಮನಾಗಿ ರುದ್ರಪ್ರತಾಪ ತೋರೋ ಆಟಗಾರರು ಒಂದಿಷ್ಟು ಜನ ಇರುತ್ತಿದ್ದರು. ಅವರು ಆಟಕ್ಕಿಳಿದರೆಂದರೆ ಎಲ್ಲೆಡೆ ಪುಕುಪುಕು. ತಮ್ಮ ಭಯಾನಕ ವೇಗದಿಂದ, ಪ್ರಚಂಡ ಸ್ಪಿನ್ ಗಾರುಡಿಯಿಂದ ಬ್ಯಾಟ್ಸಮೆನ್ನುಗಳ ಕಂಗೆಡಿಸಿ ವಿಕೆಟ್ ಉರುಳಿಸುತ್ತಿದ್ದ ಬೌಲರ್ಗಳೂ ಇರುತ್ತಿದ್ದರು. ಹಾಗಾಗಿ ಐದು ದಿನದ ಆಟವೆನ್ನೋದು ನಿಜವಾಗಲೂ ದೈಹಿಕ, ಮಾನಸಿಕ ಯುದ್ದದಂತೆ. ಈ ಸತ್ವಪರೀಕ್ಷೆ ಕೊನೆಗೆ ನೀರಸ ಡ್ರಾನಲ್ಲಿ ಅಂತ್ಯವಾದರೂ ಕೆಲವರ ಸೆಂಚುರಿ, ಕೆಲವರ ಐದು , ಹತ್ತು ವಿಕೆಟ್ಗಳ ಸಾಧನೆಗಳು ಇತಿಹಾಸದ ಪುಟಗಳಲ್ಲಿ ಸೇರುತ್ತಿದ್ದವು. ಹೀನಾಯ ಸೋಲಿನ ಹಂತದಲ್ಲಿದ್ದ ಪಂದ್ಯವನ್ನು ಮೇಲೆತ್ತಿ ಗೆಲ್ಲಿಸಿಕೊಟ್ಟ, ತಮ್ಮ ಆಟದ ಬಲದಿಂದ ತಂಡವನ್ನು ಗೆಲುವಿನಂಚಿಗೆ ತಂದಿತ್ತ, ತಂಡ ಗೆಲ್ಲಲಿ, ಸೋಲಲಿ .. ಸೋಲಿನ ಸಂದರ್ಭದಲ್ಲೂ ವೀರೋಚಿತವಾಗಿ ಆಡಿ ಅಭಿಮಾನಿಗಳ ಮನ ಗೆದ್ದೋರು ನಮ್ಮ ತಲೆಮಾರಿನ ಐದಾರು ಆಟಗಾರರು. ಅವರೆಲ್ಲಾ ಇವತ್ತು ಸಚಿನ್ನಿನ ವಿದಾಯದ ಸಂದರ್ಭದಲ್ಲಿ ಮತ್ತೆ ಒಟ್ಟಿಗೆ ಸಿಕ್ಕಿದ್ದು ಕ್ರಿಕೆಟ್ ವೀಕ್ಷಕರ ಅದೃಷ್ಟವೆಂದೇ ಹೇಳಬಹುದೇನೋ..

ಮುಂಚೆಯೇ ಅಂದಂತೆ ಕ್ರಿಕೆಟ್ಟೆಂದರೆ ಸಚಿನ್ನೊಬ್ಬನೇ ಅಲ್ಲ. "ಗೋಡೆ", "ವೆರಿ ವೆರಿ ಸ್ಪೆಷಲ್", "ಬಂಗಾಳದ ಹುಲಿ" ಎಂದು ಖ್ಯಾತಿ ಪಡೆದ ದ್ರಾವಿಡ್, ಲಕ್ಷ್ಮಣ್, ಗಂಗೂಲಿ ಕಮ್ಮಿಯೇನಲ್ಲ. ಇಂದು ಸಚಿನ್ನಿಗೆ ಸಿಕ್ಕಂತ ವಿದಾಯವೇ ಅವರಿಗೂ ಸಿಗಬೇಕಿತ್ತೆನುವ ಮಾತುಗಳನ್ನು ತಳ್ಳಿಹಾಕಲಾಗದಿದ್ದರೂ ಒಂದು ಸುಸಂದರ್ಭವನ್ನು ಹಾಳು ಮಾಡುವಂತಹ ದುಃಖತರುವ ಮಾತುಗಳು ಇಲ್ಯಾಕೋ ಬೇಡವೆನಿಸುತ್ತದೆ. ಇಂದು ಬಂದಿದ್ದ ಈ ಮೂವರನ್ನು ಮತ್ತು ಅಂಗಳದಲ್ಲಿ ಸಚಿನ್ನನ್ನೂ ಕಂಡಂತ ನನಗೆ ಬಾಲ್ಯದ ದಿನಗಳು ನೆನಪಾದವು. ನಾನು, ನಮ್ಮಪ್ಪ, ಅಮ್ಮನ ಕತೆ ಹೋಗಲಿ, ನಮ್ಮಜ್ಜ, ಅಜ್ಜಿಗೂ ಕ್ರಿಕೆಟ್ಟೆಂದರೆ ಪ್ರಾಣವಾಗಿತ್ತಂತೆ. ಶಿವಮೊಗ್ಗದಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದರೆ ಬೆಳಬೆಳಗ್ಗೆಯೇ ಮನೆಯಿಂದ ನೀರಿನ ಬಾಟಲ್ ಹಿಡಿದು ತನ್ನ ಮಕ್ಕಳನ್ನು ಕಟ್ಟಿಕೊಂಡು ಸಂಜೆಯವರೆಗೂ ಉರಿಬಿಸಿಲಲ್ಲಿ ನಮ್ಮಜ್ಜಿ ಕ್ರಿಕೆಟ್ ನೋಡುತ್ತಿದ್ದರಂತೆ. ನಮ್ಮಜ್ಜನಿಗೆ ಈಗಲೂ ಕ್ರಿಕೆಟ್ಟೆಂದರೆ ಅಚ್ಚುಮೆಚ್ಚು. ಅದೆಷ್ಟು ಹಳೆಯ ಕ್ರಿಕೆಟ್ ಮ್ಯಾಚ್ ಹಾಕಿದರೂ ನೋಡುತ್ತಾ ಕೂತು ಬಿಡುತ್ತೀರ ಅಂತ ನಮ್ಮಜ್ಜಿ ಎಷ್ಟೋ ಸಲ ಬೈದರೂ ಊಹೂಂ.. ಅವರ ಪ್ರೇಮ ಹಾಗೆಯೇ ಮುಂದುವರೆದಿದೆ. ಕ್ರಿಕೆಟ್ ಸ್ಕೋರ್ ನೋಡ್ತೀನಿ ಅಂತ ಖುರ್ಚಿಯಿಂದೆದ್ದು ಟೀವಿಯ ಸಮೀಪ ಹೋದ ಅವರು ಅಲ್ಲಿಯೇ ಮೈಮರೆತು ನಿಂತುಬಿಡೋದೂ ಉಂಟು. ನಾವೇ , ಅಜ್ಜಾ ಟೀವಿ ಕಾಣೊಲ್ಲ , ಈ ಕಡೆ ಬನ್ನಿ ಅಂತ ನಗಾಡೋಕೆ ಶುರು ಮಾಡಿದ ಮೇಲೆ ಅವರು ಈ ದುನಿಯಾಕ್ಕೆ ವಾಪಸ್ ಬರೋದು . ಇನ್ನು ನನ್ನ ಬಾಲ್ಯದ ಪುಟಗಳನ್ನು ತಿರುವುತ್ತಾ ಹಿಂದೆ ಹಿಂದೆ ಹೋದಂತೆಲ್ಲಾ ನೆನಪಾಗೋದು ಇವರೇ. ಆಗ ಶಾಲಾ ದಿನಗಳಲ್ಲಿ ಈಗಿನಂತೆ ಹೋಂ ವರ್ಕುಗಳು ಟೆನ್ಸನ್ನು, ಟೀವಿಗಳಲ್ಲಿ ಧಾರಾವಾಹಿಗಳ ಪೈಪೋಟಿಗಳು ಇರದಿದ್ದರೂ ಮನೆಮಂದಿಯೆಲ್ಲಾ ಒಟ್ಟಿಗೆ ಕೂತು ಟೀವಿ ನೋಡುತ್ತಿದ್ದುದು ಕಡಿಮೆಯೇ. ಆದ್ರೆ ಕ್ರಿಕೆಟ್ ಮ್ಯಾಚ್ ಬಂತಂದ್ರೆ ಮುಗ್ದೇ ಹೋಯ್ತು.. ರಾತ್ರೆ ಕ್ರಿಕೆಟ್ ಇದೆ ಅಂದ್ರೆ ನಂಗೆಂತೂ ಸಖತ್ ಖುಷಿ.  ಆಗ ಸಿಗುತ್ತಿದ್ದ "ಅಶ್ವಿನಿ" ಎಂಬ ಕೋಲ್ಡ್ ಡ್ರಿಂಕ್ಸ್ ತಂದು ಅದು ತಣ್ಣಗಿರಲೆಂದು ಟ್ಯಾಂಕಿಯೊಳಗಿಡೋದ್ರಿಂದ ಹಿಡಿದು ಮ್ಯಾಚ್ ನೋಡ್ತಾ ಬೇಕಾಗುತ್ತೆ ಅಂತ ಕಲ್ಲಂಗಡಿ ಹಣ್ಣೋ, ಮಂಡಕ್ಕಿನೋ ತರೋದ್ರಿಂದ ನಾವು ಮ್ಯಾಚಿಗೆ ತಯಾರಾಗುತ್ತಿದೆವು!. ಅಂತಾ ಹುಟ್ಟಾ ಶ್ರೀಮಂತಿಕೆಯ ದಿನಗಳಲ್ಲದಿದ್ದರೂ, ಸಾಲವೆಂಬುದು ತಲೆಯ ಮೇಲೆ ಕತ್ತಿಯಂತೆ ನೇತಾಡುತ್ತಿದ್ದರೂ ನಮ್ಮಪ್ಪ ಎಂದೂ ಬಡತನದ ಬಿಸಿ ನಮಗೆ ತಾಗದಿರಲೆಂದೇ ಅಪ್ಪ ಬಯಸುತ್ತಿದ್ದರು. ಎಷ್ಟೇ ಕಷ್ಟದ ದಿನಗಳಿದ್ದರೂ ನನ್ನ, ಅಮ್ಮನ ಜೊತೆ ಕೂತು ನನಗೇ ನಾಚಿಕೆಯಾಗುವಂತೆ ಪ್ರತೀ ಫೋರು, ಸಿಕ್ಸರಿಗೆ ಕೂಗಿ, ಸೀಟಿ ಹೊಡೆಯುತ್ತಿದ್ದ ಅಪ್ಪನ ಕ್ರಿಕೆಟ್ ಸಂಭ್ರಮದ ಪರಿ ನೆನೆಸ್ಕಂಡ್ರೆ ಇಂದಿಗೂ ಖುಷಿಯಾಗುತ್ತೆ.ಆದರೆ ನಮ್ಮ ಖುಷಿಗಾಗಿ ತಮ್ಮ ಜೀವವನ್ನೇ ತೇದ ಅವರ ನೆನಪಾಗಿ ಕಣ್ಣಂಚು ತೇವವಾಗುತ್ತೆ.

ಟೀವಿ ಹಚ್ಚಿ ಕ್ರಿಕೆಟ್ ನೋಡ್ತಾ ಕೂತು ಬಿಟ್ರೆ ನಾನು ಪ್ರತೀ ಮ್ಯಾಚೂ ಭಾರತವೇ ಗೆಲ್ಲಬೇಕೆಂದು, ಅವರ ಸೋಲು ಸಹಿಸಲಸದಳವಾಗಿ ಭಾವೋನ್ಮುಖನಾಗಿ ಬಿಟ್ತಿದ್ದೆ. ಸಚಿನ್ ಔಟಾದ ಅಂದ ತಕ್ಷಣ ಬಯ್ಯೋದು, ಭಾರತದ ಬೌಲರ್ಗಳಿಗೆ ಪ್ರತೀ ಫೋರು , ಸಿಕ್ಸರ್ ಬಿದ್ದಾಗ ಛೇ, ಛೇ ಎನ್ನುತ್ತಿದ್ದೆ. ಭಾರತದ ಬ್ಯಾಟ್ಸುಮನ್ನುಗಳು ಏನು ರನ್ನೇ ಹೊಡೀತಿಲ್ಲ ಅಂತ ಗೊಣಗೋಕೆ ಶುರು ಮಾಡಿದಾಗ ಅಪ್ಪ, ಅಮ್ಮ ಹೇ, ನೀನು ಇಷ್ಟೆಲ್ಲಾ ಬೇಜಾರಾಗೋದಾದ್ರೆ ಮ್ಯಾಚ್ ನೋಡ್ಬೇಡ. ನಲವತ್ತು  ಓವರಿಗೆ ಎಬ್ಬಿಸ್ತೀನಿ ಮಲ್ಕೋ ಹೋಗು ಅಂತಲೋ. ಭಾರತ ಸೋಲೋ ಸ್ಥಿತೀಲಿದೆ , ಗೆದ್ರೆ ಗ್ಯಾರಂಟಿ ಕರೀತಿನಿ ಅಂತಲೋ ಸಮಾಧಾನ ಮಾಡುತ್ತಿದ್ದರು. ಮೂಢನಂಬಿಕೆ ಅಂದ್ರೆ ಯಾವ ಪರಿ ಇರುತ್ತಿತ್ತು ಅಂದ್ರೆ ಬಾಗಿಲ ಮೂಲೆಯಿಂದ ನೋಡಿದ್ರೆ ಬೇರೆ ಟೀಮಿನವ್ರು ಔಟಾಗ್ತಾರೆ, ಟೀವಿಯೆದ್ರು ಕೂತ್ರೆ ಭಾರತದ ವಿಕೆಟ್ ಬೀಳತ್ತೆ, ರನ್  ಬರಲ್ಲ.. ಹೀಗೆ ತರಾವರಿ ಆಲೋಚನೆಗಳು ನನ್ನ ಎಳೆಮನದಲ್ಲಿ ! ನಾನು ನೋಡಿದರೆ ಔಟಾಗ್ತಾರೆ ಅನಿಸಿದ ದಿನಗಳಲ್ಲೆಲ್ಲಾ ಸೀಟಿಯೋ, ಕೂಗೋ ಕೇಳಿದಾಗ ಓ ಸಿಕ್ಸರ್ ಬಿತ್ತು, ವಿಕೆಟ್ ಬಿತ್ತು ಅಂತ ಪಕ್ಕದ ಯಾವುದೋ ಕೋಣೆಯಿಂದ ಸಂಭ್ರಮಿಸುತ್ತಿದ್ದೆ !! ದೇವರಿಗೆ ಬೇಡುತ್ತಿದ್ದುದ್ದು ಏನು ಗೊತ್ತಾ ? ದೇವ್ರೆ ದೇವ್ರೆ, ಇವತ್ತಿನ ಮ್ಯಾಚಿನಲ್ಲಿ ಭಾರತ ಗೆಲ್ಲಲಪ್ಪಾ ಅಂತ. ನಂಗೆ ಒಳ್ಳೆ ಬುದ್ದಿ ಕೊಡಪ್ಪಾ, ದುಡ್ಡು ಕೊಡಪ್ಪಾ, ಅದು ಕೊಡಪ್ಪಾ, ಇದು ಕೊಡಪ್ಪಾ ಎಂದು ಬೇಡಿದ ನೆನಪೇ ಇಲ್ಲ.

ಮಧ್ಯ ಮಧ್ಯ ಕರೆಂಟ್ ಹೋಗ್ಬಿಡುತ್ತಿತ್ತು. ಆಗ ಚಾಲ್ತಿಗೆ ಬರ್ತಿದ್ದದೇ ರೇಡಿಯೋ.. ಅಲ್ಲಿನ ಮೈ ರೋಮಾಂಚನಗೊಳ್ಳುವಂತ ಕಾಮೆಂಟ್ರಿ ಕೇಳೋದೇ ಒಂದು ಸುಖ. ಕೆಲವೊಮ್ಮೆ ಟೀವಿಯ ವಾಲ್ಯೂಮ್ ಮ್ಯೂಟ್ ಮಾಡಿ ರೇಡಿಯೋ ಹಚ್ಚಿ ಕೂರುತ್ತಿದ್ದುದೂ ಉಂಟು.ಸಚಿನ್ನಿನ ಸೆಂಚುರಿಗಳು, ಗಂಗೂಲಿಯ ಸಿಕ್ಸರ್ಗಳು, ರಾಬಿನ್ ಸಿಂಗಿನ ಮಿಂಚಿನ ಫೀಲ್ಡಿಂಗ್.. ಹೀಗೆ ಪ್ರತೀ ಮ್ಯಾಚೂ ಒಂದು ವಿಸ್ಮಯ ನನಗೆ. ಸಚಿನ್ ಲೆಗ್ ಸ್ಪಿನ್, ಆಫ್ ಸ್ಪಿನ್ ಎಲ್ಲಾ ಮಾಡುತ್ತಾನೆ ಅಂತ ನಾನೂ ಎರಡೂ ಕಲಿಬೇಕೆನ್ನೋ ಹಂಬಲ ಹುಟ್ಟಿದ್ರಿಂದ , ಎಂಆರ್ ಎಫ್ ಬ್ಯಾಟು ನೋಡಿದ್ರೆ ಇದು ಸಚಿನ್ ಬ್ಯಾಟು, ಬ್ರಿಟಾನಿಯಾ ನೋಡಿದಾಗೆಲ್ಲಾ ಇದು ದ್ರಾವಿಡ್ಡಿನದು ಎನ್ನೋದ್ರವರೆಗೆ, ಮ್ಯಾಚಿನ ಮಾರ್ನೇ ದಿನ ಪೇಪರಿನ ಒಂದಕ್ಷರವೂ ಬಿಡದಂತೆ ಒಂದು ಒಂದೂವರೆ ಗಂಟೆಗಳ ಕಾಲ ಓದೋದ್ರವರೆಗೆ, ಪೇಪರ್ನಲ್ಲಿ ಬರುತ್ತಿದ್ದ ಕ್ರಿಕೆಟ್ಟಿಗರ ಬಗ್ಗೆಯ ಮಾಹಿತಿ, ಫೋಟೋ ಕಟ್ ಮಾಡಿ ಇಡುವವರೆಗೆ ಅದೇನೋ ಹುಚ್ಚು ಸೆಳೆತ ಅದರ ಬಗ್ಗೆ.  ಒಮ್ಮೆ ಕ್ರಿಕೆಟ್ ಆಟವಾಡ್ತಾ ಇದ್ದಾಗ ಹೀಗೆ ಏನೋ ಮಾತು ಬಂದು  ಛೇಢಿಸುತ್ತಿದ್ದ ಅಜ್ಜಿಗೆ ಬ್ಯಾಟೆತ್ತಿ ಹೊಡಿತೀನಿ ಎಂದೂ ಹೋಗಿದ್ದೆನೆಂದು ಇಂದಿಗೂ ಕಿಚಾಯಿಸುತ್ತಾರೆ!. ದವಡೆಯ ಮೂಳೆ ಮುರಿದುಕೊಂಡಿದ್ರೂ ಬೌಲಿಂಗ್ ಮಾಡೋಕೆ ಬಂದ ಕೆಚ್ಚೆದೆಯ ಕುಂಬ್ಳೆ, ಲಕ್ಷ್ಮಣ್, ದ್ರಾವಿಡ್, ಗಂಗೂಲಿಯಂತ ದಿಗ್ಗಜರೆಲ್ಲಾ, ಒಂದೊಂದರ್ಥದಲ್ಲಿ ದೇವರ ಸ್ಥಾನವನ್ನೇ ಪಡೆದಿದ್ದಾರೆ. ಆ ಪರಂಪರೆಯ, ಹಿರಿಯ ಪೀಳಿಗೆಯ ಕೊನೆಯ ಕೊಂಡಿ ಸಚಿನ್.. ಈ ಮೂರ್ನಾಲ್ಕು ವರ್ಷಗಳ ಅಂತರದಲ್ಲೇ ಅವರೆಲ್ಲಾ ರಿಟೈರಾಗಿರೋದು ಸ್ವಲ್ಪ ಬೇಸರದ ಸಂಗತಿಯೇ ಆದರೂ ಅದರ ಬಗ್ಗೆ ಏನೂ ಮಾಡಲಾಗುತ್ತಿಲ್ಲ. ಸಿಡಿಲಬ್ಬರದ ಸೆಹ್ವಾಗ್, ಹೆಲಿಕ್ಯಾಪ್ಟರ್ ಧೋನಿ, ಟರ್ಬನೇಟರ್ ಹರ್ಬಜನ್ರಂತ ಆಟಗಾರರು ಬಂದರೂ, ರೋಹಿತ್, ಕೊಹ್ಲಿ, ಶಿಖರ್ರಂತ ಯುವ ಪೀಳಿಗೆ ತಯಾರಾಗಿದ್ದರೂ ಮೇಲೆ ಹೇಳಿದಂತ ಮೇರು ದಿಗ್ಗಜರ ವಿಧಾಯದ ನೋವು ಉಳಿದೇ ಇದೆ. ದೇವರು ರಿಟೈರಾದ್ನಲ್ಲ ಅನ್ನೋ ಬೇಜಾರು ಕಾಡ್ತಾನೆ ಇದೆ.. ಈ ನೋವನ್ನ ಕಾಲವೇ ಮರೆಸಬೇಕಷ್ಟೆ..

Tuesday, November 12, 2013

ದೀಪಾವಳಿ

ಪೀಠಿಕೆ:
ಮುಂಚೆಯೆಲ್ಲಾ ದೀಪಾವಳಿ,ದಸರಾಗಳೆಂದರೆ ಮನೆ ತುಂಬಾ ಜನ. ಎಲ್ಲೇ ಇದ್ದರೂ ವರ್ಷಕ್ಕೊಮ್ಮೆಯಾದರೂ ಹಬ್ಬದ ಸಂದರ್ಭ ಮಕ್ಕಳೆಲ್ಲಾ ತಮ್ಮ ಮೂಲಮನೆಗೆ ಹೋಗೋದು ಪದ್ದತಿ. ಎಲ್ಲಾ ಸೇರಿ ಖುಷಿ ಖುಷಿಯಾಗಿ ಹಬ್ಬ ಆಚರಿಸುತ್ತಿದ್ದ ಖುಷಿಯೇ ಬೇರೆ. ಅವಿಭಕ್ತ ಕುಟುಂಬಗಳೆಲ್ಲಾ ಕಡಿಮೆಯಾಗುತ್ತಿದ್ದಂತೆಯೇ, ಜನರಲ್ಲಿ ಸ್ವಾರ್ಥ, ಅಸೂಯೆಗಳು ಹೆಚ್ಚಾಗುತ್ತಾ ಬರುತ್ತಿದ್ದಂತೆಯೇ, ಹಳ್ಳಿಗಳಿಂದ ಪಟ್ಟಣಗಳತ್ತ ವಲಸೆ ಮುಂದುವರೆದಂತೆಯೇ ಈ ಖುಷಿ, ನಗು ಕಮ್ಮಿಯಾಗುತ್ತಾ ಬರುತ್ತಿದೆ. ಎಂದೂ ಮುಗಿಯದ ಮಕ್ಕಳ ಎಕ್ಸಾಮಿನ ಟೆನ್ಷನ್ನು, ಅವರು ಏನೂ ಮಾಡಿರದಿದ್ದರೂ ಅವರನ್ನು ಯಾಕೆ ಕರೆಯಬೇಕೆಂಬ ಹಳ್ಳಿಯವರ ಬೇಸರವೂ, ನಮಗೆ ಸರಿಯಾದ ಆತಿಥ್ಯ ಮಾಡಿಲ್ಲವೆಂಬ ದೊಡ್ಡ ಪಟ್ಟಣದವರ ಸಣ್ಣತನವೂ ಮೇಳೈಸಿ ಸಂಬಂಧಗಳು ಸಾಯುತ್ತಿವೆ. ಹಬ್ಬಗಳ ಸೊಬಗು ಸಣ್ಣದಾಗುತ್ತಿದೆ. ಅದರ ಬಗ್ಗೆಯೇ ಒಂದು ಕತೆ.. ದೀಪಾವಳಿ.

ಕತೆಗೆ ಬರೋದಾದ್ರೆ..:
ಊರ ಸಾಹುಕಾರನ ಮನೆ. ಈಗಿರೋ ಸಾಹುಕಾರ ಹೆಸರಲ್ಲಿ ಸಾಹುಕಾರನಾದ್ರೂ ಮಕ್ಕಳು ಬೆಳ್ಳಿಯ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟುವಷ್ಟು ಸಾಹುಕಾರನೇನಾಗಿರಲಿಲ್ಲ. ಭೂಸುಧಾರಣೆಯ ಹೊತ್ತಲ್ಲಿ ಈಗಿರೋ ಸಾಹುಕಾರ ಅಮಿತನ ತಂದೆ ಅನಂತಪತಿಯವರು ತಮ್ಮೂರಲ್ಲಿದ್ದ  ಜಮೀನನ್ನೆಲ್ಲಾ ಹಂಚಿ  ಈ ಊರಿನಲ್ಲಿದ್ದ ಸಣ್ಣ ಜಮೀನಲ್ಲಿ ಬಂದು ನೆಲೆಸಿದ್ದರಂತೆ. ಯಾರು ಏನು ಕಷ್ಟವೆಂದರೂ ನೆರವಾಗುತ್ತಿದ್ದ, ದೇಹಿ ಎಂದು ಬಂದವರಿಗೆ ಎಂದೂ ನಾಸ್ತಿಯೆನ್ನದ ಜನರು ಎಂಬ ಗುಣ ಶ್ರೀಮಂತರೆಂಬ ಕಾರಣಕ್ಕೆ ಇಂದೂ ಸಾಹುಕಾರ್ರು ಎಂಬ ಹೆಸರು ಆ ಮನೆತನಕ್ಕೆ ಮುಂದುವರೆದಿತ್ತು. ಅಮಿತನಂತೆಯೇ ಆತನ ಪತ್ನಿ ವಿಶಾಲೆಯದೂ ಹೆಸರಿಗೆ ತಕ್ಕಂತ ವಿಶಾಲ ಮನೋಭಾವ. ಮನೆಗೆ ಮಧ್ಯರಾತ್ರಿ ಬಂದು ನೆಂಟರು ಬಾಗಿಲು ತಟ್ಟಿದರೂ ಬೇಸರಿಸದೆ ಅವರಿಗೆ ಏನಾದರೂ ತಯಾರಿಸಿ ಉಣಬಡಿಸೋ  ಅನ್ನಪೂರ್ಣೇಶ್ವರಿಯವಳು.ಇವರಿಗೆ  ಒಬ್ಬ ಮಗ ಗುಣ ಮತ್ತು ಮಗಳು ಸುಗುಣ. . ಅಗರ್ಭ ಶ್ರೀಮಂತಿಕೆಯಿಲ್ಲದಿದ್ದರೂ ಇದ್ದುದರಲ್ಲೇ ಸಂತೃಪ್ತ ಸುಖಸಂಸಾರ. ದೊಡ್ಡ ಸಾಹುಕಾರನ ದೊಡ್ಡ ಮಕ್ಕಳೆಲ್ಲರೂ ಊರಲ್ಲಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ ಎಂಬ ಕಾರಣವೊಡ್ಡಿ ಪಟ್ಟಣ ಸೇರಿದ್ದರು. ಅಲ್ಲಿ ದೊಡ್ಡ ದೊಡ್ಡ ಉದ್ಯೋಗದಲ್ಲಿದ್ದರೂ ಊರಿಗೆ ಬಂದು ಪ್ರತೀ ಬಾರಿಯೂ ತಂದೆಯ ಹತ್ತಿರವಿದ್ದ ಅಳಿದುಳಿದ ಹಣಕ್ಕೆ ಪೀಡಿಸುತ್ತಲೂ, ಜಮೀನಲ್ಲಿ ಬಂದ ಪಸಲಲ್ಲಿ ತಮಗೆ ಸರಿಯಾದ ಪಾಲಿತ್ತಿಲ್ಲವೆಂಬ ಕಾರಣಕ್ಕೆ ಜಗಳವನ್ನೂ ಆಡುತ್ತಿದ್ದರು. ತಮ್ಮ ಮಕ್ಕಳ ಈ ದುರ್ಬುದ್ದಿಗೆ ಆ ತಂದೆ ಕೊರಗುತ್ತಾ ತನ್ನ ಕೊನೆಯ ದಿನಗಳನ್ನು ದೂಡುತ್ತಿರುವಾಗಲೇ ವರ್ಷದ ದೀಪಾವಳಿ ಹಬ್ಬ ಬಂದಿತ್ತು.


ದೀಪಾವಳಿಯೆಂದರೆ ದೊಡ್ಡ ಹಬ್ಬವೆಂದೇ ಪ್ರತೀತಿಯಲ್ಲಿ. ಸಾಹುಕಾರನ ಪಟ್ಟಣದಲ್ಲಿರೋ ಮಕ್ಕಳು , ತಮ್ಮ ಹೆಂಡತಿ ಮಕ್ಕಳೊಂದಿಗೆ,ಹೆಣ್ಣು ಮಕ್ಕಳು ಅಳಿಯಂದಿರೊಂದಿಗೆ  ಊರಿಗೆ ದಾಂಗುಡಿಯಿಡುತ್ತಿದ್ದ ಸಂದರ್ಭ. ಮನೆಯೆಲ್ಲಾ ಗಿಜಿ ಗಿಜಿ. ಪಟ್ಟಣದ ಮಕ್ಕಳು ಹೊಸ ಬಟ್ಟೆ ತೊಟ್ಟು ಜಗುಲಿಯಲ್ಲಿ ಇಸ್ಪೀಟಿಗೆ ಕೂತುಬಿಟ್ಟರೆ ಮುಗಿದೋಯ್ತು. ಹೊರಜಗತ್ತಿನ ಅರಿವೇ ಇರುತ್ತಿರಲಿಲ್ಲ. ಹಬ್ಬದ ತಯಾರಿಯಿಂದ , ದನ ಕರುಗಳನ್ನು ತಯಾರು ಮಾಡೋವರೆಗೆ, ಆಯುಧಗಳನ್ನು ತೊಳೆಯೋದರಿಂದ ಮನೆ ಕೆಲಸಕ್ಕೆ ಬಂದ ಕೆಲಸದವರ ಊಟ, ತಿಂಡಿ, ಕಾಪಿಗಳು ಸರಿಯಾಗಿ ಆಯ್ತೇ ಎಂದು ವಿಚಾರಿಸುವುದರವರೆಗೆ ಎಲ್ಲಾ ಕೆಲಸಗಳೂ ಅಮಿತನ ಮೇಲೆಯೇ ಬೀಳುತ್ತಿದ್ದವು. ಅತ್ತಿಗೆಯಂದಿರೂ ಒಂದು ಕಾಸಿನ ಕಡ್ಡಿ ಕೆಲಸ ಮಾಡದೇ, ಕುಡಿದ ಕಾಪಿ ಲೋಟ ತೊಳೆಯದೇ ಊರು ಸುತ್ತೋಕೆ ಹೊರಡುತ್ತಿದ್ದರೂ ಬೇಸರಿಸದ ವಿಶಾಲೆಗೆ ಹರಿದ ತನ್ನ ಹಳೆಯ ಸೀರೆಗಿಂತಲೂ ಹಬ್ಬದ ಸಂದರ್ಭದಲ್ಲೂ ಹಳೆಯ ಬಟ್ಟೆ ಹಾಕಬೇಕಾದಂತಹ ತನ್ನ ಗಂಡನ ಮಗ್ಗೆ, ಹಬ್ಬಕ್ಕೆ ಹಾಕಲೂ ಹೊಸ ಬಟ್ಟೆ ಸಿಗದ ತನ್ನ ಮಕ್ಕಳನ್ನು ನೆನೆದು ಮರುಕವಾಗುತ್ತಿತ್ತು.  ಅಡಿಕೆಗೆ ಕೊಳೆ ರೋಗ ಬಂದು ಸಿಕ್ಕ ಅಲ್ಪ ಪಸಲಿನಲ್ಲಿ ತಮ್ಮ ವರ್ಷವಿಡೀ ಹೇಗೆ ಜೀವನ ನಡೆಸಬೇಕು ಎಂಬ ಅಲ್ಪ ಅರಿವೂ ಇಲ್ಲದೇ ಆ ದುಡ್ಡಲ್ಲೂ ಪಾಲು ಕೇಳಲು ಬಂದಿರೋ, ದೀಪಾವಳಿಯನ್ನು ನಿಲ್ಲಿಸಬಾರದೆಂದು ತಮ್ಮಅದಕ್ಕಾಗೇ ಎಷ್ಟು ಸಾಲ ಮಾಡಿರಬಹುದು ಎಂದು ಒಂದಿನಿತೂ ಯೋಚಿಸದೇ ಇಲ್ಲಿ ಬಂದು ಆರಾಮಗಿರೋವಂತಹ ಭಾವಂದಿರಿಗಿಂತಲೂ ತಂದೆಯ ಕೊನೆಗಾಲ ಸಮೀಪಿಸುತ್ತಿರುವುದನ್ನು ಅರಿಯದೇ ಅವರನ್ನು ಕಾಡುತ್ತಿರೋ ಪರಿಯ ಬಗ್ಗೆ ಸಿಟ್ಟೂ , ಮಾವನವರ ಬಗ್ಗೆ ಅನುಕಂಪವೂ ಮೂಡುತ್ತಿತ್ತು. 


ನೀರು ತುಂಬೋ ಭೂರಿ ಹುಣ್ಣಿಮೆ ಬಂತು. ಹಂಡೆ, ಭಾವಿಯನ್ನೆಲ್ಲಾ ರಂಗೋಲಿಯೆಳೆದು , ಕಾಡಲ್ಲಿ ಸಿಗುತ್ತಿದ್ದ ಅಂಡೆಕಾಯಿ ಬಳ್ಳಿಯಿಂದ ಸುತ್ತುವರೆದು ಸಿಂಗರಿಸಿದ ಬಳಿಕ ಮನೆಯವರಿಗೆಲ್ಲಾ ಎಣ್ಣೆ ಸ್ನಾನ.
ಭರ್ಜರಿ ಸ್ನಾನವಾಗಿ ಭೂರಿ ಭೋಜನವೂ ಆಗಿ ಎಲೆಯಡಿಕೆ ಮೆಲ್ಲುತ್ತಾ  ಕುಳಿತಿದ್ದ ಅನಂತ ಪತಿಯ ದೊಡ್ಡ ಮಗ  ತಂದೆಯನ್ನು ಮಾತಿಗೆಳೆದ. ಅಪ್ಪಾ, ಇನ್ನೆಷ್ಟು ವರ್ಷ ಅಂತ ನಾವು ಇಲ್ಲಿ ಬಂದು ಜಮೀನಿನ ಫಸಲಿನ ಪಾಲು ಕೇಳೋದು. ಪ್ರತೀ ಸಲ ಕೇಳೋಕೆ ನಮಗೂ ಒಂತರ ಬೇಜಾರಾಗುತ್ತೆ. ನಮ್ಮ ನಮ್ಮ ಪಾಲು ಎಷ್ಟೂಂತ ಹಿಸೆ ಮಾಡಿ ಕೊಡು. ಅದನ್ನ ಮಾರಿ, ಬಂದ ಹಣ ತಗೊಂಡು ಹೋಗಿ ಬಿಡ್ತೇವೆ. ಪ್ರತೀ ಸಲ ಕೇಳೋದು ಇರಲ್ಲ ಅಂದ. ಅಲ್ರೋ, ನಿಮ್ಮನ್ನೆಲ್ಲಾ ದೊಡ್ಡ ದೊಡ್ಡ ಓದಿಗೆ , ಬಿಸಿನೆಸ್ಸಿಗೆ ಅಂತ ಅಷ್ಟೆಲ್ಲಾ ಖರ್ಚು ಮಾಡಿದೀನಿ. ಕಿರಿಯ ಮಗನಿಗೆ ಅಂತ ಏನೂ ಕೊಟ್ಟಿಲ್ಲ. ಇರೋ ಒಂದೂವರೆ ಎಕರೆ ತೋಟಕ್ಕೂ ಪ್ರತೀ ವರ್ಷ ಕೊಳೆ ಬರ್ತಾ ಇದೆ. ಆದ್ರೂ ಅದರಲ್ಲಿ ಪಾಲು ಕೇಳೋ ಪಾಪಿಗಳಿಗೆ ಒಂದು ಮಾತೂ ಆಡದ ಆ ಪುಣ್ಯಾತ್ಮ ಬಂದಿದ್ದರಲ್ಲೇ ಪಾಲು ಕೊಡ್ತಾ ಇದ್ದಾನೆ. ಅವನ ಹರುಕು ಬಟ್ಟೆ, ಸ್ಥಿತಿ ನೋಡಿದ ಮೇಲೆ ಸಹಾಯ ಮಾಡೋಕೆ ಬರೋ ಬದ್ಲು ತೋಟದಲ್ಲಿ ಹಿಸೆ ಕೇಳ್ತಾ ಇದ್ದೀರಲ್ಲೋ, ಏನೋ ಕಮ್ಮಿಯಾಗಿದೆ ನಿಮ್ಗೆ ಅಂದ ಅನಂತ ಪತಿ. ಅಪ್ಪಾ, ಅವನ ಕರ್ಮ ನಮಗೆ ಗೊತ್ತಿಲ್ಲ. ನೀನು ಪಾಲು ಕೊಡ್ಲೇ ಬೇಕು. ಕೊಡ್ತೀಯೋ ಇಲ್ವೋ ? ಇಲ್ಲ ಅಂದ್ರೆ ಹೇಳ್ಬಿಡು. ಅದು ಹೇಗೆ ತಗೋಬೇಕು ಅಂತ ಗೊತ್ತಿದೆ ನಮ್ಗೆ ಅಂದಿದ್ದ ಮಧ್ಯದ ಮಗ.ಹಬ್ಬ ಕಳೀಲಿ ನೋಡೋಣ ಅಂದಿದ್ದ ಅಪ್ಪ.  


ದೊಡ್ಡಬ್ಬ ಬಂದೇ ಬಿಡ್ತು. ಗೋಪೂಜೆ, ಲಕ್ಷ್ಮಿಪೂಜೆ, ಆಯುಧ ಪೂಜೆ ಅಂತ ಇಬ್ರು ಅಣ್ಣಂದಿರೂ ಮಡಿಯುಟ್ಟುಕುಂಡು ಕೂತೇ ಬಿಟ್ರು. ದನಕರುಗಳಿಗೆ ಬಣ್ಣ ಹಚ್ಚೋದ್ರಿಂದ, ಆಯುಧ ತೊಳೆದು ಜೇಡಿ ಕೆಮ್ಮಣ್ಣು ಹಚ್ಚೋದು, ಹೊರಗೆ ಅಣ್ಣಂದಿರು ಒಡೆಯಲು ಬೇಕಾದ ಕಾಯಿ ಸುಲಿದುಕೊಡೋದು ಹೀಗೆ ಹೊರಗಿನ ಕೆಲಸಗಳೆಲ್ಲಾ ತಮ್ಮನ ಮೇಲೇ ಬಿತ್ತು. ಅದೆಲ್ಲಾ ಮುಗಿಸಿ ಆತನ ಸ್ನಾನ ಆಗೋದ್ರೊಳಗೆ ಪೂಜೆ ಮುಗಿಯುತ್ತಾ ಬಂದಿತ್ತು. ಹಬ್ಬದ ದಿನವೂ ಮಧ್ಯಾಹ್ನ ಸ್ನಾನ ಮಾಡ್ತೀಯಲ್ಲೋ ಕೊಳೆಯ ಅಂತ ಬೈಸ್ಕೊಳ್ಳಬೇಕಾಗೂ ಬಂತು ಪ್ರತೀ ವರ್ಷದಂತೆಯೇ ! ನನಗೆ ಮಂತ್ರ , ತಂತ್ರಗಳೇನೂ ಗೊತ್ತಿಲ್ಲ ದೇವರೇ. ನನ್ನ ಅಣ್ಣಂದಿರು ಚೆನ್ನಾಗೇ ಪೂಜೆ ಸಲ್ಲಿಸಿದ್ದಾರೆ ಅಂದುಕೊಳ್ಳುತ್ತೀನಿ. ಕಾಯಕವೇ ಕೈಲಾಸ ಎಂದು ತೋಟ, ಗದ್ದೆ ಕೆಲಸಗಳಲ್ಲೇ ಮುಳುಗಿ  ನಿನ್ನ ಪೂಜಿಸೋ ವಿಧಿಯನ್ನರಿಯದೇ ನಾನೆಸಗಿದ ತಪ್ಪುಗಳನ್ನೆಲ್ಲಾ ಮನ್ನಿಸಿ ನಮ್ಮ ಪೂಜೆಯನ್ನು ಸ್ವೀಕರಿಸಿ ನಮ್ಮನ್ನು ಎಂದಿನಂತೇ ಕಾಪಾಡೋ ಪ್ರಭುವೆ ಎಂದು ಬೇಡಿಕೊಂಡ. ಹಬ್ಬದ ಊಟವಾಗುತ್ತಿದ್ದಂತೆಯೇ ಒಬ್ಬೊಬ್ಬರೇ ಖಾಲಿಯಾದರು. ರಾತ್ರಿ ತನಕ ಉಳಿದರೆ ತಮ್ಮ ಮಕ್ಕಳು ಪಟಾಕಿ ಪಟಾಕಿ ಅನ್ನುತ್ತಾರೆ. ಅವರಿಗೆ ಅಂತ ಮಾತ್ರವೇ ತರೋಕ್ಕಾಗದೇ ಎಲ್ಲರಿಗೂ ಪಟಾಕಿ ತರಬೇಕಾದ ಖರ್ಚು ಎಂಬ ದೂರಾಲೋಚನೆ !!


ಮುಂದಿನ ಬಾರಿ ದೀಪಾವಳಿ ಬಂದಿತ್ತು. ಇತ್ತೀಚೆಗೆ ಹಲವು ವರ್ಷಗಳಿಂದ ಕೊಳೆ ಬರುತ್ತಿದ್ದ ಮರಗಳಿಗೆ ಈ ವರ್ಷ ಕೊಳೆ ಬಾರದ್ದರ ಜೊತೆಗೆ ಹೊಸದಾಗಿ ಶುರು ಮಾಡಿದ್ದ ಎರೆಗೊಬ್ಬರದಿಂದಲೂ ಅಲ್ಪ ಲಾಭ ಬರೋಕೆ ಶುರುವಾಗಿದ್ದರಿಂದ ಸಹಜವಾಗೇ ಖುಷಿಯಲ್ಲಿದ್ದ ಅಮಿತ. ಹಿಂದಿನ ವರ್ಷದ ಹಬ್ಬವಾದ ಮೇಲೆ ಅಪ್ಪನ ಆರೋಗ್ಯ ಹದಗೆಡುತ್ತಿದ್ದರೂ ತಿಂಗಳಿಗೊಮ್ಮೆಯೂ ಫೋನ್ ಮಾಡದ ಅಣ್ಣಂದಿರೆಗೆಲ್ಲಾ ಮತ್ತೆ ಮತ್ತೆ ಫೋನ್ ಮಾಡಿ ಹಬ್ಬ ಹತ್ತಿರ ಬರೋದನ್ನ ನೆನಪಿಸಿ ಕರೆಯುತ್ತಿದ್ದರೂ ಅವರು ಬರ್ತೀನಿ ಅಂತಲೂ ಅನ್ನದೇ, ಬರೋಲ್ಲ ಅಂತಲೂ ಅನ್ನದೆ, ಮುಂಚಿನಂತೆ ಚೆನ್ನಾಗಿ ಮಾತನ್ನೂ ಆಡದೇ ಫೋನಿಡುತ್ತಿದ್ದರು. ನಾನೇ ಹೋಗಿ ಅವರನ್ನು ಹಬ್ಬಕ್ಕೆ ಕರೆದುಬರುತ್ತೇನೆ. ಅಕ್ಕಂದಿರನ್ನು ದೀಪಾವಳಿಗೆ ಕರೆಯದಿರೋದು ಚೆನ್ನಾಗಿರೋಲ್ಲ ಅಂತ ಅಮಿತ. ಬೇಡ ಕಣೋ ಮಗನೇ,ಸುಮ್ಮನೇ ಅಲ್ಲಿಗೆ ಹೋಗಿ ಯಾಕೆ ಅವಮಾನ ಅನುಭವಿಸ್ತೀಯ ಅಂದ ಅನಂತಪತಿ. ಹೌದು ಕಣ್ರಿ, ನಮ್ಮ ಕಷ್ಟದ ಕಾಲದಲ್ಲಿ ಸಹಾಯ ಮಾಡ್ತಿಲ್ಲ ಅಂತಲ್ಲ. ನಮ್ಮ ಬಡತನದ ಬಗ್ಗೆ, ನಮ್ಮ ಮಕ್ಕಳ ಬಗ್ಗೆ ಕೊಂಕು ಮಾತಾಡ್ತಾರೆ ಅಂತಲೂ ಅಲ್ಲ  ಆದರೆ ನಿಮ್ಮ ಬಗ್ಗೆ, ಮಾವನವರ ಬಗ್ಗೆಯೂ ಅವರು ಚುಚ್ಚೋದು ನಂಗೆ ಇಷ್ಟ ಆಗೋಲ್ಲ ಕಣ್ರಿ.  ಅವರಿಗೆ ಇಷ್ಟ ಇಲ್ಲ ಅಂದ್ರೆ ನೀವ್ಯಾಕೆ ಒತ್ತಾಯ ಮಾಡ್ತೀರಿ . ಬೇಡ ಬಿಡಿ ಅಂದ್ಲು ವಿಶಾಲು. ಅಮಿತ ಅರೆಕ್ಷಣ ಮೌನವಾಗಿದ್ದ. ಆತ ಏನು ಹೇಳಬಹುದೆಂಬ ಕುತೂಹಲ ಎಲ್ಲರಿಗೂ ಇತ್ತು. ನೀ ಹೇಳೋ ಮಾತು ನನಗೂ ಅರ್ಥವಾಗುತ್ತೆ ವಿಶಾಲು. ನೀ ಹೇಳೋದು ಸರಿನೇ ಆದ್ರೂನು ಮೂಲ ಮನೆಯಲ್ಲಿರೋ ತಮ್ಮನಾಗಿ ಬೇರೆ ಕಡೆ ಇರೋ ಅಣ್ಣ-ಅಕ್ಕಂದಿರನ್ನು ಹಬ್ಬಕ್ಕೆ ಕರೀದೆ ಇರೋದು ಸರಿ ಇರಲ್ಲ. ಕರೆದು ಬರ್ತೀನಿ ಅಂತ ಅವರ ಉತ್ತರಕ್ಕೂ ಕಾಯದೇ ಪಟ್ಟಣದ ಬಸ್ಸು ಹತ್ತಿದ ಅಮಿತ.


ಹಬ್ಬಕ್ಕೆ ಕರೆಯೋಕೆ ಬಂದ ಇವನಿಗೆ ಅಲ್ಲಿ ಸಿಕ್ಕ ಸತ್ಕಾರಗಳನ್ನು ಮರೆಯುವಂತೆಯೇ ಇಲ್ಲ!  ನಿಮ್ಮ ತಮ್ಮ ಇವತ್ತೇನಾದ್ರೂ ಇಲ್ಲೇ ಝಾಂಡಾ ಹೂಡಿದ್ರೆ ಏನು ಕತೆ ? ನೋಡಿದ್ರೆ ಹಾಗೇ ಅನ್ಸುತ್ತೆ. ಈಗ್ಲೇ ಹೇಳಿ ಬಿಡ್ತೇನೆ. ನಾನೆಂತೂ ಅಡಿಗೆ ಬೇಯಿಸಿ ಹಾಕೋದಿಲ್ಲ , ಮನೆಗೆ ಬಂದ ಅಬ್ಬೆಪಾರಿಗಳಿಗೆಲ್ಲಾ ಅಡಿಗೆ ಬೇಯಿಸಿ ಹಾಕೋಕೆ ಇದೇನು ಛತ್ರವೇ ಎಂದು ಗಂಡನನ್ನು ಅಡಿಗೆ ಮನೆಗೆ ಕರೆದೊಯ್ದು ಜಗಳಕ್ಕಿಳಿದಿದ್ದ ಮೊದಲ ಅತ್ತಿಗೆಯ ಮಾತನ್ನು ಕೇಳಿದರೂ ಕೇಳಿಸಿಕೊಳ್ಳದಂತೆ ಬೇರೇನೂ ತುರ್ತು ಕೆಲಸವಿದೆಯೆಂದು ಅವರ ಮನೆಯಲ್ಲಿ ನೀರೂ ಕುಡಿಯದಂತೆ ಹೊರಟುಬಿಟ್ಟಿದ್ದ.   ನಂತರ ಹೋಗಿದ್ದು ಹಿರಿಯ ಅಕ್ಕನ ಮನೆಗೆ. ಎದುರಿಗೆ ಬಂದು ಸ್ವಾಗತಿಸಿದ ಭಾವ ನಸುನಕ್ಕು ಸ್ವಾಗತಿಸಿದರೂ ಅವರು ಒಳಗೆ ಅಕ್ಕನನ್ನು ಕರೆಯಲು ಹೋದಾಗ ಒಳಮನೆಯಲ್ಲಿ ಅವಳು ಭಾವನೊಂದಿಗೆ ಆಡುತ್ತಿದ್ದ ಮಾತುಗಳು ಕೇಳಿ ಅಮಿತನಿಗೆ ಬೇಸರವಾಯ್ತು. ಸುಮ್ಮನೇ ಅಲ್ಲಿಯವರೆಗೆ ಯಾಕೆ ಹೋಗಬೇಕುರಿ ? ಸುಮ್ಮನೇ ದುಡ್ಡು ದಂಡ. ಹಿರಿಯ ಮಗಳಿಗೆ ಕಾಲು ಭಾಗ ಆಸ್ತಿಯನ್ನೂ ಬರೆದುಕೊಡದ ಆ ತಂದೆಯ ಮುಖ ನೋಡಲೂ ಇಷ್ಟವಿಲ್ಲ. ಇನ್ನು ಆ ಅಮಿತನ ಸಂಸಾರವೋ.. ಭಿಕ್ಷುಕರ ಬಿಡಾರದಂತಿದೆ. ನನ್ನ ಮಕ್ಕಳ ಒಳ್ಳೆ ಬಟ್ಟೆಗಳನ್ನು, ನನ್ನ ರೇಷ್ಮೆ ಸೀರೆಯನ್ನು  ಆ ವಿಶಾಲೆ ಮತ್ತವಳ ಮಕ್ಕಳು ಜೊಲ್ಲು ಸುರಿಸುತ್ತಾ ನೋಡೋದನ್ನ ನೆನೆಸಿಕೊಂಡ್ರೆ ನಂಗೆ ಅಸಹ್ಯವಾಗುತ್ತೆ. ನಾನಂತೂ ಬರೋಲ್ಲ ಅನ್ನುತ್ತಿದ್ದಳು ಅಕ್ಕ. ಅಬ್ಬಾ, ಇವಳು ನನ್ನ ಸ್ವಂತ ಅಕ್ಕನೇ ಅನಿಸಿಬಿಟ್ಟಿತ್ತು ಅಮಿತನಿಗೆ. ಅಲ್ಲೇ, ನಿನ್ನ ಮದುವೆಯ ಹೊತ್ತಿಗೆ, ತಮ್ಮ ಯಾವುದೋ ಮನೆ ಮಾರಿ ನಾನೊಂದು ಬಿಸಿನೆಸ್ ತೆಗೆಯೋಕೆ ಸಹಾಯ ಮಾಡಿದ್ದ, ನಾನು ಲಾಸಿನಲ್ಲಿದ್ದಾಗ ಎಷ್ಟೋ ಸಲ ಸಹಾಯ ಮಾಡಿದ್ದ ನಿಮ್ಮ ಅಪ್ಪ, ತಮ್ಮನ ಬಗ್ಗೆ ಹೀಗೆಲ್ಲಾ ಮಾತನಾಡ್ತೀಯಲ್ಲ ನೀನು, ಈಗೋನೋ ಮೂರ್ನಾಲ್ಕು ವರ್ಷದಿಂದ ಅಡಿಕೆಗೆ ಕೊಳೆಬಂದು ಅನ್ನುತ್ತಿದ್ದ ಭಾವನ ಮಾತನ್ನ ಅರ್ಧಕ್ಕೇ ತಡೆದ ಅಕ್ಕ, ಹೂಂ ಕಣ್ರೀ, ನಾನಿರೋದೇ ಹೀಗೆ. ನಿಮಗೆ ಸಹಾಯ ಮಾಡೋದು  ಅವರ ಕರ್ತವ್ಯವಾಗಿತ್ತು ಮಾಡಿದಾರೆ. ಅದರಲ್ಲೇನಿದೆ ? ನನಗೆ ಆಸ್ತಿ ಕೊಡೋವರೆಗೋ ನಾನು ಆ ಕಡೆ ತಲೆನೂ ಹಾಕಲ್ಲ, ನೀವೂ ಆ ಕಡೆ ಹೋಗೋ ಹಾಗಿಲ್ಲ ಅಂದಿದ್ದಳು.
ಅಲ್ಲಿಂದಲೂ ಅನಿವಾರ್ಯ ಕಾರಣ ಹೇಳಿ ಎರಡನೇ ಅಣ್ಣನ ಮನೆಗೆ ಹೋಗಿದ್ದ ಅಮಿತನಿಗೆ ಬಾಗಿಲ ಬೀಗ ಸ್ವಾಗತ ಮಾಡಿತ್ತು. ಪಕ್ಕದಲ್ಲೇ ಇದ್ದ ಅಂಗಡಿಯಿಂದ ಫೋನ್ ಮಾಡಿದರೆ ಅಯ್ಯೋ, ನೀನು ಫೋನ್ ಮಾಡಿ ಬರೋದಲ್ಲವೇನೋ, ನನಗೆ ಆಫೀಸಲ್ಲಿ ಅರ್ಜೆಂಟ್ ಕೆಲಸವಿದೆ. ಬರೋದು ರಾತ್ರಿಯಾಗುತ್ತೆ ಅಂದ ಅಣ್ಣ. ಸರಿ, ಅತ್ತಿಗೆ, ಮಕ್ಕಳು ? ಅವರು ಇಲ್ಲೇ ಮಾರ್ಕೇಟಿಗೆ ಹೋಗಿರ್ಬೇಕು. ಸರಿ ಬಿಡು ಅಣ್ಣ. ಅವರು ಬರೋವರಿಗೆ ಇಲ್ಲೇ ಕಾಯ್ತೀನಿ.. ಅಯ್ಯಯ್ಯೋ ಬೇಡಪ್ಪ, ಅವಳು ಅವಳಪ್ಪನ ಮನೆಗೆ ಹೋಗಬೇಕುಂತಿದಾಳೆ ಮಾರ್ಕೆಟ್ಟಿಂದ ಬಂದ ಅವಳಿಗೆ ನಿನ್ನ ಜೊತೆ ಮಾತಾಡ್ತಾ ಕೂತ್ರೆ ಅಪ್ಪನ ಮನೆಗೆ ಹೋಗೋಕೆ ಲೇಟಾಗುತ್ತೇಂತ ಬೈಕೋತಾಳೆ. ಇನ್ನೊಂದ್ಸಲ ಬರೋದಾದ್ರೆ ಫೋನ್ ಮಾಡ್ಕೊಂಡು ಬಾರೋ.. ಹಲೋ ಹಲೋ..ಕೇಳ್ತಾ ಇದಿಯಾ.. ಹಲೋ. ಹಲೋ.. ಎಂದು ಫೋನ್ ಕುಕ್ಕಿದ್ದ. ಅನಪೇಕ್ಷಿತ ಅತಿಥಿಯಾಗಿರಲು ಇಷ್ಟವಿಲ್ಲದೇ ಎರಡನೇ ಅಕ್ಕನಿಗೆ ಅಲ್ಲಿಂದಲೇ ಫೋನ್ ಮಾಡಿದ್ದ. ಪಟ್ಟಣಕ್ಕೆ ಬಂದಿದ್ದೇನೆಂದು ಹೇಳಿದರೂ ಅವಳು ಮನೆಗೆ ಕರೆದಿರಲಿಲ್ಲ. ಬರುತ್ತೇನೆ ಎಂದು ಇವನೂ ಹೇಳಲಿಲ್ಲ. ಎರಡು ದಿನ ಇದ್ದು ಎಲ್ಲರನ್ನೂ ಕರೆದುಬರುತ್ತೇನೆ ಎಂದಿದ್ದವನಿಗೆ ಮಧ್ಯಾಹ್ನದ ಒಳಗೇ ಎಲ್ಲರನ್ನೂ ಕರೆದು ಮುಗಿದಿದ್ದರಿಂದ ತಕ್ಷಣವೇ ಊರು ಬಸ್ಸು ಹತ್ತಿ ರಾತ್ರಿಗೆ ಮನೆಗೆ ಮುಟ್ಟಿದ್ದ.

ಭೂರಿ ಹುಣ್ಣಿಮೆ ಬಂದೇ ಬಿಟ್ಟಿತು. ಹದಿನೈದು ಜನರ ಬದಲು ಐದು ಜನರೇ ಇದ್ದರೂ ಈ ಸಲದ ದೀಪಾವಳಿಯಲ್ಲಿ ಏನೂ ಖುಷಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಹಿಂದಿನ ಹಬ್ಬಗಳಲ್ಲಿರುತ್ತಿದ್ದ, ಗಲಾಟೆ, ನಗುಗಳ ಕಳೆ ಇಲ್ಲದಿದ್ದರೂ ಮನೆ ತುಂಬಾ ಓಡಾಡುತ್ತಿದ್ದ ಗುಣ, ಸುಗುಣರ ಓಟ, ಆಟಗಳೇ ಒಂದು ಚಲುವನ್ನು ಮೂಡಿಸಿದ್ದವು. ಸುಗುಣನಿಗೇ ಒಂದು ಅಡ್ಡಮಡಿಯುಡಿಸಿ ಕೂರಿಸಿದ್ದ ದೀಪಾವಳಿಯ ದಿನವಂತೂ ಆ ಭಗವಂತನೇ ಹುಡುಗನ ರೂಪದಲ್ಲಿ ಮನೆಗೆ ಬಂದಿದ್ದಾನೇನೋ ಅನಿಸುತ್ತಿತ್ತು. ಲಂಗಧಾವಣಿಯುಟ್ಟು , ಆರತಿ ದೀಪಗಳ ಬಟ್ಟಲು ಹಿಡಿದು ಗುಣನ ಜೊತೆಗೇ ತಿರುಗುತ್ತಿದ್ದ ಸುಗುಣಳನ್ನು ನೋಡೋದೇ ಒಂದು ಸೊಬಗಾಗಿತ್ತು. ಪಟಾಕಿಗಳ ಆರ್ಭಟವಿಲ್ಲದಿದ್ದರೂ ಮನೆಯ ಸುತ್ತಲಿಟ್ಟ ದೀಪಗಳ ಚೆಲುವು, ಗಂಟೆ, ಜಾಗಟೆಗಳ ನಾದದಲ್ಲಿ ಈ ಬಾರಿಯ ಹಬ್ಬದ ರಾತ್ರಿ ಎಲ್ಲಿಗೋ ಕರೆದೊಯ್ದಿತ್ತು. ರಾತ್ರೆ ಬಂದ ಹಬ್ಬ ಆಡೋರು(ಅಂಟಿಗೆ-ಪಿಂಟಿಗೆ) ಯವರಲ್ಲೂ ಏನೋ ಚೆಲುವು ಕಾಣುತ್ತಿತ್ತು. ಕೊಳೆಯಿರದ ಮರ, ಕೈ ಹಿಡಿಯುತ್ತಿರುವ ಗೊಬ್ಬರ, ಸರಿಯಾಗುತ್ತಿರುವ ಅಪ್ಪನ ಆರೋಗ್ಯ.. ಹೀಗೆ ಎಲ್ಲವೂ ಅಮಿತನ ಶುದ್ದ ಮನಸ್ಸಿನ ಪ್ರಾರ್ಥನೆಗೆ ಒಲಿದಂತಿತ್ತು.

Wednesday, November 6, 2013

 ಕ್ಯಾಮೆರಾ ಖರೀದಿ ಕತೆ

ಹಬ್ಬಕ್ಕೊಂದು ಹೊಸ ಕ್ಯಾಮೆರಾ ಖರೀದಿಸಬೇಕೆಂಬ ಹಂಬಲ ಸ್ವಲ್ವ ಜಾಸ್ತಿಯೇ ಅನ್ನುವಷ್ಟು ಮೂಡತೊಡಗಿತ್ತು.ಹೊಸ ಕ್ಯಾಮೆರಾ ಅಂದ ತಕ್ಷಣ ಈಗೊಂದು ಕ್ಯಾಮೆರಾ ಇತ್ತೆಂದಲ್ಲ. ಮುಖಹೊತ್ತಿಗೆಯಲ್ಲಿ. ಟ್ರಿಪ್ಪು, ಗ್ರೂಪುಗಳಲ್ಲಿ ಎಲ್ಲರ ಕೈಯಲ್ಲೂ ತರಾವರಿ ಥಳಥಳಿಸೋ ಕ್ಯಾಮೆರಾ ಕಂಡು ಕರುಬುವ ಮನಕ್ಕೆ ಸ್ವಂತದ್ದೊಂದು ಡಿಜಿಟಲ್ ಕ್ಯಾಮೆರಾ ಕೊಳ್ಳಬೇಕೆಂಬ ಆಸೆ ನಿಧಾನಕ್ಕೆ ಮೂಡಿತ್ತು. ಪದವಿಯ ಕೊನೆಯ ವರ್ಷದಿಂದಲೂ ಪದವಿಯಾಗಿ ಎರಡು ವರ್ಷವಾಗೋವರೆಗೂ ಇದ್ದ ನೋಕಿಯಾ ೨೭೦೦ ಕ್ಲಾಸಿಕ್ ಮೊಬೈಲಿನ ೨ ಮೆಗಾಪಿಕ್ಸಲ್ ಕ್ಯಾಮೆರಾದಲ್ಲೇ ಸಂತೃಪ್ತವಾಗಿದ್ದ  ಮನಸ್ಸು ಇದ್ದಕ್ಕಿದ್ದಂತೆ ಡಿಜಿಟಲ್ ಕ್ಯಾಮೆರಾದತ್ತ ಹೊರಳಿದ್ದೇಕೆ ? ಅದರ ಹಿಂದೊಂದು ಫ್ಲಾಷ್ ಬ್ಯಾಕ್..

ಮಾಧ್ಯಮಿಕ ಶಾಲಾ ಹಂತದ ಕೊನೆಯ ದಿನಗಳು. ಅಲ್ಲಿಯವರೆಗೆ ಕ್ಯಾಮೆರಾ ಅಂದರೆ ದೂರದಿಂದ ನೋಡಿ ಮಾತ್ರ ಗೊತ್ತಿದ್ದ ನನಗೆ ಅದನ್ನ ಮುಟ್ಟೋ ಭಾಗ್ಯ ಸಿಕ್ಕ ದಿನಗಳವು. ಅಬ್ಬಾ, ಕ್ಯಾಮೆರಾ ಅಂದ್ರೆ ಸ್ಟುಡಿಯೋದಲ್ಲಿ ಇಸ್ಮಾಯಿಲ್ ಅಂತ ಹಲ್ಲು ಕಿರಿಯೋದು, ಶಾಲೆಯೆದುರು ವರ್ಷದ ಕೊನೆ ಗೆ ಬರ್ತಾ ಇದ್ದ ಗ್ರೂಫ್ ಫೋಟೋಕ್ಕೆ ಪೋಸು, ಯೂನಿಯನ್ ಡೇಗಳಲ್ಲಿ ನಮ್ಮ ಡ್ಯಾನ್ಸಿನ ಮಧ್ಯೆ ಎಲ್ಲಿಂದಲೋ ಬರಬಹುದಾದ ಕ್ಯಾಮೆರಾ ಫ್ಲಾಷಿಗೆ ಅಂತಲೇ ಓರೆಗಣ್ಣಿಂದ ಹುಡುಕುತ್ತಾ ಡ್ಯಾನ್ಸ್ ಮಾಡುತ್ತಿದ್ದ ಮುಗ್ದ ಮನಗಳು, ಮದುವೆ ಮನೆಯಲ್ಲಿ ಬರುತ್ತಿದ್ದ ದೊಡ್ಡ, ಭಾರದ ಕ್ಯಾಮೆರಾದ ಫೋಟೋ ಅಂಕಲ್ಲು, ಫೋಟೋದಲ್ಲಿ ನಾವೂ ಬರಬೇಕೆಂದು ಫೋಟೋಗ್ರಾಫರ್ ಹೋದಲ್ಲೆಲ್ಲಾ ಹೋಗಿ ಮುಖ ತೂರಿಸುತ್ತಿದ್ದ ಆ ದಿನಗಳ ನೆನಪು.. ಹೆ.ಹೆ ನೆನೆಸ್ಕೊಂಡ್ರೆ ಎಷ್ಟು ಮಜಾ ಅನ್ಸುತ್ತೆ. ಜೋಗ ಜಲಪಾತದೆದುರು, ಮೈಸೂರು ಅರಮನೆಯೆದುರು ಹೀಗೆ ಪ್ರಸಿದ್ದ ಸ್ಥಳಗಳಲ್ಲಿ ಕ್ಷಣದಲ್ಲೇ ಪ್ರಿಂಟ್ ಹಾಕಿ ಕೊಡೋ ಕ್ಯಾಮೆರಾಗಳೂ ಬಂದಿದ್ದರೂ ಅವಷ್ಟು ಕಾಡಿರಲಿಲ್ಲ. ಆದರೆ ಯಾವಾಗ ನೆಂಟರ ಕೈಯಲ್ಲಿ ಕ್ಯಾಮೆರಾಗಳು ಓಡಾಡತೊಡಗಿದವೋ ನೋಡಿ. ಅವನ್ನು ನೋಡಿ ನೋಡೇ ಕ್ಯಾಮೆರಾ ಜ್ವರ ಗೊತ್ತಿಲ್ಲದಂತೆ ಹತ್ತಿ ಬಿಟ್ಟಿತು. ನಮ್ಮನೆಗ ಬಂದ ನೆಂಟರಿಗೆ ನಮ್ಮೂರ ಸುತ್ತಲ ಕೆಳದಿ, ಇಕ್ಕೇರಿ, ವರದಳ್ಳಿ, ಜೋಗ ಮೊದಲಾದ ಸ್ಥಳ ತೋರಿಸೋಕೆ ನಾನೇ ಮರಿಗೈಡು. ಪೇಟೆಯಿಂದ ಬಂದ ಅವರ ಕೈಯಲ್ಲೆಲ್ಲಾ ತರಾವರಿ ಕ್ಯಾಮೆರಾಗಳು. ಆಗಿನ್ನೂ ಡಿಜಿಟಲ್ ಕ್ಯಾಮೆರಾಗಳ ಹವಾ ಈಗಿನಷ್ಟು ಏರಿರಲಿಲ್ಲ. ಎಲ್ಲೆಡೆ ಕೊಡ್ಯಾಕ್ ಹಾವಳಿ. ಐನೂರಕ್ಕೆ ಒಂದು ಕ್ಯಾಮೆರಾ, ೬೯೯ ಕ್ಕೆ ಒಂದು ಕ್ಯಾಮೆರಾ ಎರಡು ರೀಲು ಹೀಗೆ ಹಲವು ಆಫರುಗಳು ಬಂದಿದ್ದವು. ಒಂದು ರೀಲಿಗೆ ೫೦ ರೂ, ಅದರಲ್ಲಿನ ಫೋಟೋ ತೊಳೆಯೋಕೆ ನೂರರ ಹತ್ತಿರ ಇತ್ತೆಂದು ನೆನಪು. ಅವರಿಗೆಲ್ಲಾ ತೋರಿಸ್ತಾ ತೊರಿಸ್ತಾ ಒಮ್ಮೆ ನನ್ನ ಕುತೂಹಲ ಅತಿಯಾಗಿ ಇದರಲ್ಲಿ ಫೋಟೋ ತೆಗೆಯೋದು ಹೇಗೆ, ನಾನೊಂದ್ಸಲ ನೋಡ್ಲಾ  ಅಂತ ನಮ್ಮ ಮಾಮನ್ನ ಕೇಳಿಬಿಟ್ಟಿದ್ದೆ. ಅವರು ನಗುತ್ತಾ ಆ ಕ್ಯಾಮೆರಾ ನನ್ನ ಕೈಗೆ ಕೊಟ್ಟಿದ್ರು.  ಅದು ಬೀಳದಂತೆ ಇರೋ ರಕ್ಷಣಾ ದಾರ(protective strip)ದೊಳಗೆ ನನ್ನ ಪುಟ್ಟ ಕೈ ತೂರಿಸಿ ಅದ್ರಲ್ಲಿದ್ದ ಖಾಲಿ ಜಾಗ ,ಅದೇ  ವೀವ್ ಪಾಯಿಂಟಿನಲ್ಲಿ ಸುತ್ತಲಿನ ಪ್ರಕೃತಿಯನ್ನೇ ನೋಡ್ತಾ ಕೂತಿದ್ದೆ. ದಿನಾ ನೋಡೋದಕ್ಕೂ ಆ ಕ್ಯಾಮೆರಾದ ಪ್ಲಸ್ಸು, ಚೌಕಗಳ ಬೌಂಡರಿಯಲ್ಲಿ ನೋಡೋದಕ್ಕೂ ಎಷ್ಟು ವ್ಯತ್ಯಾಸ. ಹಾಗೇ ಸುತ್ತ ತಿರುಗಿಸಿ ನೋಡ್ತಾ ನಿಂತು ಬಿಟ್ಟಿದ್ದೆ. ಹೇ, ಇದಿದ್ಯಲ್ಲ. ಇದು ಫ್ಲಾಷು ಅಂತ, ಎಲ್ಲಿ ಅದರ ಎದುರಿಂದ ಕೈ ತೆಗಿ, ನೀ ತೆಗಿಬೇಕಿದ್ದ ಜಾಗ ಇಲ್ಲಿ ಕಾಣ್ತಿದೆಯಲ್ಲಾ, ಆ ಚೌಕಟ್ಟಿನೊಳಗೆ ಬರ್ಬೇಕು ನೋಡು ಅನ್ನೋ ತರ ತೋರ್ಸಿದ್ರು ಮಾವ. ಪ್ಲಸ್ಸು, ಅದರ ಹೊರಗಿದ್ದ ಚೌಕದ ಒಳಗೆ ನನಗೆ ತೆಗಿಯಬೇಕಿದ್ದ ಚಿತ್ರವನ್ನು ಕೂರಿಸೋದ್ರೊಳಗೆ ಸುಮಾರು ತ್ರಾಸಾಗಿತ್ತು. ಮೊದಲ ಚಿತ್ರವಲ್ಲವೇ. ಹೇಗೋ ಧೈರ್ಯ ಮಾಡಿ ತೆಗೆದ ಆ ಚಿತ್ರ ತೊಳೆಸೋವರೆಗೂ ಏನೋ ಕುತೂಹಲ.. ಪರೀಕ್ಷೆ ಮುಗಿದು ರಿಸಲ್ಟಿಗೆ ಕಾಯೋ ತರ, ಇದ್ದ ಬದ್ದ ಫ್ರೀ ಮೆಸೇಜುಗಳೆಲ್ಲಾ ಖಾಲಿಯಾಗಿ ಮಾರನೇ ದಿನದ ಫ್ರೀ ಮೆಸೇಜು ಎಷ್ಟೊತ್ತಿಗೆ ಸಿಗುತ್ತೋ ಅಂತ ಹನ್ನೆರಡು ಗಂಟೆಯಾಗೋದ್ನೇ ಕಾಯೋ ತರ.. ಭಯಂಕರ ನಿರೀಕ್ಷೆ. ಅದ್ರೆ ಒಂದು ರೀಲಿನಲ್ಲಿ ೩೬ ಫೋಟೋ ತೆಗಿಬಹುದಿತ್ತು. ಆ ಎಲ್ಲಾ ೩೬ ಫೊಟೋ ಖಾಲಿಯಾಗಿ ರೀಲು ತೊಳೆಸೋವರೆಗೂ ಫೋಟೋ ಹೆಂಗೆ ಬಂದಿದೆಯಂದು ಗೊತ್ತಾಗೋ ಹಾಗಿಲ್ಲ. ಯಪ್ಪಾ, ಕೊನೆಗೂ ಆ ಫೋಟೋ ತೊಳೆಸಿದಾಗ ಖುಷಿಯೋ ಖುಷಿ.. ಎಷ್ಟಂದ್ರೂ ಮೊದಲ ಫೋಟೋವಲ್ಲವೇ ..

ಹೈಸ್ಕೂಲಿಗೆ ಕಾಲಿಟ್ಟ ಮೇಲೆ ನೆಂಟರ ಜೊತೆ ಅಲ್ಲಿಲ್ಲಿ ಹೋದಾಗ ನಾನು ಒಳ್ಳೇ ಫೋಟೋಗ್ರಾಫರ್ ಅಂತ ಪೋಸು ಕೊಡದಿದ್ದರೂ ನಾನು ತೆಗೀತೇನೆ ನೀವು ನಿತ್ಕೋಳಿ ಅಂತ ಅವರನ್ನೆಲ್ಲಾ ನಿಲ್ಲಿಸೋದು, ಯಾವ ಕಡೆ ನಿಲ್ಲಿಸಿದ್ರೆ ಸೂರ್ಯನ ಬೆಳಕು ಚೆನ್ನಾಗಿ ಬೀಳದೇ ಫೋಟೋ ಕಪ್ಪುಕಪ್ಪಾಗತ್ತೆ, ಎಷ್ಟು ದೂರದಿಂದ ತೆಗೆದ್ರೆ ಚೆನ್ನಾಗಿ ಬರುತ್ತೆ ಅಂತ ಹತ್ತಿರ, ದೂರ ಹೋಗೋದು ಇಂತ ಹಲವಾರು ಸರ್ಕಸ್ ಮಾಡ್ತಾ ಇದ್ದೆ. ಆಗ ಕೆಲ ಕಮ್ಮಿ ರೇಟಿನ ಕ್ಯಾಮೆರಾಗಳಲ್ಲಿ ಮಧ್ಯದಲ್ಲಿ ಪ್ಲಸ್ಸು, ಕೊನೆಗೆ ಬೌಂಡರಿ ಇಲ್ಲದೆ ಫೋಟೋ ತೆಗೆಯೋದೇ ಒಂದು ದೊಡ್ಡ ಸಾಹಸವಾಗಿತ್ತು. ತೆಗೆದ ಎಷ್ಟೋ ಫೋಟೋಗಳಲ್ಲಿ ತಲೆಯೇ ಹಾರಿಹೋಗೋದು. ಬರುತ್ತೆ ಅಂದುಕೊಂಡಿದ್ದ ಜಾಗದ ಹೊರಗಡೆಯೆಲ್ಲಾ ಬಂದು, ಬರಬೇಕಿದ್ದ ದೃಶ್ಯಗಳೇ ಮಿಸ್ ಆಗೋದು ಇಂತ ಕಾಮಿಡಿಗಳೆಲ್ಲಾ ಆಗ್ತಿದ್ವು. ಉದಾಹರಣೆಗೆ ಬೇಲೂರು ಹಳೇಬೀಡಿಗೆ ಹೋಗಿ ಅಲ್ಲಿನ ದೇವಸ್ಥಾನದೆದುರು ತೆಗೆದ ದೃಶ್ಯದಲ್ಲಿ ಅಮ್ಮನ ಮುಖ, ಹಿಂಬದಿಯಲ್ಲಿದ್ದ ದೇವಸ್ಥಾನ ಬರುವ ಬದಲು ಎದುರಿಗಿದ್ದ ಕಟ್ಟಿಗೆ ರಾಶಿ, ಅದರ ಎದುರಿಗಿದ್ದ ಅಮ್ಮನ ಕಾಲುಗಳು ಬಂದಿದ್ದು, ಜೋಗ ಜಲಪಾತ ಬರುವ ಬದಲು ಅದರ ಎದುರಿಗೆ ನಿಂತಿದ್ದ ಗೆಳೆಯನ ತಲೆ ಬಿಟ್ಟು ಅದರ ಕೆಳಗಿನ ದೇಹ, ಕೆಳಗಿದ್ದ ಬಂಡೆ.. ಹೀಗೆ ಹಲತರದ ಅವಾಂತರಗಳಾಗಿದ್ದವೆನ್ನೋದು ತೊಳೆಸಿದ ಮೇಲೇ ಗೊತ್ತಾಗಿದ್ದು. ಇದನ್ನೆಲ್ಲಾ ತಪ್ಪಿಸೋಕೆ ಅಂತಲೇ ತೆಗಿಯಬೇಕಿದ್ದ ದೃಶ್ಯನ ಆದಷ್ಟೂ ಕ್ಯಾಮೆರಾ ಮಧ್ಯದಲ್ಲಿ ಕೂರಿಸೋಕೆ ಪ್ರಯತ್ನ ಪಡಬೇಕಿತ್ತು. ಅಂತೂ ಇಂತೂ ಹೀಗೆ ಪರರ ಕ್ಯಾಮೆರಾದಲ್ಲೇ ತೆಗೀತಾ ತೆಗೀತಾ ಶುರುವಾದ ಹವ್ಯಾಸ ಯಾರ ತಲೆಗಳೂ ಹಾರಿಸದಷ್ಟು ಚೆನ್ನಾಗಿ ತೆಗೆಯೋ ನೈಪುಣ್ಯತೆ ಕೊಡಿಸಿ  ಹಾಗೇ ಬೆಳಿತಾ ಬಂತು.

ಹೈಸ್ಕೂಲ ಕೊನೆ ವರ್ಷದಲ್ಲಿ ಮೈಸೂರ ಟ್ರಿಪ್ಪಿಗೆ ಹೋಗಿದ್ವಿ. ಅಲ್ಲಿ ಅನೇಕ ಗೆಳೆಯರು ಕ್ಯಾಮೆರಾ ತಂದಿದ್ರು. ಅದರಲ್ಲೆಲ್ಲಾ ನಂದೊಂದು ನಂದೊಂದೆಂದು ಫೋಟೋ ತೆಗೆದಿದ್ದೇ ತೆಗೆದಿದ್ದು. ನಾಣು ಫೋಟೋದಲ್ಲಿ ಬರಬೇಕೆಂಬ ಕ್ರೇಜ್ ಬೇರೆ, ಫೋಟೊ ತೆಗೆಯಬೇಕೆಂಬ ಕ್ರೇಜ್ ಬೇರೆ. ಮೊದಲ ಕ್ರೇಜ್ ಅಷ್ಟಿರದಿದ್ರೂ ಎರಡನೆಯದು ಸ್ವಲ್ಪ ಮಟ್ಟಿಗೆ ಹುಟ್ಟಿ ಬಿಟ್ಟಿತ್ತಲ್ಲ. ಹಾಗಾಗಿ ಹಲವರ ಕ್ಯಾಮೆರಾಕ್ಕೆ ನಾಣು ಕಣ್ಣಾಗಿದ್ದೆ ಆ ಟ್ರಿಪ್ಪಲ್ಲಿ.  ಆಮೇಲೆ ಪೀಯು ಹೊತ್ತಿಗೆ ಮಾವ ಅದೆಂತದೋ ಡಿಜಿಟಲ್ ಅನ್ನೋ ಕ್ಯಾಮೆರಾ ಖರೀದಿಸಿದ್ದಕ್ಕೆ ಊರಿಗೆ ಬಂದಾಗ ಅವನ ಹಳೆ ಕೊಡ್ಯಾಕ್ ಕ್ಯಾಮೆರಾ ನಂಗೆ ಕೊಟ್ಟು ಹೋಗಿದ್ದ. ತಗಳ್ಳಪ್ಪ. ಮೊದಲ ರೀಲು ಖಾಲಿಯಾಗೋವರೆಗೋ ಆ ಕ್ಯಾಮೆರಾ ಹಿಡಿದು ಸುತ್ತಿದ್ದೇ ಸುತ್ತಿದ್ದು. ವರದಳ್ಳಿ, ಅಲ್ಲಿ ಇಲ್ಲಿ ಅಂತ ಸುಮಾರು ಕಡೆ ತೆಗೆಯೋ ಮನಸ್ಸಾದ್ರೂ ಕೆಲವೇ ಕೆಲವು ಅತ್ಯುತ್ತಮ ಅನಿಸೋ ದೃಶ್ಯಗಳನ್ನು ಮಾತ್ರ ತೆಗಿದಿದ್ದು. ರೀಲಿಗೆ ಮೂವತ್ತಾರೇ ಫೋಟೋವಲ್ಲವೇ.. ಮತ್ತೆ ಅದಕ್ಕೆ ಬ್ಯಾಟರಿ, ರೀಲು ತೊಳೆಸೋ ಖರ್ಚು.. ಹೀಗೆ ಇದೊಂದು ದುಬಾರಿ ಹವ್ಯಾಸ ಅನಿಸಿ ಅದರ ಹೊಟ್ಟೆ ತುಂಬಿಸುವಷ್ಟು ಅನುಕೂಲ ಮನೆಯಲ್ಲಿರದ ಕಾರಣ ಕ್ಯಾಮೆರಾ ಮೂಲೆಗೆ ಬಿದ್ದಿತ್ತು.

ಹಾಗೇ ಡಿಗ್ರಿಗೆ ಕಾಲಿಟ್ಟಿದ್ದೆ. ಮೊಬೈಲು ತಗೊಳೋ ಅಂತ ಮನೇಲಿ.ನನಗೆ ಅಷ್ಟೇನೂ ಮನಸ್ಸಿಲ್ಲ. ಇರೋದು ಅಜ್ಜಿ ಮನೇಲಿ, ಯಾವದಾದ್ರೇನೂ, ಅಷ್ಟಕ್ಕೂ ಅಲ್ಲೊಂದು ಫೋನಿದೆಯಲ್ಲ ಅನ್ನೋ ಭಾವ. ಕೊನೆಗೆ ನಮ್ಮಜ್ಜಿ ನಂಗೊಂದು ಫೋನು ಬೇಕು, ನೀನೇ ತಗೊಂಡು ಬರ್ಬೇಕು ಅಂತ ನಮ್ಮಮ್ಮನ ಹತ್ತಿರ ಹೇಳಿದ್ರಂತೆ. ಸರಿ ಆರಿಸೋಕೆ ಹೋಗಿದ್ದು ನಾನೇ ಅಮ್ಮನ ಜೊತೆ. ಅಜ್ಜಿಗೆ ತಾನೇ, ಸಾಧಾರಣದ್ದು ಸಾಕು ಅಂತ ನೋಕಿಯಾ ೧೬೦೦ ಆರಿಸಿದ್ದಾಯ್ತು.  ಶಿವಮೊಗ್ಗಕ್ಕೆ ತಗೊಂಡು ಹೋಗಿ ಅಜ್ಜಿಗೆ ಕೊಟ್ರೆ ಒಳ್ಳೇದು ತಗೊಳ್ಳೋದಲ್ವೇನೋ ಮೊಮ್ಮಗನೇ, ಅದೇನೋ ಕ್ಯಾಮೆರಾ ಎಲ್ಲಾ ಬರುತ್ತಲ್ಲ ಅಂತದ್ದು. ಇದೇನು ಇದು ಅಂದ್ರು. ನಂಗೆ ಅರ್ಥ ಆಗ್ಲಿಲ್ಲ. ನಿಂಗೇ ಅಂತನೇ ತರೋಕೆ ಹೇಳಿದ್ದು ಕಣೋ. ನೀನಂತು  ತಗೋಳಲ್ಲ ಅಂತ ನಾನೇ ತೆಗೆದುಕೊಟ್ತಿರೋದು ಅಂದಾಗ ನನ್ನ ಕಣ್ಣಂಚಲ್ಲಿ ನೀರು. ಆ ಮೊಬೈಲು ಇನ್ನೂ ನನ್ನ ಫೇವರೆಟ್ಟಾಗೇ ಇದೆ ಅನ್ನೋದು ಬೇರೆ ಮಾತು ಬಿಡಿ. ಪದವಿಯ ನಾಲ್ಕು ವರ್ಷದ ಟ್ರ‍ಿಪ್ಪುಗಳಲ್ಲೇ ತರಾವರಿ ಡಿಜಿಟಲ್ ಕ್ಯಾಮೆರಾಗಳ ಪರಿಚಯವಾಗಿದ್ದು. ಫೋಟೋ ತೆಗೆಯೋದು ಎಷ್ಟು ಸುಲಭವಲ್ವಾ ಅನಿಸಿಬಿಟ್ಟಿತ್ತು ಡಿಜಿಟಲ್ ಕ್ಯಾಮೆರಾಗಳ್ನ ನೋಡಿ. ಆದ್ರೆ ಅವುಗಳ ದುಬಾರಿ ಬೆಲೆ ಕೇಳಿ ಒಮ್ಮೆಯೂ ತಗೋಬೇಕು ಅನ್ನೋ ಆಸೆಯಂತೂ ಮೂಡಿರ್ಲಿಲ್ಲ.

ಪದವಿಯ ಕೊನೆ ವರ್ಷ. ಪ್ರಾಜೆಕ್ಟಿಗೆ ಇಂಟರ್ನೆಟ್ಟು ಬೇಕು ಅಂದ್ರು ಗೆಳೆಯರು. ಆದ್ರೆ ಬ್ರಾಡ್ ಬ್ಯಾಂಡ್ ಹಾಕಿಸೋದು ದುಬಾರಿ. ಇನ್ನೇನ್ ಮಾಡೋದು ? ಮೊಬೈಲಲ್ಲಿ ಕನೆಕ್ಟ್ ಮಾಡಿದ್ರೆ ? !! ಸೂಪರ್ ಐಡಿಯಾ. ಆದರೆ ಅದಕ್ಕೆ ಮೊಬೈಲ್ ಬೇಕಲ್ಲಾ .. ಇದ್ದಿದ್ರಲ್ಲಿ ಚೀಪ್ ರೇಟಿಂದು ಯಾವುದಪ್ಪಾ ? ಆಗಲೇ ಕಾರ್ಬನ್ನು, ಮೈಕ್ರೋಮ್ಯಾಕ್ಸ್ ಬಂದಿದ್ರೂ ಅದಕ್ಕೆ ಹೋಗೋ ಮನಸ್ಸಾಗ್ಲಿಲ್ಲ .ಹಿಡಿಸಿದ್ದು ನೋಕಿಯ ೨೭೦೦ ಕ್ಲಾಸಿಕ್ಕು.  ಅದರಲ್ಲಿ ಇಂಟರ್ನೆಟ್ಟು ಬಳಸಿದ್ದಕ್ಕಿಂತ ಅದರಿಂದ ನನ್ನ ಫೋಟೋಗ್ರಫಿ ಹವ್ಯಾಸಕ್ಕೆ ನೀರೆರೆದಿದ್ದೇ ಹೆಚ್ಚು ಎಂದೆನ್ನಬಹುದೇನೋ. ಎಲ್ಲೋ ಬತ್ತಿ ಹೋಗಿದ್ದ ಆಸೆ ಆ ಕ್ಯಾಮೆರಾದಿಂದ ಮತ್ತೆ ಚಿಗುರಿ ಇಲ್ಲಿಯವರೆಗೆ ಏಳೆಂಟು ನೂರು ಫೋಟೋ ತೆಗೆಸಿರಬಹುದು ಅದರಿಂದ..

ಅದರಲ್ಲೇ ತೆಗಿತಾ ತೆಗಿತಾ ಸಂತೃಪ್ತನಾಗಿದ್ದ ಮನಕ್ಕೆ ಬೆಂದಕಾಳೂರಿಗೆ ಬಂದು ಒಂದು ವರ್ಷವಾಗೋವಷ್ಟರಲ್ಲಿ ಇಲ್ಲಿನ ತಳುಕು ಬಳುಕಿನ, ಬಣ್ಣದ ಜಗಕ್ಕೆ ಹೊಂದಿಕೊಳ್ಳೋದು, ಸಂತೃಪ್ತವಾಗಿರೋದು ಸಾಧ್ಯವೇ ಆಗ್ತಿರಲಿಲ್ಲ. ಅದೆಷ್ಟು ಅದುಮಿಟ್ರೂ ಕ್ಯಾಮೆರಾ ತಗೋಬೇಕೆಂಬ ಆಸೆ ಭುಗಿಲೇಳ್ತನೇ ಇತ್ತು. ಕ್ಯಾಮೆರಾ ಬದ್ಲು ಆಂಡ್ರಾಯ್ಡ್ ಮೊಬೈಲ್ ತಗೊಂಡ್ರೆ ಹೇಗೆ ಅನ್ನೋ ಪ್ರಶ್ನೆ ಮೂಡಿದ್ರೂ ಅದ್ಯಾಕೋ ಇಷ್ಟವಾಗ್ತಿರಲಿಲ್ಲ. ಸಂನ್ಯಾಸಿ ಇಲಿಯ ಕಾಯೋ ಆಸೆಗೆ ಬೆಕ್ಕನ್ನು ಸಾಕಿ, ಅದರ ಹಾಲಿಗೆಂತ ದನ ಸಾಕಿ.. ಕೊನೆಗೆ ಸಂಸಾರಿಯಾದ ಕತೆ ನೆನಪಾಗ್ತಿತ್ತು. ಕ್ಯಾಮೆರಾ ತಗೋಬೇಕು ಸರಿ, ಆದ್ರೆ ಯಾವುದು ? ಡಿಎಸ್ ಎಲ್ ಆರ್, ಎಸ್ ಎಲ್ ಆರ್ ಎಲ್ಲಾ ಕಾಸ್ಟ್ಲಿ, ಒಂದು ಐದು ಸಾವಿರದ ಒಳಗಿನದ್ದಾದ್ರೆ ತಗೋಬಹುದು ಅನ್ನಿಸ್ತು. ಸರಿ, ಅಂತ ಒಂದು ಶುಭದಿನ ನೆಟ್ಟಲ್ಲಿ ಹುಡುಕೋಕೆ ಶುರು ಮಾಡಿದೆ. ಆದರೆ ಕ್ಯಾಮೆರಾಗಳನ್ನು ಹೋಲಿಸೋಕೆ ಬಳಸ್ತಿದ್ದ ಪದಗಳ್ಯಾವುವು ಅರ್ಥ ಆಗ್ತಿರಲಿಲ್ಲ. ಅದರಲ್ಲಿದ್ದ ಫೋಕಲ್ ಲೆಂತ್, ಎಕ್ಸ್ ಪೋಷರ್, ಪನೋರಮ, ವೀಡಿಯೋ ಮೋಡ್, ಶಟ್ಟರ್ ಸ್ಪೀಡ್.. ಹೀಗೆ ಹಲವು ಪದಗಳ ಅರ್ಥವನ್ನ ಗೆಳೆಯರ ಹತ್ತಿರ ಕೇಳೋದು, ಗೂಗಲ್ ಮಾಡೋದು.. ಹೀಗೆ ನಿಧಾನಕ್ಕೆ ತಿಳೀತಾ ನನಗೆ ಹೊಂದೋ ಕ್ಯಾಮೆರಾ ಯಾವುದೆಂದು ಹುಡುಕೋಕೆ ಶುರು ಮಾಡಿದೆ.

ಸರಿ,ಒಂದು ಶನಿವಾರ ಹತ್ತಿರದಲ್ಲಿದ್ದ ಕಾಸ್ಮೋಸ್ ಮಾಲಿಗೆ ಹೋದ್ವಿ. ಅಲ್ಲೊಂದು ಕ್ಯಾಮೆರಾ ಜೋನ್ ಇದ್ದ ನೆನಪು. ಆದರೆ ನಮ್ಮ ಗ್ರಹಚಾರವೇ. ಮಾಲು ಲಾಸಲ್ಲಿರೋ ಲಕ್ಷಣವೆಂಬಂತೆ ಆ ಜೋನನ್ನೇ ಮುಚ್ಚಿ ಬಿಟ್ಟಿದ್ರು. ಹ್ಯಾಪು ಮೋರೆಯಿಂದ ವಾಪಾಸ್ಸಾದ್ವಿ. ಹೀಗೆ ಹುಡುಕುತ್ತಾ ಹುಡುಕುತ್ತಾ ನಿಕಾನ್ lx 28 ,ಕೆನಾನ್ a2400, ಕೆನಾನ್ a3200 ಸಖತ್ ಇಷ್ಟ ಆದ್ವು. ಅವುಗಳಲ್ಲಿದ್ದ ಫೀಚರ್ಗಳು ನನ್ನ ಐದು ಸಾವಿರದ ಬೌಂಡರಿಯೊಳಗೆ ಬರುತ್ತಿದ್ವು ಅಂತ ಬೇರೆ ಹೇಳೋದು ಬೇಕಿಲ್ಲ ತಾನೆ.. ೧೬ ಮೆಗಾ ಪಿಕ್ಸೆಲ್ , 5x zoom ಅಂದ್ರೆ ಒಳ್ಳೆ ಆಯ್ಕೆಯೇ ಅಂದ್ದು ಗೆಳೆಯರು.. ಇನ್ನೂ ಹೆಚ್ಚು ಬೇಕೆಂದ್ರೆ ಹೆಚ್ಚು ಕೊಡಬೇಕೆನ್ನೋದ್ರ ಜೊತೆಗೆ ಮೊದಲ ಕ್ಯಾಮೆರಾಕ್ಕೆ ಹೆಚ್ಚು ದುಡ್ಡು ಸುರಿಯೋಕೆ ಮನಸ್ಸು ಬರಲಿಲ್ಲ. ಫ್ಲಿಪ್ ಕಾರ್ಟಲ್ಲಿ ಆರ್ಡರ್ ಮಾಡೇ ಬಿಡ್ಬೇಕು ಅಂತ ಎರಡು ದಿನ ಪ್ರಯತ್ನ ಪಟ್ರೂ ನೆಟ್ಟು ಕೈಕೊಟ್ಟಿತ್ತು. ಮೂರನೇ ದಿನದ ಹೊತ್ತಿಗೆ ಎಲ್ಲಾ ಸ್ಟಾಕ್ ಖಾಲಿ. ಎಂದಿನಂತೆ ಮಲಗೋ ಹಂತದಲ್ಲಿದ್ದ ಕ್ಯಾಮೆರಾ ಖರೀದಿ ಆಸೆ ಮತ್ತೆ ಚಿಗುರಿದ್ದು ನಮ್ಮ ಊರಿಗೆ ಬಂದಾಗ. ಊರಲ್ಲಿ ಬಿಟ್ಟಿದ್ದ ಬಣ್ಣ ಬಣ್ಣದ ಹೂವುಗಳು.. ಚೆಂಡು, ಸೇವಂತಿಗೆ, ತುಂಬೆ.. ಇವೆಲ್ಲಾ ನನ್ನ ೨ಮೆಗಾ ಪಿಕ್ಸೆಲ್ ಕ್ಯಾಮೆರಾದಲ್ಲಿ ಅಂದುಕೊಂಡಷ್ಟು ಚೆನ್ನಾಗಿ ಬರದೇ ಮುಂದಿನ ಸಲ ಊರಿಗೆ ಬರುವಾಗ ಒಂದು ಡಿಜಿಟಲ್ ಕ್ಯಾಮೆರಾ ತಗೊಳ್ಳಲೇ ಬೇಕೆಂಬ ಬಲವಾದ ಆಸೆ ಹುಟ್ಟಿಸಿದವು.

ನೋಡ್ತಾ ನೊಡ್ತಾ ಒಂದು ತಿಂಗಳಾಗಿ ಹೋಯ್ತು. ದೀಪಾವಳಿ ಬಂದೆ ಬಿಟ್ತು. ಹೇ ಈ ದೀಪಾವಳಿಗಾದ್ರೂ ಕ್ಯಾಮೆರಾ ತಗೊಳ್ಲೇ ಬೇಕು ಅಂದ್ಕೊಂಡೆ. ಸರಿ ಒಂದು ದಿನ ಅಲ್ಲೇ ಹತ್ತಿರದಲ್ಲಿದ್ದ ಹೈಪರ್ ಸಿಟಿ ಮಾಲಿಗೆ ಹೋದಿ ನೋಡಿದೆ. ಅಲ್ಲಿ ೨೦ ಮೆಗಾ ಪಿಕ್ಸಲ್ಲಿನ ನಿಕಾನ್ lx 28 ಕ್ಕಿಂತ ಸಖತ್ತಾದ ಕ್ಲೋಸ್ ಅಪ್ ಬರೋ ಕೆನಾನ್ ೩೨೦೦ ಮೇಲೇ ಮನಸ್ಸು ಹತ್ತಿತು. ಆದ್ರೆ ಕೆನಾನಿಂದು ೧೬ ಮೆಗಾ ಪಿಕ್ಸೆಲ್ಲು. ಅದೇ ದ್ವಂದ್ವದಲ್ಲಿ ಮನೆಗೆ ಬಂದು ನನ್ನ ಫೋಟೋಗ್ರಾಫರ್, ಕವಿ ಮಿತ್ರ ಆದಿಗೆ ದುಂಬಾಲು ಬಿದ್ದೆ. ಒಂದಿನ ಹೋಗೋಣ ನಡಿ. ಅವನಿಗೆ ಫ್ರೀಯಾಗೋ ಹೊತ್ತಿಗೆ ಹಬ್ಬದ ಹಿಂದಿನ ಗುರುವಾರ ಬಂದುಬಿಟ್ಟಿತ್ತು. ಅಂದರೆ ಸೆಪ್ಟೆಂಬರ್ ೩೦. ಮಾರತ್ತಳ್ಳಿ ಪೇಟೇಲಿ ಸಂಜೆ ಆರರಿಂದ ಒಂಭತ್ತೂವರೆವರ್ಗೆ ಸುತ್ತಿದ್ದೇ ಸುತ್ತಿದ್ದು. ಬಟ್ಟೆ ಅಂಗಡಿ, ಚಪ್ಪಲಿ ಅಂಗಡಿಗಳು ಬೇಜಾನ್ ಸಿಕ್ಕಿದ್ವೇ ಹೊರ್ತು ಒಂದು ಕ್ಯಾಮೆರಾ ಅಂಗಡಿ ಬಿಟ್ರೆ ಬೇರೇನೂ ಸಿಗಲಿಲ್ಲ. ಅದರಲ್ಲಿ ನಮಗೆ ಬೇಕಾಗಿದ್ದ ಕೆನಾನ್ ಇರದಿದ್ರೂ ನಿಕಾನ್ s2700 ಅನ್ನೋದು ಸಿಕ್ಕಾಪಟ್ಟೆ ಇಷ್ಟ ಆಗೋಯ್ತು. ಸರಿ ಅಂತ ಮುಂದೆ ಬೇರೆ ಅಂಗಡಿ ಹುಡುಕಿ ನಡೆದ ನಮಗೆ ಬೇರೆ ಯಾವ್ದೂ ಸಿಗಲಿಲ್ಲ. ನಡೆದಿದ್ದೇ ನಡೆದಿದ್ದು. ಕಾಲೆಲ್ಲಾ ಬತ್ತಿ ಬರೋ ಹೊತ್ತಿಗೆ ವಾಪಾಸ್ ಬಂದು ಮನೆಯ ಹತ್ತಿರವಿದ್ದ ಹೈಪರ್ ಸಿಟಿಗೆ ಹೊಕ್ವಿ. ಅಲ್ಲಿ ಕೊನೆಗೆ ಕೆನಾನ್ 3200 ತಗೋಳ್ಳೊದು ಅಂತಂತ್ಕೊಂಡ್ವಿ. ಆದ್ರೆ ಟ್ರಯಲ್ ಮಾಡೋಕೆ ಅದ್ರ ಬ್ಯಾಟ್ರಿ ಖಾಲಿ ಆಗಿತ್ತು. ಮಾರ್ನೆ ದಿನ ಅಂದ್ರೆ ಶುಕ್ರವಾರ. ಅಂದ್ರೆ ನವೆಂಬರ್ ೧. ಊರಿಗೆ ಹೊರಡೋ ದಿನ.ಮಾರ್ನೇ ದಿನದೊಳಗೆ ಕ್ಯಾಮೆರಾ ತಗೊಳ್ಲೇ ಬೇಕು.ಸರಿಯಪ್ಪ, ಕೆನಾನಿಂದೇ ಒಳಗಡೆ ಪೀಸಿದ್ರೆ ಅದ್ನೇ ಕೊಡು. ತಗೊಂಡು ಬಿಡ್ತೇನೆ ಅಂದೆ. ಇದ್ರ ಪೀಸಿಲ್ಲ ಸಾರ್. ಬರೀ ಡಿಸ್ ಪ್ಲೇ ಮಾತ್ರ ಅನ್ಬೇಕಾ !! ಇದ್ದ ಸಿಟ್ಟೆಲ್ಲಾ ನೆತ್ತಿಗೇರಿತ್ತು. ಮುಂಚೆ ಹೇಳೋದಲ್ವಾ . ಪೀಸಿಲ್ಲ ಅಂದ್ರೆ ಶೋಕೆ ಯಾಕಿಡ್ತಾರಪ್ಪಾ ಅಂತ ಬೈಕೊಳ್ತಾನೆ ಒಳಗೆ ಬಂದ್ವಿ. ಮುಂಚೆ ಇಷ್ಟ ಆದ ಅಂಗಡಿಗೆ ವಾಪಾಸ್ ಹೋಗೋಣ್ವೇಣೋ ಅಂದೆ. ಕಾಲೆಲ್ಲಾ ವಿಪರೀತ ನೋಯ್ತಾ ಇದ್ರೂ ಅವ್ನೂ ಸರಿ ಅಂದ. ಒಂಭತ್ತೂಕಾಲು. ನಾವು ಆ ಅಂಗಡಿಗೆ ಹೋಗಿ ಮುಟ್ಟೋಕೂ ಅವ್ರ್ ಬಾಗ್ಲು ಹಾಕೋಕೂ ಸರಿ ಹೋಯ್ತು. ಎಷ್ಟು ರಿಕ್ವೆಸ್ಟ್ ಮಾಡಿದ್ರೂ ಊಹೂ. .ನಾಳೆ ಬೆಳಗ್ಗೆ ಒಂಭತ್ತೂವರೆಗೆ ಓಪನ್ ಆಗತ್ತೆ ಸಾರ್. ಬೆಳಗ್ಗೇನೆ ಬಂದು ಬಿಡಿ ಅಂದ.. ಅವತ್ತಿನ ಮೂರೂವರೆ ಘಂಟೆ ನಡೆದ ಶ್ರಮವೆಲ್ಲಾ ನೀರ ಮೇಲಿನ ಹೋಮ ಮಾಡಿದಂತಾಗಿದ್ದ ಬೇಜಾರು, ನೋಯುತ್ತಿದ್ದ ಕಾಲುಗಳೂ ವಿಪರೀತ ಬೇಜಾರ್ ಉಂಟು ಮಾಡಿದ್ವು. ಆದ್ರೂ ಏನೂ ಮಾಡೋ ಹಾಗಿಲ್ಲ. ಯಾರ ಮೇಲೂ ತಪ್ಪು ಹೊರಿಸೋಹಾಗಿಲ್ಲ. ಇವತ್ತು ಕ್ಯಾಮೆರಾ ತಗೊಳ್ಳೋ ಯೋಗವಿಲ್ಲ ಬಿಡು ಅಂತ ಮತ್ತೆ ಪೀಜಿಗೆ ವಾಪಾಸ್ಸಾದ್ವಿ. ಮಾರನೇ ದಿನ ಮನೆಗೆ ಹೋಗೋ ಹೊತ್ತಿಗೆ ಇಲ್ಲೇ ಮಾರತ್ತಳ್ಳಿಲಿ ಇಳಿದು ಕ್ಯಾಮೆರಾ ತಗೊಂಡೇ ಮನೆಗೆ ಹೋಗಬೇಕೆಂಬ ನಿಶ್ಚಯ ಹಸಿಯುತ್ತಿದ್ದ ಹೊಟ್ಟೆ, ನೋಯುತ್ತಿದ್ದ ಕಾಲುಗಳ ಮಧ್ಯೆಯೂ ಧೃಢವಾಗಿ ಮೂಡಿತ್ತು..

Monday, October 28, 2013

ಕಾಲೇಜ್ ಕಹಾನಿ

ನೀರವ ರಾತ್ರಿ. ಜೀವನವೇ ಜಿಗುಪ್ಸೆಯಾಗಿ , ಮನಶ್ಯಾಂತಿಯನ್ನು ಹುಡುಕಿ ಅಲೆಯುತ್ತಿರೋ ಅಲೆಮಾರಿಯಂತೆ ಒಬ್ಬ ಕೆರೆಯನ್ನೇ ದಿಟ್ಟಿಸುತ್ತಾ ಅದರ ದಡದಲ್ಲಿ ಕುಳಿತಿದ್ದ. ಬೆಳದಿಂಗಳ ರಾತ್ರಿ. ಕೆರೆಯ ಅಲೆಗಳಲ್ಲಿ ಪ್ರತಿಬಿಂಬಿಸುತ್ತಿದ್ದ ಚಂದ್ರನ ಬಿಂಬ ನೋಡುತ್ತಿದ್ದರೆ ಆಗಸದ ಆ ಶಶಿ ಈತನಿಗೆ ಸಾಂತ್ವನ ಹೇಳಲೆಂದೇ ಭುವಿಗಿಳಿದು ಬಂದು ಕೆರೆಯಲ್ಲಿ ಈಜಾಡುತ್ತಿದ್ದಾನೇನೋ ಅನಿಸುತ್ತಿತ್ತು. ರೋಹಿಣೀಪತಿ ಪ್ರಭೆಯ ರಾತ್ರಿ ಸಭೆಗೆ ಆಗಮಿಸಿದ್ದ ತಾರೆಗಳೆಲ್ಲಾ ಮಿಂಚುತ್ತಾ ಆಗಸದಲ್ಲಿ ಚಿತ್ರ ವಿಚಿತ್ರ ಆಕೃತಿಗಳನ್ನು ಮೂಡಿಸುತ್ತಿದ್ದವು. ಸೃಷ್ಟಿಕರ್ತನ ಚುಕ್ಕಿಯಾಟಕ್ಕೋ , ರಂಗೋಲಿಗೋ ಅಂಗಳವಾದಂತಿದ್ದವು. ತಂಗಾಳಿಗೆ ಗತ್ತು ಬಂದಂತೆ ಕೊಂಬೆಗಳನ್ನು ಇಂಚಿಂಚೇ ಅಲ್ಲಾಡಿಸಿ ಬೀಗುತ್ತಿದ್ದ ಮರಗಳೂ ರಾತ್ರಿ ತಮ್ಮದೇ ಲೋಕವೆಂಬಂತೆ ಅಲ್ಲಲ್ಲಿ ಹಾರಾಡುತ್ತಿದ್ದ ಬಾವಲಿಗಳೂ ರಾತ್ರಿಯ ಚಂದಿರನ ಬೆಳಕಿಗೆ ಬೆಳಗಿದಂತಾಗುತ್ತಿದ್ದ ತೇಲು ಸಸ್ಯಗಳೂ, ತಾವರೆಗಳೂ ಕೆರೆಯ ಪರಿಸರಕ್ಕೊಂದು ಕಳೆ ತಂದುಕೊಟ್ಟಿದ್ದವು. ಬೀಸುತ್ತಿದ್ದ ಮಂದಮಾರುತದ ತಂಪಲ್ಲೂ ಕೆರೆಯ ದಡದಲ್ಲಿ ಕೂತಿದ್ದವ ಬೆವರುತ್ತಿದ್ದ. ಕೆರೆಯ ತಿಳಿನೀರು, ಅದರಲ್ಲಿ ಮೂಡುತ್ತಿದ್ದ ಪ್ರಶಾಂತ ಬಿಂಬ ಅಲ್ಲೋಲಕಲ್ಲೋಲವಾಗಿದ್ದ ಈತನ ಮನಸ್ಸಿಗೆ ಕಸಿವಿಸಿಯುಂಟುಮಾಡಿ. ಆ ಸಿಟ್ಟಿನಲ್ಲಿ ಕೈಗೆ ಸಿಕ್ಕಿದ ಕಲ್ಲನ್ನೆತ್ತಿ ಕೆರೆಗೆಸೆದ. ಮುಳುಗಿದ ಕಲ್ಲಿನಂತೆಯೇ ಈತ ಹಳೆಯ ನೆನಪುಗಳಲ್ಲಿ ಮುಳುಗತೊಡಗಿದ. ತಿಳಿಯಾಗುತ್ತಿದ್ದ ಚಂದ್ರನ ಬಿಂಬದಂತೆಯೇ ಈತನ ನೆನಪುಗಳು ಕಣ್ಣೆದುರು ಮೂಡತೊಡಗಿದವು.

ಬೆಂಗಳೂರಿಗೆ ಬಂದ ಹೊಸದು. ಕಾಲೇಜು ಜೀವನದ ಮೊದಲ ದಿನಗಳು. ಹಳ್ಳಿಯಿಂದ ಬಂದ ಈತನಿಗೆ ಇಲ್ಲಿನ ಜಗತ್ತೇ ವಿಚಿತ್ರವೆನಿಸಿತ್ತು. ದೊಡ್ಡವರಿಗೆಲ್ಲಾ ಅಣ್ಣಾ, ಸಣ್ಣವರಿಗೆಲ್ಲಾ ಹೆಸರಿಡೋದು, ಸಮಾನವಯಸ್ಕರಾದ್ರೆ ಲೋ, ಗುರೂ, ಸಿಸ್ಯಾ ಅನ್ನೋದೊಂದೇ ಗೊತ್ತಿದ್ದ ಆತನಿಗೆ ಇಲ್ಲಿ ಬಂದ ಮೇಲೆ ಶಬ್ದ ಸಾಮ್ರಾಜ್ಯವೊಂದಕ್ಕೆ ಕಣ್ಕಟ್ಟು ಬಿಟ್ಟಂತಾಗಿತ್ತು. ಮಗಾ, ಮಚ್ಚಿ, ಮಚ್ಚಾ, ಐಟಮ್ಮು, ಪೀಸು, ಸ್ಪೆಸಿಮನ್ನು, ಸೂಟಿ ಹೀಗೆ ಹಲವಾರು ಹೊಸ ಪದಗಳು. ರಾಜ್ಯದೆಲ್ಲೆಡೆಯ, ರಾಷ್ಟ್ರದೆಲ್ಲೆಡೆಯ ಜನ ಬಂದಂತೆ ಅವರ ಪದಗಳೂ ಇಲ್ಲಿ ಬಂದು ಬೆರೆತುಹೋಗಿದ್ದವು. ಬೇಬೆ, ಡೂಡ್ಗಳಿಲ್ಲದೆ ಮಾತಾಡೋದೇ ಕಷ್ಟವಾಗುವಂತ ಪರಿಸ್ಥಿತಿ ಇವನ ಹಾಸ್ಟೆಲ್ಲಿಗೆ ಬಂದುಹೋಗಿತ್ತು !  ಈ ಪರಿಸ್ಥಿತಿಯಲ್ಲಿ ಪಿಳಿಪಿಳಿ ಕಣ್ಣು ಬಿಡುವಷ್ಟರಲ್ಲೇ ಕ್ಲಾಸಲ್ಲಿದ್ದ ಒಬ್ಬ ಹುಡುಗಿ ಯಾಕೋ ಇಷ್ಟವಾಗಿ ಹೋಗಿದ್ದಳು. ನಾನು ಇಲ್ಲಿ ಬಂದಿರೋದು ಓದೋಕೆ, ಪ್ರೀತಿ ಮಾಡೋಕಲ್ಲ ಅಂತ ಎಷ್ಟು ಹೇಳಿಕೊಂಡರೂ ಯಾಕೋ ಕ್ಲಾಸಲ್ಲಿ ಕೂತಾಗ ಕಣ್ಣು ಅವಳತ್ತಲೇ ಹೊರಳುತ್ತಿತ್ತು. ಆದರೆ ಅವಳ ಹೆಸರು ಬಿಟ್ಟರೆ ಬೇರೇನೂ ಗೊತ್ತಿರದಿದ್ದರೂ ಆಕೆಯ ನಿತ್ಯದ ಟೈಟ್ ಜೀನ್ಸು, ಲೆಗ್ಗಿಂಗುಗಳನ್ನು ನೋಡಿದಾಗೆಲ್ಲಾ ಆಕೆ ಪೇಟೆಯವಳು , ತಾನು ಹಳ್ಳಿಯವನು . ಜೀನ್ಸು, ಶೂಗಳೆಲ್ಲಿ , ಸಾದಾ ಪ್ಯಾಂಟು ಚಪ್ಪಲಿಗಳೆಲ್ಲಿ ಎಂಬ ಕೀಳರಿಮೆ ಕಾಡುತ್ತಿತ್ತು. ಕಣ್ಣಂಚಿನ ನಗುವನ್ನೇ ನೋಡುತ್ತಾ ಕುಳಿತುಬಿಡುವ ಆಸೆಯಾಗುತ್ತಿದ್ದರೂ ಬಾಬ್ಕಟ್ಟನ್ನು ನೋಡಿದಾಗೆಲ್ಲಾ ದಿನಾ ಎಣ್ಣೆ ಹಾಕಿ ಬಾಚುವ ತನ್ನ ಎಣ್ಣೆಜಿಡ್ಡಿನ ಕೂದಲು ನೆನಪಾಗಿ ಮತ್ತೆ ತಲೆತಗ್ಗಿಸುವಂತಾಗುತ್ತಿತ್ತು.  ಆದರೂ ತಾನು ಬಂದ ಉದ್ದೇಶ ಏನು ಎಂದು ಅವನಿಗೆ ಅವನೇ ಮಾಡಿಕೊಳ್ಳುತ್ತಿದ್ದ ಸಮಾಧಾನಗಳಿಂದ ಎಷ್ಟೋ ಹೊತ್ತಿನ ನಂತರ ಮನಸ್ಸಿಗೆ ಶಾಂತಿ ಸಿಗುತ್ತಿತ್ತು.

ಆದರೆ ಭಾವನೆಗಳೆಂದರೆ ಹಾಗೆ. ಒಮ್ಮೆ ಮೊಳಕೆಯೊಡೆದರೆ ಅವನ್ನು ಚಿವುಟುವುದು ಕಷ್ಟ. ಎಷ್ಟೇ ತಡೆ ಹಾಕಿದರೂ ಅದು ಮರವಾಗೇ ಸಿದ್ದ. ಎಷ್ಟು ಬೇಡವೆಂದರೂ ತಡೆಯದ ಕಣ್ಣುಗಳು ಕೆಲವೊಮ್ಮೆ
ಅವಳತ್ತ ಹೊರಳಿಬಿಡುತ್ತಿದ್ದವು. ಕೊನೆಗೊಮ್ಮೆ ಎರಡನೆಯ ಇಂಟರ್ನಲ್ ಹೊತ್ತಿಗೆ ಅದು ಅವಳಿಗೂ ತಿಳಿದುಬಿಟ್ಟಿತು. ಒಂದಿನ  ಅವಳನ್ನು ಮಾತಾಡ್ಬೆಸ್ಬೇಕು ಅಂದ್ಕೊಂಡ್ರೂ ಪ್ರತೀ ಬಾರಿ ಅವಳೆದುರು ಹಾದಾಗ ಧೈರ್ಯ ಸಾಕಾಗ್ತಿರಲಿಲ್ಲ. ಹಿಂಗೇ ಒಂದ್ಸಲ ಮತ್ತೆ ಸಿಕ್ಕಿದ್ಲು ಅವ್ಲು.  ಯಾವ್ದೋ ಯೋಚನೆಯಲ್ಲಿ ಮುಳುಗಿದ್ದ ಅವನಿಗೆ ಆಕೆ ಹಲೋ ಅಂದಂಗಾಯ್ತು. ಇಂಟರ್ನಲ್ ರಿಸಲ್ಟ್ ಪೇಪರ್ ನೋಡೋಕೆ ಹೋಗಿದ್ದ ಆತ ಆಕೆಯ ಹತ್ರ ಏನು ಮಾತಾಡ್ಬೋದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದ. ಬ್ರೇಕಲ್ಲಿ ಲೈಬ್ರರಿ ಹತ್ರ  ಬಂದ್ರೆ ಸಿಗ್ರಿ . ಏನೋ ಡೌಟಿದೆ ಅಂದ್ಲು. ಸರಿ ಅಂದ ಆತ. ಇಂಟರ್ನಲ್ಲು ಆಗಿ ಎರಡು ದಿನ ಕಳೆದ್ದರಿಂದ ಲೈಬ್ರರಿಯ ಹತ್ತಿರ ಹೆಚ್ಚಿಗೆ ಜನರಿರಲಿಲ್ಲ. ಮಾತುಕತೆ ಹೀಗೇ ಸಾಗಿತು.
ಆಕೆ:ಹೇಗಿತ್ತು ಎಕ್ಸಾಮು ?
ಈತ:(ತಲೆ ತಗ್ಗಿಸಿಕೊಂಡೇ)ಚೆನ್ನಾಗಿತ್ತು.
ಆಕೆ:ಯಾಕ್ರಿ ಸುಳ್ಳೇಳ್ತೀರಾ? ನಿಮ್ಮ ಪೇಪರ್ ನೊಡ್ಕೋಂಬಂದೆ. ಮೊದಲ ಇಂಟರ್ನಲ್ಲಲ್ಲಿ ೨೫ ತಗೊಂಡ ಸಬ್ಜೆಕ್ಟಿಗೆ ಈ ಸಲ ೧೫. ಪೇಪರ್ರೇನು ಅಷ್ಟು ಕಷ್ಟ ಇರ್ಲಿಲ್ವಲ
ಈತ:ಆಂ, ಹೌದಾ ?
ಆಕೆ: ಎಲ್ಲಿದೆ ನಿಮ್ಮ ಮನಸ್ಸು? ಏನಾಗಿದೆ ನಿಮ್ಗೆ. ಯಾವಾಗ್ಲೂ ನನ್ನೇ ನೋಡ್ತಾ ಕೂತಿರ್ತೀರ ಕ್ಲಾಸಲ್ಲಿ. ಇನ್ನೇನಾಗ್ಗುತ್ತೆ ? ನೋಡಕ್ಕೆ ಹಳ್ಳಿ ಗಮಾರನ ತರ ಇದೀಯ. ಪೇಟೆ ಹುಡ್ಗೀರನ್ನ ನೋಡ್ತಾ ಕೂತು ಬಿಟ್ರೆ ಆಯ್ತಾ ? ನಾವೂ ನಿನ್ನ ನೋಡ್ಕೋತಾ ಇರ್ಬೇಕಾ ? ನೀನೊಬ್ನೆ ಇಲ್ಲಿ ಓದೋಕೆ ಬರೋನು. ನಾವೆಲ್ಲಾ ಇಲ್ಲಿ ಸ್ಟೈಲು ಮಾಡೋಕೆ ಬರೋರು ಅಂದ್ಕೊಂಡಿದೀಯ ಹೇಗೆ ?
ಈತ: ರೀ. ಹಂಗೆಲ್ಲಾ ಇಲ್ಲ. ಛೇ .. ನೀವು ನನ್ನ ತಪ್ಪು ತಿಳೀತಾ ಇದೀರ..
ಆಕೆ: ಹಂಗೂ ಇಲ್ಲ. ಹಿಂಗೂ ಇಲ್ಲ. ಇನ್ನೊಂದ್ಸಲ ಕ್ಲಾಸಲ್ಲಿ ನನ್ನ ನೋಡ್ತಾ ಕೂತ್ರೆ ಸರಿಗಿರಲ್ಲ. ಓದೋಕೆ ಅಂತ ಬಂದಿದೀರ. ನಿಮ್ಮ ಪಾಡಿಗೆ ಅದ್ನ ಮಾಡ್ಕೊಂಡು ಹೋಗಿ ಅಂತ ದಡಕ್ಕನೆ ಎದ್ದು ಹೋದ್ಲು.. ಅಬ್ಬಾ ಅಂದ್ಕೊಂಡು ಕಣ್ಣು ಮುಚ್ಚಿ ಬಿಡ್ತಾನೆ. ಆದ್ರೆ ಆತ ಲೈಬ್ರರಿಯ ಹತ್ರ ಅಲ್ಲ. ಕ್ಲಾಸ ಹತ್ರವೇ ಇದ್ದಾನೆ. ಯಪ್ಪಾ ಎಂತಾ ಕಲ್ಪನೆಗಳು ಅಂದ್ಕೊಂಡ.


ಅವನು ಕಲ್ಪನೆಗಳಲ್ಲಿ ಮುಳುಗಿದ್ದಾಗಲೇ ಆಕೆಯೂ ಆತನನ್ನು ಮಾತಾಡಿಸ್ಬೇಕು. ಆದ್ರೆ ಏನು ಮಾತಾಡೋದು ಅನ್ನೋ ಯೋಚನೇಲಿ ಮುಳುಗಿ ಹೋಗಿದ್ಲು.ಹಲೋ ಅಂದ ಆತ. ಹಲೋ ಅಂದ್ಲು ಆಕೆ.ನೀವು ಫ್ರೀ ಇದ್ರೆ ಕ್ಯಾಂಟೀನತ್ರ ಸಿಗ್ತೀರ ಬ್ರೇಕಲ್ಲಿ ? ಏನೋ ಮಾತಾಡ್ಬೇಕು ಅಂದ ಅವ. ಏನೋ ಹಳ್ಳಿ ಗಮಾರ ಅಂದ್ಕೊಂಡಿದ್ದೆ, ಆದ್ರೆ ಸಿಕ್ಕಾಪಟ್ಟೆ ಫಾರ್ವರ್ಡ್ ಇರೋ ತರ ಇದಾನೆ ಇವ. ಪರ್ವಾಗಿಲ್ಲ ಅಂತ ನಸುನಕ್ಕು ಹೂಂ ಅಂದ್ಲು ಈಕೆ.
ಆತ: ನನಗೆ ನೆಸ್ ಕಾಫಿ ಮತ್ತು ನ್ಯೂಡಲ್ಸ್. ನಿಮ್ಗೆ ?
ಈಕೆ : ನಂಗೂ ಅದೇ(ಆಶ್ಚರ್ಯದಿಂದ)
ಆತ : ಮತ್ತೆ ಹೇಗಿದೀರ. ಹೇಗಾಯ್ತು ಇಂಟರ್ನಲ್ಸ್ ?
ಈಕೆ : ಓ, ಸೂಪರ್.
ಆತ:  ಗುಡ್. ಅಂತೂ ಇಂಟರ್ನಲ್ಸ್ ಮುಗೀತು. ವೀಕೆಂಡಿಗೆ ಏನು ಪ್ಲಾನು ?
ಈಕೆ : ಓ ಗಾಡ್. ನಿಮ್ಮ ಮಾತು ಕೇಳ್ತಾ ಇದ್ರೆ ಆಶ್ಚರ್ಯ ಆಗುತ್ತೆ ರೀ. ನೀವು ಯಾವ್ದೋ ಹಳ್ಳಿಯವ ಅಂದ್ಕೊಂಡಿದ್ದೆ ನಿಮ್ಮ ಮೊದಲ ಕೆಲವು ದಿನಗಳ ವೇಷ ನೋಡಿ. ಪರ್ವಾಗಿಲ್ಲ ರೀ. ಸಿಕ್ಕಾಪಟ್ಟೆ ಫಾಸ್ಟಾಗಿ ಚೆಂಜ್ ಆಗಿದೀರ.
ಆತ: ಹುಡ್ಗೀರತ್ರ ಮಾತೇ ಆಡದವ ಇವತ್ತು ಹೇಗಿಷ್ಟು ಮಾತಾಡ್ತಾ ಇದಾನೆ ಅಂತಾನ ?
ಈಕೆ: ಸೋರಿ. ಬೇಜಾರು ಮಾಡ್ಕೋಬೇಡಿ. ಆದ್ರೆ ಹೌದು.  ನೀವು ಎಲ್ರನ್ನೂ ನೀವು ಅಂತೀರ ಅಂತ ಎಲ್ಲಾ ಹಿಂದೆ ಬಿಟ್ಟು ಬಿದ್ದು ಬಿದ್ದು ನಗ್ತಾರೆ. ನೀವು ಬದಲಾಗೋದೆ ಇಲ್ಲಾ ಅಂದ್ಕೊಂಡಿದ್ದೆ. ಆದ್ರೆ ಇವತ್ತು ಆಶ್ಚರ್ಯ ಆಗ್ತಿದೆ. ಆದ್ರೂ ಯಾಕಿಂತ ದಿಢೀರ್ ಬದಲಾವಣೆ ?
ಆತ: ಹೆ ಹೆ. ಹಂಗೇನಿಲ್ಲ ರೀ. ಪರಿವರ್ತನೆ ಜಗದ ನಿಯಮ ಅಂತಾರಲ್ಲ. ಇಲ್ಲಿದ್ಮೇಲೆ ಇಲ್ಲಿಗೆ ತಕ್ಕ ಹಾಗೆ ಇರ್ಬೇಕಲ್ವಾ ? ಮತ್ತೆ ನಿಮ್ಮ ಫೇವರಿಟ್ ಚಾಟ್ ಯಾವ್ದು ? ನ್ಯೂಡಲ್ಸಾ ಅಂದ. ನಗುತ್ತಾ ?
ಈಕೆ: ಇಲ್ಲ ರೀ. ನಾನು ಈ ಪೇಟೆಲಿದ್ರೂ ನ್ಯೂಡಲ್ಸ್, ಬರ್ಗರ್, ಫಿಜ್ಜಾಗಳಿಗಿಂತ ಮಸಾಲೆಪುರಿ, ಪಾನಿಪೂರಿ, ನಮ್ಮಜ್ಜಿ ಮಾಡೋ ಚಿತ್ರಾನ್ನಗಳ್ನೇ ಜಾಸ್ತಿ ಇಷ್ಟಪಡ್ತೀನಿ
ಆತ: ಓ, ಪರ್ವಾಗಿಲ್ಲ. ಜಸ್ಟ್ ಅಟ್ ೨೫ ಅನ್ನೋ ಬರ್ಗರ್ ರೇಟಲ್ಲಿ ಎರಡ್ಮೂರು ಮಸಾಲೆಪುರಿ ತಿನ್ನಬೋದು ಅನ್ನೋ ಆಲೋಚನೆ.
ಈಕೆ: ಹೆ ಹೆ. ದುಡ್ಡಿನ ಆಲೋಚನೆ ಅಂತಲ್ಲ. ಆದ್ರು ಯಾಕೋ..
ಹೀಗೆ ಏನೆಲ್ಲಾ ಕಲ್ಪನೆಗಳು. ವಾ, ಏನಂದ್ಕೊಡಿದ್ದೆ.ಎಂಥಾ ಬದಲಾವಣೆ ಅಬ್ಬಾ ಅಂತ ಕಣ್ಮುಚ್ಚಿ ತೆರಿತಾಳೀ. ಆದ್ರೆ ಏನಿದು ? ಕ್ಯಾಂಟೀನಲ್ಲಿರಲಿಲ್ಲ. ಬದಲಿಗೆ ಆ ಹುಡುಗನ ಎದ್ರಿಗೇ ಕ್ಲಾಸ ಹತ್ರ ಇದಾಳೆ.
ಅಬ್ಬಾ ಎಂಥಾ ಕಲ್ಪನೆಗಳು ಅಂದ್ಕೊಂಡ್ಳು.


ಇಬ್ರೂ ವಾಸ್ತವಕ್ಕೆ ಬಂದು ಹಲೋ ಅನ್ನೋದು ಸರಿ ಹೋಯ್ತು. ವಾಸ್ತವಕ್ಕೆ ಬಂದರೂ ತಮ್ಮ ಕಲ್ಪನೆಗಳನ್ನು ನೆನೆಸಿಕೊಂಡು ಆಕೆಗೆ ನಗು ಬರ್ತಾ ಇದ್ರೆ, ಈತನಿಗೆ ಭಯ ಆಗ್ತಾ ಇತ್ತು. ಪರಸ್ಪರರ ಮುಖದಲ್ಲಿನ ಅನಿರೀಕ್ಷಿತ ಭಾವ ನೋಡಿ ಇಬ್ಬರಿಗೂ ಆಶ್ಚರ್ಯ ಆಯ್ತು.  ಏನೋ ಯೋಚ್ನೆ ಮಾಡ್ತಾ ಇದ್ದಂಗಿದೆ ಅಂದ್ಲು ಆಕೆ. ಈ ಇಲ್ಲಪ. ನೀವು ಏನೋ ಯೋಚ್ನೆ ಮಾಡ್ತಾ ಇದ್ದಂಗಿತ್ತು ಅಂದ ಇವ.
ಹೇ ಏನೂ ಇಲ್ಲಪ. ಮತ್ತೆ ಹೇಗಿದೀರ ,ಹೇಗಾಯ್ತು ಇಂಟರ್ನಲ್ಲು ಅಂದ್ಲು ಅವ್ಳು. ಅಷ್ಟು ಚೆನ್ನಾಗಾಗ್ಲಿಲ್ಲ ಅಂತ ಸಪ್ಪೆ ಮೋರೆ ಹಾಕಿದ ಅವ ನಿಮ್ದೆಂಗಾಯ್ತು ಅಂದ ? ನಾಟ್ ಬ್ಯಾಡ್ . ನಿಮ್ಗೊಂದು ರಿಕ್ವೆಸ್ಟ್. ಇಲ್ಲ ಅನ್ಬಾರ್ದು ಅಂದ್ಲು. ಎಲ್ಲಿ ನನ ಮುಖ ನೋಡ್ಬೇಡ ಅಂತಾಳೋ ಅಂತ ಹೆದರಿದ್ದ ಅವನು ಹೆದರುತ್ತಲೇ ಹೂಂ ಅಂದ. ಪ್ಲೀಸ್, ನೀವು ಅಂತ ಕರಿಬೇಡಿ ನನ್ನ. ಹೆಸರಿಟ್ಟು ಕರೀರಿ.. ಐ ಡೋಂಡ್ ಲೈಕ್ ಇಟ್. ನನ್ನೆಸ್ರು ಕರ್ರಮ್ಮ, ಬೆಳ್ಳಮ್ಮ, ಕುರುಡಮ್ಮ ಅಂತೇನು ಇಟ್ಟಿಲ್ಲ , ಲಕ್ಷಣವಾಗೇ ಇಟ್ಟಿದಾರೆ ಓಕೆ. ಅಂತ ನಗೋಕೆ ಶುರು ಮಾಡಿದ್ಲು. ಇವನಿಗೆ ಅಬ್ಬಾ ಎನಿಸಿ ಹೂಂ ಅಂದ.

ಅವತ್ತಿಂದ ನೀವು ಹೋಗಿ, ನೀನು ಆಯ್ತು. ಮೊಬೈಲ್ ನಂಬರ್ ಬದಲಾಯ್ತು. ಸಾದಾ ಪ್ಯಾಂಟ್  ಹೋಗಿ ಜೀನ್ಸ್, ಉದ್ದಕೂದಲ ಎಣ್ಣೆತಲೆಯ ಬದ್ಲು ಮಿಲ್ಟ್ರಿ ಕಟ್ ಬಂತು. ಟೈಟ್ ಜೀನ್ಸ್ ಹೋಗಿ ಚೂಡಿದಾರ, ನ್ಯೂಡಲ್ಸ್ ಬದ್ಲು ರೈಸ್ ಬಾತುಗಳೂ ಬಂದವು ! ಸೈಲೆಂಟಾಗಿ ಶುರುವಾದ ಈ ಬದಲಾವಣೆಗಳು ಅವರಿಗೇ ಆಶ್ಚರ್ಯ ಉಂಟು ಮಾಡಿದ್ವು. ಮಾತಾಡಿದ್ರೆ ಏನೋ ಕಳ್ದು ಹೋಗತ್ತೆ ಅಂತಿದ್ದ ಆತ ಈಕೆಯ ಪರಿಚಯವಾದಾಗಿನಿಂದ ಮೈಬಿಚ್ಚಿ ಎಲ್ಲರತ್ರನೂ ಮಾತಾಡೋಕೆ ಶುರುಮಾಡಿದ. ಮೊದಲ ಸೆಮ್ ಮುಗಿಯೋ ಹೊತ್ತಿಗೆ ಸ್ನೇಹಿತರೆಲ್ಲರೂ ಆಪ್ತರಾಗಿದ್ರು. ಹಾಗಾಗಿ   ಮಾತು ಮಾತು ಮಾತು.. ಕ್ಲಾಸಲ್ಲಿ,ಬ್ರೇಕಲ್ಲಿ, ಸೈಲೆಂಟಾಗಿರೋ ಲೈಬ್ರರೀಲೂ ಬಿಡದಂತೆ, ಕ್ಯಾಂಟೀನು, ಬಸ್ಸಲ್ಲಿ. ಅದೂ ಸಾಕಾಗದಂತೆ  ಫೋನ್, ವಾಟ್ಸಾಪು, ಫೇಸ್ಬುಕ್ಕು, ಜೀಚಾಟು ಹೀಗೆ ಸಿಕ್ಕಲ್ಲೆಲ್ಲಾ ಮಾತು. ಮನೆಯವರತ್ರ ಕಾಲು ಘಂಟೆ ಮಾತಾಡಿದ್ರೂ ತಲೆ ಚಿಟ್ಟಿಡಿಯುವಂತ ಆದ್ರೆ ಸ್ನೇಹಿತರತ್ರ ಮಾತಾಡ್ತಾ ಮೂರು ದಿನಕ್ಕೆ ಮೊಬೈಲು ರಿಚಾರ್ಜ್ ಮಾಡುವಷ್ಟು ಮಾತು.. ಹೀಗೆ ಒಂದಿನ ಮೊಬೈಲು, ಇಂಟರ್ನೆಟ್ಟಿಲ್ಲದಿದ್ರೆ ಜೀವನವೇ ಸಾಗೋಲ್ಲ ಅನ್ನೋಷ್ಟು ಮಾತು. ಬಿಡುವಿಲ್ಲದಷ್ಟು ಮಾತು. ನಂಗೆಂತೂ ಅರ್ಧ ಘಂಟೆ ಈ ಮೊಬೈಲಿಲ್ದೇ ಇರಕ್ಕಾಗಲ್ಲ ನಿಮ್ಗಿರಕಾಗತ್ತಾ ಅಂತಿದ್ಲು ಆಕೆ . ಒಂದರ್ಧ ಘಂಟೆನಾಡ್ರೂ ಮೊಬೈಲು ಹತ್ರ ಹಿಡ್ಕೋ. ಎಲ್ಲೆಲ್ಲೋ ಒಗಿಬೇಡ. ಮೆಸೇಜ್ ಮಾಡಿದ್ರೆ ಮಾರ್ನೆ ದಿನ ರಿಪ್ಲೈ ಮಾಡ್ತಿಯ!.. ಅನ್ನೋ ಬೈಗುಳಗಳು ಕಾಮನ್ನಾಗಿ ಹೋಗಿದ್ವು. ಉಫ್..ಯಾಕೋ ಕೆಲವೊಮ್ಮೆ ಮಾತಿಲ್ದೆ ಹೋದ್ರೆ ಏನೋ ಕಳಕೊಂಡಂತೆ , ಈ ಮಾತು ಮಾತಲ್ಲೇ ಎಲ್ಲೋ ಕಳೆದುಹೋದಂತೆ , ಮಾತಾಡ್ತಾ ಮಾತಾಡ್ತಾ ಅದ್ರಲ್ಲೇ ಮುಳುಗಿಹೋಗಿ ಮಾಡಬೇಕಾಗಿದ್ದ ಇನ್ನೇನೋ ಮಹತ್ಕಾರ್ಯಗಳನ್ನು ಮಿಸ್ ಮಾಡ್ಕೊಳ್ಳುತ್ತಿರುವಂತೆಯೂ ಅನಿಸುತ್ತಿತ್ತು.

ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ತಿಳೀಬೇಕು, ಸಂಸ್ಕೃತ ಎಂ.ಎ ಮಾಡ್ಬೇಕು. ಸಂಗೀತ, ಭರತನಾಟ್ಯ ಕಲೀಬೇಕು ಅಂತ ಎಷ್ಟೆಲ್ಲಾ ಆಸೆಗಳಿದ್ದ ನನ್ನ ಇಲ್ಲಿ ತಂದು ಸೇರ್ಸಿದಾರೆ ನನ್ನ ತಂದೆತಾಯಿಗಳು. ಅವ್ರಿಗೆ ಎಷ್ಟು ಬಡ್ಕೊಂಡು, ಬೇಡ್ಕೊಂಡ್ರೂ ಆರ್ಥ ಆಗೋಲ್ಲ.  ಅವೆಲ್ಲಾ ಟೈಂ ವೇಸ್ಟು. ಅದ್ರಿಂದ ಹೊಟ್ಟೆ ತುಂಬಲ್ಲ ಅಂತಾರೆ. ಎಲ್ಲಾದ್ರೂ ಅವಕಾಶ ಸಿಕ್ರೆ ನಾನು ಈ ಕೋರ್ಸನ್ನ ಬಿಟ್ಟು ಅದಕ್ಕೇ ಹೋಗ್ಬಿಟ್ತೀನಿ ಅಂತಿದ್ಲು ಆಕೆ. ಓ ಹೌದಾ. ನಮ್ಕಡೆ ಹಾಗೇನಿಲ್ಲ. ನಮ್ಮ ತಂದೆ ತಾಯಿ, ನೀನೂ ನಮ್ಮ ಜೊತೆ ಕೂಲಿಗೆ ಬಾ ಅಂತಾರೆ. ಆದ್ರೆ ನಮ್ಮೂರಲ್ಲಿ ಸರಿಯಾಗಿ ಮಳೆ ಇಲ್ದೆ ಮೂರು ವರ್ಷ ಆಯ್ತು. ಫುಲ್ ಕಷ್ಟ. ಹಂಗಾಗಿ ನಾನು ಇಲ್ಲೇ ಓದಿ ಒಂದು ಒಳ್ಳೆ ಕೆಲ್ಸ ಹಿಡಿಬೇಕು ಅಂತಿದೀನಿ ಅಂತಿದ್ದ ಈತ. ಹೀಗೆ ಭಿನ್ನ ಧೃವಗಳಾದ್ರೂ ಏನೋ ಸೆಳೆತ ಇಬ್ಬರನ್ನೂ ಹಿಡಿದಿಟ್ಟಿತ್ತು. ಮೊದಲ್ನೇ ಸೆಮ್ಮು ಮುಗಿದು ರಜ ಬಂದಾಗ ಈ ರಜ ಯಾಕೆ ಬರತ್ತೋ ಅನಿಸಿಬಿಟ್ಟಿತ್ತು. ರಜಾಕ್ಕೆ ಊರಿಗೆ ಬಂದವನಿಗೆ ಮೊದಲೆರೆಡು ದಿನಗಳು ಹೇಗೋ ಕಳೆದುಹೋದ್ವು. ಆದ್ರೆ ಮೂರ್ನೇ ದಿನದಿಂದ ದಿನವೇ ಪಾಸಾಗ್ತಿಲ್ಲ. ಊರಲ್ಲಿ ಮೊಬೈಲ್ ನೆಟ್ವರ್ಕು ಸಿಗೋದೇ ಕಷ್ಟ. ಅಂತದ್ರಲ್ಲಿ ಇಂಟರ್ನೆಟ್ಟೆಲ್ಲಿಂದ ಬರ್ಬೇಕು ? ಎಲ್ಲೋ ಗುಡ್ಡ ಹತ್ತಿದ್ರೆ ಒಂದು ಪಾಯಿಂಟ್ ನೆಟ್ವರ್ಕು ಸಿಗ್ತಿತ್ತು. ಅದ್ರಲ್ಲೇ ಆಕೆಗೆ ಕರೆ ಮಾಡೋಕೆ ಸಿಕ್ಕಾಪಟ್ಟೆ ಸಲ ಟ್ರೈ ಮಾಡ್ತಿದ್ದ. ಆದ್ರೆ ಒಂದು ಸಲವೂ ಆಕೆ ಫೋನ್ ಎತ್ತುತ್ತಿರಲಿಲ್ಲ. ಸುಮಾರು ಸಲ ಸ್ವಿಚ್ ಆಫ್ ಬರ್ತಿತ್ತು. ಕೆಲೋ ಸಲ ರಿಂಗಾದ್ರೂ ಯಾರೂ ಎತ್ತುತ್ತಿರಲಿಲ್ಲ. ಆಕೆಗೆ ಏನಾಯ್ತು ಅಂತ ನೆನೆನೆನೆದೇ ಬೇಜಾರಾಗ್ತಿತ್ತು. ಕೆಲೋ ಗೆಳೆಯರನ್ನ ಕೇಳಿದ್ರೂ ಗೊತ್ತಿಲ್ಲ ಗುರೂ ಅನ್ನೋ ಉತ್ರವೇ ಸಿಗ್ತು. ಅಷ್ಟಕ್ಕೂ ರಜದಲ್ಲಿ ಯಾರು ಎಲ್ಲಿ ಹೋಗ್ತಾರೆ ಅಂತ ಯಾರು ತಲೆ ಕೆಡಿಸ್ಕೋತಾರೆ ? ಹುಡ್ಗಿಯರಿಗೆ ಫೋನ್ ಮಾಡಿದ್ರೆ ಗೊತ್ತಾಗ್ತಿತ್ತೇನೋ. ಆದ್ರೆ ಯಾಕೋ ಮನಸ್ಸು ಬರ್ಲಿಲ್ಲ. ಊರಿಗೋಕೋಕೆ ಮುಂಚಿನ ದಿನ ನಡೆದ ಸಂಭಾಷಣೆ ನೆನಪಿಗೆ ಬಂತು..

ನಿನ್ನಿಷ್ಟದಂತೆ ನೀನು ಇಲ್ಲಿ ಯಾವ್ದೋ ಕೆಲ್ಸ ಹಿಡಿತೀಯ. ಮುಂದೆ ಅಂದಿದ್ಲು ಒಂದ್ಸಲ ಮಾತಾಡ್ತಾ ಆಡ್ತಾ ಆಕೆ. ಮುಂದೆ ಮದ್ವೆ ಅಂದಾಗ ಇಬ್ರೂ ನಕ್ಕಿದ್ರು. ಯಾರ್ನ ಅಂದಾಗ ನಿನ್ನೇ ಅನ್ನಬೇಕು ಅಂತ ಸಾಕಷ್ಟು ಮನಸ್ಸಾದ್ರೂ ಯಾಕೋ ಬಾಯಿ ಬಂದಿರಲಿಲ್ಲ. ಸುಮ್ನೆ ನಕ್ಕಿದ್ದ. ನೀನೋ ಆಮೇಲ್ಯಾವಾಗಾದ್ರೂ ಹಳ್ಳಿಗೆ ಹೋಗಿ ಸೆಟ್ಲ್ ಆಗೋಣ ಅಂತಿರ್ತೀಯ. ಆದ್ರೆ ಇಲ್ಲಿನ ಹುಡ್ಗೀರಿಗೆ ಹಳ್ಳಿಗೋಗೋಕೆ ಇಷ್ಟ ಇರಲ್ಲ. ಹಂಗಾಗಿ ಹಳ್ಳಿಲಿರೋರ್ನ ಅಥವಾ ಹಳ್ಳಿ ಬಗ್ಗೆ ಇಷ್ಟ ಇರೋರ್ನೇ ಮದ್ವೆ ಆಗೋದು ಬೆಟರ್ ಅಂತ ಅವಳೂ ನಕ್ಕಿದ್ಲು. ಆ ಮಾತಿನ ಇನ್ನೊಂದು ಅರ್ಥ ಅವನಿಗೆ ಆಗಿರದಿದ್ರೂ ಅವನೂ ಹೌದೌದು ಅಂತ ನಕ್ಕಿದ್ದ. ಹಳ್ಳಿಲಿರೋರ್ನ ಮದ್ವೆ ಆಗು ಅಂದ್ಲು ಅಂದ್ರೆ ನನ್ನ ಮರೆತುಬಿಡು, ನನ್ನಂತೋರ್ನ ಹಳ್ಳಿಯವನಾದ ನೀನು ಪ್ರೀತಿಸೋದು ತಪ್ಪು ಅನ್ನೋ ಅರ್ಥದಲ್ಲಿ ಅವಳು ಅಂದಿದ್ಲಾ ಅನ್ನೋ ಸಂದೇಹ ಊರಲ್ಲಿ ಖಾಲಿ ಕೂತಿದ್ದ ಇವನ ಮನಸ್ಸಲ್ಲಿ ಕೊರಿತಾ ಇತ್ತು. ಖಾಲಿ ಮನಸ್ಸು ದೆವ್ವದ ಆಸ್ಥಾನ ಅಂತಾರೆ. ಹಾಗಾಗಿ ನೂರೆಂಟು ಯೋಚನೆಗಳು.ಅದ್ನೇ ಬಗೆಹರಿಸಿಕೊಳ್ಳೋಣ ಅಂತ ಸುಮಾರು ಸಲ ಗುಡ್ಡ ಹತ್ತಿ ಪ್ರಯತ್ನ ಪಟ್ರೂ ಆಗಿರಲಿಲ್ಲ. ಮಗನ ಉದಾಸಮುಖ ನೋಡಿ ಏನಾಯ್ತು ಅಂತ ಚಿಂತೆ ಮಾಡೋಕೆ ಶುರು ಮಾಡಿದ್ದ ಅಪ್ಪ, ಅಮ್ಮನ್ನ ನೋಡಿ ಈತ ಖುಷಿಯಾಗಿದ್ದಂತೆ ತೋರಿಸಿಕೊಳ್ಳತೊಡಗಿದ. ಆದರೆ ನಗೆಯ ಮುಖವಾಡದ ಹಿಂದೆ ಅಳು ಸಂದರ್ಭಕ್ಕೆ ಕಾದು ವಿಸ್ಫೋಟಿಸುವ ಜ್ವಾಲಾಮುಖಿಯಂತೆ ಕಾಯುತ್ತಾ ಕುಳಿತಿತ್ತು. ಮನೆಯವರೆಲ್ಲಾ ಪಕ್ಕದ ಹಳ್ಳಿಯ ಮದುವೆಗೆ ಹೋಗಬೇಕಾಗಿ ಬಂತು. ಎಷ್ಟು ಒತ್ತಾಯ ಮಾಡಿದ್ರೂ ಹೋಗದೇ, ಏನೋ ನೆಪ ಹೇಳಿ ತಪ್ಪಿಸಿಕೊಂಡಿದ್ದ.  ಮಧ್ಯಾಹ್ನದ ತನಕವೂ ಹೊದ್ದು ಮಲಗಿದ್ದ ಈತ ಸಂಜೆಯ ಹೊತ್ತು ಬೇಜಾರು ಬಂದು ತನ್ನ ನೆಚ್ಚಿನ ತಾಣ ಊರಕೆರೆಯ ಬಳಿ ಬಂದಿದ್ದ.

ಅಲ್ಲಿನ ಸೂರ್ಯಾಸ್ತ, ಹಾರುಹಕ್ಕಿಗಳ ನಾನಾ ರೂಪ, ಹಕ್ಕಿಗಳ ನಿನಾದವನ್ನ ಕೇಳುತ್ತಾ ಮೈಮರೆತವನಿಗೆ ಹೊತ್ತು ಕಳೆದು ರಾತ್ರಿಯಾಗಿದ್ದೇ ತಿಳಿಯಲಿಲ್ಲ. ಹೊತ್ತಾದರೂ ಎಲ್ಲಿ ಹೋಗಬೇಕು ? ಯಾಕೆ ಹೋಗಬೇಕು ? ಪ್ರೀತಿಯೇ ಕೈಸಿಗದ ಮೇಲೆ ಬದುಕಿದ್ದೂ ಏನು ಫಲ. ಇಲ್ಲೇ ಸತ್ತು ಬಿಡಲೇ ಎಂಬ ಆಲೋಚನಾ ತರಂಗಗಳು ಮೂಡತೊಡಗಿದ್ದವು. ಆದ್ರೂ ಸಾಯೋ ನೆನಪಾದಾಗೆಲ್ಲಾ ತನ್ನ ಮೇಲೆ ನೂರೆಂಟು ಕನಸು ಕಂಡ ತಂದೆ, ತಾಯಿಯ ಪ್ರೀತಿ ನೆನಪಾಯ್ತು. ಮಗ ಬಂದಿದ್ದಾನೆ ಅಂತ ತಾಯಿ ಮಾಡಿದ ಕಜ್ಜಾಯ, ಕಡುಬುಗಳನ್ನ ನೆನೆದು ಬಾಯಲ್ಲಿ ನೀರು ಬಂತು. ಬರಲಿರೋ ಆಲೆಮನೆ ಬೆಲ್ಲದ  ನೆನಪು ಬಂದು ಬಾಲ್ಯದ ಮಧುರ ನೆನಪುಗಳು ಮರುಕಳಿಸಿದ್ವು. ಚಿಕ್ಕವನಿದ್ದಾಗ ಈಜಿ ತೇಲಿದ ಕೆರೆಯಲ್ಲಿ ಈಗ ಹೆಣವಾಗಿ ಕೊಳೆತು ತೇಲೋ ಕಲ್ಪನೆಯೇ ಅಸಹ್ಯವೆನಿಸಿತು. ಸಾಯ್ಲೇಬೇಕೂಂದ್ರೆ ಒಂದು ಕೊನೆ ಬಾರಿ ಅವನ್ನೆಲ್ಲಾ ತಿಂದು, ಆಲೆಮನೆ ಸವಿದು ಸಾಯೋಣ. ಗಡಿಬಿಡಿ ಯಾಕೆ ಅನಿಸ್ತು. ಸರಿ ಆಯ್ತು ಅಂದ್ಕೊಂಡ. ಮತ್ತೊಂದು ಕ್ಷಣದಲ್ಲಿ ನನಗಾಗಿ ಇಷ್ಟೊಂದು ಕಷ್ಟ ಪಟ್ಟ ತಂದೆತಾಯೀನ ಒಂದು ಸುಸ್ಥಿತಿಗೆ ತಲುಪಿಸ್ಬೇಕು. ಹಂಗಾಗಿ ನಾನು ವಿದ್ಯಾಭ್ಯಾಸ ಮುಗಿಸಿ ಕೆಲ್ಸ ಹಿಡಿದು ಕೆಲ ವರ್ಷದವರೆಗೂ ಸಾಯೋಲ್ಲ ಅಂದ್ಕೊಂಡ. ಮತ್ತೊಂದು ಕ್ಷಣದಲ್ಲಿ ಮತ್ತೊಂದು ಆಲೋಚನೆ ಮೂಡಿತು. ನನ್ನ ಹುಟ್ಟುಸ್ತಾ ನೀನು ಹುಟ್ಟುತೀಯೇನಪ್ಪಾ ಅಂತ ಕೇಳೇನೂ ದೇವ್ರು , ಅಪ್ಪ ಅಮ್ಮ ಹುಟ್ಟುಸ್ಲಿಲ್ಲ. ಹಾಗಾಗಿ ನಾನು ಸಾಯೋವಾಗ ಅವ್ರಿಗೆ ಕೇಳದೇ ಹೇಗೆ ಸಾಯ್ಲಿ ? ಅವ್ರಾಗೇ ಸಾಯಿಸೋವರ್ಗೂ ಅಥವಾ ಸಾಯಿ ಅಂತ ಹೇಳೋವರ್ಗೂ ಸಾಯೋ ನೈತಿಕ ಹಕ್ಕು ನನಗಿಲ್ಲ ಅಂದ್ಕೊಂಡ. ಅಷ್ಟಕ್ಕೂ ಪ್ರೀತಿ ಸಿಗಲಿಲ್ಲ ಅಂತೇಕೆ ಅಂದ್ಕೋಬೇಕು. ಅವಳು ರಜಾ ಮುಗಿದ ಮೇಲೆ ಸಿಕ್ಕಿದ್ರೂ ಸಿಗಬಹುದು. ಒಂದೊಮ್ಮೆ ಅವಳು ಅವಳಿಷ್ಟದಂತೆಯೇ ಕೋರ್ಸ್ ಬಿಟ್ಟು ಬೇರೆಡೆ ಹೋಗಿದ್ದರೂ ತೊಂದರೆಯೇನಿಲ್ಲ. ಕನಸುಗಳ ಕೊಂದು ಬದುಕೋದೂ ಒಂದು ಬದುಕೆ ? ಒಂದೊಮ್ಮೆ ಅವಳು ಅಲ್ಲೇ ಇದ್ದು, ನಿನ್ನ ಪ್ರೀತಿಸೊಲ್ಲ ಅಂದರೆ ? ಅಂದರೇನಾಯ್ತು ? ಪ್ರೀತಿ ಜೀವನದ ಒಂದು ಭಾಗವೇ ಹೊರತು ಪ್ರೀತಿಯೇ ಜೀವನವಲ್ಲವಲ್ಲ. ಏನಾದರಾಗಲಿ , ನಾಳೆಯನ್ನು ನಾಳೆ ನೋಡೋಣ ಇವತ್ತಿನದು ಇವತ್ತಿಗೆ ಅಂತ ಎದ್ದು ಮನೆಯತ್ತ ಹೆಜ್ಜೆ ಹಾಕಿದ. ಕೆರೆಯಲ್ಲಿ ಈಜುತ್ತಿದ್ದ ಚಂದ್ರ ನಗುತ್ತಿದ್ದ.