Thursday, December 8, 2011

ಗಂಗಾವತರಣ

(ಭಾಮಿನಿ ಷಟ್ಪದಿಯಲ್ಲಿ ಬರೆಯಲೊಂದು ಪ್ರಯತ್ನ)..

ಹರಿಯ ಪಾದವ ತೊಳೆವ ಗಂಗೆಯ
ಧರೆಗೆ ಇಳಿಸಲು ನೃಪನು ಬೇಡಲು
ಭರವ ತಾಳಲು ಹರನ ಕೇಳಲು ಹೇಳಿದಾ ಬ್ರಹ್ಮಾ|
ಹರನ ಭಜಿಸಲು ಅವನ ಪೂಜಿಸಿ
ಶಿರಕೆ ಧುಮುಕಲು ಗಂಗೆ ಜಂಬದಿ
ಹೊರಗೆ ಬಾರದೆ ಅಲ್ಲೆ ಸಿಲುಕಲು ಮತ್ತೆ ಬೇಡಿದನೋ|೧|

ಇಳೆಗೆ ಇಳಿಸಲು ಹರಸಿ ಪರಶಿವ
ಹಲವು ಧಾರೆಗಳಾಗಿ ಒಡೆದಳು
ತೊಳೆವ ಬದಲಿಗೆ ಜಹ್ನು ಆಶ್ರಮ ಕೊಚ್ಚಿ ಒಯ್ದಿಹಳೋ|
ಎಲೇ ಸೊಕ್ಕೇ ಎಂದು ಅವಳನು
ಬಲಿಯ ಪಡೆದನು ಮುನಿಯು ಮುನಿಯುತ
ಹಲವು ಋಷಿಗಳು ನೃಪನು ಬೇಡಲು ಹರಿಸಿ ಕಿವಿಯಿಂದಾ|೨|

ಸ್ನಾನ ಮಾತ್ರದಿ ಪಾಪ ಕಳೆವಳು
ಮೌನದಿಂದಲೆ  ಇಳೆಗೆ ಇಳಿದಳೊ
ಮಾನವನ ಈ ಶ್ರಮದ ಗೆಲುವಿಗೆ ಮತ್ತೆ ಮೆಚ್ಚುತಲೀ|
ಪ್ರಾಣತೊರೆದಿಹ ಪಿತರ ಭಸ್ಮವ
ಲೀನವಾಗಿಸಿ ಮೋಕ್ಷವಿತ್ತಳು
ತನ್ನ ಧ್ಯೇಯವ ಬಿಡದೆ ನಡೆದಿಹ ಧನ್ಯ ತಾ ನರನೋ|೩|

(ಮೊದಲ ಸಲ ಬರೆದಾಗ ಆದಿ ಪ್ರಾಸ ತಪ್ಪಿದ್ದಾಗ ತಿದ್ದಿದ ಕಿರಣಣ್ಣ, ಹರೀಶಣ್ಣರ ತಿದ್ದುಪಡಿಗಳನ್ನು ಕೆಳಗೆ ಹಾಕಿದ್ದೇನೆ.. ಇನ್ನೂ ಓದುವ/ಬರೆವ ಪ್ರಯತ್ನದಲ್ಲಿ )
ಚಿತ್ರಕೃಪೆ: Divinebrahmanda.com

4 comments:

  1. ಕಿರಣಣ್ಣ:
    ಹರಿಯ ಪದತಲ ತೊಳೆವ ಗಂಗೆಯ
    ಭರದಿ ತರಿಸಲು ಭಕ್ತ ಬೇಡಲು
    ಬರಿದೆ ರಭಸದಿ ಎಲ್ಲ ತೊಳೆವೆನು ಎಂದು ಬೀಗಿದಳೋ
    ತರುಣಿ ಧುಮುಕಲು ಶಿವನು ಹರಡಿದ
    ಪರಮ ಜಟೆಯಲಿ ಅವಳ ಕಟ್ಟಿದ
    ಮರಳಿ ಪರಶಿವನನ್ನೆ ಬೇಡಲು ಹರಸಿ ಇಳಿಸಿದನೋ

    ಹರೀಶಣ್ಣ:
    ಹರಿಯ ಪದತಲ ತೊಳೆವ ಗಂಗೆಯ
    ಧರೆಗೆ ಇಳಿಸಲು ಭಕ್ತ ಬೇಡಲು
    ತಾ ರಭಸದಿಂ ಎಲ್ಲ ತೊಳೆವೆನು ಎಂದು ಬೀಗಿದಳೋ |
    ಶಿರದ ಜಟೆಯನು ಅವಳು ಧುಮುಕಲು
    ಹರನು ಹರಡಿದ ಅವಳ ಕಟ್ಟಿದ
    ಹರಸಿ ಈಶನು ಭಕ್ತ ಬೇಡಲು ಭುವಿಗೆ ಇಳಿಸಿದನೋ ||

    ReplyDelete
  2. ಭರದಿ ಭಾಮಿನಿಷಟ್ಪದಿಯ ನೀವ್
    ಬರೆದು ವಾಙ್ಮಯಲೋಕಕೆಂದುಂ
    ಬರಲು ಸಂತಸ ಪೊಂದುವುದು ಕವಿನಿಕರ ನಿರುತದಲಿ|
    ತೊರೆಯದಿರಿ ಪದ್ಯಗಳ ಮೋಹವ
    ನೊರೆಯುತಿರಿಮನಭಾವಗಳನಂ
    ಕರೆದು ಭಾಮಿನಿ ಕಯ್ಯಪಿಡಿವಳು ಮುದದಿ ಚಣದಲ್ಲಿ||

    ReplyDelete
  3. ವಾವ್ !!! :-)
    ಚೆನ್ನಾಗಿದೆ :-) ಧನ್ಯವಾದಗಳು ಗಣೇಶ್ :-)

    ReplyDelete
  4. ಹಲವು ಮುಖಗಳ ಇಲ್ಲೆ ಕಂಡೆನು
    ಕಲಹ ಇಲ್ಲದೆ ವಿಷಯವರಿಯುತ
    ಒಲವ ತೋರುತ ಸಮಯವಿತ್ತಿಹ ಗೆಳೆಯ ಜೊತೆ ಸಿಗಲು|
    ಗೆಲುವ ಮೊಗದಲಿ ತಪ್ಪ ತಿದ್ದುತ
    ಬಲವ ತುಂಬುತ ಬರೆವ ಆಸೆಗೆ
    ನಲಿಯುತಲೆ ಹೊಸ ಬೆಳಕ ತೋರುವ ಗುರುವೆ ಜೊತೆ ಸಿಗಲು||

    ReplyDelete