Friday, December 28, 2012

ನಿರೀಕ್ಷೆ-ನಿರಾಸೆಗಳ ನಡುವೆ

ಜೀವನವೆಂಬ ಆಗಸದಲ್ಲಿ ಆಶಾಕಿರಣ ವರ್ತಮಾನದ ಸೂರ್ಯನೂ , ಭವಿಷ್ಯದ ಚಂದ್ರನಿಂದಲೂ ಮೂಡದೇ ಕಗ್ಗತಲು ಮೂಡಿದಾಗ ನಿರೀಕ್ಷೆಗಳೆಂಬ ನಕ್ಷತ್ರಗಳೇ ಮಿನುಮಿನುಗಿ ಮನಸ್ಸು ಸೋಲೊಪ್ಪದಂತೆ ಹುರಿದುಂಬಿಸುತ್ತಾ ಇರುತ್ತವೆ. ಆದರೆ ಆ ನಿರೀಕ್ಷೆಗಳೂ ನುಚ್ಚುನೂರಾದಾಗ ಮತ್ತದೇ ಮಾತು ತೋಚದ , ನೋವಲ್ಲಿ ಮುಳುಗಿದ ಮೌನ. ಸೂಪರ್ ಸ್ಟಾರ್ ರಜನಿಯ ಅತಿ ನಿರೀಕ್ಷಿತ ಚಿತ್ರ ಬಾಬಾ ನೆಲಕಚ್ಚುತ್ತದೆ. ಹಿಂದಿನೆರಡು ಮ್ಯಾಚಲ್ಲಿ ಮೂರು ಮೂರು ವಿಕೆಟ್ ಕಿತ್ತ ಬೌಲರ್ ಈ ಮ್ಯಾಚಲ್ಲಿ ಪೂರ್ಣ ವಿಫಲನಾಗುತ್ತಾನೆ. ಆಫೀಸಲ್ಲಿ ಕೆಲಸ ಮಾಡಿದ್ದು ಸಾಕಾಗಿಲ್ಲ ಅಂತ ಮನೆಯಲ್ಲೂ ಆಫೀಸ್ ಕೆಲಸ ಮಾಡ್ತಿದ್ದ ಯುವಕನಿಗೆ ಸಿಗದ ಭಡ್ತಿ ಕೆಲಸವೇ ಮಾಡದ(?) ಇನ್ಯಾರಿಗೋ ಸಿಗುತ್ತೆ. ಸೋನು ನಿಗಮ್ ತರ ಹಾಡು ಕಲಿಬೇಕು ಅಂತ ಹೋದ ಹುಡುಗನಿಗೆ ನಿನ್ನ ಧ್ವನಿಯೇ ಸರಿ ಇಲ್ಲ ಹೋಗಾಚೆ ಎಂಬ ನಿರಾಕರಣೆ ಗುರುವಿಂದ ಸಿಗುತ್ತೆ. ಕವನ ಸಂಕಲನ ಮಾಡ್ಬೇಕು ಅಂತ ಆಸೆ ಇದ್ದ ಹುಡುಗಿಗೆ ವಿಮರ್ಶಕರ ವಿಮರ್ಶೆ ಇಂದ ಕವನ ಬರ್ಯೋದನ್ನೇ ಬಿಡ್ಬೇಕು ಅನ್ನೋ ಅಶ್ಟು ನಿರಾಸೆ ಮೂಡುತ್ತೆ.. ಹೀಗೆ ನಮ್ಮ ನಿಜಜೀವನದಲ್ಲಿ ನಮ್ಮ ವೃತ್ತಿ, ಪ್ರವೃತ್ತಿಗಳಲ್ಲಿನ ನಿರೀಕ್ಷೆಗಳು ಈಡೇರದೆ ಇದ್ದಾಗ ನಮಗಾಗೋ ನಿರಾಸೆ ಇದ್ಯಲ್ಲ.. ಅದನ್ನೆಲ್ಲಾ ಹಾಗೇ ಕಟ್ಟಿಡ್ತಾ ಹೋದ್ರೆ ಅದೇ ಒಂದು ದೊಡ್ಡ ಹೊರೆಯಾಗಿ ಜೀವನದಲ್ಲಿ ಒಂದು ಹೆಜ್ಜೆಯೂ ಮುಂದೆ ಹೋಗೋಕಾಗಲ್ಲ್ಲ. ನಿರೀಕ್ಷೆಗಳು ಈಡೇರದೇ ನಿರಾಸೆ ಮೂಡಿದರೆ ಅದು ಜೀವನದ ಸೋಲಲ್ಲ. ಆದರೆ ಈ ನಿರೀಕ್ಷೆ- ನಿರಾಸೆಗಳ ಮಧ್ಯೆ ನಾವೇ ಕಳೆದುಹೋಗುತ್ತಿದೀವಲ್ಲ, ಅದೇ ವಿಪರ್ಯಾಸ.

ಜೀವನದಲ್ಲಿ ಆಸೆಗಳಿರೋದು ತಪ್ಪಲ್ಲ. ಜೀವನ ಅಂದ ಮೇಲೆ ಗುರಿಯಿರಲೇ ಬೇಕು. ಆದರೆ ದೂರದ ಗುರಿಯೊಂದಕ್ಕೆ ವರ್ತಮಾನದ ಖುಷಿಯನ್ನು, ಜವಾಬ್ದಾರಿಗಳನ್ನು ಬಲಿಕೊಡಬೇಕಾ ? ಯಾವತ್ತೂ ಗೆಲುವಾಗಿರೋನಿಗೆ ಒಂದು ದಿನದ ಸೋಲು ದೊಡ್ಡದೆನಿಸಲ್ಲ.ಆದರೆ ದಾರಿಯಲ್ಲಿ ಸಿಗೋ ಸಣ್ಣಪುಟ್ಟ ಗೆಲುವುಗಳನ್ನೆಲ್ಲಾ ಕಡೆಗಣಿಸುತ್ತಾ ದೂರದ, ಕಾಣದ ಗುರಿಯೇ ಗೆಲುವು ಅಂತ ಅತ್ತ ಸಾಗೋನಿಗೆ, ಆ ಗುರಿ ತಾನಂದುಕೊಂಡಷ್ಟು ಸುಂದರವಾಗಿಲ್ಲ ಅಂತ ಅರಿವಾದೊಡನೆಯೇ ನಿರಾಸೆ ಮೂಡುತ್ತೆ. ಆಫೀಸಲ್ಲಿ ಕೆಲಸ ಇದೆ, ಸರಿ. ಅದನ್ನು ಮನೆಗೆ ಬಂದೂ ಮಾಡ್ತೀರ. ಅದು ಆಫೀಸಿನ ಬಗ್ಗೆ ನಿಮ್ಮ ಜವಾಬ್ದಾರಿಯಿರಬಹುದು. ಆದರೆ ಮನೆಯಲ್ಲಿ ನಿಮ್ಮ ಸಮಯ ಕಾಯ್ತಾ ಇರೋ ಮಕ್ಕಳು. ಪತ್ನಿ, ವೃದ್ದ ತಂದೆ /ತಾಯಿ .. ಇವರೂ ಜವಾಬ್ದಾರಿಯೇ ಅಲ್ಲವೇ? ಒಂದು ವರ್ಷ ಇವರನ್ನೆಲ್ಲಾ ಕಡೆಗಣಿಸಿ ದುಡಿದೂ ಬಡ್ತಿ ಸಿಕ್ಕಿಲ್ಲವೆಂದು ನಿರಾಸೆ ಅನುಭವಿಸೋ ಬದಲು , ಕೆಲಸದ ಜೊತೆಗೆ ಪ್ರತಿದಿನವೂ ಇವರಿಗೆ ಸಮಯ ಕೊಟ್ಟಿದ್ದರೆ ಅವರ ಪಾಲಿನ ಆಸೆಗಳಾದರೂ ನೆರವೇರ್ತಿದ್ದವಲ್ಲವೇ?

ಒಂಟಿತನದಲ್ಲಿ ನಿರಾಸೆಯ ನೋವು ಹೆಚ್ಚಾಗೇ ಕಾಡುತ್ತೆ. ನಮ್ಮ ಗುರಿ ಒಂದೇ ದೊಡ್ಡದು ಅಂತ ಯಾರಿಗೂ ಸಹಾಯ ಮಾಡದೇ, ಯಾರೊಂದಿಗೂ ಬೆರೆಯದೇ ಮುಗುಮ್ಮಾಗಿ ಇದ್ದರೆ ಒಂದಲ್ಲ ಒಂದು ದಿನ ಒಂಟಿತನ ಕಾಡೋದು ಗ್ಯಾರಂಟಿ. ಕಷ್ಟಗಳು, ನೋವು ಹಂಚಿದರೆ ಕಮ್ಮಿ ಆಗುತ್ತಂತೆ. ಹಂಚಿಕೊಳ್ಳೋಕೆ ಸ್ನೇಹಿತರು ಇಲ್ದಿದ್ರೆ ಎಂತಾ ಗೆಲುವೂ ಅಷ್ಟು ಖುಷಿ ಕೊಡೊಲ್ಲ. ನೂರು ಬಾರಿ ಕಳಿಸಿದ ಮೇಲೆ ಲೇಖನವೊಂದು ಪತ್ರಿಕೆಯಲ್ಲಿ ಪ್ರಕಟ ಆಗಿರುತ್ತೆ. ತೊಂಬತ್ತೊಂಬತ್ತು ಬಾರಿ ವಿಫಲ ಆದ ನೋವು ಮರೆಸಿ, ಮತ್ತೆ ಹೊಸ ಸ್ಪೂರ್ತಿ ತರೋಕೆ ಈ ಒಂದು ಗೆಲುವು ಸಾಕು. ಆದರೆ ಇದನ್ನು ಹಂಚಿಕೊಳ್ಳೋಕೆ ಗೆಳೆಯರಿಲ್ದೇ ಇದ್ರೆ, ಗೆಲುವಲ್ಲೂ ಜೊತೆಯಿಲ್ಲದ ಭಾವ ನೂರನೇ ಸೋಲಂತೆಯೇ ಕಾಡುತ್ತೆ. ಇದಕ್ಕೆ ತದ್ವಿರುದ್ದ ಅನ್ನೋ ತರ ಜೊತೆಗೆ ಒಂದಿಷ್ಟು ಜನ ಗೆಳೆಯರು ಅಂತ ಇದ್ದಾಗ ಎಂತಾ ನೋವೂ ಅವರ ಸಾಂಗತ್ಯದಲ್ಲಿ ಮರೆತು ಹೋಗುತ್ತೆ. ಭಾರತ ತಂಡ ಮುಖ್ಯ ಮ್ಯಾಚೊಂದ್ರಲ್ಲಿ ಸೋತರೂ, ಗೆಳೆಯರ ಜೊತೆಗೆ ನೋಡ್ತಿರೋವಾಗ ಆ ಸೋಲಿನ ನಿರಾಸೆ, ಅವರಿವರ ಬೈಗುಳ ಕಾಮೆಂಟುಗಳ ಮಧ್ಯೆ ಮರೆತು ಹೋಗತ್ತೆ. ಇಷ್ಟಪಟ್ಟು ಹೋದ ಚಲನಚಿತ್ರ ತೀರಾ ಕೆಟ್ಟದಾಗಿದ್ದರೂ ಗೆಳೆಯರ ಸಾಮಿಪ್ಯ ಇದ್ದಾಗ ಅದು ನಿರಾಸೆಯಾಗಿ ಬದಲಾಗದೇ ಪೂರಾ ಸಿನಿಮಾ ಮತ್ತೊಂದು ಹಾಸ್ಯದ ಸಮಯ ಆಗುತ್ತೆ. ಹಾಗಾಗಿ ಎಷ್ಟೇ ಬಿಸಿಯಾಗಿದ್ದರೂ ನಮ್ಮದೇ ಅಂತ ಒಂದು ಗೆಳೆಯರ ಬಳಗ ಅಂತ ಇಟ್ಟುಕೊಂಡು ಅದಕ್ಕೇ ಅಂತ ಸ್ವಲ್ಪ ಸಮಯ ವಿನಿಯೋಗಿಸದೇ ಇದ್ದರೇ, ಈ ನಿರಾಸೆಗಳ ಮಳೆಕಾಲಕ್ಕೆ, ಸೋಲುಗಳ ನರಳಿಸುವ ಚಳಿಗಾಲಕ್ಕೆ ಯಾವ ಔಷಧಿಯೂ ಇಲ್ಲ.

ಎಷ್ಟೋ ಸಲ ನಾವು ನಮ್ಮ ಅತಿಯಾದ ಆತ್ಮವಿಶ್ವಾಸದಿಂದ ಸಾಧ್ಯವಾಗದ ನಿರೀಕ್ಷೆಗಳನ್ನು ಇಟ್ಟುಕೊಂಡು ಕೊನೆಯಲ್ಲಿ ನಿರಾಸೆ ಅನುಭವಿಸುತ್ತೇವೆ. ಒಂದು ಲೇಖನ ಬರೆದು ಅದಕ್ಕೆ ಯಾರಾದರೂ ಒಬ್ಬರು ಶಹಭಾಷ್ ಎಂದಾಕ್ಷಣ ಯುವಕನೊಬ್ಬ ತನ್ನ ಮುಂದಿನ ಲೇಖನಗಳೆಲ್ಲಾ ಪತ್ರಿಕೆಯಲ್ಲಿ ಪ್ರಕಟ ಆಗೋಕೆ ಯೋಗ್ಯ ಅಂದುಕೊಳ್ಳೋಕೆ ಶುರು ಮಾಡ್ತಾನೆ. ಆ ನಿಟ್ಟಿನಲ್ಲಿ ಅವನು ದಿನೇ ದಿನೇ ಬೆಳೆದರೆ ಅದು ತಪ್ಪಲ್ಲ. ಆದರೆ ಅಂತಾ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟ ಆಗ್ಲಿಲ್ಲ ಅಂತ ಬರೆಯೋದನ್ನೇ ನಿಲ್ಲಿಸ್ತೀನಿ ಅಂದುಕೊಂಡರೆ ಅದು ಖಂಡಿತಾ ತಪ್ಪು. ಇದೇ ತರ ಗುರು ಒಬ್ಬ ಸಂಗೀತ ಕಲಿಸೋಕೆ ನಿರಾಕರಿಸಿದ ಅಂತ ಬೇರೆ ಗುರುವಿನ ಬಳಿ ಕೇಳೋ ಬದಲು ನಾನು ಸಂಗೀತ ಹಾಡೋದೇ ಇಲ್ಲ ಅಂತ ಜೀವಮಾನದ ನಿರ್ಧಾರ ತಗೊಳ್ಳೋದು ಖಂಡಿತಾ ತಪ್ಪು. ಯಾವುದೇ ನಿರೀಕ್ಷೆಗಳು ತಪ್ಪಲ್ಲ, ಆದರೆ ಅದರ ಬಗ್ಗೆ ಪ್ರಯತ್ನ ಮಾಡದೇ ನಿರಾಸೆಗಳೇ ನನ್ನ ಜೀವನದ ಸರ್ವಸ್ವ ಅಂತ ನಿರ್ಧರಿಸೋದು ತಪ್ಪು.

ಆಗೋದೆಲ್ಲಾ ಒಳ್ಳೇದಕ್ಕೆ. ಕಲಿಯೋ ಮನಸ್ಥಿತಿ ಇದ್ದರೆ ಪ್ರತೀ ಸೋಲಲ್ಲೂ ಒಂದೊಂದು ಪಾಠ ಇರುತ್ತೆ. ನಿರೀಕ್ಷೆ-ನಿರಾಸೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಿರಾಸೆ ಯಾಕಾಯ್ತು ಅಂತ ಅದರಿಂದ ಪಾಠ ಕಲಿಯೋವರೆಗೂ ಅದರ ಇನ್ನೊಂದು ಮುಖವಾದ ಗೆಲುವನ್ನು ಕಾಣೋಕೆ ಸಾಧ್ಯನೇ ಇಲ್ಲ. ೧೦೦೦ ಸಲ ವಿಫಲನಾದ ನಿರಾಸೆಯಿದ್ದರೂ ಗುರಿ ಮರೆಯದೇ ಪ್ರಯತ್ನಿಸಿದ್ದರಿಂದಲೇ ಥಾಮಸ್ ಅಲ್ವಾ ಎಡಿಸನ್ ರಿಂದ ಬಲ್ಬ್ ಕಂಡುಹಿಡಿಯೋಕೆ ಆಗಿದ್ದು. ಮುಗಿಲೆತ್ತರದ ನಿರೀಕ್ಷೆಗಳಿರಲಿ. ಅದಕ್ಕೆ ತಕ್ಕ ಪ್ರಯತ್ನಗಳೂ ಇರಲಿ. ಆದರೆ ವರ್ತಮಾನದ ಮನೆಮಂದಿಯನ್ನು, ಕೈಹಿಡಿಯೋ ಗೆಳೆಯರನ್ನು ಮರೆಯದೇ ನಡೆದರೆ ಪ್ರತಿದಿನವೂ ನೋವು, ನಿರಾಸೆಗಳಿಲ್ಲದ ಗೆಲುವೇ. ಯಶವೆಂಬುದು ದಡದಲ್ಲಲ್ಲ, ದಾರಿಯಲ್ಲಿ ಎಂಬ ಮಾತೇ ಇದೆಯಲ್ಲವೇ ?

5 comments:

  1. ನಿರೀಕ್ಷೆಯೂ ಹೊಸತಲ್ಲ ..ನಿರಾಸೆಯೂ ಹೊಸತಲ್ಲ ..

    ಚೆನ್ನಾಗಿದೆ ..ಬರೀತಿರಿ ..

    ಧನ್ಯವಾದ ;)

    ReplyDelete
    Replies
    1. ಹೌದಲ್ದಾ ?
      ನೀವು ಬ್ಲಾಗಿಗೆ ಬಂದು ಪ್ರತಿಕ್ರಿಯಿಸಿದ್ದು ಈ ಲೇಖನದ ಭಾಗ್ಯ :-)

      Delete
  2. This comment has been removed by the author.

    ReplyDelete
  3. ಚೊಲೊ ಇದ್ದು.. ಸರಿ ಇದ್ದು... ಚಂದನೂ ಇದ್ದು ಬರ್ದದ್ದು

    ReplyDelete
    Replies
    1. ತುಂಬಾ ಧನ್ಯವಾದ ವಿನಾಯಕಣ್ಣ :-)

      Delete