Wednesday, June 29, 2016

ಜಸ್ಟ್ ಮಿಸ್ಸು

ಟ್ರಿಪ್ಪೊಂದರಲ್ಲಿ ಕಂಡ ಸುಮ್ನೇ ಇಷ್ಟವಾಗಿದ್ದ ಹುಡುಗಿ ಆಫೀಸ್ ಬಸ್ಸಲ್ಲಿ ಸಡನ್ನಾಗಿ ಪ್ರತ್ಯಕ್ಷಳಾಗಿದ್ದಷ್ಟೇ ಅಲ್ದೇ ಪಕ್ಕದ ಸೀಟಲ್ಲಿ ಬಂದು ಕೂತ್ರೆ ? ಗುಂಡಣ್ಣನ ಎಂದಿನ ನಗು ಮಾಯವಾಗಿತ್ತು ! ಮನದಲ್ಲೊಂದು ಮೊಹಬ್ಬತ್ತ ಸೌಧಕ್ಕೆ ಅಡಿಪಾಯ ಬಿದ್ದಿತ್ತು.
ತಿಂಡಿನಾದ್ರೂ ಮಿಸ್ ಮಾಡ್ಕೊಳ್ತಿದ್ದ ಗುಂಡಣ್ಣ ಅವ್ಳು ಬರೋ ಬಸ್ಸನ್ನ ಮಾತ್ರ ಮಿಸ್ ಮಾಡ್ಕೊಳ್ತಿರಲಿಲ್ಲ. ಮುಂಚೆನೇ ಹತ್ತಿದ್ದ  ಅವಳೂ ಪಕ್ಕದಲ್ಲಿ ಯಾರನ್ನೂ ಕೂರಗೊಡದೆ ಗುಂಡಣ್ಣನ ಬರುವಿಕೆಯನ್ನೇ ಕಾಯುವಂತಿರುತ್ತಿದ್ದಳು. ಏನೋ ಹೇಳ್ಬೇಕು ಅಂತ ಅವನು. ಇವ ಹೇಳಲಿ ಅಂತ ಅವಳು . ನಾಳೆ ಫೆಬ್ರವರಿ ಹದಿನಾಲ್ಕು ಅನ್ನೋ ಹೊತ್ತಿಗೆ ಗುಂಡಣ್ಣನ ಟೀಂ ಚೇಂಜಾಗೋ ಸಮಯ ಬಂದಿತ್ತು.  ಮಾರನೇ ದಿನದಿಂದ್ಲೇ ಬೇರೆ ಬಿಲ್ಡಿಂಗಲ್ಲಿ ಕೆಲ್ಸ. ಇವತ್ತು ಏನಾದ್ರೂ ಮಾಡಿ ಅವ್ಳತ್ರ ಮಾತಾಡ್ಲೇ ಬೇಕು ಅಂದ್ಕೊಂಡ್ರೂ, ಏನು ಮಾತಾಡೋದು ಅಂತ ಯೋಚ್ನೆ ಮಾಡ್ತಾ ಬರೋ ಹೊತ್ತಿಗೆ ಬಸ್ ಬಂದಾಗಿತ್ತು. ಅವ್ಳೇನೋ ಬಸ್ಸಲ್ಲಿದ್ಲು. ಆದ್ರೆ ಕೈಯಲ್ಲಿದ್ದ ಮೊಬೈಲಲ್ಲಿ ಯಾರ ಜೊತೆಗೋ ಮಾತು.ಅವ್ಳ ಮಾತು ಮುಗಿಯೋ ಹೊತ್ತಿಗೆ ಆಫೀಸ್ ಬಂದಿತ್ತು. ಗುಂಡಣ್ಣ ಏನೋ ಹೇಳೋಕೆ ಪರದಾಡ್ತಿದ್ದನ್ನ ನೋಡಿದ್ದ ಅವಳು ಅದೇನಿರಬಹುದೆಂದು ಊಹಿಸಿದ್ರೂ ಏನು ಅಂತ ಅನೇಕ ಸಾರಿ ಸಂಜ್ಝೆ ಮಾಡಿದ್ಲು. ಅವ ಹೇಳೋಕೆ ಪ್ರಯತ್ನ ಮಾಡಿದಾಗೆಲ್ಲಾ ಧೈರ್ಯ ಸಾಕಾಗ್ತಿರಲಿಲ್ಲ. ಈ ಸರ್ಕಸ್ಸಲ್ಲಿದ್ದಾಗ ಆಫೀಸ್ ಬಂದಿತ್ತು. ಕೊನೆಗೂ ಧೈರ್ಯ ಮಾಡಿ ನಿಮ್ಮ ನಂಬರ್ ಕೊಡ್ತೀರಾ ಅಂದ. ಹೂಂ. ಸೇವ್ ಮಾಡ್ಕೊಳ್ಳಿ ಅಂತಂದ್ರೆ ಮೊಬೈಲಿಗೆ ಕಿಸೆಗೆ ಕೈ ಹಾಕಿದ್ರೆ ಮೊಬೈಲಿಲ್ಲ. ಅವ್ಳತ್ರ ಅಂದ್ಕೊಂಡಿದ್ದು ಹೇಳೇ ಬಿಡೋ ಉಮ್ಮೇದಿನ ಗಡಿಬಿಡಿಯಲ್ಲಿ ಮೊಬೈಲು ಮನೇಲೇ ಮರೆತು ಬಿಟ್ಟಿದ್ದ. ಇವ ತಡಕಾಡುತ್ತಿದ್ದನ್ನ ನೋಡಿದ ಅವಳು ಹೋಗ್ಲಿ ನಾನೇ ಮಿಸ್ ಕಾಲ್ ಕೊಡ್ತೀನಿ ಬಿಡಿ. ಹೇಳಿ ನಿಂ ನಂಬರ್ರು ಅಂತ ಬಸ್ಸಿಳಿದು ಮುಂದೆ ಹೊರಟ್ಳು. ಅವ್ಳು ಅದ್ನ ಟೈಪ್ ಮಾಡಿ ಇನ್ನೇನು ಕಾಲ್ ಒತ್ಬೇಕು. ಅಷ್ಟರಲ್ಲಿ ಅವ್ಳ ಮೊಬೈಲು ಸ್ವಿಚ್ಛಾಫ್ ! ದರಿದ್ರ ಬ್ಯಾಟ್ರಿ ಆಗ್ಲೇ ಡೌನಾಗ್ಬೇಕೆ ? ಅದ್ಯಾವ್ದೋ ಎಸ್ಕಲೇಷನ್ ಆಗಿದ್ಯಂತೆ ಕಣೆ ಅಂತ ಒಡ್ತಿದ್ದ ಪಕ್ಕದ ಸಹೋದ್ಯೋಗಿ ಜೊತೆಗೆ ಇವ್ಳೂ ಓಡ್ಬೇಕಾಗಿ ಬಂದಿತ್ತು. ಗುಂಡಣ್ಣನ ಆಸೆಗಳು ಜಸ್ಟ್ ಮಿಸ್ಸಾಗಿತ್ತು !

ಮನೇಲಿ ಮರ್ತು ಬಂದಿದ್ದ ತನ್ನ ಮೊಬೈಲಿಗೆ ಬಯ್ಯಲಾ, ಬ್ಯಾಟ್ರಿ ಡೌನಾದ ಅವ್ಳ ಮೊಬೈಲಿಗೆ ಬಯ್ಯಲಾ ಅನ್ನೋ ಆಲೋಚನೆಯಲ್ಲೇ ತಿಂಗಳೊಂದು ಕಳೆದೋಗಿತ್ತು ! ಮಿಸ್ಸಾದವ್ಳಿಗೆ ತಲೆ ಕೆಡಿಸಿಕೊಳ್ಳೋದು ಬೇಡ ಅಂತ್ಕೊಳ್ಳೋ ಸಂದರ್ಭದಲ್ಲೇ ಫೇಸ್ಬುಕ್ಕಿನ ಫ್ರೆಂಡ್ ಸಜೆಷನ್ನಲ್ಲಿ ಅವ್ಳ ಹೆಸ್ರು ಬಂದಿತ್ತು !! ಇನ್ನೇನು Add Friend ಕೊಡ್ಬೇಕು. ಅಷ್ಟರಲ್ಲಿ ನೆಟ್ ಢಮಾರ್ ! ಹೊತ್ತಲ್ಲದ ಹೊತ್ತಲ್ಲಿ ಕರೆಂಟ್ ತೆಗ್ಯೊ ಕೆಇಬಿಯವ್ರಿಂದ ಮತ್ತೊಂದು ಜಸ್ಟ್ ಮಿಸ್ಸು !

ಕರೆಂಟ್ ಬಂದ ಮೇಲೆ ಹುಡ್ಕೇ ಹುಡ್ಕಿದ. ಸಿಗ್ಲಿಲ್ಲ ಅವ್ಳು. ಅವ್ಳ ಫೋಟೋ ಕಂಡ ಖುಷಿಯಲ್ಲಿ ಫೇಸ್ಬುಕಲ್ಲಿ ಅವ್ಳ ಮೊದಲ ಹೆಸ್ರು, ಕೊನೆ ಹೆಸ್ರು ಏನಿದೆ ಅಂತ ನೋಡ್ಕೊಳ್ಳೋದೇ ಮರೆತಿದ್ದ. ಅದ್ಕೆ ಬಯ್ಕೊಳ್ಳೋದ್ರಲ್ಲಿ ಮತ್ತೆ ಹದಿನೈದು ದಿನ ಕಳೆದೋಗಿತ್ತು ! ಅವಳ ಹೆಸರ ಅಂದಾಜಿನ ಮೇಲೆ ಆಫೀಸಿನ ಐಡಿಗಳಲ್ಲಿ ಹುಡುಕುತ್ತಾ ಕೊನೆಗೂ ಅವಳಿರಬಹುದೆಂಬ ಐಡಿ ಹುಡುಕಿದ್ದ. ಇದ್ರಲ್ಲಾದ್ರೂ ಹುಡ್ಕೋಣ ಅಂತ ಪಿಂಗ್ ಮಾಡಿದ.
ಇವ: ಹಾಯ್
ಅವಳು: ಹಾಯ್
ಇವ: ನೀವು ರೂಟ್ ನಂ ೧೪೦ರ ಇವರಲ್ವಾ ?
ಅವಳು:ಹೌದು. ನೀವು ?
ಇವ: ನಾನು ಇವ. ಟ್ರಿಪ್ಪಲ್ಲಿ ಸಿಕ್ಕವ. .. ಬರ್ದೇ ಬರದ. ಇನ್ನೇನು ಎಂಟರ್ ಒತ್ಬೇಕು ಅನ್ನೋ ಅಷ್ಟು ಹೊತ್ತಿಗೆ ಲ್ಯಾಪ್ತಾಪ್ ರೀಬೂಟ್ !!! ನಿಮ್ಮ ಲ್ಯಾಪ್ಟಾಪ್ ೧೫ ನಿಮಿಷದಲ್ಲಿ ರೀಬೂಟ್ ಆಗತ್ತೆ ಅಂತ ಬಂದ ಸಂದೇಶದಲ್ಲಿನ ನಿಮಿಷಗಳು ಕಡಿಮೆ ಆಗ್ತಿದ್ದನ್ನ ಗಮನಿಸೇ ಇರ್ಲಿಲ್ಲ. ಐಡಿ ಸಿಕ್ಕಿದ್ದೇನೋ ಹೌದು. ಆದ್ರೆ ಸೇವ್ ಮಾಡ್ಕೊಂಡಿಲ್ವೆ ? ತಾನ್ಯಾರು ಅಂತ ಹೇಳಿದ್ರೆ ಆ ಕಡೆ ಅವ್ರಾದ್ರೂ ಸೇವ್ ಮಾಡ್ಕೊಳ್ತಿದ್ರೇನೋ ? ಆದ್ರೆ ಅದೂ ಜಸ್ಟ್ ಮಿಸ್ ! ರಿಬೂಟಾದ ಲ್ಯಾಪ್ಟಾಪ್ ಆನೇ ಆಗ್ಬಾರ್ದೇ ? ತಾಂತ್ರಿಕ ದೋಷವಿದೆ , ಐಟಿಯವ್ರನ್ನ ಸಂಪರ್ಕಿಸಿ ಅಂತ ಸಂದೇಶ ಕೊಡ್ತಾ ಇದ್ರೆ ಮತ್ತೊಂದು ಜಸ್ಟ್ ಮಿಸ್ಸಿಂದ ಬೇಸತ್ತ ಗುಂಡಣ್ಣ ಆ ಲ್ಯಾಪ್ಟಾಪನ್ನ ಮರೆತು ಹೋದ ಮೊಬೈಲ ಸಮೇತ ನೆಲಕ್ಕೆ ಕುಕ್ಕುವಷ್ಟು ಸಿಟ್ಟಾಗಿದ್ದ !

ಇನ್ನೂ ಒಂದಿಷ್ಟು ದಿನ ಹೋಯ್ತು.ಅವಳಿದ್ದ ಬಿಲ್ಡಿಂಗಿಗೇ ತನ್ನ ಪ್ರಾಜೆಕ್ಟ್ ಬದಲಾದಾಗ ಗುಂಡಣ್ಣನ ಖುಷಿಗೆ ಸಾಟಿಯಿಲ್ಲ. ಬ್ಯಾಟ್ರಿ ಫುಲ್ಲಾಗಿರೋ ಮೊಬೈಲು, ಲ್ಯಾಪ್ಟಾಪೊಂದಿಗೆ, ಅವಳು ಬರೋ ಸಮಯದ ಬಸ್ಸಿಗೆ ಸರಿಯಾಗಿ. ಮತ್ತೊಂದಿಷ್ಟು ಜಸ್ಟ್ ಮಿಸ್ಸುಗಳಿಗೆ ರೆಡಿಯಾಗಿ :-) 

Sunday, June 12, 2016

ನಾ ನೋಡಿದ ಸಿನಿಮಾ: ಗೋಧಿ ಬಣ್ಣ, ಸಾಧಾರಣ ಮೈಕಟ್ಟು


Image Taken from Wikipedia 
ದೃಶ್ಯ ೧:ತಿಮ್ಮಪ್ಪ..ಆ ನೈಫ್ ಕಿತ್ಕೊಳ್ಳಿ. ಢಂ. ಢಂ. ಸತ್ತ ಕಳ್ಳನ ಕೈಗೆ ರಿವಾಲ್ವರ್ ಕೊಟ್ಟು ಆರೋಪ ಅವ್ನ ಮೇಲೆ ಹೊರ್ಸೋಣ ಅಂತ ಹೋಗ್ತಾ ಖಾಕಿ ಖದೀಮ ಹೋಗ್ತಾ ಇದ್ರೆ ಕಳ್ಳನಿಗೆ ಸಡನ್ನಾಗಿ ಪ್ರಜ್ಞೆ ಬಂದು ರಿವಾಲ್ವರ್ ಕಿತ್ಕೋತಾನೆ. ಢಂ.ಢಂ.ಢಂ ! ಶಾಟ್ ಕಂಪ್ಲೀಟ್ !!
ದೃಶ್ಯ ೨: ಹೀರೋಗೆ ಮಧ್ಯರಾತ್ರಿ ಎಚ್ಚರ ಆಗುತ್ತೆ. ಮನೇಲಿರೋ ಹಳೇ ಟೀವಿ ಸಡನ್ನಾಗಿ ಆನ್. ಅದ್ರಲ್ಲಿ ಭಯ ಹುಟ್ಟಿಸುವಂಗೆ ಗೆರೆಗಳು ಬರ್ತಾ ಇದೆ. ಪಕ್ಕಕ್ಕೆ ಕತ್ತು ತಿರುಗಿಸಿದ್ರೆ ಭಯಾನಕವಾಗಿರೋ ಒಬ್ಬ ಹುಡುಗ. ಲೈಟಾಗಿರೊ ತೆಗೆದು ಹಾಕ್ಕೋತಿರೋ ಬಾಗಿಲು ಸಂದಿಯಿಂದ ಬೆಳಕು ಬರ್ತಾ ಇದೆ. ಮತ್ತೆ ಕತ್ತು ತಿರುಗಿಸಿದ್ರೆ ಭೂತ ! ಬಾಗಿಲು ತೆಗೆದು ತಲೆ ಹೊರಹಾಕಿದ್ರೆ ಕಣ್ಣುಕುಕ್ಕುವಂತೆ ಲೈಟ್ ಹಾಕ್ಕೊಂಡು ಗುದ್ದೋಕಂತ್ಲೇ ಬರ್ತಿರೋ ವಾಹನಗಳು. ಹಿಂದೆ ತಿರುಗಿ ನೋಡಿದ್ರೆ ಅಲ್ಲೂ ವಾಹನಗಳು. ರಸ್ತೆ ಮಧ್ಯದಲ್ಲಿ ತಾನು. ಆ ಕಡೆ ದಾಟೋಕೆ ಪ್ರಯತ್ನ ಮಾಡ್ತಿರೋ ಅಪ್ಪ. ತಡಿ ಅಣ್ಣ, ನಾನೂ ಬರ್ತೀನಿ ಅನ್ನೋದ್ರೊಳಗೆ ಧಡಾರೆಂದು ಅಡ್ಡಬಂದ ವಾಹನ . ಪಟ್ಟಂತ ನಾಯಕನಿಗೆ ಎಚ್ಚರವಾಗುತ್ತೆ. ಹಿಂದೆ ನಡೆದಿದ್ದೆಲ್ಲಾ ಕನಸು !
ದೃಶ್ಯ ೩: ಎರಡು ತರದ ನಾಯಿ ಇರುತ್ತೆ. ಒಂದು ಕರಿ ನಾಯಿ. ಇನ್ನೊಂದು ಬಿಳಿ ನಾಯಿ. ದ್ವೇಷ, ಅಸೂಯೆ, ಹಿಂಸೆ.. ಇವೆಲ್ಲಾ ಕರಿನಾಯಿ. ಪ್ರೀತಿ, ಸತ್ಯ ಇವೆಲ್ಲಾ ಬಿಳಿನಾಯಿ. ನಮ್ಮೊಳಗಿರೋ ಈ ಎರಡೂ ನಾಯಿಗಳೂ ಪರಸ್ಪರ ಕಚ್ಚಾಡ್ತಾ ಇರುತ್ವೆ. ಇದ್ರಲ್ಲಿ ಗೆಲ್ಲೋದ್ಯಾರು ? ಈ ಯಾವ ನಾಯಿಗೆ ಜಾಸ್ತಿ ಬಿಸ್ಕೇಟ್ ಹಾಕ್ತೀಯೋ ಅದು !!!
ದೃಶ್ಯ ೪:ಅಪ್ಪ ಮಗ ಕ್ರಿಕೆಟ್ ನೋಡ್ತಿರ್ತಾರೆ. ಲಕ್ಷ್ಮಣ್ ಬಂದಾಗ ಬಂದ ನೋಡು ಕುಟುಕೇಶ ಅಂತ ಅಪ್ಪ ಅಂತಿದ್ರೆ ಥಿಯೇಟರ್ ಫುಲ್ ಶಿಳ್ಳೆ.. ಚಿತ್ರವೊಂದು ಕನೆಕ್ಟ್ ಆಗೋದು ಹಿಂಗೇನಾ ಅನ್ಸಿಬಿಡುತ್ತೆ !
ಎರಡೂವರೆ ಘಂಟೆ ಆಚೀಚೆ ಕದಲದಂತೆ ಹಿಡಿದಿಟ್ಟ ಚಿತ್ರದ ಕೆಲ ಸ್ಯಾಂಪಲ್ಲುಗಳಷ್ಟೇ ಇದು. ಕೆಲಕಡೆ ಹಾರರ್ ಮೂವಿಯಂತೆ, ಕೆಲವೆಡೆ ಸಸ್ಪೆನ್ಸ್ ಥ್ರಿಲ್ಲರ್ರಿನಂತೆ, ಐಟಿ ಉದ್ಯೋಗಿಯೊಬ್ಬನ ತೊಳಲಾಟಗಳಂತೆ, ಅಪ್ಪ-ಮಗನ ಭಾವಗಳ ಬಿಂಬದಂತೆ, ಅಪ್ಪನ ಪ್ರೀತಿಯ ಮಗನೂ ಪುನರಾವರ್ತಿಸುವಂತೆ,ಕೊಲೆಯ ಹುಡುಕಾಟದಂತೆ, .. ಹಿಂಗೆ ಹುಡುಕಿದಷ್ಟೂ ಆಯಾಮ ಚಿತ್ರಕ್ಕೆ.
ಯಾವ ಚಿತ್ರದ ಬಗ್ಗೆ ಹೇಳ್ತಿದೀನಿ ಅಂತ ಈಗಾಗ್ಲೇ ಗೊತ್ತಾಗಿರ್ಬೇಕಲ್ಲ. ಅದೇ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು.

ಚಿತ್ರ ಶುರುವಾಗ್ತಿದ್ದಂಗೆ ಎರಡು ಆಯಾಮಗಳಲ್ಲಿ ಕತೆ ಸಾಗೋಕೆ ಶುರುವಾಗುತ್ತೆ. ಕಾರಲ್ಲಿ ಹೋಗ್ತಿರೋ ಕತೆ ನೋಡೋದಾ ರಕ್ಷಿತ್ ಶೆಟ್ಟಿ-ಅನಂತ್ ನಾಗ್ ಜುಗಲ್ಬಂದಿ ನೋಡೋದಾ ಅನ್ನೋ ಗೊಂದಲದಲ್ಲಿರುವಾಗ್ಲೇ ಒಂದೊಂದು ಟ್ಯೂನುಗಳು ಶುರುವಾಗುತ್ತೆ. ಸನ್ನಿವೇಶಕ್ಕೆ, ಭಾವಕ್ಕೆ ತಕ್ಕಂತಾ ಹಾಡುಗಳು. ಹಾಡಲ್ಲಿ ಹೀರೋ ಹೀರೋಯಿನ್ನು ಮರ ಸುತ್ತುತಾ ಇದ್ರೆ ಹಾಡಲ್ಲೇನಿದೆ ಅಂತ ಅರ್ಥ ಮಾಡ್ಕೊಳ್ಳೋ ಪ್ರಯತ್ನ ಮಾಡ್ಬೋದು. ಆದ್ರೆ ಹಾಡಿನ ಸಾಹಿತ್ಯ ಅರ್ಥಮಾಡ್ಕೊಳ್ಳೋದಾ, ಚಿತ್ರದ ಸಬ್ ಟೈಟಲ್ ಓದೋದಾ ? ಅಥವಾ ಜೊತೆ ಜೊತೆಗೇ ಓಡ್ತಿರೋ ಕತೆ ಕಡೆ ಗಮನ ಕೊಡೋದಾ ಅನ್ನೋ ಗೊಂದಲದಲ್ಲಿ ನಾವೇ ಕಳೆದುಹೋದ ಭಾವ. ಗುಲಾಬ್ ಜಾಮೂನ್, ಜಹಾಂಗೀರ್, ಚಂಪಾಕಲಿ ಒಟ್ಟೊಟ್ಟಿಗೇ ಕೊಟ್ಟು ಎಲ್ಲಾ ತಿನ್ನು ಅಂದಂಗಿದು !

ಇಲ್ಲಿಯವರೆಗೆ ಬಂದ ವಿಮರ್ಶೆಗಳಲ್ಲೆಲ್ಲಾ ಅನಂತನಾಗರ ಅಭಿನಯದ ಬಗ್ಗೆ ಸಾಕಷ್ಟು ಪ್ರಶಂಸೆ ಕೇಳಿಬಂದಿದೆ. ಅದ್ನ ಓದಿ, ಓದಿ ನಂಗೆ ರಕ್ಷಿತ್ ಶೆಟ್ಟಿ ಚಿತ್ರದಲ್ಲಿ ಪೋಷಕ ಪಾತ್ರದ ತರ ಬಂದೋಗ್ತಾರಾ ಅನ್ನಿಸಿಬಿಟ್ಟಿತ್ತು ! ಆದ್ರೆ ಹಂಗೇನಿಲ್ಲ. ಜೀವನದಲ್ಲಿ ಏನೋ ಸಾಧಿಸಬೇಕು ಅನ್ನೋ ಹಟದಲ್ಲಿ, ಅಪ್ಪನಿಗೆ, ಪ್ರಪಂಚಕ್ಕೆ, ತನಗೇ ಸುಳ್ಳು ಹೇಳಿಕೊಳ್ಳುತ್ತಾ ಬದುಕೋ ಅತ್ತಲೋ ಇತ್ತಲೋ ಎಂಬ ತೊಳಲಾಟದ ಪಾತ್ರದಲ್ಲಿ ರಕ್ಷಿತ್ ಚೆನ್ನಾಗೇ ನಟಿಸಿದ್ದಾರೆ. ಅನಂತನಾಗ್ ನಟಿಸಿಲ್ಲ ಅಂತಲ್ಲ. ಅವರು ಚಿತ್ರದಲ್ಲಿ ಎಷ್ಟು ಆವರಿಸಿಕೊಂಡಿದಾರೆ ಅಂದ್ರೆ ಅದು ನಟನೆಯಲ್ಲ, ನಮ್ಮ ನಿಮ್ಮ ಪಕ್ಕದಲ್ಲೆಲ್ಲೋ ಇರೋ ವೆಂಕೋಬರಾವ್ ಅನಿಸಿಬಿಡುತ್ತೆ. ನಿಜಜೀವನದ ಘಟನೆಗಳನ್ನೇ ಯಾರೋ ಕ್ಯಾಮರಾ ಇಟ್ಟು ಶೂಟ್ ಮಾಡಿದ್ದಾರಾ ಅಂತ್ಲೂ ಅನಿಸಿಬಿಡುತ್ತೆ. ರಕ್ಷಿತ್ ಶೆಟ್ಟಿ ಹೇರ್ ಸ್ಟೈಲ್ ಎರಡು ಕಡೆ ಮಾತ್ರ ಬದಲಾದ್ರೆ ಅನಂತ್ ನಾಗರ ಹೇರ್ ಸ್ಟೈಲು ಅನೇಕ ಸಾರಿ ಬದಲಾಗುತ್ತೆ !
ಹಂಗಂತಾ ಚಿತ್ರದಲ್ಲಿ ಇನ್ಯಾರೂ ಇಲ್ಲವೇ ಇಲ್ಲ ಅಂತಿಲ್ಲ. ಕ್ಯೂಟಾಗಿರೋ ಡಾಕ್ಟರ್ ಸಹನಾ ಆಗಿ ಶ್ರುತಿ ಹರಿಹರನ್, ಅಚ್ಯುತ್ ಕುಮಾರ್,ಚಿತ್ರದಲ್ಲಿನ ಅವರ ಕುಟುಂಬ, ದತ್ತಣ್ಣ ,ವಿಲನ್ ಆದ್ರೂ ಇಷ್ಟ ಆಗೋ ವಸಿಷ್ಟ, ಪುಷ್ಪನ್ ಲವ್ ಸ್ಟೋರಿ ಹಿಂಗೆ ಬಂದರೆಲ್ಲಾ ಇಷ್ಟ ಆಗ್ತಾರೆ.

ಚಿತ್ರ ಅಂದ್ರೆ ಒಂದೆರಡು ಫೈಟು, ಮಸಾಲೆ ಸಾಂಗು, ಡಬಲ್ ಮೀನಿಂಗ್ ಡೈಲಾಗುಗಳು, ಅನಾವಶ್ಯಕವಾಗಿ ಹೀರೋ ಕೈಯಲ್ಲಿ ಹೊಡೆತ ತಿನ್ನುತ್ತಾ, ಪೆದ್ದುಪೆದ್ದಾಗಿ ಆಡೋದನ್ನೇ ಹಾಸ್ಯ ಅಂದ್ಕೊಂಡಿರೋ ಹಾಸ್ಯನಟರು ಇಷ್ಟೇನಾ ಅನ್ನಿಸಿಬಿಟ್ಟಿತ್ತು ಇತ್ತೀಚಿಗಿನ ಚಿತ್ರಗಳಲ್ಲಿ. ಆದ್ರೆ ಇತ್ತೀಚೆಗೆ ಭಿನ್ನರೀತಿಯ ಕತೆ ಹೊಂದಿರೋ ಚಿತ್ರಗಳು ಹೊರಬಂದು ಅವು ಹಿಟ್ಟೂ ಆಗ್ತಿರೋದು ಖುಷಿ ಕೊಡ್ತಿದೆ.  ಮಧ್ಯ ಮಧ್ಯ ಬರೋ ಹುಡ್ಕೋದು ಬದಲು ಕುಡ್ಕೋದು ಅನ್ನೋ ಪ್ರಯೋಗಗಳು, ರಜಾಕು, ರಜಾಕು ಮುಂತಾದ ಸನ್ನಿವೇಶಗಳು ಯಾವ ಕಾಮಿಡಿಯನ್ನಿಲ್ಲದೇ ಇದ್ರೂ ನಗು ತರಿಸುತ್ತೆ. ಎಲ್ಲೂ ಅನಾವಶ್ಯಕ ಅನಿಸದಂತೆ ಈ ತರದ ಸನ್ನಿವೇಶಗಳನ್ನೂ ಇಟ್ಟು ಪ್ರೇಕ್ಷಕರಿಗೆ ಚಿತ್ರದ ಏಕತಾನತೆ ಬೋರ್ ಹಿಡಿಸದಂತೆ ಮಾಡಿರೋ ನಿರ್ದೇಶಕರ ಜಾಣ್ಮೆ ಮೆಚ್ಚುವಂತದ್ದೇ. ಅಲ್ಜೀಮರ್ಸ್ ಕಾಯಿಲೆ ಬಗೆಗೆ ಹಿಂದಿಯಲ್ಲೊಂದು ಚಿತ್ರ ಬಂದಿತ್ತು. ಬ್ಲಾಕ್ ಅಂತ. ಅದಕ್ಕೆ ಹೋಲಿಸಿ ಈ ಸಿನಿಮಾದಲಿನ ಒಂದಿಷ್ಟು ತಾಂತ್ರಿಕ, ವೈದ್ಯಕೀಯ ದೋಷಗಳನ್ನು ಪಟ್ಟಿ ಮಾಡ್ಬೋದಾದ್ರೂ ಅಂತದ್ಯಾವುದೂ ಎರಡೂವರೆ ಘಂಟೆಗಳ ನಂತರ ನೆನಪಿರೋಲ್ಲ. ನೆನಪಿರೋದು ಒಂದೊಳ್ಳೆ ಕತೆಗೆ ಇನ್ನೂ ಒಳ್ಳೆ ನಿರೂಪಣೆಯಷ್ಟೇ.   ಇನ್ನೂ ನೋಡಿಲ್ಲದೇ ಇದ್ರೆ, ಆರಾಮಾಗಿ ಹೋಗಿ ಕುಟುಂಬಸಮೇತ ನೋಡ್ಕೊಂಡು ಬರಬಹುದಾದಂತ ಸಿನಿಮಾ..ಅಥವಾ ಹಾಡಿಗೊಂದ್ಸಲ, ಅಭಿನಯಕ್ಕೊಂದ್ಸಲ ಅಂತ ಮತ್ತೆ ಮತ್ತೆ ಹೋಗ್ಬರ್ಬೋದು !



Monday, June 6, 2016

ತಿಥಿ

ಒಂಚೂರು ವಿಭಿನ್ನ ಪ್ರಯತ್ನದ, ಪೂರ್ಣ ಹೊಸಬರ, ಯಾವುದೇ ವಿವಾದಗಳಿಲ್ಲದ ಕನ್ನಡ ಸಿನಿಮಾವೊಂದು ಥಿಯೇಟ್ರಲ್ಲಿ ಓಡ್ಬೇಕೂಂದ್ರೆ ಒಂದೋ ಅದಕ್ಕೆ ವಿಪರೀತ ಹೈಪ್ ಕೊಡ್ಬೇಕು ಇಲ್ಲಾ ಅದು ರಿಲೀಸ್ ಆಗೋ ಮೊದಲೇ ಅದು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದ ಯಾವುದಾದ್ರೂ ಪ್ರಶಸ್ತಿ ಬರ್ಬೇಕು ಅನ್ನೋ ಪರಿಸ್ಥಿತಿ ಬಂದೋಗಿದೆ ! ಗಟ್ಟಿ ಕತೆ, ನಿರೂಪಣೆಯಿಲ್ಲದ ಕಾರಣ ಕನ್ನಡ ಚಿತ್ರಗಳ ಸಾಲು ಸಾಲು ಸೋಲಿಗೆ ಇಲ್ಲಿನ ನಿರ್ದೇಶಕರು ಎಷ್ಟು ಕಾರಣರೋ ಅಷ್ಟೇ ಕಾರಣರು ಇಲ್ಲಿನ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸುಗಳು. ತೆಲುಗು , ತಮಿಳು, ಹಿಂದಿ , ಇಂಗ್ಲೀಷ್ ಚಿತ್ರಗಳನ್ನೇ ಇಡೀ ದಿನ ತೋರಿಸುತ್ತಾ ಕನ್ನಡ ಸಿನಿಮಾಕ್ಕೆ ದಿನಕ್ಕೊಂದು ಶೋ ನೀಡುವುದೇ ದೊಡ್ಡ ಕನ್ನಡಸೇವೆ ಅಂತ ಅನೇಕರು ಭಾವಿಸಿದ್ದಂಗಿದೆ. ಇನ್ನು ಕೆಲವೊಂದು ಅಂತರ್ಜಾಲದ ತಾಣಗಳೂ ಕನ್ನಡ ಸಿನಿಮಾಗಳು ಥಿಯೇಟರ್ಗಳಿಂದ ಎತ್ತಂಗಡಿಯಾಗೋಕೆ ಭರಪೂರ ಕಾಣಿಕೆ ಕೊಡ್ತಿರೋದು ಗುಟ್ಟಾಗೇನುಳಿದಿಲ್ಲ. ಕನ್ನಡ ಸಿನಿಮಾಗಳಿಗೆ ಯಾವಾಗ ನೋಡಿದ್ರೂ ಎಲ್ಲಾ ಸೀಟುಗಳನ್ನು ಬುಕ್ಕಾಗಿ ತೋರಿಸೋ ಈ ತಾಣಗಳ ಮಧ್ಯ ಜನ ಇಲ್ಲ ಅಂತ ಆ ಚಿತ್ರವನ್ನು ಥಿಯೇಟ್ರಿಂದ ಎತ್ತಂಗಡಿ ಮಾಡೋ ಥಿಯೇಟ್ರಗಳ ನಡುವೆ ಏನೂ ಇಲ್ಲ ಅಂದ್ರೆ ನಂಬೋಕಾಗುತ್ತಾ ? ಇನ್ನು ನಾಲ್ಕೈದು ತೆರೆಗಳಿದ್ರೂ ಕನ್ನಡ ಚಿತ್ರಕ್ಕೆ ಒಂದೇ ತೆರೆಯ ಭಾಗ್ಯ. ಅದೂ ಮಟ ಮಟ ಮಧ್ಯಾಹ್ನದ ಒಂದೂವರೆ, ಎರಡೂವರೆಯಂತಹ ಹೆಚ್ಚಿನವರು ಯಾರೂ ಬಾರದ ಸಮಯ ನೀಡೋ ಮಲ್ಟಿಪ್ಲೆಕ್ಸುಗಳೂ ನಡುವೆ ಕನ್ನಡ ಚಿತ್ರಗಳ ತಿಥಿಯಾಗದೇ ಇನ್ನೇನು ? ! ಇಷ್ಟೆಲ್ಲಾ ಅವಾಂತರಗಳ ನಡುವೆಯೂ "ತಿಥಿ" ಚಿತ್ರ ಹೌಸ್ಫುಲ್ಲಾಗಿ ಓಡ್ತಾ ಇದೆ ಅಂದ್ರೆ ಅದ್ರಲ್ಲೇನಿದೆ ಅನ್ನೋ ಕುತೂಹಲ ನಿಮ್ಮಂತೆಯೇ ನನಗೂ ಕಾಡಿ ಥಿಯೇಟ್ರವರೆಗೂ ಹೋಗಿ ಹೌಸ್ಫುಲ್ ಬೋರ್ಡ್ ನೋಡಿ ಎರಡನೇ ಪ್ರಯತ್ನದಲ್ಲಿ ಅಂತೂ ಸಿನಿಮಾ ನೋಡಾಯ್ತು ಮತ್ತು ಪೇಪರಲ್ಲಿ ಬಂದಿದ್ದ ವಿಮರ್ಶೆಗಳನ್ನೋದಿ ಏನಂದ್ಕೊಂಡಿದ್ನೋ ಅವೆಲ್ಲಾ ನಿರೀಕ್ಷೆಗಳ ತಿಥಿಯಾಯ್ತು !

ಚಿತ್ರದ ಪ್ರಧಾನಪಾತ್ರ ಸೆಂಚುರಿಗೌಡ್ರು. ಅವರ ಅಭಿನಯದ ಬಗ್ಗೆ ಕನ್ನಡದ ಹಿರಿಯ ನಟರೆಲ್ಲಾ ಪ್ರಶಂಸಿದ್ದಾರೆ ಎಂದೊಂದು ಬರಹವನ್ನು ಓದಿದ್ದೆ, ಕನ್ನಡದ ಪತ್ರಿಕೆಯೊಂದರಲ್ಲಿ. ತಮ್ಮ ಮೊದಲ ಚಿತ್ರದ ಮೊದಲ ದೃಶ್ಯದಲ್ಲೇ ಗೌಡರು ಮನಸೆಳೆದರೂ ಅದರಲ್ಲಿ ಅವರು ಹಳ್ಳಿಯಲ್ಲಿದ್ದಂತೇ ತೆಗೆಯಲಾಗಿದೆಯೇ ಹೊರತು ಪತ್ರಿಕೆಯಲ್ಲಿ ಬಂದ ಮಟ್ಟದ್ದೇನಿಲ್ಲ. ಬದಲಿಗೆ ಕತೆಯೇ ಚಿತ್ರದ ನಾಯಕ ಅಂತ ಅನೇಕ ಬಾರಿ ಅನಿಸಿದ್ದುಂಟು.  ಚಿತ್ರದಲ್ಲಿ ಬರೋ ಟೈಗರ್ ಅಥವಾ ಗಡ್ಡಪ್ಪನೇ ಚಿತ್ರದ ಅಸಲೀ ನಾಯಕನಂತೆ ಭಾಸವಾಗುತ್ತಾನೆ. ತಮ್ಮಣ್ಣ , ಶಾನುಭೋಗ, ಕಮಲಕ್ಕ, ಅಭಿ ಮತ್ತು ಕುರಿಗಾಹಿಯ ಹುಡುಗಿ ಮುಂತಾದ ಪಾತ್ರಗಳನ್ನು ಕತೆಯೇ ಆಗಾಗ ಬದಲಾಯಿಸುತ್ತಾ ಒಮ್ಮೆ ಖಳನಾಗಿಯೂ ಒಮ್ಮೆ ಅನುಕಂಪದ ಪಾತ್ರರನ್ನಾಗಿಯೂ ಮಾಡುತ್ತೆ. ಇನ್ನು ಕುರಿ ಕಾಯುವವರ ಹಿಂದೆ ಹದಿನೈದು ದಿನಗಟ್ಟಲೇ ಅಲೆದು ಅವರಿಂದ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿದ್ದೇವೆ ಎಂದು ಚಿತ್ರದ ನಿರ್ದೇಶಕರು ಹೇಳಿದ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದಿತ್ತು. ಕುರಿಗಾಹಿಗಳ ಮಧ್ಯದ ಹಗಲು ರಾತ್ರಿಯ ದೃಶ್ಯಗಳು, ಮೂಗು ಚುಚ್ಚುವ ಸಂದರ್ಭದ ಹಾಡು ಬಂದಿದೆಯಾದ್ರೂ ಅಂಥಾ ಕ್ಲಾಸಿಕ್ ಅನ್ನುವಂತಹ ಛಾಯಾಗ್ರಹಣವಾಗಲೀ, ಸಂಭಾಷಣೆಯಾಗಲೀ ಇಲ್ಲ. ಹುಬ್ಬಳ್ಳಿ-ಧಾರವಾಡ ಶೈಲಿಯ ಮಾತುಕತೆ ಬಿಟ್ರೆ ಮತ್ತಿನ್ನೇನು ವಿಶೇಷ ಕಾಣೋಲ್ಲ. ಕೆಲವೊಂದು ಕಡೆಯಂತೂ ನಿರೂಪಣೆಯನ್ನು ಇನ್ನೂ ಬಿಗಿಗೊಳಿಸಬೇಕಾದ ಅಥವಾ ಚಿತ್ರವನ್ನು ಮತ್ತೊಮ್ಮೆ ಸಂಕಲಿಸಬೇಕಾದ ಅಗತ್ಯ ಕಾಣುತ್ತೆ. ಉದಾಹರಣೆಗೆ ಕುರಿಗಾಹಿಯ ಹುಡುಗಿ ಒಂದಿಷ್ಟು ಸಾಮಾನು ಕೊಳ್ಳೋಕೆ ಬಂದಿರ್ತಾಳೆ. ಆ ಸಮಯದಲ್ಲಿ ಆ ಅಂಗಡಿಯವ ಮಂಡ್ಯದ ಭಾಷೆ ಬಿಟ್ಟು ಪಕ್ಕಾ ಗ್ರಾಂಥಿಕ ಕನ್ನಡ ಮಾತನಾಡೋಕೆ ಶುರು ಮಾಡ್ತಾನೆ. ಕುರಿ ಕದಿಯೋಕೆ ಟ್ರ್ಯಾಕ್ಟರ್ ಅಲ್ಲಿ ಬಂದ್ರೂ ಅದ್ರ ಶಬ್ದ ಯಾರಿಗೂ ಗೊತ್ತಾಗದೇ ಇರೋದು, ಸೆಂಚುರಿಗೌಡ್ರಿಗೆ ಇರೋದು ಮರಿಮಗ ಅಷ್ಟೇ ಆದ್ರೂ ಹರಿಕಥೆ ದಾಸರು ಮರಿ ಮರಿಮಕ್ಕಳು ಎನ್ನೋದು , ಅಪ್ಪ-ಮಗ ಆ ರೇಂಜಿಗೆ ಕಿತ್ತಾಡ್ಕೊಂಡ್ರೂ ಜನ ಆರಾಮಾಗಿ ಬಂದು ತಿಥಿ ಊಟ ಮಾಡೋದು ಎಲ್ಲಾ ಕತೆಯಲ್ಲಿನ ದುರ್ಬಲ ಅಂಶಗಳು ಅಂದುಕೊಳ್ಳದೇ ಪರಿಸ್ಥಿತಿಯ ವೈಪರೀತ್ಯಗಳು ಅಂದ್ಕೊಳ್ಳೋದೇ ಕ್ಷೇಮ ! ಸೆಂಚುರಿಗೌಡ ಉರುಳಿ ಬೀಳೋ ದೃಶ್ಯದ ಸುಮಾರಿಗೆ ಬರೋ ಕೋಳಿ ಕೂಗೋ ದೃಶ್ಯ, ಆಡಿನ ದೃಶ್ಯ ಮುಂತಾದವನ್ನು ಪಕ್ಕಾ ಕ್ಲಾಸಿಕ್ ಅನ್ನುವಂತೆ ಚಿತ್ರೀಕರಿಸಿದ್ರೂ ಸೆಂಚುರಿ ಗೌಡ್ರ ಮಾತುಕತೆಯ ದೃಶ್ಯಗಳನ್ನು ಯಾವುದೋ ಮೊಬೈಲ್ ಕ್ಯಾಮರಾದಿಂದ ತೆಗೆದಂಗಿದೆ ! ಇನ್ನು ಚಿತ್ರದ ಕೊನೆಯನ್ನು ಪ್ರಶ್ನಾರ್ಥಕವಾಗಿ , ಭಾಗ ಎರಡು ಇದೆಯೇನೋ ಎಂಬ ಸಂದೇಹದೊಂದಿಗೆ ಮುಗಿಸೋದೇ ಒಂದು ಶೈಲಿಯಾದೂ ಚಿತ್ರದ ದ್ವಿತೀಯಾರ್ಧ ಮೂಡಿಸಿದ್ದ ಕುತೂಹಲ, ಇನ್ನು ಏನೋ ಆಗುತ್ತೆ ಎಂಬ ಕಾತುರಗಳನ್ನೆಲ್ಲ ಅಲ್ಲೇ ಬಿಟ್ಟು ಚಿತ್ರ ಅರ್ಜೆಂಜರ್ಟೆಂಟಲ್ಲಿ  ಕೊನೆಯಾಗುತ್ತೆ !

ಅಂದ ಮಾತ್ರಕ್ಕೆ ಚಿತ್ರಕ್ಕೆ ಹೋಗೋದು ದುಡ್ಡು ದಂಡ ಅಂತಲ್ಲ. ಹೋಗ್ಲೇಬೇಡಿ ಅಂತಲೂ ಅಲ್ಲ. ಮಂಡ್ಯದ ಸುತ್ತಮುತ್ತಲ ಹಳ್ಳಿಯ ಪರಿಸರವನ್ನು, ಅಲ್ಲಿಯ ಘಟನಾವಳಿಗಳನ್ನ ಕಣ್ಣುತುಂಬಿಸಿಕೊಳ್ಳೋಕೆ ಗ್ಯಾರಂಟಿ ನೋಡಬೇಕಾದ ಚಿತ್ರವಿದು. ಅಕ್ರಮ ಮರಳುಗಾರಿಕೆ, ಮರ ಕಡಿಯೋದು, ಇಸ್ಪೀಟು, ಎಣ್ಣೆ ಮುಂತಾದ ವಿಷಯಗಳಲ್ಲಿ ಸಮಾಜಕ್ಕೊಂದು ಬುದ್ದಿ ಹೇಳೋ ಪ್ರಯತ್ನವಾಗಿ ಕಾಣೋ ಚಿತ್ರ ಹಳ್ಳಿ ಹೈದನ ಕೈಯಲ್ಲಿನ ಚೋಟು ಮೊಬೈಲಲ್ಲಿ ವಯಸ್ಕ ಚಿತ್ರಗಳು, ಕಬ್ಬಿನ ತೋಟ, ಕೆಟ್ಟ ಮೋಟರು, ಧಾರಾವಾಹಿಗಳು, ಹುಲಿ-ಹಸು/ಕುರಿ ಆಟದ ಮಣೆ ಹಿಂಗೆ ತಲೆತಲೆಮಾರುಗಳ ನಡುವಿನ ವ್ಯತ್ಯಾಸವನ್ನು , ಬದಲಾಗುತ್ತಿರೋ ಕಾಲವನ್ನೂ ಸೆರೆಹಿಡಿಯೋ ಪ್ರಯತ್ನ ಮಾಡುತ್ತೆ. ಎಲ್ಲಕ್ಕಿಂತ ಹೆಚ್ಚಿಗೆ ಚಿತ್ರದ ಕತೆಯೇ ಹೇಳುವಂತೆ ಚಿತ್ರದ ತುಂಬೆಲ್ಲಾ ತಿಥಿಯ ಆಚರಣೆಗಳು ತುಂಬಿಕೊಂಡು ಪಕ್ಕಾ ಮಂಡ್ಯದ ಅನುಭವ ಕೊಡುತ್ತೆ. ಎರಡುವರೆ ಘಂಟೆಯಲ್ಲಿ ಮೆಜೆಸ್ಟಿಕ್ಕೂ ತಲುಪಲಾಗದ ಸಂದರ್ಭದಲ್ಲಿರೋ ನಮಗೆ ಅದೇ ಎರಡೂವರೆ ಘಂಟೆಯಲ್ಲಿ ಒಂದು ಹಳ್ಳಿಯ ಘಟನಾವಳಿಗಳ ಅನುಭವಗಳ ಕಟ್ಟಿ ಕೊಡೋ ಈ ಚಿತ್ರವನ್ನು ಒಮ್ಮೆ ನೊಡೋದ್ರಲ್ಲಿ ಯಾವ ತಪ್ಪೂ ಇಲ್ಲ. ಆದ್ರೆ ಪೇಪರಲ್ಲಿ ಇದ್ರ ಬಗ್ಗೆ ಏನೋ ಓದಿದ್ರಿ, ಯಾರೋ ಏನೋ ಹೇಳಿದ್ದನ್ನ ಕೇಳಿದ್ರಿ ಅಂತ ಚಿತ್ರದ ಬಗ್ಗೆ ವಿಪರೀತವಾದ ನಿರೀಕ್ಷೆಗಳನ್ನಿಟ್ಟುಕೊಂಡಿದ್ರೆ ಅಲ್ಲಲ್ಲಿ ನಿರಾಸೆಯಾಗಬಹುದು. ಪೂರ್ವಾಗ್ರಹವಿಲ್ಲದೇ ಚಿತ್ರ ನೋಡುವವನಿಗೆ ಒಂದೊಳ್ಳೇ ಚಿತ್ರ ನೋಡಿದ ಅನುಭವ ಗ್ಯಾರಂಟಿ :-)

Thursday, June 2, 2016

ಮಕಾಡೆ ಮಲಗಿದ ಮೂಡೂ,ಬಿಟ್ಟೋಗಿರೋ ಬ್ಲಾಗೂ

ನಿಧಾನದ ನೆಟ್ಟಲ್ಲಿ , ಲೋಡಾಗದ ಫೋಟೋಗಳಲ್ಲಿ ಯಾರ್ಯಾರಿರ್ಬೋದು, ಏನಿರ್ಬೋದು ಅಂತ ಕೆಳಗಿರೋ ಕಾಮೆಂಟುಗಳಲ್ಲೇ ಅಂದಾಜಿಸ್ತಾ, ಸೂರ್ಯೋದಯಕ್ಕೆ ಕಾಯೋ ಫೋಟೋಗ್ರಾಫರಂಗೆ ಕಾಯೋದಿದ್ಯಲ್ಲ. ಆ ಸಮಯದಲ್ಲಿ ಮೊಬೈಲ್ ನೆಟ್ಟಲ್ಲಿ ಫೇಸ್ಬುಕ್ ಗ್ರೂಪ್ ಚಾಟ್ ಮಾಡ್ತಿದ್ದ ಕಾಲೇಜು ದಿನಗಳು ನೆನಪಾಗುತ್ತೆ ! ಊರಲ್ಲಿನ ಕಂಪ್ಯೂಟರಿಗೆ ಮೊಬೈಲ ೨ಜಿ ಹಾಕಿ ಪೇಜ್ ಲೋಡಾಗಕ್ಕೆ ನಿಮಿಷಗಟ್ಲೆ ಕಾಯ್ತಿದ್ದ ದಿನಗಳು ನೆನಪಾಗುತ್ತೆ ! ಬ್ಲಾಗು ಅಂತ ಮಾಡ್ಕೊಂಡಿದೀಯ. ಅದರಲ್ಲೊಂದು ಕತೆ ಅಂತ ಹಾಕ್ದೆ ಎಷ್ಟು ದಿನ ಆಯ್ತು. ಏನ್ಕತೆ ಅಂತ ಮಕಾಡೆ ಮಲಗಿರೋ ಬ್ಲಾಗೇ ಆಗಾಗೆದ್ದು ಬಯ್ಯೋಕೆ ಶುರು ಮಾಡಿದಾಗ ನೆಟ್ಟಿಲ್ಲದ ಆ ದಿನಗಳೇ ನೆಟ್ಟಗಿದ್ವಾ ಅನಿಸಿಬಿಡುತ್ತೆ. ಆಫ್ಲೈನಲ್ಲಿ ಬರೆಯುವಾಗಿರುತ್ತಿದ್ದ ಏಕಾಗ್ರತೆ, ಅದನ್ನ ಅಪ್ಲೋಡ್ ಮಾಡಿದಾಗಿನ ಧನ್ಯತೆ ಈಗಿನ ಆನ್ಲೈನಲ್ಲಿ ಯಾಕೋ ಮಿಸ್ಸಾಗ್ತಿದ್ಯಾ ಅನಿಸೋಕೆ ಶುರುವಾಗುತ್ತೆ. ಕತೆಗಂತ ಹೊಳೆದ ಎಳೆಯನ್ನ ಅದಕ್ಕೊಂದು ರೂಪ ನೀಡೋವರೆಗೂ ಸಮಾಧಾನವಿರದಿದ್ದ ಆ ದಿನಗಳಲ್ಲಿ ತಿಂಗಳಿಗೊಂದೆರಡಾದ್ರೂ ಕತೆಯಿರುತ್ತಿತ್ತು ಬ್ಲಾಗಲ್ಲಿ. ಒಂದಾದ್ರೂ ಹೊಸ ಪುಸ್ತಕ ಓದಿ ಮುಗಿದಿರುತ್ತಿತ್ತು. ಈಗ ಒಂದು ಪ್ಯಾರಾ ಬರೆಯೋದ್ರೊಳಗೆ ಅದನ್ನ ಫೇಸ್ಬುಕ್ಕಲ್ಲಿ ಹಾಕಿ ಆದಷ್ಟೂ ಲೈಕು ಗಿಟ್ಟಿಸೋ ಧಾವಂತದಲ್ಲಿ ಕಥಾನಾಯಕ ಗರ್ಭದಲ್ಲಿದ್ದಾಗ್ಲೇ ಸತ್ತಾಗಿರುತ್ತೆ !

ಹಂಗಾದ್ರೆ ಫೇಸ್ಬುಕ್ಕೇ ದುನಿಯಾನಾ ? ಎಲ್ಲಾ ಬ್ಲಾಗರ್ಗಳದ್ದೂ ಇದೇ ಕತೆನಾ ಅಂದ್ರೆ ಹಂಗೇನಿಲ್ಲ. ಶ್ರೀವತ್ಸಣ್ಣನಂತೋರ ಬ್ಲಾಗಲ್ಲಿ ವಾರಕ್ಕೊಂದರಂತಾದ್ರೂ ನಿರಂತರವಾಗಿ ಹರೀತಿರೋ ಭಾವಝರಿಯನ್ನು ನೋಡಿದ್ರೆ, ಸಚಿನಣ್ಣನ ರಿಸರ್ಚುಗಳನ್ನ ನೋಡಿದ್ರೆ, ಅಪರೂಪಕೊಮ್ಮೆ ವಿಸಿಟ್ ಕೊಡೋ ಭಾಗ್ಯಮ್ಮನ್ನ ನೋಡ್ತಾ ಇದ್ರೆ ಬ್ಲಾಗುಗಳು ಮುಂಚೆ ನೀಡ್ತಿದ್ದ ಖುಷಿ ಇನ್ನೂ ಅಲ್ಲಲ್ಲಿ ಇದೆ ಅನಿಸುತ್ತೆ. ಆದ್ರೆ ಹೆಚ್ಚಿನ ಬ್ಲಾಗುಗಳೆಲ್ಲಾ ಒಂದಿಷ್ಟು ಪೋಸ್ಟುಗಳ ದಾಟೋದ್ರಲ್ಲೇ ಸುಸ್ತಾಗಿ ಬಿಟ್ಟಿದೆ. ಶುರುವಿನ ಪೋಸ್ಟುಗಳಲ್ಲಿ ಸಿಗೋ ಫ್ರೆಂಡುಗಳ ಯದ್ವಾತದ್ವಾ ಕಾಮೆಂಟ್ಸು, ಬೆನ್ನುತಟ್ಟುವಿಕೆ ಕ್ರಮೇಣ ಕಡಿಮೆಯಾಗುತ್ತಾ ಹೋಗೋದ್ರಿಂದ ಬ್ಲಾಗಿನ ಮೇಲಿನ ಆಸಕ್ತಿನೂ ಕಡಿಮೆಯಾಗುತ್ತಾ ಹೋಗುತ್ತಾ ಅನಿಸಿಬಿಡುತ್ತೆ. ಅದ್ಭುತವೆನಿಸುವಂತೆ ಬರೆಯುತ್ತಿದ್ದ ಬ್ಲಾಗರುಗಳು ಬ್ಲಾಗುಗಳು ಹೇಳ ಹೆಸರಿಲ್ಲದಂತೆ  ಸೈಲಂಟಾಗಿರೋದನ್ನ ನೋಡಿದ್ರೆ ದಿಗಿಲಾಗುತ್ತೆ. ಹಂಗಂತಾ ಅವ್ರು ಬರ್ಯೋದನ್ನೇ ಬಿಟ್ಟು ಹಿಮಾಲಯಕ್ಕೇನಾದ್ರೂ ಹೋದ್ರಾ  ? ಹಾಗೇನಿಲ್ಲ ! ಏನಪ್ಪಾ ಅಂದ್ರೆ ಮೂಡಿಲ್ಲವೆಂಬ ಉತ್ರ. ಬರೆಯೋ ಮೂಡಿಲ್ಲವೋ ಅಥವಾ ಹೊಸ ಕತೆ, ಕವನಗಳು ಮೂಡಿಲ್ಲವೋ ಎಂಬ ಪ್ರಶ್ನೆ ಪ್ರತೀಬಾರಿಯೂ ಬಾಯಿಂದ ಹೊರಬಾರದೇ ಸುಮ್ಮನಾಗುತ್ತೆ.  ಫೇಸ್ಬುಕ್ಕಲ್ಲಿ ದಿನಕ್ಕೆ ಎಂಟತ್ತು ಪೋಸ್ಟುಗಳಂತೆ, ವಾರಕ್ಕೊಂದೆರಡರಂತಾದ್ರೂ ಬರೀತಿರ್ತಾರೆ. ಪ್ರತೀ ಪೋಸ್ಟಿಗೂ ನೂರಿನ್ನೂರು ಲೈಕುಗಳು, ಐವತ್ತರ ಮೇಲಿನ ಕಾಮೆಂಟುಗಳು. ಈ ಕಾಮೇಂಟು, ಪ್ರತಿ ಕಾಮೇಂಟುಗಳಲ್ಲೇ ಅವರಲ್ಲಿನ ಕತೆಗಾರ ಕಳೆದುಹೋಗ್ತಿದ್ದಾನಾ ಅನಿಸಿಬಿಡುತ್ತೆ. ಒಮ್ಮೆ ಬರೆದ ಪೋಸ್ಟಿಗೆ ಸಂಜೆಯವರೆಗೂ ಕಾಮೆಂಟುಗಳು, ಅದಕ್ಕೆ ಪ್ರತ್ಯುತ್ತರಗಳಂತ ನಡೀತಿದ್ರೆ ಅವ ಹೊಸದರ ಸೃಷ್ಠಿಗೆ, ಮತ್ತೂ ಹೊಸದರ ಓದಿಗೆ ತೊಡಗಿಕೊಳ್ಳೋ ಬದಲು ತನ್ನ ಸಂಭ್ರಮದಲ್ಲೇ ಮುಳುಗಿಹೋಗ್ತಾನಾ ಅನಿಸಿಬಿಡುತ್ತೆ. ಬ್ಲಾಗಲ್ಲಾದ್ರೆ ಹಾಗಲ್ಲವಲ್ಲ. ಒಮ್ಮೆ ಬರೆದು, ಒಪ್ಪ ಓರಣಗೊಳಿಸಿದ್ರೆ ಆಯ್ತು. ಅದಕ್ಕೆ ಬರೋ ಕಾಮೆಂಟುಗಳ ನಿರೀಕ್ಷೆಯಿಲ್ಲ. ನೂರಾರು ಜನರು ವಿಸಿಟ್ ಕೊಟ್ಟ ಕತೆಗೆ ಒಂದೂ ಕಾಮೆಂಟ್ ಸಿಗದೇ ಇರಬಹುದು ! ಆದರೆ ಸಿಕ್ಕ ಒಂದೊಂದೂ ಸಂಗ್ರಹಿಸಿಡೋ ಮುತ್ತಂತೆ. ಇಲ್ಲಿ ಹೊಗಳಬೇಕೆಂದು ಹೊಗಳಿದ್ದಿಲ್ಲ. ಫ್ರೆಂಡ್ಲಿಸ್ಟಿನಲ್ಲಿದ್ದಾನಲ್ಲ, ಬೇಜಾರಾಗುತ್ತಲ್ಲ ಅಂತ ಒತ್ತಿದ ಲೈಕಿಲ್ಲ. ಓದಿದ ಮೇಲೆ ಹೇಳಲೇಬೇಕೆನಿಸಿದ್ದು ಅನಿಸಿಕೆ ರೂಪದಲ್ಲಿ ದಾಖಲಾಗೋದಷ್ಟೆ. ಯಾರು ಏನು ಹೇಳಿದ್ರು ಅನ್ನೋಕಿಂತ್ಲೂ ಮೂಡಿದ ಎಳೆಗೊಂದು ರೂಪ ಕೊಟ್ಟ ಖುಷಿಯಷ್ಟೆ.ಇಲ್ಲಿ ಮೂಡಿದ ರೂಪಕ್ಕೆ ಯಾರನ್ನೋ ಮೆಚ್ಚಿಸಬೇಕೆಂಬ ಬಯಕೆಯಿಲ್ಲ. ಯಾರೂ ನೋಡಿಲ್ಲವೆಂಬ ನೋವೂ ಇಲ್ಲ.  ಇನ್ಯಾವತ್ತೋ ಬಿಡುವಾದಾಗ ನನಗೆ ಹೀಗೂ ಅನಿಸಿತ್ತಾ ಅಂತ ಆಶ್ಚರ್ಯಪಡೋಕಾದ್ರೂ ದಾಖಲಾಗಲೇಬೇಕಾದ ಕಾಲ ಘಟ್ಟವಷ್ಟೇ ಅದು. ಬಾಲ್ಯದಲ್ಲಿ ನಾ ಹೇಗಿದ್ದೆ ಅನ್ನೋದನ್ನ ನೆನಪಿಸುವ ಫೋಟೋದಂತೆ ಎರಡು ವರ್ಷಗಳ ಹಿಂದೆ ನನಗೇನನ್ನಿಸಿತ್ತು ಅನ್ನೋದನ್ನ ನೆನಪಿಸೋದು ಅಂದು ಬರೆದೊಂದು ಬರಹ. ಹಂಗಾಗಿ ಬ್ಲಾಗಲ್ಲಿ ಬರಹಗಳನ್ನು ದಾಖಲಿಸೋದು ಅಂದ್ರೆ ಕಾಲಘಟ್ಟದಲ್ಲಿ ಉಲ್ಟಾ time travel ಮಾಡೋಕೆ ಕೆಲ ಆಯ್ಕೆಗಳನ್ನ ಇಟ್ಟುಕೊಂಡಂಗೆ !

ಸಖತ್ ಫಾಸ್ಟಾಗಿ ಓಡ್ತಿರೋ ಕಾಲದಲ್ಲಿ ನಾಳೆ ಮಾಡಿದ್ರಾಯ್ತು ಅಂದ್ಕೊಳ್ಳೊ ಕೆಲಸಗಳು ಆಗೋದೇ ಇಲ್ಲ ! ಅವತ್ತವತ್ತು ಎಗರೆಗರಿ ಪಡೆದಿದ್ದಷ್ಟೇ ಜೀವಕ್ಕೆ ದಕ್ಕಿದ್ದು. ಆಯ್ತೆಂದರೆ ಎಲ್ಲಾ ಇದ್ದು, ಆಗದೆಂದರೆ ಏನೂ ಆಗದ ಜಗದಲ್ಲಿ ಯಾರೂ ನಮ್ಮನ್ನ ಹುಡುಕಿಕೊಂಡು ಬರೋಲ್ಲ ಅನ್ನೋದು ನಮ್ಮ ಬ್ಲಾಗಣ್ಣನ ಫಿಲಾಸಫಿ ! ನಾವು ಎಷ್ಟು ಸಲ ಅವ್ರ ಮನೆಗೆ ಹೋದ್ರೂ ಆ ನೆಂಟ್ರು ನಮ್ಮ ಮನೆಗೆ ಬರ್ಲಿಲ್ಲ ಅಂತ ಬೇಜಾರಾಗೋದು ಎಷ್ಟು ಸಹಜಾನೋ ಅದೇ ತರಹ ಬ್ಲಾಗಲ್ಲೂ ಆಗ್ತಿರತ್ತೆ. ಆದ್ರೆ ಕೆಲವು ನೆಂಟ್ರೇ ಹಂಗಪ್ಪ. ನಮ್ಮೆದ್ರು ಏನೂ ಹೇಳಲ್ಲ. ಆದ್ರೆ ನಮ್ಮ ಬೆನ್ನ ಹಿಂದೆ ಸಾಕಷ್ಟು ಒಳ್ಳೆ ಮಾತಾಡಿರ್ತಾರೆ ಅಂತ ಎಷ್ಟೋ ಕಾಲದ ನಂತ್ರ ಇನ್ಯಾರಿಂದ್ಲೋ ಗೊತ್ತಾಗಿರುತ್ತೆ. ಎದ್ರಿಗೆ ಯದ್ವಾತದ್ವಾ ಹೊಗಳಿ ಹಿಂಬಂದಿಗೆ ಅಪಹಾಸ್ಯ ಮಾಡೋ ನೆಂಟ್ರೂ ಇರ್ತಾರೆ. ಪಕ್ಕದ ಮನೆ ತಂಕ ಬಂದು ನಮ್ಮನೆಗೆ ಬಾರದ ನೆಂಟ್ರೂ ಇರ್ತಾರೆ ! ಆದ್ರೆ ಯಾರೋ ಕೆಲವರು ನೆಂಟ್ರು ಬರ್ಲಿಲ್ಲ ಅಂತ ಎಲ್ಲ ನೆಂಟ್ರ ಬಗ್ಗೆನೂ ಬೇಜಾರು ಮಾಡ್ಕೊಂಡ್ರೆ ಹೆಂಗೆ ? ಯಾರೂ ಬಂದು ಕಮೆಂಟ್ ಮಾಡ್ಲಿಲ್ಲ ಾಂತ ಬರೆಯೋದ್ನೇ ಬಿಟ್ಟುಬಿಡ್ತೀನಿ ಅಂದ್ರೆ ಹೆಂಗೆ ಅನ್ನೋ ನಮ್ಮ ಬ್ಲಾಗಣ್ಣನ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಕೂತಿದ್ದೀನಿ ಸದ್ಯಕ್ಕೆ. ಬ್ಲಾಗಣ್ಣನ ಮತ್ತೇನಾದ್ರೂ ಬಯ್ಯೋಕೆ ಶುರು ಮಾಡೋ ಮೊದ್ಲು ಯಾವ್ದಾದ್ರೂ ಕತೆನೋ ಕವನನೋ ಬರೆದು ಅವನನ್ನ ಸಮಾಧಾನ ಪಡಿಸ್ಬೇಕು ಅನ್ನೋ ಹುನ್ನಾರದಲ್ಲಿ !