Wednesday, December 14, 2016

ನೂರ್ನಳ್ಳೀಲಿ ಅವ-೫

(ಹಿಂದಿನ ಭಾಗ: ನೂರ್ನಳ್ಳಿಲಿ ಅವ -೪)
ಮೊನ್ನೆ ಬಸ್ಸಲ್ಲೊಬ್ಬ ಅಪರಿಚಿತ ಸಿಕ್ಕು ತನ್ನ ಹೆಸರಿಡಿದು ಕರೆದಾಗಿಂದ, ಅದ್ರಲ್ಲೂ ತನ್ನ ತಾಯಿ ತಿಮ್ಮವ್ವನ ಬಗ್ಗೆ ಕೇಳಿದಾಗಿನಿಂದ್ಲೂ ಡ್ರೈವರ್ ಬಸಣ್ಣನ  ಮನಸ್ಸಲ್ಲಿ ಏನೋ ಒಂತರ ಕಸಿವಿಸಿ. ಅವ ಯಾರು ? ಎಲ್ಲಿಂದ ಬಂದ ? ಇಷ್ಟು ದಿನ ಬರದೇ ಇದ್ದೋನು ಈಗ್ಲೇ ಯಾಕೆ ಬಂದ ? ಮೊನ್ನೆ ರಾತ್ರಿಯಿಂದ ಅಂಗಡಿ ಜಾಫರ್ ಸಾಹೇಬ್ರು ಕಾಣೆಯಾಗಿದ್ದಕ್ಕೂ, ನಿನ್ನೆ ಸಂಜೆಯಿಂದ ದೇವಸ್ಥಾನದ ಭಟ್ರು ಕಾಣೆಯಾಗಿದ್ದಾರೆ ಅಂತ ಊರಲ್ಲೆಲ್ಲಾ ಹೇಳ್ತಾ ಇರೋದಕ್ಕೂ ಇವನಿಗೂ ಏನಾದ್ರೂ ಸಂಬಂಧ ಇದೆಯಾ ? ಇಲ್ಲವಾ ? ಏನೂ ಗೊತ್ತಾಗ್ತಿಲ್ವಪ್ಪಾ ಅಂದ್ಕೊಳ್ಳೋ ಹೊತ್ತಿಗೇ ಭಾರೀ ಸದ್ದು. ಎದುರಿಂದ ಅವ ಓಡಿ ಬಂದಂತೆ, ನನ್ನ ಬದಿಗೆ ತಳ್ಳುತ್ತಿರುವಂತೆ..ಅದು ಅವನೇನಾ ? ..ಹೌದೇ ಹೌದು..ಆದರೆ ಯಾರೋ ಜಗ್ಗಿ ಕೆಳಕ್ಕೆಳೆದಂತೆ ತಲೆ ಭಾರವಾಗುತ್ತಿದೆ..ಕಣ್ಣೆದುರ ದೃಶ್ಯಗಳೆಲ್ಲಾ ಒಂದು ಅಗೋಚರ ಶೂನ್ಯದೊಳಗೆ  ಮರೆಯಾಗುತ್ತಿವೆ.
***

ಹಿಂದಿನೆರೆಡು ದಿನಗಳಿಂದ ಊರವರು ಹೇಳೋ ಹೊಸ ಹೊಸ ಕತೆಗಳನ್ನ ಕೇಳಿ ಹೈರಾಣಾಗಿದ್ದ ತಿಮ್ಮವ್ವನಿಗೆ ಯಾವುದನ್ನು ನಂಬಬೇಕೋ ಯಾವುದನ್ನು ಬಿಡಬೇಕೋ ಗೊತ್ತಾಗುತ್ತಿರಲಿಲ್ಲ. ಹೊಳೆ ಹತ್ರ ಹುಲಿ ಇದೆ ಅಂದ್ರೂ ಹೆದರ್ತಿರಲಿಲ್ಲವೇನೋ ಅವಳು. ಆದರೆ ಆ ಹೊಸಬನೇನಾದ್ರೂ ಹೊಳೆ ಹತ್ರ ಎದುರಾಗಿ ಬಿಟ್ರೆ ಏನು ಮಾಡ್ತೀಯ ತಿಮ್ಮವ್ವ. ಒಬ್ಬೊಬ್ಳೆ ಬಟ್ಟೆ ತೊಳ್ಯೋಕೆ ಹೋಗ್ಬೇಡ ಅಂತಿದ್ದವರ ಮಾತುಗಳು ಅವಳಿಗೆ ಒಂಚೂರು ಹೆದರಿಕೆ ಹುಟ್ಟಿಸಿದ್ದವು.ಆದ್ರೆ ಮದುವೆಯಾಗಿ ಬಂದಾಗಿಂದನೂ ಜೀವನದ ಅರ್ಧವನ್ನೇ ಕಳೆದ ಹಳ್ಳಿಯಿದು. ಇಲ್ಲೇ ನನ್ನ ಸಾವು ಬರೆದಿದ್ರೆ ಯಾರೇನು ಮಾಡೋಕಾಗಲ್ಲ ಬಿಡಿ ಅಂದ್ಕೋತಾ ತನಗೆ ತಾನೇ ಧೈರ್ಯ ತಂದ್ಕೋತಾ ಬಾವಿಹೊಳೆಯತ್ತ ಹೊರಟಿದ್ದಳು ತಿಮ್ಮವ್ವ.ಯಾರೋ ಏನೋ ಹೇಳಿದ್ದರೆ ಏನೂ ಅನ್ನಿಸುತ್ತಿರಲಿಲ್ಲವೇನೋ. ಸ್ವಂತ ಮಗ, ಪಕ್ಕದ ಮನೆ ಮರಿಯಣ್ಣಂದಿರು ಹೇಳಿದ ಮಾತು ಸ್ವಲ್ಪ ಆಶ್ಚರ್ಯವನ್ನೂ ಗಾಬರಿಯನ್ನೂ ಹುಟ್ಟಿಸಿತ್ತು. ಅದ್ಯಾರೋ ಹೊಸಬನಂತೆ. ಅವನನ್ನು ಊರಲ್ಲಿ ನೋಡೇ ಇಲ್ಲವಂತೆ. ಆದರೂ ಅವನಿಗೆ ಮರಿಯಣ್ಣ ಗೊತ್ತು,ನನ್ಮಗ ಬಸಣ್ಣ ಗೊತ್ತು, ಚಂದ್ರೇ ಮೇಷ್ಟ್ರೂ ಗೊತ್ತು. ಇಷ್ಟೆಲ್ಲಾ ಪರಿಚಯ ಇರೋನು ಯಾರಿರಬಹುದು ಅಂತ ಯೋಚ್ನೆ ಮಾಡ್ತಿರಬೇಕಾದ್ರೆ ಅವನಿಗೆ ಪೂಜಾರಿಗಳು, ಅಂಗಡಿ ಜಾಫರ್ ಗೊತ್ತಿದ್ರೂ ಇರ್ಬೋದೇನೋ ಅನಿಸ್ತು. ಆದ್ರೆ ಗೊತ್ತಿದ್ದ ಮಾತ್ರಕ್ಕೆ ಊರವರೆಲ್ಲಾ ಹೇಳ್ತಿರೋ ತರ ಅವ ಅವರಿಗೆ ಕೆಡುಕು ಬಯಸ್ತಾನೆ ಅಂತ ಯಾಕೆ ಅಂದ್ಕೋಬೇಕು ? ಕೆಡುಕು ಅಂದ ತಕ್ಷಣ ನೆನಪಾಯ್ತು. ಊರಿಗೆ ಯಾರ್ಯಾರೋ ಬರ್ತಿದ್ದಾರೆ ಈಗ. ಮೊನ್ನೆಯಷ್ಟೇ ಲಾರಿ ಮೇಲೆ ಅದೆಂತದೋ ಯಂತ್ರಾನ ಊರ ಹಿಂದಿನ ಗುಡ್ಡದತ್ತ ತಗೊಂಡು ಹೋಗೋದ್ನ ನೋಡಿದ್ದೆ.ಮಗನ ಬಸ್ಸಿಗೂ ಅಡ್ಡ ಬಂದ ಯಾರೋ ಲಾರಿ ಡ್ರೈವರನಿಗೂ ಮಗಂಗೂ ಮಾತಿಗೆ ಮಾತು ಬೆಳೆದಿತ್ತಂತೆ. ಆತ ನೂರ್ನಳ್ಳಿಯವನಲ್ವಾ ? ನೊಡ್ಕೋತೀನಿ ಅಂತ ಬೇರೆ ಅಂದಿದ್ನಂತೆ . ನಾ ನೋಡಿದ ಲಾರಿಯವನಾ ಮಗನಿಗೆ ಸಿಕ್ಕ ಲಾರಿಯವನು ? ಮಗನತ್ರ ಗುಡ್ಡದ ವಿಷ್ಯ ಮಾತಾಡ್ಬೇಕು ಅಂತ ಅದೆಷ್ಟು ಸಲ ಅಂದ್ಕೊಂಡ್ರೂ ಮರ್ತೇ ಹೋಗತ್ತೆ. ಅದಕ್ಕೂ ಈ ಹೊಸ ಮನುಷ್ಯಂಗೂ ಏನಾದ್ರೂ ಸಂಬಂಧ ಇದ್ಯಾ ? ಅವ ಭೇಟಿ ಮಾಡಿದವರೆಲ್ಲಾ ಮಾಯ ಆಗ್ತಾ ಇದ್ದಾರೆ ಅಂದ್ರೆ ನನ್ನ ಮಗನಿಗೂ ಏನಾದ್ರೂ ಅಪಾಯ... ಛೇ ಛೇ. ಹಂಗೆಲ್ಲಾ ಏನೂ ಆಗೋಲ್ವೇನೋ. ವಯಸ್ಸಾದ ಮನಸ್ಸು ಯಾವಾಗ್ಲೂ ಬೇಡದ್ದೇ ಯೋಚಿಸ್ತಿರತ್ತೆ. ಏನೇ ಆಗ್ಲಿ ನನ್ನ ಮಗನಿಗೆ ಇದ್ರ ಬಗ್ಗೆ ಆದಷ್ಟು ಬಗ್ಗೆ ಎಚ್ಚರಿಸಬೇಕು ಅಂತ ತಂದ ಬಟ್ಟೆಗಳನ್ನೆಲ್ಲ ಗಡಿಬಿಡೀಲಿ ತೊಳೆದು ಮನೆಯತ್ತ ದಾಪುಗಾಲಿಕ್ಕಿದಳು.
***

ನೀರ್ನಳ್ಳಿ, ನೂರ್ನಳ್ಳಿಗಳ ಮಧ್ಯೆ ಹರಿಯೋ ಬಾವಿಹೊಳೆ ಎರಡೂ ಹಳ್ಳಿಗಳ ಜೀವನಾಡಿ. ನೂರ್ನಳ್ಳಿಯ ಹಸಿರಸಿರಿಗೆ ಮುಕುಟಪ್ರಾಯವಾಗಿದ್ದ ನೂರ್ಮನೆಗುಡ್ಡದ ನಂಬೋಶಿಖರವೇ ಬಾವಿಹೊಳೆಯ ಉಗಮಸ್ಥಾನ. ಪರಶಿವನ ಜಟೆಗಳಿಂದ ಧುಮುಕೋ ಗಂಗೆ ಭುವಿಗೆ ಹರಿದು ಸಗರರಿಗೆ ಮೋಕ್ಷವಿತ್ತಂತೆ ನಂಬೋಶಿಖರದಿಂದ ನೂರ್ನಳ್ಳಿ, ನೀರ್ನಳ್ಳಿಗಳಂತಹ ನೂರಾರು ಹಳ್ಳಿಗಳ ಉದ್ದಾರಕ್ಕಾಗೇ ಬಾವಿಹೊಳೆಯಾಗಿ ದೇವಿಯೊಬ್ಬಳು ಅವತರಿಸಿದ್ದಾಳೆ ಎಂಬುದು ಇಲ್ಲಿನ ಜನರ ನಂಬಿಕೆ. ವರ್ಷಕ್ಕೊಮ್ಮೆ ನಡೆಯೋ ಜಾತ್ರೆಯಿರಬಹುದು, ಉಕ್ಕಿ ಹರಿದಾಗ ಪಡೆಯೋ ಬಾಗಿನಗಳಿರಬಹುದು. ಮದುವೆ ಮುಂಜಿಗಳ ಸಂತಸದಿಂದ ಸತ್ತವರ ತರ್ಪಣದವರೆಗೆ ಎಲ್ಲರಿಗೂ ಬೇಕಾಗೋ ಬಾವಿಹೊಳೆಯಿಲ್ಲದ ಬದುಕಿಲ್ಲವಿಲ್ಲಿ. ಹೊಳೆ ಹರಿದ ಕಣಿವೆಗಳಾಚೆಯೇ ಬೆಳೆದ ಅಡಿಕೆ ತೋಟಗಳಾಗಿರಬಹುದು, ನದಿಯನ್ನೇ ನಂಬಿರೋ ಭತ್ತ, ಕಬ್ಬುಗಳಾಗಿರಬಹುದು. ಬೇಸಿಗೆಯಲ್ಲೂ ಬತ್ತದ ಬಾವಿಹೊಳೆಯ ನಂಬಿ ಬದುಕು ಕಟ್ಟಿಕೊಂಡ ಜೀವಗಳೆಷ್ಟೋ.ಅಕಸ್ಮಾತ್ ಆಗಿ ಬಾವಿಹೊಳೆಗೇನಾದರೂ ಆಗಿ ಅದು ಬತ್ತಿತೆಂದರೆ ? .. ಶಾಂತಂ ಪಾಪಂ.. ಊರವರು ಕನಸಿನಲ್ಲೂ ಆಲೋಚಿಸೋಕಾಗದ ಘಟನೆಯದು. ಅಕಸ್ಮಾತ್ ಹಾಗೇನಾದ್ರೂ ಆಯ್ತು ಅಂದ್ರೆ ಏನ್ಮಾಡೋದು ಅನ್ನೋ ಆಲೋಚನೆ ಊರೊಳಿಗನವರಿಗೆ ಬಾರದಿದ್ದರೂ ನದಿಯ ದಂಡೆಯಲ್ಲೇ ಕೂತು ಆಲೋಚಿಸುತ್ತಿದ್ದ ಅವನ ಮುಖಭಾವದಲ್ಲಿ ವ್ಯಕ್ತವಾಗುತ್ತಿತ್ತು. ದೇವಸ್ಥಾನದ ಅಭಿಶೇಷಕ್ಕೆ, ಪಂಚಾಯ್ತಿ ಅನುದಾನಕ್ಕೆ ಅಂತ ಊರಲ್ಲೊಂದೆರೆಡು ಬಾವಿಗಳಿದ್ದರೂ ಊರ ಜೀವನಾಡಿ ಬಾವಿಹೊಳೆಯೇ. ಅಂತಿಪ್ಪ ಬಾವಿಹೊಳೆ ಬತ್ತಿದರೆ ಬಿದ್ದು ಸಾಯೋಕೆ ಅಂದರೂ ಊರಲ್ಯಾವುದೂ ಕೆರೆಯಿಲ್ಲ. ಬಾವಿಗೂ ಪಕ್ಕದೂರಿಗೆ ಹೋಗಬೇಕಾಗುತ್ತೆ ಅನ್ನೋ ಆಲೋಚನೆ ಸುಳಿದು ಅವನ ಮುಖದ ಚಿಂತೆಯಲ್ಲೂ ಒಮ್ಮೆ ನಗುವರಳಿತು. ಭೂಗರ್ಭವಗೆಯೋ ಜೇಸಿಬಿ, ಲಾರಿಗಳು ಪಟ್ಟಣದ ಎಂತೆಂತಾ ಕೆರೆಗಳನ್ನೇ ಬಸ್ಟಾಂಡೋ, ಕ್ರೀಡಾಂಗಣವನ್ನೋ ಆಗಿಸಿರುವಾಗ ಈ ಊರ ಬಾವಿಹೊಳೆಯೋ, ನಂಬೋಶಿಖರವೋ ಯಾವ ಲೆಕ್ಕ. ಏನೋ ಒಂದಿಷ್ಟು ಅದಿರು ಸಿಗುತ್ತೆ ಅಂದ್ರೆ ಸಿಕ್ಕವರಿಗೆಲ್ಲಾ ಒಂದಿಷ್ಟು ಗಿರ್ಮಿಟ್ ತಿನ್ಸಿ ಪರ್ಮಿಟ್ ಗಿಟ್ಸಿ ಹಸಿರಕಾಡನ್ನ ಬರಗಾಡನ್ನಾಗಿ ಮಾಡೋದು ದೊಡ್ಡ ವಿಷ್ಯವಲ್ಲ ಕೆಲೋರಿಗೆ. ಅಂತವರ ಕಣ್ಣು ನೂರ್ನಳ್ಳಿಯ ಮೇಲೆ ಬಿದ್ದಿದ್ದು ಎಲ್ಲೋ ಇದ್ದ ಇವನನ್ನ ಇತ್ತ ಹೊರಳಿಸಿತ್ತು. ಆಲೋಚನಾ ಲಹರಿಯಲ್ಲಿ ಇವ ಕಳೆದುಹೋಗಿದ್ದಾಗಲೇ ಪಡುವಣದತ್ತ ಹೊರಡುತ್ತಿದ್ದ ರವಿಯಿಂದ ಆಗಸವೆಲ್ಲಾ ಕೆಂಪಾಗುತ್ತಿದ್ದಂತೆ ಬಾವಿಹೊಳೆಯ ಬಣ್ಣವೂ ಬದಲಾಗುತ್ತಿತ್ತು. ಕೊನೆಗೂ ಎದ್ದು ತನ್ನ ಮುಂದಿನ ಕಾರ್ಯಗಳ ಬಗ್ಗೆ ಆಲೋಚಿಸುತ್ತಾ ಹೊರಟಿದ್ದವನಿಗೆ ಬಸಣ್ಣ ಅನಿರೀಕ್ಷಿತವಾಗಿ ಎದುರಾಗಿದ್ದ.
***

ಊರದೇವಸ್ಥಾನದ ಎದುರಿನ ಅರಳಿ ಕಟ್ಟೆಗೆ ಎಷ್ಟೋ ದಿನಗಳಾದ ಮೇಲೆ ಇವತ್ತು ಕಳೆ ಬಂದಿತ್ತು. ಊರ ಪಂಚರಾದ ಗೌಡ್ರು, ಚಂದ್ರೇ ಮೇಷ್ಟು ಡ್ರೈವರ್ ಬಸಣ್ಣನ ಬರುವಿಕೆಯನ್ನ ಕಾಯ್ತಾ ಅತ್ತಿಂದಿತ್ತ ತಿರುಗ್ತಾ ಇದ್ರೆ ಎದುರಿಗೆ ಕೂತಿದ್ದ ಎಲ್ಲಾ ಜನಗಳ ನೋಟ ಇವರ ಮೇಲಿತ್ತು. ಪಂಚರಲ್ಲಿ ಇಬ್ಬರಾದ ಅಂಗಡಿ ಜಾಫರ್ ಸಾಹೇಬ್ರು, ದೇವಸ್ಥಾನದ ಪೂಜಾರಿಗಳು ಕಾಣೆಯಾಗಿದ್ರು. ಊರಿನ ಪ್ರಮುಖರೆಲ್ಲಾ ಕಾಣೆಯಾಗ್ತಿದ್ದಾರೆ ಅನ್ನೋ ಸುದ್ದಿ ಬರ್ತಿರುವಾಗ ಈಗ ಬಸಣ್ಣನೂ ಮಾಯವಾಗಿದ್ದಾನೆ. ಅವ್ನಿಗೆ ಏನಾಯ್ತೋ ಏನೋ ? ಮುಂದಿನ ಸರದಿ ನಮ್ಮದೇ ಮೇಷ್ಟೇ ಅಂತ ಗೌಡ್ರು ಗಾಬರಿಯಿಂದ ಹೇಳ್ತಾ ಇದ್ರೆ ಅವರನ್ನು ಸಮಾಧಾನಿಸೋ ಸರದಿ ವಯೋವೃದ್ಧರಾದ ಚಂದ್ರೇ ಮೇಷ್ಟ್ರದ್ದು. ಹಂಗೆಲ್ಲ ಏನಿಲ್ಲ ಗೌಡ್ರೆ. ಬಂದಿರೋನು ಯಾರೋ ಏನೋ ಗೊತ್ತಿಲ್ಲ. ಜಾಫರ್ ಸಾಹೇಬ್ರು, ಅರ್ಚಕರು ಬೇರೆ ಬೇರೆ ಕೆಲಸಗಳಿಗಾಗಿ ಎಲ್ಲೋ ಹೋಗಿರಬಹುದು. ಇವತ್ತು ನಾಳೆ ಹಂಗೆ ಬರ್ಬೋದು. ಆ ವಿಷ್ಯ ಚರ್ಚಿಸೋಕೆ ಅಂತಲೇ ಇವತ್ತು ಸಭೆ ಸೇರಿದ್ದೀವಲ್ಲ.  ಮಾತಾಡಿದ್ರಾಯ್ತು ಬಿಡಿ. ಗಾಬರಿಯಾಗ್ಬೇಡಿ ಅಂದ್ರು . ಆದ್ರೆ ಈ ಬಸಣ್ಣ .. ಅಂತಿರುವಾಗ , ಬಸಣ್ಣ ಯಾವತ್ತೂ ಸಭೆಗೆ ಲೇಟಾಗಿ ಬಂದವನಲ್ಲ. ಇವತ್ತು ಯಾಕಿನ್ನೂ ಬಂದಿಲ್ಲ ಅಂತ ಅವನ ಮನೆಗೆ ಒಬ್ಬನ್ನ ಕಳಿಸಿದೀವಲ್ಲ. ಅವ್ನೂ ಬರೋ ಹೊತ್ತಾಯ್ತಲ್ಲ. ತಡೀರಿ ಅನ್ನೋ ಹೊತ್ತಿಗೆ ಒಬ್ಬ ಓಡೋಡ್ತಾ ಬಂದ.. ಬಸಣ್ಣ ಮನೇಲಿಲ್ಲ ಅಂತ ಏದುಸಿರು ಬಿಡ್ತಾ ಹೇಳ್ತಿರುವಾಗ ತಿಮ್ಮವ್ವ ? ಅಂದ್ರು ಗುಂಪಲ್ಲಿದ್ದ ಕೆಲೋ ಹೆಂಗಸ್ರು ಗಾಬರಿಯಿಂದ. ತಡೀರಿ ಹೇಳ್ತೀನಿ ಅನ್ನುವಂತೆ ಸಂಜ್ಞೆ ಮಾಡುತ್ತಾ ಅವಳೂ ಇಲ್ಲ ಮನೇಲಿ. ಮನೆಗೆ ಬೀಗ ಹಾಕಿದೆ ಅಂತ ಅವ ಹೇಳ್ತಿರುವಂತೆ ಅಲ್ಲಿದ್ದೋರ ಕಣ್ಣು ಬಾಯಿಗಳೆಲ್ಲಾ ಅಚ್ಚರಿ, ಗಾಬರಿಗಳಿಂದ ತೆರೆದುಕೊಂಡವು. ಎಲ್ಲಿಂದ್ಲೋ ಬಂದವನೊಬ್ಬ ನಮ್ಮೂರಲ್ಲಿರೋರ್ನೆಲ್ಲಾ ನುಂಗಕ್ಕತ್ಯಾನ್ರೋ ಅಂದ ಒಬ್ಬ. ಇಷ್ಟು ದಿನ ಊರ ಪಂಚರನ್ನ ನುಂಗ್ತಿದ್ದ. ಇವತ್ತು ತಿಮ್ಮವ್ವನ್ನೂ ನುಂಗಿದಾನೆ. ಏನ್ಮಾಡಿದ್ಲವ್ವ ತಿಮ್ಮವ್ವ. ಯಾರಿಗೂ ಒಂದ್ಮಾತು ಬಯ್ಯೋಳಲ್ಲ ಅವಳು. ಅಂತಾ ತಿಮ್ಮವ್ವನ್ನ .. ಅಂತ ಒಬ್ಬರು ಕಣ್ಣಂಚಲ್ಲಿ ಜಾರುತ್ತಿದ್ದ ಕಣ್ಣೀರೊರೆಸಿಕೊಳ್ಳುತ್ತಾ ಹೇಳೋ ಹೊತ್ತಿಗೆ ಗುಂಪಲ್ಲಿದ್ದವರಿಂದ ತಲೆಗೊಂದು ಮಾತುಗಳು ಕೇಳಿಬರತೊಡಗಿದವು. ಗೊತ್ತಿಲ್ಲದೇ ಇರೋನ್ಯಾರೋ ಇದ್ನೆಲ್ಲಾ ಮಾಡ್ತಿದ್ದಾನೆ ಅಂತ ಹೆಂಗೆಳ್ತೀರ ? ಏನಾದ್ರೂ ಮಾಡೋದೆ ಆಗಿದ್ರೆ ಅವ್ರ ಮನೆಗೆ ಬೀಗ ಹಾಕಿಸಿ ಅವ್ರನ್ನ ನಾಪತ್ತೆ ಮಾಡಿಸ್ತಿದ್ನ . ಬೇರೇನೋ ಇದೆ ವಿಷ್ಯ ಇಲ್ಲಿ ಅಂದ ಒಬ್ಬ. ಪಂಚರು ನಮಗೆ ಗೊತ್ತಿಲ್ಲದಂಗೆ ಏನೋ ಮಾಡ್ತಿರಬೇಕು. ಅದಕ್ಕೇ ಅವರೆಲ್ಲಾ ಮಾಯವಾಗ್ತಿದ್ದಾರೆ ಅಂದ ಇನ್ನೊಬ್ಬ.ಅದಕ್ಕೆ ಉತ್ತರ ಕೊಡೋಕೆ ಅಂತ ಮಗದೊಬ್ಬ ಎದ್ದ. ಬಂದವನ ಪರ ವಿರೋಧಗಳಿಗೆ, ತಟಸ್ಥವಾಗಿ ಅಂತ ಗುಂಪೊಳಗೇ ಮತ್ತೊಂದಿಷ್ಟು ಗುಂಪುಗಳು ಶುರುವಾಗಿ ಗುಂಪುಗಲಾಟೆಗಳು ನಡೆಯೋ ಪರಿಸ್ಥಿತಿ ಬಂದಾಗ ಅವ್ರನ್ನೆಲ್ಲಾ ಸುಮ್ಮನಾಗಿಸೋಕೆ ಗೌಡ್ರಿಗೆ ಮತ್ತು ಮೇಷ್ಟ್ರಿಗೆ ಸಾಕಾಗಿ ಹೋಯ್ತು. ಮೇಷ್ಟ್ರು ಮಾತಾಡೋಕೆ ಶುರು ಮಾಡಿದ್ರು. ನೋಡ್ರಪ್ಪಾ . ಹಿಂಗೆಲ್ಲಾ ಗಲಾಟೆ ಮಾಡಿ ಪ್ರಯೋಜನ ಇಲ್ಲ. ಈಗ ಊರಿಗೆ ಹೊಸದಾಗಿ ಬಂದವನೇ ಈಗ ಊರಲ್ಲಿರೋರು ಒಬ್ಬಬ್ಬರಾಗಿ ಕಾಣೆಯಾಗೋಕೆ ಕಾರಣ ಅನ್ನೋದು ನಿಮ್ಮಲ್ಲಿ ಕೆಲವರ ಗುಮಾನಿ ತಾನೆ ಅಂದ್ರು ? ಕೆಲವರು ಹೂಂ ಅಂದ್ರು ಕೆಲವರು ಇಲ್ಲಾ ಅಂದ್ರು. ಇನ್ನುಳಿದವರು ಮೇಷ್ಟ್ರು ಮುಂದೆ ಏನು ಹೇಳಬಹುದು ಅಂತ ತೆಪ್ಪಗೆ ಕೇಳ್ತಾ ಇದ್ರು. ಬಂದವ ಯಾರು , ಏನು , ಎತ್ತ ಅನ್ನೋದ್ರ ಬಗ್ಗೆ ನಾನೂ ಬೆಳಗ್ಗಿಂದ ಮಾಹಿತಿ ಸಂಗ್ರಹಿಸೋಕೆ ಪ್ರಯತ್ನ ಮಾಡ್ತಾ ಇದ್ದೀನಿ. ಅವ ಕೊಲೆಗಾರನೇ ಆಗಿದ್ರೆ ಆತ ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಬಲಿ ತೆಗೆದುಕೊಳ್ಳೋಕೆ ಮೊದಲು ಊರವರೇ ಒಟ್ಟಾಗಿ ಆತ ಎಲ್ಲಿರುತ್ತಾನೆ, ಏನು ಮಾಡುತ್ತಾನೆ, ಆತ ಊರಿಗೆ ಬಂದ ಉದ್ದೇಶವೇನು ಎಂಬುದನ್ನ ಪತ್ತೆ ಹಚ್ಚಬೇಕು.  ಆತ ಒಳ್ಳೆ ಉದ್ದೇಶಕ್ಕಾಗಿ ಬಂದಿದ್ರೂ ಆತ ಈಗ ಎಲ್ಲಿದ್ದಾನೆ ಅನ್ನೋದು ಕಂಡು ಹಿಡಿದು ಆತನನ್ನ ಊರೆದುರು ಮಾತಿಗೆ ಕರೆಯೋ ತನಕ ಆತನ ಉದ್ದೇಶ ಗೊತ್ತಾಗೊಲ್ಲ. ಹಾಗಾಗಿ ಅವನನ್ನು ಹುಡುಕೋದೇ ನಮ್ಮ ಮುಂದಿನ ಗುರಿ ಸರೀನಾ ಎಂದ್ರು ? ಸಭೆ ಒಕ್ಕೊರಲಿನಿಂದ ಮೇಷ್ಟ್ರ ಮಾತಿಗೆ ಒಪ್ಪಿಗೆ ಸೂಚಿಸಿತು..ಮೇಷ್ಟ್ರು ಮಾತು ಮುಂದುವರಿಸಿದ್ರು..


***
ಅಂತೂ ಬಸಣ್ಣನಿಗೆ ಎಚ್ಚರಾದಾಗ ತಲೆಯೆಲ್ಲಾ ಭಾರವಾದ ಅನುಭವ. ಕಷ್ಟಪಟ್ಟು ಕಣ್ಣು ತೆರೆದ್ರೆ ಎದುರಿಗೆ ತಾಯಿ ತಿಮ್ಮವ್ವ ಅಳುತ್ತಾ ಕುಳಿತಿರೋ ತರ. ತಲೆ ಮುಟ್ಟಿ ನೋಡಿಕೊಂಡ್ರೆ ಏನೋ ಬ್ಯಾಂಡೇಜು ಸುತ್ತಿರುವಂತಿದೆ. ಅರೇ ನಾನೆಲ್ಲಿದ್ದೀನಿ ಅಂತ ಸುತ್ತಮುತ್ತ ನೋಡ್ತಾ ಏಳೋಕೆ ಪ್ರಯತ್ನ ಮಾಡ್ತಿರುವಾಗ "ಏ ಬಸ್ಭಾಯಿ ಕೋ ಹೋಷ್ ಆಗಯ" ಅನ್ನೋ ಧ್ವನಿ ಕೇಳಿಸ್ತು. ಇದು ಜಾಫರ್ ಸಾಹೇಬ್ರ ದ್ವನಿಯಲ್ವಾ ಅಂತ ತಿರುಗೋ ಹೊತ್ತಿಗೆ "ಏ ಬಸಣ್ಣ. ಹಾಗೇ ಮಲ್ಕೊ ಸ್ವಲ್ಪ ಹೊತ್ತು. ಏಳೋ ಪ್ರಯತ್ನವೆಲ್ಲಾ ಮಾಡ್ಬೇಡ" ಅಂತ ಹೇಳ್ತಾ ಊರ ಪೂಜಾರಿಗಳು ಎದ್ರಿಗೇ ಬಂದ್ರು
(ಮುಂದುವರೆಯುತ್ತದೆ)

Wednesday, November 30, 2016

ಸಲಿಲಕ್ಕೊಂದು ಸಾಲು

ಕಪಿಲ ಮುನಿಯ ಶಾಪದಿಂದ ದಹಿಸಿದಂತ ಸಗರರನ್ನು
ಉದ್ದರಿಸಲು ಬೇಕಾದಳು ದೇವನದಿ ಮಂದಾಕಿನಿ
ಭಗೀರಥನ ಛಲಕೆ ಮೆಚ್ಚಿ ಧರೆಗೆ ಧುಮುಕೊ ಗಂಗೆಯನ್ನು
ಕೊಚ್ಚದಂತೆ ತಡೆಯಲಂದು ಮುಂದೆ ಬಂದ ಫಾಲಾಕ್ಷನೆ|1
 
ತ್ರಿನೇತ್ರನ ಜಟೆಗಳಿಂದ ಧುಮ್ಮಿಕ್ಕಿದ ತಾಯೆ
ಜಹ್ನು ಮುನಿಯ ಕಿವಿಗಳಿಂದ ಹೊರಹೊಮ್ಮಿದ ಮಾಯೆ
ಯಮುನೆ, ಕೋಸಿ, ಗೋಮ್ತಿಯಾಗಿ
ಗಂಡಕಿ, ಗಂಗಾರೆಯಾಗಿ
ಮೋಕ್ಷವೀಯೋ ಕಾಶಿಯಾಗಿ
ಧಾಮ ವಾರಣಾಸಿಯಾಗಿ
ಹರಪ್ಪಾ-ಮೊಹೆಂಜೊದಾರೋ ಬೆಳೆಸಿ ನಿಂತ ತಾಯೆ
ಭರತಖಂಡ ಬೆಳೆಯಲೆಂದು ಹರಸುತ್ತಿಹ ತಾಯೆ|2

ಹರಸೆಲೆಮ್ಮ ವರದೆಯಾದೆ
ಕುಡಿಯಲೆಂದೆ ತುಂಗೆಯಾದೆ
ಬೆಳಕೀಯಲು ಶರಾವತಿ, ಭತ್ತಕೆಂದು ಗಂಗಾವತಿ
ಅರ್ಕಾವತಿ,ನೇತ್ರಾವತಿ,ವೇದಾವತಿ, ಹೇಮಾವತಿ,
ಭದ್ರೆ,ಕೃಷ್ಣೆ, ಕಾವೇರಿಯು
ಮಲಪ್ರಭಾ, ಕಾಳಿ ನೀನು
ಮಹದಾಯಿಯ ಮಡಿಲಿನಲ್ಲಿ, ಮಲಪ್ರಭೆಯ ನೆನಪಿನಲ್ಲಿ
ಅಸಂಖ್ಯಾತ ಕೊಳ್ಳದಲ್ಲಿ, ಹೆಸರಿಲ್ಲದ ಹಳ್ಳದಲ್ಲಿ
ಹರಿಯುತಿರುವ ಜೀವ ತೊರೆಯೆ, ಜೀವಸೆಲೆಯೆ ತಾಯೆ|3

ಬರ ಬಂದಿದೆ ನಾಡಿಗಿಂದು, ನಿನಗೆಂದೇ ಜಗಳವಿಂದು
ಒಣಗುತ್ತಿವೆ ನೀರಿಲ್ಲದೆ ಎಲ್ಲೆಡೆಯೂ ಫಸಲು
ಬತ್ತುತಿರುವ ಹೊಳೆಗಳೆಲ್ಲ, ಒಣಗುತಿರುವ ಕೆರೆಗಳೆಲ್ಲ
ತುಂಬಿ ಉಕ್ಕಿ ಹರಿದರೇನೆ ನಮಗೆ ಹರಷದೊನಲು|4


ಕೊರಗುತಿಹುದು ಬಾಗೀನವು ಒಣಗಿದೆಲ್ಲ ನದಿಯ ಕಂಡು
ಮೀನಿಲ್ಲದೆ, ನೀರಿಲ್ಲದೆ ಸಾಯುತಿಹುದು ಖಗದ ಹಿಂಡು
ಜಲಾಶಯವೆ ನೀರಿಲ್ಲದೆ ಬತ್ತಾಗಿದೆ ಕ್ರೀಡಾಂಗಣ
ನೀರಿಲ್ಲದೆ ಸತ್ತು ಪ್ರಾಣಿ, ಕಾಡೆಲ್ಲವೂ ಬಣ ಬಣ|5

ಬರವೆಂಬುವ ಕೊಡಲಿಯಿಂದ ಕೊಲ್ಲದಿರೇ ತಾಯೇ
ನಮ್ಮಿಂದಲೇ ಜಗವು ಎಂಬ ಭ್ರಾಂತಿ ಪೊರೆಯ ಹರಿಯೆ
ಕೋಪ ಮರೆತು, ಕರುಣೆ ತೋರೆ, ಜೀವವೀಯೊ ತಾಯೆ
ನೀನೇ ನಮಗೆಲ್ಲಾ ಇಂದು. ತುಂಬಿ ಹರಿಯೆ ತೊರೆಯೇ|6
ತುಂಬಿ ಹರಿವ ಕೊಳ್ಳಕಿಂದು ಬಾಗೀನದ ಸ್ಪರ್ಷ
ಒಳ್ಳೆ ಬೆಳೆಯು ಕೈಗೆ ಬಂದು ಬೆಳೆದವನಿಗೆ ಹರ್ಷ
ಹೀಗೇ ಇರಲಿ ಎಂದೆದಿಗೂ ತಾಯೆ ನಿನ್ನ ಕರುಣೆ
ನಮ್ಮಿಂದಿಗೆ, ನಾಳೆಗಳಿಗೆ ಬಾರದಿರಲಿ ಬವಣೆ |7


ಈ ಕವನವನ್ನು ನವೆಂಬರ್ ೨೬ರಂದು ನಡೆದ 3k ರಾಜ್ಯೋತ್ಸವ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಾಚಿಸಲ್ಪಟ್ಟಿದ್ದು, ಅಭಿನಂದನಾ ಪತ್ರವನ್ನು ಪಡೆದಿದೆ

Sunday, November 27, 2016

3k ರಾಜ್ಯೋತ್ಸವ ಸಂಭ್ರಮ

ನವೆಂಬರ್ ಒಂದಕ್ಕೆ ನಮ್ಮೂರಲ್ಲೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಸಿಕ್ಕಿತ್ತು. ಹತ್ತಕ್ಕೆ ಆಫೀಸಲ್ಲೇ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅನಿರೀಕ್ಷಿತವಾಗಿ ನಿರೂಪಕನಾಗೋ ಭಾಗ್ಯವೂ ಸಿಕ್ಕಿತ್ತು. ನನ್ನ ಭಾವಯ್ಯನ ಹುಟ್ಟಿದಬ್ಬದ ದಿನದ ಸಂಭ್ರಮದಲ್ಲಿ, ಮುಂಬಯಿಯಲ್ಲಿ ಹುತಾತ್ಮರಾದವರ ನೆನಪು ಕಣ್ಣಂಚಿನ ನೀರಾಗೋ  ಹೊತ್ತಲ್ಲಿ 3k ಯ ಕಾರ್ಯಕ್ರಮ ಅವತ್ತು ಮಧ್ಯಾಹ್ನವೇ ಇರುವ ನೆನಪಾಗಿತ್ತು. ಅದಕ್ಕೆ ಸರಿಯಾಗಿ  ೧೬ ದಿನ ಮುಂಚೆ 3k ಯ ಕವನ ಸ್ಪರ್ಧೆಗೆ ಕವನ ಕಳಿಸಿದ್ದೂ ನೆನಪಾಗಿತ್ತು. ಎರಡು ದಿನ ಮುಂಚೆಯೇ 3k ಯ ನವೀನ್ ಅವರು ಫೋನ್ ಮಾಡಿ ಅವತ್ತು ಕವಿಗೋಷ್ಠಿಯೂ ಇರುವ ಬಗ್ಗೆ, ಅದಕ್ಕೆ ಬಂದು ಕವನವಾಚನದಲ್ಲಿ ಪಾಲ್ಗೊಳ್ಳಬೇಕೆಂದು 3k ಯ ಪರವಾಗಿ ಆಹ್ವಾನವಿತ್ತಿದ್ದೂ ನೆನಪಾಗಿ ನಾಗರಭಾವಿಯ ಭೈರವೇಶ್ವರ ಸಂದ್ರದ ಬಳಿಯಿರುವ ಬ್ಲಾಸಂ ಶಾಲೆಯತ್ತ ಹೊರಟು ನಿಂತೆ. ಮಧ್ಯಾಹ್ನ ೧:೩೦ ಕ್ಕೆ ಹೊರಟವನಿಗೆ ಶ್ರೀಕಾಂತಣ್ಣನೂ ಸಿಕ್ಕು ಬ್ಲಾಸಂ ಶಾಲೆ ತಲುಪೋ ಹೊತ್ತಿಗೆ ನಾಲ್ಕೂ ಕಾಲು.

ಕವಿ ಗೋಷ್ಠಿ:

ನಮ್ಮದ್ರುಷ್ಟಕ್ಕೆ ಅವತ್ತಿನ ಕಾರ್ಯಕ್ರಮವೂ ಲೇಟಾಗಿ ಮೊದಲ ಮೂವರ ಕಾವ್ಯವಾಚನ ಮುಗಿದು ನಾಲ್ಕನೇಯವರ ನೀಳ್ಗವನ ವಾಚನ ನಡೆಯುತ್ತಿತ್ತು . ಹೋಗಿ ಮಹೇಶ್ ಗೌಡ, ಗೋರವಿ ಮುಂತಾದವರ ಜೊತೆ ಹಾಯೆನ್ನೋ ಹೊತ್ತಿಗೆ, ಇವರು ಈಗ ಕವನ ಓದ್ತಾ ಇದ್ದಾರೆ ಅಂತ ನನ್ನೆಸರೇ ಕರೆದು ಬಿಡಬೇಕಾ ? ! ಇದೇನಪ್ಪಾ ಅಂದ್ಕೊಳ್ಳೋ ಹೊತ್ತಿಗೆ ಐದನೇಯವ ನಾನೇ ಅಲ್ವಾ ಅಂತ ನೆನಪಾಯ್ತು ! ಸರಿ ಅಂತ ಮೊಬೈಲಲ್ಲಿದ್ದ ಕವನ ಮೇಲೆ ತಂದು ಕೊಳ್ತಾ ವೇದಿಕೆಯತ್ತ ಹೆಜ್ಜೆ ಹಾಕೋ ಹೊತ್ತಿಗೆ ಸತೀಶ ಬಂದು ಹಾರ್ಡ್ ಕಾಪಿ ಕೊಡ್ತಾರೆ ತಡಿ ಅಂದ. ವೇದಿಕೆಯ ಬಳಿಯೇ ಇದ್ದ ರೂಪಕ್ಕ ಇದೇ ಅಲ್ವಾ ನಿಮ್ಮ ಕವನ ಅಂತ ತಮ್ಮತ್ರ ಇದ್ದ ಪ್ರಿಂಟೌಟ್ ಕೊಟ್ಟಿದ್ದು ಐನೂರು ರೂಪಾಯಿ ನೋಟವನಿಗೆ ಚೇಂಜ್ ಕೊಟ್ಟಂಗಾಗಿತ್ತು :-) ಪ್ರಶಸ್ತಿ ಅವರು ಬರ್ತಾರೆ ಅಂದಾಗ ಇದೇನು ಕಾವ್ಯ ನಾಮನಾ , ಉಪಮೆನಾ ಅಂತ ಗೊಂದಲದಲ್ಲಿ ಕೂತಿದ್ದ ಹಲವು ಮುಖಗಳು ನನ್ನತ್ತನೇ ನೋಡ್ತಿದ್ದವು. ವೇದಿಕೆಯ ಮೇಲಿದ್ದ ಶ್ರೀ ಮಣಿಕಾಂತ್ , ಶ್ರೀ ಮಂಜುನಾಥ್ ಕೊಳ್ಳೇಗಾಲ ಅವರು ಮತ್ತು ಶ್ರೀ ಅಶೋಕ್ ಅವರು ಕೂತಿರುವಾಗ ನಾನೇನಪ್ಪ ಓದೋದು ಅನ್ನೋ ಅಳುಕು ಬೇರೆ. ಬ್ಲಾಗಲ್ಲಿ, ಫೇಸ್ಬುಕ್ಕಲ್ಲಿ ಬರೆಯೋದು ಬೇರೆ, ಮೈಕ್ ಕೊಟ್ಟು ಕವನ ಓದು ಅನ್ನೋದು ಬೇರೆ. ಮಾತಾಡು ಅಂದ್ರೆ ಏನಾದ್ರೂ ಒಂದು ಮಾತಾಡ್ಬಹುದು. ಬರೆದಿರೋ ಕತೆಯನ್ನೋ, ಕವನವನ್ನೋ ಓದು ಅಂದ್ರೆ ಅದೆಷ್ಟು ಕಷ್ಟ ಅಂತ ಮೈಕ್ ಹಿಡಿದಾಗ್ಲೇ ಗೊತ್ತಾಗಿದ್ದು. ವೇದಿಕೆ ಅಂತ ಹತ್ತಿ ಕತೆಯನ್ನೋ ಕವನವನ್ನೋ ಓದದೇ ವರ್ಷಗಳಾಗಿದ್ದರೂ ಎಲ್ರಿಗೂ ಒಮ್ಮೆ ನಮಸ್ಕರಿಸಿ, ನನ್ನೆಸ್ರೇ ಪ್ರಶ್ರಸ್ತಿ ಅಂದಾಗ ಎಲ್ಲೆಡೆ ಒಮ್ಮೆ ನಗೆಯ ಅಲೆ. ಆಗ ವಾತಾವರಣವೂ ಸ್ವಲ್ಪ ಲೈಟಾದ ಭಾವವುಂಟಾಗಿ ನನ್ನ ಕವನ "ಸಲಿಲಕ್ಕೊಂದು ಸಾಲು" ಓದೋಕೆ ಪ್ರಾರಂಭಿಸಿದೆ. ಬರೆದಿದ್ದ ಕವನದ ಏಳು ಪ್ಯಾರಾಗಳನ್ನ ಇನ್ನೊಂದಿಷ್ಟು ಚೆನ್ನಾಗಿ ಬರೆಯಬಹುದಿತ್ತು ಅಂತ ಬೆಳಗ್ಗೆ ಅನಿಸಿದ್ರೂ ಕವನಕ್ಕೆ ಆಮೇಲೆ ಸಿಕ್ಕ ಚಪ್ಪಾಳೆಗಳಿಂದ, ಜಯಪ್ರಕಾಸ್ ಸರ್ ಮುಂತಾದವರ ಮೆಚ್ಚುಗೆಗಳಿಂದ ನನ್ನ ಖುಷಿಗೆ ಮೇರೆಯೇ ಇರಲಿಲ್ಲ.

ನಂತರದ ಕವನ ವಾಚನ ಶ್ರೀಕಾಂತಣ್ಣ ಅವರದ್ದಾಗಿತ್ತು. ನನ್ನ ಜೊತೆಗೇ ಬಂದರೂ ಅವರು ಗಾಡಿ ನಿಲ್ಲಿಸೋಕೆ ಹೋಗಿದ್ರಿಂದ ನನ್ನ ಕವನ ಮುಗಿಯೋ ಹೊತ್ತಿಗೆ ಬಂದಿದ್ರು. ಅವರು ಬರ್ತಿದ್ದ ಹಾಗೆಯೇ ಅವರ ಹೆಸರೂ ಬರಬೇಕೇ ?   ಏ, ನಾನು ಆಮೇಲೆ ಓದ್ತೀನಿ ಅಂತ ಮುಂದಿನ ಕವಿಯನ್ನು ಕರೆಯೋಕೆ ಹೇಳಿದ್ರು. ಆದ್ರೆ ಅವರು ಬಾರದಿದ್ದ ಕಾರಣ 3kಯ ನೂತನ್ ಅವರು ಅವರ ಪರವಾಗಿ ಓದಿದ್ರು. ನಂತರ ಮತ್ತೆ ತಪ್ಪಿಸಿಕೊಳ್ಳಲಾಗದ ಶ್ರೀಕಾಂತಣ್ಣ ವೇದಿಕೆಗೆ ಬರಲೇಬೇಕಾಯಿತು :-) ಎದುರಿಗೇ ಕೂತ ಮಡದಿ, ಮಕ್ಕಳ ಮುಂದೆ ಕವಿಗೋಷ್ಠಿಯಲ್ಲಿ ಕವನವೋದುವ ಭಾಗ್ಯ ಶ್ರೀಕಾಂತಣ್ಣನಿಗೆ :-) ಅವರ ಮಹಾಭಾರತದ ಕಾವ್ಯ ಅವರ ಅನುಭವದ ಮಾತುಗಳಿಗೂ ಸಾಕ್ಷಿಯಾಗಿ ಗದ್ಯ-ಪದ್ಯಗಳ ಸಮ್ಮಿಶ್ರಣವಾಗಿ ಒಂತರಾ ಭಿನ್ನ ಭಾವವನ್ನಿತ್ತಿತು. ನಂತರ ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಲೇಖಕಿ, ಕವಯಿತ್ರಿ ಶ್ರೀಮತಿ ಜಯಲಕ್ಷ್ಮೀ ಪಾಟೀಲ್ ಅವರ ಕವನವಾಚನ. ನಂತರ ಅಂದಿನ ಅತಿಥಿಗಳಾಗಿದ್ದ ಶ್ರೀ ಮಂಜುನಾಥ ಕೊಳ್ಳೇಗಾಲ ಅವರು ಅಂದಿನ ಕವನವಾಚನದ ಬಗ್ಗೆ ತಮ್ಮ ಅಭಿಪ್ರಾಯಗಳನ್ನೂ ತಿಳಿಸಿದರು.

ಕರ್ನಾಟಕ ನಾಟಕ ಪಿತಾಮಹ ಟಿ.ಪಿ ಕೈಲಾಸಂ:
ಎರಡು ವರ್ಷದ ಹಿಂದೆ ಹೀಗೇ 3k ಯ ಕಾರ್ಯಕ್ರಮದಲ್ಲಿ ಮೊದಲು ಕಂಡಿದ್ದು ಶ್ರೀ ಮಂಜುನಾಥ ಕೊಳ್ಳೇಗಾಲ ಅವರನ್ನು. ಅಂದು ಓದಿನ ಮಹತ್ವ ಏನು ಎಂಬುದರ ಬಗ್ಗೆ ಹೇಳುತ್ತಾ ಕುಮಾರ ವ್ಯಾಸ ಭಾರತ, ಬೊಮ್ಮನ ಹಳ್ಳಿಯ ಕಿಂದರಿ ಜೋಗಿ ಮುಂತಾದ ಕೃತಿಗಳ ಸಾರವನ್ನು ಉಣಬಡಿಸಿದ್ದ ಮಂಜುನಾಥ್ ಸರ್ ಅವರ ಪರಿಚಯವನ್ನು ಅಂದು ಮಾಡಿಕೊಟ್ಟಿದ್ದು ಸತೀಶ್ ನಾಯಕ್ ಭದ್ರಾವತಿ. ಇಂದೂ ಅವರೇ :-) ಟಿ.ಪಿ ಕೈಲಾಸಂ ಅವರ ನಾಟಕಗಳ ಬಗ್ಗೆ ಕೇಳಿದ್ದ ನಮಗೆ ಅವರ ವ್ಯಕ್ತಿತ್ವದ ಪರಿಚಯವಾಗಿದ್ದು ಇಂದೇ.

ತಮಿಳು ಮೂಲದ ಜಸ್ಟೀಸ್ ಪರಮಶಿವಯ್ಯ ಮತ್ತು ಕಮಲಮ್ಮ ದಂಪತಿಗಳ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದ್ದ ಕೈಲಾಸಂ ಅವರು ಭೂವಿಜ್ಞಾನ ಶಾಸ್ತ್ರದಲ್ಲಿ ಬಿ.ಎ, ಎಂ.ಎ ಪಡೆದು ಲಂಡನ್ನಿನ ರಾಯಲ್ ಕಾಲೇಜ್ ಆಫ್ ಸೈನ್ಸಿನಲ್ಲಿ ಏಳು ವಿಷಯಗಳಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದರು. ಅಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಜಾರ್ಜ್ ಬರ್ನಾಡ್ ಶಾ ಅವರ ನಾಟಕಗಳಿಂದ ಅಪಾರ ಪ್ರಭಾವ ಹೊಂದಿದ್ದ ಅವರು ನಂತರ ಕರ್ನಾಟಕ ನಾಟಕ ರಂಗದತ್ತ ಹೊರಳಿದರು. ಉನ್ನತ ದರ್ಜೆಯ ಕುಟುಂಬದಿಂದ ಬಂದ ಕೈಲಾಸಂ ಅವರು ಕನ್ನಡ ಸಾಹಿತ್ಯಕ್ಕಾಗಿ ಒದ್ದಾಡುವುದು ಅವರ ತಂದೆಗೆ ಸುತರಾಂ ಇಷ್ಟವಿರಲಿಲ್ಲ. ಆ ಅಪ್ಪ, ಮಗನ ನಡುವೆ ನಡೆಯೋ ಮನಸ್ತಾಪಗಳನ್ನೂ ಹಾಸ್ಯವಾಗಿ ಪರಿವರ್ತಿಸಿದ ಸನ್ನಿವೇಶಗಳನ್ನು ಕೈಲಾಸಂ ಅವರ ಕೃತಿಗಳಲ್ಲೇ ಓದಬೇಕು. ಆದರೂ ಕೆಲವು ಪ್ರಸಂಗಗಳನ್ನು ನಿನ್ನೆ ಕೇಳಿದ ನೆನಪಿನಲ್ಲಿ ತೆಗೆದುಕೊಳ್ಳುವುದಾದರೆ..


ಪ್ರಸಂಗ ೧: ಕೈಲಾಸಂ ಅವರು ತುಂಬಾ ಕೊಳೆಯಾಗಿದ್ದ ರೂಂ ಒಂದರಲ್ಲಿ ಇರುತ್ತಾರೆ. ಅದಕ್ಕೆ nook(ಮೂಲೆ) ಅಂತ ಕರೆಯುತ್ತಿದ್ದರು.ಅಲ್ಲಿಗೆ ಬಂದ ಅವರ ಹಿತೈಷಿಯೊಬ್ಬರು. ಏನಪ್ಪಾ ಕೈಲಾಸಂ, ನಿನ್ನ ರೂಂ ಇಷ್ಟೊಂದು ಕಸದಿಂದ ತುಂಬಿದೆ ಅಂದ್ರೆ ಕೈಲಾಸಂ ಅವರು, ಸ್ವಾಮಿ ಕಸ ಅಂದರೆ ಏನು ? ಯಾವುದು ಎಲ್ಲಿರಬಾರದು ಅಲ್ಲಿದ್ದರೆ ಕಸ. ಉದಾಹರಣೆಗೆ ನೀವು ಇಲ್ಲಿರಬಾರದು, ನೀವು ಇಲ್ಲಿಗೆ ಬಂದರೆ ಅದು..!!!
ಪ್ರಸಂಗ ೨:ಕೈಲಾಸಂ ಅವರ ತಂದೆಯವರಿಗೆ ತುಂಬಾ ಅನಾರೋಗ್ಯವುಂಟಾಗಿದೆಯೆಂಬುದನ್ನು ತಿಳಿದು ಅವರು ತಮ್ಮ ತಂದೆಯನ್ನು ನೋಡಲು ಬರುತ್ತಾರೆ. ತಂದೆಗೆ ಕೊನೆಗೂ ತಮ್ಮ ಮಗ ತಮ್ಮನ್ನು ನೋಡಲು ಬಂದನಲ್ಲಾ ಅನ್ನೋ ಸಂತೋಷಕ್ಕಿಂತ ಆತ ಹೇಗಿದ್ದಾನೋ ಏನೋ ಎಂಬ ಆತಂಕ. Are you having money to have one square meal per day ಅಂತ ಕೇಳುತ್ತಾರೆ. ಅದಕ್ಕೆ ಕೈಲಾಸಂ ಅವರು ಏನೂ ಉತ್ತರಿಸದಿರುವುದನ್ನ ಕಂಡ ಅವರು what do you need . tell me ಅಂತ ಕೇಳುತ್ತಾರೆ. ಅದಕ್ಕೂ ಸಮರ್ಪಕ ಉತ್ತರ ಸಿಗದಿದ್ದನ್ನ ಕಂಡ ಅವರ ತಂದೆ Are you serious ಎನ್ನುತ್ತಾರೆ . ಅದಕ್ಕೆ ಕೈಲಾಸಂ ಅವರು. I am not serious. you are serious . Take care of your health ಅಂತ ಹೇಳಿ ಅಲ್ಲಿಂದ ತೆರಳುತ್ತಾರೆ !
ಪ್ರಸಂಗ ೩:  ಕೈಲಾಸಂ ಅವರು ಕೊನೆಗೂ ತಮ್ಮ ತಂದೆಯವರಿದ್ದ ಭವ್ಯ ಬಂಗಲೆ whitehouse ಗೆ ಬಂದು ನೆಲಸಬೇಕಾಗುತ್ತದೆ. ಆದರೆ ಅಲ್ಲಿ ಇರುವುದು ಇಷ್ಟವಿಲ್ಲದ ಅವರು ಅದರ ಹೊರಭಾಗದಲ್ಲಿರುವ ಕೊಠಡಿಯೊಂದರಲ್ಲಿ ನೆಲೆಸುತ್ತಾರೆ. ಅದನ್ನು ನೋಡಿದ ಒಬ್ಬರು ಇವರಿಗೆ ಪ್ರಶ್ನಿಸುತ್ತಾರೆ. Finally you are in whitehouse ? ಕೈ:No I am in outhouse !
ಪ್ರಸಂಗ ೪: whitehouse ನಲ್ಲಿ ಕೈಲಾಸಂ ಅವರು ನೆಲೆಸಿದ್ದನ್ನು ತಿಳಿದ ಒಬ್ಬರು ಇವರನ್ನು ಪ್ರಶ್ನಿಸುತ್ತಾರೆ. everything is good in whitehouse ? ಕೈ:yes. I am the only blackspot in it !.  ಕೈಲಾಸಂ ಅವರಿಗೆ ಉತ್ತಮ ಕುಟುಂಬದಿಂದ ಬಂದತಹ ತಾವು ಕೆಳಮಟ್ಟದ ಜೀವನ ನಡೆಸುತ್ತಿರುವುದನ್ನ ಸಮಾಜದಲ್ಲಿ ಕೆಲವರು ಹಾಸ್ಯದ ಸರಕಾಗಿಸಿದ್ದಾರೆ ಅನ್ನೋದು ಗೊತ್ತಿತ್ತು. ಆದರೂ ಅದಕ್ಕೆ ತಲೆಕೆಡಿಸಿಕೊಳ್ಳದ ಅವರು ಅದನ್ನೇ ಹಾಸ್ಯದ ಸರಕಾಗಿಸಿದ್ದರು ಅನ್ನೋದು ಮೇಲಿನ ಪ್ರಸಂಗಗಳಿಂದ ತಿಳಿದುಬರುತ್ತೆ.

ಮೈಸೂರು ಮಹಾರಾಜರ ಧಡೂತಿತನದ ಬಗ್ಗೆಯೂ ಕೈಲಾಸಂ ಅವರು ಹಾಸ್ಯವಾಗಿ ಬರೆದಿದ್ದನ್ನ ಮಂಜುನಾಥ್ ಅವರು ವಿವರಿಸುತ್ತಾ ಹೋಗುತ್ತಾರೆ.
ಪ್ರಸಂಗ ೫: ಕೈಲಾಸಂ:ನೀನು ಮೈಸೂರು ದಸರಾಕ್ಕೆ ಹೋಗ್ತಿದೀಯಲ್ಲ ರಾಜ. ಅಲ್ಲಿನ ಅಂಬಾರಿಯಲ್ಲಿ ಕೆಳಗಿರೋದು ಆನೆ ನೆನಪಿರ್ಲಿ !
ರಾಜ ಅನ್ನೋ ಅವರ ಗೆಳೆಯ/ಪಾತ್ರಧಾರಿ: ಹೂಂ. ಅದು ಗೊತ್ತೇ ಇದ್ಯಲ್ಲ ಸಾರ್,
ಕೈಲಾಸಂ: ಗೊತ್ತಿದ್ರೂ, ಜ್ಞಾಪಕ ಇರ್ಲಿ ಅಂತ ಹೇಳ್ದೆ
ಪ್ರಸಂಗ ೬:  ರಾಜರು ಬರುವಾಗ ಆಗ ೩ ಸಲ ತುಪಾಕಿ ಹಾರಿಸ್ತಿದ್ರಂತೆ. ಅದನ್ನ 3 cheers to his highness ಅಂತ ಕರೀತಿದ್ರಂತೆ. ಅದನ್ನು ಕೈಲಾಸಂ ಅವರು 3 cheers to his anus ಅಂತ ಹಾಸ್ಯ ಹೇಳ್ತಿದ್ರಂತೆ. Ruler of mysore ಬದಲು road roler of mysore ಅಂತಿದ್ರು. ಅವರ sharp wit ಅನ್ನೋದು ಹಾಗಿತ್ತು ಅನ್ನೋದಕ್ಕೆ ಇವು ಕೆಲವು ಉದಾಹರಣೆಗಳಷ್ಟೆ.

ಕೈಲಾಸಂ ಅವರ ಗೆಳೆಯ ವೆಂಕಣ್ಣಯ್ಯನವರು ಅಂತ ಒಬ್ಬರಿದ್ರಂತೆ. ಅವರು ಆರೂಕಾಲಡಿಯ ಆಜಾನುಬಾಹುವಾದ್ರೆ ಕೈಲಾಸಂ ಐದೂಕಾಲಡಿಯವರು.ಅವರ ಜೊತೆ ಹೋಗ್ತಾ ನಡೆದ ಸುಮಾರು ಹಾಸ್ಯ ಪ್ರಸಂಗಗಳನ್ನೂ ಅವರು ಇಲ್ಲಿ ಉಲ್ಲೇಖಿಸುತ್ತಾರೆ
ಪ್ರಸಂಗ ೭:ಹಿಂಗೇ ಒಮ್ಮೆ ನಡೆದು ಹೋಗ್ತಾ .ಸ್ವಾಮಿ ವೆಂಕಣ್ಣಯ್ಯನವರೇ ಹೇಗಿದ್ರೂ ನಿಂತೇ ಇದ್ದೀರಿ. ಹಾಗೇ ಸ್ವಲ್ಪ ಮೇಲೆ ನೋಡಿ. ನಮ್ಮ ಹಿರಿಯರು ಯಾರಾದ್ರೂ ಕಾಣಬಹುದೇನೋ. ಎಲ್ಲಾ ಆರಾಮಿದ್ದಾರಾ ಕೇಳಿ ಹೇಳಿ.

ಪ್ರಸಂಗ ೮:ವೆಂಕಣ್ಣಯ್ಯ ಅವರು ಮತ್ತು ಕೈಲಾಸಂ ಅವರು ಒಮ್ಮೆ ಮಾರ್ಕೇಟಿಗೆ ಹೋಗಿರ್ತಾರೆ
ವೆಂಕಣ್ಣಯ್ಯ: ಏನಮ್ಮಾ, ನಿಂಬೆಹಣ್ಣಿಗೆ ಎಷ್ಟು ?
ಸ್ವಾಮಿ: ಅದು ನಿಂಬೆಹಣ್ಣಲ್ಲ. ಸ್ವಲ್ಪ ಬಗ್ಗಿ ನೋಡಿ, ಅದು ಮೋಸಂಬಿ !!

ಹೀಗೇ ಕೈಲಾಸಂ ಅವರ ಹಾಸ್ಯ ಗಳನ್ನು ತೆರೆದಿಟ್ಟ ಮಂಜುನಾಥ್ ಅವರು ನಂತರ ಕೈಲಾಸಂ ಅವರ ನಾಟಕಗಳ ಪರಿಚಯದತ್ತ ತಿರುಗಿದರು. ಇಂದಿನ ಶೈಕ್ಷಣಿಕ ವ್ಯವಸ್ಥೆಯ ಅಣಕಾಗಿರುವ ಪೋಲಿ ಕಿಟ್ಟಿ, ಟೊಳ್ಳುಗಟ್ಟಿ ನಾಟಕಗಳ ಪರಿಚಯ ಮಾಡಿಕೊಟ್ಟ ಶ್ರೀ ಮಂಜುನಾಥ ಕೊಳ್ಳೇಗಾಲ ಅವರ ಮಾತುಗಳ ಬಗ್ಗೆ ಹೆಚ್ಚು ಬರೆಯೋ ಬದಲು ಅವರ ಮಾತುಗಳನ್ನ ಮತ್ತೊಮ್ಮೆ ಕೇಳೋದೇ ಮೇಲು ಅನಿಸುತ್ತೆ ! ಅವರ ನಾಟಕಗಳಲ್ಲಿ ಬರುವ ಮೋನೋಲಾಗಿನಲ್ಲಿನ ಗುಂಡೂ ಮತ್ತು ಸುಬ್ಬುವಿನ ಬಗ್ಗೆಯಾಗಲಿ, ಐದು ಸಖಿಯರು ಒಂದು ಉದ್ಯಾನವನದ ಬಗ್ಗೆ ಬೇರೆ ಬೇರೆ ಭಾಷೆಗಳಲ್ಲಿ ಹಾಡೋದನ್ನಾಗಲಿ ಬರೆಯೋ ಬದಲು ಅದನ್ನು ಕೇಳಿದ್ರೇ ಮಜ. ಆ ರೆಕಾರ್ಡಿಂಗುಗಳು ಆಸಕ್ತ ಕೇಳುಗರಿಗಾಗಿ..



ಮಣಿಕಾಂತ್ ಸರ್ ಅವರಿಗೆ ರಾಜ್ಯೋತ್ಸವ ಸನ್ಮಾನ
ನಂತರ ಆದಿನದ ಮುಖ್ಯ ಕಾರ್ಯಕ್ರಮವಾಗಿದ್ದ ಶ್ರೀ ಮಣಿಕಾಂತ್ ಸರ್ ಅವರ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಅದನ್ನು ನಡೆಸಿಕೊಟ್ಟವರು ಸೂರತ್ಕಲ್ಲಿನ ಮಹೇಶ್ ಮೂರ್ತಿ ಅವರು. ಮಣಿಕಾಂತ್ ಸರ್ ಅವರಿಗೆ ನೀಡಲಾದ ಪುರಸ್ಕಾರ ಪತ್ರವನ್ನು ಓದಿ, ಆಲನಹಳ್ಳಿ ಆರ್ ಮಣಿಕಾಂತ್ ಸರ್ ಅವರ ಸಾಧನೆಗಳ ಬಗ್ಗೆ ನೆರೆದ ಸಭಿಕರಿಗೆ ಮತ್ತೆ ನೆನಪಿಸಿಕೊಟ್ಟಿದ್ದು ೩k ಯ ಅಧ್ಯಕ್ಷೆಯಾದ ಶ್ರೀಮತಿ ರೂಪಾ ಸತೀಶ್ ಅವರು. ಪತ್ನಿ ನಾಗರತ್ನ, ಪುತ್ರಿ ನೀಲಿಯವರ ಸಂಸಾರ ಹೊಂದಿದ ಮಣಿಕಾಂತ್ ಅವರ ನೀಲಿಮ ಪ್ರಕಾಶನದ ಬಗ್ಗೆ ಅವರ ಅಮ್ಮ ಹೇಳಿದ ಎಂಟು ಸುಳ್ಳು ಪುಸ್ತಕದ ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರತಿಗಳು ಖರ್ಚಾದ ಬಗ್ಗೆ ಮುಂತಾದ ಸಾಧನೆಗಳ ಬಗ್ಗೆ ಕೇಳಿದ ನಮಗೆ ಮೈ ಜುಮ್ಮೆಂದಿದ್ದು ಸುಳ್ಳಲ್ಲ.ಸನ್ಮಾನದ ನಂತರ ಮಣಿಕಾಂತ್ ಸರ್ ಅವರು ಇದು ನಮ್ಮ ಮನೆಯ ಕಾರ್ಯಕ್ರಮವೇ ಅನಿಸುವಷ್ಟು ಚೆನ್ನಾಗಿ ಮೂಡಿಬರುತ್ತಿದೆ. ಖುಷಿ ಕೊಡುತ್ತಿದೆ ಅಂತಲೂ, ೨೦೦೮ರಲ್ಲಿ ಶುರುವಾದ ೩k ಮತ್ತದರ ಕಾರ್ಯಗಳಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ನಂತರದಲ್ಲಿ ಸಭಿಕರ ಕೋರಿಕೆಗೆ ಕೊಂಚ ಆಶ್ಚರ್ಯದಿಂದಲೇ ಸ್ಪಂದಿಸಿದ ಮಣಿಕಾಂತ್ ಅವರ ಪತ್ನಿ ಶ್ರೀಮತಿ ನಾಗರತ್ನ ಮಣಿಕಾಂತ್ ಅವರು ನಿಸಾರ್ ಅಹಮದ್ ಅವರ ಭಾವಗೀತೆಯೊಂದನ್ನು ಹಾಡಿ ನಾವೆಲ್ಲಾ ಭಾವಲೋಕದಲ್ಲಿ ವಿಹರಿಸುವಂತೆ ಮಾಡಿದರು. 

ಎದ್ದೇಳು ಕನ್ನಡಿಗ:
ನಂತರ ಶ್ರೀ ಸತೀಶ್ ಎಸ್ ಅವರು ಬರೆದು, ಶ್ರೀ ವಿಶಾಲ್ ನಾಯಕ್ ಅವರು ಸಂಗೀತ ನಿರ್ದೇಶಿಸಿರುವ , ಶ್ರೀ ರವಿಕಿರಣ್ ಅವರು ಹಾಡಿರುವ ಎದ್ದೇಳು ಕನ್ನಡಿಗ ಹಾಡನ್ನು ಪ್ರಸ್ತುತ ಪಡಿಸಲಾಯಿತು. ಪರರಿಗೆ ಉಪಕಾರಿಯಾಗಲು ಮುಂದಾಗಿ ಮನೆಗೇ ಮಾರಿಯಾಗುತ್ತಿರುವ ಕನ್ನಡಿಗ ತನ್ನ ನಾಡ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಹೊಂದಿ ಅದನ್ನು ಉಳಿಸಿಕೊಳ್ಳಲು ಮುಂದಾಗದಿದ್ದರೆ ಅಪಾಯ ತಪ್ಪಿದ್ದಲ್ಲ, ಅದನ್ನು ತಪ್ಪಿಸಲು ಎದ್ದೇಳು ಕನ್ನಡಿಗ ಎಂಬ ಅವರ ಗೀತೆ ಸಭಿಕರ ಗಮನ ಸೆಳೆಯಿತು. ಕಾರ್ಯಕ್ರಮ ಮಿಸ್ ಮಾಡಿಕೊಂಡವರಿಗಾಗಿ ಅವರ ಈ ಹಾಡಿನ ಯೂಟ್ಯೂಬ್ ಕೊಂಡಿ https://www.youtube.com/shared?ci=0mboQXUr1Hs

ಹಾಸ್ಯ ಲಾಸ್ಯ:
ಶ್ರೀ ಶಶಿ ಗೋಪಿನಾಥ್ ಅವರಿಂದ ಹಾಸ್ಯ ಲಾಸ್ಯ ಕಾರ್ಯಕ್ರಮ ನಡೆಯಿತು. ಹಾಸ್ಯ, ಕನ್ನಡದ ನಟರು ಬಂದು 3k ಕಾರ್ಯಕ್ರಮ ನೋಡಿದ್ದರೆ ಹೇಗಿರುತ್ತಿತ್ತು ಎಂಬ ಮಿಮಿಕ್ರಿ ನಡೆಸಿಕೊಟ್ಟ ಅವರು ತಮ್ಮ ಮುಂದಿನ ಕಾರ್ಯಕ್ರಮವಾದ ನೃತ್ಯಕ್ಕೆ ಪೆನ್ ಡ್ರೈವ್ ತರಲು ಮುಂದಾದರೆ ಆ ಗ್ಯಾಪಲ್ಲೇ ಮಿಮಿಕ್ರಿ ನಡೆಸಿಕೊಟ್ಟ ನಿರೂಪಕ ಅರುಣ್ ಶೃಂಗೇರಿ ಅವರ ಸಮಯ ಪ್ರಜ್ಞೆ, ಹಾಸ್ಯ ಪ್ರಜ್ಞೆ ಸಭಿಕರ ಶಿಳ್ಳೆ, ಕರತಾಡನಗಳಿಗೆ ಸಾಕ್ಷಿಯಾಯಿತು

ಕವನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ.

3kಕವನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ಕುಮಾರಿ ಮಾನಸ ಭಟ್ ಅವರ ಪರವಾಗಿ ಅವರಣ್ಣ ನಾಗರಾಜ ಹೆಗಡೆ ಅವರು, ಗುಬ್ಬಚ್ಚಿ ಸತೀಶ್ ಅವರು, ಮೌನಯಾನ ಬ್ಲಾಗಿನ(http://vinayakabhatmb.blogspot.in/2016/10/blog-post_25.html) ಮತ್ತು ಕವನ ಸ್ಪರ್ಧೆಯಲ್ಲಿ ಬಹುಮಾನ ವಿಜೇತರಾದ ವಿನಾಯಕ ಭಟ್ ಅವರು ಮತ್ತು ಗುರುನಾಥ್ ಬೋರಗಿಯವರು ಬಹುಮಾನಗಳನ್ನು ಸ್ವೀಕರಿಸಿದರು. ಬಹುಮಾನ ವಿಜೇತರಾಗದಿದ್ದರೂ ಟಾಪ್ ೧೦ನಲ್ಲಿ ಆಯ್ಕೆಯಾಗಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೂ ಅಭಿನಂದನಾ ಪತ್ರ, ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು.

ಅಧ್ಯಕ್ಷೀಯ ನುಡಿ:
ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಅಶೋಕ್ ಶೆಟ್ಟಿಯವರು ತಮ್ಮ ಹಾಸ್ಯಭರಿತ ಮಾತುಗಳಿಂದಲೇ ನೆರೆದವರ ಮನಗೆದ್ದರು.

ವಂದನಾರ್ಪಣೆ:
ಕಾರ್ಯಕ್ರಮದ ವಂದನಾರ್ಪಣೆಯನ್ನು ನಡೆಸಿಕೊಟ್ಟವರು 3k ಯ ಗೋಪಿನಾಥ್ ಅವರು. ಬಂದ ಅಧ್ಯಕ್ಷ, ಅತಿಥಿ, ತೀರ್ಪುಗಾರ , ಸಭಿಕರಿಗೆ ವಂದನಾರ್ಪಣೆಗಳನ್ನು ತಿಳಿಸುವುದು ಸಾಮಾನ್ಯ ಶಿಷ್ಟಾಚಾರ. ಆದರೆ ಗೋಪಿನಾಥ್ ಅವರು ಆ ಕಾರ್ಯಕ್ರಮಕ್ಕೆ ಎಳನೀರು ಕೊಚ್ಚಿ ಕೊಟ್ಟವರಿಗೆ, ಸಮೋಸ ಮುಂತಾದ ತಿನಿಸುಗಳನ್ನು ತಂದು ಕೊಟ್ಟವರಿಗೂ ಬಿಡದಂತೆ ವಂದನೆ ತಿಳಿಸೋ ಜೋಷಲ್ಲಿದ್ದಿದ್ದು ಕೊನೆಯ ಬೆಂಚಿನ ಹುಡುಗರಿಗೆ ಭರಪೂರ ಮನೋರಂಜನೆ ತಂದುಕೊಟ್ಟಿತ್ತು. ಅವತ್ತಿನ ವಿಷಯವೇ ಹಾಸ್ಯ ಅಂದ ಮೇಲೆ ಕೇಳಬೇಕೆ ? ವಂದನಾರ್ಪಣೆ ವೇಳೆ ಗೋಪಿನಾಥ್ ಅವರಿಗೆ ಮೊಬೈಲು ಬ್ಯಾಟ್ರಿಯ ಮೂಲಕ ನೆರವಾಗೋಕೆ ಬಂದ ನೂತನ್ ಅವರ ನಡೆ ಸಭಿಕರ ನಗೆಗಡಲಲ್ಲಿ ಮಿಂದೇಳುವಂತೆ ಮಾಡಿತು.

ಕೊನೆಗೊಂದಿಷ್ಟು ತಿಸಿಸು, ಕೊನೆಯಿಲ್ಲದಷ್ಟು ನಗು:
3k ಯ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಬರದಿದ್ದರೂ ತೆರೆಮರೆಯಲ್ಲೇ ಕೆಲಸ ಮಾಡುತ್ತಿದ್ದ ಮಲ್ಲೇಶ್, ಪ್ರಮೋದ್  ಮುಂತಾದವರು ಮಾತಿಗೆ ಸಿಕ್ಕಿದ್ದು, ಫೋಟೋಗಳಲ್ಲಿ ಬಂಧಿಯಾಗಿದ್ದು ಕಾರ್ಯಕ್ರಮ ಮುಗಿದು ತಿಂಡಿಗೆ ವೇದಿಕೆಯಾದಾಗ್ಲೇ. ಎದ್ದೇಳು ಕನ್ನಡಿಗ ಗೀತೆ ಬರೆದ ಸತೀಶ್ ಅವರೊಂದಿಗೂ, ಸಂಗೀತ ಸಂಯೋಜನೆಗಾರ ವಿಶಾಲ್ ಮತ್ತು ಗಾಯಕ ರವಿಕಿರಣ್ ಅವರೊಂದಿಗೂ ನಡೆಸಿದ ಮಾತುಕತೆ ಖುಷಿ ಕೊಟ್ಟಿತು. ಜೇಪಿ, ಗುರುನಾಥ್ ಬೋರಗಿ, ಶ್ರೀಕಾಂತಣ್ಣ, DOM ಮಹೇಶ್ ಗೌಡ, ಸತೀಶ ನಾಯ್ಕ್ ಭದ್ರಾವತಿ ಅವರಿದ್ದಲ್ಲಿ ನಗೆಯಿಲ್ಲದಿರುತ್ಯೆ ? ಇನ್ನೊಂದಿಷ್ಟು ಕಾಲೆಳೆತ, ನಗೆಯ ಅಲೆ. ಕಪ್ಪು-ಹಣ, ಬಿಳಿ-ಹಣ ಮುಂತಾದ ವಿಷಯಗಳ ಚರ್ಚೆಗೂ ನಾಂದಿಯಾದ ತಿಂಡಿ ಕಾರ್ಯಕ್ರಮ ಒಂದಿಷ್ಟು ಫೋಟೋ ಸೆಷನ್ನುಗಳಿಗೂ ಸಾಕ್ಷಿಯಾಯಿತು. ಘಂಟೆ ಏಳೂ ಕಾಲಾಗ್ತಾ ಬಂದಿದ್ರಿಂದ ಹಗೂರಕ್ಕೆ ಒಬ್ಬೊಬ್ಬರೇ ಖಾಲಿಯಾಗುತ್ತಾ ಬಂದಿದ್ರೂ ಬ್ಲಾಸಂ ಶಾಲೆಯಲ್ಲಿನ ನಗೆಯಲೆಗಳು ನಿಂತಿರ್ಲಿಲ್ಲ.  ಇನ್ನೂ ಎರಡೂವರೆ ತಾಸಿನ ಬಸ್ ಪ್ರಯಾಣ ಬಾಕಿಯುಳಿದಿದ್ದ ಕಾರಣ ಅಲ್ಲಿಂದ
ಹೊರಡಲೇ ಬೇಕಾದ ಬಾರದ ಮನಸ್ಸು ನನ್ನದಾದರೂ ಅದೆಷ್ಟೋ ಬ್ಲಾಗಿಗ, ಮುಖ ಹೊತ್ತುಗೆಯ ಗೆಳೆಯರನ್ನು ಮುಖತಃ ಕಂಡ, ಕೈಲಾಸಂ ಅವರ ಸಾಹಿತ್ಯಕ್ಕೆ, ಅವರ ಜೀವನದ ಅನುಭವಗಳಿಗೆ ಕಿವಿಯಾದ ಖುಷಿಯೊಂದಿಗೆ,,ಬರಲಿರೋ ಹುಟ್ಟಿದಬ್ಬಕ್ಕೆ ಮುಂಚೆಯೇ ಒಂದು ಬರ್ತಡೇ ಗಿಫ್ಟ್ ಪಡೆದ ಸಂಭ್ರಮದಲ್ಲಿ.. 











ಹೀಗೊಂದು ಕಾರ್ಯಕ್ರಮ ವರದಿ,..
ಕೊನೆಯ ಬೆಂಚಿನ ಹುಡುಗರಿಂದ..  

Saturday, November 5, 2016

ಕರೆಂಟಿಲ್ಲದ ಕಾರ್ತೀಕವೂ ಕನ್ನಡವಿಲ್ಲದ ಮಾಲ್ಗಳೂ

Karthika @Kundalahalli Nagalingeshwara temple
ಇವತ್ತು ನಮ್ಮ ಕೆ.ಇ.ಬಿಯವ್ರಿಗೆ ಅದೆಷ್ಟು ಒಳ್ಳೆಯ ಬುದ್ಧಿ ಬಂದು ಬಿಟ್ಟಿದೆ ಅಂತೀರಾ ? ನಮ್ಮ ನಾಗಲಿಂಗೇಶ್ವರ ದೇವಸ್ಥಾನದ ಕಾರ್ತೀಕ ಎಲ್ಲರೂ ನೋಡ್ಲಿ ಅಂತ ಇಡೀ ಏರಿಯಾದ ಕರೆಂಟು ತೆಗ್ದಿದಾರೆ ! ಬೀದೀಲಿ ಎಲ್ಲರ ಮನೆಯೆದ್ರಿಟ್ಟಿರೋ ದೀಪಗಳ್ನ ನೋಡೋದು ಅದೆಷ್ಟು ಚೆಂದ ಅಂತೀರಿ. ಕೆ.ಇ.ಬಿಯವರ ಈ ಸೌಂದರ್ಯಪ್ರಜ್ಞೆ ಒಂದು ಸಮುದಾಯದ ಪರವಾಗಿದೆ, ಉರುಸ್, ಚರ್ಚುಗಳ ಕಾರ್ಯಕ್ರಮಗಳಲ್ಲೂ ಇದೇ ತರ ಮಾಡಿ ಅವುಗಳನ್ನೂ ಚೆಂದಗಾಣಿಸಿಕೊಡಬಹುದು. ಆದರೆ ಆ ತರ ಮಾಡದ ಕೆ.ಇ.ಬಿಯವ್ರನ್ನ ನಾವು ಖಂಡಿಸ್ತೀವಿ, ಖಂಡಿಸ್ತೀವಿ ಅಂತ ಯಾವ ಬುದ್ಧಿಜೀವಿಗಳೂ ಈ ಕಡೆ ಬರದೇ ಇದ್ದಿದ್ದು ಯಾಕೋ ಬೇಸರ ತರಿಸ್ತಿದೆ. ಬಹುಷಃ ಯಾವ ಪ್ರಚಾರ, ಪತ್ರಿಕೆಗಳೂ ಬಾರದ ಪ್ರದೇಶ ಇದು ಅಂತ ಕೈಬಿಟ್ಟಿರಬೇಕು ಅಂತೊಂದಿಷ್ಟು ಗುಸುಗುಸುಗಳು ಕತ್ಲಲ್ಲೇ ಕೇಳಿಬರ್ತಿದ್ವು ಅಂತ ನಮ್ಮ ಪ್ರತಿನಿಧಿ ಗುಂಡಣ್ಣ ವರದಿ ಮಾಡ್ತಿದ್ದಾರೆ- ಕತ್ಲಳ್ಳಿ ನ್ಯೂಸ್, ಕುಂದ್ಲಳ್ಳಿ

ಕುಂದ್ಲಳ್ಳಿ ಅನ್ನೋಕೆ ಅವಮಾನ ಅಂತ ನಮ್ಮದು ಕಾಸ್ಮೋಸ್ ಅಂತನ್ನೋ ಜನರ ಹೆಮ್ಮೆಗೆ ಮುಕುಟವಿಟ್ಟಂತಿರೋ ಕಾಸ್ಮೋಸು ಮಾಲಿನಲ್ಲಿ ಈಗ ದೀಪಾವಳಿ ಸಂಭ್ರಮ. ಕೆಳ ಮಹಡಿಯಲ್ಲಿರೋ ಟ್ಯಾಕೋ ಬೆಲ್ಲು,ಫ್ಯಾಬ್ ಇಂಡಿಯಾ, ಪ್ಯಾಂಟಲೂನ್ಗಳಲ್ಲಿ ಕನ್ನಡದ ಲವಲೇಶವಿಲ್ಲ. ಸರಿಯಪ್ಪ ಅಂತ ಮೇಲಿನ ಮಹಡಿಯಲ್ಲಿ, ಅಲ್ಲೂ ಇಲ್ಲ. ಮೂರನೇ ಮಹಡಿ ? ಊಹೂಂ. ನಾಲ್ಕನೇ ಮಹಡಿಯಲ್ಲಿರೋ ಐನಾಕ್ಸಲ್ಲಾದ್ರೂ ಕನ್ನಡ ಚಿತ್ರಗಳಿರ್ಬೋದಾ ಅಂತಂದ್ರೆ ಒಂದೂ ಇರ್ಬಾರ್ದಾ ? ಹಿಂದಿ, ಇಂಗ್ಲೀಷುಗಳು ಹೋಗ್ಲಿ ಮಲೆಯಾಳಂ, ತಮಿಳು, ತೆಲುಗು ಚಿತ್ರಗಳಿಗೆಲ್ಲಾ ಮೂರ್ನಾಲ್ಕು ಶೋ. ಕನ್ನಡ ಚಿತ್ರನ ದುರ್ಬೀನಲ್ಲಿ ಹುಡ್ಕಿದ್ರೂ ಸಿಗ್ಬಾರ್ದಾ ? ನಾಲ್ಕೈದು ನಿಮಿಷ ಹುಡುಕಿದ್ಮೇಲೆ ಸಾಗರ, ಶಿವಮೊಗ್ಗ ಹೀಗೆ ಸುಮಾರಷ್ಟು ನಗರಗಳಲ್ಲಿ ಯದ್ವಾತದ್ವಾ ಓಡ್ತಿರೋ ಸಂತು ಸ್ಟ್ರೇಟ್ ಫಾರ್ವರ್ಡಿಗೆ ಎರಡು ದಿನಕ್ಕೊಂದು ಶೋ ಅಂತ ಗೊತ್ತಾಯ್ತು. ನಮ್ಮ ಬಿ.ಎಂ.ಟಿ.ಸಿಯ ಬಸ್ಸುಗಳಲ್ಲೇ ಕನ್ನಡ ಬರುತ್ತೆ ಸಾರ್. ಇನ್ನು ಮಾಲ್ಗಳಲ್ಲಿರೋ ಎಲ್.ಇ.ಡಿಗಳಲ್ಲಿ ಕನ್ನಡ ಬರಲ್ವಾ ಅನ್ನೋ  ಪ್ರಶ್ನೆಗೆ ಉತ್ತರ ಕೊಡೋಕೆ ಅಲ್ಲಿನ ನಾಲ್ಕು ಮಹಡಿಗಳಲ್ಲೂ ಯಾರಿರಲಿಲ್ಲ ಅಂತ ನಮ್ಮ ಪ್ರತಿನಿಧಿ ಇಳಾ ಮೇಡಂ ಸಿಟ್ಟಿಂದ ವರದಿ ಮಾಡಿದ್ದಾರೆ- ಕತ್ಲಳ್ಳಿ ನ್ಯೂಸ್, ಕಾಸ್ಮೋಸ್ ಮಾಲ್ ಅಲಿಯಾಸ್ ಕುಂದಲಹಳ್ಳಿ

ಇದೆಂತಾ ಮರ್ಲು ಮಾರ್ರೆ. ಊರಲ್ಲೆಲ್ಲಾ ಕರೆಂಟಿಲ್ಲ. ಇಲ್ನೋಡಿದ್ರೆ ಈ ನಮ್ನಿ ಕರೆಂಟ್ ವೈರ್ ನೇತಾಕಿರೂ. ದೀಪಾವಳಿ ಅಂತ ದೀಪ ಹಚ್ಚೋದು ಬಿಟ್ಟು ಹಿಂಗೆ ಕರೆಂಟು ವೈರು ನೇತಾಕೂದಾ ಅಂತ ಬೈಯ್ತಿದ್ದ ನಮ್ಮ ಮಂಜಣ್ಣ. ಅಲ್ದಾ ಮಂಜಣ್ಣ. ಇದು ಕರೆಂಟು ವೈರಲ್ದೋ. ಎಲೆಕ್ಟ್ರಿಕ್ ದೀಪ. ಹೊಸ ಫ್ಯಾಷನ್ನಿದು. ಈಗಿನ ಜನ ಬಲ್ಬು ಹಾಕಿದ್ರೆ ಕರೆಂಟು ವೇಸ್ಟು ಹೇಳಿ ಎಲ್.ಇ.ಡಿ, ಸಿ.ಎಫ್. ಎಲ್ಲು ಹೇಳಿ ಹಾಕ್ತ. ಆದ್ರೆ ಕೊನೆಗೆ ಹಿಂಗೆ ಕರೆಂಟ್ ವೇಸ್ಟ್ ಮಾಡ್ತ ಅಂತಂತಿದ್ಲು ಸರಿತಾ. ಹೇ ಇವ್ರು ನಮ್ಮೂರ ಪ್ರಶಸ್ತಿ, ರಂಜನ್ ಅಲ್ದನಾ ? ನಾವೂ ಇವ್ರು ಜತೆಗೊಂದು ಸೆಲ್ಫಿ ತೆಕ್ಕಳನ ಬಾರಾ ಅಂತ ಸರಿತಾ ವಿಷಯಾಂತರ ಮಾಡಿ ಸಮಾಧಾನ ಮಾಡೋವರೆಗೂ ಮಂಜಣ್ಣನ ಬೈಗುಳ ಮುಗಿದಿರಲಿಲ್ಲ. ದೇವಸ್ಥಾನದ ದೀಪಕ್ಕೆ ಎಣ್ಣೆ ಹಾಕೂದು ಎಣ್ಣೆ ವೇಸ್ಟು ಅಂಬ್ರು ಈ ಜನ. ಈಗ್ನೋಡಿರೆ ಬೀದಿಲಿರೋ ಕರೆಂಟೆಲ್ಲಾ ಇವ್ರೊಬ್ಬದ್ದೇ ಹೇಳೂ ಹಂಗೆ ಮಾಡ್ತ್ರಪ. ಹೇಳೂದು ಶಾಸ್ತ್ರ, ತಿನ್ನೂದು ಬದ್ನೇಕಾಯೇ ಅಂತ ಬಯ್ಕೊಳ್ತಾ ಕಾಸ್ಮೇಸ್ ಮಾಲಿನ ಝಗಮಗಿಸೋ ದೀಪಾಲಂಕಾರದ ಬಗ್ಗೆ ವರದಿ ಮಾಡಿದ್ದಾರೆ ನಮ್ಮ ಪ್ರತಿನಿಧಿಗಳಾದ ಸರಿತಾ ಸಾಗರ ಮತ್ತು ಮಂಜುನಾಥ್ ಮಂಗಳೂರು-ಕತ್ಲಳ್ಳಿ ನ್ಯೂಸ್, ಕುಂದಲಹಳ್ಳಿ

ನಮ್ಮೂರ ಟಿ.ವಿ ಪ್ರತಿನಿಧಿಗಳೇನೋ ಭೇಟಿಯಾಗಿದ್ರು. ಆದ್ರೆ ಕರೆಂಟು ಕಂಬಕ್ಕೆ ಕಲ್ಲೊಡೆಯಬೇಕು ಅನ್ನೋ ಪುಂಡುಡ್ರೂ ಮೊಬೈಲು ಬ್ಯಾಟರೀನೋ, ಇನ್ಯಾರದೋ ಮನೆಯ ಹಣತೆನೋ ಎತ್ಕಂಡು ಬಂದು ಕಲ್ಲೊಡೆಯಬೇಕಾದಂತಹ ಕತ್ಲು ಅವತ್ತು. ಬೇರೆ ದಿನದಲ್ಲೆಂತೂ ಬರಲ್ಲ. ಇವತ್ತಾದ್ರೂ ಆಫೀಸಿಗೆ ಬರ್ರಿ ಅಂತ ಕರದ್ರೂ ಅಂತ ಅಲ್ಲಿಗೆ ಹೋದ್ರೆ ಅಲ್ಲೂ ಕತ್ಲು. ಅದೇನು ರಾಜಕೀಯ ಪಕ್ಷದವರ ಚಾನಲ್ಲೇ ?  ದುಡ್ಡು ಹೇರಳವಾಗಿದ್ದು ೨೪ ಘಂಟೆ ಯು.ಪಿ.ಎಸ್ ಬ್ಯಾಕಪ್ ಇಡೋಕೆ ? ಇದ್ದೊಂದು ಯು.ಪಿ.ಎಸ್ ಆದ್ರೂ ಮಧ್ಯಾಹ್ನದಿಂದ ಕರೆಂಟಿಲ್ಲದ ದಿನದಲ್ಲಿ ಎಷ್ಟೊತ್ತು ಬಂದೀತು ? ಗುಂಡ, ಇಳಾ, ಸರಿತಾ ಮತ್ತು ಮಂಜಣ್ಣನ ರಿಪೋರ್ಟುಗಳನ್ನ ಒಪ್ಪವಾಗಿಸಿ ಒಂದು ನ್ಯೂಸ್ ಮಾಡೋಕೆ ಕರೆಂಟ್ ಯಾವಾಗ ಬರುತ್ತೋ ಅನ್ನೋ ಬೇಜಾರಲ್ಲಿ ನಮ್ಮ ಮ್ಯಾನೇಜರ್ ಪುಂಡಣ್ಣ ಅಲ್ಲೇ ತಿರುಗ್ತಾ ಇದ್ರು. ಅವ್ರ ಪ್ರತಿನಿಧಿಗಳು ಕತ್ಲು ಅಂತ ರಿಪೋರ್ಟೇ ಕೊಡದೆ ಹಂಗೇ ಮನೆಗೆ ಎಸ್ಕೇಪ್ ಆಗ್ಬುಟ್ರಾ ಅಂತ ತಲೆಕೆಡಿಸ್ಕೊಂಡಿದ್ದ ಅವ್ರಿಗೆ ನಮ್ಮನ್ನ ನೋಡಿ ಖುಷಿ ಆಯ್ತು. ಕರೆಂಟು ಬರೋ ತನಕ ಏನಾದ್ರೂ ಟೈಂ ಪಾಸ್ ಮಾಡ್ಬೇಕಲ್ಲ. ಇವತ್ತಿನ ನ್ಯೂಸನ್ನು ಪ್ರಸಾರ ಮಾಡದೇ ಮನೆಗೋಗಂಗಿಲ್ಲ. ಹಂಗೇ ಸುಮ್ಮನೇ ಕೂತ್ರೆ ಇಲ್ಲಿರೋರೆಲ್ಲಾ ಮನೆಗೋಗಿ ಬಿಡ್ತಾರೆ ಅನ್ನೋ ದೂರಾಲೋಚನೆ ಬಂದ ಪುಂಡಣ್ಣ ನಿಮಗೆಲ್ಲಾ ನೆರಳು ಬೆಳಕಿನ ಆಟ ತೋರುಸ್ತೀನಿ ಅಂತ ಬೇಡ ಬಿಡಿ ಅಂದ್ರೂ ಬಿಡದಷ್ಟು ಒತ್ತಾಯ ಮಾಡಿ ಒಳಗೆ ಕರ್ಕೊಂಡೋದ್ರು. ಪುಂಡಣ್ಣ ಮೂಲೆಯಲ್ಲೊಂದು ಮೊಬೈಲ ಬ್ಯಾಟರಿಯಿಟ್ಟು ಅದ್ರ ಬೆಳಕಿಗಡ್ಡ ತಮ್ಮ ಕೈಯನ್ನಿಟ್ಟು ನೆರಳಲ್ಲೇ ಆನೆ, ಮೊಲ, ಬೊಗಳೋ ನಾಯಿ, ಗಿಳಿ, ಅರಮನೆ ಎಲ್ಲಾ ಮಾಡ್ತಿದ್ರೆ ಎಲ್ರಿಗೂ ಬಾಲ್ಯದ ನೆನಪುಗಳ ಮೆರವಣಿಗೆ. ಅದ್ರ ಮಧ್ಯೆ ಒಂದಿಷ್ಟು ಮಾತು, ನಗೆಯಲ್ಲಿ ಕಳೆದು ಹೋಗಿದ್ದ ನಮಗೆ ಯಾವಾಗ ಇನ್ನೊಂದು ಘಂಟೆ ಕಳೆದುಹೋಯ್ತೋ, ಕರೆಂಟಿಲ್ಲದೇನೇ ಖುಷಿಯಾಗಿರೋ ಜನರ ಖುಷಿಗೆ ಭಂಗ ತರೋ ಉದ್ದೇಶದಿಂದ ಕೆ.ಇ.ಬಿಯವ್ರು ಯಾವಾಗ ಕರೆಂಟು ಕೊಟ್ರೋ ಗೊತ್ತಾಗಲಿಲ್ಲ.  ಈ ಮೊಬೈಲು, ಇಂಟರ್ನೆಟ್ಟು, ವಾಟ್ಸಾಪು, ಫೇಸ್ಬುಕ್ಕು, ಟ್ವಿಟ್ಟರುಗಳೆಂಬ ಕೃತ್ತಿಮ ಜಗತ್ತಲ್ಲೇ ಕಳೆದುಹೋಗೋ ನಾವು ಪರಸ್ಪರ ಮುಖ ಕೊಟ್ಟು ಮಾತಾಡದೇ ಎಷ್ಟು ಕಾಲವಾಗಿತ್ತೋ. ಅದಕ್ಕೊಂದು ಅವಕಾಶ ಮಾಡಿಕೊಟ್ಟ ಈ ಕರೆಂಟಿಲ್ಲದ ದಿನಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಕಮ್ಮಿ ಅನಿಸಿದ್ದು ಸುಳ್ಳಲ್ಲ. ಹಿಂಗೆ ಆಗಾಗ ಕರೆಂಟು ಹೋಗ್ತಾ ಇದ್ರೆ ಒಂದಿಷ್ಟು ಜೀವಗಳು ಹತ್ರವಾಗುತ್ತೆ ಅಂದ್ರೆ ಅದೇ ಒಳ್ಳೇದೇನೋ ಅನ್ಸಿದ್ದೂ ಸುಳ್ಳಲ್ಲ.
ನೆರಳು ಬೆಳಕಲ್ಲಿ ನಾಯಿಯನ್ನು ತೋರಿಸೋ ಪ್ರಯತ್ನ. ಫೋಟೋಗ್ರಫಿ ಕೃಪೆ: ನಂ ರೂಂ ಮೇಟು ಸಿದ್ದಾರೂಡ ಅವ್ರುದ್ದು

Monday, October 31, 2016

ಹಾಸನಾಂಬೆಯ ಸನ್ನಿಧಿಯಲ್ಲಿ

ಹಾಸನದ ಕೇಂದ್ರಭಾಗದಲ್ಲೇ ಇದೆ ಹಾಸನಾಂಬಾ ದೇವಸ್ಥಾನ. ಭೂಲೋಕ ಸಂಚಾರಕ್ಕೆಂದು ಬಂದ ದೇವಿಯರು ಇಲ್ಲಿನ ಸೌಂದರ್ಯಕ್ಕೆ ಮನಸೋತು ಇಲ್ಲೇ ನೆಲೆಸಿದರೆಂಬ ಐತಿಹ್ಯವಿರೋ ಈ ಹಾಸನಾಂಬಾ ದೇವಸ್ಥಾನ ತೆಗೆಯೋದು ವರ್ಷಕ್ಕೊಮ್ಮೆ ಮಾತ್ರ.
ಆ ಸಂದರ್ಭದಲ್ಲಿ ದೇವಸ್ಥಾನವನ್ನು ನೋಡೋಕೆ ಸಿಕ್ಕಾಪಟ್ಟೆ ಜನ ಬಂದಿರ್ತಾರೆ. ಬೆಳಗ್ಗೆ ಆರಕ್ಕೆ ದರ್ಶನಕ್ಕೆ ತೆರೆಯೋ ಈ ದೇವಸ್ಥಾನ ಮತ್ತೆ ಮುಚ್ಚೋದು ರಾತ್ರೆ ೨ಕ್ಕೆ. ಮುಂಜಾನೆ ಮೂರಕ್ಕಾಗಲೇ ಮಾರನೇ ದಿನದ ದರ್ಶನಕ್ಕಾಗಿ ಜನ ನೆಲೆಸಿರುತ್ತಾರೆ ಅಂದರೆ ದೇವಸ್ಥಾನದ ಪ್ರಸಿದ್ದಿ ಹೇಗಿರಬಹುದು ಲೆಕ್ಕ ಹಾಕಿ

ದೇವಸ್ಥಾನ ಮತ್ತದರ ಕ್ಯೂಗಳು:
ದೇವಸ್ಥಾನಕ್ಕೆ ಮುಂಚೆ ಧರ್ಮದರ್ಶನವೆಂಬ ಕ್ಯೂ ಮಾತ್ರ ಇತ್ತಂತೆ. ಆಮೇಲೆ ವಿ.ಐ.ಪಿಗಳು , ಅವರು ಇವರು ಅಂತ ಬಂದು ಜನರಿಗೆ ತೊಂದರೆ ಆಗೋಕೆ ಶುರುವಾದ್ಮೇಲೆ ವಿಶೇಷ ದರ್ಶನದ ಕ್ಯೂ ಮಾಡಿದ್ದಾರಂತೆ. ಮುಂಚೆ ನೂರೈವತ್ತು ರೂಗಳ ಪ್ರವೇಶ ದರವಿದ್ದ ವಿಶೇಷ ಕ್ಯೂಗೆ ಪ್ರತಿ ವರ್ಷವೂ ಬೆಲೆಯೇರಿಕೆಯಾಗಿ ಈ ವರ್ಷ ೩೦೦ ರೂ ದರ ನಿಗದಿಯಾಗಿದೆ. ವಿಶೇಷ ಕ್ಯೂ ಅಂದರೆ ನೇರ ದೇವರ ದರ್ಶನವೆಂದಲ್ಲ. ಅದರಲ್ಲಿ ಹೊರಗಡೆ ೬ ಸಾಲುಗಳಿವೆ. ಅದನ್ನು ದಾಟಿ ದೇಗುಲದ ಪ್ರಾಂಗಣಕ್ಕೆ ಪ್ರವೇಶ ಪಡೆದರೆ ಅಲ್ಲಿ ಮತ್ತೆ ೮ ಸಾಲುಗಳು.

ಕ್ಯೂನಲ್ಲಿ ಎಷ್ಟು ಹೊತ್ತು ಕಾಯಬೇಕು?
ಕ್ಯೂನಲ್ಲಿ ಎಷ್ಟೊತ್ತು ಕಾಯಬೇಕು ಅನ್ನೋ ಪ್ರಶ್ನೆಗುತ್ತರ ನೀವು ಯಾವತ್ತು, ಎಷ್ಟೊತ್ತಿಗೆ ಹೋಗ್ತಾ ಇದ್ದೀರಿ ಅನ್ನೋದರ ಮೇಲೆ ನಿರ್ಧಾರವಾಗುತ್ತೆ. ಶನಿವಾರ ಮುಂಜಾನೆ ೭:೧೦ಕ್ಕೆ ವಿಶೇಷ ದರ್ಶನದ ಕ್ಯೂನಲ್ಲಿ ನಿಂತಿದ್ದ ನಾವು ೮:೪೦ಕ್ಕೆ ಬಂದಿದ್ದೆವು. ಅದರ ಮುಂದಿನ ಒಳಗಿನ ಕ್ಯೂ ಮುಗಿಸಿ ದೇಗುಲದ ಪ್ರಾಂಗಣಕ್ಕೆ  ಬರೋ ಹೊತ್ತಿಗೆ ೯:೩೦. ಅಲ್ಲಿಂದ ದೇವರ ದರ್ಶನ ಪಡೆಯೋಕೆ ಹೆಚ್ಚೊತ್ತು ಬೇಡ. ಎಂಟೇ ನಿಮಿಷದಲ್ಲಿ ಒಳಗಿನ ದೇವರುಗಳ ದರ್ಶನ ಪಡೆದು ಹೊರಗೆ ಬಂದಿದ್ದೆವು. ಅಂದಾಗೆ ಯಾವಾಗ್ಲೂ ಹೀಗಿರಲ್ಲ. ಬೆಳಗ್ಗೆ ೮:೩೦ ಕ್ಕೆ ಹೋದೋರು ಮದ್ಯಾಹ್ನ ೫ಕ್ಕೆ ಬಂದಿದ್ದು, ಬೆಳಗ್ಗೆ ೯ಕ್ಕೆ ಹೋದೋರು ರಾತ್ರೆ ೮ಕ್ಕೆ ಬಂದಿದ್ದೂ ಇದೆ ! ನಾವು ದರ್ಶನ ಮುಗಿಸಿ ವಾಪಾಸ್ಸು ಬರುವಾಗ ವಿಶೇಷ ದರ್ಶನದ ಕ್ಯೂ ಅಲ್ಲಿನ ಆರು ಸಾಲುಗಳ ಪೆಂಡಾಲು, ಚಪ್ಪಲಿ ಇಡೋ ಜಾಗಗಳ ದಾಟಿ ಅದರ ಪಕ್ಕದೆರೆಡು ಬೀದಿಗಳನ್ನು ದಾಟಿತ್ತೆಂದರೆ ಹೊತ್ತಾದ ಮೇಲೆ ಅದು ಹೇಗೆ ಬೆಳೆಯುತ್ತಾ ಹೋಗುತ್ತೆ ಅಂತ ಲೆಕ್ಕ ಹಾಕಿ. ಇನ್ನು ಧರ್ಮದರ್ಶನದ ಕ್ಯೂಗಳು ಎಷ್ಟುದ್ದ ಇರತ್ತೆ ಅಂತ ಹೇಳ್ದೇ ಇದ್ರೆ ಒಳ್ಳೇದೇನೋ! ಅಂದಹಾಗೆ ಧರ್ಮದರ್ಶನದ ಕ್ಯೂನಲ್ಲೋ ವಿಶೇಷ ಕ್ಯೂನಲ್ಲೋ ರಾತ್ರಿ ಬಂದಿದ್ರಿ ಅಂತಿಟ್ಕೊಳಿ. ಹನ್ನೆರಡರ ಒಳಗೆ ದೇಗುಲದ ಪ್ರಾಗಂಣಕ್ಕೆ ಬಂದಿದ್ರೆ ಅಂತಹವರಿಗೆ ರಾತ್ರಿ ೨ರವರೆಗಿನ ದರ್ಶನಕ್ಕೆ ಅವಕಾಶ. ನಂತರ ಬಂದೋರು ಬೆಳಗ್ಗೆ ಆರರವರೆಗೆ ಮತ್ತೆ ಕಾಯಬೇಕಾಗುತ್ತೆ.

ದೇಗುಲದ ವೈಶಿಷ್ಟ್ಯತೆ ಮತ್ತು ಸುತ್ತಲಿರೋ ದಂತಕತೆಗಳು:
ಈ ವರ್ಷ ಅಕ್ಟೋಬರ್ ೨೦ಕ್ಕೆ ತೆಗೆದಿದ್ದ ಈ ದೇಗುಲ ೩೧ಕ್ಕೆ ಮುಚ್ಚುತ್ತೆ. ಹಿಂದಿನ ವರ್ಷ ಮುಚ್ಚೋ ಸಮಯದಲ್ಲಿ ದೇಗುಲದಲ್ಲಿ ಅಕ್ಕಿ,ದೀಪ, ಮಲ್ಲಿಗೆ ಹೂಗಳನ್ನು ಇಟ್ಟು ಬಾಗಿಲು ಹಾಕಿರುತ್ತಾರಂತೆ. ಮುಂದಿನ ವರ್ಷ ಬಾಗಿಲು ತೆಗೆಯುವಾಗ ಆ ಅಕ್ಕಿ ಅನ್ನವಾಗಿರುತ್ತೆ, ದೀಪ ನಂದದಂತೆ ಹಾಗೇ ಇರುತ್ತೆ ಮತ್ತೆ ಮಲ್ಲಿಗೆ ಹೂ ಬಾಡದಂತಿರುತ್ತೆ ಅನ್ನೋ ನಂಬಿಕೆಯಿದೆ. ಈ ದೇಗುಲದ ಬಾಗಿಲು ಹಾಕಿದ ದಿನ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆಯಂತೆ. ಆ ಸಮಯದಲ್ಲಿ ದೇವರ ಮೇಲೆ ಬೀರಿ ಕೆಳಗೆ ಬಿದ್ದ ಕಾಳುಮೆಣಸನ್ನು ಆರಿಸಿಟ್ಟುಕೊಂಡರೆ ಒಳ್ಳೆಯದಾಗುತ್ತೆ ಎನ್ನೋ ನಂಬಿಕೆಯಿದೆ. ಈ ದೇಗುಲ ತೆಗೆದ ಸಂದರ್ಭದಲ್ಲಿನ ಪ್ರತೀ ಶುಕ್ರವಾರವೂ ರಾತ್ರಿ ವಿಶೇಷ ಪೂಜೆ ನಡೆಯುತ್ತೆ.ಅದಕ್ಕೆ "ಮಗಾರ ಪೂಜೆ" ಅಂತ ಹೆಸರು. ಈ ಪೂಜೆಯಲ್ಲಿ ಪಾಲ್ಗೊಳ್ಳೋ ೭ ಜನ ಮುತ್ತೈದೆಯರು ಬೆಳಗಿನಿಂದ ಏನನ್ನೂ ತಿನ್ನುವಂತಿಲ್ಲ,ಕುಡಿಯುವಂತಿಲ್ಲ. ಅವರಿಗೆ ರಾತ್ರೆ ಇಲ್ಲಿಯೇ ಉಪ್ಪು-ಖಾರವಿಲ್ಲದ ಊಟ. ಆ ಪೂಜೆ ಶುಕ್ರವಾರ ರಾತ್ರೆ ೧೧ಕ್ಕೆ ನಡೆಯೋದ್ರಿಂದ ಆ ಸಂದರ್ಭದಲ್ಲಿ ರಷ್ಷು ಜಾಸ್ತಿಯಾಗುತ್ತೆ. ಇಲ್ಲಿನ ದೇವಿಗೆ ಹರಕೆಯಾಗಿ ಸೀರೆ, ಬಳೆ, ಸೋಬಲಕ್ಕಿ(ಸೀರೆಯಲ್ಲಿ ಅಕ್ಕಿ, ಕಾಯಿ,ಬಳೆ ಎಲ್ಲಾ ಹಾಕಿ ಕೊಡೋದು)ಗಳನ್ನು ಅರ್ಪಿಸುತ್ತಾರೆ.

ದೇಗುಲಕ್ಕೆ ಬೇರೆ ಸಮಯದಲ್ಲಿ ಹೋಗೋಕಾಗುಲ್ವಾ ? ಹೋದರೆ ನೋಡೋಕೇನಿದೆಯಲ್ಲಿ
ಹಾಸನಾಂಬಾ ದೇಗುಲಕ್ಕೆ ವರ್ಷದಲ್ಲಿ ಆ ದೇವಿ ತೆಗೆದಿರೋ ಸಮಯ ಬಿಟ್ಟು ಬೇರೆ ಸಮಯದಲ್ಲೂ ಹೋಗಬಹುದು. ಅಲ್ಲಿನ ದೇಗುಲದ ಗರ್ಭಗೃಹ ತೆರೆಯೋದು ವರ್ಷದ ಹತ್ತು-ಹನ್ನೆರಡು ದಿನಗಳು ಮಾತ್ರವಾದರೂ ಅಲ್ಲಿರುವ ದೇವಿಯ ಪಾದುಕೆಯನ್ನು ಪ್ರತೀ ಸೋಮವಾರ ಸಂದರ್ಶಿಸಬಹುದು. ಅದರ ಪಕ್ಕದಲ್ಲೇ ಇರೋ ದರ್ಬಾರ್ ಗಣಪತಿ ಗುಡಿ ಪ್ರತಿದಿನವೂ ತೆಗೆದಿರುತ್ತೆ. ಹಾಗೆಯೇ ಪಕ್ಕದಲ್ಲಿರೋ ಸಿದ್ದೇಶ್ವರ ಸ್ವಾಮಿ, ಗಣಪತಿ ಮತ್ತು ಉತ್ಸವ ಮೂರ್ತಿಗಳನ್ನೂ ಪ್ರತಿ ದಿನ ಸಂದರ್ಶಿಸಬಹುದು. ಆದರೆ ಸೋಮವಾರ ಮಾತ್ರ ಇಲ್ಲಿಗೆ ಹೆಚ್ಚಿನ ಜನ ಬರುತ್ತಾರೆ.ದೇವಿಯ ಪಾದ ಅವತ್ತು ಮಾತ್ರ ದರ್ಶನಕ್ಕೆ ಸಿಗೋ ಕಾರಣದಿಂದಿರಬಹುದೇನೋ ಅದು.
ಬರ್ಯೋಕೆ ಹೋದ್ರೆ ಇದ್ರ ಬಗ್ಗೆ ಇನ್ನೂ ಸಾಕಷ್ಟು ವಿಷ್ಯಗಳಿರುತ್ತೆ. ಆದ್ರೆ ಸದ್ಯಕ್ಕಿಷ್ಟು ಸಾಕೆನ್ನುತ್ತಾ , ಇನ್ನೂ ಹೋಗ್ಬರ್ದೇ ಇರೋರಿಗೆ ಅಲ್ಲಿಗೆ ಹೋಗ್ಬರೋಕೆ ನಾಳೆನೇ ಕೊನೇ ದಿನ ಅನ್ನುತ್ತಾ, ಅಲ್ಲಿನ ಪಯಣಕ್ಕೆ , ಮಾಹಿತಿಗೆ ಗೈಡಾಗಿದ್ದ ಕಾವ್ಯ Kavyashree Bharadwaj , ದಿವ್ಯ Divya Shree  ರಿಗೆ ಧನ್ಯವಾದಗಳನ್ನರ್ಪಿಸುತ್ತಾ ಸದ್ಯಕ್ಕೆ ವಿರಮಿಸುತ್ತೇನೆ

Sunday, October 16, 2016

ಆಗುಂಬೆಯ ಜೋಗಿಗುಂಡಿ, ಭರ್ಕಣ,ಒನಕೆ ಅಬ್ಬಿ ಜಲಪಾತಗಳು


At bharkana falls view point

ಪೀಠಿಕೆ:
ಆಗುಂಬೆಯ ಭರ್ಕಣ,ಒನಕೆ ಅಬ್ಬಿ ಜಲಪಾತಕ್ಕೆ ಹೋಗೋ ಪ್ಲಾನಿದೆ ಬರ್ತೀರ ಅಂತ ಟ್ರೆಕ್ಕರ್ ಶಿವಸುಬ್ರಹ್ಮಣ್ಯ ಹೇಳ್ದಾಗ ಮರುಮಾತಿಲ್ದೇ ಜೈಯೆಂದಿದ್ದೆ. ದಶಮಿ ಹಬ್ಬಕ್ಕೆ ಸೋಮವಾರ, ಮಂಗಳವಾರಗಳೂ ರಜಾ ಸಿಕ್ಕಿದ್ರಿಂದ ಆರಾಮಾಗಿ ಹೋಗ್ಬರಬಹುದು ಅಂತ ನನೈಡಿಯ. ಆದ್ರೆ ಬೆಂಗ್ಳೂರಿಂದ ಶುಕ್ರವಾರ ರಾತ್ರಿ ೧೦ಕ್ಕೆ ಹೊರಡಬೇಕಾದವ್ನು ಟ್ರಾಫಿಕ್ಕಲ್ಲೇ ೨ಘಂಟೆ ಲೇಟಾಗಿ ೧೧:೩೦ಕ್ಕೆ ಹೊರಟರೂ ೨:೧೫ ಆದ್ರೂ ಯಶವಂತಪುರನೇ ದಾಟಕ್ಕಾಗಲ್ಲ ಅಂತೆಂತೂ ಅಂದ್ಕೊಂಡಿರಲಿಲ್ಲ :-) ಯಶವಂತಪುರದ ಬಳಿ ಅಡ್ಡಾದಿಡ್ಡಿ ನಿಲ್ಸಿರೋ ಖಾಸಗಿ ಬಸ್ಸುಗಳು, ಮಧ್ಯಮಧ್ಯ ರಸ್ತೆಗೆ ಡಾಂಬರು ಹಾಕ್ಬೇಕು ಅಂತ ಅರ್ಧರ್ಧ ರಸ್ತೆಗಳನ್ನೇ ಬ್ಲಾಕ್ ಮಾಡಿದ್ದು, ಹಬ್ಬಕ್ಕೇಂತ್ಲೇ ಹೊರಟು ನಿಂತ ಎಲ್ಲಾ ಜನಗಳಿಂದ ರಸ್ತೆಗಳೆಲ್ಲಾ ತುಂಬಿ ತುಳುಕಿ ಭವ್ಯ ಬೆಂಗಳೂರಿಗೆ ನಮೋ ಎಂದ ಬಸ್ಸುಗಳೆಲ್ಲಾ ನಿಂತಲ್ಲೇ ಮಲಗಿಬಿಟ್ಟಿದ್ವು ! ಅಂತೂ ಯಶವಂತಪುರ ದಾಟಿದ್ಮೇಲೆ ಬಸ್ಸು ಬಸ್ಸಂತೆ ಮುಂದೆಹೊರಟಿದ್ದು, ನಮಗೊಂದಿಷ್ಟು ನಿದ್ರಾಭಾಗ್ಯ ದಕ್ಕಿದ್ದು. ಬಸ್ಸು ಲೇಟಾಗೋದ್ರೊಂದಿಗೆ ಬೆಳಗ್ಗೆ ನಾಲ್ಕೂವರೆ ಶಿವಮೊಗ್ಗ ತಲುಪಿ ಆರಕ್ಕೆ ಆಗುಂಬೆಗೆ ಹೊರಡಬೇಕು ಅಂತಿದ್ದ ನಮ್ಮ ಪ್ಲಾನು ಮಕಾಡೆ ಮಲಗಿದ್ದೂ ಆಯ್ತು. ಹಿಂದಿನ ದಿನವೇ ಲೇಟಾದ ಕತೆ ಹೇಳಿದ್ರಿಂದ ಆರರವರೆಗಾದ್ರೂ ಬರ್ಬೋದೇನೋ ಅಂದ್ಕೊಂಡಿದ್ದ ಶಿವಣ್ಣ ಆರಕ್ಕೆ ಫೋನ್ ಮಾಡಿದ್ರೆ ನಾನು ಬೀರೂರು ದಾಟಿ ತರೀಕರೆ ಹತ್ರತ್ರ ಬಂದಿದ್ದೆ ಅಷ್ಟೆ . ಶಿವಮೊಗ್ಗಕ್ಕೆ ಬರೋದು ಏಳೂವರೆ ಆಗ್ಬೋದು, ಎಂಟಕ್ಕೆ ಹೊರಡೋಣ. ಎರಡೂ ಜಾಗಗಳಾಗದಿದ್ರೆ ಒಂದಾದ್ರೂ ನೊಡೋಣ ಅಂತ ಪ್ಲಾನನ್ನ ಸ್ವಲ್ಪ ಬದಲಾಯಿಸಾಯ್ತು.

ಮಂಡಗದ್ದೆಯಾಸಿ ನಾವು
Mandagadde Vird Sanctuary
ಬೆಳಗ್ಗೆಯೇ ಶಿವಮೊಗ್ಗದ ಅಜ್ಜಿಮನೆಗೆ ಭೇಟಿಯಿತ್ತು, ಆರಾಮಾ ಅಂತ ಆಸ್ರಿಗೆ ಕುಡಿದು, ರೆಡಿಯಾಗಿ ಎಂಟೂಮುಕ್ಕಾಲರ ಹೊತ್ತಿಗೆ ಬಸ್ಟಾಂಡಿಗೆ ತಲುಪಿದ್ರೂ ಬಸ್ ಸಿಕ್ಕಿದ್ದು ಒಂಭತ್ತಕ್ಕೆ. ತೀರ್ಥಹಳ್ಳಿಗೆ ಹೋಗಿ ಅಲ್ಲಿಂದ ಆಗುಂಬೆಗೆ ಬೇರೆ ಬಸ್ಸಿಡಿಯೋ ಪ್ಲಾನಲ್ಲಿದ್ದ ನಮಗೆ ಆಗುಂಬೆ ಬಸ್ಸೇ ಸಿಕ್ಕಿದ್ದು ಒಳ್ಳೇದಾಗಿತ್ತು. ಕಾಲೇಜ್ ಮೇಟ್ ರಂಜಿತ್ ಕೂಡ ಅದೇ ಬಸ್ಸಲ್ಲಿ ಉಡುಪಿಗೆ ಹೊರಟಿದ್ರಿಂದ ನಮ್ಮ ಮಾತಿಗೆ ಜೊತೆ ಸಿಕ್ಕಿತ್ತು. ಮಂಡಗದ್ದೆ ಬಳಿಯ ಹಿನ್ನೀರಿನಲ್ಲಿ ಮರಗಳ ಪ್ರತಿಬಿಂಬವನ್ನು ಸವಿಯುತ್ತಾ ಮಲೆನಾಡೇ ಬರಗಾಡಾಗ್ತಿರೋ ಬಗ್ಗೆ ಮಾತಾಡ್ತಿರೋವಾಗ್ಲೇ ಮಂಡಗದ್ದೆ ಪಕ್ಷಿಧಾಮದ ಸ್ಟಾಪು. ಮಂಡಗದ್ದೆ ಅಂದ್ರೆ ರಂಗನತಿಟ್ಟು,ಗುಡವಿ ರೇಂಜಿಗೆ ದೊಡ್ಡದಿರುತ್ತೆ ಅಂದ್ಕೊಂಡಿದ್ದ ನನಗೆ ಭ್ರಮನಿರಸನವಾಗಿತ್ತು. ಎದ್ರಿಗೊಂದಿಷ್ಟು ಮರ. ಅದ್ರ ಮೇಲೊಂದಿಷ್ಟು ಹಕ್ಕಿಗಳು ! ಮಂಡಗದ್ದೆ ಅಂದ್ರೆ ಸಖತ್ ದೊಡ್ಡ ಪಕ್ಷಿಧಾಮ ಅಂದ್ಕೋಬೇಡಿ. ಇದಿರೋದೇ ಈ ತರ, ಇಲ್ಲಿಗೇ ಅಂತ್ಲೇ ನಾ ಬಂದಿದ್ದೆ ಒಂದ್ಸಲ ಅಂತ ಶಿವಣ್ಣ ಹೇಳ್ತಾ ಇದ್ರೆ ಇಲ್ಲಿ ಇಳಿಯದೇ ಒಳ್ಳೆ ಕೆಲ್ಸ ಮಾಡಿದ್ವಾ ಅನಿಸ್ತಾ ಇತ್ತು. ಅಲ್ಲಿಂದ ಮುಂದೆ ಸಾಗಿದ ನಾವು ಹತ್ತೂಹತ್ತಕ್ಕೆ ತೀರ್ಥಹಳ್ಳಿಗೆ ತಲುಪಿ ೧೧:೨೫ಕ್ಕೆ ಆಗುಂಬೆ ತಲುಪಿದ್ವಿ. ಶಿವಮೊಗ್ಗದಿಂದ ಆಗುಂಬೆಗೆ ೯೩ ಕಿ.ಮೀ ದೂರ. ಸುಮಾರು ೨ ಘಂಟೆಯ ಪಯಣ. ಅದೇ ಸಾಗರದಿಂದ ಹೋಗೋದಾದ್ರೆ ೧೦೮ ಕಿ.ಮೀ. ತೀರ್ಥಹಳ್ಳಿಯಿಂದ ಸಾಗರಕ್ಕೇ ಬಸ್ಸಲ್ಲಿ ಎರಡು ಘಂಟೆ ತಗೋತಾರೆ :-)
<script async src="https://pagead2.googlesyndication.com/pagead/js/adsbygoogle.js"></script>
<ins class="adsbygoogle"
     style="display:block"
     data-ad-format="fluid"
     data-ad-layout-key="-gq-2e-1k-1g+qa"
     data-ad-client="ca-pub-5071889101438500"
     data-ad-slot="7647446493"></ins>
<script>
     (adsbygoogle = window.adsbygoogle || []).push({});
</script>

ಮೇಗರವಳ್ಳಿ ಸುತ್ತಮುತ್ತ:ಆಗುಂಬೆಗಿಂತ ಮುಂಚೆ ಮೇಗರವಳ್ಳಿ ಅಂತ ಸಿಗುತ್ತೆ. ಇದು ಸಕಲೇಶಪುರದಿಂದ ಮುಂದೆ ಸಿಗೋ ಬ್ಯಾಕರವಳ್ಳಿ ಜಂಕ್ಷನ್ ತರ.ಇಲ್ಲಿಂದ ೨೨ ಕಿ.ಮೀ ಆಗುಂಬೆಗೆ. ಇಲ್ಲಿಂದ ಶೃಂಗೇರಿ, ಕುಂದಾದ್ರಿಗೆ ಹೋಗಬಹುದು. ಇಲ್ಲಿಂದ ಕುಂದಾದ್ರಿ ಬೆಟ್ಟಕ್ಕೆ ೫ ಕಿ.ಮೀ ಅಷ್ಟೆ.ಆಗುಂಬೆಗೆ ಬಂದರೆ ಅಲ್ಲಿಂದ ೨ ಕಿ.ಮೀ ದೂರದಲ್ಲಿ ಸೂರ್ಯಾಸ್ತ ತಾಣ, ೧.೫ ದಾಟಿ, ೩ ಕಿ.ಮೀ ಟ್ರೆಕ್ ಮಾಡುವ ನಿಶಾನಿ ಮೊಟ್ಟೆ, ೬ ಕಿ.ಮೀ ದೂರದಲ್ಲಿ ೨೧ ಕಿ.ಮೀ ಟ್ರೆಕ್ಕಿಂಗಿನ ನರಸಿಂಹ ಪರ್ವತಗಳಿವೆ. ನರಸಿಂಹ ಪರ್ವತ ಹೆಸರಿನಷ್ಟೇ ಭಯಾನಕ ಟ್ರೆಕ್ಕಿಂಗು. ಯಾಕೆ ಅಂತೀರಾ ? ಸಖತ್ ದೂರ ಮತ್ತು ಆಗುಂಬೆಯಲ್ಲಿರೋ ವಿಪರೀತ ಜಿಗಣೆಗಳ ಕಾರಣದಿಂದಾಗಿ.

ಜೋಗಿಗುಂಡಿ ಜಲಪಾತ
ಆಗುಂಬೆಗೆ ತಲುಪಿದ ನಾವು ಒನಕೆ ಅಬ್ಬಿ ಫಾಲ್ಸಿಗೆ ಮೊದಲು ಹೋಗೋ ಪ್ಲಾನಿದ್ದರಿಂದ ಅಲ್ಲಿಗೆ ಹೋಗೋಕೆ ಪರ್ಮೀಷನ್ ಬೇಕಾ ಅಂತ ಕೇಳ್ತಾ ಇದ್ವಿ. ಅದು ಕುದುರೆಮುಖ ವನ್ಯಜೀವಿ ವಿಭಾಗ, ಸೋಮೇಶ್ವರ ಅಭಯಾರಣ್ಯದ ವ್ಯಾಪ್ತಿಯಲ್ಲಿ ಬರೋದ್ರಿಂದ ಅರಣ್ಯ ಇಲಾಖೆಯ ಪರ್ಮೀಷನ್ ಬೇಕೂಂತ ಕೆಲವು ಬ್ಲಾಗುಗಳಲ್ಲಿ ಬರದಿದ್ರೆ, ಬೇಡಾಂತ ಕೆಲವು ಬ್ಲಾಗುಗಳಲ್ಲಿದೆ. ಅಲ್ಲಿ ಅಂಗಡಿಗಳಲ್ಲೂ ಕೆಲವರು ಪರ್ಮೀಷನ್ ಬೇಡ ಅಂತ ಇನ್ನು ಕೆಲವ್ರು ಪರ್ಮೀಷನ್ ಬೇಕಾದ್ರೆ ಅಲ್ಲಿ ಎದ್ರಿಗಿರೋ ಪೋಲೀಸ್ ಸ್ಟೇಷನ್ನಲ್ಲಿ ಪರ್ಮೀಷನ್ ತಗೊಳ್ಳಿ ಅಂತ !! ಆಟೋದವ್ರಿಗೆ ಕೇಳಿದ್ರೆ ಸುಮಾರು ಸುಲಿಗೆ ಮಾಡ್ತಾರೆ ಗುರು, ಪೋಲೀಸ್ ಸ್ಟೇಷನ್ನಿಗೇ ಹೋಗೋಣ ಅಂತ ಶಿವಣ್ಣ :) ಅರಣ್ಯ ಇಲಾಖೆಗೆ ಸಂಬಂಧಪಟ್ಟ ಚಾರಣಕ್ಕೆ ಪೋಲೀಸ್ ಸ್ಟೇಷನ್ನಿಂದ್ಯಾಕೆ ಪರ್ಮೀಷನ್ ಗುರು, ಆಟೋದವ್ರಿಗೆ ಪಕ್ಕಾ ಗೊತ್ತಿರುತ್ತೆ, ಸ್ವಲ್ಪ ಜಾಸ್ತಿಯಾದ್ರೂ ಪರ್ವಾಗಿಲ್ಲ, ಕರೆಕ್ಟಾಗಿ ಹೇಳೋದು ಅವ್ರೇ ಅಂತ ಆಟೋ ಸ್ಟಾಂಡಿಗೇ ಹೋದ್ವಿ. ಶಿವಣ್ಣ ಹಿಂದಿನ ವಾರ ಚಾರಣಕ್ಕೆ ಅಂತ ಇಲ್ಲಿಗೇ ಬಂದಾಗ ಅವ್ರನ್ನ ಆಗುಂಬೆಯಿಂದ ೨ ಕಿ.ಮೀ ದೂರದಲ್ಲಿರೋ ಸೂರ್ಯಾಸ್ತದ ತಾಣಕ್ಕೆ ಬಿಟ್ಟ ಡ್ರೈವರೊಬ್ರಿದ್ರಂತೆ. ಅವ್ರನ್ನೇ ಆಟೋ ಸ್ಟಾಂಡಲ್ಲಿ ಕಂಡ ಶಿವಸುಬ್ರಹ್ಮಣ್ಯ ಅವ್ರತ್ರನೇ ಹೋದ್ರು. ಆಟೋದವ್ರು ಒನಕೆ ಅಬ್ಬಿಗೆ ಜಾಸ್ತಿ ದೂರವಿಲ್ಲ. ಅಲ್ಲಿಗೆ ೩೦ ರೂ ಚಾರ್ಜು ತಗೋತೀವಷ್ಟೆ. ಆದ್ರೆ ನೀವು ಜೋಗಿ ಗುಂಡಿ ನೋಡಿಲ್ಲ ಅಂದ್ರೆ ಅಲ್ಲಿಗೆ ಹೋಗಿ. ಅಲ್ಲಿಂದ ಭರ್ಕಣಕ್ಕೂ ಕರ್ಕೊಂಡು ಹೋಗ್ತೇನೆ. ಎರಡೂ ಮಧ್ಯಾಹ್ನದ ನೋಡಿದ್ರೆ ಮಧ್ಯಾಹ್ನ ಒನಕೆ ಅಬ್ಬಿಗೆ ತಗೊಂಡು ಹೋಗಿ ಬಿಡ್ತೇನೆ. ಅದ್ನೂ ನೋಡಿದ್ರೆ ಸಂಜೆಗೆ ನಿಶಾನಿ ಮೊಟ್ಟೆಯನ್ನೂ ನೋಡ್ಬೋದು ಅಂದ ಅವ ! ಗುರೂ ಈಗ್ಲೇ ಹನ್ನೊಂದೂವರೆ. ಇದೆಲ್ಲಾ ಆಗತ್ತಾ ಅಂದ್ರೆ, ಬೇಗ್ಬೇಗ ನೋಡಿದ್ರೆ ಎಲ್ಲಾ ಆಗತ್ತೆ ಅಂದ. ಸರಿ, ಎಲ್ಲಾ ಆಗದಿದ್ರೂ ಮೊದಲ ಮೂರೆಂತೂ ನೋಡ್ಬೋದು ಅಂದ್ಕೊಂಡು ಅವ್ನ ಪ್ಲಾನಿಗೆ ಒಪ್ಪಿ ಅವನ ಆಟೋ ಹತ್ತಿದ್ವಿ. ಮುಂದಿನ ಬಾರಿ ಆಗುಂಬೆಯ ಫಾಲ್ಸುಗಳನ್ನ ನೋಡೋಕೆ ಬರೋದಿದ್ರೆ ಪರ್ಮಿಟ್ಟು ಅಂತ ಎಲ್ಲೂ ಸಮಯ ವ್ಯರ್ಥ ಮಾಡ್ಬೇಡಿ. ಸೀದಾ ಯಾವ್ದಾದ್ರೂ ಆಟೋ ಹತ್ತಿ. ಜೋಗಿಗುಂಡಿ ಹತ್ರ ಅರಣ್ಯ ಇಲಾಖೆಯವ್ರು ಒಬ್ರಿರ್ಥಾರೆ. ಅವ್ರತ್ರ ೨೦೦ರೂನ ಟಿಕೇಟ್ ತಗೊಳ್ಳಿ. ಆ ಟಿಕೇಟಲ್ಲಿ ಜೋಗಿ ಗುಂಡಿ, ಭರ್ಕಣ, ಒನಕೆ ಅಬ್ಬಿ, ನಿಶಾನಿ ಮೊಟ್ಟೆ ಅಷ್ಟೇ ಅಲ್ದೇ ನರಸಿಂಹ ಪರ್ವತವನ್ನೂ ನೋಡಬಹುದು ! ಈ ಐಡಿಯಾ ಕೊಟ್ಟಿದ್ದು ನಮಗೆ ಅಲ್ಲಿದ್ದ ಅರಣ್ಯ ಇಲಾಖೆಯವ್ರು ಮತ್ತು ಮತ್ತು ನಮ್ಮ ಆಟೋ ವಾಲಾ ರಜಾಕ್ :-)

ಆಗುಂಬೆಯಿಂದ ೫ ಕಿ.ಮೀ ದೂರವಿರೋ ಜೋಗಿಗುಂಡಿಗೆ ೧೧:೪೫ ಕ್ಕೆ ತಲುಪಿದ ನಾವು ಅಲ್ಲೇ ಆಟೋ ನಿಲ್ಲಿಸಿ, ೨೦೦ ರೂ ನ ಟಿಕೇಟ್(ಅದು ಒಂದು ಗ್ರೂಪಿಗೆ,ಒಬ್ಬರಿಗಲ್ಲ :-) ) ಪಡೆದು ಸುಮಾರು ಒಂದು ಕಿ.ಮೀ ದೂರವಿರೋ ಜೋಗಿಗುಂಡಿ ಜಲಪಾತ ನೋಡೋಕೆ ಸ್ವಲ್ಪ ಕಾಡ ಹಾದಿ, ನಂತರವಿರೋ ಮೆಟ್ಟಿಲುಗಳಲ್ಲಿ ಸಾಗಿದ್ವಿ. ಇಲ್ಲಿ ವಾಹನಗಳಲ್ಲಿ ಬರೋರಿಗೆ ದ್ವಿಚಕ್ರ ವಾಹನಗಳಿಗೆ ೧೦,  ಕಾರು, ಟ್ಯಾಕ್ಸಿ, ಆಟೋಗಳಿಗೆ ೩೦ ಮತ್ತು ಬಸ್ಸು, ಟೆಂಪೋಗಳಿಗೆ ೫೦ರ ಪಾರ್ಕಿಂಗ್ ಶುಲ್ಕವಿದೆ. ಆದ್ರೆ ಜಾಸ್ತಿ ಜನ ಬಂದರೆ ಪಾರ್ಕಿಂಗ್ ಶುಲ್ಕ ನಗಣ್ಯವೆನಿಸುತ್ತೆ ಮತ್ತೆ ಪರ್ಮಿಟ್ಟೂ ವರ್ಕೌಟ್ ಆಗುತ್ತೆ :-) ಇದು ಅಂತಾ ದೊಡ್ಡ ಜಲಪಾತವೇನಲ್ಲ. ಅದ್ರ ಬಗ್ಗೆ ಬರೆಯೋ ಬದಲು ಅದ್ರ ಚಿತ್ರಗಳನ್ನೇ ಹಾಕೋದು ಮೇಲನಿಸುತ್ತೆ. 


Side stream of the Jogigundi Falls

Main stream of the Jogigundi falls which is dried up now(At the center)
Way to JogiGundi falls
Huge tree roots on the way to Bharkana falls
 ಭರ್ಕಣ ಜಲಪಾತ
ಇಲ್ಲಿಂದ ಮುಂದೆ ನಾಲ್ಕು ಕಿ.ಮೀ ಸಾಗಿದ್ರೆ ಬರ್ಕಣ ಜಲಪಾತದ ತಿರುವು ಸಿಗುತ್ತೆ. ಇವೆರಡೂ ಜಲಪಾತಗಳು ಮಲಂದೂರು ಗ್ರಾಮದ ವ್ಯಾಪ್ತಿಗೆ ಬರುತ್ತೆ. ಭರ್ಕಣಕ್ಕೆ ಹೋಗದೇ ಹಾಗೇ ಮುಂದೆ ಹೋದರೆ ನರಸಿಂಹ ಪರ್ವತಕ್ಕೂ ಹೋಗಬಹುದಂತೆ. ಮಲಂದೂರಲ್ಲಿ ಬರ್ಕಣ ಜಲಪಾತಕ್ಕೆ ಬಲಕ್ಕೆ ತಿರುಗಿ ಮಣ್ಣ ರಸ್ತೆಯಲ್ಲಿ ಹೋಗಬೇಕು. ಅಲ್ಲಿಂದ ಭರ್ಕಣ ಜಲಪಾತದ ವೀಕ್ಷಣಾ ತಾಣದವರೆಗೂ ಮಣ್ಣ ರಸ್ತೆಯಿದೆ. ಆದ್ರೆ ಸುಮಾರು ಒಂದೂವರೆ ಕಿ.ಮೀ ದಾಟುತ್ತಿದ್ದಂಗೆ ಒಂದು ಗೇಟಿದೆ. ಆ ಗೇಟ್ ಬಳಿ ಯಾರೂ ಇರದಿದ್ದರೂ ಆ ಗೇಟು ಯಾವಾಗ್ಲೂ ಹಾಕಿರುತ್ತೆ. ಹಂಗಾಗಿ ಆಟೋದಲ್ಲಿ ಬರುವವರು ಇಲ್ಲಿಯವರೆಗೆ ಬರಬಹುದು. ಇಲ್ಲಿಂದ ಮುಂದೆ ಸುಮಾರು ನಾಲ್ಕು ಕಿ.ಮೀ ನಡೆದ್ರೆ ಭರ್ಕಣ ಜಲಪಾತದ ವೀಕ್ಷಣಾ ತಾಣ ಸಿಗುತ್ತೆ.
Shivasubramanya @The Bharkana Gate. Our auto can be seen at the back
 ೧೨:೨೦ ಕ್ಕೆ ಜೋಗಿಗುಂಡಿಯ ಕ್ರಾಸ್ ಬಿಟ್ಟಿದ್ದ ನಾವು ೧೨:೩೦ಕ್ಕೆ ಭರ್ಕಣದ ಆ ಗೇಟಿನ ಬಳಿ ತಲುಪಿದ್ವಿ. ಆ ಆಟೋ ರಜಾಕರ ಪ್ರಕಾರ ಇಲ್ಲಿಂದ ನಡೆಯೋಕೆ ಅರ್ಧ ಘಂಟೆ, ಅಲ್ಲಿ ಅರ್ಧ ಘಂಟೆ, ವಾಪಾಸ್ ಬರೋಕೆ ಅರ್ಧ ಘಂಟೆ.ಬೇಗ ನಡೆದ್ರೆ ಇನ್ನೂ ಬೇಗ ಬರಬಹುದು. ಹಂಗಾಗಿ ನಾನು ೨ಕ್ಕೆ ಇಲ್ಲಿಗೆ ಮರಳಿ ಬರ್ತೀನಿ ಅಂತಿದ್ರು ಅವ್ರು. ಏ, ಅಷ್ಟು ಬೇಗ ಬೇಡ, ಎರಡೂ ಕಾಲಿಗೆ ಬನ್ನಿ ಅಂತ ನಾನು. ೧೨:೩೫ಕ್ಕೆ ಗೇಟಿಂದ ಬಿಟ್ಟ ನಾವು ೧:೧೫ಕ್ಕೆ ವೀಕ್ಷಣಾ ತಾಣ ತಲುಪಿದ್ವಿ. ಅಲ್ಲಿಂದ ೧:೫೦ಕ್ಕೆ ಹೊರಟ ನಾವು ೨:೨೦ಕ್ಕೆ ವಾಪಾಸ್ ಬಂದಿದ್ವಿ. ಮಧ್ಯ ಅಲ್ಲಲ್ಲಿ ಕೊಟ್ಟ ಫೋಟೋಗ್ರಾಫಿ ಬ್ರೇಕುಗಳನ್ನೂ ಸೇರಿಸಿ :-) ಚಿತ್ರಗಳಿಲ್ದೇ ಅಲ್ಲಿನ ಅನುಭವಗಳನ್ನು ಹೇಳೋದು ಕಷ್ಟವಾಗಿದ್ರಿಂದ ಚಿತ್ರಗಳ ಅಡಿ ಟಿಪ್ಪಣಿಗಳಲ್ಲೇ ಅಲ್ಲಿನ ಅನುಭವಗಳನ್ನು ಕಟ್ಟಿಕೊಡೋಕೆ ಪ್ರಯತ್ನಿಸ್ತೇನೆ.ಅದ್ರಲ್ಲೂ ಮಳೆಯ ನಾಡ ಜಲಧಾರೆಗೆ ಬಿಸಿಲು ಸೋಕದಂತೆ ಅಡ್ಡಬರೋ ಮೋಡ ಟೋಪಿಯಂತೆ ಕಾಣೋದು, ಸುತ್ತ ಹಸಿರ ಕೇಶರಾಶಿಯ ಮಧ್ಯ ಬೈತಲೆಯಂತೆ ಸಾಗುವ ಕಣಿವೆ, ಬಿಸಿಲು ನೆರಳುಗಳ ಆಟದಲ್ಲಿ ನಿಮಿಷ ನಿಮಿಷಕ್ಕೂ ಬದಲಾಗೋ ಪ್ರಕೃತಿಯನ್ನು ಸವಿಯೋಕೆ ಅಲ್ಲಿಯೇ ಹೋಗಬೇಕು. ಆ ಸವಿಯನ್ನು ಸವಿಯೋಕೆ ಆಗುಂಬೆಯ ಅತಿರಸ, ಬಾಳೆಕಾಯಿ ಚಿಪ್ಸುಗಳಿದ್ದರಂತೂ ಇನ್ನೂ ಸುಖ :-)
Greenery on the way to Bharkana falls

Bharkana view point
Bharkana falls

View of Nature @Bharkana view point


ಮಳೆಯ ನಾಡ ಜಲಧಾರೆಗೆ ಬಿಸಿಲು ಸೋಕದಂತೆ ಮೋಡದ ಟೋಪಿ
ಆಗುಂಬೆಯ ಮಧ್ಯಾಹ್ನದೂಟ
ಆಗುಂಬೆಯಲ್ಲಿ ಮಧ್ಯಾಹ್ನದೂಟಕ್ಕೆ ಹಲವಾರು ಆಯ್ಕೆಗಳಿವೆ. ಅದರಲ್ಲಿ ನಾನಿಷ್ಟಪಡೋ ಆಯ್ಕೆ ಆಗುಂಬೆಯ ಕೇಂದ್ರಭಾಗದಲ್ಲಿರೋ ಅಮ್ಮ ಮನೆ. ಹಿಂದಿನ ಸಲ ಬಾಲಣ್ಣನ ಜೊತೆಗೆ ಅಲ್ಲಿಗೆ ಹೋದಾಗ ಅಮ್ಮನ ಮನೆ ಊಟ ಸವಿಯೋದಲ್ಲದೇ ಅವರ ಸಂದರ್ಶನವನ್ನೂ ಮಾಡಿದ್ದ ನಾನು ಆಗಲೇ ಎರಡೂಮುಕ್ಕಾಲಾಗಿದ್ರಿಂದ ಅಲ್ಲಿಗೆ ಹೋಗಿ ತೊಂದರೆ ಕೊಡಲಿಷ್ಟಪಡದೇ ಬೇರೆ ಹೋಟೇಲಿಗೆ ಹೋಗೋಕೆ ಇಷ್ಟಪಡ್ತಿದ್ವಿ. ಸಸ್ಯಾಹಾರಿಗಳಾದ್ರೆ ಬಸ್ಟಾಂಡಿನ ಪಕ್ಕದ ಮಯೂರ ಹೋಟೇಲ್ಲಿದೆ. ಇಲ್ಲಾ ಒನಕೆ ಅಬ್ಬಿಯ ಹಾದಿಯಲ್ಲೇ ಇರುವ ಗಣೇಶ ಹೋಟೆಲ್ ಮತ್ತು ಲಾಡ್ಜಿದೆ. ಗಣೇಶ ಹೋಟೆಲ್ಲಿಗೆ ನಾವು ಹೋಗೋ ಹೊತ್ತಿಗೆ ತುಂಬಿದ ಬಸ್ಸೊಂದು ಬಂದು ನಿಂತು ಅದ್ರಲ್ಲಿದ್ದ ನಲವತ್ತೈವತ್ತು ಜನ ಅಲ್ಲಿಗೆ ನುಗ್ಗಿದ್ರಿಂದ ಇಲ್ಲಿ ನಮಗೆ ಊಟ ಸಿಗೋದು ಲೇಟಾಗುತ್ತೇಂತ ಅದಕ್ಕಿಂದ ಮುಂಚೆ ಬಲಬದಿಗೆ ಸಿಕ್ಕ ಕ್ಯಾಂಟೀನಿಗೆ ನುಗ್ಗಿದ್ವಿ. ಈ ರಸ್ತೇಲಿರೋ ಸಸ್ಯಾಹಾರಿ ಕ್ಯಾಂಟೀನಿದೊಂದೆ :-) ಇಲಿ ೨೫ರ ಪ್ಲೇಟು ಪರೋಟ, ೨೦ರ ಪ್ಲೇಟು ಪಲಾವು ಸಖತ್ತಾಗಿದ್ದು ನಮ್ಮ ಮಧ್ಯಾಹ್ನದ ಹಸಿವು ನೀಗಿಸಿದ್ದಲ್ಲದೇ ಮುಂದೆ ಒನಕೆ ಅಬ್ಬಿಯಲ್ಲಿ ೧೨ ಕಿ.ಮೀ ನಡೆಯೋಕೆ Energy booster ಆಗಿದ್ದೂ ಸುಳ್ಳಲ್ಲ :-)
Way to OnakeAbbi falls, The indicator at the Agumbe, Udupi highway

ಒನಕೆ ಅಬ್ಬಿ ಜಲಪಾತ
ಒನಕೆ ಅಬ್ಬಿ ಫಾಲ್ಸಿನಲ್ಲೂ ಫಾಲ್ಸಿನ ಮೆಟ್ಟಿಲುಗಳವರೆಗೂ ಸಾಗೋ ರಸ್ತೆಯಿದ್ದರೂ ಅದಕ್ಕಿರೋ ಗೇಟು ಮುಚ್ಚೇ ಇರುತ್ತೆ. 
ರಸ್ತೆ ಮಧ್ಯ ಅನೇಕ ಕಡೆ ಮರ ಬಿದ್ರೂ ಅದನ್ನು ತೆಗೆಯೋರಿಲ್ಲ. 
ಈ ಜಲಪಾತಕ್ಕೆ ಬರೋರು ಅದೆಷ್ಟೋ ಜನರಿದ್ರೂ ಅವ್ರೆಲ್ಲಾ ಸುಮಾರು ಆರು ಕಿ.ಮೀ ನಡೆದು ಬರೋರೆ ಅಂತ ಇಲ್ಲಿ ಬಿದ್ದಿರೋ ಮರಗಳನ್ನ ನೋಡಿದ್ರೇ ಗೊತ್ತಾಗತ್ತೆ :-) ಪ್ರಕೃತಿ ಅನ್ನೋದು ತನ್ನನ್ನು ಬಯಸಿ ಬರೋ ಚಾರಣಿಗರಿಗೆ ಮಾತ್ರ ದಕ್ಕುವಂತಿರಬೇಕೇ ಹೊರತು ಮೋಜು ಮಸ್ತಿ ಮಾಡಿ ಹಾಳು ಮಾಡೋ ಪುಂಡು ಪೋಕರಿಗಳಿಗಲ್ಲ ಅಂತ ಇಲ್ಲೆಲ್ಲೂ ಕಾಣದ ಬೀರು ಬಾಟಲಿಗಳಿಂದ ಸ್ಪಷ್ಟವಾಗ್ತಿತ್ತು :-) ನಮ್ಮನ್ನ ಒನಕೆ ಅಬ್ಬಿ ಗೇಟಿನ ಬಳಿ ಇಳಿಸಿದ ಡ್ರೈವರ್ರು ವಾಪಾಸ್ ಬರ್ತಾ ಬೇಕಾದ್ರೆ ನನ್ನ ಕರೀರಿ ಅಂತ ಅವ್ರ ಫೋನ್ ನಂಬರನ್ನೂ ಕೊಟ್ಟು ಹೋದ್ರು. ಅವ್ರಿಗೆ ದಿನದ ಚಾರ್ಜು ೫೦೦ ಕೊಟ್ಟು ನಮ್ಮ ನಡಿಗೆಯನ್ನು ಮುಂದುವರೆಸಿದ್ವಿ. ಆಗುಂಬೆಯ ಈ ಫಾಲ್ಸ ಹಾದಿಯಲ್ಲೆಲ್ಲಾ ನೆಟ್ವರ್ಕು ಸಿಗುತ್ತಿದ್ದುದು ಒಮ್ಮೆ ಅಹೋಬಿಲಂನ ನೆನಪಿಸ್ತು. ಅಷ್ಟು ದೊಡ್ಡ ಕ್ಷೇತ್ರವಾದ್ರೂ ಒಂದೂ ಮೊಬೈಲ್ ಟವರ್ರಿಡದ ಅದಕ್ಕಿಂತ ಎಲ್ಲೋದ್ರೂ ನೆಟ್ವಕ್ರು ಸಿಗೋ ನಮ್ಮಾಗುಂಬೆಯೇ ಮೇಲು ಅನಿಸಿದ್ದು ಸುಳ್ಳಲ್ಲ. ಎಡಕ್ಕೆ, ಬಲಕ್ಕೆ ಎಲ್ಲೂ ಹೋಗೋದು ಬೇಡ. ನೇರವಾಗಿ ಹೋಗಿ , ಜೋಗಿಗುಂಡಿಯಲ್ಲಿ ಸಿಕ್ಕಂತದ್ದೇ ಮೆಟ್ಟಿಲುಗಳು ಇಲ್ಲಿ ಸಿಗುತ್ತೆ ಅಂದ ಅವ್ರ ಮಾತುಗಳಂತೆಯೇ ಮುಂದೆ ಹೊರಟ್ವಿ.

ಇಲ್ಲಿ ಸುಮಾರು ಎರಡೂವರೆ ಕಿ.ಮೀ ನಡೆಯೋ ಹೊತ್ತಿಗೆ ಎಡಕ್ಕೆ ಮೇಲಕ್ಕೆ ಸಾಗೋ ಮೆಟ್ಟಿಲುಗಳು ಸಿಗುತ್ತೆ. ಆದರೆ ಈ ಹಾದಿಯಲ್ಲಿ ಮಾತ್ರ ಸಾಗಬೇಡಿ ಅಂತ ಹೇಳೋಕೆ ಅದ್ರ ಚಿತ್ರವನ್ನೂ ಹಾಕಿದ್ದೇನೆ.
Don't go in this way
 ಕಾಡೊಳಗೆ ಕರೆದುಕೊಂಡು ಹೋಗೋ ಈ ಹಾದಿಯಲ್ಲಿ ಹದಿನೈದು ನಿಮಿಷ ನಡೆದ್ರೂ ಜಲಪಾತ ಸಿಕ್ಕದ್ದರಿಂದ ನಾವು ಅಲ್ಲಿ ಸಿಕ್ಕ ನೆಟ್ವರ್ಕಿಂದ ನಮ್ಮ ಡ್ರೈವರ್ ರಜಾಕ್ ಅವ್ರಿಗೆ ಫೋನ್ ಮಾಡಿದ್ವಿ. ಅವ್ರು ನೀವು ಇಷ್ಟು ಬೇಗ ಫಾಲ್ಸಿಗೆ ಹೋಗೋಕೆ ಸಾಧ್ಯನೇ ಇಲ್ಲ. ನೇರ ರಸ್ತೇಲಿ ಹೋಗಿ ಅಂದ. ಮತ್ತೆ ಎಡಕ್ಕಿರೋ ಮೆಟ್ಟಿಲುಗಳು ಎಲ್ಲಿಗೆ ಹೋಗುತ್ತೆ ಅಂದ್ರೆ ಅದು ಕಾಡೊಳಗೆ ಹೋಗತ್ತೆ ಅಷ್ಟೇ ಅಂದ್ರು. ಆದ್ರೆ ಅದು ಸೂರ್ಯಾಸ್ತ ತಾಣದಿಂದ ಈ ಕಡೆ ಬರೋಕೆ ಇರೋ ದಾರಿಯಿರಬಹುದು ಅಂತ ಶಿವು ಹಿಂದಿನ ಸಲ ಬಂದಾಗ ಕೇಳಿದ ಮಾತುಗಳ ಆಧಾರದ ಮೇಲೆ ಹೇಳ್ತಿದ್ರು. ಆ ಹಾದಿಯಲ್ಲಿ ಮುಂದೆ ಹೋದ ಹಾಗೆ ಬಸ್ಸುಗಳ ಶಬ್ದ ಜಾಸ್ತಿಯಾಗುತ್ತಾ ಇದ್ದಿದ್ರಿಂದ ಹಾಗೇ ಇದ್ದಿರಬೇಕು ಅಂದ್ಕೊಂಡು ವಾಪಾಸ್ ಬಂದ್ವಿ.
One of the indicators which tells that we are in correct path
ಇಲ್ಲಿನ ಮಣ್ಣು ಎಷ್ಟು ಫಲವತ್ತಾದ ನೆಲ ಅಂದ್ರೆ ಇಲ್ಲಿ ಒಂದಲ್ಲ, ಎರಡಲ್ಲ ಅಣಬೆಗಳ ರಾಶಿ ರಾಶಿಯೇ ಬೆಳೆಯುತ್ತೆ, ಮಲ್ಲಿಗೆಯ ದಂಡು ಹಾಸಿದಂತೆ ! ಅದ್ರಲ್ಲೂ ಅದೆಷ್ಟು ವೆರೈಟಿಗಳು. ಕೆಂಪು, ಹಳದಿ, ಕಂದು, ಬಿಳಿ ಅದ್ರಲ್ಲೂ ಬಗೆ ಬಗೆಯ ಆಕಾರ, ರೂಪಗಳು. ಮರಗಜ ಎಂದು ಕರೆಯಲ್ಪಡೋ ಹಬ್ಬುಗೆ ಜಾತಿಯ ಸಸ್ಯಗಳು, ಮತ್ತಿ, ಹಲಸು ಮುಂತಾದ ಹಲ ಮರಗಳು ಯಾರ ನಿಯಂತ್ರಣವೂ ಇಲ್ಲದಂತೆ ಬೆಳೆದಿರೋದ್ನ ನೋಡೋದೇ ಒಂದು ಖುಷಿ. ಜೊತೆಯಲ್ಲೊಂದಿಷ್ಟು ವಿಚಿತ್ರ ಚಿಟ್ಟೆಗಳು. ಸಾಮಾನ್ಯವಾದ ಚಾಕೊಲೇಟ್ ಪ್ಯಾಂಸಿ,ಲೆಮನ್ ಪ್ಯಾಂಸಿ, ಜೆಜೆಬೆಲ್, ಕಾಮನ್ ಯೆಲ್ಲೋ, ಕಾಮನ್ ೪ ರಿಂಗ, ಬ್ಲೂ ಬಾಟಲ್ಗಳಲ್ಲದೇ ಹೆಸರೇ ಗೊತ್ತಿಲ್ಲದ ಒಂದಿಷ್ಟು ಚಿಟ್ಟೆಗಳೂ ಸಿಕ್ಕಿದ್ದವು ದಾರೀಲಿ.  ಅವೆಲ್ಲವನ್ನೂ ಸೆರೆಹಿಡಿಯೋಣವೆಂದ್ರೆ ಮೂರೂವರೆಗೇ ಕತ್ತಲಾಗುತ್ತಿರೋ ಇಲ್ಲೇ ದಾರಿತಪ್ಪಿದ್ರೆ ವಾಪಾಸ್ ಹೋಗೋಕಾದ್ರೂ ಒಂಚೂರು ಬೆಳಕು ಬೇಕಲ್ವಾ . ಕತ್ತಲಾಗೋದ್ರೊಳಗೆ ಜಲಪಾತವನ್ನಾದ್ರೂ ತಲುಪೋ ಧಾವಂತ. ಮಿಸ್ಸಾಗೋ ಚಿತ್ರಗಳಿಗೆ ಬರ್ತಾ ಆರಾಮಾಗಿ ಒಂದಿಷ್ಟು ಚಿತ್ರ ಸೆರೆಹಿಡಿಯಬಹುದೆನ್ನೋ ಸಮಾಧಾನ.
Lots and Lots of Mushroom growing at a single place in Onake abbi falls.
ಆರು ಕಿ.ಮೀ ಭಯಾನಕ ಏರು, ತಕ್ಷಣದ ಇಳಿವುಗಳನ್ನ ದಾಟಿ ಸಾಗಿ ಜಲಪಾತದ ತಲೆ ಮೇಲೇ ನಿಲ್ಲುವ ಅನುಭವವಿದ್ಯಲ್ಲ. ಅದು ಅದ್ಭುತ. ಜಲಪಾತ ಹಾರುವಲ್ಲಿಂದ್ಲೇ ನಾವು ಕೆಳಗೆ ನೋಡಬಹುದಾದ್ರೂ ಇಲ್ಲಿ ಬರುವವರ ಸುರಕ್ಷತೆಗೆ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ. ಕೊನೆ ಪಕ್ಷ ನೋಡಲೊಂದು ಕಟ್ಟೆ, ಜನ ಆಯತಪ್ಪಿ ಬೀಳದಂತೆ ಕಂಬಗಳೂ ಇಲ್ಲ. ಹಂಗಾಗಿ ಇಲ್ಲಿ ಫೋಟೋ ತೆಗ್ಯೋಕೆ ಹೋದಾಗ ಎಚ್ಚರ ತಪ್ಪಿದ್ರೆ ಅಪಾಯ ತಪ್ಪಿದ್ದಲ್ಲ. ಮಲೆನಾಡವನಾಗಿ ಎಷ್ಟೆಲ್ಲಾ ಉಂಬುಳ(ಜಿಗಣೆ/leeches) ಕಚ್ಚಿಸಿಕೊಂಡ ನನಗೇ ಇಲ್ಲಿನ ಉಂಬುಳಗಳು ಸಿಕ್ಕಾಪಟ್ಟೆ ಹೆಚ್ಚೆನಿಸಿಬಿಟ್ಟಿತ್ತು. ನಮ್ಮ ನಡಿಗೆಯ ಟಾಪ್ ಗೇರಲ್ಲಿ ನಡೆಯುತ್ತಿದ್ದು ಪ್ರತೀ ಹತ್ತು ನಿಮಿಷಕ್ಕೊಮ್ಮೆ ಕಾಲನ್ನು ನೋಡ್ಕೋತಿದ್ರೂ ಅಲ್ಲಲ್ಲಿ ಉಂಬುಳಗಳು ಹತ್ತಾಗಿರ್ತಿತ್ತು. ತೆಗೆದ ಉಂಬುಳಗಳ ಹಾವಳಿ ಎಷ್ಟಾಗಿತ್ತು ಅಂದ್ರೆ ಇಲ್ಲಿ ಚಪ್ಪಲಿ ತೆಗೆದು ನೀರಿಗಿಳಿದ್ರೆ ನನ್ನ ಕಾಲಿಂದ ಸುರಿಯುತ್ತಿದ್ದ ರಕ್ತದಿಂದ ನೀರು ಕೆಂಪಾಗತೊಡಗಿತ್ತು. ಕಾಲ ಎಲ್ಲ ಕಡೆಯಿಂದ ರಕ್ತ ಹರೀತನೇ ಇದೆ. ರಕ್ತ ನೋಡಿ ಭಯ ಪಡೋರಾದ್ರೆ ಕಷ್ಟವಿದೆ ಪರಿಸ್ಥಿತಿಯಿಲ್ಲಿ. ಉಂಬುಳ ಕಚ್ಚದಂತೆ ಅದೆಂತದೋ ಲಿಕ್ವಿಡ್ ಸಿಗುತ್ತೆ, ಸುಣ್ಣ ಹಚ್ಚಬಹುದು, ಉಪ್ಪು ಹಚ್ಚಬಹುದು, ಹೊಗೆಸೊಪ್ಪು ಹಚ್ಚಬಹುದು ಅಂತೆಲ್ಲಾ ಅಂತಾರೆ. ಆದ್ರೆ ಅವೆಲ್ಲ ಎಷ್ಟು ವ್ಯರ್ಥ ಅಂತ ಕುದುರೆಮುಖ ಟ್ರೆಕ್ಕಲ್ಲಿ ನೋಡಾಗಿದ್ರಿಂದ ಆಗಿದ್ದಾಗಲಿ ಅಂತ ಹಾಗೇ ಬಂದಿದ್ವಿ ಈ ಬಾರಿ. ಅದ್ರ ಪ್ರಭಾವ ಚೆನ್ನಾಗೇ ಆಗಿತ್ತು. ಇಲ್ಲಿಗೆ ಬಂದ ಅನುಭವವೂ ಚಿತ್ರಗಳಿಲ್ದೇ ರಸಹೀನವಾದ್ರಿಂದ ಚಿತ್ರಗಳೊಂದಿಗೆ ಆ ನೆನಪುಗಳ ಮೆಲುಕು ಹಾಕಬಹುದು. ಒನಕೆ ಅಬ್ಬಿಯ ಶುರುವಿನಿಂದ ೩:೦೮ಕ್ಕೆ ಶುರು ಮಾಡಿದ್ದ ನಾವು ೩:೫೫ಕ್ಕೆ ಅದರ ತುದಿ ತಲುಪಿದ್ವಿ. ಅಲ್ಲಿಂದ ೪:೨೦ಕ್ಕೆ ಬಿಟ್ಟ ನಾವು ಕೆಳಗೆ ತಲುಪುವಾಗ ೫ ಘಂಟೆ
Finally reaching the way to Onake Abbi falls
View from the Top of Onake abbe falls
Sunlight creating beauty at Onake Abbi falls
 ಮರಳಿ ಮನೆಗೆ:
ಐದಕ್ಕೆ ಮತ್ತು ಆರೂವರೆಗೆ ಸಾಗರಕ್ಕೆ ನೇರ ಬಸ್ಸುಗಳಿವೆ ಎಂದಿದ್ರು ರಜಾಕ್. ಐದರ ಬಸ್ಸನ್ನೇ ಹಿಡಿಯೋಣ ಅಂತ ನಾವು ಬರೋಷ್ಟರಲ್ಲಿ ಎದುರಿಗೊಂದು ಬಸ್ಸು ಬಂತು. ಆದ್ರೆ ಅಲ್ಲಿ ಕೈಯಡ್ಡ ಮಾಡಿದ್ರೂ ನಿಲ್ಲಿಸ್ಲಿಲ್ಲ ಅವ. ಸರಿ ಅಂತ ನಡೆದುಕೊಂಡೇ ವಾಪಾಸ್ ಹೊರಟ ನಾವು ನಿಶಾನಿ ಮೊಟ್ಟೆಯ ಕ್ರಾಸು ದಾಟಿ, ಗಣೇಶ ಹೋಟೆಲನ್ನೂ ದಾಟಿ ಮುಂದೆ ಬಂದೆವು.
Nishani motte Cross
ಆಗುಂಬೆಯ ಪ್ರಸಿದ್ದ ರಂಗನಾಥ ದೇಗುಲಕ್ಕೆ ಹೋಗಬೇಕೆಂದು ಅಲ್ಲಿಗೆ ಹೋದ್ರೂ ಅದು ಬಾಗಿಲು ಹಾಕಿದ್ದು, ತೆಗೆಯೋದು ೬:೩೦ ಕ್ಕೆ ಅಂದರು. ಅಷ್ಟೆಲ್ಲಾ ಕಾಯೋಕಾಗಲ್ಲವೆಂದ ನಾವು ಮುಂದೆ ಬಸ್ಟಾಂಡಿಗೆ ಬರುವಷ್ಟರಲ್ಲಿ ಶಿವಮೊಗ್ಗಕ್ಕೆ ಹೋಗೋ ಬಸ್ಸೊಂದಿತ್ತು. ಆದ್ರೆ ಅದ್ರಲ್ಲಿ ನಾ ತೀರ್ಥಳ್ಳಿವರೆಗೆ ಹೋಗ್ಬೋದಿತ್ತು.  ಕಾಲಿಡೋಕೂ ಜಾಗವಿಲ್ಲದಷ್ಟು ರಷ್ಷಿದ್ದ ಆ ಬಸ್ಸಲ್ಲಿ ಹೋಗೋದು ಬೇಡ ಮುಂದಿನದ್ರಲ್ಲಿ ಹೋಗೋಣ ಅಂತ ಶಿವಣ್ಣ. ಮುಂದಿನದ್ದು ಬಂದಿದ್ದು ಆರಕ್ಕೆ. ಅದ್ರದ್ದೂ ಅದೇ ಕತೆ. ಉಡುಪಿ, ಮಣಿಪಾಲಲ್ಲಿ ಓದ್ತಿದ್ದ ಹುಡುಗ ಹುಡುಗಿಯರೆಲ್ಲಾ ಶಿವಮೊಗ್ಗದ ಮೇಲೆ ತಂತಮ್ಮ ಊರಿಗೆ ಹೊರಟಿದ್ರಿಂದ ಆ ಕಡೆಯಿಂದ ಬರ್ತಿದ್ದ ಬಸ್ಸುಗಳೆಲ್ಲಾ ಫುಲ್ಲೇ. ಘಾಟಿಯಲ್ಲಿ ಗಜಾನನ ಗಾಡಿ ಕೆಟ್ಟು ನಿಂತಿದೆಯಂತ ಬೇರೆ ಕೇಳಿದ್ದ ನಾನು ಈ ಬಸ್ಸು ಬಿಟ್ರೆ ಮತ್ತೆ ಬಸ್ಸಿದ್ಯೋ ಇಲ್ವೋ, ಇದಕ್ಕೇ ನಾನು ತೀರ್ಥಳ್ಳಿ ತಂಕ ಹೋಗೋದೇ ಅಂತ. ಇದ್ರಲ್ಲಿ ಹೋದ್ರೆ ತೀರ್ಥಳ್ಳಿಯಿಂದ ಮುಂದೆ ಬಸ್ ಸಿಗುತ್ತೆ ಅಂತ ಕಂಡಕ್ಟರಿಂದ ಖಾತ್ರಿನೂ ಮಾಡ್ಕೊಂಡ್ರಾಯ್ತು. ಸರಿ ಅಂತ ತುಂಬಿದ್ದ ಬಸ್ಸಲ್ಲೇ ಹೆಂಗೋ ಜಾಗ ಮಾಡ್ಕೊಂಡು ಹತ್ತಿದ ನಾವು, ನಿಂತ್ಕೊಂಡೇ ೭ ಕ್ಕೆ ತೀರ್ಥಳ್ಳಿ ತಲುಪಿದ್ವಿ. ಅಲ್ಲಿಂದ ೭:೧೦ರ ಭಾಗ್ಯಲಕ್ಷ್ಮಿ ಹತ್ತಿದ ನಾನು ಸಾಗರಕ್ಕೆ ಬರೋ ಹೊತ್ತಿಗೆ ೯ ಘಂಟೆ ! ಇಲ್ಲಿ ಸೂರ್ಯಾಸ್ತ ಅಂತ ೬:೩೦ ವರೆಗೆ ಕಾದುಕೊಂಡು ಅಲ್ಲಿಂದ ಆಮೇಲೆ ಸಾಗರಕ್ಕೆ ಬರೋಣ ಅಂದ್ಕೊಂಡ್ರೆ ಹೇಗೆ ಬರ್ತಿದ್ನೋ ಗೊತ್ತಿಲ್ಲ. ಶಿವಮೊಗ್ಗಕ್ಕೆ ಅಂದ್ರೆ ಸಂಜೆ ೭:೩೦ಕ್ಕೆ ಹೊರಡೋ ಕೊನೆಯ ಗಾಡಿ ಸ್ಲೀಪರ್ ಬಸ್ಸಿದೆ. ಆದ್ರೆ ಸಾಗರಕ್ಕೆ ಹಂಗಲ್ಲ. ಆರೂವರೆಗೆ ಕೊನೆಯ ಗಾಡಿ ತಪ್ಪಿಸಿಕೊಂಡ್ರೆ ಶಿವಮೊಗ್ಗಕ್ಕೆ ಬಂದು ಅಲ್ಲಿಂದ ಸಾಗರಕ್ಕೆ ಬರ್ಬೇಕು! ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗೆ. ಶುರುವಾಗಿದ್ದು ಲೇಟಾದ್ರೂ ಅಂದ್ಕೊಂಡಿದ್ದ ಜಾಗಗಳನ್ನೆಲ್ಲಾ ನೋಡಿದೆನೆಂಬ ಖುಷಿಯಲ್ಲಿ ನಾನು ಮನೆ ಸೇರಿದೆನೆಂಬ ಸಂತಸದಲ್ಲೇ ಸದ್ಯಕ್ಕೊಂದು ವಿರಾಮ.

ಅಹೋಬಲಂ ಟ್ರಿಪ್ಪು

ನಂದ್ಯಾಲದಿಂದ ಅಹೋಬಿಲಂವರೆಗೆ:
ನಂದ್ಯಾಲದಲ್ಲಿ ರಾತ್ರಿ ೮:೫೦ಕ್ಕೆ ಬಂದಿಳಿದ ನಾವು ಒಂದು ವೆಜ್ ಹೋಟೇಲಿನ ಹುಡುಕಾಟದಲ್ಲಿ ಹೋಟೆಲ್ ಶ್ರೀನಿಧಿ ತಲುಪಿದ್ವಿ. ಅಲ್ಲಿಯ ತಲಾ ೫೦ರ ಪ್ಲೇಟೂಟದ ನಂತರ ಪಕ್ಕದಲ್ಲಿದ್ದ ಹೋಟೇಲ್ ಟೂರಿಸ್ಟ್ ತಲುಪಿದೆವು. ಇಲ್ಲಿ ಉಟಕ್ಕೆ ಕೊಡೋದು ಪಪ್ಪು, ಚಟ್ನಿ ಒಂದು ಪಲ್ಯ , ರಸಂ ಮತ್ತು ಸಾಂಬಾರುಗಳಾದ್ರೂ ಅವ್ರು ತಂದಿಡೋ ದೊಡ್ಡ ಥಾಲಿಯ ಅನ್ನ ನೋಡಿ ಇದಿಷ್ಟೂ ತಿನ್ನೋಕಾಗುತ್ತಾ ಅನಿಸಿಬಿಡುತ್ತೆ. ಆದ್ರೆ ಬೆಳಗ್ಗಿಂದ ಅಲೆದಲೆದು ಸುಸ್ತಾಗಿದ್ದ ನಮ್ಮೆಲ್ಲರ ಹೊಟ್ಟೆ ತುಂಬಿಸಿದ್ದು ಸುಳ್ಳಲ್ಲ. ಬಸ್ಟಾಂಡಿಗಿಂತ ಮೊದಲೇ ಸಿಗುವ ಸರ್ಕಲ್ಲಿನಲ್ಲಿ ಇಳ್ಕೊಂಡ್ರೆ ಅಲ್ಲಿ ಸಿಗೋ ಸುಮಾರು ಹೋಟೇಲ್, ಲಾಡ್ಜುಗಳಲ್ಲಿ ಇವೂ ಒಂದು. ಟೂರಿಸ್ಟ್ ಲಾಡ್ಜಿನಲ್ಲಿ ೬೫೦ರ ಡಿಲಕ್ಸ್ ರೂಂ ತಗೊಂಡ್ರೂ ಆ ರೂಮಲ್ಲಿದ್ದಿದ್ದು ಎರಡೇ ಚಾರ್ಜ್ ಸಾಕೇಟುಗಳು. ಅದ್ರಲ್ಲೂ ಒಂದು ಕಿತ್ತುಬಂದು ಯಾವಾಗ ಶಾಕ್ ಹೊಡ್ಯತ್ತೋ ಅನ್ನುವಂತಿತ್ತು.ಬೆಳಗ್ಗೆ ಏಳಕ್ಕೆ ಬಿಸಿನೀರು ಬರುತ್ತೆ ಅಂದವನಿಗೆ ಆರಕ್ಕಾದ್ರೂ ಕೊಡುವಂತೆ ಕೇಳಿದ್ದಕ್ಕೆ ಆರಕ್ಕೇ ಬಿಸಿನೀರು ಸಿಕ್ಕಿತ್ತು. ಏಳೂವರೆಗೆ ರೆಡಿಯಾಗಿ ರೂಮು ಖಾಲಿ ಮಾಡಿದ ನಾವು ಬಸ್ಟಾಂಡ್ ತಲುಪಿ ಅಲ್ಲಿನ ಅಲ್ಲಿನ ಸಸ್ಯಾಹಾರಿ ಹೋಟೆಲ್ ಮಧುವಿನಲ್ಲಿ ಮಂಡಕ್ಕಿ ಬಾತು(ಇಲ್ಲಿನ ಸ್ಪೆಷಲ್), ಇಡ್ಲಿ ವಡೆ ತಿಂದು ಎಂಟರ ಅಲ್ಲಗಡ್ಡದ ಬಸ್ಸು ಹತ್ತಿದ್ವಿ. ಇಲ್ಲಿನ ಬಸ್ಟಾಂಡಲ್ಲಿ ಮಧು ಬಿಟ್ರೆ ಹೋಟೇಲ್ ಬ್ಲೂಸ್ಟಾರ್ ಎಂಬೋ ಮತ್ತೊಂದು ಸಸ್ಯಾಹಾರಿ ಹೋಟೆಲ್ಲಿದೆ. ಅಹೋಬಿಲಂ ಅಥವಾ ಅಹೋಬಲಂಗೆ ನಂದ್ಯಾಲದಿಂದ ನೇರ ಬಸ್ಸುಗಳಿಲ್ಲ. ನಂದ್ಯಾಲದಿಂದ ಅಲ್ಲಗಡ್ಡಕ್ಕೆ ಬಂದು ಅಲ್ಲಿಂದ ೨೫ ಕಿ.ಮೀ ಇರೋ ಅಹೋಬಲಂಗೆ ಬಸ್ಸು ಅಥವಾ ಆಟೋದಲ್ಲಿ ಹೋಗಬಹುದು. ಅಹೋಬಲಂ ಒಂದೇ ನೋಡೋ ಉದ್ದೇಶವಿದ್ರೆ ನಂದ್ಯಾಲಕ್ಕೆ ಇರೋ ರೈಲಲ್ಲೂ ಬಂದು ನಂದ್ಯಾಲದಲ್ಲಿಳಿಯಬಹುದು.  ಆದರೆ ನಂದ್ಯಾಲಕ್ಕೆ ಬೆಂಗಳೂರಿಂದಿರುವ ರೈಲುಗಳ ಸಂಖ್ಯೆ ಕಮ್ಮಿ. ಇದ್ದರೂ ಅವು ಮಧ್ಯಾಹ್ನದ ಸಮಯದಲ್ಲಿ ಹೊರಡೋದ್ರಿಂದ ಶುಕ್ರವಾರ ರಾತ್ರೆ ಹೊರಡೋರಿಗೆ ಸೂಕ್ತವಲ್ಲ


ಅಲ್ಲಗಡ್ಡದ ಇರಾನಿ ಟೀ ಮತ್ತು ಚೌಕಾಸಿ ಪ್ರಸಂಗ
ಒಂಭತ್ತೂಮುಕ್ಕಾಲಿಗೆ ಅಲ್ಲಗಡ್ಡ ತಲುಪಿದ್ದ ನಮಗೆ ಅಹೋಬಲಂಗೆ ಮೊದಲ ಬಸ್ಸಿದ್ದಿದ್ದು ೯:೩೦ ಕ್ಕೆ, ಅದು ಹೋಗಾಗಿದೆ ಅಂತ ಗೊತ್ತಾಯ್ತು. ಮುಂದಿನ ಬಸ್ಸಿರೋದು ೧೧:೧೫ ಕ್ಕೆ ! ಅಲ್ಲಿಯವರೆಗೆ ಏನ್ಮಾಡೋದಪ್ಪ ಅಂದ್ಕೋತಿರುವಾಗ ಇಲ್ಲಿಂದ ಶೇರ್ ಆಟೋಗಳು ಹೋಗುತ್ತೆ. ಅದ್ರಲ್ಲಿ ಹೋದ್ರೆ ಹೋಗಬಹುದು ಅಂದ್ರು. ಕೆಳಗಿನ ಅಹೋಬಲಕ್ಕೆ ಅಲ್ಲಗಡ್ಡದಿಂದ ೨೫ ಕಿ.ಮೀ. ಅಲ್ಲಿಂದ ಮೇಲಿನ ಅಹೋಬಲಕ್ಕೆ ಮತ್ತೆ ಎಂಟು ಕಿ.ಮೀ. ಅಲ್ಲಗಡ್ಡದಲ್ಲಿ "ಇರಾನಿ ಟೀ" ಸಖತ್ ಫೇಮಸ್. ಒಂದ್ಸಲ ಕುಡುದ್ರೆ ಸುಮಾರು ಒಂದು ಘಂಟೆಯವರೆಗೂ ಕುಡಿದಿದ್ರ ಪ್ರಭಾವ ಉಳಿಯುವಂತಾ ಟೀ ಅದು. ಅದು ಸಖತ್ ಅಡಿಕ್ಷನ್ ಗುರು ಅಂತಂತಿದ್ದ ಗೆಳೆಯರ ಮಾತು ಎಷ್ಟು ಸತ್ಯವೆನ್ನೋದು ಇಲ್ಲಿ ಮೊದಲ ಬಾರಿ ಕುಡಿದಾಗ್ಲೇ ಗೊತ್ತಾಗಿದ್ದು. ಐದು ರೂಗೆ ಒಂದು ಟೀ ಕುಡಿದು ಅಲ್ಲೇ ಇದ್ದ ಒಂದು ಆಟೋನವನತ್ರ ಡೀಲ್ ಮಾಡೋಕೆ ಶುರು ಮಾಡಿದ್ವಿ. ಶೇರ್ ಆಟೋವಾದ್ರೆ ಪ್ರತಿಯೊಬ್ಬರಿಗೂ ಹದಿನೈದು ರೂ ಅಂತ ಅಲ್ಲಿನವರತ್ರ ಕೇಳಿದ್ದ ನಾವು ಆಟೋದವನತ್ರ ಎಷ್ಟಪ್ಪ ಅಂತ ಕೇಳೋಕೆ ಶುರು ಮಾಡಿದ್ವಿ.
ಅಹೋಬಲಂ ನ ಎಲ್ಲಾ ದೇವಸ್ಥಾನಗಳನ್ನೂ ತೋರಸ್ಕೊಂಡು ಬರೋದಾದ್ರೆ ೪೦೦ ರೂ ಅಂದ ಅವ. ಎಲ್ಲಾ ಒಂದೇ ಕಡೆ ಇರೋ ದೇವಸ್ಥಾನಗಳಿಗೆ ೪೦೦ ರೂ ತುಂಬಾ ಜಾಸ್ತಿಯಾಯ್ತು ಅಂದ ನಾವು  ಕೆಳಗಿನ ಅಹೋಬಲಕ್ಕೆ ಹದಿನೈದು ರೂ ತಲೆಗೆ ಕೊಟ್ಟು ಹೊರಡೋಕೆ ಶುರುವಾದ್ವಿ. ಆ ಆಟೋದವ ಊರೊಳಗೆಲ್ಲಾ ಜನರಿಗಾಗಿ ಸುತ್ತಿ ಸುತ್ತಿ , ನಿಲ್ಲಿಸಿ ನಿಲ್ಲಿಸಿ ನಿಧಾನಕ್ಕೆ ಹನ್ನೊಂದರ ಹೊತ್ತಿಗೆ ಅಹೋಬಲಕ್ಕೆ ತಗೊಂಡು ಹೋದ. ಮದ್ಯ ಮದ್ಯ ಊರಲ್ಲೆಲ್ಲಾ ನಿಲ್ಲಿಸಿ ಜನರನ್ನ ಹತ್ತಿಸಿಕೊಂಡಿದ್ದಕ್ಕೆ ಬೇಜಾರಿಲ್ಲ. ಅವ ಹೋಗಿದ್ದೇ ರಸ್ತೆಗಳಲ್ಲಿ ಮೂರ್ನಾಲ್ಕು ಬಾರಿ ಸುತ್ತಿಸಿದ್ದಕ್ಕೆ ಬೇಜಾರಾಗ್ತಿತ್ತು. ಅಲ್ಲಿಂದ ಮತ್ತೆ ಮೇಲಿನ ಅಹೋಬಲಕ್ಕೆ ತಲಾ ಹದಿನೈದರ ಚಾರ್ಜ್ ಕೊಡ್ಬೇಕಾಯ್ತು. ಅಲ್ಲಿ ಮತ್ತೆ ಅರ್ಧ ಘಂಟೆ ! ವಾಪಾಸ್ ಕೆಳಗಿನ ಅಹೋಬಲಕ್ಕೆ ಬರೋಕೆ ಒಂದು ಟೆಂಪೋದಲ್ಲಿ ಹದಿನೈದು ಜನರನ್ನ ಹೇರಿಕೊಂಡ್ರು ಬಂದ್ರೂ ತಲಾ ಹದಿನೈದು ! ಅರ್ಧ ಘಂಟೆ ಕಾಯಿಸಿದ್ರೂ ಹದಿನೆಂಟು ಜನರಾಗದೇ ಹೊರಡೋಲ್ಲವೆಂದು ಕೂತಿದ್ದ ಅವನನ್ನು ಹೊರಡಿಸೋದ್ರಲ್ಲಿ ಸಾಕು ಸಾಕಾಗಿದ್ದ ನಮಗೆ ಬೆಳಗ್ಗೆನೇ ನಾನೂರು ಕೊಟ್ಟು ಬಂದಿದ್ರೆ ಅವನೊಂದಿಗೆ ಎಲ್ಲಾ ನೋಡಬಹುದಾಗಿತ್ತಲ್ಲದೇ ಇಷ್ಟೆಲ್ಲಾ ಕಾಯೋ ಪ್ರಮೇಯವೂ ಇರ್ತಿರಲಲ್ವಪ್ಪ ಅನಿಸಿದ್ದು ಸುಳ್ಳಲ್ಲ. ಅಲ್ಲಗಡ್ಡದಿಂದ ಆಟೋದಲ್ಲಿ ಬರೋದಾದ್ರೆ ಮೇಲಿನ ಅಹೋಬಲಕ್ಕೆ ಆಟೋ ತಗೊಳ್ಳಿ. ಅದನ್ನ ತೋರಿಸಿ, ಕೆಳಗಿನ ಅಹೋಬಲಂನ ನಾಲ್ಕು ದೇವಸ್ಥಾನಗಳನ್ನೂ ತೋರಿಸ್ಬೇಕು ಅಂತ ಹೇಳೇ ಹೊರಡಿ. ನಾನೂರಲ್ಲ , ಸಾವಿರ ಕೊಟ್ರೂ ಅದು ಕೊಡಬಹುದಾದ ಚಾರ್ಜೇ. ಕೆಳಗಿನ ಅಹೋಬಲಂನ ಯೋಗಾನಂದ, ಚಕ್ರವಾಟ, ಭಾರ್ಗವ ಮತ್ತು ಬಸ್ಟಾಂಡಿನ ಪಕ್ಕದಲ್ಲೇ ಇರುವ ಲಕ್ಮೀನರಸಿಂಹ ದೇವಸ್ಥಾನ ತೋರಿಸೋಕೆ ೩೦೦ ಕೇಳ್ತಾರೆ ಇಲ್ಲಿನ ಆಟೋದವ್ರು ! ಬರೀ ಯೋಗಾನಂದ, ಚಕ್ರವಾಟ ತೋರ್ಸೋದಾದ್ರೆ ೧೫೦. ಅಲ್ಲಿಂದ ಅಲ್ಲಗಡ್ಡಕ್ಕೆ ಹೋಗೋಕೆ ೪೦೦ ! ಯೋಗಾನಂದ, ಚಕ್ರವಾಟ ತೋರಿಸ್ಕೊಂಡು ಅಲ್ಲಗಡ್ಡಕ್ಕೆ ತಗೊಂಡೋಗಪ್ಪ, ೫೦೦ ರೂ ಡೀಲ್ ಮಾಡು ಅಂದ್ರೂ ಸುತರಾಂ ಒಪ್ಪಲ್ಲ ! ಇಷ್ಟೆಲ್ಲಾ ರಾಮಾಯಣ ಬೇಡ ಅಂದ್ರೆ ಅಲ್ಲಗಡ್ಡದಿಂದ ಹೋಗಿ ಬರೋದಕ್ಕೆ ಆಟೋ ಮಾಡೋದು ! ಒಂದು ಐವತ್ತೋ , ನೂರೋ ಜಾಸ್ತಿ ಕೊಟ್ರೆ ಅವ್ನು ಯಾವ ದೇವಸ್ಥಾನಗಳಲ್ಲೂ ಗಡಿಬಿಡಿ ಮಾಡೋ ಸಾಧ್ಯತೆಯಿರಲ್ಲ. 

At Ahobilam
ಅಹೋಬಲಂನ ನವ ನರಸಿಂಹ ಕ್ಷೇತ್ರದಲ್ಲಿ:
ಅಲ್ಲಗಡ್ಡದಿಂದ ಮೇಲೆಂದಂತೆ ಎರಡು ಆಟೋ ಬದಲಿಸಿ ಮೇಲಿನ ಅಹೋಬಲಕ್ಕೆ ಬರೋ ಹೊತ್ತಿಗೆ ೧೧:೨೦. ಅಲ್ಲೇ ಬೀಳುತ್ತಿದ್ದ ಜಲಧಾರೆಯೊಂದರ ಎದ್ರು ಫೋಟೋ ತೆಗೆಸಿ ಕಾರಂಜ ಲಕ್ಷ್ಮೀನರಸಿಂಹವನ್ನು ನೋಡೋಕೆ ಹೋದೆವು. ಇಲ್ಲಿ ಕಾಲಿಡುತ್ತಿದ್ದಂಗೇ ಅನೇಕ ಭೋಜನಶಾಲೆಗಳು, ಸ್ನಾನಗೃಹಗಳೂ ಎದುರಾಗುತ್ತೆ. ಎಲ್ಲಾ ಭೋಜನಶಾಲೆಗಳಲ್ಲೂ ಮಧ್ಯಾಹ್ನ ಊಟಕ್ಕೆ ಬರೋದಾದ್ರೆ ಒಂದು ಘಂಟೆ ಮುಂಚೆ ಹೇಳ್ಬೇಕು ಅನ್ನೋ ನಿಯಮ. ಕ್ಷತ್ರಿಯ ಭೋಜನಶಾಲೆ ಮತ್ತೆ ಎರಡು ಭೋಜನಶಾಲೆಗಳನ್ನು ದಾಟಿ ಮುಂದೆ ಹೊರಟಿದ್ದ ನಮಗೆ ಬ್ರಾಹ್ಮಣ ಭೋಜನಶಾಲೆಯೆನ್ನೋ ಬೋರ್ಡ್ ಕಂಡು ನಮಗೆ ಇಲ್ಲೇ ಊಟಕ್ಕೆ ಹೇಳಿದ್ರೆ ಹೆಂಗೆ ಅನಿಸ್ತು. ಹೆಂಗಿದ್ರೂ ಇನ್ನೂ ಹನ್ನೊಂದೂವರೆ. ಎಲ್ಲಾ ಹತ್ತತ್ರ ಇದೆ ಅಂತ ಕೇಳಿದ್ದ ನಾವು ಎಲ್ಲಾ ನೋಡ್ಕೊಂಡು ಮಧ್ಯಾಹ್ನಕ್ಕೇ ವಾಪಾಸ್ ಬರ್ಬೋದು. ಊಟಕ್ಕೆ ಅಂತ ಮತ್ತೆಲ್ಲಿ ಅಲೆಯೋದು, ಇಲ್ಲೇ ಹೋದ್ರಾಯ್ತು ಅಂತ ಇಲೇ ನಾವು ಆರು ಜನ ಊಟಕ್ಕೆ ಬರ್ತೀವಿ ಅಂತ ಹೇಳಿ ಮುಂದೆ ಹೊರಟ್ವಿ. ಇಲ್ಲಿನ ಭೋಜನಶಾಲೆಗಳನ್ನ ಬಿಟ್ರೆ ಕೆಲವೊಂದು ಸಣ್ಣ ಕ್ಯಾಂಟೀನುಗಳಿವೆ.ಆದ್ರೆ ಒಮ್ಮೆ ದೇವಸ್ಥಾನಗಳನ್ನ ಸುತ್ತೋಕೆ ಶುರು ಮಾಡಿದ್ರೆ ಮಧ್ಯ ಏನಂದ್ರೆ ಏನೂ ಇಲ್ಲ. ಹಂಗಾಗಿ ಇಲ್ಲಿ ಊಟಕ್ಕೆ ಹೇಳಿದ್ದು ಎಷ್ಟು ಒಳ್ಳೇದಾಯ್ತು ಅಂತ ಆಮೇಲೆ ಗೊತ್ತಾಯ್ತು. ಇಲ್ಲಿನ ದೇವಸ್ಥಾನಗಳ ನಡುವೆ ಸಾಕಷ್ಟು ನೀರ ಧಾರೆಗಳು, ಜರಿಗಳು ಇದ್ದು ನೀರು ಒಯ್ಯದಿದ್ರೂ ಪರವಾಗಿಲ್ಲ. ಆದ್ರೆ ಸಾಕಷ್ಟು ದೂರ ನಡೆಯಬೇಕಾಗಿರೋದ್ರಿಂದ ಬೆಳಗ್ಗಿನ ತಿಂಡಿ ಚೆನ್ನಾಗಿ ತಿನ್ನಿ ಅಥವಾ ಬ್ಯಾಗಲ್ಲೇನಾದ್ರೂ ಗ್ಲೂಕೋಸೋ,ಬಿಸ್ಕೆಟ್ಟೋ, ಬಾಳೆಹಣ್ಣೋ ಇಟ್ಕೊಂಡಿರ್ರಿ ಅಂತ ಮುಂದುವರಿಯೋ ಮುಂಚೆ ಹೇಳ್ತೀನಿ. ಇಲ್ಲಿಗೆ ಬರೋ ಸುಮಾರು ಜನ ಊಟವನ್ನೂ ಜೊತೆಗೇ ಹೊತ್ತುತಂದು ಇಲ್ಲಿನ ಪ್ರಹ್ಲಾದಗುಡಿಯ ಬಳಿ ಅಥವಾ ವರಾಹ ನರಸಿಂಹ ಗುಡಿಯ ಬಳಿ ಊಟ ಮಾಡೋದೂ ಇಲ್ಲಿ ಸಾಮಾನ್ಯ ದೃಶ್ಯ.

ಮೊದಲು ಸಿಗೋ ಕಾರಂಜ ಲಕ್ಷ್ಮೀನರಸಿಂಹದ ಹತ್ತಿರ ಬರೋ ಹೊತ್ತಿಗೆ ಹನ್ನೊಂದು ನಲವತ್ತು. ಅದಕ್ಕೆ ಮೇಲಿನ ಅಹೋಬಿಲ ದೇವಸ್ಥಾನವೆಂದೂ ಹೆಸರು. ಅದನ್ನು ಆಮೇಲೆ ನೊಡೋಣವೆಂದು ಮುಂದೆ ಸಾಗಿದ ನಮಗೆ ಬಲಕ್ಕೆ ಸಾಗೋ ಮೆಟ್ಟಿಲುಗಳು ಸಿಗ್ತು. ಅದನ್ನೂ ಬರ್ತಾ ನೋಡೋಣವೆಂದು ನಾವು ಎಡಭಾಗದಲ್ಲಿ ನದಿಯ ಮೇಲಿದ್ದ ಸೇತುವೆ ದಾಟಿ ಮುಂದೆ ಸಾಗಿದ್ವಿ.  ಬಲಕ್ಕೆ ಸಾಗಿದ್ರೆ ಸಿಗ್ತಿದ್ದಿದ್ದು ಪಾವನ ಲಕ್ಷ್ಮೀ ನರಸಿಂಹ
One of the multiple bridges across the river Bhavanashini in Ahobilum
ವರಾಹ ಲಕ್ಷ್ಮೀ ನರಸಿಂಹ
ಪಾಳು ಬಿದ್ದ ಮಂಟಪವೊಂದನ್ನು ದಾಟಿ ಹಾಗೇ ಮುಂದೆ ಸಾಗಿದ ನಮಗೆ ಜುಳು ಜುಳು ಹರಿಯೋ ಭವನಾಶಿನಿಯ ಪಕ್ಕದಲ್ಲಿ ನಡೆಯೋ ರಮ್ಯ ಅನುಭವ. ಮಳೆಗಾಲದಲ್ಲಿ ಅಥವಾ ಅಕ್ಟೋಬರ್ ವರೆಗೂ ಬೆಟ್ಟದ ಅನೇಕ ಕಡೆ ಜಲಪಾತಗಳಾಗಿ ಧುಮುಕೋ ಇದನ್ನು ನೋಡೋದೇ ಒಂದು ಅನುಭವ. ಮೇಲಿನ ಅಹೋಬಿಲಂನ ಲಕ್ಷ್ಮೀನರಸಿಂಹಕ್ಕೆ ಸಾಗೋ ಹೊತ್ತಿಗೇ ಎದುರು ನಾಲ್ಕು ಜಲಧಾರೆಗಳು ಎದುರಿನ ಗುಡ್ಡದಿಂದ ಧುಮುಕೋದು ಕಾಣುತ್ತಿರುತ್ತೆ. ಅಲ್ಲಿಂದ ಶುರುವಾಗೋ ಜಲಪಾತಗಳ ಒಡನಾಟ ಸುಲಭಕ್ಕೆ ಬಿಡುವಂತದ್ದಲ್ಲ.
Near Karanja
View of Karanja/Upper Ahobilam temple
Four water Falls on the way to Karanja temple

Way to other Narasimha temples, View near Karanja
Ruins of Temple complex /Chatra before Varaha Narasimha
. ಇನ್ನು ನಮ್ಮ ಪಯಣಕ್ಕೆ ಬರೋದಾದ್ರೆ ನಾವು ಮೊದಲು ಹೊಕ್ಕ ದೇಗುಲ ವರಾಹ ನರಸಿಂಹ. 
One more waterstream in front of Varahanarasimha temple
ಇಲ್ಲಿಗೆ ಬರೋ ಹೊತ್ತಿಗೆ ೧೧:೫೪. ಇಲ್ಲಿ ಅಹೋಬಲಂನಲ್ಲಿನ ಎಲ್ಲಾ ದೇಗುಲಗಳ ಹೆಸರು ಮತ್ತು ಹೇಗೆ ಹೋಗೋದು ಎಂಬ ಮಾರ್ಗಸೂಚಿಯೂ ಇದೆ. 


ಇಲ್ಲಿಂದ ಮುಂದೆ ಎರಡು ದಾರಿಗಳಿವೆ. ಒಂದು ಎದುರಲ್ಲೇ ಹರಿಯೋ ನದಿಯಗುಂಟ ನಡೆದರೆ ಸಿಗೋ ಜ್ಲಾಲಾಲ ನರಸಿಂಹ ದೇಗುಲಕ್ಕೆ ಸಾಗೋ ಹಾದಿ. ಮತ್ತೊಂದು ಎಡಕ್ಕೆ ಸಾಗೋ ಮೆಟ್ಟಿಲುಗಳನ್ನು ಹಿಡಿದು  ಮಾಲೋಲ ದೇಗುಲಕ್ಕೆ ಸಾಗೋ ಹಾದಿ. ಆ ಹಾದಿಯಲ್ಲಿ ಕರ್ಕೊಂಡು ಹೋಗೋದಕ್ಕೆ ಆರ್ನೂರು ರೂಪಾಯಿ ಗೈಡಿಗೆ ಅಂತ ಇದ್ರು ಆ ಹಾದಿಯಲ್ಲಿನ ಜನ.  ನಾವು ಬೆಳಗ್ಗಿಂದ ಎಡದಿಕ್ಕಿನ ಹಾದಿಯನ್ನೇ ಹಿಡಿಯುತ್ತಿದ್ದಿದ್ರಿಂದ ಮೊದಲು ಎಡಗಡೆ ನೋಡಿ ಆಮೇಲೆ ಬಲಗಡೆ ಬಂದ್ರಾಯ್ತು ಅಂತ ಮಾಲೋಲ ಗುಡಿಯತ್ತ ಹೊರಟೆವು.
 
ಮಾಲೋಲ ನರಸಿಂಹ
 
 
ಇಲ್ಲಿಂದ ಮೇಲೆ ಹತ್ತೋ ಮೆಟ್ಟಿಲುಗಳನ್ನೇರಿ ಹನ್ನೆರಡೂಕಾಲರ ಹೊತ್ತಿಗೆ ಮಾಲೋಲ ನರಸಿಂಹ ಗುಡಿಯನ್ನು ತಲುಪಿದ್ವಿ.  ಇಲ್ಲಿ ಸಾಗೋ ಹಾದಿಯಲ್ಲಿ ಮರಕ್ಕೆ ಬಳೆ, ಬಟ್ಟೆಗಳನ್ನ ಹಾಕೋ ಹರಕೆಯ ವಿಚಿತ್ರ ಹರಕೆ ಕಾಣುತ್ತೆ. ಹಂಪಿಗೆ ಹೋದಾಗ ಅಲ್ಲಿನ ಮರಗಳಿಗೆ ಈ ತರ ಕಟ್ಟಿದ್ದನ್ನು ಮೊದಲು ನೋಡಿದ್ದ ನಮಗೆ ಇಲ್ಲಿ ಅದರ ಪುನರಾವರ್ತನೆಯಾದ ಅನುಭವ. 
 
 
ಇಲ್ಲಿನ ಗುಡಿಗೆ, ಅಲ್ಲಿನ ದ್ವಾರಪಾಲಕರಿಗೂ ಒಂದು ನಮಸ್ಕಾರ ಹಾಕಿ ಹೊರಬರೋ ಹೊತ್ತಿಗೆ ಹೊರಗೆ ಗುರುಕುಲಕ್ಕೆ ೦.೪ ಕಿ.ಮೀ ಅಂತ ಬೋರ್ಡು ಕಾಣ್ತು. ಬಲಕ್ಕೆ ಮುಂದಿನ ಗುಡಿಗೆ ಹೋಗೋ ಹಾದಿ. ಇಲ್ಲಿನ ಅರ್ಚಕರಲ್ಲಿ ಕೇಳಿದ್ರೆ its a wonderfull place , must see  ಅಂದ್ರು. ಅಬ್ಬಬ್ಬಾ ಅಂದ್ರೆ ಕಾಲು ಘಂಟೆ ಆಗ್ಬೋದು . ಅದ್ನ ನೋಡ್ಕೊಂಡೇ ಬರೋಣ ಅಂತ ಆ ಕಡೆ ಹೆಜ್ಜೆ ಹಾಕಿದ್ವಿ

ಪ್ರಹ್ಲಾದ ಬದಿ ಗುರುಕುಲ/ಪ್ರಹ್ಲಾದ ಗುಡಿ
ಅಲ್ಲಿಂದ ಪ್ರಹ್ಲಾದ ಗುಡಿಗೆ ಬರೋ ಹೊತ್ತಿಗೆ ಹನ್ನೆರಡೂವರೆ.ಪ್ರಹ್ಲಾದ ಗುಡಿಯ ಬಳಿಯೂ ಎರಡು ಜಲಪಾತಗಳಿವೆ. ಇಲ್ಲಿನ ಜಾಗದಷ್ಟೇ ಅಲ್ಲಿಗೆ ಸಾಗೋ ಹಾದಿಯ ಅನುಭವವೂ ರಮಣೀಯ. ಆ ಹಾದಿಯಲ್ಲಿ ಮೇಲಿಂದ ಕಾಣುವ ಅಹೋಬಲಂನ ದೇವಸ್ಥಾನದ ಆವರಣವನ್ನು ನೋಡೋದೇ ಒಂದು ಅದ್ಭುತ ಅನುಭವ. 

ಇಲ್ಲಿನ ಬಂಡೆಗಳಲ್ಲಿ ಓಂ ನಮೋ ನಾರಾಯಣಾಯ ಎಂಬ ಬರಹಗಳಿರೋದ್ರಿಂದ ಇದನ್ನು ಗುರುಕುಲವೆಂದೂ ಕರೆಯಲಾಗುತ್ತಂತೆ. ಭಕ್ತ ಪ್ರಹ್ಲಾದನ ವಿದ್ಯಾಭ್ಯಾಸ ಇಲ್ಲೇ ಆಯಿತೆಂದೂ , ಅವನಿಗಾಗಿ ಇಲ್ಲಿ ಪ್ರಹ್ಲಾದ ಗುಡಿಯಿದೆಯೆಂದೂ ಹೇಳುತ್ತಾರೆ. ಇಲ್ಲಿನ ಬಂಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಬರಹಗಳಿರೋದು ಸುಳ್ಳಲ್ಲವೆಂಬ ಸತ್ಯ ಗೋಚರಿಸುತ್ತೆ ! ಇಲ್ಲಿನ ಪರಿಸರವನ್ನು ವರ್ಣಿಸೋ ಬದಲು ಅಲ್ಲಿನ ಚಿತ್ರಗಳನ್ನು ಹಾಕೋದೇ ಮೇಲು ಅನಿಸುತ್ತೆ ! ಇಲ್ಲಿನ ಪರಿಸರವನ್ನು ಬಿಟ್ಟು ಹೊರಡೋಕೆ ಮನಸ್ಸಿಲ್ಲದ ಮನಸ್ಸಿಂದ ಹೊರಡೋ ಹೊತ್ತಿಗೆ ಒಂದು ಘಂಟೆ
Falls at Prahlada Gudi
Prahlada Gudi

 
ಜ್ವಾಲಾಲ
ಇಲ್ಲಿಂದ ಮತ್ತೆ ಮಾಲೋಲಕ್ಕೆ ವಾಪಾಸ್ ಬಂದು ಮುಂದೆ ಹೊರಟ್ವಿ. ಮುಂದೆ ದೇವಸ್ಥಾನಗಳಿವೆ ಅಂತ ಗೊತ್ತಿತ್ತು. ಆದ್ರೆ ಎಷ್ಟು ದೂರದಲ್ಲಿ ಅಂತ ಗೊತ್ತಿರ್ಲಿಲ್ಲ. ಸ್ವಲ್ಪ ದೂರ ನಡಿಯೋ ಹೊತ್ತಿಗೆ ಆ ಕಡೆಯಿಂದ ಬರ್ತಿದ್ದ ಜನ ಸಿಕ್ಕಿದ್ರು. 
People returning from Jwalala to Malala

ಬಲಗಡೆ ನೋಡಿದ್ರೆ ಬೀಳ್ತಿರೋ ಫಾಲ್ಸು. ಸಾಗಿದಷ್ಟೂ ಕಾಣ್ತಿದ್ದ ಮೆಟ್ಟಿಲುಗಳು. ಹತ್ತಿದ್ವಿ, ಇಳಿದ್ವಿ. ಎಲ್ಲೂ ದೇವಸ್ಥಾನದ ಸುಳಿವಿಲ್ಲ. ಸುಮಾರು ಇಪ್ಪತ್ತು ನಿಮಿಷ ಸಾಗೋ ಹೊತ್ತಿಗೆ ಕೆಳಗಿಂದ ಬರ್ತಿದ್ದ ಮತ್ತೊಂದು ಸಾಲಿನ ಮೆಟ್ಟಿಲುಗಳು ಸಿಕ್ಕಿದ್ವು. ಅಲ್ಲಿಂದ ಬಂದವರಿಗೆ ಕೇಳಿ ಇದು ವರಾಹ ದೇವಸ್ಥಾನದ ಕಡೆಯಿಂದ ಬಂದ ಹಾದಿಯೇ ಅಂತ ಖಚಿತಪಡಿಸಿಕೊಂಡೂ ಆಯ್ತು.  ಆದ್ರೆ ಅಲ್ಲಿಂದ ಮತ್ತೆ ಮೇಲತ್ತೋ ಮೆಟ್ಟಿಲುಗಳು ಕಂಡವು. ಅದೂ ಒಂದೇ ಉಸಿರಲ್ಲಿ ಹತ್ತುವಂತಹ ಏರಿನ ಮೆಟ್ಟಿಲುಗಳು. ಸ್ವಲ್ಪ ಹತ್ತೋ ಹೊತ್ತಿಗೆ ಇಲ್ಲಿಂದ ಮುಂದೆ ಹತ್ತೋಕೆ ಆಗೋಲ್ಲ. ಹತ್ತೋರಿದ್ರೆ ಹೋಗ್ಬನ್ನಿ ಅಂತ ಗಣೇಶ. ಇಲ್ಲಿಯವರೆಗೆ ಬಂದಾಗಿದೆ. ಮುಂದೆ ಹತ್ತೋದೇ ಅಂತ ನಾನು. ನಾನು ನನ್ನ ಸ್ಪೀಡಲ್ಲಿ ಹತ್ತುತೀನಿ. ಬೇಗ್ಬೇಗ ಹತ್ತೋಕಾಗಲ್ಲ. ಆದ್ರೆ ಹತ್ತೋದೆಂತೂ ಗ್ಯಾರಂಟಿ ಅಂತ ಸುಬ್ಬು. ಸರಿ ಅಂತ ಹತ್ತೋಕೆ ರೆಡಿಯಾದ ಮೂವರು. ಇಲ್ಲೇ ಇರ್ತೀವಿ, ನೀವು ನೋಡ್ಕೊಂಡು ಬನ್ನಿ ಅನ್ನೋ ಮಾಧವ, ಕೌಶಿಕ ಮತ್ತು ಗಣೇಶ. ಸರಿ, ಅಂತ ಬೆಳಗ್ಗಿಂದ ಹೊತ್ತಿದ್ದ ಬ್ಯಾಗು ಅಲ್ಲೇ ಇಟ್ಟು , ಒಂದಿಷ್ಟು ನೀರು ಕುಡಿದು ಮೇಲೆ ಹೊರಟ್ವಿ. ಅಲ್ಲಿಂದ ಹತ್ತೇ ನಿಮಿಷ ಹತ್ತಿದ್ದು, ಎದುರು ಒಂದು ಅಧ್ಬುತವೆನಿಸೋ ಜಲಧಾರೆ. ಅದರ ಆಚೆಬದಿ ಒಂದು ದೇವಾಲಯ. ಬೀಳ್ತಿರೋ ಜಲಪಾತದ ಮಧ್ಯೆ ಆ ಕಡೆ ದಾಟೋ ಹಾದಿ !
Falls At Jwalala
 ಈ ಜಲಧಾರೆಯ ಮಧ್ಯದಿಂದ ಹೆಂಗಪ್ಪಾ ಹೋಗದು ಅಂತ ಅಂದ್ಕೋತಾ ಮುಂದೆ ಹೆಜ್ಜೆ ಇಟ್ವಿ. ಒಂದಿಷ್ಟು ಜನ ಆ ಜಲಧಾರೆಗೆ ತಲೆ ಕೊಡ್ತಾ ಇದಾರೆ. ಕೆಲವರು ಆ ಕಡೆಯಿಂದ ಬರ್ತಾ ಇದಾರೆ. ಅದನ್ನು ದಾಟಿ ಮುಂದೆ ಸಾಗಿದ್ರೆ ನೀರಧಾರೆಯ ಹೊಡತಕ್ಕೆ ದೇವಾಲಯದ ಒಳಗೂ ನೀರು !ಆ ಜ್ವಾಲಾಲ ನರಸಿಂಹ ದೇಗುಲದಲ್ಲಿನ ದೇವರಿಗೊಂದು ಕೈಮುಗಿದು ಮುಂದೆ ನೋಡಿದ್ರೆ ಅಲ್ಲೊಂದು ಮನೆ ಮತ್ತು ಕಟ್ಟಿದ ಹಸು !! ಇಲ್ಲಿಗೆ ಒಂದ್ಸಲ ಬರೋಕೆ ಇಷ್ಟು ಕಷ್ಟ ಪಡ್ತಿದ್ದಾಗ ಇವರು ಹೆಂಗಪ್ಪಾ ಇಲ್ಲೇ ಜೀವನ ನಡೆಸ್ತಿರೋದು ಅನ್ನಿಸಿದ್ದು ಸುಳ್ಳಲ್ಲ. ಆಮೇಲೆ ಇಲ್ಲಿಗೆ ಬರೋಕೆ ಬೇರೆ ದಾರಿಯೇನಾದ್ರೂ  ಇರ್ಬೋದಾ ಅಂತನಿಸಿದ್ದೂ ಸುಳ್ಳಲ್ಲ.

ಉಗ್ರ ಧ್ವಜ ಸ್ಥಂಭ
ಅಲ್ಲಿಂದ ಮೇಲೆ ಅಂದ್ರೆ ಜಲಪಾತ ಧುಮ್ಮುಕ್ತಿರೋ ಜಾಗದತ್ತ ನೋಡಿದ್ರೆ ಅಲ್ಲೊಂದಿಷ್ಟು ಧ್ವಜಗಳು ಕಾಣುತ್ತೆ. ಅದ್ರ ಹೆಸ್ರೇ ಉಗ್ರ ಧ್ವಜ ಸ್ಥಂಭ. ಅಲ್ಲಿಗೆ ಮೇಲೆ ಹತ್ತೋಕೆ ಮೆಟ್ಟಿಲುಗಳಿಲ್ಲದಿದ್ರೂ ಪಕ್ಕದಲ್ಲಿರೋ ಹಾದಿಯಲ್ಲಿಂದ ಮೇಲೆ ಹತ್ತಬಹುದು. ಕೆಳಗಿದ್ದವರಿಗೆ ಮುಕ್ಕಾಲು ಘಂಟೆಯವೊಳಗೆ ಎಲ್ಲಿಗೆ ಹೋದ್ರೂ ವಾಪಾಸ್ ಬರ್ತೀವಿ ಅಂತ ಹೇಳಿದ್ರಿಂದ ಉಗ್ರ ಧ್ವಜಸ್ಥಂಭಕ್ಕೆ ಹೋಗದೇ ಕೆಳಗೆ ವಾಪಾಸ್ಸಾದ್ವಿ.
See Ugra Dwajastamba at the center of 2 flags, on top of waterfalls

ಅಲ್ಲಿಂದ ವಾಪಾಸ್ ಬಂದು ನದಿಯ ಹಾದೀಲಿ ಸಾಗೋ ಅನುಭವ ಮತ್ತೊಂತರ. ನದಿಯಲ್ಲಿ ಎಲ್ಲಿ ಆಳ ಕಮ್ಮಿಯಿದೆ ಅಂತ ನೋಡ್ಕೊಂಡು ದಾಟೋ ಅನುಭವವೇ ಬೇರೆ. ಎದ್ರಿಂದ ಗೈಡುಗಳ ಜೊತೆ ಬರ್ತಿರೋರನ್ನ ನೋಡಿ ದಾಟಬಹುದಾದ್ರೂ ಅದೊಂತರ ಮಜಾ ಅನುಭವ. ನಂತರ ಭೋಜನಶಾಲೆಗೆ ಹೋಗಬೇಕು ಅಂದ್ಕೋತಾ ಇದ್ರೂ ಮುಂದಿದ್ದೋರು ಎಲ್ಲಿದಾರೆ ಅಂತ ಕಾಣ್ತಿರಲಿಲ್ಲ. ಎಷ್ಟು ಬೇಗ್ಬೇಗ ಹೆಜ್ಜೆ ಹಾಕಿದ್ರೂ ಮಧ್ಯ ಮಧ್ಯ ಫೋಟೋಗೆ ಅಂತ ನಾನು, ಸುಬ್ಬು ನಿಂತಿದ್ರಿಂದ ಮುಂದಿದ್ದ ನಾಲ್ಕು ಜನ ಮಿಸ್ಸಾಗಿ ಹೋಗಿದ್ರು.
 

ಅಹೋಬಲಂನ ಬ್ರಾಹ್ಮಣ ಭೋಜನಶಾಲೆ
 ಭೋಜನಶಾಲೆಗೆ ಬಂದಿರ್ಬೋದಾ ಅಂತ ಅಲ್ಲಿ ಎದುರಿಗಿನ ಚಪ್ಪಲಿಗಳನ್ನ ನೊಡಿದ್ರೂ ಮಾಧವನ ವುಡ್ ಲ್ಯಾಂಡ್ಸ್ ಚಪ್ಪಲಿಗಳು ಕಾಣ್ತಿರಲಿಲ್ಲ. ನನ್ನ ಛತ್ರಿ ಕೌಶಿಕನ ಬಳಿ ಇದ್ದಿದ್ರಿಂದ ಸುಬ್ಬುಗೆ ನೀನಿಲ್ಲೇ ಇರು, ನಾನು ಮುಂದೆಲ್ಲಾದ್ರೂ ಇದ್ದಾರಾ ನೋಡ್ಕೊಂಡು ಬರ್ತೀನಿ ಅಂತ ಮುಂದಿದ್ದ ಭೋಜನ ಶಾಲೆಗಳ ಕಡೆ ಹೆಜ್ಜೆ ಹಾಕಿದೆ. ಕೆಳಗಿದ್ದ ಮೂರ್ನಾಲ್ಕು ಭೋಜನಶಾಲೆಗಳೆದ್ರು, ಕ್ಯಾಂಟೀನುಗಳಲ್ಲೆಲ್ಲಾ ಹುಡುಕಿದ್ರೂ ನಾಲ್ಕು ಜನ ಕಾಣ್ತಿಲ್ಲ. ಮತ್ತೆ ವಾಪಾಸ್ ಬಂದು ವರಾಹ ದೇವಸ್ಥಾನದ ಬಳಿಯೆಲ್ಲಾದ್ರೂ ನಮಗಾಗಿ ಕಾಯ್ತಿದ್ರಾ ಅಂತ ಹುಡುಕಿ ಅಲ್ಲೂ ಸಿಕ್ಕದಿದ್ದಾಗ ಮುಂದೆ ಎಲ್ಲಾದ್ರೂ ನಾಲ್ಕು ಜನ ಸಿಕ್ಕಿದ್ರಾ ಅಂತ ಕೇಳಿ, ಅವ್ರು ನಮ್ಮನ್ನ ಹುಡುಕ್ತಾ ನದಿಯ ಹಾದೀಲಿ ಮತ್ತೆ ವಾಪಾಸ್ಬಂದಿಲ್ಲ ಅಂತನೂ ಖಚಿತಪಡಿಸಿಕೊಂಡು ವಾಪಾಸ್ ಬರೋ ಹೊತ್ತಿಗೆ ಸುಮಾರು ಅರ್ಧಘಂಟೆ ಕಳೀತಾ ಬಂದಿತ್ತು. ಫೋನ್ ನೆಟ್ವರ್ಕಿಲ್ಲ. ಎಲ್ಲಂತ ಹುಡುಕೋದಪ್ಪ ಅಂತ ಅಂದ್ಕೋತಿರುವಾಗ ವರಾಹ ದೇವಸ್ಥಾನದತ್ರ ಒಂದು ಕಡ್ಡಿ ನೆಟ್ವರ್ಕು ಸಿಗ್ತಿತ್ತು. ಅಲ್ಲಿಂದ ಫೋನ್ ಮಾಡಿದ್ರೆ ಆ ಕಡೆ ನೆಟ್ವರ್ಕಿಲ್ಲ :-(
In search of people

 ಏನಪ್ಪ ಕತೆ ಅಂತ ಅಂದ್ಕಂಡು ವಾಪಾಸ್ ಬರ್ತಿದ್ದೆ. ಕಾರಂಜ ದೇವಸ್ಥಾನವನ್ನು ದಾಟಿ  ಭೋಜನಶಾಲೆಯ ಹತ್ರ ಬರುವಾಗ ಕೆಳಗಿಂದ ಮಾಧವ ಬರೋದು ಕಾಣ್ತಿತ್ತು. ಹೋದ ಜೀವ ಬಂದಂಗಾಯ್ತು. ಆಷ್ಟೇ ಸಿಟ್ಟೂ ಉಕ್ತಿತ್ತು. ಅವ ಬಂದವನೇ,ನೀನು ಒಂದು ಮಾತೂ ಆಡ್ಬೇಡ. ಸೀದಾ ಬಂದು ಊಟ ಮಾಡು, ಊಟ ಆದ್ಮೇಲೆ ಮಾತಾಡೋಣಂತೆ ಅಂದ ಅವ. ಸಿಟ್ಟಿನ ಕೈಗೆ ಬುದ್ದಿ ಕೊಡ್ಬಾರ್ದು ಅಂತಂದಂಗೆ ಭೋಜನಶಾಲೆಗೆ ಬಂದು ಊಟದ ಹಾಲಿಗೆ ಬಂದ್ರೂ ಅಲ್ಲಿ ಊಟ ಮುಗಿದೋಗಿತ್ತು. ಮತ್ತೆ ಅದಕ್ಕೆ ಅಂತ ಅರ್ಧ ಘಂಟೆ ಕಳೆದಾಯ್ತು. ಕೊನೆಗೂ ಅಲ್ಲಿನ ಎಲೆಯಲ್ಲಿ ಅನ್ನ, ಪಪ್ಪು, ಪಲ್ಯ, ಚಟ್ನಿ, ಮಜ್ಜಿಗೆಯ ಊಟ  ಮೂರೂಮುಕ್ಕಾಲರ ಹೊತ್ತಿಗೆ ಸಿಕ್ಕಾಗ ಅದು ಅಮೃತವೇ ಎನ್ನುವಷ್ಟು ಖುಷಿಯಾಗಿತ್ತು. ಫ್ಲಾಷ್ ಬ್ಯಾಕಲ್ಲಿ ಈ ಕಡೆಗೆ ನಡೆದ ಕತೆಗೆ ಬಂದ್ರೆ ಸುಸ್ತಾಗಿ ನಡ್ಕೊಂಡು ಬಂದಿದ್ದವರಿಗೆ ಭೋಜನಶಾಲೆಯಲ್ಲಿ ಊಟಕ್ಕಾಗಿದೆ ಅಂತ ಕರೀತಿದ್ದಿದ್ದು ಕಾಣ್ತಿತ್ತು. ಸರಿ ಅಂತ ಮೇಲೆ ಹತ್ತಿದವ್ರೇ ಚಪ್ಪಲಿಯನ್ನು ಮೇಲೇ ಮೂಲೇಲಿ ಬಿಟ್ಟಿದ್ರು. ಅವ್ರು ಬಿಟ್ಟ ಚಪ್ಪಲಿ ಮೆಟ್ಟಿಲುಗಳ ಮೇಲಿರದಿದ್ದರಿಂದ ಅವ್ರು ಒಳಕ್ಕೆ ಹೋಗಿದ್ದು ಗೊತ್ತಾಗಿರಲಿಲ್ಲ. ಮೆಟ್ಟಿಲು ಹತ್ತಿ ಮೇಲೆ ಹೋಗಿದ್ರೂ ಅವ್ರು ಕಂಡಿರಲಿಲ್ಲ ನನಗೆ.ಯಾಕಂದ್ರೆ ಅವ್ರು ಆಗ ಊಟಕ್ಕೆ ಕೂತಿದ್ರು ! ಬಾಗಿಲು ಹಾಕಿದ್ದ ಊಟದ ಹಾಲೊಳಗೆ ಹೊಕ್ಕು ನೋಡಿರಲಿಲ್ಲವಷ್ಟೇ ನಾನು. ನಾನು ಹೆಂಗಿದ್ರೂ ಅಲ್ಲಿಗೇ ಮುಂದಿನ ಪಂಕ್ತಿಗಾದ್ರೂ ಬರ್ತೀನಿ ಅಂತ ಅವರ ಲೆಕ್ಕಾಚಾರ, ನನ್ನ ಬಿಟ್ಟು ಅವ್ರು ಊಟಕ್ಕೆ ಕೂತಿರ್ಲಿಕ್ಕಿಲ್ಲ, ಮಿಸ್ಸಾದ ನಮ್ಮನ್ನ ಹುಡುಕ್ತಿದ್ದಾರೆ ಅಂತ ನನ್ನ ಲೆಕ್ಕಾಚಾರ :-)
Food at the Leaf plate of Ahobilam

ಪಾವನ
ಊಟ ಮುಗಿಯೋ ಹೊತ್ತಿಗೆ ನಾಲ್ಕಾಗಿತ್ತು. ಹಿಂದಿದ್ದ ಪಾವನಕ್ಕೆ ವಾಪಾಸ್ ಹೋಗೊಣ್ವಾ ಅಂತ ನಾವು ಮಾತಾಡ್ತಾ ಇದ್ದಾಗ ಅಲ್ಲಿದ್ದವರು ಪಾವನ ಮೂರಕ್ಕೆ ಬಾಗಿಲು ಹಾಕುತ್ತೆ . ಈಗ ಹೊದ್ರೂ ಉಪಯೋಗಿಲ್ಲ ಅಂದ್ರು. ಇಲ್ಲಿ ಪಾವನ ಅಂತಲ್ಲ, ಸುಮಾರು ಎಲ್ಲಾ ಜಾಗಗಳೂ ಮೂರರ ಮೇಲೆ ಬಾಗಿಲು ಹಾಕುತ್ತೆ. ಇಲ್ಲಿಂದ ಪಾವನಕ್ಕೆ ನಾಲ್ಕು ಕಿ.ಮೀ ನಡೆಯಬೇಕಿದ್ರಿಂದ ಕೆಳಗಿನ ಅಹೋಬಲದ ಯಾವುದನ್ನೂ ನೋಡೋಕಾಗುಲ್ಲ ಅಂತ ವಾಪಾಸ್ಸಾಗೋ ಮನಸ್ಸು ಮಾಡಿದ್ವಿ. ಸರಿ ನಾನು ಕಾರಂಜವನ್ನಾದ್ರೂ ನೋಡ್ಕೊಂಡು ಬರ್ತೀನಿ, ಹತ್ತೇ ನಿಮಿಷ ಅಂತ ನಾ ಕ್ಯಾಮರವನ್ನೆತ್ತಿ ಹಿಂದೋಡಿದೆ.

ಕಾರಂಜ ಲಕ್ಷ್ಮೀನರಸಿಂಹ
ಅಲ್ಲಿಂದ ಒಂದು ಏರಿಯನ್ನೇರಿದ್ರೆ ಕಾರಂಜ. ಅಲ್ಲಿ ಹೋಗಿ ಅಲ್ಲಿನ್ನೂ ತೆರೆದಿದ್ದ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಅದರ ಮುಂದಿದ್ದ ಮಂಟಪದ ಶಿಲ್ಪಕಲೆಯನ್ನೂ ಸವಿದು ಹೇಳಿದಂತೆ ಹದಿನೈದು ನಿಮಿಷಕ್ಕೆ ವಾಪಾಸ್ಸಾಗಬೇಕು ಅಂತ ನೊಡ್ತೀನಿ, ಹಿಂದೆಯೇ ಸುಬ್ಬು, ದಾಸ್ ಅಲ್ಲಿದ್ದ ಮಂಟಪದ ಬಳಿ ಫೋಟೋ ತೆಗಿತಾ ನಿಂತಿದ್ದಾರೆ :-) ತಗಳ್ಳಪ್ಪ, ಸರಿಯಾಯ್ತು ಅಂತ ಎಲ್ಲಾ ಸೇರಿ ಕೆಳಗೋದ್ವಿ

ಕೆಳಗಿನ ಅಹೋಬಲ
ಕೆಳಗೆ ಬಂದ್ರೆ ವಾಪಾಸ್ ಹೋಗೋಕೆ ಒಂದೇ ಒಂದು ಬಸ್ಸಿಲ್ಲ. ಆಟೋವೂ ಇಲ್ಲ. ಎಂಟು ಕಿ.ಮೀ ನಡೆಯೋ ಬಾಬ್ತಲ್ಲ. ಅಲ್ಲೊಂದು ಟೆಂಪೋದಂಗೆ ನಿಲ್ಲಿಸಿಕೊಂಡಿದ್ದ. ನಾವಾರು ಜನ ಆರಾಮಾಗಿ ಹೋಗಬಹುದು ಅದ್ರಲ್ಲಿ ಅಂದ್ಕೊಂಡು ಹತ್ತಿ ಕೂತ್ರೆ ಅವ ಹೊರಡುವಂಗೇ ಕಾಣ್ತಿಲ್ಲ.ಅಲ್ಲಿಂದ ಮತ್ತೆ ಅರ್ಧ ಘಂಟೆ ಕಾಯಿಸಿದ ಅವ ಹದಿನೆಂಟು ಜನರಾಗ್ಬೇಕು ಅಂತ! ಅಂತೂ ಇಂತೂ ಕೆಳಗಿನ ಅಹೋಬಲ ತಲುಪೋ ಹೊತ್ತಿಗೆ ನಾಲ್ಕೂಮುಕ್ಕಾಲು. ಅಲ್ಲಿಂದ ಸೀದಾ ಕೆಳಗಿನ ಅಹೋಬಲದ ಲಕ್ಷ್ಮೀನರಸಿಂಹ ದೇಗುಲಕ್ಕೆ ಸಾಗುವಾಗ ಸಿಗುವ ಶಿಲ್ಪಕಲಾ ಪೂರ್ಣ ಮಂಟಪಗಳು, ಕಂಬಗಳು, ಅಲ್ಲಿನ ಶಿಲ್ಪಕಲೆ ನೋಡೋ ಹೊತ್ತಿಗೆ ಘಂಟೆ ಐದೂ ಹತ್ತು. ಇಲ್ಲಿನ ದೇವಸ್ಥಾನದಲ್ಲಿ ನೀನು ಹಾಫ್ ಪ್ಯಾಂಟ್ ಹಾಕ್ಕೊಂಡು ಬಂದಿದ್ದೀಯ. ನಿಂಗೆ ದರ್ಶನಕ್ಕೆ ಒಳಗೆ ಬಿಡೋಲ್ಲ ಅಂತ . ಯಾವತ್ತೂ ದೇವಸ್ಥಾನಕ್ಕೆ ಹೋಗ್ತಾ ಪ್ಯಾಂಟೋ, ಪಂಚೆಯಲ್ಲೋ ಹೋಗ್ತಿದ್ದವ ನಾನು ಇವತ್ತು ಟ್ರಿಪ್ಪು ಅಂತ ಚಡ್ಡಿಯಲ್ಲಿ ಬಂದಿದ್ದಕ್ಕೆ ಕೇಳಬೇಕಾದ ಮಾತೇ ಇದು. ವರದಳ್ಳೀಲಿ ಹಿಂಗೇ ಜೀನ್ಸ್ ಪ್ಯಾಂಟ್ ಹಾಕ್ಕೊಂಡು ಬಂದಿದ್ದೋರಿಗೆ ಗರ್ಭಗುಡಿಗೆ ಬಿಡೋಲ್ಲ ಅಂದಿದ್ದನ್ನ ಅವರು ದೇವಸ್ಥಾನಕ್ಕೆ ಬಿಡೋಲ್ಲ ಅಂತ ಫೇಸ್ಬುಕ್ಕಲ್ಲಿ ಗಲಾಟೆ ಮಾಡಿದ್ರು ಅಂತ ಕೇಳಿದ ನೆನಪಾಯ್ತು. ಅಲ್ಲಿ ಮಹಿಳೆಯರಾದ್ರೆ ಸೀರೆ, ಪುರುಷರಾದ್ರೆ ಪಂಚೆ, ಮಡಿ ಉಟ್ಕೊಂಡು ಹೋದ್ರೆ ಮಾತ್ರ ಅರ್ಚನೆಗೆ ಬಿಡೋದು, ನಾನು ಜೀನ್ಸ್ ಹಾಕ್ಕೊಂಡು ಹೋದ್ರೂ ಬಿಡೋಲ್ಲ , ಗುಡಿಯ ಒಳಗೋಗೋದಕ್ಕೂ, ಗರ್ಭಗುಡಿಗೆ ಹೋಗೋದಕ್ಕೂ, ದರ್ಶನಕ್ಕೆ ಬಿಡೋದಕ್ಕೂ ವ್ಯತ್ಯಾಸವಿದೆ ಅಂತ ಗೆಳೆಯನೊಂದಿಗೆ ಮಾತಾಡಿದ್ದು ನೆನೆಪಾಯ್ತು. ನಾನು ಹೋಗ್ತಿದ್ದಿದ್ದು ಗರ್ಭಗುಡಿಗಲ್ಲ, ಒಳಗಿದ್ದ ನವರಂಗ, ಅರ್ಧಮಂಟಪಕ್ಕೆ. ಸರಿ, ಅದಕ್ಕೂ ಪ್ರವೇಶವಿಲ್ವಾ ಅಂದ್ಕೋತಿರುವ ಹೊತ್ತಿಗೆ ನನ್ನ ಕತ್ತಲ್ಲಿದ್ದ ಟವೆಲನ್ನು ನೋಡಿ, ಅದನ್ನು ಸುತ್ಕೊಂಡು ಒಳಗೆ ಬಾ ಪರವಾಗಿಲ್ಲ ಅಂದ್ರು ಅಲ್ಲಿದ್ದೋರು. ಸರಿ, ಚಡ್ಡಿಯ ಮೇಲೆ ಟವೆಲ್ ಸುತ್ಕೊಂಡು ಒಳಗೆ ಹೋಗಾಯ್ತು. 
 
ಬ್ಯಾಗಲ್ಲಿದ್ದ ಪ್ಯಾಂಟ್ ಹಾಕ್ಕೊಂಡು ಹೋಗ್ಬೋದಿತ್ತು.ಆದ್ರೆ ಬರೋ ಹಾದಿಯಲ್ಲೆಲ್ಲಾ ಮಳೆ ಸಿಕ್ಕಿ ಬಟ್ಟೆ ಹಸಿಯಾಗ್ತನೇ ಇದ್ದಿದ್ರಿಂದ ಎಲ್ಲಾ ನೋಡಾದ ಮೇಲೆ ಹಾಕ್ಕೊಳ್ಳೋಣ ಅಂದ್ಕೊಂಡಿದ್ದೆ. ಈ ದೇಗುಲಗಳ ಶಿಲ್ಪಕಲೆಗಳು ಚೆನ್ನಾಗಿವೆ. ಕರ್ನಾಟಕದ ಬೇರೆಲ್ಲಾ ದೇಗುಲಗಳಲ್ಲಿದ್ದಂತೇ ಇಲ್ಲೂ ಮಿಥುನ ಶಿಲ್ಪಗಳಿವೆ. ಆದ್ರೆ ಅದೇ ಎದ್ದು ಕಾಣುವಂತೆ ಅದಕ್ಕೆ ಬಿಳಿ ಸುಣ್ಣವನ್ನೋ, ಕೆಂಬಣ್ಣವನ್ನೋ ಬಳಿದದ್ದು ಇಷ್ಟವಾಗಲಿಲ್ಲ. ಮಾನವನೆಂದ ಮೇಲೆ ಅದೊಂದು ಸಹಜ ಕ್ರಿಯೆಯಷ್ಟೇ. ಅದರ ವೈಭವೀಕರಣ ಇಷ್ಟವಾಗಲಿಲ್ಲವಷ್ಟೆ.
Scluptures at Lower Ahobilum

ಯೋಗಾನಂದ 
ಅಲ್ಲಿಂದ ಮುಂದೆ ಮೂರು ಕಿ.ಮೀ ಇರುವ ಯೋಗಾನಂದ ದೇಗುಲಕ್ಕೆ ಹೋಗ್ಬೇಕು ಅಂದ್ಕೊಂಡ್ರೂ ಅಲ್ಲಿಗೆ ಬಸ್ಸಿರಲಿಲ್ಲ.  ದೇಗುಲಗಳು ಐದೂವರೆಗೆ ಬಾಗಿಲು ಹಾಕುತ್ತೆ ಅಂತ ಬೇರೆ ಇಲ್ಲಿ ಹೇಳ್ತಾ ಇದ್ರು. ಬರೋದು ಬಂದಾಗಿದೆ ನೋಡೋದೇ ಸರಿ ಅಂತ ನಾನು. ಆದ್ರೆ ಅಲ್ಯಾವುದೂ ಆಟೋಗಳಿಲ್ಲ. ಆಟೋ ಸ್ಟಾಂಡು ಮುಂದೆಲ್ಲೋ ಇದೆ. ಬೆಳಗ್ಗಿಂದ ನಡೆನಡೆದು ಸುಸ್ತಾಗಿರೋದ್ರ ಜೊತೆ ಇರೋ ಎರಡು ಛತ್ರಿಗಳಲ್ಲಿ ಆರು ಜನ ನೆನ್ಕಂಡು ಆಟೋ ಹುಡುಕೋ ಬದ್ಲು ಇಬ್ಬರು ಹೋಗಿ ಆಟೋ ತರ್ಬೋದು, ಉಳ್ದೋರು ಅಲ್ಲೇ ಮಂಟಪವೊಂದರ ಬಳಿ ಇರ್ಬೋದು ಅನ್ನೋ ಐಡಿಯಾ ಬಂತು. ತಿರುಗೋ ಹುಚ್ಚಿದ್ದವ ನಾನು. ಸರಿ ಬಿಡ್ರಪ್ಪ ಅಂತ ಮುಂದೆ ಸಿಕ್ಕ ಹೋಟೆಲ್ಲು, ಕಾಫಿಯತ್ತ ಮನಸ್ಸು ಮಾಡಿದ್ದ ಸುಬ್ಬುವನ್ನೂ ಮುಂದಕ್ಕೆಳೆದುಕೊಂಡು ಮುಂದಕ್ಕೆ ಸಾಗಿ ಅಲ್ಲಿದ್ದ ಆಟೋದವನತ್ರ ಚೌಕಾಸಿ ಮಾಡಿ, ದೇವಸ್ಥಾನ ತೆಗೆದಿದ್ರೆ ಮಾತ್ರ ಕರ್ಕೊಂಡೋಗು ಅನ್ನೋ ಕಂಡೀಷನ್ನಿನ ಮೇಲೆ ಅವನನ್ನೂ ಒಪ್ಪಿಸಿ  ಕರ್ಕೊಂಡು ಬರೋ ತನಕ ಉಳಿದವ್ರು ಅಲ್ಲೇ ಇದ್ದ ಮಂಟಪದತ್ರ ಕುಳಿತಿದ್ರು. ಹುಚ್ಚಾಪಟ್ಟೆ ಸುರೀತಿದ್ದ ಮಳೇಲೆ ಮುಂದೆ ಮೂರು ಕಿ.ಮೀ ಸಾಗಿ ಯೋಗಾನಂದಕ್ಕೆ ತೆರಳಿದ್ರೆ ಅಲ್ಲಿ ದೇವರಿಗೆ ಅದೇನೋ ಅರ್ಚನೆ, ಭಜನೆಗಳು ನಡೀತಿದ್ವು. ಐದತ್ತು ನಿಮಿಷಗಳು ಕಳೆದ್ರೂ ಅದು ಮುಗಿಯೋ ಹಂಗಿರಲಿಲ್ಲ. ಇಲ್ಲೇ ಕೂತ್ರೆ ಚಕ್ರವಾಟ ನೋಡೋಕಾಗುಲ್ಲ ಅಂತ ಮುಂದೆ ಸಾಗಿದ್ವಿ. 
Yogananda temple

ಚಕ್ರವಾಟ
ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ ಮುಂದೆ ಸಾಗಿದ್ರೆ ಸಿಗೋದು ಚಕ್ರವಾಟ. ಇಲ್ಲಿನ ಅರ್ಚಕರು ಗುಡಿಯ ಬಾಗಿಲು ಹಾಕಿ ಮನೆಗೆ ಹೋಗೋಕೆ ರೆಡಿಯಾಗಿದ್ರು. ಆದ್ರೆ ನಮ್ಮ ಡ್ರೈವರು ಅವರಿಗೆ ಫೋನ್ ಮಾಡಿ ಇರಿಸಿದ್ರಿಂದ ಅವ್ನಿಗೆ ಬಯ್ಯೋಕೆ ಶುರುಮಾಡಿದ್ರು ಅವ ಅಲ್ಲಿಗೆ ಹೋದ ತಕ್ಷಣವೇ. ಇಲ್ಲಿಗೆ ಬಂದು ಆಟೋ ತಗೊಂಡಿದ್ದು ದುಬಾರಿಯಾದ್ರೂ ಲೇಟಾದ್ರೂ ದೇವರ ದರ್ಶನವಾದದ್ದು ನಮ್ಮ ಪುಣ್ಯವಷ್ಟೇ. ಯೋಗಾನಂದ, ಚಕ್ರವಾಟಗಳೆರಡೂ ಇತ್ತೀಚಿನ ಗುಡಿಗಳಂತಿವೆ. ಇವುಗಳಲ್ಲಿ ಅಂತಹ ಶಿಲ್ಪಕಲಾ ಸೌಂದರ್ಯವೂ ಇಲ್ಲ. ಹಾಗಾಗಿ ಮೇಲಿನ ಅಹೋಬಲಂನ ಎಲ್ಲಾ ಗುಡಿಗಳನ್ನೂ ಸಂದರ್ಶಿಸೋಕೆ ಆಗಿ, ಕೆಳಗಿನ ಅಹೋಬಲದ ಲಕ್ಷ್ಮೀನರಸಿಂಹವನ್ನು ಸಂದರ್ಶಿಸಿದರೆ ಬಹುತೇಕ ಎಲ್ಲಾ ನೋಡಿದಂತೆಯೇ. ಇಲ್ಲೇ ನವನರಸಿಂಹ ಗುಡಿಯೂ ಇದೆ. ಇಲ್ಲಿ ಈ ಕ್ಷೇತ್ರದಲ್ಲಿರುವ ಎಲ್ಲಾ ಒಂಭತ್ತು ನರಸಿಂಹರ ಮೂರ್ತಿಗಳನ್ನೂ ಒಂದೇ ಕಡೆ ಸಂದರ್ಶಿಸುವ ಅನುಭವ ಪಡೆಯಬಹುದು. ಇಲ್ಲಿಂದ ಹೊರಡುವ ಹೊತ್ತಿಗೆ ಆರು ಘಂಟೆ ದಾಟಿತ್ತು. ಆರೂ ಕಾಲಿಗೆ ಅಲ್ಲಗಡ್ಡಕ್ಕೆ ಬಸ್ಸು ಅಂತ ಹೇಳಿದ್ರಿಂದ ಅದನ್ನು ಹಿಡಿಯೋ ಗಡಿಬಿಡಿಗೆ ವಾಪಾಸ್ ಹೊರಟ್ವಿ. ಆದ್ರೆ ನಾವು ಬರೋ ಹೊತ್ತಿಗೆ ಆರೂಹತ್ತಾಗಿದ್ರೂ ಆರೂ ಕಾಲಿನ ಬಸ್ಸು ಹೋಗಾಗಿತ್ತು !
Navanarasimha temple

ಭಾರ್ಗವ
ಉಳಿದಿದ್ದ ಒಂದೇ ದೇಗುಲವೆಂದ್ರೆ ಭಾರ್ಗವ ದೇಗುಲ. ಅದಕ್ಕೆ ಬೇರೆ ಕಡೆ ಹೋಗ್ಬೇಕಿತ್ತು ಮತ್ತು ಕಾಡಿನೊಳಗೆ ಹೋಗ್ಬೇಕಿತ್ತು. ಭಾರ್ಗವಕ್ಕೂ ಕರ್ಕೊಂಡು ಹೋಗೋದಾದ್ರೆ ಮುನ್ನೂರು ರೂ ಅಂತ ಡ್ರೈವರು ರೆಡಿಯಿದ್ರೂ ಹುಡುಗರೆಲ್ಲಾ ಅಲ್ಲಗಡ್ಡಕ್ಕೆ ಮತ್ತೆ ಮರಳೋ ಚಿಂತೆಯಲ್ಲಿದ್ರು. ಘಂಟೆ ಆರಾಗಿತ್ತು, ದೇಗುಲ ಬಾಗಿಲು ಹಾಕೋ ಸಮಯವೂ ಆಗಿದ್ರಿಂದ ಭಾರ್ಗವಕ್ಕೆ ಹೋಗದೇ ಅಲ್ಲಗಡ್ಡಕ್ಕೆ ಹೋಗೋಕೆ ಅದೇ ಆಡೋದವನನ್ನ ಕೇಳಿದ್ವಿ. 

ಮತ್ತೆ ಅಲ್ಲಗಡ್ಡಕ್ಕೆ
ಅವನ ಬಳಿ ನಾನೂರಕ್ಕೆ ಡೀಲ್ ಮಾಡಿ ಏಳರ ಹೊತ್ತಿಗೆ ಅಲ್ಲಗಡ್ಡ ತಲುಪಿದ್ವಿ. ಅಲ್ಲಿಂದ ಬೆಂಗಳೂರಿಗೆ ಹೋಗೋಕೆ ನಂದ್ಯಾಲದ ಬದಲು ಕಡಪವೇ ಹತ್ತಿರದ, ಸಖತ್ ಬಸ್ಸಿರೋ ದಾರಿ ಅಂತ ಕೇಳಿದ ನಾವು ಕಡಪದ ಬಸ್ಸು ಕಾದು ಅದನ್ನು ಹತ್ತಿದ್ವಿ. ಅಲ್ಲಿಂದ ಕಡಪ ತಲುಪಿದ್ದು, ಕಡಪದಿಂದ ಬೆಂಗಳೂರಿಗೆ ಹೊರಡೋ ಆಂಧ್ರದ ಬಸ್ಸು ಮಧ್ಯೆಯೇ ಪಂಚರ್ ಆಗಿ ರಾಯಚೂಣ ಅನ್ನೋ ಡಿಪೋ ಬಳಿ ಒಂದೂವರೆ ಘಂಟೆ ನಿಲ್ಲಿಸಿದ್ದರ ಬಗ್ಗೆ ಬರೆಯೋಕೆ ಹೊರಟ್ರೆ ಅದೇ ಒಂದು ದೊಡ್ಡ ಕತೆಯಾದೀತು.ಅಂತೂ ಇಂತೂ ಸೋಮವಾರ ಬೆಳಗ್ಗೆ ಆರೂಮುಕ್ಕಾಲಿಗೆ ಪೀಜಿ ತಲುಪಿದ್ವಿ ಅನ್ನುವಲ್ಲಿಗೆ ಈ ಪಯಣಕ್ಕೊಂದು ವಿರಾಮ.