Sunday, November 1, 2015

ಹಂಪಿ ಪ್ರವಾಸ ಕಥಾನಕ -೩: ವಿಠಲನ ನಾಡಿನಲ್ಲಿ

ಹಂಪಿ ಬಜಾರ್:
ಹಂಪಿ ವಿರೂಪಾಕ್ಷನ ದರ್ಶನ ಪಡೆದ ನಾವು ಪಕ್ಕದಲ್ಲಿದ್ದ ತುಂಗಭದ್ರೆಗೊಂದು ನಮನವೆನ್ನುತ್ತಾ ಹಂಪೆ ಬಜಾರುಗಳನ್ನಾಸಿ ವಿಠಲ ದೇಗುಲದತ್ತ ಸಾಗಿದೆವು. ಹಂಪೆ ಬಜಾರೆಂದರೆ ಜನರಿಗೆ ಅದರಲ್ಲೇನಿದೆ ? ಎಲ್ಲಾ ಊರಿನಂತೆ, ಹಂಪಿಯಲ್ಲೊಂದು ಮಾರುಕಟ್ಟೆ, ವಿಶೇಷವೇನಪ್ಪ ಅನಿಸಬಹುದು. ಶ್ರೀ ಕೃಷ್ಣ ದೇವರಾಯನ ಕಾಲದ ಮಾರುಕಟ್ಟೆ, ಮುತ್ತು ರತ್ನಗಳನ್ನಳೆದು ತೂಗುತ್ತಿದ್ದ ಬೀದಿ ಅಂದರೆ ಆಗ ಓಹ್ ಅನ್ನಬಹುದು. ಹಂಪಿಯಲ್ಲಿ  ಶ್ರೀ ಕೃಷ್ಣ ದೇಗುಲದ ಎದುರಿಗಿನ ಕೃಷ್ಣ ಬಜಾರ್, ಮಹಾನವಮಿ ದಿಬ್ಬದಿಂದ ಬ್ಯಾಂಡ್ ಟವರಿನತ್ತ ಸಾಗುವಾಗ ಸಿಗುವ ಪಾನ್ ಸುಪಾರಿ ಬಜಾರ್,ಅಚ್ಯುತರಾಯ ದೇಗುಲದ ಎದುರಿನ ಅಚ್ಯುತಪೇಟೆ ಅನ್ನೋ ಬಜಾರುಗಳಿದ್ದರೂ ಎರಡು ಅಂತಸ್ತಿನ ಸಾಲು ಸಾಲು ಕಂಬಗಳ ಹಂಪಿ ಬಜಾರಿನ ಗತ್ತೇ ಬೇರೆ. ಸದ್ಯಕ್ಕೆ ಜೀರ್ಣೋದ್ದಾರ ಕೆಲಸ ನಡೆಯುತ್ತಿದ್ದು ಅದರೊಳಗೆ ಯಾರನ್ನೂ ಬಿಡದಿದ್ದರೂ ಯಾವ ಲಿಫ್ಟು, ಕ್ರೇನುಗಳಿಲ್ಲದ ಆ ಕಾಲದಲ್ಲಿ ಎರಡಂಸ್ತಿನ ಚಪ್ಪಡಿಗಲ್ಲಿನ ಕಟ್ಟಡಗಳನ್ನು ಕಟ್ಟಿದ್ದಾದರೂ ಹೇಗೆಂಬ ವಿಸ್ಮಯ ಅದರ ಬಳಿಯಲ್ಲಿ ಸಾಗುವ ಯಾರಿಗಾದರೂ ಕಾಡೇ ಕಾಡುತ್ತೆ.

ಕ್ರಾಫ್ಟ್ ಬಜಾರ್:
ಹಂಪಿ ಬಜಾರಿನ ಇಕ್ಕೆಲಗಳ ಎರಡಂತಸ್ತಿನ ಕಟ್ಟಡಗಳ ಮಧ್ಯದ ಟಾರ ರಸ್ತೆಯಲ್ಲಿ ನೇರ ಮುಂದೆ ಸಾಗಿದರೆ ವಿಠಲ ದೇವಸ್ಥಾನಕ್ಕೆ ದಾರಿಯೆಂಬ ಬೋರ್ಡು ಕಾಣುತ್ತದೆ. ಅದರಿಂದ ನೇರ ಹೋದರೆ ಅಲ್ಲೊಂದು ಬಯಲು. ಎಡಕ್ಕೆ ಹೋದರೆ ತುಂಗಭದ್ರಾ ತಟದಲ್ಲಿ ಸಾಗಬಹುದಾದ ಕಲ್ಲ ರಸ್ತೆ. ಬಲಗಡೆಯ ಬಯಲಲ್ಲಿ ಛಾಯಾಚಿತ್ರ ಪ್ರದರ್ಶನವೆಂಬ ವೇದಿಕೆ,ಅದಕ್ಕೆ ಹಿಮ್ಮೇಳವೆನ್ನುವಂತೆ ಹಂಪೆಯ ಹಾಳುಬಿದ್ದ ಮತ್ತೊಂದು ರಚನೆ. ಕೆಲ ವರ್ಷಗಳ ಹಿಂದೆ ಪ್ರತಿದಿನವೂ, ಹಂಪಿ ಉತ್ಸವದ ಸಮಯದಲ್ಲಿನ ಸಂಜೆಗಳಲ್ಲಿ ಇಲ್ಲಿ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿತ್ತಂತೆ. ಆದರೀಗ ನಿಂತು ಹೋಗಿ ಅಲ್ಲಿ ಹಾಳು ಸುರಿಯುತ್ತಿದೆ. ಅಲ್ಲಿದ್ದ ಫೋಕಸ್ ಲೈಟುಗಳ ಮೇಲಿದ್ದ ಧೂಳು, ಕೆತ್ತಿಟ್ಟ ಜಾಗದಲ್ಲೆಲ್ಲಾ ನಿಂತಿದ್ದ ಹಿಂದಿನ ದಿನಗಳ ಮಳೆ ನೀರು ಗತವೈಭವ ಸಾರುವಂತಿತ್ತು. ಆ ಬಯಲ ಎಡಭಾಗದಲ್ಲಿ ಹಂಪೆ ಪೋಲೀಸ್ ನಿಲ್ದಾಣ. ಅದರ ಪಕ್ಕದಲ್ಲೇ ಹಂಪೆಯ ಕಲೆಯ ಪರಿ ತೆರೆದಿಡುವಂತಹ ಕ್ರಾಫ್ಟ್ ಬಜಾರ್.
Photo exibition hall/ಛಾಯಾಚಿತ್ರ ಪ್ರದರ್ಶನ ಮಂಟಪ

ಕೆಂಪಭೂಪ ಮಾರ್ಗ:

ವಿಠಲನ ದೇಗುಲಕ್ಕೆ ದಾರಿ ಎಂಬಲ್ಲಿಂದ ಮುಂದೆ ಬಂದು ಎಡಕ್ಕೆ ಬಂದರೆ ಸಿಗುವ ಕಲ್ಲಿನ ದಾರಿಯ ಹೆಸರು ಕೆಂಪಭೂಪ ಮಾರ್ಗ. ಅದರಲ್ಲಿ ಸಾಗಿದರೆ ಮುಂದೆ ತುಂಗಭದ್ರೆಗೆ ಹತ್ತಿರ ಹತ್ತಿರವಾಗುತ್ತಾ ಮುಂದೆ ದಾರಿಯೇ ಇಲ್ಲವೇನೋ ಎಂಬತಹ ತಿರುವು ಕಾಣುತ್ತೆ. ಆ ದಡದಲ್ಲಿ ಅದೆಷ್ಟೋ ದೇವಸ್ಥಾನಗಳು.ಬಂಡೆಗಳ ಕೊರೆದು ಮಾಡಿದಂತೆ, ಬೆಂಕಿ ಕಡ್ಡಿಗಳ ಜೋಡಿಸಿದಂತೆ.. ಅದೆಷ್ಟೋ ಕಂಬಗಳ ಸಾಲು. ಅದರತ್ತ ಸಾಗುವ ಒಂದೊಂದೇ ತೆಪ್ಪಗಳಲ್ಲಿನ ಜನರನ್ನ ನೋಡ ನೋಡುತ್ತಾ ನಾವೇ ಅವರಾದಂತಹ ಭಾವ. ನಾವು ಮೊದಲ ಸಲ ಆ ತಿರುವಿನವರೆಗೆ ಹೋಗಿ ವಾಪಾಸ್ ಬಂದಿದ್ದೆವು. ಆದರೆ ಅಲ್ಲಿಂದ ಮುಂದೆ ಹೋದರೆ ಬಂಡೆಗಳ ನಡುವಿಂದ ನುಸುಳಿ ಕೋದಂಡರಾಮನ ದೇವಸ್ಥಾನದ ಪಕ್ಕ ಸಾಗುವ ದಾರಿ ಸಿಗುತ್ತದೆ ! ಶ್ರೀರಾಮ, ಲಕ್ಷ್ಮಣ, ಸೀತಾಮಾತೆ, ಸುಗ್ರೀವರಿರುವ ಅಪರೂಪದ ವಿಗ್ರಹವಿರೋ ಈ ದೇಗುಲದ ಮೇಲ್ಗಡೆಯೇ ಯಂತ್ರೋದ್ದಾರಕ ಆಂಜನೇಯನ ಗುಡಿಯಿದೆ. ಅಲ್ಲಿಂದ ಹಾಗೇ ಮುಂದೆ ಸಾಗಿದರೆ ಪುರಂದರ ಮಂಟಪ, ವಿಠಲ ದೇವಸ್ಥಾನ ಸಿಗುತ್ತದೆ.



ಕಲ್ಲ ನಾಡಲ್ಲಿ ಸಿಕ್ಕ ಕ್ರಿಸ್ಟಿ:
Ranajan, Goutham along with Christy. Lighting arrangement for photo exibition @the backstage

ಕೆಂಪಭೂಪ ಮಾರ್ಗದಲ್ಲಿ ಒಂದು ಬೃಹತ್ ಬಂಡೆ ಸಿಗುತ್ತದೆ. ಅದರ ಬಳಿ ಮನೆ ಕಟ್ಟಲಾಗದವರೆಲ್ಲಾ ಒಂದಿಷ್ಟು ಕಲ್ಲುಗಳನ್ನು ಒಂದರ ಮೇಲೆ ಒಂದರಂತಿಟ್ಟು ಮನೆ ಕಟ್ಟೋ ಭಾಗ್ಯ ಸಿಗಲಿ ಅಂತ ಹರಕೆ ಕಟ್ಟುತ್ತಾರೆ. ಅಲ್ಲಿಂದ ಮುಂದೆ ಹೋಗುವವರು ಅಲ್ಲೇ ತಮ್ಮ ಸೈಕಲ್ಲು, ಬೈಕುಗಳನ್ನು ಇಟ್ಟು ಹೋಗುತ್ತಾರೆ. ಅಲ್ಲೊಂದು ಎಳನೀರು, ಜ್ಯೂಸು, ಮಜ್ಜಿಗೆಗಳನ್ನು ಮಾರೋ ಗೂಡಂಗಡಿಯೂ ಇದೆ. ಅಲ್ಲಿಂದ ಸ್ವಲ್ಪ ಮುಂದೆ ಹೋಗುತ್ತಿದ್ದಂತೆಯೇ ಮುಂದೆ ಹೋಗಲು ಸಾಧ್ಯವೇ ಇಲ್ಲವೆಂಬ ಭ್ರಮೆ ಹುಟ್ಟಿಸೋ ತಿರುವು ಸಿಗುತ್ತೆ. ಅಲ್ಲಿಂದ ಮುಂದಿನ ಪ್ರಕೃತಿಯನ್ನು ವೀಕ್ಷಿಸಿದ ನಾವು ವಾಪಾಸ್ ಬಂಡು ಕ್ರಾಫ್ಟ್ ಬಜಾರ್ ಪಕ್ಕದ ಪೋಲೀಸ್ ಸ್ಟೇಷನ್ನಿನ ಬಳಿ ಬಂದೆವು. ಚಿತ್ರಕಲಾ ಪ್ರದರ್ಶನ ಅಂತ ಬೋರ್ಡಿದ್ದ ಜಾಗದಲ್ಲಿ ಒಬ್ಬ ಕುಳಿತಿದ್ದ ಕ್ಯಾಮೆರಾ ಹಿಡಿದು. ಚರ್ಮದ ಜಾಕೆಟ್ಟು, ಜೀನ್ಸ್ ಪ್ಯಾಂಟು, ತಲೆಗೊಂದು ಕರ್ಚೀಫು ಕಟ್ಟಿ ಕುಳಿತಿದ್ದ ಅವನನ್ನು ನೋಡಿ ಅವರ್ಯಾರೋ ಫೋಟೋಗ್ರಾಫರ್ರು, ಚಿತ್ರಕಲಾ ಪ್ರದರ್ಶನದ ಬಗ್ಗೆ  ಗೊತ್ತಿರಬಹುದು ಅಂತ ಯಾವಾಗ ನಡೆಯುತ್ತೆ ಇಲ್ಲಿನ ಪ್ರದರ್ಶನ ಅಂದೆ. ಉತ್ತರವಿಲ್ಲ. ಕಬ್ ಹೋಗಾ ಯಹಾಂ ಕಾ ಶೋ ಅಂದೆ . ಅದಕ್ಕೂ ಉತ್ತರವಿಲ್ಲ. Will there be phorographic show in the evening ಅಂದೆ. ಆವಾಗ ಉತ್ತರ ಬಂತು ನೋಡಿ ನಂಗೆ ಗೊತ್ತಿಲ್ಲ ಅಂತ. ಆಗ ನಮ್ಮ ದೃಷ್ಟಿ  ಎದುರಿಗೆ ನಿಂತಿದ್ದ ಅವನ ಬೈಕಿನ ಮೇಲೆ ಹರಿಯಿತು. ಕೊಚ್ಚಿ ಇಂದ ಲೇಹ್ ಲಡಾಕ್ ವರೆಗೆ ಹಸಿರು ಮಾರ್ಗದ ಬೈಕ್ ಯಾನ ಅಂತ ಬರೆದುಕೊಂಡಿತ್ತು. ಲೇಹ್ ಲಡಾಕ್ ಗೆ ಅಂತಲೇ ಹೋದ ನನ್ನ ಸ್ನೇಹಿತರು ಚಂಡೀಗಢದ ವರೆಗೆ ಬೈಕನ್ನು ಲಾರಿಗಳಲ್ಲಿ ತರಿಸಿಕೊಂಡು ಅಲ್ಲಿಂದ ಬೈಕಲ್ಲಿ ಹೋಗೋದನ್ನ ಕೇಳಿದ್ದೆ. ಆದರೆ ಈ ಪುಣ್ಯಾತ್ಮ ಅಖಂಡಭಾರತಯಾತ್ರೆ ಅನ್ನುವ ಪರಿಯಲ್ಲಿ ಬೈಕ್ ಯಾನ ಮಾಡೋದು ಕೇಳಿ ಅಬ್ಬಾ ಅನಿಸಿತು. ಅವರ ಹೆಸರು ಕ್ರಿಸ್ಟಿಯನ್ ಅಂತೆ. ಕೊಚ್ಚಿಯವರು. ಚೆಗುವರನ ಫುಲ್ ಫ್ಯಾನು. ಈ ಲೇಖನ ಬರೆಯೋ ಹೊತ್ತಿಗೆ ನೀವೆಲ್ಲೇ ಇರಿ ಕ್ರಿಸ್ಟಿಯನ್, ನಿಮ್ಮ ಪಯಣಕ್ಕೆ ಶುಭವಾಗಲೆಂದು ಹಾರೈಸುತ್ತಿರುತ್ತೇನೆ.

ಅಖಂಡಶಿಲೆ ಬಸವಣ್ಣ/ಏಕಶಿಲಾ ನಂದಿ:
Ekashila Nandi of Hampi

Akhandashila basavanna of hampi

ಛಾಯಾಚಿತ್ರ ಪ್ರದರ್ಶನಮಂಟಪದಿಂದ ಮುಂದೆ ಸಾಗುತ್ತಿದ್ದಂತೆ ಸಿಗೋದೇ ಏಕಶಿಲಾ ನಂದಿ. ಚಾಮುಂಡಿ ಬೆಟ್ಟ, ಬೇಲೂರು ಹಳೇಬೀಡು, ಇಕ್ಕೇರಿ, ಲೇಪಾಕ್ಷಿಗಳ ನಂದಿಯನ್ನು ನೋಡಿದವರಿಗೆ ಇಲ್ಲಿನ ನಂದಿ ವಿಶೇಷವೆನಿಸದಿದ್ದರೂ ಇಲ್ಲಿಂದಲೇ ಮುಂದಿನ ಮತಂಗಪರ್ವತದ ಮೆಟ್ಟಿಲುಗಳು ಶುರುವಾಗುವುದರಿಂದ ಇದೊಂದು ರೀತಿ ದಾರಿದೀಪ ಎಂದರೆ ತಪ್ಪಲ್ಲ. ಎಲ್ಲಿ ದಾರಿ ಕಳೆದುಹೋದರೂ ಏಕಶಿಲ ನಂದಿಯ ಹತ್ತಿರದಿಂದ ಬಂದಿದ್ದೆವು. ಅಲ್ಲಿಗೆ ಹೋಗೋದು ಹೇಗೆ ಅಂದರೆ ದಾರಿಯಲ್ಲಿ ಸಿಕ್ಕವರು ಸರಿಯಾದ ದಾರಿಯನ್ನೇ ತೋರಿಸುತ್ತಾರೆ ಅಂದರೆ ಇದರ ಕೀರ್ತಿಯ ಬಗ್ಗೆ ಯೋಚಿಸಿ ! ಒಂದು ಘಂಟೆಗಳ ಹಾರವನ್ನು ಬಿಟ್ಟರೆ ಬೇರ್ಯಾವ ಅಲಂಕಾರವನ್ನೂ ಹೊಂದಿರದ ನಂದಿಗೆ ಬಿಸಿಲು ಮಳೆಗಳಿಂದ ರಕ್ಷಿಸೋ ಕಲ್ಲ ಚಪ್ಪರವಿರುವುದೇ ಅದರ ಆಕಾರ ಶತಮಾನಗಳ ಕಾಲ ಉಳಿದುಬಂದಿರುವುದಕ್ಕೆ ಕಾರಣ ಅನಿಸುತ್ತೆ. ನಂದಿಯ ಪಕ್ಕದಲ್ಲೇ ಮೇಲೆ ಕಾಣುವ ಬೆಟ್ಟಗಳ ಸಾಲೇ ಮಾತಂಗಪರ್ವತ. ಅದರಲ್ಲೇ ಸಿಕ್ಕುವುದು ಅಚ್ಯುತರಾಯ ದೇವಸ್ಥಾನ. ಅದನ್ನು ದಾಟಿ ಹಾಗೇ ಮುಂದೆ ನಡೆದರೆ ಸಿಕ್ಕುವುದೇ ವಿಠಲ ದೇವಸ್ಥಾನ.ಮಾತಂಗಪರ್ವತದ ಬಗ್ಗೆ ಹಿಂದಿನ ಭಾಗದಲ್ಲಿ ಓದಿದ್ದೆವು. ಘಂಟೆಯ ಸದ್ದನ್ನರಸಿ ಅಚ್ಯುತರಾಯ ದೇವಸ್ಥಾನ, ವರಾಹ ದೇವಸ್ಥಾನ, ಅನಂತಶಯನನ ಕೆತ್ತನೆ, ಮಾತಂಗಪರ್ವತದ ಆಂಜನೇಯ ಮುಂತಾದ್ದನ್ನ ದರ್ಶಿಸಿದ್ದನ್ನ ಮುಂದಿನ ಭಾಗದಲ್ಲಿ ನೋಡೋಣ.

No comments:

Post a Comment