Wednesday, November 30, 2016

ಸಲಿಲಕ್ಕೊಂದು ಸಾಲು

ಕಪಿಲ ಮುನಿಯ ಶಾಪದಿಂದ ದಹಿಸಿದಂತ ಸಗರರನ್ನು
ಉದ್ದರಿಸಲು ಬೇಕಾದಳು ದೇವನದಿ ಮಂದಾಕಿನಿ
ಭಗೀರಥನ ಛಲಕೆ ಮೆಚ್ಚಿ ಧರೆಗೆ ಧುಮುಕೊ ಗಂಗೆಯನ್ನು
ಕೊಚ್ಚದಂತೆ ತಡೆಯಲಂದು ಮುಂದೆ ಬಂದ ಫಾಲಾಕ್ಷನೆ|1
 
ತ್ರಿನೇತ್ರನ ಜಟೆಗಳಿಂದ ಧುಮ್ಮಿಕ್ಕಿದ ತಾಯೆ
ಜಹ್ನು ಮುನಿಯ ಕಿವಿಗಳಿಂದ ಹೊರಹೊಮ್ಮಿದ ಮಾಯೆ
ಯಮುನೆ, ಕೋಸಿ, ಗೋಮ್ತಿಯಾಗಿ
ಗಂಡಕಿ, ಗಂಗಾರೆಯಾಗಿ
ಮೋಕ್ಷವೀಯೋ ಕಾಶಿಯಾಗಿ
ಧಾಮ ವಾರಣಾಸಿಯಾಗಿ
ಹರಪ್ಪಾ-ಮೊಹೆಂಜೊದಾರೋ ಬೆಳೆಸಿ ನಿಂತ ತಾಯೆ
ಭರತಖಂಡ ಬೆಳೆಯಲೆಂದು ಹರಸುತ್ತಿಹ ತಾಯೆ|2

ಹರಸೆಲೆಮ್ಮ ವರದೆಯಾದೆ
ಕುಡಿಯಲೆಂದೆ ತುಂಗೆಯಾದೆ
ಬೆಳಕೀಯಲು ಶರಾವತಿ, ಭತ್ತಕೆಂದು ಗಂಗಾವತಿ
ಅರ್ಕಾವತಿ,ನೇತ್ರಾವತಿ,ವೇದಾವತಿ, ಹೇಮಾವತಿ,
ಭದ್ರೆ,ಕೃಷ್ಣೆ, ಕಾವೇರಿಯು
ಮಲಪ್ರಭಾ, ಕಾಳಿ ನೀನು
ಮಹದಾಯಿಯ ಮಡಿಲಿನಲ್ಲಿ, ಮಲಪ್ರಭೆಯ ನೆನಪಿನಲ್ಲಿ
ಅಸಂಖ್ಯಾತ ಕೊಳ್ಳದಲ್ಲಿ, ಹೆಸರಿಲ್ಲದ ಹಳ್ಳದಲ್ಲಿ
ಹರಿಯುತಿರುವ ಜೀವ ತೊರೆಯೆ, ಜೀವಸೆಲೆಯೆ ತಾಯೆ|3

ಬರ ಬಂದಿದೆ ನಾಡಿಗಿಂದು, ನಿನಗೆಂದೇ ಜಗಳವಿಂದು
ಒಣಗುತ್ತಿವೆ ನೀರಿಲ್ಲದೆ ಎಲ್ಲೆಡೆಯೂ ಫಸಲು
ಬತ್ತುತಿರುವ ಹೊಳೆಗಳೆಲ್ಲ, ಒಣಗುತಿರುವ ಕೆರೆಗಳೆಲ್ಲ
ತುಂಬಿ ಉಕ್ಕಿ ಹರಿದರೇನೆ ನಮಗೆ ಹರಷದೊನಲು|4


ಕೊರಗುತಿಹುದು ಬಾಗೀನವು ಒಣಗಿದೆಲ್ಲ ನದಿಯ ಕಂಡು
ಮೀನಿಲ್ಲದೆ, ನೀರಿಲ್ಲದೆ ಸಾಯುತಿಹುದು ಖಗದ ಹಿಂಡು
ಜಲಾಶಯವೆ ನೀರಿಲ್ಲದೆ ಬತ್ತಾಗಿದೆ ಕ್ರೀಡಾಂಗಣ
ನೀರಿಲ್ಲದೆ ಸತ್ತು ಪ್ರಾಣಿ, ಕಾಡೆಲ್ಲವೂ ಬಣ ಬಣ|5

ಬರವೆಂಬುವ ಕೊಡಲಿಯಿಂದ ಕೊಲ್ಲದಿರೇ ತಾಯೇ
ನಮ್ಮಿಂದಲೇ ಜಗವು ಎಂಬ ಭ್ರಾಂತಿ ಪೊರೆಯ ಹರಿಯೆ
ಕೋಪ ಮರೆತು, ಕರುಣೆ ತೋರೆ, ಜೀವವೀಯೊ ತಾಯೆ
ನೀನೇ ನಮಗೆಲ್ಲಾ ಇಂದು. ತುಂಬಿ ಹರಿಯೆ ತೊರೆಯೇ|6
ತುಂಬಿ ಹರಿವ ಕೊಳ್ಳಕಿಂದು ಬಾಗೀನದ ಸ್ಪರ್ಷ
ಒಳ್ಳೆ ಬೆಳೆಯು ಕೈಗೆ ಬಂದು ಬೆಳೆದವನಿಗೆ ಹರ್ಷ
ಹೀಗೇ ಇರಲಿ ಎಂದೆದಿಗೂ ತಾಯೆ ನಿನ್ನ ಕರುಣೆ
ನಮ್ಮಿಂದಿಗೆ, ನಾಳೆಗಳಿಗೆ ಬಾರದಿರಲಿ ಬವಣೆ |7


ಈ ಕವನವನ್ನು ನವೆಂಬರ್ ೨೬ರಂದು ನಡೆದ 3k ರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟಿದ್ದು, ಅಭಿನಂದನಾ ಪತ್ರವನ್ನು ಪಡೆದಿದೆ

Sunday, November 27, 2016

3k ರಾಜ್ಯೋತ್ಸವ ಸಂಭ್ರಮ

ನವೆಂಬರ್ ಒಂದಕ್ಕೆ ನಮ್ಮೂರಲ್ಲೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಿಕ್ಕಿತ್ತು. ಹತ್ತಕ್ಕೆ ಆಫೀಸಲ್ಲೇ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅನಿರೀಕ್ಷಿತವಾಗಿ ನಿರೂಪಕನಾಗೋ ಭಾಗ್ಯವೂ ಸಿಕ್ಕಿತ್ತು. ನನ್ನ ಭಾವಯ್ಯನ ಹುಟ್ಟಿದಬ್ಬದ ದಿನದ ಸಂಭ್ರಮದಲ್ಲಿ, ಮುಂಬಯಿಯಲ್ಲಿ ಹುತಾತ್ಮರಾದವರ ನೆನಪು ಕಣ್ಣಂಚಿನ ನೀರಾಗೋ  ಹೊತ್ತಲ್ಲಿ 3k ಯ ಕಾರ್ಯಕ್ರಮ ಅವತ್ತು ಮಧ್ಯಾಹ್ನವೇ ಇರುವ ನೆನಪಾಗಿತ್ತು. ಅದಕ್ಕೆ ಸರಿಯಾಗಿ  ೧೬ ದಿನ ಮುಂಚೆ 3k ಯ ಕವನ ಸ್ಪರ್ಧೆಗೆ ಕವನ ಕಳಿಸಿದ್ದೂ ನೆನಪಾಗಿತ್ತು. ಎರಡು ದಿನ ಮುಂಚೆಯೇ 3k ಯ ನವೀನ್ ಅವರು ಫೋನ್ ಮಾಡಿ ಅವತ್ತು ಕವಿಗೋಷ್ಠಿಯೂ ಇರುವ ಬಗ್ಗೆ, ಅದಕ್ಕೆ ಬಂದು ಕವನವಾಚನದಲ್ಲಿ ಪಾಲ್ಗೊಳ್ಳಬೇಕೆಂದು 3k ಯ ಪರವಾಗಿ ಆಹ್ವಾನವಿತ್ತಿದ್ದೂ ನೆನಪಾಗಿ ನಾಗರಭಾವಿಯ ಭೈರವೇಶ್ವರ ಸಂದ್ರದ ಬಳಿಯಿರುವ ಬ್ಲಾಸಂ ಶಾಲೆಯತ್ತ ಹೊರಟು ನಿಂತೆ. ಮಧ್ಯಾಹ್ನ ೧:೩೦ ಕ್ಕೆ ಹೊರಟವನಿಗೆ ಶ್ರೀಕಾಂತಣ್ಣನೂ ಸಿಕ್ಕು ಬ್ಲಾಸಂ ಶಾಲೆ ತಲುಪೋ ಹೊತ್ತಿಗೆ ನಾಲ್ಕೂ ಕಾಲು.

ಕವಿ ಗೋಷ್ಠಿ:

ನಮ್ಮದ್ರುಷ್ಟಕ್ಕೆ ಅವತ್ತಿನ ಕಾರ್ಯಕ್ರಮವೂ ಲೇಟಾಗಿ ಮೊದಲ ಮೂವರ ಕಾವ್ಯವಾಚನ ಮುಗಿದು ನಾಲ್ಕನೇಯವರ ನೀಳ್ಗವನ ವಾಚನ ನಡೆಯುತ್ತಿತ್ತು . ಹೋಗಿ ಮಹೇಶ್ ಗೌಡ, ಗೋರವಿ ಮುಂತಾದವರ ಜೊತೆ ಹಾಯೆನ್ನೋ ಹೊತ್ತಿಗೆ, ಇವರು ಈಗ ಕವನ ಓದ್ತಾ ಇದ್ದಾರೆ ಅಂತ ನನ್ನೆಸರೇ ಕರೆದು ಬಿಡಬೇಕಾ ? ! ಇದೇನಪ್ಪಾ ಅಂದ್ಕೊಳ್ಳೋ ಹೊತ್ತಿಗೆ ಐದನೇಯವ ನಾನೇ ಅಲ್ವಾ ಅಂತ ನೆನಪಾಯ್ತು ! ಸರಿ ಅಂತ ಮೊಬೈಲಲ್ಲಿದ್ದ ಕವನ ಮೇಲೆ ತಂದು ಕೊಳ್ತಾ ವೇದಿಕೆಯತ್ತ ಹೆಜ್ಜೆ ಹಾಕೋ ಹೊತ್ತಿಗೆ ಸತೀಶ ಬಂದು ಹಾರ್ಡ್ ಕಾಪಿ ಕೊಡ್ತಾರೆ ತಡಿ ಅಂದ. ವೇದಿಕೆಯ ಬಳಿಯೇ ಇದ್ದ ರೂಪಕ್ಕ ಇದೇ ಅಲ್ವಾ ನಿಮ್ಮ ಕವನ ಅಂತ ತಮ್ಮತ್ರ ಇದ್ದ ಪ್ರಿಂಟೌಟ್ ಕೊಟ್ಟಿದ್ದು ಐನೂರು ರೂಪಾಯಿ ನೋಟವನಿಗೆ ಚೇಂಜ್ ಕೊಟ್ಟಂಗಾಗಿತ್ತು :-) ಪ್ರಶಸ್ತಿ ಅವರು ಬರ್ತಾರೆ ಅಂದಾಗ ಇದೇನು ಕಾವ್ಯ ನಾಮನಾ , ಉಪಮೆನಾ ಅಂತ ಗೊಂದಲದಲ್ಲಿ ಕೂತಿದ್ದ ಹಲವು ಮುಖಗಳು ನನ್ನತ್ತನೇ ನೋಡ್ತಿದ್ದವು. ವೇದಿಕೆಯ ಮೇಲಿದ್ದ ಶ್ರೀ ಮಣಿಕಾಂತ್ , ಶ್ರೀ ಮಂಜುನಾಥ್ ಕೊಳ್ಳೇಗಾಲ ಅವರು ಮತ್ತು ಶ್ರೀ ಅಶೋಕ್ ಅವರು ಕೂತಿರುವಾಗ ನಾನೇನಪ್ಪ ಓದೋದು ಅನ್ನೋ ಅಳುಕು ಬೇರೆ. ಬ್ಲಾಗಲ್ಲಿ, ಫೇಸ್ಬುಕ್ಕಲ್ಲಿ ಬರೆಯೋದು ಬೇರೆ, ಮೈಕ್ ಕೊಟ್ಟು ಕವನ ಓದು ಅನ್ನೋದು ಬೇರೆ. ಮಾತಾಡು ಅಂದ್ರೆ ಏನಾದ್ರೂ ಒಂದು ಮಾತಾಡ್ಬಹುದು. ಬರೆದಿರೋ ಕತೆಯನ್ನೋ, ಕವನವನ್ನೋ ಓದು ಅಂದ್ರೆ ಅದೆಷ್ಟು ಕಷ್ಟ ಅಂತ ಮೈಕ್ ಹಿಡಿದಾಗ್ಲೇ ಗೊತ್ತಾಗಿದ್ದು. ವೇದಿಕೆ ಅಂತ ಹತ್ತಿ ಕತೆಯನ್ನೋ ಕವನವನ್ನೋ ಓದದೇ ವರ್ಷಗಳಾಗಿದ್ದರೂ ಎಲ್ರಿಗೂ ಒಮ್ಮೆ ನಮಸ್ಕರಿಸಿ, ನನ್ನೆಸ್ರೇ ಪ್ರಶ್ರಸ್ತಿ ಅಂದಾಗ ಎಲ್ಲೆಡೆ ಒಮ್ಮೆ ನಗೆಯ ಅಲೆ. ಆಗ ವಾತಾವರಣವೂ ಸ್ವಲ್ಪ ಲೈಟಾದ ಭಾವವುಂಟಾಗಿ ನನ್ನ ಕವನ "ಸಲಿಲಕ್ಕೊಂದು ಸಾಲು" ಓದೋಕೆ ಪ್ರಾರಂಭಿಸಿದೆ. ಬರೆದಿದ್ದ ಕವನದ ಏಳು ಪ್ಯಾರಾಗಳನ್ನ ಇನ್ನೊಂದಿಷ್ಟು ಚೆನ್ನಾಗಿ ಬರೆಯಬಹುದಿತ್ತು ಅಂತ ಬೆಳಗ್ಗೆ ಅನಿಸಿದ್ರೂ ಕವನಕ್ಕೆ ಆಮೇಲೆ ಸಿಕ್ಕ ಚಪ್ಪಾಳೆಗಳಿಂದ, ಜಯಪ್ರಕಾಸ್ ಸರ್ ಮುಂತಾದವರ ಮೆಚ್ಚುಗೆಗಳಿಂದ ನನ್ನ ಖುಷಿಗೆ ಮೇರೆಯೇ ಇರಲಿಲ್ಲ.

ನಂತರದ ಕವನ ವಾಚನ ಶ್ರೀಕಾಂತಣ್ಣ ಅವರದ್ದಾಗಿತ್ತು. ನನ್ನ ಜೊತೆಗೇ ಬಂದರೂ ಅವರು ಗಾಡಿ ನಿಲ್ಲಿಸೋಕೆ ಹೋಗಿದ್ರಿಂದ ನನ್ನ ಕವನ ಮುಗಿಯೋ ಹೊತ್ತಿಗೆ ಬಂದಿದ್ರು. ಅವರು ಬರ್ತಿದ್ದ ಹಾಗೆಯೇ ಅವರ ಹೆಸರೂ ಬರಬೇಕೇ ?   ಏ, ನಾನು ಆಮೇಲೆ ಓದ್ತೀನಿ ಅಂತ ಮುಂದಿನ ಕವಿಯನ್ನು ಕರೆಯೋಕೆ ಹೇಳಿದ್ರು. ಆದ್ರೆ ಅವರು ಬಾರದಿದ್ದ ಕಾರಣ 3kಯ ನೂತನ್ ಅವರು ಅವರ ಪರವಾಗಿ ಓದಿದ್ರು. ನಂತರ ಮತ್ತೆ ತಪ್ಪಿಸಿಕೊಳ್ಳಲಾಗದ ಶ್ರೀಕಾಂತಣ್ಣ ವೇದಿಕೆಗೆ ಬರಲೇಬೇಕಾಯಿತು :-) ಎದುರಿಗೇ ಕೂತ ಮಡದಿ, ಮಕ್ಕಳ ಮುಂದೆ ಕವಿಗೋಷ್ಠಿಯಲ್ಲಿ ಕವನವೋದುವ ಭಾಗ್ಯ ಶ್ರೀಕಾಂತಣ್ಣನಿಗೆ :-) ಅವರ ಮಹಾಭಾರತದ ಕಾವ್ಯ ಅವರ ಅನುಭವದ ಮಾತುಗಳಿಗೂ ಸಾಕ್ಷಿಯಾಗಿ ಗದ್ಯ-ಪದ್ಯಗಳ ಸಮ್ಮಿಶ್ರಣವಾಗಿ ಒಂತರಾ ಭಿನ್ನ ಭಾವವನ್ನಿತ್ತಿತು. ನಂತರ ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಲೇಖಕಿ, ಕವಯಿತ್ರಿ ಶ್ರೀಮತಿ ಜಯಲಕ್ಷ್ಮೀ ಪಾಟೀಲ್ ಅವರ ಕವನವಾಚನ. ನಂತರ ಅಂದಿನ ಅತಿಥಿಗಳಾಗಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಅಂದಿನ ಕವನವಾಚನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸಿದರು.

ಕರ್ನಾಟಕ ನಾಟಕ ಪಿತಾಮಹ ಟಿ.ಪಿ ಕೈಲಾಸಂ:
ಎರಡು ವರ್ಷದ ಹಿಂದೆ ಹೀಗೇ 3k ಯ ಕಾರ್ಯಕ್ರಮದಲ್ಲಿ ಮೊದಲು ಕಂಡಿದ್ದು ಶ್ರೀ ಮಂಜುನಾಥ ಕೊಳ್ಳೇಗಾಲ ಅವರನ್ನು. ಅಂದು ಓದಿನ ಮಹತ್ವ ಏನು ಎಂಬುದರ ಬಗ್ಗೆ ಹೇಳುತ್ತಾ ಕುಮಾರ ವ್ಯಾಸ ಭಾರತ, ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಮುಂತಾದ ಕೃತಿಗಳ ಸಾರವನ್ನು ಉಣಬಡಿಸಿದ್ದ ಮಂಜುನಾಥ್ ಸರ್ ಅವರ ಪರಿಚಯವನ್ನು ಅಂದು ಮಾಡಿಕೊಟ್ಟಿದ್ದು ಸತೀಶ್ ನಾಯಕ್ ಭದ್ರಾವತಿ. ಇಂದೂ ಅವರೇ :-) ಟಿ.ಪಿ ಕೈಲಾಸಂ ಅವರ ನಾಟಕಗಳ ಬಗ್ಗೆ ಕೇಳಿದ್ದ ನಮಗೆ ಅವರ ವ್ಯಕ್ತಿತ್ವದ ಪರಿಚಯವಾಗಿದ್ದು ಇಂದೇ.

ತಮಿಳು ಮೂಲದ ಜಸ್ಟೀಸ್ ಪರಮಶಿವಯ್ಯ ಮತ್ತು ಕಮಲಮ್ಮ ದಂಪತಿಗಳ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದ್ದ ಕೈಲಾಸಂ ಅವರು ಭೂವಿಜ್ಞಾನ ಶಾಸ್ತ್ರದಲ್ಲಿ ಬಿ.ಎ, ಎಂ.ಎ ಪಡೆದು ಲಂಡನ್ನಿನ ರಾಯಲ್ ಕಾಲೇಜ್ ಆಫ್ ಸೈನ್ಸಿನಲ್ಲಿ ಏಳು ವಿಷಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು. ಅಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳಿಂದ ಅಪಾರ ಪ್ರಭಾವ ಹೊಂದಿದ್ದ ಅವರು ನಂತರ ಕರ್ನಾಟಕ ನಾಟಕ ರಂಗದತ್ತ ಹೊರಳಿದರು. ಉನ್ನತ ದರ್ಜೆಯ ಕುಟುಂಬದಿಂದ ಬಂದ ಕೈಲಾಸಂ ಅವರು ಕನ್ನಡ ಸಾಹಿತ್ಯಕ್ಕಾಗಿ ಒದ್ದಾಡುವುದು ಅವರ ತಂದೆಗೆ ಸುತರಾಂ ಇಷ್ಟವಿರಲಿಲ್ಲ. ಆ ಅಪ್ಪ, ಮಗನ ನಡುವೆ ನಡೆಯೋ ಮನಸ್ತಾಪಗಳನ್ನೂ ಹಾಸ್ಯವಾಗಿ ಪರಿವರ್ತಿಸಿದ ಸನ್ನಿವೇಶಗಳನ್ನು ಕೈಲಾಸಂ ಅವರ ಕೃತಿಗಳಲ್ಲೇ ಓದಬೇಕು. ಆದರೂ ಕೆಲವು ಪ್ರಸಂಗಗಳನ್ನು ನಿನ್ನೆ ಕೇಳಿದ ನೆನಪಿನಲ್ಲಿ ತೆಗೆದುಕೊಳ್ಳುವುದಾದರೆ..


ಪ್ರಸಂಗ ೧: ಕೈಲಾಸಂ ಅವರು ತುಂಬಾ ಕೊಳೆಯಾಗಿದ್ದ ರೂಂ ಒಂದರಲ್ಲಿ ಇರುತ್ತಾರೆ. ಅದಕ್ಕೆ nook(ಮೂಲೆ) ಅಂತ ಕರೆಯುತ್ತಿದ್ದರು.ಅಲ್ಲಿಗೆ ಬಂದ ಅವರ ಹಿತೈಷಿಯೊಬ್ಬರು. ಏನಪ್ಪಾ ಕೈಲಾಸಂ, ನಿನ್ನ ರೂಂ ಇಷ್ಟೊಂದು ಕಸದಿಂದ ತುಂಬಿದೆ ಅಂದ್ರೆ ಕೈಲಾಸಂ ಅವರು, ಸ್ವಾಮಿ ಕಸ ಅಂದರೆ ಏನು ? ಯಾವುದು ಎಲ್ಲಿರಬಾರದು ಅಲ್ಲಿದ್ದರೆ ಕಸ. ಉದಾಹರಣೆಗೆ ನೀವು ಇಲ್ಲಿರಬಾರದು, ನೀವು ಇಲ್ಲಿಗೆ ಬಂದರೆ ಅದು..!!!
ಪ್ರಸಂಗ ೨:ಕೈಲಾಸಂ ಅವರ ತಂದೆಯವರಿಗೆ ತುಂಬಾ ಅನಾರೋಗ್ಯವುಂಟಾಗಿದೆಯೆಂಬುದನ್ನು ತಿಳಿದು ಅವರು ತಮ್ಮ ತಂದೆಯನ್ನು ನೋಡಲು ಬರುತ್ತಾರೆ. ತಂದೆಗೆ ಕೊನೆಗೂ ತಮ್ಮ ಮಗ ತಮ್ಮನ್ನು ನೋಡಲು ಬಂದನಲ್ಲಾ ಅನ್ನೋ ಸಂತೋಷಕ್ಕಿಂತ ಆತ ಹೇಗಿದ್ದಾನೋ ಏನೋ ಎಂಬ ಆತಂಕ. Are you having money to have one square meal per day ಅಂತ ಕೇಳುತ್ತಾರೆ. ಅದಕ್ಕೆ ಕೈಲಾಸಂ ಅವರು ಏನೂ ಉತ್ತರಿಸದಿರುವುದನ್ನ ಕಂಡ ಅವರು what do you need . tell me ಅಂತ ಕೇಳುತ್ತಾರೆ. ಅದಕ್ಕೂ ಸಮರ್ಪಕ ಉತ್ತರ ಸಿಗದಿದ್ದನ್ನ ಕಂಡ ಅವರ ತಂದೆ Are you serious ಎನ್ನುತ್ತಾರೆ . ಅದಕ್ಕೆ ಕೈಲಾಸಂ ಅವರು. I am not serious. you are serious . Take care of your health ಅಂತ ಹೇಳಿ ಅಲ್ಲಿಂದ ತೆರಳುತ್ತಾರೆ !
ಪ್ರಸಂಗ ೩:  ಕೈಲಾಸಂ ಅವರು ಕೊನೆಗೂ ತಮ್ಮ ತಂದೆಯವರಿದ್ದ ಭವ್ಯ ಬಂಗಲೆ whitehouse ಗೆ ಬಂದು ನೆಲಸಬೇಕಾಗುತ್ತದೆ. ಆದರೆ ಅಲ್ಲಿ ಇರುವುದು ಇಷ್ಟವಿಲ್ಲದ ಅವರು ಅದರ ಹೊರಭಾಗದಲ್ಲಿರುವ ಕೊಠಡಿಯೊಂದರಲ್ಲಿ ನೆಲೆಸುತ್ತಾರೆ. ಅದನ್ನು ನೋಡಿದ ಒಬ್ಬರು ಇವರಿಗೆ ಪ್ರಶ್ನಿಸುತ್ತಾರೆ. Finally you are in whitehouse ? ಕೈ:No I am in outhouse !
ಪ್ರಸಂಗ ೪: whitehouse ನಲ್ಲಿ ಕೈಲಾಸಂ ಅವರು ನೆಲೆಸಿದ್ದನ್ನು ತಿಳಿದ ಒಬ್ಬರು ಇವರನ್ನು ಪ್ರಶ್ನಿಸುತ್ತಾರೆ. everything is good in whitehouse ? ಕೈ:yes. I am the only blackspot in it !.  ಕೈಲಾಸಂ ಅವರಿಗೆ ಉತ್ತಮ ಕುಟುಂಬದಿಂದ ಬಂದತಹ ತಾವು ಕೆಳಮಟ್ಟದ ಜೀವನ ನಡೆಸುತ್ತಿರುವುದನ್ನ ಸಮಾಜದಲ್ಲಿ ಕೆಲವರು ಹಾಸ್ಯದ ಸರಕಾಗಿಸಿದ್ದಾರೆ ಅನ್ನೋದು ಗೊತ್ತಿತ್ತು. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಅವರು ಅದನ್ನೇ ಹಾಸ್ಯದ ಸರಕಾಗಿಸಿದ್ದರು ಅನ್ನೋದು ಮೇಲಿನ ಪ್ರಸಂಗಗಳಿಂದ ತಿಳಿದುಬರುತ್ತೆ.

ಮೈಸೂರು ಮಹಾರಾಜರ ಧಡೂತಿತನದ ಬಗ್ಗೆಯೂ ಕೈಲಾಸಂ ಅವರು ಹಾಸ್ಯವಾಗಿ ಬರೆದಿದ್ದನ್ನ ಮಂಜುನಾಥ್ ಅವರು ವಿವರಿಸುತ್ತಾ ಹೋಗುತ್ತಾರೆ.
ಪ್ರಸಂಗ ೫: ಕೈಲಾಸಂ:ನೀನು ಮೈಸೂರು ದಸರಾಕ್ಕೆ ಹೋಗ್ತಿದೀಯಲ್ಲ ರಾಜ. ಅಲ್ಲಿನ ಅಂಬಾರಿಯಲ್ಲಿ ಕೆಳಗಿರೋದು ಆನೆ ನೆನಪಿರ್ಲಿ !
ರಾಜ ಅನ್ನೋ ಅವರ ಗೆಳೆಯ/ಪಾತ್ರಧಾರಿ: ಹೂಂ. ಅದು ಗೊತ್ತೇ ಇದ್ಯಲ್ಲ ಸಾರ್,
ಕೈಲಾಸಂ: ಗೊತ್ತಿದ್ರೂ, ಜ್ಞಾಪಕ ಇರ್ಲಿ ಅಂತ ಹೇಳ್ದೆ
ಪ್ರಸಂಗ ೬:  ರಾಜರು ಬರುವಾಗ ಆಗ ೩ ಸಲ ತುಪಾಕಿ ಹಾರಿಸ್ತಿದ್ರಂತೆ. ಅದನ್ನ 3 cheers to his highness ಅಂತ ಕರೀತಿದ್ರಂತೆ. ಅದನ್ನು ಕೈಲಾಸಂ ಅವರು 3 cheers to his anus ಅಂತ ಹಾಸ್ಯ ಹೇಳ್ತಿದ್ರಂತೆ. Ruler of mysore ಬದಲು road roler of mysore ಅಂತಿದ್ರು. ಅವರ sharp wit ಅನ್ನೋದು ಹಾಗಿತ್ತು ಅನ್ನೋದಕ್ಕೆ ಇವು ಕೆಲವು ಉದಾಹರಣೆಗಳಷ್ಟೆ.

ಕೈಲಾಸಂ ಅವರ ಗೆಳೆಯ ವೆಂಕಣ್ಣಯ್ಯನವರು ಅಂತ ಒಬ್ಬರಿದ್ರಂತೆ. ಅವರು ಆರೂಕಾಲಡಿಯ ಆಜಾನುಬಾಹುವಾದ್ರೆ ಕೈಲಾಸಂ ಐದೂಕಾಲಡಿಯವರು.ಅವರ ಜೊತೆ ಹೋಗ್ತಾ ನಡೆದ ಸುಮಾರು ಹಾಸ್ಯ ಪ್ರಸಂಗಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ
ಪ್ರಸಂಗ ೭:ಹಿಂಗೇ ಒಮ್ಮೆ ನಡೆದು ಹೋಗ್ತಾ .ಸ್ವಾಮಿ ವೆಂಕಣ್ಣಯ್ಯನವರೇ ಹೇಗಿದ್ರೂ ನಿಂತೇ ಇದ್ದೀರಿ. ಹಾಗೇ ಸ್ವಲ್ಪ ಮೇಲೆ ನೋಡಿ. ನಮ್ಮ ಹಿರಿಯರು ಯಾರಾದ್ರೂ ಕಾಣಬಹುದೇನೋ. ಎಲ್ಲಾ ಆರಾಮಿದ್ದಾರಾ ಕೇಳಿ ಹೇಳಿ.

ಪ್ರಸಂಗ ೮:ವೆಂಕಣ್ಣಯ್ಯ ಅವರು ಮತ್ತು ಕೈಲಾಸಂ ಅವರು ಒಮ್ಮೆ ಮಾರ್ಕೇಟಿಗೆ ಹೋಗಿರ್ತಾರೆ
ವೆಂಕಣ್ಣಯ್ಯ: ಏನಮ್ಮಾ, ನಿಂಬೆಹಣ್ಣಿಗೆ ಎಷ್ಟು ?
ಸ್ವಾಮಿ: ಅದು ನಿಂಬೆಹಣ್ಣಲ್ಲ. ಸ್ವಲ್ಪ ಬಗ್ಗಿ ನೋಡಿ, ಅದು ಮೋಸಂಬಿ !!

ಹೀಗೇ ಕೈಲಾಸಂ ಅವರ ಹಾಸ್ಯ ಗಳನ್ನು ತೆರೆದಿಟ್ಟ ಮಂಜುನಾಥ್ ಅವರು ನಂತರ ಕೈಲಾಸಂ ಅವರ ನಾಟಕಗಳ ಪರಿಚಯದತ್ತ ತಿರುಗಿದರು. ಇಂದಿನ ಶೈಕ್ಷಣಿಕ ವ್ಯವಸ್ಥೆಯ ಅಣಕಾಗಿರುವ ಪೋಲಿ ಕಿಟ್ಟಿ, ಟೊಳ್ಳುಗಟ್ಟಿ ನಾಟಕಗಳ ಪರಿಚಯ ಮಾಡಿಕೊಟ್ಟ ಶ್ರೀ ಮಂಜುನಾಥ ಕೊಳ್ಳೇಗಾಲ ಅವರ ಮಾತುಗಳ ಬಗ್ಗೆ ಹೆಚ್ಚು ಬರೆಯೋ ಬದಲು ಅವರ ಮಾತುಗಳನ್ನ ಮತ್ತೊಮ್ಮೆ ಕೇಳೋದೇ ಮೇಲು ಅನಿಸುತ್ತೆ ! ಅವರ ನಾಟಕಗಳಲ್ಲಿ ಬರುವ ಮೋನೋಲಾಗಿನಲ್ಲಿನ ಗುಂಡೂ ಮತ್ತು ಸುಬ್ಬುವಿನ ಬಗ್ಗೆಯಾಗಲಿ, ಐದು ಸಖಿಯರು ಒಂದು ಉದ್ಯಾನವನದ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಹಾಡೋದನ್ನಾಗಲಿ ಬರೆಯೋ ಬದಲು ಅದನ್ನು ಕೇಳಿದ್ರೇ ಮಜ. ಆ ರೆಕಾರ್ಡಿಂಗುಗಳು ಆಸಕ್ತ ಕೇಳುಗರಿಗಾಗಿ..



ಮಣಿಕಾಂತ್ ಸರ್ ಅವರಿಗೆ ರಾಜ್ಯೋತ್ಸವ ಸನ್ಮಾನ
ನಂತರ ಆದಿನದ ಮುಖ್ಯ ಕಾರ್ಯಕ್ರಮವಾಗಿದ್ದ ಶ್ರೀ ಮಣಿಕಾಂತ್ ಸರ್ ಅವರ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಅದನ್ನು ನಡೆಸಿಕೊಟ್ಟವರು ಸೂರತ್ಕಲ್ಲಿನ ಮಹೇಶ್ ಮೂರ್ತಿ ಅವರು. ಮಣಿಕಾಂತ್ ಸರ್ ಅವರಿಗೆ ನೀಡಲಾದ ಪುರಸ್ಕಾರ ಪತ್ರವನ್ನು ಓದಿ, ಆಲನಹಳ್ಳಿ ಆರ್ ಮಣಿಕಾಂತ್ ಸರ್ ಅವರ ಸಾಧನೆಗಳ ಬಗ್ಗೆ ನೆರೆದ ಸಭಿಕರಿಗೆ ಮತ್ತೆ ನೆನಪಿಸಿಕೊಟ್ಟಿದ್ದು ೩k ಯ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಸತೀಶ್ ಅವರು. ಪತ್ನಿ ನಾಗರತ್ನ, ಪುತ್ರಿ ನೀಲಿಯವರ ಸಂಸಾರ ಹೊಂದಿದ ಮಣಿಕಾಂತ್ ಅವರ ನೀಲಿಮ ಪ್ರಕಾಶನದ ಬಗ್ಗೆ ಅವರ ಅಮ್ಮ ಹೇಳಿದ ಎಂಟು ಸುಳ್ಳು ಪುಸ್ತಕದ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರತಿಗಳು ಖರ್ಚಾದ ಬಗ್ಗೆ ಮುಂತಾದ ಸಾಧನೆಗಳ ಬಗ್ಗೆ ಕೇಳಿದ ನಮಗೆ ಮೈ ಜುಮ್ಮೆಂದಿದ್ದು ಸುಳ್ಳಲ್ಲ.ಸನ್ಮಾನದ ನಂತರ ಮಣಿಕಾಂತ್ ಸರ್ ಅವರು ಇದು ನಮ್ಮ ಮನೆಯ ಕಾರ್ಯಕ್ರಮವೇ ಅನಿಸುವಷ್ಟು ಚೆನ್ನಾಗಿ ಮೂಡಿಬರುತ್ತಿದೆ. ಖುಷಿ ಕೊಡುತ್ತಿದೆ ಅಂತಲೂ, ೨೦೦೮ರಲ್ಲಿ ಶುರುವಾದ ೩k ಮತ್ತದರ ಕಾರ್ಯಗಳಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ನಂತರದಲ್ಲಿ ಸಭಿಕರ ಕೋರಿಕೆಗೆ ಕೊಂಚ ಆಶ್ಚರ್ಯದಿಂದಲೇ ಸ್ಪಂದಿಸಿದ ಮಣಿಕಾಂತ್ ಅವರ ಪತ್ನಿ ಶ್ರೀಮತಿ ನಾಗರತ್ನ ಮಣಿಕಾಂತ್ ಅವರು ನಿಸಾರ್ ಅಹಮದ್ ಅವರ ಭಾವಗೀತೆಯೊಂದನ್ನು ಹಾಡಿ ನಾವೆಲ್ಲಾ ಭಾವಲೋಕದಲ್ಲಿ ವಿಹರಿಸುವಂತೆ ಮಾಡಿದರು. 

ಎದ್ದೇಳು ಕನ್ನಡಿಗ:
ನಂತರ ಶ್ರೀ ಸತೀಶ್ ಎಸ್ ಅವರು ಬರೆದು, ಶ್ರೀ ವಿಶಾಲ್ ನಾಯಕ್ ಅವರು ಸಂಗೀತ ನಿರ್ದೇಶಿಸಿರುವ , ಶ್ರೀ ರವಿಕಿರಣ್ ಅವರು ಹಾಡಿರುವ ಎದ್ದೇಳು ಕನ್ನಡಿಗ ಹಾಡನ್ನು ಪ್ರಸ್ತುತ ಪಡಿಸಲಾಯಿತು. ಪರರಿಗೆ ಉಪಕಾರಿಯಾಗಲು ಮುಂದಾಗಿ ಮನೆಗೇ ಮಾರಿಯಾಗುತ್ತಿರುವ ಕನ್ನಡಿಗ ತನ್ನ ನಾಡ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿ ಅದನ್ನು ಉಳಿಸಿಕೊಳ್ಳಲು ಮುಂದಾಗದಿದ್ದರೆ ಅಪಾಯ ತಪ್ಪಿದ್ದಲ್ಲ, ಅದನ್ನು ತಪ್ಪಿಸಲು ಎದ್ದೇಳು ಕನ್ನಡಿಗ ಎಂಬ ಅವರ ಗೀತೆ ಸಭಿಕರ ಗಮನ ಸೆಳೆಯಿತು. ಕಾರ್ಯಕ್ರಮ ಮಿಸ್ ಮಾಡಿಕೊಂಡವರಿಗಾಗಿ ಅವರ ಈ ಹಾಡಿನ ಯೂಟ್ಯೂಬ್ ಕೊಂಡಿ https://www.youtube.com/shared?ci=0mboQXUr1Hs

ಹಾಸ್ಯ ಲಾಸ್ಯ:
ಶ್ರೀ ಶಶಿ ಗೋಪಿನಾಥ್ ಅವರಿಂದ ಹಾಸ್ಯ ಲಾಸ್ಯ ಕಾರ್ಯಕ್ರಮ ನಡೆಯಿತು. ಹಾಸ್ಯ, ಕನ್ನಡದ ನಟರು ಬಂದು 3k ಕಾರ್ಯಕ್ರಮ ನೋಡಿದ್ದರೆ ಹೇಗಿರುತ್ತಿತ್ತು ಎಂಬ ಮಿಮಿಕ್ರಿ ನಡೆಸಿಕೊಟ್ಟ ಅವರು ತಮ್ಮ ಮುಂದಿನ ಕಾರ್ಯಕ್ರಮವಾದ ನೃತ್ಯಕ್ಕೆ ಪೆನ್ ಡ್ರೈವ್ ತರಲು ಮುಂದಾದರೆ ಆ ಗ್ಯಾಪಲ್ಲೇ ಮಿಮಿಕ್ರಿ ನಡೆಸಿಕೊಟ್ಟ ನಿರೂಪಕ ಅರುಣ್ ಶೃಂಗೇರಿ ಅವರ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಸಭಿಕರ ಶಿಳ್ಳೆ, ಕರತಾಡನಗಳಿಗೆ ಸಾಕ್ಷಿಯಾಯಿತು

ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ.

3kಕವನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ಕುಮಾರಿ ಮಾನಸ ಭಟ್ ಅವರ ಪರವಾಗಿ ಅವರಣ್ಣ ನಾಗರಾಜ ಹೆಗಡೆ ಅವರು, ಗುಬ್ಬಚ್ಚಿ ಸತೀಶ್ ಅವರು, ಮೌನಯಾನ ಬ್ಲಾಗಿನ(http://vinayakabhatmb.blogspot.in/2016/10/blog-post_25.html) ಮತ್ತು ಕವನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ವಿನಾಯಕ ಭಟ್ ಅವರು ಮತ್ತು ಗುರುನಾಥ್ ಬೋರಗಿಯವರು ಬಹುಮಾನಗಳನ್ನು ಸ್ವೀಕರಿಸಿದರು. ಬಹುಮಾನ ವಿಜೇತರಾಗದಿದ್ದರೂ ಟಾಪ್ ೧೦ನಲ್ಲಿ ಆಯ್ಕೆಯಾಗಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೂ ಅಭಿನಂದನಾ ಪತ್ರ, ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.

ಅಧ್ಯಕ್ಷೀಯ ನುಡಿ:
ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಅಶೋಕ್ ಶೆಟ್ಟಿಯವರು ತಮ್ಮ ಹಾಸ್ಯಭರಿತ ಮಾತುಗಳಿಂದಲೇ ನೆರೆದವರ ಮನಗೆದ್ದರು.

ವಂದನಾರ್ಪಣೆ:
ಕಾರ್ಯಕ್ರಮದ ವಂದನಾರ್ಪಣೆಯನ್ನು ನಡೆಸಿಕೊಟ್ಟವರು 3k ಯ ಗೋಪಿನಾಥ್ ಅವರು. ಬಂದ ಅಧ್ಯಕ್ಷ, ಅತಿಥಿ, ತೀರ್ಪುಗಾರ , ಸಭಿಕರಿಗೆ ವಂದನಾರ್ಪಣೆಗಳನ್ನು ತಿಳಿಸುವುದು ಸಾಮಾನ್ಯ ಶಿಷ್ಟಾಚಾರ. ಆದರೆ ಗೋಪಿನಾಥ್ ಅವರು ಆ ಕಾರ್ಯಕ್ರಮಕ್ಕೆ ಎಳನೀರು ಕೊಚ್ಚಿ ಕೊಟ್ಟವರಿಗೆ, ಸಮೋಸ ಮುಂತಾದ ತಿನಿಸುಗಳನ್ನು ತಂದು ಕೊಟ್ಟವರಿಗೂ ಬಿಡದಂತೆ ವಂದನೆ ತಿಳಿಸೋ ಜೋಷಲ್ಲಿದ್ದಿದ್ದು ಕೊನೆಯ ಬೆಂಚಿನ ಹುಡುಗರಿಗೆ ಭರಪೂರ ಮನೋರಂಜನೆ ತಂದುಕೊಟ್ಟಿತ್ತು. ಅವತ್ತಿನ ವಿಷಯವೇ ಹಾಸ್ಯ ಅಂದ ಮೇಲೆ ಕೇಳಬೇಕೆ ? ವಂದನಾರ್ಪಣೆ ವೇಳೆ ಗೋಪಿನಾಥ್ ಅವರಿಗೆ ಮೊಬೈಲು ಬ್ಯಾಟ್ರಿಯ ಮೂಲಕ ನೆರವಾಗೋಕೆ ಬಂದ ನೂತನ್ ಅವರ ನಡೆ ಸಭಿಕರ ನಗೆಗಡಲಲ್ಲಿ ಮಿಂದೇಳುವಂತೆ ಮಾಡಿತು.

ಕೊನೆಗೊಂದಿಷ್ಟು ತಿಸಿಸು, ಕೊನೆಯಿಲ್ಲದಷ್ಟು ನಗು:
3k ಯ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬರದಿದ್ದರೂ ತೆರೆಮರೆಯಲ್ಲೇ ಕೆಲಸ ಮಾಡುತ್ತಿದ್ದ ಮಲ್ಲೇಶ್, ಪ್ರಮೋದ್  ಮುಂತಾದವರು ಮಾತಿಗೆ ಸಿಕ್ಕಿದ್ದು, ಫೋಟೋಗಳಲ್ಲಿ ಬಂಧಿಯಾಗಿದ್ದು ಕಾರ್ಯಕ್ರಮ ಮುಗಿದು ತಿಂಡಿಗೆ ವೇದಿಕೆಯಾದಾಗ್ಲೇ. ಎದ್ದೇಳು ಕನ್ನಡಿಗ ಗೀತೆ ಬರೆದ ಸತೀಶ್ ಅವರೊಂದಿಗೂ, ಸಂಗೀತ ಸಂಯೋಜನೆಗಾರ ವಿಶಾಲ್ ಮತ್ತು ಗಾಯಕ ರವಿಕಿರಣ್ ಅವರೊಂದಿಗೂ ನಡೆಸಿದ ಮಾತುಕತೆ ಖುಷಿ ಕೊಟ್ಟಿತು. ಜೇಪಿ, ಗುರುನಾಥ್ ಬೋರಗಿ, ಶ್ರೀಕಾಂತಣ್ಣ, DOM ಮಹೇಶ್ ಗೌಡ, ಸತೀಶ ನಾಯ್ಕ್ ಭದ್ರಾವತಿ ಅವರಿದ್ದಲ್ಲಿ ನಗೆಯಿಲ್ಲದಿರುತ್ಯೆ ? ಇನ್ನೊಂದಿಷ್ಟು ಕಾಲೆಳೆತ, ನಗೆಯ ಅಲೆ. ಕಪ್ಪು-ಹಣ, ಬಿಳಿ-ಹಣ ಮುಂತಾದ ವಿಷಯಗಳ ಚರ್ಚೆಗೂ ನಾಂದಿಯಾದ ತಿಂಡಿ ಕಾರ್ಯಕ್ರಮ ಒಂದಿಷ್ಟು ಫೋಟೋ ಸೆಷನ್ನುಗಳಿಗೂ ಸಾಕ್ಷಿಯಾಯಿತು. ಘಂಟೆ ಏಳೂ ಕಾಲಾಗ್ತಾ ಬಂದಿದ್ರಿಂದ ಹಗೂರಕ್ಕೆ ಒಬ್ಬೊಬ್ಬರೇ ಖಾಲಿಯಾಗುತ್ತಾ ಬಂದಿದ್ರೂ ಬ್ಲಾಸಂ ಶಾಲೆಯಲ್ಲಿನ ನಗೆಯಲೆಗಳು ನಿಂತಿರ್ಲಿಲ್ಲ.  ಇನ್ನೂ ಎರಡೂವರೆ ತಾಸಿನ ಬಸ್ ಪ್ರಯಾಣ ಬಾಕಿಯುಳಿದಿದ್ದ ಕಾರಣ ಅಲ್ಲಿಂದ
ಹೊರಡಲೇ ಬೇಕಾದ ಬಾರದ ಮನಸ್ಸು ನನ್ನದಾದರೂ ಅದೆಷ್ಟೋ ಬ್ಲಾಗಿಗ, ಮುಖ ಹೊತ್ತುಗೆಯ ಗೆಳೆಯರನ್ನು ಮುಖತಃ ಕಂಡ, ಕೈಲಾಸಂ ಅವರ ಸಾಹಿತ್ಯಕ್ಕೆ, ಅವರ ಜೀವನದ ಅನುಭವಗಳಿಗೆ ಕಿವಿಯಾದ ಖುಷಿಯೊಂದಿಗೆ,,ಬರಲಿರೋ ಹುಟ್ಟಿದಬ್ಬಕ್ಕೆ ಮುಂಚೆಯೇ ಒಂದು ಬರ್ತಡೇ ಗಿಫ್ಟ್ ಪಡೆದ ಸಂಭ್ರಮದಲ್ಲಿ.. 











ಹೀಗೊಂದು ಕಾರ್ಯಕ್ರಮ ವರದಿ,..
ಕೊನೆಯ ಬೆಂಚಿನ ಹುಡುಗರಿಂದ..  

Saturday, November 5, 2016

ಕರೆಂಟಿಲ್ಲದ ಕಾರ್ತೀಕವೂ ಕನ್ನಡವಿಲ್ಲದ ಮಾಲ್ಗಳೂ

Karthika @Kundalahalli Nagalingeshwara temple
ಇವತ್ತು ನಮ್ಮ ಕೆ.ಇ.ಬಿಯವ್ರಿಗೆ ಅದೆಷ್ಟು ಒಳ್ಳೆಯ ಬುದ್ಧಿ ಬಂದು ಬಿಟ್ಟಿದೆ ಅಂತೀರಾ ? ನಮ್ಮ ನಾಗಲಿಂಗೇಶ್ವರ ದೇವಸ್ಥಾನದ ಕಾರ್ತೀಕ ಎಲ್ಲರೂ ನೋಡ್ಲಿ ಅಂತ ಇಡೀ ಏರಿಯಾದ ಕರೆಂಟು ತೆಗ್ದಿದಾರೆ ! ಬೀದೀಲಿ ಎಲ್ಲರ ಮನೆಯೆದ್ರಿಟ್ಟಿರೋ ದೀಪಗಳ್ನ ನೋಡೋದು ಅದೆಷ್ಟು ಚೆಂದ ಅಂತೀರಿ. ಕೆ.ಇ.ಬಿಯವರ ಈ ಸೌಂದರ್ಯಪ್ರಜ್ಞೆ ಒಂದು ಸಮುದಾಯದ ಪರವಾಗಿದೆ, ಉರುಸ್, ಚರ್ಚುಗಳ ಕಾರ್ಯಕ್ರಮಗಳಲ್ಲೂ ಇದೇ ತರ ಮಾಡಿ ಅವುಗಳನ್ನೂ ಚೆಂದಗಾಣಿಸಿಕೊಡಬಹುದು. ಆದರೆ ಆ ತರ ಮಾಡದ ಕೆ.ಇ.ಬಿಯವ್ರನ್ನ ನಾವು ಖಂಡಿಸ್ತೀವಿ, ಖಂಡಿಸ್ತೀವಿ ಅಂತ ಯಾವ ಬುದ್ಧಿಜೀವಿಗಳೂ ಈ ಕಡೆ ಬರದೇ ಇದ್ದಿದ್ದು ಯಾಕೋ ಬೇಸರ ತರಿಸ್ತಿದೆ. ಬಹುಷಃ ಯಾವ ಪ್ರಚಾರ, ಪತ್ರಿಕೆಗಳೂ ಬಾರದ ಪ್ರದೇಶ ಇದು ಅಂತ ಕೈಬಿಟ್ಟಿರಬೇಕು ಅಂತೊಂದಿಷ್ಟು ಗುಸುಗುಸುಗಳು ಕತ್ಲಲ್ಲೇ ಕೇಳಿಬರ್ತಿದ್ವು ಅಂತ ನಮ್ಮ ಪ್ರತಿನಿಧಿ ಗುಂಡಣ್ಣ ವರದಿ ಮಾಡ್ತಿದ್ದಾರೆ- ಕತ್ಲಳ್ಳಿ ನ್ಯೂಸ್, ಕುಂದ್ಲಳ್ಳಿ

ಕುಂದ್ಲಳ್ಳಿ ಅನ್ನೋಕೆ ಅವಮಾನ ಅಂತ ನಮ್ಮದು ಕಾಸ್ಮೋಸ್ ಅಂತನ್ನೋ ಜನರ ಹೆಮ್ಮೆಗೆ ಮುಕುಟವಿಟ್ಟಂತಿರೋ ಕಾಸ್ಮೋಸು ಮಾಲಿನಲ್ಲಿ ಈಗ ದೀಪಾವಳಿ ಸಂಭ್ರಮ. ಕೆಳ ಮಹಡಿಯಲ್ಲಿರೋ ಟ್ಯಾಕೋ ಬೆಲ್ಲು,ಫ್ಯಾಬ್ ಇಂಡಿಯಾ, ಪ್ಯಾಂಟಲೂನ್ಗಳಲ್ಲಿ ಕನ್ನಡದ ಲವಲೇಶವಿಲ್ಲ. ಸರಿಯಪ್ಪ ಅಂತ ಮೇಲಿನ ಮಹಡಿಯಲ್ಲಿ, ಅಲ್ಲೂ ಇಲ್ಲ. ಮೂರನೇ ಮಹಡಿ ? ಊಹೂಂ. ನಾಲ್ಕನೇ ಮಹಡಿಯಲ್ಲಿರೋ ಐನಾಕ್ಸಲ್ಲಾದ್ರೂ ಕನ್ನಡ ಚಿತ್ರಗಳಿರ್ಬೋದಾ ಅಂತಂದ್ರೆ ಒಂದೂ ಇರ್ಬಾರ್ದಾ ? ಹಿಂದಿ, ಇಂಗ್ಲೀಷುಗಳು ಹೋಗ್ಲಿ ಮಲೆಯಾಳಂ, ತಮಿಳು, ತೆಲುಗು ಚಿತ್ರಗಳಿಗೆಲ್ಲಾ ಮೂರ್ನಾಲ್ಕು ಶೋ. ಕನ್ನಡ ಚಿತ್ರನ ದುರ್ಬೀನಲ್ಲಿ ಹುಡ್ಕಿದ್ರೂ ಸಿಗ್ಬಾರ್ದಾ ? ನಾಲ್ಕೈದು ನಿಮಿಷ ಹುಡುಕಿದ್ಮೇಲೆ ಸಾಗರ, ಶಿವಮೊಗ್ಗ ಹೀಗೆ ಸುಮಾರಷ್ಟು ನಗರಗಳಲ್ಲಿ ಯದ್ವಾತದ್ವಾ ಓಡ್ತಿರೋ ಸಂತು ಸ್ಟ್ರೇಟ್ ಫಾರ್ವರ್ಡಿಗೆ ಎರಡು ದಿನಕ್ಕೊಂದು ಶೋ ಅಂತ ಗೊತ್ತಾಯ್ತು. ನಮ್ಮ ಬಿ.ಎಂ.ಟಿ.ಸಿಯ ಬಸ್ಸುಗಳಲ್ಲೇ ಕನ್ನಡ ಬರುತ್ತೆ ಸಾರ್. ಇನ್ನು ಮಾಲ್ಗಳಲ್ಲಿರೋ ಎಲ್.ಇ.ಡಿಗಳಲ್ಲಿ ಕನ್ನಡ ಬರಲ್ವಾ ಅನ್ನೋ  ಪ್ರಶ್ನೆಗೆ ಉತ್ತರ ಕೊಡೋಕೆ ಅಲ್ಲಿನ ನಾಲ್ಕು ಮಹಡಿಗಳಲ್ಲೂ ಯಾರಿರಲಿಲ್ಲ ಅಂತ ನಮ್ಮ ಪ್ರತಿನಿಧಿ ಇಳಾ ಮೇಡಂ ಸಿಟ್ಟಿಂದ ವರದಿ ಮಾಡಿದ್ದಾರೆ- ಕತ್ಲಳ್ಳಿ ನ್ಯೂಸ್, ಕಾಸ್ಮೋಸ್ ಮಾಲ್ ಅಲಿಯಾಸ್ ಕುಂದಲಹಳ್ಳಿ

ಇದೆಂತಾ ಮರ್ಲು ಮಾರ್ರೆ. ಊರಲ್ಲೆಲ್ಲಾ ಕರೆಂಟಿಲ್ಲ. ಇಲ್ನೋಡಿದ್ರೆ ಈ ನಮ್ನಿ ಕರೆಂಟ್ ವೈರ್ ನೇತಾಕಿರೂ. ದೀಪಾವಳಿ ಅಂತ ದೀಪ ಹಚ್ಚೋದು ಬಿಟ್ಟು ಹಿಂಗೆ ಕರೆಂಟು ವೈರು ನೇತಾಕೂದಾ ಅಂತ ಬೈಯ್ತಿದ್ದ ನಮ್ಮ ಮಂಜಣ್ಣ. ಅಲ್ದಾ ಮಂಜಣ್ಣ. ಇದು ಕರೆಂಟು ವೈರಲ್ದೋ. ಎಲೆಕ್ಟ್ರಿಕ್ ದೀಪ. ಹೊಸ ಫ್ಯಾಷನ್ನಿದು. ಈಗಿನ ಜನ ಬಲ್ಬು ಹಾಕಿದ್ರೆ ಕರೆಂಟು ವೇಸ್ಟು ಹೇಳಿ ಎಲ್.ಇ.ಡಿ, ಸಿ.ಎಫ್. ಎಲ್ಲು ಹೇಳಿ ಹಾಕ್ತ. ಆದ್ರೆ ಕೊನೆಗೆ ಹಿಂಗೆ ಕರೆಂಟ್ ವೇಸ್ಟ್ ಮಾಡ್ತ ಅಂತಂತಿದ್ಲು ಸರಿತಾ. ಹೇ ಇವ್ರು ನಮ್ಮೂರ ಪ್ರಶಸ್ತಿ, ರಂಜನ್ ಅಲ್ದನಾ ? ನಾವೂ ಇವ್ರು ಜತೆಗೊಂದು ಸೆಲ್ಫಿ ತೆಕ್ಕಳನ ಬಾರಾ ಅಂತ ಸರಿತಾ ವಿಷಯಾಂತರ ಮಾಡಿ ಸಮಾಧಾನ ಮಾಡೋವರೆಗೂ ಮಂಜಣ್ಣನ ಬೈಗುಳ ಮುಗಿದಿರಲಿಲ್ಲ. ದೇವಸ್ಥಾನದ ದೀಪಕ್ಕೆ ಎಣ್ಣೆ ಹಾಕೂದು ಎಣ್ಣೆ ವೇಸ್ಟು ಅಂಬ್ರು ಈ ಜನ. ಈಗ್ನೋಡಿರೆ ಬೀದಿಲಿರೋ ಕರೆಂಟೆಲ್ಲಾ ಇವ್ರೊಬ್ಬದ್ದೇ ಹೇಳೂ ಹಂಗೆ ಮಾಡ್ತ್ರಪ. ಹೇಳೂದು ಶಾಸ್ತ್ರ, ತಿನ್ನೂದು ಬದ್ನೇಕಾಯೇ ಅಂತ ಬಯ್ಕೊಳ್ತಾ ಕಾಸ್ಮೇಸ್ ಮಾಲಿನ ಝಗಮಗಿಸೋ ದೀಪಾಲಂಕಾರದ ಬಗ್ಗೆ ವರದಿ ಮಾಡಿದ್ದಾರೆ ನಮ್ಮ ಪ್ರತಿನಿಧಿಗಳಾದ ಸರಿತಾ ಸಾಗರ ಮತ್ತು ಮಂಜುನಾಥ್ ಮಂಗಳೂರು-ಕತ್ಲಳ್ಳಿ ನ್ಯೂಸ್, ಕುಂದಲಹಳ್ಳಿ

ನಮ್ಮೂರ ಟಿ.ವಿ ಪ್ರತಿನಿಧಿಗಳೇನೋ ಭೇಟಿಯಾಗಿದ್ರು. ಆದ್ರೆ ಕರೆಂಟು ಕಂಬಕ್ಕೆ ಕಲ್ಲೊಡೆಯಬೇಕು ಅನ್ನೋ ಪುಂಡುಡ್ರೂ ಮೊಬೈಲು ಬ್ಯಾಟರೀನೋ, ಇನ್ಯಾರದೋ ಮನೆಯ ಹಣತೆನೋ ಎತ್ಕಂಡು ಬಂದು ಕಲ್ಲೊಡೆಯಬೇಕಾದಂತಹ ಕತ್ಲು ಅವತ್ತು. ಬೇರೆ ದಿನದಲ್ಲೆಂತೂ ಬರಲ್ಲ. ಇವತ್ತಾದ್ರೂ ಆಫೀಸಿಗೆ ಬರ್ರಿ ಅಂತ ಕರದ್ರೂ ಅಂತ ಅಲ್ಲಿಗೆ ಹೋದ್ರೆ ಅಲ್ಲೂ ಕತ್ಲು. ಅದೇನು ರಾಜಕೀಯ ಪಕ್ಷದವರ ಚಾನಲ್ಲೇ ?  ದುಡ್ಡು ಹೇರಳವಾಗಿದ್ದು ೨೪ ಘಂಟೆ ಯು.ಪಿ.ಎಸ್ ಬ್ಯಾಕಪ್ ಇಡೋಕೆ ? ಇದ್ದೊಂದು ಯು.ಪಿ.ಎಸ್ ಆದ್ರೂ ಮಧ್ಯಾಹ್ನದಿಂದ ಕರೆಂಟಿಲ್ಲದ ದಿನದಲ್ಲಿ ಎಷ್ಟೊತ್ತು ಬಂದೀತು ? ಗುಂಡ, ಇಳಾ, ಸರಿತಾ ಮತ್ತು ಮಂಜಣ್ಣನ ರಿಪೋರ್ಟುಗಳನ್ನ ಒಪ್ಪವಾಗಿಸಿ ಒಂದು ನ್ಯೂಸ್ ಮಾಡೋಕೆ ಕರೆಂಟ್ ಯಾವಾಗ ಬರುತ್ತೋ ಅನ್ನೋ ಬೇಜಾರಲ್ಲಿ ನಮ್ಮ ಮ್ಯಾನೇಜರ್ ಪುಂಡಣ್ಣ ಅಲ್ಲೇ ತಿರುಗ್ತಾ ಇದ್ರು. ಅವ್ರ ಪ್ರತಿನಿಧಿಗಳು ಕತ್ಲು ಅಂತ ರಿಪೋರ್ಟೇ ಕೊಡದೆ ಹಂಗೇ ಮನೆಗೆ ಎಸ್ಕೇಪ್ ಆಗ್ಬುಟ್ರಾ ಅಂತ ತಲೆಕೆಡಿಸ್ಕೊಂಡಿದ್ದ ಅವ್ರಿಗೆ ನಮ್ಮನ್ನ ನೋಡಿ ಖುಷಿ ಆಯ್ತು. ಕರೆಂಟು ಬರೋ ತನಕ ಏನಾದ್ರೂ ಟೈಂ ಪಾಸ್ ಮಾಡ್ಬೇಕಲ್ಲ. ಇವತ್ತಿನ ನ್ಯೂಸನ್ನು ಪ್ರಸಾರ ಮಾಡದೇ ಮನೆಗೋಗಂಗಿಲ್ಲ. ಹಂಗೇ ಸುಮ್ಮನೇ ಕೂತ್ರೆ ಇಲ್ಲಿರೋರೆಲ್ಲಾ ಮನೆಗೋಗಿ ಬಿಡ್ತಾರೆ ಅನ್ನೋ ದೂರಾಲೋಚನೆ ಬಂದ ಪುಂಡಣ್ಣ ನಿಮಗೆಲ್ಲಾ ನೆರಳು ಬೆಳಕಿನ ಆಟ ತೋರುಸ್ತೀನಿ ಅಂತ ಬೇಡ ಬಿಡಿ ಅಂದ್ರೂ ಬಿಡದಷ್ಟು ಒತ್ತಾಯ ಮಾಡಿ ಒಳಗೆ ಕರ್ಕೊಂಡೋದ್ರು. ಪುಂಡಣ್ಣ ಮೂಲೆಯಲ್ಲೊಂದು ಮೊಬೈಲ ಬ್ಯಾಟರಿಯಿಟ್ಟು ಅದ್ರ ಬೆಳಕಿಗಡ್ಡ ತಮ್ಮ ಕೈಯನ್ನಿಟ್ಟು ನೆರಳಲ್ಲೇ ಆನೆ, ಮೊಲ, ಬೊಗಳೋ ನಾಯಿ, ಗಿಳಿ, ಅರಮನೆ ಎಲ್ಲಾ ಮಾಡ್ತಿದ್ರೆ ಎಲ್ರಿಗೂ ಬಾಲ್ಯದ ನೆನಪುಗಳ ಮೆರವಣಿಗೆ. ಅದ್ರ ಮಧ್ಯೆ ಒಂದಿಷ್ಟು ಮಾತು, ನಗೆಯಲ್ಲಿ ಕಳೆದು ಹೋಗಿದ್ದ ನಮಗೆ ಯಾವಾಗ ಇನ್ನೊಂದು ಘಂಟೆ ಕಳೆದುಹೋಯ್ತೋ, ಕರೆಂಟಿಲ್ಲದೇನೇ ಖುಷಿಯಾಗಿರೋ ಜನರ ಖುಷಿಗೆ ಭಂಗ ತರೋ ಉದ್ದೇಶದಿಂದ ಕೆ.ಇ.ಬಿಯವ್ರು ಯಾವಾಗ ಕರೆಂಟು ಕೊಟ್ರೋ ಗೊತ್ತಾಗಲಿಲ್ಲ.  ಈ ಮೊಬೈಲು, ಇಂಟರ್ನೆಟ್ಟು, ವಾಟ್ಸಾಪು, ಫೇಸ್ಬುಕ್ಕು, ಟ್ವಿಟ್ಟರುಗಳೆಂಬ ಕೃತ್ತಿಮ ಜಗತ್ತಲ್ಲೇ ಕಳೆದುಹೋಗೋ ನಾವು ಪರಸ್ಪರ ಮುಖ ಕೊಟ್ಟು ಮಾತಾಡದೇ ಎಷ್ಟು ಕಾಲವಾಗಿತ್ತೋ. ಅದಕ್ಕೊಂದು ಅವಕಾಶ ಮಾಡಿಕೊಟ್ಟ ಈ ಕರೆಂಟಿಲ್ಲದ ದಿನಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮಿ ಅನಿಸಿದ್ದು ಸುಳ್ಳಲ್ಲ. ಹಿಂಗೆ ಆಗಾಗ ಕರೆಂಟು ಹೋಗ್ತಾ ಇದ್ರೆ ಒಂದಿಷ್ಟು ಜೀವಗಳು ಹತ್ರವಾಗುತ್ತೆ ಅಂದ್ರೆ ಅದೇ ಒಳ್ಳೇದೇನೋ ಅನ್ಸಿದ್ದೂ ಸುಳ್ಳಲ್ಲ.
ನೆರಳು ಬೆಳಕಲ್ಲಿ ನಾಯಿಯನ್ನು ತೋರಿಸೋ ಪ್ರಯತ್ನ. ಫೋಟೋಗ್ರಫಿ ಕೃಪೆ: ನಂ ರೂಂ ಮೇಟು ಸಿದ್ದಾರೂಡ ಅವ್ರುದ್ದು