Sunday, February 15, 2015

ಪ್ರೇಮಿಗಳ ದಿನಕ್ಕೆ ಮೂರು ಮತ್ತೊಂದು ಭಾವ

ಮೊನ್ನೆ ವಾಟ್ಪಾಪಿನ ಗ್ರೂಪಲ್ಲೊಂದು ಪೋಸ್ಟು. ಬೈಕಿನ ಮೇಲಿದ್ದ ಒಬ್ಬ ಹುಡ್ಗ. ಅವನ ಪಕ್ಕದಲ್ಲೊಬ್ಬ ಹುಡ್ಗಿ. ಅವಳು ಅನ್ಯಮನಸ್ಕಳಾಗಿ ಎತ್ತಲೋ ನೋಡ್ತಿದ್ದಾಗ ಇನ್ಯಾರೋ ತೆಗೆದ ಪೋಟೋ ಅದು.ಕೆಳಗೊಂದು ಟ್ಯಾಗ್ ಲೈನು. ಬೇರೆ ಗ್ರೂಪುಗಳಿಗೂ ಇದ್ನ ಫಾರ್ವಾರ್ಡ್ ಮಾಡಿ ಅನ್ನೋದದ್ರ ಭಾವಾರ್ಥ. ಬೈಕ್ ಮೇಲೊಬ್ಬ ಹುಡ್ಗ ಅವ್ನ ಪಕ್ಕದಲ್ಲೊಬ್ಳು ಹುಡ್ಗಿ ನಿಂತ್ಕಂಡಿದ್ರೆ ಏನರ್ಥ ? ಅದನ್ಯಾಕೆ ದುನಿಯಾಕ್ಕೆ ಫಾರ್ವಾರ್ಡ್ ಮಾಡ್ಬೇಕು ಅಂತ ಅರ್ಥಾಗ್ಲಿಲ್ಲ. ಯಾವ್ದೋ ಹುಡ್ಗ , ಹುಡ್ಗಿ ಜೊತೆಗೆ ನಿಂತ್ಕಂಡು ಮಾತಾಡ್ತಿದಾರೆ ಅಂದ್ರೆ ಅವ್ರು ಪ್ರೇಮಿಗಳೇ ಆಗ್ಬೇಕಿಲ್ಲ ! ಜೊತೆಗಿದ್ದೋರು ಪ್ರೇಮಿಗಳೇ ಅಂತಿಂಟ್ಕೊಂಡ್ರೂ ಭಾರತೀಯತೆಗೆ, ಇಲ್ಲಿನ ಸಂಸ್ಕೃತಿಗೆ ಧಕ್ಕೆಯಾಗೋ ಅಂತ ಯಾವ ಅಂಶಗಳೂ ಆ ಫೋಟೋದಲ್ಲಿ ಕಾಣ್ತಿರಲಿಲ್ಲ. ತಮ್ಮ ಪಾಡಿಗೆ ತಾವಿರೋ ಇಬ್ರ ಫೋಟೋನ ಜಗತ್ತಿಗೆಲ್ಲಾ ಹಂಚೋಕೆ ಹೊರಡೋ ಇಂತವ್ರಿಗೆ ಮಾಡಕ್ಕೆ ಬೇರೆ ಕೆಲ್ಸ ಇರಲ್ವಾ ಅಂತ ? ಪಾರ್ವರ್ಡ್ ಮಾಡಿದವಗೆ ಅನ್ಸಿದ್ದು ಸುಳ್ಳಲ್ಲ !

ಈ ಘಟನೆ ಇವತ್ತು ನೆನಪಾಗಿದ್ಯಾಕಪಾ ಅಂದ್ರೆ ಬೆಳ ಬೆಳಗ್ಗೆ ಐಟಿಪಿಎಲ್ ರಸ್ತೇಲಿ ಸಾಮಾನ್ಯ ಬಸ್ಸಿಗಾಗಿ ಕಾಯ್ತಾ ಕಾಲ್ಗಂಟೆ ಆಗ್ತಾ ಬಂದ ಸಂದರ್ಭದಲ್ಲಿ ಕಂಡ ದೃಶ್ಯ. ಒಬ್ಬ ಹುಡುಗ. ಅವನ ಪಕ್ಕದಲ್ಲೊಬ್ಳು ಹುಡ್ಗಿ. ಇಬ್ಬರ ಕೈಯಲ್ಲೂ ಒಂದೊಂದು ಫೈಲುಗಳು. ಅಲ್ಲೇ ಯಾವುದೋ ಸಂದರ್ಶನಕ್ಕೆ ಬಂದಿರಬೇಕು ಅಂತ ಹುಡುಗನ ಫಾರ್ಮಲ್ಲು ಮತ್ತು ಹುಡುಗಿಯ ಫೈಲಿಂದ ಇಣುಕುತ್ತಿದ್ದ ಜೀಮೇಲಿನ ಕಾಪಿ ಹೇಳುತ್ತಿತ್ತು. ಕೇಳಿಸಿಕೊಳ್ಳೋ ಉದ್ದೇಶವಿರದಿದ್ರೂ ಕಿವಿಗೆ ಬಿದ್ದ ಮಾತುಗಳೆಲ್ಲಾ ಕೆಲಸದ ಬಗ್ಗೆಯವೇ. ನಂತರ ಬಸ್ಸತ್ತಿ ಹೊರಟವನಿಗೆ ಬಸ್ಸಲ್ಲೂ ಒಂದಿಷ್ಟು ಉದ್ಯೋಗವರಸಿ ಹೊರಟವ್ರು, ಕೆಲಸದಿಂದ ವಾಪಾಸ್ ಬರ್ತಿರೋರು ಸಿಕ್ಕಿದ್ರು. ಯಾರ ಮುಖದಲ್ಲೂ ಇವತ್ತು ಪ್ರೇಮಿಗಳ ದಿನ, ಕೆಲ್ಸ ಗಿಲ್ಸ ಎಲ್ಲಾ ಬಿಟ್ಟು ಮತ್ತಿನ್ನೋನೋ ಮಹತ್ತರವಾದ್ದು ಮಾಡ್ಬೇಕೆನ್ನೋ ಖುಷಿಯಾಗ್ಲಿ , ಗಾಬ್ರಿಯಾಗ್ಲೀ ಕಾಣ್ಲಿಲ್ಲ ! ಮುಖವನ್ನು ಬಿಸಿಲಿಗೆ, ದೂಳಿಗೆ ಹಾಳಾಗದಂಗೆ ಮರೆಮಾಚಿದ ಇನ್ನೊಂದಿಷ್ಟು ಚೂಡಿಧಾರಿಣಿಗಳು, ಫಾರ್ಮಲ್ಲಿಣಿಗಳೂ ಎದುರು ಸಿಕ್ಕಿದ್ರು. ಯಾರ ಹಿಂದೂ ಬೈಕ್ ವಾಲಾಗಳಿರಲಿಲ್ಲ. ಹಿಂದೆ ಮುಂದೆ ಒಂದಿಷ್ಟು ಹುಡುಗರಿದ್ರೂ ಅವರೂ ತಮ್ಮದೇ ಲೋಕದಲ್ಲಿದ್ದಂಗೆ ನಡೆದುಹೋಗ್ತಿದ್ರು. ಹುಟ್ಟೆ ತುಂಬೋದು ಮೊದ್ಲು ಗುರು. ಶೋಕಿ ಪಾಕಿ ಆಮೇಲೆ ಅನ್ಸಿದ್ದು ಸುಳ್ಳಲ್ಲ !

ದೊಮ್ಲೂರಿಗೆ ಹೋದವನಿಗೆ ಅಲ್ಲಿದ್ದ ಹನ್ನೆರಡೇ ಶತಮಾನದ ದೇವಸ್ಥಾನವ ಇವತ್ತಾದ್ರೂ ನೋಡೋಣ ಅನಿಸಿ ಅತ್ತ ಹೋದ್ರೆ ಅದು ಬಾಗ್ಲು. ಆದ್ರೆ ಅಲ್ಲಿಗೆ ನನ್ನಂತೇ ನೋಡಬಂದ ಮೂವರು ವಿದೇಶಿ ಮಹಿಳೆಯರು ಕಂಡ್ರು. ಚೋಳರ ಕಾಲದ ಆ ದೇಗುಲವ ಹೊರಗಿನಿಂದಲೇ ನೋಡಿ, ಅಲ್ಲಿನೊಂದಿಷ್ಟು ಚಿತ್ರ ಕ್ಲಿಕ್ಕಿಸಿ ಹೊರ ಹೊರಡುವುದರಲ್ಲಿದ್ದ ನನ್ನತ್ರ ನಮ್ಮ ಮೂವರದ್ದು ಒಂದು ಪಟ ತೆಕ್ಕೊಡ್ತೀಯೇನಪ್ಪ ಅಂದ್ರು. ಸರಿ ಅಂತ ಮುಚ್ಚಿದ ಪ್ರಧಾನ ಬಾಗ್ಲಿನ ಹತ್ರ ಅವರನ್ನು ನಿಲ್ಲಿಸಿ ಫೋಟೋ ತೆಗೆದ ನಾನು ಇಲ್ಲಿನ ಈ ದಶಾವತಾರಗಳ ಚಿತ್ರ ನೋಡಿದ್ರಾ ? ಇದೇನು ಅಂತ ಗೊತ್ತಾ ಅಂತ ಕೇಳಿದೆ ಸುಮ್ನೇ ಕುತೂಹಲಕ್ಕೆ. ಗೊತ್ತಿಲ್ಲ, ಹೇಳ್ತೀಯ ಅಂದ್ರು. ದಶಾವತಾರಗಳ ಹೆಸ್ರು, ಅವುಗಳ ಇಂಗ್ಲೀಷ್ ಅರ್ಥ, ಒಂಭತ್ತನೇ ಅವತಾರ ಅಂತ ಕೆಲವರು ಬುದ್ದನನ್ನು ಸೇರಿಸಿಕೊಳ್ಳುವ ಬಗ್ಗೆ, ಕೆಲವರು ಅವನ ಬದಲು ಬೇರೆ ದೇವರ ಸೇರಿಸಿಕೊಳ್ಳುವ ಬಗ್ಗೆ, ಕಲಿಯುಗದಲ್ಲಿ ಕಲ್ಕಿ ಬರುವನೆಂಬ ನಂಬಿಕೆಯ ಬಗ್ಗೆ ನನಗೆ ತಿಳಿದಷ್ಟು ಹೇಳಿದೆ. ಕಲ್ಕಿ ಯಾವಾಗ ಬರುತ್ತಾನೆಂಬ ಅವರ ಪ್ರಶ್ನೆಗೆ ಉತ್ತರಿಸಲು ಶಕೆ, ಬ್ರಹ್ಮನ ದಿನ, ಕಲ್ಪದ ಪರಿಕಲ್ಪನೆಗಳ ಅವಶ್ಯಕತೆ ಬರದೇ ಭೂಮಿ ಕೊನೆಗೊಳ್ಳುವ ಸಮಯದಲ್ಲಿ ದುಷ್ಟರ ದಮನಕ್ಕಾಗಿ ಅವನು ಬರುತ್ತಾನೆಂಬ ನಂಬಿಕೆ ಎಂದುತ್ತರಿಸಿದೆ. ಎಲ್ಲಾ ಅವತಾರಗಳ ಫೋಟೋಗಳನ್ನೂ ತೆಗೆದುಕೊಂಡ ಅವರು ಕಲ್ಕಿ ಯಾವತ್ತು ಬರುತ್ತಾನೆಂಬ ದಿನದ ಬಗ್ಗೆ ಸಿಕ್ಕಾಪಟ್ಟೆ ಆಸಕ್ತರಾಗಿದ್ದಂತೆ ಕಂಡುಬಂತು ! ವಾಮನ ತ್ರಿವಿಕ್ರಮನಾದ ಕತೆ, ನರಸಿಂಹ, ಮತ್ಯ, ನರಸಿಂಹನ, ಕೂರ್ಮನ ಪರಿಕಲ್ಪನೆಯಿಂದ ಆಸಕ್ತಿ ಹೊಂದಿದ ಅವರಿಗೆ ಹನ್ನೊಂದು ಹನ್ನೆರಡು ಹದಿಮೂರರ ಸುಮಾರಿಗೆ ಕಟ್ಟಲ್ಪಟ್ಟ ಹೊಯ್ಸಳರ ೯೨ ಕ್ಕಿಂತಲೂ ಹೆಚ್ಚಿನ ದೇಗುಲಗಳ ಬಗ್ಗೆ ಕೇಳಿ ಆಶ್ಚರ್ಯ ಪಟ್ರು. ಹಳೇಬೀಡಿನಲ್ಲಿನ ಶಿಲ್ಪಗಳು ಬ್ರಿಟಿಷ್ ಮ್ಯೂಸಿಯಂ ಸೇರಿದ ಕತೆ ಕೇಳಿ ಅದನ್ಯಾಕೆ ಭಾರತಕ್ಕೆ ತರೋ ಪ್ರಯತ್ನಗಳು ನಡೀತಿಲ್ಲ ಅನ್ನೋ ಪ್ರಶ್ನೆಗೆ ನಾನು ಕೆಲ ಕ್ಷಣ ನಿರುತ್ತರನಾಗಿದ್ದೆ :-( ಟಿಪ್ಪು ಸುಲ್ತಾನನ ಖಡ್ಗವನ್ನು ಭಾರತಕ್ಕೆ ತರಹೋದಾಗ್ಲೇ ಗಲಾಟೆಯಾಗಿದ್ದು ನೆನಪಾಗಿ ದೇಶ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ ಹಾಳುಗೆಡವಲು ಸರ್ಕಾರಗಳು ಸಿದ್ದರಾಗದ ಕಾರಣದಿಂದ ಹೀಗಾಗಿರಬಹುದು ಅನ್ನೋ ನನ್ನ ಊಹೆಗೆ ಅವ್ರೂ ಬೇಸರದಿಂದ ತಲೆಯಾಡಿಸಿದ್ರು. ನೀನು ಇಲ್ಲಿಯವನೇನಾ, ಬರ್ತಾ ಇರ್ತೀಯ ಯಾವಾಗ್ಲೂ ಅನ್ನೋ ಪ್ರಶ್ನೆಗೆ ನಾನು ಕರ್ನಾಟಕದವ್ನೇ ಆದ್ರೆ ಹುಟ್ಟಿದ್ದು ಬೆಂಗ್ಳೂರಲ್ಲ ಅನ್ನೋ ನನ್ನುತ್ತರಕ್ಕೆ ಮತ್ತೆಲ್ಲಿ ಎಂಬ ಮರುಪ್ರಶ್ನೆ. ನಮ್ಮೂರು ಸಾಗರ, ಭಾರತದ ಅತೀ ಉತ್ತರದ ಜಲಪಾತ ಜೋಗದ ಬಳಿಯವನು ನಾನು ಎಂದಾಗ , ಓಹ್ ಜೋಗ ಜಲಪಾತ. ನಾ ನೋಡಿದ್ದೇನೆ ಅಂದ್ಲು ಆ ಸ್ವೀಡಿಷ್ ಗುಂಪಲ್ಲಿದ್ದ ಒಬ್ಬ ಮಹಿಳೆ. ಸಮಯವಾದ್ರೆ ಹಾಸನದ ಬಳಿಯಿರೋ ಹೊಯ್ಸಳ ದೇಗುಲಗಳಿಗೆ, ಅದರಲ್ಲೂ ಬೇಲೋರು ಹಳೇಬೀಡಿಗೆ ಭೇಟಿಕೊಡಿ ಅಂದಾಗ ಖಂಡಿತಾ ಹೋಗುತ್ತೇವೆಂದು ಅಲ್ಲಿಗೆ ಹೋಗುವ ವಿವರ ಪಡೆದ ಅವರಿಗೆ ನನಗೆ ತಿಳಿದಂತೆ ವಿವರ ಕೊಟ್ಟು ಹೊರಬಂದಾಗ ಇಲ್ಲಿನ ಗರಿಮೆಯ ಬಗ್ಗೆ ಒಂದಿಷ್ಟಾದರೂ ಬೆಳಕು ಚೆಲ್ಲುವಷ್ಟು ತಿಳಿಸಿಕೊಟ್ಟ ಜನಕ್ಕೆ, ಅಷ್ಟೆಲ್ಲಾ ಸಂಪತ್ತಿನ ಗಣಿಯಾದ ದೇಶದ ಬಗ್ಗೆ ಹೆಮ್ಮೆಯೆನಿಸಿ ಮೇರಾ ಭಾರತ್ ಮಹಾನ್ ಎಂದಿನಿಸಿತು.

ಹಂಗೇ ಹೊರಬರ್ತಿದ್ದಾಗ ವರ್ಷಗಳ ನಂತ್ರ ಕಾಲೇಜ್ ಜ್ಯೂನಿಯರೊಬ್ಳು ಸಿಕ್ಕಿದ್ಲು. ಸಿಕ್ಕವರಲ್ಲಿ ನಮ್ಮೂರ ಬಗ್ಗೆ, ಮನೆ ಬಗ್ಗೆ, ಕಾಲೇಜು ಬಗ್ಗೆ, ಕೆಲಸದ ಬಗ್ಗೆ ನಡೆದ ಮಾತುಕತೆಯಲ್ಲಿ ಇವತ್ತು ಪ್ರೇಮಿಗಳ ದಿನ ಅಂತ ಮರ್ತೇ ಹೋಗಿತ್ತು ! ಮತ್ತೆ ಬಸ್ ಹತ್ತಿ ಮನೆಗೆ ಮರಳೋ ಯೊಚನೆಯಲ್ಲಿದ್ರೆ ಹೊಟ್ಟೆ ತಾಳ ಹಾಕ್ತಾ ಇತ್ತು. ದಾರಿಯಲ್ಲಿ ಸಿಕ್ಕ ಮಂಗಳಮುಖಿಯರು, ಬೋಂಡಾ ಅಂಗಡಿ, ಮಾಂಸದಂಗಡಿ, ಟೈಲ್ ಅಂಗಡಿಯ ಕತ್ತರಿಸೋ ಸದ್ದು, ಪಕ್ಕದಲ್ಲೇ ಕಲ್ಲೊಡೆಯೋನ ಸದ್ದು, ಬಿಸಿಲಿಗೆ ತಂಪು ಅಂತ ರಾಶಿ ಕಲ್ಲಂಗಡಿ ಹಾಕಿ ಜನರ ಎದುರು ನೋಡುತ್ತಾ ಬೆವರೊರೆಸುತ್ತಿದ್ದ ಅಂಗಡಿಯವ, ಗಿರಾಕಿಗಳಿಗೆ ಕಾಯುತ್ತಿದ್ದ ಆಟೋವಾಲ...ಎಲ್ಲರ ಮುಖದಲ್ಲೂ ನನಗೆ ಕಂಡ ಕಾಮನ್ ಭಾವ ಹಸಿವು. ಮತ್ತೆ ಅನಿಸಿದ ಅನಿಸಿಕೆ ಮತ್ತೆ ಮೊದಲಿನಂತೇ.
ಹೊಟ್ಟೆಗೊಂದು ದಕ್ಕೋದು ಮುಖ್ಯ ಗುರು. ಶೋಕಿ ಗೀಕಿ ಆಮೇಲೆ ಗುರೂ !!
 

1 comment:

  1. ಈ ಬರಹದ ಹೂರಣದಿಂದ ನನಗೆ ಅರಿವಾದದ್ದೇನಪ್ಪಾ ಅಂತಂದ್ರೇ, ದಿನಾಚರಣೆಗಳ ನೆಪದಲ್ಲಿ ಮಾಮೂಲಿ ದಿನದ ಜೀವನ ಕ್ರಮ ಬದಲಾಗದು ಅಲ್ಲವೇ!

    ReplyDelete