Monday, March 27, 2017

ನಾನೋದಿದ ಪುಸ್ತಕ - ಅಷ್ಟಾವಕ್ರ ೧,೨

ಯಂಡಮೂರಿ ವೀರೇಂದ್ರನಾಥರ "ತುಳಸಿ", "ತುಳಸೀ ದಳ" ಕಾದಂಬರಿಗಳನ್ನು ಓದಿದ್ದರೆ, ಅವು ಇಷ್ಟವಾಗಿದ್ದರೆ ಇಷ್ಟವಾಗಬಹುದಾದ ಮತ್ತೆರಡು ಪುಸ್ತಕಗಳು "ಅಷ್ಟಾವಕ್ರ ಭಾಗ ೧" ಮತ್ತು "ಅ.ಭಾಗ ೨" ಆ ಕತೆಗಳಲ್ಲಿ ಬರುವ ಕ್ಷುದ್ರ ದೇವತೋಪಾಸಕರಾದ ವಿಷಾಚಿ, ಕಾದ್ರಾ, ದಾರ್ಕಾ ಮಾಂತ್ರಿಕರು, ಕುಟ್ಟಿ ಸೈತಾನ್,ಕಾಷ್ಮೋರ,ಖೇಛರಿ ಮುದ್ರೆಗಳ ಮೆಲುಕು,ಪಾತ್ರಗಳಾದ ಸಂತಾನ್ ಫಕೀರ, ಶ್ರೀಧರರ ನೆನಪು ಇಲ್ಲೂ ಬಂದರೂ ಆ ಕತೆಗೂ ಈಕತೆಗೂ ಸುಮಾರು ೨೫ ವರ್ಷಗಳ ಅಂತರವಿದೆ. ಅದೇನು ಅಂದಿರಾ ? ಮೊದಲೆರಡು ಭಾಗಗಳಲ್ಲೂ ಇಲ್ಲಿಯೂ ಇರುವ ಏಕೈಕ ಪಾತ್ರ ಪ್ರೊಫೆಸರ್ ಜಯದೇವ್ ಆದರೂ ಇದರಲ್ಲಿ ಬರುವ ಪ್ರಧಾನ ಪಾತ್ರಗಳಲ್ಲಿ ಅವರ ಮೊಮ್ಮಗಳು ರಂಜಿತಾ ಬರುತ್ತಾಳೆ. ಹಿಂದಿನ ಕತೆಯಲ್ಲಿ ಮುಖ್ಯ ಪಾತ್ರವಾಗಿದ್ದ ಯುವಕ ಜಯದೇವ್ ಗೆ ಇಪ್ಪತ್ತೈದು ವರ್ಷಗಳಲ್ಲಿ ಮೊಮ್ಮಗಳಾಗಿ ಅವಳೂ ಬಿ.ಎಸ್ಸಿ ಓದುವಷ್ಟು  ದೊಡ್ಡವಳಾಗಿದ್ದು ಹೇಗಪ್ಪಾ ಅನ್ನುವಂತಹ ಪ್ರಶ್ನೆ ಬಂದರೂ ಮೊದಲೆರಡು ಕಾದಂಬರಿಗಳಲ್ಲಿದ್ದಷ್ಟು ಈ ತರದ ಲಾಜಿಕ್ಕಿಗೆ ಪ್ರಾಮುಖ್ಯತೆಯಿಲ್ಲವೇನೋ ಅನಿಸುತ್ತದೆ. ಕಾದಂಬರಿಯ ಮಧ್ಯದಲ್ಲೇ ಬರುವ ರಾಕೇಶನೆಂಬ ಪಾತ್ರ ತಾಳೆಗರಿಯಲ್ಲಿವ ಮಾಹಿತಿಯನ್ನು ಡಿಕೋಡ್ ಮಾಡಿದಾಗ ಅದರಲ್ಲಿರುವ ನಾಲ್ಕನೆಯ ಅಂಶ ಕ್ಷುದ್ರಯಜ್ಞವನ್ನು ನಡೆಸುವುದರ ಬಗ್ಗೆಯಾಗಿರುತ್ತದೆ. ಆದರೆ ಆ ತಾಳೆಗರಿಯ ಪ್ರಸ್ತಾಪವನ್ನು ಮತ್ತೊಂದು ಪಾತ್ರವಾದ ಸಿದ್ದಾರ್ಥನ ಬಳಿ ಮಾಡುವಾಗ ನಾಲ್ಕನೆಯ ಅಂಶ ಸೂಫಿ ಅಕ್ಷರಗಳ ಬಗ್ಗೆಯಾಗಿತ್ತು ಎಂದು ತಿಳಿಸುತ್ತಾನೆ. ತಾಳೆಗರಿಯಲ್ಲಿ, ಕಾದಂಬರಿಯಲ್ಲಿ ಉಲ್ಲೇಖವೇ ಇರದ ಸೂಫಿಯ ವಿಷಯ ಇದ್ದಕ್ಕಿಂದಂತೆ ಪ್ರತ್ಯಕ್ಷವಾಗೋದೇಕೆ ? ಮೊದಲೆರಡು ಕಾದಂಬರಿಯಲ್ಲಿ ನಾಡಿಗಳ, ಚಕ್ರಗಳ, ಗಾಯತ್ರೀ ಮಂತ್ರದ ಪ್ರಸ್ತಾಪವಾದ್ದರಿಂದ ಈ ಸಲ ಸೂಫಿಸಂ ಬಂತೇ ಅನ್ನೋ ಅನುಮಾನ ಕಾಡಿದರೂ ಆಶ್ಚರ್ಯವಿಲ್ಲ. ಈ ತರದ ಋಣಾತ್ಮಕ ಅಂಶಗಳನ್ನು ಬದಿಗಿಟ್ಟು ನೋಡುವುದಾದರೆ
ಪಾತ್ರಗಳ ವೈವಿಧ್ಯತೆಯಲ್ಲಿ, ಅವುಗಳ ಪೋಷಣೆ ಮತ್ತು ಸಂಬಂಧಗಳ ಸೃಷ್ಠಿಯಲ್ಲಿ ಮೊದಲೆರಡು ಕಾದಂಬರಿಗಳಿಗಿಂತಲೂ ಚೆನ್ನಾಗಿರುವ ಇದನ್ನು ಮೊದಲೆರೆಡು ಕಾದಂಬರಿಗಳಿಗೆ ಸಂಬಂಧವಿಲ್ಲದ ಒಂದು ಕಾದಂಬರಿಯಂತೆಯೇ ಓದಿದರೆ ಇದರ ರಸಾಸ್ವಾದನೆ ಮಾಡಬಹುದು.

ಈ ಕಾದಂಬರಿಯಲ್ಲಿ ಚೈನೀಸ್, ಜಪಾನೀಸ್ ಬ್ರೈನ್ ವಾಷಿಂಗ್, ಅಗ್ರಿಕಲ್ಚರಲ್ ಬಿ.ಎಸ್ಸಿ, ಜೀನುಗಳ ಬಗ್ಗೆ ಹೇಳುವ  ಜೆನೆಟಿಕ್ಸ್, ರೋಗಗಳ ಬಗೆಗಿನ ಪೆಥಾಲಜಿ, ವಿಕಿರಣ ಬಗ್ಗೆ ಹೇಳೋ ರೆಂಟ್ಜನ್ , ಥರ್ಮೋ ನ್ಯೂಕ್ಲಿಯರ್ ಬಾಂಬ್ಗಳು, ಭ್ರಮಾಸ್ತಿತಿಯಲ್ಲಿನ ಜನರ ಮನೋಸ್ಥಿತಿ,ಹಳ್ಳಿಗರಲ್ಲಿನ ಮೂಢ ನಂಬಿಕೆಗಳು ಮತ್ತದನ್ನು ದುರುಪಯೋಗ ಮಾಡಿಕೊಳ್ಳೋ ಜನರು,  ಕೃತಕ ಗರ್ಭಧಾರಣೆಯ ಐ.ವಿ.ಎಚ್ ಮತ್ತು ಐ.ವಿ.ಡಿ ತಂತ್ರಜ್ಞಾನಗಳು, ಯಕ್ಷಿಣಿ, ಕ್ಷುದ್ರದೇವತೋಪಾಸನೆ,ಕಮ್ಯುನಿಸಂ, ರಹಸ್ಯವಾಗಿ ಕಾರ್ಯನಿರ್ವಹಿಸೋ ದೇಶವೊಂದರ ಪ್ರಧಾನಿಯನ್ನೋ ಕೊಲ್ಲಲು ಮುಂದಾಗೋ ಎಸ್ಸೋಕ್ ಎಂಬ ಸಂಘಟನೆ, ಅಂಗವೈಕಲ್ಯತೆಯಿರುವ ಜನರಲ್ಲಿರುವ ಕೀಳರಿಮೆ ಮುಂತಾದ ಹಲವಾರು ವಿಷಯಗಳನ್ನು ತರಲಾಗಿದೆ.ಯಕ್ಷಿಣೆಯ ರೂಪಕವಾಗಿ ರಂಜಿತಾ, ವೈಟ್ ಶಾಡೋ/ರವಿ, ಫ್ರೊಫೆಸರ್ ರವಿ ಬಂದರೆ , ತಮ್ಮ ಮನೋವೈಕಲ್ಯಗಳಿಂದ ಜಗತ್ತಿಗೇ ಕಂಟಕರಾಗ ಹೊರಟ ಮಹಾದ್ರಷ್ರ/ಡಾ| ಹರಹರಿರಾವ್ , ಅವತಾರ್ ಬಾಬಾ/ಡಾ| ವಂಶೀಕೃಷ್ಣ ,ರಾಕೇಶ್ ಕಾಣಸಿಗುತ್ತಾರೆ. ಅರ್ಧಂಬದ್ರ ಕಮುನಿಷ್ಟರಾಗಿ ಶಂಕರಶಾಸ್ತ್ರಿ/ಭವಾನಿಶಂಕರ್, ಡಾ| ವಿಲಿಯಮ್ಸ್ ಕಂಡರೆ , ತಮ್ಮ ರೂಪ, ಅಂಗವೈಕಲ್ಯತೆಯ ಮೆಟ್ಟಿನಿಂತು ಯಾವ ಪರಿಸ್ಥಿತಿಗೂ ಎದೆಗುಂದದ ಹೋರಾಟಗಾರರಾಗಿ ಸಿದ್ದಾರ್ಥ ಮತ್ತು ಕೇದಾರಗೌರಿ ಕಾಣುತ್ತಾರೆ. ಸ್ಪರ್ಮ್ ಸೆಲ್ಲಿಂಗ್ ಏಜೆನ್ಸಿಯ ಮತ್ತು ಪರಿಸ್ಥಿತಿಯ ಕೈಗೊಂಬೆಗಳಂತೆ ಆಗುವ ಶೇಟ್ ದಂಪತಿ, ಕಾದಂಬರಿಗೆ ಹೊಸ ತಿರುವು ಕೊಡೋ ಡಾ| ನಿವೇದಿತಾ.  ಕ್ಲೈಮಾಕ್ಸಿನಲ್ಲಿ ಬರೋ ಸೂಫಿಯಲ್ಲಿನ ಅತ್ಯುನ್ನತ ಸಂತೆ ಮುರ್ಷಿದಾ , ಅಲ್ಲಲ್ಲಿ ಬರೋ ಬ್ಲೂ/ಬ್ಲಾಕ್/ವೈಟ್/ಯೆಲ್ಲೋ/ರೆಡ್ ಸ್ಕೆಲಿಟನ್ಗಳು ಪ್ರತೀ ಪುಟವನ್ನು ಕುತೂಹಲಕಾರಿಯಾಗಿಟ್ಟಿದ್ದಾರೆ. ಕಾದಂಬರಿಯಲ್ಲಿ ಬರೋ ಮತ್ತೊಂದು ಮುಖ್ಯ ಪಾತ್ರ ಡಾ| ರಂಗಪ್ರಸಾದ್. ಕೃತಕ ಗರ್ಭದಾರಣೆಯ ಪರವಿರೋಧಗಳ ಬಗ್ಗೆ ನಡೆಯೋ ವಿಚಾರವಿನಿಮಯಗಳು ಕಾದಂಬರಿ ಸೃಷ್ಠಿಯಾದಕಾಲವನ್ನು ಗಮನಿಸಿದಾಗ ಅಚ್ಚರಿಮೂಡಿಸದೇ ಇರವು. ಇದರಲ್ಲಿ ಮೂಡಿದ ಅನೇಕ ಚರ್ಚೆಗಳು ಇಂದಿಗೂ ಪ್ರಸ್ತುತ ಅನ್ನೋದೇ ಇಲ್ಲಿನ ಸ್ವಾರಸ್ಯ.

ಇಷ್ಟೆಲ್ಲಾ ಪಾತ್ರಗಳು ಬಂದಿದೆಯಲ್ಲಾ ಅವರೆಲ್ಲಾ ಯಾರು ಅಂದ್ರಾ ? ಕಾದಂಬರಿ ಮುಗಿಯೊ ಹೊತ್ತಿಗೆ ಅವರೆಲ್ಲಾ ಒಂದೇ ಎಳೆಯಲ್ಲಿ ಒಗ್ಗೂಡುತ್ತಾರೆ.ಈ ಸ್ಕೆಲಿಟನ್ನು, ಮುರ್ಷಿದಾ ಯಾರೆನ್ನೋ ಕುತೂಹಲಕ್ಕೆ ಕಾದಂಬರಿಯನ್ನೇ ಓದಬೇಕು. ಅದೆಲ್ಲಾ ಸರಿ, ಕಾದಂಬರಿಗೆ ಅಷ್ಟಾವಕ್ರ ಅಂತಲೇ ಹೆಸರಿಟ್ಟಿದ್ದೇಕೆ? ಅವನೇನು ವಿಲನ್ನಾ ? ಹೀರೋವಾ ಅನ್ನೋ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಹೇಳಲಾರೆ. ಯಾಕೆಂದರೆ ಅಷ್ಟಾವಕ್ರನ ಜನನ ಮೇಲೆ ಬಂದ ಎಲ್ಲಾ ಪಾತ್ರಗಳಿಗೂ ಸಂಬಂಧಿಸಿದೇ ಆಗಿದೆ ! ಇನ್ನು ಕುಟ್ಟಿಸೈತಾನ್ ಮತ್ತು ಕಾಷ್ಮೋರಾ . ಮೊದಲೆರಡು ಕಾದಂಬರಿಗಳಲ್ಲಿ ಬಂದಷ್ಟು ಅಧಿಕವಾಗಿ ಇದರ ಬಗ್ಗೆ ಮಾಹಿತಿಯಿಲ್ಲದಿದ್ದರೂ ಅದನ್ನು ಇಂದಿನ ದಿನಕ್ಕೆ ಪ್ರಸ್ತುತವಾಗಿಸಿದ ಇಲ್ಲಿನ ರೀತಿ ಮೊದಲೆರಡಕ್ಕಿಂತ ಭಿನ್ನ. ಮೊದಲೆರಡರಲ್ಲಿ ಕ್ಷುದ್ರ ದೇವತೋಪಾಸನೆಯನ್ನು ಮನೋಶಾಸ್ತ್ರ, ವೈದ್ಯಕೀಯ ಶಾಸ್ತ್ರ, ಹಿಪ್ನಾಟಿಸಂಗಳೊಂದಿಗೆ ತಳುಕು ಹಾಕಿದ್ದರೆ ಇಲ್ಲದನ್ನು ಭ್ರಾಂತಿ, ಜೀನ್ ಮ್ಯುಟೇಷನ್, ಬ್ರೈನ್ ವಾಷಿಂಗ್ ಮುಂತಾದ ಅಂಶಗಳೊಂದಿಗೆ ಹೋಲಿಸಲಾಗಿದೆ. ಮೊದಲೆರಡರಲ್ಲಿ ವಿಜಯ ಯಾವುದರದ್ದು ಎಂದು ತೀರ್ಮಾನಿಸೋ ಆಯ್ಕೆಯನ್ನು ನಮಗೇ ಕೊಟ್ಟರೆ ಇಲ್ಲಿ ಬರೋ ಡಾ| ವಂಶೀಕೃಷ್ಣರ ಮಾತುಗಳುದೊಂದಿಗೆ ಒಂದು ಸಾಧ್ಯತೆಯನ್ನು ಲೇಖಕರೇ ಕೊಂದು ಹಾಕುತ್ತಾರೆ. ಆದರೂ ಹಿಡಿದ ಪುಸ್ತಕ ಕೆಳಗಿಳಲು ಬಿಡದಂತೆ ಓದಿಸಿಕೊಂಡ ಪುಸ್ತಕಗಳಿವು. ಒಮ್ಮೆ ಓದೋಎ ಯಾವ ಅಡ್ಡಿಯೂ ಇಲ್ಲ.

Friday, March 10, 2017

ಸಿದ್ದಾಪುರದ ಐತಿಹಾಸಿಕ ತಾಣಗಳು


ಸಿದ್ದಾಪುರದಿಂದ ಹೊನ್ನಾವರಕ್ಕೆ ಹೋಗುವಾಗ ಸಿಗುವ ಕ್ಯಾದಗಿಯ ಬಳಿಯ ಐನಕೈಯ ಭಾಗ್ಯತ್ತೆಯ ಮನೆಗೆ ಹೋಗಿ ಬರೋಣ ಅಂತ ಅಮ್ಮ ಯಾವಾಗ್ಲೂ ಹೇಳ್ತಿದ್ರು. ಮನೆಗೆ ಕ್ಷಿಪ್ರನ ಆಗಮನವಾದಾಗಿಂದ ಊರಿಗೆ ಹೋದಾಗ್ಲೆಲ್ಲಾ ಎಲ್ಲಾದ್ರೂ ಸುತ್ತೋದೇ ಆಗಿತ್ತಲ್ಲ, ಸರಿ ಅಂದೆ. ಸುಮ್ನೆ ಹೋಗ್ಬರೋದೇನು, ಸಿದ್ದಾಪುರದ ಸುತ್ತಮುತ್ತ ಏನೇನಿದೆ ಅಂತ ಕೇಳಿದಾಗ ಸಿಕ್ಕ ಸುಮಾರಷ್ಟು ಜಾಗಗಳನ್ನ ಮೊದಲ ಬಾರಿ ನೋಡಿದ್ದು ನಾನು. ಇದರಲ್ಲಿ ಸುಮಾರಷ್ಟು ಓದುಗರಾದ ನಿಮಗೂ ಹೊಸದಾಗಿರಬಹುದು, ಮುಂದಿನ ಬಾರಿಯ ನಿಮ್ಮ ಸಿದ್ದಾಪುರ ಟ್ರಿಪ್ಪಲ್ಲಿ ಅವುಗಳನ್ನ ಸೇರಿಸ್ಕೊಳ್ಳಬಹುದು ಅನ್ನೋ ಉದ್ದೇಶದಿಂದ ಅವುಗಳ ಬಗ್ಗೆ ಬರೀತಿದ್ದೀನಿ.

ಶಂಕರ ಮಠ:
ಸಿದ್ದಾಪುರಕ್ಕೆ ಹೋದವರಿಗೆಲ್ಲಾ ಅಲ್ಲಿನ ಶಂಕರಮಠ ಎಲ್ಲಿದೆ ಅಂತ ಗೊತ್ತೇ ಇರುತ್ತೆ. ಸಿದ್ದಾಪುರ ಪೇಟೆಯಿಂದ ಕುಮಟಾ ರಸ್ತೆಯ ಕಡೆ ತಿರುಗಿ ಸುಮಾರು ಒಂದು ಕಿ.ಮೀ ಬರುವಷ್ಟರಲ್ಲಿ ಶಂಕರ ಮಠ ಸಿಗುತ್ತೆ. ಇದು ಐತಿಹಾಸಿಕ ಸ್ಥಳವಲ್ಲ ಮತ್ತು ಇದನ್ನು ಕಟ್ಟಿಸಿದ್ದು ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆಯವರ ಸೋದರ. ಆದರೂ ಇದನ್ನು ನೋಡಲೋಗ್ಯ ಸ್ಥಳಗಳಲ್ಲಿ ಸೇರಿಸೋಕೆ ಕಾರಣ ಇಲ್ಲಿನ ಧ್ಯಾನಮಂದಿರ. ಇಲ್ಲಿನ ಧ್ಯಾನ ಮಂದಿರದಲ್ಲಿ ಮೌನವಾಗಿ ಕೂತು ಧ್ಯಾನ ಮಾಡುತ್ತಿದ್ದರೆ ಸಿಗುವ ಅನುಭೂತಿಯೇ ಬೇರೆ


ಭಾನ್ಕುಳಿ ರಾಮದೇವರ ಮಠ:
ಹಾಗೆಯೇ ಮುಂದೆ ಬರುತ್ತಿದ್ದಾಗ ಕೆಕ್ಕಾರು ರಾಮದೇವರ ಮಠ ಎಂಬ ಬೋರ್ಡು ಕಂಡು ಆ ದಾರಿಯಲ್ಲಿ ಸುಮಾರು ಒಂದೂವರೆ ಕಿ.ಮೀ ಬಲಕ್ಕೆ ಸಾಗುತ್ತಿದ್ದಾಗ ಸಿಕ್ಕಿದ್ದು ಕೆಕ್ಕಾರು ಮಠ. ಆ ಮಠದ ಪರಿಸರ, ಅಲ್ಲಿರುವ ರಾಮದೇವರ ದೇಗುಲಕ್ಕಿಂತ ಅಲ್ಲಿಗೆ ಸಾಗೋ ಹಾದಿಯೇ ಹೆಚ್ಚು ಹಿಡಿಸಿತ್ತು. ಹಾದಿಯಲ್ಲಿ ಕಂಡ ನವಿಲುಗಳು, ಕೌಳಿಮಟ್ಟಿಗಳು ಬೆಳಗ್ಗೆಯಿಂದ ಸಾಗುತ್ತಿದ್ದ ಟಾರ ರಸ್ತೆಯಿಂದ ಹೊರತಂದು ಬೇರೆಯದೇ ಪ್ರಪಂಚಕ್ಕೆ ಕರೆತರುವಂತಿದ್ದವು




ಗೋಲಬಾವಿ:
ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ ಸುಮಾರು ೧೩ ಕಿ.ಮೀ ಸಾಗಿದರೆ ನೋಡಲೋಗ್ಯವಾದಂತಹ ಮೂರು ಮುಖ್ಯ ಸ್ಥಳಗಳಿವೆ. ಅವುಗಳೆಂದರೆ ಗೋಲಬಾವಿ, ಶ್ವೇತಪುರ ರತ್ನತ್ರಯ ಬಸದಿ, ಬಿಳಗಿಯರಸರ ವಿರೂಪಾಕ್ಷ ಮಂದಿರ. ಬಿಳಗಿ ಎಂಬ ಊರನ್ನು ದಾಟಿ ಸ್ವಲ್ಪ ಮುಂದೆ ಬರುತ್ತಿದ್ದಂತೆ ಅಲ್ಲೊಂದು ಧ್ವಜಸ್ಥಂಭ ಇರುವ ಸರ್ಕಲ್ ಸಿಗುತ್ತೆ. ಅದಕ್ಕಿಂತ ಸ್ವಲ್ಪ ಮುಂದೆ ಬಂದರೆ ಸಿಗುವುದೇ ಗೋಲಬಾವಿ. ಸುಮಾರು ೭೦೦-೮೦೦ ವರ್ಷಗಳಷ್ಟು ಹಳೆಯದೆಂದು ನಂಬಲಾದ ಈ ಬಾವಿಯ ಬಳಿ ಆಗಿನ ರಾಜರ ಕಾಲದ ಕಲ್ಲಿನ ಮರಿಗೆಗಳು, ಬಾನಿಗಳು ಇವೆ. ಇದು ಯಾವ ರಾಜರ ಕಾಲದಲ್ಲಿ ಕಟ್ಟಿಸಿದ್ದೆಂದು ಹೇಳುವ ಶಾಸನಗಳು ಮಾಹಿತಿಯಿಲ್ಲದಿದ್ದರೂ ಈ ಬಾವಿಯ ರಚನೆ, ಒಳಗೆ ಇಳಿಯಲು ಮಾಡಿರುವ ಮೆಟ್ಟಿಲುಗಳು, ಒಳಗಿರುವ ಗೋಲಾಕಾರದ ಕಮಾನುಗಳು ನೋಡಲೋಗ್ಯವಾಗಿವೆ









ಶ್ವೇತಪುರ ರತ್ನತ್ರಯ ಬಸದಿ:
ಮುಂಚೆ ಸಿಕ್ಕಿದ್ದ ಸರ್ಕಲ್ಲಿನ ಬಲಭಾಗದಲ್ಲಿ(ಸಿದ್ದಾಪುರದ ಕಡೆ ಹೋಗುವವರ ಎಡಭಾಗದಲ್ಲಿ) ಸ್ವಲ್ಪ ಮುಂದೆ ಹೋದರೆ ಅಲ್ಲಿ ಮಾರುತಿ ಮಂದಿರಕ್ಕೆ ದಾರಿ ಅನ್ನೋ ಬೋರ್ಡ್ ಕಾಣುತ್ತದೆ. ಅದೇ ರಸ್ತೆಯಲ್ಲಿ ಎಡಕ್ಕೆ ತಿರುಗಿ  ಸುಮಾರು ಐನೂರು ಮೀಟರ್ ಮುಂದೆ ಹೋಗುವಷ್ಟರಲ್ಲಿ ನಿಮ್ಮ ಎಡಭಾಗಕ್ಕೆ ಪುರಾತತ್ವ ಇಲಾಖೆಯ ಬೋರ್ಡ್ ಸಿಗುತ್ತದೆ. ಅದರ ಪಕ್ಕದಲ್ಲೇ ಇದೆ ರತ್ನತ್ರಯ ಬಸದಿ.
ಬಿಳಗಿ ಅರಸರ ಕಾಲದಲ್ಲಿ ಕಟ್ಟಿಸಿದ್ದೆನ್ನಲಾದ ಈ ಬಸದಿಯಲ್ಲಿ ದಾನಶಾಸನ ಮತ್ತು ಬಸದಿಯ ಬಗ್ಗೆ ತಿಳಿಸುವ ಮತ್ತೊಂದು ಕಲ್ಲಿನ ಶಾಸನ ಇನ್ನೂ ಸುಸ್ಥಿತಿಯಲ್ಲಿದೆ. ಇಲ್ಲಿ ಜೈನಮತದ ಮುಖ್ಯ ತೀರ್ಥಂಕರರಾದ  ಇವರ ಮೂರ್ತಿಗಳಿರುವುದರಿಂದ ಇದನ್ನು ರತ್ನತ್ರಯ ಬಸದಿ ಎಂದು ಕರೆಯಲಾಗಿದೆ. ಇದರ ಹೊರಬಾಗದಲ್ಲಿರುವ ಮತ್ತೆರಡು ಮಂದಿರಗಳಲ್ಲಿ ಒಂದರಲ್ಲಿ ಚಂದ್ರಪ್ರಭರ ಮೂರ್ತಿಯಿದ್ದರೆ ಮತ್ತೊಂದರಲ್ಲಿ ಇದ್ದಿರಬಹುದಾದ ಮೂರ್ತಿಯನ್ನು ಕಳುವು ಮಾಡಲಾಗಿದೆ :-(

ಈ ಬಸದಿಯಲ್ಲಿರುವ ಶಿಲ್ಪಗಳ ವೈಶಿಷ್ಟ್ಯತೆಯ ಬಗ್ಗೆ ಹೇಳಲೇಬೇಕು. ಇಲ್ಲಿನ ಮೂರ್ತಿಗಳನ್ನು ಅವುಗಳ ಶಿಲ್ಪದ ಕೆಳಭಾಗದಲ್ಲಿರುವ ಚಿತ್ರಗಳಿಂದ ಗುರುತಿಸಲಾಗುತ್ತದೆಯಂತೆ. ಚಂದ್ರನ ಚಿಹ್ನೆಯಿರುವ ಶಿಲ್ಪ ಚಂದ್ರಪ್ರಭರದ್ದಾಗಿದ್ದರೆ ಹೊರಭಾಗದಲ್ಲಿರುವ ಪದ್ಮಾವತಿ ದೇವಿಗೆ ಕೋಳಿ ವಾಹನ. ಆ ಕೋಳಿಗೆ ಹಾವಿನ ಹೆಡೆಯೂ ಇದ್ದು ಅದಕ್ಕೆ ಕುಕ್ಕುಟ ಸರ್ಪ ಎಂದು ಹೆಸರಂತೆ. ಪಾರ್ಶ್ವನಾಥನ ಕಾಲಬಳಿಯಲ್ಲಿ ಜ್ವಾಲಾ ಮತ್ತು ಮಾಲಿನಿ ಎಂಬ ಎರಡು ಸ್ತ್ರೀ ಶಿಲ್ಪಗಳಿವೆ










ಇಲ್ಲಿ ಮೂರು ಬಾಗಿಲುಗಳಿವೆ. ಈ ಮೂರು ಬಾಗಿಲುಗಳಿಂದ ಪ್ರವೇಶ.ದ್ವಾರದ ಎಡಭಾಗದಲ್ಲಿ  ಧರಣೇಂದ್ರ ಆಮೆ(ಕೂರ್ಮ)ವಾಹನನಾಗಿದ್ದರೆ ಬಲಭಾಗದಲ್ಲಿರುವ ಪದ್ಮಾವತಿಗೆ ಕುಕ್ಕುಟ ಸರ್ಪ ವಾಹನ. ಒಳಗಿರುವ ರತ್ನತ್ರಯರು ಮತ್ತು ಅವುಗಳ ಕಾಲ ಬಳಿಯಲ್ಲಿರುವ ವಾಹನದ ಚಿಹ್ನೆಗಳು ಇಂತಿವೆ. ಶಾಂತಿನಾಥ/ನೇಮಿನಾಥ(ಶಂಖ),ಪಾರ್ಶ್ವನಾಥ(ಹಾವು), ಮಹಾವೀರ(ಸಿಂಹ). ಇಲ್ಲಿರುವ ಲಾಂಛನಗಳ ಮೇಲೆಯೇ ತೀರ್ಥಂಕರರ ಗುರುತುಹಿಡಿಯುವಿಕೆ ನಡೆಯುತ್ತದೆ ಎಂದು ಇಲ್ಲಿರುವ ಪುರಾತತ್ವ ಇಲಾಖೆಯ ಗೈಡ್ ನಾಗರಾಜ್ ಅವರು ಹೇಳುತ್ತಿದ್ದರು. ಮೇಲ್ಗಡೆ ಹಾವಿನ ಹೆಡೆಯಿರುವಿಕೆ ಮೂಡಬಿದರೆಯಲ್ಲೂ ಇಲ್ಲ. ಪಾರ್ಶ್ವನಾಥನ ಮೇಲೆ ಹಾವಿನ ಹೆಡೆಯಿರುವಿಕೆ ಸ್ವಲ್ಪ ವಿಶೇಷವಾದ ಶಿಲ್ಪವೆನಿಸಿತು. ಯಾಕೆಂದರೆ ಮೂಡುಬಿದರೆಯ ಸಾವಿರಕಂಬದ ಬಸದಿಯಲ್ಲೂ ಈ ತರದ ಶಿಲ್ಪವನ್ನು ನೋಡಿರಲಿಲ್ಲ.

ಈ ಬಸದಿಯ ಮೇಲ್ಛಾವಣಿಯಲ್ಲಿರುವ ಕೆತ್ತನೆಗಳು ಸುಂದರವಾಗಿವೆ. ಇಲ್ಲಿರುವ ಕೆಳದಿಯರಸರ ಲಾಂಛನವಾಗಿದ್ದ ಗಂಡಭೇರುಂಡ ಮುಂತಾದ ಶಿಲ್ಪಗಳಿಂದ ಇಲ್ಲಿಯರಸರಿಗೂ ಕೆಳದಿಯರಸರಿಗೂ ಇದ್ದಿರಬಹುದಾದ ಕೊಡುಕೊಳ್ಳುವಿಕೆಯ ಬಗ್ಗೆ ಅಂದಾಜಿಸಬಹುದು


ಹೊರಗಡೆ ಉತ್ಖನನದ ಸಮಯದಲ್ಲಿ ಸಿಕ್ಕಿರೋ ಕೆಲವು ಮೂರ್ತಿಗಳನ್ನು ಇಡಲಾಗಿದೆ. ಇಲ್ಲೇ ಹತ್ತಿರದಲ್ಲಿ ಕಲ್ಯಾಣೇಶ್ವರ ದೇಗುಲವೂ ಇದೆ. ಆದರೆ ಅದಕ್ಕೆ ಹೋಗೋದು ಕಷ್ಟವೆಂದು ತಿಳಿದ ನಾವು ವಿರೂಪಾಕ್ಷ ದೇಗುಲದತ್ತ ಹೊರಟೆವು.

ವಿರೂಪಾಕ್ಷ ದೇಗುಲ:
ಮತ್ತೆ ಗೋಲಬಾವಿಯ ಬಳಿಗೆ ಬಂದು ಅದರ ಪಕ್ಕದಲ್ಲಿರುವ ಕಂಪ್ಯೂಟರ್ ಸೆಂಟರ್ ಬಳಿ ಇರುವ ಸಿಮೆಂಟ್ ರಸ್ತೆಯಲ್ಲಿ ಕೆಳಗೆ ಸಾಗಿದರೆ ಸುಮಾರು ಒಂದೂವರೆ ಕಿಲೋಮೀಟರ್ ದೂರ ಸಾಗುವಷ್ಟರಲ್ಲಿ ಸಿಗೋದು ವಿರೂಪಾಕ್ಷ ದೇಗುಲ. ಇಲ್ಲಿನ ಪುರುಷಾಮೃಗ/ಚಪ್ಪೆರಾಯ ಮುಂತಾದ ಶಿಲ್ಪಗಳು ನೋಡಲರ್ಹವಾಗಿವೆ



ಇಟಗಿ ಮಾತೋಬಾರ ಶ್ರೀರಾಮೇಶ್ವರ ದೇವಸ್ಥಾನ:
ಈ ದೇಗುಲವೂ ಬಿಳಗಿ ಅರಸರ ಕಾಲದಲ್ಲಿ ಕಟ್ಟಿಸಿದ್ದೆಂದು ನಂಬಲಾದರೂ ಇದು ಯಾವ ರಾಜನ ಕಾಲದಲ್ಲಿ, ಯಾವ ಇಸವಿಯಲ್ಲಿ ಕಟ್ಟಿಸಿದ್ದು ಎನ್ನುವಂತಹ ಹೆಚ್ಚಿನ ಮಾಹಿತಿ ದಕ್ಕಲಿಲ್ಲ. ಇದರ ಬಗೆಗಿನ ಮಾಹಿತಿಯನ್ನು ಇನ್ನೂ ಜಾಲಾಡಬೇಕಿದೆ. ಆದರೆ ಇಲ್ಲಿರುವ ಶಿಲ್ಪಗಳು ಮನಸೆಳೆಯುತ್ತವೆ.
ಇಲ್ಲಿರುವ ಎರಡು ರಥಗಳನ್ನು ಪ್ರತೀ ವರ್ಷ ಆಗೋ ಜಾತ್ರೆಯ ಸಮಯದಲ್ಲಿ ಹೊರತೆಗೆಯಲಾಗುತ್ತದೆ. ಇಲ್ಲಿನ ಧ್ವಜಸ್ಥಂಭದ ಎದುರಿಗಿರುವ ಬಲಿಪೀಠದ ರಚನೆ ವಿಚಿತ್ರವೆನಿಸಿತು. ಮುಂಚೆ ಪ್ರಾಣಿಗಳ ಬಲಿ ನೀಡಿರಬಹುದಾಗಿದ್ದ ಜಾಗದಲ್ಲಿ ಈಗ ಅನ್ನದ ಬಲಿಹಾಕಲಾಗುತ್ತದೆ






ಭುವನಗಿರಿ ಭುವನೇಶ್ವರಿ ದೇಗುಲ: ಕನ್ನಡ ರಾಜ್ಯೋತ್ಸವಗಳ ಸಂದರ್ಭದಲ್ಲಿ ಭರ್ಜರಿ ಆಚರಣೆಯನ್ನು ಕಾಣೋ ಕನ್ನಡತಾಯಿ ಭುವನೇಶ್ವರಿಯ ದೇಗುಲ ಭುವನಗಿರಿಯಲ್ಲಿದೆ. ಸೌರಭನ ಮದುವೆಯ ನಂತರ ಅಲ್ಲಿಗೆ ಹೋಗಿರದಿದ್ದ ನಾನು ಅಲ್ಲಿಗೆ ಮತ್ತೆ ಹೋಗೋ ಅವಕಾಶ ದೊರಕಿದ್ದು ಅಮ್ಮನ ಕಾರಣಕ್ಕೆ. ಆ ದೇವಸ್ಥಾನವನ್ನು ನೋಡಿಲ್ಲ ಅಂತಿದ್ದ ಅಮ್ಮನಿಗೆ ಆ ದೇವಸ್ಥಾನವನ್ನು ತೋರಿಸೋಕೆ ನೆವದಲ್ಲಿ ನನಗೂ ಆ ದೇಗುಲದ ದರ್ಶನ ಭಾಗ್ಯ ಒದಗಿತ್ತು. ಸಿದ್ದಾಪುರದಿಂದ ಕುಮಟಾ ರಸ್ತೆಯಲ್ಲಿ ಸಿಗೋ ಈ ದೇಗುಲವನ್ನು ನೋಡಲು ಎರಡು ದಾರಿಗಳಿವೆ. ನಡೆದು ಬರೋದಾದ್ರೆ ಕೆಳಗಡೆ ಇರೋ ಕೆರೆಯ ಬಳಿಯಿಂದ ಇರೋ ಮೆಟ್ಟಿಲುಗಳನ್ನ ಹತ್ತಿ ಬರಬಹುದು. ಗಾಡಿಯಲ್ಲಿ ಬರೋದಾದ್ರೆ ದೇಗುಲದ ಬೋರ್ಡಿರುವ ಮಣ್ಣ ರಸ್ತೆಯಿಂದ ಬರಬಹುದು. ಯಾವುದರಲ್ಲಿ ಬಂದರೂ ದೇಗುಲದ ಎದುರಿಗಿರುವ ಮೂಷಿಕ , ಭುವನೇಶ್ವರಿಯ ವಾಹನವಾದ ಸಿಂಹ ಮತ್ತು ಧ್ವಜಸ್ಥಂಭದಲ್ಲಿರುವ ಕೆತ್ತನೆಗಳನ್ನು ನೋಡಲು ಮರೆಯದಿರಿ