Sunday, February 7, 2016

ಭಾವಗಳ ಬಂಡಿಯೇರಿ

ಭಾವಲಹರಿಯೆನ್ನೋದೇ ಹಾಗೆ. ಈ ಭಾವಗಳ ಮಡಿಲಲ್ಲಿದ್ದಾಗ ಶಬ್ದಗಳ ಹಂಗಿಲ್ಲ, ಕಾಲದ ಅರಿವಿಲ್ಲ,ಸುತ್ತಣ ಪರಿಸರದ ಪರಿವೆಯೂ ಇಲ್ಲದ ಪರಿಸ್ಥಿತಿ. ಪಕ್ಕದ ಯಾವುದೋ ಘಟನೆ ನಮ್ಮ ತಟ್ಟೆಬ್ಬಿಸೋ ತನಕ ಕಲ್ಪನಾಲೋಕದಲ್ಲಿ ನಮಗೆ ನಾವಲ್ಲದೆ ಇನ್ಯಾರೂ ಇಲ್ಲ.ಭಾವಗಳ ಬಂಡಿಯೇರಿದ ಆ ಪಯಣ ಸಾಗೋ ಪರಿಯೇ ಅದಮ್ಯ.ಆ ಕ್ಷಣಕ್ಕೆ ಮೂಡೋ ಭಾವಕ್ಕೊಂದು ಆಕಾರವಿಲ್ಲದಿದ್ದರೆ ಕಳೆದೇ ಹೋದೀತೆಂದು ಸಿಕ್ಕ ಮೊಬೈಲಲ್ಲೋ ಪೇಪರಲ್ಲೋ ಕಂಪ್ಯೂಟರಲ್ಲೋ ಗೀಚುವವರದು ಒಂದು ಲಹರಿ.ಕಡಲಲೆಗಳಲ್ಲಿ ಕಂಡ ಸುಂದರ ಅಲೆಯೊಂದು ಕಾಲದ ಗರ್ಭದಲ್ಲಿ ಕರಗಿಹೋಗೋ ಹಾಗೆ ಮುಂಬರುವ ಭಾವ ಪ್ರವಾಹದಲ್ಲಿ ಈಗಿನ ಭಾವ ಮತ್ತೆ ಮೂಡಲೇಬೇಕೆಂದಿಲ್ಲವಲ್ಲ ಅನ್ನೋದು ಅವರಾಲೋಚನೆ.ಒಮ್ಮಿನ ಭಾವದ ಬಗೆಗೇ ಪುನರಾಲೋಚಿಸುತ್ತಾ ಅದಕ್ಕೊಂದು ಮೂರ್ತ ರೂಪ ಕೊಡೋ ಪರಿ ಮತ್ತೊಂದು ರೀತಿ. ಕಲ್ಲೊಂದ ಮೂರ್ತಿಯಾಗಿ ಕೆತ್ತೋ ಶಿಲ್ಪಿಯಂತೆ. ಮನದಿ ಮೂಡಿದಾಕಾರವ ಪೇಪರ್ ಮೇಲೆ ಕೆಲ ಕ್ಷಣಗಳಲ್ಲೇ ಚಿತ್ರಿಸೋ ಕಲಾಕಾರನಂತೆ ಮೊದಲವರಾದರೆ ಅದಕ್ಕೊಂದು ಶಿಲ್ಪದ ಆಕಾರ ಕೊಡುವವರು ಎರಡನೆಯವರು. ಇವರಲ್ಲಿ ಯಾರು ಹೆಚ್ಚು ಯಾರು ಕಡಿಮೆಯೆಂಬ ವಾದಗಳಿರುವ ಹಾಗೆಯೇ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಪಯಣದಲ್ಲಿ ನಿತ್ಯಾನಂದವನ್ನು ಪಡೆಯುವವರು ಇಬ್ಬದಿಗೂ ಇದ್ದಾರೆ, 
ಭಾವಪ್ರವಾಹಕ್ಕೆ ಹೊತ್ತು ಗೊತ್ತಿರಬೇಕೆಂದಿಲ್ಲ. ಎಲ್ಲಿಂದಲೋ ಯಾವಾಗಲೋ ಉದ್ದೀಪನಗೊಳ್ಳಬಹುದದು. ಆಫೀಸ ಬಾಸ ಬಯ್ಗುಳದಿಂದ ಬೇಸತ್ತು ಸಂಜೆಯ ಕ್ಯಾಂಟೀನಿಗೆ ಹೊಕ್ಕವನಿಗೆ ಕಂಡ ಸೂರ್ಯಾಸ್ತವಾಗಿ ಸೆಳೆಯಬಹುದು.ಬಸ್ಸಲ್ಲಿ ಸಿಕ್ಕ ಹರಿದ ಪ್ಯಾಂಟಿನ, ಮೈಯೆಲ್ಲಾ ಸಿಮೆಂಟಾದ ಹುಡುಗನಾಗಿ ಕಾಡಬಹುದು.ವಾಟ್ಸಾಪಿನಲ್ಲಿ ನೋಡಿದ ಸಯಾಮಿ ಅವಳಿಗಳ ನೋವಾಗಿ ನಾಟಬಹುದು.ಊರಲ್ಲಿದ್ದಾಗ ಬೆಳಬೆಳಗ್ಗೆ ಎಬ್ಬಿಸುತ್ತಿದ್ದ ನಾಟಿ ಕೋಳಿಯ ಕೂಗಾಗಿ ತಟ್ಟಬಹುದು.ಕಳ್ಳನಾಟ ಸಾಗಿಸ ಹೋಗಿ ಫಾರೆಸ್ಟಿನವರ ಗುಂಡೇಟು ತಿಂದ ನಾರಾಣಿಯ ನರಳುವಿಕೆಯಾಗೂ ಗೋಚರಿಸಬಹುದು! ಪ್ರಕೃತಿಯಲ್ಲೊಂದಾಗೋ ಪ್ರತಿಯೊಬ್ಬನಲ್ಲೂ ಭಾವಪ್ರವಾಹದ ಹರಿತವಿದ್ದೇ ಇದೆ. ಗುಪ್ತಗಾಮಿನಿಯಾಗಿರಬಹುದು, ಕೊಚ್ಚಿ ಹರಿವ ಗಂಗೆಯಾಗಿರಬಹುದದು. ದೇಶಗಳ ದಾಟೋ ಸಿಂಧೂವಾಗದಿದ್ದರೂ ಬೇಸರವಿಲ್ಲ, ಬತ್ತೇ ಹೋದ ಸರಸ್ವತಿಯಾಗದಿದ್ದರೆ ಸಾಕೆಂಬ ಭಾವವಷ್ಟೇ !
ಭಾವವೆಂಬುದು ಮನದಲ್ಲಿದ್ದರೆ ಸಾಕೇ ? ಅದಕ್ಕೊಂದು ಆಕಾರ ನೀಡಬೇಕೆಂಬ ಹಂಬಲ ಸಹಜ.ಕೆಲವರ ದಿನದ ಡೈರಿಯಾಗೋ ಭಾವಗಳು ಕೆಲವರ ಫೇಸ್ಬುಕ್ ಪೋಸ್ಟಾಗಿ,ಬ್ಲಾಗರ್,ವರ್ಡಪ್ರೆಸ್ ಬ್ಲಾಗಾದ್ರೆ ಇನ್ನು ಕೆಲವರದು ಪೇಪರಿನ ಅಂಕಣಗಳಾಗಿ ಮೂಡಿಬರುತ್ತೆ.ಇನ್ನೂ ಮುಂದೆ ಸಾಗೋ ಕೆಲವು ಭಾವಗಳು ಪುಸ್ತಕಗಳಾಗಿ ಸಾರ್ಥಕ್ಯ ಪಡೆಯುತ್ತೆ. ಪೇಪರ್ರುಳಿಸಿ ಎಂದೆಷ್ಟೇ ಅಂದ್ರೂ ಅಚ್ಚಾದ ಕವನಗಳನ್ನೋ, ಕಥೆಗಳನ್ನೋ ಓದೋ ಖುಷಿ ಅವರ ಕಂಪ್ಯೂಟರಲ್ಲಿರೋ ಅದನ್ನೇ ಓದೋದ್ರಲ್ಲಿ ಸಿಗುವುದಿಲ್ಲ ಅನ್ನೋದು ಅದೆಷ್ಟೋ ಜನರ ಭಾವ. ಆದರೆ ಎಲ್ಲಾ ಭಾವಗಳಿಗೂ ಪೇಪರಲ್ಲಿ ಜಾಗವೆಲ್ಲಿ ? ವರ್ಷಕ್ಕೊಂದು ಲೇಖನ ಪ್ರಕಟವಾದರೂ ಅದಕ್ಕಿಂದ ಚೆಂದದ ಭಾವಗಳಿಗೆ ಸಿಕ್ಕದ ಅದೃಷ್ಟ ಕಾಡೋದು ಕಮ್ಮಿಯೇನಲ್ಲ. ಪುಸ್ತಕಗಳಾಗಿಸೋಣವೆಂದರೂ ಪ್ರಕಾಶಕರೆಲ್ಲಿ ? ಪುಸ್ತಕವಾಗಿಸಿದರೂ ಆ ಖುಷಿ ಅದನ್ನು ಮಾರೋ ಹೊತ್ತಿಗೆ ಕಳೆದೇ ಹೋಗಿರುತ್ತೆನ್ನೋ ಬೇಸರದ ಭಾವ ಇನ್ನು ಕೆಲವರಲ್ಲಿ. ನನ್ನ ಭಾವಗಳಿರೋದು ನನಗಷ್ಟೇ. ಅದಕ್ಕೆ ಓದುಗರೂ ಬೇಡ, ಮೇಲಿನೆರೆಡು ನೋವುಗಳೂ ಬೇಡವೆಂದು ತಮ್ಮ ಡೈರಿಗಳಲ್ಲೇ ದಾಖಲಿಸಿ ಸಂತೃಪ್ತಿ ಪಡೆಯೋ ಭಾವವೂ ಹಲವರದ್ದು.
ಎಲ್ಲೋ ಪುಸ್ತಕವಾಗ ಹೊರಟು,ಪ್ರಕಟಣೆಗೊಳ್ಳ ಹೊರಟು ತಿರಸ್ಕೃತವಾದ ಭಾವದ ನೋವು ಆ ಭಾವಕ್ಕೇ ಗೊತ್ತು.ರಿಯಾಲಿಟಿ ಶೋನಲ್ಲಿ ಎಲಿಮಿನೇಟ್ ಆದ ಸ್ಪರ್ಧಿಯಂತೆಯೇ, ಟಿ.ಆರ್.ಪಿ ಗಾಗಿ ಕಾರ್ಯಕ್ರಮಗಳು ತೋರಿಸೋ ಜನರ ಅಳುವಿನಂತಲ್ಲವದು. ಒಂದು ಸೆಕೆಂಡಿನಿಂದ ಮೆಡೆಲ್ ಮಿಸ್ ಮಾಡಿಕೊಂಡ ಓಟಗಾರನ ನೋವಂತೆ,ಒಂದೇ ಪಾಯಿಂಟಿನಿಂದ ಸೋತು ಹೋದ ಗುರಿಕಾರನ ಬೇಸರದಂತೆ ಮುಂದಿನ ಸ್ಪರ್ಧೆಯವರೆಗೂ ನಿತ್ಯವೆಬ್ಬಿಸೋ ಅಲಾರಾಂ ಅದು ! ತನಗಿಂತ ಉತ್ತಮವಾದದ್ದಕ್ಕೆ ಸಿಕ್ಕ ಅವಕಾಶದಿಂದ ತನಗೆ ಅವಕಾಶ ಸಿಕ್ಕಲಿಲ್ಲವೆಂಬ ಅರಿವಿದೆಯದಕ್ಕೆ, ಪ್ರತೀ ಬಾರಿಯೂ ತಾನೇ ಗೆಲ್ಲಬೇಕೆಂಬ ಹಟವಿಲ್ಲವದಕ್ಕೆ.ಎಲ್ಲಿ ಸೋತೆನೆಂದು ನಿರಂತರವರಿಯೋ ಛಲವಷ್ಟೇ.ಕಥಾ ಸ್ಪರ್ಧೆಗಳಲ್ಲಿ, ಕಥಾ ಸಂಗ್ರಹದಲ್ಲಿ ಅನೇಕ ಬಾರಿ ತಿರಸ್ಕೃತಗೊಂಡ ಕಥೆಯಲ್ಲಿನ ಭಾವವೊಂದು ಪ್ರತೀ ಬಾರಿಯೂ ಉತ್ತಮಗೊಳ್ಳುತ್ತಾ ಕೊನೆಗೊಂದು ದಿನ ಪೇಪರಲ್ಲಿ ಪ್ರಕಟವಾದಾಗಲೋ ಬೆಳೆಬೆಳೆದು ಕಾದಂಬರಿಯೇ ಆದಾಗಲೋ ಆ ಭಾವದ ಪಯಣಕ್ಕೊಂದು ವಿರಾಮ ಸಿಕ್ಕಬಹುದು. ಪ್ರತಿಬಾರಿಯ ತಿದ್ದುವಿಕೆಯಲ್ಲೂ ಭಾವಕ್ಕೇನೂ ಬೇಸರವಿಲ್ಲ. ಛಲಬಿಡದ ತ್ರಿವಿಕ್ರಮನಂತದು. ಅಷ್ಟಕ್ಕೂ ಕಥೆಯೋ, ಕವನವೋ ಅನ್ನೋದು ಭಾವಗಳಿಗೊಂದು ಅಂಗಿ ಚಡ್ಡಿಯಷ್ಟೇ.ತಾ ತೊಟ್ಟ ಅಂಗಿ ಚೆನ್ನಾಗಿಲ್ಲವೆಂದರೆ ಅದಕ್ಕೆ ತಾ ಬೇಸರಿಸೋ ಅಗತ್ಯವಿಲ್ಲವೆಂಬ ಅರಿವಿದೆ ಭಾವಕ್ಕೆ. ಒಬ್ಬನಿಗೆ ಸುಂದರವೆನಿಸದ ಅಂಗಿ ಮತ್ತೊಬ್ಬನಿಗೆ ಸುಂದರವೆನಿಸಬಹುದು.ಇನ್ಯಾವುದೋ ಕೋಟ ಹೊದಿಕೆ ಹೊದ್ದಾಗ ಮೊದಲಿನವನಿಗೇ ವಾವ್ ಎನಿಸಬಹುದು. ಈ ವಾಹ್, ಥೂಗಳೆಲ್ಲಾ ಕ್ಷಣಿಕ. ಕಾಲದೊಂದಿಗೆ ಬದಲಾದ್ದು ಅವೇ ಹೊರತು, ಮೂಲ ಭಾವವಲ್ಲ. ಭಾವಕ್ಕೆ ಕೊಟ್ಟ ಚೌಕಟ್ಟಷ್ಟೇ ಎಂಬ ಅರಿವಿರೋ ಭಾವದ ಪಯಣವೆಂದೂ ನಿರಂತರ.ಚೈತನ್ಯವಿರೋ ತನಕವಿರೋ ತನಕದ ದೇಹದ ಉಸಿರಂತೆ. ಭಾವದಿಂದಲೇ ನಾವಾ ನಮ್ಮಿಂದಲೇ ಭಾವವೋ ಎಂಬುದು ಚೈತನ್ಯದಿಂದ ಉಸಿರೋ ಉಸಿರಿಂದ ಚೈತನ್ಯವೋ ಎಂಬಂತೇ ಎಂಬುದೊಂದು ಭಾವ !

ಈ ಲೇಖನ "ಪಂಜು"ವಿನಲ್ಲಿ ಪ್ರಕಟವಾಗಿದೆ

No comments:

Post a Comment