Wednesday, September 28, 2011

ಮಸುಕಾದ way2sms ನೊಂದಿಗೆ ನೆನಪಾಗೋ ಕಳೆದ ಕೊಂಡಿಗಳು

"ಹರ್ ಏಕ್ ಪ್ರೆಂಡ್ ಜರೂರಿ ಹೋತಾ ಹೈ" ಅಂತ ಏರ್ಟೆಲ್ ಕಂಪ್ನಿ ಹಾಡು ಹಾಡ್ತಾ ಉದಾಸನಾಗಿ ಕೂತಿದ್ದ ಗುಂಡ. ಏನಾಯ್ತೋ ಗುಂಡ ಯಾರು ಕೈಕೊಟ್ರೋ ಅಂತ ಅಲ್ಲಿಗೆ ಬಂದ ಟಾಂಗ ತಿಪ್ಪ ಅಲಿಯಾಸ್ ತಿಪ್ಪೇಶಿ. ಎಲ್ಲಾ ಹಾಳಾಗಿ ಹೋಯ್ತು Do Not Disturb Directory(DND) ಅಂತ ಬಂದು ಹಾಳಾಗಿ ಹೋಯ್ತು ನನ್ನ ಕಥೆ ಅಂತ ಗೋಳಾಡಿದ. ಹೇ. ಮೊಬೈಲು ಕಂಪೆನಿ ಅವ್ರು, ಟೆಲಿ ಮಾಕ್ರೆಟಿಂಗ್ ಅವ್ರು ಕರೆ ಮಾಡಿ ತಲೆ ತಿನ್ನೋದನ್ನ ತಪ್ಸೋಕೆ ಅಂತಲ್ವಾ ಅದ್ನ ಮಾಡಿದ್ದು ಮಿ.ರೌಂಡ್ ಅಂತ ಬಂದ್ಲು ಇಳಾ ದೇವಿ ಅಲಿಯಾಸ್ ಇಳಾ. ಹೌದು ಮಾರ್ರೆ ನೀವು ಐದು ಲಕ್ಷ ಗೆದ್ದಿದ್ದೀರಿ.. ತಗೋಳೋಕೆ ಇದಕ್ಕೆ ಕರೆ ಮಾಡಿ.. ಗೋಲ್ಡ್ ಲೋನ್ ಬೇಕಾ ಅಂತೆಲ್ಲ ಸಂದೇಶ ಕಳ್ಸೂದ ಮಾರ್ರೇ.. ಮೊನ್ನೆ ನಮ್ಮಜ್ಜಯ್ಯನ ಮೊಬೈಲಿಗೆ ನಿಮ್ಮ ಜೀವನ ಸಂಗಾತಿಯನ್ನು ಹುಡುಕಬೇಕಾ ಅಂತ ಸಂದೇಶ ಕಳ್ಸಿದ್ರು ಮಾರ್ರೆ.. ಇದು ಬಂದಿದ್ದು ಒಳ್ಳೇದಾಯ್ತು.. ಅಂತದ್ರಲ್ಲಿ ಅದಕ್ಕೆ ಶಾಪ ಹಾಕೂದ ಗುಂಡೂ ಅಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಹೌದು ಕಣ್ರೋ.. ಹೂಂ ಹೌದು. .ನಾನೂ ಅದಕ್ಕೆ ನನ್ನ ಹೆಸ್ರು ಸೇರ್ಸಬೇಕೂಂತ ಇದೀನಿ ಅಂದ್ಳು ಉಮಾ.. ಆ ಕೆಲ್ಸ ಮಾತ್ರ ಮಾಡ್ಬೇಡ ಮಹಾತಾಯಿ .. ಆಮೇಲೆ ನಾನು ನಿಮ್ಗೆಲ್ಲಾ way2sms ಇಂದ ಸಂದೇಶ ಕಳ್ಸೋಕು ಆಗಲ್ಲ.. ಈಗಿನ ತರ ಅಂದ ಗುಂಡ.. ಓ ಇಲ್ಲೇ ಎಲ್ಲೋ ಗುಂಡನ ದುಃಖಕ್ಕೆ ಮೂಲ ಇದೆ ಅಂತ ಅವ್ರೆಲ್ರಿಗೂ ಡೌಟು ಶುರು ಆಯ್ತು..





           ಮೆದುಳಿಗೆ ಹುಳ ಬಿಟ್ಟುಸ್ಕೊಂಡು ಸುಮ್ನೆ ಕೂರಕ್ಕೆ ಆಗತ್ತಾ?. ಕೇಳೇ ಬಿಟ್ರು.. ಅಲ್ಲಾ way2sms ಇಂದ ಭಾರತದ ಯಾವ ಮೊಬೈಲಿಗಾದ್ರೂ ಸಂದೇಶ ಕಳ್ಸಬೋದು ಅಂತಿದ್ದೆ..ನಮ್ಗೆಲ್ಲಾ ದಿನಾ ಸಂದೇಶ ಕಳ್ಸುತಿದ್ಯಲ ನೀನು.. ಕೊನೆಗೆ via way2sms ಅಂತ ಯಾಕೆ ಹಾಕ್ಕೊತಿದ್ದೆ.. ಆ ತಾಣದ ಭಕ್ತಾನ ನೀನು ಅಂದ್ಳು ಉಮಾ.. ಎಲ್ಲಾ ನಗಾಡಿದ್ರು.. ಯಾಕೆಂತ ಅವ್ಳಿಗೆ ಮೊದ್ಲು ಗೊತ್ತಾಗ್ಲಿಲ್ಲ. ಅಲ್ಲ ಕಣೇ ಆ ತಾಣದಿಂದ ಯಾರಿಗೆ ಬೇಕಾದ್ರೂ ಸಂದೇಶ ಕಳ್ಸಬೋದು.. ಬಂದ ಸಂದೇಶ ಕಳ್ಸಿದೋರ ಸಂಖ್ಯೆಯಿಂದನೇ ಬಂದಂಗೆ ಇರುತ್ತೆ. .ಕೊನೆಗೆ ನೀ ಹೇಳಿದಂಗೆ via ಇರುತ್ತಷ್ಟೆ. ಅದರಿಂದ ೨೦ ಜನರಿಗೆ ಒಟ್ಗೆ ಸಂದೇಶ ಕಳ್ಸಬೋದು.. ಗುಂಡ ದಿನಾ ಅದ್ರಿಂದನೇ ಕಳ್ಸುತಿದ್ದ ಅಲ್ವೇನೋ ಗುಂಡಾ ಅಂದ ತಿಪ್ಪ. ಮಾತಾಡಿ ಒಳ್ಳೇ ಬಕ್ರಾ ಆದ್ನಲಾ ಅಂತ ಉಮಾಗೆ ಬೇಜಾರಾಯ್ತು..ಕಳ್ಸುಬೋದು ಅಲ್ಲ ಕಣ್ಲಾ ಕಳ್ಸುಬೋದಿತ್ತು ಅಂದ ಗುಂಡ..ಎಲ್ರೂ ಒಳ್ಳೆ ಸಸ್ಪೆನ್ಸ್ ಥ್ರಿಲ್ಲರ್ ಶುರು ಆದಂಗೆ ಗುಂಡನ್ನೇ ನೋಡಕ್ಕಿಡಿದ್ರು..

            ಮುಂದುವರಿಸಿದ ಗುಂಡ..ಈಗ DND ನಲ್ಲೀ ದಾಖಲಾಗಿರೋರಿಗೆ ಅದ್ರಿಂದ ಗ್ರೂಪ್ ಸಂದೇಶ ಇರ್ಲಿ ಖಾಲಿ ಸಂದೇಶಾನೂ ಕಳ್ಸೋಕಾಗಲ್ಲ. ರಾತ್ರೆ ಒಂಭತ್ತರಿಂದ ಬೆಳಗ್ಗೆ ೯ರ ವರ್ಗೆ ಗ್ರೂಪ್ ಸಂದೇಶ ಕಳ್ಸೋಕಾಗಲ್ಲ.. ಒಳ್ಳೇ ಗೋಳಾಯ್ತು ಇವ್ರುದ್ದು ಅಂದ.. ಓ ಅದಾ ಸಮಸ್ಯೆ.. ಅದನ್ನೇ ಯಾಕೆ ನಂಬ್ಕೋತೀಯ? 160by2.com, indyarocks ಹಿಂಗೆ ಸುಮಾರು ಇದ್ಯಲ್ಲಾ.. ಅಂದ ತಿಪ್ಪೇಶಿ.. ಎಲ್ರದ್ದೂ ಇದೇ ಕಥೆ ಅಂಬ್ರು ಮಾರ್ರೇ.. ಅಮ್ದ ಮಂಜ.. ಅಷ್ಟಕ್ಕೂ ಅಷ್ಟೆಲ್ಲಾ ತಲೆ ಕೆಡಿಸ್ಕೋ ಬೇಕಾ.. ನಿಮ್ಮತ್ರ ಎಲ್ಲಾ ಮೊಬೈಲಿರೋದು ಯಾಕೆ? ಅದ್ರಲ್ಲಿರೋ ಉಚಿತ ಸಂದೇಶ ಯಾಕೆ? ಸಿಂಪಲ್ ಆಗಿ ಇರೋದಕ್ಕೆ ತುಂಬಾ ತಲೆ ಕೆಡಿಸ್ಕೋತೀರಿ ಬಿಡ್ರಿ ಅಂದ್ಳು ಇಳಾ.. ಇವಂದು ತರ್ಕಾರಿ ಅಲ್ಲಲ್ಲಾ ಸರ್ಕಾರಿ ಮೊಬೈಲಮ್ಮ... ಮುನ್ನೂರು ಸಂದೇಶ ಉಚಿತ ಗೊತ್ತಾ ಅಂದ ತಿಪ್ಪೇಶಿ.. ಏ ಅದೆಂಗೆ ಸಾಧ್ಯ? TRAI ಅದೇ Telephone Regulatory Authority of India ಅವ್ರು ದಿನಕ್ಕೆ ೧೦೦ ಸಂದೇಶ ಮಾತ್ರ ಅಂತ ನಿಯಮ ತಂದಿಲ್ವಾ ಮೊನ್ನೆ ೨೭ರಿಂದ.. ಕಾಗೆ ಹಾರಿಸ್ಬೇಡ ತಿಪ್ಪು ಅಂದ್ಲು ಉಮಾ..ಕರೆಕ್ಟು ಉಮಾ.. ನಂಗೆ ತಿಂಗ್ಳಿಗೆ ಮುನ್ನೂರು ಸಂದೇಶ ಉಚಿತ ಅಷ್ಟೆ.ಅಂತದ್ರಲ್ಲಿ ನಿಮಗೆಲ್ಲಾ ದಿನಾ ಸಂದೇಶ ಹೇಗೆ ಕಳಿಸ್ಲಿ?.ಏನಿಲ್ಲಾ ಅಂದ್ರೂ ೫೦ ಜನ ಇದಾರೆ ನಂಗೆ ಫ್ರೆಂಡ್ಸ್..ಇದ್ದಿದ್ದೊಂದು ಆಧಾರ ಈ way2sms ಊ ಹೋಯ್ತು ಅಂತ ನಾ ತಲೆಬಿಸಿ ಮಾಡ್ಕಂಡಿದ್ರೆ ಈ ತಿಪ್ಪ ಕಾಲೆಳಿತಿದಾನೆ ಅಂತ ಮುಖ ಸಪ್ಪೆ ಮಾಡ್ಕಂಡ ಗುಂಡ..
 
ಸಂದೇಶ ಕಳಿಸ್ಲಿಲ್ಲ ಅಂದ್ರೆ ಪ್ರಪಂಚ ಏನು ಮುಳುಗೋಗಲ್ಲ ತಕ ಅಂದ ತಿಪ್ಪ.ಏ ತಿಪ್ಪ ಸುಮ್ನಿರ್ರಿ ಸಾಕು.. ಗೆಳೆಯರ್ನ ಕಳ್ಕಳೋ ದುಃಖ ಏನೂಂತ ನಿಮ್ಗೇನ್ರೀ ಗೊತ್ತು.. ನನ್ನ ೪ನೇ ಕ್ಲಾಸ್ಮೇಟು ನಂದಿನಿ ಅಂತಿದ್ಲು.. ೫ನೇ ಕ್ಲಾಸಿಗೆ ನಾನು ಬೇರೆ ಸ್ಕೂಲು. ಅವಳುದೂ ಬೇರೆ ಸ್ಕೂಲಾಯ್ತು.. ಅವತ್ತಿಂದ ಇವತ್ತಿನವರ್ಗೂ ಅವ್ಳು ಸಿಕ್ಕಿಲ್ಲ ಗೊತ್ತಾ..ಎಷ್ಟೋ ಸಲ ಅಂದ್ಕೋತೊರ್ನೀನಿ.. ಅವಾಗ್ಲೇ ಮೊಬೈಲಿದ್ದಿದ್ರೆ.. ಸಂದೇಶ ಕಳ್ಸಿಕೋತ ಇನ್ನೂ ಸ್ನೇಹ ಉಳಿಸ್ಕೋಬೋದಿತ್ತು ಅಂತ.. ಹೌದು ಕಣೆ ಉಮಾ.. ನಾ ಎಂಟ್ನೆ ಕ್ಲಾಸಲ್ಲಿದ್ದಾಗ ಉಡುಪೀಲಿ ಒಂದು ಕ್ಯಾಂಪಿಗೆ ಹೋಗಿದ್ದೆ.. ಅಲ್ಲಿ ಇದ್ದಷ್ಟು ದಿನಾ ಪ್ರಶಾಂತಿ ಹೇಳೋಳು ಒಳ್ಳೇ ಗೆಳತೀ ಆಗಿದ್ಲು.. ಹೋಗೋ ದಿನ ಅವ್ಳ ಮನೆ ಅಡ್ರೆಸ್ ಕೊಟ್ಟು ಕಾಗದ ಬರೀತಿರು ಅಕಾ ಅಂದಿದ್ಲು.. ಆಮೇಲೆ ನಾ ಬರೀತಿದ್ದೆ. ತಿಂಗ್ಳಾದ ಮೇಲೆ ಅವ್ಳ ಉತ್ರ ಬರೂದು.. ಕೆಲೋ ಸಲ ಅವ್ಳೇ ಬರ್ಯೂದು.. ಅದು ಯಾರ್ಯಾರ ಕೈಗೆ ಸಿಕ್ಕೂದೋ.. ಆನೆ ಮೂತಿಯವಂಗೆ ಗೊತ್ತು.. ಈಗಿನ ಕಾಲ್ದಲ್ಲಿ ಹಂಗೆ ತಿಂಗ್ಳೆಲ್ಲಾ ಕಾಯೂಕಾತ್ತ.. ಹಂಗಾಗಿ ಈಗ ಎಂತುದು ಇಲ್ಲೆ.. ಆಗ್ಲೇ ಮೊಬೈಲಿದ್ದಿದ್ರೆ ಚೆಂದಿತ್ತು ಕಾಣಿ ಅಂದ್ಳು ಉಮಾ.. 
 

       ಹೌದು ಮಾರ್ರೆ ನಾ ಪಿಯುಸಿ ರಜ್ದಲ್ಲಿ ಇಂಗ್ಲೀಷ್ ಸ್ಪೀಕಿಂಗ್ ಕೋರ್ಸ್ ಅಂತ ಸೇರ್ಕಂಡಿದ್ದೆ.ಅಲ್ಲಿ ಮಂಜು ಅಂತ ಬರ್ತಿದ್ದ. ಅವ್ನು, ನಾನು ಭಯಂಕರ ಮಾತಾಡ್ತಿದ್ವಿ.. ಬಟ್ಲರೋ.. ಕುಟ್ಲರೋ.. ಎಂತದೋ ಒಂದು.. ಆದ್ರೆ ನಂಸರ್ರು ಹೆಚ್ಚೆಚ್ಚು ಮಾತಾಡ್ರಿ ಅಂತ ನಮ್ಗೆ ಇನ್ನೂ ಪ್ರೋತ್ಸಾಹ ಕೊಟ್ತಿದ್ರು.. ಹಿಂಗೆ ಕೋರ್ಸ್ ಮುಗ್ಯೋ ಹೊತ್ಗೆ ಭರ್ಜರಿ ದೋಸ್ತಾಗಿದ್ವಿ ಮಾರ್ರೆ.. ದೋಸ್ತಾನ-೨ ಅನ್ನು ಅಂತ ಟಾಂಟ್ ಕೊಟ್ಟ ತಿಪ್ಪ.. ಎಲ್ಲ ಒಮ್ಮೆ ನಕ್ರು..ಮಂಜನ ಮುಖ ಹುಳ್ಳಗಾಯ್ತು.. ಕೊನೆಗೆ .. ಹಂಗೆಲ್ಲ ಇಲ್ಲ ಮಾರ್ರೆ.. ಕೊನೆಗೆ ಅವ್ನು ಅವ್ನ ಮೊಬೈಲು ನಂಬರ್ಕೊಟ್ಟ.. ನಾನು ನಮ್ಮನೇ ಲ್ಯಾಂಡ್ಲೈನು ನಂಬರ್ ಕೊಟ್ಟೆ.. ಎಲ್ರೂ ಬಿದ್ದು ಬಿದ್ದು ನಗಕಿಡಿದ್ರು ಈಗ.. ಅವಾಗ ನನ್ನತ್ರ ಮೊಬೈಲಿರ್ಲಿಲ್ಲ ಮಾರ್ರೆ.. ಇದ್ದಿದ್ದು ಹೇಳಿದ್ರೆ ಹಿಂಗೆ ನಗೂದ ನೀವು? ಅಂದ ಮಂಜ..

        ಹೌದು ಕಣ್ರೀ.. ನಾನು ಹೊನ್ನೇಮರಡು,ಜೋಗ,ಮುಪ್ಪಾನೆ,ದಬ್ಬೆ ಫಾಲ್ಸ್, ಕಾನೂರು ಕೋಟೆ, ಹಿಂಗೆಲ್ಲಾ ಜೋಗದತ್ರ ತಿರ್ಗಕ್ಕೆ ಶಿವಮೊಗ್ಗದ ಯೂಥ ಹಾಸ್ಟೆಲಿಂದ ಹೋಗಿದ್ದೆ.. ಅವಾಗೊಬ್ಬ ಪರಿಚಯ ಆಗಿದ್ದ..ಫುಲ್ ಮಜಾ ಮಾಡಿದ್ವಿ ಅವಾಗ ಅಂದ ಗುಂಡ.. ಯಾವಾಗ ಹೋಗಿದ್ಯೋ ಪಾಪಿ ನಮ್ಮನ್ನ ಬಿಟ್ಟು ಅಂತ ಎಲ್ರೂ ಒಂದೊಂದು ಬಿಟ್ರು.... ಆಮೇಲೆ ಕೊನೆಗೇನಾಯ್ತು ಹೇಳು ಅಂದ್ರು ಸ್ವಲ್ಪ ಸಮಾಧಾನ ಮಾಡ್ಕೊಂಡು..ಅದು ಮೊದಲ್ನೆ ಸೆಮ್ಮಿನ ಕಥೆ ಕಣ್ರೋ.. ಅವ ನಂಬರ್ ಕೊಟ್ಟಿದ್ದ.. ಎರ್ಡು ಮೂರು ದಿನಕ್ಕೊಂದೊಂದು forward ಸಂದೇಶ ಹಾಕ್ತಿದ್ದ..ಆದ್ರೆ ನನ್ನತ್ರ ಸಂದೇಶನೇ ಇರ್ತಿರ್ಲಿಲ್ವಲಾ.. ಎಲ್ಲೋ ತಿಂಗ್ಳಿಗೆ ಒಂದೊಂದು ಹಾಕ್ತಿದ್ದೆ.. ಈಗ ಅವ್ನು ಸಂದೇಶನೇ ಕಳ್ಸಲ್ಲ ಕಣ್ರೋ.. ನನ್ನ ಮರ್ತಿರ್ಬೇಕು ಅನ್ಸತ್ತೆ ಅಂತ ಮತ್ತೆ ಬೇಜಾರು ಮಾಡ್ಕಂಡ ಗುಂಡ.


       ಕರೆ ಮಾಡ್ಬೋದಿತ್ತಲ್ಲ ಅಂದ್ಳು ಇಳಾ.. ಆ ನಂಬರಿಗೆ ಮಾಡಿದ್ರೆ ಬೇರೆ ಯಾರೋ ಎತ್ಕೋತಾರೆ.... ಬಹುಶ ನಂಬರ್ ಬದಲಾಯಿಸಿರ್ಬೇಕು.. ಅದ್ಕೇ ಹೇಳೋದು ಅಪರೂಪಕ್ಕಾದ್ರೂ ಸಂದೇಶ ಕಳ್ಸುತಿರಬೇಕು ಅಂತ.. ಕಂಜೂಸಿ, ನಿನ್ನ ತರ್ಕಾರಿ ಮೊಬೈಲು ಸಿಮ್ಮು ತೆಗ್ದು ಬೇರೆ ಹಾಕ್ಕ ಮೊದ್ಲು ಅಂದ ತಿಪ್ಪ..ಏ ಹಂಗೆಲ್ಲಾ ಎಸ್ಯಕ್ಕಾಗಲ್ಲ.. ನಮ್ಮನೇಗೆ ಮಾಡಕ್ಕೆ ಅದೇ ಬೇಕು.. ಸಿಮ್ ತೆಗ್ಯದು ಹಾಕದು ಗೋಳೇ ಬ್ಯಾಡ ಅಂತ ನಾನು way2sms ನಿಂದ ಕಳ್ಸೋಕೆ ಶುರು ಮಾಡಿದ್ದು ಅಂದ ಗುಂಡ... ಓ ಸರಿ ಸರಿ ಅಂತ ಏರ್ಟೆಲ್ ಹಾಡು ಹಾಡೋಕೆ ಶುರು ಮಾಡಿದ್ಲು ಉಮಾ.. ನೋಡಿ ಈ ಹಾಳು ನೆಟ್ವಕ್ರೋರು ಹಬ್ಬದ ದಿನ , ಅದ್ರ ಹಿಂದಿನ ದಿನ ಎಲ್ಲ ಸಂದೇಶ ಕಳ್ಸೋಕೆ ಬಿಡೋಲ್ಲ.. ಅದಕ್ಕೂ ದುಡ್ಡು ಹೆರೀತಾರೆ.. ಆದ್ರೆ ಅದ್ರಲ್ಲಿ ಆ ಗೋಳು ಇರ್ಲಿಲ್ಲ.. ಈಗ ಹೆಚ್ಚಿನವ್ರೆಲ್ಲಾ DND ಗೆ ಸೇರ್ಕಂಡು ಬಿಟ್ಟಿರೋದ್ರಿಂದ ಅವ್ರಿಗೆಲ್ಲಾ ಸಂದೇಶ ಕಳ್ಸೋಕೆ ಆಗಲ್ಲ ಕಣೋ.. ಎಲ್ಲಿ ಈಗಿರೋ ಗೆಳೆಯರನ್ನೂ ಕಳ್ಕೋತೀನೋ ಅಂತ ಬೇಜಾರಾಕ್ತಿದೆ ಕಣ್ರೋ ಅಂತ ಮತ್ತೆ ಹಳೇ ಮೂಡಿಗೇ ಬಂದ.. dual sim ಫೋನ್ ತಗೋ ಅಂದ್ಳು ಇಳಾ.. ಮತ್ತೊಂದು ಹೊಸ ಫೋನಿಟ್ಕ ಹೊಸ ಸಿಮ್ಮಿಗೆ ಅಂದ ಮಂಜ.. ಈಗಿರ ಫೋನಿಗೆ ಹೊಟ್ಟೆ ತುಂಬ್ಸೋಕೆ ಆಗಲ್ಲ.. ಅಂತದ್ರಲ್ಲಿ ಎರಡೆರಡು.. ಅದಕ್ಕೆ ಚಾರ್ಜು.. ದುಡ್ಡು.. ಇದೆಲ್ಲಾ ನನ್ಕೈಯಲ್ಲಿ ಆಗಲ್ಲಪ್ಪಾ ಅಂದ ಗುಂಡ.. ಹೂಂ.. ಕಾಲೇಜಿಗೂ ಬರ್ಬಾರ್ದು.. ಹಾಜರೀನೂ ಸಿಗ್ಬೇಕು ಅಂದಗಾಯ್ತು ನಿನ್ನ ಕಥೆ.. ಆ ಪರಮಾತ್ಮನೇ ನಿಂಗೆ ದಾರಿ ತೋರಿಸ್ಬೇಕು.. ನಡೀರೋ ಹೋಗೋಣ ಅಂತ ಎದ್ದ ತಿಪ್ಪ... ಏ ತಡೀರಿ ಮಾರ್ರೆ.. ಗುಂಡ ಹೇಳೂದ್ರಲ್ಲೂ ಪಾಯಿಂಟು ಉಂಟು.. ಏನಾದ್ರೂ ಹೊಸದು ಯೋಚ್ನೆ ಮಾಡ್ವ ತಡೀರಿ ಅಂದ ಮಂಜ.. ಎಲ್ರ ಕಣ್ಣೂ ತಲೆ ಮೇಲೆ ಹಾರಿಹೋದ ಗುಂಪು ಗಿಣಿಗಳ ಮೇಲೆ ಬಿತ್ತು.. ಹಂಗೆ ನೆನಪದೋಣಿ ಹಿಂದೆ ಜೀಕುತ್ತಾ ಜೀಕುತ್ತಾ ಎಲ್ರಿಗೂ ತಮ್ಮ ಕಳೆದಕೊಂಡಿಗಳ ನೆನಪು ಕಾಡಹತ್ತಿತು..

Monday, September 26, 2011

ಹಾಯ್ಕು ??

.ಅಕ್ಷಯ, ಹೆಸರಂತ ಆರೋಗ್ಯ
ಲೆಕ್ಕಿಸದೆ ಕುಡಿದ ಧೂಮ
ಅವನೀಗ ಕ್ಷಯರೋಗಿ ಚಿಕಿತ್ಸೆಗೆ
ಹಣವೆಲ್ಲ ನೀರ ಮೇಲಿನ ಹೋಮ

.ನಿಂಪ್ರೇಮ ಪ್ರದರ್ಶನಕ್ಕಿಡಬೇಡಿ
ಎಂಬ ಫಲಕ ಸೆಳೆಯಿತು ಕಣ್ಣ
ಅದೇ ಈಗ ಪಾರ್ಕಲ್ಲಿ
ಪ್ರೇಮಿಗಳ ನೆಚ್ಚಿನ ತಾಣ



. ಅವ ಬಂದ ಇವ ಬಂದ ಡೇಟಿಗೆ ಪಾರ್ಕಲ್ಲಿ
ಅನಿರೀಕ್ಷಿತ ಭೇಟಿ, ಹಲವರ್ಷದ ಕಥೆ
ಪ್ರೇಯಸಿ ಬರಲಿಲ್ಲವೆಂದಿಬ್ಬರಿಗೂ ಗಲಿಬಿಲಿ
ದೂರದಿಂದ್ಲೇ ನೋಡಿವ್ರ ಅವಳಿದ್ಲು ಶಾಕಲ್ಲಿ

.ಪ್ರಕೃತಿಯೊಂದಿಗೆ ಬದುಕಿ, ವಿಷ ಬಿಡಿ
ಅಂತ ಭಾಷಣ ಕುಟ್ಟುತ್ತಿದ್ದ ಬುದ್ದಿಜೀವಿ
ಈಗ ಅವನದೇ ಪ್ರಕೃತಿ ಕಂಪೆನಿಯ ವಿಷ
ಮೀನುಗಳು ಸತ್ತಿವೆ, ಮನುಷ್ಯರ ಕಥೆ ಬಿಡಿ

. ಗೋಗರೆದ ಜನರೆದುರು ಗೋಳ ಕೇಳಿ ನಂದು
ಯಾರೂ ಕಿವಿಗೊಡಲಿಲ್ಲ ದಿನವೂ ಇದೆಯೆಂದು
ಅದನೆ ಕಲೆ ಹಾಕಿದ ಪ್ರೇಮಕವನಗಳೆಂದು
ಕೇಳುತ್ತಿದ್ದಾರವರೆ ಈಗ ಇನ್ನೊಂದು, ಮತ್ತೊಂದು

. ಪರಿಸರಮಾಲಿನ್ಯದ ಬಗ್ಗೆ ವಿಪರೀತ
ಮಾತಾಡಿದವಗೆ ಬಿಸ್ಲೇರಿ ಬೇಕಾಯಿತು
ಕುಡಿದಾದ ಮೇಲೆ ಇನ್ನೇನು ಬಾಟಲಿ
ಅಲ್ಲೇ ಬಿಸಾಡಬೇಕಾಯಿತು

. ಕೈಮೇಲೆ ಬರಿಬೇಡ, ಬಸ್ ಟಿಕೇಟ್ ಬಿಸಾಕು
ಎಂದೊಂಬ್ಬ ಇನ್ನೊಬ್ಬ ಬುಕ್ಕಿತ್ತ ಬರಿಯಿಂದು
ಅವನೀಗ ಚಿತ್ರ ವೀಕ್ಷಿಸಿ ವಾವೆನ್ನೋ ಪ್ರೇಕ್ಷಕ
ಇವನೀಗ ಅದೇ ಚಿತ್ರದ ನಿರ್ದೇಶಕ

. ಖುಷಿ ಕೊಡೋದು ಕವನ ಅಂದ
ಅವ, ವಾ.. ಎಂಥಾ ಕವಿ ಅಂದ್ರು
ಇಬ್ರನ್ನೂ ಜೊತೆಗೆ ನೋಡಿದ ಮೇಲೆ
ಗೊತ್ತಾಯ್ತು ಅವಳು ಕವನ ಅಂತ

. ಮರ ಎಲ್ಲ ಕಡಿತೀರಿ ವಿವೇಕವಿಲ್ಲ
ಬೆಂಕಿಪೊಟ್ಟಣಕ್ಕೆಷ್ಟು ಮರ ಗೊತ್ತ
ಎಂದ ಬುದ್ದಿಜೀವಿ ಚಿಂತೆ ಹೆಚ್ಚಾಯ್ತೆಂದು
ಪ್ಯಾಕೆರೆಡು ಸಿಗರೇಟು ಸುಟ್ಟ

೧೦.ಆತ ಬುದ್ಧಿವಂತ, ಸ್ಕೂಲಿಗೆ ಫಸ್ಟು
ವಿದ್ಯಾರ್ಥಿವೇತನ, ಯು.ಎಸ್ಗೆ ಎಸ್ಸು
ಅಲ್ಲಿಂದ ಬರಲಾರ ಆದ ಮದುವೆಯ ಭಾರ
ಲಾಸ್ಟಾದ ಹಿರಿಮಗ ಅಮ್ಮನ ಸಾಕುತಿದ್ದಾನೆ

Sunday, September 25, 2011

ಅಜ್ಜಿಮನೆ ರಸ್ತೆಯಲಿ


ಅಜ್ಜಿಮನೆ ರಸ್ತೆಯಲಿ, ಕುಲುಕಾಡೋ ಬಸ್ಸಿನಲಿ,
ಅಲುಗಾಡೋ ಬಾಗಿಲು ಮುರಿದಿತ್ತು.
ಆಧಾರ ಬೇಡಿದರೆ ಮೈಮೇಲೆ ಎರಗುವೆ,
ಸ್ವಂತ ಬಲದಲೇ ಏರು ಎಂದಿತ್ತು.
ಅದರಾಸರೆಗೆ ಕಟ್ಟಿದ ಪ್ಲಾಸ್ಟಿಕು
ಹಗ್ಗದಾಸೆಯೂ ಹರಿದು ಹೋಗಿತ್ತು
ಅದ ಹಿಡಿದ ಆತನೇ ಅದಕೊಂದು ಆಧಾರ,
ಎಲ್ಲರೂ ಒಂದೇ ಎಂಬೋನ ಉಪಕಾರ

ಅರಿಯಲಿರೆ ಒಳನೋಟ ಎಲ್ಲ ಜೀವನ ಪಾಟ,
ಅದಿಲ್ಲದಿರೆ ಎಲ್ಲ ಬರಿಯ ಕಾಟ
ಬಸ್ಸು ಜೀವನ ಯಾತ್ರೆ ,ಡ್ರೈವರನೇ ಪರದೈವ
ಘಾಟಿಗಳ ದಾಟಿಸಿ , ಅಪಘಾತ ತಪ್ಪಿಸು.
ಬೇಕೆಂದೆಡೆ ನಿಲುಗಡೆ ಕೊಡುವ ಸಮಯ ಕಂಡಕ್ಟ್ರು
ದೂರಕ್ಕೆ ಗುರಿಯಿಟ್ಟು ಮುಂಚೆಯೇ ಇಳಿದರೂ
ತಡೆಯದ ಅವನಾ ವೃತ್ತಿಪರತೆ

ಗುರಿಬಂದ ತಕ್ಷಣ ಎಚ್ಚರಿಸಿ ಇಳಿಸೋದ
ಎಂದಿಗೂ ಇನಿತೂ ಬಿಡದಾತನು

ಪ್ರಶಸ್ತಿ.ಪಿ

Saturday, September 17, 2011

ದೊಡ್ಡ ಜನ ತಾವೆಂದು
ನೂರೊಂದು ಉಪದೇಶ
ಕೈಲಾಗದ ನಿನ್ನ ದೈನೇಸಿ ಸ್ಥಿತಿ ಹಾಸ್ಯ
ನೀನೆ ನಿನಗಸಹ್ಯವಾಗುವಷ್ಟಪಹಾಸ್ಯ
ತಮಗೆ ಸರಿಕಾಣದ್ದೆಲ್ಲ ಗೊಡ್ಡು,ವೇಷ
ಹೂಂ ಎನ್ನು ಕಾಳಿಗೆ ಬಾಗಿದೆ ಬೆನ್ನು
ಎಗರಾಡದಿರು ಬಡವ, ತರವಲ್ಲ ಆವೇಶ |1|

ದೊಡ್ಡ ವಿದ್ಯೆಯು, ಸಿರಿಯು
ತಮ್ಮದೆಂಬ ಅಭಿಮಾನ
ಅದರ ಜೊತೆ ಹೀಗಳಿಕೆ ಉಳಿದವರಿಗೆಲ್ಲ
ಶಿಷ್ಯತ್ವ ಮಾಡೆಂದು, ತಲೆಯೊಳಗೆ ಟೊಳ್ಳೆಂದು
ಬದುಕ ಗುರಿ ಅರಿಯೆಂದು, ಅದೇ ಮೂದಲಿಕೆ
ಪದೇ ಪದೇ ಚುಚ್ಚಿದರೂ ಬಂಡೇಳಲಿಲ್ಲ ನೀ
ಮೈಮೇಲೆ ಬಿದ್ದಿಹುದು ಪಡೆದ ಸಾಲದ ಬಂಡೆ
ಎಗರಾಡದಿರು ಬಡವ,ತರವಲ್ಲ ಆವೇಶ |2|

ನಿನ್ನ ವರ್ಷದ ಕೂಲಿ ಅವಗೆ ತಿಂಗಳಿಗಂತೆ
ನಿನ್ನ ಹೊಸ ಬಟ್ಟೆಯಂತಿಹುದು ಕಾಲೊರಸು
ನಿಮ್ಮ ತೋಟದ ನೀರು ಆ ಚೋಟು ಕಾರಿಗೆ
ಯಾವ ಸಮವೋ ನೀನು ದುಡ್ಡಿಲ್ದೆ ದುನಿಯದಲಿ
ಕಾದಿಹರು ನಿನಗಾಗಿ ಮನೆಯಲ್ಲಿ ಮಕ್ಕಳು
ಹಿಟ್ಟು ಹಾಕದು ಅವಕೆ ನಿನ್ನಯ ಆಕ್ರೋಶ
ಎಂದೋ ಪ್ರತಿಭೆಗೆ ಕಾಲ ಆ ಕಾಲ ಕರೆವೊಳಗೆ
ನೀನಾಗಿ ನೀನಿರು , ಬರುವುದು ಹೊಸ ನಿಮಿಷ
-ಪ್ರಶಸ್ತಿ.ಪಿ

Thursday, September 15, 2011

೧೦೮

ಏನಾರು ಕೆಲಸ ಮಾಡೋಕೆ ಹೋದ್ರೆ ನೂರೆಂಟು ಸಮಸ್ಯೆಗಳು ಥೋ.. ಅಂತ ಗುಂಡ ಗೊಣಗ್ತಾ ಇರ್ಬೇಕಾದ್ರೆ ಅವ್ನ ಸ್ನೇಹಿತರೆಲ್ಲಾ ಅಲ್ಲಿಗೆ ಬಂದ್ರು.. ಏನು ಗುಂಡು..ಕಷ್ಟ ಬಂದಾಗ ಅದ್ರ ಎದ್ರುಸುದು ಬಿಟ್ಟು ಎಣಿಸ್ತಾ ಕೂರೂದ? ಅದು ನೂರ ಎಂಟರ ಕರ್ಮ ಅಲ್ಲ. ನೂರೆಂಟು ಬಾಳ ಒಳ್ಳೆ ಸಂಖ್ಯೆ ,ಗೊತ್ತುಂಟಾ? ಅದಕ್ಕೆ ಶಾಪ ಹಾಕೂದ ನೀನು. ನೋಡು ನಾವು ಜಪ ಮಾಡೂದೆಲ್ಲ ಎಷ್ಟೆಷ್ಟು? ೨೮, ೫೪, ೧೦೮.. ಹೀಗೆ ಅಲ್ಲದಾ?ದುರ್ಗಾದೇವೀದೂ ನೂರೆಂಟು ಹೆಸ್ರುಂಟು ದುರ್ಗಾಸಪ್ತಶತಿ ಯಲ್ಲಿ. ನೂರೆಂಟು ಮೋದಕ ಗಣೇಶಂಗು ಭಾರಿ ಇಷ್ಟ ಅಂತೆ ಮಾರ್ರೆ.. ಬೆಂಗ್ಳೂರು ಕುಮಾರು ಸ್ವಾಮಿ ಲೇಯೌಟಲ್ಲಿ ನೂರೆಂಟು ಗಣಪನ ದೇವಸ್ಥಾನವೂ ಉಂಟು ಗೊತ್ತುಂಟೋ ಅಂದ ಮಂಗಳೂರು ಮಂಜ. ಹೌದೌದು ಭಾಳ ಒಳ್ಳೆ ಸಂಖ್ಯೆ.. ಮೊನ್ನೆ ದಾರೀಲಿ ಆಕ್ಸಿಡೆಂಟಾಗಿ ಬಿದ್ದಿದ್ದ ಪರಮೇಶಿನ ಸಿರಿ ರಾಮುಲು ಗಾಡೀಲೆ ಎತ್ಕೊಂಡೋಗಿದ್ದು.. ಅದೇ ೧೦೮.. ಅದಿಲ್ದಿದ್ರೆ ಅವನ ಗತಿ ದೇವರೇ ಗತಿ ಅಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ.

 ಸುಮ್ನಿರಿ ತಿಪ್ಪ..ಬರೀ ತಮಾಷೆನೇ ಆಯ್ತು. ನೂರಾ ಎಂಟಕ್ಕೆ ಗಣಿತದಲ್ಲಿ ಎಷ್ಟು ಮಹತ್ವ ಉಂಟು ಗೊತ್ತುಂಟಾ? Regular pentagon ಅಂದ್ರೆ ಸಮ ಪಂಚಭುಜಾಕೃತಿಯಲ್ಲಿ ಒಳಗಿರೋ ಕೋನಗಳೆಲ್ಲಾ ೧೦೮ ಡಿಗ್ರಿ. ೧೦೮ ಕ್ಕೆ ಒಟ್ಟು ೧೨ ಭಾಜಕಗಳು. ಆ ೧೨ರಿಂದಲೇ ಭಾಗಿಸಲ್ಪಡೋದು ಅದರ ವಿಶೇಷತೆ.ಅದಕ್ಕೆ ಅದನ್ನ refactorable number ಅಥವಾ ಪುನರ್ವಿಭಾಜಕ ಸಂಖ್ಯೆ ಅಂತಾರೆ. ೧೦೮ ಕ್ಕೆ regular number, semi perfect number, tetranacci number, harsha number ಅಂತೆಲ್ಲಾ ಕರೀತಾರೆ ಗೊತ್ತಾ ಅಂದ್ಳು.. ಅವ್ಳು ಹೇಳಿದ್ದು ಯಾರಿಗೆ ಅರ್ಥ ಆಯ್ತೋ ಇಲ್ವೋ ಗೊತ್ತಾಗ್ಲಿಲ್ಲ ಹೌದಾ? ಅಂದ್ರು.. ಅದೂ ಹೇಳ್ದಿದ್ರೆ ಇನ್ನೂ ಕೊರಿತಾಳೆ ಅಂತ.


 ಕೃಷ್ಣನಿಗೆ ನೂರಾ ಎಂಟು ಜನ ಗೋಪಿಯರಿದ್ರಂತೋ ಅಂತ ಶುರು ಮಾಡದ ತಿಪ್ಪ. ನಂ ಬುದ್ದನಿಗೆ ೧೦೮ ಪ್ರಶ್ನೆ ಕೇಳಿದ್ನಂತೆ ಭೋದಿಸತ್ವ ಮಹಾಮುನಿ ಅಂದ್ಳು ಇಳಾ. ಝೆನ್ ಮುನಿಗಳು ೧೦೮ ಮಣಿಗಳಿರೋ ಸರ ಸುತ್ಕೋತಾರಂತೆ ಕೈಗೆ ಅಂದ ಗುಂಡ ತಾನೂ ಏನೂ ಕಮ್ಮಿ ಇಲ್ಲ ಅನ್ನೋ ತರ. ನಿಮಗೆ ಬೇರೆ ಅವ್ರನ್ನ ಹೊಗಳೋದೆ ಆಯ್ತು.. ಇದರ ಮಹತ್ವ ನಮ್ಮ ವೇದಾಂತಿಗಳಿಗೆ ಮೊದಲೇ ಗೊತ್ತಿತ್ತಂತೆ ಅಂದ ಮಂಜ. ಅದು ಹ್ಯಾಗೆ ಮಾರ್ರೆ ಅಂದ್ರು ಎಲ್ಲಾ? ಈಗ ನ್ವಾಡಿ.. ಸೂರ್ಯನಿಂದ ಭೂಮಿಗಿರೋ ದೂರನ ಸೂರ್ಯನ ವ್ಯಾಸದಿಂದ ಭಾಗಿಸಿದ್ರೆ ಬರೋದು ಎಷ್ಟು ಗೊತ್ತುಂಟಾ ಅಂದ. ಯಾರ್ಗೂ ಗೊತ್ತಿರ್ಲ್ಲಿಲ್ಲ. ಅದು ೧೦೮, ಅದೇ ತರ ಚಂದ್ರನಿಂದ ಭೂಮಿಗಿರೋ ದೂರನ ಚಂದ್ರನ ವ್ಯಾಸದಿಂದ ಭಾಗಿಸಿದ್ರೆ ಬರೋ ದೂರನೂ.. ೧೦೮ ಅಂದ್ರು ಎಲ್ರೂ ಒಟ್ಟಿಗೆ.. ಒಮ್ಮೆ ನಗು.. ಅದಕ್ಕೇ ನೂರಾ ಎಂಟಕ್ಕೆ ವೇದಾಂತದಲ್ಲಿ ಮಹತ್ವ ಅಂದ ಮಂಜ.. ಆದ್ರೂ ನಗು ಕಮ್ಮಿ ಆಗ್ಲಿಲ್ಲ..



 ಅದು ಶಾಂತ ಆಗೋದ್ರೊಳಗೆ ಇಳಾ ಹೇಳಿದ್ಳು. ನಾನೊಂದು ಸಂಶೋಧನೆ ಮಾಡಿದ್ದೀನಿ. ಸಂಖ್ಯಾಶಾಸ್ತ್ರ ಉಪಯೋಗಿಸ್ಕಂಡು.. ಅದೂ ನೂರಾ ಎಂಟರ ಬಗ್ಗೆ ಅಂದ್ಳು. ಎಲ್ರೂ ಸುಮ್ನಾದ್ರು. ಅವ್ಳೇ ಹೇಳಿದ್ಲು. ೧೦೮ ನ one not eight ಅಂತ ಬರೀತಿವಲ್ಲಾ. ಅದ್ರ a=1 , z=26 ಅಂತ ಎಣಿಸ್ಕೊಂಡು ಕೂಡಿದ್ರೆ ಅದರ ಮೊತ್ತ ೧೦೪ ಬರುತ್ತೆ. ಎಷ್ಟು ಹತ್ರ ಅಲ್ವಾ ಅಂದ್ಳು.. ಭೇಷ್ ಅಂದ್ರು ಎಲ್ಲಾ. ಅಷ್ಟೇ ಅಲ್ಲ. ನಮ್ಮ ಕನ್ನಡದಲ್ಲೂ ನ್=೩೬, ರ್=೪೩, ಟ್=೨೬. ಎಲ್ಲಾ ಕೂಡಿದ್ರೆ ೧೦೬. ಆದ್ರೆ "ನೂರಾ ಎಂಟು" ಅಂತ ಬರ್ದು ಸ್ವರಗಳನ್ನೂ ಲೆಕ್ಕಕ್ಕೆ ತಗಂಡ್ರೆ ಅಂದ್ರೆ ಆ=,=,=,=,ಅಂ=೧೫.. ಒಟ್ಟು ೧೪೪ ಬರುತ್ತೆ. ++= . ಅದೇ ರೀತಿ ೧++=.. ಎರಡೂ ಒಂದೇ ಆಯ್ತಲ್ವಾ.. ನಮ್ಮ ಹೇಗಿದೆ ನನ್ನ ಸಂಶೋಧನೆ ? ನಮ್ಮ ಹಿಂದೆ ಇಂಥದ್ದು ಎಷ್ಟೋ ಇರುತ್ತೆ ನಾವೇ ನೋಡಿರಲ್ಲ ಅಂದ್ಲು.. ಇದಕ್ಕೆ ಎಲ್ರೂ ಒಮ್ಮೆ ಚಪ್ಪಾಳೆ ಹೊಡುದ್ರು.. ನಮ್ಮ ದಶಮಾನ ಪದ್ದತಿಯಲ್ಲಿ ಒಂಭತ್ತಕ್ಕೆ ಹೆಚ್ಚು ಬೆಲೆ. ಅದಕ್ಕೆ ಮೊತ್ತ ೯ ಬರೋ ತರದ ೧೦೮ ಸಂಖ್ಯೆಗೆ ಮಹತ್ವ ಇರ್ಬೋದು ಅಂತ ನನ್ನ ಭಾವನೆ.. ಏನಂತೀರ ಮಂಜು ಅಂದ್ಳು




ನಮ್ಮ ಆಯುರ್ವೇದದ ಪ್ರಕಾರ ದೇಹದಲ್ಲಿ ೧೦೮ ಸ್ಪರ್ಶ ಕೇಂದ್ರಗಳಿದ್ಯಂತೆ. ಇದನ್ನು ಚೀನಾದ ಯುದ್ದ ಕಲಾ ಶಾಲೆಗಳೂ ಒಪ್ಪುತ್ತಂತೆ. ಕರಾಟೆಗೂ ೧೦೮ಕ್ಕೂ ಸಂಬಂಧ ಇದ್ಯಂತೆ. ಅಂದ ೧೦೮ ಕ್ಕೆ ಮತ್ತೆ ಭಾರತೀಯತೆಯ ಸ್ಪರ್ಶ ಕೊಡ್ತಾ ಮಂಜ. ಕರಾಟೆ , ಚೀನಾ ಅಂದ ತಕ್ಷಣ ನೆನ್ಪಾಯ್ತು ನೋಡು.. ಜಪಾನ್ ನಲ್ಲಿರೋ ಬೌದ್ದ ದೇವಾಲಯಗಳಲ್ಲಿ ವರ್ಷದ ಕೊನೇ ದಿನ ಹಳೇ ವರ್ಷಕ್ಕೆ ವಿಧಾಯ ಹೇಳಕ್ಕೆ ಮತ್ತೆ ಹೊಸದನ್ನ ಬರಮಾಡಿಕೊಳ್ಳಕ್ಕೆ ಅಂತ ೧೦೮ ಸಲ ಘಂಟೆ ಬಡೀತಾರಂತೆ ಅಂದ ಗುಂಡ.. ಯಾಕ್ಲಾ ನಮ್ಕಡೇ ಘಂಟೆ ಹೊಡ್ದು ಸತ್ಯ ಹೇಳ್ತೀನಿ, ಸುಳ್ಳು ಹೇಳಾಕಿಲ್ಲ, ತಪ್ಪು ಮಾಡಾಕಿಲ್ಲ ಅಂತಾರಲ ಹಂಗಾ ? ಅಂದ ತಿಪ್ಪ.. . ಆ ತರ ಅಲ್ಲಲೇ, ಅವ್ರ ಪ್ರಕಾರ ನಿರ್ವಾಣ ಹೊದ್ಬೇಕಿದ್ರೆ ೧೦೮ ಮಾಯೆಗಳಿಂದ ಬಿಡುಗಡೆ ಹೊಂದ್ಬೇಕಂತೆ..ಪ್ರತೀ ಹೊಸ ವರ್ಷಕ್ಕೂ ಅದನ್ನ ನೆನಪಿಸೋ ಸೂಚಕ ಅಂತೆ ಕಣ್ಲಾ ಅದು ಅಂದ ಗುಂಡ. ಎಲ್ಲ ಓ ಅಂದ್ರು




ನಮ್ಮ ಕೆಂಪು ಟೋಪಿ ಕಂಪ್ಯೂಟ್ರು ಒಕ್ಕೂಟುದೋರು... ಅಂತ ಗುಂಡ ಶುರು ಮಾಡ್ತಿದ್ದಂಗೆ ಸ... ಪಕ್ಸನಾ ಅಂದ ತಿಪ್ಪ. ಹೇ ಅದಲ್ಲಲೇ ಶುದ್ದ ಕನ್ನಡ ವಿರೋಧಿ ನೀನು.. ಅದೇ redhat ಕಣ್ಲಾ.. ಅವ್ರು ಶುರು ಮಾಡಿರೋ developer ಗಳ ಸಂಘದ ಹೆಸ್ರೂ ೧೦೮ ಕಣ್ಲಾ ಅಂದ ಗುಂಡ. .ಯಾಕೋ ಅಂದ್ರೆ ಉತ್ರ ಇಲ್ಲ ಗುಂಡನತ್ರ.. ಏನೋ ಹೇಳಕ್ಕೋಗಿ ಸಿಕ್ಕಾಕಂಡಂಗೆ ಆತು ಈಗ ಗುಂಡಂಗೆ.. ಎಲ್ಲ ನಗಕ್ಕೆ ಹಿಡುದ್ರು. ಏ ಮರ್ತೇ ಹೋಗಿತ್ತು. ನಮ್ಮನೆ ಕರೆಂಟು ಬಿಲ್ಲು ಬಂದೈತೆ. ಥತ್ ತರೇಕಿ.. ಅದೂ ಈ ಸಲ ೧೦೮ ರೂಪಾಯಿ ನೋಡ್ರಿ.. ಕಟ್ಬೇಕು ಇವತ್ತು.. ಅಗ್ಲೇ ೮ನೇ ತಿಂಗ್ಳ ಹತ್ತನೇ ದಿನ ಆಗೋಯ್ತು. .ಥೋ ಹೋಗ್ಬೇಕು ಈಗ ಆಗ್ಲೇ ಹತ್ತು ಘಂಟೆ ೮ ನಿಮಿಷ ಆಗೇ ಹೋಯ್ತು.. ನಿಮ್ಮತ್ರ ಮಾತಾಡ್ತಾ ಆಡ್ತಾ ಟೈಮೇ ನೆಪ್ಪಾಗ್ಲಿಲ್ಲ ಅಂತ ಹೊಂಟ ಅಲ್ಲಿಂದ ಕಾಲ್ಕಿತ್ತ ಗುಂಡ. ಏ ಗುಂಡ ನಿಧಾನ ಹೋಗೋ.. ೧೦೦ ರಲ್ಲಿ ಹೋಗಿ ೧೦೮ರಲ್ಲಿ ಬರ್ಬೇಡ ಮತ್ತೆ ಅಂತ sms ಜೋಕ್ ಹಾರ್ಸಿದ ತಿಪ್ಪ.. ಎಲ್ಲಾ ನಗಕಿಡಿದ್ರು.. ನಿಧಾನ ಹೋಗೋ , ರಸ್ತೆ ನೋಡ್ಕಂಡು ಹೋಗೋ.. ಪಕ್ಕದಲ್ಲಿದ್ದೋರ್ನೂ ನೋಡ್ಕಂಡು ಹೋಗೊ..ಫಾಸ್ಟ ಬರ್ತಿರೋ ೧೦೮ ನೋಡ್ಕಂಟು ಹೋಗು, ಅದ್ರಲ್ಲಿ ಬರ್ದಿದ್ದಂಗೆ ನೋಡ್ಕಂಡು ಹೋಗೋ.. ಅಂತ ರಾಗ ಶುರುವಾಯ್ತು...

Tuesday, September 13, 2011

when u have deleted ur GPRS settings in the cell

You can try the following options..

1) sms < model number> to 58355. Its free.. eg:- NOKIA 2700 Then the corresponding operator (Airtel, bsnl or whatever) will send the settings to your cell

2) Put another sim into ur cell. Remove it and Insert your sim again.. You will have the settings in place..

3) Call the Customer Care and tell them to send the settings..

Sunday, September 11, 2011

"ಕುಂದಾಪ್ರುದ ಕಥೆ"


ಸಿಟೌಟಿನ ಗೋಳಾಕೃತಿಯ ಕಮಾನಿನೊಳಗೆ ಮಿನಿಗೋಲದಂತೆ ಎದುರಿನ ಗುಡ್ಡ ಕಾಣ್ತಾ ಇತ್ತು. ಹತ್ತಿರ ಕಾಣೋ ಮರಗಳೆಲ್ಲಾ ಗಿಳಿಹಸಿರಾಗಿ, ದೂರದ್ದೆಲ್ಲಾ ಗಾಢ ಹಸಿರಾಗಿ ಹೊಳಿತಾ ಇತ್ತು. ಅರರೇ, ಗಿಳಿ ಹಸಿರಿಂದ ಗಾಢಕ್ಕೆ, ಗಾಢದಿಂದ ಗಿಳಿಹಸಿರಿಗೆ ಬದಲಾಗ್ತಾ ಇದೆ.ಓ, ಸೂರ್ಯನ ಕಣ್ಣಾಮುಚ್ಚಾಲೆ. ಅಲ್ಲಲ್ಲ, ಸೂರ್ಯ ಮತ್ತು ಮೋಡಗಳ ಆಟ. ಗುಡ್ಡದ ಒಂದು ಬದಿಯಿಂದ ಮಂಜಾಗಿ ಮೇಲೇರುತ್ತಿದ್ದ ಪಾವನಗಂಗಾಬಿಂದುಗಳು ಮಳೆಯಾಗಿ ಕೊಳೆ ತೊಳೆಯೋದು ನಾವೇ ಅನ್ನುತ್ತಿದ್ದವು. ಮತ್ತೊಂದು ಬದಿ ಗುಡ್ಡ ಕಡಿದು ಲಾವಂಚ ಹಾಕಿದ್ದರು. ಮಧ್ಯೆ ಅಲ್ಲಲ್ಲಿ ಶುಭ್ರಾಕಾಶದಲಿನ ನಕ್ಷತ್ರಗಳಂತೆ ಬಿಳಿ ಕೊಟ್ಟೆ ಕಟ್ಟಿದ ರಬ್ಬರ್ ಸಸಿಗಳು ಕಂಗೊಳಿಸುತಿದ್ದವು. ಆ ಬದಿಯ ದಟ್ಟ ಕಾಡಿಗೆ ಹೋಲಿಸಿದರೆ, ಈ ಬದಿಯ ಲಾವಂಚ ಬೊಕ್ಕ ತಲೆಯಂತೆ, ಒಂದಕ್ಕಾಗಿ ಇನ್ನೊಂದನ್ನು ಬಿಡಬೇಕಾದ ಅನಿವಾರ್ಯತೆಯನ್ನು ಧ್ವನಿಸುವಂತಿದ್ದವು. ಕುಳಿತ ಕಡೆಯಿಂದ ಕಮ್ಡ ಜೋಡಿ ತೆಂಗಿನ ಮರಗಳು ಗುಡ್ಡಕ್ಕಿಂತ ಅರ್ಧ ಅಡಿ ಹೆಚ್ಚಾದಮ್ತೆ ಅನಿಸುತಿದ್ದವು. ದೂರದ ಅಡಿಕೆ ಮರದ ತುದಿಯಲ್ಲೇನೋ ಕೆಂಪು.. .ಆಗಲೇ ಹಣ್ಣಾಯಿತೇ ಅಡಿಕೆ? ಓ ಅದು ಅಡಿಕೆ ಹಣ್ಣಲ್ಲ. ಕೆಂಬಣ್ಣದ ಜೋಡಿ ಹಕ್ಕಿ. .ಅಗೋ, ಪುರ್ರನೆ ಹಾರಿ ಅದೆಲ್ಲಿಗೋ ಮರೆಯಾಯ್ತು. ಪೇರಳೆ ಮರದಿಂದ ಹಾರ್ತಾ ಇರೋ ಗಿಳಿ ಹಿಂಡು, ಸಂಪಿಗೆ ಮರದತ್ರ ಕಾಳು ಹೊಕ್ತಿರೋ ಕಾಡು ಪಾರಿವಾಳ, ಅಲ್ಲೇ ಹಿಂದೆ ಪಪ್ಪಾಳೆ ಮರದತ್ರ ಬಂದ ಕೆಂಬೂತ, ಈ ಹಳೇ ಮಾವಿನ ಮರದ ಮೇಲೆ ಕೂತ ಕುಟುರುಶೆಟ್ಟಿ ಗುಂಪು, ಮಕರಂಧ ಹೀರ್ತೀರೋ ಉದ್ದಬಾಲದ ಸಣ್ಣದೇಹದ ಜೋಡಿ ಕರಿಹಕ್ಕಿಗಳು.. ಹೀಗೆ ಹಲವಾರು ಹೆಸರರಿಯದ ಹಕ್ಕಿಗಳು ತಮ್ಮದೇ ಲೋಕ ಸೃಷ್ಟಿಸಿದ್ದವು..



ಐದು ದಿನ ಆಯ್ತು. ಯಾರೂ ಕೆಲಸದವರಿಲ್ಲ. ಮಕ್ಕಳೆಲ್ಲಾ ಹೊರಗೆ ಓದ್ತಾ ಇದಾರೆ. ಕೈ ಪೆಟ್ಟಾಗಿ ತಂಗೂ ಕೆಲಸ ಮಾಡೋಕೆ ಆಗ್ತಾ ಇಲ್ಲ. ಇದು ಪೂರ್ತಿ ಸರಿ ಆಗೋಕೆ ಆರು ತಿಂಗಳಾದ್ರೂ ಬೇಕು ಅಂದಿದ್ರು ಕೋಟೇಶ್ವರದ ಡಾಕುಟ್ರು. ಗುಡ್ಡಕ್ಕೆ ಮುತ್ತಿಕ್ತಿದ್ದ ಬಿಳಿ ಮೋಡ ನೋಡ್ತಾ ಇದ್ದ ರಾಮಯ್ಯನ ಕಣ್ಣೆದ್ರು ನಿರಾಸೆಯ ಕಾರ್ಮೋಡ ಕವಿದಿತ್ತು. ಯಾವಾಗ ಫೋನ್ ಮಾಡಿದ್ರೂ ನಾಳೆ ಬತ್ತೆ ಸಾವ್ಕಾರ್ರೆ ಅಂಬುದು ಆ ರಾಮಿ. ನಾಟಕ್ಕೆ ಹೇಳಿ ಮರ ತಗಂಡೋದ ಆ ನಟರಾಜ ಪತ್ತೆ ಇಲ್ಲೆ. ಆ ಆಚಾರಿನೂ ಬರೂದಿಲ್ಲೆ. ಈ ಸೂಲ್ಯ ಸೋಮ ಎಲ್ಲ ಹ್ವಾದ್ದು ಎತ್ಲಗೆ? ಸೂಲ್ಯ ಸ್ವಂತ ಗೆದ್ದೆ, ತ್ವಾಟ ಮಾಡ್ಕಂಡಿದ್ನಂಬ್ರು. ಅವ್ನ ಮಗ ಅದೆಂಥದೋ ಡಿಪಲೋಮ ಮಾಡಿ ಬೆಂಗ್ಳೂರು ಸೇರ್ಕಂಡಿದ. ಹಂಗಾಗಿ ಅವನೂ ಕಾಣೆ. ಆ ಮಂಜುಳ ಮದ್ವೆ ಆದ್ಮೇಲೆ ಗೇರುಬೀಜದ ಫ್ಯಾಕ್ಟರಿ ಸೇರ್ಕಂಡಿದ್ಲು. ಮುಂಚೆ ನಮ್ಮನೀಲೆ ಆಯ್ಕಂಬ ಜನ ಇದ್ರು. ಈ ನಕ್ಸಲ್ ಕಾಟದಲ್ಲಿ ಘಟ್ಟ ಇಳಿಯಕೇ ಹೆದ್ರುತ್ರು ಆಳು. ಅಂತಾದ್ರಾಗೆ ಹೊಸ ಆಳ್ನ ಎಲ್ಲಿಂದ ಹುಡೀಂಕ ಬಪ್ಪುದು? ಹಿಂಗೆ ಆದ್ರೆ ಕಥೆ ಎಂತ. .ಆ ಲಾವಂಚದ ಕೆಲಸಕ್ಕೆ ಆ ಮಲಬಾರಿ ಅಷ್ಟೊಂದು ಜನೀನ ಕರ್ಕಂಬತ್ತ. ನಮ್ ಕೆಲ್ಸಕ್ಕೆ ಯಾರೂ ಬರೂದಿಲ್ಲೆ. ಗಂಟಿಗೆ ಹುಲ್ಲು ಕೊಯ್ದು ಹಾಕೂಕು ಜನ ಇಲ್ಲೆ. ಒಳ್ಳೇ ಗೋಳು ಇದು ಅಂಥ ಶಾಪ ಹಾಕ್ತಾ ಕಾಫಿ ತಂದ್ಕೊಟ್ರು ಸಾವ್ಕಾಣ್ರಿ ಸುಬ್ಬಮ್ಮ



ಮುದೂರು ಹತ್ರ ರಬ್ಬರ್ ಹಾಕಿದ್ನಲಾ ಮಲ್ಬಾರಿ, ಹಾ ಅವ್ನೆ ಮೋಚು.. ಅಂವ ಖರ್ಚು ಎಲ್ಲಾ ಕಳೆದು ದಿನಕ್ಕೆ ೨ ಸಾವಿರ ಆದಾಯ ಬತ್ತಂಬ್ರು ಅದ್ರಿಮ್ದ. ಅಂದ್ರೆ ವರ್ಷಕ್ಕೆ ೬೦,೦೦೦. ಅಲ್ದೇ ಆ ಪ್ಲಾಸ್ಟಿಕ್ ಸಂಗ್ರಹಣೆ ಮಡೋ ಮಡಿಕೇನೂ ಇವ್ನೇ ಮಾಡ್ಕಂಡ್ರೆ ದಿನಕ್ಕೆ ೫೦೦ ಜಾಸ್ತಿ ಉಳೀತಂಬ್ರು..ಅದಕ್ಕೆ ನವೆಂಬರಲ್ಲಿ ಅರ್ಜಿ ಹಾಕೂಂಕಬ್ರು. ಸರ್ಕಾರದ ರಬ್ಬರ್ ಬೋರ್ಡಿಂದ ಹೆಕ್ಟೇರ್ ಗೆ ೨೪,೦೦೦ ಕೊಡ್ತಂಬ್ರು, ಜೊತೆಗೆ ವಿಮೇನೂ ಇರ್ತಂಬ್ರು. ಈ ಲಾವಂಚದೆಣ್ಣೆಗೆ ಹ್ವಾದ ವರ್ಷ ಲೀಟರಿಗೆ ೧೨,೦೦೦ ದವರಿಗೂ ಇತ್ತು. ಕಮ್ಮಿ ಅಂದ್ರೂ ೮೦೦೦ ಕ್ಕೆ ಮೋಸ ಇರ್ಯ್ಲಂಬ್ರು. ಅದಕ್ಕೆ ಹಾಳು ಬೋಳು ಗುಡ್ಡ ಕಡಿದು ಲಾವಂಚ ಹಾಕಂಬವ್ಕೆ ಗೇಣಿ ಕೊಟ್ಟಿದ್ದು. ಮಧ್ಯೆ ಗೇರು ಗಿಡ ಅವ್ರೆ ನೆಟ್ಕೊಡ್ತ್ರು. ಜೊತಿಗೆ ಒಂದಿಷ್ಟು ಅಂತ ದುಡ್ಡೂ ಕೊಡ್ತ್ರು. ಅಂತ ಲೆಕ್ಕಾಚಾರ ಹಾಕ್ತಾ ಇದ್ದ ರಾಮಯ್ಯಂದು. ಎಲ್ಲಿಂದಲೋ ಬಂದು ಬಿದ್ದ ಮಳೆ ಹನಿಗೆ ಅವ್ರು ಈ ಲೋಕಕ್ಕೆ ಬಂದ್ರು. ರಬ್ಬರಿಗೆಲ್ಲ ಹುಳ ಬೀಳುತಾ ಇತ್ತು. ಅದ್ಕೆ ಔಷಧಿ ಹೊಡ್ಸುಕು, ಗೊಬ್ಬರ ಹಾಕ್ಸೂಕು. ಜನ ಇಲ್ದೇ ಹೆಂಗಪಾ ಹೇಳಿ ತಲೆಬಿಸಿ. ಜೊತಿಗೆ ಈ ಬಿಸಿಲು ಮಳೆಯಿಂದ ಕೊಳೆ ಕಾಟ ಬೇರೆ. ನೀರ್ಗೊಳೆ, ಹಾರ್ಗೊಳೆ ಅಯ್ದೇ ಇದ್ರೆ ಸಾಕಪಾ ಅಂತ ಆನೆಮೂತಿಯವ್ನ ಬೇಡ್ಕ್ಯಂಡ್ರು ಒಂದ್ಸಲ. ಬೆನ್ನು ನೋವು, ಇನ್ನೆರ್ಡು ಮೂರು ದಿನದಂಗೆ ಬತ್ತೆ ಅಕಾ ಅಂದಿದ್ನಂಬ್ರು ರಾಜ. ಗಣಪತಿ ಹಬ್ಬಕ್ಕೆ ಹೇಳಿ ಮನಿಗೆ ಬಂದಿದ್ದ ಮಗನ್ನ ಬೈಕು ಕೊಟ್ಟು ಓಡ್ಸಿದ್ದೆ ನಿನ್ನೆ ಎಲ್ಲಾ. ಎಂತಾತ್ತು ಕಾಂಬ ಇವತ್ತು. ಗಂಟೆ ಒಂಭತ್ತಾತ ಬಂತು. ಈ ಹಾಳು ದೇವ್ರ ಪೂಜೆ ಮಾಡೂಕು ಆತಿಲ್ಲೆ ಈ ಕೈಯಲ್ಲಿ. ಕಲ್ಲು ಕುಟಕಂಗೆ ಕಾಯಿ ಒಡ್ದಿಲ್ಲೆ, ಬೊಬ್ಬಯ್ರಂಗೆ ಕೋಳಿ ಕೊಟ್ಟಿಲ್ಲೆ ಅದಕ್ಕೆ ಒಡೇರಿಗೆ ಹಿಂಗಾದ್ದು ಹೇಳಿ ಹೇಳ್ತ್ರಂಬ್ರು ಕೂಲಿ ಜನ.. ಎಂಥ ಕರ್ಮವೋ, ಇಷ್ಟೆಲ್ಲಾ ಕಷ್ಟದ ಮಧ್ಯೆ ಪೂಜೆನಾದ್ರೂ ಎಂಥಕೆ ಅಂತನೂ ಅನುಸ್ತು ರಾಮಯ್ಯಂಗೆ. ಮಗನ ಫ್ರೆಂಡು ಸಾಗರದಿಂದ ಬತ್ತಾ ಇದ್ನಂಬ್ರು ಇವತ್ತು. ಮೂರ್ನಾಕು ದಿನ ಆಯ್ಕಣಿ ಹೇಳಿ ಹೇಳುಕು. ಅವ ಇರವರಿಗಾದ್ರೂ ಎಂಥಾರು ಗೆಲುವಾತ್ತ ಕಾಂಬ. ಏ ಸುಬ್ಬು,ನೀರು ಕಾದಿತ್ತಾ? ಬಾಗ್ಲು ಹಾಯ್ಕಣಿನಿ, ನಾ ಘಂಟೀನ ಅತ್ಲಾಗೆ ಬೇರ್ಸಿ, ಎರಡು ಹೂ ಕೊಯ್ಕಂಬತ್ತೆ . ಗಿಡ ತಿಂಬುಲೆ ನುಗ್ಗಿತ್ತು ಇಲ್ಲಿ ಹೇಳಿ ಎದ್ದು ಹೊರಟ್ರು ರಾಮಯ್ಯ.