Saturday, June 27, 2015

ವೈರಸ್ಸಿಲ್ಲದ ಲೋಕದಲ್ಲಿ

ಏ ನನ್ನ ಕಂಪ್ಯೂಟರ್ ಸಿಕ್ಕಾಪಟ್ಟೆ ನಿಧಾನವಾಗ್ಬಿಟ್ಟಿದೆ, ಒಂದು ಫೋಲ್ಡರ್ ತೆರೆಯೋಕೆ ೨-೩ ನಿಮಿಷ ಬೇಕು. ಅದೆಂತದೋ ವೈರಸ್ ಬಂದು ಕೂತ್ಬಿಟ್ಟಿದೆ ಕಣೋ ಅಂತಿದ್ದ ಫ್ರೆಂಡು.ಹೂಂ, ಇವ ಯಾವುದೇ ಜಾಲತಾಣ ತೆರೆದ್ರೂ ಅದೆಂತದೋ ಜಾಹೀರಾತು ಬಂದು ಕುಣ್ಯತ್ತೆ ಮಾರಾಯ. ವೈರಸ್ಸು, ಟ್ರೋಜನ್ನು, ಮಾಲ್ವೇರು.. ಇನ್ನೆಂತೆಂತ ಹಾಳು ಮೂಳು ಬಂದು ಕೂತಿದ್ಯೋ ಇದ್ರಲ್ಲಿ ಅಂದ ಇನ್ನೊಬ್ಬ.ಈ ವಿಂಡೋಸು, ಇದ್ರ ದುಬಾರಿ ದುಡ್ಡು ಕೊಟ್ರೂ ಕೆಲಸ ಮಾಡದ . ಎಂಥದದು ? ಆಂಟಿ ವೈರಸ್ಸಾ ? ಅದ್ನ ಹಾಕೂ ಈ ಕತೆ ನಂದು. ವೈರಸ್ಸೇ ಬರದ್ದೆಂತೋ ಇದ್ಯಂತಲ್ಲ, ಎಂಥ ಎಕ್ಸೋ ಅದು, ಅದನ್ನ ಹಾಕ್ಕೊಡೋ ಎಂದ ಮೊದಲನೆಯ ಗೆಳೆಯ.

ವೈರಸ್ಸೇ ಬಾರದ ಸಾಫ್ಟವೇರೇ ?
ವೈರಸ್ಸನ್ನ ತಡೆಯುವಂತಹ ತಂತ್ರಾಂಶಗಳ್ಇದ್ರೂ ಅದ್ರಲ್ಲಿ ಎಲ್ಲಾ ವೈರಸ್ಸುಗಳಿಗೂ ಉತ್ತರವಿರಲೇಬೇಕೆಂದಿಲ್ಲ. ಹೊಸ ವೈರಸ್ಸಿನೆದ್ರು ಹಳೇ ಆಂಟೀ ವೈರಸ್ಸು ಥಂಡಾ ಹೊಡಿಬಹುದು. ಈ ತಂತ್ರಾಂಶದ ಮೂಲಕ ವೈರಸ್ಸನ್ನ ತಡೆಯೋ ಬದಲು ನಮ್ಮ ಗಣಕದ ಎಲ್ಲಾ ತಂತ್ರಾಂಶಗಳು ಕಾರ್ಯನಿರ್ವಹಿಸಲು ಅಗತ್ಯ ವೇದಿಕೆಯಾದ ಕಾರ್ಯನಿರ್ವಹಣಾ ವ್ಯವಸ್ಥೆಯೇ(operating system) ವೈರಸ್ಸುಗಳನ್ನು ಒಳಬರೋಕೆ ಬಿಡದಿದ್ರೆ ?

ವೈರಸ್ ಬಾರದ ಕಾರ್ಯನಿರ್ವಹಣಾ ವ್ಯವಸ್ಥೆ ಇದೆಯೇ ?
ಸಾವಿಲ್ಲದ ಮನೆಯಿಂದ ಸಾಸಿವೆ ತಾ ಎಂಬ ಬುದ್ಧನ ಮಾತನ್ನು ಪಾಲಿಸಲಾಗದ ತಾಯ ಗತಿಯೇ ವೈರಸ್ಸಿಲ್ಲದ ಕಾರ್ಯನಿರ್ವಹಣಾ ವ್ಯವಸ್ಥೆ ಹುಡುಕಹೊರಟವನದೂ ! ದುಡ್ಡು ಕೊಟ್ಟು ಕೊಳ್ಳಬೇಕಾದ(ಪೈರೇಟೆಡ್ ಕಾಪಿಗಳ ಬಗ್ಗೆ ಹೇಳುತ್ತಿಲ್ಲವಿಲ್ಲಿ) ವಿಂಡೋಸಿನಲ್ಲಿ ಮಾತ್ರ ವೈರಸ್ಸುಗಳಿರುತ್ವೆ, ಮುಕ್ತ ತಂತ್ರಾಂಶವಾದ ಲಿನಕ್ಸಿನಲ್ಲಿ ಯಾವುದೇ ವೈರಸ್ಸಿರೋಲ್ಲ ಎಂಬ ಮಾತಿತ್ತು ಮುಂಚೆ. ಆದ್ರೆ ಈಗಿನ ಲಿನಕ್ಸಿನಲ್ಲಿ ವೈರಸ್ ಬರೋ ಸಾಧ್ಯತೆ ವಿಂಡೋಸಿಗಿಂತ ತುಂಬಾನೇ ಕಮ್ಮಿ ,ಆದ್ರೆ ಬರಲೇಬಾರದೆಂದಿಲ್ಲ ಅಂತಾರೆ ತಜ್ಞರು.

ಅಂತಾದ್ದೇನಿದೆ ಲಿನಕ್ಸಿನಲ್ಲಿ ?
ಅ.ಲಿನಕ್ಸೆಂಬೋ ಕಾರ್ಯನಿರ್ವಹಣಾ ವ್ಯವಸ್ಥೆ ಮುಕ್ತವಾದರೂ ಅದನ್ನ ಬಳಸೋರ ಸಂಖ್ಯೆ ತುಂಬಾ ಕಮ್ಮಿ. ಎಲ್ಲೋ ಒಬ್ಬಿಬ್ಬರು ಬಳಸೋ ವ್ಯವಸ್ಥೆಗೆ ಯಾರಪ್ಪಾ ವೈರಸ್ ಬರೀತಾರೆ ಅನ್ನೋದು ಒಂದು ಗುಂಪಿನ ಮಾತು. ಆದ್ರೆ ಅದು ಪೂರ್ಣ ಸತ್ಯವಲ್ಲ. ಉಂಬುಂಟು, ಕುಬುಂಟು, ಎಡುಬುಂಟು ಲಿನಕ್ಸುಗಳ ಜೊತೆಗೆ ಸೂಸೆ(ಸೊಸೆ ಅಲ್ಲ ಮತ್ತೆ), ರೆಡ್ ಹ್ಯಾಟ್, ಮಿಂಟ್ ಅಂತ ಹತ್ತಾರು ವೆರೈಟಿಗಳಿವೆ ಲಿನಕ್ಸಿನದು. ಅವೆಲ್ಲದರ ಒಟ್ಟು ಬಳಕೆದಾರದ ಸಂಖ್ಯೆ ಕಮ್ಮಿಯೇನಲ್ಲ. ಆದ್ರೆ ಪ್ರತಿಯೊಂದರ ಕಾರ್ಯನಿರ್ವಹಣಾ ವಿಧಾನದಲ್ಲೂ ಭಿನ್ನತೆಯಿರೋದ್ರಿಂದ ಒಂದ್ರಲ್ಲಿ ಕೆಲಸ ಮಾಡಿದ(ಕೆಲಸ ಹಾಳು ಹಾಡಿದ) ವೈರಸ್ಸು ಮತ್ತೊಂದೆಡೆ ಕೆಲಸ ಮಾಡದೇ ಇರಬಹುದು.ಹಾಗಾಗಿ ಯದ್ವಾ ತದ್ವಾ ತೊಂದರೆ ಕೊಡುವಂತಹ ವೈರಸ್ಸುಗಳು ಲಿನಕ್ಸಿಗೆ ಕಮ್ಮಿಯೆಂದೇ ಹೇಳಬಹುದು.

ಆ.ರಿಪೋಸ್:
ಲಿನಕ್ಸ್ ಹೆಚ್ಚು ಸುರಕ್ಷಿತವೆಂದು ನಂಬೋಕೆ ಮತ್ತೊಂದು ಕಾರಣ ರಿಪೋಸ್(repo).ವಿಂಡೋಸಿನಲ್ಲಿ ಯಾವ ಜಾಲತಾಣದಿಂದ ಇಳಿಸಿಕೊಂಡ ತಂತ್ರಾಂಶವನ್ನಾದರೂ ಸ್ಥಾಪಿಸ(install)ಬಹುದು. ಆ ತರಹ ಇಳಿಸಿಕೊಂಡ ತಂತ್ರಾಂಶಗಳ ಜೊತೆಗೇ ಎಷ್ಟೋ ವೈರಸ್ಸುಗಳು, ಮಾಲ್ವೇರುಗಳು ಉಚಿತವಾಗಿ ನಮ್ಮ ಗಣಕವನ್ನು ಪ್ರವೇಶಿಸಿರುತ್ತವೆ ! ಹಾಗಾಗಿ ಆ ತಂತ್ರಾಂಶವನ್ನು ಸ್ಥಾಪಿಸುವಾಗ ಅಥವಾ ಆ ತಂತ್ರಾಂಶದ ಕಾರ್ಯನಿರ್ವಹಣಾ ವೇಳೆ ಯಾವ ಅನಾಹುತವಾದರೂ ಆಗಬಹುದು ! ಆದರೆ ಲಿನಕ್ಸಲ್ಲಿ ಹಾಗಲ್ಲ.ಅದ್ರದ್ದೇ ಆದ ರಿಪೋಸಿಟರಿಗಳಿಂದ ಮಾತ್ರ ಸಂಬಂಧಪಟ್ಟ ತಂತ್ರಾಂಶಗಳು ಅಪ್ ಗ್ರೇಡ್ ಅಥವಾ ಸ್ಥಾಪನೆ ಆಗುತ್ವೆ. ಆ ರಿಪಾಸಿಟರಿಗಳ ಪ್ರತೀ ತಂತ್ರಾಂಶಕ್ಕೂ ತನ್ನದೇ ಆದ ಗಣಕೀಕೃತ ಸಹಿ(digital signature) ಇರುತ್ತೆ.ಹಾಗಾಗಿ ಅದ್ರಲ್ಲೇನಾದ್ರೂ ಹೆಚ್ಚು ಕಮ್ಮಿ ಮಾಡಿ ಗಣಕದ ಒಳಗೆ ತುರುಕೋಕೆ ಹೋದ್ರೆ ಅದ್ರ ಸಹಿಯಲ್ಲಿನ ವ್ಯತ್ಯಾಸವನ್ನು ಸುಲಭವಾಗಿ ಕಂಡುಹಿಡಿಯೋ ಕಾರ್ಯನಿರ್ವಹಣಾ ವ್ಯವಸ್ಥೆ ಮುಂದುವರಿಯಲೇ ಬಿಡೋಲ್ಲ. ನಂಬಿಕೆಗೆ ಅರ್ಹವಲ್ಲದ ಯಾವುದೇ ತಾಣದಿಂದ ಇಳಿಸಿದ ಅಥವಾ ಸ್ವತಃ ಕಿತಾಪತಿ ಮಾಡಿದ ಏನನ್ನೂ ಗಣಕಕ್ಕೆ ತುರುಕಲು ಸಾಧ್ಯವಿಲ್ಲ ಅಂದ ಮೇಲೆ ವೈರಸ್ಸೆಲ್ಲಿಂದ ಬರಬೇಕು ? ರಿಪೋಗಳ ಮುಖಾಂತರವೇ ತಂತ್ರಾಂಶದ ಅಪ್ ಗ್ರೇಡ್ ಆಗುವುದನ್ನು ಚಿತ್ರ ೧-೨ ರಲ್ಲಿ ನೋಡಬಹುದು.


ಇ.. Discretionary Access Control(DAC).
ಈ DAC ಅನ್ನೋದು ಲಿನಕ್ಸ್ ಸುಭದ್ರ ಅನ್ನೋಕೆ ಮತ್ತೊಂದು ಕಾರಣ. ಯಾವುದೇ ಬಳಕೆದಾರ ಒಂದು ಫೈಲನ್ನ ಅಥವಾ ಡೈರೆಕ್ಟರಿಯನ್ನ ಸೃಷ್ಟಿಸುವಾಗ ಅದನ್ನು ಯಾರ್ಯಾರು ಉಪಯೋಗಿಸಬಹುದು ಎಂಬುದನ್ನ ನಿರ್ಧರಿಸಬಹುದು. ಲಿನಕ್ಸಿನಲ್ಲಿ ಯಾವುದೇ ಕಡತಕ್ಕಿರುವ ಭದ್ರತೆಯನ್ನು ಅದರ ಬಗೆಗಿನ ಮಾಹಿತಿಹ ಹತ್ತು ಅಕ್ಷರಗಳಿಂದ ಗುರುತಿಸಬಹುದು. ಉದಾಹರಣೆಗೆ ಒಂದು ಕಡತದ ಭದ್ರತಾ ಮಟ್ಟ drwr--r-- ಅಂತ ಇರಬಹುದು(ಚಿತ್ರ ೩). ಇದರಲ್ಲಿ ಮೊದಲನೆಯ ಅಕ್ಷರ D ಅಂತಿದ್ದರೆ ಅದು ಡೈರೆಕ್ಟರಿ(ಹಲವು ಕಡತ ಅಥವಾ ಇನ್ನುಳಿದ ಡೈರೆಕ್ಟರಿಗಳ ಸಂಗ್ರಹ)ವೆಂತಲೂ ಅದಿಲ್ಲದಿದ್ದರೆ ಅದೊಂದು ಕಡತವೆಂದಲೂ ಅರ್ಥ. ನಂತರದ ಮೂರು ಅಕ್ಷರಗಳು ಕಡತವನ್ನು ಸೃಷ್ಠಿಸಿದವ ಏನು ಮಾಡಬಹುದು ಅಂತ. R--read(ಓದು), w--write(ಬರೆ), x--execute(ಆ ಕಡತವನ್ನು ಚಲಾಯಿಸುವ ಅನುಮತಿ). . ನಂತರದ ಮೂರು ಅಕ್ಷರಗಳು ಬಳಕೆದಾರನ ಗುಂಪಿಗೆ ಯಾವ ಅನುಮತಿ ಇರುತ್ತೆ ಎಂದು. ಕೊನೆಯ ಮೂರು ಅಕ್ಷರಗಳು ಉಳಿದವರಿಗೆ ಯಾವ ಅನುಮತಿ ಇರುತ್ತೆ ಅಂತ. ಮೇಲಿನ ಉದಾಹರಣೆಯಲ್ಲಿ(ಚಿತ್ರದಲ್ಲಿರುವಂತೆ) ಬಳಕೆದಾರ ತಾನು ಸೃಷ್ಠಿಸಿದ ಕಡತವನ್ನು ಓದಬಹುದು ಮತ್ತು ಅದಕ್ಕೆ ಬರೆಯಬಹುದು.ಬಳಕೆದಾರ ಇರುವ ಗುಂಪಿಗೆ ಸೇರಿದ ಉಳಿದ ಬಳಕೆದಾರರು ಆ ಕಡತಕ್ಕೆ ಬರೆಯಬಹುದು ಅಥವಾ ಅದನ್ನೋದಬಹುದು. ಹೊರಗಿನವರು ಅದನ್ನು ಓದಲಷ್ಟೇ ಸಾಧ್ಯ ಎಂಬುದು ಅದರರ್ಥ. ಹಾಗಾಗಿ ಮತ್ತೊಬ್ಬ ಬಳಕೆದಾರ ತನ್ನ ಕಡತಗಳನ್ನು ಬಳಸಿಕೊಳ್ಳಲು ಅನುಮತಿ ನೀಡದ ಹೊರತು ಒಂದು ಬಳಕೆದಾರನ ಮೂಲಕ ಹೇಗೋ ಒಳನುಗ್ಗಿದ ವೈರಸ್ಸು ಆ ಬಳಕೆದಾರನಿಗೆ ಸಂಬಂಧಪಟ್ಟ ಕೆಲ ಕಡತಗಳನ್ನು ಮಾತ್ರ ಸ್ಪರ್ಷಿಸಲು ಅಥವಾ ಹಾಳು ಮಾಡಲು ಸಾಧ್ಯ.

ಈ.root ಬಳಕೆದಾರ ಮತ್ತು ಭದ್ರತಾ ಕವಚಗಳು.

ಲಿನಕ್ಸನ್ನು ಸ್ಥಾಪಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ root ಎಂಬ ಬಳಕೆದಾರನನ್ನು ಮತ್ತು ಐಚ್ಚಿಕವಾಗಿ ನಮ್ಮ ಹೆಸರಿನ ಅಥವಾ ಹಲವು ಬಳಕೆದಾರರನ್ನು ಸೃಷ್ಠಿಸಲಾಗುತ್ತದೆ. ಮತ್ತು ಸೃಷ್ಠಿಸಿದ ಪ್ರತೀ ಬಳಕೆದಾರನಿಗೂ  ಅವನಿಗೆ ಸಂಬಂಧಪಟ್ಟ ಒಂದು ಕವಚ(shell) ವಿದ್ದು ಆ ಕವಚದೊಳಗಡೆ ಅನುಮತಿಸಿದಂತಹ ಕೆಲಸಗಳನ್ನು ಮಾತ್ರ ಅವನು ಮಾಡಬಹುದು. . ಉದಾಹರಣೆಗೆ ಎರಡು ಬಳಕೆದಾರರಿದ್ದರೆ ಇಬ್ಬರನ್ನೂ ಹಲವು ರೀತಿಯ ಭದ್ರತಾ ಕ್ರಮಗಳಿಂದ ಪ್ರತ್ಯೇಕಿಸಲಾಗಿರುತ್ತದೆ. ಉದಾಹರಣೆಗೆ ram ಅನ್ನೋ ಬಳಕೆದಾರ ಲಾಗಿನ್ ಆದಾಗ ಅವನ ಕೆಲಸಗಳು /usr/../ram/home ಎನ್ನುವ ಜಾಗಕ್ಕೆ ಅಥವಾ /home/ram ಅನ್ನುವ ಜಾಗಕ್ಕೆ ಹೋಗುತ್ತಾನೆ. ಅವನು ಮಾಡುವ ಕೆಲಸಗಳೆಲ್ಲಾ ಅಲ್ಲೇ ಕೇಂದ್ರಿತ.ಅವನು ಎಲ್ಲಿ ಹೋಗಬೇಕು ಎಂಬುದನ್ನ /etc/passwd ಅನ್ನೋ ಕಡತದಲ್ಲಿ ದಾಖಲಿಸಲಾಗಿರುತ್ತದೆ.ಅದೇ ತರಹ bheem ಅನ್ನುವವನ ಲಾಗಿನ್ ಆದಾಗ ಬರುವ ಜಾಗ /usr/.../bheem/home ಆಗಿರಬಹುದು . ಮುಂಚೆಯೇ ತಿಳಿಸಿದ ಭದ್ರತಾ ಕ್ರಮಗಳ ಜೊತೆಗೆ ಒಬ್ಬ ಮತ್ತೊಬ್ಬನ ಕಡತಗಳನ್ನು ಗೊತ್ತಿಲ್ಲದೇ ಡಿಲಿಟ್ ಮಾಡುವುದಾಗಲಿ, ಎಗರಿಸುವುದಾಗಲಿ ಮಾಡದಂತೆ ಈ ಕವಚಗಳಿಂದ ತಡೆಯಬಹುದು. ವಿಂಡೋಸಲ್ಲೂ ಈ ಕ್ರಮವಿದ್ದರೂ ಲಿನಕ್ಸಿನ ಭದ್ರತಾ ಕ್ರಮಗಳು ಅದಕ್ಕಿಂತ ಎಷ್ಟೋ ಹೆಚ್ಚಿವೆ ಅಂತಾರೆ.  ತನಗೆ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಕಾರ್ಯನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಯಾವ ಜಾಗಕ್ಕೆ ಹೋಗಲು, ಅಲ್ಲಿ ಯಾವ ಕೆಲಸವನ್ನೂ ಮಾಡಲು ಬಳಕೆದಾರನ ಕವಚ ಬಿಡೋದಿಲ್ಲ. ಆ ಎಲ್ಲಾ ಕೆಲಸ ಈ ಎಲ್ಲಾ ಬಳಕೆದಾರರ ದೊಡ್ಡಣ್ಣ root ನದು. ಇವರಿಗ್ಯಾರಿಗೂ ಇಲ್ಲದಷ್ಟು ಶಕ್ತಿ ಹೊಂದಿರೋ ಅವನು ಗಣಕದಲ್ಲಿ ಏನು ಬೇಕಾದ್ರೂ ಮಾಡಬಹುದು ! ಉದಾಹರಣೆಗೆ ಯಾವುದೇ ಬಳಕೆದಾರನಿಗೆ ಕೆಲಸವೊಂದಕ್ಕಾಗಿ ಹೆಚ್ಚಿನ ಅನುಮತಿಗಳನ್ನು ಕೊಡುವುದು, ಕಿತ್ತುಕೊಳ್ಳುವುದು, ಕಾರ್ಯನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಕೆಲಸಗಳನ್ನು root ಬಳಕೆದಾರನ ಮೂಲಕ ಮಾಡಬಹುದು. ಈ root ನ ಪಾಸವರ್ಡ್  ಅದನ್ನು ಸ್ಥಾಪಿಸಿದ ನಿಮಗೆ ಮಾತ್ರ ತಿಳಿದಿರುತ್ತೆ. ಹಾಗಾಗಿ ಯಾವುದೇ ಬಳಕೆದಾರನ ಮೂಲಕ ಗಣಕವ ಹೊಕ್ಕ ವೈರಸ್ಸಿಗೆ root ನ ಶಕ್ತಿ ಸಿಗುವ ತನಕ, ಅದು ಸಿಗದ ಕಾರಣ ಏನೂ ಮಾಡಲಾಗದೇ ಸುಮ್ಮನೇ ಕೂರಬೇಕಾಗುತ್ತದೆ.
ಉದಾಹರಣೆಗೆ ಚಿತ್ರ-೪ ರಲ್ಲಿರುವಂತೆ ಬಳಕೆದಾರ ತನಗೆ ಸಂಬಂಧವಿಲ್ಲದ ಕೆಲಸವನ್ನು ಮಾಡಲು ಹೊರಟಾಗ ಕಾರ್ಯನಿರ್ವಹಣಾ ವ್ಯವಸ್ಥೆ ಅದನ್ನು ಅನುಮತಿಸುವುದಿಲ್ಲ.

ಉ. ಮುಕ್ತತೆ:

The cathedral and the bazaar ಎಂಬ ಪುಸ್ತಕದಲ್ಲಿ ಎರಿಕ್ ಎಸ್.ರೈಮಂಡ್ ಎಂಬ ಲೇಖನ ಒಂದು ಮಾತು  ಹೇಳುತ್ತಾನೆ. ನೋಡೋ ನೂರು ಕಣ್ಣಿದ್ರೆ ಚುಕ್ಕಿಯಂತಹ ತಪ್ಪೂ ಪರ್ವತದಂತೆ ಗುರುತಿಸಲ್ಪಡುತ್ತೆ ಅಂತ. ಈ ಮಾತು ಲಿನಕ್ಸಿನ ಜನಕನೆಂದೇ ಖ್ಯಾತನಾದ ಲಿನಸ್ ಟೊವಾರ್ಡಸ್ಸಿನ ನೆನಪಿನಲ್ಲಿ "ಲಿನಸ್ ನಿಯಮ" ಅಂತಲೇ ಖ್ಯಾತಿ ಹೊಂದಿದೆ. ಇಲ್ಲಿ ಹೇಳೋಕೆ ಹೊರಟಿರುವುದೇನೆಂದರೆ  ಲಿನಕ್ಸಿನ ತಂತ್ರಾಂಶಗಳ ಕೋಡುಗಳು(code) ಅಂತರ್ಜಾಲದೆಲ್ಲೆಡೆ ಮುಕ್ತವಾಗಿ ಲಭ್ಯವಿರುತ್ತದೆ. ಹಾಗಾಗಿ ಅನೇಕ ತಂತ್ರಜ್ಞರು ಅದನ್ನ ತಮ್ಮ ಅದನ್ನ ಗಣಕಕ್ಕೆ ಹಾಕಿ ಬಳಸೋಕೆ ಪ್ರಯತ್ನಿಸ್ತಾರೆ. ಅದ್ರಲ್ಲಿರೋ ಹಲವು ಸೌಲಭ್ಯಗಳನ್ನ ಬಳಸುವಾಗ ಕಂಡುಬಂದ ನ್ಯೂನತೆಗಳನ್ನ ಸರಿಪಡಿಸೋಕೂ ಪ್ರಯತ್ನಿಸ್ತಾರೆ. ಜನ ಮುಕ್ತವಾಗಿ ಸಿಗೋ ತಂತ್ರಾಂಶದ ತಪ್ಪುಗಳ ಸರಿಪಡಿಸೋಕೆ ಪ್ರಯತ್ನಿಸ್ತಾರೇ ಹೊರತು ಅದಕ್ಕೆ ಹೊಸ ವೈರಸ್ಯಾಕೆ ಬರೀತಾರೆ ಅನ್ನೋದು ಮತ್ತೊಂದು ಗುಂಪಿನ ಪ್ರಶ್ನೆ. ಆದ್ರೆ ಅದೇ ಕೋಡಿನ ನ್ಯೂನತೆಗಳನ್ನ ತಿಳಿದುಕೊಂಡು ಅದಕ್ಕೊಂದು ಹೊಸ ವೈರಸ್ ಬರೀಬಾರದು ಅಂತೇನಿಲ್ಲ !

ಕೊನೇ ಗುಟುಕು:

ನೀವು, ನಿಮ್ಮ ಗಣಕ ಮತ್ತು ಅದರ ರೋಗಗಳು ನೀವದನ್ನ ಹೇಗೆ ಬಳಸ್ತೀರ ಅನ್ನೋದರ ಮೇಲೆ ನಿರ್ಧಾರಿತವಾಗಿರುತ್ತೆ.ನೆಟ್ಟಿಗೆ ಕನೆಕ್ಟೇ ಆಗದ , ಪೆನ್ ಡ್ರೈವೇ ಹಾಕದ ಗಣಕಕ್ಕೆ ಯಾವ ವೈರಸ್ಸೂ ಬರೋಲ್ಲ ಅನ್ನೋದು ಸಾರ್ವಕಾಲಿಕ ಸತ್ಯ ! ನೀವೆಲ್ಲಿಗೆ ಹೋಗ್ತೀರ, ಏನು ಮಾಡ್ತೀರ ಅನ್ನೋದ್ರ ಮೇಲೆ ನಿಮ್ಮ ಆರೋಗ್ಯ ಹೇಗಿರುತ್ತೋ ಅದೇ ತರಹ ನಿಮ್ಮ ಗಣಕ ಅನ್ನೋದು ಅದರ ಆರೋಗ್ಯದ ಗುಟ್ಟು.



ಈ ಲೇಖನ , ೨೬/೬/೨೦೧೫ ರ, ವಿಜಯ ನೆಕ್ಟ್ ಪತ್ರಿಕೆಯ, ಪುಟ ೧೬ರಲ್ಲಿ ಪ್ರಕಟವಾಗಿದೆ

Tuesday, June 16, 2015

ಕಾಡೋ ಕಾಡು

ಅಡವಿ ದೇವಿಯ ಕಾಡು ಜನಗಳ ಈ ಹಾಡು.. ನಾಡಿನ ಜೀವ ತುಂಬಿದೆ..ರಾಯರು ಬಂದರು ಮಾವನ ಮನೆಗೆ ಚಿತ್ರದಲ್ಲಿ ಎಸ್.ಪಿ.ಬಿ ಸಂಗಡಿಗರು ಹಾಡಿದ ಮೇಲಿನ ಹಾಡು ಕೇಳದವರಿಲ್ಲ ಅನಿಸುತ್ತೆ(ಕೊಂಡಿ ೧). ಜಂಗಲ್ ಬುಕ್ಕಿನ ಮೋಗ್ಲಿಯ ಕತೆಗಳನ್ನು ಕೇಳದ ಒಂದು ಪೀಳಿಗೆಯವರೇ ಇಲ್ಲವೆನ್ನುವಷ್ಟು ಪ್ರಸಿದ್ದಿ ಪಡೆದಿತ್ತು ಒಂದು ಪುಸ್ತಕ ಒಂದು ಕಾಲಕ್ಕೆ.ಕಾಡಲ್ಲಿ ಕಳಲೆಯನ್ನೋ, ಮರಗೆಸವನ್ನೋ , ಜೇನನ್ನೋ ಕೊಯ್ಯಲು ಹೋಗುತ್ತಿದ್ದ ಅಪ್ಪ, ಅಜ್ಜ ಅಲ್ಲೇ ಸಿಗುತ್ತಿದ್ದ ಹಲಸಿನ ಹಣ್ಣು ತೀರಾ ದೊಡ್ಡದಿದ್ರೆ ಮಾತ್ರ ಮನೆಗೆ ತರುತ್ತಿದ್ದರಂತೆ. ಸಣ್ಣ ಪುಟ್ಟದ್ದೆಲ್ಲಾ ಅಲ್ಲೇ ಸ್ವಾಹಾ ! ಆಹಾ, ಈ ತರದ ಮಾತುಕತೆಗಳನ್ನ ಹಳ್ಳೀಬದಿಯ ಒಂದಿಷ್ಟು ಜನರೆಂತೂ ಕೇಳೇ ಇರುತ್ತೀರಿ. ಪೇಟೇಲಿರೋ ಮಕ್ಕಳೂ ಈ ತರದ ಕಥಾನಕಗಳನ್ನ ಅವರಜ್ಜನ, ಅಜ್ಜಿಯ ಬಾಯಲ್ಲಿ ಕೇಳ್ತಿದ್ದಾಗ ಅವರ ಕಾಡಿನ ಕಲ್ಪನೆಯಲ್ಲಿ ಮಾಡರ್ನ್ ಜಂಗಲ್ ಬುಕ್ ಬಂದಿರಲು ಸಾಕು.  ಜೂಲಿಯಾನೆ ಕೊಪ್ಕೆ ಅವರ Girl against the jungle ಪುಸ್ತಕದ ಭಾಗವೊಂದು(ಕೊಂಡಿ ೨)ನಮ್ಮ ಹೈಸ್ಕೂಲಿನ ಇಂಗ್ಲೀಷಿನಲ್ಲಿ ಪಾಠವಾಗಿತ್ತು. ಲಾಕ್ ಹೀಡ್ ಎಲೆಕ್ಟ್ರಾವೆಂಬ ವಿಮಾನದಲ್ಲಿ ತಾಯಿಯ ಜೊತೆಗೆ ಹೊರಟ ಹುಡುಗಿ ಆ ವಿಮಾನ ಕಗ್ಗಾಡಿನಲ್ಲಿ ಪತನವಾದಾಗ ಹೇಗೆ ಒಬ್ಬಂಟಿಯಾಗಿ ದಿನಗಳ ಕಾಲ ತನ್ನ ಜೀವವುಳಿಸಿಕೊಂಡು ಕೊನೆಗೂ ಕಾಡಿನಿಂದ ಹೊರಬರುವಲ್ಲಿ ಯಶಸ್ವಿಯಾಗ್ತಾಳೆ ಅನ್ನೋ ಕತೆ ಹೈಸ್ಕೂಲು ಪಟ್ಯವಾಗಿದ್ದರೂ ಆಸಕ್ತಿ ಹೊರಳಿಸುತ್ತಾ ಸಾಗೋದ್ರಲ್ಲಿ  ಲೇಖಕನ ನಿರೂಪಣೆಯಷ್ಟೇ ಅಮೇಜಾನಿನ ಕಾಡುಗಳ ದಟ್ಟ ಹಸಿರೂ ಕಾರಣವಲ್ಲವಾ ಅಂತ ಎಷ್ಟೋ ಬಾರಿ ಅನಿಸಿದ್ದಿದೆ. ಕಾಡೆಂದರೆ ಹೀಗೇ ಅಲ್ವೇ ? ಸದಾ ಕುತೂಹಲವನ್ನು, ಜೀವಚೈತನ್ಯವನ್ನು, ಉತ್ಸಾಹದ ಚಿಲುಮೆಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡ ತಾಣ. ಅದೆಷ್ಟೋ ಜೀವಿಗಳ ಕಲರವದ ತಾಣ. ಮಾನವನ ಮೂಲವೂ ಒಮ್ಮೆ ಇದ್ದಿದ್ದು ಅಲ್ಲೇ. ಹಾಗಿದ್ದೂ ಮಾನವ ತಾನು ಹತ್ತಿದ ಏಣಿಯನ್ನೇ ಒದೆವ ಮೂರ್ಖನಾಗಿರೋದು ಏಕೆ ?

ಮನೆ ಕಟ್ಟೋಕೆ ಮರ ಬೇಕಾ ? ಕಾಡು ಕಡಿ. ಫುಲ್ ವುಡನ್ ಪ್ಲೋರ್ ಬೇಕು, ರೆಸ್ಟೋರೆಂಟುಗಳಲ್ಲಿ ಮರಗಳದ್ದೇ ಚಮಚಮಿಸಬೇಕು. ಮರಗಳ ಮೇಲೆ ಮನೆಕಟ್ಟೋ ಶೋಕಿ. ಸರಿ ಅದಕ್ಕೆ ಮರ  ? ಕಡಿ ಇನ್ನೊಂದಿಷ್ಟು ಕಾಡು. ಗಂಧ, ತೇಗ, ಚಂದನಗಳನ್ನೆಲ್ಲಾ ದೊಡ್ಡ ಮಟ್ಟದಲ್ಲಿ ಸ್ಮಗಲ್ ಮಾಡಿ ಊರಬದಿ ಕಾಡುಗಳಲ್ಲಿ ಅವುಗಳೇ ಇಲ್ಲದ ಪರಿಸ್ಥಿತಿ ಬಂದು ಹೋಗಿದೆ ಈಗ. ದುಡ್ಡುಳ್ಳವರ ಶೋಕಿಗಳ ಮರಗಳ ಸಮಾಧಿಯ ಮೇಲಷ್ಟೇ ಅಲ್ಲ, ಅವರ ಭವಿಷ್ಯದ ಸಮಾಧಿಯ ಮೇಲೂ ಬದುಕುತ್ತಿವೆಯೆಂಬ ಅರಿವಾಗುತ್ತಿಲ್ಲ ಅವರಿಗೆ. ಇನ್ನು ಹಳ್ಳಿಯವರೇನು ಕಮ್ಮಿಯಿಲ್ಲ. ಉರುವಲಿಗೆ ಸೌದೆ ? ಕೊಟ್ಟಿಗೆಗೆ ಹಾಸೋಕೆ ಸೊಪ್ಪು ? ಟೇಬಲ್ಲು, ಕುರ್ಚಿ, ಬರೆಯೋ ಡೆಸ್ಕು.. ಎಲ್ಲಾ ಮರದ್ದೇ ಬೇಕು. ಅದಕ್ಕೆ ಬೇಕಾದ ಮರ ? ಮಾನವನೇ ನಿರ್ಮಿಸಿದ ಪ್ಲಾಂಟೇಷನ್ಗಳಿಂದಲೂ ಬರಬಹುದು. ಆದರೆ ತರಬೇಕಲ್ಲ ! ಸುಲಭವಾಗಿ ಸಿಕ್ಕೋ ಕಡಿಯೋಕೆ ಬರೋ ಕಾಡಿರಬೇಕಿದ್ರೆ, ಯಾರು ಬಿಡ್ತಾರೆ ? ಒಂದಿಷ್ಟು ಕೊಡಲಿ ಹಾಕು ಮತ್ತೆ ಸೈಕಲ್ಲೋ, ರಿಕ್ಷಾದಲ್ಲೋ ಅದನ್ನು ಹೊತ್ತು ಇನ್ನೆಲ್ಲೋ ಮಾರಿ ನಾಲ್ಕೈದು ದಿನ ಆರಾಮಾಗಿರೋಕೆ ಬೇಕಾದಷ್ಟು ದುಡ್ಡು ಸಂಪಾದನೆ ಮಾಡ್ಕೋ. ಕೂಲಿಗಾಗಿ ಕಾಳಿದೆ. ಆದ್ರೆ ಯಾರು ಅಲ್ಲಿ ಹೋಗಿ ದಿನಾ ಮೈಬಗ್ಗಿಸಿ ದುಡಿಯೋರು ? ಅದೂ ಯಾವಾಗ್ಲೋ ಒಮ್ಮೆ ಇರೋ ಕೆಲಸ. ಆದ್ರೆ ಈ ಕಾಡಿರೋ ತನಕ ಸೌದೆ ಮಾರೋ ಕೆಲಸಕ್ಕೇನೂ ತೊಂದ್ರೆ ಇಲ್ವಾ ? ನಾಳೆ ಏನೋ ಆಗುತ್ತೆ ಅಂತ ಕೂತ್ಕೊಂಡ್ರೆ ಇವತ್ತಿನ ಹೊಟ್ಟೆ ತುಂಬೋದು ಹೇಗೆ ಅನ್ನೋ ಪ್ರಶ್ನೆ ಮರ ಕಡಿಯುವವರದು !

ಈ ರೀತಿಯ ಹುಚ್ಚುತನದ ಪರಮಾವಧಿಗಳಿಂದ ೨೦೦೦ರಿಂದ ೨೦೧೦ರ ಬರೀ ಹತ್ತು ವರ್ಷದ ಅವಧಿಯಲ್ಲಿ ಇಡೀ ಪ್ರಪಂಚದಲ್ಲಿ ಕಡಿಯಲ್ಪಟ್ಟ ಕಾಡಿನ ಪ್ರಮಾಣ ಎಷ್ಟು ಗೊತ್ತೇ ? ಅಂದಾಜು ೧೩ ಮಿಲಿಯನ್ ಹೆಕ್ಟೇರ್/ವರ್ಷಕ್ಕೆ ಅನ್ನುತ್ತೆ FAO ದ ಒಂದು ವರದಿ !(ಕೊಂಡಿ ೩) ಈ ಒಂದು ಲಕ್ಷ ಹೆಕ್ಟೇರು ಅಂದ್ರೆ ಎಷ್ಟು ಅಂದ್ರಾ ? ಇಡೀ ಗೋವಾದ ಭೂಭಾಗ ೨೧,೦೩೮ ಹೆಕ್ಟೇರುಗಳಷ್ಟೆ ! ಶ್ರೀಲಂಕಾದಂತಹ ದೇಶದ ಒಟ್ಟು ಭೂಭಾಗ ೬.೫ ಮಿಲಿಯನ್ ಹೆಕ್ಟೇರುಗಳು(ಕೊಂಡಿ ೪). ಅಂತಾದ್ರಲ್ಲಿ ಪ್ರತೀ ವರ್ಷ ೧೩ ಮಿಲಿಯನ್ ಹೆಕ್ಟೇರಿನಷ್ಟು ಕಾಡು ಕಡೀತಿದಾರೆ ಅಂದ್ರೆ ಲೆಕ್ಕ ಹಾಕಿ ! ಅಬ್ಬಾ ಅಂದ್ರಾ  ? ೯೦ರಿಂದ ೨೦೦೦ರ  ಅವಧಿಯಲ್ಲಿ ಈ ಪ್ರಮಾಣ ವರ್ಷಕ್ಕೆ ೧೬ ಮಿಲಿಯನ್ ಹೆಕ್ಟೇರ್ ಇತ್ತಂತೆ ! ಇರೋ ಬರೋ ಕಾಡೆಲ್ಲಾ ಕಡಿದಾದ ಮೇಲೆ ಇನ್ನೇನು ಉಳಿದಿರುತ್ತೆ ಕಡಿಯೋಕೆ ಅಂದ್ರಾ ? ಕೆಟ್ಟ ಮೇಲೆ ಬುದ್ದಿ ಬಂತು ಅಂದ್ರಾ ? ಆದ್ರೆ ತಜ್ಞರ ಅಭಿಪ್ರಾಯ ಕೊಂಚ ಭಿನ್ನವೇ ಆಗಿದೆ. ಅರಣ್ಯನಾಶದ ಪ್ರಭಾವ ಕಮ್ಮಿಯಾಗೋಕೆ ಹೆಚ್ಚೆಚ್ಚು ಮರಗಳನ್ನು ಬೆಳೆಸಿ, ಕಾಡನ್ನು ಉಳಿಸಿಕೊಳ್ಳೋಕೆ ಇತ್ತೀಚೆಗೆ ನಡೆಯುತ್ತಿರೋ ಪ್ರಯತ್ನಗಳೂ ಕಾರಣ ಅಂತಾರೆ ತಜ್ಞರು. FAO ದ ವರದಿಯ ಪ್ರಕಾರ ಭಾರತ, ಚೀನಾ ಮತ್ತು ವಿಯಟ್ನಾಮಿನಂತಹ ದೇಶಗಳಲ್ಲಿನ ಅರಣ್ಯೀಕರಣದ ಕ್ರಮಗಳಿಂದ ವರ್ಷಕ್ಕೆ ಅಂದಾಜು ೪ ಮಿಲಿಯನ್ ಹೆಕ್ಟೇರುಗಳಷ್ಟು ಅರಣ್ಯ ಭೂಮಿ ಹೆಚ್ಚಾಗುತ್ತಿದೆ. ಅದಾಗ್ಯೂ ೨೦೦೦ರಿಂದ ೨೦೧೦ರ ನಡುವಿನ ಅರಣ್ಯನಾಶದ ಒಟ್ಟಾರೆ ಪ್ರಮಾಣ ವರ್ಷಕ್ಕೆ ೫ ಮಿಲಿಯನ್ ಹೆಕ್ಟೇರ್ ಎನ್ನುತ್ತಾರೆ. ಹಿಂದಿನ ಹತ್ತುವರ್ಷಗಳಲ್ಲಿ ವರ್ಷಕ್ಕೆ ೮.೩% ಇದ್ದ ನಾಶದ ಪ್ರಮಾಣ ಈಗ ಐದು ಚಿಲ್ಲರೆಗೆ ಇಳಿದಿರೋದ್ರ ಹಿಂದಿರೋ ಆ ಕಾರ್ಯಕ್ರಮಗಳಾವುದು ? ಅದೆಷ್ಟೋ ಕೊಡಲಿಗಳ ಮಧ್ಯೆಯೋ ಉಳಿದಿರೋ ನೀರೆರೆಯೋ ಕೈಗಳ ಬಗ್ಗೆಯೊಂದಿಷ್ಟು ಹೆಮ್ಮೆ ಪಡೋಣ ಅಂದ್ರಾ  ? ಮುಂದಿನ ಭಾಗ ಅದರ ಕುರಿತಾದ್ದೆ.

ಪರಿಸರ, ಕಾಡಿನ ರಕ್ಷಣೆ, ಅಭಿವೃದ್ಧಿಗೆ ಅಂತಲೇ ಕೇಂದ್ರ ಸರ್ಕಾರದವರು ೧೯೯೨ರಲ್ಲಿ National Afforestation and Eco-Development Board (NAEB) ಅಂತೊಂದು ಬೋರ್ಡನ್ನ ಸ್ಥಾಪಿಸಿದ್ದಾರೆ. ಅದರ ಮುಖ್ಯ ಉದ್ದೇಶ ಏನಪ್ಪಾ ಅಂದ್ರಾ ? ಅರಣ್ಯಗಳನ್ನು ಉಳಿಸೋ ಕ್ರಮಗಳಿಗೆ ಉತ್ತೇಜನ ಕೊಡೋದು, ಸಸಿ ನೆಡುವಿಕೆ,ಹಾಳಾದ ಕಾಡುಗಳನ್ನ ಮತ್ತೆ ಸಹಜ ಸ್ಥಿತಿಗೆ ತರುವಂತಹ ಪ್ರಯತ್ನಗಳನ್ನು ನಡೆಸುತ್ತಾರೆ. ಅಭಯಾರಣ್ಯಗಳು, ಸಂರಕ್ಷಿತ ಅರಣ್ಯಗಳು, ಪಕ್ಷಿಧಾಮಗಳಂತಹ ಕಾಡಿನ ಸುತ್ತಮುತ್ತಲಿನ ಜಾಗಗಳಲ್ಲೇನೋ ಕಾಡು ಕಡಿಯೋಕೆ ಅನುಮತಿ ಇರಲ್ಲ.ಆದ್ರೆ ಅದ್ರ ಅಕ್ಕಪಕ್ಕದ ಜಾಗಳಲ್ಲಿ ? ಆ ರೀತಿ ವಿಪರೀತ ಹಾನಿಗೀಡಾದ ಸುತ್ತಲ ಕಾಡನ್ನು ಅದರ ಗತವೈಭವದತ್ತ ಕೊಂಡೊಯ್ಯೋ ಪ್ರಯತ್ನ ಈ ಬೋರ್ಡಿನದು. ಹಿಮಾಲಯದ ಶ್ರೇಣಿ, ಪಶ್ಚಿಮ ಘಟ್ಟಗಳು, ಅರಾವಳಿ ಅರಣ್ಯ ಮತ್ತಿತರ ಕಡೆ ಸದ್ದಿಲ್ಲದಂತೆ ಕೆಲಸ ಮಾಡ್ತಿರೋ ಇವರ ಕೆಲ್ಸದ ಮಾಹಿತಿಯಿರ್ಲಿ, ಈ ತರವೂ ಒಂದು ಬೋರ್ಡಿದೆ ಎಂಬೋ ಸುದ್ದಿಯೇ ಎಷ್ಟು ಖುಷಿ ಕೊಡುತ್ತೆ ಅಲ್ವಾ ?   .ಈ NAEB ಅವ್ರು National Afforestation Programme (NAP) through Community Participation ಅಂತೊಂದು ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಅವರ ಜಾಲತಾಣವ ಹೊಕ್ರೆ ಅದರಲ್ಲಿ ರಾಜ್ಯಾವಾರು ನಡೆಯುತ್ತಿರುವ ಕಾರ್ಯಕ್ರಮಗಳ ವಿವರವನ್ನು ಪಡೆಯಬಹುದು. ಕೆಲವೊಂದು ಉಪಕೊಂಡಿಗಳಲ್ಲಿ ಇನ್ನೂ ಮಾಹಿತಿಯನ್ನು ತುಂಬಿಲ್ಲವಾದರೂ ಈ ತರದ್ದೊಂದು ಕಾರ್ಯ ನಡೆಯುತ್ತಿರುವುದನ್ನು ಕಂಡು ಖುಷಿಯಾಗುತ್ತೆ.

ಇನ್ನು ಕಾಡೆಂದ್ರೆ ಊರ ಹೊರಗೆ, ಜನದಟ್ಟಣಿಯಿಂದ ದೂರ ದೂರ ಇರಬೇಕೆಂಬ ಕಲ್ಪನೆಯೇ ಇರಬೇಕೆ ? ಆದಿ ಮಾನವ ಕಾಡಲ್ಲೇ ಬದುಕುತ್ತಿದ್ದನಂತೆ. ಅವನಂತೆ, ಊರನ್ನು ಕಾಡಾಗಿಸದಿದ್ದರೂ, ಕಾಡಲ್ಲಿ ಹೋಗಿ ಬದುಕಲಾಗದಿದ್ದರೂ ನಾವಿದ್ದೆಡೆ ಒಂದಿಷ್ಟು ಹಸಿರು ಬೆಳೆಸೊ ಪ್ರಯತ್ನವನ್ನೇಕೆ ಮಾಡಬಾರದು ? ಗೋಮಾಳ, ಬೆಟ್ಟಕ್ಕಂಟಿರೋ ಕಾಡನ್ನು ವರ್ಷವರ್ಷವೂ ಕಡಿದು ಹಾಕೋ ನಾವು, ಪಾಳು ಬಿದ್ದ ಜಾಗಗಳಲ್ಲೊಂದಿಷ್ಟು ಸಸಿಗಳ ನೆಡೋ ಕೆಲಸವನ್ನೇಕೆ ಮಾಡಬಾರದು ? ರಸ್ತೆ ಬದಿಯಲ್ಲಿನ ಬೋಳು ಗುಂಡಿಗಳಿಗಿಂತ ತಂಪೆರೆವ ಮರವೊಂದು ಕಾಡೆನಿಸಿಕೊಳ್ಳದಿದ್ದರೂ ಕಾಡು ಕಡಿತದಿಂದ ವಾಸ ಕಳೆದುಕೊಂಡು ಒಂದಿಷ್ಟು ಮಂಗಗಳಿಗಾದರೂ ಮನೆಯಾದೀತು ! ಗಿಳಿಗೊಂದಿಷ್ಟು ಗೂಡಾದೀತು. ತೋಟದ ಹಿಂದಿನ ಬೆಟ್ಟದಲ್ಲೇ ಒಂದಿಷ್ಟು ಮರಗಳಿದ್ರೆ ಪ್ರಾಣಿಗಳೇಕೆ ಹೊಟ್ಟೆಗಿಲ್ಲದೇ ತೋಟಕ್ಕೆ ದಾಳಿಯಿಡುತ್ವೆ ? ಬೆಟ್ಟಗಳ ನೆನಪು ವರ್ಷಕ್ಕೊಮೆ ತರಗೆಲೆ ಗುಡಿಸುವಾಗ ಮಾತ್ರ ಆಗದೇ ಅವನ್ನು ಕಾಡ್ಗಿಚ್ಚಿನಿಂದ, ಅಕ್ರಮ ಮರಗಳ್ಳತನದಿಂದ ಕಾಪಾಡಿಕೊಳ್ಳುವಾಗಲೂ ಆಗಬೇಕು. ಅಗಲೇ ಕಾಡೆನ್ನುವುದು ನಮ್ಮನ್ನು ಕನಸಲ್ಲೂ ಕಾಡದೇ ಎಂತಾ ಕಷ್ಟದಲ್ಲೂ ಕಾಪಾಡೋ ಸುರಕ್ಷಾ ಕವಚವಾಗಲು ಸಾಧ್ಯ

ಇದೆಲ್ಲಾ ಹೇಳೋಕೆ,ಕೇಳೋಕೆ ಚೆಂದ. ಒಬ್ಬ ಅಬ್ಬಬ್ಬಾ ಅಂದ್ರೆ ಎಷ್ಟು ಮರ ಬೆಳೆಸಬಹುದು ? ಒಂದೈದು ? ಹತ್ತು. ಅಬ್ಬಬ್ಬಾ ಅಂದ್ರೆ ನೂರು ? ಇದ್ರಿಂದ ಏನಾದ್ರೂ ಬದಲಾವಣೆ ಆಗುತ್ತಾ ? ಇದೆಲ್ಲಾ ಆಗಹೋಗದ ಮಾತು . ಸರ್ಕಾರದ ಸಹಾಯ ಇಲ್ಲದೇ , ಸಂಘ ಸಂಸ್ಥೆ ಅಂತ ಏನೂ ಕಟ್ಟಿಕೊಳ್ಳದೇ ಮರಬೆಳೆಸೋ ಕೆಲ್ಸ ಸಾಧ್ಯವಾ ಯಾರಿದ್ಲಾಂದ್ರೂ ಅಂದ್ರಾ ?ಈ ರೀತಿಯ ಪ್ರಶ್ನೆಗಳು ಬಂದಾಗ್ಲೆಲ್ಲಾ ಒಂದಿಬ್ಬರು ಮುಖ್ಯವಾಗಿ ನೆನಪಾಗ್ತಾರೆ. ಯಾವುದೇ ಯೋಜನೆಗಳ ನೆರವು ಪಡೆಯದೇ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಸಾಲುಮರದ ತಿಮ್ಮಕ್ಕ, ಇಲ್ಲಿಯವರೆಗೆ ೧.೩೩ ಲಕ್ಷ ಸಸಿಗಳನ್ನು ಬೆಳೆಸಿರುವ, ಈ ವರ್ಷದ ಪರಿಸರ ಪ್ರಶಸ್ತಿ ಪಡೆದ  ಬೆಂಗಳೂರಿನ ಶಿಕ್ಷಕ ಸಿ.ಲಕ್ಷ್ಮಣ್ ಅವರಂತಹ (ಕೊಂಡಿ ೬ರ ಪುಟ ೧೬) ಹಲವು ಜನರು ನಗರಗಳಲ್ಲೂ ಮರಗಳನ್ನು ಬೆಳೆಸಿ ಕಾಂಕ್ರೀಟೀಕರಣದ ಮಧ್ಯೆ ಹಸಿರನ್ನು ಉಳಿಸುವುದರಲ್ಲಿ ನೆರವಾಗುತ್ತಿದ್ದಾರೆ. ಲಕ್ಷ್ಮಣ್ ಅವರು ಹೇಳುವಂತೆ ಶಾಲೆಗೆ ಸೇರುವ ಪ್ರತೀ ವಿದ್ಯಾರ್ಥಿಯ ಪೋಷಕರಿಗೂ ಒಂದೊಂದು ಗಿಡ ಕೊಟ್ಟು , ಅದನ್ನ ನೆಡೆಸಿ ಆ ಗಿಡ ಚೆನ್ನಾಗಿ ಬೆಳೆದರೆ ಆ ವಿದ್ಯಾರ್ಥಿಯ ಭವಿಷ್ಯ ಉಜ್ವಲವಾಗುತ್ತದೆ ಎಂದು ಹೇಳಲಾಗುತ್ತಿತ್ತಂತೆ. ಪೋಷಕರಿಗೂ ಆ ಗಿಡಕ್ಕೂ ಭಾವನಾತ್ಮಕ ಬಂಧ ಬೆಳೆಯುತ್ತಿದ್ದುದರಿಂದ ಅವರೂ ಆ ಗಿಡಕ್ಕೆ ಚೆನ್ನಾಗಿ ನೀರೆರೆದು ಅದು ಹೆಮ್ಮರವಾಗಿ ಬೆಳೆಯುವುದಕ್ಕೆ ಕಾಣಿಕೆ ನೀಡುತ್ತಿದ್ದರಂತೆ. ಎಂತಹ ಒಳ್ಳೆಯ ವಿಚಾರವಲ್ಲವೇ ? ಬೆಳಕಿಗೆ ಬಂದ ಇಂತಾ ಉದಾಹರಣೆಗಳು ಕೆಲವಾದರೆ ತೆರೆಮರೆಯ ಯೋಗಿಗಳು ಅದೆಷ್ಟೋ. ಆದರೆ ಕಾಡಿನ ಉಳಿವು ಅನ್ನೋದು  ಈ ತರಹ ಕೆಲವರಿಂದ ಆಗುವಂತಹ ಕೆಲಸವಲ್ಲ. ನಮ್ಮಲ್ಲಿ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಶ್ರಮವಹಿಸಬೇಕು. ಪರಿಸರದ ರಕ್ಷಣೆ ಮತ್ತು ಬೆಳವಣಿಗೆ ನಮ್ಮೆಲ್ಲರ ಕರ್ತವ್ಯ. ಕಾಡಿದ್ದರೆ ಮಳೆ, ಮಳೆಯಿದ್ದರೆ ಬೆಳೆ. ಬೆಳೆಯಿದ್ದರೆ ನಮ್ಮೆಲ್ಲರ ಉಳಿವು. ಅದಕ್ಕೇ ಅಲ್ಲವೇ, ನಮ್ಮ ಹಿರಿಯರು ಹೇಳಿದ್ದು.."ವೃಕ್ಷೋ ರಕ್ಷತಿ ರಕ್ಷಿತಃ" ಅಂತ.ಆದದ್ದಾಯಿತು. ಇನ್ನಾದರೂ ಅಳಿದುಳಿದ ಕಾಡನ್ನು ಉಳಿಸಿಕೊಳ್ಳುವತ್ತ, ಇನ್ನಷ್ಟು ಬೆಳೆಸುವತ್ತ ಗಮನಹರಿಸೋಣವೇ ?

ಇನ್ನೊಂದಿಷ್ಟು ಮಾಹಿತಿಗಾಗಿ ಕೆಳಗಿನ ಕೊಂಡಿಗಳನ್ನು ಕ್ಲಿಕ್ಕಿಸಿ:
೧)http://madhurageete.blogspot.in/2014/10/adavi-deviya-kadu-janagala-ee-hadu-from.html
೨)http://www.preservearticles.com/201105257058/summary-of-girl-against-the-jungle-by-julianekoepcke.html
೩)http://www.fao.org/news/story/en/item/40893/icode/
೪)https://books.google.co.in/books?id=J4VYBQAAQBAJ&pg=PA145&lpg=PA145&dq=what+is+the+land+area+of+srilanka+in+hectares&source=bl&ots=mZOxk2Oty0&sig=ih60ipEfSTbwyjZXtjEN2A_Pb00&hl=en&sa=X&ei=0pFyVYn3KtLjuQT7hYPABA&ved=0CDsQ6AEwBQ#v=onepage&q=what%20is%20the%20land%20area%20of
%20srilanka%20in%20hectares&f=false
೫)http://www.naeb.nic.in/progSchem.html
೬)http://www.vijaykarnatakaepaper.com/epapermain.aspx?queryed=9&eddate=6/4/2015 , page 16

ಈ ಲೇಖನ  "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿದೆ

Monday, June 8, 2015

ಕಲೆಯಾದ ಕತ್ತಲು

ಹಿನ್ನೆಲೆಯು ಚೆನ್ನಿರಲು ಹೊಳೆಯುವುದು ಹುಳು ಕೂಡ
ರವಿ ಮುಳುಗೊ ಕಾರ್ಗಲ್ಲ ಗುಡ್ಡದಂತೆ
ಹಾದಿ ತಪ್ಪಿಸೊ ಗೆಳೆಯ ತೇವಾಂಶ,ತುಕ್ಕಂತೆ
ಸಾಕು ಹಾಳಾಗಿಸಲು ಅದಿರ ಸಂತೆ |೧

ನಾಳೆ ಭರವಸೆಯನ್ನೇ ಕೊಲ್ಲೊ ಪರಿ ಕಷ್ಟಗಳು
ರವಿಯ ನುಂಗಲು ಹೊರಟ ರಾಹುವಂತೆ
ಕಾಡಿರಲು ಧೃತಿಗೆಡದೆ ಮುನ್ನಡೆಯೆ ನಲಿವಿಹುದು
ಗ್ರಹಣ ಕಳೆದೊಡೆ ಬರುವ ಬೆಳಕಿನಂತೆ |೨

ಅವನ ಬೆಳಕನು ತಡೆಯೆ ಇವನು ತಮವಾಗಿಹನು
ಲತೆಯಾಗಿ, ಮರವಾಗಿ ಅಡ್ಡ ನಿಂತು
ತನ್ನ ಪ್ರಭೆಯನೆ ಮರೆತ ಮರೆಯಾಗಹೊರಟವನು
ಅಹಮಲ್ಲೆ ಸಾಯುತಿಹ ಜೀವ ತಂತು |೩

ನೆರೆಯವನ ಸಾಧನೆಯ ಮುಚ್ಚಹೊರಟಿಹ ಕಿಚ್ಚು
ತಣಿವವರೆಗೂ ಇಹುದು ಭ್ರಾಂತಿಲೋಕ
ಅವನ ಬೆಳಕೆದುರಲ್ಲಿ ತನ್ನ ತಿದ್ದುವ ಆಸೆ
ಮೂಡಿದಾ ಕ್ಷಣ ತೆರೆದು ಬೆಳಕ ಲೋಕ |೪|

ಬಾರೋ ಭಾಸ್ಕರ ನೀನು, ಕಣ್ತೆರೆವ ಬೆಳಕಾಗಿ
ಬರೆಯಲಿಚ್ಚಿಸುವನ ಭಾವವಾಗಿ
ಸ್ಪೂರ್ತಿ ನೀರಿನ ಸೆಲೆಯ ಹುಡುಕಿ ಬಾಯಾರಿರುವ
ದಣಿದ ಚೇತನಕಷ್ಟು ತೇವವಾಗಿ |೫|

ದಿನದ ಕಷ್ಟವ ಕಂಡ ಆವಿಯಾಗಿಹ ಬೆವರು
ಸಂಜೆಯಲಿ ಮೈತಣಿವ ಗಾಳಿಯಾಗಿ
ಬದುಕ ಪುಸ್ತಕವಿತ್ತ ನೂರೆಂಟು ಪಾಠಗಳ 
ಅಧ್ಯಯನ ಅರಿವಿರದೆ ಕಾಂತಿಯಾಗಿ
ಹಿನ್ನೆಲೆಯ ಬೆಳಕಾಗಿ ಚೆಂದಗಾಣಿಸುತಿಹುದು
ಗರ್ವವಿಲ್ಲದೆ ಬಳುಕೊ ಮುಪ್ಪ ಮರಕೆ
ಅದರ ಹಲವಾಕಾರ ಹೇಳ ಹೊರಟಿವ ಮಾತು
ಸಿಗಲೆಂಬ ಹಾರೈಕೆ ಬೆಳೆವ ತೆನೆಗೆ |೬|


Friday, June 5, 2015

ಬಿದರ್ತಳ, ಜಾಪ್ರಾಸಿ ಬೆಟ್ಟ, ಕೊಡೆಗಲ್ಲು ಸುತ್ತಣ ಬೆಟ್ಟಗಳ ಚಾರಣ -ಭಾಗ ೨

ಮುಂದುವರೆದ ಭಾಗ:
ಬಿದರ್ತಳ ಊರಿಗೆ ಕಾಲಿಡೋ ಮುಂಚಿನ ಗುಡ್ಡಗಳಲ್ಲಿ ಮೂರ್ನಾಲ್ಕು ತರದ ಮಲ್ಲಿಗೆಗಳು ಕಂಡವು. ಬುಡದಲ್ಲಿ ಕೆಂಪಾಗಿರುವ ಜಾಜಿ ಮಲ್ಲಿಗೆ, ಕಾಕಡ ಮಲ್ಲಿಗೆ, ಮತ್ತಿತರ ಹೆಸರರಿಯದ ಮಲ್ಲಿಗೆಗಳು ಕಂಡವು
ಜಾಜಿ ಮಲ್ಲಿಗೆ; jaaji mallige

ಕಾಕಡ ಮಲ್ಲಿಗೆ; kakada jasmine

unknown jasmine #1

ಸೂಜಿ ಮಲ್ಲಿಗೆ

ಬಿದರ್ತಳ ಊರು ತಲುಪೋ ಹೊತ್ತಿಗೆ ಘಂಟೆ ಒಂದಾಗುತ್ತಾ ಬಂದಿತ್ತು. ಹಾಗಾಗಿ ಅಲ್ಲೇ ಮರಗಳ ನೆರಳಲ್ಲಿ ಊಟದ ಕಾರ್ಯಕ್ರಮ. ಇಲ್ಲಿ ಊಟ ಮಾಡುತ್ತಿದ್ದ ನಮಗೆ ಕಣ್ಣು ಸೆಳೆದಿದ್ದು ಕೊಳಿ ಗೂಡು ! ನಮ್ಮ ಕಡೆಯೆಲ್ಲಾ ಪಾರಿವಾಳಕ್ಕೆ ಗೂಡು ಅಂತ ಮಾಡಿದ್ದನ್ನ ನೋಡಿದ ನೆನಪು. ಇದೇನಪ್ಪ ಕೋಳಿ ಗೂಡು ಅಂದ್ವಿ. ಅಲ್ಲಿ ಬೆಕ್ಕು, ಹಾವು, ಕಾಡು ಕಿರುಬನಂತಹ ಪ್ರಾಣಿಗಳು ರಾತ್ರಿ ಹೊತ್ತು ಬಂದು ಮನೆ ಪಕ್ಕದಲ್ಲಿದ್ದ ಕೋಳಿಗಳನ್ನ ಹಿಡಿದು ತಿಂದು ಬಿಡುತ್ತವಂತೆ. ಅದರಿಂದ ಕೋಳಿಗಳ ರಕ್ಷಣೆಗೆ ಈ ಗೂಡು

ಕೋಳಿ ಗೂಡು


ಎಕ್ಕದ ತರ ಕಾಣುವ ಹೂವು !
 ಬಿದರ್ತಳದಿಂದ ಕೊಂಚ ಮುಂದೆ ಬಂದು ಜಾರ್ಪಾಸಿ ದುರ್ಗ ಹತ್ತಿಳಿದು ಎತ್ತಿನ ಭುಜದತ್ತ ಸಾಗಿದೆವು.


unknown flower@Japrasi Durga


ಜಾಪ್ರಾಸಿ ದುರ್ಗದ ಪಯಣದಲ್ಲಿ ವಿದ್ರುಮ, ಭಾಗ್ಯ ಮತ್ತು ಗಿರೀಶಣ್ಣ
 ಎತ್ತಿನ ಭುಜ ದೂರದಲ್ಲಿ ಕಂಡರೂ ಅದಕ್ಕೆ ಹೋಗುವ ಪ್ಲಾನಿರಲಿಲ್ಲ. ಅದನ್ನು ದೂರದಲ್ಲೇ  ಕಂಡು ಮತ್ತೊಂದು ಮೂಲೆಯಲ್ಲಿ ಕಾಣುತ್ತಿದ್ದ ಅಮೇದಿ ಕಲ್ಲು ಮತ್ತು ಒಲೆಗಲ್ಲುಗಳನ್ನೂ ದೂರದಿಂದಲೇ ಕಂಡು ನಮ್ಮ ಪಯಣ ಛತ್ರಿಗಲ್ಲಿನತ್ತ ಸಾಗಿತು






ಈ ಹಾದಿಯ ಪಯಣವನ್ನು, ಪ್ರಕೃತಿಯ ಸೊಬಗನ್ನು ಮಾತಲ್ಲಿ ಹೇಳುವ ಬದಲು ಅಲ್ಲಿನ ಕೆಲವು ಚಿತ್ರಗಳನ್ನು ಹಾಕಿದರೆ ಅವೇ ಅಲ್ಲಿನ ಕತೆ ಹೇಳುತ್ತದೆ ಅನಿಸುತ್ತದೆ !
ದೂರದಲ್ಲಿ ಕಾಣುತ್ತಿರುವ ಎತ್ತಿನ ಭುಜ
ನಡೆದು ನಡೆದು ಸುಸ್ತಾದವರಿಗೊಂದು ವಿಶ್ರಾಂತಿ. ಕೆಲವರ ಬಳಿ ನೀರಿದ್ದರೆ ಕೆಲವರ ಬಳಿ ಮೂಸಂಬಿ, ಗ್ಲೂಕೋಸುಗಳು. ಹಂಚಿ ತಿಂದರೆ ಸ್ವರ್ಗವೆಂಬ ಮಾತಿನ ಸಾರ ಮತ್ತೊಮ್ಮೆ ಅನುಭವಕ್ಕೆ ಬಂದ ಭಾವವಿಲ್ಲಿ


ವಿಶ್ರಾಂತಿಯ ನಂತರ ಎದುರಿಗೆ ಕಾಣುತ್ತಿದ್ದ ಅಮೇದಿಕಲ್ಲನ್ನು ಕಾಣುತ್ತಾ ಅತ್ತ ಸಾಗದೇ ಎಡಭಾಗದ ಛತ್ರಿಕಲ್ಲಿನತ್ತ ಸಾಗುತ್ತಿದ್ದ ಇಳಿವ ಹಾದಿಯನ್ನು ಹಿಡಿದೆವು

ಇಳಿವ ಹಾದಿಯಂತೆ ಕಂಡರೂ ಹತ್ತುವ ಕೆಲಸ ಮುಗಿದಿರಲಿಲ್ಲ ಇನ್ನೂ !

ಕಲ್ಲರಳಿ ಹೂವಾಗಿ ! ಬಂಡೆಯ ಮಧ್ಯದಲ್ಲೂ ಜೀವಸೆಲೆಯ ಆಲ !

ಇದೊಂತರ ಪಾಚಿ ಕಣ್ರಿ !

ಅಬ್ಬಾ , ಅಂತೂ ಕೊಡೆಗಲ್ಲಿನ ಹತ್ರ ಬಂದ್ವಿ !


ದೂರದಿಂದ ಸಣ್ಣಕ್ಕೆ ಕಾಣುತ್ತಿದ್ದ ಛತ್ರಿಗಲ್ಲು ಅಥವಾ ಕೊಡೆಗಲ್ಲು ಎಷ್ಟು ದೊಡ್ಡದಿದೆ ಅಂತ ಅದರ ಹತ್ತಿರಕ್ಕೆ ಹೋದಾಗ್ಲೇ ಗೊತ್ತಾಗೋದು !

ಕೊಡೆಗಲ್ಲಿನ ಬಳಿ ಕೂತಿರುವ ಜನರನ್ನು ನೋಡಿ !

ಕೊಡೆಗಲ್ಲಿನ ಆಚೆ ಕಾಣುತ್ತಿರೋದು ಅಮೇದಿ ಕಲ್ಲು. ಇದರಿಂದ ಎಡಭಾಗದಲ್ಲಿ ಒಲೆ ಹೂಡಿಟ್ಟಂತೆ ಕಾಣುವುದರಿಂದ ಒಲೆ ಕಲ್ಲು ಎಂದು ಕರೆಯಲ್ಪಡುವ ಕಲ್ಲಿದೆ
ಕೊಡೆಗಲ್ಲಿನ ಕೆಳಗೆ ಒಂದಿಷ್ಟು ಚಾರಣಿಗರೊಂದಿಗೆ ನಾನು
ಸೂರ್ಯ ಮುಳುಗೋ ಹೊತ್ತಾಗ್ತಾ ಬಂತಾ ಅನಿಸ್ತು ಒಮ್ಮೆ. ಆದ್ರೆ ಇಲ್ಲ. ಕೊಡೆಗಲ್ಲಿನ ತುದಿಗೆ ಹತ್ತಲು ಸುಸ್ತಾಗಿರೋ ಸೂರ್ಯ ಕಂಡಿದ್ದು ಹೀಗೆ !

ಕೊಡೆಗಲ್ಲಿನ ಬಳಿ ಗಿರೀಶಣ್ಣನ ಜೊತೆ ನಾನು..



ಗಡಿಗಲ್ಲುಗಳು ಅಂದ್ರೆ ಇದೇ ನೋಡ್ರಪ್ಪ


ಬೆಟ್ಟ ಹತ್ತೋದೇಗೋ ಹತ್ತಿಬಿಟ್ವಿ. ಇಳಿಯೋದು ಸುಲಭ ಅಂದ್ಕೊಂಡ್ರಾ ? ಇಳಿಯೋದು ಅಂದ್ಕೊಂಡಷ್ಟು ಸುಲಭವಲ್ಲ ಅನ್ನುತ್ತಿದ್ದ ಹುಲ್ಲುಗಾವಲು


ನೋಡೋಕೆ ಮಲ್ಲಿಗೆಯಂತಿರೋ ರಂಜಬಟ್ಟಲು ಜಾತಿಯ ಮತ್ತೊಂದು ಹೂವು

ಮಾವಿನ ಹೂವಿನ ತರ ಕಾಣೋ(ದೂರದಿಂದ) ಇದು ಅದಲ್ಲ. ಇದ್ರ ಹೆಸ್ರು ಗೊತ್ತಿರೋರಿದ್ರೆ ಹೇಳ್ರಪ್ಪ..

ಅಂತೂ ಕೆಳಗಿಳಿದ ನಾವು ರಾಮಲಕ್ಷ್ಮಣರ ಮರವನ್ನು ಕಂಡು ಅಲ್ಲಿಂದ ಮುಂದೆ ನೀರನರೆಸಿ ಸಾಗಿದೆವು. ಗುಂಪಿನ ಹೆಚ್ಚಿನವರು ಜೀಪುಗಳನ್ನರಸಿ ಇಳಿದಲ್ಲೇ ಕುಳಿತಿದ್ರೂ ಬಾಯಾರಿಕೆ ತಾಳಲಾರದ ಎಂಟತ್ತು ಜನರು ಮುಂದೆ ನಡೆದಿದ್ದೆವು. ಸುಮಾರು ಒಂದೂವರೆ ಕಿ.ಮೀ ನಡೆದ ಮೇಲೆ ಅಲ್ಲೊಂದು ಸಣ್ಣ ನೀರ ಝರಿ ಕಂಡಾಗ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ. ಹನಿಹನಿಯಾಗಿ ಎಲ್ಲೆಲ್ಲೋ ಬೀಳುತ್ತಿದ್ದ ನೀರ ಧಾರೆಯನ್ನು ಬಾಟಲಿಗೆ ಗುರಿ ಹಿಡಿದು ಆಂತೂ ಚೂರು ಬಾಟಲಿ ತುಂಬಿದಾದ ಕುಡಿಯೋ ಖುಷಿಯಿದ್ಯಲ್ಲ ಅದನ್ನ ಅಲ್ಲಿ ಹೋಗೇ ಅನುಭವಿಸಬೇಕು !!

ಅಷ್ಟರಲ್ಲಿ ಬಂದ ಜೀಪನ್ನು ಹತ್ತಿ ಹೊಸದಾಗಿ ನಿರ್ಮಾಣವಾಗುತ್ತಿದ್ದ ತೇಜಸ್ವಿ ಪ್ರತಿಷ್ಟಾನದ ಕಟ್ಟಡದ ಹತ್ತಿರ ಬಂದೆವು. ಮಂದಿನ ಬಾರಿ ಅಲ್ಲಿಗೆ ಹೋಗುವಾಗ ಪೂರ್ಣವಾಗಿರಬಹುದಾದ ಕಟ್ಟಡ ಹೇಗಿರಬಹುದೆಂಬ ಕುತೂಹಲ ಈಗಲೇ ಕಾಡುತ್ತಿದೆ !


ಅಲ್ಲಿದ್ದ ನೀರಿನಲ್ಲಿ ಮತ್ತೆ ನಮ್ಮ ಬಾಟಲಿಗಳನ್ನು ತುಂಬಿಸಿಕೊಂಡ ನಾವು ಸೂರ್ಯಾಸ್ತದ ಸೊಬಗನ್ನು ಸವಿದು ಬೇಸ್ ಕ್ಯಾಂಪಿನತ್ತ ಸಾಗಿದೆವು..


ಬೇಸ್ ಕ್ಯಾಂಪಿನಲ್ಲಿ ಚಹಾ ಹೀರುತ್ತಾ ಒಬ್ಬೊಬ್ಬರನ್ನು ಬೀಳ್ಕೊಡುವ ಸಂದರ್ಭ ಮತ್ಯಾಕೋ ಬೇಸರ. ಮತ್ತೆ ಸಿಗೋಣವೆಂಬ ಟಾಟಾಗಳಲ್ಲೂ ಇನ್ಯಾವಾಗ ಸಿಕ್ಕೇವೆಯೋ ಎಂಬ ಸಣ್ಣ ಚಿಂತೆ. ತೇಜಸ್ವಿಯವರ ಭಾವ, ಬಾಪು ರವಿಯವ್ರು, ಹುಚ್ಚರಾಯಪ್ಪನವರು, ಪಾಟೀಲ್ ಅಕ್ಕತಂಗಿಯರು, ಗಿರೀಶಣ್ಣ, ವಿದೃಮ, ಭಾಗ್ಯ, ಕನಫ್ಯೂಸ್ ಆಗುವಷ್ಟು ಗಣೇಶ್ಗಳು, ಮಂಗಳೂರು ಫ್ಯಾಮಿಲಿ, ಬೆಂಗಳೂರವ್ರು, ಅದೆಷ್ಟೋ ಪ್ರವಾಸ ಮಾಡಿದವರು, ಪುಸ್ತಕ ಬರೆದವರು, ಚಾರಣಿಗರು.. ಹಿಂಗೆ ಅದೆಷ್ಟೋ ತರ ತರ ಭಾವಗಳ ಕಂಡ ಖುಷಿ




ಅಂದ ಹಾಗೆ ಸ್ನೇಹಿತರೊಬ್ಬರು ಈ ಪ್ರವಾಸದ ಬಗ್ಗೆ ಬರೆದ ಲೇಖನ times of india ದಲ್ಲಿ ಪ್ರಕಟವಾಗಿದೆ ಎಂಬ ಖುಷಿಯಲ್ಲಿ.. ಮತ್ತೊಮ್ಮೆ ವಿಸ್ಮಯ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಭಾಗವಹಿಸೋ ಕಾತುರದಲ್ಲಿ..

ನಿಮ್ಮೊಲುಮೆಯ
ಪ್ರಶಸ್ತಿ

Wednesday, June 3, 2015

ಇಕ್ಕೇರಿ ಕೋಟೆಯ ಸುತ್ತ:

ಪೀಠಿಕೆ:
ಹಳೇ ಇಕ್ಕೇರಿ ಕೋಟೆ ಅಂತ ಅಪ್ಪನ ಬಾಯಲ್ಲಿ ಸುಮಾರು ಸಾರಿ ಕೇಳಿದ್ದ ನನಗೆ ಅಲ್ಲಿಗೆ ಹೋಗಬೇಕೆನ್ನೋ ಆಸೆ ಸುಮಾರು ಸಮಯದಿಂದ ಇತ್ತು. ಇಕ್ಕೇರಿ ಕೋಟೆಯ ಸುತ್ತಮುತ್ತಲಿದ್ದ ಕಾವಲು ಮನೆ ಕಲ್ಮನೆಯಾಗಿ,ಶತ್ರುಗಳು ಬಂದರೆ ಸುಳಿವು ಕೊಡುತ್ತಿದ್ದ ಜಾಗ(ಸುಳಿವಿನ ಮನೆ)ಸುಳ್ಮನೆಯಾಗಿ, ದೊಡ್ಡಬೇಲಿ ಎಂಬುದು ದೊಡ್ಡಬಾಳೆಯೆಂಬ ಇಂದಿನ ನಗರವಾಗಿದೆ ಎಂಬ ಮಾತುಗಳನ್ನು ಕೇಳಿದವನಿಗೆ ಆಗಿನ ಕೋಟೆ ಹೆಂಗಿದ್ದಿರಬೇಕೆಂಬ ಕುತೂಹಲ. ದೂರದಿಂದ ನೋಡಿ ಟಾಟಾ ಹೇಳ್ತಿದ್ದ ಹೊಸನಗರ ಕೋಟೆ, ಬಹುಸಮಯದಿಂದ ಅಂದ್ಕೊಂಡಿದ್ದ ಕವಲೇದುರ್ಗ ಕೋಟೆಯೆಲ್ಲಾ ನೋಡಿದ ಮೇಲೆ ಹಳೇ ಇಕ್ಕೇರಿ ಕೋಟೆ ನೋಡಬೇಕೆನ್ನೋ ಆಸೆ ಇನ್ನೂ ಹೆಚ್ಚಾಯ್ತು. ಹಿಂಗೇ ಒಂದಿನ ಬ್ಲಾಗಿಗ ಗೆಳೆಯ ಬೇದೂರು ಆದಿತ್ಯಣ್ಣನ್ನ ಇಕ್ಕೇರಿಗೆ ಕೋಟೆಗೆ ಹೋಗನ ಅಂದಾಗ ಹೂಂ ಸರಿ ಅಂದಿದ್ದ. ಅಂತೂ ಅದಕ್ಕೆ ಮುಹೂರ್ತ ಬಂದಿದ್ದು ಏಪ್ರಿಲ್ ೨೩ಕ್ಕೆ.

ಇಕ್ಕೇರಿ ಕೋಟೆಯ ಇತಿಹಾಸ:
ಕೆಳದಿಯರಸರು ತಮ್ಮ ರಾಜಧಾನಿಗಳನ್ನು ಬದಲಾಯಿಸಿದ ಬಗ್ಗೆ ಇತಿಹಾಸದಲ್ಲಿ ಓದಿರುತ್ತೀರ. ೧೪೯೯ರಿಂದ ಮೊದಲ ಹದಿಮೂರು ವರ್ಷ ಕೆಳದಿಯನ್ನು ತಮ್ಮ ರಾಜಧಾನಿಯನ್ನಾಗಿಸಿಕೊಂಡಿದ್ದ ಅವರು ನಂತರ ಇಕ್ಕೇರಿಯನ್ನು ಆಯ್ಕೆಮಾಡಿಕೊಂಡರು.೧೫೧೨-೧೬೪೦ ರ ವರೆಗೆ ಇಕ್ಕೇರಿಯಿಂದ ರಾಜ್ಯಭಾರ ಮಾಡಿದ ಅವರು ನಂತರ ಆಯ್ಕೆ ಮಾಡಿಕೊಂಡಿದ್ದು ನಗರವನ್ನ. ಈ ಸಂದರ್ಭದಲ್ಲಿ ಕಟ್ಟಲ್ಪಟ್ಟ ಕೋಟೆಯಿದ್ದ ಜಾಗದಲ್ಲೆಲ್ಲಾ ಈಗ ಕಾಡು, ಚದುರಂಗಿ, ಲಂಟಾನದ ಮಟ್ಟಿಗಳು ತುಂಬಿಹೋಗಿದ್ದರೂ ಅಲ್ಲಲ್ಲಿ ನಡೆದಾಡಿರೋ ದಾರಿಯ ಗುರುತಿನ ಮೇಲೆ ಕೋಟೆಯಲ್ಲಿ ಅಳಿದುಳಿದ ಅವಶೇಷಗಳನ್ನು ನೋಡಿಬರಬಹುದು.


ಹೋಗುವುದು ಹೇಗೆ ?


೧)ಇಕ್ಕೇರಿಯ ಅಘೋರೇಶ್ವರ ದೇವಸ್ಥಾನದ ಹಿಂಭಾಗದಿಂದ ಹೋಗುವ ರಸ್ತೆಯಲ್ಲಿ ಹೋದರೆ ಕೆರೆ ಏರಿಯ ಹಿಂಭಾಗದಲ್ಲಿ ಬಲಕ್ಕೆ ಹೋಗುವ ರಸ್ತೆಯೊಂದು ಸಿಗುತ್ತದೆ. ಅದರಲ್ಲಿ ಹಾಗೇ ಹೋದರೆ ಒಂದು ಕಾಳಿ ಗುಡಿ ಸಿಗುತ್ತದೆ. ಅಲ್ಲಿಂದ ಸ್ವಲ್ಪ ಮುಂದೆ ಬಂದ್ರೆ ಅಲ್ಲೊಂದು ಪ್ಲಾಂಟೇಷನ್ ಸಿಗುತ್ತದೆ. ಅಲ್ಲಿಂದ ಕೋಟೆಯ ಒಂದು ಪಾರ್ಶ್ವದಿಂದ ಒಳಸಾಗಬಹುದು. ಕಾಳಿ ಗುಡಿಗಿಂತ ಸ್ವಲ್ಪ ಮುಂಚೆ ಒಂದು ಬಯಲಿನತ್ತ ಸಾಗುವ ರಸ್ತೆ ಸಿಗುತ್ತೆ. ಆ ರಸ್ತೆಯ ಬಯಲಿನಲ್ಲಿ ಸ್ವಲ್ಪ ಮುಂದೆ ಹೋದರೆ ಅಲ್ಲಿಂದ ಕೋಟೆಯ ಮತ್ತೊಂದು ಪಾರ್ಶ್ವದಿಂದ ಒಳಸಾಗಬಹುದು.

೨)ಅಘೋರೇಶ್ವರ ದೇಗುಲದಿಂದ ಸ್ವಲ್ಪ ಮುಂದೆ , ಕಲ್ಮನೆಯತ್ತ ಬಂದರೆ ನಿಮ್ಮ ಬಲಭಾಗದಲ್ಲೊಂದು ಮಣ್ಣ ಹಾದಿ ಒಳಕ್ಕೆ ಸಾಗುತ್ತದೆ.
Anjaneya swami devastanakke hogo daari toristiro Adityanna
 ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗೋ ದಾರಿ ಯಾವುದು ಅಂದ್ರೆ ಅಲ್ಲಿ ಯಾರಾದರೂ ತೋರಿಸಬಹುದಾದ ದಾರಿಯಲ್ಲಿ ಸುಮಾರು ಒಂದು ಕಿ.ಮೀ ಮುಂದೆ ಸಾಗಿ ಒಂದು ಕೆರೆಯನ್ನು ದಾಟಿದರೆ ಎಡಭಾಗದಲ್ಲಿ ಸಿಗುವುದೇ ಇಕ್ಕೇರಿಯರಸರ ಕಾಲದ ಆಂಜನೇಯ ಸ್ವಾಮಿ ದೇವಸ್ಥಾನ. ಅದರಿಂದ ಹಾಗೇ ಮುಂದೆ ಸಾಗಿದರೆ ಕಾಳಿಗುಡಿ. ಅವೆರಡರ ಮಧ್ಯ ಸಿಗೋ ಬಲತಿರುವಿನಲ್ಲಿ ಸಾಗಿದರೆ ಮುಂಚೆ ಹೇಳಿದ ಪ್ಲಾಂಟೇಷನ್. ಅದರ ಪಕ್ಕಕ್ಕೆ ಸಾಗಿದರೆ ಕೋಟೆ.

ಇಕ್ಕೇರಿಯ ವೀರಾಂಜನೇಯ ಸ್ವಾಮಿ ದೇವಸ್ಥಾನ:
Sri Veeranjaneya swami temple

  ಸಾಮಾನ್ಯವಾಗಿ ಆಂಜನೇಯನ ಮುಖ ನಮ್ಮನ್ನು ನೋಡದೇ ಬಲಭಾಗಕ್ಕೆ ಹೊರಳಿರುತ್ತದೆ. ಕರ್ನಾಟಕದಲ್ಲಿರುವ ನಮ್ಮನ್ನು ಎದುರು ನೋಡುವ ಕೆಲವೇ ಕೆಲವು ಪುರಾತನ ಆಂಜನೇಯನ ವಿಗ್ರಹಗಳಲ್ಲಿ ಇದೂ ಒಂದು ಎನ್ನುತ್ತಾರೆ. ಇದನ್ನು ನೋಡಿ ಹೊರನಾಡಲ್ಲಿ ಮುಂದೆ ಮಾಡಿದರು ಅಂತ ಇಲ್ಲಿನ ಜನ ಹೇಳಿದ್ರೂ ಹೊರನಾಡಲ್ಲಿ ಎಲ್ಲಿದೆ ಎಂಬುದರ ಬಗ್ಗೆ ಅಲ್ಲಿ ಹೋಗೇ ನೋಡಬೇಕಷ್ಟೇ! ಈ ದೇಗುಲದಲ್ಲಿ ಸ್ವಾಗತಿಸುವ ಆನೆಗಳ ಜೊತೆಗೆ ಸ್ವಾಗತದ್ವಾರದ ಮೆಟ್ಟಿಲಲ್ಲಿ ಕೆಳದಿಯ ಉಳಿದ ದೇಗುಲಗಳಲ್ಲಿರುವಂತೆ ಐದು ಪ್ರಾಣಿಗಳ ಮಿಶ್ರಣವಾದ ಮಖರವೆಂಬ ಕಾಲ್ಪನಿಕ ಪ್ರಾಣಿ ಇದೆ.



ಅದನ್ನು ದಾಟಿ ಮುಂದೆ ಸಾಗಿದರೆ ಮಾರುತಿ, ಎಡಮುರಿ ಗಣಪತಿ, ದ್ವಾರಪಾಲಕರನ್ನೊಳಗೊಂಡ ಮಾರುತಿ,ಸ್ಮಶಾನ ಭೈರವಿ, ನಂದೀಶನ ವಿಗ್ರಹಗಳನ್ನು ನೋಡಬಹುದು. ಸ್ಮಶಾನ ಭೈರವಿಯ ವಿಗ್ರಹ ಚಾಲುಕ್ಯರ ಕಾಲದ ಬೇಲೂರು , ಹಳೇಬೀಡು ದೇಗುಲಗಳಲ್ಲಿ ಹೇರಳವಾಗಿದೆ. ಕೆಳದಿಯ ದೇಗುಲದಲ್ಲಿ ಸಪ್ತ ಮಾತೃಕೆಯರು, ಗಿಳಿ, ಮುನಿಗಳು, ದೇವತೆಗಳು ಮುಂತಾದ ಕೆತ್ತನೆಗಳನ್ನು ಕಂಡಿದ್ದರೂ ಸ್ಮಶಾನ ಭೈರವಿಯಂತಹ ಉಗ್ರ ಕೆತ್ತನೆಯನ್ನು ಕಂಡಿರಲಿಲ್ಲ.ಹಾಗಾಗಿ ಇಲ್ಲಿ ದೇಗುಲದ ಒಳಗೇ ಸ್ಮಶಾನ ಭೈರವಿಯ ವಿಗ್ರಹ ಸಿಕ್ಕಿದ್ದು ಸ್ವಲ್ಪ ಆಶ್ಚರ್ಯ ತರಿಸುತ್ತದೆ.  ಸ್ಮಶಾನ ಭೈರವಿಯ  ವಿಗ್ರಹದ ಮೇಲೆ "ಯಿಕ್ಕೇರಿಯ ತಿರುಮಲೇಶಾಚಾರ್ಯ" ಎಂಬ ಬರಹವಿದ್ದು ಅವರ ಕಾಲದಲ್ಲಿ ಈ ದೇಗುಲ ರಚನೆಯಾದ ಸುಳಿವು ಸಿಗುತ್ತದೆ.

ಸ್ವಾಗತದ್ವಾರದಲ್ಲಿರೋ ಮಖರ

Smashana bhairavi

Smashana bhairaviya mele iruva baraha

ದೇಗುಲದ ಮೇಲ್ಛಾವಣಿಯಲ್ಲಿ ಬಿದ್ದ ಮಳೆನೀರು ಹೊರಹರಿಯಲು ಮಾಡಿರೋ ರಚನೆಗಳಲ್ಲೂ ಸಿಂಹದ ಮುಖದ ಕೆತ್ತನೆಗಳನ್ನು ಕಾಣಬಹುದು !

ವೀರಾಂಜನೇಯ ದೇಗುಲದೆದುರು ನಾನು

ಇತ್ತೀಚೆಗೆ ಕಟ್ಟಲ್ಪಟ್ಟಿರುವ ದಕ್ಷಿಣಮುಖ ಕಾಳಿ ದೇಗುಲ
ಕೋಟೆಯ ಪ್ರವೇಶ:
ಕಾಳಿಗುಡಿಯಿಂದ ಆಂಜನೇಯನ ಗುಡಿಗೆ ಹೋಗೋ ದಾರಿಯಲ್ಲಿ ಎಡಕ್ಕೆ ಹೊರಳಿ ಸ್ವಲ್ಪ ಮುಂದೆ ಹೋದರೆ ಒಂದು ಪ್ಲಾಂಟೇಷನ್ ಸಿಗುತ್ತೆ. ಅದರ ಪಕ್ಕದಲ್ಲೇ ಕೋಟೆಗೆ ಹೋಗೋ ಈ ದಾರಿ ಕಾಣುತ್ತದೆ

ಕೋಟೆಗೆ ಹೋಗೋ ದಾರಿ


ಕೋಟೆಗೆ ಮಾರ್ದದರ್ಶಕನಾಗಿ ಆದಿತ್ಯಣ್ಣ :-)
ಹಾಗೇ ಸ್ವಲ್ಪ ಮುಂದೆ ಸಾಗುತ್ತಿದ್ದಂತೆ ಕೋಟೆಯ ಗೋಡೆಗಳು ಕಾಣುತ್ತದೆ. ಅದು ಕಂಡಿತೆಂದರೆ ನೀವು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೀರ ಎಂದರ್ಥ.
ಕೋಟೆಯ ಸುತ್ತಲಿನ ಅಗಳ
 ಒಂದೆಡೆ ಮೂರ್ನಾಲ್ಕು ಕಲ್ಲುಗಳು ಸಿಕ್ಕವು. ಕೋಟೆಯಲ್ಲಿ ಏನೋ ಆಗಿ ಈಗ ಉರುಳಿಬಿದ್ದಿರೋ ಸಾಧ್ಯರೆಯಿರುವ ಅದು ನೀವು ಸರಿಯಾದ ಹಾದಿಯಲ್ಲೇ ಸಾಗುತ್ತಿದ್ದೀರ , ಮುಂದೆ ಸಾಗಿ ಎಂದವಾ ಅನಿಸುತ್ತಿತ್ತು :-)
ನಂತರ ಸಿಕ್ಕ ದೊಡ್ಡಾಲದ ಮರದ ಎಡಭಾಗದಲ್ಲಿ ಸಾಗಿದರೆ ಒಂದು ಕಾಡಬೈನೆ ಮರ. ಅದನ್ನು ದಾಟಿ ಮತ್ತೆ ಎಡಕ್ಕೆ ಸಾಗುತ್ತಿದ್ದಂತೆ ಒಂದು ಬಾವಿ ಕಂಡಿತು. ಅಂದರೆ ಸರಿಯಾದ ದಿಕ್ಕಲ್ಲಿ ಹೋಗ್ತಿದ್ದೀವೋ, ಇಲ್ಲವೋ ಎಂಬ ನಮ್ಮ ಸುಮಾರು ಮುಕ್ಕಾಲು ಘಂಟೆಯ ಡೌಟು ಬಗೆಹರಿಯಿತು !
ಕಾಡಬೈನೆ ಮರ
baavi #1
ಬಾವಿ(೧) ಅನ್ನು ದಾಟಿ ಬಲಕ್ಕೆ ಸಾಗುತ್ತಿದ್ದಂತೆಯೇ ಮುಂದೊಂದು ಸುರಂಗದಂತಹ ರಚನೆ ಕಂಡಿತು. ಮುಂದೆ ಸುರಂಗ ಇದ್ದಿರಬಹುದಾದ ಜಾಗ ಈಗ ಮುಚ್ಚಿಹೋಗಿದೆ :-(
Suranga-1

Suranga-1, other view

ಅಲ್ಲೇ ನಮಗೆದುರಾಗಿ ಒಂದು ಅರಳೀ ಕಟ್ಟೆ ಸಿಕ್ಕಿತು. ಮುಂದೆ ದಾರಿ ತಪ್ಪಿ ಇದೇ ಜಾಗಕ್ಕೆ ಬಂದಾಗ ಯಾವ ದಿಕ್ಕಿನಲ್ಲಿ ಸಾಗಬೇಕೆಂದು ಒಂದು ಐಡಿಯಾ ಕೊಟ್ಟಿದ್ದು ಇದೇ ಅರಳೀ ಕಟ್ಟೆ ! ಯಾವ ದಿಕ್ಕಿನಿಂದ ಬಂದಾಗ ಈ ಬಾವಿ, ಈ ಕಟ್ಟೆ ಸಿಕ್ಕಿತು ಅಂತ ಫೋಟೋ ತೆಗೆದು ಇಟ್ಟುಕೊಂಡ್ರೆ ಕೋಟೆಯಲ್ಲಿ ದಾರಿ ತಪ್ಪಿಸಿಕೊಂಡಾಗ ಹೊರಬರಲು ಸಹಾಯವಾಗುತ್ತೆ ಅಂತ ಈ ಕೋಟೆಯಲ್ಲಿ ಗೊತ್ತಾದ ಕತೆ ಆಮೇಲೆ ಹೇಳ್ತೇನೆ !
Arali katte, one of the landmarks in temple to know direction !

ಅಲ್ಲಿಂದ ಬಲಕ್ಕೆ ಸ್ವಲ್ಪ ಮುಂದೆ ಬಂದಾಗ ಮತ್ತೊಂದು ಬಾವಿ(೨) ಸಿಕ್ಕಿತು.
baavi #2
  ಬಾವಿಯ ದಾಟಿ ಮುಂದೆ ಬಂದಾಗ ಮತ್ತೊಂದು ಗುರುತು ನೆನಪಿಟ್ಟುಕೊಳ್ಳುವಂತಹ ಮರ ಸಿಕ್ಕಿತು. ಅದನ್ನು ದಾಟಿ ಎಡಕ್ಕೆ ಬಂದಾಗ ಮತ್ತೆರಡು ಕೋಟೆಯ ಅವಶೇಷಗಳು ಸಿಕ್ಕಿ ದಾರಿ ಸರಿಯಾಗಿವೆ ಎಂಬುದನ್ನು ಪುಷ್ಠೀಕರಿಸಿದವು.














 ಕೋಟೆಯುದ್ದಕ್ಕೂ ಸಿಕ್ಕ ಹಲವು ಜಾತಿಯ ಚಿಟ್ಟೆಗಳು ಮತ್ತು ಅಣಬೆಗಳ ಹೆಸರುಗಳನ್ನು ಇನ್ನೂ ತಿಳಿಯಬೇಕಷ್ಟೇ !


ಇಲ್ಲಿಂದ ಮುಂದಿನ ಹಾದಿ ಕಷ್ಟವಾಗುತ್ತಾ, ಕನ್ ಪ್ಯೂಸ್ ಮಾಡಿಸುತ್ತಾ ಸಾಗಿತು. ಚದುರಂಗಿ ಮಟ್ಟಿಗಳಿಂದ ಮುಚ್ಚಿಹೋದ ಹಾದಿಯ ಆಚೆ ಸಾಗಬೇಕೋ ಬೇಡವೋ, ಮುರಿದ ಮರವ ದಾಟಬೇಕೋ ಬೇಡವೋ ಅನ್ನೋ ಗೊಂದಲ !

ಏಣಿಯಂತಿರೋ ಮರದ ರಚನೆ
After crossing the fallen tree, you see the way again !

One of the mushroom species seen in Kote
ಕೋಟೆಯ ಬಗ್ಗೆ ಸಿಕ್ಕಾಪಟ್ಟೆ ಕೇಳಿದ್ವಿ. ಆದ್ರೆ ಸುಮಾರು ಒಂದು ಒಂದೂವರೆ ಘಂಟೆ ಆದ್ರೂ ಕೇಳಿದ ಸುಮಾರು ಜಾಗಗಳು ಕಂಡೇ ಇಲ್ವಲ್ಲ ಅನ್ನೋ ಬೇಜಾರು. ಏಪ್ರಿಲ್ ತಿಂಗಳ ಬಿಸಿಲು ಕೋಟೆಯ ಒಳಗೂ ಕಾಡುತ್ತಿತ್ತು.ಇಳಿಯುತ್ತಿದ್ದ ಬೆವರಲ್ಲಿ ಎಲ್ಲಾದ್ರೂ ದಾರಿ ತಪ್ಪಿದ್ವಾ ಅನ್ನೋ ಆತಂಕ ಬೇರೆ. ಹೊತ್ತು ಮೇಲೇರುತ್ತಾ ಬಂದಾಗ ಈ ಕೋಟೆಗೆ ಸುಮಾರು ಸಲ ಬಂದಿರೋ ಗಣಪತಣ್ಣನ ಕೇಳಿದ್ರೆ ಹೆಂಗೆ ಅಂತ ಆಯ್ತು. ಗಣಪತಿ ಮೇಷ್ಟ್ರಿಗೆ ಬೆಳಗಿಂದ ಎರಡ್ಮೂರು ಸಲ ಫೋನ್ ಮಾಡಿದ್ರೂ ತಾಗಿರಲಿಲ್ಲ. ನಾವು ಅಂದ್ಕೊಳ್ತಾ ಇರೋ ಹೊತ್ತಿಗೆ ಅವರೇ ಫೋನ್ ಮಾಡ್ಬೇಕೆ ? ಕಾಕತಾಳೀಯ ಅಂದ್ರೆ ಅದೇ ಅನ್ಸುತ್ತೆ. ಮಧ್ಯಾಹ್ನದ ಮೇಲೆ ಸಿಗೋದಾಗೂ ಹೇಳಿದಾಗ ಸ್ವರ್ಗಕ್ಕೆ ಮೂರೇ ಗೇಣಿನಷ್ಟು ಖುಷಿ. ಆದ್ರೆ ಬರೋದು ಬಂದು ಬಿಟ್ಟಿದೀವಿ. ಈಗ ವಾಪಾಸ್ ಹೋಗೋದು ಹೇಗೆ ಅನ್ನೋ ಡೌಟು ಶುರುವಾಯ್ತು
Baavi #3

Baavi #4
 ಹಾಗೇ ಅಲೆಯುತ್ತಿದ್ದಾಗ ಮತ್ತೆ ಮೂರು ಬಾವಿಗಳು ಸಿಕ್ಕಿದವು. ಹಿಂದೆ ಸಿಕ್ಕಿದ ಮರಗಳು, ಅರಳೀಕಟ್ಟೆಯ ತನಕ ಬಂದರೂ ಅಲ್ಲಿಂದ ಮುಂದೆ ದಾರಿ ಗೊತ್ತಾಗಲಿಲ್ಲ. ಅರಳೀಕಟ್ಟೆಯ ಬುಡದಿಂದ ಕೇಳಿಸುತ್ತಿದ್ದ ವಾಹನಗಳ ಶಬ್ದದ ಮೇಲೆ ಇತ್ತಲೇ ದಾರಿಯಿರಬೇಕು ಎಂಬ ಅಂದಾಜಿನ ಮೇಲೆ ಮುಂದಡಿ ಇಟ್ಟೆವು !
ಈ ಬಾರಿ ಮೇಲೆ ಹತ್ತುವ ದಾರಿ ಕಂಡಿತು.
 ಕೋಟೆಯಿಂದ ಹೊರಗೆ ಬರಬಹುದೇನೋ ಅದರಲ್ಲಿ ಅಂತ ಅದನ್ನು ಹತ್ತಿ ಸ್ವಲ್ಪ ಮುಂದೆ ನಡೆದದ್ದಾಯ್ತು.

Baavi#5

Murida choukattu

Baavi#6

ಅಲ್ಲಿ ಮುಂದೆ ನಡೆದರೂ ಹೊರಹೋಗುವ ಲಕ್ಷಣಗಳು ಕಾಣದ ಕಾರಣ ಬಂದ ದಾರಿಗೆ ಸುಂಕವಿಲ್ಲ ಅಂತ ಮತ್ತೆ ವಾಪಾಸ್ ಬಂದೆವು !

Baavi #7
 ಹಾಗೆಯೇ ಮತ್ತೊಂದು ಹಾದಿಯನ್ನು ಹಿಡಿದು ನಡೆಯುತ್ತಿದ್ದಾಗ ಮತ್ತೊಂದು ಬಾವಿ(೭) ಸಿಕ್ಕಿತು. ನಂತರದಲ್ಲಿ ನೀರು ತುಂಬುವ ತೊಟ್ಟಿ ಕೂಡ ಸಿಕ್ಕಿತು.
ನೀರು ತುಂಬುವ ತೊಟ್ಟಿ

ಇಲ್ಲಿಯವರೆಗೆ  ಕೋಟೆಯ ಗೋಡೆ, ನೀರು ತುಂಬುವ ತೊಟ್ಟಿ, ನಾಟ್ಯಮಂದಿರದ ಮುರಿದು ಬಿದ್ದ ಭಾಗದಂತಹ ರಚನೆಗಳು ಕಂಡಿದ್ದವೇ ಹೊರತು, ಹೊರಬರುವ ದಾರಿ ಕಾಣಲಿಲ್ಲ !
ಹೀಗೇ ಹುಡುಕುತ್ತಾ ನಡೆಯುತ್ತಿರಬೇಕಾದ್ರೆ ಅಂತೂ ಕೆಳಗಿಳಿಯುವ ಹಾದಿಯೊಂದು ಕಂಡಿತು !
one more broken remains of the fort

Melakke hatto haadi
 ಅದರಲ್ಲಿ ಕೆಳಗಿಳಿದರೆ ಐವತ್ತು ಅಡಿ ಆಳದ, ನಲವತ್ತು ಅಡಿ ಅಗಲದ ಅಗಳ ಅನ್ನೋ ಹೆಗ್ಗಳಿಕೆಯ ಅಗಳ ಸಿಕ್ಕಿತು. ಅದಾದ ಕೂಡಲೇ ಮೇಲಕ್ಕೆ ಹತ್ತುವಂತಹ ಕಿರಿದಾದ ಹಾದಿ..ಇದೇ ಇರಬೇಕೆನ್ನೋ ಅಂದಾಜಿನಲ್ಲಿ ಅದರಲ್ಲಿ ಹತ್ತಿದೆವು.



ಅದರಲ್ಲಿ ಹತ್ತಿ ಹೊರಬಂದು ನೋಡಿದ್ರೆ ಬಯಲೋ ಬಯಲು. ಅಂತೂ ಕೋಟೆಯಿಂದ ಯಶಸ್ವಿಯಾಗಿ ಹೊರಬಂದ್ವಿ ಅನ್ನೋ ಖುಷಿ.ಸಮಯ ಎರಡೂವರೆ ದಾಟುತ್ತಾ ಬಂದಿದೆ. ಎಲ್ಲಿ ಬಂದಿದ್ದೀವಿ ಗೊತ್ತಾಗ್ತಿಲ್ಲ ! ಇದು ಇಕ್ಕೇರಿ ಸ್ಟೇಡಿಯಂ ಇರ್ಬೇಕು ಅಂದ ಆದಿತ್ಯಣ್ಣ. ಮಾತಾಡ್ತಾ ಎಲ್ಲಾ ಕಡೆ ನೋಡ್ತಿರುವಾಗ ಬಯಲಿನ ಮತ್ತೊಂದು ಮೂಲೆಯಲ್ಲಿ ನಿಂತಿದ್ದ ಲಗೇಜ್ ಕ್ಯಾರಿಯರ್ ಕಂಡಿತು !
 ಶನಿವಾರದ ಮಧ್ಯಾಹ್ನ, ಖಾಲಿ ಬಯಲಲಲ್ಲೊಂದು ಲಗೇಜ್ ಕ್ಯಾರಿಯರ್ ಅಂದ್ರೆ ! ಹಾಸಿಗೆ ರಿಪೇರಿ ಗಾಡಿ ಅಂತ ಹತ್ರ ಹೋದ್ಮೇಲೆ ಗೊತ್ತಾಯ್ತು. ದೇವರು ಬಂದಂಗೆ ಬಂದ ಅವನ ಬಳಿ ನೀರೂ ಇತ್ತು !! ಆದಿತ್ಯಣ್ಣ ತಮ್ಮ ದಾಹ ತೀರಿಸಿಕೊಳ್ಳೋದ್ರಲ್ಲಿ ಮಗ್ನರಾಗಿದ್ರೆ ನಾನು ಆ ಮೂಲೆಯಲ್ಲೂ ಕಂಡ ವಿಚಿತ್ರ ಹಣ್ಣಿನ ಚಿತ್ರ ತೆಗೆಯುತ್ತಿದ್ದೆ !  

Vichitra hannu

Luggage carrier na hattiya simhasana ! :-)

ಲಗೇಜ್ ಕ್ಯಾರಿಯರ್ನವನು ಕಾಳಿ ಗುಡಿಯ ಕಡೆಗೇ ಹೊರಟಿದ್ದ ನಮ್ಮ ಅದೃಷ್ಟಕ್ಕೆ. ಸರಿ ಅಂತ ಹತ್ತಿಯ ಮೆತ್ತಗೆ ಸಿಂಹಾಸನದ ಮೇಲೆ ಕೂತು ಮುಂದೆ ಸಾಗಿದ ನಮಗೆ ಒಂದು ತಿರುವು ದಾಟುವುದರಲ್ಲಿ ಆಶ್ಚರ್ಯ ಕಾದಿತ್ತು. ಆ ತಿರುವಲ್ಲೇ ನಮ್ಮ ಗಾಡಿ ನಿಂತಿದೆ. ಅಂದರೆ ಆ ತಿರುವಲ್ಲೇ ನಾವು ಗಾಡಿಯ ನಿಲ್ಲಿಸಿ ಪ್ಲಾಂಟೇಷನಿನ ಪಕ್ಕದ ಹಾದಿಯಲ್ಲಿ ಕೋಟೆಯ ಒಳಹೊಕ್ಕಿದ್ವಿ !! ಅಂದ್ರೆ ಹೊರಬರ್ತಾ ಸ್ವಲ್ಪ ಆಂಗಲ್ ವ್ಯತ್ಯಾಸ ಆಗಿದೆ ಅಂದ್ರೂ ಬಹುಪಾಲು ಸರಿಯಾಗೇ ಹೊರಬಂದಿದ್ವಿ ಅಂತ ಆಯ್ತು ! ಮಧ್ಯಾಹ್ನ ಮನೆ ಸೇರಿ ಊಟದ ನಂತರ ಮತ್ತೆ ಬರುವ ಪ್ಲಾನ್ ರೆಡಿಯಾಗ್ತಾ ಇತ್ತು. ಸಂಜೆ ಮತ್ತೆ ಕೋಟೆ ಹೊಕ್ಕಾಗ ನಾವು ಹೊರಬಂದ ಹಾದಿಯೇ ಕೋಟೆಯನ್ನು ಹೊಕ್ಕುವ ಸುಲಭದ ಹಾದಿ ಅಂತ ತಿಳೀತು !! ಸಂಜೆ ಕಂಡ ರಾಣಿ ಕೊಳ, ಚಳ್ಳೆ ಹಣ್ಣು, ಕವಲು ಕಾಯಿ, ಮದ್ದರಸನ ಗಿಡ, ಅಂಕೋಲೆ ಸೊಪ್ಪು ಮತ್ತಿತರ ಕತೆ ಮುಂದಿನ ಭಾಗದಲ್ಲಿ ಮುಂದುವರೆಯುತ್ತದೆ.


ಮುಂದುವರೆಯಲಿದೆ....