Sunday, September 8, 2013

ನಾನೋದಿದ ಪುಸ್ತಕ "ಭಿತ್ತಿ" - ಎಸ್.ಎಲ್ ಭೈರಪ್ಪ

ಒಂದು ಪುಸ್ತಕ ಇಷ್ಟ ಆಗ್ಬೇಕು ಅಂದ್ರೆ ಆ ಲೇಖಕನ ಪಕ್ಕಾ ಅಭಿಮಾನಿ ಆಗಿರ್ಬೇಕು ಅಂತೇನಿಲ್ಲ. ಲೇಖಕನ ಒಂದು ಪುಸ್ತಕ ಇಷ್ಟ ಆಯ್ತು ಅಂದ್ರೆ ಅವನ ಎಲ್ಲಾ ಪುಸ್ತಕಗಳು ಇಷ್ಟ ಆಗ್ಬೇಕು ಅಂತನೂ ಇಲ್ಲ. ಆ ಲೇಖಕ ಹಾಗೆ ಹೀಗೆ, ಆ ಪಂಥ, ಈ ಪಂಥ ಅಂತೆಲ್ಲಾ ಪೂರ್ವಾಗ್ರಹಗಳನ್ನ ಇಟ್ಕೊಳ್ದೇ ಪುಸ್ತಕವನ್ನು ಎಲ್ಲದರ ತರಹದ ಸುಮ್ನೆ ಒಂದು ಪುಸ್ತಕ ಅನ್ನೋ  ಓದೋ ಪ್ರಯತ್ನ ಮಾಡಿದ್ರೆ ಪುಸ್ತಕ ಓದೋ ಸವಿ ಸವಿಯಬಹುದೇನೋ ಅಂತೊಂದು ಅಭಿಪ್ರಾಯ. ಈ ಪೀಠಿಕೆಗಳನ್ನೆಲ್ಲಾ ಬದಿಗಿಟ್ಟು ಹೇಳೋದಾದ್ರೆ , ಇವತ್ತು ಹೇಳೊಕೆ ಹೊರಟಿರೋ ಬುಕ್ಕು ಇತ್ತೀಚೆಗೆ ಎತ್ಕೊಂಡ ಪುಸ್ತಕ ಭೈರಪ್ಪನವರ ಆತ್ಮಕಥನ ಭಿತ್ತಿ.

ಸಂತೇಶಿವರ ಅನ್ನೋ ಊರಲ್ಲಿ ಹುಟ್ಟೋ ಭೈರಪ್ಪನವರಿಗೆ ಹುಟ್ಟಾ ಕಷ್ಟಗಳು.ಶ್ಯಾನುಭೋಗಿಕೆಯ ಮನೆತನ. ಆದರೆ ಅಪ್ಪ ಪಕ್ಕಾ ಆಲಸಿ, ಜವಾಬ್ದಾರಿಯಿಲ್ಲದವ. ಅಮ್ಮ ಊರೆಲ್ಲಾ ಸುತ್ತಿ ಕಷ್ಟಪಟ್ಟು ಲೆಕ್ಕ ಬರೆಯೋದು. ಊರವರು ವರ್ಷಾಂತ್ಯದಲಿ ತಂದು ಕೊಟ್ಟ ರಾಗಿಯನ್ನ ಮಾರಿ ಅದರ ದುಡ್ಡು ಖರ್ಚಾಗೋವರೆಗೂ ಅರಸೀಕೆರೆಯಲ್ಲಿದ್ದು ಹೋಟೆಲಿನಲ್ಲಿ ತಿನ್ನೋಕೆ ಅಲ್ಲಿ, ಇಲ್ಲಿ ಅಂತ ದುಂದು ಮಾಡಿ ಬರುವಂತಹ ಅಪ್ಪ. ಬುಡದಿಂದ ಪುಸ್ತಕದ ಮಧ್ಯಭಾಗದಲ್ಲಿ ಅಪ್ಪನ ದೇಹಾಂತ್ಯವಾಗೋ ತನಕವೂ ಅಪ್ಪನ ಗೋಳು ಹೀಗೆ ಮುಂದುವರೆಯುತ್ತದೆ. ಅವನ ಗೋಳು ಒಂದಲ್ಲಾ ಎರಡಲ್ಲ. ಪ್ರೈಮರಿಯಿಂದ ಮಾಧ್ಯಮಿಕಕ್ಕೆ ಅಂತ ಬೇರೆ ಕಡೆ ಶಾಲೆಗೆ ಹೋಗಬೇಕಾಗಿರತ್ತೆ. ಖರ್ಚಿಗೆ ಅಂತ ಸಂತೆಗೆ ಹೋಗಿ ಶರಬತ್ತು ಮಾರಿ ೨೫ ರೂಪಾಯಿ ಕೂಡಿಸಿರುತ್ತಾನೆ ಮಗ. ಮಗ ಎಲ್ಲೋ ಹೋದ ಸಂದರ್ಭದಲ್ಲಿ ಆ ಇಪ್ಪತ್ತೈದು ರೂಪಾಯಿ ಲಪಟಾಯಿಸಿ ಅದಕ್ಕೆ ಏನೇನೋ ತರ್ಕದ ಸಮರ್ಥನೆ ಕೊಡ್ತಿರ್ತಾನೆ ಅಪ್ಪ. ಮುಂದೆ ಬೇರೆ ಊರಲ್ಲಿ ಭಿಕ್ಷಾನ್ನ ಮಾಡಿ ಶಾಲೆಗೆ ಹೋಗ್ತಿರುತ್ತಾನೆ ಮಗ.ಅಲ್ಲಿಗೂ ಬಂದ ಅಪ್ಪ ದುಡ್ಡು ಕೇಳುತ್ತಾನೆ. ಇದ್ದರೆ ತಾನೆ ಕೊಡುವುದು ? ಮಗ ಭಿಕ್ಷಾನ್ನಕ್ಕೆ ಹೋಗುತ್ತಿದ್ದ ಬೀದಿ ಬೀದಿಗೆ ಹೋಗಿ ಮಗನಿಗೆ ಇನ್ನೂ ಉಪನಯನವಾಗಿಲ್ಲ, ಯಾರೂ ಭಿಕ್ಷೆ ಕೊಡಬೇಡಿ ಅಂತ ಸಾರಿ, ಇಲ್ಲಸಲ್ಲದ್ದನ್ನೆಲ್ಲಾ ಅಪಪ್ರಚಾರ ಮಾಡಿ ಸಿಗೋ ಹೊತ್ತಿನ ಊಟವನ್ನೂ ದಕ್ಕದಂತೆ ಮಾಡುತ್ತಾನೆ. ಮುಂದೆ ಭೈರಪ್ಪನ ತಾಯಿ ಸತ್ತಾಗ ಅದರ ಕರ್ಮ ಮಾಡೋ ಜವಾಬ್ದಾರಿಯನ್ನೂ ವಹಿಸಿಕೊಳ್ಳದೇ ಎಲ್ಲೋ ತಲೆಮೆರೆಸಿಕೊಳ್ಳುತ್ತಾನೆ ಅಪ್ಪ. ಮಗನೇ ಎಲ್ಲೋ ಸಾಲ ಸೋಲ ಮಾಡಿ , ಊರೂರು ಅಲೆದು ಮನೆಗೆ ನಾಲ್ಕು ಕಾಯಿಯಂತೆ ಪಡೆದು, ಅದನ್ನು ಮಾರಿ ದುಡ್ಡು ಕೂಡಿಸಿ ತಾಯಿಯ ಶ್ರಾದ್ದ ಮಾಡುತ್ತಾನೆ. ಎಲ್ಲೂ ಇಲ್ಲದ ಅಪ್ಪ, ಊಟಕ್ಕೆ ಸರಿಯಾಗಿ ಬಂದು ಊಟಕ್ಕೆ ಕೂತುಬಿಡುತ್ತಾನೆ.ಮುಂದೆಯೂ ಅಲ್ಲಿ ದುಡ್ಡು ಕೊಡು, ಇಲ್ಲಿ ಕೊಡು ಅಂತ ಅವಾಚ್ಯ ಶಬ್ದಗಳಲ್ಲಿ ನಿಂದಿಸುತ್ತಿರುವುದೇ ಆ ಪಾತ್ರದ ಕೆಲಸ.

ಅಪ್ಪನಿಗೆ ಸರಿಯಾಗಿ ಒಬ್ಬ ಅಜ್ಜಿ. ಆಕೆಗೆ ಮಗ ಮಾಡೋದೆಲ್ಲವೂ ಸರಿ. ಭೈರಪ್ಪನದ್ದೆಲ್ಲವೂ ತಪ್ಪು. ಭೈರಪ್ಪನಿಗೆ ಆತನ ತಂಗಿ ಲಲಿತೆಗೆ ಅವಳು ಅನ್ನದೇ ಇದ್ದ ದಿನಗಳಿಲ್ಲ. ಹುಟ್ಟಿಸಿದ ಅಪ್ಪನನ್ನು ಸಾಕುವುದು ನಿನ್ನ ಕರ್ತವ್ಯವಲ್ಲವೇ ಎಂದು ಶಾಲೆ ಓದೋ ಹುಡುಗನಿಗೆ ನ್ಯಾಯ ಹೇಳೋ ಅಂತ ಮನಸ್ಸು ಅವಳದ್ದು!!

ಕತೆಯಲ್ಲಿ ಬರೋ ಇನ್ನೊಬ್ಬ ವಿಲನ್ ಮಾವ. ಭೈರಪ್ಪನಿಗೆ ನೀರಲ್ಲಿ ಈಜೋ ಹುಚ್ಚು. ಭೈರಪ್ಪನ ಅಣ್ಣ ರಾಮಣ್ಣ ಕಾಲರಾ ಬಂದು ಸತ್ತು ಹೋಗಿರುತ್ತಾನೆ. ಒಟ್ಟಿಗೇ ಮಕ್ಕಳನ್ನು ಕಳೆದುಕೊಂಡ ಭೈರಪ್ಪನ ತಾಯಿಗೆ ಈತನೂ ಎಲ್ಲಿ ಸತ್ತು ಹೋಗುತ್ತಾನೋ ಎಂಬ ಭಯದಲ್ಲಿ ಮಾವನ ಮನೆಗೆ ಓದೋಕೆ ಕಳಿಸುತ್ತಾಳೆ. ಅಲ್ಲಿಯೋ ಭೈರಪ್ಪನಿಗೆ ನಿತ್ಯ ಚಿತ್ರಹಿಂಸೆ. ಮನೆ ಕೆಲಸ ಎಲ್ಲಾ ಮಾಡಿಸಿ, ಹೊಟ್ಟೆಗೂ ಸರಿಯಾಗೆ ಹಾಕದೇ ಸತಾಯಿಸೋ ಅತ್ತೆ. ಎಲ್ಲದಕ್ಕೂ ದೊಣ್ಣೆ ಹಿಡಿದೇ ಮಾತನಾಡಿಸೋ ಮಾವ. ಸಾಲದೆಂಬಂತೆ ಮಾವನಿಗೆ ದುಡ್ಡು ತಿನ್ನೋ ಚಟ. ಭೈರಪ್ಪನಿಗೆ ಪರೀಕ್ಷೆಗೆ ಕಟ್ಟೋಕೆ ಅಂತ ಅವರಮ್ಮ ಕೊಟ್ಟಿರೋ ದುಡ್ಡನ್ನೂ ಬಿಡದೇ ತಿನ್ನುತ್ತಾನೆ ಮಾವ ! ನಂತರ ಭೈರಪ್ಪನ ಹೆಸರೇಳಿ ಅವನ ತಂಗಿ ಮದುವೆ ಸಮಯದಲ್ಲೂ ಬಿಡದೇ ದುಡ್ಡು ನುಂಗುವಂತಹ ನೀಚ ಮನಸ್ಥಿತಿ ಮಾವನದು. ದನದ ಕೊಟ್ಟಿಗೆಯಿಂದ ದೇವಸ್ಥಾನದ ಪಡಿಚಾರಿಕೆಯವರೆಗೆ ಎಲ್ಲಾ ಕೆಲಸ ಮಾಡಲೂ ಭೈರಪ್ಪ ಬೇಕು ಮಾವನಿಗೆ. ತಿಳಿಯದ ಜನರಿಗೆ ಆ ಶಾಂತಿ ಈ ಶಾಂತಿ ಅನ್ನುವುದು. ಬೆಳಬೆಳಗ್ಗೆಯೇ ಅವರ ಮನೆಗೆ ಹೋಗೋದು. ಅವರನ್ನೆಲ್ಲಾ ಅದು ತನ್ನಿ ಇದು ತನ್ನಿ ಅಂತ ಮನೆಯಿಂದ ಹೊರಗೆ ಅಟ್ಟೋದು. ಮನೆಯಲ್ಲಿದ್ದ ಬೆಲ್ಲ, ದುಡ್ಡು ಹೀಗೆ ಕದಿಯೋದು ಮಾವನ ಕೆಲಸ. ರಾತ್ರೆಯಾದಾಗ ಎಲ್ಲಿಯದೋ ಎಳನೀರು ಇಳಿಸೋದು, ಇನ್ನೆಲ್ಲೋ ಕದಿಯೋದು.. ಹೀಗೆ ಮಾವ ಮಾಡದ ಕೆಲಸವಿಲ್ಲ. ಇಷ್ಟೆಲ್ಲಾ ಕಳ್ಳ ಕೆಲಸಗಳಿಗೂ ಭೈರಪ್ಪನ ನೆರವು ಬೇಕು.. ಒಟ್ಟಿನಲ್ಲಿ ಭೈರಪ್ಪ ಆ ಸಮಯದಲ್ಲಿ ರಕ್ತಹೀನತೆಯಿಂದಲೋ, ನಿದ್ರಾಹೀನತೆಯಿಂದಲೋ ಸಾಯದೇ ಇದ್ದಿದ್ದೇ ಹೆಚ್ಚು. ಬೇರೆಯವರ ಮನೆಯಲ್ಲಿದ್ದು ಓದೋದು ಎಷ್ಟು ಕಷ್ಟ ಅನ್ನೋದನ್ನ ಮನ ಮಿಡಿಯುವಂತೆ ವರ್ಣಿಸಿದ್ದಾರೆ. ಮುಂದೆ ತನ್ನ ತಂಗಿಗೆ ಸಂಬಂಧ ನೋಡುವ ಸಂದರ್ಭ ಬರುತ್ತದೆ. ಎಲ್ಲಾ ಸೆಟ್ಟಾಯಿತು ಎಂದು ಭೈರಪ್ಪ ಸಂತಸಪಡುವ ಹೊತ್ತಿನಲ್ಲೇ ಸಂಬಂಧದ ಸುದ್ದಿಯೇ ನಿಂತು ಹೋಗುತ್ತೆ. ಎಲ್ಲೋ ಜಾತ್ರೆಗೆ ಮಾವ , ಅತ್ತೆ ಬಂದಿದ್ದಾರೆ ಎಂದು ಸುದ್ದಿ ತಿಳಿದು ಅಲ್ಲಿಗೆ ಬರೋ ಭೈರಪ್ಪನಿಗೆ ಅವರು ತನ್ನ ತಂಗಿಯನ್ನು ಜವಾಬ್ದಾರಿಯಿಲ್ಲದೇ ಅಲ್ಲೇ ಬಿಟ್ಟು ಹೋದ ಕತೆ ತಿಳಿಯುತ್ತೆ ! ಮಾವ ಅಂದರೆ ಹೀಗಿರಬೇಕು !!

ಇದ್ದಿದ್ದರಲ್ಲಿ ಕಲ್ಲೇಗೌಡರದು ಸಚ್ಚಾರಿತ್ರ್ಯ. ಭೈರಪ್ಪನಿಗೆ ಕಷ್ಟವಾದಾಗಲೆಲ್ಲಾ ನೆರವಿಗೆ ಧಾವಿಸೋರು ಅವರೇ. ಭೈರಪ್ಪನ ತಾಯಿಯ ಸಂಸ್ಕಾರದ ಸಮಯದಲ್ಲಿ, ಆಮೇಲೆ ಅವನು ಹೈಸ್ಕೂಲಿಗೆ ಸೇರೋ ಸಮಯದಲ್ಲಿ ದುಡ್ಡಿಲ್ಲದೆ ಬಂದಾಗ ಮನೆ ಮನೆಗೆ ದಮ್ಮಡಿ ಹೊಡೆಸಿ ಪ್ರತಿ ಮನೆಯಿಂದ ನಾಲ್ಕು ಕಾಯಿ, ಐವತ್ತು ಪೈಸೆ ಹೀಗೆ ದುಡ್ಡು ಹೊಂದಿಸಿಕೊಡುವವರು ಅವರು. ಅವರ ನೆರೆವೂ ಇಲ್ಲದಿದ್ದರೆ ಚಿಂತಾಜನಕ ಪರಿಸ್ಥಿತಿ.
 
ಆಮೇಲೆ ಬರೋದು ದೇವರಯ್ಯನವರು. ಅವರ ಮಗನನ್ನು ಭೈರಪ್ಪನ ಅಮ್ಮನೇ ಎದೆಹಾಲುಣಿಸಿ ಸಾಕಿರುತ್ತಾರೆ. ಅಷ್ಟಿದ್ದರೂ ಆ ದೇವರಯ್ಯನವರ ಹೆಂಡತಿಗೆ ತನ್ನ ಗಂಡ ಭೈರಪ್ಪನಿಗೆ ಸಹಾಯ ಮಾಡೋದು ಇಷ್ಟವಿಲ್ಲ. ಒಂದೆರಡು ಬೊಗಸೆ ರಾಗಿ ಕೊಡಲು ಹೋಗಿದ್ದಕ್ಕೆ ಗಂಡ ಮನೆಯಲ್ಲೇ ಕಳ್ಳತನ ಮಾಡುತ್ತಿದ್ದಾನೆ ಎಂದು ದೊಡ್ಡ ಗಲಾಟೆಯೆಬ್ಬಿಸಿದ ಪುಣ್ಯಾತ್ಮೆ ಅವಳು.
ಮುಂದೆ ಬರೋ ಮತ್ತೊಂದು ಪಾತ್ರ ಸತ್ಯನಾರಾಯಣ. ಭೈರಪ್ಪನೇ ಓಡಾಡಿ ಸತ್ಯನಾರಾಯಣನಿಗೆ ಶ್ಯಾನುಭೋಗಿಕೆ ಕೊಡಿಸಿರುತ್ತಾನೆ. ಅವನ ಮನೆಯಲ್ಲೇ ಭೈರಪ್ಪನ ತಂಗಿ ಅಡಿಗೆ ಮಾಡಿಕೊಂಡು ಒಂದು ಮೂಲೆಯಲ್ಲಿ ಇರುತ್ತಾಳೆ. ಮುಂದೆ ಆಕೆಗೆ ಸಂಬಂಧ ನೋಡುವ ಸಂದರ್ಭದಲ್ಲಿ ಭೈರಪ್ಪ ತಾನು ಹೇಗೇಗೋ ಕೂಡಿಟ್ಟ ದುಡ್ಡನ್ನೆಲ್ಲಾ ತಂದು ಕೊಡುತ್ತಾನೆ. ಸತ್ಯನಾರಾಯಣ ಆ ದುಡ್ಡನ್ನೆಲ್ಲಾ ನುಂಗಿ ಹಾಕಿ ಬಂದ ಸಂಬಂಧಗಳನ್ನು ಸುಳ್ಳು ಹೇಳಿ ಮುರಿಯುತ್ತಾ ಕಾಲ ಹರಣ ಮಾಡತೊಡಗುತ್ತಾನೆ.

ಮುಂದೆ ಭೈರಪ್ಪನೇ ಎಮ್ ಎ ಓದೋ ಹೊತ್ತಿನಲ್ಲಿ ತಂಗಿ ಲಲಿತೆಯ ಮದುವೆ ಮಾಡುತ್ತಾನೆ. ಆದ್ರೆ ಭಾವ ಇಸ್ಪೀಟ್ ಲಂಪಟ. ಅವನಿಂದಾಗೋ ಗೋಳುಗಳು.ಅವನಿಗೆ ಅಂದ ಭೈರಪ್ಪ ಜಮೀನು ಕೊಡಿಸಿದರೂ ಆತ ಇಸ್ಪೀಟಿಗೆ ಮತ್ತೆ ದಾಸನಾಗೋದು.. ಹೀಗೆ ಅವನದ್ದೂ ಒಂದು ಗೋಳಿನ ಕತೆ.


ಇದರ ಮಧ್ಯೆ ಬರೋದು ಭೈರಪ್ಪನ ಸ್ವಾಮಿ ಮೇಷ್ಟ್ರು, ಅಯ್ಯಂಗಾರ್ ಮಾಷ್ಟ್ರು ಹೀಗೆ ಹಲವಾರು ಮಾಸ್ತರುಗಳು. ಸ್ವಾಮಿ ಮಾಸ್ತರ ಸಿಗರೇಟು ಕತೆ, ಪೇಪರ್ ಲೀಕ್ ಮಾಡೋ ಕತೆ, ಇನ್ನೊಂದು ಮಾಸ್ತರ ಜೊತೆ ನುಗ್ಗೇಹಳ್ಳಿಯ ಅವರ ತೋಟದ ಬಾವಿಯಲ್ಲಿ ಈಜು ಕಲಿತ ಕತೆ ಹೀಗೆ ನುರೆಂಟು ಕತೆಗಳು ಮಧ್ಯ ಮಧ್ಯ. ಅಯ್ಯಪ್ಪಾ ಅದೆಷ್ಟೆಂದು ಮಾಸ್ತರುಗಳು. ಆ ಮಾಸ್ತರು ಹೀಗೆ ಪೇಟ ಧರಿಸ್ತಿದ್ರು, ಕುಂಕುಮ ಇಡ್ತಿದ್ರು, ಕರಿ ಆಯ್ಯಂಗಾರಿ.. ಹೀಗೆ ಪುಟಕ್ಕೆರೆಡು ಪಾತ್ರಗಳು !! ಅವರು ಮೊದಲನೆ ತರಗತಿಯಿಂದ ಪಿ ಎಚ್ಡಿ ಓದೋ ತನಕ ಸಿಕ್ಕ ಮಾಸ್ತರಗಳ ಬಗ್ಗೆ ಒಬ್ಬರನ್ನೂ ಬಿಡದೇ ವರ್ಣಿಸಿದ್ದಾರೆ. ಅವರಲ್ಲಿ ಶಾಂತಮ್ಮನವರು, ತಿರುಮಲಾಚಾರ್ಯರದ್ದು ಸ್ವಲ್ಪ ತೂಕದ ಪಾತ್ರ.

ಬಾಲ್ಯದಲ್ಲಿ ಒಂದು ಅಂಗಿ ಚಡ್ಡಿಯಲ್ಲೇ ಕಳೆದು, ಬಳಪ, ಪೆನ್ಸಿಲ್ಲಿಗೆ ಗತಿಯಿಲ್ಲದಂತ ಸ್ಥಿತಿ, ಅವರಿಗಿದ್ದ ನಾಟಕದ ಪದಗಳ ಹುಚ್ಚು, ನಾಟಕದ ಕತೆ ಹೇಳಿ ಒಂದು ರಜಾದಲ್ಲಿ ೨೫ ರೂಪಾಯಿ ಸಂಪಾದಿಸಿದ ಕತೆ, ಊದುಬತ್ತಿ ಮಾರಿದ ಕತೆ  ಹೀಗೆ ಅಲೆಮಾರಿಯಂತೆ ಊರೂರು ಸುತ್ತಿದ ಹಲವು ಕತೆಗಳು ಬರುತ್ತದೆ.ಆಮೇಲೆ ಪೈಲ್ವಾನರ ಕುಸ್ತಿ ನೋಡುತ್ತಾ ನೋಡುತ್ತಾ ಅದರಲ್ಲೇ ಅವರ ಕಾದಂಬರಿ ಭೀಮಕಾಯ ತಯಾರಾದ ಪರಿಯನ್ನೂ ವರ್ಣಿಸಿದ್ದಾರೆ.ಹೀಗೆ ಒಮ್ಮೆ ಒಬ್ಬ ಸಂತೇಶಿವರದವ ಇವರು ಓದುತ್ತಿದ್ದ ಊರಿಗೆ ಬರುತ್ತಾನೆ. ಬೆಂಗಳೂರಿಗೆ ಹೋಗ್ತೀನಿ ಮಿಲಿಟರಿಗೆ ಸೇರ್ಬೇಕು ಅಂತ ಅವನಾಸೆ. ಅವನ ಜೊತೆಗೆ ಹೊರಟ ಇವರ ದುಡ್ಡನ್ನು ಒಬ್ಬ ಲಪಟಾಯಿಸುತ್ತಾನೆ. ಅತ್ತ ಆರ್ಮಿಯ ಕೆಲಸವೂ ಸಿಗೋಲ್ಲ. ವಾಪಾಸ್ ಬರೋಕೂ ದುಡ್ಡಿರೋಲ್ಲ.ಈ ತರ ಮೋಸ ಹೋದ ಘಟನೆಗಳು ಒಂದೆರಡಲ್ಲ. ಆಮೇಲೆ ಹೋಟೇಲ್ ಸೇರ್ಬೇಕು ಅಂತ ಧಾರವಾಡಕ್ಕೆ ಹೋಗಿ, ಅಲ್ಲಿ ಹೋಟೇಲುಗಳೆಲ್ಲಾ ಬಾಗಿಲು ಹಾಕಿದ್ದರಿಂದ ರಾಣೆಬೆನ್ನೂರಿಗೆ ಹೋಗಿ.. ಅಲ್ಲಿಂದ ಮುಂಬೈಗೆ ಹೋಗಿ .. ಅಲ್ಲಿ ಕೂಲಿಯವರ ಜೊತೆ ಬದುಕಿ,ಅಲ್ಲೇ ಟಾಂಗಾ ಗಾಡಿ ಲೈಸನ್ಸು ಪಡೆಯೋ ಮಟ್ಟಕ್ಕೆ ಬರುತ್ತಾರೆ. ಅಷ್ಟರಲ್ಲಿ ಒಂದು ವರ್ಷವೇ ಕಳೆದುಹೋಗಿರುತ್ತೆ. ಆದರೆ ಅಷ್ಟರಲ್ಲಿ ತಮ್ಮ ಗುರಿ ಓದೋದು, ಟಾಂಗಾ ಗಾಡಿಯಲ್ಲ ಅಂತ ಮತ್ತೆ ಮೈಸೂರಿಗೆ ಮರಳುತ್ತಾರೆ.

ಮೈಸೂರಿನ ಓದು, ಅಲ್ಲಿನ ರಾಜಕೀಯ, ಅನಂತರದ ಓದು ಅಲ್ಲಿ ಮತ್ತೆ ರಾಜಕೀಯ, ಭಾಷಣ ಸ್ಪರ್ಧೆಗಳಲ್ಲಿ ಇವರಿಗೆ ಬರುತ್ತಿದ್ದ ಬಹುಮಾನಗಳು, ಅಲ್ಲಿ ಮತ್ತೆ ರಾಜಕೀಯ ಹೀಗೆ ತರ ತರದ ರಾಜಕೀಯಗಳು. ಕೊನೆಗೆ ಕೀರ್ತಿನಾಥ ಕುರ್ತಕೋಟಿಯವರ ಮುನ್ನುಡಿ ಮತ್ತು ಪ್ರಕಾಶನಗಳ ರಾಜಕೀಯ,ಯಪ್ಪಾ.. ಹೀಗೂ ಉಂಟೆ ಅನಿಸುತ್ತೆ. ಆಮೇಲೆ ಗುಜರಾತ್, ದೆಲ್ಲಿಗೆ ಹೋಗಿ ಅಲ್ಲಿ ಸೇವೆ ಸಲ್ಲಿಸೋ ಇವರು ಕರ್ನಾಟಕಕ್ಕೆ ಬಂದಾಗ ಇಲ್ಲಿನ ನವ್ಯ, ನವೋದಯ, ಬಂಡಾಯ, ದಲಿತ, ಮಹಿಳಾ ಸಾಹಿತ್ಯಗಳೆಂಬ ಹೊಡೆದಾಟಗಳು. ಒಬ್ಬರು ಇನ್ನೊಬ್ಬರನ್ನು ಮೂಲೆಗುಂಪು ಮಾಡೋ ಪ್ರಯತ್ನಗಳು.. ಅಬ್ಬಬ್ಬಾ.. ಸಾಹಿತಿ ಅಂದ್ರೆ ಸುಮ್ನೇ ತನ್ನ ಪಾಡಿಗೆ ಸೃಜನಶೀಲರಾಗಿದ್ದರೆ, ಮತ್ತೊಬ್ಬ ಸೃಜನಶೀಲನನ್ನು ಪ್ರೋತ್ಸಾಹಿಸುತ್ತಾ ಇದ್ದರೆ ಸಾಲದೇ .. ತಮ್ಮದೇ ಸರಿಯೆನ್ನೋ ರಾಜಕೀಯ, ಗುಂಪುಗಾರಿಕೆ ಮಾಡಬೇಕೇ ಎನ್ನೋ ಪ್ರಶ್ನೆ ಎಷ್ಟೋ ಸಾರಿ ಕಾಡುತ್ತದೆ. ಕ್ಲಾಸಲ್ಲಿ ಫೇಲಾಗೋ ಹಂತದಿಂದ ಯೂನಿವರ್ಸಿಟಿ ಗೋಲ್ಡ್ ಮೆಡಲ್ ಹೊಡೆಯೋ ತನಕ ಅವರು ಬೆಳೆದು ಬಂದ ಪರಿ, ಎದುರಿಸಿದ ಕಷ್ಟಗಳು.. ಹೀಗೆ ಎಷ್ಟೋ ಕತೆಗಳು.. ಬರೆದರೆ ಮುಗಿಯದಷ್ಟು.. ಆ ಪುಸ್ತಕವನ್ನು ಓದಿಯೇ ಅದನ್ನು ಆನಂದಿಸಬೇಕು. 

8 comments:

  1. ಈವತ್ತೇ ನಾನು "ಭಿತ್ತಿ"ಯನ್ನು ಸಾದ್ಯಂತ ಓದುತ್ತೇನೆ. ಒಳ್ಳೆಯ ಪುಸ್ತಕ ಓದಲು ಪ್ರೇರೇಪಿಸಿದ ನಿಮಗೆ ಶರಣು.

    ReplyDelete
    Replies
    1. ಧನ್ಯವಾದಗಳು ಬದ್ರಿ ಭಾಯ್ :-)

      Delete
  2. ತುಂಬಾ ಒಳ್ಳೆಯ ಪುಸ್ತಕದ ಬಗ್ಗೆ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಪ್ರಶಸ್ತಿ :)...

    ReplyDelete
    Replies
    1. ನಿಮ್ಮ ಮೆಚ್ಚುಗೆಗೆ ತುಂಬಾ ಧನ್ಯವಾದಗಳು. ಪ್ರಶಾಂತವನಕ್ಕೆ ಸ್ವಾಗತ :-)

      Delete
  3. Replies
    1. ಧನ್ಯವಾದಗಳು :-)
      ಪ್ರಶಾಂತವನಕ್ಕೆ ಸ್ವಾಗತ :-)

      Delete
  4. ಒಳ್ಳೆಯ ಪುಸ್ತಕ. ಭೈರಪ್ಪನವರ ಬಾಲ್ಯ, ಜೀವನ, ಅವರ ವಿಚಾರಗಳು ಮರೆಯಲಾಗದಂತವು.

    ReplyDelete