Thursday, December 27, 2018

ಸಾವನದುರ್ಗದ ಚಾರಣ

ಬೆಂಗಳೂರಿಗೆ ಬಂದ ಹೊಸತರಲ್ಲಿ ಸಾವನದುರ್ಗದ ಚಾರಣ ಮಾಡಿದವನು ನಂತರ ನಂದಿದುರ್ಗ(ನಂದಿ ಬೆಟ್ಟ), ಮಾಕಳಿದುರ್ಗ, ಕಬ್ಬಾಳ ದುರ್ಗ, ದೇವರಾಯನ ದುರ್ಗಗಳ ಚಾರಣ ಮಾಡಿದ್ದೆ. ಆದರೆ ಬೆಂಗಳೂರಿನ ಸುತ್ತಲಿರೋ "ನವದುರ್ಗ"ಗಳಲ್ಲಿ ಇವು ಒಂದೊಂದು ಅಂತ ತಿಳಿದಿದ್ದು ಇತ್ತೀಚೆಗೆ. ಈ ನವದುರ್ಗಗಳ ಸಾಲಿಗೆ ತುಮಕೂರಿನಲ್ಲಿರೋ ಹುತ್ರಿದುರ್ಗ, ಹುಲಿಯೂರು ದುರ್ಗ, ಚನ್ನರಾಯನ ದುರ್ಗ ಮತ್ತು ರಾಮನಗರದ ಭೈರವದುರ್ಗಗಳೂ ಸೇರಿವೆ ಅಂತ ಓದಿ ಅವಕ್ಕೂ ಹೋಗಬೇಕೆಂಬ ಮನಸ್ಸಾಗ್ತಿದೆ. ಹಿಂದಿನ ಬಾರಿ ಸಾವನದುರ್ಗಕ್ಕೆ ಹೋದಾಗ ಅದರ ಬಗ್ಗೆ ಬರೆಯಲಾಗದ ಸೋಂಬೇರಿತನದಿಂದ ಈ ಸಲವಾದರೂ ಹೊರಬರಬೇಕೆಂಬ ಮನಸ್ಸಿನಿಂದ ಮತ್ತು ಸಾವನದುರ್ಗಕ್ಕೆ ಹೋಗೋದು ಹೇಗೆಂದು ಕೇಳ್ತಿದ್ದ ಗೆಳೆಯರ ಪ್ರಶ್ನೆಗಳಿಗೆ ಉತ್ತರವಾಗಲೆಂದು ಈ ಲೇಖನ
We at the top of Savanadurga 

ಸಾವನದುರ್ಗಕ್ಕೆ ಹೋಗೋದು ಹೇಗೆ?

ಬೆಂಗಳೂರಿನಿಂದ ಸುಮಾರು ೬೫ ಕಿ.ಮೀ ದೂರವಿರುವ ಸಾವನದುರ್ಗಕ್ಕೆ ಬೈಕಲ್ಲಿ ಹೋಗೋದಾದರೆ ಮೈಸೂರು ರಸ್ತೆಯಲ್ಲಿ ಕೆಂಗೇರಿ,ಕುಂಬಳಗೋಡುವಿನ ನಂತರ ಹೆಜ್ಜಾಲಕ್ಕೆ ದಾರಿ ಎಂಬಲ್ಲಿ ಬಲಕ್ಕೆ ತಿರುಗಿದರೆ ಮಂಚನಬೆಲೆ ಜಲಾಶಯದ ಬಳಿಯಿಂದ ನಾಯಕನಹಳ್ಳಿ ಎಂಬಲ್ಲಿಗೆ ತೆರಳಬೇಕು. ಅಲ್ಲಿಂದ ೩.೬೫ ಕಿ.ಮೀ ಸಾವನದುರ್ಗ ಸಂರಕ್ಷಿತಾರಣ್ಯದ ಒಳಗೆ ಸಾಗಿದರೆ ಸಾವನದುರ್ಗ ಬೆಟ್ಟದ ಚಾರಣಕ್ಕೆ ತೆರಳಬಹುದು.
ಬಸ್ಸಿನಲ್ಲಿ ಬರೋದಾದರೆ ಬೆಂಗಳೂರಿನ ಕೆ.ಆರ್ ಮಾರ್ಕೆಟ್ಟಿನಿಂದ ಸಾವನದುರ್ಗಕ್ಕೆ ನೇರ ಬಸ್ಸುಗಳಿವೆ.
Direct Bus from Bangalore to Savanadurga Via Tavarekere 

ಮೆಜೆಸ್ಟಿಕ್ಕಿನಿಂದ ಬರೋದಾದರೆ ೨೪೨ ಬಸ್ಸಲ್ಲಿ ತಾವರೆಕೆರೆಗೆ ಬಂದರೆ ಅಲ್ಲಿಂದ ಮಾಗಡಿಗೆ ತೆರಳಿ ಮಾಗಡಿಯಿಂದ ರಾಮನಗರಕ್ಕೆ ತೆರಳೋ ಬಸ್ಸಲ್ಲಿ ನಾಯಕನಹಳ್ಳಿಯವರೆಗೆ ತೆರಳಬಹುದು. ಅಲ್ಲಿಂದ ಸಾವನದುರ್ಗಕ್ಕೆ ಆಟೋಗಳು ಸಿಗುತ್ತೆ.

ಸಾವನದುರ್ಗದಲ್ಲಿ ನೋಡೋಕೇನಿದೆ? 
ಸಾವನದುರ್ಗಕ್ಕೆ ಹೋಗೋರಲ್ಲಿ ಬಹುಪಾಲು ಜನ ಹೋಗೋದು ಸಾವನದುರ್ಗದ ಬೆಟ್ಟದ ಚಾರಣ ಮಾಡೋಕೆ. ನೆಲಮಟ್ಟದಿಂದ ೧೨೪೫ ಮೀಟರ್ ಎತ್ತರದಲ್ಲಿರುವ ಇಲ್ಲಿನ ಶಿಖರವನ್ನು ತಲುಪೋಕೆ ೧.೮೬ ಕಿ.ಮೀ ಹತ್ತಬೇಕು . ಕೆಂಪೇಗೌಡರ ಕಾಲದಲ್ಲಿ ಕಟ್ಟಿದ ಈ ಕೋಟೆಯ ತುದಿ ತಲುಪೋಕೆ ಸುಮಾರು ೨ ಘಂಟೆ ಬೇಕಾದರೆ ಇಳಿಯೋಕೆ ಸುಮಾರು ಒಂದೂಕಾಲು ಘಂಟೆ ಬೇಕು. ಬಿಟ್ಟರೆ ೧೦೫೬ ರಲ್ಲಿ ಕಟ್ಟಿದ ದೇಗುಲ ಮತ್ತು ಇತ್ತೀಚೆಗೆ ಕಟ್ಟಿದ ಇನ್ನೆರಡು ದೇಗುಲಗಳೂ ಇವೆ.

Markings in the Trek to Savanadurga

ಹೇಗಿತ್ತು ಸಾವನದುರ್ಗದ ಚಾರಣ ಅಂದ್ರಾ ? 
ಮೊದಲ ಬಾರಿ ಹೋದಾಗ ತಾವರೆಕೆರೆಯ ಮೇಲೆ ಬಸ್ಸಲ್ಲೇ ಹೋಗಿದ್ವಿ. ಇಪ್ಪತ್ತೇಳು ಜನರನ್ನು ಕರ್ಕೊಂಡು ಇಲ್ಲಿಗೆ ಟ್ರಿಪ್ ಆಯೋಜನೆ ಮಾಡಿ ಹೋಗಿದ್ದೆ. ಅದು ಇಲ್ಲಿಯವರೆಗೆ ಅತೀ ಹೆಚ್ಚು ಜನರನ್ನು ಕರ್ಕೊಂಡು ಹೋಗಿದ್ದ ಟ್ರಿಪ್ಪು ಅಂತ ಅಕ್ಷತಾಗೆ ಹೇಳ್ತಿದ್ರೆ ೨೭ ಜನಾನೂ ಮೇಲೆ ಹತ್ತಿದ್ರಾ ಅಂತ ಅವಳಿಗೆ ಕುತೂಹಲ. ೨೭ರಲ್ಲಿ ಹತ್ತಿದ್ದು ಹನ್ನೊಂದೇ ಜನ ಅಂದಾಗ ತಂಗೂ ಹತ್ತೋಕಾಗುತ್ತಾ ಅನ್ನೋ ಕುತೂಹಲ. ಮನೆಯಿಂದ ಬೆಳಗ್ಗೆ ಏಳಕ್ಕೇ ಹೊರಟಿದ್ರೂ ಮಂಚನ ಬೆಲೆ ಜಲಾಶಯ ನೋಡಿ, ನಾಯಕನ ಹಳ್ಳಿಯಲ್ಲಿ ತಿಂಡಿ ತಿಂದು ಸಾವನದುರ್ಗ ತಲುಪೋ ಹೊತ್ತಿಗೆ ಬಿಸಿಲೇರತೊಡಗಿತ್ತು. ಎರಡು ಘಂಟೆ ಟ್ರೆಕ್ಕಿಂಗ್ ಮಾಡಬೇಕು ಅಂತ ಮೂರು ಲೀಟರ್ ನೀರು, ಗ್ಲೂಕೋಸು, ವೋಲಿನಿ, ಮಧ್ಯ ಹಸುವಾದ್ರೆ ಅಂತ ತಿನ್ನೋಕೆ ಅವಲಕ್ಕಿಗಳನ್ನು ತಗೊಂಡು ಬೆಟ್ಟ ಹತ್ತೋಕೆ ಶುರು ಮಾಡೋ ಹೊತ್ತಿಗೆ ಘಂಟೆ ಹನ್ನೊಂದಾಗಿತ್ತು.

ಟ್ರೆಕ್ಕಿಂಗಿನ ಶುರುವಾತು ಮತ್ತು ಹಳೆಯ ನೆನಪುಗಳ ಒಂದಿಷ್ಟು ಮಾತು:
ಸಾವನ ದುರ್ಗದಲ್ಲಿರೋ ನರಸಿಂಹ ಮತ್ತು ಭದ್ರಕಾಳಿ ಗುಡಿಗಳ ಎದುರಿಗೆ ಸಾವನದುರ್ಗ ಮೂಲಿಕೆ ಮತ್ತು ಔಷಧಿ ವನ ಎಂಬ ಬೋರ್ಡಿದೆ. ಅದರ ಪಕ್ಕದಲ್ಲಿರೋ ಒಂದಿಷ್ಟು ಮನೆಗಳು ಮತ್ತು ಎಳನೀರಂಗಡಿಯ ಪಕ್ಕದಲ್ಲಿ ಒಂದು ದಾರಿ ಸಾಗುತ್ತೆ. ಅದರಲ್ಲಿ ಸಾಗಿದರೆ ಒಂದು ಹಾದಿ ಕಾಡೊಳಗೆ ಸಾಗಿದಂತೆ ಕಾಣುತ್ತೆ. ಸ್ವಲ್ಪ ಪೊದೆಗಳ ನಡುವೆ ಸಾಗೋ ಆ ಹಾದಿ ಸಾವನದುರ್ಗದ ಬೆಟ್ಟದತ್ತ ತೆರೆದುಕೊಳ್ಳುತ್ತದೆ. ಎಲ್ಲಿಯೂ ಕಳೆದುಹೋಗದಂತೆ ಇಲ್ಲಿ ನಿರ್ದೇಶನಗಳನ್ನೂ ಹಾಕಲಾಗಿದೆ. ಆ ಮಾರ್ಕುಗಳನ್ನು ನೋಡಿದಾಗ ನಾವಿಲ್ಲಿಗೆ ೨೦೧೨ರಲ್ಲಿ ಬಂದಿದ್ದ ನೆನಪಾಯ್ತು. ಕೆಳಗಿದ್ದ ಮಾರ್ಕುಗಳ ನಂತರ ಮಧ್ಯ ಎಲ್ಲೂ ಮಾರ್ಕಿಲ್ಲ ಅಂತ ಅಂದ್ಕೊಂಡು ಸೀದಾ ಮೇಲೆ ಹತ್ತಿದ್ವಿ. ಹತ್ತೋದೇನೋ ಹತ್ತಿದ್ವಿ. ಆಮೇಲೆ ಎಲ್ಲಿ ನೋಡಿದ್ರೂ ಮಾರ್ಕಿಲ್ಲ. ಮುಂದೆ ಹತ್ತೋಕೇ ಆಗದಷ್ಟು ಚೂಪಾಗಿದೆ ಬಂಡೆ. ಹಂಗೇ ಕೆಳಗೆ ನೋಡಿದ್ರೆ ನಾವು ಮೇಲಕ್ಕೆ ಹತ್ತಿದ ಜಾಗದ ಬುಡದಲ್ಲಿ ಮೇಲಕ್ಕೆ ಹತ್ತದೆ ಬಲಕ್ಕೆ ಸಾಗ್ತಿದ್ದ ಜನ ಕಾಣ್ತಿದ್ರು ! ಅಲ್ಲೇ ಸ್ವಲ್ಪ ಗಮನಹರಿಸಿದ್ರೆ ಬಲಕ್ಕೆ ಸಾಗೋ ಮಾರ್ಕುಗಳು ಕಾಣ್ತಿದ್ದೇನೋ. ಆದ್ರೆ ನಾವು ಅವಸರ ಅವಸರದಿಂದ ಹತ್ತೋಕೆ ಹೋಗಿ ಮಧ್ಯ ಸಿಕ್ಕಾಕಿಕೊಂಡಿದ್ವಿ. ಅಲ್ಲಿಂದ ಕೆಳಗಿಳಿಯೋಕೂ ಆಗದೆ ಮೇಲಕ್ಕೆ ಹತ್ತೋಕೂ ಆಗದೆ ಅಲ್ಲೇ ಕೂರೂಕೋ ಆಗದೆ ಐದಾರು ಜನ ಸಿಕ್ಕಾಕಿಕೊಂಡಿದ್ವಿ. ಕೊನೆಗೆ ಅಡ್ಡಡ್ಡ ಕಾಲು ಹಾಕುತ್ತ ಬಂಡೆಯನ್ನು ಅಡ್ಡವಾಗಿ ದಾಟಿ ಮುಖ್ಯ ಹಾದಿಗೆ ಬಂದ ಮೇಲೇ ಜೀವಕ್ಕೆ ಜೀವ ಬಂದಿತ್ತು. ಅದಾದ ಮೇಲೆ ಎಷ್ಟೋ ಚಾರಣಗಳಾಗಿವೆಯಾದರೂ ಆ ತರಹದ ಅಪಾಯಕ್ಕೆ ಕೈಹಾಕಿಲ್ಲ. ಒಂದಷ್ಟು ಹೆಜ್ಜೆ ಹಾಕೋ ಹೊತ್ತಿಗೆ ಆ ದಾರಿ ಸರಿಯಾದ್ದಾ ಅಲ್ಲವಾ ಅನ್ನೋ ಪ್ರಶ್ನೆ ಮನಕ್ಕೆ ಬರುತ್ತೆ. ದಾರಿ ಸರಿಯಾದ್ದೇ ಅನ್ನೋ ಧೈರ್ಯ ಬಂದ ಮೇಲೇ ಹೆಜ್ಜೆ ಮುಂದುವರಿಯುತ್ತೆ. ಈ ನೆನಪುಗಳ ಸಪ್ತಪದಿ ತುಳಿದವಳ ಜೊತೆ ಹಂಚಿಕೊಳ್ಳುತ್ತಾ ಮುಂದೆ ಹೆಜ್ಜೆ ಹಾಕುತ್ತಿದ್ದೆ.

ಮೊದಲ ಸುತ್ತಿನ ಕೋಟೆ: 
ಸ್ವಲ್ಪ ದೂರ ಸಾಗೋ ಹೊತ್ತಿಗೆ ಒಂದು ಸುತ್ತಿನ ಕೋಟೆ, ಬುರುಜುಗಳ ಕುರುಹುಗಳು ಸಿಗುತ್ತೆ. ಅದನ್ನು ನೋಡಿದ ಹೆಚ್ಚಿನ ಜನರು ಇದೇ ಸಾವನದುರ್ಗದ ತುದಿ ಅಂದುಕೊಳ್ಳುತ್ತಾರೆ. ನಾವು ಮೊದಲ ಸಲ ಬಂದಾಗಲೂ ಹೀಗೇ ಆಗಿತ್ತು. ಇಂದು ಜೊತೆ ಬಂದಿದ್ದ ಮನದನ್ನೆಗೂ ಹಾಗೇ ಅನಿಸಿತ್ತು. ಆದರೆ ತುದಿ ಇದಲ್ಲ. ಇಲ್ಲಿಯವರೆಗೆ ಸುಮಾರು ೪೫೦ ಮೀಟರ್ ಹತ್ತುವ ನಮಗೆ ಇನ್ನೂ ೧೪೫೦ ಮೀಟರ್ ಹತ್ತೋದಿರುತ್ತೆ. ಆದರೆ ಉರಿಬಿಸಿಲಲ್ಲಿ ಬೆಟ್ಟ ಹತ್ತೋಕೆ ಶುರು ಮಾಡೋ ಜನ ಇಲ್ಲಿಯವರೆಗೆ ಬರುವಷ್ಟರಲ್ಲೇ ಬಸವಳಿದು ಇಲ್ಲಿ ಬೀಸೋ ತಂಗಾಳಿಗೆ ಮನಸೋತು ಇದೇ ತುದಿ ಎಂದುಕೊಂಡರೆ ಅಚ್ಚರಿಯಿಲ್ಲ. ತೀರಾ ಸುಸ್ತಾಗದಿದ್ದರೂ ಇಲ್ಲಿಯ ಬುರುಜುಗಳು, ಕಲ್ಲ ಮಂಟಪದ ಬಳಿಯಿಂದ ಸುತ್ತಣ ಪರಿಸರದ , ಬೆಟ್ಟಗುಡ್ಡಗಳ ಹಸಿರನ್ನು ಕಣ್ತುಂಬಿಕೊಂಡು ಸ್ವಲ್ಪ ದಣಿವಾರಿಸಿಕೊಂಡು ಮುಂದಡಿಯಿಡುವುದರಲ್ಲಿ ತಪ್ಪೇನಿಲ್ಲ. ಅಂದು ಬಂದಾಗ ಬೆಟ್ಟದ ಮೇಲೆ ನಂದಿಯಿದೆ ಅಂತಿದೆ, ಇದಲ್ಲ ತುದಿ ಅಂತ ಗೆಳೆಯರನ್ನು ಮೇಲಕ್ಕೆಳೆದಿದ್ದ ನಾನು ತುದಿ ಇನ್ನೂ ಮುಂದಿದೆ ಬಾ ಎಂದಷ್ಟೇ ಹೇಳಿ ಬಾಳರಸಿಯನ್ನು ಮುಂದಕ್ಕೆ ಕರ್ಕೊಂಡು ಹೋಗಿದ್ದೆ.
Akshata at the entrance of First level of fort 

ಹಸಿರ ಹಾದಿ ಮತ್ತು ಒಂದಿಷ್ಟು ಬುರುಜುಗಳು: 
ಮೊದಲ ಸುತ್ತನ್ನು ದಾಟಿ ಸ್ವಲ್ಪ ಮುಂದೆ ಸಾಗೋ ಹೊತ್ತಿಗೆ ಹಸಿರ ಹಾದಿ ನಮ್ಮನ್ನು ಸ್ವಾಗತಿಸುತ್ತೆ. ಕಲ್ಲಲ್ಲಿ ಸಾಗಿ ದಣಿದ ಮನಗಳಿಗೆ ಒಂದಿಷ್ಟು ರಿಲೀಫೂ ಸಿಕ್ಕಬಹುದು. ಇಲ್ಲಿರೋ ಮರಗಳಂತೆಯೇ ಒಂದಿಷ್ಟು ನೀರ ಹೊಂಡಗಳೂ ಇವೆ. ಇದರಲ್ಲಿ ಒಂದರಲ್ಲಿ ಎರಡು ಕಣ್ಣುಗಳನ್ನು ಕಂಡಂತೆ ಆಗುತ್ತೆ ನೋಡು ಅಂತ ಹೇಳ್ತಿದ್ದೆ ನಾನು. ಈ ತರಹದ ಹೊಂಡಗಳು ಅನೇಕ ಜಾತಿಯ ಅಪರೂಪದ ಕಪ್ಪೆಗಳಿಗೆ ಆಶ್ರಯತಾಣವಾಗಿದೆಯಂತೆ !
In one of the Green patches during the trek 

One of the water spots and breeding place for many rare  species of frogs
ಎರಡನೇ ಸುತ್ತಿನ ಕೋಟೆ:
ಮೊದಲ ಸುತ್ತಿನ ಕೋಟೆಯನ್ನು ದಾಟಿ ಮುಂದೆ ಸಾಗುವ ಹಾದಿ ಮತ್ತೆ ಕಠಿಣವಾಗುತ್ತೆ.
Walking on the remains of the Fort walls


ಒಂದೆಡೆ ಸಿಗೋ ಕೋಟೆಯ ಗೋಡೆಯ ಮೇಲೆ ಸಾಗಿದ ನಂತರ ನೇರವಾಗಿರೋ ಬಂಡೆಗಳನ್ನು ಏರಲು ಬಂಡೆಗಳ ಮೇಲೆ ಕಾಲು, ಕೈಗಳನ್ನು ಇಟ್ಟು ಹತ್ತಲು ಅನುವಾಗುವಂತೆ ಹೊಂಡಗಳನ್ನು ಕೊರೆಯಲಾಗಿದೆ. ಅದರ ಸಹಾಯದಿಂದ ಮೇಲೆ ಹತ್ತಿ ಎರಡನೇ ಸುತ್ತಿನ ಕೋಟೆಯ ಬುರುಜುಗಳ ಬಳಿ ಸ್ವಲ್ಪ ದಣಿವಾರಿಸಿಕೊಳ್ಳಬಹುದು.
You can see the markings to climb the fort in the pic 

ಕೋಟೆಯ ಮೇಲಣ ಮಂಟಪ ಮತ್ತು ಗವಿಯ ಹಾದಿ: 
ಎರಡನೇ ಸುತ್ತಿನ ಕೋಟೆಯನ್ನು ದಾಟಿ ಮುಂದೆ ಸಾಗುತ್ತಿದ್ದಂತೆ ಮಂಟಪವೊಂದು ಸಿಗುತ್ತ್ತೆ. ಇಲ್ಲಿಗೆ ಬರೋ ಜನ ಇದೇ ತುದಿ ಎಂದುಕೊಳ್ಳುತ್ತಾರೆ. ಅದರ ಪಕ್ಕದಲ್ಲೊಂದು ಕೆರೆಯೂ ಇದೆ. ಈ ಮಂಟಪದಲ್ಲಿ ಜನ ಅಡಿಗೆಯನ್ನೂ ಮಾಡಿಕೊಳ್ಳುತ್ತಾರೆ ಎನ್ನೋದನ್ನು ಇಲ್ಲಿರೋ ಕಟ್ಟಿಗೆಯ ರಾಶಿ ಮತ್ತು ಮಸಿಹಿಡಿದ ಗೋಡೆಗಳೇ ಹೇಳುತ್ತೆ. ನಮಗೆ ಅಂತಾ ಯೋಚನೆಗಳೇನೂ ಇಲ್ಲದ್ದರಿಂದ ಅಲ್ಲಿಂದ ಮುಂದೆ ಸಾಗಿ ಎದುರಿಗೆ ಕಾಣುತ್ತಿದ್ದ ಮತ್ತೊಂದು ಮಂಟಪವನ್ನು ತಲುಪಿದೆವು.
Second Mantapa from where the view of final destination in Savanadurga is available

ಆ ಮಂಟಪವನ್ನು ತಲುಪೋ ಹೊತ್ತಿಗೆ ಎದುರಿನ ಮತ್ತೊಂದು ಬೆಟ್ಟದಲ್ಲಿರೋ ಮಂಟಪ ಮತ್ತು ಹಾರಾಡುತ್ತಿರುವ ಧ್ವಜ ಕಾಣುತ್ತೆ
View of the Final destination
! ಇನ್ನೇನು ಹತ್ತೇ ನಿಮಿಷದಲ್ಲಿ ಅಲ್ಲಿಗೆ ತಲುಪಬಹುದು ಎಂದೂ ಅನಿಸುತ್ತೆ. ಆದರೆ ಅದಕ್ಕೆ ಸಾಗೋ ಹಾದಿಗೆ ಮತ್ತೆ ಬಂಡೆಗಳ ನಡುವೆ ನುಸುಳುತ್ತಾ ಒಂದು ಗುಹೆಯನ್ನು ಹಾಯಬೇಕು. ಅಲ್ಲಿಂದ ಮತ್ತೆ ಬಂಡೆಗಳ ನಡುವಿರುವ ಗುರುತುಗಳಲ್ಲಿ ಕಾಲಿಡುತ್ತಾ ಸಾಗಿದರೆ ಸಾವನದುರ್ಗದ ತುದಿಯನ್ನು ತಲುಪಬಹುದು.
Bit tough path to reach the top

ಬೀಸೋ ಗಾಳಿ ಮತ್ತು ಭರ್ಜರಿ ಧ್ವಜ: 
ಸಾವನದುರ್ಗದ ತುತ್ತ ತುದಿಯೇರೋ ಹೊತ್ತಿಗೆ ಇಲ್ಲಿನ ಸುಡುಬಿಸಿಲಿಗೆ ಎಷ್ಟು ನೀರು ತಂದಿದ್ರೂ ಸುಸ್ತೆದ್ದಿರುತ್ತೆ. ಹಿಂದಿನ ಬಾರಿ ಬಂದಾಗ ನೀರು ತಾರದ ಗೆಳೆಯರ ಅವಸ್ಥೆ ನೋಡಿ ಈ ಸಲ ಸ್ವಲ್ಪ ಹೆಚ್ಚೇ ನೀರು ತಂದಿದ್ವಿ ನಾವು. ಆದ್ರೆ ಅದ್ರಲ್ಲಿ ಅರ್ಧ ನೀರಷ್ಟೇ ನಾವು ಕುಡಿದಿದ್ದು. ಸುಮ್ಮನೇ ಉಳಿದ ನೀರು ಯಾಕೆ ಹೊತ್ಕೊಂಡು ಬಂದ್ರಿ ಅಂದ್ರಾ ? ಆ ನೀರು , ಹೊತ್ತಿದ್ದ ಶ್ರಮ ವ್ಯರ್ಥವೇನೂ ಆಗ್ಲಿಲ್ಲ. ದಾರಿಯಲ್ಲಿ ನೀರಿದ್ಯಾ ಅಂತ ಫ್ರೂಟಿ ಮಾರೋ ಜನರ ಬಳಿ ಕೇಳಿ, ಅವರು ಇಲ್ಲ ಅನ್ನೋದನ್ನು ನೋಡಿ ಒಂದಿಷ್ಟು ಜನ ಒದ್ದಾಡ್ತಿದ್ರು. ಅವರಲ್ಲಿ ಕೆಲವರಿಗೆ ನಮ್ಮ ಹೆಚ್ಚಿನ ನೀರು ಸಹಾಯವಾಯ್ತು :-)   ಈ ಬೆಟ್ಟದ ತುತ್ತತುದಿಗೆ ಒಂದು ನಂದಿ ಮಂಟಪವಿದೆ. ಪಕ್ಕವಿರೋ ಧ್ವಜಸ್ಥಂಭಕ್ಕೆ ಈಗ ಕನ್ನಡ ಧ್ವಜವೊಂದನ್ನು ಕಟ್ಟಿದ್ದಾರೆ. ಆ ಜಾಗಗಳಲ್ಲಿ ಭಯಂಕರ ಗಾಳಿ ಬೀಸುತ್ತೆ. ಬೆಂದಕಾಳೂರಲ್ಲಿ ಕಳೆದೇ ಹೋಗಿರೋ ಕನ್ನಡ ಆ ಬೇಯೋ ಬೆಟ್ಟದ ಮೇಲೆ ಭರ್ಜರಿಯಾಗಿ ರಾರಾಜಿಸೋದು ನೋಡಿ ಖುಷಿಯಾಯ್ತು. 
Kannada Dhwaja at the top
ಹಿಂದಿನ ಬಾರಿ ನಾವು ಬಂದಾಗ ಇಲ್ಲಿ ಯಾರನ್ನೂ ನಿಲ್ಲಲು ಬಿಡದಷ್ಟು ಜೋರಾಗಿ ಗಾಳಿ ನಮ್ಮನ್ನು ತಳ್ಳುತ್ತಿತ್ತು.ನನ್ನಣ್ಣ ಹಿಂದಿನ ಬಾರಿ ಬಂದಾಗ ಅವನು ಸ್ಟೈಲಾಗಿ ಫೋಟೋಕ್ಕೆ ಅಂತ ತೋಳ ಒಂದು ಬದಿಗೆ ಹಾಕಿದ್ದ ಕೋಟನ್ನು ಹಾರ್ಸಿಕೊಂಡು ಹೋಗಿತ್ತಂತೆ ಗಾಳಿ. ಈ ಬಾರಿ ಅಷ್ಟು ಗಾಳಿಯಿಲ್ಲದಿದ್ದರೂ ತಂದ ಅವಲಕ್ಕಿಯನ್ನು ತಿನ್ನಬೇಕು ಅಂತ ಕೂತಿದ್ದ ನಮ್ಮ ಅವಲಕ್ಕಿಯನ್ನು ತೆರೆದು ಬಾಯಿಗಿಡುವ ಹೊತ್ತಿಗೇ ಮತ್ತೆ ಶುರುವಾಗಿ ನಮ್ಮ ಬಟ್ಟೆಗಳ ಮೇಲೆ, ಪಕ್ಕದಲ್ಲಿದ್ದ ಕಲ್ಲುಗಳ ಮೇಲೆ ಚೆಲ್ಲಿತ್ತು ! ಸಿಕ್ಕ ಅವಲಕ್ಕಿಯಷ್ಟೇ ನಮ್ಮ ಭಾಗ್ಯದ್ದು ಅಂದುಕೊಳ್ಳುತ್ತಾ ಸುತ್ತಣ ಭವ್ಯ ಪರಿಸರವನ್ನು ಆಸ್ವಾದಿಸುತ್ತಾ ನಂದಿಯ ಬಳಿ ಒಂದಿಷ್ಟು ಚಿತ್ರಗಳನ್ನು ಕ್ಲಿಕ್ಕಿಸಿ ವಾಪಾಸ್ಸಾದ್ವಿ.

ಭವ್ಯ ಪರಿಸರದ ನಡುವಿನ ಬೇಸರ:
ಹಿಂದಿನ ಸಲ ಬಂದಾಗ ಇರದಿದ್ದು ಮತ್ತು ಈ ಸಲ ಬಂದಾಗ ಇದ್ದಿದ್ದು ಅಂದರೆ ಇಲ್ಲಿನ ಫ್ರೂಟಿ ಮಾಡೋರ ಹಿಂಡು ಮತ್ತು ಅವರ ಮನಸ್ಥಿತಿ ! ಮುಂದೆ ಏನೂ ಸಿಗೋಲ್ಲ ಸಾರ್ ಅಂತ ಬೆಟ್ಟದ ಬುಡದಿಂದಲೇ ಫ್ರೂಟಿ ಮಾರೋಕೆ ಶುರು ಮಾಡೋ ಇವರು ಫ್ರೂಟಿ ಕುಡಿದು ಜನರು ಕೊಟ್ಟ ಖಾಲಿ ಕೊಟ್ಟೆಗಳನ್ನು ಅಲ್ಲೇ ಬಿಸಾಡಿ ಬರುತ್ತಾರೆ. ಇಲ್ಲಿನ ಎರಡನೆಯ ಕೋಟೆ ಮತ್ತು ನಂದಿ ಧ್ವಜದ ಬಳಿ ಈ ತರಹ ಎಸೆದ ಕೊಟ್ಟೆಗಳು, ಪ್ಲಾಸ್ಟಿಕ್ ಬಾಟಲುಗಳ ದೊಡ್ಡ ರಾಶಿಯೇ ಇದೆ. ದಿನಾ ತಮ್ಮ ವ್ಯವಹಾರ ಮುಗಿದ ಮೇಲೆ ಖಾಲಿ ಚೀಲ ಇಳಿದು ಕೆಳಗಿಳಿವ ಇವರು ಆ ಕವರುಗಳನ್ನಾದ್ರೂ ತಂದ್ರೆ ಇಲ್ಲಿನ ಪರಿಸರ ಸ್ವಲ್ಪವಾದರೂ ಸ್ವಚ್ಛವಾಗುತ್ತಿತ್ತೇನೋ. ಲಾಭಕ್ಕೆ ಮಾತ್ರ ಇಲ್ಲಿನ ಪರಿಸರ ಬೇಕು ಆದ್ರೆ ಅದ್ರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ ಎಂಬಂತಿರೋ ಇವರನ್ನು ನೋಡಿ ಬೇಸರವಾಯ್ತು. ಸಾವನದುರ್ಗ ರಕ್ಷಿತ ಅರಣ್ಯ ಎಂದು ಬೋರ್ಡ್ ಹಾಕಿರೋ ಅರಣ್ಯ ಇಲಾಖೆ ಇಲ್ಲಿ ಕಂಡ ಕಂಡಲ್ಲಿ ಕಸ ಎಸೆಯೋಕೆ ಹೇಗೆ ಬಿಡ್ತಿದೆ ಎಂದೂ ಅಚ್ಚರಿಯಾಯ್ತು !

ಇಳಿವ ಹಾದಿ ಮತ್ತು ದೇಗುಲ ದರ್ಶನ: 
ಹತ್ತುವಾಗ ಅಲ್ಲಲ್ಲಿ ಕೂತು ದಣಿವಾರಿಸಿಕೊಳ್ಳುವ ಮೂಡಲ್ಲಿದ್ದ ಅಕ್ಷತಾ ಇಳಿಯುವಾಗ ಫುಲ್ ಜೋಷಲ್ಲಿದ್ದಂತಿತ್ತು. ಒಂದೂ ಕಾಲಿನ ಸುಮಾರಿಗೆ ಮೇಲಿಂದ ಕೆಳಗಿಳಿಯೋಕೆ ಶುರು ಮಾಡಿದ ನಾವು ಸುಮಾರು ಎರಡು ಕಾಲಿನ ಹೊತ್ತಿಗೆ ಕೆಳ ತಲುಪಿದ್ವಿ. ಒಂದೆರಡು ಕಡೆಗಳನ್ನು ಬಿಟ್ಟರೆ ಬೇರೆಲ್ಲ ಕಡೆಗಳಲ್ಲಿ ಇರೋ ಗುರುತುಗಳನ್ನು ಅನುಸರಿಸಿ ಆರಾಮಾಗಿ ಕೆಳತಲುಪಬಹುದು. ಕೆಲ ಕಡೆಗಳಲ್ಲಿ ನೀರು ಹರಿವ ಜಾಗಗಳನ್ನು ಅನುಸರಿಸಬೇಕಷ್ಟೆ. ಕೆಳಗಿಳಿದ ನಾವು ೧೯೫೬ರಲ್ಲಿ ಕಟ್ಟಿದ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಅದರ ಪಕ್ಕದಲ್ಲಿರುವ ಅಮ್ಮನವರ ಗುಡಿ ಮತ್ತು ೧೦೫೬ರಲ್ಲಿ ಮೂರನೇ ಬಲ್ಲಾಳನು ಕಟ್ಟಿದ ಸಾವಂದಿ ವೀರಭದ್ರಸ್ವಾಮಿ ದೇವರ ದರ್ಶನ ಪಡೆದವು.

ಇತಿಹಾಸ ಪ್ರಸಿದ್ಧ ಸಾವಂದಿ ವೀರಭದ್ರಸ್ವಾಮಿ: 
Status at the Largest Dhwaja Stamba of Asia
ಸಾವನದುರ್ಗ ಊರಿಗೆ ಮುಂಚೆ ಸಾವಂದಿ ಎಂಬ ಹೆಸರಿತ್ತು ಎಂದನಿಸುತ್ತೆ. ಇಲ್ಲಿನ ಲಕ್ಷ್ಮೀ ನರಸಿಂಹ ದೇಗುಲಕ್ಕೂ ಸಾವಂದಿ ಲಕ್ಷ್ಮೀ ನರಸಿಂಹ ಎಂಬ ಹೆಸರಿದೆ. ೧೯೮೩ರಲ್ಲಿ ಜೀರ್ಣೋದ್ದಾರ ಕಂಡ ಇಲ್ಲಿನ ವೀರಭದ್ರಸ್ವಾಮಿ ದೇಗುಲದ ಎದುರಿಗಿರುವ ತುಲಾಭಾರ ಮಂಟಪ, ಪಕ್ಕದಲ್ಲಿ ಇನ್ನೂ ಗಟ್ಟಿಯಿರೋ ಮಂಟಪ ಮತ್ತ್ತು ಒಳಗಡೆಯಿರೋ ಕೆಲ ಶಿಲ್ಪಗಳು ಇಲ್ಲಿನ ಇತಿಹಾಸವನ್ನು ಸಾರುತ್ತವೆ. ಬೆಂಗಳೂರಿನ ಬಳಿಯಿರೋ ದೊಮ್ಮಲೂರಿನ  ಚೊಕ್ಕನಾಥೇಶ್ವರ, ಬೇಗೂರು ಪಂಚಲಿಂಗೇಶ್ವರ ದೇಗುಲ ಮತ್ತು ಅಲಸೂರಿನ ಸೋಮೇಶ್ವರ ದೇಗುಲಗಳ ಬಗ್ಗೆ ಅಚ್ಚರಿಗೊಂಡಿದ್ದ ನಾನು ಈಗ ಅದೇ ಸಾಲಿನ, ಹನ್ನೊಂದನೆಯ ಶತಮಾನಕ್ಕೆ ಸೇರಿದ ದೇಗುಲವನ್ನು ಸಾವನದುರ್ಗದಲ್ಲಿ ಕಂಡು ಇನ್ನೂ ಅಚ್ಚರಿಗೊಂಡೆ.
Ruins of Mantapa near the Veerabhadra temple
ಆದರೆ ಈ ದೇಗುಲದ ಎದುರಿಗಿರುವ ಮಾಹಿತಿಯಲ್ಲಿನ ಮೂರನೆಯ ಬಲ್ಲಾಳ ಯಾರು ಎಂಬ ಬಗ್ಗೆ ಸಂದೇಹವಿದೆ. ಈತ ಹೊಯ್ಸಳರ ಪ್ರಸಿದ್ಧ ಅರಸನಾದ ಮೂರನೆಯ ವೀರಬಲ್ಲಾಳನಾಗಿರಲು ಸಾಧ್ಯವಿಲ್ಲ. ಯಾಕೆಂದರೆ ಆತನ ಕಾಲ ಕ್ರಿ.ಶ ೧೨೯೨ರಿಂದ ೧೩೪೨. ಮತ್ತು ಇದು ಆತನ ಕಾಲದಲ್ಲಿ ಕಟ್ಟಿಸಿದ್ದಾದರೆ ಇಲ್ಲೂ ಹೊಯ್ಸಳ ದೇಗುಲಗಳಲ್ಲಿರುವಂತೆ ಹೊಯ್ಸಳ ಲಾಂಛನವಿರಬೇಕಿತ್ತು. ಹೊಯ್ಸಳ ಶೈಲಿಯ ಶಿಲ್ಪಗಳೂ ಇರಬೇಕಿತ್ತು. ಆದರೆ ಇಲ್ಲಿನ ಶಿಲ್ಪಗಳಲ್ಲಿ ಆ ಹೋಲಿಕೆಯಿಲ್ಲ. ಮತ್ತೆ ಇದು ಕ್ರಿ.ಶ ೧೦೫೬ ಅಂದರೆ ಹೊಯ್ಸಳರ ಕಾಲಕ್ಕೂ ಮುಂಚೆ ಕಟ್ಟಿಸಿದ್ದಾದರೆ ಈ ಮೂರನೆಯ ಬಲ್ಲಾಳ ಯಾವ ಸಾಮ್ರಾಜ್ಯಕ್ಕೆ ಸೇರಿದವ ಎಂಬ ಪ್ರಶ್ನೆ ಇತಿಹಾಸಜ್ಞರಿಗೇ ಮೀಸಲಾದ ಪ್ರಶ್ನೆಯಾಗಿ ಉಳಿದುಬಿಡುತ್ತೆ. ಅದಕ್ಕೆ ತಲೆ ಕೆಡಿಸಿಕೊಳ್ಳದೇ ಇಲ್ಲಿನ ಸೌಂದರ್ಯ ಸವಿಯೋ ಆಸಕ್ತಿಯಿರೋರಿಗೆ ಇದರೆದುರಿಗೆ ಇರೋ ಧ್ವಜ ಸ್ಥಂಭ ಗಮನಸೆಳೆಯುತ್ತೆ. ಈ ಧ್ವಜಸ್ತಂಭ ಏಷ್ಯಾದಲ್ಲೇ ಅತೀ ಎತ್ತರವಾದ ಏಕಶಿಲಾ ಕಂಬ ಎನ್ನೋದು ಇನ್ನೊಂದು ಹೆಗ್ಗಳಿಕೆ ! ಉಜರಾಯಿ ಇಲಾಖೆ ಅಡಿಗೆ ಬರೋ ಇಲ್ಲಿನ ದೇವಸ್ಥಾನದಲ್ಲಿ ಪ್ರತೀ ದಿನ ೧೨:೩೦ರಿಂದ ೨:೩೦ರ ವರೆಗೆ ದಾಸೋಹ ವ್ಯವಸ್ಥೆಯೂ ಇದೆ. ೨:೩೫ರ ಸುಮಾರಿಗೆ ಅಲ್ಲಿಗೆ ಬಂದ ನಮಗೆ ಅಲ್ಲಿನವರು ದಾಸೋಹದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಿಸಿದರೂ ದೊಡ್ಡಪ್ಪನ ಮನೆಗೆ ಊಟಕ್ಕೆ ಹೋಗಬೇಕಾಗಿದ್ದ ನಾವು ಅಲ್ಲಿಂದ ಮುಂದೆ ಸಾಗಿದೆವು.



1 comment:

  1. ಸುಂದರ ಬರಹ.. ಜೊತೆಗಾತಿ ಜೊತೆಯಲ್ಲಿ ಚಾರಣ.. ಅದರ ಸುಂದರ ವಿವರಣೆ.. ವಾಹ್ ಎನಿಸುತ್ತದೆ. ಪ್ರತಿಯೊಂದು ವಿಷಯವನ್ನು ವಿವರವಾಗಿ ತಿಳಿಸುವ ನಿಮ್ಮ ಬರಹವೇ ನಿಮಗೆ ವರವಾಗಿದೆ..
    ಸೂಪರ್ ಪ್ರಶಸ್ತಿ.. ಸುಂದರ ಚಿತ್ರಗಳು

    ReplyDelete