Thursday, August 22, 2019

ಅನಿತಾ, ವನಿತಾ ಮತ್ತು ಚೆಂಗು ಮರಿ

ಒಂದು ಕಾಡಲ್ಲಿ ಅನಿತಾ ಅನ್ನೋ ಆನೆ ಮತ್ತು ಮತ್ತು ವನಿತಾ ಅನ್ನೋ ಹುಲಿ ಇದ್ವಂತೆ. ಆ ಕಾಡಲ್ಲಿದ್ದ ನವನೀತ ಅನ್ನೋ ಸಿಂಹ ಕಾಡು ಬಿಟ್ಟೋದ್ರೆ ಕಾಡಿನ ರಾಜ ತಾವೇ ಆಗ್ಬೇಕು ಅಂತ ಅವೆರಡಕ್ಕೂ ಆಸೆ ಇತ್ತಂತೆ. ಮುಂದಿನ ರಾಜ/ರಾಣಿ ತಾವೇ ಆಗ್ಬೇಕು ಅನ್ನೋ ಆಸೇಲಿ ಅವ್ರು ಮತ್ತೊಬ್ರನ್ನ ಕೆಳಗೆ ತಳ್ಳೋದು ಹೇಗೆ ಅಂತ್ಲೇ ಯೋಚ್ನೆ ಮಾಡ್ತಿದ್ರಂತೆ. ಈ ಕಾಡಲ್ಲೇ ಅಲ್ಲ, ಪ್ರಪಂಚದಲ್ಲೇ ತಮ್ಮಷ್ಟು ಕೆಲ್ಸ ಮಾಡೋರು ಬೇರ್ಯಾರೂ ಇಲ್ಲ ಅನ್ನೋ ಭಾವ ಇಬ್ಬರಿಗೂ. ಜಗದ ಬೆಳಕಾಗೋದೇ ತಮ್ಮಿಂದ ಅನ್ನೋ ಭಾವವೂ ಇಬ್ರಿಗೂ. ಎಲ್ಲರಿಗೂ ಉಪಕಾರ ಮಾಡುವರಂತೆ ನಟಿಸುತ್ತಿದ್ದರೂ ಇವರು ಯಾವಾಗ ಮೈಮೇಲೆ ಬೀಳ್ತಾರೋ ಗೊತ್ತಿಲ್ಲದ ಉಳಿದವರು ಇವರು ಬಂದಾಗ ಇವರ ಪರಮ ಸ್ನೇಹಿತಂತೆಯೂ, ಎದುರಿಗಿಲ್ಲದಿದ್ದಾಗ ಇವರ ದುರ್ಗುಣಗಳ ದೂರುತ್ತಲೂ ಇದ್ದರು. ಇಂತಿಪ್ಪ ಕತರ್ನಾಕ್ ಕಾಡಿಗೆ ಚೆಂಗು ಮರಿ ಎಂಬ ಜಿಂಕೆಯ ಆಗಮನವಾಯ್ತು.

ಜಿಂಕೆಯೋ ಮಹಾ ಚುರುಕು. ಮೃಗಾಲಯದ ಅದೇ ಏಕತಾನತೆಯಿಂದ ತಪ್ಪಿಸಿಕೊಂಡು ಕಾಡಿಗೆ ಬಂದಿದ್ದ ಚೆಂಗುಮರಿಗೆ ಕಾಡಿನ ಸ್ವಾತಂತ್ರ್ಯ ಹೊಸತು. ಅದಕ್ಕೆ ಕೂತಲ್ಲಿ ಕೂರಲಾಗದ ಕುತೂಹಲ. ಅದಕ್ಕೆ ಜೊತೆ ಸಿಕ್ಕಿದ್ದು ಕೊಂಗೂಸ್ ಎಂಬ ಕರಡಿ. ಅದು ಜೂವಿನಿಂದ ಬರದೇ ಇದ್ರು ಆಹಾರ ಹುಡುಕಿಕೊಂಡು ಬೇರೆ ಕಾಡಿಂದ ಕತರ್ನಾಕ್ ಕಾಡಿಗೆ ಬಂದಿತ್ತು. ಕಾಡಲ್ಲಿ ಆರಾಮವಾಗಿ ಅಲೆಯುತ್ತಿದ್ದ ಇವುಗಳ ಕಣ್ಣಿಗೆ ಬಿದ್ದಿದ್ದು ಅಮಿತ ಎಂಬ ಕೋತಿ. ಆ ಕೋತಿಗೋ ಹೆಸರಿಗೆ ತಕ್ಕಂತೆ ಎಷ್ಟಿದ್ದರೂ ಸಮಾಧಾನವಿಲ್ಲದ ಭಾವ. ಈ ಚೆಂಗು, ಕೊಂಗೂಸ್ಗಳು ತನ್ನ ಹಣ್ಣಿಗೆ ಕೈ ಹಾಕದಿದ್ದರೂ ಅದಕ್ಕೆ ಏನೋ ಆತಂತ. ಅದೇ ತರ ಕಾಡಲ್ಲಿದ್ದ ಭೈರ ಅನ್ನೋ ಜಿರಾಫೆಯೂ ಈ ಹೊಸ ಮೃಗಗಳ ಆಗಮನವನ್ನು ಗಮನಿಸಿತ್ತು. ಈ ಕಾಡಿಗೆ ಹೊಸಬರು ಬರೋದೇನು ಹೊಸತಾ ? ಬಂದ್ರೆ ಎಷ್ಟು ದಿನ ಇರ್ತಾರೆ ಇಲ್ಲಿ, ಈ ಅನಿತಾ , ವನಿತಾನ ಸುದ್ದಿ ಇವಕ್ಕೆ ಇನ್ನೂ ಗೊತ್ತಿಲ್ಲ , ಅಲ್ಲಿವರೆಗೆ ಆರಾಮಾಗಿರ್ಲಿ ಅಂತ ಅಂದ್ಕೋತಿತ್ತು.

ಕಾಡಿಗೆ ಬಂದ ಹೊಸತರಲ್ಲಿ ಕೊಂಗೂಸನ್ನ ಕಂಡರೆ ಗಾಬರಿಪಡುತ್ತಿದ್ದ ಚೆಂಗುಮರಿಗೆ ಕ್ರಮೇಣ ಅದರೊಂದಿಗೆ ಸ್ನೇಹ ಬೆಳೆಯಿತು. ಚುರುಕಾಗಿ ಓಡೋ ಅದು ಎಲ್ಲಾದ್ರೂ ಹಣ್ಣು ಸಿಕ್ರೆ ಕೊಂಗೂಸಿಗೆ ತೋರುಸ್ತಿತ್ತು. ಮರ ಹತ್ತಿ ಜೇನು ಕೀಳೋ ಕೊಂಗೂಸ್ ಚೆಂಗು ಮರಿಗೂ ಸ್ವಲ್ಪ ಕೊಡ್ತಿತ್ತು. ಕಾಡೇ ತಮ್ಮದೆಂಬಂತೆ ಸ್ವೇಚ್ಛೆಯಿಂದಿದ್ದ ಚೆಂಗು ಮರಿಯನ್ನು ಕಂಡು ಅಮಿತನಿಗ್ಯಾಕೋ ಹೊಟ್ಟೆಯುರಿ ಶುರುವಾಯ್ತು. ಅವ ತನಗೆ ಚೆನ್ಣಾಗಿದ್ದ ಅನಿತಾ, ವನಿತಾರೊಂದಿಗೆ ಚೆಂಗುಮರಿ ಬಗ್ಗೆ ಸುಳ್ಳೇ ಪಳ್ಳೇ ಕತೆ ಕಟ್ಟಿದ !

ತಮ್ಮ ರಾಜ್ಯಕ್ಕೆ ಬೇರ್ಯಾರೋ ಬರೋದು ಅಂದ್ರೆ ಏನು ? ಬಂದ್ರೂ ತಮ್ಮಪ್ಪಣೆ ಇಲ್ದೇ ಹುಲ್ಲು ತಿನ್ನೋದು ಅಂದ್ರೆ ಏನು ಅಂತ ಇಬ್ಬರಿಗೂ ಉರಿದೋಯ್ತು. ಇಬ್ರೂ ಹೋಗಿ ಕಾಡಿನ ರಾಜ ನವನೀತನಿಗೆ ದೂರು ಕೊಟ್ವು. ನವನೀತನೋ ಹೆಸರಿಗೆ ತಕ್ಕಂತೆ ಸ್ವಲ್ಪ ಬಿಸಿಗೆ ಕರಗೋನು, ಗಾಳಿ ಹಾಕಿದ್ರೆ ಬೇಕಾದ ಆಕಾರಕ್ಕೆ ತಿರುಗೋನು. ಸ್ವಂತ ಬುದ್ಧಿಗಿಂತ ಸಿಟ್ಟಿಗೇ ಜಾಸ್ತಿ ಬೆಲೆ ಕೊಡೋನು. ತಾನೊಮ್ಮೆ ಘರ್ಜಿಸಿದ್ರೆ ಕಾಡೇ ಗಡ ಗಡ ಅನ್ನಬೇಕು ಅಂತ ಬಯಸೋನು. ತನ್ನ ಕಾಡಿಗೆ ಬಂದ ಯಾರೋ ಸ್ವಚ್ಛಂದವಾಗಿ ತಿರುಗೋದು ಅಂದ್ರೆ ಏನು? ಅದ್ರಲ್ಲೂ ಈ ಕಾಡಲ್ಲಿ ಇಷ್ಟು ವರ್ಷಗಳಿಂದ ಇರೋ ಅನಿತಾ , ವನಿತಾರು ಸುಳ್ಲೇಳಕ್ಕೆ ಆಗುತ್ತಾ ಅನಿಸ್ತು. ಚೆಂಗುಮರಿಯನ್ನ ಕರೆದು , ಕಾಡಿಂದ ಹೊರಗಾಕೋದು ಹೆಂಗೆ ಅಂತ ಯೋಚನೆ ಮಾಡೋಕೆ ಶುರು ಮಾಡಿದ.

ತಾವು ಆ ಕಾಡಿಗೆ ಬೇರೆ ಕಡೆಯಿಂದಲೇ ಬಂದಿದ್ವಿ ಅನ್ನೋದು ಅನಿತಾ, ವನಿತಾರಿಗೂ ನೆನಪಿರ್ಲಿಲ್ಲ. ನವನೀತನಿಗೂ ನೆನಪಾಗ್ಲಿಲ್ಲ. ಕೊಂಗೂಸ್, ಚೆಂಗು ಮರಿ ನಿಂತಿದ್ದು ತಪ್ಪು, ಕುಂತಿದ್ದು ತಪ್ಪು, ಹೋಗಿದ್ದು ತಪ್ಪು ಅಂತ ಅನಿತಾ, ವನಿತಾ, ಅಮಿತರು ಎಗರಾಡ್ತಿದ್ರು. ಈ ಕಾಡಿಂದ ಹೊರಗಾಗ್ಬೇಕು ಅಂತ ನವನೀತನಿಗೆ ಹೇಳ್ತಿದ್ರು. ನಾವು ಯಾಕೆ ಬಂದ್ವೋ ಇಲ್ಲಿಗೆ ಅಂತ ಚೆಂಗುಮರಿ ಮತ್ತು ಕೊಂಗೂಸ್ ಪ್ರತೀ ದಿನ ಕೊರಗ್ತಿದ್ರು ಇವ್ರ ಕಾಟಕ್ಕೆ. ಕೊನೆಗೊಂದು ದಿನ ಇವರ ಕಾಟ ತಡೆಯಲಾದರೆ ಕೊಂಗೂಸ್ ಪಕ್ಕದ ಕಾಡಿಗೆ ಹೋಗೋದ್ರೊಂದಿಗೆ ಚೆಂಗುಮರಿಗಿದ್ದ ಏಕೈಕ ಖುಷಿಯೂ ನಿಂತೋಯ್ತು..

ಪ್ರತೀದಿನದ ದುಃಖ, ಅವಮಾನ, ಅಸಹಾಯಕತೆಗಳನ್ನ ಚೆಂಗು ಮರಿ ತಡಕೊಳ್ತಿದ್ಳು. ಕಣ್ಣಂಚಿಗೆ ಬಂದ ನೀರ ಸಾಗರವನ್ನ ಛಲವೆಂಬ ಬೆಂಕಿ ಬತ್ತಿಸಿಬಿಡ್ತಿತ್ತು. ಸ್ವಾಭಿಮಾನಕ್ಕೆ ಧಕ್ಕೆಯಾಗೋ ಈ ಕಾಡಲ್ಲಿ ಯಾಕಿರ್ಲಿ ಅಂತ ಅದೆಷ್ಟು ಸಲ ಚೆಂಗು ಮರಿ ಯೋಚಿಸಿದ್ಲೋ ಗೊತ್ತಿಲ್ಲ. ಆದ್ರೆ ಇವರಿಗೆ ತಾನೇನು ಅಂತ ತೋರಿಸಿಯೇ ಮುಂದೆ ಹೋಗ್ಬೇಕು ಅನ್ನೋ ಛಲದಲ್ಲಿ ಅಲ್ಲೇ ಉಳ್ಕೊಂಡ್ಲು. ಕಾಲಚಕ್ರ ನಿಧಾನಕ್ಕೆ ತಿರುಗ್ತಾ ಇತ್ತು. ಕಾಡಿಂದ ಹೊರಗಾಗ್ಬೇಕು ಅನ್ನೋ ನಿರ್ಣಯಕ್ಕೆ ವಿರುದ್ಧವಾಗಿ ಕಾಡಲ್ಲಿದ್ದ ಶಿವಮ್ಮ ಅನ್ನೋ ಹಸು ಮತ್ತು ಭೈರಪ್ಪ ಜಿರಾಫೆ ಅಡ್ಡ ನಿಂತ್ರು. ಏನೇ ಮಾಡ್ಕೊಂಡ್ರೂ ತನ್ನ ಸುದ್ದಿಗೇನು ಬರ್ತಿಲ್ವಲ್ಲ ಅಂತ ವನಿತಾಳೂ ಸುಮ್ಮನಾಳ್ದು. ಅನಿತಾಗೆ ಏನಾದ್ರೂ ಮಾಡಿ ಇವಳನ್ನು ಹೊರಹಾಕ್ಬೇಕು ಅಂತ ಅನಿಸ್ತಿದ್ರೂ ಸೂಕ್ತ ಬೆಂಬಲವಿಲ್ದೇ , ಸೂಕ್ತ ಅವಕಾಶಕ್ಕಾಗಿ ಹೊಂಚು ಹಾಕ್ತಿದ್ದಳು. ಸಿಕ್ಕ ಸಣ್ಣ ಸಣ್ಣ ಅವಕಾಶಗಳಲ್ಲೂ ಮೈಮೇಲೆರಗಿ ಮುಗಿಸಿ ಬಿಡೋ ಪ್ರಯತ್ನ ಮಾಡ್ತಿದ್ದಳು. ಆದರೆ ಚೆಂಗುಮರಿಯ ಜೀವ ಗಟ್ಟಿಯಿತ್ತು. ಬದುಕಿದಳು ಪ್ರತೀ ಬಾರಿ.

ಕಾಲ ಚಕ್ರ ಮತ್ತೆ ಉರುಳುತ್ತಿತ್ತು. ಕಾಡಿನ ಬೇಟೆಗಾರರು ಹಾಕಿದ ಬಲೆಗೆ ಸಿಕ್ಕು ನವನೀತ ತಾನೇ ಹೊರಸಾಗಿದ್ದ. ಮಾಡಿದ್ದುಣ್ಣೋ ಮಹರಾಯ ಅನ್ನುವಂತೆ ಯಾರನ್ನೋ ಹೊರಹಾಕಲು ಹೋಗಿದ್ದ ಆತನನ್ನೇ ವಿಧಿ ಕಾಡಿಂದ ಹೊರಹಾಕಿತ್ತು ! ಜಗಳ ಕಾಯೋಕೆ ಸದಾ ಕಾಯ್ತಿದ್ದ ಅನಿತಾ ವನಿತಾರಿಗೆ ಚೆಂಗುಮರಿಯ ಜೊತೆಯ ಜಗಳ ಬೇಸರ ತರಿಸಿತ್ತು. ಇವರಿಗೆ ಜಗಳವಾಡಲು ವಿಷಯ ಕೊಟ್ಟರೆ ತಾನೇ ಚೆಂಗು ಮರಿ ! ತನ್ನ ಪಾಡಿಗೆ ತಾನಿರುತ್ತಾ, ಕಾಡಿನ ನಿಯಮಗಳ ಚೆನ್ನಾಗಿ ಪಾಲಿಸುತ್ತಿದ್ದ ಅವಳ ಮೇಲೆ ಹರಿಹಾಯಲು ಇವರಿಗೆ ವಿಷಯಗಳೂ ಸಿಗ್ತಿರಲಿಲ್ಲ. ಆದ್ರೆ ಜಗಳದ ಚಪಲ ತಾಳಬೇಕೇ ? ಎಷ್ಟೋ ದಿನಗಳಿಂದ ಬಚ್ಚಿಟ್ಟಿದ್ದ ಪರಸ್ಪರ ಧ್ವೇಷ, ಅಸಹನೆಗಳು ಭುಗಿಲೇಳತೊಡಗಿದವು. ಚೆಂಗುಮರಿಯ ಮೇಲೆ ಬೀಳ್ತಿದ್ದ ಇವರು ಈಗ ಪರಸ್ಪರ ಕಚ್ಚಾಡತೊಡಗಿದರು. ನವನೀತನ ನಿರ್ಗಮನದಿಂದ ತೆರವಾಗಿದ್ದ ಕಾಡಿನ ರಾಜನ ಸ್ಥಾನವನ್ನು ಆಕ್ರಮಿಸುವ ಚಪಲ, ಅದಕ್ಕಾಗೇ ನಡೆಸಿದ ವರ್ಷಗಳ ತಂತ್ರಗಾರಿಕೆ ಕೊನೆಗೂ ಕೈಗೂಡೋ ಕ್ಷಣದಲ್ಲಿ ಯಾವ ಪ್ರಯತ್ನವನ್ನೂ ಬಿಡಬಾರದು ಅಂತ ಶಕ್ರಿಮೀರಿ ಕಚ್ಚಾಡತೊಡಗಿದರು.
ಅನಿತಾ, ವನಿತಾರು ಈ ರೀತಿ ಕಚ್ಚಾಡುತ್ತಿದ್ದರೆ ಅವರ ಮಧ್ಯೆ ತಂದಿಟ್ಟಿದ್ದ ಅಮಿತ ದೂರದಿಂದಲೇ ನೋಡಿ ಖುಷಿ ಪಡುತ್ತಿದ್ದ. ಅವನಿಗೂ ಕಾಡಿನ ರಾಜನಾಗುವ ಉಮೇದಿತ್ತೆಂದು ಹೇಳಬೇಕಾಗಿಲ್ಲ ತಾನೇ ? ಯಾರಿಗೋ ಒಳ್ಳೆಯದು ಮಾಡಿದ್ರೆ ನಮಗೆ ತಕ್ಷಣಕ್ಕೆ ಒಳ್ಳೆಯದಾಗದೇ ಇರಬಹುದಂತೆ. ಆದರೆ ಯಾರಿಗಾದರೂ ಕೆಟ್ಟದ್ದನ್ನು ಬಯಸಿದರೆ ಸದ್ಯದಲ್ಲೇ ಅದು ಬಡ್ಡಿ ಸಮೇತ ವಾಪಾಸ್ ಬರುತ್ತಂತೆ ! ಎಲ್ಲರಿಗೂ ಒಳ್ಳೆಯದು ಬಯಸಿದ ಚೆಂಗುಮರಿ ತನ್ನ ಪಾಡಿಗೆ ಕಾಡಿನ ಮೂಲೆಯೊಂದರಲ್ಲಿ ಮೇಯುತ್ತಿತ್ತು. ಅದರ ವಿರುದ್ಧ ಕತ್ತಿ ಮಸೆದವರೆಲ್ಲರೂ ತಾವೇ ಪರಸ್ಪರ ಕಚ್ಚಾಡುತ್ತಾ ತಮ್ಮ ನಾಶದಲ್ಲಿ ತೊಡಗಿದ್ದರು.

ಬರೆಯೋ ಸೋಂಬೇರಿತನದಲ್ಲೂ ಹಿಂದೆ ಬಿದ್ದು ಇಷ್ಟುದ್ದ ಬರೆಯೋಕೆ ಸ್ಪೂರ್ತಿ ನೀಡಿದ ಅರ್ಧಾಂಗಿಗೆ ಒಂದು ಧನ್ಯವಾದ

No comments:

Post a Comment